Thursday, September 11, 2008

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಕೂಗಿತ್ತು




ಚಿಕ್ಕವ್ವೋ ಚಿಕ್ಕವ್ವೋ ಎನ್ನುತ ತನ್ನಯ ಮರಿಗಳ ಕರೆದಿತ್ತು ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ ಹಾಡಿದೆ ಈ ಕವಿತೆ. ವಾವ್ ಎಂದೆನ್ನುವ ಈ ಹಾಡನ್ನು ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಅದ್ಬುತದ ಹಾಡು. ನನ್ನ ಹದಿನೆಂಟನೆ ವಯಸ್ಸಿನಲ್ಲಿ ಈ ಹಾಡು ನನಗೆ ಪ್ರಿಯವಾಗಿತ್ತು. ಆಗ ನನ್ನ ಅಕ್ಕನ ಮಗಳು ರಮ್ಯಾ ಮೂರು ವರ್ಷದ ಕೂಸು. ಆಕೆಯ ಅಪ್ಪ ಅಮ್ಮ ಇಬ್ಬರೂ ಜಾಬ್ ಜನ ಆಗಿದ್ದರಿಂದ ಒಂದು ವರ್ಷ ಅಜ್ಜನ ಮನೆಯ ವಾಸ ಅವಳಿಗೆ. ಹಾಗಾಗಿ ನನಗೆ ಮದುವೆಯಾಗದಿದ್ದರೂ ಮಕ್ಕಳನ್ನು ಪಾಲಿಸುವ ಜವಾಬ್ದಾರಿ ಬಿದ್ದಿತ್ತು. ಕೂಸಿನ ಅಜ್ಜ ಅಜ್ಜಿ ಮತ್ತು ಮಾವನೆಂಬ ಮಾವನಾದ ನಾನು ಬಿಟ್ಟರೆ ಕಾಡಿನ ನಡುವೆಯ ಒಂಟಿಮನೆಯಲ್ಲಿ ಯಾರೂ ಇರಲಿಲ್ಲ. ನಾನು ಮನೆಯಲ್ಲಿದ್ದಷ್ಟು ಹೊತ್ತು ನನ್ನ ಕಾಲು ಸುತ್ತುತ್ತಿದ್ದ ಆಕೆಗೆ ಈ ನನ್ನ ಹಾಡು ಕೊಡುಗೆ. ಹಾಡಿನಲ್ಲಿ ಅಷ್ಟು ಶಕ್ತಿಯಿತ್ತಿರಬೇಕು( ನನ್ನ ಕಂಠದ ಲಯದಬಗ್ಗೆ ನನಗೆ ಅನುಮಾನ) ಆ ಹಾಡನ್ನು ಪದೆ ಪದೆ ಹಾಡಬೇಕಿತ್ತು ಅವಳಿಗೆ. ಮಿಸ್ಕಿ ಹಾಕಿರೆ ಹೆಕ್ಕನ ಪುಕ್ಕಿ, ಇಮಾನು ಬಂದರೆ ಹೆಕ್ಕನ ಪುಕ್ಕಿ (ಮಿಕ್ಸಿ ಹಾಕಿದರೆ ಹೆದರುಪುಕ್ಕಿ ವಿಮಾನ ಬಂದರೆ ಹೆದರುಪುಕ್ಕಿ) ಎಂದು ಅವಳದೇ ಆದ ಬಾಲ್ಯ ಬಾಷೆಯಲ್ಲಿ ಹೇಳುತ್ತಿದ್ದ ನೆನಪುಗಳು ಸುಮಧುರ. ಈಗ ಆಕೆ ಹನಿವೆಲ್ ಉದ್ಯೋಗಿ. ಕಣ್ಮುಂದೆ ಬೆಳೆದ ಕೂಸು ಜಣಜಣ ಹಣ ತರುತ್ತಿದೆ ಪ್ರಪಂಚದ ಸುದ್ದಿ ಹೇಳುತ್ತಿದೆ ನಾನು ಅದೇ ಹಳೆಯ ಕತೆಗೆ ಜೋತು ಬಿದ್ದು ತೌಡು ಕುಟ್ಟುತ್ತಿದ್ದೇನೆ. ಮತ್ತೊಬ್ಬ ಅಕ್ಕನ ಮಗಳು ನವ್ಯ, ಅವಳ ಬಾಲ ಭಾಷೆಯ ಮಜವೇ ಮಜ. ಶೆಟ್ರಮನೆ ನಾಗಮನಿ ಕಂಡ್ರೆ ಬತ್ತಿಯ್ಯೆ( ಶೇಟ್ರಮನೆಯ ನಾಗಮಣಿಯನ್ನು ಕಂಡ್ರೆ ಆಗ್ತಲ್ಲೆ, ಎಂದು ಇದರ ಅರ್ಥ) ಎಂಬಂತಹ ಬಾಲ ಭಾಷೆ ಅವಳದ್ದು. ಈಗ ಆಕೆ ಇಂಜನಿಯರಿಂಗ್ ಮುಕ್ತಾಯ ಹಂತದಲ್ಲಿರುವ ಹುಡುಗಿ. ಹಾಗೆಯೇ ರಂಜನ ಕಾವ್ಯ ಲಕ್ಷ್ಮೀಶ ವೈಶಾಲಿ ಸಾಲು ಸಾಲು ಹುಡುಗರು. ಅತ್ಯಂತ ಕಿರಿಯವನಾಗಿ ನನ್ನ ಮಗ ಸುಮಂತ ಅವನ ಬಾಲ ಭಾಷೆಯೋ ಅದರ ಅರ್ಥ ನಮಗೆ ಮಾತ್ರ ಗೊತ್ತು. ದತುಲ ಅಂದರೆ ನಿಮಗೇನಾದರೂ ಅರ್ಥ ಈ ಜನ್ಮದಲ್ಲಿ ಆಗಲಿಕ್ಕಿಲ್ಲ. ಆದರೆ ನಮಗೆ ಗೊತ್ತು ನಮ್ಮ ಸುಮಂತನ ಬಾಲ್ಯ ಭಾಷೆಯಲ್ಲಿ ರಕ್ತ ಎಂದಾಗಿತ್ತು. ಹುಡುಗರು ಎಷ್ಟೇ ದೊಡ್ದವರಾದರೂ ಹೆತ್ತವರಿಗೆ ಅವರ ಬಾಲ್ಯ ಮರೆಯಲಾರದು. ಅವುಗಳು ಸುನೇರೆ ಫಲ್. ಇರಲಿ ಅದೆಲ್ಲಾ ಇರಲಿ ಈಗ ವಾಸ್ತವದ ಕತೆಗೆ ಬರುತ್ತೇನೆ.


