Friday, August 31, 2012

ಈ ಈಸ ರೈಸ್ ನಿಮಗೆ ನೆನಪಿರಲಿ.

ಅದೊಂತರ ವಿಚಿತ್ರ ಸ್ಟೇಟಸ್. ಗುಂಪಿನಲ್ಲಿದ್ದಾಗ ಟೂರ್ ಹೋದಾಗ ಕೆಲವರು ಸ್ವಲ್ಪ ವಿಚಿತ್ರವಾಗಿ ಆಡತೊಡಗುತ್ತಾರೆ. ಅದಕ್ಕೆ ನಾವು ಈಸ ರೈಸ್ ಅನ್ನುತ್ತೇವೆ(ಇದು ನಮ್ಮ ವೈಯಕ್ತಿಕ ಪದ) ಒಟ್ಟಿನಲ್ಲಿ ಗುಂಪಿನಲ್ಲಿರುವವರಿಗಿಂತ ನಾವು ಬೇರೆ ಅಂತ ತೋರಿಸಿಕೊಳ್ಳುವ ಹಂಬಲದ ವರ್ತನೆ ಅದು. ಸಹಜ ಸ್ಥಿತಿಗಿಂತ ಮೇಲಿನ ಅವಸ್ಥೆ ಆಗಿದ್ದಕ್ಕೆ "ರೈಸ್" ಅನ್ನುವ ಪದ ಪ್ರಯೋಗ ಅಲ್ಲಿ ಅಷ್ಟೆ. ಈ ಈಸ ರೈಸ್ ಸ್ಥಿತಿ ಇದೆಯಲ್ಲಾ ಅದು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಹೋದ ಉದಾಹರಣೆ ಇದೆ. ಹೀರೋ ಆಗಲು ಹೋಗಿ ಝೀರೋ ಆಗುವ ಸ್ಥಿತಿ ಅದು. ಜೋಗ ಬ್ರಿಟೀಷ್ ಬಂಗ್ಲೆಯ ನೋಟದಲ್ಲಿ ಒಂದು ನುಣುಪಾದ ಬಂಡೆಯಿದೆ. ಅಲ್ಲಿ ಅಪಾಯ ಅಪಾಯ ಅಪಾಯ ಅಂತ ಎಲ್ಲರೂ ಹಲುಬುತ್ತಿರುತ್ತಾರೆ. ಇಷ್ಟಾದರೂ ಅಲ್ಲಿ ವರ್ಷಕ್ಕೆ ೩-೪ ಶೀಟಿ ಕೇಸ್ ನಡೆಯುತ್ತಲಿರುತ್ತದೆ. ಅದಕ್ಕೆ ಗುಂಪಿನಲ್ಲಿ ಬಂದಾಗ ಈಸ ರೈಸ್ ಆಗುವ ಸ್ಥಿತಿಯೇ ಕಾರಣ. ಈ ಚಿತ್ರದಲ್ಲಿ ನೋಡಿ ಜಿಟಿಜಿಟಿ ಮಳೆಯ ನಡುವೆ ಇವರದೆಂತಾ ಹುಚ್ಚಾಟ ಅಂತ. ಹಾಗಂತ ಹೀಗೆ ನೋಡಿ ಬಚಾವಾಗಿ ಹೋದವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ ಆ ಬಚಾವಾದವರು ಹುಚ್ಚಾಟ ಮಾಡಲು ಹೋಗಿರುವುದಿಲ್ಲ ಅಂತಲಾದರೂ ಅನ್ನಬಹುದು ಅಥವಾ ಮಾರನೇ ದಿವಸದ ಪತ್ರಿಕೆಯವರಿಗೆ ನಸೀಬು ಕೊಟ್ಟಿ  ಇತ್ತು ಅಂತಲಾದರೂ ಅನ್ನಬಹುದು. ಆದರೂ ಹುಷಾರು ತಪ್ಪಬಾರದು. ಬಿದ್ದರೂ ಈಸ ರೈಸ್ ಆಗಿ ಬೀಳಬಾರದು. ಹಾಗಾಗಿ ಟೂರ್ ಹೋದಾಗ ಈ ಈಸ ರೈಸ್ ನಿಮಗೆ ನೆನಪಿರಲಿ.

ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

ಬಹು ಸುಲಭ, ಬಹು ಕಷ್ಟ ಹೀಗೆ ನಾವು ವಿಂಗಡಿಸಬಹುದು ವಿಷಯಗಳನ್ನ ಘಟನೆಗಳನ್ನ ವಿದ್ಯಮಾನಗಳನ್ನ....ಗಳನ್ನ ಗಳನ್ನ ಗಳನ್ನ. ಬಿಡಿ ಅದು ಬಹಳ ಇದೆ ಪ್ರಸ್ತುತ ಅವನ್ನೆಲ್ಲಾ ಬಿಟ್ಟು ಸಮಸ್ಯೆಗಳ ವಿಷಯವನ್ನಷ್ಟೆ ನೋಡೋಣ.
ಹೀಗೊಂದು ಸಮಸ್ಯೆ ಬಂದಾಗ ಪರಿಹಾರ ಹುಡುಕುವ ವಿಷಯ ಇದೆಯಲ್ಲ ಅಥವಾ ಸಮಸ್ಯೆಯಿಂದ ಆಚೆ ಬರುವ ವಿಚಾರ ಇದೆಯಲ್ಲ ಅದು ಬಹು ಸುಲಭ ಹಾಗೂ ಬಹು ಕಷ್ಟ ಅಂತ ವಿಂಗಡಿಸಬಹುದು. ಯಾವುದು ಕಷ್ಟ ಯಾವುದು ಸುಲಭ ಅಂತಾದರೆ, ಬೇರೆಯವರ ಸಮಸ್ಯೆಗೆ ತಟಕ್ಕನೆ ಪರಿಹಾರ ಹುಡುಕುವುದು ಬಹು ಸುಲಭ, ನಮ್ಮ ಸಮಸ್ಯೆಗೆ ಪರಿಹಾರ ಬಲು ಕಷ್ಟ.
ಸನ್ಯಾಸಿಯೊಬ್ಬ ನಿದ್ದ. ಭಕ್ತರ ನಿತ್ಯ ಸಮಸ್ಯೆಗೆ ಪರಿಹಾರ ಅವನ ಕಾಯಕಗಳಲ್ಲೊಂದು. ಬರುವ ಭಕ್ತರದ್ದೋ ಹತ್ತು ಹಲವು ಸಮಸ್ಯೆಗಳು. ಹೆಂಡತಿ ಹೊಂದಿಕೊಳ್ಳುವುದಿಲ್ಲ ಎಂದು ಗಂಡ, ಗಂಡನದು ದುಶ್ಚಟ ಎಂದು ಹೆಂದತಿ, ವ್ಯಾಪಾರದಲ್ಲಿ ನಷ್ಟ ಎಂದ ವ್ಯಾಪಾರಿ, ಉದ್ಯಮ ಏಳದು ಎಂಬ ಉದ್ಯಮಿ ಹೀಗೆ ಬರುವ ಭಕ್ತರ ಸಮಸ್ಯೆಗೆ ಸನ್ಯಾಸಿ ಚಟಕ್ಕನೆ ಉತ್ತರ ನೀಡಿ ಸಮಾಧಾನ ಪಡಿಸುತ್ತಿದ್ದ. ಹೀಗೆ ಸಮಾಧಾನ ಹೊಂದಿದವರು ಒಂದಿಷ್ಟು ಹಣ ನೀಡುತ್ತಿದ್ದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ.
         ಆತ ದುಂಡನೆಯ ಹೊಟ್ಟೆ ಹೊತ್ತು ಬರುವ ಜನಕ್ಕೆ "ನೀವು ಬೇರೆಯವರ ಆಹಾರವನ್ನೂ ತಿನ್ನುವ ಕಾರಣಕ್ಕೆ ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿದೆ, ನಿಮ್ಮ ದುಡಿಮೆಯದು ತಿನ್ನಿ" ಎನ್ನುತ್ತಿದ್ದ. ಕೇಳಿದವರಿಗೆ ಇದು ಅರ್ಥವಾಗಿ ಅವರು ಉದ್ಧಾರವಾಗಿ ಹೋದರು ಹೊಟ್ಟೆಯನ್ನೂ ಇಳಿಸಿಕೊಂಡರು. ಅವರೂ ಸನ್ಯಾಸಿಗೆ ಹಣವನ್ನು ಹಾಕಿದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ ಕೊಂಚ ಕಡಿಮೆ ಯಾಯಿತು.
