Friday, December 5, 2008

ಅಪೂರ್ಣ ಕಥೆ ಪೂರ್ಣಗೊಳಿಸಿ

ಮಾಯೆ

" ವೆಂಕಟರಮಣ ಹೆಗಡೆ, ಎಂಥ ಚೆಂದದ ಹೆಸರು. ಆದರೆ ಎಲ್ಲ ಕರೆಯುವುದು ವೆಂಕಣ್ಣ.ವೆಂಕಿ, ವೆಂಕಾಟಿ. ಬೊಗಸೆ ಕಂಗಳ ಚೆಂದನೆಯ ಹುಡುಗಿ ಪಟಕ್ ಅಂತ ಟೋಪನ್ ತೆಗೆದು ಬೊಕ್ಕ ತಲೆಯಲ್ಲಿ ನಿಂತರೆ ಎಂಥಹಾ ಶಾಕ್ ಆಗುತ್ತೇ ಅಲ್ಲವೆ? ಹಾಗೆ ನನಗೆ ಹೀಗೆಲ್ಲಾ ವಿಚಿತ್ರವಾಗಿ ಕರೆದಕೂಡಲೆ ಅಂತಹದ್ದೇ ಆಘಾತವಾಗುತ್ತದೆ. ಆದರೆ ತಿರುಗಿ ಅನ್ನುವಂತಿಲ್ಲ ಅನ್ನದೇ ಬಿಡುವಂತಿಲ್ಲ." ಎಂದು ವೆಂಕಟರಮಣ ಹೆಗಡೆ ಅಪ್ಪಣ್ಣಯ್ಯನ ಬಳಿ ಅಲವತ್ತುಕೊಳ್ಳುತ್ತಿದ್ದ. ಅಪ್ಪಣ್ಣಯ್ಯ ವೆಂಕನ ಮಾತುಗಳಿಗೆ ಪ್ರತ್ಯುತ್ತರ ನೀಡದೆ ತನ್ನಷ್ಟಕ್ಕೆ " ಸೊಯಕ್ ಸೊಯಕ್" ಅಂತ ಹಂಡೆಯಿಂದ ಅಡಿಕೆ ತೋಡಿ ಬುಟ್ಟಿಗೆ ಸುರುವುದರಲ್ಲಿ ಮಗ್ನನಾಗಿದ್ದ. ಹಾಗಂತ ಅಪ್ಪಣ್ಣಯ್ಯನಿಗೆ ವೆಂಕನ ಮಾತು ಕೇಳಲಿಲ್ಲ ಅಂತೇನೂ ಅಲ್ಲ ಆದರೆ ಉತ್ತರ ಕೊಡುವ ಉತ್ಸಾಹದಲ್ಲಿ ಆತ ಇರಲಿಲ್ಲ. ಮಧ್ಯಾಹ್ನ ಕೊನೆಗೌಡ ಹೇಳಿದ ಸುದ್ದಿಯಿಂದ ಅನ್ಯಮನಸ್ಕನಾಗಿದ್ದ. ಆ ಸುದ್ಧಿಯಾದರೋ ಕೊನೆಗೌಡ ಅಪ್ಪಣ್ಣಯ್ಯನ ಬಳಿ ಹೇಳಿರಲಿಲ್ಲ. ಕೊನೆ ಹಿಡಿಯುವವನ ಬಳಿ ಹೇಳುತ್ತಿದ್ದಾಗ ಅಪ್ಪಣ್ಣಯ್ಯನ ಕಿವಿಗೆ ಆ ಸುದ್ಧಿ ಬಿದ್ದಿತ್ತು. "ಹೋಯ್ ವೆಂಕ ಅಂತ ಕರಿಯೋರಿಗೆ ಎಂತ ಹೇಳಿ ಹಾಗಂತ ಕರೆಯೋದನ್ನ ತಪ್ಪಿಸಲಿ, ಒಂದು ಉಪಾಯ ಹೇಳ ಮಾರಾಯ" ಮತ್ತೆ ವೆಂಕ ಮುಂದುವರೆಸಿದ. ಬಡಪೆಟ್ಟಿಗೆ ಇವನು ಬಿಡಲೊಲ್ಲ ಎಂದೆನಿಸಿ ಸಧ್ಯ ಇವನಿಂದ ತಪ್ಪಿಸಿಕೊಂಡರೆ ಸಾಕು ಎಂಬ ಇರಾದೆಯಿಂದ
" ಅಲ್ಲ ನಿಂಗೆ ವಯಸ್ಸು ನಲವತ್ತೈದು ಆತು ಇನ್ನೂ ಮದುವೆ ಚಿಂತೆ ಮಾಡದು ಬಿಟ್ಟು ಹೆಸರಿನ ಹಿಂದೆ ಬಿದ್ದೆಯಲ್ಲ, ಅದನ್ನ ಯೋಚಿಸು" ಎಂದು ವೆಂಕನ ಬುಡಕ್ಕೆ ಇಟ್ಟ ಅಪ್ಪಣ್ಣಯ್ಯ. ವೆಂಕನ ಕೊರೆತ ತಪ್ಪಿಸಿಕೊಳ್ಳಲು ಊರಲ್ಲಿ ಎಲ್ಲರೂ ಅನುಸರಿಸುತ್ತಿದ್ದ ಸುಲಭೋಪಾಯವನ್ನು ಅಪ್ಪಣ್ಣಯ್ಯ ಅನುಸರಿಸಿದ. ಮದುವೆ ವಿಷಯ ಬಂದ ತಕ್ಷಣ ದುರ್ದಾನ ತೆಗೆದುಕೊಂಡವರಂತೆ ಮಾಯವಾಗುತ್ತಿದ್ದ ವೆಂಕ ಇಂದು ಹಾಗೆ ಹೋಗಲಿಲ್ಲ." ಆಯ್ತು ಮದುವೆ ಆಗ್ತೇನೆ ಹೆಣ್ಣು ಹುಡುಕಿ ಕೊಡು, ಅತವಾ ನಾ ಕಂಡ ಹೆಣ್ಣಿನೊಡನೆ ಮದುವೆಯಾಗಲು ಸಹಾಯಮಾಡು" ಎಂದು ಹೇಳಿದ. ಅಪ್ಪಣ್ಣಯ್ಯನಿಗೆ ವೆಂಕಣ್ಣನ ವರ್ತನೆ ಅನಿರೀಕ್ಷಿತ. ಹಳ್ಳಿಯಲ್ಲಿದ್ದ ವಯಸ್ಸು ಚಿಮ್ಮೋ ಹುಡುಗರಿಗೆ ಮದುವೆ ಇಲ್ಲ ಇನ್ನು ನಲವತ್ತೈದರ ಗಡಿ ದಾಟಿದ ಇವನಿಗೆ ಎಲ್ಲಿಂದ ಹೆಣ್ಣುತರುವುದು ಅಂತ ಅಪ್ಪಣ್ಣಯ್ಯನಿಗೆ ಮನಸ್ಸಿನಲ್ಲಿಯೇ ಅನ್ನಿಸಿದರೂ ತಾನು ಯಾವುದೋ ಒಂದು ಹೆಣ್ಣ ಕಂಡಿದ್ದೇನೆ ಅಂತಾನಲ್ಲ ಅದು ಯಾರಿರಬಹುದು ಎಂಬ ಕುತೂಹಲ ಹುಟ್ಟಿತು. "ನೀ ಕಂಡ ಹೆಣ್ಣು ಯಾರ?" ಎಂಬ ಅಪ್ಪಣ್ನಯ್ಯನ ಪ್ರಶ್ನೆಗೆ "ನಾಳೆ ಹೇಳ್ತೇನೆ" ಎಂದು ಉತ್ತರಿಸಿ ವೆಂಕಟರಮಣ ಹೊರಟು ಹೋದ. ಆತ ಅತ್ತ ಹೋಗುತ್ತಿದ್ದಂತೆ ಅಪ್ಪಣ್ಣಯ್ಯನ ಮನಸ್ಸು ಮತ್ತೆ ಕೊನೆಗೌಡನ ಮಾತುಗಳನ್ನು ಮೆಲಕುಹಾಕತೊಡಗಿತು.
"ಹೋಯ್ ತಿಮ್ಮ ಒಂದು ವಿಷ್ಯ ಗೊತ್ತೈತನಾ ನಿಂಗೆ?"
"ಎಂತ್ರಾ ನೀವು ಕೊನೆ ಕೊಯ್ತಾ ಊರು ತಿರುಗೋರು ವಿಷಯ ನನಗೆಂತ ತಿಳಿತದೆ?"
"ಅದೇ ಬಾಗೀರಥಮ್ಮನ ಕಥೆಯಾ"
"ಯಂತು ಅಂತ ಬಿಡಿಸಿ"
"ಅವ್ರ ಗಂಡ ಹೋದ್ವರ್ಷೋದ್ರಲಾ. ಅದು ಸಹಜವಾಗಿ ಹೋಗಿದ್ದಲ್ಲಂತೆ ಬಾಗಿರಥಮ್ಮ ಮತ್ತೊಬ್ಬರ ಜತೆ ಸೇರಿಕೊಂಡು ಅವ್ರನ್ನ ಕೊಲೆ ಮಾಡಿದ್ದಂತೆ ಮಾರಾಯ"
" ಅದು ಹ್ಯಾಂಗೆ ನಿಮಗೆ ಗೊತ್ತಾತು?" ಮತ್ತೊಬ್ಬರು ಯಾರು?
"ಅದೆಲ್ಲಾ ನಿಂಗೆ ಬ್ಯಾಡ, ಸುದ್ಧಿಯಂತೂ ಸುಳ್ಳಲ್ಲ ನೋಡು ಸಧ್ಯ ವಿಷ್ಯ ಹೊರಗೆ ಬರ್ತದೆ. ಯಾರು ಅಂತ ಪೋಲೀಸರು ಬಂದು ಪಪ್ಪ ಹಾಕಿಕೊಂಡು ಹೋದ್ಮೇಲೆ ಗೊತ್ತಾಕ್ತದೆ"
ಅಪ್ಪಣ್ಣಯ್ಯನಿಗೆ ಮುಂದಿನ ವಿಚಾರ ಕೇಳಲು ಅಲ್ಲಿ ನಿಲ್ಲಲಾಗಲಿಲ್ಲ. ಕೊನೆಗೌಡ ಬೇಕಂತಲೇ ಆ ಸುದ್ಧಿ ಹೇಳಿದ್ದನಾ ಎಂಬ ಅನುಮಾನ ಕಾಡತೊಡಗಿತು. ಹೊಟ್ಟೆಯೊಳಗಿನಿಂದ ತರತರ ನಡುಗಿದಂತಾಗಿ ಮನೆಸೇರಿದ ಅಪ್ಪಣ್ಣಯ್ಯ. ಆ ಸುದ್ಧಿ ಕೇಳಿದಲ್ಲಿಂದ ಅಪ್ಪಣ್ಣಯ್ಯ ಮನುಷ್ಯನಾಗಿರಲಿಲ್ಲ. ಮಾಡುವ ಕೆಲಸಗಳೆಲ್ಲ ತನ್ನಷ್ಟಕ್ಕೆ ನಡೆಯುತ್ತಿತ್ತೇನೋ ಎಂಬಂತಿತ್ತು. ಈಗ ವೆಂಕಣ್ಣ ಬಂದು ಮದುವೆಯ ವಿಷಯ ಮುಗುಮ್ಮಾಗಿ ಹೇಳಿದಾಗ ವೆಂಕಣ್ಣ ಕಂಡ ಹುಡುಗಿ ಇವಳೇ ಇರಬಹುದಾ? ಎಂಬ ಅನುಮಾನ ಕಾಡತೊಡಗಿ ಇನ್ನಷ್ಟು ಅಧೀರನಾದ.
***
ಭಾಗೀರಥಿ ಮೂವತ್ತರ ಹರೆಯದ ಚೆಲುವೆ. ಅವಳನ್ನು ಈ ಹಳ್ಳಿಗಮಾರನಿಗೆ ಮದುವೆ ಮಾಡಿಕೊಟ್ಟದ್ದು ಆಕೆಯ ಗ್ರಹಚಾರ ಅಂತ ಊರಿನ ಹಲವಾರು ಗಂಡಸರ ಅಭಿಪ್ರಾಯ. ಅರ್ದ ಎಕರೆ ಅಡಿಕೆ ತೊಟ ಮಣ್ಣಿನಮನೆ ಬಾಯಿತುಂಬಾ ಕವಳ ಗುಜ್ಜುತ್ತಿದ್ದ ಸಾಂಬು ಅವಳ ಗಂಡನಾಗಲು ಅನರ್ಹ ಎಂದು ಊರವರು ತೀರ್ಮಾನಿಸಿದ್ದರು. ಆದರೆ ಭಾಗೀರಥಿ ಪಾಲಿಗೆ ಬಂದದ್ದು ಪಂಚಾಮೃತ ಎಂಬ ತತ್ವಕ್ಕೆ ಇಳಿದು ಚೆಂದವಾಗಿ ಪುಟ್ಟ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು. ಪ್ರೀತಿ ಪ್ರೇಮ ಅಮಾಯಕತೆ ಬಡತನವನ್ನೂ ನುಂಗಿ ಹಾಕಬಲ್ಲದು ಎಂಬ ತತ್ವ ಅವಳದ್ದು. ಆದರೆ ವಿಧಿಗೆ ಅದು ಇಷ್ಟವಿರಲಿಲ್ಲ. ಮದುವೆಯಾಗಿ ಗಂಡನಮನೆ ಸೇರಿದ ಒಂದು ವರ್ಷದಲ್ಲಿ ಸಾಂಬು ಇಹಲೋಕ ತ್ಯಜಿಸಿದ್ದ. ರಾತ್ರಿ ಮಲಗಿದ್ದವನು ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತ ಎಂದರು, ರಾತ್ರಿ ಮಣ್ಣಿನಗೋಡೆಯಿಂದ ಒಳಗೆ ಬಂದು ಸರ್ಪ ಕಚ್ಚಿದೆ ಎಂದರು ಕೆಲವರು ಅವನು ಮೊದಲಿನಿಂದಲೂ ಅನಾರೋಗ್ಯವಂತ ಎಂದರು ಹಲವರು. ಒಟ್ಟಾರೆ ಫಲಿತಾಂಶ ಭಾಗೀರಥಿಯ ಸುತ್ತ ಸುತ್ತುತ್ತಿತ್ತು. ಅಪ್ಪಣ್ಣಯ್ಯ ಭಾಗೀರಥಿಯ ದೂರದನೆಂಟನಾದ್ದರಿಂದ ಸಾಂಬುವಿಗೆ ಕೊಟ್ಟು ಮದುವೆಯಾದನಂತರ ಅಲ್ಲಿನ ಬಳಕೆ ಅಪ್ಪಣ್ಣಯ್ಯನಿಗೆ ಹೆಚ್ಚಿತ್ತು. ತೋಟಕ್ಕೆ ಹೋದಾಗಲೆಲ್ಲ ದಿನಕ್ಕೊಮ್ಮೆ ಸಾಂಬುವಿನ ಮನೆಗೆ ಹೋಗಿ ಕುಶಲ ವಿಚಾರಿಸಿ ಬರುವುದು ಅಪ್ಪಣ್ಣಯ್ಯನಿಗೆ ವಾಡಿಕೆಯಾಗಿತ್ತು ತಾಯಿಯ ವ ರೆಸೆ ಎಂದು ಭಾಗೀರಥಿ ಅಪ್ಪಣ್ನಯ್ಯನಿಗೆ ತುಸು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಳು. ಅಪ್ಪಣ್ಣಯ್ಯನಿಗೂ ಅದೇನೋ ಒಂಥರಾ ಕಾಳಜಿ. ಏನಾದರೂ ಒಂದು ನೆಪಮಾಡಿಕೊಂಡು ಸಾಂಬುವಿನ ಮನೆಗೆ ಹೋಗಿ ಬರುತ್ತಿದ್ದ. ಅಂತಹ ಒಂದು ದಿನದಲ್ಲಿ ಸಾಂಬು ಇಹಲೋಕ ತ್ಯಜಿಸಿದ. ಆನಂತರವೂ ಅಪ್ಪಣ್ಣಯ್ಯ ಭಾಗೀರಥಿ ಮನೆಯ ಆಸ್ಥೆಯನ್ನು ಮುಂದುವರೆಸಿದ್ದ. ಭಾಗೀರಥಿಯ ವೈಧವ್ಯಕ್ಕೆ ಮರುಗುತ್ತಿದ್ದ. ಆದರೆ ಈಗ ಕೊನೆಗೌಡನ ಬಾಯಲ್ಲಿ ಇಂತಹ ವಿಷಯಗಳು ಕೇಳಿಬಂದಮೇಲೆ ತಾನು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೆಯೇ ಇದಕ್ಕೊಂದು ಮಂಗಳ ಹಾಡಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿರಬೇಕೆಂಬ ತೀರ್ಮಾನಕ್ಕೆ ಬಂದ.
***
ಪ್ರಿಯ ಓದುಗರೆ ಕಥೆಯಂತಿರುವ ಈ ಕಥೆ ಇನ್ನೂ ಮುಕ್ತಾಯವಾಗಿಲ್ಲ. ಇದರ ಮುಕ್ತಾಯ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾಮೆಂಟ್ ನ ಜಾಗದಲ್ಲಿ ಕಥೆಗೊಂದು ಮುಕ್ತಾಯ ಕೊಡಿ ಉತ್ತಮ ಮುಕ್ತಾಯಕ್ಕೆ ಪುಸ್ತಕರೂಪದ ಬಹುಮಾನ ಗೆಲ್ಲಿ. ಹಾ ಮರೆಯಬೇಡಿ ಮುಕ್ತಾಯದ ಕೊನೆಯಲ್ಲಿ ನಿಮ್ಮ ಈ ಮೈಲ್ ವಿಳಾಸ ದಾಖಲಿಸಿ.

