Wednesday, August 24, 2011

ಯಾವಾಗ ಬರುತ್ತೋ ಗೊತ್ತಿಲ್ಲ.

















ಅದು "ಚಕ್ರತೀರ್ಥ" ಅನ್ನೋ ಹೆಸರಿನ ಧಾರಾವಾಹಿಯಂತೆ. ನಿರ್ದೇಶನ ಪಿ ಶೇಷಾದ್ರಿ. ನಮ್ಮ ಮನೆಯ ಹತ್ತಿರ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ನನ್ನ ಹತ್ತಿರವೂ ಒಂದು ಪಾತ್ರ ಮಾಡಿ ಅಂತ ಕೇಳಿದರು. ಮಾಡೋದನ್ನೇ ನೆಟ್ಟಗೆ ಮಾಡಲಾಗಲಿಲ್ಲ ಇನ್ನು ಇದೊಂದು ಅಂತ ಆಗುವುದಿಲ್ಲ ಅಂತ ಅಂದೆ. ಒಂದು ವಾರ ಕಾಲ ಇಲ್ಲಿ ಸುತ್ತ ಮುತ್ತ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ ಯಾವಾಗ ಬರುತ್ತೋ ಗೊತ್ತಿಲ್ಲ.

Tuesday, August 23, 2011

"ಮಹಾನಂದಿ ಸಂಸ್ಮರಣೆ"

ತಾಳಗುಪ್ಪ ಆ ೨೧: "ಗೋಮೂತ್ರ ಪಾನ ಭಸ್ಮ ಸ್ನಾನ ಮನುಷ್ಯನಿಗೆ ವರದಾನ " ಎಂದು ಕೂಡ್ಲಿ ಮಠದ ಶ್ರೀ ಸಿದ್ಧರೂಢ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀ ಕೃಷ್ಣಜನ್ಮಾಷ್ಠಮಿಯ ದಿನದಂದು ತಾಳಗುಪ್ಪದ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಿದ್ದಾಪುರ ಹವ್ಯಕ ಮಂಡಲದ ತಾಳಗುಪ್ಪ-ಇಡುವಾಣಿ ವಲಯದವರು ಏರ್ಪಡಿಸಿದ್ದ "ಮಹಾನಂದಿ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸಭ್ಯರು, ಸಜ್ಜನರು,ಸುಸಂಸ್ಕೃತರ ಜೀವನಕ್ಕೆ ನಾವು ಗೋಮಾತೆಗೆ ಉದಾಹರಿಸುತ್ತೇವೆ, ಅದೇ ರೀತಿ ನಮ್ಮ ಬದುಕಿನಲ್ಲಿಯೂ ಗೋವಿನ ಉತ್ಪನ್ನಗಳ ಬಳಸುತ್ತೇವೆ, ಹಾಲಷ್ಟೇ ಅಲ್ಲದೇ ಗೋಜನ್ಯಗಳಿಂದ ಅನೇಕ ಔಷಧಿಯನ್ನೂ ಪಡೆಯುತ್ತೇವೆ, ಇಷ್ಟೆಲ್ಲಾ ಅನುಕೂಲಗಳನ್ನು ಪಡೆದ ಗೋವಿಗೆ ನಾವು ಸ್ಮರಣೆಯ ಮುಖಾಂತರವಾದರೂ ನಮನ ಹೇಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲಲಿತಾ ನಾರಾಯಣ್ ಮಾತನಾಡಿ, ಕೃಷಿಕರ ಸಂಸ್ಕೃತಿಯಲ್ಲಿ ಹುದುಗಿಹೋಗಿದ್ದ ಗೋ ಸಾಕಣೆ ಪದ್ದತಿ ಪರಿಸ್ಥಿತಿಯ ದೆಸೆಯಿಂದ ನಿಧಾನ ಕಣ್ಮರೆಯಾಗುತ್ತಿದೆ, ಅದು ಜನಮನದಿಂದ ದೂರವಾಗುವ ಮೊದಲು ನಾವು ಪೋಷಿಸ ಬೇಕಿದೆ, ದೇಹ ತ್ಯಜಿಸಿದ "ಮಹಾನಂದಿ" ಜನರ ಮನಸ್ಸಿನಲ್ಲಿ ನೆಲೆಸಿರುವಂತೆ ಜಾನುವಾರು ಸಾಕಾಣಿಕೆಯ ಪ್ರಕ್ರಿಯೆಗೆ ಮತ್ತೆ ಎಲ್ಲೆಡೆ ಮಾನ್ಯತೆ ಸಿಗಲಿ ಎಂದರು.
ಶ್ರೀಮತಿ ಶಾಂಭವಿ ಪರಮೇಶ್ವರ್, "ಮಾ ಗೋ ಪ್ರಾಡಕ್ಟ್" ನ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಜನರು ಗೋ ಉತ್ಪನ್ನಗಳ ಖರೀದಿ ಮಾಡಿ ಬಳಸಿ ತನ್ಮೂಲಕ ಗೋ ಸೇವೆಯನ್ನು ಮಾಡಬೇಕೆಂದು ವಿನಂತಿಸಿದರು.
ಕಲ್ಪನಾ ಸತೀಶ್ ಸಭೆಗೆ ಗೋ ಪ್ರತಿಜ್ನೆಯನ್ನು ಬೋಧಿಸಿದರು, ಸಿದ್ಧಾಪುರ ವಲಯದ ಉಪಾಧ್ಯಕ್ಷ ಶಾಂತಾರಾಂ ಹಿರೇಮನೆಯವರು ಗೋವಿನ ಕುರಿತು ಲಾವಣಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಕಳೆನೀಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿಯ ದಿನದಂದು ಸಂಪನ್ನಗೊಂಡ ಕಾರ್ಯಕ್ರಮಕ್ಕೆ, ಪ್ರಮೇಶ್ವರ್ ಸ್ವಾಗತಿಸಿ ಮಂಜುನಾಥ್ ಕೌಲುಮನೆ ವಂದಿಸಿದರು. ವೇದಿಕೆಯಲ್ಲಿ, ಶ್ರೀ ಸಿದ್ಧಾರೂಢ ಸ್ವಾಮೀಜಿ, ಸುಬ್ರಾಯರು ಮೂಗಿಮನೆ, ಅಂಕದ ಚನ್ನಬಸಪ್ಪ ಶೆಟ್ಟರು, ತಾಳಗುಪ್ಪ ಗ್ರಾ ಪಂ ಅಧ್ಯಕ್ಷ ಮೋಹನ್ ಶೇಟ್, ತಲವಾಟ ಗ್ರಾಪಂ ಅಧ್ಯಕ್ಷೆ ಶಾಂಭವಿ ಪಿ, ತಾಪಂ ಸದಸ್ಯೆ ಸುಮಿತ್ರ, ಜಿಪಂ ಸದಸ್ಯೆ ಲಲಿತಾ ನಾರಾಯಣ್, ಕನ್ನಪ್ಪ, ರಾಬರ್ಟ್ ಮುಂತಾದವರು ಉಪಸ್ಥಿತರಿದ್ದರು.