      "ಪತ್ನಿಯನ್ನು ಪ್ರೀತಿಸಿ, ಪರಪತ್ನಿಯನ್ನಲ್ಲ" ಅಂತ ಮೇಲ್ಮಟ್ಟದ ಮಾತನ್ನಾಡಿ ಕೆಳಮಟ್ಟಕ್ಕಿಳಿದವರನ್ನೂ ಮೇಲೆತ್ತಿದ. ಮೂರು ಪದದ ಮಾತಿನಲ್ಲಿ ಮುನ್ನೂರು ಅರ್ಥ ಪಡೆದುಕೊಂಡು ಭಕ್ತರು ಧನ್ಯರಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಸುಖವನ್ನು ಕಾಣಹತ್ತಿದರು. ಅವರೂ ಸನ್ಯಾಸಿಯ ಪಾದಕ್ಕೆ ಹಣವನ್ನು ಹಾಕಿದರು, ಸನ್ಯಾಸಿ ಚೆಲ್ಲಾಪಿಲ್ಲಿಯಾಗುತ್ತಿದ್ದ ದುಡ್ಡನ್ನು ಒಂದೆಡೆ ಪೇರಿಸಿಟ್ಟ.
      "ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ" ಎಂದ ಸನ್ಯಾಸಿ, ಭಕ್ತರು ತೆರೆದ ಬಾಯಿ ಮುಚ್ಚಲಿಲ್ಲ. ಒಬ್ಬ ಭಕ್ತ ಹೇಳಿದ" ಹೌದು ಎಷ್ಟು ಆಳವಾದ ಮಾತಿದು, ನಾವು ಊಟ ಮಾಡುವುದು ಕೈಯಲ್ಲಿ, ಅಂತಾದ ಮೇಲೆ ಊಟ ಒಳ್ಳೆಯದಾಗಿದ್ದರೆ ಆರೋಗ್ಯ ಅಂತ ಅರ್ಥ ". ಮತ್ತೊಬ್ಬ ಹೇಳಿದ " ಆಕ್ಯೂಪ್ರೆಷರ್ ನ ಸಂಪೂರ್ಣ ಅರ್ಥವನ್ನು ಒಂದೇ ವಾಕ್ಯದಲ್ಲಿ ಸನ್ಯಾಸಿಗಳು ಹೇಳಿದ್ದಾರೆ ಅಬ್ಬ"  ಮಗದೊಬ್ಬ " ಹೌದು ಕೈ ಬಾಯಿ ಶುದ್ಧವಾಗಿದ್ದರೆ" ಆರೋಗ್ಯ ಅಂತ ಅದರ ಅರ್ಥ ಅಂದ. ಎಲ್ಲಾ ಭಕ್ತರೂ ಒಂದೇ ವಾಕ್ಯದಲ್ಲಿ ಪುನೀತರಾಗಿ ಹಣವನ್ನು ಪಾದಕ್ಕೆ ಹಾಕಲೆತ್ನಿಸಿದರು. ಸನ್ಯಾಸಿಗೆ ಪೇರಿಡಿಸುವುದು ಸಮಸ್ಯೆಯಾಗಿ ಒಂದು ಪೆಟ್ಟಿಗೆ ತರಿಸಿ ಅದರಲ್ಲಿ ಹಾಕುವಂತೆ ಅಣತಿ ಮಾಡಿದ
       ದಿನಕಳೆದಂತೆ ಸನ್ಯಾಸಿ ಪ್ರಖ್ಯಾತನಾಗುತ್ತಾ ಸಾಗಿದ. ಆಶ್ರಮ ಸ್ಥಾಪನೆಯಾಯಿತು, ಪೀಠ ಬಂತು, ಸೇವಕಿಯರು ಬಂದರು,ಸಮಸ್ಯೆ ಹೊತ್ತು ಬರುವವರ ಸಂಖ್ಯೆ ವಿಸ್ತಾರ ಪಡೆಯುತ್ತಾ ಸಾಗಿತು.
