Saturday, October 29, 2011

"ಬ್ಲಾಗ್ ಬರಹ" ಬಿಡುಗಡೆಯಾಯಿತು.



ಕಾರ್ಯಕ್ರಮ ಚನ್ನಾಗಿ ನಡೆಯಿತು. ಎಂಟುಗಂಟೆಗೆ ಧಾರಾಕಾರ ಮಳೆ, ಆದರೂ ಕರೆಂಟು ಹೋಗಲಿಲ್ಲ. ವಿ ಎಸ್ ಹೆಗಡೆ ಬೊಂಬಾಟ್ ಮಾತನಾಡಿದರು( ನನ್ನ ಹೊಗಳಿದ್ದು ಎಂಬ ಒಂದೇ ಕಾರ್ಣಕ್ಕೆ ಅಲ್ಲ....!) ತಿನ ಶ್ರಿನಿವಾಸ, ಹಿತಕರ ಜೈನ್, ಲಲಿತಾ ನಾರಾಯಣ್, ಶಾಂಭವಿ ಹಾಗೂ ಎಂಬತ್ತು ಜನ ಪ್ರೇಕ್ಷಕರ ಸಮ್ಮುಖದಲ್ಲಿ "ಬ್ಲಾಗ್ ಬರಹ" ಬಿಡುಗಡೆಯಾಯಿತು.

ಇನ್ನು ನೀವು ಸಿಕ್ಕಾಗ ಇದೊಂದು ಪುಸ್ತಕ ಕೊಡುವ ಕೆಲಸ ಇದೆ. ಸೂಪರ್ ಅಂತ ನಿಮ್ಮ ಬಾಯಿಂದ ಬರುತ್ತೆ ಅಂತ ಗೊತ್ತು. ಅದಕ್ಕೆ ಅಡ್ವಾನ್ಸ್ ತ್ಯಾಂಕ್ಸ್.

