Wednesday, February 20, 2013

ಹಿರೇಮನೆಯಲ್ಲಿ ಹಿಡಿದ ಕಾಳಿಂಗ ಸರ್ಪ(ಕಿಂಗ್ ಕೋಬ್ರಾ)

ಉರಗ ರಕ್ಷಕ: ಸಾಗರದ ಸಮೀಪದ ಮುಂಡಿಗೆಸರ ಊರಿನ ಮನ್ಮಥ ಕುಮಾರ್ ಉರಗ ಪ್ರೇಮಿ. ಇವರು ಇಲ್ಲಿಯವರೆಗೆ ೪೫೦ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಇಪ್ಪತ್ತೇಳು ಸಾವಿರ ಸರ್ಪವನ್ನು ಹಿಡಿದು ಸುರಕ್ಷಿತ ಮರುಜೀವನ ನೀಡಿದ ಕೀರ್ತಿ ಮನ್ಮಥಕುಮಾರ್ ರವರದ್ದು. ಸರ್ಕಾರದ ವೈಲ್ಡ್ ಲೈಫ್ ನಿಂದ ಹಾವುಗಳನ್ನು ಹಿಡಿಯಲು ಹಾಗೂ ಹಾವುಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಅಧಿಕೃತ ಪರವಾನಗಿಯನ್ನು ಕೂಡ ಹೊಂದಿದ್ದಾರೆ. ಹಾವುಗಳು ನಿರುಪದ್ರವಿ ಆದರೆ ಅವುಗಳ ಬಗೆಗೆ ಇರುವ ಮಿಥ್ ಗಳು ಜನರನ್ನು ದಾರಿತಪ್ಪಿಸಿವೆ ಎನ್ನುವ ಮನ್ಮಥ ಕುಮಾರ್ ಸರ್ಪ ಅಥವಾ ಕಾಳಿಂಗ ಸರ್ಪಗಳು ತಾವಾಗಿಯೇ ಯಾರಿಗೂ ಧಾಳಿ ಮಾಡುವುದಿಲ್ಲ, ತಮ್ಮ ಜೀವ ರಕ್ಷಣೆಯ ಅನಿವಾರ್ಯ ಸಂದರ್ಭದಲ್ಲಿ ಮಾತ್ರಾ ಕಡಿಯುತ್ತವೆ ಎನ್ನುತ್ತಾರೆ. ಹಾವು ಹಿಡಿಯುವುದು ತುಂಬಾ ತಾಳ್ಮೆಯ ಕೆಲಸವಾಗಿದ್ದು ಹಠ ಸಾಧನೆಯಿಂದ ನಿರಂತರ ಕಲಿಕೆಯಿಂದ ಎಲ್ಲರೂ ಕಲಿಯಬಹುದು, ಆದರೆ ತುಂಬಾ ಎಚ್ಚರಿಕೆ ಮತ್ತು ಧೈರ್ಯದ ಅವಶ್ಯಕತೆ ಇದೆ ಎನ್ನುತ್ತಾರೆ. ಹಿಂದೆ ಕಾಳಿಂಗ ಸರ್ಪದಿಂದ ಎರಡು ಬಾರಿ ಹಾಗೂ ಸರ್ಪದಿಂದ ಮೂರು ಬಾರಿ ಅವರೂ ಕೂಡ ಕಡಿತಕ್ಕೆ ಒಳಗಾಗಿದ್ದಿದೆ ಆದರೆ ತಕ್ಷಣದ ಪ್ರಥಮ ಚಿಕೆತ್ಸೆಯಿಂದ ಪ್ರಾಣಾಪಾಯಕ್ಕೆ ಒಳಗಾಗಿಲ್ಲ ಎನ್ನುತ್ತಾರೆ. ತಮ್ಮ ಹನ್ನೆರಡನೆಯ ವರ್ಷದಲ್ಲಿ ಕುತೂಹಲದಿಂದ ಹಾವುಗಳನ್ನು ಹಿಡಿಯುವ ಕಾಯಕಕ್ಕೆ ಇಳಿದ ಮನ್ಮಥ ಕುಮಾರ್ ಕರ್ನಾಟಕ ರಾಜ್ಯಾದ್ಯಂತ ಹಾವು ಹಿಡಿದ್ದಾರೆ. ಗುರುಗಳಿಲ್ಲದೇ ಸ್ವಯಂ ಈ ವಿದ್ಯೆಯನ್ನು ಸಾಧಿಸಿರುವ ಮನ್ಮಥ್ ಕುಮಾರ್ ಈಗ ಅರವತ್ತು ವರ್ಷದ ಪ್ರಾಯ. ಬೇಸಿಗೆಯ ದಿನಗಳಲ್ಲಿ ಪ್ರತಿ ನಿತ್ಯ ಹಗಲಿರುಳು ಎನ್ನದೆ ಜನರ ಕರೆಗೆ ಸ್ಪಂದಿಸುವ ಮನ್ಮಥ್ ಕುಮಾರ್ ಕೆಲವು ಸಲ ದಿನವೊಂದಕ್ಕೆ ಎಂಟು ಕಾಳಿಂಗ ಸರ್ಪಗಳನ್ನು ಹಿಡಿದ ಉದಾಹರಣೆ ಇದೆ. ಕೋಲು, ಕಬ್ಬಿಣದ ಸರಳು ಮುಂತಾದ ಯಾವುದೇ ಸಲಕರಣೆಗಳ ಸಹಾಯವಿಲ್ಲದೆ ಹಾವು ಹಿಡಿಯುವುದು ತುಂಬಾ ಅಪಾಯಕಾರಿಯಾಗಿದ್ದರೂ ಕೂಡ ಅವುಗಳನ್ನು ಬಳಸಿದರೆ ಹಾವುಗಳಿಗೆ ಗಾಯವಾಗುತ್ತದೆ ಎನ್ನುವ ಕಾರಣದಿಂದ ಬರಿಗೈಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಹಾವುಗಳನ್ನು ವೃಥಾ ಕೊಲ್ಲಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ ಮನ್ಮಥ್ ಕುಮಾರ್. ಮೊಬೈಲ್: ೯೪೪೮೧೦೪೯೯೧