Saturday, April 24, 2010

ರಸ್ತೆಯ ಅವಸ್ಥೆ



"ಅಯ್ಯೋ ರಸ್ತೆ - ಏನೀ ಅವಸ್ಥೆ", "ರಸ್ತೆಯ ನಡುವೆ ನಾಟಿ ಮಾಡಿ ಪ್ರತಿಭಟನೆ" "ಇಂಥಹಾ ರಸ್ತೆಗಳಿದ್ದರೆ ಹೆರಿಗೆ ಆಸ್ಪತ್ರೆ ಬೇಡ" . ಇಂಥಹಾ ಹಲವಾರು ತರಹದ ಹೆಡ್ ಲೈನ್ ಗಳನ್ನು ನೀವು ನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ಕಾಣುತ್ತೀರಿ. ವಾಚಕರವಾಣಿಯ ಬಹುಪಾಲು ಪತ್ರಗಳು ರಸ್ತೆಯ ಅವಸ್ಥೆಯ ಕುರಿತಾದದ್ದೇ, ರಾಜಕಾರಣಿಗಳ ಭರವಸೆಯ ಪ್ರಥಮ ಆದ್ಯತೆಯೇ ಈ ರಸ್ತೆ. ಇರಲಿಬಿಡಿ ಇದು ನಮ್ಮ ಭಾರತದ ಕತೆ ಆಯಿತು. ಈ ಚಿತ್ರ ನೋಡಿ ರಷ್ಯಾದ ಕತೆ ಓದಿದ ನಂತರ ನೀವು ನಮ್ಮ ದೇಶದ ರಸ್ತೆಯ ಬಗ್ಗೆ ಎಂದೂ ಗೊಣಗಲಾರಿರಿ. ಈ ಚಿತ್ರದಲ್ಲಿ ಕಾಣಿಸುವುದು ರಷ್ಯಾ ದೇಶದ ಫೆಡರಲ್ ಹೈವೆ. ದಕ್ಷಿಣ ರಷ್ಯಾದಿಂದ ಯಾಕುತ್ಸ್ಕ್ ನಗರವನ್ನು ಸೇರಿಸುವ ರಸ್ತೆ ಇದು. ಚಳಿಗಾಲದಲ್ಲಿ ಇದು ಸೂಪರ್ ಹೈವೆ . ನಂತರ ಶುರುವಾಗು ಬೇಸಿಗೆಯಲ್ಲಿ ಅಕಸ್ಮಾತ್ ಮಳೆ ಆರಂಭವಾಯಿತೆಂದರೆ ಈ ಹೈವೇ ಯ ಅವಸ್ಥೆ ಬಲ್ಲವನೇ ಬಲ್ಲ. ಅಯ್ಯೋ ಟಾರ್ ಹಾಕಬಹುದಲ್ಲ ಅಲ್ಲಿಯೂ ಕೂಡ ಟಾರ್ ಹಾಕಿದಂತೆ ಟೆಂಡರ್ ಕರೆದು ಗುಳುಂ ಅನಿಸಿಬಿಟ್ಟರೇ ಎಂಬ ಉದ್ಘಾರ ತೆಗೆಯದಿರಿ. ಕಾರಣ ಇಲ್ಲಿ ಟಾರ್ ಹಾಕಲು ಬರುವುದಿಲ್ಲ. ಪ್ರತೀ ಬೇಸಿಗೆಯಲ್ಲಿಯೂ ರಸ್ತೆ ಒಂದು ಮೀಟರ್ ಕುಸಿದುಹೋಗುತ್ತದೆ ಹಾಗಾಗಿ ಟಾರ್ ಕಾಂಕ್ರೀಟ್ ಏನನ್ನೇ ಬಳಸಿದರೂ ಎಲ್ಲಾ ಮಂಗಮಾಯ. ಹಾಗಾಗಿ ಈ ಅನಿವಾರ್ಯದ ದುರವಸ್ಥೆ.

