Friday, March 1, 2013

ಆರಂಭಿಸಿ ಇವತ್ತಿನಿಂದಲೇ

ಆರೋಗ್ಯ ಅನ್ನೋದೊಂದು ಸರಿ ಇದ್ದ ಮನುಷ್ಯನಿಗೆ ಯೋಚನೆ ಇದ್ದೇ ಇರುತ್ತದೆ. ಪುತಪುತನೆ ಹುಟ್ಟುವ ಯೋಚನೆ ಕೆಲವರಿಗಾದರೆ ನಿಧಾನಗತಿಯ ಯೋಚನೆ ಮತ್ತೆ ಕೆಲವರಿಗೆ, ಒಟ್ಟಿನಲ್ಲಿ ಯೋಚನೆ ನಿರಂತರ ಬರುತ್ತಲೇ ಇರುತ್ತದೆ. ಈಗ ವಿಜಯ ಸಾಧಿರುವ ಮನುಷ್ಯ ನ ಯೋಚನೆಗಳೇನು ಅಂಬೋ ಪ್ರಶ್ನೆ ನನಗಂತೂ ಆಗಾಗ ಕಾಡುತ್ತಲಿರುತ್ತದೆ.
           ಹುಟ್ಟುವ ಯೋಚನೆಗಳಿಗೆ ರೂಪ ಬಣ್ಣ ಆಕಾರ ಯಾವುದೂ ಇರುವುದಿಲ್ಲ. ಹುಟ್ಟಿದ ಮೇಲೆ ನಾವೆಷ್ಟು ಆಹಾರ ಹಾಕುತ್ತೇವೆ, ಎಂತಹ ಆಹಾರ ಹಾಕುತ್ತೇವೆ, ಏನು ಆಹಾರ ಹಾಕಿ ಪೋಷಿಸಿ ಬೆಳಸಿ ಬಣ್ಣ ಬಳಿದು ರೂಪ ಕೊಡುತ್ತೇವೆ ಅನ್ನುವುದರ ಮೇಲೆ ಪ್ರಪಂಚ. ಏನೂ ಮಾಡದಿದ್ದರೆ ಬಂದ ಯೋಚನೆ ಬಂದಂತೆ ಮಾಯವಾಗಿರುತ್ತದೆ.
           ಒಂದಿಷ್ಟು ಜನ ನೆಗೆಟೀವ್ ರೂಪ ಕೊಡುತ್ತಾರೆ ಬಂದ ಯೋಚನೆಗೆ, ಇನ್ನು ಕೆಲವು ಜನ ಪಾಸಿಟೀವ್ ರೂಪ ಕೊಡುತ್ತಾರೆ, ಮದ್ಯಸ್ಥರು ಸುಮ್ಮನಿದ್ದುಬಿಡುತ್ತಾರೆ. ಸೂಪರ್ ಸಕ್ಸಸ್ ಪೀಪಲ್ ಗಳಿಗೆ ಅಪ್ಪಿತಪ್ಪಿಯೂ ನೆಗೇಟೀವ್ ಯೋಚನೆ ಹುಟ್ಟುವುದೇ ಇಲ್ಲ, ಅದಕ್ಕೆ ಅವರ ಅಪ್ಪ ಅಮ್ಮ ಮಾಡಿದ ಯೋಚನೆಯೂ ಕಾರಣ ಎನ್ನುವುದು ಸ್ಪಷ್ಟ.

      ಇನ್ನಷ್ಟು ಜನ ಹುಟ್ಟಿದ ನೆಗೇಟಿವ್ ಯೋಚನೆಯನ್ನು ಅದುಮಿ ಪಾಸಿಟೀವ್ ಯೋಚನೆಯನ್ನು ತುರುಕುತ್ತಾರೆ. ಅವರು ಅರ್ದಂಬರ್ದ ಸಕ್ಸಸ್.
      ಮತ್ತಷ್ಟು ಜನ ತಾವು ನೆಗೆಟೀವ್ ಯೋಚನೆ ಮಾಡುವುದಷ್ಟೇ ಅಲ್ಲದೆ ಪ್ರಪಂಚದ ನೆಗೆಟೀವ್ ಗಳನ್ನೆಲ್ಲಾ ತುಂಬಿಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಬಿತ್ತುತ್ತಾ ಸಾಗುತ್ತಾರೆ.
