Thursday, December 25, 2008

ಬಿಗ್ನೋನಿಯಾ ಎಂಬ ಮಾಂತ್ರಿಕ ಹೂವು






ಹೂವುಗಳ ಅಂದಕ್ಕೆ ಅದರ ಪರಿಮಳಕ್ಕೆ ಮನಸೋಲದವರಿಲ್ಲ. ಸಹಸ್ರಾರು ಜಾತಿಯ ಹೂವುಗಳ ನೂರಾರು ತರಹದ ಅದರ ಪರಿಮಳ ಆಹಾ ಸೂಪರ್. ಕಣ್ಣಿಗೆ ಚಂದದ ಜತೆ ಪರಿಮಳ ಸೂಸುವ ಮಲ್ಲಿಗೆ ಜಾಜಿ ಸಂಪಿಗೆ ಗುಲಾಬಿ ಮುಂತಾದವುಗಳಾದರೆ ಡಬ್ಬಲ್ ಪ್ರಾಫಿಟ್. ಪರಿಮಳಯುಕ್ತ ಮಲ್ಲಿಗೆ ಮುಂತಾದ ಹೂವುಗಳು ಶೃಂಗಾರ ರಸಕ್ಕೂ ಸೈ. ಹೀರೋಯಿನ್ ಗೆ ಒಂದೇ ಒಂದು ಮಲ್ಲಿಗೆ ದಂಡೆ ಮುಡಿಸಿದರೆ ಅಲ್ಲಿಯೇ ಪಟಾಯಿಸಿಕೊಳ್ಳಬಹುದು ಎಂಬುದು ಸಿನೆಮಾದವರ ನಂಬಿಕೆ. ಅದೇನು ತೀರಾ ಸುಳ್ಳಲ್ಲ ಮಲ್ಲಿಗೆ ಜಾಜಿ ಮುಂತಾದ ಹೂವುಗಳಿಗೆ ಮನಸ್ಸನ್ನು ಶೃಂಗಾರಕ್ಕೊಯ್ಯುವ ತಾಕತ್ತಿದೆ.
ಇನ್ನು ಪರಿಮಳ ರಹಿತ ಆದರೆ ನೊಡಲು ಸುಂದರವಾದ ಹೂವುಗಳೂ ನೂರಾರು ಇವೆ. ದಾಸವಾಳ ಮುಂತಾದವುಗಳು ಆ ವರ್ಗಕ್ಕೆ ಸೇರುತ್ತವೆ. ಅವು ಹೂವನ್ನು ಯಾಕೆಬಿಡುತ್ತವೆ ಎನ್ನುವುದೂ ಇಲ್ಲಿಯವರೆಗೆ ಗೊತ್ತಿಲ್ಲ. ಕಾರಣ ಹಲವು ಜಾತಿ ತನ್ನ ಬೀಜದ ಮೂಲಕ ವಂಶಾಭಿವೃದ್ಧಿಗಾಗಿ ದುಂಬಿಯನ್ನು ಆಕರ್ಷಿಸಲು ಹೂವುಬಿಡುತ್ತವೆ. ತನ್ಮೂಲಕ ಕಾಯಿ ಫಲಿತಗೊಳ್ಳುತ್ತವೆ. ಆದರೆ ದಾಸವಾಳ ಗುಲಾಬಿ ಮಲ್ಲಿಗೆ ಮುಂತಾದವುಗಳು ಕಾಯಿಇಡುವುದೇ ಇಲ್ಲ. ಗೆಲ್ಲಿನ ಮೂಲಕವಷ್ಟೇ ವಂಶಾಭಿವೃದ್ಧಿ. ಹಾಗಾದರೆ ಅವು ಹೂವು ಬಿಡುತ್ತವೇಕೆ?. ನಾಗೇಶ ಹೆಗಡೆಯವರನ್ನೇ ಕೇಳಬೇಕು. ಮನುಷ್ಯನ ಜಾತಿಯಲ್ಲಿ ಗಂಡು ಎಂಬುದಿದೆ ಅದು ಹೆಣ್ಣಿಗಾಗಿ ಹಪಹಪಿಸುತ್ತಿರುತ್ತದೆ ತಾನು ಅರಳಿ ಅವನ ಕೈಗೆ ಸಿಕ್ಕಿ ಅವನಮೂಲಕ ಅವಳ ಮುಡಿಸೇರಿ ಒಂದೇ ಒಂದು ಡ್ಯುಯೆಟ್ ಹಾಡುವಂತಾಗಲಿ ಎಂದು ಯಾವ ಹೂವು ಬಿಟ್ಟಿರಲಿಕ್ಕಿಲ್ಲ. ಸರಿ ಹಾಗಾದರೆ ಹೂವು ಬಿಟ್ಟಿದ್ದ್ಯಾಕೆ?. ಸುಮ್ಮನೆ ಅರಳಿ ಮುದುಡುವುದ್ಯಾಕೆ? ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗದು. ಆದರೂ ಒಂದಾನೊಂದು ಕಾಲದಲ್ಲಿ ಅವು ಕಾಯಾಗುತ್ತಿದ್ದವು ಕಾಲಾನಂತರ ಪ್ರಕೃತಿಯಲ್ಲಿನ ಏರುಪೇರು ಅವುಕ್ಕೆ ಕಾಯಾಗುವ ಸಂದರ್ಭವನ್ನು ತಪ್ಪಿಸಿತು. ಆದರೆ ಗಿಡಗಳ ಯೋಚನಾ ಕೋಶಕ್ಕೆ ಅವು ರವಾನೆಯಾಗಿಲ್ಲ. ಅವುಕ್ಕೆ ಅದು ತಿಳಿಯದೆ ಇನ್ನೂ ಹೂ ಬಿಡುತ್ತಲೇ ಇವೆ ಅಂತ. ಇರಲಿ ಯಾವ ಕಾರಣಕ್ಕಾದರೂ ಹೂ ಬಿಡಲಿ ನಾವಂತೂ ಅದರಿಂದ ಮಜ ತೆಗೆದುಕೊಳ್ಳೋಣ.
ಇಂತಹ ಕಾಯಾಗದ ಆದರೆ ಚಂದನೆಯ ಗೊಂಚಲು ಗೊಂಚಲು ಹೂ ಬಿಡುವ ವರ್ಗಕ್ಕೆ ಈ ಬಿಗ್ನೋನಿಯಾ ಸೇರುತ್ತದೆ. ದಕ್ಷಿಣ ಅಮೇರಿಕಾ ಇದರ ಮೂಲ. ಅಲ್ಲಿ ಕಾಡಿನಲ್ಲಿ ಕಾಲಾಬಾಷ್ ಮರಗಳಿಗೆ ಇವು ಸುತ್ತಿ ಬೆಳೆಯುತ್ತಂತೆ. ಇದರ ವಂಶ ಫಿಗ್ವರ್ಟ್ ಅಂತೆ. ಹೂ ಅರಳಿದಾಗ ಇಡೀ ಕಾಡು ಸುಂದರವಾಗಿ ಕಾಣಿಸುತ್ತದೆಯಂತೆ. ಅದ್ಯಾರೋ ಪುಣ್ಯಾತ್ಮರು ಒಂದೆರಡು ಗೆಲ್ಲನ್ನು ನಮ್ಮ ಮಲೆನಾಡಿಗೆ ತಂದರಿರಬೇಕು. ಹಾಗಾಗಿ ಜನವರಿಯಿಂದ ಏಪ್ರಿಲ್ ವರೆಗೆ ಹಲವಾರು ಮನೆಯ ಹೊರಗೆ ಬಿಗ್ನೋನಿಯಾ ನೋಡುಗರನ್ನು ಸೆಳೆಯುತ್ತದೆ. ಇದು ಸಿಹಿಯಾದ ಮಕರಂದವನ್ನು ಹೊಂದಿದ್ದು ಆದರೆ ಕಹಳೆಯಾಕಾರದ ಪಕಳೆಯನ್ನು ಹೊಂದಿರುವುದರಿಂದ ಪರಾಗಸ್ಪರ್ಷವಾಗಲಾರದು. ಅಷ್ಟುದ್ದ ಕೊಕ್ಕಿನ ಹಕ್ಕಿಗಳು ನಮ್ಮಲ್ಲಿ ಇಲ್ಲ. ಈ ಹೂವಿನ ತವರೂರು ದಕ್ಷಿಣ ಅಮೆರಿಕಾದಲ್ಲಿ ಕಾಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಒಂದೇ ಒಂದು ಗೆಲ್ಲು ಮನೆಯೆದುರು ನೆಟ್ಟರೆ ಕಣ್ಣಿಗೆ ಹಬ್ಬವಂತೂ ಖಂಡಿತ. ನೀವೂ ಪ್ರಯತ್ನಿಸಿ. ಹ್ಯಾಪಿ ಕ್ರಿಸ್ ಮಸ್

