Friday, September 30, 2011

ಲೈಫೆಂಬ ಲೈಪು ಸೆಟಲೈಟ್ ಗಿಂತ ಮೇಲೆ ಸೂಪರ್ ಆಗಿ ಸೆಟ್ಲ್ ಆಗುತ್ತೆ.

ಅದೇಕೋ ಈ ವಾರ ಇಂತಹದ್ದೇ ಆಲೋಚನೆಗಳಪ್ಪಾ, ಆಲೋಚನೆಗಳು ಏಕೆ ಬರುತ್ತವೆ?,ಎಲ್ಲಿಂದ ಬರುತ್ತವೆ?, ನಾವು ನೋಡಿದ್ದು ಕೇಳಿದ್ದು,ತಿಳಿದಿದ್ದು ಒಳಗೆ ಸೇರಿ ಯೋಚನೆಗಿಳಿದು ಆಲೋಚನೆಯಾಗುತ್ತದೆಯೋ, ನನಗೂ ಸರಿಯಾಗಿ ಗೊತ್ತಿಲ್ಲ, ಆದರೆ ಒಂದಂತೂ ಸತ್ಯ ಒಂದಿಷ್ಟು ಒಂದಷ್ಟು ದಿವಸ ಪುತುಪುತುನೆ ಹುಟ್ಟುತ್ತವೆ ಮತ್ತೆ ಮನಸ್ಸು ಲೌಕಿಕಕ್ಕೆ ಇಳಿದು ಮುಳುಗೇಳತೊಡಗುತ್ತದೆ.
ನಮ್ಮ ಪ್ರಾರ್ಥನೆ ಹೇಗಿರಬೇಕು?, ಎಂಬಷ್ಟೆ ವಿಷಯದ ಬೆನ್ನತ್ತಿ ಹೋದರೆ ಒಂದು ಕಾದಂಬರಿಗಾಗುವಷ್ಟು ಬೇಡಿಕೆಗಳನ್ನ ಸಂಗ್ರಹಿಸಬಹುದು. ಇಷ್ಟಕ್ಕೂ ಬದುಕು ಸುಂದರವಾಗಲು ಪ್ರಾರ್ಥಿಸಲೇ ಬೇಕಾ? ಎಂಬುದು ಗಡ್ಡಬಿಟ್ಟವರ ಮಟ್ಟದ ಚಿಂತನೆಯ ವಿಷಯವಾದ್ದರಿಂದ ಅದನ್ನ ಅಲ್ಲಿಗೇ ಕೈಬಿಟ್ಟು ನಮ್ಮ ನಿಮ್ಮಂತಹ ಆರ್ಡಿನರಿ ಪಾಮರರ ಮಟ್ಟದ ಚಿಂತನೆಯಿಂದ ನೋಡೋಣ.
ಬೆಳಗ್ಗೆ ಮುಂಚೆ ಅಥವಾ ಲೇಟಾಗಿ ಎದ್ದು ಹುಲಿ ಏನು ಹಲ್ಲು ತಿಕ್ಕುತ್ತಾ? ಎಂಬಂಥಹ ಒಡ್ಡ ಪ್ರಶ್ನೆಯನ್ನು ಹಾಕಿಕೂಳ್ಳದೇ ವಿನೀತರಾಗಿ ಗಸಗಸ ಹಲ್ಲು ತಿಕ್ಕಿ ಬಸಬಸ ಬಸಿಯುವುವ ಬೆಳ್ಳನೆಯ ನೊರೆಯನ್ನೆಲ್ಲಾ ಅಲ್ಲೇ ಬಿಟ್ಟಾಕಿ, ಮೆತ್ತನೆಯ ಟರ್ಕಿ ಟವೆಲ್ಲಿನಲ್ಲಿ ಮುಖ ಒರೆಸಿಕೊಂಡು ಒಮ್ಮೆ ಕನ್ನಡಿಯತ್ತ ನೋಡಿ ಮುಖದ ಆಕಾರವನ್ನು ವಿಕಾರ ಮಾಡಿ ನಂತರ ಕಿಟಕಿಯಲ್ಲಿ ಕಾರಣವಿಲ್ಲದೇ ಹಣಕಿ ಒಂದು ಕಪ್ ಕಾಫಿಗೆ ಮುಂಚೆ ಅರೆಕ್ಷಣ ದೇವರ ಫೋಟೋದತ್ತ ಎರಡು ಹಾತ್ ಜೋಡಿಸುವುದು ನಿಮ್ಮಂತಹ ಪೇಟೆಮಂದಿಯ ದಿನಚರಿ. ಅದೇ ನಮ್ಮದಾದರೆ ಕಪ್ಪು ಕತ್ತಲೆಯ ಬಚ್ಚಲು ಮನೆಯ ಹೊಕ್ಕು ತೋರ್ಬೆರಳನ್ನೇ ಬ್ರಷ್ ಮಾಡಿಕೊಂಡು ಚಿಂಯ್ ಚಿಂಯ್ ಸದ್ದು ಬರುವವರೆಗೂ ಉಜ್ಜಿ ನಂತರ ಹ್ಯಾ ಪುರ್ರ್ ಎಂದು ಕ್ಯಾಕರಿಸಿ ತದನಂತರ ತೆಳ್ಳನೆಯ ಒಂದು ಕಾಲದಲ್ಲಿ ಬಿಳಿಯ ಬಣ್ಣ ಹೊಂದಿದ್ದ ಸಾಟಿ ಪಂಚೆಯಲ್ಲಿ ಮುಖ ಒರೆಸಿ ಸೀದಾ ದೇವರು ಮನೆಯ ವಿಭೂತಿ ಕರಂಡಿಕೆಗೆ ಕೈ ಹಾಕಿ ಮರುಕ್ಷಣ ಯಥಾ ಪ್ರಕಾರ ಎರಡು ಹಾತ್....
ಆ ಕ್ಷಣ ಇದೆಯೆಲ್ಲಾ ಬಹುಪಾಲು ಮಂದಿ ಅಲ್ಲೊಂದು ಸಣ್ಣ ಪ್ರಾರ್ಥನೆಯ ವಾಕ್ಯವನ್ನು ಮಡಗಿರುತ್ತಾರೆ, "ಕಾಪಾಡಪ್ಪಾ ತಂದೆ, ಒಳ್ಳೆಯದು ಮಾಡು, ಸುಖವಾಗಿರಲಿ ಜೀವನ, " ಹೀಗೆ ಏನೇನೋ ಅವರದೇ ಆದ ವಾಕ್ಯ ರಚನೆ. ಅಲ್ಲಿ ಅವರು ಮನ:ಪೂರ್ವಕವಾಗಿ ಹೇಳುತ್ತಾರೋ ಅಥವಾ ಹಲ್ಲುಜ್ಜುವ ಕ್ರಿಯೆಯಷ್ಟೇ ಮಾಮೂಲೋ ಅನ್ನುವುದು ಮತ್ತೆ ಬೇರೆಯದೇ ಆದ ತರ್ಕಕ್ಕೆ ಎಡೆಮಾಡಿಕೊಡುತ್ತದೆಯಾದ್ದರಿಂದ ಅದನ್ನ ಅಲ್ಲಿಗೇ ಬಿಡೋಣ. ಆದರೆ ಅಪರೂಪಕ್ಕೊಬ್ಬರು ಆ ಕೆಲವು ಕ್ಷಣಗಳನ್ನು ಅತ್ಯಮೂಲ್ಯ ಅಂದುಕೊಂಡು ಭಗವಂತನ ಅಸ್ಥಿತ್ವವನ್ನು ಮನಸಾ ಒಪ್ಪಿಕೊಂಡು ಒಂದು ಗಟ್ಟಿಯಾದ ಪ್ರಾರ್ಥನೆ ಮಾಡುತ್ತಾರೆ. ಹೌದು ಹಾಗೆ ಅಂದುಕೊಂಡು ಕೆಲವು ಕ್ಷಣಗಳನ್ನು ನೀವು ನಿಮ್ಮ ಸುಪ್ತಮನಸ್ಸಿನೊಳಗೆ ದಾಖಲಿಸಬಲ್ಲಿರಾದರೆ ನಿಮ್ಮ ಪ್ರಾರ್ಥನೆ ಸಾಕಾರಗೊಳ್ಳತೊಡಗುತ್ತದೆ. ಸರಿಯಪ್ಪಾ ಸಾಕಾರಗೊಳ್ಳುವುದೇನೋ ಸರಿ, ಪ್ರಾರ್ಥನೆ ಯಾವುದು? ಎಂಬ ಪ್ರಶ್ನೆಗೆ ಉತ್ತರ ಹೇಳು ಅಂತ ನಿಮ್ಮ ಪ್ರಶ್ನೆ ಇದ್ದರೂ ಇಲ್ಲದಿದ್ದರೂ ನನ್ನ ಉತ್ತರ ಇದೀಗ ಇಷ್ಟು.
ಪ್ರಾರ್ಥನೆಯಲ್ಲಿ ಹಲವು ಇವೆ ಬಿಡಿ, ನಮ್ಮ ಉದ್ದಾರವಷ್ಟೇ ಕೆಲವರ ಪ್ರಾರ್ಥನೆಯದಾದರೆ ಮತೊಬ್ಬರ ಕೇಡು ಕೂಡ ಕೆಲವರ ಪ್ರಾರ್ಥನೆಯಾಗುವ ಸಾದ್ಯತೆ ಇದೆ. ಹಾಗಾಗಿ ನಾವು ಶುದ್ಧ ಪ್ರಾರ್ಥನೆಯನ್ನ ಮಾತ್ರಾ ಗಣನೆಗೆ ತೆಗೆದುಕೊಳ್ಳೋಣ. ಶುದ್ಧ ಸುಲಭ ಪ್ರಾರ್ಥನೆ ಯೆಂದರೆ "ನನಗೆ ನೆಮ್ಮದಿ ನೀಡೋ ಭಗವಂತಾ". ನೋಡಿ ನಾಲ್ಕೇ ಪದಗಳಲ್ಲಿ ಇಡೀ ಬ್ರಹ್ಮಾಂಡದ ಸೃಷ್ಟಿಕರ್ತನನ್ನು ಕಟ್ಟಿ ಹಾಕಿದಂತಾಯಿತು. ಈಗ ನಿಮಗೆ ನೆಮ್ಮದಿ ಬರಪ್ಪೂರ್ ಸ್ಯಾಂಕ್ಷನ್ ಮಾಡಿದ ಅವನು ಅಂತಿಟ್ಟು ಕೊಳ್ಳಿ( ಎಷ್ಟು ದಿವಸ ಆತ ಸುಮ್ಮನಿದ್ದಾನು, ಕೊಡಲೇ ಬೇಕು ತಾನೆ?) ಆ ನಿಮ್ಮ ನೆಮ್ಮದಿಗೆ ಆಸೆಯ ಪಟ್ಟಿಯನ್ನು ಜೋಡಿಸಲು ಶುರುವಿಟ್ಟು ಕೊಳ್ಳಿ. ಅಲ್ಲಿಗೆ ಲೈಫೆಂಬ ಲೈಪು ಸೆಟಲೈಟ್ ಗಿಂತ ಮೇಲೆ ಸೂಪರ್ ಆಗಿ ಸೆಟ್ಲ್ ಆಗುತ್ತೆ.
ಆದರೆ ನಾನು ನನ್ನ ಪ್ರಾರ್ಥನೆಯನ್ನು ಕೊಂಚ ಬದಲಿಸಿದ್ದೇನೆ " ಭಗವಂತ ಒಳ್ಳೆಯ ಕೆಲಸಗಳು ಬಹಳ ಆಗಬೇಕಾದ್ದಿದೆ, ಅವು ನನ್ನ ಮೂಲಕ ಆಗಲಿ" ಎಂದು ಬಿಡುತ್ತಿದ್ದೇನೆ. ಪ್ರಾರ್ಥನೆ ಫಲಿಸುತ್ತಲಿದೆ ಖಂಡಿತ. ಅಥವಾ ನಾನು ಹಾಗಂದುಕೊಳ್ಳುತ್ತಿದೇನೆ ಎಂಬುದು ನಿಮ್ಮ ಅಭಿಪ್ರಾಯವಾದರೆ ಅದೂ ಕೂಡ ಒಕೆ ಒಳ್ಳೆಯದೇ..

Thursday, September 29, 2011

ಪ್ರೀತಿಯೆಂದರೆ ಪ್ರೀತಿಯೊಂದೇ ಇರಲಿ

ಗೊತ್ತು ನನಗೆ, ನಿಮಗೆ ನಿಮ್ಮ ಮಕ್ಕಳ ಮೇಲೆ ಪ್ರೀತಿಯಿದೆ, ಅವರ ಭವಿಷ್ಯವನ್ನು ಉಜ್ವಲವಾಗಿಸಬೇಕೆನ್ನುವ ಆಸೆಯಿದೆ, ಅವರು ನಿಮ್ಮಂತೆ ಕಷ್ಟಪಡಬಾರದು ಎನ್ನುವ ಆಸ್ಥೆಯಿದೆ, ಸಮಾಜದ ಉನ್ನತ ಸ್ಥಾನ ಅಲಂಕರಿಸಬೇಕೆನ್ನುವ ಹಂಬಲವಿದೆ. ಓದಿ ತಿಳಿದು ಹಣ ಗಳಿಸಿ ಯಶಸ್ವಿಯಾಗಲಿ ನನ್ನ ಮಕ್ಕಳು ಎಂಬ ಅನಿಸಿಕೆಯಿದೆ. ಪ್ರತೀ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಲ್ಲದಿದ್ದರೂ ತೊಂಬತ್ತರ ಮೇಲೆ ಬರಬೇಕು ಅನ್ನುವ ಇರಾದೆ ಇದೆ. ಇವೆಲ್ಲಾ ಪಾಸಿಟೀವ್ ಕಾರಣಗಳೇ ಅನ್ನುವುದೂ ನಿಜ. ಹಾಗಾಗಿ ನೀವು ಮಗುವನ್ನು ಗದರುತ್ತೀರಿ, ಪಕ್ಕದ ಮನೆಯ ಮಗುವನ್ನು ನೋಡಿ ಕಲಿ ಎನ್ನುತ್ತೀರಿ, ಒಮ್ಮೊಮ್ಮೆ ಹಂಗಿಸುತ್ತೀರಿ, ಬೇರೆಯವರ ಮೇಲಿನ ಸಿಟ್ಟನ್ನು ಮಗು ಓದಿಲ್ಲದ ಕಾರಣವನ್ನು ಹಿಡಿದುಕೊಂಡು ಹೊಡೆದದ್ದೂ ಉಂಟು. ಹೀಗೆಲ್ಲ ಮಾಡುವ ನಮ್ಮ ನಿಮ್ಮ ವರ್ತನೆಗೆ ಪ್ರಮುಖ ಕಾರಣ " ನಮ್ಮ ಕತೆಯಂತೂ ಹೀಗಾಯಿತು, ಮಕ್ಕಳಾದರೂ........."
ಹೌದಪ್ಪಾ ಹೌದು ನಮ್ಮ ನಿಮ್ಮ ಟೆನ್ಷನ್ ಆಸೆ ಆಕಾಂಕ್ಷೆ ಫಲಾ ಪ್ರತಿಫಲ ನಿರೀಕ್ಷೆ ಮುಂತಾದವುಗಳೆಲ್ಲಾ ನೂರಕ್ಕೆ ನೂರು ಸರಿ. ಆದರೆ ಹಸಿಮಣ್ಣಿನ ಗೋಡೆಯಂತಿರುವ ಬಾಲ್ಯಾವಸ್ಥೆಯ ಮಗುವಿಗೆ ಇದ್ಯಾವುದರ ಪರಿವೆ ಯೋಚನೆ ವಿವೇಚನೆ ಇರಲು ಸಾದ್ಯವಿಲ್ಲ. ಹಾಗಾಗಿ ಅದು ಸರಳ ಲೆಕ್ಕಾಚಾರಕ್ಕೆ ಇಳಿಯುತ್ತದೆ. ಅಪ್ಪ ಅಮ್ಮನಿಗೆ ನನ್ನ ಕಂಡರೆ ಆಗುವುದಿಲ್ಲ. ....!. ಹಾಗಂತ ಅದು ಅದೇ ತೀರ್ಮಾನಕೆ ಬಂದುಬಿಡುವುದಿಲ್ಲ ಕಾರಣ ದಿನದ ಬಹುಬಾಗ ಅಪ್ಪ ಅಮ್ಮ ಪ್ರೀತಿಸುತ್ತಾರೆ, ದಿನಕ್ಕೆ ಒಂದೆರಡು ಅಥವಾ ಹೆಚ್ಚೆಂದರೆ ಮೂರ್ನಾಲ್ಕು ಬಾರಿ ಹೀಗೆಲ್ಲ ಗದರುತ್ತಾರೆ. ಮಗು ಆರಂಭದಲ್ಲಿ ಗೊಂದಲಕ್ಕೆ ಬೀಳುತ್ತದೆ, ಬೆಳೆದಂತೆಲ್ಲಾ ಮಗುವಿನ ಮನಸ್ಸಿನ ಮೇಲೆ ಗದರಿದ್ದು ಉಳಿಯುತ್ತದೆ ಪ್ರೀತಿ ಅಳಿಯ ತೊಡಗುತ್ತದೆ.
ಹಾಗಾಗಿ ಒಟ್ಟಿನಲ್ಲಿ ಸಿಂಪಲ್ ತೀರ್ಮಾನ ವೆಂದರೆ ಒಳ್ಳೆಯದನ್ನು ಮಾಡ ಹೊರಟ ನಾವು ವೃಥಾ ಕೆಟ್ಟವರಾಗಿಬಿಡುತ್ತೇವೆ. ಅವಕಾಶ ಸಿಕ್ಕಲ್ಲಿ ಅವು ತಿರಿಸಿಕೊಳ್ಳಲು ಕಾತರಿಸತೊಡಗುತ್ತವೆ ಅವಕ್ಕೆನೆ ತಿಳಿಯದಂತೆ. ಈ ಕಾರಣದಿಂದ ಪ್ರೀತಿಯೆಂದರೆ ಪ್ರೀತಿಯೊಂದೇ ಇರಲಿ ದ್ವೇಷವೆಂದರೆ ಪ್ರೀತಿಯ ಲವಲೇಷವೂ ಬೇಡ. ಅದು ಹೇಗೆಂದರೆ ಪುರಾಣಕಾಲದ ಪಾತಿವೃತ್ಯವಿದ್ದಂತೆ. ಅಲ್ಲಿ ಶೇಕಡಾವಾರಿಗೆ ಸ್ಥಾನವಿಲ್ಲ. ಒಬ್ಬ ಗಂಡನೊಟ್ಟಿಗೆ ಸಂಸಾರ ಜೀವನಪೂರ್ತಿ.... ಸಾಗಿಸುತ್ತಿದ್ದರೆ ಮಾತ್ರಾ ಪತಿವೃತೆ. ಮೂವತ್ತೈದು ವರ್ಷ ಒಂದು ಗಂಡ ಕೊನೇಯ ಐದು ವರ್ಷ ಇನ್ನೊಂದು ಗಂಡ ಎಂದಾಗ ಅಲ್ಲಿ ತೊಂಬತ್ತು ಪರ್ಸೆಂಟ್ ಪಾತಿವೃತ್ಯ ಎಂಬುದಕ್ಕೆ ಅವಕಾಶವಿಲ್ಲ.
ಆರಂಭವೂ ಅಷ್ಟೇ ಅಂತ್ಯವೂ ಅಷ್ಟೇ ಪ್ರೀತಿಯ ಮನೆನಿರ್ಮಿಸಲು ಅಡಿಪಾಯವೂ ಪ್ರೀತಿಯದಾದರೆ ಮಾತ್ರಾ ಪರಿಪೂರ್ಣ. ಮಜ ಗೊತ್ತ ? ಅಲ್ಲದಿದ್ದರೆ " ಅಪೂರ್ಣ, ಇಂತಿಷ್ಟು, ಶೇಕಡಾ " ಎಂಬ ಪದಗಳು ಇಲ್ಲಿಲ್ಲ. ಇಲ್ಲ ಎಂದರೆ ಇಲ್ಲ ಅಷ್ಟೆ.