ಕತೆ ಮುಕ್ತಾಯಗೊಳಿಸಿದ ಪ್ರಜಾವಾಣಿ, ಮೂರ್ತಿ ಹಾಗೂ ಹರೀಶ್ ಗೆ ಧನ್ಯವಾದಗಳು. ಹರೀಶ ಮುಕ್ತಾಯವನ್ನು ಆಯ್ದುಕೊಳ್ಳಲಾಗಿದೆ.(ತೀರ್ಪುಗಾರರು: ವೇಣುಮಾಧವ)

ಬೆಳಿಗ್ಗೆಯಿಂದ ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತ ಮಲಗಿದ ಅಪ್ಪಣ್ಣಯ್ಯನಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಕೊನೆ ಗೌಡ ಹೇಳಿದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.***ಮರುದಿನ ಬೆಳಿಗ್ಗೆ ದೇವರ ಪೂಜೆ ಮುಗಿಸಿ ತೋಟಕ್ಕೆ ಹೊರಡುವ ಹೊತ್ತಿಗೆ ಸರಿಯಾಗಿ ವೆಂಕಣ್ಣ ಬಂದ. ಏನೂ ತಿಳಿಯದಂತೆ ನಟಿಸುತ್ತ ಅಪ್ಪಣ್ಣಯ್ಯ ವೆಂಕಣ್ಣನನ್ನು ಮಾತನಾಡಿಸಿದ: "ಈ ವರ್ಷ ಫಸಲು ಕಮ್ಮಿ ವೆಂಕಣ್ಣ". ವೆಂಕಣ್ಣ ಮತ್ತೆ ಹಳೇ ರಾಗ ತೆಗೆದ: "ನನ್ನ ಪೂರ್ತಿ ಹೆಸರು ವೆಂಕಟರಮಣ". ತಟಕ್ಕನೆ ಸರಿಯಾದ ಸಂದರ್ಭ ಎಂದು ಅಪ್ಪಣ್ಣಯ್ಯ ಅರಿತ."ಆಯ್ತು, ವೆಂಕಟರಮಣ. ಅಲ್ದೋ ವೆಂಕಟರಮಣ, ನಿನ್ನೆ ಯಾವ್ದೋ ಹೆಣ್ಣು ನೋಡಿದ್ದೀನಿ ಅಂದಿದ್ಯಲ್ಲ ಯಾರೋ ಅವಳು" ಎಂದು ಕೇಳಿದ. "ಓಹ್ ಅದಾ.. ನೀವು ಸಹಾಯ ಮಾಡ್ತೀರಿ ಅನ್ನೋದಾದ್ರೆ ಹೇಳ್ತೀನಿ""ಯಾರು ಅಂತಾನೇ ತಿಳೀದೇ ಹೇಗ್ ಹೇಳ್ಲಿ.. ಆದ್ರೂ ನನ್ ಕೈಲಿ ಆದ್ ಸಹಾಯ ಮಾಡ್ತೀನಿ, ಅದ್ಯಾರು ಹೇಳು""ಯಾರೂ ಅಲ್ಲ ನಿಮಗ್ಗೊತ್ತಿರೋಳೆಯ""ಯಾರೋ ಅದು? ಭಾಗೀರಥಿಯ?" ಬಾಯ್ತಪ್ಪಿ ಭಾಗೀರಥಿಯ ಹೆಸರು ಅಪ್ಪಣ್ಣಯ್ಯನ ಬಾಯಿಂದ ಹೊರಬಿದ್ದಿತ್ತು. ತನ್ನ ಅಜ್ಞಾನಕ್ಕೆ ತನ್ನನ್ನೇ ಹಳಿದುಕೊಂಡ ಅಪ್ಪಣ್ಣಯ್ಯ. ಆದರೆ ಅಪ್ಪಣ್ಣಯ್ಯನನ್ನು ಗಮನಿಸದ ವೆಂಕಣ್ಣ "ಅಯ್ಯೊ ಅವ್ಳಲ್ರಾ.. ತುದೀ ಮನೆ ವಿಶಾಲೂ..." ಎಂದ ತುಸು ನಾಚುತ್ತ. "ಅವಳಿಗೆ ವಯಸ್ಸು ಮೂವತ್ತೈದು ದಾಟ್ತಾ ಬಂತು... ನೀವೇನಾದ್ರೂ ಹೇಳಿರೆ ಆಗ್ಬಹುದೇನೋ".ವಿಶಾಲಾಕ್ಷಿಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ದಿನ ಮದುವೆ ಗಂಡಿಗೆ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದ. ಅದಾದ ಮೇಲೆ ಅಪಶಕುನ ಎಂದು ಯಾರೂ ಮದುವೆಯಾಗಲು ಮುಂದೆ ಬಂದಿರಲಿಲ್ಲ. ಗಂಡು ಹುಡುಕಿ ಹುಡುಕಿ ಸಾಕಾದ ಮೇಲೆ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಅಪ್ಪಣ್ಣಯ್ಯ ಈಗ ಇಬ್ಬಂದಿಯಲ್ಲಿ ಸಿಲುಕಿದ್ದ. "ಸರಿ ವೆಂಕಟರಮಣ, ಹಾಗಾದ್ರೆ ಯೋಚನೆ ಮಾಡ್ತೇನೆ" ಎಂದು ಅಪ್ಪಣ್ಣಯ್ಯ ತೋಟಕ್ಕೆ ಹೋದ.***ಮಧ್ಯಾಹ್ನದ ಹೊತ್ತಿಗೆ ಕೊನೆಗೌಡ ಹೇಳಿದಂತೆ ಭಾಗೀರಥಿಯ ಮನೆಗೆ ಪೊಲೀಸರಿಬ್ಬರು ಬಂದಿದ್ದರು. ಆಕೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಲು ಬಂದಿದ್ದರು. ಎರಡು ದಿನ ವಿಚಾರಣೆಯ ನಂತರ ನಿಜಾಂಶ ಹೊರಬಿತ್ತು. ಅಪ್ಪಣ್ಣಯ್ಯ ತಲ್ಲಣಿಸಿದ್ದ.***ಒಂದು ವರ್ಷ ಚೆನ್ನಾಗಿದ್ದ ಭಾಗೀರಥಿಯ ಸಂಸಾರದಲ್ಲಿ ವೆಂಕಣ್ಣ ಬಂದಿದ್ದ. ತನ್ನ ಗಂಡ ಸಾಂಬುವಿಗಿಂತ ನೋಡಲು ಸುಂದರನಾಗಿದ್ದ, ಬುದ್ಧಿವಂತನಾಗಿದ್ದ ವೆಂಕಣ್ಣನ ಕಡೆಗೆ ಭಾಗೀರಥಿ ಸಹಜವಾಗಿಯೇ ಆಕರ್ಷಿತಳಾಗಿದ್ದಳು. ವೆಂಕಣ್ಣನ ಮನಸ್ಸಿನಲ್ಲೂ ಆಕೆಯ ಬಗ್ಗೆ ಆಕರ್ಷಣೆ ಇತ್ತು. ಆದರೆ ಸಾಂಬು ಇದನ್ನೂ ಗಮನಿಸದಷ್ಟು ಮುಗ್ಧನಾಗಿದ್ದ. ಒಂದು ದಿನ ಭಾಗೀರಥಿ-ವೆಂಕಣ್ಣ ಸೇರಿ ಸಾಂಬುವನ್ನು ಹೇಗಾದರೂ ತಮ್ಮಿಬ್ಬರ ಮಧ್ಯದಿಂದ ಸರಿಸಬೇಕೆಂದು ನಿರ್ಧರಿಸಿದರು. ಆ ದುರ್ದಿನದಂದು ರಾತ್ರಿ ಮಲಗುವಾಗ ಭಾಗೀರಥಿ ಸಾಂಬುವಿಗೆ ಸ್ವಲ್ಪ ನಿದ್ದೆ ಗುಳಿಗೆ ಬೆರೆಸಿದ ಹಾಲು ಕೊಟ್ಟು ಮಲಗಿಸಿದಳು. ಆದರೆ ನಿದ್ದೆ ಗುಳಿಗೆಯಿಂದ ಕೊಂದರೆ ಅನುಮಾನ ಬರಬಹುದೆಂದು ಹಾವು ಕಚ್ಚಿ ಸತ್ತನೆಂಬಂತೆ ಮಾಡಿದ್ದರು. ಅದರಂತೆ ಹಾವು ಹಿಡಿಯುವುದು ಗೊತ್ತಿದ್ದ ವೆಂಕಣ್ಣ ಒಂದು ವಿಷದ ಹಾವನ್ನು ಹಿಡಿದು ರಾತ್ರಿ ಸಾಂಬುವಿನ ಮೈ ಮೇಲೆ ಬಿಟ್ಟಿದ್ದ. ಗಾಢ ನಿದ್ದೆಯಲ್ಲಿದ್ದ ಸಾಂಬುವಿಗೆ ಹಾವು ಬಿಟ್ಟಿದ್ದೂ ಗೊತ್ತಾಗಲಿಲ್ಲ, ಕಚ್ಚಿದ್ದೂ ಗೊತ್ತಾಗಲಿಲ್ಲ. ಬೆಳಗಾಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ. ಅದಾಗಿ ಸ್ವಲ್ಪ ದಿನದ ನಂತರ ಏನೋ ಜಗಳವಾಗಿ ವೆಂಕಣ್ಣ-ಭಾಗೀರಥಿ ದೂರವಾಗಿದ್ದರು.***ತನ್ನೊಂದಿಗೆ ಅಷ್ಟೊಂದು ಸಲಿಗೆಯಿಂದಿರುತ್ತಿದ್ದ ಭಾಗೀರಥಿ ಬಾಯ್ಬಿಟ್ಟ ವಿಷಯ ಮಾತ್ರ ಅಪ್ಪಣ್ಣಯ್ಯನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಜೊತೆ ಅಷ್ಟು ಸಲೀಸಾಗಿ ಹರಟುತ್ತಿದ್ದ ವೆಂಕಣ್ಣನೂ ಇದರಲ್ಲಿ ಶಾಮೀಲಾಗಿದ್ದನ್ನು ನಂಬಲಾಗಲಿಲ್ಲ.