     ಇವೆಲ್ಲಾ ರಗಳೆ ಖುಶ್  ಖುಶ್ ಇದ್ದು ಸಕ್ಸಸ್ ಆಗಬೇಕು ಅಂತ ಇದೆಯಾ?, ಜಸ್ಟ್ ದಿನಾ ಬೆಳಿಗ್ಗೆ ತಣ್ನೀರು ಸ್ನಾನ ಮಾಡಿ, ಅಥವಾ ಈಜು ಹೊಡೆಯಿರಿ ಹೊಳೆಯಲ್ಲಿ ಅಥವಾ ಸೂಪರ್ ಧ್ಯಾನ ಆರಂಭಿಸಿ ಇವತ್ತಿನಿಂದಲೇ.

Thursday, February 28, 2013

ಮಲೆನಾಡಿನಲ್ಲಿ " ಬಯಲುಸೀಮೆಯ ಕೃಷಿ" ಪಂಡಿತ



ಮಲೆನಾಡಿನಲ್ಲಿ ಆರ್ಥಿಕವಾಗಿ ಲಾಭಕರ ಕೃಷಿ ಎಂದರೆ ಅಡಿಕೆ,ರಬ್ಬರ್, ಮೆಣಸು, ಕೋಕೋ, ಮುಂತಾದ ತೋಟಗಾರಿಕಾ ಬೆಳೆಗಳು. ಈ ಬೆಳೆಗಳನ್ನು ನಂಬಿ ಬದುಕು ಸಾಗಿಸುತ್ತಿರುವ ಹಲವು ರೈತರಿದ್ದಾರೆ.ಉಪಬೆಳೆಯನ್ನಾಗಿ ತರಕಾರಿ ಬೆಯುವ ರೈತರ ಸಂಖ್ಯೆ ಇದೆ, ತರಕಾರಿ ಜೋಳ ಮೆಣಸಿನಕಾಯಿ ಕಬ್ಬು ಶೇಂಗಾ ಮುಂತಾದ ಆಹಾರ ಬೆಳೆಗಳನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುವ ರೈತರ ಸಂಖ್ಯೆ ಬಲು ಅಪರೂಪ. ತಾಳಗುಪ್ಪ ಸಮೀಪದ ಶಿರೂರು ಆಲಳ್ಳಿಯ ರೈತರಾದ ಹುಚ್ಚಪ್ಪ ಕಳೆದ ಮೂವತ್ತು ವರ್ಷಗಳಿಂದ ಆಹಾರ ಬೆಳೆಗಳನ್ನೇ ಮುಖ್ಯ ಬೆಳೆಯನ್ನಾಗಿಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಿ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ಸಾಗಿಸುತ್ತಿದ್ದಾರೆ.
ಶಿರೂರು ಆಲಳ್ಳಿ ಸಾಗರ-ಜೋಗ ಹೈವೆ ರಸ್ತೆ ಪಕ್ಕದ ಪುಟ್ಟಹಳ್ಳಿ. ಬಹುಪಾಲು ಭತ್ತ ಕಬ್ಬು ಕೃಷಿಕರ ಈ ಹಳ್ಳಿ ಹುಚ್ಚಪ್ಪವರಂತಹ ಕೃಷಿಯಲ್ಲಿ ತೊಡಗಿಸಿಕೊಂಡವರಿಂದ ಕೂಡಿದೆ. ಹೈವೆ ೨೦೬ ರ ಪಕ್ಕದಲ್ಲಿ ಆರೂವರೆ ಎಕರೆ ಕೃಷಿ ಕ್ಷೇತ್ರ ಹುಚ್ಚಪ್ಪನವರದು. ರಸ್ತೆಯಲ್ಲಿ ಸಾಗುವ ಜನರಿಗೆ ಈ ಕ್ಷೇತ್ರ ಒಮ್ಮೆ ಕಣ್ಣಾಡಿಸುವಂತೆ ಹುಚ್ಚಪ್ಪ ಮಾಡಿದ್ದಾರೆ. ತೊಂಡೆಕಾಯಿಯ ಚಪ್ಪರ, ಅದರಪಕ್ಕದಲ್ಲಿ ಹಸಿರಾಗಿ ಹುಲುಸಾಗಿ ಬೆಳೆದ ಶೇಂಗಾ, ತೆನೆದುಂಬಿ ನಿಂತ ಜೋಳ, ಕೆಂಪು ಬಣ್ಣಕ್ಕೆ ತಿರುಗಿನಿಂತ ಮೆಣಸಿನಕಾಯಿ, ಬಸಳೆ ಸೊಪ್ಪಿನ ಸಾಲು, ಹೀರೆಕಾಯಿ, ಮಗೆಕಾಯಿ, ಕಬ್ಬು, ಬೆಂಡೆ, ಹೀಗೆ ಮುಂದುವರೆಯುತ್ತದೆ ಹುಚ್ಚಪ್ಪನವರ ಕೃಷಿ ಕ್ಷೇತ್ರ. ವರ್ಷಪೂರ್ತಿ ಹವಾಮಾನ ಕಾಲಕ್ಕನುಗುಣವಾಗಿ ತರಕಾರಿ ಬೆಳೆಗಳನ್ನು ಬೆಳೆಯುವ ಹುಚ್ಚಪ್ಪ ರೈತಾಪಿ ಜೀವನದಿಂದ ಆರ್ಥಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿಕಂಡುಕೊಂಡಿದ್ದಾರೆ.
