Saturday, December 22, 2012

ಮಲ್ಲು ಎಂಬ ಜಾತಿಯಲ್ಲದ ಜಾತಿ ನಾಯಿ

ಅತ್ತ ಜಾತಿಯದೇ ಅಲ್ಲ ಹಾಗಂತ ಕಂತ್ರಿಯಂತೂ ಅಲ್ಲವೇ ಅಲ್ಲ ಎಂಬಂಥಹ ಜಾತಿಗೆ ಸೇರಿದ್ದು ನಮ್ಮ ಮನೆಯ ನಾಯಿ ಮಲ್ಲು. ಅಯ್ಯ ಅದೇಂತಾ ಹೆಸರು ಮಲ್ಲು ಅಂತ ನಾಯಿಯದು ಅಂತ ನಿಮಗೆ ಅನ್ನಿಸಬಹುದು. ನಮ್ಮ ಮನೆಯಲ್ಲಿ ನಾವು ಎಲ್ಲಿಂದ ಯಾರ ಮನೆಯಿಂದ ಪ್ರಾಣಿಗಳನ್ನು ತಂದಿರುತ್ತೇವೆ ಎನ್ನುವುದರ ಮೇಲೆ ಅದರ ಹೆಸರು ನಿಕ್ಕಿಯಾಗುವ ಸಂಪ್ರದಾಯ ಲಾಗಾಯ್ತಿನಿಂದಲೂ. ಮಲ್ಲಕ್ಕಿ ಶ್ರೀಪಾದಣ್ಣನ ಮನೆಯಿಂದ ತಂದಂತಹ ನಾಯಿ ಇದಾದ್ದರಿಂದ ಶ್ರೀಪಾದ ಎಂದು ಹೆಸರಿಟ್ಟರೆ ಒದೆ ತಿನ್ನಬೇಕಾದೀತೆಂದು ಮಲ್ಲಕ್ಕಿ ಹೆಸರನ್ನು ಕತ್ತರಿಸಿ ಮಲ್ಲು ಎಂದು ನಾಮಕರಣ ಮಾಡಲಾಗಿದೆ. ಇಂತಿಪ್ಪ ಈ ನಮ್ಮ ಮಲ್ಲು ಈಸ ರೈಸ್ ಗಿರಾಕಿ. ಬಹುಶಃ ಒರಿಜಿನಲ್ ಈಸ ಕೂಡ ಇಷ್ಟು ರೈಸ್ ಆಗುವುದನ್ನು ನಾನು ನೊಡಿಲ್ಲ( ಈಸ ಪದ ಗೊತ್ತಿಲ್ಲದಿದ್ದರೆ ನನ್ನ ಯಾವುದೋ ಹಿಂದಿನ ಬ್ಲಾಗ್ ಓದಬೇಕು, ಇರಲಿ ಈಸ ಎಂದರೆ ಮುದ್ದು ಅಂತ) ನಮ್ಮ ಮಲ್ಲು ಮನುಷ್ಯರೊಡನೆ ಸ್ನೇಹಜೀವಿ, ಜಾನುವಾರು ಪ್ರಾಣಿಗಳನ್ನು ಕಂಡರೆ ಆಗದು. ವಾರಕ್ಕೊಂದೆರಡು ಹಾವುಗಳನ್ನು ಇದು ಸಾಯಿಸಿಬಿಡುತ್ತದೆ. ಒಂಥರಾ ಬೆಸರದ ಸಂಗತಿಯಾದರೂ ಅದು ಬಿಡದು