Friday, October 30, 2009

ರತ್ನಾದ ಮಣಿ ಮಂಟಪಾಕೆ ...........

"ರತ್ನಾದ ಮಣಿ ಮಂಟಪಾಕೆ ಸ್ವಾಮಿ ಪ್ರತ್ಯಕ್ಷವಾಗಿ ನೀ ಬಾರಯ್ಯ..." ಹೀಗೊಂದು ಹಾಡು ನನ್ನ ಅಕ್ಕಂದಿರು ಸುಶ್ರಾವ್ಯವಾಗಿ ಹಾಡತೊಡಗಿದರೆಂದರೆ ಅದು ಚೌತಿ ಹಬ್ಬದ ಅಥವಾ ಮತ್ಯಾವುದೋ ದೇವರ ಕಾರ್ಯದ ಮಂಗಳಾರತಿ ಸಮಯ ಅಂತ. ನನ್ನ ಎರಡು ಅಕ್ಕಂದಿರ(ನನಗೆ ಮೂವರು ಅಕ್ಕಂದಿರು, ಅದರಲ್ಲಿ ಇಬ್ಬರು ಸಂಗೀತದ ಪೆಟ್ಟಿಗೆ, ಇಲ್ಲಿ ಹೆಸರನ್ನು ಉದ್ದೇಶಪಟ್ಟೇ ದಾಖಲಿಸುತ್ತಿಲ್ಲ, ಯಾವ ಇಬ್ಬರಿಗೂ ನಾವೇ ಅಂದಾಗಲಿ ಅರ್ಥ...! ಸುಮ್ಮನೆ ಮೂರನೆಯವರಿಗೆ ಬೇಜಾರು ಯಾಕೆ?) ಹಿಟ್ ಹಾಡುಗಳಲ್ಲಿ ಇದೂ ಒಂದು. ಇವತ್ತು ಮೂರು ಸಂಜೆ ಹೊತ್ತಿನಲ್ಲಿ ತುಳಸಿಪೂಜೆಯನ್ನು ಅಜ್ಜ ಮೊಮ್ಮಗ ಶ್ರದ್ಧೆಯಿಂದ ಮಾಡುತ್ತಿರಬೇಕಾದಾಗ ನನ್ನವಳು ಅದೇ ಹಾಡನ್ನು ಗೊಣಗುಟ್ಟಿದಳು. ಅಮ್ಮ ಅದಕ್ಕೆ ದನಿ ಸೇರಿಸಿದಳು. ಆದರೂ ಆ ಹಾಡಿನ ಗತ್ತು ಬರಲಿಲ್ಲ. ನನ್ನ ಮಗ ನನಗೆ ಅವನ ವಯಸ್ಸಿನಲ್ಲಿ ಹೇಗೆ ಶ್ರದ್ಧೆ ಇತ್ತೋ ಅದೇ ಆಸಕ್ತಿಯಿಂದ ತುಳಸಿ ಗಿಡಕ್ಕೆ ಅಲಂಕಾರ ಮಾಡಿ ನೆಲ್ಲಿ ಚಂಡೆ ತಂದು ಸಿಗಿಸಿದ್ದ. ಮತ್ತು ಸಿಕ್ಕಾಪಟ್ಟೆ ಶ್ರದ್ಧೆಯಿಂದ ಕಾರ್ತಿಕ ದೀಪ ಹಚ್ಚುತ್ತಿದ್ದ. ಅಪ್ಪಯ್ಯ ಈಗ ಇಪ್ಪತ್ತೈದು ವರ್ಷದ ಹಿಂದಿನ ಅದೇ ಶ್ರಧ್ದೆಯಿಂದ ಪೂಜೆ ಮಾಡುತ್ತಿದ್ದ.
ಅಮ್ಮ ಹೆಂಡತಿ ಕೂಡ ತನ್ಮಯರಾಗಿದ್ದರು.