Monday, December 22, 2008

ದೇವರೆಂಬ ದೇವರು

ನಿಜವಾಗಿಯೂ ದೇವರು ಎಂಬುವವನು ಆಕಾಶದಲ್ಲಿ ಇರಬೇಕಿತ್ತು. ಆತ ಪಾಪ ಪುಣ್ಯಗಳನ್ನು ಗುಣಿಸಿ ಭಾಗಿಸಿ ಟೋಟಲ್ ನೀಡಬೇಕಿತ್ತು. ಅಂತ ನನಗೆ ಬಹಳ ಸಾರಿ ಅನ್ನಿಸುತ್ತದೆ. ಸ್ವರ್ಗ ನರಕ ದೇವರು ದೇವತೆಗಳು ರಾಕ್ಷಸರು ಮುಂತಾದ ಕಲ್ಪನೆ ವಾಸ್ತವವಾಗಿದ್ದರೆ ಅದರ ಮಜವೇ ಬೇರಿತ್ತು ಅಂತ ಬಹುಪಾಲು ಜನರಿಗೆ ಅನ್ನಿಸದೇ ಇರದು. ಈಗ ನಾವು ಕೇವಲ ಜೀವನಕ್ಕಾಗಿ, ಸೋಲು ಗೆಲುವಿಗಾಗಿ ದೇವರೆಂಬ ದೇವರಿಗೆ ನೂರಾರು ತರಹದ ಕಲ್ಪನೆಯನ್ನಿಟ್ಟುಕೊಂಡು ಆನಂತರ ಒಳ್ಳಯದೇ ಆಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಒದ್ದಾಡುವುದಕ್ಕಿಂತ ಹಾಗೊಂದು ಸತ್ಯ ಇದ್ದಿದ್ದರೆ ಆಹಾ ಏನು ಮಜಾ ಏನು ಮೋಜು. ಘಟೋತ್ಕಚ ಸಿನೆಮಾದಲ್ಲಿ ಶ್ರೀ ಕೃಷ್ಣ ಪ್ರತ್ಯಕ್ಷನಾದಂತೆ ನಮ್ಮೆದುರು ಆಕಾಶದಲ್ಲಿ ಗಿರಿಗಿರಿ ಚಕ್ರ ತಿರುಗಿಸುತ್ತಾ ಮುಗಳ್ನಗುತ್ತಾ " ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ವರವನ್ನು ಕೇಳಿಕೋ" ಎಂದು ಹೇಳುವಂತಿದ್ದರೆ, ಆಹಾ ಅದರ ಮಜ ಹೇಗೆ ವರ್ಣಿಸಲಿ?. ಈಗ ನಾವು ಸಿನೆಮಾದಲ್ಲಷ್ಟೇ ನೋಡಿ ಹಾಗೆ ಕಲ್ಪಿಸಿಕೊಳ್ಳಬೇಕಿದೆ. ಅಂದು ಹಿರಣ್ಯ ಮತ್ತು ಪ್ರಹ್ಲಾದರ ಮಧ್ಯೆಯ ಗಲಾಟೆಯಲ್ಲಿ ಡಣಾರ್ ಎಂದು ಪ್ರತ್ಯಕ್ಷನಾಗಿ ಅಪ್ಪನನ್ನು ಮುಕ್ತಿಗೊಳಿಸಿದಂತೆ ಇಂದು "ದೇವಾ....." ಎಂದು ಕೈಮುಗಿದು ಭಕ್ತಿಯ ರಸದಲ್ಲಿ ಒಂದು ಹಾಡು ಒಗೆದಿದ್ದರೆ ದಣ್ ದಣಾ ದಣ್ ಎಂದು ಮೇಲಿಂದ ಇಳಿದು ಬರುವಂತಿದ್ದರೆ. ಆಹಾ ಬಿಡಿ ಬಿಡಿ ರೇ ಪ್ರಪಂಚದ ಮಾತುಗಳನ್ನು ಎಷ್ಟು ಹೇಳಿದರೂ ಅಷ್ಟೆ. ಇಲ್ಲ ಆವಾಗಿನಷ್ಟೇ ಭಕ್ತಿಯಿಂದ ಪ್ರಾರ್ಥಿಸಿದರೆ ಇಂದೂ ದೇವರು ಪ್ರತ್ಯಕ್ಷನಾಗುತ್ತಾನೆ ಅಂತ ಪರಮ ಭಕ್ತಿಯ ಜನರು ಹೇಳಬಹುದು. ಇಲ್ಲ ಕಣ್ರಿ ಈಗ ಹತ್ತು ವರ್ಷದ ಹಿಂದೆ ಸೊರಬದ ಹತ್ತಿರ ಒಬ್ಬಾತ ಇಸ್ಪೀಟಿನಲ್ಲಿ ಸೋತು ಸುಣ್ಣವಾಗಿ ದೇವಸ್ಥಾನಕ್ಕೆ ಬಂದು "ಹೇ ಈಶ್ವರಾ... ತಂದೆ.. ನನಗೆ ಒಂದಿಷ್ಟು ಹಣ ಕೊಡೋ " ಎಂದು ವಿವಿಧ ಭಂಗಿಯಲ್ಲಿ ಬೆಳಗಿನವರೆಗೂ ಬೇಡಿ ಕೊನೆಗೂ ಈಶ್ವರ ಯಾವ ರೂಪದಲ್ಲಿಯೂ ಪ್ರತ್ಯಕ್ಷವಾಗದಾಗ ಅಲ್ಲಿಯೇ ದೇವಸ್ಥಾನದ ತೊಲೆಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದ. ದೇವರು ಪ್ರತ್ಯಕ್ಷನಾಗಲೇ ಇಲ್ಲ. ಮೊನ್ನೆ ಮೊನ್ನೆ ಟಿವಿಯಲ್ಲಿ ನೀವು ನೋಡಿರಬಹುದು ಒಬ್ಭಾತ ಬೇಡರ ಕಣ್ಣಪ್ಪನಂತೆ ತನ್ನ ಕಣ್ಣನ್ನೇ ತಾನು ಕಿತ್ತು ದೇವರಿಗೆ ಅರ್ಪಿಸಿದ್ದ . ಆದರೂ ದೇವರು ಇಳಿದು ಬರಲಿಲ್ಲ, ಟಿವಿ೯ ನವರು ಬಂದು "ಹೀಗೂ....ಉಂಟೇ..." ಎನ್ನುತ್ತಾ ಕೈಕುಣಿಸಿದರಷ್ಟೇ. ಆವತ್ತು ಕಣ್ಣಪ್ಪನಿಗಾದರೆ ಒಂದು ನೀತಿ ಇವತ್ತು ಈ ಭಕ್ತನಿಗಾದರೆ ಇನ್ನೊಂದು ನೀತಿ....!. ಇವೆಲ್ಲಾ ಘಟನೆಗಳು ನಡೆದಮೇಲೆ ನನಗೆ ನಿಚ್ಚಳ, ಅವತ್ತಿನ ಕಾಲದಲ್ಲಿ ಕರೆದೆ ಹಾಗೆ ಕರೆದರೂ ದೇವರು ಭುವಿಗೆ ಬರುವುದಿಲ್ಲ ಕಾರಣ ಆತ ಇಲ್ಲ.. ಆದರೂ ಆತ ಇರಬೇಕಿತ್ತು.....! ಅಂತ ನನಗೆ ದಿನನಿತ್ಯ ಮೂರ್ನಾಲ್ಕು ಗಂಟೆಗಳ ಕಾಲ ಪೂಜೆ ಮಾಡುವವರನ್ನು ನೋಡುವಾಗೆಲ್ಲಾ ಹಾಗೆ ಅನ್ನಿಸುತ್ತದೆ. ಆದರೇನು ಮಾಡುವುದು. ಎಲ್ಲಾ ನಮ್ಮ ಕೈ ಯಲ್ಲಿ ಇಲ್ಲವಲ್ಲ.

