Friday, May 30, 2008

ಒಂಟಿತನ ಮತ್ತು ಪ್ರಪಂಚ


ಗುಂಪಿನಲ್ಲಿದ್ದಾಗ ಉನ್ಮಾದವಿರುತ್ತದೆ. ಉತ್ಸಾಹವಿರುತ್ತದೆ. ನಿಮ್ಮ ಗುಂಪಿಗೆ ವಿರುದ್ಧವಾಗಿ ಮತ್ತೊಂದು ಗುಂಪು ಇದ್ದರಂತೂ ಇನ್ನಷ್ಟು ಉಮೇದು ಇರುತ್ತದೆ. ಒಂಟಿಯಾಗಿದ್ದಾಗ ಅದು ಸ್ವಲ್ಪ ಕಷ್ಟ. ಇನ್ನು ನೀವು ಹುಟ್ಟಾ ಮೌನಿಗಳಾದರೆ ಗುಂಪೂ ಒಂದೇ ಒಂಟಿತನವೂ ಒಂದೆ. ಒಂಟಿಯಾಗಿ ಒಳಗೊಳಗೆ ಖುಷಿಯಾಗಿ ನಗುನಗುತ್ತಾ ಇರುವವರು ಎಲ್ಲಿಯೂ ಗೆಲ್ಲಬಹುದು. ಅದೇ ವಾಚಾಳಿ ಸ್ವಭಾವ ನಿಮ್ಮದಾಗಿದ್ದರೆ ಒಂಟಿಯಾಗುವ ಸಮಯಕ್ಕೆ ಬಹಳ ಮಹತ್ವ. . ಅದ್ಯಾವುದೋ ಚಿಂತೆ ನಿಮಗೆ ಕಾಡುತ್ತಿದೆ ಆದರೆ ಜನರೆದಿರು ಹೇಳಲಾಗುತ್ತಿಲ್ಲ ಎಂಬಂತಹ ಯೋಚನೆಗಳು ಮುತ್ತತೊಡಗಿದರೆ ಅಲ್ಲಿಗೆ ಲೈಫ್ ಕಷ್ಟಕರವಾದಂತೆ. ಅದೇನೂ ಚಿಂತೆಯೇ ಆಗಬೇಕೆಂದಿಲ್ಲ. ಗಂಡ ತಂದಿರುವ ನೆಕ್ ಲೆಸ್, ಬಂಗಾರದ ಬಳೆ ಬೇರೆಯವರಿಗೆ ತೋರಿಸಿದ ಹೊರತೂ ಸಮಾಧಾನವಾಗದಿದ್ದಂತಹ ಮನಸ್ಥಿತಿ ತಲುಪಿದರೆ ಜೀವನ ರಗಳೆಗೆ ಬಿದ್ದಂತೆ. ನಾವು ಸಹಜವಾಗಿ ತೋರಿಸುತ್ತಿದ್ದೇವೆ ಎಂಬ ವಸ್ತುಗಳು ಎದುರಿದ್ದವರಿಗೆ ಅವಮಾನ ಅಂತ ಅನ್ನಿಸಿ ಬೇಸರದ ಸ್ವರ ಅಥವಾ ಮುಖ ಹೊರಹೊಮ್ಮಲು ಸಾಕು. ಗುಂಪಿನಿಂದ ಹೊರಬಂದು ಒಂಟಿತನದ ನಿಮ್ಮ ಚಿಂತೆಗೆ ಇಷ್ಟು ಸಾಕು .ನಾನು ಇಲ್ಲಿಯವರೆಗೆ ಅಕ್ಕಿಬೆಳೆದಿಲ್ಲ ಬಟ್ಟೆ ನೇಯ್ದಿಲ್ಲ ಆದರೂ ನನ್ನ ಇಲ್ಲಿಯವರೆಗಿನ ಜೀವನದಲ್ಲಿ ಅಂತಹ ನಿತ್ಯಾವಶ್ಯಕ ವಸ್ತುಗಳು ನಿರಂತರ ಪೂರೈಕೆಯಾಗುತ್ತಿವೆ. ಎಂಬಂತ ಆಲೋಚನೆಗಳಾದರೂ ಆದೀತು, ಬರ್ಬಾದ್ ಆಗಲು. ಆವಾಗ ಆಗುವುದಿಷ್ಟೆ ಗುಂಪಿನಲ್ಲಿದ್ದಾಗ ಮರೆಯುತ್ತವೆ. ಹಾಸಿಗೆಗೆ ತಲೆಕೊಟ್ಟಾಗ, ಸಂಡಾಸಿನಲ್ಲಿ ಕಾಲುಮಡಚಿದಾಗ, ಊಟಕ್ಕೆ ಕುಂತಾಗ ಧುತ್ತನೆ ಕಾಡತೊಡಗುತ್ತವೆ. ಅದು ಟೆನ್ಷನ್ ರೂಪ ತಾಳಿ ಏನು ಇದು? ಪರಿಹಾರ ಹೇಗೆ? ಎಂಬ ನೂರಾರು ಯೋಚನೆ. ಒಂದಿಷ್ಟು ಜನ ವೈದ್ಯರ ಬಳಿ ಒಂದಿಷ್ಟು ಜನ ಶಾಸ್ತಿಗಳ ಬಳಿ ಮತ್ತೊಂದಿಷ್ಟು ಜನ ಸಲಹೆಕಾರರ ಬಳಿ ಓಡುತ್ತಾರೆ. ಸಮಸ್ಯೆ ಇರುವುದು ನಮ್ಮಲ್ಲಿ ಎಂದು ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇವಕ್ಕೆಲ್ಲಾ ಮೀರಲು , ಒಂಟಿತನವನ್ನು ಇಷ್ಟಕರ ಮಾಡಿಕೊಳ್ಳಬೇಕು . ಅದಕ್ಕೆ ಸುಲಭೋಪಾಯ ವೆಂದರೆ ವರ್ತಮಾನವನ್ನು ಗಮನಿಸುವುದು ಮತ್ತು ವರ್ತಮಾನವನ್ನಷ್ಟೇ ಆಲೋಚಿಸುವುದು. ಮತ್ತು ವರ್ತಮಾನವನ್ನೂ ಕೂಡ ಅತ್ಯಂತ ಕಡಿಮೆ ಯೋಚಿಸುವುದು. ಒಂಟಿತನದಲ್ಲಿ ಉತ್ಸಾಹದಿಂದಿರುವ ವ್ಯಕ್ತಿ ಹಾಗೂ ಅವನ ಆಲೋಚನೆಗಳು ಮುಂದೆ ಗುಂಪಿನಲ್ಲಿ ಸೂಪರ್ ಸಕ್ಸಸ್, ಅದೇ ಗುಂಪಿನ ಆಲೋಚನೆಗಳು ಒಂಟಿಯಾದಾಗ ಫೆಲ್ಯೂರ್. ಹಾಗಾಗಿ ಒಂಟಿಯಾಗಿ ಒಳ್ಳೆ ಆಲೋಚನೆ ಮಾಡಿ ಮತ್ತು ಗುಂಪಿನಲ್ಲಿ ಹೀರೋಗಳಾಗಿ.. ಗುಂಪಿನಲ್ಲಿ ಹೀರೋಗಳಾಗಿ ನಂತರ ಒಂಟಿಯಾದಾಗ ಜೀರೋಗಳಾಗಬೇಡಿ ಕಾರಣ ನಾವು ಇಲ್ಲಿಗೆ ಬಂದಿದ್ದು ಒಂಟಿ ಹೋಗುವುದು ಒಂಟಿ ಮಿಕ್ಕೆಲ್ಲ ನೆಪಗಳಷ್ಟೆ.
ಕೊನೆಯದಾಗಿ ಈ ಮೇಲಿನ ಸಲಹೆಗಳು ನಿಮಗೆ ಇಷ್ಟವಾದರೆ ನೀವು ಸಮಸ್ಯೆಯಲ್ಲಿದ್ದೀರಿ ಎಂದರ್ಥ. ಹಾಗಾಗಿ ಶೀಘ್ರದಲ್ಲಿ ಪರಿಹರಿಸಿಕೊಳ್ಳಿ, ರಗಳೆಯಾದರೆ ನೀವು ಸರಿಯಾಗಿದ್ದೀರಿ ಎಂದರ್ಥ ಮುಂದುವರೆಯಿರಿ . ಹ್ಯಾಪಿ ಒಂಟಿ
ನನಗೆ ಕೊನೆಯ ಸಾಲೂ ಸೇರಿದಂತೆ ಎಲ್ಲವೂ ಇಷ್ಟವಾಯಿತು. ಪರಿಹರಿಸಿಕೊಳ್ಳಬೇಕು. ನೀವು? ನನಗೆ ಗೊತ್ತಿಲ್ಲ

