Wednesday, June 17, 2009

ಇದು ಪ್ರಪಂಚ ಇದುವೇ ಪ್ರಪಂಚ..!


ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿರುವಾಗಲೋ, ಅತ್ಯಂತ ಇಷ್ಟವಾದ ಸೀರಿಯಲ್ ನೋಡುತ್ತಿರುವಾಗಲೋ, ಊಟ ಮಾಡುತ್ತಿರುವಾಗಲೋ , ಪಟ್ಟಂತ ವಿದ್ಯುತ್ ಹೋಗುತ್ತದೆ. ಸರಿ ಆವಾಗ ಮನೆಮಂದಿಯೆಲ್ಲ ಸೇರಿ ಕರೆಂಟ್ ಕಂಪನಿಯವರಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತೇವೆ. ಐದತ್ತು ನಿಮಿಷದೊಳಗೆ ಕರೆಂಟ್ ಬಂತೋ ಅಷ್ಟಕ್ಕೆ ನಿಲ್ಲುತ್ತದೆ ಆದರೆ ಗಂಟೆ ಕಳೆದರೂ ಬರಲಿಲ್ಲ ಅಂತಾದರೆ ಯಡ್ಯೂರಪ್ಪನಿಂದ ಶುರುವಾಗಿ ರಾಜಕೀಯ ನಾಯಕರೆಲ್ಲಾ ಮುಗಿಸಿ ಹುರಿದು ಮುಕ್ಕುತ್ತೇವೆ. ಆ ನಡುವೆ ಓಟು ಹಾಕಿ ಮುಗುಮ್ಮಾಗಿ ಕುಳಿತ ನಮ್ಮನ್ನೊಂದು ಬಯ್ದುಕೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಮಿಕ್ಕವರೆಲ್ಲಾ ಸರಿ ಇಲ್ಲ ಎಂಬ ವಾಗ್ದಾಳಿ ಅವ್ಯಾಹತವಾಗಿ ಮುಂದುವರೆಯುತ್ತದೆ. ಇರಲಿ ಅದರ ಕತೆ ಬದಲಾಗುವುದಿಲ್ಲ ಆಗುವುದೂ ಬೇಡ. ಈಗ ಫೋಟೋ ಸುದ್ದಿಗೆ ಬರೋಣ.