Thursday, December 4, 2008

ಹಹಹ...ಅಂತಿಮ ಭಾಗ

ಇನ್ನು ಹೆಚ್ಚು ಹೊತ್ತು ಅಲ್ಲಿದ್ದರೆ ಬಾಯಿ ತಪ್ಪಿ ಅಕ್ಕಪಕ್ಕದವರ ಬಳಿ ಏನಾದರೂ ಹೇಳಿ ಅದು ಅವರ ಲೆಕ್ಕದಲ್ಲಿ ಉದ್ಧಟತನದ ಮಾತಾಗಿ ಲಾತಾ ತಿನ್ನಬೇಕಾದಿತೆಂದು ಹೊರಹೊರಟೆ. ಹೊರಗೆ ಬಾಗಿಲಬಳಿ ಬರುವಷ್ಟರಲ್ಲಿ ಶನಿದೇವನ ಅವತಾರ ಅಂದಿನ ಮಟ್ಟಿಗೆ ಪೂರೈಸಿತು. ಆದರೆ ದರಿದ್ರ ಕುತೂಹಲ ಹಳೇ ಪಾತ್ರಧಾರಿಯನ್ನು ಮಾತನಾಡಿಸಿದರೆ ಹೇಗೆ ಎಂಬ ಆಲೋಚನೆ ಸುಳಿದಾಡಿತು. ಅದು ಸ್ವಲ್ಪಮಟ್ಟಿಗೆ ಅಪಾಯದ ಕೆಲಸವೂ ಆಗಿತ್ತು. ಕಾರಣ ಅಲ್ಲಿದ್ದವರಿಗೆಲ್ಲ ಹಳೆಯಪಾತ್ರಿಯ ಮೇಲೆ ಎಲ್ಲಿಲ್ಲದ ಕೋಪ, ಆತ ಕುಡಿದಿದ್ದಾನೆ ಅದಕ್ಕಾಗಿ ಏನೆಲ್ಲಾ ಒದರುತ್ತಾನೆ ಅಂದುಕೊಂಡಿದ್ದರು. ಆತ ಕುಡಿದದ್ದು ನಿಜ ಆದರೆ ಸತ್ಯವನ್ನೇ ಹೇಳುತ್ತಿದ್ದ. (ಸತ್ಯ ಎಂಬುದು ಈ ಪ್ರಪಂಚಕ್ಕೆ ಯಾವಾಗಲೂ ಬೇಡ. ಸುಳ್ಳು ಹೆಚ್ಚು ಹೆಚ್ಚು ಹೇಳಿದರೆ ಎತ್ತರ ಎತ್ತರಕ್ಕೆ ಸಾಗಬಹುದು ಇಲ್ಲಿ.) ಪಾಪ ನನಗೂ ಕೂಡ ಆಂತರ್ಯದಲ್ಲಿ ಹಳೇಪಾತ್ರಿಯಬಗ್ಗೆ ಅನುಕಂಪ ಇತ್ತು ಆದರೆ ಬೀಳುವ ಲಾತಾದ ಭಯದಿಂದ ತೋರಿಸಿಕೊಳ್ಳಲಾಗುತ್ತಿರಲಿಲ್ಲ(ನೋಡಿ ನಾವೆಲ್ಲರೂ ಹೇಗೆ ಸುಳ್ಳಿಗೆ ಬೆಂಬಲಿಸುತ್ತೇವೆ..!). ಆದರೂ ಏನಾದರಾಘಲಿ ಎಂದು ಹಳೇ ಪಾತ್ರಿಯ ಬಳೈಗೆ ಹೋದೆ. ಅಷ್ಟರಲ್ಲಿ ಆತನ ಕೂಗಾಟ ಗೊಣಗಾಟವಾಗಿ ಪರಿವರ್ತನೆಗೊಂಡಿತ್ತು. "ಕಳ್ಳ ಬಡ್ಡಿ ಮಕ್ಕಳು ದುಡ್ಡಿಗಾಗಿ ಏನೇನೋ ಮಾಡ್ತವೆ( ಈತ ಹಿಂದೆ ಮಾಡಿದ್ದೂ.. ಅದನ್ನೆ. ಈಗ ತನಗೆ ಅವಕಾಶ ತಪ್ಪಿದ್ದಕ್ಕೆ ಸಿದ್ದಾಂತ) ಒಂದು ನೀತಿ ರಿವಾಜೂ ಎಂತೂ ಇಲ್ಲ, ಬರ್ಲಿ ಬರ್ಲಿ ಧರ್ಮಸ್ಥಳದಲ್ಲಿ ಬುದ್ದೀ ಕಲ್ಸತ್ತೀನಿ ಇವುಕ್ಕೆ ಹ್ಯಾ... ಪುಸ್" ಹೀಗೆ ಮುಂದುವರೆಯುತ್ತಿತ್ತು. "ಹೋಯ್ ಅವನ ಮೈಮೇಲೆ ಶನಿ ಬರುವುದು ಸುಳ್ಳಾ..?" ಮೆಲ್ಲಗೆ ಕೇಳಿದೆ. "ಸುಳ್ಳಲ್ದೆ ಸತ್ಯನಾ...? ನಿಮ್ಗೂ ಅನುಮಾನವಾ?. ಒಂದಿಷ್ಟು ಹೇಳ್ತಾನೆ ಸತ್ಯ ಆದ್ರೆ ಅವಂದು ಸುಳ್ಳಾದ್ರೆ ಅವ್ರಿದ್ದು. ಇವೆಲ್ಲಾ ನಾನು ಮಾಡಿಬಿಟ್ಟಿದ್ದೇಯಾ. ದೊಡ್ಡೋರಿಗೆ ಸೊಪ್ಪು ಹಾಕ್ಲಿಲ್ಲ ಹಂಗಾಗಿ ನನ್ನ ಹೊರಗೆ ಹಾಕಿದ್ರು..." ಮತ್ತೆ ನಿಧಾನ ಸ್ವರ ಏರತೊಡಗಿತು. ಇನ್ನು ನಾನು ಅಲ್ಲಿದ್ದರೆ ಕುಂಟುತ್ತಾ ಮನೆಸೇರಬೇಕಾದೀತೆಂದು ಹೊರಗೆ ಬಂದು ಶನಿದೇವಾಯ ನಮೋ ನಮಃ ಎಂದು ಮನೆಗೆ ಹೋಗಲು ಬೈಕನ್ನೇರಿದೆ.

ಇವೆಲ್ಲಾ ನಡೆದು ಈಗ ಹದಿನೈದು ವರ್ಷಗಳೇ ಸಂದಿವೆ. ಮತ್ತೆ ನಾನು ನನ್ನ ಜಂಜಡಗಳಲ್ಲಿ ಶನಿದೇವನ ಕತೆ ಮರೆತಿದ್ದೆ. ಈಗ ಮೂರು ವರ್ಷದ ಹಿಂದೆ ಅದ್ಯಾವುದೋ ಕೆಲಸದ ಮೇಲೆ ಅಲ್ಲಿ ಹೋಗುತ್ತಿದ್ದಾಗ ಅಚ್ಚರಿ ಮೂಡುವಷ್ಟು ಬದಲಾವಣೆ ಅಲ್ಲಿತ್ತು.ಸಣ್ಣ ಕುಟೀರ ಮಾಯವಾಗಿ ದೊಡ್ದ ದೇವಸ್ಥಾನ ತಲೆ ಎತ್ತಿತ್ತು. ಭಕ್ತರು ಹೊಸ ಹೊಸ ಸಮ್ಸ್ಯೆಯಲ್ಲಿ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಅಬ್ಭಾ ಎಂದುಕೊಂಡೆ.