ನನಗೆ ಮಾತ್ರಾ ಇವೆಲ್ಲ ಸಣ್ಣ ಮಕ್ಕಳ ಆಟದಂತೆ ಭಾಸವಾಗುತ್ತಿತ್ತು. ಹೌದು ಅದೇಕೋ ನನಗೆ ಅಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕಳೆದುಕೊಳ್ಳುವುದೇ ಹೆಚ್ಚು. ಭಕ್ತಿಯ ಭಾವ ಮೂಡಿಬರಲೂ ಪುಣ್ಯ ಮಾಡಿರಬೇಕು....!. ಆದರೆ ನಾನು ಒಂದೆರಡು ಕ್ಷಣ ಬಾಲ್ಯಕ್ಕೆ ಜಾರಿದೆ. ದೊಡ್ಡ ದೊಡ್ಡ ಅಕ್ಕಂದಿರು "ರತ್ನಾದ......" ಹಾಡುತ್ತಿದ್ದರು ನಾನು ಚಡ್ಡಿ ಹಾಕಿಕೊಂಡು ದೀಪ ಹಚುತ್ತಿದ್ದೆ ಆದರೆ ಆಗಿನ ಚಡ್ಡಿ ಈಗಿನಂತೆ ಮೊಳಕಾಲಿನ ವರೆಗೆ ಬರುತ್ತಿರಲಿಲ್ಲ ಇನ್ನೂ ಬಹಳ ಮೇಲೆಯೇ ಇರುತ್ತಿತ್ತು.....!
ಬೇಕು ಬೇಕು ಇವೆಲ್ಲಾ ಬೇಕು ಹಳೆಯ ಸುಮಧುರ ನೆನಪು ಮರುಕಳಿಸಲಾದರೂ ಬೇಕು. ಮಜ ಇರುವುದೇ ಅಲ್ಲಿ.
ನಿಮಗೂ ನೆನಪಾಗಿರಬೇಕು ಅಲ್ಲ್ವಾ..? ಆಗಲಿಲ್ಲವಾ ನೀವು ನತದೃಷ್ಟರು ಬಿಡಿ. ನಿಮ್ಮ ಮಕ್ಕಳಿಗಾದರೂ
ಸುನೇರೇ ಫಲ್ ಗಳನ್ನು ಕಲ್ಪಿಸಿಕೊಡಿ. ದೊಡ್ಡವರಾದಮೇಲೆ ಹೀಗೆ ಕೊರೆಯುತ್ತಾರೆ. ಆವಾಗ ಹೀಗಿತ್ತು ಮಜ ಇತ್ತು........



ಹಬ್ಬದ ಇಲಾಡಿಯ "ಸೋಬೇಟೆ"




ದೀಪಾವಳಿ, ಭೂಮಿಹುಣ್ಣಿಮೆಯ ಹಬ್ಬಗಳೆಂದರೆ ಭೂತಾಯಿಯ ಮಕ್ಕಳಾದ ರೈತರಿಗೆ ವಿಶೇಷದ ದಿನಗಳು. ಕೃಷಿ ಕೆಲಸಗಳು ಮುಗಿದಿರುತ್ತವೆ. ಫಸಲು ಕಣ್ಣೆದುರಿಗೆ ನಳನಳಿಸುತ್ತಿರುತ್ತದೆ. ಪ್ರಕೃತಿಯ ಮಳೆಗಾಲದ ಅಬ್ಬರದಿಂದ ಉಳಿಸಿಕೊಂಡ ತೆನೆಭರಿತ ಫಸಲನ್ನು ೨-೩ ತಿಂಗಳುಗಳ ಕಾಲ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಂಡರೆ ವರ್ಷಪೂರ್ತಿ ಗೆದ್ದಂತಯೇ. ಆ ರಕ್ಷಣೆಯ ಕೆಲಸ ಹಗಲುರಾತ್ರಿಯದು. ಅಲ್ಲಿ ಸ್ವಲ್ಪ ಏರುಪೇರಾದರೂ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದಕ್ಕೆ ಉಪಾಯವಾಗಿಯೇ ಹಬ್ಬದ ಮಾರನೇ ದಿವಸಗಳನ್ನು ಮಲೆನಾಡಿನ ರೈತರುಗಳು ಸೋಬೇಟೆ ಗಾಗಿ ಮೀಸಲಿಡುತ್ತಾರೆ. ಮೋಜು ಮಜದ ಜತೆಗೆ ಒಂದೇ ಕಲ್ಲಿನಲ್ಲಿ ಮೂರ್ನಾಲ್ಕು ಹಕ್ಕಿ ಹೊಡೆದ ಹಾಗಿನ ಕೆಲಸ ಈ ಸೋಬೇಟೆ.