ತನ್ನ ಚಟವನ್ನು ನಾವು ಬಿಡಲಾರೆವು ಮಲ್ಲುವನ್ನು. ಈಗ ಇದ್ದಕ್ಕಿದಂತೆ ಮಲ್ಲುವಿನ ಕುರಿತು ಯಾಕೆ ಬರೆದೆ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮಲ್ಲುವಿಗೆ ತನ್ನ ಮುಖವನ್ನು ನಿಮಗೆ ತೊರಿಸುವ ಅದೃಷ್ಟ ಮಜ ಮಾಡ್ಲಿ ಬಿಡಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

ಯಾರು ಎಷ್ಟೇ ಹಾರಾಡಿದರೂ  ಕೂಗಾಡಿದರೂ ಒಂದಲ್ಲ ಒಮ್ದು ದಿನ ಈ ದೇಹವನ್ನು ಬಿಡಲೇಬೇಕು. ಗೊತ್ತಿಲ್ಲದ ಗುರಿಯಿಲ್ಲದ ಪಯಣ ಅದು. ಹುಟ್ಟಿನ ಮೊದಲು ಸತ್ತ ನಂತರ ದ ವ್ಯವಹಾರಗಳು ಏನು ಎತ್ತ ಎಂಬುದು ಎಲ್ಲವೂ ಕಾಲ್ಪನಿಕವೇ. ಶಾಸ್ತ್ರ ಪುರಾಣ ಏನೇ ಹೇಳಲಿ ಅದು ಮತ್ತೆ ಮನುಷ್ಯ ಸೃಷ್ಟಿಯೇ. ಮತ್ತು ನಂಬಿಕೆಯ ಅಧಾರದ ಮೇಲೆ ನಿಂತಿದೆ. ಬಿಡಿ ಅವುಗಳನ್ನೆಲ್ಲಾ ಅದರ ಪಾಡಿಗೆ ಬಿಟ್ಟು ನಾವೂ ಒಂದು ಸುಲಭ ಉಪಾಯದ ಮೂಲಕ ಡೆತ್ ಅನುಭವ ಪಡೆದುಕೊಳ್ಲೋಣ. ಹೀಗೊಂದು ಸುಲಭ ನಂಬಿಕೆಯ ವ್ಯಾಯಾಮ ನಿಮಗೆ ನಿಮ್ಮಲ್ಲಿ ಅಡಗಿರುವ ಜೀವ ಭಯ, ಟೆನ್ಷನ್, ಖಾಯಿಲೆ ಭಯ ಹೀಗೆ ಎನೆಲ್ಲಾ ಕಪೋಲಕಲ್ಪಿತಗಳು ಇರುತ್ತವೆಯೋ ಅವನ್ನೆಲ್ಲಾ ಓಡಿಸಿ ವಾಸ್ತವಗಳನ್ನು ಮಾತ್ರಾ ನಿಮ್ಮ ಮಿದುಳು ಯೋಚಿಸುವಂತೆ ಮಾಡುತ್ತದೆ. ಅಷ್ಟಾದ ಮೇಲೆ ದಿನಪೂರ್ತಿ ಜಿಂಗಲಾಲ.