       ಮತ್ತು ಈಗ ಸನ್ಯಾಸಿ ಸಮಸ್ಯೆಯಲ್ಲಿದ್ದಾರೆ.. ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

Wednesday, August 29, 2012

ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

ಇದೊಂದು ಚಿತ್ರ ನೋಡಿದಾಗ ನಿಮಗಿರಲಿ ನನಗೂ ಕಣ್ಣೀರ ಕೋಡಿ ಹರಿದಿಲ್ಲ ನಿಜ ಆದರೆ ಛೆ ಅನ್ನುವಷ್ಟು ಬೇಸರವಾಗುತ್ತದೆ. ೧೮ ರ ಹರೆಯದ ಈ ಯುವಕ ಅತಿವೇಗದ ಬೈಕ್ ಡ್ರೈವ್ ಮಾಡಿ ಬಸ್ಸಿನಡಿಗೆ ಸಿಕ್ಕು ಕಳೆದ ಕೆಲ ದಿವಸದ ಹಿಂದೆ ದೇಹ ತ್ಯಜಿಸಿದ. ಆತನ ಮನೆಯವರ ರೋಧನ ಮುಗಿಲುಮುಟ್ಟುತ್ತಿತ್ತು. ನಾನು ರಿಪೋರ್ಟ್ ಮಾಡಲು ಹೋಗಿದ್ದೆ. ಆಗಸ್ಟ್ ಹದಿನೈದರ ಬೆಳಿಗ್ಗೆ ಎಂಟೂವರೆ ಗಂಟೆಗೆ ಪೋಲೀಸ್ ಕಾನಸ್ಟೇಬಲ್ ಲೋಕೇಶ್ ಹೀಗೊಂದು ಅಪಘಾತವಾಗಿದೆ ತಲವಾಟದ ಬಳಿ ಎಂದಾಗ "ಮಕ್ಕಳ ಪ್ರಭಾತ್ ಪೇರಿ" ಫೋಟೋ ತೆಗೆಯುತ್ತಿದ್ದವನು ಪಟಕ್ಕನೆ ಓಡಿದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅಂಬುಲೆನ್ಸ್ ಬಂದು ಹಿಂಬದಿ ಕುಳಿತಿದ್ದವನನ್ನು ಹೇರಿಕೊಂಡು ಹೋಗಿತ್ತು. ಈತ ಇಹಲೋಕ ಯಾತ್ರೆ ಮುಗಿಸಿದ್ದ ಕಾರಣ ಅಲ್ಲಿಯೇ ಇದ್ದ. ಅದಾಗಲೇ ಜನಜಂಗುಳಿ ಸೇರಿತ್ತು. ಅಪ್ಪ ದುಬೈ ಲಿ ಇದ್ದವರಂತೆ ಮಗ ಸುಖವಾಗಿರಲಿ ಎಂದು ಹೊಸ ಬೈಕ್ ಕೊಡಿಸಿದ್ದರು ಹೊಚ್ಚ ಹೊಸ ಬೈಕ್ ಮಗನನ್ನೇ ಬಲಿತೆಗೆದುಕೊಂಡಿತ್ತು. ಇರಲಿ ಅವೆಲ್ಲಾ ಆಮೇಲಿನ ತರ್ಕದ ಕತೆಯಾಯಿತು. ವಾಸ್ತವಕ್ಕೆ ಬರೋಣ.