Thursday, May 29, 2008

ಹೊನ್ನೇಮರಡು ಪರಿಸರ ಶಿಕ್ಷಣ ಮತ್ತು ನನ್ನ ಮುಚ್ಕಣ್ಣು



ಕಣ್ಣುಮುಚ್ಚಿ ಗಮನಿಸಿ ಕೇಳಿ ಎಂದು ನೊಮಿತೋ ಮೆಡಂ ಹೇಳುತ್ತಾರೆ. ಬಿದಿರುಮಳೆಯಿಂದ ಆವರಿಸಿದ ರೌಂಡ್ ಬಯಲು ಮಂಟಪದಲ್ಲಿ ಬಣ್ಣ ಬಣ್ಣದ ಅಂಗಿತೊಟ್ಟ ಬೆಂಗಳೂರಿನ ಹಾಲುಗಲ್ಲದ ಹಸುಳೆಗಳು ಹಸಿರುಹೊದಿಕೆಯ ಕೆಳಗೆ ಕಣ್ಣುಮುಚ್ಚಿ ಕುಳಿತುಕೊಂಡರು. ನಾನೂ ಅವರ ಜತೆ ಸೇರಿಕೊಂಡೆ , ಚಿಲಿಪಿಲಿ ಹಕ್ಕಿಗಳ ಕೂಗು, ಎಣಿಸುತ್ತಾ ಸಾಗಿದೆ ಹದಿನೆಂಟು ತರಹದ ಕೂಗು ಕೇಳಿಸಿತು. ನೊಮಿತೋ ಮೆಡಂ ಈಗ ಕಣ್ಣು ಬಿಡಿ ಎಂದು ಗಡಸು ದನಿಯಲ್ಲಿ ಹೇಳಿದಾಗ ಒಲ್ಲದ ಮನಸ್ಸಿನಿಂದ ಕಣ್ತೆರೆದೆ. ಅಬ್ಬಾ ಎಷ್ಟೊಂದು ಮಜ. ಅದ್ಯಾವುದೋ ಹೊಸ ಲೋಕಕ್ಕೆ ಬಂದ ಅನುಭವ. ಒಂಟಿಮನೆಯ ಕಾಡಿನ ನಡುವೆಯೇ ವಾಸವಾಗಿರುವ ನಲವತ್ತು ವರ್ಷದ ನಾನು ಇಷ್ಟೊಂದು ಕಾಲವೂ ಹೀಗೆ ಕಣ್ಮಿಚ್ಚಿಕೊಂಡು ಹಕ್ಕಿಯ ಸ್ವರ ಕೇಳಿರಲಿಲ್ಲ . ಗುಜರಾತಿನ ನೊಮಿತು ಬೆಂಗಳೂರಿನ ಸ್ವಾಮಿಯನ್ನು ಮದುವೆಯಾಗಿ ಇಬ್ಬರೂ ಹೊನ್ನೆಮರಡು ಎಂಬ ಕುಗ್ರಾಮಕ್ಕೆ ಬಂದು ನನಗೆ ಇದನ್ನು ಹೇಳಿಕೊಡಬೇಕಾಯಿತು. ಕಣ್ಮುಚ್ಚಿ ದೇವರ ಧ್ಯಾನ ಮಾಡು ಎಂದಾಗ ಹಿರಿಯರ ಅಣತಿ ಮೀರಲಾರದೆ ಹೆದರಿಕೆಯಿಂದ ಕಣ್ಮುಚ್ಚಿಕುಳಿತು ಬೇಡದ ಆಲೋಚನೆ ತಡೆಗಟ್ಟಲಾಗದೆ ಒದ್ದಾಡಿಹೋಗಿದ್ದೆ. ದೇವರ ಎದುರಿನಿಂದ ಎದ್ದೆಳುವಾಗ ದೇಹವೆಲ್ಲಾ ಮಣಭಾರವಾದಂತೆ ಅನ್ನಿಸಿತ್ತು. ಆದರೆ ಈಗ ಹಾಗಲ್ಲ. ದೇವರು ಎಂಬ ವಿಷಯ ನಮ್ಮ ಎಣಿಕೆಗೆ ಸಿಗುವಂತಹದ್ದಲ್ಲ, ಅದರ ಮೊದಲ ಮೆಟ್ಟಿಲು ಪ್ರಕೃತಿಯಿಂದಲೂ ಏರಲು ಸಾಧ್ಯ ಅಂಬ ಸುಲುಬೋಪಾಯವನ್ನು ಹೊನ್ನೇಮರಡುವಿನಲ್ಲಿ ಕಲಿತೆ. ಅದೆಲ್ಲಾ ಇರಲಿ ಬೆಂಗಳೂರಿನ ಎಂಟು ಹತ್ತು ವರ್ಷ ವಯಸ್ಸಿನ ಬೋರ್ಡಿಂಗ್ ಸ್ಕೂಲಿನ ಮಕ್ಕಳು ಮುನ್ನೂರು ಕಿಲೋಮೀಟರ್ ದೂರದ ಹೊನ್ನೆಮರಡುವಿಗೆ ಬಂದು ಪರಿಸರವನ್ನು ಅಭ್ಯಾಸ ಮಾಡುತ್ತಾರೆ. ಈಜು ಕಲಿಯುತ್ತಾರೆ. ಗುಡ್ಡ ಹತ್ತುತ್ತಾರೆ. ನಲಿಯುತ್ತಾರೆ.ಕುಣಿಯುತ್ತಾರೆ. ಮತ್ತೆ ಸವಿನೆನಪಿನೊಂದಿಗೆ ವಾಪಾಸು ಹೋಗುತ್ತಾರೆ. ಇಲ್ಲಿ ಆಟದ ಮೂಲಕ ಪಾಠ ಕಲಿಯುತ್ತಾರೆ. ಇದೇ ಪರಿಸರದಲ್ಲಿನ ನಮ್ಮ ಮಕ್ಕಳು ಟಿ.ವಿ ಬಿಟ್ಟೇಳುವುದಿಲ್ಲ. ಕಾರ್ಟೂನ್ ನೆಟ್ವರ್ಕ್ ತುಂಬಾ ಇಷ್ಟ ಅಂತಾರೆ. ಗೀಜಗ, ಕೆಂಬೂತ ಹಸಿರು ಗಿಳಿ, ರೇಷ್ಮೆ ಹುಳ, ಗೋಪಿ ಹಕ್ಕಿ ಯಾವುದೂ ಅವುಕ್ಕೆ ಗೊತ್ತಿಲ್ಲ.

ತಪ್ಪು ನಮ್ಮದು ಅಂತ ಅನ್ನಿಸುತ್ತದೆ . ಸ್ವರ್ಗದಲ್ಲಿದ್ದ ಅವುಕ್ಕೆ ನಾವು ಕಂಪ್ಯೂಟರ್ ಕಲಿಸಲು ಒದ್ದಾಡುತ್ತೇವೆ. ಕಂಪ್ಯೂಟರ್ ಕೊನೆಗೂ ಕಲಿಯಬಹುದು ಎಂದು ಬೆಂಗಳೂರಿನ ಮಕ್ಕಳು ಪರಿಸರ ಪಾಠ ಕಲಿಯುತ್ತಿವೆ, ಒಟ್ಟನಲ್ಲಿ ದೂರದ ಬೆಟ್ಟ ನುಣ್ಣಗೆ.

Tuesday, May 27, 2008

ಅಪ್ಪಯ್ಯನ ಗಾಯಿತ್ರಿ ಮಂತ್ರ ಮತ್ತು ನನ್ನ ಅಬದ್ಧ ಪ್ರಲಾಪ


ಕೆಲಸ ಮಾಡಿ ಕೆಟ್ಟೊರಿಲ್ಲ, ಕೂತು ಹಾಳೋದೋರು ಇಲ್ಲ ಹಾಗೆಯೇ ಸಂಧ್ಯಾವಂದನೆ ಮಾಡಿ ಹಾಳೋದವರಿಲ್ಲ, ಮಾಡದೇ ಕೆಟ್ಟು ಹೋದೋರು ಇಲ್ಲ. ದೇವರು ಕೆಲಸ ಜಪತಪ ಪೂಜೆ ಅವೆಲ್ಲಾ ಅವರವರಿಗೆ ಬಿಟ್ಟಿದ್ದು. 78 ವರ್ಷದ ನನ್ನ ಅಪ್ಪಯ್ಯ ಮಾತ್ರಾ ನನಗೆ ಬುದ್ದಿ ಬಲ್ಲಾದಲ್ಲಿಂದ ಬೆಳಿಗ್ಗೆ ಆರು ಗಂಟೆಗೆ ಎದ್ದು ಕಾಫಿ ಕುಡಿದು ಒಂದು ಕವಳ ಹಾಕಿ ನಂತರ ಖುಷಿ ಖುಷಿಯಾದ ನಾಲ್ಕು ಮಾತಾಡಿ ಸ್ನಾನಕ್ಕೆ ಹೋಗುತ್ತಾರೆ. ಅನಾಮತ್ತು ಎರಡು ತಾಸು ಪೂಜೆ ಜಪ ತಪದ ನಂತರ ಗರಂ ಆಗುತ್ತಾರೆ. ಆವಾಗ ಬೆಳ್ಳಣ್ಣೆಯ ಶಂಭುಲಿಂಗೇಶ್ವರ ನ ಮುಖಭಾವ ಅವರದ್ದು. ಮತ್ತೆ ಸರಳಆಗಬೇಕು ಅಂದರೆ ಮಧ್ಯಾಹ್ನ ಊಟ ಮಾಡಿ ಮಲಗೇಳಬೇಕು. ಅವರ ಆ ಗರಂ ವರ್ತನೆಗೆ ಎರಡು ತಾಸಿನ ಪೂಜೆಯೇ ಕಾರಣ ಅಂತ ಅವರ ಐದೂ ಮಕ್ಕಳಾದ ನಮ್ಮೆಲ್ಲರ ಒಟ್ಟೂ ಅಭಿಮತ, ಗಾಯಿತ್ರಿ ಜಪದಿಂದ ಶಕ್ತಿ ಬರುತ್ತದೆ ಅಂತ ಎಲ್ಲರ ಆಂಬೋಣ . ಆದರೆ ಶಕ್ತಿ ಬರುತ್ತದೆ ಅಂತ ನಂಬಿಕೊಂಡವರ ಮುಖವಂತೂ ಖಂಡಿತಾ ಘನಗಂಬೀರವಾಗುತ್ತದೆ. ಇವತ್ತು 108 ಗಾಯಿತ್ರಿ ಜಪ 216 ಅಷ್ಟಾಕ್ಷರಿ ಜಪ 432 ಪಂಚಾಕ್ಷರಿ ಜಪ ನನ್ನಿಂದ ಮಾಡಲ್ಪಟ್ಟಿದೆ ಹಾಗಾಗಿ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಆಳವಾಗಿ ಕುಳಿತುಕೊಂಡಿತು ಎಂದರೆ ಕಣ್ಣು ಮುಖ ಹಾಗೂ ವರ್ತನೆಗಳಲ್ಲಿ ಸ್ವಾಭಿಮಾನ ತುಂಬಿ ತುಳುಕಾಡುತ್ತದೆ. ಅರ್ದ ಜನ ಆ ಮುಖಭಾವಕ್ಕೆ ಬೀಳುತ್ತಾರೆ. ಇನ್ನರ್ಧ ಜನ ಲೆಕ್ಕಕ್ಕೆ ಇಲ್ಲ ಜಮಾಕ್ಕೂ ಇಲ್ಲ. ಈ ಮೇಲಿನ ಫೋಟೊ ಪೂಜೆ ಮುಗಿಸಿ ಸಾಗರಕ್ಕೆ ಹೊರಟಾಗ ತೆಗದದ್ದು. ಕವಳ ಬಾಯಲ್ಲಿ ತುಂಬಿದ್ದರೂ ಅದೇನು ಗತ್ತು ನೋಡಿ. ಬಿ.