Wednesday, June 4, 2008

ಊರಲ್ಲಿ ರಂಗ ಪರ ಊರಲ್ಲಿ..


"ಮೆ ಇದರ್ಸೆ ಏಕ್ ಮೈಲ್ ಸಕ್ತಾ ... .... ...?". ಹೊಸನಗರದ ಗೋ ಸಮ್ಮೇಳನದಲ್ಲಿ ಮೀಡಿಯಾ ಸೆಂಟರ್ರಿನ ಕಂಪ್ಯೂಟರ್ ಮುಂದೆ ಕುಳಿತುಕೊಂಡು ನ್ಯೂಸ್ ಮಾಡುತ್ತಾ ಇದ್ದಾಗ ಹಿಂದಿನಿಂದ ಒಂದು ದನಿ ಕೇಳಿಸಿತು. ದನಿ ಬಂದತ್ತ ತಿರುಗಿ ನೊಡಿದೆ. ಶ್ವೇತ ವಸ್ತ್ರದಾರಿಯಾದ ಸುಮಾರು ಅರವತ್ತು ವಯಸ್ಸಿನ ವ್ಯಕ್ತಿ ನಿಂತಿದ್ದರು. "ಆವೋ.. ಬೈಟೋ" ಎಂದು ಹೇಳಿದೆ. " ನಹಿ, ನಹಿ ಮುಝ್ಕೋ ಕಂಪ್ಯೂಟರ್ ಕಾಮ್ ಆತಾ ನಹಿ, ಆಪ್ ಮೆರೆಲಿಯೆ ಕಾಮ್ ಕರ್ನಾ" ಎಂದು ಹೇಳಿತು. ಸರಿ ನಾನಿದ್ದದ್ದು ಆ ಕೆಲಸಕ್ಕಾಗಿಯೇ ಎಂದು ಹೇಳಿ ಅವರ ಕೆಲಸ ಮುಗಿಸಿಕೊಟ್ಟೆ. ಅವರು ಥ್ಯಾಂಕ್ಸ್ ಹೇಳಿ ಹೊರಟು ಹೋದರು. ಅದೇ ದಿನ ಸಾಯಂಕಾಲ ಆ ದಿನದ ನ್ಯೂಸ್ ಟೈಪ್ ಮಾಡಿ ಮೈಲ್ ಗೆ ಪೋಟೋ ಅಟ್ಯಾಚ್ ಮಾಡುವಾಗ ಅದರಲ್ಲಿದ್ದ ಈ ವ್ಯಕ್ತಿ ಬೆಳಿಗ್ಗೆ ಬಂದಿದ್ದರಲ್ಲ ಎಂದು ನೊಡಿದರೆ, ಅರೆ ಹೌದು ಅವರು ಒರಿಸ್ಸಾದ ಕ್ಯಾಬಿನೆಟ್ ದರ್ಜೆ ಸಚಿವರು. ಪಕ್ಕದಲ್ಲಿದ್ದ ವರದಿಗಾರನಿಗೆ ಕರೆದು ಘಟನೆ ಹೇಳಿದೆ. " ಅಯ್ಯೋ ಬೆಳಿಗ್ಗೆ ಈತ ನನ್ನ ಬಳಿ ಬಂದು ಮೈಲ್ ಕಳುಹಿಸಬಹುದಾ ಅಂತ ಕೇಳಿದ " ಇಲ್ಲಿ ಅಲೋ ಇಲ್ಲ ಅಂತ ಕಳುಹಿಸಿದನಲ್ಲ ಮಾರಾಯ" ಎಂದು ಅಲವತ್ತುಕೊಂಡ.


ಗುಲ್ಬರ್ಗಾದ ಗಂವ್ಹಾರದಲ್ಲಿ ನಡೆದ ಶಿವಸತ್ರದ ಕಾರ್ಯಕ್ರಮದಲ್ಲಿ ನನ್ನದು ಮೀಡಿಯಾ ಸೆಂಟರ್‍ ನಲ್ಲಿ ನ್ಯೂಸ್ ತಯಾಋ ಮಾಡಿ ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸುವ ಕೆಲಸ. ಭಾರತೀಶ, ದತ್ತಿ, ಮತ್ತಿಗಾರು ನಾಗರಾಜ ಸೇರಿದಂತೆ ನಾಲ್ಕು ಜನರ ಟೀಂ ನಮ್ಮದು. ವಿಜಯಕರ್ನಾಟಕದ ರಾ.ಭಡ್ತಿ ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದರು. ಒಟ್ಟು ೯ ದಿನಗಳ ಕಾರ್ಯಕ್ರಮ. ರಣಬಿಸಿಲಿನ ನಡುವೆ ಸೇವಾ ದೃಷ್ಟಿಯಲ್ಲಿ ಕೆಲಸ ಮಾಡುವ ನಮಗೆ ಆದ್ಯಾವುದೋ ಹೇಳಲಾರದ ಆನಂದವೊಂದನ್ನು ಬಿಟ್ಟರೆ ಮತ್ಯಾವ ಲಾಭವೂಇಲ್ಲ. ಕಾರ್ಯಕ್ರಮದ ನಾಲ್ಕನೇ ದಿನ ನಲವತ್ತು ವಯಸ್ಸಿನ ಬಿಳಿ ಧಿರಿಸು ದರಿಸಿದ ವ್ಯಕ್ತಿಯೊಬ್ಬ ಮೀಡಿಯಾ ಸೆಂಟರ್ರಿಗೆ ಬಂದರು. ಗಡ್ಡ ಬಿಟ್ಟಿದ್ದ ದಪ್ಪ ವ್ಯಕ್ತಿ ಎಲ್ಲಿ? ಎಂದು ನಮ್ಮನ್ನು ಕೇಳಿದರು. ದತ್ತಿ ಲಚ್ಚಣ್ಣನನ್ನು ಹುಡುಕುತ್ತಿದ್ದಾರೆ ಎಂದು ನಮಗೆ ತಿಳಿಯಿತು. ಅವರು ನ್ಯೂಸ್ ಗೆ ಹೋಗಿದ್ದಾರೆ ಎಂದು ಹೇಳಿಯಾಯಿತು. ನಲವತ್ತರ ಯುವಕನಿಗೆ ತಳಮಳ, ಕೂತಲ್ಲಿ ಕೂರಲಾರ ನಿಂತಲ್ಲಿ ನಿಲ್ಲಲಾರ. ಅವರ ಚಡಪಡಿಕೆಯನ್ನು ನೋಡಿ ನಾನು ಏನಾಗಬೇಕಿತ್ತು ? ಅಂತ ಕೇಳಿದೆ. ನನಗೆ ಇನ್ನರ್ಧ ಗಂಟೆಯಲ್ಲಿ ವೇದಿಕೆಯನ್ನೇರಿ ಭಾಷಣ ಮಾಡಬೇಕೆಂದು ಶ್ರೀಗಳಿಂದ ಅಣತಿ ಬಂದಿದೆ. ಆದರೆ ಏನು ಮಾತನಾಡಬೇಕೆಂದು ಗೊತ್ತಿಲ್ಲ, ಗಡ್ಡಬಿಟ್ಟಿದ್ದಾರಲ್ಲ ಅವರು ಬರೆದುಕೊಡುತ್ತೇನೆ ಎಂದಿದ್ದರು, ಆದರೆ ಅವರು ಕಾಣಿಸುತ್ತಿಲ್ಲ. ನೀವು ಸ್ವಲ್ಪ ಭಾಷಣ ಬರೆದುಕೊಡುತ್ತೀರಾ? ಎಂದು ಕೇಳಿದರು. ಆಯಿತು ಅದರಲ್ಲೇನಿದೆ ಮಹಾ ಎಂದು ಪಟಪಟ ಟೈಪ್ ಮಾಡಿ ಪ್ರಿಂಟ್ ತೆಗೆದು ಕೊಟ್ಟೆ. ಖುಷಿಯಾದ ಅವರು ಉಷ್ಹಪ್ಪಾ ಎಂದು ಹೊರಟು ಹೋದರು. ಅರ್ದ ಗಂಟೆಯ ನಂತರ ನನ್ನ ಮಾತು ವೇದಿಕೆಯಲ್ಲಿ ಮೊಳಗುತ್ತಿತ್ತು.