ಜೋಗ ಜಲಪಾತ ನೀವು ನೋಡಿರುತ್ತೀರಿ ಅಥವಾ ಅದ್ಭುತವಾಗಿದೆ ಎಂಬ ಸುದ್ಧಿಯನ್ನು ಕೇಳಿರುತ್ತೀರಿ. ಈ ಜಲಪಾತ ಸೃಷ್ಟಿಮಾಡಿದ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಹಾಕಿದ್ದಾರೆ. ಆ ಆಣೆಕಟ್ಟಿನ ನೀರಿನಿಂದ ಜಲವಿದ್ಯುತ್ ಮೂರುಕಡೆ ಉತ್ಪಾದಿಸುತ್ತಾರೆ(ಅಯ್ಯೋ ಅವೆಲ್ಲಾ ಗೊತ್ತು ಕೊರೆಯಬೇಡ, ಎಂದಿರಾ?. ಇದು ಗೊತ್ತಿಲ್ಲದವರಿಗಾಗಿ..!) ಅಂತಹ ಒಂದು ನಿಮಗೆ ಕಾಣಿಸುತ್ತಿರುವ ತಳಕಳಲೆ ಡ್ಯಾಮ್. ಹತ್ತು ಬೃಹತ್ ಗಾತ್ರದ ಪೈಪ್ ಗಳು ಕೆಳಗಿಳಿದಿವೆ ಹಾಗೆಯೇ ಹತ್ತು ತಂತಿಗಳು ಮೇಲೇರಿವೆ. ಹೊರನೋಟಕ್ಕೆ ಸುಂದರ ದೃಶ್ಯವಾಗಿ ಗೋಚರಿಸುವ ಈ ನೋಟ ಒಳಗೆ ಇಳಿದಂತೆಲ್ಲಾ ಮನುಷ್ಯನ ಇಚ್ಛಾ ಶಕ್ತಿಯನ್ನು ಬಿಚ್ಚಿಡುತ್ತವೆ. ಅಲ್ಲಿಂದಲೇ ನಮ್ಮ ಊಟ ಟಿವಿ ಕ್ರಿಕೆಟ್ ಗಳ ಮಜ ಹಾಗೂ ಗೊಣಗಾಟ ದ ಮೂಲ ಉತ್ಪಾದನೆಯಾಗುತ್ತದೆ. ಹತ್ತು ಪೈಪ್ ಗಳಲ್ಲಿ ರಭಸವಾಗಿ ನುಗ್ಗುವ ನೀರು ಟರ್ಬೈನ್ ತಿರುಗಿಸಿ ತಂತಿಯ ಮೂಲಕ ಚರ್ ಚರ್ ಎಂಬ ಶಬ್ಧದೊಂದಿಗೆ ತಲುಪುವಲ್ಲಿಗೆ ತಲುಪಿ ಬೆಳಗುತ್ತದೆ ಮತ್ತು ಮಿನುಗುತ್ತದೆ. ಸಹಸ್ರ ಸಹಸ್ರ ಕೈಗಳ ಶ್ರಮದ ಫಲ ಅದು. ಐವತ್ತು ವರ್ಷಗಳ ಹಿಂದೆ ಅದೆಷ್ಟು ಕುಟುಂಬಗಳು ಅಲ್ಲಿ ಪ್ರಾಣ ತೆತ್ತವೋ ಅವೆಷ್ಟು ಕುಟುಂಬಗಳು ಬೀದಿ ಪಾಲದವೋ ಕೇಳುಗರೇ ಇಲ್ಲದ ಅವರ ಗೊಣಗಾಟ ಅದೆಲ್ಲಿ ಕರಗಿ ಹೋಯಿತೋ ಬಲ್ಲವರ್ಯಾರು? . ಪೈಪಿನೊಳಗೆ ಹರಿದು ಬರುವ ನೀರು ಲಿಂಗನ ಮಕ್ಕಿ ಆಣೆಕಟ್ಟಿನಲ್ಲಿ ನಿಂತಾಗ ಅದೆಷ್ಟು ಸಹಸ್ರ ಜನ ಮನೆ ಮಠ ಸಂಸ್ಕೃತಿ ಕಳೆದುಕೊಂಡರೋ..? ಲೆಕ್ಕ ಇಟ್ಟವರ್ಯಾರು..? . ಕೇವಲ ಮನುಷ್ಯ ಮಾತ್ರ ಇಳಿಯುವುದು ಕಷ್ಟ ಎಂಬಂತಹ ಜಾಗಗಳಲ್ಲಿ ಆನೆಗಾತ್ರದ ಪೈಪ್ ಗಳು ಇಳಿಸುವಾಗ ಅದೆಷ್ಟು ಅನಾಹುತಗಳಾಯಿತೋ..? ಎಷ್ಟು ಜೀವಗಳು ಅಲ್ಲಿ ನಲುಗಿ ಹೋಯಿತೋ..?. ಅದೆಷ್ಟು ಮರ ಗಿಡ ಪ್ರಾಣಿ ಪಕ್ಷಿಗಳು ಅಕಾಲ ಮೃತ್ಯುವಿಗೆ ತುತ್ತಾದವೋ ಬಲ್ಲವರ್ಯಾರು?. ಅವರುಗಳ ಶ್ರಮದ ಪ್ರತಿಫಲ ನಾವು ಅನುಭವಿಸುತ್ತಿದ್ದೇವೆ.

ಆದರೂ ಹತ್ತೆ ಹತ್ತು ನಿಮಿಷ ಕರೆಂಟು ಹೋದಾಗ ಮುಳುಗಿ ಹೋಗುವುದು ಎನೂ ಇಲ್ಲದಿದ್ದರೂ " ತತ್ತ್ ಈ ದರಿದ್ರ ಕೆಇಬಿ ಯವರ ಹಣೇಬರಹವೇ ಇಷ್ಟು " ಎಂಬ ನಮ್ಮ ಹಿಡಿ ಶಾಪ ಮುಂದುವರೆಯುತ್ತದೆ.

ಅಯ್ಯೋ ಹಾಗೆ ಆಲೋಚಿಸುತ್ತಾ ಹೋದರೆ ಬದುಕಿನ ಮಜವೇ ಇಲ್ಲ ಎಂದಿರಾ.? ಓ ಕೆ ಒಂಥರಾ ಅದೂ ಸರೀನೆ. ಯಾಕೆಂದರೆ

ಇದು ಪ್ರಪಂಚ ಇದುವೇ ಪ್ರಪಂಚ..! ಅಲ್ಲವೇ?