ಪಿ ಇಲ್ಲ ಷುಗರ್ ಇಲ್ಲ ದೇಹಕ್ಕೆ ೮೦ ರ ಸನಿಹದ ವಯಸು ಮನಸ್ಸಿಗೆ ೨೦ ಲವಲವಿಕೆಯ ವಯಸು. ರಾತ್ರಿ 3 ಗಂಟೆಗೆ ತಿರುಗಾಟದಿಂದ ಬಂದು ಮಲಗಿದರೂ ಬೆಳಿಗ್ಗೆ 6 ಗಂಟೆಗೆ ಎದ್ದು ಪೂಜೆ ಜಪ ತಪ ತಪ್ಪಿಸುವಂತಿಲ್ಲ. ೧೦ ಗಂಟೆಗೆ ಮತ್ತೆ ತಾಳಗುಪ್ಪಕ್ಕೆ ಒಂದು ರೌಂಡ್ ಹೊರಡಲು ರೆಡಿ. 40 ರ ಹರೆಯದ ನಾನು ಸುಸ್ತಾಗಿದ್ದೇನೆ. ಅಪ್ಪಯ್ಯನನ್ನು ಅವರ ಉತ್ಸಾಹಕ್ಕೆ ತಕ್ಕಂತೆ ತಿರುಗಾಡಿಸಲು ಆಗುತ್ತಿಲ್ಲ. ನಮಗೆ ಜೀವನೋತ್ಸಾಹ ಅಷ್ಟೊಂದು ಇಲ್ಲ.
ಅಪ್ಪಯ್ಯನ ಈ ಜೀವನೋತ್ಸಾಹಕ್ಕೆ ಗಾಯಿತ್ರಿ ಜಪವೇ ಕಾರಣವೆ.? ಎಂಬ ಪ್ರಶ್ನೆ ಕಾಡುತ್ತದೆ. ನಮ್ಮಗಳ ಗೊಡ್ಡು ಅಹಂಕಾರದಿಂದ ಹಾಗೆಲ್ಲಾ ಪ್ರಶ್ನೆ. ಆದರೆ ವಾಸ್ತವವೆಂದರೆ "ಅಯ್ಯೋ ಮಂಕೆ ದಾಸರು ಹೇಳಿದ್ದಾರೆ ನಂಬಿಕೆಟ್ಟವರಿಲ್ಲವೋ... ಎಂದು ಹಾಗಾಗಿ ನಂಬು, ಕೊಂಕದೆ ಕೊನಲದೆ ನಂಬು ಆವಾಗ ಎಲ್ಲಾ ಉತ್ಸಾಹಗಳೂ ಪುಟಿದೇಳುತ್ತದೆ. ನಂಬದಿದ್ದರೆ ಗೊಂದಲದ ಗೂಡಾಗುತ್ತದೆ. ಆಮೇಲೆ ದೇಹ ಲಡ್ಡಾದ ನಂತರ ಅನಿವಾರ್ಯವಾಗಿ ನಂಬಲು ತೊಡಗುತ್ತದೆ. " ಎನ್ನುತ್ತದೆ ಒಳಮನಸ್ಸು.
ಸ್ನಾನ ಮಾಡುವಾಗ "ಏನಾದರಾಗಲಿ ಇವತ್ತಿನಿಂದ ನಾನೂ ಸಂದ್ಯಾವಂದನೆ ಮಾಡಬೇಕು ಅಂತ ಮನಸ್ಸು ತೀರ್ಮಾನಿಸಿದ ಮರಕ್ಷಣದಿಂದ ಗಾಯಿತ್ರಿಜಪ ಮಾಡುವಾಗಲೂ ಒಂದೇ ಪ್ರಶ್ನೆ " ಇವೆಲ್ಲಾ ಸತ್ಯವಾ? ಇವೆಲ್ಲ ಅವಶ್ಯಕತೆ ಇದೆಯಾ?" ಕಳ್ಳ ಮನಸ್ಸುಇದು ಮಾಡಿದರೆ ಒಂದು ಮಾಡದಿದ್ದರೆ ಮತ್ತೊಂದು. ಆ ಪ್ರಶ್ನೆ ಏಳದೆ ಇದ್ದವರು ಸುಖಿಗಳು. ಪ್ರಶ್ನೆ ಎದ್ದೂ ನಗಣ್ಯ ಪ್ರಶ್ನೆಯನ್ನು ಮಾಡಿದವರು ಮದ್ಯಮವಂತರು. ಪ್ರಶ್ನೆಗೆ ಉತ್ತರ ಹುಡುಕಿತ್ತೀನಿ ಎಂದು ಪ್ರಾರ್ಥನೆಗಳನ್ನು ನಿಲ್ಲಿಸುವವರು ಗ್ರಹಚಾರವಂತರು. ನಾನಂತೂ ಮೂರನೆಯದು ಮುಗಿಸಿ ಎರಡನೆಯ ಹಂತಕ್ಕೆ ಏರಿದ್ದೇನೆ.