ಏನಿದು ಸೋಬೇಟೆ? ಎಂಬ ಪ್ರಶ್ನೆಗೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ಸೋಸಿ ಆಡುವ ಬೇಟೆ ಎಂದರ್ಥ. ಭೂಮಿ ಹುಣ್ಣಿಮೆ ಹಾಗೂ ದೀಪಾವಳಿಯ ಮಾರನೇ ದಿನ ಕೃಷಿಕರು ಇಲಾಡಿ(ರಜ) ವನ್ನು ಆಚರಿಸುತ್ತಾರೆ. ಅಂದು ಊರಿನ ಯುವಕರು ನಡುವಯಸ್ಕರು ಸೇರಿ ಸೋಬೇಟೆಗೆ ಹೊರಡುತ್ತಾರೆ. ನೂರು ಅಡಿ ಉದ್ದದ ಬಲೆ, ಈಟಿ ಯೊಂದಿಗೆ ಇಪ್ಪತ್ತು ಮೂವತ್ತು ಜನರ ತಂಡ ಊರಿನಿಂದ ದೂರದ ಕಾಡಿನ ತಪ್ಪಲಿಗೆ ತೆರಳುತ್ತದೆ. ಗದ್ದೆ ಬದುವಿನ ಮೇಲ್ಬಾಗದಲ್ಲಿ ಕಾಡು ಪ್ರಾಣಿಗಳು ಇಳಿಯುವ ಜಾಗದಲ್ಲಿ ಮರದ ಗೂಟ ನೆಟ್ಟು ಅದಕ್ಕೆ ಬಲೆಯನ್ನು ಕಟ್ಟಲಾಗುತ್ತದೆ. ಅಲ್ಲಿ ಮೂರ್ನಾಲ್ಕು ಜನ ಈಟಿಯನ್ನು ಹಿಡಿದುಕೊಂಡು ಕಾವಲುಕಾಯುತ್ತಾ ನಿಲ್ಲುತ್ತಾರೆ. ಈಗ ಅರ್ದ ಕೆಲಸ ಮುಗಿದಂತೆ. ಇನ್ನುಳಿದ ತಾಕತ್ತಿನ ಕೆಲಸ ಯುವಕರದ್ದು. ಬಲೆ ಇರುವ ಜಾಗದ ಮತ್ತೊಂದು ಕಡೆಯಿಂದ ಮಿಕ್ಕುಳಿದ ಜನರ ತಂಡ ಕಾಡನ್ನು ಪ್ರವೇಶಿಸುತ್ತದೆ. ಕಾಡಿನೊಳಗಿನಿಂದ ದೊಡ್ಡದಾಗಿ "ಹುಯ್...ಹುಯ್" ಎಂದು ಕೂಗುತ್ತಾ ಒಂದುಕಡೆಯಿಂದ ಕಾಡನ್ನು ಸೋಸುತ್ತಾ ಬಲೆಯಿರುವೆಡೆ ಬರುತ್ತಾರೆ. ಕಾಡಿನ ಗಾತ್ರಕ್ಕನುಗುಣವಾಗಿ ಬೇಟೆಯ ಸಮಯ ತಗಲುತ್ತದೆ. ಒಮ್ಮೊಮ್ಮೆ ೧೦ ತಾಸುಗಳನ್ನು ತೆಗೆದುಕೊಳ್ಳುವುದೂ ಉಂಟು. ಹಾಗೆ ಕಾಡನ್ನು ಸೋಸುತ್ತಾ ಬಲೆಯ ಕಡೆ ಸಾಗುವಾಗ ಕಾಡಿನಲ್ಲಿರುವ ಕಾಡುಹಂದಿ, ಕಾಡುಕುರಿ, ಬರ್ಕ ಮುಂತಾದ ಪ್ರಾಣಿಗಳನ್ನು ಬೆದರಿಸುತ್ತಾರೆ. ಅವು ಬಲೆಯತ್ತ ಹೋಗಿ ಅಲ್ಲಿಂದ ಸಿಕ್ಕಿಬಿದ್ದ ತಕ್ಷಣ ಅಲ್ಲಿದ್ದವರು ಈಟಿಯಿಂದ ಇರಿದು ಪ್ರಾಣಿಯನ್ನು ಕೊಲ್ಲುತ್ತಾರೆ. ಅಲ್ಲಿಗೆ ಸೋಬೇಟೆಯ ಕಾರ್ಯಾಚರಣೆ ಮುಗಿದಂತೆ.ಮುಂದಿನದು ಸೋಬೇಟೆಯ ವಿಜಯೋತ್ಸವ ಎಂದರೆ ಕೊಂದಪಾಪ ತಿಂದು ಪರಿಹಾರ. ಅಕಸ್ಮಾತ್ ಬೇಟೆಯ ಸಮಯದಲ್ಲಿ ಅಜಾಗರೂಕತೆಯಿಂದ ಪ್ರಾಣಿಯನ್ನು ತಪ್ಪಿಸಿಕೊಳ್ಳಲು ಬಿಟಲ್ಲಿ ಅದಕ್ಕೆ ಕಾರಣೀಕರ್ತರಾದವರ ಮೇಲೆ ಆರೋಪಗಳೂ ಇರುತ್ತವೆ. ಈ ಆರೋಪದ ಭರಾಟೆ ಒಮ್ಮೊಮ್ಮೆ ಅತಿರೇಕಕೆ ಹೋಗಿ ದೊಡ್ಡಮಟ್ಟದ ಗಲಾಟೆಯಾಗುವುದೂ ಉಂಟು.

ಆದರೆ ಇಂದಿನ ವಾತಾವರಣದಲ್ಲಿ ಹಳ್ಳಿಗಾಡಿನಲ್ಲಿ ಈ ಸೋಬೇಟೆಯ ಸಾಹಸ ಕಡಿಮೆಯಾಗುತ್ತಿವೆ. ಕಾಡು ಕಾಡಿನ ಪ್ರಾಣಿಗಳು ಕಡಿಮೆಯಾಗಿದ್ದು ಒಂದೆಡೆಯಾದರೆ ಹಳ್ಳಿಗಳಲ್ಲಿನ ಯುವಕರ ಪಟ್ಟಣ ವಲಸೆಯಿಂದಾಗಿ ಸೋಬೇಟೆಗಾರರು ಇಲ್ಲವಾಗುತ್ತಿದ್ದಾರೆ. ಆದರೂ ಸಂಪ್ರದಾಯ ಬಿಡಲೊಲ್ಲದ ಸಾಗರ-ಸಿದ್ದಾಪುರ-ಸೊರಬ ತಾಲ್ಲೂಕಿನ ರೈತರು ಪ್ರಾಣಿಗಳು ಸಿಗಲಿ ಬಿಡಲಿ "ಸೋಬೇಟೆ" ಯ ಆಚರಣೆಯನ್ನಂತೂ ಪ್ರತೀವರ್ಷ ಮಾಡುತ್ತಾರೆ. ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ ಎನ್ನುವ ಅಭಿಪ್ರಾಯ ಕೆಲವರದ್ದು ಇದೆ.