ಕೃಷಿಕ ಯಜಮಾನ: ಸ್ವಂತ ಮಣ್ಣಿನಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ದುಡಿದರೆ ಅದರ ಸುಖ ವರ್ಣಿಸಲು ಆಗದು ಎನ್ನುವುದು ಹುಚ್ಚಪ್ಪನವರ ಸ್ವಯಂ ಅಬುಭವ. ಪತ್ನಿ ಕೂಡ ಇವರ ಕೃಷಿ ಕೈಂಕರ್ಯಗಳಿಗೆ ಜೊತೆಗೂಡುವುದರಿಂದ ಇನ್ನಷ್ಟು ಖುಷಿ ಇವರಿಗೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಕೂಡ ರಜಾದ ಸಮಯದಲ್ಲಿ ಕೃಷಿ ಕೆಲಸಗಳಿಗೆ ತೊಡಗಿಕೊಳ್ಳುತ್ತಾರೆ. ದಿನಗೂಲಿ ಜನರಿಗೆ ಜೀವನ ಭದ್ರತೆ ಕಡಿಮೆ ಸರ್ಕಾರ ಉದ್ಯೋಗಖಾತ್ರಿ ಯಂತಹ ಕಾರ್ಯಕ್ರಮದ ಮೂಲಕ ಜೀವನ ಭದ್ರತೆ ಒದಗಿಸುವ ಯತ್ನ ಮಾಡಿದರೂ ಅದೇಕೋ ಆಡಳಿತಶಾಹಿಯ ಸಮಸ್ಯೆಯಿಂದ ಸಮರ್ಪಕ ಜಾರಿಯಾಗಿಲ್ಲ, ಸ್ವಂತ ಜಮೀನಿನಲ್ಲಿ ನಾವೇ ಯಜಮಾನ ನಾವೆ ಕೂಲಿಯಾಳು ಎಂಬ ಭಾವನೆಯಿಂದ ದುಡಿದರೆ ಮಾನಸಿಕ ಆರ್ಥಿಕ ದೈಹಿಕ ನೆಮ್ಮದಿ ಸಿಗುತ್ತದೆ ಎಂದು ಅನುಭವ ಮಾತುಗಳು ಹುಚ್ಚಪ್ಪನವರದ್ದು.