Tuesday, October 25, 2011

........ಎಂಬುದು ನನ್ನ ಮುನ್ನುಡಿ

"ನನಗೆ ಗೊತ್ತಿಲ್ಲ" ಎಂಬ ಸರಳ ವಾಕ್ಯದೊಡನೆ ಜೀವನವನ್ನು ಸ್ವಾಗತಿಸಿದರೆ ಮಾಹಿತಿಗಳು ದಶದಿಕ್ಕಿನಿಂದ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ಅಂತಹ ಮಾಹಿತಿಗಳಲ್ಲಿ ನಮಗೆ ಬೇಕಾದ್ದನ್ನು ಜತನವಾಗಿಟ್ಟುಕೊಂಡು ಮಿಕ್ಕಿದ್ದನ್ನು ಉಫ಼್ ಎನ್ನಿಸುವ ತಾಕತ್ತು ಇದ್ದರೆ ಬದುಕು ಸುಂದರ ಜೀವನ ಸುಮಧುರ. ಈ ಸುಂದರ ಜೀವನ ಎಂಬುದು ಮಗದೊಮ್ಮೆ ಅವರವರ ಕಲ್ಪನೆಯ ಕೂಸು. ಕಲ್ಪನಾ ಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬ ವಿಷಯವನ್ನವಲಂಬಿಸಿ ತರ್ಕಕ್ಕೆ ಒಡ್ಡಿ ಕಡೆದು ಮೊಸರು ಬೆಣ್ಣೆಯನ್ನು ತೆಗೆದು ಉಳಿದ ಮಜ್ಜಿಗೆಯನ್ನೂ ಗುಟುಕರಿಸುವ ಶಕ್ತಿ ಆಯಾ ಮನುಷ್ಯರ ಚೈತನ್ಯಕ್ಕೆ ಸಂಬಧಿಸಿದ ವಿಚಾರ.
ಎಲ್ಲರ ಬದುಕೂ ಹುಟ್ಟಿನಿಂದ ಸಾವಿನವರೆಗೂ ಘಟನೆಗಳ ಸರಮಾಲೆಯೇ. ನಮ್ಮೀ ದೇಹವೆಂಬ ಬಳ್ಳಿಯ ಸುತ್ತ ಘಟನೆಗಳು ತನ್ನಷ್ಟಕ್ಕೇ ನಡೆಯುತ್ತವೆಯೋ, ಅಥವಾ ಅದರ ಸೃಷ್ಟಿಕರ್ತರು ನಾವೋ ಎಂಬುದು ನಿಖರವಾದ ಉತ್ತರವಿಲ್ಲದ ಪ್ರಶ್ನೆ. ನಮ್ಮ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಷಯಗಳನ್ನು ವಿಚಾರಗಳನ್ನು ಮೂರನೆಯವರಾಗಿ ಕುಳಿತು ವಿವೇಚನೆಗೆ ಹರಿಬಿಟ್ಟಾಗ ಸೃಷ್ಟಿಯ ಎತ್ತರ ಆಳದ ಬಗ್ಗೆ ಹಾಗೂ ಅಗಾಧ ಶಕ್ತಿಯ ಬಗ್ಗೆ ಅರೆಕ್ಷಣ ಅಚ್ಚರಿಮೂಡದಿರದು. ಈ ಎಲ್ಲಾ ಸಮಗ್ರವನ್ನೂ ಎಲ್ಲರೂ ದಾಖಲಿಸುತ್ತಾ ಸಾಗಿದರೆ ಅದು ಅಂತ್ಯವಿಲ್ಲದ ಅಳತೆಯ ಬೃಹತ್ ಗ್ರಂಥವಾಗಿಬಿಡಬಹುದು. ಹಿಗೆಲ್ಲಾ ಅನಾಹುತಕ್ಕೆ ಭಗವಂತ ಅಣತಿ ನೀಡಲಾರ. ಎಲ್ಲರ ಅನುಭವಾಮೃತವನ್ನೂ ಮತ್ತೊಬ್ಬರಿಗೆ ಹಂಚಿಕೊಳ್ಳಲು ಅವಕಾಶ ನೀಡಲಾರ. ಹಾಗಂತ ಹಠ ಹಿಡಿದವನ ಆಸೆಯನ್ನು ಪೂರೈಸದೇಯೂ ಇರಲಾರ. ಹಾಗೆ ಆ ಸೃಷ್ಟಿಕರ್ತ ಪೂರೈಸಿದ ನನ್ನ ಆಸೆ ಈಗ ನಿಮ್ಮ ಕೈಯಲ್ಲಿರುವ "ಬ್ಲಾಗ್ ಬರಹಗಳು".
ಇದರೊಳಗೆ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನಾನು ಕಂಡಿರುವ ನೋಡಿರುವ ಕೇಳಿರುವ ಘಟನೆಗಳ ಸಣ್ಣದೊಂದು ಗುಚ್ಛವಿದೆ ಅನ್ನಬಹುದು. ಇದು ಎಷ್ಟರಮಟ್ಟಿಗೆ ನಿಮಗೆ ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆಯೋ ನನಗೆ ಗೊತ್ತಿಲ್ಲ. ನನಗಂತೂ ಮನಸ್ಸಿಗೆ ಅದೇನೋ ಆನಂದಭಾವವನ್ನು ತಂದಿಡುತ್ತದೆ. ನನ್ನ ಈ ಆನಂದಕ್ಕೆ ಸಹಕರಿಸಿದ ನಿಮಗೆ, ಮುದ್ರಿಸಿದ ಗಣಪತಿ ಪ್ರಿಂಟರ್ಸ್ ಹಾಗೂ ಸಿಬ್ಬಂದಿಗೆ, ವಿಶೇಷವಾಗಿ ವೇಣುಮಾಧವನಿಗೆ, ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ, ಕಟ್ಟೆ ಮಿತ್ರರಿಗೆ, ತಲವಾಟ ಗ್ರಾಮಪಂಚಾಯ್ತಿ ಅಧ್ಯಕ್ಷರು ಸದಸ್ಯರು ಹಾಗೂ ಜನರಿಗೆ, ೨೦೦೮ ರಿಂದಲೂ ನನ್ನ ಬ್ಲಾಗನ್ನು ನೆಟ್ ಲ್ಲಿ ಓದುತ್ತಾ ಕಾಮೆಂಟ್ ದಾಖಲಿಸುತ್ತಾ ಬಂದಿರುವವರಿಗೆ ಹಾಗೂ ಬ್ಲಾಗ್ ಮಿತ್ರರಿಗೆ, ಉಚಿತವಾಗಿ ತಾಣ ಒದಗಿಸಿಕೊಟ್ಟ ಗೂಗಲ್ ನವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ಕಾನೂನಿನ ಕೆಳಗೆ ತೂರಿಕೊಳ್ಳಲು ಕಾನೂನು ಇದೆಯಂತೆ ಆದರೆ ಮನುಷ್ಯಧರ್ಮದ ಕೆಳಗೆ ಮತ್ತೆ ಇರುವುದು ಮನುಷ್ಯಧರ್ಮವೇ ಅಂತೆ. ಹಾಗಾಗಿ ಆ ಸೃಷ್ಟಿಕರ್ತನ ಹತ್ತಿರ ನನ್ನ ನಿತ್ಯ ಬೇಡಿಕೆ "ಹೇ ಭಗವಂತಾ, ಇಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ, ಅದು ನನ್ನ ಮೂಲಕ ಆಗಲಿ, ತನ್ಮೂಲಕ ನನಗೆ ನೆಮ್ಮದಿ ಸಿಗಲಿ" ಎಂಬ ನನ್ನದೂ ಸ್ವಾರ್ಥವನ್ನೂ ಸೇರಿಸುತ್ತಾ ನಿಮಗೆ ನನ್ನ ಬರಹಕ್ಕೆ ಸ್ವಾಗತ,


