Thursday, January 17, 2013

ಜೇನು ಮಾಸ್ಟರ್ ಮಂಜಪ್ಪ


ಕೃಷಿಕರ ವೃತ್ತಿಯಲ್ಲಿ ಅತ್ಯಂತ ಸವಾಲಿನ ಹಾಗೂ ಅಷ್ಟೇ ಉತ್ಸಾಹದಾಯಕ ಕೃಷಿ ಎಂದರೆ ಜೇನು ಕೃಷಿ. ಜೇನು ಸಾಕಾಣಿಕೆ ಜೇಬು ತುಂಬುವ ಭರವಸೆಯನ್ನು ನೀಡುವುದಿಲ್ಲ. ಅತ್ಯಂತ ತಾಳ್ಮೆ ಹಾಗೂ ಬಹು ಸಮಯವನ್ನು ಬೇಡುವ ಜೇನು ಕೃಷಿ ತೊಡಗಿಸಿಕೊಂಡಲ್ಲಿ ಆತ್ಮಾನಂದವನ್ನು ನೀಡಬಲ್ಲದು. ಇಂತಹ ಅಪರೂಪದ ಕೃಷಿಯಾದ ಜೇನು ಸಾಕಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿಯೂ ಯಶಸ್ವಿಯಾಗಿದ್ದಾರೆ ಸಾಗರ ತಾಲ್ಲುಕಿನ ತಾಳಗುಪ್ಪ ಹೋಬಳಿಯ ಖಂಡಿಕಾ ಗ್ರಾಮದ ಕೃಷಿಕ ಮಂಜಪ್ಪ ಕೆ ಎಲ್.
ಇವರು ಒಂದೆಕೆರೆ ಅಡಿಕೆ ತೋಟದ ಮಾಲೀಕರು, ಜತೆಯಲ್ಲಿ ಅಂಚೆ ಇಲಾಖೆಯ ಖಂಡಿಕಾ ಗ್ರಾಮದ ಪೋಸ್ಟ್ ಮಾಸ್ಟರ್. ಬಹು ಹಿಂದಿನಿಂದ ಮನೆಯಲ್ಲಿ ಸಹೋದರ ನಟರಾಜ ಒಂದೆರಡು ಜೇನು ಪೆಟ್ಟಿಗೆ ಇಟ್ಟು ಸಾಕಾಣಿಕೆ ಮಾಡುತ್ತಿದ್ದರು. ಇವರಿಗೆ ೨೦೦೦ ನೇ ಇಸವಿಯಲ್ಲಿ ಜೇನು ಕೃಷಿಯನ್ನು ಕೊಂಚ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಸೆ ಬಂತು. ಆಗ ಕಪ್ಪು ತುಡುವೆ ಜೇನನ್ನು ಎಲ್ಲರೂ ಸಾಕುತ್ತಿದ್ದರು. ವೈರಸ್ ಖಾಯಿಲೆಯಿಂದಾಗಿ ಅವುಗಳು ಪೆಟ್ಟಿಗೆಯಲ್ಲಿ ನಿಲ್ಲದೆ ಸಾಕಾಣಿಕೆ ತುಂಬ ಕಷ್ಟದಾಯಕವಾಗುತ್ತಿತ್ತು. ಆಗ ಅವರ ಗಮನ ಸೆಳೆದದ್ದು ಸಿರಸಿಯ ಮಸಿಗದ್ದೆ ಧರ್ಮೇಂದ್ರ ಹೆಗಡೆ ಸಾಕುತ್ತಿದ್ದ ಅರಿಶಿನ ತುಡುವೆ ಜೇನು. ಸಿರಸಿಗೆ ತೆರಳಿ ಎರಡು ಪೆಟ್ಟಿಗೆ ಜೇನು ಹುಳು ತಂದು ಸಾಕಾಣಿಕೆ ಆರಂಬಿಸಿದ ಮಂಜಪ್ಪ ಅಲ್ಲಿಂದೀಚೆಗೆ ನಿರಂತರವಾಗಿ ಬೆಳೆಯುತ್ತಾ ಸಾಗಿದ್ದಾರೆ.
