Friday, December 12, 2008

ಹವ್ಯಕರ ಹಳ್ಳಿಗಳು ಖಾಲಿ ಖಾಲಿ

ದಿನದಿಂದ ದಿನಕ್ಕೆ ಹಳ್ಳಿತೊರೆದು ಪಟ್ಟಣ ಸೇರುವ ವಲಸೆಯೆಂಬ ಹೀಗೊಂದು ಪ್ರಕ್ರಿಯೆ ಹವ್ಯಕ ಬ್ರಾಹ್ಮಣರ ಸಮುದಾಯದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅದು ಯಾರ ಗಮನಕ್ಕೂ ಬಾರಾದಂತೆ ಮುಗುಮ್ಮಾಗಿ ತನ್ನಷ್ಟಕ್ಕೆ ತಾನೇ ಆಗುತ್ತಿದೆ. ನಾನು ಸ್ವತಹ ಗಮನಿಸಿದಂತೆ ಹತ್ತು ವರ್ಷ ದಿಂದ ಈಚೆಗೆ ನಮ್ಮ ಊರಿನ ಸುತ್ತ ಮುತ್ತ ಸುಮಾರು ಇಪ್ಪತ್ತು ಮನೆಗಳು ಬಾಗಿಲು ಮುಚ್ಚಿವೆ. ಅದರಲ್ಲಿ ಮುಕ್ಕಾಲು ಪಾಲು ವಲಸೆ ಕಾರಣಕ್ಕಾಗಿಯಾದರೆ ಇನ್ನು ಕಾಲು ಭಾಗ ಕುಟುಂಬದ ಸದಸ್ಯರು ಇಲ್ಲವಾಗಿದ್ದು. ಕಾರಣಗಳು ಸಾವಿರ ಇವೆ. ಇರುವ ಒಬ್ಬ ಮಗ ಬೆಂಗಳೂರಿನಲ್ಲಿ ಇಂಜನಿಯರ್ , ಇರುವ ಎರಡು ಹೆಣ್ಣು ಮಕ್ಕಳೂ ಮದುವೆಯಾಗಿ ಹೋಗಿದ್ದಾರೆ ಅಲ್ಲೇ ಪಕ್ಕದಲ್ಲಿ ಒಂದು ಮನೆ ಮಾಡಿ ವಾಸ, ವಯಸ್ಸಾದವರು ಕೈಲಾಸ ಸೇರಿದರು ಮಕ್ಕಳು ಅಲ್ಲಿಂದ ಇಲ್ಲಿಗೆ ಬಂದು ಜಮೀನು ನೋಡಿಕೊಳ್ಳಲಾಗುವುದಿಲ್ಲ ಹಾಗಂತ ಜಮೀನು ಮಾರೋಣ ಎಂದರೆ ಮುಂದೆ ಬೇಕಾಗುತ್ತೇನೋ ಅನ್ನುವ ಭಯ ಆಕಾರಣಕ್ಕಾಗಿ ಮನೆಯ ಬಾಗಿಲಿಗೆ ಒಂದು ಗೋಡ್ರೇಜ್ ಬೀಗ. ಹೀಗೆ . ಇನ್ನಷ್ಟು ಜನ ಹಳ್ಳಿಯ ಬಿಟ್ಟು ಓಡಿ ಹೋಗುವ ತವಕದಲ್ಲಿದ್ದಾರೆ. ಅವರಿಗೂನ್ ಅಷ್ಟೆ ಮಗ ಅಥವಾ ಮಗಳು ಸೆಟ್ಲ್ ಇಲ್ಲಿ ಬೇಜಾರು. ಇಂತಹ ಅನಿವಾರ್ಯ ಕಾರಣದಿಂದ ಹಳ್ಳಿಗಳು ಭಣಭಣ ಎನ್ನತೊಡಗಿವೆ. ಈ ಪ್ರಕ್ರಿಯೆ ನಿಲ್ಲದಿದ್ದಲ್ಲಿ ಅಥವಾ ಪಟ್ಟಣದಿಂದ ವಾಪಾಸಾತಿ ಆಗದಿದ್ದಲ್ಲಿ ಇನ್ನು ಹತ್ತು ವರ್ಷದಲ್ಲಿ ಹವ್ಯಕರ ಹಳ್ಳಿಗಳು ಭಾಗಶಃ ಖಾಲಿಯಾಗುವುದು ಖಂಡಿತ. ಹಾಗಂತ ಹಳ್ಳಿಯಲ್ಲಿ ಉಳಿದವರ ಪರಿಸ್ಥಿತಿಯೇನೋ ಸ್ವರ್ಗ ಅಂತ ಅನ್ನುವಂತಿಲ್ಲ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವೆನಿಲಾ ರೋಗದ ಕಾರಣ ಮಾಯ ಅಡಿಕೆ ದರ ಇಳಿತ, ಕೂಲಿಕಾರರ ಅಭಾವ, ಕೂಲಿಕಾರರು ಸಿಕ್ಕಿದರೂ ಹೆಚ್ಚಿದ ಸಂಬಳ. ಮುಂತಾದ ಹತ್ತಾರು ಸಮಸ್ಯೆಗಳು. ಇದರ ಜತೆಗೆ ಹವ್ಯಕರ ಗಂಡುಗಳಿಗೆ ಹೆಣ್ಣಿಲ್ಲದ ಭೀಕರ ಸಮಸ್ಯೆ. ಮೂವತ್ತರಿಂದ ನಲವತ್ತು ವರ್ಷದವರೆಗಿನ ಮದುವೆಯಾಗದ ಗಂಡುಗಳು ಪ್ರತೀ ಊರಿನಲ್ಲಿಯೂ ಹತ್ತೆಂಟು ಸಿಗುತ್ತಾರೆ. ಇವುಕ್ಕೆ ಹೆಣ್ಣು ಕೊಡುವವರು ಇಲ್ಲ ಎನ್ನುವ ಸಮಸ್ಯೆಯ ಜತೆ ಅವರುಗಳಿಗೆ ಮದುವೆಯಾಗುವ ಆಲೋಚನೆಯೇ ಇಲ್ಲದಿರುವುದು ಮತ್ತೊಂದು ದುರಂತ. ಮದುವೆ ಎನ್ನುವುದು ಯೋಚಿಸಿ ಆಗುವ ಕ್ರಿಯೆ ಅಲ್ಲ. ಅದು ಸಂಸಾರ ಎಂಬುದು ಜಂಜಡ ಎಂದು ಸಾವಿರ ಜನ ಹೇಳುತ್ತಿದ್ದರೂ ಅಲ್ಲ ಅಲ್ಲಿದೆ ಸ್ವರ್ಗ ಎಂದು ತಿಳಿದಿಕೊಳ್ಳುವಂತಹ ವಯಸ್ಸಿನಲ್ಲಿ ಆಗುವಂತಹ ಪ್ರಕ್ರಿಯೆ. ಆದರೆ ಗಂಡುಗಳಿಗೆ ಮೂವತ್ತು ನಲವತ್ತು ಆಗಿದ್ದರಿಂದ ಅವುಕ್ಕೆ ಸಂಸಾರ ಎನ್ನುವುದು ಸಸಾರ ಅಲ್ಲ ಅನ್ನುವುದು ಅರಿವಾಗಿ ಮದುವೆ ಮಾಡಿಕೊಳ್ಳದೇನೆ ನಾನು ಸುಖವಾಗಿ ಇರಬಲ್ಲೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಕಾರಣಗಳು ಭವಿಷ್ಯದಲ್ಲಿಯೂ ಹವ್ಯಕರ ಹಳ್ಳಿಗಳು ಖಾಲಿ ಖಾಲಿ ಅನ್ನಿಸಿಕೊಳ್ಳುವುದಕ್ಕೆ ಕಾರಣವಾಗಿಬಿಟ್ಟಿವೆ. ಈ ವಲಸೆ ಪ್ರಕ್ರಿಯೆ ನಿರಂತರವಾಗಿ ನಿಧಾನವಾಗಿ ಹಬ್ಬಲು ಮುಖ್ಯ ಕಾರಣ ಇಂದಿನ ಆರ್ಥಿಕ ಮಾನದಂಡ. ಎಲ್ಲರೂ ಎಲ್ಲವನ್ನೂ ಅವನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ? ಎನ್ನುವ ತತ್ವಕ್ಕೆ ಇಳಿದಿರುವುದರಿಂದ ಹಳ್ಳಿ ಹಣದ ಥೈಲಿ ತರದಾದ್ದರಿಂದ ವಲಸೆ ಅನಿವಾರ್ಯವಾಗತೊಡಗಿದೆ. ಹಿಂದಿನ ಹಳ್ಳಿಗಳಲ್ಲಿ ಈ ಅರ್ಥಪ್ರಧಾನ ವ್ಯವಸ್ಥೆ ಆಷ್ಟೊಂದು ಗಾಢವಾಗಿರಲಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದ ಹಳ್ಳಿಗರಿಗೆ ಪ್ರಪಂಚ ದರ್ಶನ ಮನೆಯಬಾಗಿಲಿನಲ್ಲಿಯೇ ದೊರೆಯುವುದರಿಂದ ಮತ್ತು ಅವುಗಳು ಪಟ್ಟಣದ ಬದುಕು ಸುಖ ಎಂದು ಬಿಂಬಿಸುವುದರಿಂದ ಇಲ್ಲಿ ಬದುಕಲಾರದೆ ಅಲ್ಲಿಗೆ ಹೋಗಲಾರದೆ ತ್ರಿಶಂಕು ಜೀವನದ ಕತೆಯಾಗಿದೆ. ಮೂವತ್ತು ನಲವತ್ತು ವರ್ಷದ ಹಿಂದಿನ ಸಿನೆಮಾಗಳಲ್ಲಿ ಹಳ್ಳಿಯ ಬದುಕನ್ನು ಬಿಂಬಿಸಿ ನಾಯಕ ನಟಿಸುತ್ತಿದ್ದ. ಮಣ್ಣಿನ ಜತೆಗಿನ ಬದುಕು ಉತ್ತಮ ಎಂಬ ಸಂದೇಶ ರವಾನಿಸುತ್ತಿದ್ದ. ಹೈಕಳು ಅದರಿಂದ ಏನೋ ಪ್ರಭಾವಿತರಾಗಿ ಹಾಡು ಹೇಳುತ್ತಾ ಉಳುಮೆ ಮಾಡುತ್ತಿದ್ದರು. ಮನಸ್ಸಿನಲ್ಲಿ ನಾನು ದೇಶದ ಬೆನ್ನೆಲುಬು ಎಂಬುದನ್ನು ಆಹ್ವಾನಿಸಿಕೊಂಡು ಸುಖಿಸುತ್ತಿದ್ದರು. ಇಂದಿನ ಸಿನೆಮಾ ಟಿವಿಗಳು ರೈತರ ಆತ್ಮಹತ್ಯೆಯನ್ನು ಬಿಂಬಿಸುತ್ತವೆ, ಹಳ್ಳಿಯ ಜೀವನ ಮಧುರ ಅಲ್ಲ ಅಂದು ಸಾರುತ್ತವೆ. ಇವೆಲ್ಲಾ ಕೊಂಚ ಮಟ್ಟಿಗೆ ಹಳ್ಳಿಯ ಜೀವನ ತೊರೆಯಲು ಪ್ರೇರೇಪಿಸುತ್ತವೆ. ಹಾಗಂತ ಪಟ್ಟಣದಲ್ಲಿದ್ದವರು ಸುಖವೊಂದರಲ್ಲೇ ತೇಲುತ್ತಿದ್ದಾರೆ ಅಂಬರ್ಥವಲ್ಲ, ಬಹಳಷ್ಟು ಜನ ಹಾಗೆ ತಿಳಿದುಕೊಂಡಿದ್ದಾರೆ.