ತರಕಾರಿ ಬೆಳೆ : ರೈತರಿಗೆ ವರ್ಷಪೂರ್ತಿ ಹಣ ನೀಡುವುದು ತರಕಾರಿ ಬೆಳೆಗಳು ಎಂಬುದು ಹುಚ್ಚಪ್ಪನವರ ಅನುಭವ. ತೊಂಡೆಯಂತಹ ತರಕಾರಿಗಳಿಗೆ ಒಮ್ಮೆ ಗುಂಡಿ ತೋಡಿ ನಾಟಿ ಮಾಡಿ ಗೊಬ್ಬರ ಹಾಕಿದರೆ ಮತ್ತೆ ನೀರು ಮಾತ್ರಾ ಉಣಿಸಿದರೆ ವಾರದ ಅಂತ್ಯದಲ್ಲಿ ಆದಾಯ ನಿಡುತ್ತಾ ಸಾಗುತ್ತದೆ. ಮೂರು ತಿಂಗಳ ನಂತರ ಅದೇ ಜಾಗದಲ್ಲಿ ಹೀರೇಕಾಯಿ ಹಾಕಿದರೆ ಅದು ಮೂರು ತಿಂಗಳ ನಿರಂತರ ಆದಾಯ, ಹೀಗೆ ನಮ್ಮ ಭೂಮಿಗೆ ನಮ್ಮ ವಾತಾವರಣಕ್ಕೆ ಬೆಳೆಗಳನ್ನು ಆಯ್ದುಕೊಂಡರೆ ಸುಲಭ, ಮಾರುಕಟ್ಟೆಯ ಸಮಸ್ಯೆ ತರಕಾರಿ ಬೆಳೆಗಳಿಗೆ ಇಲ್ಲ, ಸ್ಥಳಕ್ಕೆ ಬಂದು ಗ್ರಾಹಕರು ನೇರವಾಗಿಯೂ ಒಯ್ಯುತ್ತಾರೆ, ಅಥವಾ ದಲ್ಲಾಳಿಗಳು ಸ್ಥಳಕ್ಕೆ ಬರುತ್ತಾರೆ, ಹಾಗಾಗಿ ನಾವು ಸಮರ್ಪಕವಾಗಿ ಬೆಳೆದರಷ್ಟೇ ಮುಗಿಯಿತು . ವಾರ್ಷಿಕ ಆದಾಯಕ್ಕೆ ಭತ್ತ ಅಡಿಕೆ ಕಬ್ಬು ಮುಂತಾದ ಬೆಳೆಗಳು ಸಹಾಯ ಮಾಡುತ್ತವೆ, ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಕೃಷಿಕನಿಗಿರಬೇಕು ಎನ್ನುವುದು ಹುಚ್ಚಪ್ಪನವರ ಮಾತು.

ಸರ್ಕಾರದ ನಿರ್ಲಕ್ಷ್ಯ: ಸರ್ಕಾರದ ರೈತರ ಕುರಿತಾದ ಕಾಳಜಿಯನ್ನ ಸಮರ್ಪಕವಾಗಿ ಪ್ರಕಟಿಸುತ್ತಿಲ್ಲ ಎನ್ನುವುದು ಹುಚ್ಚಪ್ಪನವರ ಕೊರಗು. ಸಾಲಮನ್ನಾ, ಸುವರ್ಣ ಭೂಮಿ ಮುಂತಾದ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ ಎನ್ನುವುದು ಸಮಾಧಾನಕರ ಅಂಶ, ಆರ್ಥಿಕ ಸಹಾಯದ ದೃಷ್ಟಿಯಲ್ಲಿ ಅದು ಸಂತೃಪ್ತಿ ತಂದಿದೆ, ಆದರೆ ರೈತರಿಗಾಗಿಯೇ ಇರುವ ಇಲಾಖೆಯ ಅಧಿಕಾರಿಗಳು ರೈತರಿಗೆ ಜ್ಞಾನ ನೀಡುವುದರ ಜತೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಕೃಷಿಯನ್ನು ಆರ್ಥಿಕ ದೃಷ್ಟಿಯ ಹೊರತಾಗಿ ಜೀವನ ಪದ್ದತಿಯಾಗಿ ನೋಡಿದಾಗ ಆರ್ಥಿಕ ಸಂಕಷ್ಟಕ್ಕೆ ಬೆಲೆ ಬಾರದು ಎಂದು ನುಡಿಯುತ್ತಾರೆ. ಬ್ಯಾಂಕ್ ಗಳಿಗೆ ರೈತರ ಮೇಲೆ ನಂಬಿಕೆಯೆ ಹೊರಟುಹೋಗಿದೆ ಎನ್ನುವ ಹುಚ್ಚಪ್ಪ, ತಾಳಗುಪ್ಪದ ಬ್ಯಾಂಕನಲ್ಲಿ ತಾವು ಬೋರ್ ವೆಲ್ ಹಾಗೂ ಹೈನುಗಾರಿಕೆಗೋಸ್ಕರ ಸಾಲ ಕೇಳಲು ಹೋದಾಗ ನಾಳೆ ಬನ್ನಿ ಮುಂದಿನ ತಿಂಗಳು ಬನ್ನಿ ಎಂದು ಅಲೆದಾಡಿಸಿ ನಂತರ ಈಗ ಆಗದು ಎಬ ಉತ್ತರ ಪಡೆದ ಕಹಿ ಘಟನೆ ಬೇಸರ ತರಿಸುತ್ತದೆ . ಇದು ಕೇವಲ ಬ್ಯಾಂಕ್ ನವರ ತಪ್ಪಲ್ಲ ಅಥವಾ ತಪ್ಪು ಯಾರದು ಎನ್ನುವ ಪ್ರಶ್ನೆ ಇದಲ್ಲ, ಸರ್ಕಾರದ ಕಂದಾಯ ಇಲಾSಯೂ ಸೇರಿದಂತೆ, ಇತರೆ ಅಧಿಕಾರಿಗಳು ಹೀಗೆ ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರದ ಸಮೂ, ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ . ಧರ್ಮಸ್ಥಳ ಸಂಘ ತಮಗೆ ಉತ್ತಮ ಸಹಕಾರ ನೀಡಿದೆ, ಮಾನಸಿಕವಾಗಿ ಆರ್ಥಿಕವಾಗಿ ಬೆಂಬಲಿಸಿದೆ. ಇದೇ ರೀತಿ ಸರ್ಕಾರ ಮತ್ತು ಬ್ಯಾಂಕ್ ಗಳು ರೈತರ ಬೆನ್ನಿಗೆ ನಿಂತರೆ ದೇಶದ ಬೆನ್ನೆಲುಬಾಗಿ ರೈತ ನಿಲ್ಲುತ್ತಾನೆ ಎನ್ನುತ್ತಾರೆ.

೪೪ ವರ್ಷದ ಹುಚ್ಚಪ್ಪನವರ ಕುಂಟುಂಬ ಕೃಷಿಯನ್ನು ನಂಬಿ ಸಂತೃಪ್ತ ಜೀವ ನಡೆಸುತ್ತಿದೆ. ಆರ್ಥಿಕವಾಗಿ ಶ್ರೀಮಂತರು ಅಂತ ಅನ್ನಿಸಿಕೊಳ್ಳದಿದ್ದರೂ ಮಾನಸಿಕವಾಗಿ ದೈಹಿಕವಾಗಿ ಶ್ರೀಮಂತಿಕೆ ಅವರ ಕುಟುಂಬದಲ್ಲಿ ಎದ್ದುಕಾಣಿಸುತ್ತಿದೆ. ಸಮಾಧಾನ ಸಂತೃಪ್ತಿ ಮನೆಮಾಡಿದೆ. ಸಮಾಜಕ್ಕೆ ಆಹಾರ ಪದಾರ್ಥಗಳ ಕೊಡುಗೆಯಾಗಿ ನೀಡಿದ ನೆಮ್ಮದಿ ಆ ಕುಟುಂಬದಲ್ಲಿದೆ ಎನ್ನುವುದು ನಿಸ್ಸಂಶಯ.
ಫೋನ್ ನಂ: ೭೨೫೯೨೭೮೦೫೫ (ವಿಜಯವಾಣಿಯಲ್ಲಿ ಪ್ರಕಟಿತ)

Tuesday, February 26, 2013

ಯಂತ್ರದ ಮಂತ್ರ ಪಠಿಸಿ ಯಶಸ್ವಿಯಾದ ಕೃಷಿಕ



ಇತ್ತೀಚಿನ ದಿವಸಗಳಲ್ಲಿ ಕೃಷಿಕರ ಸಾಮೂಹಿಕ ಕೊರಗು ಎಂದರೆ ಕೃಷಿಕಾರ್ಮಿಕರ ಕೊರತೆ, ದುಬಾರಿ ಕೂಲಿ ಒಂದೆಡೆಯಾದರೆ, ಕೃಷಿಕಾರ್ಮಿಕರೇ ಇಲ್ಲದಿರುವುದು ಇನ್ನೊಂದೆಡೆ. ಈ ನೆಪವನ್ನೊಡ್ಡಿ ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ಕೂಗು ಎಲ್ಲಡೆ. ಆದರೆ ತಂತ್ರಜ್ಞಾನ ಅತ್ಯುತ್ತಮವಾಗಿರುವ ಇಂದಿನ ದಿನಗಳಲ್ಲಿ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಕೂಲಿ ಕಾರ್ಮಿಕರ ಕೊರತೆ ಸಮಸ್ಯೆಯೇ ಅಲ್ಲ ಅದು ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ ಎನ್ನುತ್ತಾ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಸ್ವಾವಲಂಬಿಯಾಗಿ, ಎಂಟು ಎಕರೆ ತೋಟ ನಳನಳಿಸುವಂತೆ, ಕೃಷಿಕರಲ್ಲದವರೂ ಬೆಕ್ಕಸಬೆರಗಾಗುವಂತೆ ಮಾಡಿ ತೋರಿಸಿದ್ದಾರೆ ಸಾಗರ ತಾಲ್ಲೂಕು ಸಸರವಳ್ಳಿ ಗ್ರಾಮದ ಸಮೀದ ಊರಿನ ಕಾನುತೋಟದ ಗುರು.