ಸೊಪ್ಪಿನ ಬೆಟ್ಟದಲ್ಲೂ ಆದಾಯ: ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟದ ಮೇಲ್ಗಡೆ ಸೊಪ್ಪಿನ ಬೆಟ್ಟ ಮುಫತ್ತಾಗಿ ದೊರೆಯುತ್ತದೆ. ಅಲ್ಲಿನ ಸೊಪ್ಪು ದರಲೆಗಳನ್ನು ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತದೆ. ಆದರೆ ಅಲ್ಲಿ ಯಾವುದೇ ಬೆಳೆಗಳನ್ನು ಬೆಳೆಯುವಂತಿಲ್ಲ. ಹಾಗಾಗಿ ಎಲ್ಲಾ ಅಡಿಕೆ ತೋಟದ ಮಾಲೀಕರ ಸೊಪ್ಪಿನ ಬೆಟ್ಟಗಳು ಆದಾಯದ ವಿಷಯದಲ್ಲಿ ನಿರುಪಯುಕ್ತ. ಆದರೆ ಮಂಜಪ್ಪನವರು ಮಾತ್ರಾ ಹೊಸ ಆಲೋಚನೆಯ ಹೊಳವನ್ನು ಹಿಡಿದು ಸಾಗಿದರು. ಇವರು ಮನೆಯ ಪಕ್ಕದ ಸೊಪ್ಪಿನ ಬೆಟ್ಟವನ್ನು ಜೇನು ಸಾಕಾಣಿಕೆಗೆ ಆಯ್ದುಕೊಂಡಿದ್ದಾರೆ. ಕಾಡು ಜಾತಿಯ ಮರಗಳಿರುವ ಸೊಪ್ಪಿನ ಬೆಟ್ಟದ ತುಂಬೆಲ್ಲಾ ಜೇನಿನ ಝೇಂಕಾರ. ಇದರಿಂದಾಗಿ ಜೇನುಗಳ ಆಹಾರ ಸಂಗ್ರಹಣೆ ಸುಲಭವಾಗುವುದರ ಜತೆ ಇಳುವರಿಯೂ ತುಂಬಾ ಹೆಚ್ಚಾಗಿದೆ.
ಜೇನು ಡೈರಿ: ಕೃಷಿಕರು ತಮ್ಮ ಕೈಂಕರ್ಯ ಗಲ ಮಾಹಿತಿಗಳನ್ನು ದಾಖಲಿಸುವುದನ್ನು ಅಭ್ಯಾಸ ಮಾಡಿದರೆ ಅದ್ಭುತ ಯಶಸ್ಸು ಕಾಣಬಹುದು ಎನ್ನುವುದು ಮಂಜಪ್ಪ ಸ್ವತಹ ಕಂಡುಕೊಂಡ ಮಾರ್ಗ. ೨೦೦೦ ನೇ ಇಸವಿಯಿಂದ ಜೇನಿನ ಹಾಗೂ ಜೇನು ಸಾಕಾಣಿಕೆಯ ಸಂಪೂರ್ಣ ಮಾಹಿತಿಯನ್ನಿ ಇವರು ದಾಖಲಿಸಿ ಇಟ್ಟಿದ್ದಾರೆ. ಜೇನು ರಾಣಿ ಹುಟ್ಟಿದ ದಿನಾಂಕದಿಂದ ಹಿಡಿದು ಜೇನು ಗೂಡು ಹಿಸ್ಸೆ ಮಾಡಿಸಿದ ತನಕ ಹಾಗೂ ಜೇನು ತುಪ್ಪ ಯಾವ್ಯಾವ ಪೆಟ್ಟಿಗೆಯಲ್ಲಿ ಎಷ್ಟು ಇಳುವರಿ ಎಂಬ ಮಾಹಿತಿಯನ್ನು ದಾಖಲಿಸುವುದರ ಮುಖಾಂತರ ಇವರು ಯಶಸ್ಸುಗಳಿಸಿದ್ದಾರೆ. ದಾಖಲೆ ಇಟ್ಟಲ್ಲಿ ನಾವು ಯಡವಿದ್ದು ಎಲ್ಲಿ ಎಂಬುದಕ್ಕೆ ಉತ್ತರ ಸಿಗುತ್ತದೆ ತನ್ಮೂಲಕ ನಾವು ತಿದ್ದಿಕೊಳ್ಳ ಬಹುದು ಜತೆಗೆ ಇಂತಹ ದಾಖಲೆಗಳು ಮುಂದಿನ ಪೀಳಿಗೆ ಜೇನು ಕೃಷಿಗೆ ತೊಡಗಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎನ್ನುತ್ತಾರೆ.