Monday, May 26, 2008

ಬಂತು ಮಳೆ . ಚಳಕ್ ಎಂತು ಬೆನ್ನಿನ ಎಳೆ







26-05-2008



ನಿನ್ನೆ ಘೋರಾಕಾರದ ಬಿಸಿಲು. ಯಡ್ಡಿ ಚುನಾವಣೆಯ ದಗೆ,ಅವರು ಗೆಲ್ತಾರಾ ಇವರು ಸೋಲ್ತಾರಾ ಅನ್ನೋ ಬಿಸಿ ಬಿಸಿ ಚರ್ಚೆಯ ನಡುವೆ ಬೆವರೋ ಬೆವರು. ಆದರೆ ಇಂದು ಬೆಳಿಗ್ಗೆ ಯಡ್ಡಾದಿಡ್ಡಿ ಮಳೆ. ಬೆಂಗಳೂರಲ್ಲಿ ಯಡ್ಡಿಗೆ ತಂಪಾಗುತ್ತದೆಯೋ ಇಲ್ಲವೋ ಇನ್ನೂ ಸರಿಯಾಗಿ ಗೊತ್ತಿಲ್ಲ. ಆದರೆ ಇಲ್ಲಂತೂ ಧರೆ ತಂಪಾಯ್ತು. ಈ ತರ ದಿಡೀರನೆ ವಾತಾವರಣ ಬದಲಾದಗಲೆಲ್ಲ ಮನಸ್ಸು ಮುದುಡಿಕೊಂಡುಬಿಡುತ್ತದೆ. ಅದೇನೋ ಹೇಳಲಾರದ ತಿಳಿಯದ ಬೇಸರ. ಈ ಬೇಸರದ ನಡುವೆಯೇ ಮಳೆಯನ್ನು ನೋಡಲು ಕಿಟಿಕಿಯ ಮೂಲಕ ಕಣ್ಣಾಡಿಸಿದೆ. ಆವಾಗ ಕಣ್ಣಿಗೆ ಕಂಡಿದ್ದು ನನ್ನನ್ನು ಹದಿನೈದು ವರ್ಷದಿಂದ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನು ನೋವಿಗೆ ಕಾರಣವಾದ ಕರೆಂಟು ಕಂಬ. ಸ್ವಯಂಕೃತಾಪರಾಧದ ಆ ಘಟನೆ ನೆನಪಾಯಿತು.