ಕಾಡು ಪ್ರಾಣಿಗಳಿಂದ ಫಸಲು ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು ಪರೋಕ್ಷ ಉದ್ದೇಶ ಮಾಂಸದ್ದಾಗಿದೆ. ಸೋಬೇಟೆ ಯಶಸ್ವೀಯಾಗಬೇಕೆಂದರೆ ಕಾಡು ಕೂಡ ಹೇರಳವಾಗಿರಬೇಕಾಗಿದೆ. ಕಾಡಿದ್ದರೆ ನಾಡು ಎಂಬುದು ನಾಣ್ಣುಡಿಗೆ ಸೀಮಿತವಾಗಿರದೆ ಅನುಷ್ಠಾನಕ್ಕೆ ಪೂರ್ಣಪ್ರಮಾಣದಲ್ಲಿ ಬಂದಲ್ಲಿ ಸೋಬೇಟೇಯಂತಹ ಸಾಹಸ ಉಳಿಯುತ್ತದೆ

Tuesday, October 27, 2009

ಜೇನು ಹುಳುಗಳ ಶತ್ರುಬೇಟೆ


ಜೇನುನೊಣಗಳದ್ದು ಒಂದು ಅದ್ಬುತ ಪ್ರಪಂಚ. ಮನುಷ್ಯನ ಜೀವನಕ್ಕೆ ಹೋಲುವ ಹಲವಾರು ಸಂಗತಿಗಳನ್ನು ಅವುಗಳಿಗೆ ಪ್ರಕೃತಿ ನೀಡಿದೆ. ಯಂತ್ರಗಳ ಬಳಕೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಜೇನಿನ ಪ್ರಪಂಚದಲ್ಲಿ ಹಾಸುಹೊಕ್ಕಾಗಿವೆ. ಅಂತಹ ಒಂದು ಪ್ರಕರಣ ಶತ್ರುಬೇಟೆ. ತನ್ನ ಗೂಡಿನ ಹುಳುಗಳನ್ನು ರಕ್ಷಿಸಿಕೊಳ್ಳಲು ಆಕ್ರಮಣ ಮಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುವ ಜೇನಿನ ವಿಧಾನ ಮೈನವಿರೇಳಿಸುತ್ತದೆ. ಅಂತಹ ಅಪರೂಪದ ಒಂದು ಯುದ್ಧ ನನಗೆ ಕಾಣಿಸಿದ್ದು ಅಚಾನಕ್ಕಾಗಿ ಅದನ್ನು ನಿಮ್ಮಮುಂದೆ ತೆರೆದಿಡುತ್ತಿದ್ದೇನೆ.
ಜೇನಿನ ಶತ್ರುಗಳಲ್ಲಿ ಕಣಜದ ಹುಳು ಪ್ರಮುಖವಾದದ್ದು. ಬಂಡಾರು ಬಡ್ಚಿಗೆ ಎಂಬ ಮಲೆನಾಡು ಗ್ರಾಮ್ಯ ಭಾಷೆಯಲ್ಲಿ ಕರೆಯಿಸಿಕೊಳ್ಳುವ ಕಣಜ ಮಾಂಸಾಹಾರಿ ಕೀಟ. ಗಾತ್ರದಲ್ಲಿ ತುಡುವೆ ಜೇನು ಹುಳುಗಳಿಗಿಂತ ಸುಮಾರು ಹತ್ತು ಪಟ್ಟು ದೊಡ್ಡದಾಗಿರುವ ಅರಿಶಿನ ಬಣ್ಣದ ಮೇಲ್ಮೈ ಹೊಂದಿರುವ ಕಣಜ ದಿನವೊಂದಕ್ಕೆ ಹತ್ತಿಪ್ಪತ್ತು ಜೇನುನೊಣಗಳನ್ನು ಬೇಟೆಯಾಡಿಬಿಡಬಲ್ಲದು. ಜೇನುಗೂಡಿನ ಬಳಿ ಜೊರ್ರನೆ ಹಾರಾಡುತ್ತ ಪಕ್ಕನೆ ಧಾಳಿ ಮಾಡಿ ಆಹಾರ ತರಲು ಹೊರ ಹೊರಡುವ ಜೇನುಹುಳುಗಳನ್ನು ಕಚ್ಚಿಕೊಂಡು ತನ್ನ ಗೂಡಿನಲ್ಲಿನ ಮರಿಗಳಿಗೆ ಆಹಾರವಾಗಿ ನೀಡುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಶತ್ರುವನ್ನು ಮಣಿಸಲು ಜೇನು ಹುಳುಗಳಿಗೆ ಬಹಳ ಕಷ್ಟಕರ ಕೆಲಸ. ಆದರೂ ಅಪರೂಪಕ್ಕೊಮ್ಮೆ ಯುದ್ಧ ಘೋಷಿಸಿ ಗೆದ್ದುಬಿಡುತ್ತವೆ. ಇದು ಅಂತಹ ಒಂದು ಪ್ರಕರಣ.