ಅಧಿಕ ಇಳುವರಿ: ಸಾಮಾನ್ಯವಾಗಿ ಮಲೆನಾಡಿನಲ್ಲಿ ಒಂದೆರಡು ಜೇನು ಗೂಡನ್ನು ಇರಿಸಿಕೊಳ್ಳುವ ಕೃಷಿಕರು ಪೆಟ್ಟಿಗೆಯೊಂದರಿಂದ ವರ್ಷವೊಂದಕ್ಕೆ ಮೂರ್ನಾಲ್ಕು ಕೆಜಿ ಜೇನುತುಪ್ಪದ ಇಳುವರಿ ಪಡೆಯುತ್ತಾರೆ. ಆದರೆ ಮಂಜಪ್ಪನವರು ೨೦೧೧-೧೨ ನೇ ಸಾಲಿನಲ್ಲಿ ಒಟ್ಟೂ ಹದಿನಾಲ್ಕು ಪೆಟ್ಟಿಗೆಯಿಂದ ಒಂದೂ ಮುಕ್ಕಾಲು ಕ್ವಿಂಟಾಲ್ ತುಪ್ಪ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಕೃತಕ ಹಿಸ್ಸೆ: ಜೇನು ಕುಟುಂಬಗಳನ್ನು ಪೆಟ್ಟಿಗೆಯಿಂದ ಓಡಿ ಹೋಗದಂತೆ ರಕ್ಷಿಸಿಕೊಳ್ಳುವುದು ಜೇನು ಸಾಕಾಣಿಕೆಯಲ್ಲಿ ಅತ್ಯಂತ ಮಹತ್ವ ಪೂರ್ಣ ಘಟ್ಟ. ಪ್ರತೀ ವರ್ಷ ಹೊಸ ರಾಣಿಮೊಟ್ಟೆಯೊಡೆದು ಹಿಸ್ಸೆ ಮಾಡಿಕೊಂಡು ಹಾರಿ ಹೂಗುವ ಜೇನು ಗುಂಪನ್ನು ತಡೆಹಿಡಿದುಕೊಳ್ಳಲು ಯಶಸ್ವಿಯಾದರೆ ಜೇನು ಕೃಷಿಕ ಅರ್ದ ಗೆದ್ದಂತೆ. ಇದಕ್ಕಾಗಿ ಮಂಜಪ್ಪ ಆಯ್ದುಕೊಂಡಿದ್ದು ಕೃತಕ ಹಿಸ್ಸೆ ತಂತ್ರ. ಜೇನು ರಾಣಿಮೊಟ್ಟೆಯನ್ನು ಇಟ್ಟ ಕೂಡಲೇ ಅವರು ಮತ್ತೊಂದು ಪೆಟ್ಟಿಗೆಗೆ ಅರ್ದ ತಂಡವನ್ನು ಹಾಕಿ ಎರಡು ಮಾಡುತ್ತಾರೆ. ತಮಗೆ ಹೆಚ್ಚಾಗಿರುವ ಜೇನು ಗೂಡನ್ನು ಆಸಕ್ತ ರೈತರಿಗೆ ಪ್ರತೀ ವರ್ಷ ಮಾರಾಟ ಮಾಡುತ್ತಾರೆ. ಇದರಿಂದಾಗಿ ವಾರ್ಷಿಕವಾಗಿ ಒಂದಿಷ್ಟು ಆದಾಯದ ಜತೆಗೆ ಜೇನುಗೂಡನ್ನು ಉಳಿಸಿಕೊಂಡಂತಾಗುತ್ತದೆ.
ಉತ್ತಮ ಮಾರುಕಟ್ಟೆ: ಪ್ರತೀ ವರ್ಷ ಒಂದೂವರೆ ಕ್ವಿಂಟಾಲ್ ನಿಂದ ಹಿಡಿದು ಎರಡು ಕ್ವಿಂಟಾಲ್ ಜೇನು ತುಪ್ಪ ತೆಗೆಯುವ ಮಂಜಪ್ಪನವರಿಗೆ ಇಲ್ಲಿಯವರೆಗೆ ಮಾರುಕಟ್ಟೆಯ ಸಮಸ್ಯೆ ಎದುರಾಗಿಲ್ಲ. ಶುದ್ಧ ಪೆಟ್ಟಿಗೆಯಲ್ಲಿನ ತುಪ್ಪ ದೊರಕುವುದರಿಂದ ಮಾರ್ಚ್ ತಿಂಗಳಿನಲ್ಲಿ ತುಪ್ಪ ತೆಗೆಯಲಾರಂಬಿಸುತ್ತಿದ್ದಂತೆ ಸ್ಥಳೀಯ ಗಿರಾಕಿಗಳು ಬಂದು ತೆಗೆದುಕೊಂಡು ಹೋಗುತ್ತಾರೆ. ಕೆಜಿಯೊಂದಕ್ಕೆ ೨೫೦ ರೂಪಾಯಿ ದರದಲ್ಲಿ ಬಿಕರಿಯಾಗುವ ಜೇನು ತುಪ್ಪದಿಂದ ವಾರ್ಷಿಕವಾಗಿ ಸುಮಾರು ೫೦ ಸಾವಿರ ರೂಪಾಯಿಗಳ ಆದಾಯ ಹೊಂದಿದ್ದಾರೆ.
ವೃತ್ತಿಯಲ್ಲಿ ಅಂಚೆ ಇಲಾಖೆಯ ನೌಕರನಾಗಿ ಅಡಿಕೆ ತೋಟದ ಕೃಷಿಕನಾಗಿ ಹವ್ಯಾಸಕ್ಕಾಗಿ ಜೇನಿನಲ್ಲಿ ತೊಡಗಿಸಿ ನಂತರ ಆದಾಯದಲ್ಲಿಯೂ ಯಶಸ್ವಿಯಾದ ಮಂಜಪ್ಪನರು ಪತ್ನಿ ಪ್ರಭಾರ ಸಹಕಾರ ವನ್ನೂ ನೆನೆಯುತ್ತಾರೆ. ೨೨ ಪೆಟ್ಟಿಗೆ ಜೇನು ಹೊಂದಿ ಯಶಸ್ಸು ಗಳಿಸಿರುವ ಕೃಷಿಕ ಮಂಜಪ್ಪ ಹಲವು ರೈತರಿಗೆ ಮಾದರಿಯಾಗಿದ್ದಾರೆ.

ಫೋನ್: ೦೮೧೮೩೨೯೬೭೨೫ 08183296725
ಮೊ ;೯೪೮೦೦೧೮೪೬೧ 9480018461
Posted by Picasa