ಅಂದು ಮೆ ೧೩ ೧೯೯೩. ಹೀಗೆ ಸಂಜೆ ಮಳೆ ಬಂತು. ಮಳೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಕರೆಂಟ್ ಡಮಾರ್. ಕರೆಂಟಿಲ್ಲದೆ ಹೊತ್ತು ಕಳೆಯುವುದು ಎಂದರೆ ಬಲು ಬೇಸರ. ಮೂರು ಫೇಸಿನ ಲೈನ್ ನಲ್ಲಿ ಒಂದು ಫೇಸ್ ಕರೆಂಟು ಇತ್ತು. ಮನೆಗೆ ಕರೆಂಟ್ ತರುವ ಉಮೇದಿನಲ್ಲಿ ಕಂಬ ಹತ್ತಿದೆ. ಕಂಬ ಹತ್ತಿ ಕರೆಂಟ್ ತಂದಿದ್ದು ಅದೇ ಮೊದಲನೇ ಸರಿ ಆಗಿರಲಿಲ್ಲ. ಆದರೆ ಈ ಬಾರಿ ಅದೇನು ವ್ಯತ್ಯಾಸವಾಯಿತೋ ತಿಳಿಯಲಿಲ್ಲ. ಒಂದು ವೈರ್ ತಿರುಗಿ ಕೈಮೇಲೆ ಕುಳಿತುಕೊಂಡಿತು. ಜುಮ ಜುಮ ಇಡೀ ಮೈ ಅದೇನೋ ಆಗುತ್ತಿದೆ. ಕರೆಂಟು ಹೊಡೆಯುತ್ತಿರುವುದು ನಾನು ಕಂಬದ ಮೇಲೆ ಇರುವುದು ಎಲ್ಲಾ ತಿಳಿಯುತ್ತಿದೆ. ಆದರೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮೂರ್ನಾಲ್ಕು ಅಸಾಹಾಯಕ ಪ್ರಯತ್ನದ ನಡುವೆ ಸಾವಿನಂಚಿನ ಅನುಭವವಾದಂತಾಯಿತು. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲಾ ನೆನಪಿಗೆ ಬಂದರು. ನನ್ನ ಇಡೀ ದೇಹ ಸಣ್ಣವಾಗುತ್ತಿರುವಂತೆಯೂ ಹಾಗೆ ಹಾಗೂ ಹಗೂರವಾದಂತೆಯೂ ಅನುಭವ ಆಗತೊಡಗಿತು. ಅಂತಹ ಸಂದರ್ಭದಲ್ಲಿಯೂ ಸಾವು ಎಂದರೆ ಇದೇನಾ, ವಾವ್ ಎನ್ನುವ ಅನುಭವ. ನಾನು ಹತ್ತಿದ ಕಂಬದೆದುರು ನಾವು ಸಣ್ಣಕ್ಕಿದ್ದ ಕಾಲದಿಂದಲೂ ನಂಬಿದ ಯಕ್ಷಿ ಬಣ್ಣ ಇತ್ತು ಜುಮ ಜುಮ ಕರೆಂಟಿನ ಷಾಕ್ ನ ನಡುವೆ ಯಕ್ಷಿಬಣ್ಣ ಕಂಡಿತು. ಅದೇನು ಪವಾಡವೋ, ಸತ್ಯವೋ, ಅಥವಾ ನನ್ನ ನಂಬಿಕೆಯೂ ನನಗೆ ಇಂದೂ ಅರ್ಥವಾಗಿಲ್ಲ. ಯಕ್ಷಿಕಲ್ಲು ಕಣ್ಣಿಗೆ ಕಂಡ ಮರುಕ್ಷಣ ನನ್ನ ಕೈಗೆ ತಗುಲಿದ್ದ ವೈರ್ ತಪ್ಪಿತು. ಕಂಬದ ಮೇಲಿಂದ ದಡಾರನೆ ಕೆಳಗೆ ಬಿದ್ದೆ. ೫೦ ಅಡಿ ಕೆಳಗೆ ಬೀಳಬೇಕಾಗಿದ್ದ ಜಾಗದಲ್ಲಿ ಸಣ್ಣ ಗಿಡವೊಂದರ ಕಾರಣದಿಂದ ೨೦ ಅಡಿ ಕೆಳಗೆ ಬಿದ್ದೆ. ಸ್ಪೈನಲ್ ಕಾರ್ಡ್ ಡಮಾರ್ ಅಂತು. ಅಲ್ಲಿಂದ ಸಾಗರಕ್ಕೆ ನಂತರ ಮಣಿಪಾಲಿಗೆ ೧೫ ದಿವಸದ ನಂತರ ವಾಪಾಸು ಮನೆಗೆ ಆನಂತರ ಮೂರು ತಿಂಗಳು ಅಪೂಟ್ ಬೆಡ್ ರೆಸ್ಟ್. ಮತ್ತೆ ನಂತರವೆಂದರೆ ಹಾಗೂ ಅದರ ಕೊಡುಗೆಯೆಂದರೆ ಈ ಗಳಿಗೆಯವರೆಗೂ ನಿರಂತರ ಕಾಡುವ ಬೆನ್ನು ನೋವು. ಆ ನೋವನ್ನು ಸಹಿಸಬಹುದು ೩೬ ಹರೆಯದ ಭಟ್ಟು ಬಾಯಿ ಕ್ಯಾನ್ಸರ್ ಬಂದು ಆಲೋಪತಿಯೆಲ್ಲಾ ಮೋಸ ನಾಟಿಯೇ ಸರಿ ಎಂದು ಮೂರುತಿಂಗಳಿಂದ ಚಕ್ಕೆ ತೆಯ್ದು ಹಚ್ಚುತ್ತಾ ಶೀಘ್ರದಲ್ಲಿಯೇ ಹುಷಾರಾಗ್ತು ನೋಡು ಎನ್ನುತ್ತಾ ಮಲಗಿದ್ದಾನೆ. ಅದಕ್ಕಿಂತ ಈ ನೋವೇ ಎಷ್ಟೋ ವಾಸಿ ಎಂಬ ಸಮಾಧಾನ.