ದತ್ತಿ ಲಚ್ಚಣ್ಣ ಬಂದ ನಂತರ ಭಾಷಣದ ಕತೆ ಹೇಳಿದೆ. ಅವರು " ಅಯ್ಯೊ ಹೌದು ನಮ್ಮ ಹೊಸನಗರದ ಶಾಸಕ ಹಾಲಪ್ಪ , ಅವರ ಪಿ.ಎ ಬಂದಿಲ್ಲ ಭಾಷಣ ಬರೆದುಕೊಡಿ ಎಂದಿದ್ದರು ನಾನು ಮರೆತೆ . ಎಂದ.
ಆ ಭಾಷಣ ಬರೆದುಕೊಟ್ಟಿದ್ದರ ಮಹತ್ವ ಕೊನೆಗೆ ಕಾರ್ಯಕ್ರಮ ಮುಗಿಯುವವರೆಗೂ ಅದೆಂತೋ, ನರಿಬೋಳ, ದುಡ್ಡಪ್ಪ ಗೌಡ ... ಹೀಗೆ ಹತ್ತಾರು ಬಿಳಿ ವಸ್ತ್ರದ ಜನರ ಧ್ವನಿಯಾದೆ.
ಈಗ ಹಾಲಪ್ಪ ಕ್ಯಾಬಿನೆಟ್ ದರ್ಜೆ ಸಚಿವರು. ನಾನು ಇಲ್ಲಿ ತೌಡು ಕುಟ್ಟುತ್ತಿದ್ದೇನೆ.
ಅವರುಗಳಿಗೆ ಪರಊರಿನಲ್ಲಿಯೂ ರಂಗನಾಗುವುದು ಗೊತ್ತು , ನಾನು ಊರಿನಲ್ಲಿಯೇ ಮಂಗ ನಾಗಿದ್ದೇನಾ ಅಂತ ಗುಮಾನಿ...

Monday, June 2, 2008

ಮೇಲ್ಮಾತು .......ಹೀಗೆ ಸುಮ್ಮನೆ


ನಾನಂತೂ ವಾಚಾಳಿ, . ಎಷ್ಟರಮಟ್ಟಿಗೆ ಎಂದರೆ ನಿದ್ರೆಯಲ್ಲಿಯೂ ದೊಡ್ಡದಾಗಿ ಮಾತನಾಡುತ್ತೇನೆ. ಯಾರೂ ಸಿಗದಿದ್ದರೆ ಮನಸ್ಸಿನಲ್ಲೇ ಮಾತಾಡುತ್ತಿರುತ್ತೇನೆ. ಎಲ್ಲರೂ ಹಾಗೆ ಮಾತನಾಡುವುದಿಲ್ಲ. ಕೆಲವರು ಹೆಚ್ಚು ಮಾತನಾಡುತ್ತಾರೆ. ಅದೆಲ್ಲಾ ಮಾತಿನ ಮಾತಾಯಿತು. ಈಗ ನಾನು ಹೇಳ ಹೊರಟಿರುವುದು ಮಾತಿನ ಮೇಲಿರದಿದ್ದರೂ ಅಂತಹ ಹೆಸರನ್ನು ಗಳಿಸಿಕೊಂಡ ಮೇಲ್ಮಾತಿನ ಕುರಿತು. ನಮ್ಮ ಹಳ್ಳಿಯ ಜನರಲ್ಲಿ ಬಹಳಷ್ಟು ಜನರದ್ದು ಈ ಹವ್ಯಾಸ, ಪೇಟೆಯಲ್ಲಿಯೂ ಇಲ್ಲವೆಂದಲ್ಲ ನನಗೆ ಗೊತ್ತಿಲ್ಲ. ಶಿವಾಯಿ, ಶಿವ, ಏನಪಾ ಅಂದ್ರೆ ಗೊತ್ತಾಯ್ತ ಇಲ್ಯ, ಏನ್ ಹೇಳು?, ಮತ್ತೆ, ಸರ್ವೇ ಸಾಮಾನ್ಯವಾಗಿ, ಬೇಜಾರು ಮಾಡ್ಕೋಬೇಡಿ, ಹೀಗೆ ನೂರಾರು ತರಹದ ಮೇಲ್ಮಾತುಗಳಿವೆ. ಅವು ಒಮ್ಮೊಮ್ಮೆ ಹಾಸ್ಯ ಸನ್ನಿವೇಷವನ್ನು ಸೃಷ್ಟಿಸಿಬಿಡುತ್ತವೆ. ಕೆಲವೊಮ್ಮೆ ಸಿಟ್ಟಿನ ರಂಪಾಟಕ್ಕೂ ಕಾರಣವಾಗುತ್ತದೆ.