Sunday, September 25, 2011

ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ.....!



ಅಡಿಕೆ ತೆಂಗಿನ ಮದ್ಯೆ ಅದೊಂದು ಅತ್ತಿ ಮರ. ನಮ್ಮ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇಯ ಎದುರು ಚಂದವಾಗಿ ನಿಂತಿದೆ. ಮಳೆಗಾಲದ ಎಲೆ ಉದುರಿಸಿ ಹೊಸ ಚಿಗುರುಗಳನ್ನು ಇನ್ನೇನು ಹೊರ ಹೊಮ್ಮಿಸುವ ಹಂತದಲ್ಲಿದೆ. ಇರಲಿ ಅದು ಇರುವ ಮರದ ಕತೆಯಾಯಿತು, ಅಲ್ಲಿ ಇಲ್ಲದ ಮರಗಳ ವಿಚಾರದತ್ತ ಹೊರಳೋಣ.

ಸಂತೃಪ್ತ ಜೀವನಕ್ಕೆ ಗಂಡ-ಹೆಂಡತಿ-ಚಂದದ ಮಕ್ಕಳು-ಒಂದಿಷ್ಟು ಹಣ-ಮಾಡಲು ಕೆಲಸ ಮುಂತ್ ಮುಂತಾದ ಹಲವು ಇರಬೇಕು. ಬೇಕುಗಳ ಪಟ್ಟಿಯನ್ನು ಬೆಳೆಯಲು ಬಿಟ್ಟರೆ ಅಂತ್ಯವೇ ಇಲ್ಲ ಬಿಡಿ. ಬೆಳೆಯಲು ಬಿಟ್ಟ ಜನಕ್ಕೇ ನೆಮ್ಮದಿ ಅಂಬೋದು ದೂರದ ಮಾತೇ ಸರಿ. ಆದರೆ ನೆಮ್ಮದಿಯೊಂದು ಇದೆ ಅಂತಾದರೆ ಮಿಕ್ಕೆಲ್ಲ ಗೌಣ ಅಂತ ಅಂದುಕೊಳ್ಳಬಹುದು. ಈ ಮನಸ್ಸಿನ ನೆಮ್ಮದಿಗೆ ಉಸಿರಾಟ ಕ್ರಿಯೆ ಬಹಳ ಮುಖ್ಯವಂತೆ. ನಿಧಾನ ಉಸಿರಾಟ, ಗಮನಿಸಿ ಉಸಿರಾಟ, ತ್ವರಿತ ಉಸಿರಾಟ ಹೀಗೆ ಏನೇನೋ ಪದ್ದತಿ ಇದೆ. ಅದರ ವಿವರ ಯೋಗ ಧ್ಯಾನ ಅಭ್ಯಾಸ ಮಾಡುವವರನ್ನು ಕೇಳಬೇಕು ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವುದು ಎಂದರೆ ಆ ಉಸಿರಾಟಕ್ಕೆ ಶುದ್ಧವಾದ ಗಾಳಿಯ ವಿಷಯ.

ಹೌದೇ ಹೌದು ನಾವು ಎಲ್ಲಿ ಎಂಥಹಾ ಜಾಗದಲ್ಲಿ ಯಾವುದನ್ನ ಉಸಿರಾಡುತ್ತಿದ್ದೇವೆ ಎಂಬ ವಿಷಯದ ಮೇಲೆ ನಮ್ಮ ನರನಾಡಿಗಳ ನೆಮ್ಮದಿ ಅವಲಂಬಿಸಿದೆ ಎಂಬುದು ನಮ್ಮ ನಿಮ್ಮಂಥಹ ಸರಳ ಸಹಜ ಮಿದುಳಿಗೆ ಹೊಳೆಯುವ ವಿಷಯ. ಆದರೆ ಹಿಂದಿನ ಜನರು(ಯಾರು ಅಂತ ನನಗೂ ಗೊತ್ತಿಲ್ಲ....!) ಅಕಾರಾದಿ ಪಂಚ ವೃಕ್ಷಗಳ ಸಾಪಿಪ್ಯದಲ್ಲಿ ಉಸಿರಾಟ ನಡೆಯಿಸಿದರೆ ಲೈಫೆಂಬ ಲೈಫು ನೆಮ್ಮದಿಯ ಆಕಾಶದಲ್ಲಿ ಬೆಳ್ಳಿ ಮೋಡದಂತೆ ತೇಲಾಡುತ್ತದೆಯಂತೆ. ಆ ಅಕಾರಾದಿ ಪಂಚವೃಕ್ಷಗಳನ್ನು ದೇವಸ್ಥಾನದ ಸುತ್ತ ಬೆಳೆಸುತ್ತಿದ್ದರಂತೆ. ಕಾರಣ ಎಲ್ಲರ ಮನೆಯ ಸುತ್ತ ಹಾಗೆ ಬೆಳೆಸಲು ಅಸಾದ್ಯದ ಕಾರಣ ಹೀಗೆ ದೇವಸ್ಥಾನದ ಸುತ್ತ ಬೆಳೆಯಿಸದರೆ ದಿನಕ್ಕೊಮ್ಮೆ ಭಕ್ತರು ಅದರಿಂದ ಹೊರ ಹೊಮ್ಮುವ ಔಷಧೀಯ ಗುಣದ ಆಮ್ಲಜನಕ ಸೇವಿಸಿದರೆ ಮನಸ್ಸು ಪ್ರಫುಲ್ಲಗೊಂಡು ನೆಮ್ಮದಿಯ ಕೇಂದ್ರವಾಗುತ್ತದೆ ಅಂತ ಹಾಗೆಲ್ಲ ಮಾಡಿದ್ದಾರಂತೆ.