ನಿಮಗೀಗ ನಡು ವಯಸ್ಸು ಅಂತಿಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಒಂದೆರಡು ಸಾವಿನ ಮನೆಯನ್ನು ನೋಡಿರುತ್ತಿರಿ. ಅವೆಲ್ಲಾ ನೆನಪಿರುತ್ತದೆ. ಈಗ ಅದನ್ನು ನೀವು ಒಮ್ಮೆ ಅನುಭವಿಸಿ.  ಆರಾಮವಗಿ ಅಂಗಾತ ಮಲಗಿ. ಆಳವಾದ ಉಸಿರೆಳೆದುಕೊಳ್ಳಿ. ಕಾಲಿನ ಕೊಟ್ಟ ಕೊನೆಯ ಬೆರಳನ್ನು ನೆನಪಿಸಿಕೊಳ್ಳಿ. ನಂತರ ಪಕ್ಕದ್ದು ಆಮೇಲೆ ಅಂಗಾಲು ನಂತರ ಕಾಲು ಹಾಗೆಯೇ ಮೇಲೆ ತೊಡೆ ನಂತರ .....  .... ಮತ್ತೆ ಹೊಟ್ಟೆ ಹೃದಯ ಕುತ್ತಿಗೆ ಮಿದುಳಿನೆಲ್ಲಾ ನಿಮ್ಮ ಮನಸ್ಸನ್ನು ಸುತ್ಟಾಡಿಸಿ ಕುಂಕುಮ ಪಾಯಿಂಟ್( ಮೂಗಿನ ಮೇಲೆ) ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅಲ್ಲಿಗೆ ನಿಮ್ಮ ಮನಸ್ಸು ಬಂತು ಅಂತಾದರೆ ದೇಹವನ್ನು ಮರೆತಿರುತ್ತದೆ. ಮರೆತಿಲ್ಲದಿದ್ದರೂ ಪರವಾಗಿಲ್ಲ ಒತ್ತಾಯಪೂರ್ವಕವಾಗಿ ನೆನಪಿಸಿಕೊಳ್ಳಬೇಡಿ. ನೆನಪಿಸಿಕೊಂಡರೂ ಪರವಾಗಿಲ್ಲ ಯಾವುದು ನೆನಪಾಯಿತೋ ಮತ್ತೆ ಅಲ್ಲಿಂದ ಮುಂದುವರೆಸಿ ಅಂತಿಮವಾಗಿ ಕುಂಕುಮ ಪಾಯಿಂಟ್ ಗೆ ಬಂದಮೇಲೆ ಕಲ್ಪಿಸಿಕೊಳ್ಳಿ "ನನ್ನ ದೇಹ ಸಾವನ್ನು ಹೊಂದಿದೆ" ನಂತರ ನಿಮ್ಮ ಸಾವು ನಿಮ್ಮ ಹತ್ತಿರವಿದ್ದವರಿಗೆ ತಿಳಿದಂತೆ ಅದರ ಪರಿಣಾಮ ನಿಮ್ಮ ಮಿದುಳಿಗೆ ತೋಚಿದಂತೆ ಕಲ್ಪಿಸುತ್ತಾ ಸಾಗಿ. ನಿಮ್ಮ ದೇಹದ ಪಯಣ ಚಿತಾಗಾರದವರೆಗೂ ಸಾಗಲಿ ಅಲ್ಲಿ ಭಸ್ಮವಾಗಲಿ. ಇವೆಲ್ಲಾ ಅನುಭವ ಕಲ್ಪನೆಗಳ ಮೇಲಷ್ತೇ ಸಾಗುವುದರಿಂದ ನಿಮ್ಮ  ಮಿದುಳು ತಮಾಷೆಯಾಗಿ ಒಂದು ಆಟದಂತೆ ಇವನ್ನೆಲ್ಲಾ ಗ್ರಹಿಸುತ್ತದೆ. ಸರಿ ಸುಮಾರು ಅರ್ದ ಗಂಟೆಯ ನಂತರ ಕಣ್ಣು ಬಿಡಿ. ನಿಮ್ಮ ಮನಸ್ಸು ಉಲ್ಲಾಸದತ್ತ ಸಾಗುತ್ತದೆ. ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ತನ್ನಷ್ಟಕ್ಕೆ ಗೋಚರಿಸುತ್ತದೆ.
ಇಂತಿ ನಿಮ್ಮ -  ಶಾಸ್ರ ತಿಳಿಯದ ಶಾಸ್ತ್ರಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

Sunday, December 16, 2012

ಉತ್ಸಾಹದ ಚಿಲುಮೆ ಆರಂಭವಾಗುತ್ತದೆ.