ಯಾವುದು ಏನೇ ಇರಲಿ ಶನಿದೇವ ಮೈಮೇಲೆ ಬರುತ್ತಾನೋ ಇಲ್ಲವೋ ಎನ್ನುವುದು ಟಿವಿ ೯ ನ "ಹೀಗೂ ಉಂಟೇ" ಟಿವಿ ಪ್ರೋಗ್ರಾಂ ನಡೆಸಿಕೊಡುವವ ಹೇಳುವಂತೆ ತರ್ಕಕ್ಕೆ ನಿಲುಕದ್ದು. ಆದರೆ ಅದೊಂದು ಬಹಳ ಜನರಿಗೆ ನೆಮ್ಮದಿಕೊಡುತ್ತಿದೆ ಅಂತ ಅನ್ನುವುದಂತೂ ಸತ್ಯವಾಯಿತಲ್ಲ. ಜನರಿಗೆ ಏನು ಬೇಕೋ ಅದು ನೀಡುವುದು ಪ್ರಜಾಪ್ರಭುತ್ವ...! ರಾಷ್ಟ್ರದ ಕರ್ತವ್ಯ ಅಲ್ಲವೇ.? ಆ ಕಾರಣಕ್ಕಾಗಿ ಇರಬೇಕು ನಮ್ಮ ಮಲೆನಾಡಿನಲ್ಲಿ ಜ್ಯೋತಿಷ್ಯರೂ, ಮಾತನಾಡುವ ದೇವರುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿವೆ. ಪ್ರಪಂಚ ಕಷ್ಟಕ್ಕೆ ಬಿದ್ದಂತೆಲ್ಲಾ ಇಲ್ಲಿ ಹಣದ ಹೊಳೆ ಹರಿಯುತ್ತದೆ. ಗೇರುಸೊಪ್ಪದ ಮಂಗನಂತೆ ಹಾರಿಹಾರಿ ಬೀಳುವ ಮಾರುತಿ ಭಟ್ಟರನ್ನು ಆಡಿಕೊಳ್ಳುವ ಮುಂದುವರೆದವರು ಇದ್ದಂತೆ ಅವರ ಭಂಡಾರಕ್ಕೆ ಹಣ ಸೇರಿಸುವ ನೂರಾರು ಜನ ಇದ್ದಾರೆ. ಎಸ್.ಎಸ್.ಎಲ್.ಸಿ ಪಾಸ್ ಆಗುವುದೂ ಬೇಡ ಇಂತಹದ್ದೊಂದು ಕೆಲಸಕ್ಕೆ. ಆದಾಯ ಮಾತ್ರಾ ಯಾವ ಸಾಪ್ಟ್ ವೇರ್ ನ ಜನಕ್ಕೂ ಇಲ್ಲ. ಅನಂತಣ್ಣ ಈ ಮಂದಿಯ ಹಣೆಬರಹ ಹೇಳುವ ಕೆಲಸ ಶುರುವಿಟ್ಟುಕೊಂಡಾಗ ಆತನ ಆಸ್ತಿ ಎರಡು ಎಕರೆ ಭಾಗಾಯ್ತು ಇತ್ತು. ಈಗ ಅದು ಹತ್ತು ಎಕರೆಗೆ ಏರಿದೆ ಇವತ್ತು ಆತ ಕೋಟ್ಯಾಧೀಶ ಮನೆ ಅರ್ದ ಕೋಟಿ ಬೆಲೆ ಬಾಳುತ್ತದೆ. ಶಾನುಭೋಗರಿಂದ ಹಿಡಿದು ಡಿಸಿ ವರೆಗಿನ ಸರ್ಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು ಈಗ ಅವನ ಜೇಬಿನಲ್ಲಿ. ಬಂಗಾರುಮಕ್ಕಿಯ ಮಾರುತಿ ಭಟ್ಟರೂ ಇದಕ್ಕೆ ಹೊರತಲ್ಲ. ತುಮ್ರಿಯ ಸಮೀಪ ಸಿಗಂಧೂರು ಮೆರೆಯುತ್ತಿದ್ದಂತೆ ಅಲ್ಲಿಯೇ ಹತ್ತಿರದ ಗುಮಗೊಡು ಗಣಪತಿ ಎಂಬಾತ ಈಗ ಜನರ ಸಮಸ್ಯೆ ಪರಿಹರಿಸಲು ನಿಂತಿದ್ದಾನೆ. ಇನ್ನು ಕೆಲವರ್ಷದಲ್ಲಿ ಆತ ಹತ್ತಿರದ ಜಮೀನುಗಳನ್ನೆಲ್ಲಾ ಖರಿದಿಸುತ್ತಾನೆ. ಇದೊಂದು ವೃತ್ತಿಗೆ ಓದಿನ ಅಗತ್ಯ ಇಲ್ಲ. ಧೈರ್ಯದ ಅಗತ್ಯ ಇದೆ. ಪಾಪ ನಮ್ಮ ಸಾಪ್ಟ್ವೇರ್ ಹುಡುಗರು, ಸಿ.ಎ ಹುಡುಗರು ವರ್ಷಪೂರ್ತಿ ಕಷ್ಟಪಟ್ಟು ದುಡಿಮೆಗಾಗಿ ಒದ್ದಾಡುತ್ತಾರೆ. ಆದರೂ ಹೀಗೆ ಹತ್ತು ವರ್ಷದಲ್ಲಿ ಶ್ರೀಮಂತರಾಗಿಲ್ಲ. ನಾವೆಲ್ಲಾ ಬಿಡಿ ಅಬ್ಬೆಪಾರಿಗಳು..

ಹೀಗಿದೆ ನೋಡಿ ಪ್ರಪಂಚ. ಹಾಗಾಗಿ ನಾನೂ ಬೇರೆಯವರಿಗೆ ಭವಿಷ್ಯ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನಮ್ಮ ಭವಿಷ್ಯವಾದರೂ ಉಜ್ವಲವಾಗುತ್ತದೆ....! ನೀವೂ ಬನ್ನಿ ನಿಮ್ಮವರಿಗೂ ಹೇಳಿ " ಅಂವ ಕರೆಕ್ಟಾಗಿ ಹೇಳ್ತ ಮಾರಾಯ" ಎಂದು. ನಿಮಗೂ ಸ್ವಲ್ಪ ಪಾಲು ಕೊಡೋಣ...? ಉದರನಿಮಿತ್ತಂ ಬಹುಕೃತ ವೇಷಂ.

Wednesday, December 3, 2008

ಹ ಹ ಹ ನಾನು ಯಾರು ಗೊತ್ತಾ... ! (ಮುಂದುವರೆದದ್ದು)