ಇದು ಒಂದು ಗಳಿಗೆಯ ಕರೆಂಟ್ ಪಡೆಯಲು ಹೋದ ಕತೆ. ಕೆ.ಇ.ಬಿ ಯವರು ಕೇಸ್ ಹಾಕುತ್ತಾರೆ ಎಂದು ಯಾರೋ ಹೇಳಿದ್ದರಿಂದ. ಮನೆಯ ಆಂಟೆನಾ ಸರಿಮಾಡಲು ಹೋಗಿ ಕೆಳಗೆ ಬಿದ್ದೆ ಎಂಬ ಹಸಿ ಸುಳ್ಳು ಹೇಳಯಾಯಿತು. ಇವತ್ತು ಆವತ್ತಿನ ತರಹದ್ದೇ ಮಳೆ ಬಂದಿದೆ ಇನ್ನು ಯಾರಿಗೆ ಕಾದಿದೆಯೋ...

Sunday, May 25, 2008

ಮಾರ್ತಾಂಡಣ್ಣನ ಅಡಿಗೆ ಮತ್ತು ಹಡಿನಬಾಳು ಹೆಡಿಗೆ ಅಲ್ಲ ಹೆಗಡೆ


ಬಚ್ಚಗಾರಿನ ಹೆಸರಿನಲ್ಲಿ ಯಕ್ಷಗಾನ ಮೇಳವೊಂದಿತ್ತು. ಚಿಟ್ಟಾಣಿ ಸುಬ್ರಹ್ಮಣ್ಯ ಶುಂಠಿ ಸತ್ಯ ಭಟ್ಟರು ಸೇರಿ ಕಟ್ಟಿದ ಮೇಳ. ನಾನು ಮೇಳ ಆರಂಭವಾದ ಒಂದು ವಾರ ಅದರಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದೆ.

ಮೇಳದ ತಿರುಗಾಟ, ಹೊತ್ತಿಲ್ಲದ ಹೊತ್ತಲ್ಲಿ ಗೊತ್ತಿರದ ಊರಲ್ಲಿ ಎಲ್ಲೆಂದರಲ್ಲಿ ಊಟ, ನಿದ್ರೆ, ಸ್ನಾನ. ಅಯ್ಯೋ ಯಾರಿಗೆ ಬೇಕು ಆ ಅವಸ್ಥೆ ಅನ್ನಿಸುವಷ್ಟು. ಇಂತಹ ಮೇಳದ ಅಡಿಗೆ ಭಟ್ಟರಾಗಿ ನಮ್ಮೂರಿನ ಮಾರ್ತಾಂಡಣ್ಣ. ನನಗೆ ಗುರ್ತಿದ್ದ ಜನ ಆದ್ದರಿಂದ ಸ್ವಲ್ಪ ಕಾಳಜಿ ವಹಿಸಿ ಒಂದು ವಾರವೂ ಕಾಳಜಿಯಿಂದ ಊಟ ಹಾಕಿದ್ದ. ಕುಸುಬಲಕ್ಕಿಯ ಗಟ್ಟಿ ಅನ್ನ ಒಗ್ಗದು ಅಂತ ಬೆಣಚಿಗೆ ಅಕ್ಕಿ ಅನ್ನ ಸರಿ ರಾತ್ರಿಯವರೆಗೂ ಕಾದಿಟ್ಟು ಬಡಿಸಿದ್ದ. ಮಾರ್ತಾಂಡಣ್ಣ ವಿಶಿಷ್ಠ ವ್ಯಕ್ತಿತ್ವದ ಜನ. ಕೀರಲು ಧ್ವನಿಯ ಆತನ ಮಾತೇ ತಮಾಷೆ. ಜೀವನವನ್ನು ತಲೆಗೇರಿಸಿಕೊಂಡು ಕುಂತವನಲ್ಲ. ಹೇಗೆ ಬಂತೋ ಹಾಗೆ ಸಾಗುವವನು.ಮನೆಯಲ್ಲಿ ಒಂದು ಎಕರೆ ಅಡಿಕೆ ತೋಟ ಅಷ್ಟೇನೂ ಉತ್ತಮವಲ್ಲದ ಆರ್ಥಿಕ ಪರಿಸ್ಥಿತಿ. ಹೊಸತಾದ ಮೇಳದಲ್ಲಿ ವ್ಯವಸ್ಥೆ ಸಸೂತ್ರ ಇರಲಿಲ್ಲ. ಇದ್ದುದ್ದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಅಡಿಗೆ ಮಾಡಬೇಕಾಗುತ್ತಿತ್ತು. ಮಹಾಬಲ ಹೆಗಡೆ ಕೆರೆಮನೆ ಊಟಕ್ಕೆ ಕುಳಿತಾಗ ಸಾರು ಆಂದರು. ಮಾರ್ತಾಂಡಣ್ಣ ಬಕೇಟಿಗೆ ಹುಟ್ಟು ಹಾಕಿ ಸಾರು ಬಡಿಸಿದರು. ಸ್ವಲ್ಪ ಸಮಯದ ನಂತರ ಸಾಂಬಾರು ಎಂದರು ಮಾರ್ತಾಂಡಣ್ಣ ಮತ್ತದೇ ಸಾರಿನ ಬಕೇಟಿಗೆ ಹುಟ್ಟು ಹಾಕಿ ಬಡಿಸಿದ. ಮಹಾಬಲ ಹೆಗಡೆಯವರಿಗೆ ಅಚ್ಚರಿಯಾಗಿರಬೇಕು ಇದೇನೋ ಹೀಗೆ? ಎಂದರು. " ಪರಿಸ್ಥಿತಿ ಅಷ್ಟೆ. ಮೇಲಿಂದ ಹಾಕಿರೆ ಸಾರು ಅಂಡಿಂದ ಹಾಕಿರೆ ಹುಳಿ, ಪಾತ್ರೆ ಇಲ್ಲೆ ಆನೆಂತ ಮಾಡದು ಅಂದ. ಕೆರೆಮನೆ ಹೆಗಡೆಯವರಿಗೆ ನಗು ತಡೆಯಲಾಗಲ್ಲಿ. ಬೊಕ್ ಅಂತ ಅನ್ನದ ಸಮೇತ ನಕ್ಕರು. ಅಷ್ಟರಲ್ಲಿ ಹಡಿನಬಾಳು ಶ್ರೀಪಾದ ಹೆಗಡೆ ಎಂಬ ಕಲಾವಿದ(ಅವರು ಯಕ್ಷಗಾನದ ದೊಡ್ಡ ಕಲಾವಿದರಂತೆ) ಊಟಕ್ಕೆ ಬಂದರು. ರಂಗದಲ್ಲಿ ಭೀಮ, ಕೀಚಕ ಮುಂತಾದ ದೊಡ್ಡ ಪಾತ್ರ ಮಾಡುವ ಜನ ಎಂಬ ಗತ್ತು ಇತ್ತು. ಮೇಲಿಂದು ಸಾರು ಅಂಡಿದ್ದು ಸಾಂಬಾರು ತತ್ವ ಅವರಿಗೂ ಅನ್ವಯಿಸಿದ ಮಾರ್ತಾಂಡಣ್ಣ. ಸಾಂಬಾರು ಅನ್ನದ ತಟ್ಟೆಗೆ ಬಿದ್ದ ತಕ್ಷಣ ಕೀಚಕ ಮಹಾಶಯನ ಪಿತ್ತ ನೆತ್ತಿಗೇರಿತು " ಆ ಇದೇನು ಊಟವಾ ಮಣ್ಣ, ಸಾರಾ ಸಾಂಬಾರ, ನಾಯಿಯೂ ತಿನ್ನದು" ಎಂದು ಕೌರವನ ಗತ್ತಿನಲ್ಲಿ ಬಟ್ಟಲು ಸಮೇತ ಬೀಸಿ ಎಸೆದರು. ಬಟ್ಟಲು ಟಣ್ ಟಣ್ ಸದ್ದು ಮಾಡುತ್ತಾ ಅಲ್ಲಿಯೇ ಇದ್ದ ಬಾವಿ ಕಟ್ಟೆಗೆ ಬಡಿದು ಕೆಳಗೆ ಬಿತ್ತು. ಅನ್ನ ಸುತ್ತಲೆಲ್ಲಾ ಚೆಲ್ಲಾಡಿತು. ನಾನು ಮಾರ್ತಾಂಡಣ್ಣನ ಮುಖ ನೋಡಿದೆ. ಪಾಪ ಅಬ್ಬರ ಎಂದರೇನೆಂದು ಅರಿಯದ ತಮಾಷೆಯ ಆ ಜೀವಿ ಅಸಾಹಾಯಕತೆಯಿಂದ ನೋಡುತ್ತಿದ್ದ.