Sunday, June 14, 2009

ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ:

"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: "
ಹೀಗೊಂದು ವಾಕ್ಯ ಓದಲು ಕೊಟ್ಟು ಸ್ವರಸಹಿತ ಹೇಳಿ ಎಂದರೆ ತಲೆಕೆಟ್ಟು ಮೈಪರಚಿಕೊಳ್ಳುವಂತಾಗುತ್ತದೆ ಮೊದಲನೇ ದಿನ. ಎರಡನೇ ದಿನ ಎದ್ದು ಬಿದ್ದು ಓದಿದರೆ ಅಲ್ಪಸ್ವಲ್ಪ ತಡವರಿಸಿಕೊಳ್ಳುತ್ತಾ ಓದಬಲ್ಲೆ ಅನ್ನು ವಿಶ್ವಾಸ ಬರುತ್ತದೆ. ಹದಿನೈದನೇ ದಿನ ಅಸ್ಖಲಿತವಾಗಿ ಓದಬಹುದು ನೋಡಿಕೊಳ್ಳದೇ ಹೇಳಬಹುದು ಈ ವಾಕ್ಯವನ್ನ ಆದರೆ ಮುಂದಿನ ವಾಕ್ಯ ಮತ್ತೆ ಹಳೆಯದರಂತೆ. ಇದು ಸಹಜ ಮನುಷ್ಯನ ತಾಕತ್ತು. ಆ ವಿಷಯ ಈ ವಿಷಯ ಅಂತಲ್ಲ ಪ್ರಪಂಚದ ಎಲ್ಲಾ ವಿಷಯವೂ ಕಲಿಯುವವರೆಗೆ ಕಷ್ಟ ಕಲಿತಮೇಲೆ ಲೀಲಾಜಾಲ. ಬೇರೆಯವರು ತಡವರಿಸಿದಾಗ ಇವರೇಕೆ ಇಷ್ಟು ಒದ್ದಾಡುತ್ತಾರೆ ಅಂತ ಅನ್ನಿಸದಿರದು. ಇರಲಿ ಈಗ ಅದು ಎಲ್ಲಿಯ ವಾಕ್ಯ ಅಂತ ನೋಡೊಣ.
ಶ್ರೀ ಮಠದ ಭಕ್ತರಿಗೆ ಶ್ರೀಗಳು "ರುದ್ರ" ಕಲಿಯಲು ಹೇಳಿದ್ದಾರೆ. ಒಂದು ವರ್ಷಗಳ ಕಾಲ ಗೋಕರ್ಣದಲ್ಲಿ ನಡೆಯುವ ರುದ್ರ ಪಾರಾಯಣಕ್ಕೆ ಜನ ಬೇಕು. ಹಾಗಾಗಿ ಗ್ರೃಹಸ್ಥರು ರುದ್ರ ಕಲಿಯಲಿ ಎಂಬುದು ಶ್ರೀಗಳ ಆಶಯ. ಹತ್ತರಿಂದ ಐವತ್ತರವರೆಗಿನ ವಯಸ್ಸಿನ ಬೇಧವಿಲ್ಲದೆ ಹಳ್ಳಿಯ ಹವ್ಯಕರು ಸಂಜೆ ಶಲ್ಯ ಹೊದ್ದು "ಇಡಾದೇವಹೂ...." ಎಂದು ಸಂಜೆ ಸರಿ ಸುಮಾರು ಒಂದೂವರೆ ತಾಸು ಬಾಯಿಪಾಠ ಶುರುಮಾಡಿದ್ದಾರೆ. ಬರೊಬ್ಬರಿ ಪುರೋಹಿತರ ಮಗನಾದ ನಾನು ಬಾಲ್ಯದಲ್ಲೆಲ್ಲೋ "ಓಂ ಗಣಾನಾಂತ್ವಾ..." ಎಂಬ ಗಣಪತಿ ಉಪನಿಷತ್ ಹಾಗೂ " ನಾದಶಬ್ಧ ಮಹೀಂ ಘಂಟಾಂ..." ಎಂಬ ದೇವರ ಪೂಜೆ ಮಂತ್ರ ಕಲಿತದ್ದು ಬಿಟ್ಟರೆ ಮತ್ತೆ ಅತ್ತ ಕಡೆ ತಲೆಹಾಕಿ ಮಲಗಲಿಲ್ಲ. ಹಾಗಾಗಿ ನಾಲಿಗೆಗೆ ಅವೆಲ್ಲಾ ಹೊಚ್ಚ ಹೊಸತು. ಇನ್ನು ಮಿದುಳಿಗೆ ಅರ್ಥವಾಗದ ಆ ಸಂಸ್ಕೃತ ಶಭ್ದಗಳು ಕೇವಲ ಸ್ವರಸಹಿತ ಪದಪುಂಜಗಳಷ್ಟೆ. ಆದರೂ ಹದಿನೈದು ಜನ ನಿತ್ಯ ಸಂಜೆ ಒಂದೂಕಾಲು ತಾಸು ಹೇಳಿ ಬಂದಾಗ ಮನಸ್ಸಿಗೆ ಅದೇನೋ ಒಂಥರಾ ಹಿತವನ್ನು ಕೊಡುತ್ತದೆ. ಅಬ್ಬಾ ಇವತ್ತು ಮುಗಿಯಿತು ಎಂಬ ನಿರಾಳ ಭಾವವೋ ಅಥವಾ ಸಂಸ್ಕೃತ ಮಂತ್ರಗಳಲ್ಲಿನ ಅಂತ:ಶಕ್ತಿಯೋ..? ಉತ್ತರ ಖಚಿತವಾಗಿ ಗೊತ್ತಿಲ್ಲ. ಆದರೂ ಏನೋ ಒಂದು ಮಜ ಇದೆ. ಹೊಸತಲ್ಲವೇ ಮಿದುಳಿಗೆ ಅದೇ ಇದ್ದರೂ ಇರಬಹುದು.
ರುದ್ರದಲ್ಲಿರುವ ಶಬ್ದಗಳು ಸಂಸ್ಕೃತದಲ್ಲಿರುವುದರಿಂದ ಅರ್ಥ ಗೊತ್ತಿಲ್ಲ ಬಿಡಿ. ಆದರೆ ಅಲ್ಲಿ ಕಲಿಯಲು ಬರುತ್ತಾರಲ್ಲ ಆವಾಗ ಒಂದಿಷ್ಟು ಕನ್ನಡದ ಅರ್ಥಕ್ಕೆ ಹೋಲುತ್ತವೆ . ಪಠಿಸುವುದು ಸಂಸ್ಕೃತ ಅರ್ಥ ಕನ್ನಡ ಆವಾಗ ಮುಸಿಮುಸಿ ನಗು ಪಠಣದ ಗಂಭೀರತೆಗೆ ಬೇಡ ಬೇಡ ಅಂದರೂ ಧಕ್ಕೆತಂದುಬಿಡುತ್ತವೆ. "ಹೇತಿರ್ಮೀಢುಷ್ಟಮ, ಹೇತಿರ್ವಣಕ್ತು, ಕಾಪ್ಯಾಯ ಚಾ, ವಟ್ಯಾಯ ಚ, ಕಾಟ್ಯಾಯ ಚಾ, " ಮುಂತಾದ ಶಬ್ದಗಳೆಲ್ಲಾ ಕನ್ನಡಕ್ಕೆ ತಿರುಗಿ ಅನರ್ಥಕ್ಕೆ ಕಾರಣವಾಗಿ ನಗುತರಿಸಿಬಿಡುತ್ತವೆ. (ಇನ್ನೂ ಬಹಳಷ್ಟಿವೆ ಕೆಂಗಣ್ಣಿಗೆ ಗುರಿಯಾಗುವ ಇಷ್ಟವಿಲ್ಲದ್ದರಿಂದ ಇಷ್ಟು ಸಾಕು)
ಇರಲಿ ನಮಗೆ ಮೂಲ ಅರ್ಥ ಗೊತ್ತಿಲ್ಲ ಮುಂದೆ ತಿಳಿದಂತೆ ಈ ಅನರ್ಥ ಮಾಯವಾಗಿ ಘನಗಂಬೀರತೆ ಮೂಡುತ್ತದೆ ಅಂಬುದು ನಂಬಿಕೆಯಲ್ಲ ಪರಮ ಸತ್ಯ.
ಹೀಗೆ ರುದ್ರ ಕಲಿತು ನಂತರ ಚಮಕ ಕಲಿತು ಒಂಚೂರು ಪುರುಷ ಸೂಕ್ತ ಆಮೇಲೆ ಗಣಾನಾಂತ್ವ ಗಣಪತೀಂ ಬಾಯಿಗಟ್ಟು ಆಯಿತೆಂದರೆ ಸಾಕು ನಂತರ ಪುರೋಹಿತನಾದಂತಯೇ. ಅಲ್ಲಿ ಇಲ್ಲಿ ಸಣ್ಣಪುಟ್ಟ ಸತ್ಯನಾರಾಯಣ ಕತೆ ನಂತರ ಪ್ರತಿಷ್ಠೆ...! ಗೆ ಸೀದಾ ಜಂಪ್ ಆನಂತರ ಒಣಪ್ರತಿಷ್ಠೆ ಹೇಗೂ ಇದ್ದೇ ಇದೆ.
ಆದರೂ ಕೊನೆಯ ಸಾಲು ಇನ್ನೂ ಕಷ್ಟ ಅಂತ ಭಾಸವಾಗುತ್ತಿದೆ. "ದಶಪ್ರಾಚೀರ್ದಶದಕ್ಷಿಣಾದಶಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮ ಸ್ತೇನೋ ಮೃಡಯಂತು ತೇ.." ಮುಂದೆ ಅಭ್ಯಾಸವಾಗುತ್ತದೆ ಆವಾಗ ಮತ್ತೆ ನಿಮಗೆ ಕೊರೆಯುತ್ತೇನೆ.
ಅಲ್ಲಿಯವರೆಗೆ ರುದ್ರಾಯ ನಮ:.