ಮಳೆಗಾಲದ ದಿನಗಳಲ್ಲಿ ವಾರಕ್ಕೆ ಕನಿಷ್ಟವೆಂದರೂ ೩-೪ ಇಂತಹ ಘಟನೆಗಳು ನನ್ನನ್ನು ರಸ್ತೆಗಿಳಿಸುತ್ತವೆ. ಅಲ್ಲಿ ಹೋಗಿ ಫೋಟೋ ತೆಗೆದು ನ್ಯೂಸ್ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅಂಬುಲೆನ್ಸ್ ಗೆ ಫೋನ್ ಮಾಡುವುದು, ಪೋಲೀಸ್ ಗೆ ಹೆಲ್ಪ ಮಾಡುವುದು ಮುಂತಾದ ಕೆಲಸಗಳು ಇರುತ್ತವೆ. ಅವುಗಳಲ್ಲಿ ಮಹಜರ್ ಗೆ ಸೈನ್ ಹಾಕುವುದು ಪ್ರಮುಖ ಅಂಗ. ಮೊನ್ನೆ ಈ ಅಪಘಾತ ನಡೆದಾಗ ಗಂಟೆ ೧೨ ಆದರೂ ಮೃತ ದೇಹವನ್ನು ಮನೆಯವರಿಗೆ ಬಿಟ್ಟುಕೊಡಲು ಪೋಲೀಸರಿಗೆ ಆಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ಮಹಜರ್ ಗೆ ಲೋಕಲ್ ಮೂವರು ಸಹಿ ಹಾಕಬೇಕು. ಆದರೆ ಅಲ್ಲಿ ಯಾರೂ ಸಹಿ ಹಾಕಲು ಒಪ್ಪುವುದಿಲ್ಲ. ಹಾಗೆ ಜನರು ಹೆದರಲು ಪ್ರಮುಖ ಕಾರಣ ಕೋರ್ಟು ಕಛೇರಿ ತಂಟೆ ನಮಗೆ ಯಾಕೆ? ಅಂಬುದಷ್ಟೇ ಕಾಳಜಿ. ಅಯ್ಯೋ ಅಮ್ಮಾ ಎಂಬ ಗೋಳಾಟದ ನಡುವೆ ಈ ಕಾನೂನು ಪ್ರಕ್ರಿಯೆ ನಡೆಯದೆಯೇ ದೇಹ ಅಲ್ಲಿಂದ ಶಿಫ್ಟ್ ಮಾಡುವಂತಿಲ್ಲ. ಅಂತೂ ಇಂತು ಎರಡು ಜನ ಮಹಜರ್ ಗೆ ಸಹಿ ಹಾಕಲು ಒಪ್ಪಿಸುವಲ್ಲಿ ಪೋಲೀಸರು ಹೈರಾಣಾಗಿದ್ದರು, ಮೂರನೆಯವನಾಗಿ ನಾನು ಯಥಾಪ್ರಕಾರ ಸೈನ್ ಜಡಿದೆ. ಪಟಕ್ಕನೆ ಕೆಲಸ ಮುಗಿಯಿತು.
ಆತ್ಮ ತ್ಯಜಿಸಿದ ದೇಹ ಒಂದೆಡೆ, ರೋಧನ ಮತ್ತೊಂದೆಡೆ, ಕಾನೂನು ಪ್ರಕ್ರಿಯೆ ಮಗದೊಂದೆಡೆ. ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

Sunday, August 26, 2012

ಹಾಗಾದರೆ ಹುಡುಕಿ ನೀವು