ಹೀಗೆ ಗೊತ್ತಿರುವ ಗೊತ್ತಿಲ್ಲದ ನೂರಾರು ಕಾರಣಗಳು ಹವ್ಯಕರ ಹಳ್ಳಿಯ ಮೇಲೆ ಪರಿಣಾಮ ಆಗುತ್ತಿರುವುದಂತೂ ಸತ್ಯ. ದೂರಗಾಮಿ ಪರಿಣಾಮ ಆ ಪ್ರಕೃತಿಗೇ ಬಿಟ್ಟದ್ದು. ಹೀಗಿದೆ ಅಂತ ಒಂದು ಹುಳ ಬಿಡುವ ಕ್ರಿಯೆಯನ್ನು ನಾವು ಮಾಡಬಹುದು.

Thursday, December 11, 2008

ಜೇನುಗವನಗಳು

ಮಿನಿಗವನ, ಹನಿಗವನ, ಚುಟುಕ ಎಂದು ಕರೆಯಿಸಿಕೊಳ್ಳುವ ಬರಹಗಳೆಂದರೆ ನನಗೆ ಬಲು ಇಷ್ಟ. ಅದನ್ನು ಬರೆಯುವವರು ಅತೀಬುದ್ದಿವಂತರು ಎಂಬುದು ನನ್ನ ನಂಬಿಕೆ. ಪುಟಗಟ್ಟಲೆ ಕೊರೆದು ಒಂದು ಸಾಲಿನ ಅರ್ಥಹೇಳುವ ಬರಹಗಾರ ನಾಲ್ಕೇ ನಾಲ್ಕು ಸಾಲಿನಲ್ಲಿ ಒಳ್ಳೆಯ ಅರ್ಥ ತರುವ ಹಾಗೂ ಮುಗುಳ್ನಗೆ ಮೂಡಿಸುವ ಇವರೆದುರು ಪೇಲವನಾಗಿಬಿಡುತ್ತಾನೆ. ದುಂಡಿರಾಜ್ ಒಮ್ಮೆ ಬರೆದಿದ್ದರು
ಹುಡುಗ ಹೇಳಿದ:
ಪ್ರಿಯೆ ಹೃದಯ ಶ್ರೀಮಂತಿಕೆಯಲ್ಲಿ ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಸರಿ ಹಾಗಾದರೆ ನಾನು ಟಾಟಾ ಬರ್ಲಾ.
ಇಷ್ಟು ಸಾಲುಗಳಲ್ಲಿ ಎಂಥಹ ಮಜ ಇದೆ ನೋಡಿ. ಕವನ ಕವಿತೆಗಳಾದರೆ ಅರ್ಥಮಾಡಿಕೊಳ್ಳಲು ತಾಕತ್ತಿರಬೇಕು. ಅದನ್ನು ಆಳವಾಗಿ ಅಗಲವಾಗಿ ಪರಾಮರ್ಶಿಸಿ ಅಂತಿಮವಾಗಿ ಇದು ಹೀಗೆ ಅರ್ಥವಿರಬಹುದೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಈ ಹನಿಯಂತಿರುವ ಹನಿಗವನ ಮಾತ್ರಾ ಪಾಮರರಿಗಾಗಿಯೇ ಇರುವುದು. ಓದಿದಕೂಡಲೇ ನಕ್ಕುಬಿಡಬಹುದು. ಡಿವಿಜಿ ಯವರ ಮಂಕುತಿಮ್ಮನ ಕಗ್ಗವೂ ಕೂಡ ನಾಲ್ಕೇ ಸಾಲು ಆದರೆ ಅರ್ಥಸಹಿತ ಕಗ್ಗವನ್ನು ಕೊಳ್ಳದಿದ್ದರೆ ನಮ್ಮನಿಮ್ಮಂತಹ ವರಿಗೆ ಅದು ತಿಳಿಯುವುದೇ ಇಲ್ಲ.
ಎಲ್ಲವೂ ಶೂನ್ಯದಿಂದಲೇ..
ಇದ್ದರೆ ಸಂಸಾರ
ಇಲ್ಲದಿದ್ದರೆ ಸಸಾರ.
ಮೂರೇ ಸಾಲಿನ ಈ ಚುಟುಕ ಪಟಕ್ಕನೆ ಅದೆಂತಹ ಘನಗಂಭೀರವಾದ ಅರ್ಥವನ್ನು ಕೊಡುತ್ತದೆ. ಹನಿಗವನದಲ್ಲಿ ನಗುಮೂಡಿಸುವ ಹನಿಗಳೇ ಹೆಚ್ಚು. ಸಣ್ಣದಾಗಿ ಚಮಕ್ ಕೊಡುವ ಸಾಹಿತ್ಯವೂ ಇದೆಯೆನ್ನಿ
ಹುಡುಗ ಹೇಳಿದ :
ಕನ್ನಡವೆಂದರೆ ಕುಣಿದಾಡುವುದೆನ್ನೆದೆ
ಹುಡುಗಿ ಹೇಳಿದಳು :
ಎನ್ನದಿದ್ದರೂ .............................!?