Sunday, December 21, 2008

ಎರಡು ಬ್ಲಾಗ್ ಗಳು

ಬಾಳೆಹೊಳೆ ಪೆಜತ್ತಾಯರು ನನ್ನ ಬ್ಲಾಗ್ ಬರಹ ಪಬ್ಲಿಶ್ ಆದಾಗಲೆಲ್ಲಾ ಫೋನ್ ಮಾಡಿ ಸರಿತಪ್ಪುಗಳ ಕುರಿತು ವಿಮರ್ಶೆ ಮಾಡುತ್ತಾರೆ. ಅಲ್ಲಿಯೇ ಕಾಮೆಂಟ್ ಮಾಡಲು ನನಗೆ ಆಗದು ಹಾಗಾಗಿ ಪೋನ್ ಮಾಡುವುದು ಎಂಬುದು ಅವರ ಆಂಬೋಣ. ಹೀಗೆ ಅವರು ಪೋನ್ ಮಾಡಿದಾಗಲೆಲ್ಲಾ ನಾನು ಒಳಗೊಳಗೆ ಖುಷಿಯಾಗಿಬಿಡುತ್ತೇನೆ.ಇರಲಿ ಅದು ಹಾಗೆಯೇ ನಮ್ಮದೊಂದು ಬರಹ ಮತ್ತೊಬ್ಬರಿಗೆ ಇಷ್ಟವಾಯಿತು ಅಂದರೆ ಎಲ್ಲ ಬರಹಗಾರರ ಕಥೆಯೂ ಹಾಗೆಯೇ. ಅರವತ್ತೆರಡರ ಹರೆಯದಲ್ಲಿ ಅವರ ಓದುವಾಸಕ್ತಿ ಹಾಗೂ ಜೀವನೋತ್ಸಾಹ ನಾನು ಪ್ರತೀ ಕ್ಷಣಕ್ಕೂ ಬಸಿದುಕೊಳ್ಳಲು ಕಾತರಿಸುತ್ತೇನೆ.
ಇಂದು ಬ್ಲಾಗ್ ಲೋಕ ಬಹು ವಿಸ್ತಾರವಾದ ಒಳಹರಿವನ್ನು ಹೊಂದಿದೆ.ಇಂದು ಶ್ರದ್ಧೆಯಿಂದ ಆರ್ಥಿಕ ಪ್ರತಿಫಲಾಪೇಕ್ಷೆ ಇಲ್ಲದೆ ನಿಗದಿತ ಸಮಯಕ್ಕೆ ಬ್ಲಾಗ್ ಅಪ್ಲೋಡ್ ಮಾಡುವ ನೂರಾರು ಬರಹಗಾರರು ಇದ್ದಾರೆ. ಹಾಗೆಯೇ ಪುರುಸೊತ್ತು ಇದ್ದಾಗ ಬರೆಯೋಣ ಅನ್ನುವವರು ಇದ್ದಾರೆ ಜತೆಯಲಿ ನನ್ನದೂ ಒಂದು ಬ್ಲಾಗ್ ಎಂದು ಓಪನ್ ಮಾಡಿ ಮೊದಲ ಬರಹ ಬರೆದು ಕೈಬಿಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದು ನಾವೇ ಪ್ರಕಟಿಸುವ ನಮ್ಮದೇ ಪತ್ರಿಕೆ ಅಂತ ಅನ್ನಿಸಿದ್ದನ್ನೆಲ್ಲಾ ಬರೆಯುವವರೂ ಇದ್ದಾರೆ ಹೀಗೆ ಹತ್ತು ಹಲವು ತರಹ.