ಹತ್ತಿರದ ಹಂಸಗಾರು ಎಂಬ ಊರಿನಲ್ಲಿ ರಂಗಣ್ಣ ಎಂಬ ಜನ ಇದ್ದ. ಆತನಿಗೆ ಸಾಮಾಜಿಕ ಕೆಲಸದಲ್ಲಿ ಅತಿಯಾದ ಕಾಳಜಿ. ಸರ್ಕಾರಿ ಶಾಲೆಯಲ್ಲಿ ಪಾಠ ಹೇಳುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರನ್ನು ತೊಡಗಿಸುವುದು, ಯೋಗ ಹೇಳಿಕೊಡುವುದು ಹೀಗೆ ಸಾರ್ವಜನಿಕರಿಗೆ ಉಪಕಾರವಾಗುವಂತಹಾ ಎಲ್ಲಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ಆತ ತೊಡಗಿಸಿಕೊಂಡು ಜನಜನಿತನಾಗಿದ್ದ. ರಂಗಣ್ಣ ಸಿನೆಮಾದಲ್ಲಿ ತೋರಿಸುವ ಪರೋಪಕಾರಿಯ ಯಥಾರೂಪ. ಆತನಿಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಚೂಟಿಯಾಗಿದ್ದ ಮಕ್ಕಳು ಓದಿನಲ್ಲಿಯೂ ಚುರುಕು. ಎಲ್ಲಾ ಮಕ್ಕಳಂತೆ ರಂಗಣ್ಣನ ಮಕ್ಕಳು ಬಾಲ ಭಾಷೆಯನ್ನಾಡುತ್ತಿದ್ದವು. ಆದರೆ .... ಹಂಸಗಾರಿನ ರಂಗಣ್ಣನ ಮನೆಯೆದುರು ದೇವಸ್ಥಾನದ ಕೆರೆ, ಅಕ್ಕ ತಮ್ಮ ಮತ್ತು ಕೆಲ ಹುಡುಗರು ಶಾಲೆಗೆ ರಜೆಯಿರುವ ಮಟ ಮಟ ಮಧ್ಯಾಹ್ನ ಕೆರೆಗೆ ಆಟ ಆದಲು ಹೋಗಿದ್ದವು. ತಮ್ಮ ಕೆರೆಗೆ ಜಾರಿಬಿದ್ದ, ತಮ್ಮನನ್ನು ಕಾಪಾಡಲು ಅಕ್ಕ ಕೈಕೊಟ್ಟಳು. ಕ್ಷಣಾರ್ದದಲ್ಲಿ ವಿಧಿ ಎರಡು ಮಕ್ಕಳನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಪಾಲಕರ ಗೋಳಾಟ ಚೀರಾಟ ಹೃದಯ ವಿದ್ರಾವಕ ಘಟನೆ. ರಂಗಣ್ಣ "ನಾನು ಮಾಡಿದ ಸಮಾಜ ಸೇವೆ ಕಡಿಮೆಯಾಯಿತು ಅಂತ ಅನ್ನಿಸುತ್ತೆ" ಎಂದು ಮೌನವಾದ. ಆನಂತರ ಆತ ಹಂಸಗಾರನ್ನು ತೊರೆದು ಮುಳುಗಡೆಯ ಮೂಲೆ ಊರು ಸೇರಿದ. ತಾನಾಯಿತು ತನ್ನ ಯೋಗ ಧ್ಯಾನವಾಯಿತು ಎಂಬ ತತ್ವಕ್ಕೆ ಇಳಿದ. ಸಂಬಧಿಕರ ಮಗುವನ್ನು ದತ್ತು ತೆಗೆದುಕೊಂಡಿದ್ದಾನಂತೆ. ಆದರೂ ಸತ್ತ ಮಗುವಿನ ದು:ಖ ನೂರು ಹೆತ್ತರೂ ಬಾರದಂತೆ. ಅರಳುವ ಹೂವು ಬೀಜವಾಗಿ ಹಣ್ಣಾಗಿ ಮಾಗಿದರೆ ಮರಕ್ಕೊಂದು ನೆಮ್ಮದಿ. ಆದರೆ ವಿಧಿ ಎಲ್ಲಾ ಹೂಗಳನ್ನೂ ಬೀಜವಾಗಿಸುವುದಿಲ್ಲ. ಅದಕ್ಕೆ ಅದರದ್ದೇ ಆದ ನಿಯಮವಿದೆ, ಅದು ಯಾವರೀತಿಯದು ಎಂದು ಪ್ರಪಂಚ ಹುಟ್ಟಿ ಈ ಕ್ಷಣದವರೆಗೂ ಯಾರಿಗೂ ಗೊತ್ತಿಲ್ಲ. ಮುಂದೂ ತಿಳಿಯುವುದಿಲ್ಲ ಎಂಬ ಆಧ್ಯಾತ್ಮ ಸತ್ಯವಾದರೂ ಮಕ್ಕಳ ಬಾಲ್ಯ ನೋಡಿದವರಿಗೆ ಅವರ ಕಳೆದುಕೊಂಡಾಗ ನಿತ್ಯ ಕಾಡುತ್ತದೆ. ಅವರ ಆಟೋಟಪಾಟಗಳು ನಿತ್ಯ ಕಾಡುತ್ತವೆ.