ಹೊರಗಡೆ ವ್ಯಕ್ತಿಯೊಬ್ಬನ ಗಲಾಟೆ ಶುರುವಾಯಿತು. ಶನಿದೇವ ಕಣ್ಣು ಮುಚ್ಚಿ ಹಾ ಹಾ ಹೂ ಹೂ ಅನ್ನುತ್ತಲೇ ಇದ್ದ. ಆತ ಶನಿ ಇಳಿದಮೇಲೆ ಕಣ್ಣುಬಿಡುವುದಂತೆ. ಹೊರಗಡೆಯ ವ್ಯಕ್ತಿಯ ಧ್ವನಿ ಸ್ಪಷ್ಟವಿರಲಿಲ್ಲ. ಅದು ಕುಡಿದ ಮತ್ತಿನ ಧ್ವನಿಯಾಗಿತ್ತು. "ನೀನು ಸನಿ ದೇವನನಾ ಎಲ್ಲಾ ಕಂಡಿದೀನಿ ಬಿಡು ನಾ ಕಾಣದ ಸನಿದೇವ ನೀನಲ್ಲ. ನಂಗೆ ಈ ಮೈಮೇಲೆ ಬರಾದು ಹೋಗಾದು ಎಲ್ಲ ಹ್ಯಾಂಗೆ ಅಂತ ಗೊತ್ತೈತಿ. ಸನಿ ಅಂತೆ ಸನಿ, ತಗದು ನಾಕು ಬಿಟ್ರೆ ಸನಿ ಎಲ್ಲ ಹಾರಿ ಹೊಕ್ತಾನೆ ಎಮ್ಮಿಗೆ ಕಾಯಿ ಮಂತ್ರಿಸಿ ಹಾಲು ಕೊಡ ಹಂಗೆ ಮಾಡವ ನೀನೆಂತ ದೇವ್ರ? ದಂ ಇದ್ರೆ ಕ್ವಾಣ ಹಾಲು ಕೊಡ ಹಂಗೆ ಮಾಡು , ಕಳ್ ಬಡ್ಡಿ ಮಗನೆ" ಕ್ಷಣ ಕ್ಷಣಕ್ಕೂ ಹೊರಗಿನ ವ್ಯಕ್ತಿ ಕೂಗಾಟ ಜೋರಾಯಿತು. ಎಲ್ಲ ಭಕ್ತರ ಚಿತ್ತ ಈಗ ಹೊರಗಿನ ಶನಿಯತ್ತ.(ಟಿವಿ ೯ ವರದಿಗಾರರು ಹೀಗೆ ಹೇಳುತ್ತಿದ್ದರೇನೋ). ಪಕ್ಕದಲ್ಲಿ ಪ್ರಪಂಚವೇ ತಲೆಯಮೇಲೆ ಹೊತ್ತು ನಿಂತ ಮುಖ ಮಾಡಿಕೊಂಡಿದ್ದವನ ಬಳಿ ಹೊರಗಡೆ ಕೂಗುತ್ತಾ ಇರುವವನು ಯಾರು? ಎಮ್ದು ಕೇಳಿದೆ. ಅಯ್ಯೋ ಅದು ದೊಡ್ಡ ಯಡವಟ್ಟು ಸೋಮಿ, ಮುಂಚೆ ಅವನ ಮೈಮೇಲೆ ಶನಿ ದೇವ್ರು ಬರ್ತಿತ್ತು. ಅವನು ಕುಡಿಯದು ಜಾಸ್ತಿ ಮಾಡ್ಬುಟ್ಟಾ ಹಂಗಾಗಿ ಮೇಷ್ಟ್ರು ಅಂವ ಬ್ಯಾಡ ಅಂತ ಇವನ ಮೈಮೇಲೆ ಬರೋ ಹಂಗೆ ಮಾಡಿದಾರೆ. ನನಗೆ ಈಗ ಶನಿ ಮಹಾತ್ಮನ ಗಲಾಟೆಯ ಅರ್ಥವಾಯಿತು. ಅಲ್ಲಿ ಆಗಿದ್ದು ಇಷ್ಟೆ. ಕೆಲ ವರ್ಷಗಳ ಹಿಂದೆ ಭಕ್ತ ಸಮೂಹ ಹೆಚ್ಚಾಗಿ ಇತ್ತ ಕಡೆ ಸುಳಿಯದಿದ್ದ ದಿವಸಗಳಲ್ಲಿ ಹೊರಗಡೆ ನಿಂತು ಕೂಗುತ್ತಿದ್ದವನ ಮೈಮೇಲೆ ಪ್ರತೀ ಶನಿವಾರ ಮೈಮೇಲೆ ಬರುತ್ತಿತ್ತಂತೆ. ಆತ ಪಾಪ ಸಣ್ಣಪುಟ್ಟ ಭಕ್ತರ ಸಮಸ್ಯೆಗಳನ್ನು ಬಗೆ ಹರಿಸಿ ತನಗೆ ವಾರಕ್ಕಾಗುವ ಖರ್ಚು ಸಂಪಾದಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಬುದ್ದಿವಂತರೊಬ್ಬರು ಅಲ್ಲಿಯೇ ಇದ್ದ "ಸನಿ ಮಹಾತ್ಮನ" ಗುಡಿಯ ಜೀರ್ಣೋದ್ಧಾರ ಮಾಡಿದರು. ಅಷ್ಟಾದನಂತರ ಜನಸಮೂಹ ಹೆಚ್ಚು ಹೆಚ್ಚು ಬರತೊಡಗಿತು. ಆದರೆ ಹಳೆಯಪಾತ್ರಿ ಸ್ವಲ್ಪ ಎಣ್ಣೆ ಗಿರಾಕಿಯಾದ್ದರಿಂದ ರಗಳೆಮಾಡುತ್ತಿದ್ದ. ಇದನ್ನು ಮನಗಂಡ ಆಡಳಿತ ಕಮಿಟಿ ಶನಿ ಮೈಮೇಲೆ ಬರಲು ಹೊಸ ವ್ಯಕ್ತಿಯನ್ನು ನಿಯಮಿಸಿತು. ಪಾಪ ಈ ಪ್ರಕ್ರಿಯೆಯಿಂದ ಹಳೇ ಪಾತ್ರಿ ಸಂಪಾದನೆಯಿಲ್ಲದೆ ಅಬ್ಬೇಪಾರಿಯಾಗಿದ್ದ. ಈಗ ಆತ ಹೊರಗಡೆ ಬಂದು ಗಲಾಟೆಶುರುವಿಟ್ಟುಕೊಂಡಿದ್ದ. ಆತನೆದುರು ಪ್ರಸ್ತುತ ಶನಿ ಪಾತ್ರಧಾರಿ ಹೆಚ್ಚು ಮಾತನಾಡುವಂತಿರಲಿಲ್ಲ. ಅವನಿಗೆ ಶನಿ ಮೈಮೇಲೆ ಬರುವ ಮರ್ಮವೆಲ್ಲಾ ಗೊತ್ತಿತ್ತು. ಹಾಗಾಗಿ ಈತ ಒಂಥರಾ ಕಸಿವಿಸಿಗೊಳಗಾಗಿದ್ದ. ಜನರ ಮತ್ತು ಶನಿದೇವರ ನಡುವೆ ಮಾತುಕತೆಗೆ ಸಹಾಯ ಮಾಡಲು ಸೇರುಗಾರನೊಬ್ಬ ಇದ್ದ . ಆತ ಮಹಾ ಚಾಲಾಕಿ. ಆತ ಹೊಸಪಾತ್ರಿಯ ಪಾರ್ಟಿ. ಆತ ಹೇಳಿದ. " ಶನಿ ದೇವಾ ಈತನ ಗಲಾಟೆ ಇಲ್ಲಿ ತೀರ್ಮಾನವಾಗುವುದು ಬೇಡ , ಬೇರೆ ಯಾವುದಾದರೂ ಸ್ಥಳ ಸೂಚಿಸು". ಶನಿ " ಹೌದು ನಾನು ಇನ್ನು ಹೆಚ್ಚು ಹೊತ್ತು ಮೈಮೇಲೆ ಇರುವುದಿಲ್ಲ. ನಾಡಿದ್ದು ಧರ್ಮಸ್ಥಳಕ್ಕೆ ಇಬ್ಬರೂ ಬನ್ನಿ ಅಲ್ಲಿ ತೀರ್ಮಾನ ಹೆಗಡೆಯವರ ಬಾಯಿಂದ ಹೇಳಿಸುತ್ತೇನೆ. ಆದರೆ ಒಂದು ನೆನಪಿರಲಿ, ನಾನು ಯಾವುದೇ ಕಾರಣಕ್ಕೂ ಆತನ ಮೈಮೇಲೆ ಬರುವುದಿಲ್ಲ" ಎಂದು ಹೇಳಿದ. ಸೇರುಗಾರ "ಸರಿ ಹಾಗೆಯೇ ಆಗಲಿ" ಎಂದ . ಆಗ ಅಲ್ಲಿ ಕುಳಿತಿದ್ದವರೊಬ್ಬರು " ನಾಡಿದ್ದು ಬಸ್ ಮುಷ್ಕರ . ಧರ್ಮ ಸ್ಥಳಕ್ಕೆ ಹೋಗಲಾಗುವುದಿಲ್ಲ" ಎಂದರು. ಪಾಫ ಶನಿದೇವನಿಗೆ ಅದು ಗೊತ್ತಿರಲಿಲ್ಲ ಅಂತ ಕಾಣಿಸಿತ್ತು. ಆದರೂ ಶನಿದೇವ ಸೋಲಲಿಲ್ಲ." ನೀನು ನಿನ್ನ ವಾಹನವನ್ನು ಕಳುಹಿಸು ಅದರಲ್ಲಿ ಎಲ್ಲರೂ ಧರ್ಮಸ್ಥಳಕ್ಕೆ ಹೋಗಿಬರಲಿ" ಎಂದು ಭಕ್ತ ಸಮೂಹದತ್ತ ಕೈ ಮಾಡಿ ತೋರಿಸಿದ. ಕಣ್ಣು ಮುಚ್ಚಿದ್ದ ಶನಿದೇವರ ಪಾತ್ರಿ ಕೈ ತೋರಿಸಿದೆಡೆ ಒಬ್ಬ ಹಣ್ಣು ಹಣ್ಣು ಮುದುಕಿ ಕುಳಿತಿದ್ದಳು. ಅಲ್ಲಿ ಸ್ವಲ್ಪ ಯಡವಟ್ಟಾಗಿತ್ತು. ಶನಿ ಮೈಮೇಲೆ ಬರುವುದಕ್ಕೆ ಮೊದಲು ಅಲ್ಲಿ ಒಬ್ಬ ಲಾರಿಮಾಲಿಕರು ಕುಳಿತಿದ್ದರು ಆತ ಅದನ್ನೇ ನೆನಪಿಟ್ಟುಕೊಂಡು ಕೈ ತೋರಿಸಿದ್ದ ಆದರೆ ಅವರು ಅದ್ಯಾವ ಮಾಯಕದಲ್ಲೋ ಎದ್ದು ಹೋಗಿಬಿಟ್ಟಿದ್ದರು. ಆ ಜಾಗದಲ್ಲಿ ಕುಳಿತ ಅಜ್ಜಿಯಬಳಿ ವಾಹನವೆಂದರೆ ಮುರುಕು ಊರುಗೋಲು...?.
ನನಗೆ ಈ ಮಳ್ಳಾಟಗಳನ್ನು ನೋಡಿ ನಗು ಉಕ್ಕಿಬರುತ್ತಿತ್ತು. ಆದರೆ ನಗುವಂತಿಲ್ಲ ನಕ್ಕರೆ ಕೈಕಾಲು ಮುರಿದು ಹೆಡೆಮುರಿಕಟ್ಟಿ ಆಚೆ ಎಸೆಯುತ್ತಿದ್ದರು. ಎಲ್ಲರೂ ಘನಗಂಭೀರ ಮುಖ ಹೊತ್ತು ವೀಕ್ಷಿಸುತ್ತಿದ್ದರು. ಈ ಎಲ್ಲಾ ಘಟನೆ ತೀರಾ ಹದತಪ್ಪುತ್ತಿರುವುದು ಸೇರುಗಾರನ ಗಮನಕ್ಕೆ ಬಂತು. ಆತ : ಶನಿದೇವಾ... ನೀನು ಬಹಳ ಗೊಂದಲದಲ್ಲಿದ್ದೀಯಾ(ನಿಜವಾಗಿಯೂ ಹೌದು ಅಸ್ತಿತ್ವದ ಪ್ರಶ್ನೆ ) ಹಾಗಾಗಿ ಇಂದು ಬೇಡ ಮುಂದೆ ತೀರ್ಮಾನಿಸೋಣ" ಎಂದು ತಿಪ್ಪೆಸಾರಿಸಿದ. ನಂತರ ನಾನು..