-ಆರ್.ಶರ್ಮಾ.ತಲವಾಟ

೯೩೪೨೨೫೩೨೪೦

Monday, October 24, 2011

ಕರುಳು ಚುರುಕ್ ಎನ್ನುತ್ತದೆ



ನಮ್ಮ ಮಲೆನಾಡು ಈಗ ಅತ್ಯಂತ ಸುಂದರ. ಮಳೆಗಾಲ ಮುಗಿದಿದೆ ಚಳಿಗಾಲ ಶುರುವಾಗಿಲ್ಲ. ಬೆಳಿಗ್ಗೆ ಎಂಟರತನಕ ಇಬ್ಬನಿಯ ರಂಗು, ಅದರ ನಡುವೆ ಸೂರ್ಯನ ಇಣುಕು. ಎಲ್ಲೆಲ್ಲಿಯೂ ಹಸಿರು ಹಸಿರು ಹಸಿರು. ಕೆರೆಕಟ್ಟೆಗಳು ತುಂಬಿ ತುಳುಕಾಡುತ್ತಲಿರುತ್ತವೆ. ಶುದ್ಧ ನೀರಿನ ಜುಳುಜುಳು ಸದ್ದು, ವಲಸೆ ಹಕ್ಕಿಗಳ ಹಾರಾಟ, ಕಾಡುಕೋಳಿಗಳ, ಕೆರೆಬಾತುಕೋಳಿಗಳ, ಚೀರಾಟ. ಸರಿ ಸರಿ ಇಲ್ಲಿಯವರೆಗೆ ಒಂಥರಾ ಒಳ್ಳೆಯ ಪದಗಳಿತ್ತು ಈಗ ಇದ್ದಕ್ಕಿದ್ದಂತೆ ಚೀರಾಟ ಎಂಬ ಪದ ಬಂದು ಒಂಥರಾ ಇರಿಸುಮುರಿಸಾಯಿತಿರಬೇಕು ನಿಮಗೆ, ಅದಕ್ಕೆ ಕಾರಣಗಳಿವೆ ಹೇಳುತ್ತೇನೆ ಕೇಳಿ.