ಇವೆಲ್ಲಾ ಯಾಕೆ ನೆನಪಾಯಿತೆಂದರೆ ಮೊನ್ನೆ ಬಂದಕೊಪ್ಪದ ಪತ್ರಕರ್ತೆಯೊಬ್ಬಳು ರಸ್ತೆ ಅಪಘಾತದಲ್ಲಿ ನಿಧನಳಾದಳಂತೆ ಆಕೆಯ ಚಿತೆಯ ನೋಡಲು ಬರುತ್ತಿದ್ದ ಅಣ್ಣ ನೂ ರಸ್ತೆ ಅಪಘಾತದಲ್ಲಿ ನಿಧನನಾದನಂತೆ. ವಿಧಿ ಎಷ್ಟು ಕ್ರೂರ ಅನ್ನಿಸುತ್ತದೆ. ಆದರೆ ನಾವು ಅಸಾಹಾಯಕರು.

ಕೋಗಿಲೆಯ ಚಿಕ್ಕವ್ವೋ ಚಿಕ್ಕವ್ವೋ ಕೂಗು ಮರಿಗಳಿದ್ದಾಗ ಚಂದ. ಇಲ್ಲದಿದ್ದಾಗ .......

ಕೊನೆಯದಾಗಿ: ಈ ಅಪ್ರಾಪ್ತ ವಯಸ್ಸಿನ ದುಮ್ಮರಣವೇಕಾಗುತ್ತದೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು "ಅಯ್ಯಾ ದೊರೆ ಈ ಪ್ರಶ್ನೆ ಇಟ್ಟುಕೊಂಡು ಎಂತೆಹಾ ವ್ಯಕ್ತಿಗಳ ಬಳಿ ಹೋಗುತ್ತೀಯೋ ಅಂತಹ ಉತ್ತರ ಸಿಗುತ್ತದೆ. ನಿಖರವಾದ ಉತ್ತರ ಕೊಡುತ್ತೇನೆ ಎಂದು ಹೇಳಿದವನು ಸುಳ್ಳು ಹೇಳುತ್ತಿದ್ದಾನೆ ಎಂದರ್ಥ" ಎಂದರು. ಅವರಿಗೆ ಉತ್ತರ ತೋಚದಿದ್ದಕ್ಕಾಗಿ ಹಾಗೆ ಹೇಳಿದರೋ ಅಂತ ನಾನಂದು ಕೊಂಡೆ.

ಟಿಪ್ಸ್:ಇಳಿಜಾರು ರಸ್ತೆಯಲ್ಲಿ ಬೈಕ್ ಆಪ್ ಮಾಡಿಕೊಂಡು ಹೋಗುತ್ತಿರುವಾಗ ಸುಮ್ಮನೆ ಆಕ್ಸಿಲೇಟರ್ ಕೊಡಿ. ಬೈಕ್ ನಿಧಾನವಾದಂತೆ ಅನ್ನಿಸುತ್ತದೆ. ಒಳ್ಳೆ ಮಜ ಅನುಭವಿಸಿ ಕಾರಣ ಹೊಳೆದರೆ ಹೇಳಿ ಇಲ್ಲದಿದ್ದರೆ ಕೇಳಿ

No comments:

Post a Comment

Thank you