ಹ ಹ ಹ ನಾನು ಯಾರು ಗೊತ್ತಾ... !

ಹ ಹ ಹ ನಾನು ಯಾರು ಗೊತ್ತಾ... ಸನಿ ದೇವ ಕನೋ... ನನ್ನನ್ನು ನಂಬಿ ಬಂದ ಭಕ್ತರನ್ನು ಕಾಪಾಡುವುದು ನನ್ನ ಕರ್ತ್ವವ್ಯ ಕನೋ... ಬಾ ಬಾ... ಮುಂದೆ ಬಾ ತಗ ಈ ತೆಂಗಿನ ಕಾಯಿ , ಮನಿಗೆ ತಗಂಡು ಹೋಗಿ, ಕೊಟ್ಟಿಗೇಲಿ ಇಡು ಎಲ್ಲಾ ನಿವಾರಣೆ ಆಗ್ತೈತಿ...ಹೋಗ್ ಹೋಗ್. ದೂರದ ಊರಿಂದ ಹೆಣ್ಣು ಮಗಳ ಸಮಸ್ಯೆ ಮನ್ಸಲ್ಲಿ ಇಟ್ಕೋಂಡು ಬಂದೋನು ಬಾ.. ನಿಂಗೆ ಉತ್ತರ ಹೇಳ್ತೀನಿ".
ಶೆಟ್ಟಿಸರದಲ್ಲಿ ಶನಿದೇವ ಮೈಮೇಲೆ ಬರ್ತಾನೆ ಮಕ್ಕಾಕ ಮಕ್ಕಿ ಹೇಳ್ತಾನೆ, ತಟಾಕು ಹೆಚ್ಚುಕಮ್ಮಿ ಆದ್ರೂ ಮರದ ಮೇಲಿದ್ದ ಜೇನು ಹುಳ ಹೊಡಿತದೆ ಒಂದ್ಸಾರಿ ಬಾ ನೋಡು ದೇವರ ಮಹಿಮೆ " ಅಂತ ಸುಬ್ಬಣ್ಣ ರಗಳೆಕೊಡುತ್ತಲೇ ಇದ್ದ. ಅಂತೂ ಒಂದು ದಿನ ಬೇರೆ ಕೆಲಸ ಇಲ್ಲದ್ದರಿಂದ ಶೆಟ್ಟಿಸರದತ್ತ ಬೈಕನ್ನೋಡಿಸಿದೆ. ನಾನು ಹೋಗುವಷ್ಟರಲ್ಲಿ ನೂರಾರು ಜನ ತಮ್ಮ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಭಕ್ತರ ಭಕ್ತಿಯ ಸಾಲಿನಲ್ಲಿ ವಿನೀತನಾಗಿ ನಾನೂ ಸೇರಿಕೊಂಡೆ. ಶನಿದೇವ ಇನ್ನೂ ಮೈಮೇಲೆ ಬಂದಿರಲಿಲ್ಲ. ಶನಿದೇವನನ್ನು ಮಾತನಾಡಿಸುವ ಸೇರುಗಾರ ಅತ್ತಿತ್ತ ಸುಳಿಯುತ್ತಿದ್ದ. ಜನಸಾಗರದ ನಡುವೆ ದೇವಸ್ಥಾನದ ಆವರಣದಲ್ಲಿ ನಾನೂ ಒಂದು ಮೂಲೆ ಹಿಡಿದು ಗೋಡೆಗೊರಗಿದೆ. ಹೀಗೆ ಅರ್ದ ಘಂಟೆ ಕಳೆಯುವಷ್ಟರಲ್ಲಿ ಪಾತ್ರಿಯ ಮೈಮೇಲೆ ಶನಿದೇವ ಅವತರಿಸಿದ. ಸರಿ ಭಕ್ತ ಸಮೂಹದ ನಡುವೆ ಸಮಸ್ಯೆ ಇದ್ದವರು ಶುರುಹಚ್ಚಿಕೊಂಡರು. ಮನೆಯಲ್ಲಿ ಎಮ್ಮೆ ಹಾಲು ಕೊಡುತ್ತಿಲ್ಲ, ಗಂಡ ಕುಡಿಯುತ್ತಾನೆ, ಮಗ ಹೇಳಿದ ಮಾತು ಕೇಳೋದಿಲ್ಲ, ದಂಧೆ ಕೈ ಹತ್ತೋದಿಲ್ಲ, ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾ ಭಕ್ತ ಸಮೂಹ ಕಣ್ಣುಮುಚ್ಚಿ ನಿಂತು ಹೂಂಕರಿಸುತ್ತಿದ್ದ ಶನಿದೇವನ ಪಾತ್ರಧಾರಿಯೆದುರು ನಿಲ್ಲತೊಡಗಿತು . "ಓಹೋ ಹೌದಾ? ಹಾಗಾ..? ಎಲ್ಲಾ ಸರಿಯಾಗುತ್ತೆ ಬಿಡು, ಈ ಕಾಯಿ ತಗಂಡು ಹೋಗು, ಆ ಕ್ಷೇತ್ರಕ್ಕೆ ಹೋಗ್ಬಾ? ಮುಂತಾದ ಪಾತ್ರಧಾರಿಯ ಮಾನಸಿಕ ಮಟ್ಟಕ್ಕೆ ತೋಚುತ್ತಿದ್ದ ಉತ್ತರಗಳನ್ನು ನೀಡುತ್ತಿದ್ದ. ನನಗೂ ಒಂದೇ ತರಹದ ಘಟನಾವಳಿಗಳನ್ನು ಕೇಳಿ ಬೇಸರಬರತೊಡಗಿತು. ಮನೆಗೆ ಹೋಗಿ ಅಂಗಾತ ಮಲಗಿ ಒಳ್ಳೆಯ ನಿದ್ರೆ ತೆಗೆದರೆ ಅದರಲ್ಲಿರುವ ಲಾಭ ಇದರಲ್ಲಿ ಇಲ್ಲ ಎಂದೆನಿಸಿತು. ಅಷ್ಟರಲ್ಲಿ ಶನಿ ದೇವ " ದೂರದಿಂದ ಹೆಣ್ಣು ಮಗಳೊಬ್ಬಳ ಸಮಸ್ಯೆ ಹೊತ್ತು ಪರಿಹಾರಕ್ಕೆ ಇಲ್ಲಿಗೆ ಬಂದವರು ಬರಬೇಕು" ಎಂಬ ಆಹ್ವಾನ ನೀಡಿದ. ಕೆಲನಿಮಿಷಗಳಾದರೂ ಸಭೆಯಿಂದ ಯಾರೂ ಎದ್ದೇಳಲಿಲ್ಲ. ಶನಿಪಾತ್ರಧಾರಿ ಪದೇ ಪದೇ ತನ್ನ ಮಾತು ಉಚ್ಚರಿಸುತ್ತಿದ್ದ. ಇಲ್ಲ ಒಬ್ಬೇ ಒಬ್ಬಾತನೂ ಕದಲಲಿಲ್ಲ. ಗುಸುಗುಸು ಪಿಸ ಪಿಸ ಮಾಡುತ್ತಾ ಅಲ್ಲೇ ಕುಳಿತರು. ನನಗೆ ಇವೆಲ್ಲಾ ಒಂಥರಾ ವಿಚಿತ್ರ ರಗಳೆಯೆಂದೆನಿಸಿತು. ಸರಿ ಹಗೂರ ಮನೆಗೆ ಹೋಗೋಣ ಎಂದು ಎದ್ದುನಿಂತೆ. ತತ್ ಕ್ಷಣ ನನಗೆ ಏನು ಎಂದು ಅರ್ಥವಾಗುವುದರೊಳಗೆ ಘಟನೆಯೊಂದು ನಡದೇ ಹೋಯಿತು. ನಾನು ಮನೆಗೆ ಹೊರಡಲು ಎದ್ದು ನಿಂತಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಭಕ್ತರು ಶನಿ ದೇವ ಹೇಳುತ್ತಿದ್ದ ಸಮಸ್ಯೆ ಹೊತ್ತ ಜನ ನಾನೇ ಎಂದು ಭಾವಿಸಿತು. "ಮುಂಚೆ ಎದ್ದು ನಿಲ್ಲಾಕೆ ನಿಮಗೆ ಏನು ದಾಡಿ?. ಶನಿ ದೇವನ ಆಟ ಆಡಿಸ್ತೀರಾ?.ಆವಾಗಿಂದ ಕರಿತಾ ಇದೆ ದೇವ್ರು ಸುಮ್ನೆ ಕುಂತಿದೀರಲ್ಲ. ಮುಂತಾದ ಪ್ರಶ್ನೆಗಳೊಡನೆ ಅಕ್ಷರಶಃ ನನ್ನನ್ನು ಹೊತ್ತೊಯ್ದು ಶನಿ ದೇವನ ಮುಂದೆ ನಿಲ್ಲಿಸಿಬಿಟ್ಟಿತು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಸುಮ್ಮನೆ ನಿಂತೆ. "ಏನಾಗಿದೆ ಹೆಣ್ಣು ಮಗುವಿಗೆ"? ಶನಿ ದೇವ ಹೋಂಕರಿಸುತ್ತಾ ಪ್ರಶ್ನಿಸಿದೆ