ಇವೆಲ್ಲಾ ಕಳೆದು ಈಗ ಇಪ್ಪತ್ತೈದು ವರ್ಷ ಸಂದಿದೆ. ಮಾರ್ತಾಂಡಣ್ಣನಿಗೆ ಅದೇ ಬೀಡಿ ಅದೇ ಕೀರಲು ಧ್ವನಿ ಹಾಗೂ ಅದೇ ಮುಖ. ಆದರೆ ಅವನ ಮಗ ಉದಯ ಕಷ್ಟಪಟ್ಟು ಇಂಜನಿಯರಿಂಗ್ ಓದಿ ಅಮೆರಿಕೆಯಲ್ಲಿದ್ದಾನೆ. ಮನೆಗೆ ಒಳ್ಳೆಯದನ್ನು ಮಾಡಿದ್ದಾನೆ. ಅಪ್ಪನನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ. ಅಂದು ಅಡುಗೆ ಮಾಡುತ್ತಿದ್ದ ಮಾರ್ತಾಂಡಣ್ಣನ ಬಾಯಲ್ಲಿ ಅಮೆರಿಕಾದ ಕತೆ ಹೇಳುವಂತೆ ಮಾಡಿದ್ದಾನೆ. ಮೊನ್ನೆ ಅದ್ದೂರಿಯಿಂದ ಮಗನ ಮದುವೆ ಮಾಡಿದ ಮಾರ್ತಾಂಡಣ್ಣ. ನನಗೆ ಮಗ ಪತ್ರಿಕೆ ಕಳುಹಿಸಿದ್ದ. ಆದರೆ ಹೋಗಲಾಗಲಿಲ್ಲ. ಅಂದು ರಾಜನ ವರ್ತನೆ ತೋರಿದ್ದ ಹಡಿನಬಾಳು ಹೆಗಡೆಯವರು ಹಾಗೂ ಅವರ ಮಗ ಏನಾಗಿದ್ದಾನೋ ಗೊತ್ತಿಲ್ಲ. ನಾನಂತೂ ಯಕ್ಷಗಾನದ ಕಡೆ ತಲೆ ಹಾಕಿ ಮಲಗದೇ ಇಪ್ಪತ್ತು ವರ್ಷ ಆಯಿತು.