Thursday, September 30, 2010

ರಾಮನಗಿಂಡಿ ಕಡಲ ಕಿನಾರೆ


ಸಮುದ್ರದ ಅಲೆಗಳ ನೋಟಕ್ಕೆ ಅದರಿಂದ ಉಂಟಾಗುವ ಶಬ್ಧಕ್ಕೆ ಅಲ್ಲಿ ಆಡಬಹುದಾದ ಆಟಕ್ಕೆ ಮನುಷ್ಯ ಮನಸೋತು ಶತಮಾನಗಳೇ ಕಳೆಯಿತು. ಕಡಲಿನ ಭೋರ್ಗರತ ಪ್ರಪಂಚವನ್ನು ಮರೆಯಿಸಿಬಿಡುತ್ತದೆ. ಪಂಚೇಂದ್ರಿಯಗಳನ್ನೂ ಅನುಭವಕ್ಕೆ ತೊಡಗಿಸಬಹುದಾದ ವಿಷಯಗಳಲ್ಲಿ ಕಡಲೂ ಒಂದು ಎನ್ನುವುದರಲ್ಲಿ ಲವಲೇಶದ ಸಂಶಯವೂ ಇಲ್ಲ. ಹಾಗಾಗಿ ಮನುಷ್ಯ ಸಮತಟ್ಟು ಸಮುದ್ರ ಸಿಕ್ಕ ಕಡೆಯಲ್ಲೆಲ್ಲಾ ಅದಕ್ಕೊಂದು ಹೆಸರನ್ನಿಟ್ಟು ಅಲ್ಲಿ ತಾನು ವಿರಮಿಸಲು ಜಾಗ ಕಂಡುಕೊಂಡಿದ್ದಾನೆ.
ಪ್ರಪಂಚದ ಸಮುದ್ರ ತೀರದ ದೇಶಗಳು ಸಾಮಾನ್ಯವಾಗಿ ಕಡಲನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡಿವೆ. ದೃಢ ಸರ್ಕಾರಗಳು ಮುನ್ನೋಟವಿರುವ ಆಡಳಿತಗಾರರು ಇರುವ ದೇಶಗಳು ವ್ಯವಸ್ಥಿತವಾಗಿ ಸಮುದ್ರವನ್ನು ಬಳಸಿಕೊಂಡರೆ ಹಿಂದುಳಿದ ದೇಶಗಳು, ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ಕೊಡದ ದೇಶಗಳು ಸಮುದ್ರದ ಕಿನಾರೆಯನ್ನು ಹಾಗೆ ಬಿಟ್ಟಿವೆ. ಆದರೂ ಕೂಡ ಅಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ ಅದರಿಂದಾಗಿ ಪ್ರವಾಸೋದ್ಯಮ ಬೆಳದಿದೆ. ಭಾರತದಂತಹ ದೇಶ ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಸಂಪೂರ್ಣ ಬಳಸಿಕೊಳ್ಳದಿದ್ದರೂ ವಿದೇಶಿಗರ ಬಳಕೆಯಿಂದಾಗಿ ಹಲವಾರು ಕಿನಾರೆಗಳು ಬೀಚ್ ಆಗಿ ಪರಿವರ್ತಿತಕೊಂಡು ಪ್ರಖ್ಯಾತವಾಗಿವೆ. ಗೋವಾ ಕೇರಳ ಸರ್ಕಾರಗಳು ಪ್ರವಾಸೋದ್ಯಮಕ್ಕೆ ತುಸು ಹೆಚ್ಚು ಪ್ರಾಶಸ್ತ್ಯ ಕೊಟ್ಟದ್ದರಿಂದ ಅಲ್ಲಿ ಸಮುದ್ರತಟಗಳು ಹೆಸರುವಾಸಿ. ಕರ್ನಾಟಕದ ಸಮುದ್ರ ತಟಗಳಾದ ಕಾರವಾರ ಗೋಕರ್ಣ, ಮಲ್ಪೆ, ಮಂಗಳೂರು ಮುಂತಾದಲ್ಲಿ ಬೀಚ್ ಗಳನ್ನು ಸರ್ಕಾರಕ್ಕಿಂತ ಪ್ರವಾಸಿಗರೇ ಭೇಟಿ ನೀಡಿ ವಿಶ್ವವಿಖ್ಯಾತಗೊಳಿಸಿದ್ದಾರೆ ಎನ್ನಬಹುದು. ಆದರೆ ಇನ್ನೂ ಅಜ್ಞಾತವಾಗಿಯೇ ಉಳಿದಿರುವ ಅತ್ಯಂತ ಮನಮೋಹಕವಾಗಿರುವ ಸಮುದ್ರತೀರಗಳು ಹಲವಾರು ಇವೆ ಅಂತಹ ಒಂದು ಸುಂದರ ಸಮುದ್ರ ಕಿನಾರೆಯ ಹೆಸರು ರಾಮನಗಿಂಡಿ ಕಡಲ ಕಿನಾರೆ.