ಮಳೆಗಾಲ ಮುಗಿಯುತ್ತಿದ್ದಂತೆ ಬಯಲುಸೀಮೆಯಿಂದ ಅದ್ಯಾವುದೋ ತಂಡ ಪ್ರತೀ ವರ್ಷ ಈ ಸಮಯಕ್ಕೆ ಸರಿಯಾಗಿ ಊರಮುಂದೆ ಬಂದು ಟೆಂಟ್ ಹಾಕುತ್ತದೆ. ಹತ್ತೆಂಟು ಜನರ ಆ ತಂಡದಲ್ಲಿ ಹಿರಿಯರು ಮೂರ್ನಾಲ್ಕು, ಯುವಕರು ಮತ್ತೆ ಮೂರ್ನಾಲ್ಕು ಚಿಳ್ಳೆಪಿಳ್ಳೆ ಮೂರ್ನಾಲ್ಕು ಹಾಗೂ ಒಂದಿಬ್ಬರು ಹೆಂಗಸರು. ಅವರ ತಂಡ ಬಂತೆಂದರೆ ನನಗೆ ಮಾತ್ರಾ ಕರುಳು ಚುರುಕ್ ಎನ್ನುತ್ತದೆ. ಕಾರಣ ಅವರು ನಮ್ಮ ಹಳ್ಳಿಯ ಸುತ್ತಮುತ್ತ ಕಾಡಿನಲ್ಲಿರುವ ಕೋಳಿ ಹಾಗೂ ಕೆರೆಯಲ್ಲಿರುವ ಬಾತುಕೋಳಿಯನ್ನು ಬೆನ್ನೆತ್ತಿ ಬೇಟೆಯಾಡುತ್ತಾರೆ. ಅವರು ಬೇಟೆಯಲ್ಲಿ ನಿಸ್ಸೀಮರು. ಬಗಲಲ್ಲಿ ಕವಣೆ ಕೈಯಲ್ಲಿ ಚೀಲ ಹಿಡಿದು ಹೊರಟರೆಂದರೆ ವಾಪಾಸು ಚೀಲ ಫುಲ್ ಕೋಳಿ ಗ್ಯಾರಂಟಿ. ಅವುಕ್ಕೆ ಕೋಳಿಯೇ ಆಗಬೇಕೆಂದಿಲ್ಲ ಏನಾದರೂ ಆದಿತು. ಮೊನ್ನೆ ನಮ್ಮ ಗ್ರಾಮಪಂಚಾಯಿತಿಯ ಗಿಡ್ಡ ಗೊಣಗುತ್ತಿದ್ದ. ನಮ್ಮ ಪಂಚಾಯ್ತಿಗೆ ಬರುತ್ತಿದ್ದ ಬೆಕ್ಕು ಪತ್ತೆಯೇ ಇಲ್ಲ ಮಾರಾಯರೇ", ಎಂಬಲ್ಲಿಗೆ ವಿಶೇಷ ಅಡುಗೆಯಾಗಿ ಅಲ್ಲಿಯೇ ಪಕ್ಕದಲ್ಲಿ ಡರ್ ತೇಗಿನ ಮುಖಾಂತರ ಹೊರಡುತ್ತಿದೆ ಬೆಕ್ಕು.

ಕೊಂದ ಪಾಪ ತಿಂದು ಪರಿಹಾರವಂತೆ ನಾವು ಅದನ್ನೆಲ್ಲಾ ಕಂಡೂ ಕಾಣದಂತೆ ಇರುವುದು ಕ್ಷೇಮ, ಹೇಳಲು ಹೋದರೆ ವಿವಾದವಾದರೂ ಆದೀತೆ. ಹಾಗಾಘಿ ನಾವು ನೀವೆಲ್ಲ ಯಥಾಪ್ರಕಾರ " ಆಹಾ ಎಂತಹ ಹಸಿರು, ಎಂಥಹಾ ಇಬ್ಬನಿ" ಎನ್ನುತ್ತಾ ಇದ್ದುಬಿಡೋಣ, ಏನಂತೀರಿ?.