ಇವೆಲ್ಲದರ ನಡುವೆ ಸೂಪರ್ರಾಗಿ ಬರೆಯುವ ಮಂದಿಗೇನೂ ಕೊರತೆಯಿಲ್ಲ. ಸುಶ್ರುತನ "ಮೋಡ ಕವಿದ ವಾತಾವರಣ"(http://hisushrutha.blogspot.com/2008/11/blog-post_27.html ) ದ ಕೊನೆಯ ಸಾಲೊಂದು ಹೀಗಿದೆ ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ. ಮುಂಬೈ ಧಾಳಿಯ ಸಮಯದಲ್ಲಿ ಬರೆದ ಆ ಬರಹ ಅದೆಷ್ಟು ಶ್ರದ್ದೆಯಿಂದ ಬರೆದದ್ದೆಂದರೆ ನಿಜವಾಗಿಯೂ ಅದರ ಭಾವಾರ್ಥ ತುಂಬಾ ಆಳವಾಗಿದೆ. ಇಂತಹ ಕೃತ್ಯ ನಡೆದಾಗ ಜನಸಾಮಾನ್ಯ ಹೇಗೆ ಪಟ್ಟಂಗ ಹೊಡೆದು ಬಾಯಿಮಾತಿನಲ್ಲಿ ಸಿಟ್ಟುತೀರಿಸಿಕೊಳ್ಳುತ್ತಾನೆ ನಂತರ ತಾನು ಏನಾದರೂ ಮಾಡಬೇಕೆಂಬ ಸಮಯದಲ್ಲಿ ಹೇಗೆ ಜಾರಿಕೊಳ್ಳುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ನಿರೂಪಿಸಿಬಿಡುತ್ತಾರೆ ನಮ್ಮ ಸುಶ್ರುತ. ಇಂತಹ ಒಳಾರ್ಥದ ಬರಹಗಳಿಗಾಗಿ ನಾವು ಬ್ಲಾಗ್ ಲೋಕಕ್ಕೆ ಧನ್ಯವಾದ ಹೇಳಲೇ ಬೇಕು. ಕಾರಣ ಇಂತಹ ಬರಹಗಳನ್ನು ಯಾವ ಪತ್ರಿಕೆಗಳೂ ಪ್ರಕಟಿಸುತ್ತಿರಲಿಲ್ಲ. ಆದರೆ ಬ್ಲಾಗ್ ಗಳಲ್ಲಿ ಬರಹದ ಆಸಕ್ತಿ ಇರುವವರಿಗೆ ಮುಕ್ತ ಅವಕಾಶ.
ಹಾಗೆಯೇ ನಮ್ಮ ಹೊಸಮನೆ (http://mruthyu.blogspot.com/2008/12/blog-post_18.html ) ಬ್ಲಾಗ್. ಹದಿನೈದು ದಿನಕ್ಕೊಮ್ಮೆ ಹೊರಹೊಮ್ಮುವ ಮೃತ್ಯುಂಜಯ ಅವರ ಬರಹಗಳು. ಅವು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಇರುವೆಯ ಇರುವಿಕೆಯೆ ಕುರಿತು ಆರಂಬಿಸುತ್ತಾ ಮೆಲ್ಲಗೆ ಬರಹಗಾರರ ಒಣ ಹಮ್ಮನ್ನು ಚುಚ್ಚುತ್ತಾರೆ . ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಎನ್ನುವ ಸಾಲುಗಳಲ್ಲಿನ ಒಳಾರ್ಥ ಹಲವಾರು ಲೇಖಕ ಮಹಾಶಯರುಗಳ ಗುಟ್ಟನ್ನು ಬಿಚ್ಚಿಟ್ಟು ಬಿಡುತ್ತದೆ. ಸುಮ್ಮನೆ ಹೆಸರು ಬರಲಿ ಎಂದು ಬರೆಯುವ ಬರಹಗಳ ಬಗ್ಗೆ ನವಿರಾಗಿ ಟೀಕಿಸುತ್ತದೆ. ನಂತರ ಇರುವೆಯ ಮೂಲಕ ನಮ್ಮ ಇರುವಿಕೆಯನ್ನು ಹುಡುಕಿಕೊಳ್ಳುವ ಆ ಬರಹ ಒಮ್ಮೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಹುಶ: ಬ್ಲಾಗ್ ಎಂಬುದೊಂದು ಇರದಿದ್ದರೆ ಇಂತಹ ಬರಹ ನಮಗೆ ಓದಲು ಸಿಗುತ್ತಿರಲಿಲ್ಲವೇನೋ..?. ಎನಿ ವೆ ಥ್ಯಾಂಕ್ಸ್ ಬ್ಲಾಗ್ಸ್ ಎಂಡ್ ಬ್ಲಾಗರ್ಸ್
ಮುಂದಿನವಾರ ಮತ್ತೆ ಒಂದಿಷ್ಟು ಬ್ಲಾಗ್ ಗಳ ಒಳಗೆ ಇಣುಕಿ ನೋಡೋಣ. ಇಲ್ಲಿಯವರೆಗೆ ಓದುತ್ತಾ ಬಂದಿರುವ ನಿಮಗೂ ಹ್ಯಾಪಿ ವೀಕೆಂಡ್