ಮಳೆಗಾಲ ಹಾಗೂ ಮಳೆಗಾಲದ ನಂತರದ ಒಂದೆರಡು ತಿಂಗಳುಗಳವೆರೆಗೆ ಜೇನುಪೆಟ್ಟಿಗೆಗೆ ಕಣಜದ ಕಾಟ ಅತಿ ಹೆಚ್ಚು. ದಿನಾಲು ಬೆಳಿಗ್ಗೆ ಜೇನುಪೆಟ್ಟಿಗೆ ಇಟ್ಟುಕೊಂಡವರಿಗೆ ಕಣಜ ಓಡಿಸುವುದು ಒಂದು ಕೆಲಸ. ಅದೇ ರೀತಿ ಕಣಜವೇನಾದರೂ ಬಂದಿರಬಹುದಾ ಎಂದು ಪೆಟ್ಟಿಗೆಯ ಬಳಿ ನಿಂತಿದ್ದೆ. ನಾನು ನಿಂತ ಕೆಲಕ್ಷಣಗಳಲ್ಲಿ ಜೊರ್ರನೆ ಸದ್ದು ಮಾಡುತ್ತಾ ಕಣಜವೊಂದು ಹಾರಿ ಬಂತು. ಅದಕ್ಕೆ ನನ್ನ ಇರುವು ಅರಿವಾಯಿತಿರಬೇಕು ಮತ್ತೆ ತಟ್ಟನೆ ಮಾಯವಾಯಿತು. ಅಷ್ಟರಲ್ಲಿ ನನಗೆ ಜೇನುಗೂಡಿನ ಬಳಿ ಹಾರಾಡುವ ಕಣಜದ ಫೋಟೋ ತೆಗೆಯುವ ಆಲೋಚನೆ ಬಂದು ಕ್ಯಾಮೆರಾ ತರಲು ಒಳಗೆ ಹೋದೆ. ಮತ್ತೆ ವಾಪಾಸು ಬರುವಷ್ಟರಲ್ಲಿ ಯಥಾಪ್ರಕಾರ ಕಣಜ ಜೇನುಪೆಟ್ಟಿಗೆಯನ್ನು ಸುತ್ತುವರೆಯುತಿತ್ತು. ಹಾಗೆಯೇ ಒಂದೆರಡು ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಶಟರ್ ಬಟನ್ ಒತ್ತುವುದಕ್ಕೂ ಕಣಜ ಬೆರೆಡೆ ಹಾರಿಬಿಡುತ್ತಿತು. ಎಲ್ಲಾದರೂ ಕುಳಿತುಕೊಂಡಾಗ ಫೋಟೋ ತೆಗೆದರಾಯಿತೆಂದು ಸುಮ್ಮನೆ ಅಲ್ಲಿಯೇ ನಿಂತೆ. ಜೇನುಪೆಟ್ಟಿಗೆಯ ಸುತ್ತ ಕಣಜದ ಹಾರಾಟದ ಸುಳಿವು ಜೇನುಪೆಟ್ಟಿಗೆಯೋಳಗೆ ತಲುಪಿತ್ತಿರಬೇಕು. ಬಾಗಿಲ ಬಳಿ ಮಿಲಿಟರಿ ಜೇನುಹುಳುಗಳ ರಭಸ ಜೋರಾಗತೊಡಗಿತು. ಅಂತಹ ಅವಕಾಶವನ್ನು ಕಣಜ ಸದುಪಯೋಗಪಡಿಸಿಕೊಳ್ಳುತ್ತದೆ. ಹಾಗೆ ವ್ಯಗ್ರವಾಗಿ ಜೇನುಗೂಡಿನ ಬಾಗಿಲಬಳಿ ಕುಳಿತುಕೊಳ್ಳುವ ಜೇನುಗಳೇ ಕಣಜದ ಬಲಿ. ಆದರೆ ಈ ಕ್ಷಣ ಮಾತ್ರಾ ಬೇರೆಯೇ ಆಗಿತ್ತು.