ನಲವತ್ತು ದಾಟಿದಮೇಲೆ ಆರೋಗ್ಯದತ್ತ ಮನಸ್ಸು ಹರಿಯತೊಡಗುತ್ತದೆ. ಅತ್ತ ಯುವಕರೂ ಅಲ್ಲ ಇತ್ತ ಮುದುಕರೂ ಅಲ್ಲ, ಜವಾಬ್ದಾರಿ ಹೆಚ್ಚು ದೇಹ ಶಕ್ತಿ ಕೊಂಚ ಕಡಿಮೆ ಹೀಗೆಲ್ಲಾ ಇರುವ ಕಾಲದಲ್ಲಿ ಟೆನ್ಷನ್ ಎಂಬ ವ್ಯಾಧಿ ದೇಹವನ್ನು ತಿನ್ನತೊಡಗುತ್ತದೆ. ಆವಾಗ ಪೂಜೆ ದೇವರ ಮೊರೆ ಧಾರ್ಮಿಕ ಕಾರ್ಯಕ್ರಮ ಜಾತಕ ಹಿಡಿದು ತಿರುಗುವುದು ಮುಂತಾದ ಸಲಹೆಕಾರರ ಸಲಹೆಗಳೆಲ್ಲಾ ಅನುಷ್ಠಾನ ಗೊಳ್ಳಲಾರಂಬಿಸುತ್ತವೆ. ಒಂದಿಷ್ಟು ಸಕ್ಸಸ್ ಮತ್ತೊಂದಿಷ್ಟು ತೋಪು. ಬಿಡಿ ಅವೆಲ್ಲಾ ಬಹುಪಾಲು ಎಲ್ಲರ ಜೀವನದಲ್ಲಿ ಇದ್ದದ್ದೇ, ಈಗ ಏಕ್ ದಂ ಬೇರೆ ವಿಷಯದತ್ತ ಹೊರಳೋಣ,
ಹೇಗೂ ಸ್ನಾನ ನಿತ್ಯ ಮಾಡುತ್ತಿರಿ ನೀವು, ಅಲ್ಲಿ ನೀವೊಬ್ಬರೆ ಹೆಚ್ಚಾಗಿ ಇರುವುದು. ಗುಂಪಿನ ಸ್ನಾನ ಎಲ್ಲೋ ವರ್ಷದಲ್ಲಿ ಒಮ್ಮೊಮ್ಮೆ ಅಷ್ಟೆ ಹಾಗಾಗಿ ಅದನ್ನು ಬಿಟ್ಟಾಕಿ ಒಂಟಿ ಸ್ನಾನದ ವಿಷಯದತ್ತ ಹೊರಳೋಣ. ಬಿಸಿ ನೀರಿನ ಬೆಚ್ಚನೆಯ ಸ್ನಾನಕ್ಕಿಂತ ತಣ್ನೀರಿನಲ್ಲಿ ಮಿಂದು ಬೆಚ್ಚಗಾಗುವುದು ಉತ್ತಮ ಎಂದು ನಾನು ನಿಮಗೆ ಹೊಸದಾಗಿ ಹೇಳಿಕೊಡಬೇಕಾಗಿಲ್ಲ, ಇರಲಿ ಯಾವುದೋ ಒಂದು ನೀರಿನ ಸ್ನಾನ ಮುಗಿದಮೇಲೆ ಕೊನೇಯ ಚೊಂಬಿನ ನೀರು ತಲೆಯಮೇಲೆ ಸುರಿದುಕೊಳ್ಳಿ ಆ ನೀರು ಇಳಿದುಹೋಗಲು ಆರಂಬಿಸುತ್ತಿದ್ದಂತೆ ನೇರವಾಗಿ ನಿಲ್ಲಿ ಮುಖವೂ ಸೆಟೆದುಕೊಳ್ಳುವಷ್ಟು ನೇರ, (ಅಪಾರ್ಥ ಬೇಡ ಮೈಮೇಲೆ ಬಟ್ಟೆ ಇರಬಾರದು) ಈಗ ನಿಮ್ಮ ಎರಡು ಪಾದಗಳನ್ನು ಕೊಂಚ ಅಗಲ ಮಾಡಿ, ಅಂದರೆ ನಿಮ್ಮ ದೇಹದ ಭಾರ ಎರಡು ಕಾಲುಗಳ ಮೇಲಿದ್ದರೂ ನಡು ಮಧ್ಯೆ ಇರುವ ಅನುಭವವಾಗುತ್ತದೆ. ಆಗ ಕುತ್ತಿಗೆಯನ್ನು ಮಾತ್ರಾ ಬಗ್ಗಿಸಿ ನೋಡಿ, ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ಅವಸ್ಥೆ.  ಹೆಬ್ಬೆರಳು ಸಂಪೂರ್ಣ ಕಾಣಿಸುತ್ತದೆ ಎಂದರೆ ನಿಮಗೆ ಯಾವ ಧ್ಯಾನ ಯೋಗ ದ ಅವಶ್ಯಕತೆಯಿಲ್ಲ ಆರೋಗ್ಯ ಸಾಕಷ್ಟಿದೆ.  ಹೆಬ್ಬರಳ ಉಗುರು ಮಾತ್ರಾ ಕೊಂಚ ಕಾಣಿಸುತ್ತಿದೆ ಎಂದರೆ ನಿಮ್ಮ ದೇಹದ ಸಮಸ್ಯೆ ಈಗಷ್ಟೇ ಆರಂಭ. ಇಲ್ಲ ನನಗೆ ಪಾದವೇ ಕಾಣಿಸುತ್ತಿಲ್ಲ ನನ್ನ  ಹೊಟ್ಟೆ  ಮಾತ್ರಾ ಕಾಣಿಸುತ್ತಿದೆ ಎಂದಾದರೆ ನಿಮ್ಮ ಆರೋಗ್ಯ ಹದೆಗೆಟ್ಟಿದೆ ಎಂದರ್ಥ. ಸರಿ ಸರಿ ಸಮಸ್ಯೆ  ಗೊತ್ತಾಯಿತು ಪರಿಹಾರವೇನು ಎಂದಿರಾ. ಸಿಂಪಲ್ ಹಾಗೆಯೇ ಮತ್ತೆ ಕುತ್ತಿಗೆ ನೇರಮಾಡಿ ಕಣ್ಮುಚ್ಚಿ ಹೀಗೆ ಹೇಳಿ " ಮುಂದಿನ ತಿಂಗಳು ಸದರಿ ದಿನಾಂಕದಂದು ನಾನು ಕುತ್ತಿಗೆ ಬಗ್ಗಿಸಿದಾಗ ನನ್ನ ಕಾಲಿನ ಹೆಬ್ಬೆರಳು ಕಾಣುವಾಂತಾಗಲಿ" ಹೀಗೆ ನಿತ್ಯ ಸ್ನಾನ ಮಾಡಿದ ಮೇಲೆ ಬಚ್ಚಲಲ್ಲಿಯೇ ನಿಂತು ಇಷ್ಟೆಲ್ಲಾ ಮಾಡಿ ಹೇಳುತ್ತಾ ಸಾಗಿ. ಒಂದು ತಿಂಗಳ ನಂತರ ಅಚ್ಚರಿ ನೋಡಿ, ನಿಮ್ಮ ಹೊಟ್ಟೆ ವಾಪಾಸು ಹೋಗಿರುತ್ತದೆ ಮತ್ತು ಅದೇನೋ ಅದಮ್ಯ ಉತ್ಸಾಹದ ಚಿಲುಮೆ ಆರಂಭವಾಗುತ್ತದೆ. ಆಗಿಲ್ಲವಾದರೆ ನಿಮ್ಮ ಕ್ರಮದಲ್ಲಿ ತುಸು ವ್ಯತ್ಯಯವಾಗಿದೆ ಅಂತ ಅರ್ಥ. ನನಗೆ ಫೋನಾಯಿಸಿ ಸರಿಪಡಿಸುತ್ತೇನೆ  .