ಜತೆ ಜತೆಗೆ ಮಕ್ಕಳಾಗಲು, ದಮ್ಮು ಕೆಮ್ಮು ಮಾಯವಾಗಿ ಆರೋಗ್ಯ ನಳನಳಿಸಲು, ಕೂಡ ಅದರಿಂದ ಹೊರ ಹೊಮ್ಮುವ ಗಾಳಿ ಹೈ ಲೆವಲ್ ಅಂತೆ. ಈ ಅಂತೆಕಂತೆಗಳ ಕತೆಯನ್ನು ಮುಂದಿಟ್ಟುಕೊಂಡು ನಾನು ಕೆಲಕಾಲ ಅತ್ತಿಮರದ ಕೆಳಗೆ ಬರಬರನೆ ಉಸಿರಾಟ ಮಾಡಿದ್ದಿದೆ. ಹಾಗೂ ಜತೆಜತೆಯಲ್ಲಿಯೇ ಆಹಾ ಎಂಥ ಬರಪ್ಪೂರ್ ನೆಮ್ಮದಿ ಅಂತ ನಂಬಿಕೊಂಡದ್ದೂ ಇದೆ. ಇರಲಿ ಅದರ ತರ್ಕ ಕುತರ್ಕ ಬದಿಗಿಟ್ಟು ಅಕಾರಾದಿ ಪಂಚವೃಕ್ಷದತ್ತ ಹೊರಳೋಣ

ಅತಿ-ಆಲ-ಅಶ್ವಥ್ಥ-ಅಶೋಕ-ಅರಳಿ ಎಂಬುದು ಅಕಾರಾದಿ ಪಂಚವೃಕ್ಷ ಅಂತ ಯಾರೋ ಹೇಳಿದರು. ಅವು ಮನೆಯ ಸುತ್ತ ಇರಬೇಕಂತೆ. ಇದರಲ್ಲಿ ನನಗೆ ಒಂದು ಸಣ್ಣ ಡೌಟು ಹೊರಟಿತು. ಅರಳಿ ಹಾಗೂ ಅಶ್ವಥ್ಥ ಒಂದೇ ಅಂತ. ಆದರೆ ಅಲ್ಲ ಅಂತ ಮತ್ಯಾರೋ ಹೇಳಿದರು. ಅಶೋಕ ವೃಕ್ಷದ ಬಗ್ಗೆಯೂ ಮತ್ತೊಂದು ಡೌಟು. ಈಗ ನೇರವಾಗಿ ಮೇಲಕ್ಕೆ ಹೋಗುವ ಅಶೋಕದ ಮರ ಇದೆಯಲ್ಲ ಅದು ಇದಲ್ಲ. ಅಶೋಕವೃಕ್ಷ ಅಂತಲೇ ಬೇರೆ ಇದೆಯಂತೆ. ಒಟ್ಟಿನಲ್ಲಿ ಅದರ ಬಗೆಗಿನ ಕೆಲ ಗೊಂದಲಗಳ ನಡುವೆ ಏನೋ ಒಂದು ಇದೆ. ಇದೆಲ್ಲದರ ಮಾಹಿತಿ ಪುರೋಹಿತರ ಬಳಿ ಸಿಗಬಹುದೆಂದು ಅವರೊಬ್ಬರನ್ನು ಕೇಳಿದೆ. "ಯಾರಿಗೂ ಬ್ಯಾಡ ಅಂದಿದ್ದು ನಿನಗೆ ಬೇಕು ಮಾರಾಯ, ಸುಮ್ನಿರ ಸಾಕು" ಎಂದು ತಮಗೆ ಗೊತ್ತಿಲ್ಲ ಎಂಬುದನ್ನು ನೇರವಾಗಿ ಹೇಳದೇ ನನ್ನ ಮೇಲೆ ತಿರುಗಿಸಿದರು.