ಒಂದಿಷ್ಟು ಚುಕ್ಕಿ ನಂತರ ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕದ ಚಿಹ್ನೆ. ಅದರ ಅರ್ಥ ಅಲ್ಲೆನೋ ಸಣ್ಣ ಡಬ್ಬಲ್ ಮೀನಿಂಗ್ ಇದೆ ಅಂತ ನಮಗೆ ಓದಿದ ಕೂಡಲೆ ತಿಳಿದು ಕಿರುನಗೆ ಮೂಡುತ್ತದೆ. ಇವತ್ತಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ದುಡಿಯುವ ಭರಾಟೆಯಲ್ಲಿ ಗಂಟೆಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥ...!ವಿಲ್ಲ ಎಂದು ಈ ಹನಿಗವನ ಹುಟ್ಟಿಕೊಂಡಿತೇನೋ ಅಂತ ಅನ್ನಿಸುತ್ತದೆ. ಹಾಗೆಯೇ ನೂರಾರು ಈ ಹನಿಗವನಗಳ ಸೃಷ್ಟಿಕರ್ತರೂ ಹುಟ್ಟಿಕೊಂಡಿದ್ದಾರೆ. ಜೈ ಹನಿಗವನ.

Wednesday, December 10, 2008

ಹರೆ ಕೃಷ್ಣಾ ಹರೆ ರಾಮ

ಆತನ ಈಗಿನ ಹೆಸರು ಕುಲಶೇಖರ. ವಯಸ್ಸು ಇಪ್ಪತ್ತೈದು ಇಪ್ಪತ್ತಾರು ಇರಬಹುದು. ಇಸ್ಕಾನ್ ನ ಸನ್ಯಾಸಿ ಆತ. ಆತ ಓದಿದ್ದು ಡೆಂಟಲ್ . ಕೋರ್ಸ್ ಮುಗಿಯುತ್ತಿದ್ದಂತೆ ಆಧ್ಯಾತ್ಮದ ಕಡೆ ಎಳೆಯಿತಂತೆ ಹಾಗಾಗಿ ಆತ ಇಸ್ಕಾನ್ ಸೇರಿಕೊಂಡ. ತಂದೆತಾಯಿಗೆ ಒಬ್ಬನೇ ಮಗನಾದ ಆತನಿಗೆ ಮನೆಯಿಂದ ಇಸ್ಕಾನ್ ಸೇರಬೇಡ ಎಂಬ ಒತ್ತಡ ಮನವಿ ಬಹಳ ಇತ್ತಂತೆ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಎಲ್ಲವನ್ನೂ ಬಿಟ್ಟು "ಹರೆ ಕಿಷನಾ.. ಹರೆ ರಾಮ ಕಿಷ್ನ ಕಿಷ್ನ ಹರೆ. ಹರೇ..." ತುಂಬಾ ಇಷ್ಟವಾಯಿತು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುಣಿಯುತ್ತಾ ಭಜನೆ ಮಾಡುತ್ತಾ ಮನಸ್ಸಿನಲ್ಲಿ ಕೃಷ್ಣನನ್ನು ಆಹ್ವಾನಿಸಿಕೊಳ್ಳುವ ಆ ಮಜ ನಮ್ಮ ಕುಲಶೇಖರಿನಿಗೆ ತಾನು ಓದಿದ್ದ ಎಂ.ಬಿ.ಬಿ.ಎಸ್ ನ್ನೂ ಮರೆಸುವ ತಾಕತ್ತು ಇತ್ತು. ಹಾಗಾಗಿ ಆತ ಇಸ್ಕಾನಿ. ನನಗೆ ಆತ ಒಂದು ಟ್ರೈನಿಂಗ್ ಪ್ರೋಗ್ರಾಂ ನಲ್ಲಿ ಸಿಕ್ಕಿದ್ದ. ನೋಡಲು ಮುದ್ದುಮುದ್ದಾಗಿದ್ದ ಆತ ಎಂತಹವರನ್ನೂ ಸೆಳೆಯುವ ಮುಖಾರವಿಂದ ಹೊಂದಿದ್ದ. ಆದರೆ ಸುಮ್ಮಸುಮ್ಮನೆ ಮಾತನಾಡಲಾರ. ಮೂರುದಿನದ ಕೃಷಿ ಟ್ರೈನಿಂಗ್ ನಲ್ಲಿ ಎರಡು ದಿನ ಆತನೊಟ್ಟಿಗೆ ಮುಗುಳ್ನಗೆಯ ವಿನಿಮಯದೊಂದಿಗೆ ಕಳೆದೆ. ನನಗೋ ಆತನೊಡನೆ ಮಾತನಾಡುವ ಹಂಬಲ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇಲ್ಲ ಯಾವಾಗಲೂ ಕೈಯಲ್ಲಿ ಜಪಮಣಿ ಬಾಯಲ್ಲಿ ಕೃಷ್ಣ ಕೃಷ್ಣ ಮಿಣಿಮಿಣಿ. ಅಂತೂ ಇಂತು ಎರಡು ದಿನದ ಮುಗಳ್ನಗು ಮೂರನೆಯ ದಿನ ಪ್ರಯೋಜನಕ್ಕೆ ಬಂದಿತ್ತು. ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಆತ ವರಾಂಡದಲ್ಲಿ ಅಡ್ದಾಡುತ್ತಿದ್ದ. ತಿಂಡಿ ತಿನ್ನುತ್ತಿದ್ದ ನನಗೆ ನೀರಿನ ಅವಶ್ಯಕತೆ ಇತ್ತು. ಆದರೆ ಒಂದು ಕೈಯಲ್ಲಿ ಬಟ್ಟಲು ಇರುವ ಕಾರಣ ನಲ್ಲಿ ತಿರುಪದಾದೆ. ಆಗ ಆತ ಸಹಾಯಕ್ಕೆ ಬಂದ. ನೀರು ಲೋಟ ತುಂಬಿದ ನಂತರ ತ್ಯಾಂಕ್ಸ್ ಎಂದೆ ಆತ ಕೃಷ್ಣಾರ್ಪಣ ಎಂದ. ನನಗೆ ಆತನ ಕೃಷ್ಣ ಭಕ್ತಿಯನ್ನು ಕಂಡು ಅಚ್ಚರಿಯಾಯಿಯಿತು. ಹಗೂರ ಮಾತಿಗೆಳೆದ. ಪೂರ್ವಾಶ್ರಮದ ಬಗ್ಗೆ ಚುಟುಕಾಗಿ ಮುಗಿಸಿ ಅದರ ಬಗ್ಗೆ ಕೇಳಬೇಡಿ ಎಂದ. ನಿಮಗೆ ತಿಂಡಿ ಆಯಿತಾ ಎಂದೆ. ಇಲ್ಲ ಕೃಷ್ಣಾರ್ಪಣವಾದ ಮೇಲೆ ಕೃಷ್ಣನಿಗೆ ನೈವೇದ್ಯವಾದ ಮೇಲೆ ನಮಗೆ ಆಹಾರ ಎಂದ ಆತ. ಹಸಿವೆ ಯಾವ್ಗುವುದಿಲ್ಲವೇ? ಎಂದೆ. ಆ ಪರಮಾತ್ಮ ಕೃಷ್ಣನ ಆಸೆ ಹಾಗಿದ್ದರೆ ಹಾಗೆಯೇ ಆಗಲಿ ಎಂದ. ಮತ್ತೆ ಜಪಮಣಿ ತಿರುವುತ್ತಾ ಮಿಣ ಮಿಣ ಮುಂದುವರೆಸಿದ. ನನಗೆ ಆಯಾಚಿತವಾಗಿ ಪ್ರಶ್ನೆಯೊಂದು ಅಕಸ್ಮಾತ್ ಕೇಳಿ ಹೋಯಿತು. " ಈ ಕಾಲದಲ್ಲಿಯೂ ಕೃಷ್ಣ ಅಂತ ಒಬ್ಬ ಇದ್ದಾನೆ ಆತ ದೇವರು ಅವನು ಇಲ್ಲೆಲ್ಲೋ ನಿಂತು ನಿಮ್ಮನ್ನು ನೋಡುತ್ತಿದ್ದಾನೆ, ನಿಮ್ಮ ಆಶಯ ಈಡೇರಿಸುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿದೆಯಾ?" ಒಮ್ಮೆ ಆತನ ಮುಖ ಗಂಭೀರವಾಯಿತು. ಎರಡೂ ಕಣ್ಣಿನಿಂದ ದಳದಳ ನೀರಿಳಿಯಿತು. ಕಿವಿಯನ್ನು ಮುಚ್ಚಿಕೊಂಡು " ಹೇ ಪರಮಾತ್ಮ ಇಂತಹಾ ವಾಕ್ಯಗಲನ್ನು ನನ್ನ ಈ ಕಿವಿಗಳು ಕೇಳಬೇಕಾಯಿತಲ್ಲ " ಎಂದು ಹೇಳಿ ಮೌನವಾದ. ನಂತರ ನನಗೆ ಆ ಪ್ರಶ್ನೆ ಕೇಳಬಾರದಿತ್ತು ಅಂತ ಅನ್ನಿಸಿತು. ಆದರೆ ಕಾಲ ಮಿಂಚಿಹೋಗಿತ್ತು. ಕ್ಷಮಿಸಿ ನಿಮಗೆ ಈ ಪ್ರಶ್ನೆ ಕೇಳಿದ್ದಕ್ಕೆ ಎಂದೆ. ಮರುಕ್ಷಣ ಆತ" ಛೆ ಪರವಾಗಿಲ್ಲ, ಇದೂ ಕೂಡ ಆ ಪರಮಾತ್ಮನ ಪರೀಕ್ಷೆ, ಇದರ ಅರ್ಥ ನಾನು ಇನ್ನೂ ಆಧ್ಯಾತ್ಮಿಕ ಸಾಧನೆ ಮಾಡಬೇಕಿದೆ ಎಂದು ಮಿಣಮಿಣ ಮುಂದುವರೆಸಿದ,

ಇಂತಹ ಒಂದು ಪರಮ ಭಕ್ತಿಯ ಜನರನ್ನು ಇಲ್ಲಿಯವರೆಗೆ ನಾನು ನೊಡಿರಲೇ ಇಲ್ಲ. ನನಗೂ ಆಸೆಯಾಗುತ್ತದೆ. ಅಂತಹ ನಿರ್ಮಲ ನಿಸ್ವಾರ್ಥ ಭಕ್ತಿಯನ್ನು ಅನುಭವಿಸಬೇಕು. ಅದರಲ್ಲಿ ಅಂತಹ ಮಜ ಇದೆ ಎಂದು ಅನ್ನಿಸುತ್ತದೆ. ಮರುಕ್ಷಣ ನನ್ನಂತಹ ಮನುಷ್ಯನಿಗೆ ಅದು ಆಗದು ಎಂದು ಅನ್ನಿಸಲು ಶುರುವಾಗಿಬಿಡುತ್ತದೆ. ನಂಬಿಕೆಟ್ಟವರಿಲ್ಲವೋ ಅಂಬುದು ನಿಜ ಆದರೆ ನಂಬಲು ಆಗದಲ್ಲ ಅದು ಬಹಳ ಕಷ್ಟ. ನಂಬಲೇಬೇಕು ಎಂದು ಹೊರಟಾಗಲೆಲ್ಲ ಸಾವಿರ ಸಾವಿರ ತರ್ಕ ಕುತರ್ಕದ ಪ್ರಶ್ನೆಗಳು ಮೂಡಿ ಯಡವಟ್ಟಾಗಿಬಿಡುತ್ತದೆ.