ತಪ್ಪುಗಳನ್ನು ಮಾಡದ ಮನುಷ್ಯರಿಲ್ಲ. ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಅದು ಕಾಲದಿಂದಲೂ ನಡೆದುಕೊಂಡು ಬಂದಿದ್ದು. ಈಗ ನಾವು ಅದೇ ಏಕತಾನತೆಯಿಂದ ಆಚೆ ನಿಂತು ನೋಡಲು ಸಾಧ್ಯವೇ ಅಂತ ಯೋಚಿಸೋಣ. ತಪ್ಪುಗಳ ಅರ್ಥ ಅಷ್ಟೆ ನಮ್ಮ ವರ್ತನೆ ನಡೆ ನುಡಿ ಮತ್ತೊಬ್ಬರ ದೃಷ್ಟಿಯಲ್ಲಿ ಇಷ್ಟವಾಗದಾಗ ಅದು ತಪ್ಪು ಅಂತ ಅರ್ಥೈಸಿಕೊಳ್ಳುತ್ತದೆ.  ಈ ತಪ್ಪುಗಳು ಕೂಡ ಲಾಗಾಯ್ತಿನಿಂದಲೂ ಏಕತಾನತೆಯಿಂದ ಕೂಡಿ ಬೇಸರ ತರಿಸುತ್ತದೆ. ಅವರು ಅಷ್ಟು ದುಡ್ಡು ತಿಂದರು, ಅವನು ಮೂರು ಮದುವೆ ಮಾಡಿಕೊಂಡು ಕೈಕೊಟ್ಟ, ಅವನು ಕೊಲೆ ಮಾಡಿದ, ಇವರು ಮೋಸ ಮಾಡಿದರು, ಬಾಲಕ ಬೀಡಿ ಸೇದಿದ, ಕ್ವಾಟರ್ ಹೆಂಡ ಕುಡಿದ, ಹುಡುಗಿಗೆ ಲೈನ್ ಹೊಡೆದ ಹೀಗೆ ಕಾಲ ಕಾಲದಿಂದಲೂ ಒಂದೇ ತರಹದ ತಪ್ಪುಗಳನ್ನು ಮಾಡುತ್ತಾ ಸಾಗುತ್ತಲಿದ್ದಾರೆ ಮನುಜರು. ಅದಕ್ಕೆ ಕೊಂಚ ರೂಪಾಂತರ ಇರಬಹುದು ಬಿಟ್ಟರೆ ಹೊಸತನವಿಲ್ಲ.  ಅದೇ ಇಲ್ಲಿಯವರೆಗೆ ಯಾರೂ ಮಾಡಿರದ ತಪ್ಪುಗಳನ್ನು ಮಾಡಲು ಸಾದ್ಯವೇ ನಾವು?  ನಾವೇನಾದರೂ ಹೊಸ ತಪ್ಪುಗಳನ್ನು ಮಾಡಲು ಸಾದ್ಯವೇ ಅಂತ ಹುಡಕಬೇಕಿದೆ.
            ಅಭ್ಭಾ ಬಹಳ ಕಷ್ಟ ಕಣ್ರೀ./.. ಯಾರೂ ಮಾಡಿರದ ಹೊಸದೊಂದು ತಪ್ಪು ಹುಡುಕಲು. ಎಲ್ಲಾ ತಪ್ಪುಗಳು ಮುಗಿದುಹೋಗಿವೆಯೇನೋ ಅಂತ ಅನ್ನಿಸಲು ಶುರುವಾಗಿದೆ ಹೀಗೆ ಒಂದು ಯಡವಟ್ಟು ವಿಚಾರವನ್ನು ಯೋಚಿಸಲು ಕುಂತಾಗ. ಆದರೂ ಕೊಂಚ ತಲೆಕೆಡಿಸಿಕೊಂಡಾಗ ಎಲ್ಲಾದರೂ ಸಿಗಬಹುದಾ..? ಎಂಬ ಸಂಶಯ ಕಾಡುತ್ತದೆ.