ಸಾಗರದ ಸಮೀಪದ ಕುಂಟಗೋಡಿನಲ್ಲಿ ಯಜಮಾನರೊಬ್ಬರಿದ್ದರು. ಅವರಿಗೆ ಮಾತಿನ ಆರಂಭಕ್ಕೊಂದು "ಶಿವ" ಅಂತ್ಯಕ್ಕೊಂದು ಶಿವ ಸೇರಿಸದಿದ್ದರೆ ಮಾತನಾಡಲೇ ಬರುತ್ತಿರಲಿಲ್ಲ. ಒಮ್ಮೆ ಅವರಿಗೆ ತಹಶೀಲ್ದಾರರನ್ನು ಕಾಣುವ ಕೆಲಸವಿತ್ತು. ಸರಿ ತಲೆಯಮೇಲೊಂದು ಟೋಪಿ ಬಗಲಲ್ಲೊಂದು ಚೀಲ ತೂಗಿಸಿಕೊಂಡು ಆಫೀಸಿನ ಒಳಗೆ ಯಾರನ್ನೂ ಕೇಳದೆ ನುಗ್ಗಿದರು. ತಹಶೀಲ್ದಾರರೋ ಹಮ್ಮಿನ ಗಿರಾಕಿ. ಆದರೆ ನುಗ್ಗಿದವರು ವಯಸ್ಸಾದ ಜನರಾದ್ದರಿಂದ ಸ್ವಲ್ಪ ಸಿಟ್ಟು ನುಂಗಿಕೊಂಡು "ಯಜಮಾನ್ರೆ ಏನಾಗ್ಬೇಕು?" ಅಂತ ಕೇಳಿದರು. ಇವರು" ಶಿವ, ನಮ್ಮ ತೋಟದ ಪಹಣಿಯಲ್ಲಿ ಸರ್ವೆ ನಂಬರ್ರು ತಪ್ಪಾಗಿ ಎಂಟ್ರಿ ಆಗಿದೆ ಶಿವ". ಈಗ ತಹಶೀಲ್ದಾರರು ಸ್ವಲ್ಪ ಗರಂ ಆದಂತೆ ಕಂಡುಬಂದರು. ಇವರ ಪ್ರಶ್ನೆಗೆ ಉತ್ತರಿಸಲಿಲ್ಲ. ಮತ್ತೆ ಯಜಮಾನರು, "ಅಲ್ಲಾ ಶಿವ, ಶ್ಯಾನುಬೋಗಂಗೆ ಹೇಳಿದರೆ ದುಡ್ಡು ಕೊಡಿ ಸರಿ ಮಾಡ್ತೀನಿ ಅಂತಾನೆ, ಇದು ಸರೀನಾ ಶಿವ" ಎಂದು ರಾಗ ಎಳೆದರು. ತಹಶೀಲ್ದಾರರಿಗೆ ಅದೆಲ್ಲಿತ್ತೊ ಸಿಟ್ಟು" ಎನ್ರೀ ಯಜಮಾನ್ರೆ ಏನೋ ವಯಸ್ಸಾಗಿದೆ ಅಂತ ಗೌರವ ಕೊಟ್ರೆ ತಲೆ ಹರಟೆ ಮಾಡ್ತೀರಾ?" ಅಂತ ಗರಂ ಆದರು. " ಅಯ್ಯ ಶಿವ ಅದ್ಯಾಕೆ ಹಂಗೆ ರೇಗ್ತೀರಿ ಶಿವ ನಾನೇನು ತಪ್ಪು ಮಾಡ್ದೆ..? " ಅಂತ ತಹಶೀಲ್ದಾರರ ಸಿಟ್ಟು ಅರ್ಥವಾಗದೆ ಯಜಮಾನರು ಅಲವತ್ತುಕೊಡರು. ಈಗ ಅದೆಲ್ಲಿತ್ತೋ ತಹಶೀಲ್ದಾರರಿಗೆ " ಮುಚ್ಚಯ್ಯಾ ಮುದುಕಾ.. ಸುಮ್ನೆ ನಡಿಯಾಚೆ" ಅಂತ ರೇಗಾಡಿ ಅಕ್ಷರಶಃ ಯಜಮಾನರನ್ನು ಹೊರದಬ್ಬಿದರು. ತಹಶೀಲ್ದಾರರ ಮಂಗಾಟ ಅರ್ಥವಾಗದ ಯಜಮಾನರು ಜವಾನನ ಬಳಿ ಬಂದು ಸವಿವರವಾಗಿ ಹೇಳಿ "ಶಿವ ಅವರು ಯಾಕೆ ಹಿಂಗಾಡ್ತಾರೆ ಶಿವ ?" ಅಂತ ಕೇಳಿದಾಗ ಗುಟ್ಟು ರಟ್ಟಾದದ್ದು. ತಹಶೀಲ್ದಾರರ ಜೆಸರು ಶಿವಪ್ಪ ಅಂತ. ಯಜಮಾನರು ಮಾತು ಮಾತಿಗೆ ಮೆಲ್ಮಾತಾಗಿ ಶಿವ ಶಿವ ಅಂತ ಹೇಳಿದ್ದನ್ನು ಅವರು ತಮ್ಮನ್ನು ಏಕವಚನದಿಂದ ಹೆಸರು ಹೇಳಿ ಕೂಗುತ್ತಿದ್ದಾರೆ ಯಜಮಾನರು ಅಂತ ಅಂದುಕೊಂಡಿದ್ದರು. ಕೊನೆಗೂ ಯಜಮಾನರು " ಶಿವಾ ಎಂತ ಕಾಲ ಬಂತು ಶಿವಾ ನಿನ್ನ ಹೆಸರನ್ನೂ ಹೆಳುವಂತಿಲ್ಲ ಶಿವಾ" ಎನ್ನುತ್ತಾ ಜಾಗ ಖಾಲಿ ಮಾಡಿದರು.

(-ಮುಂದುವರೆಯುತ್ತದೆ)

Sunday, June 1, 2008

ಬಡ ಬ್ರಾಹ್ಮಣ ಮತ್ತು ಬಡ ಸಾಹಿತಿಗಳಿಬ್ಬರೂ ಬೆಂಕಿಯಂತಂತೆ


ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು " ಎಂದು ಆರಂಭವಾಗುವ ಕತೆಗಳನ್ನು ನೀವು ಓದಿದ್ದೀರಿ. ಅದೇ ರೀತಿ ಕಾಸಿಲ್ಲದ ಸಾಹಿತಿಯ ಬಗ್ಗೆಯೂ ವ್ಯಂಗ್ಯ ಹಾಸ್ಯಬರಹಗಳನ್ನು ಓದಿರುತ್ತೀರಿ. ಇದೇಕೆ ಬ್ರಾಹ್ಮಣನನ್ನು ಹಾಗೂ ಸಾಹಿತಿಗಳನ್ನೂ ಬಡವನನ್ನಾಗಿ ಚಿತ್ರಿಸುತ್ತಿದ್ದರು ಅಂತ ಒಮ್ಮೆಯಾದರೂ ಯೋಚಿಸಿಯೇ ಯೋಚಿಸುತ್ತೀರಿ. ನಿಮ್ಮದೇ ಆದ ಉತ್ತರ ಸಿಕ್ಕಿರಲೂಬಹುದು. ಆದರೆ ಇದೂ ಕೂಡ ಒಂದು ಉತ್ತರ ಎಂಬ ಸತ್ಯ ನಿಮ್ಮೆದುರಿಗೆ ಇದೆ.