Monday, December 8, 2008

ಚಮಕ್

ಜನ ಜನ ಜನ, ಎಲ್ಲಿನೋಡಿದರಲ್ಲಿ ಜನ , ಊರಿಗೆ ಹೊರಟವರು, ಊರಿಂದ ಬಂದವರು, ಹೊರಟವರನ್ನು ಕಳುಹಿಸುವವರು, ಬಂದವರನ್ನು ಸ್ವಾಗತಿಸುವವರು, ಬಸ್ಸಿಳಿದವರು, ರೈಲಿನಿಂದ ಬಂದವರು, ರೈಲಿಗೆ ಹೋಗುವವರು. ಅದು ಬೇರೆಲ್ಲೂ ಸಾಧ್ಯವಿಲ್ಲ ಮೆಜೆಸ್ಟಿಕ್ ಎಂದು ನಿಮಗೀಗಲೆ ಅರಿವಾಗಿರಬೇಕು. ಹೌದು ಅದು ಮೆಜೆಸ್ಟಿಕ್. ನಾನೂ ಆ ಜನರ ಸಂತೆಯಲ್ಲಿ ಒಂಟಿಯಾಗಿದ್ದೆ. ಹಸಿ ಹಸಿ ಬೆವರಿನ ವಾಸನೆಯಲ್ಲಿ ಕಳೆದುಹೋಗಿದ್ದೆ. ಸಾವಿರಾರು ಮುಖಗಳ ನಡುವೆ ಹುದುಗಿ ಹೋಗಿದ್ದೆ. ಕೆಂಪನೆಯ ಮುಖ ದುಂಡನೆಯ ಮುಖ ಕಪ್ಪನೆಯ ಮುಖ ಬಿಳಿಚಿಕೊಂಡ ಮುಖ ಹೀಗೆ ಎಷ್ಟೋ ಮುಖಗಳು ಏನನ್ನೋ ಅರಸುವ ಭಾವನೆಯೊಂದಿಗೆ ಅಲೆದಾಡುತ್ತಿದ್ದವು. ಆ ಅಲೆದಾಟದಲ್ಲಿ ನಾನೂ ಸೇರಿಹೋಗಿದ್ದೆ. ಆದರೆ ನನಗೆ ನನ್ನ ಮುಖ ಕಾಣುತ್ತಿರಲಿಲ್ಲ. ಬೇರೆ ಮುಖದಲ್ಲಿ ನನ್ನ ಮುಖ ನೊಡಿಕೊಳ್ಳುವ ಆಸೆ ಇತ್ತು. ಆದರೆ ಅಲ್ಲಿರುವ ಮುಖಗಳಿಗೆ ನನ್ನ ಮುಖದ ಪರಿಚಯವೇ ಇರಲಿಲ್ಲ. ಹಾಗಾಗಿ ನನ್ನ ಆಸೆಯನ್ನು ಅದುಮಿಕೊಳ್ಳುವುದು ಅನಿವಾರ್ಯವಾಗಿತ್ತು. ಇವರೆಲ್ಲಾ ಎಲ್ಲಿಗೆ ಹೊರಟಿದ್ದಾರೆ ಯಾಕೆ ಹೊರಟಿದ್ದಾರೆ ಎಲ್ಲಿಗೆ ತಲುಪುತ್ತಾರೆ ಎಂಬ ಉತ್ತರ ಇಲ್ಲದ ಪ್ರಶ್ನೆ ನನ್ನ ಬಳಿ ಪದೆಪದೆ ಮೊಳಗುತ್ತಿತ್ತು. ಪ್ರಶ್ನೆಗೆ ಉತ್ತರ ಸಿಗದು ಎಂದು ತಿಳಿದಮೇಲೆ ಸುಮ್ಮನಾದೆ. ಒಂದು ಸ್ವಲ್ಪವೇ ಸ್ವಲ್ಪ ಕುಡಿದು ಹೀಗೆ ಪರಿಚಯ ಇಲ್ಲದ ಜನರ ಮಧ್ಯೆ ಓಡಾಡುವಾಗೆಲ್ಲ ಸಾವಿರ ಪ್ರಶ್ನೆಗಳು.