            ಸ್ವಂತದ್ದೇ ಕಣ್ಣು ಕಿತ್ತುಕೊಳ್ಳುವುದರಿಂದ ಹಿಡಿದು ಸ್ವಮೂತ್ರ ಪಾನದ ವರೆಗೂ, ಹೆತ್ತ ಮಗಳ ಅತ್ಯಾಚಾರದಿಂದ ಹಿಡಿದು ಅಣ್ಣ ತಂಗಿಯ ವಿವಾಹದ ವರೆಗೂ, ಪ್ರಿತಿಸಿದವಳಿಗೆ ಕೈಕೊಟ್ಟವರಿಂದ ಹಿಡಿದು ಮದುವೆಯಾಗಿ ಕೈಬಿಟ್ಟವರವರೆಗೂ, ದೈವಕ್ಕೆ ಮೋಸ ಮಾಡುವುದರಿಂದ ಹಿಡಿದು ಮೋಸಕ್ಕೇ ದೈವದ ಸೃಷ್ಟಿಯವರೆಗೂ, ಹೆತ್ತವರನ್ನೇ ಹೊರ ಹಾಕುವುದರಿಂದ ಹಿಡಿದು ಹೆತ್ತವರೇ ಹೊರಹಾಕಿದವರೆಗೂ, ತಪ್ಪುಗಳು ಮುಗಿದುಹೋಗಿವೆ. ಹೊಸತಿಲ್ಲ ಹೊಸತನವಿಲ್ಲ. ಹೊಚ್ಚ ಹೊಸದೊಂದು ತಪ್ಪು ಮಾಡಲು ಆಗುವುದೇ ಇಲ್ಲ ಅನ್ನುವಷ್ಟು ಮುಗಿದುಹೋಗಿವೆ ಅಂತ ನಮಗೆ ಅನ್ನಿಸಿದರೆ ನಾವು ಆ ದಿಕ್ಕಿನಲ್ಲಿ ಯತ್ನಿಸುತ್ತಿಲ್ಲ ಅಂತ ಅನ್ನಬಹುದು. ಕಾರಣ ಚಲನಚಿತ್ರದಲ್ಲಿನ ಹೊಸ ಹೊಸ ಹಾಡುಗಳನ್ನೇ ತೆಗೆದುಕೊಳ್ಳಿ, "ಪ್ಯಾರ್ ಕೆ ಆಗ್ ಬುಟ್ಟೈತಿ’ ಬರುವವರೆಗೂ ಇಂತಹದೊಂದು ರಾಗ ಇತ್ತು ಅಂತ ನಮಗೆ ಗೊತ್ತಿರಲಿಲ್ಲ, ಮತ್ತು ಅದು ಕೇಳಿದ ನಂತರ ಇನ್ನು ಹೊಸ ಹಾಡು ಹೊಸ ರಾಗ ಸಾದ್ಯವಿಲ್ಲ ಅಂತ ನಮಗೆ ಅನ್ನಿಸುತ್ತದೆ. ಆದರೆ ಅಷ್ಟರಲ್ಲಿ ಮತ್ತೆ ನಾವು ನೀವು ಬಚ್ಚಲಮನೆಯಲ್ಲಿ ಗುಣುಗುಣಿಸುವಂತಹ ಅಪರೂಪದ ಹಾಡೊಂದು ಸೃಷ್ಟಿ ಯಾಗಿಬಿಡುತ್ತವೆ. ಅಲ್ಲಿಗೆ ಇದೆ ಅಂತಾಯಿತು ನಮಗೆ ಹಿಡಿಯಲಾಗುತ್ತಿಲ್ಲ. ಅಥವಾ ಹಿಡಿಯುವ ಅವಶ್ಯಕತೆಯಿಲ್ಲ ಎಂದರೂ ಸರಿಯೇ. ಇರಲಿ ತರ್ಕ ಬಿಟ್ಟು ಮತ್ತೆ ಹೊಸ ತಪ್ಪು ಹುಡುಕುವ ಯತ್ನ ಮಾಡೋಣ.
         ಇಲ್ಲ ಇಲ್ಲ ಸಿಗುತ್ತಿಲ್ಲ ನನಗೆ ಅಂದಾಗ ಇದ್ದದ್ದರಲ್ಲಿಯೇ ಹುಡುಕುವುದು ವಾಸಿ ಎನ್ನಿಸಿ, ಈಗ ನಾನು ಹೀಗೊಂದು ಹೊಸತಪ್ಪು ಹುಡುಕುವ ಯತ್ನ ಮಾಡುತ್ತಿದ್ದೇನಲ್ಲ ಇದೇ ದೊಡ್ಡ ಹೊಸ ತಪ್ಪು ಅಂತ ಅನ್ನಿಸಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡಕಿದಂತಾಗಿ ಹುರ್ರೇ ಎಂದೆ. ಹೌದೇ ಹೌದು ಇದೇ ಹೊಸ ತಪ್ಪು.  ಅರ್ಥ ಮತ್ತು ಸಮಾಧಾನ ಆಗಲಿಲ್ಲವೇ ಹಾಗಾದರೆ ಹುಡುಕಿ ನೀವು