ಸಾಗರದಿಂದ ೧೨ ಕಿಲೋಮೀಟರ್ ದೂರದ ತಾಳಗುಪ್ಪ ಹೊಬಳಿಯಲ್ಲಿರುವ ಕಾನುತೋಟ ಎಂಬುದು ಒಂಟಿಮನೆಯ ಊರು. ಶೇಷಗಿರಿಯಪ್ಪನವರ ಶ್ರಮದಿಂದ ಮೂಡಿದ ಎಂಟು ಎಕರೆ ಅವರ ಹಿರಿಯ ಮಗನಾದ ಗುರುವಿನ ಉಸ್ತುವಾರಿಗೆ ಈಗ ಹದಿನೈದು ವರ್ಷಗಳ ಹಿಂದೆ ಸಿಕ್ಕಿತು. ದೂರದ ಗುಡ್ಡದಿಂದ ಹರಿದು ಬರುವ ಅಬ್ಬಿ ನೀರಿನ ಸಮೃದ್ಧಿ ಒಂದೆಡೆಯಾದರೆ ಒಂಟಿಮನೆಯ ಕಾರಣದಿಂದ ರಸ್ತೆ, ವಿದ್ಯುತ್,ನಂತಹ ಸಾಮೂಹಿಕ ಸವಲತ್ತುಗಳಿಗೆ ಏಕಾಂಗಿ ಹೋರಾಟ ಸಮಸ್ಯೆ ಇನ್ನೊಂದೆಡೆ. ಇವನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ ಗುರು ಯಶಸ್ವೀ ಕೃಷಿಕ ಎನಿಸಿಕೊಂಡಿದ್ದಾರೆ. ಗುರುರವರ ಕೃಷಿಯಲ್ಲಿನ ಯಾಂತ್ರೀಕರಣದ ಮಜಲು ಮನೆಯ ವಿದ್ಯುತ್ ದೀಪದಿಂದಲೇ ಆರಂಭಗೊಳ್ಳುತ್ತದೆ.
ಅಬ್ಬಿ ನೀರಿನ ಜನರೇಟರ್: ವಿದ್ಯುತ್ ಸಮಸ್ಯೆ ಬಹುವಾಗಿ ಎಲ್ಲರನ್ನು ಕಾಡುವ ಸಂಗತಿ. ದಿನದ ಬಹುಪಾಲು ಸಮಯ ಪವರ್ ಕಟ್ ಎಂಬ ಪೆಡಂಬೂತಕ್ಕೆ ನಲುಗದವರಿಲ್ಲ. ಆದರೆ ಕಾನು ತೋಟದ ಗುರುರವರಿಗೆ ಈ ಸಮಸ್ಯೆ ಕಾಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಕಾರಣ ಇವರು ತಮ್ಮದೇ ಸ್ವಂತ ವಿದ್ಯುತ್ ಉತ್ಪಾದನಾ ಘಟಕ ಹೊಂದಿದ್ದಾರೆ. ಗುಡ್ಡದಿಂದ ಇಳಿದು ತೋಟದಲ್ಲಿ ಹರಿದು ಹೊಳೆ ಸೇರುತ್ತಿದ್ದ ಅಬ್ಬಿನೀರಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್ ಹಾಕಿಸಿ ಮನೆಯ ಪಕ್ಕದಲ್ಲಿ ಜನರೇಟರ್ ಒಂದನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಮನೆಯಲ್ಲಿ ಪವರ್ ಕಟ್ ಪ್ರಶ್ನೆ ಇಲ್ಲ. ವಿದ್ಯುತ್ ನಲ್ಲಿ ಸ್ವಾವಲಂಬಿಯಾದರೆ ಕೃಷಿ ಕೈಂಕರ್ಯಗಳಿಗೆ ಯಂತ್ರಬಳಸುವ ಬಹುದೊಡ್ಡ ಸಮಸ್ಯೆ ನಿವಾರಣೆಯಾದಂತೆ ಎಂಬುದು ಗುರುರವರ ಅನುಭವವೇದ್ಯ ಮಾತು.