ಸಾಮಾನ್ಯವಾಗಿ ನಾವು ಬೀಚ್ ಗಳಿಗೆ ನೆಲಮಟ್ಟದಲ್ಲಿ ಪ್ರವೇಶಿಸುತ್ತೇವೆ. ಹಾಗಾಗಿ ಸಮುದ್ರ ರಾಜನ ಆರ್ಭಟ ವಿಸ್ತಾರವಾಗಿ ನಮಗೆ ಕಾಣಿಸುವುದಿಲ್ಲ. ಗೋಕರ್ಣದ ಓಂ ಬೀಚ್ ನಂತಹ ಎತ್ತರದ ಪ್ರದೇಶದಿಂದ ಪ್ರವೇಶಿಸಲು ಅವಕಾಶವಿರುವ ಸಮುದ್ರ ಕಿನಾರೆ ಅಪರೂಪ. ಅಂತಹ ಅಪರೂಪದ ಕಿನಾರೆ ಈ ರಾಮನಗಿಂಡಿ ಎಂಬ ಊರಿನದು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ ರಲ್ಲಿ ಮಂಗಳೂರಿನಿಂದ ಕಾರವಾರಕ್ಕೆ ಹೋಗುವಾಗ ಹೊನ್ನಾವರದಿಂದ ೧೩ ಕಿಲೋಮೀಟರ್ ದೂರದಲ್ಲಿ ಬತ್ತಗೇರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಹೋದರೆ ಸಿಗುವ ಊರೇ ರಾಮನಗಿಂಡಿ. ಈ ಊರು ಕೇವಲ ೮ ಮನೆಗಳಿರುವ ಸುಂದರ ಹಳ್ಳಿ. ಸ್ಥಳೀಯವಾಗಿ ದೊರಕುವ ಕಲ್ಲಿನಿಂದ ಮೂರ್ತಿಗಳನ್ನು ಕೆತ್ತುವ ಭಂಡಾರಿ ಕುಂಟುಂಬದವರು ಮಾತ್ರ ಇರುವ ಊರು ಇದು. ರಾಮನಗಿಂಡಿಗೆ ಪ್ರವೇಶ ಪಡೆಯುವ ಜಾಗದಲ್ಲಿ ನಿಂತು ಸಮುದ್ರ ನೋಡಿದಾಗ ಸಮುದ್ರದ ಅಗಾಧ ಪರಿಚಯವಾಗುತ್ತದೆ. ನಂತರ ಅಲ್ಲಿಂದ ಅರ್ದ ಕಿಲೋಮೀಟರ್ ದೂರ ಇಳಿಜಾರು ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಪ್ರಶಾಂತ, ಸ್ವಚ್ಚ ಸಮುದ್ರ ನಿಮ್ಮನ್ನು ಸ್ವಾಗತಿಸುತ್ತದೆ.
ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದ್ದರಿಂದ ಹಾಗೂ ಬಂಡಾರಿ ಕುಟುಂಬದ ಜನರು ಸ್ವಲ್ಪಮಟ್ಟಿಗಿನ ಕಾಳಜಿ ತೆಗೆದುಕೊಳ್ಳುವುದರಿಂದ ಸಮುದ್ರ ತೀರ ಅತ್ಯಂತ ಸ್ವಚ್ಚವಾಗಿದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ರಾಮ ಲಕ್ಷ್ಮಣರು ಯಾಗವನ್ನು ನಡೆಯಿಸಿದರಂತೆ, ಹಾಗಾಗಿ ಇದಕ್ಕೆ ರಾಮನಗಿಂಡಿ ಎಂಬ ಹೆಸರು ಬಂದಿದೆಯಂತೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ಗುಡ್ಡದ ಅಂಚಿನಲ್ಲಿ ಹೊಂಡ ತೆಗೆದರೆ ಕೆಂಪುಮಣ್ಣಿನಡಿಯಲ್ಲಿ ಬಿಳಿಯದಾದ ಭಸ್ಮ ಸಿಗುತ್ತದೆ. ಹಣೆಗೆ ಹಚ್ಚುವ ವಿಭೂತಿಯಂತಿರುವ ಭಸ್ಮ ಸಂಗ್ರಹಿಸಿ ತೆಗೆದುಕೊಂಡು ಹೋಗಲಿಕ್ಕಾಗಿಯೇ ಸಿರಸಿ, ಸಾಗರ ದಂತಹ ದೂರದೂರಿನಿಂದ ಇಲ್ಲಿಗೆ ಜನರು ಬರುತ್ತಾರೆ ಎನ್ನುತ್ತಾರೆ ಸ್ಥಳೀಯ ಆನಂದ ಭಂಡಾರಿ. ಹಾಗೆಯೇ ಸಮುದ್ರದಂಚಿನ ಗುಡ್ಡದಲ್ಲಿ ಹೇರಳ ಸಿಗುವ ಮೂರ್ತಿ ತಯಾರಿಸುವ ಕಲ್ಲು ಇಲ್ಲಿನ ಭಂಡಾರಿ ಕುಟುಂಬದ ಸದಸ್ಯರ ಹಸ್ತದಿಂದ ವಿವಿಧ ದೇವರುಗಳ ಆಕಾರ ಪಡೆದು ದೂರದೂರಿಗೆ ಹೋಗುತ್ತವೆ.
ಈ ಕಡಲ ಕಿನಾರೆಯ ಜವಾಬ್ದಾರಿಯನ್ನು ಸ್ವತ: ಊರಿನವರೇ ಸ್ವಘೋಷಿತವಾಗಿ ತೆಗೆದುಕೊಂಡಿರುವುದರಿಂದ ಪ್ರವಾಸಿಗರ ದೌರ್ಜನ್ಯಕ್ಕೆ ಒಳಗಾಗಿಲ್ಲ. ಸೂರ್ಯಾಸ್ತ ಹಾಗೂ ಸೂರ್ಯೋದಯ ಮತ್ತು ಸುಂದರ ಸಮುದ್ರವನ್ನೂ ಎತ್ತರದ ಸ್ಥಳದಲ್ಲಿ ನಿಂತು ಒಂದೇ ಜಾಗದಲ್ಲಿ ಸವಿಯಬಹುದಾದ ಅಪರೂಪದ ಜಾಗ ಈ ರಾಮನಗಿಂಡಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)

Monday, September 27, 2010

ಪವರ್ ಕಟ್ ಇಲ್ಲದ ಕಾನುತೋಟ




ಉತ್ತಮ ಗುಣಮಟ್ಟದ ವಿದ್ಯುತ್, ಪವರ್ ಕಟ್ ಪ್ರಶ್ನೆಯೇ ಇಲ್ಲ, ಸಿಂಗಲ್ ಫೇಸ್ ಕಾಟ ಗೊತ್ತಿಲ್ಲ, ದಿನಪೂರ್ತಿ ಸಮರ್ಪಕ ವಿದ್ಯುತ್ ಪೂರೈಕೆ, ಓಹ್ ಇಷ್ಟು ಓದಿದ ಮೇಲೆ ನೀವು ಇದು ನಮ್ಮ ದೇಶದ ಸುದ್ದಿಯೇ ಅಲ್ಲ ಎಂಬ ವಿಚಾರಕ್ಕೆ ಬಂದಿರುತ್ತೀರಿ, ಆದರೆ ಇದು ನಮ್ಮದೇ ರಾಜ್ಯದ ಪುಟ್ಟ ಹಳ್ಳಿಯ ಸುದ್ಧಿ. ವಿಷಯ ಅಷ್ಟೇ ಅಲ್ಲ ಎಷ್ಟೇ ವಿದ್ಯುತ್ ಉಪಯೋಗಿಸಿದರೂ ಬಿಲ್ ಕಟ್ಟಬೇಕಾಗಿಲ್ಲ, ಬಿಲ್ ಕಟ್ಟುವ ಕಿರಿಕಿರಿ ಅಥವಾ ಹಣ ಕಟ್ಟದಿದ್ದರೆ ಡಿಸ್‌ಕನೆಕ್ಟ್ ಮಾಡುವ ಭಯವೂ ಇಲ್ಲ. ಮೊದಲನೆಯದಲ್ಲ ಇದ್ದರೂ ಇರಬಹುದು ಇದು ಮಾತ್ರಾ ಬೊಗಳೆ ಎಂಬ ತೀರ್ಮಾನಕ್ಕೆ ಬಂದಿರಾದರೆ ಅದು ಸುಳ್ಳು.