ಅಂತೂ ಎನೋ ಎಂತೋ ಇದೆ ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ ಅಲ್ಲಲ್ಲ ಬರೆಯುತ್ತೇನೆ. ಅಲ್ಲಿಯವರೆಗೆ ಸಿಕ್ಕ ಗಾಳಿಯನ್ನೇ ಮೆಲ್ಲಗೆ ಉಸಿರಾಡುತ್ತಿರಿ. ಓಕೆನಾ..?

ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?,




ಅಬ್ಬಾ ಬೆಳಿಗ್ಗೆ ಅಪರೂಪಕ್ಕೆ ಭಾವನಾ ಲೋಕಕ್ಕೆ ಜಾರಿದೆ. ಮನೆ ಕಟ್ಟುವುದು ತರ್ಲೆ ಅರ್ಜಿಗೆ ಉತ್ತರ ಕೊಡುವುದು, ತಕರಾರುಗಳಿಗೆ ಒದ್ದಾಡುವುದು ಮುಂತಾದ ಕೆಲಸಗಳಿಂದ ಮಂಡೆ ಕೊಚ್ಚೆಯಾಗಿತ್ತು. ಬಣ್ಣ ಬಣ್ಣದ ಕಾಮನ ಬಿಲ್ಲು ಕಂಡು ಒಮ್ಮೆ ಪುಳಕಿತನಾದೆ.

ಅದೆಷ್ಟೋ ವರ್ಷಗಳು ಸಂದುಹೋಗಿತ್ತು ಕಾಮನಬಿಲ್ಲನ್ನು ಆಸ್ವಾದಿಸದೆ. ಆಕಾಶದಲ್ಲಿ ಬಣ್ಣದ ಗೆರೆಗಳನ್ನು ಕಂಡಾಗ ಒಮ್ಮೆಲೆ ಅದ್ಯಾವುದೋ ಲೋಕಕ್ಕೆ ಜಾರಿದಂತಾಯಿತು.

ಯಾವಾಗ್ಯಾವಗಲೋ ಕಾಮನಬಿಲ್ಲು ನೋಡಿದ್ದೆನಾದರೂ ಇಷ್ಟೊಂದು ದೊಡ್ಡ ಕಾಮನಬಿಲ್ಲು ನೋಡಿರಲಿಲ್ಲ. ಲಗುಬಗೆಯಿಂದ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುವ ಮನಸ್ಸಾಗಿ ಓಡಿದೆ. ದುರಾದೃಷ್ಟ ಕ್ಯಾಮೆರಾ ಆನ್ ಮಾಡುತ್ತಿದಂತೆ ಲೋ ಬ್ಯಾಟರಿ ತೋರಿಸಿತು. ಮತ್ತೆ ಗಡಿಬಿಡಿಯಿಂದ ಚಾರ್ಜ್ ಗೆ ಹಾಕಿದೆ. ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನ ಬಿಲ್ಲು ತನ್ನ ದಟ್ಟ ಬಣ್ಣವನ್ನು ಕಳೆದುಕೊಳ್ಳುತ್ತಾ ಸಾಗುತ್ತಿತ್ತು. ದಟ್ಟ ಬಣ್ಣದ ಸುರಸುಂದರ ಕಾಮನಬಿಲ್ಲು ಮೂಡಿದಾಗ ಬ್ಯಾಟರಿಯಲ್ಲಿ ಚಾರ್ಜ್ ಇರಲಿಲ್ಲ ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನಬಿಲ್ಲು ಕರಗತೊಡಗಿತ್ತು. ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?, ಲಕಲಕನೆ ಹೊಳೆಯುವ ದೇಹ ಮನಸ್ಸು ಹುರುಪು ಉಲ್ಲಾಸ ಉತ್ಸಾಹ ಇರುವಾಗ ಅವಕಾಶ ಇರುವುದಿಲ್ಲ, ಆವಕಾಶ ಬಂದಾಗ ಉತ್ಸಾಹ ಉಲ್ಲಾಸ ತನ್ನ ಬಣ್ಣವನ್ನು ಕಳೆದುಕೊಂಡಿರುತ್ತದೆ.