ನನ್ನ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿರುವ ಕಣಜ ರೊಯ್ಯನೆ ಹಾರಿ ಬಂದು ಜೇನುಪೆಟ್ಟಿಗೆಯ ಬಾಗಿಲಬಳಿ ಹಾರಿ ಬಂದು ಕುಳಿತುಕೊಂಡಿತು. ಸಾಮಾನ್ಯವಾಗಿ ಕಣಜ ಹಾರಿಬಂದು ಜೇನುಗೂಡಿನ ಬಾಗಿಲಬಳಿ ಕುಳಿತ ಮರುಕ್ಷಣ ಒಂದು ಜೇನುನೊಣ ಬಲಿಯಾಯಿತೆಂದೇ ಅರ್ಥ. ಆದರೆ ಇಲ್ಲಿ ಹಾಗಾಗಲಿಲ್ಲ. ಕುಳಿತ ಕಣಜದ ಫೋಟೋ ತೆಗೆಯಲು ಬಟನ್ ಒತ್ತಿದೆ, ನನ್ನ ದುರಾದೃಷ್ಟ ಕ್ಯಾಮೆರಾದ ಬ್ಯಾಟರಿ ಟಿನ್ ಎಂದು ಶಬ್ಧಮಾಡಿ ಸ್ತಬ್ದವಾಯಿತು. ತಥ್ ಎನ್ನುತ್ತಾ ಲಗುಬಗೆಯಿಂದ ಒಳಗೆ ಹೋಗಿ ಬ್ಯಾಟರಿ ಬದಲಾಯಿಸಿಕೊಂಡು ಬಂದೆ. ನಾನು ವಾಪಾಸು ಜೇನುಗೂಡಿನ ಬಳಿ ಬರುವುದಕ್ಕೂ ಜೇನುನೊಣಗಳು ಕಣಜವನ್ನು ಆಕ್ರಮಿಸಿಕೊಳ್ಳುವುದಕ್ಕೂ ಸರಿಯಾಯಿತು. ಪ್ರತೀ ಬಾರಿಯೂ ವಿಜಯೋತ್ಸಾಹದಿಂದ ಬಲಿ ತೆಗೆದುಕೊಂಡು ಹೋಗುತ್ತಿದ್ದ ಕಣಜಕ್ಕೆ ಇದು ಅನಿರೀಕ್ಷಿತ ಆಘಾತ. ಕ್ಷಣವೊಂದರಲ್ಲಿ ಮೂವತ್ತು ನಲವತ್ತು ಜೇನು ನೊಣಗಳು ಒಟ್ಟಾಗಿ ಕಣಜವನ್ನು ಮುತ್ತಿಕೊಂಡವು. ಕಣಜಕ್ಕೆ ಮಿಸುಕಾಡಲೂ ಆಗದಂತೆ ಅದರ ಸುತ್ತ ಉಂಡೆಯಾಕಾರದಲ್ಲಿ ಸೆಕೆಂಡಿನ ಅಂತರದಲ್ಲಿ ನೂರಾರು ಜೇನು ಮುತ್ತಿದವು. ಹೀಗೆ ಮುತ್ತಿದ ಜೇನು ನೊಣಗಳು ಕಣಜವನ್ನು ಚುಚ್ಚುವುದಿಲ್ಲ. ಜೇನಿಗಿಂತ ಹತ್ತು ಪಟ್ಟು ಶಕ್ತಿಯುತವಾದ ಕಣಜವನ್ನು ಜೇನುಗಳು ಉಪಾಯದಿಂದ ಕೊಲ್ಲುತ್ತವೆ. ಹೀಗೆ ಒಮ್ಮಿಂದೊಮ್ಮೆಲೆ ನೂರಾರು ನೊಣಗಳು ಮುತ್ತುವುದರಿಂದ ಒಳಗಡೆ ತಾಪಮಾನ ಹೆಚ್ಚುವುದರ ಜತೆ ಕಣಜಕ್ಕೆ ಉಸಿರಾಡಲೂ ಆಗದ ಸ್ಥಿತಿ ತಲುಪಿ ಸಾವನ್ನಪ್ಪುತ್ತದೆ.
ಸುಮಾರು ಹತ್ತು ನಿಮಿಷಗಳ ಕಾಲ ಕಣಜವನ್ನು ಮುತ್ತಿದ ಜೇನುನೊಣಗಳು ಅದರ ಸಾವು ಖಚಿತವಾದನಂತರ ಒಂದೊಂದಾಗಿ ಗೂಡಿನೊಳಗಡೆ ಸೇರಿಕೊಂಡವು. ಕಣಜದ ಸಾವಿನ ಅಪರೂಪದ ಕ್ಷಣಗಳನ್ನು ಜೇನಿನ ಮಿಲಿಟರಿ ಪಡೆಯ ವಿಜಯೋತ್ಸಾಹವನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡು ನಾನು ಕಂಪ್ಯೂಟರ್ನತ್ತ ಸಾಗಿದೆ.

Monday, October 26, 2009

ಕೇಸರಿಯಿ೦ದ ಸುಪರ್ ಮೇಲ್

ನನ್ನ ಮನಮುಟ್ಟಿದ ಸಂದೇಶ
ಹೊರಗಿನಿಂದ ಬಂದವರು ಕನ್ನಡ ಕಲಿತರೆ ಅವರಿಗೇ ಲಾಭ. ಅದಲ್ಲದೆ, ಈಗಲೂ ನಮ್ಮ ಆಂಗ್ಲ ಮಾಧ್ಯಮದ ಕೆಲವು ಮಕ್ಕಳು (ಈಗ ಕೆಲವರು ದೊಡ್ಡವರು ) ಕನ್ನಡ ಮಾತನಾಡಲು ಹಿಂಜರಿಕೆ ತೋರುತ್ತಾ ಇದ್ದಾರೆ. ನಾನು ಜಯನಗರದ ಒಂದು ಅಂಗಡಿಯಲ್ಲಿ ಒಂದು ಸುಂದರವಾದ ಫಲಕ ನೋಡಿದೆ.
Dear Customer,If you have spent more than six months in Karnataka, please try to communicate with us in Kannada. Please do not worry about grammar. We shall understand what you mean and we shall assist you to converse in Kannada while you shop with us. namaskaara!
ಈ ಪಲಕವು ನನಗೆ ಇಡೀ ಬೆಂಗಳೂರಿನಲ್ಲೇ ನನಗೆ ಅತೀ ಸುಂದರವಾದ ಫಲಕ ಅನ್ನಿಸಿತು.ವಂದನೆಗಳು.
ಕೇಸರಿ
Pejathaya S M