ಶಿವಮೊಗ್ಗ ಸಾಗರ ತಾಲ್ಲೂಕು ಕಾನುತೋಟ ಎಂಬುದು ಸಾಗರದಿಂದ ಜೋಗಕ್ಕೆ ಸಾಗುವ ಮಾರ್ಗದಲ್ಲಿರುವ ಒಂಟಿಮನೆಯ ಪುಟ್ಟ ಹಳ್ಳಿ. ಅಲ್ಲಿಗೆ ಮೆಸ್ಕಾಂ ವಿದ್ಯುತ್ ಪೂರೈಕೆ ಮಾಡಿದೆಯಾದರೂ ಕಾಡಿನ ನಡುವೆ ಹಾದುಹೋಗಿರುವ ಲೈನ್ ನಿಂದಾಗಿ ವಾರಕ್ಕೊಮ್ಮೆ ವಿದ್ಯುತ್ ಮುಖ ನೋಡುವುದು ಕಷ್ಟವಾಗಿತ್ತು. ಆಗ ಕಾನುತೋಟದ ಗುರು ಮನಸ್ಸು ಮಾಡಿದ್ದು ಸ್ವಯಂ ವಿದ್ಯುತ್ ತಯಾರಿಕೆಗೆ. ಗುಡ್ಡದ ಬುಡದಲ್ಲಿರುವ ಗುರುರವರ ಮನೆಗೆ ಗುಡ್ಡದ ನೆತ್ತಿಯಿಂದ ಪ್ರಕೃತಿದತ್ತವಾದ ಅಬ್ಬಿನೀರು ಹರಿದು ಬಂದು ವ್ಯರ್ಥವಾಗಿ ಹೊಳೆಗೆ ಸೇರಿ ಹೋಗುತ್ತಿತು. ಅದಕ್ಕೆ ಪೈಪ್ ಲೈನ್ ಹಾಕಿ ಅಲ್ಲೊಂದು ಜನರೇಟರ್ ಕೂರಿಸಿದರು ಗುರು. ಅಲ್ಲಿಂದೀಚೆಗೆ ಕಾನುತೋಟದ ಗುರು ಅವರಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ ಅದೂ ಪೈಸಾ ಖರ್ಚಿಲ್ಲದೆ. ವಿದ್ಯುತ್ ಟರ್ಬೈನ್ ತಿರುಗಿಸಿದನಂತರದ ನೀರು ತೋಟಕ್ಕೆ ಬಳಕೆಯಾಗುತ್ತದೆ. ಈಗಾಗಲೆ ಯಶಸ್ವೀ ಆರು ವರ್ಷಗಳನ್ನು ಸ್ವಯಂ ವಿದ್ಯುತ್ ತಯಾರಿಕೆ ಮಾಡಿಕೊಂಡು ಪೂರೈಸಿಕೊಳ್ಳುತ್ತಿರುವ ಗುರು ಪವರ್ ಕಟ್ ಮುಂತಾದ ಕಿರಿಕಿರಿಯಿಂದ ಮುಕ್ತರಾಗಿದ್ದಾರೆ. ಹೀಗೆ ಅವಕಾಶವಿರುವ ಜನರು ಮನಸ್ಸುಮಾಡಿದರೆ ಮೆಸ್ಕಾಂ ನ ಹೊರೆಯೂ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಗಳಾಗಬಹುದು ಎನ್ನುವುದು ಕಾನುತೋಟದ ಗುರುರವರ ಮಾತು.
ಸಂಪರ್ಕ: ೦೮೧೮೩-೨೦೭೨೫೩
(ವಿಕ ಲವಲವಿಕೆಯಲ್ಲಿ ಇಂದು ಪ್ರಕಟಿತ)