Wednesday, July 27, 2011

"ಹೆಲ್ತ್ ಎಂದರೆ ಆರೋಗ್ಯ".

"ನಂಜಿಗೆ ಕುಡಿಯುವುದು" ಅಂತ ನಮ್ಮ ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಅಮ್ಮನ ಹಳೇ ಪದ್ದತಿ. ಕಾಳಜೀರಿಗೆ ಎಂಬ ಜೀರಿಗೆ ತರಹದ ಘೋರಾ ಕಹಿಯ ದ್ರವ ಗಂಟಲಿಗೆ ಸುರುವಿಕೊಳ್ಳುತ್ತಿದಂತೆ ಒಮ್ಮೆ ಇಡೀ ಮೈಯೆಲ್ಲಾ ಜುಂಕರಿಸಿ ಕಹಿ ಆವರಿಸಿಕೊಳ್ಳುವ ತಾಕತ್ತಿನ ಔಷಧಿ ಅದು. ಬೆಳಗಾ ಮುಂಚೆ "ಏಳ್ರಾ..’ ಎಂದು ವರಾತ ಹಚ್ಚಿ ಎಬ್ಬಿಸಿ ಒಂದು ಲೋಟ ಹಠಕ್ಕೆ ಬಿದ್ದು ಕುಡಿಸಿದರೆ ವರ್ಷಪೂರ್ತಿ ಕಜ್ಜಿ ತುರಿಕೆ ಮುಂತಾದ ರಗಳೆಯಿಂದ ಮುಕ್ತಿ ಎಂಬುದು ಅದರ ಫಲ.
ಆನಂತರ ಕಾಲ ಸಂದಂತೆಲ್ಲಾ ಅಮ್ಮನೆಂಬ ಅಮ್ಮನೇ ಆಲೋಪತಿಗೆ ಮೊರೆಹೋದಮೇಲೆ ಕಾಳಜೀರಿಗೆ ಡಬ್ಬಿಯಲ್ಲಿಯೇ ಉಳಿಯತೊಡಗಿತು ಎನ್ನುವುದು ಬೇರೆಯದೇ ಕತೆಯಾಗುತ್ತದೆ ಬಿಡಿ. ಈಗ ಅದರ ಪ್ರಸ್ತಾಪ ಪ್ರಲಾಪ ಶುರುವಿಟ್ಟುಕೊಂಡು ನಾವು ನೀವು ಗೊಣಗಾಡುವುದು ಬೇಡ. ಸತ್ಯಕ್ಕೆ ತಲೆಮೇಲೆ ಹೊಡೆಯುವ ಮಾತೆಂದರೆ "ಹೆಲ್ತ್ ಎಂದರೆ ಆರೋಗ್ಯ". ಆರೋಗ್ಯ ಮತ್ತು ಸಂಪತ್ತು ಯಾರ ಬಳಿ ಇದೆಯೋ ಅದರ ಮಹತ್ವ ಇದ್ದವರಿಗೆ ಅರಿವಾಗುವುದಿಲ್ಲ. ಅವುಗಳ ಮಹತ್ವ ಮಹಿಮೆ ಅವು ಇಲ್ಲವಾದಾಗಲೇ ಎಂಬುದು ಎಲ್ಲರಿಗೂ ತಿಳಿದಿದ್ದರೂ ತಿಳಿಯದ ವಿಷಯ. ಈ ಆರೋಗ್ಯ ಎಂಬುದು ಚನ್ನಾಗಿರಬೇಕು ಎಂತಾದರೆ ಔಷಧಿಯಲ್ಲಲ್ಲ ಆಹಾರದಲ್ಲಿ ಎಂಬ ಸರ್ವೇ ಸಾಮಾನ್ಯವಾದ ವಿಷಯವನ್ನು ಬಹಳ ಜನ ಮರೆತು ಹೋದಂತಿದೆ ಎಂಬುದು ನನ್ನ ಅನುಭವವೇದ್ಯ ಮಾತು. ವಾತ ಪಿತ್ಥ ಕಫ ಎಂಬ ತತ್ವಾಧಾರಿತ ಆಯುರ್ವೇದ ಔಷಧಿ ಪದ್ದತಿ ಮೂಲವಾಗಿ ಆಹಾರವನ್ನ ಅವಲಂಬಿಸಿದೆ. ಇಂತಿಂತ ಖಾಯಿಲೆ ಬಂದಮೇಲೆ ಅಂತಂತದ್ದನ್ನು ತಿನ್ನದೇ ಪಥ್ಯ ಮಾಡಿ ಎನ್ನುತ್ತಾ ಹಾಗೆಯೇ ಎಂತೆಂತದ್ದನ್ನೋ ತಿನ್ನದೇ, ಸ್ವಲ್ಪವಾದರೂ ಅಡ್ಡಿಯಿಲ್ಲ ಸತ್ವಭರಿತವಾದದ್ದನ್ನು ತಿನ್ನಿ, ತನ್ಮೂಲಕ ಆರೋಗ್ಯದಿಂದ ನಳನಳಿಸಿ ಎನ್ನುತ್ತದೆ ಆಯುರ್ವೇದ. ಈ ಪದ್ದತಿಯಿದೆಯಲ್ಲಾ ಅದು ಪಕ್ಕಾ ನಮ್ಮ ನಾಲಿಗೆಯನ್ನೇ ಅವಲಂಬಿಸಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವಕ್ಕೆ ಹಲವಾರು ಬಾರಿ ಬಂದಿದೆ. ಯಾವಾಗಲೂ ವಟವಟ ಎನ್ನುವ ನಾಲಿಗೆ ದೇಹಕ್ಕೆ ಬೇಕಾಗುವ ಸತ್ವಗಳನ್ನೂ ಬಯಸುವ ಕೆಲಸ ಮಾಡುತ್ತದೆ. ಅದು ಇದ್ದಕ್ಕಿದ್ದಂತೆ ಹುಳಿ ಬೇಡುತ್ತದೆ, ಸಿಹಿ ಕೇಳುತ್ತದೆ, ಆಶ್ಚರ್ಯವೆಂದರೆ ಕಹಿಯನ್ನೂ ಕೂಡ (ಮೆಂತೆ ಉಕ್ಕರಿಕೆ) ಬಯಸುತ್ತದೆ. ಆದರೆ ನಾವುಗಳೆಂಬ ನಾವುಗಳು ಅದು ಬಯಸಿದ ಸಮಯದಲ್ಲಿ ತಿನ್ನುವುದಿಲ್ಲ, ಅಥವಾ ಬಯಸಿದಷ್ಟು ತಿನ್ನದೇ ಯಡ್ದಾದಿಡ್ಡಿ ಭಾರಿಸಿಬಿಡುತ್ತೇವೆ. ಆವಾಗ ಏರುಪೇರು, ಬಯಸಿದ ಸತ್ವ ನಿರಾಕರಿಸಿ ಯಡವಟ್ಟು ಮಾಡಿಕೊಳ್ಳುವ ಬಗೆ ಒಂದೆಡೆಯಾದರೆ ದೇಹದಿಂದ ಹೊರಹೋಗ ಬಯಸುವ ತ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಹೋಗಲು ಬಿಡದೆ ಅನಾರೋಗ್ಯ ತಂದುಕೊಂಡು ಬಿಡುತ್ತೇವೆ. ಅಂತೂ ಹೀಗೆಲ್ಲಾ ಇದೆ ನೋಡಿ ಸಮಾಚಾರ.
ನಂಗೆ ಇವೆಲ್ಲಾ ಯಾಕೆ ನೆನಪಾಯಿತೆಂದರೆ ಬೆಳಗ್ಗೆ ಗುಟುಕರಿಸಿದ ಕಾಳಜೀರಿಗೆಯ ರಸದ ಗಂಟಲ ಕಹಿ ಇನ್ನೂ ಆರಿಲ್ಲ.