ಆವಾಗ ಆಕೆ ದುತ್ತನೆ "ಹಲೋ" ಎನ್ನುತ್ತಾ ಎದುರಿಗೆ ಬಂದು ನಿಂತಳು. ಒಮ್ಮೆಲೆ ಬೆಚ್ಚಿಬಿದ್ದೆ. " ನೀನು ನೀನು ಇಲ್ಲಿ ಇಲ್ಲಿ" ತೊದಲು ಮಾತನ್ನಾಡಿದೆ. ಕುಡಿದ ಕ್ವಾಟರ್ ವಿಸ್ಕಿ ಜರ್ರನೆ ಇಳಿದುಹೋಯಿತು. ಆಕೆಗೇನಾದರೂ ವಿಸ್ಕಿಯ ಕಮಟು ವಾಸನೆ ಬರಬಹುದಾ ಎಂಬ ಅನುಮಾನ ಕಾಡತೊಡಗಿತು. ಕೈಗಳು ತನ್ನಿಂದ ತಾನೆ ಪ್ಯಾಂಟಿನ ಜೇಬಿನೊಳಗೆ ತೂರಿಕೊಂಡವು. ನಾನು ಸರಿಯಾಗಿದ್ದೇನೆ ಕುಡಿದಿಲ್ಲ ಎಂದು ತೋರಿಸಿಕೊಳ್ಳಲು ದೇಹ ನುಲಿಯತೊಡಗಿತು. "ಅಯ್ಯ ಅದೇಕೆ ಅಷ್ಟು ಆಶ್ಚರ್ಯ, ನಾನು ಈಗ ಬೆಂಗಳೂರಿನಲ್ಲಿಯೇ ಇರುವುದು, ಊರಿಗೆ ಹೊರಟಿದ್ದೇನೆ, ನೀನು ಸಂಗಂ ಟಾಕಿಸಿನ ಬಳಿ ನಡೆದು ಬರುತ್ತಾ ಇರುವುದನ್ನು ಬಿಟಿಎಸ್ ಬಸ್ಸಿನಿಂದ ನೋಡಿದೆ ಊರಿಗೆ ಹೊರಟೇಯಾ? ಲಗ್ಗೇಜ್ ಎಲ್ಲಿ? " ಆಕೆ ಮುಂದುವರೆಸುತ್ತಿದ್ದಳು. ಅಯ್ಯೋ ಬಾರ್ ನಿಂದ ಇಳಿಯುತ್ತಿದ್ದುದನ್ನು ನೋಡಿರಬಹುದೇ? ಸಿಕ್ಕಿಕೊಂಡು ಬಿದ್ದೆಯಾ ಒಳಮನಸ್ಸು ಹೆದರಿಸತೊಡಗಿತು. "ಹೋ ಹೌದಾ, ನಾನು ಊರಿಗೆ ಅಲ್ಲ ಊರಿಂದ ಯಾರೋ ಬರುವವರು ಇದ್ದಾರೆ ಹಾಗೆ ಸುಮ್ಮನೆ ಇಲ್ಲಿ ಬಂದೆ" ಮಾತುಗಳು ತೊದಲುತ್ತಿದ್ದಂತೆ ನನಗನಿಸಿತು "ಬಾಯಿಹುಣ್ಣು ಬೆಂಗಳೂರು ಇತ್ತೀಚೆಗೆ ಹೀಟ್" ತೊದಲಿಕೆಗೆ ಕಾರಣ ಹೇಳಿದೆ. "ಓ ಹೋ ಹೌದಾ ಗ್ಲಿಸರಿನ್ ಹಚ್ಚು ಊರಲ್ಲಾದರೆ ಅಮ್ಮ ಬಸಳೆ ಸೊಪ್ಪು ಕೊಡುತ್ತಿದ್ದಳು ಅಲ್ವಾ..? " ಆಕೆ ನಗುನಗುತ್ತಾ ಕೇಳಿದಳು. ಸ್ವಲ್ಪ ಧೈರ್ಯ ಬಂತು ನನಗೆ , ಆಕೆಗೆ ನನ್ನ ಕುಡಿತ ಗೊತ್ತಾಗಿಲ್ಲ ಸಾವಿರ ಸಾವಿರ ಬೆವರಿನ ವಾಸನೆಯ ನಡುವೆ ಎಲ್ಲಿಯದೂ ಅಂತ ಆಕೆಗೇನು ತಿಳಿಯುತ್ತೇ ಆದರೂ ಒಂದೇ ಒಂದು ಮಿಂಟ್ ತಿನ್ನಬೇಕಾಗಿತ್ತು ಅಂತ ಅನ್ನಿಸಿತು. ಕಾಲೇಜು ಮುಗಿದನಂತರ ಆಕೆಯನ್ನು ನೋಡಿರಲಿಲ್ಲ, ಒಮ್ಮೆ ಅಡಿಯಿಂದ ಮುಡಿಯವರೆಗೂ ಗಮನಿಸಿದೆ ಸಿಕ್ಕಾಪಟ್ಟೆ ಮಾಡ್ರನ್ ಆಗಿದ್ದಂತೆ ಅನ್ನಿಸಿತು. ಊರಿನಲ್ಲಿ ಶಾಸ್ತ್ರ ಸಂಪ್ರದಾಯ ಅಂತ ಬೀಗುತ್ತಿದ್ದ ಅಪ್ಪ ಅಮ್ಮನ ಮಗಳು ಇವಳೇನಾ ಅಂತ ಅನ್ನಿಸುವಷ್ಟು ಬದಲಾಗಿದ್ದಳು. "ಏನೋ ಹೊಸ ಹುಡುಗಿ ನೋಡುವ ಹಾಗೆ ನೋಡುತ್ತೀ" ಕಣ್ಣನ್ನು ಮಿಟುಕಿಸಿ ಚಮಕ್ ಕೊಟ್ಟಳು. ಇಲ್ಲ ಇಲ್ಲ ಹಾಗೇನಿಲ್ಲ, ಸುಮ್ಮನೆ ಸುಮ್ಮನೆ ಮತ್ತೆ ತೊದಲಿದೆ, ಈ ವಿಸ್ಕಿಯ ಹಣೇ ಬರಹವೇ ಹಾಗೆ ಒಂದೆಡೆ ಯೋಚನೆಗಳನ್ನು ಎಳೆದುಕೊಂಡು ಬಿಡುತ್ತದೆ. ಇನ್ನುಮೇಲೆ ಕುಡಿದು ಹೀಗೆ ಬಸ್ ಸ್ಟ್ಯಾಂಡ್ ತಿರುಗುವ ಚಟಕ್ಕೆ ತಿಲಾಂಜಲಿ ಇಡಬೇಕೆಂದೆನಿಸಿತು. ಸರಿ ಅದು ಮುಂದಿನ ಕತೆ ಈಗ ಸದ್ಯ ಇವಳಿಂದ ಬಚಾವಾಗಿ ಹೋದರೆ ಸಾಕು, ಅಕಸ್ಮಾತ್ ಇವಳಿಗೆ ನಾನು ಕುಡಿದದ್ದು ಗೊತ್ತಾಗಿ ಊರಿಗೆ ಹೋಗಿ ಟಾಂ ಟಾಂ ಮಾಡಿದರೆ ಮಾನಮರ್ಯಾದೆ ಹರಾಜಾಗುತ್ತದೆ ಎಂದು ಒಕೆ ಬರ್ಲಾ ಎಂದು ಹೇಳಿದೆ. "ಒಂದು ನಿಮಿಷ ಇರೋ ನಾನು ಒಭ್ಳೆ ಬಸ್ ಎಷ್ಟೊತ್ತಿಗೆ ಅಂತ ಕೇಳಿಬರ್ತೀನಿ" ಎಂದು ಉತ್ತರಕ್ಕೂ ಕಾಯದೆ ಓಡಿದಳು. ಹೀಗೆ ಹೋಗಿ ಹಾಗೆ ಬಂದು 'ಅಯ್ಯೋ ರಾಮ ಇವತ್ತು ಬಸ್ಸು ಇನ್ನೂ ಒಂದೂವರೆ ಗಂಟೆ ತಡವಂತೆ ನನಗೂ ಬೋರ್ ಪ್ಲೀಸ್ ಇರೋ" ರಾಗ ಎಳೆದಳು. ಅನಿವಾರ್ಯ ಇಲ್ಲ ಎನ್ನಲಾಗಲಿಲ್ಲ. ವಿಸ್ಕಿ ಕುಡಿಯದಿದ್ದರೆ ಖುಷಿಯಿಂದ ಇರಬಹುದಿತ್ತು. ಛೆ ಎಂತ ಯಡವಟ್ಟಾಯಿತಲ್ಲ ಎಂದು ಆದಷ್ಟು ಡಿಸ್ಟೆನ್ಸ್ ಕಾಪಾಡಿಕೊಳ್ಳುತ್ತಾ ನಿಂತೆ. "ಇಲ್ಲಿ ಮಾಡುವುದೇನು ಒಂದು ರೌಂಡ್ ಹೋಗಿಬರೋಣವಾ?. ಬೊಗಸೆ ಕಂಗಳನ್ನು ಅಗಲಿಸಿ ಕೇಳಿದಳು. ಇಲ್ಲ ಎನ್ನಲಾಗಲಿಲ್ಲ. ಅವಳ ಬ್ಯಾಗ್ ಗಳನ್ನು ಲಗ್ಗೇಜ್ ರೂಂನಲ್ಲಿ ಇಟ್ಟು ರೌಂಡ್ ಗೆ ಹೊರಟಾಯಿತು.
ಮತ್ತದೆ ಗಿಜಿ ಗಿಜಿ ಜನ , ಸೊಂಯ್ ಸೊಂಯ್ ಹಾಡು ಹೋಗುವ ವಾಹನ ಅವುಗಳನ್ನು ತಪ್ಪಿಸಿಕೊಳ್ಳುವ ಆಟ ಆಡುತ್ತಾ ಮೈನ್ ರೋಡ್ ಗೆ ಬಂದಾಯಿತು. ಏನಾದರೂ ತಿನ್ನೋಣವಾ? ಆಕೆ ಕೇಳಿದಳು. ಇಲ್ಲ ಎನ್ನಲಿಲ್ಲ. " ಅಯ್ಯೋ ಖಂಜೂಸು ಬುದ್ಧಿ ನೀನು ಇನ್ನೂ ಬಿಟ್ಟಿಲ್ಲವಾ? ನಾನೆ ಕೊಡಿಸುತ್ತೇನೆ ಬಾ " ಎಂದು ನನ್ನ ಉತ್ತರಕ್ಕೂ ಕಾಯದೆ ಹತ್ತಿರದ ಹೋಟೆಲ್ಲಿಗೆ ಎಳೆದುಕೊಂಡೇ ಹೋದಳು. ವಿಸ್ಕಿ ಕುಡಿಯದೇ ಇದ್ದಿದ್ದರೆ ಕೈ ಹಿಡಿದಾಗ ಅಪ್ಯಾಯಮಾನವಾಗುತ್ತಿತ್ತು , ಆದರೆ ಈಗ ಹಿಂಸೆಯಾಗುತ್ತಿತ್ತು.
ಟೇಬಲ್ ಮುಂದೆ ಕುಳಿತಾಗ ನನಗೆ ಅರಿವಾಗಿದ್ದು ಇದು ಎಲ್ಲರೂ ಹೋಗುವ ಹೋಟೆಲ್ ಅಲ್ಲ " ಏಯ್ ಇದು ನಾನ್ ವೆಜ್ ಹೋಟೆಲ್ ಕಣೇ" ಮೊದಲಬಾರಿಗೆ ಧೈರ್ಯವಾಗಿ ಹೇಳಿದೆ." ಸರಿ ಅದಕ್ಕೇನು ವಿಶೇಷ?" ಹುಬ್ಬು ಹಾರಿಸದಳು. ಅಷ್ಟರಲ್ಲಿ ವೈಟರ್ ಬಂದ.
"ನೀನು ಹಾಟೋ ಕೊಲ್ಡೋ?" ಆಕೆ ಕೇಳಿದಳು.
"..........." ನಾನು ಕೋಲ್ಡಾದೆ.
(ಚುಟುಕೊಂದರಿಂದ ಪ್ರೇರಿತ ಕತೆ)