ಕೃಷಿಉಪಯೋಗಿ ಯಂತ್ರಗಳು: ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಮೆಣಸಿನ ಕಾಳು ಬೇರ್ಪಡಿಸುವ ಯಂತ್ರ, ಅಡಿಕೆ ಬೇಯಿಸಲು ರಾಟೆ,ಕೊಟ್ಟಿಗೆ ತೊಳೆಯುವ ಯಂತ್ರ ಹೀಗೆ ಸಾಲು ಸಾಲು ಯಂತ್ರಗಳ ಬಳಕೆ ಇಲ್ಲಿ ಕಾಣಸಿಗುತ್ತವೆ. ಒಂದೆರಡು ಕೃಷಿ ಕಾರ್ಮಿಕರ ಜತೆ ಸೇರಿಕೊಂಡ ಗುರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಇದರಿಂದಾಗಿ ಕೂಲಿಕಾರ್ಮಿಕರ ಅವಲಂಬನೆ ತಪ್ಪುವುದರ ಜತೆ ಕೃಷಿ ಕೆಲಸಗಳು ಸಮಯಕ್ಕೆ ಸರಿಯಾಗಿ ಸಾಗುತ್ತವೆ ಎನ್ನುತ್ತಾರೆ.
ಕಾಳುಮೆಣಸಿನ ಕೃಷಿ: ಮಲೆನಾಡಿನಲ್ಲಿ ಅಡಿಕೆ ಕೃಷಿ ಸಾಮಾನ್ಯ. ಕಾಳುಮೆಣಸಿನ ಕೃಷಿಯನ್ನು ಬಳ್ಳಿಯ ಕಟ್ಟೆ ರೋಗದ ಕಾರಣದಿಂದ ಬಹುಪಾಲು ಕೃಷಿಕರು ಕೈಬಿಟ್ಟಿದ್ದಾರೆ. ಗುರು ರವರು ಉಪಬೆಳೆಯಾಗಿ ಕಾಳುಮೆಣಸಿನ ಕೃಷಿಗೆ ಒತ್ತು ನೀಡಿದ್ದಾರೆ, ಪಣಿಯೂರು, ಕೊಟ್ಟಾಯಾಂ ಕರಿಮುಂಡ, ಕೇರಳ ಕರಿಮುಂಡ, ಮುಂತಾದ ನಾಲ್ಕಾರು ತಳಿಯ ಅಭಿವೃದ್ಧಿಗೆ ಆದ್ಯತೆ ನೀಡಿ ವರ್ಷವೊಂದಕ್ಕೆ ೮ ರಿಂದ ಹತ್ತು ಕ್ವಿಂಟಾಲ್ ಕಾಳು ಮೆಣಸು ಬೆಳೆಯುತ್ತಾರೆ. ಮೆಣಸಿನ ಬಳ್ಳಿಗೆ ಕಟ್ಟೆ ರೋಗ ಇರುವುದು ನಿಜವಾದರೂ ಪ್ರತೀ ವರ್ಷ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡುವುದರ ಮೂಲಕ ಹಾಗೂ ಅಡಿಕೆ ಮರದ ಬುಡವನ್ನು ಗುದ್ದಲಿಯಿಂದ ಅಗೆಯುವುದನ್ನು ನಿಲ್ಲಿಸುವುದರ ಮೂಲಕ ರೋಗ ಹತೋಟಿ ಸಾದ್ಯ ಎನ್ನುತ್ತಾರೆ ಗುರು.