Monday, July 25, 2011

ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ



ನಾನು ತೀರಾ ಈ ಮುಹೂರ್ತ ಶಾಸ್ತ್ರ ಜಾತಕಫಲ ಮುಂತಾದ್ದನ್ನೆಲ್ಲಾ ಬೆನ್ನತ್ತಿ ಹೋಗುವುದು ಕಡಿಮೆ. ಆದರೂ ತೀರಾ ಬುಡಕ್ಕೆಬಂದಾಗ ಸಂಕಟಬಂದಾಗ ವೆಂಕಟ ರಮಣ ಎಂದು ಹೋಗುವುದು ಇದೆಯಾದರೂ ಅದು ಜ್ಯೋತಿಷಿಗಳ ಬುಡಕ್ಕಂತೂ ಸದ್ಯಕ್ಕೆ ಅಲ್ಲಬಿಡಿ.

ಅವೆಲ್ಲಾ ಆಯಿತು ಆದರೆ ಮುಹೂರ್ತ ಎಂದರೆ ಅರ್ಥ ಇಷ್ಟೆ. ನಾವು ಮಾಡಬೇಕಾಗಿರುವ ಕೆಲಸ ನಿರ್ವಿಘ್ನವಾಗಿ ನಡೆಯಲು ಒಂದು ದಿನ ನಿಕ್ಕಿಮಾಡುವುದು, ಅಂದು ತೊಂದರೆ ತಾಪತ್ರಯ ಇರಬಾರದು ಅಷ್ಟೆ. ಮೊನ್ನೆ ಶುಕ್ರವಾರ ನಮ್ಮ ಬಿಲ್ಡಿಂಗ್ ನ ಸೆಂಟ್ರಿಂಗ್ ಮೇಸ್ತ್ರಿ ನೀಲಕಂಠ "ಸಾರ್ ಸೋಮವಾರ ಅಂದ್ರೆ ೨೫ ನೇ ತಾರೀಖು ಮೌಲ್ಡ್ ಹಾಕೋಣ ಸಾರ್" ಎಂದು ಬುಡಕ್ಕೊಂದು ತಲೆಗೊಂದು ಸಾರ್ ಸೇರಿಸಿ ಹೇಳಿದ. ಅವನು ಆ ಮುಹೂರ್ತ ಫಿಕ್ಸ್ ಮಾಡುತ್ತಿದ್ದ ಸಮಯದಲ್ಲಿ ಜಡಿಮಳೆ ಭಾರಿಸುತ್ತಿತ್ತು ಜೊರ್ರಂತ. ನನಗೆ ಅನಾಮತ್ತು ೨ ಲಕ್ಷರೂಪಾಯಿಯ ವ್ಯವಹಾರ. ಗೌರೀಶನಿಗೆ ಫೋನ್ ಹಚ್ಚಿದೆ. ಅವರೂ ಯೆಸ್ ಅಂದಾಯಿತು. ಆದರೆ ಒಳಗೊಳಗೆ ಪುಕ್ಕು. ಶನಿವಾರ ಮಳೆ ಇನ್ನೂ ಒಂದು ತೂಕ ಹೆಚ್ಚು, ಭಾನುವಾರ ಯಡ್ದಾದಿಡ್ಡಿ. ಒಟ್ಟಿನಲ್ಲಿ ಇದೊಂದು ಯಡವಟ್ಟು ಕೆಲಸವಾಯಿತು. ತಿಂಗಳಿನಿಂದ ಬಾರದ ಬಿಸಿಲು ಜಡಿಯುತ್ತಿರುವ ಮಳೆ ದಿಡೀರಂತ ನಾವು ಮೌಲ್ಡ್ ಹಾಕುತ್ತೇವೆ ಅಂತ ನಿಲ್ಲುತ್ತದಾ..? ಎಂಬ ಪ್ರಶ್ನೆ ಒಳಗೊಳಗೆ. ಕಟ್ಟಡದ ಮೈನ್ ಮೇಸ್ತ್ರಿ ತಿಲಕ್ ರಾಯ್ಕರ್ ವೆಂಕಟರಮಣ ದೇವಸ್ಥಾನದ ಶಾಸ್ತ್ರಿಗಳ ಬಳಿ ಕವಡೆ ಹಾಕಿಸಿ ಶಾಸ್ತ್ರ ಕೇಳಿ ಬಂದೂ ಆಯಿತು. ಆದರೆ ಭಾನುವಾರ ರಾತ್ರಿ ಜಡಿಯುತ್ತಿದ್ದ ಮಳೆಗೆ ಇದ್ಯಾವುದರ ಪರಿಯೂ ಇಲ್ಲ. ಅಂತೂ ಸೋಮವಾರ ಬೆಳಗಾಯಿತು. ಒಂಬತ್ತು ಗಂಟೆಗೆವರೆಗೆ ಹನಿ ಮಳೆಯೂ ಇಲ್ಲ. ನೀಲಕಂಠ ನ ಬಳಿ "ನೀ ಬಾಳ ಅಸಾಮಿ ಬಿಡಪೋ ಅಂದೆ. ಹತ್ತು ಗಂಟೆಗೆ ಬಿಸಿಲು. ನನಗೆ ಅಚ್ಚರಿಯೋ ಅಚ್ಚರಿ. ಮಧ್ಯಾಹ್ನ ಕೆಲಸಗಾರರು ಊಟಕ್ಕೆ ಬಿಟ್ಟಾಗ ಅರ್ದ ಗಂಟೆ ಸಿಕ್ಕಾಪಟ್ಟೆ ಮಳೆ. ನಂತರ ಮಾಯವಾದ ಮಳೆರಾಯ ಈ ಕ್ಷಣ ಅಂದರೆ ರಾತ್ರಿ ಹನ್ನೊಂದು ಗಂಟೆಯವರೆಗೂ ಹಾರಾಹನಿಯನ್ನೂ ಉದರಿಸುತಿಲ್ಲ. ಅಬ್ಬಾ ನೀಲಕಂಠನ ಮುಹೂರ್ಥವೇ ಅಂತ ನನಗೆ ಅನ್ನಿಸಿತು.

ನಿಜ ನಿಜ ನಿಜ, ಒಳ್ಳೆಯ ಮುಹೂರ್ಥ ಫಿಕ್ಸ್ ಮಾಡಲು ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ ಶುದ್ಧ ಮನಸ್ಸಿರಬೇಕು ಅಂತ ಒಂಥರಾ ಅರ್ಥವಾಗುತ್ತಿದೆ. ಜುಲೈ ತಿಂಗಳ ಮಲೆನಾಡಿನ ಜಡಿಮಳೆಯ ತಿಂಗಳಿನಲ್ಲಿ ಹೀಗೊಂದು ಮಳೆಬಾರದ ದಿನವನ್ನು ಹುಡುಕಿದನಲ್ಲ ನೀಲಕಂಠ "ಅಬ್ಬಾ ನೀಲಕಂಠ ಮಿದುಳೇ" ಅಂತ ಅವನ ಕುರಿತು ಅನ್ನಿಸಿದ್ದು ಸುಳ್ಳಲ್ಲ.

ಕೆಲವೆಲ್ಲಾ ಅರ್ಥವಾಗದು, ಕೆಲವೆಲ್ಲಾ ಅರ್ಥವಾದಂತೆ ನಟಿಸಬೇಕು, ಇನ್ನು ಕೆಲವು ಅರ್ಥವಾದಂತೆ ಅನಿಸುತ್ತದೆ.