Friday, April 23, 2010

ಕಟ್ಟಿಗೆ ಲೋಡ್ ತಯಾರು

ನೀರಿನ ಮೇಲೆ ತೆಪ್ಪದಲ್ಲಿ ಕುಳಿತು ತೇಲುವುದೆಂದರೆ ಅದೊಂದು ಮಧುರ ಅನುಭವ. ತಿಳಿ ನೀರಿನಲ್ಲಿ ಹುಟ್ಟು ಹಾಕುತ್ತಾ ಸಾಗುತ್ತಿದರೆ ತನ್ನಷ್ಟಕ್ಕೆ ಹಾಡು ಗುನುಗುತ್ತದೆ. ದೂರದಲ್ಲಿ ಕಾಣುವ ಮೂರು ಜನ ತೆಪ್ಪದಲ್ಲಿ ಹೀಗೆಯೇ ಮಾಡುತ್ತಾ ಹೋಗುತ್ತಲಿದ್ದಾರೆ ಎಂದೆಣಿಸಿದರೆ ಅದು ಸುಳ್ಳು. ತೆಪ್ಪದಂತೆ ತೋರುವ ಆದರೆ ತೆಪ್ಪವಲ್ಲದ ಈ ಕೆಲಸದ ಹಿನ್ನಲೆ ತಿಳಿದರೆ ತನ್ನಷ್ಟಕ್ಕೆ ಅಬ್ಬಾ ಈ ಜನರ ಸಾಹಸವೇ ಎಂಬ ಉದ್ಘಾರ ಹೊರಡದಿರದು. ಮಾರ್ಚ್ ತಿಂಗಳು ಬಂತೆಂದರೆ ಮಲೆನಾಡಿನಲ್ಲಿ ಕಬ್ಬು ಕಟಾವಿನ ಸಮಯ. ಗಾಣಕ್ಕೆ ಕಬ್ಬು ಕೊಟ್ಟು ಹಾಲು ತೆಗೆದು ಕಾಯಿಸಿ ಬೆಲ್ಲ ಮಾಡುವ ಕೆಲಸ ಭರಾಟೆಯಿಂದ ಸಾಗುತ್ತಿರುತ್ತದೆ. ಈ ಬೆಲ್ಲ ಕಾಯಿಸುವ ಕೆಲಸಕ್ಕೆ ಉರುವಲು ಹೇರಳ ಬೇಕಾಗುತ್ತದೆ. ಊರಿನಂಚಿನ ಕಾಡುಗಳಲ್ಲಿ ಕಟ್ಟಿಗೆಗಳು ಮನೆ ಬಳಕೆಗೆ ಸೀಮಿತ. ರಕ್ಷಿತ ಅರಣ್ಯಗಳಿಂದ ಉರುವಲು ತರಲು ಅರಣ್ಯಾಧಿಕರಗಳ ಕಾಟ. ಇದಕ್ಕೆ ಉಪಾಯ ಈ ಕಾಷ್ಠೋತ್ಸವ. ಲಿಂಗನಮಕ್ಕಿ ಹಿನ್ನೀರಿನ ನಡುಗುಡ್ಡೆಗಳು ಒಣಗಿದ ಮರಗಳ ತೌರು. ಆದರೆ ಅಲ್ಲಿರುವ ಕಟ್ಟಿಗೆ ಹಿನ್ನೀರು ದಾಟಿ ಈಚೆ ಬರಬೇಕೆಂದರೆ ಈ ಸಾಹಸ. ಊರಿನಲ್ಲಿ ಕಬ್ಬು ಬೆಳೆಯುವ ರೈತರು ಮೂರ್ನಾಲ್ಕು ಜನ ಸೇರಿ ವಾರಕ್ಕಾಗುವ ಆಹಾರ ಕಟ್ಟಿಕೊಂಡು ಹಿನ್ನೀರಿನ ನಡುಗುಡ್ಡೆ ಸೇರುತ್ತಾರೆ. ಅಲ್ಲಿ ಒಣಗಿದ ಮರದ ದಿಮ್ಮಿಗಳನ್ನು ಕಡಿದು ಒಂದೆಡೆ ಗುಡ್ಡೆ ಹಾಕುತ್ತಾರೆ. ಸಾಕಷ್ಟು ಉರುವಲು ಸಂಗ್ರಹವಾಯಿತು ಎಂದಾಗ ನೀರಿನಲ್ಲಿ ಒಂದೊಂದೇ ದಿಮ್ಮಿಗಳನ್ನು ಹಾಕಿ ಮರದ ಬಳ್ಳಿಯಿಂದ ಕಟ್ಟುತ್ತಾರೆ. ಹೀಗೆ ಒಂದರ ಮೇಲೆ ಒಂದು ಒಣಗಿದ ಮರ ಇಟ್ಟಾಗ ತೆಪ್ಪ ಕಂ ಕಟ್ಟಿಗೆ ಲೋಡ್ ತಯಾರು. ಅಲ್ಲಿಯೇ ಮರದ ಹುಟ್ಟು ತಯಾರಿಸಿ ಊರಿನತ್ತ ಹುಟ್ಟುಹಾಕುತ್ತಾರೆ. ಸಂಜೆ ಹೊತ್ತಿಗೆ ವರ್ಷಕ್ಕಾಗುವಷ್ಟು ಕಟ್ಟಿಗೆಯೊಂದಿಗೆ ತಟದ ಸಮೀಪದ ಊರಿಗೆ ಮರಳುತ್ತಾರೆ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಕಟ್ಟಿಗೆ ಸುಮಾರು ಎರಡು ಲಾರಿ ಲೋಡ್ ನಷ್ಟಿದೆ. ಶೇಕಡಾ ಇಪ್ಪತ್ತರಷ್ಟು ಮೇಲ್ಬಾಗದಲ್ಲಿ ಕಾಣಿಸುತ್ತಿದ್ದರೆ ಇನ್ನುಳಿದ ಎಂಬತ್ತರಷ್ಟು ನೀರಿನಲ್ಲಿ ಮುಳುಗಿದೆ. ದಿನವಿಡೀ ತೇಲುವ ಮಜ ಅನುಭವಿಸುವ ಇವರಿಗೆ ಒಮ್ಮೊಮ್ಮೆ ಅಧಿಕಾರಿಗಳಿಂದ ಕಿರುಕುಳವೂ ಇದೆ. ವಾರಪೂರ್ತಿ ಕಾಡಿನಲ್ಲಿ ಇರುವ ಧೈರ್ಯವಿದ್ದರೆ ಕೊನೆಯ ದಿನದ ತೇಲು ತೆಪ್ಪ ವನ್ನು ನೀವೂ ಅನುಭವಿಸಬಹುದು..!.

Wednesday, April 21, 2010

ಬಾಟಲುಗಳ ದೇವಸ್ಥಾನ


ನಮ್ಮಲ್ಲಿ ಗಾದೆಯ ಮಾತೊಂದಿದೆ "ಕಟಕಟೆ ದೇವರಿಗೆ ಮರದ ಜಾಗಟೆ. ಇದೂ ಅದೇತರಹದ್ದು ಇರಬೇಕು, ಈ ದೇವಸ್ಥಾನ ಕಟ್ಟಿದ ವಸ್ತುಗಳನ್ನ ನೋಡಿದರೆ ಎಣ್ಣೆ ದೇವರಿಗೆ ಬಾಟಲೀ ದೇವಸ್ಥಾನ ಅಂತ ಗಾದೆ ಮಾಡಬಹುದು. ಅಂದ ಹಾಗೆ ಈ ದೇವಸ್ಥಾನ ದ ಹೆಸರು "ವಾತ್ ಪಾ ಮಹಾ ಕಾವ್" ಎಂದು. ಬೌದ್ಧ ಧರ್ಮದ ಈ ದೇವಸ್ಥಾನ ಇರುವುದು ಥಾಯ್ಲೆಂಡ್ ನಲ್ಲಿ. ಬ್ಯಾಂಕಾಂಗ್ ನಿಂದ ೩೭೦ ಮೈಲಿ ದೂರದಲ್ಲಿರುವ ಈ ದೇವಸ್ಥಾನವನ್ನು ೧೯೮೪ ರಲ್ಲಿ ಕಟ್ಟಲು ಆರಂಭಿಸಲಾಯಿತು. ಸರಿ ಸುಮಾರು ೧.೫ ಮಿಲಿಯನ್ ಬಾಟಲಿಗಳನ್ನು (ಖಾಲಿ....!) ಬಳಸಿ ಕಟ್ಟಿರುವ ಈ ದೇವಸ್ಥಾನ ಪ್ರತಿನಿತ್ಯ ಸಾವಿರಾರು ಪ್ರೇಕ್ಷಕರನ್ನು ಅಚ್ಚರಿಯಿಂದ ಸೆಳೆಯುತ್ತಿದೆ. ಎಲ್ಲಾ ಕಡೆ ಬಾಟಲಿಯನ್ನೇ ಬಳಸಿರುವುದರಿಂದ ದೇವಸ್ಥಾನ ಯಾವಾಗಲೂ ಬಣ್ಣ ಮಾಸದೇ ಜಗಮಗಿಸುತ್ತಿರುತ್ತದೆ ಎನ್ನುತ್ತಾರೆ ಆಡಳಿತದವರು. ನೀವೂ ನಿತ್ಯ ಬಾಟಲಿ ಬಳಸುವರಾಗಿದ್ದರೆ ಇವತ್ತಿನಿಂದ ಹಾಗೆ ಎತ್ತಿಡಿ. ಮುಂದೆ ದೇವಸ್ಥಾನ ಕಟ್ಟಿಸಬಹುದು. ಹಾಗಂತ ಬಾಟಲಿ ಬಳಸುವ ಅಭ್ಯಾಸವಿಲ್ಲದಿದ್ದರೆ " ನಾನು ದೇವಸ್ಥಾನ ಕಟ್ಟಿಸಬೇಕು ಹಾಗಾಗಿ ಬಾಟಲಿ ಬಳಸಲು ಆರಂಭಿಸಿದೆ ಎನ್ನಬೇಡಿ. ಈಗಾಗಲೆ ಬಳಸುವರಾಗಿದ್ದರೆ ಪುಣ್ಯದ ಕೆಲಸಕ್ಕಾಗಿ ಈಗ ಬಾಟಲಿ ಬಳಸುತಿದ್ದೇನೆ ಎಂದು ಸಮಜಾಯಿಶಿ ಮಾಡಿಕೊಳ್ಳಿ ಬೇಕಾದರೆ..!