ಮನು ಮಾಡಿದ ನಾಲ್ಕು ವರ್ಣಗಳು ಹುಟ್ಟಿನಿಂದಲ್ಲ. ಅದು ಮನಸ್ಥಿತಿಯಿಂದ. ಅವರವರ ಮನಸ್ಥಿತಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಂತರದ ದಿನಗಳಲ್ಲಿ ಅವುಗಳು ಜಾತಿಯೆಂಬ ರೂಪ ಪಡೆದು ಹುಟ್ಟಿನಿಂದಲೇ ಅಂಟಿಕೊಂಡು ಬಿಡುತ್ತವೆ. ಬ್ರಾಹ್ಮಣ ಮನಸ್ಥಿತಿಯೆಂದರೆ, ಪುಂಖಾನು ಪುಂಖವಾದ ಯೋಚನೆಯ ಮಿದುಳು. ಮಿದುಳಿಗೆ ಕ್ಷಣ ಕ್ಷಣಕ್ಕೂ ಆಹಾರ ಬೇಕು. ಕ್ಷತ್ರಿಯ ಮನಸ್ಥಿತಿಯೆಂದರೆ ಧೈರ್ಯ, ಹಿಂದು ಮುಂದಿನ ಆಲೋಚನೆ ಯಿಲ್ಲ ದ ಹುಂಬತನ. ವೈಶ್ಯ ಮನಸ್ಥಿತಿಯೆಂದರೆ ಕುಂತಿದ್ದಕ್ಕೂ ನಿಂತಿದ್ದಕ್ಕೂ ಲಾಭ ನಷ್ಟದ ಲೆಕ್ಕಾಚಾರ, ಶೂದ್ರ ಮನಸ್ಥಿತಿಯೆಂದರೆ ಹಿಡಿದ ಕೆಲಸವನ್ನು ಬೇಸರವಿಲ್ಲದೆ ಎಡಬಿಡದೆ ಮಾಡುವುದು. ಈ ಎಲ್ಲಾ ಗುಣಗಳೂ ಎಲ್ಲರಲ್ಲಿಯೂ ಇದ್ದು, ಒಂದು ಗುಣ ಇಡೀ ವ್ಯಕ್ತಿತ್ವವನ್ನು ಆಳುತ್ತಿರುತ್ತದೆ. ಬ್ರಾಹ್ಮ್ಣಣ ವ್ಯಕ್ತಿತ್ವ ನಿಮ್ಮನ್ನಾಳುತ್ತಿದ್ದರೆ, ನಿಮಗೆ ಯೋಚಿಸಿದಂತೆಲ್ಲಾ ಯೋಚನೆಗಳ ಸರಣಿಯೇ ನಿರ್ಮಾಣವಾಗುತ್ತದೆ. ಪಾಸಿಟೀವ್ ಯೋಚನೆ ಶುರು ಮಾಡಿದರೆ ಅದೇ ರಿಸಲ್ಟ್. ನೆಗೆಟೀವ್ ಯೋಚನೆ ಬೆನ್ನತ್ತಿದರೆ ಅದೇ ರಿಸಲ್ಟ. ಹೆದರಿಕೆಯ ಕುರಿತು ಯೋಚನೆ ಆರಂಭಿಸಿದರೆ ಅದಕ್ಕೂ ಅಂತ್ಯವೇ ಇಲ್ಲ. ಈ ಮನಸ್ಥಿತಿಯವರಿಗೆ ಅದ್ಭುತ ಕಲ್ಪನಾಶಕ್ತಿ. ಹಾಗಾಗಿ ಹಿತೋಪದೇಶಕ್ಕೂ ಶಕ್ತರು. ಕತೆ ಕಟ್ಟುವುದಕ್ಕೂ ನಿಸ್ಸೀಮರು. ಆದರೆ ಈ ಮನಸ್ಥಿತಿಯವರಿಗೆ ಪಾಪ ಪುಣ್ಯ ಜಾಸ್ತಿ, ಲಾಭ ನಷ್ಟಗಳ ಅಂದಾಜು ಇಲ್ಲ. ಹಿಡಿದ ಕೆಲಸ ನಿರಂತರ ಮಾಡಲಾರರು. ಅವರ ಹಿಡಿತವಿಲ್ಲದ ಯೋಚನಾಲಹರಿಗೆ ಧ್ಯಾನ, ಸಂದ್ಯಾವಂದನೆಯಂತಹ ಕ್ರಿಯೆಗಳ ಮುಖಾಂತರ ಕನಿಷ್ಟ ದಿನಕ್ಕೊಮ್ಮೆಯಾದರೂ ಬ್ರೆಕ್ ಹಾಕಿದರೆ ಸ್ವಸ್ಥ ರಾಗಿರ ಬಲ್ಲರು. ಇಲ್ಲದಿದ್ದರೆ ನಿರಂತರ ಯೋಚಿಸಿ ಅಧೋಗತಿಗಿಳಿದುಬಿಡುತ್ತಾರೆ.ಸಾಹಿತಿಗಳೂ ಈ ಬ್ರಾಹ್ಮಣ ಮನಸ್ಥಿತಿಯ ಜನರು ಆಗಿರುವುದರಿಂದ ಮಿಕ್ಕ ಜನರ ಆಲೋಚನಾ ಮಟ್ಟಕ್ಕಿಂತ ಮೇಲ್ಮಟ್ಟದ ಆಲೋಚನೆ ಇವರಾದ್ದರಿಂದ. ಜನಸಾಮಾನ್ಯರಿಂದ ಅಹಂಕಾರದವರು ಎಂಬ ಪಟ್ಟ ಕಟ್ಟಿಕೊಂಡು ತಮ್ಮ ಜೀವನವನ್ನು ಲಾಭ ನಷ್ಟಗಳ ವ್ಯವಹಾರಕ್ಕೆ ಇಳಿಸಲಾರದೆ ಅಸಾಹಾಯಕರಾಗಿ ಆರ್ಥಿಕ ಹಿನ್ನಡೆಹೊಂದುತ್ತಾರೆ
ಆದ್ದರಿಂದ ಬಡ ಬ್ರಾಹ್ಮಣ ಹಾಗೂ ಸಾಹಿತಿ ಬೆಂಕಿಯಂತೆ ತಾವು ಉರಿದು......ಬೆಚ್ಚನೆಯ ಬೆಳಕು ನೀಡಬಲ್ಲರು, ಕೋಪಾಗ್ನಿಯಾದರೆ ಸುಡಲೂ ಬಲ್ಲರು. ಉತ್ತಮ ಸಾಹಿತಿ ಅಥವಾ ಬ್ರಾಹ್ಮಣ ಪರಿಪೂರ್ಣ ಅಂತ ಕಂಡು ಹಿಡಿಯಲು ಆತನ ಆರ್ಥಿಕ ಪರಿಸ್ಥಿತಿ ನೋಡಿದರೆ ಸಾಕು. ಉತ್ತಮ ಆರ್ಥಿಕ ಪರಿಸ್ಥಿತಿ ಇದ್ದೂ ಒಳ್ಳೆಯ ಸಾಹಿತ್ಯ ಸೃಷ್ಟಿಕರ್ತ ನೆಂದರೆ ಆತನಿಗೆ ಶ್ರೀಮಂತಿಕೆ ವಂಶಪಾರಂಪರ್ಯ ಆಗಿರುತ್ತದೆ. ಅವನ ಅಂತ್ಯಕಾಲದಲ್ಲಿ ಆತ ದಿವಾಳಿಯಂಚಿಗೆ ಬಂದರೂ ಆಶ್ಚರ್ಯವಿಲ್ಲ.
ಆದ್ದರಿಂದ ಬಡ ಬ್ರಾಹ್ಮ್ಣಣ ಬಡ ಸಾಹಿತಿ ಎಂದು ಆರಂಭದಲ್ಲಿ ಶುರುವಾಗಿದ್ದು.
ಇವೆಲ್ಲಾ ತುಂಬಾ ರಗಳೆ ಅಂತ ಅನಿಸಿತಾ ಸಾರಿ ನೀವು ಶೂದ್ರ ಮನಸ್ಥಿತಿಯವರು ಎಂದರ್ಥ. ನೀವು ನಿಮ್ಮಷ್ಟಕ್ಕೆ ಸುಖಿಗಳು .ಎಂಜಾಯ್ ಯುವರ್ ಲೈಫ್.