ದ್ರವ ಗೊಬ್ಬರ: ಅಡಿಕೆ ತೋಟಕ್ಕೆ ಹೆಚ್ಚು ಕಾರ್ಮಿಕರನ್ನು ಬೇಡುವ ಕೆಲಸ ಗೊಬ್ಬರ ಪೂರೈಕೆ ಹಾಗೂ ಮರದಿಂದ ಇಳಿಸಿದ ಅಡಿಕೆ ಗೊನೆಗಳ ಸಾಗಾಟ. ಇವೆರಡಕ್ಕೂ ಗುರುರವರು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ದ್ರವರೂಪಿ ಗೊಬ್ಬರದ ಟ್ಯಾಂಕ್ ಮಾಡಿಸಿಕೊಂಡಿರುವ ಗುರುರವರು ತಮ್ಮ ತೋಟದ ಎಲ್ಲಾ ಮರಗಳಿಗೂ ಪೈಪ್ ಮುಖಾಂತರ ಗೊಬ್ಬರ ಹರಿಯಬಿಡುತ್ತಾರೆ. ಇದರಿಂದಾಗಿ ಅಡಿಕೆ ಮರಗಳ ಬುಡ ಬಿಡಿಸುವ ಕೆಲಸವೂ ಇಲ್ಲದರ ಜತೆಗೆ ಹತಾರಗಳ ಕಬ್ಬಿಣದಿಂದ ಮರದ ಬೇರುಗಳು ಹಾನಿಗೊಳಗಾಗುವುದೂ ಇಲ್ಲ. ಅಡಿಕೆ ಗೊನೆಗಳ ಸಾಗಾಟಕ್ಕೆ ಅಡಿಕೆತೋಟದೊಳಗೆ ತೆರೆದ ಜೀಪ್ ಓಡಾಡುವಂತಹ ರಸ್ತೆಯನ್ನು ನಿರ್ಮಿಸಿಕೊಂಡಿದ್ದು ಇದರ ಮೂಲಕ ಅಡಿಕೆಗೊನೆಗಳ ಸಾಗಾಟವನ್ನು ಮಾಡುತ್ತಾರೆ. ಇಷ್ಟೆಲ್ಲಾ ಯಂತ್ರ ಬಳಕೆಯಿಂದ ಒಮ್ಮೊಮ್ಮೆ ದುರಸ್ತಿ ಕಾರ್ಯದ ಸಮಸ್ಯೆ ಇರುವುದು ನಿಜವಾದರೂ ಬಹುಪಾಲು ಒಳ್ಳಯದೇ ಆಗುತ್ತದೆ ಎನ್ನುತ್ತಾರೆ ಗುರು
ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವೀ ಕೃಷಿಕ ಜೀವನ ನಡೆಸುತ್ತಿರುವ ಗುರುರವರಿಗೆ ಪತ್ನಿ ಹೇಮಾ ಸಾಥ್ ನೀಡುತ್ತಿದ್ದಾರೆ.  ಕೃಷಿಗೆ ಪೂರಕವಾಗಿ ಒಗ್ಗಿ ಆಸಕ್ತಿಯಿಂದ ಪತಿಗೆ ಪೂರಕವಾಗಿ ನಡೆದುಕೊಂಡು ಕೃಷಿಕತನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮನೆಯ ಸುತ್ತಮುತ್ತಲಿನ ಜಾಗಗಳಲ್ಲಿ ಮನೆ ಬಳೆಕೆಯ ಎಲ್ಲಾ ತರಕಾರಿಯನ್ನು ತಾವೇ ಖುದ್ದು ಬೆಳೆದುಕೊಳ್ಳುತ್ತಿದ್ದಾರೆ. ೭೫ ವರ್ಷದ ತಂದೆ ಶೇಷಗಿರಿಯಪ್ಪನವರು ಸ್ವಂತ ಆಸಕ್ತಿಯಿಂದ ಪುಸ್ತಕಗಳನ್ನು ಓದಿ ಕಂದಾಯ ಇಲಾಖೆಯ ಎಲ್ಲಾ ಕಾನೂನುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕೃಷಿಕ ಕೇವಲ ಹೊಲದಲ್ಲಿ ಮಾತ್ರಾ ದುಡಿಯದೆ, ತನಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳನ್ನು ಸ್ವತಃ ತಿಳಿದುಕೊಂಡರೆ, ಕಾನೂನಿನ ಜ್ಞಾನ ಪಡೆದುಕೊಂಡರೆ ಮಾತ್ರಾ ಯಶಸ್ಸು ಎನ್ನುವುದು ಶೇಷಗಿರಿಯಪ್ಪನವರ ಮಾತುಗಳು. ಕಾಲ ಬದಲಾದಂತೆ ಕೃಷಿಕನೂ ಬದಲಾದರೆ ಸ್ವರ್ಗ ಸ್ವ ಸ್ಥಳದಲ್ಲಿ ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ಕಾನುತೋಟದ ಈ ಕೃಷಿ ಕುಟುಂಬ ಉದಾಹರಣೆಯಾಗಿ ನಿಲ್ಲುತ್ತದೆ.
ಫೋನ್: ೦೮೧೮೩೨೩೧೫೬೫