"ನನಗೆ ಮದುವೆಯೇ ಆಗಿಲ್ಲ ಇನ್ನೆಲ್ಲಿ ಮಗು"

ಮತ್ತೇಕೆ ಇಲ್ಲಿ ಬಂದು ನಿಂತೆ? ನಿನ್ನ ತೊಂದರೆ ಏನು?

"ನಾನೆಲ್ಲಿ ಬಂದೆ, ಜನ ತಂದು ನಿಲ್ಲಿಸಿದರು. ತೊಂದರೆ ಏನೂ ಇಲ್ಲ ಸಧ್ಯಕ್ಕೆ. ಇದೆಲ್ಲಾ ಹೇಗೆ ಅಂತ ನೊಡಲು ಬಂದಿದ್ದೆ. "

ಏನು? ನನ್ನ ಹತ್ರಾನೆ ಹುಡುಗಾಟಿಕೆನಾ? ಪರಿಣಾಮ ಗೊತ್ತೈತಾ? ಹುಡುಗಾಟಿಕೆ ಮಾಡಕಾರು.

ನಾನು ಒಂಥರಾ ವಿಚಿತ್ರ ರೀತಿಯಲ್ಲಿ ನಕ್ಕೆ. ಶನಿ ದೇವನಿಗೆ ನನ್ನದು ಉದ್ಧಟತನವಿರಬೇಕೆಂದೆನಿಸಿತು." ಹೂ ಇರಲಿ ತಗಾ ಈ ತೆಂಗಿನಕಾಯಿ ಎಲ್ಲಾ ಒಳ್ಳೇದಾಕ್ತೈತಿ, ಹೊಗ್. ಶನಿ ದೇವ ಅಪ್ಪಣೆ ಕೊಟ್ಟ. ಪುಗ್ಸಟ್ಟೆ ಸಿಕ್ಕ ಕಾಯಿ ಹಿಡಿದುಕೊಂಡು ಮನೆಗೆ ಹೊರಡಲು ಬಾಗಿಲ ಬಳಿ ಬಂದೆ ಅಷ್ಟರಲ್ಲಿ......

Sunday, November 30, 2008

ಅಯ್ಯೋ ಸನ್ಮಾನ

ಹೊರಗಡೆ ಜಿಟಿ ಜಿಟಿ ಮಳೆ ಬರುವಂತಹ ವಾತಾವರಣ . ಬೆಂಗಳೂರಿನ ಮಠದ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ. ಒಂಥರಾ ಬೆಚ್ಚಗೆ ಒಂಥರಾ ಈ ಪ್ರಪಂಚ ಅರ್ಥವಾಗದ ಮನಸ್ಥಿತಿಯಲ್ಲಿ ಮೂಲೆಯಲ್ಲಿ ಕುಳಿತಿದ್ದೆ. ನನಗೆ ಪರಿಚಿತರಾದವರು ಹಲವಾರು ಜನ ಅತ್ತಿಂದ್ದಿತ್ತ ಓಡಾಡುತ್ತಲಿದ್ದರು. ಇನ್ನಷ್ಟು ಜನ ವೇದಿಕೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ್ಯಾರಿಗೂ ನಾನು ಇದ್ದುದ್ದು ಗೊತ್ತಿರಲಿಲ್ಲ. ಗೊತ್ತಾಗುವ ಅವಶ್ಯಕತೆ ನನಗೆ ಇರಲಿಲ್ಲ. ಸನ್ಮಾನಿತ ವ್ಯಕ್ತಿ ನಾನು ಬಾಲ್ಯದಿಂದ ನೋಡಿದವರು. ಹೆಸರು ಇಲ್ಲಿಯ ಮಟ್ಟಿಗೆ ಶಿವಣ್ಣ ಎಂದಿಟ್ಟುಕೊಳ್ಳೋಣ. ಹಾಗಾಗಿ ಅವರ ಬಗ್ಗೆ ಏನೇನು ನಡೆಯುತ್ತದೆ ಎಂದು ಸುಮ್ಮನೆ ನೋಡುತ್ತಾ ಕುಳಿತೆ. ನಮ್ಮ ಶಿವಣ್ಣ ಒಂದುಕಾಲದಲ್ಲಿ ಪ್ರಶಸ್ತಿ ಸನ್ಮಾನಕ್ಕೆಲ್ಲಾ ಪರಮ ವಿರೋಧಿ. ಊರಲ್ಲೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದನ್ನು ತಪ್ಪಿಸಲು ಹರಸಾಹಸ ಪಟ್ಟಿದ್ದರು. ಅದನ್ನು ತಪ್ಪಿಸಲು ಆಗದಾಗ " ಸನ್ಮಾನ ಪ್ರಶಸ್ತಿ ಎಲ್ಲ ಅನಹ್ರ ವ್ಯಕ್ತಿಗಳಿಗೆ ಮಾತ್ರಾ ಎಂದು ಪ್ರಚಾರ ಮಾಡಿದ್ದರು. ಆದರೆ ಈಗ ಅವರು ವೇದಿಕೆಯಲ್ಲಿದ್ದರು.!!! . ಇರಲಿ ಬಿಡಿ ಆಗ ವಯಸ್ಸಿತ್ತು ಹಾಗೆ ಅನ್ನಿಸಿರಬಹುದು. ಈಗ ವಯೋವೃದ್ದರು ಅಂದುಬಿಡೋಣ. ವೇದಿಕೆಯಲ್ಲಿದ್ದ ಒಬ್ಬಾತ ಹೇಳಿದ."ಈ ಕಾರ್ಯಕ್ರಮ ಬೇರೆ ಕಡೆ ನಿಗದಿಯಾಗಿತ್ತು. ಆದರೆ ಸನ್ಮಾನಿತರು ಶ್ರೀಗಳ ಭಕ್ತರು. ಹಾಗಾಗಿ ಶ್ರೀ ಮಠದ ಈ ಆವರಣದಲ್ಲಿ ಶ್ರೀಗುರುಗಳ ಆಶೀರ್ವಾದದೊಂದಿಗೆ ನಡೆಯುವಂತಾಯಿತು......" ,. ನನಗೆ ಪರಮಾಶ್ಚರ್ಯ ಊರಿನಲ್ಲಿ ಇದೇ ಮಠದ ಕಾರಣವಿಲ್ಲದೆ ವಿರೋಧಕ್ಕಾಗಿ ವಿರೋಧಿಸುವ ಗುಂಪಿನ ಮುಖ್ಯ ಸದಸ್ಯ ಅರೆನಾಸ್ತಿಕ ಜಯಣ್ಣನ ಪಟ್ಟ ಶಿಷ್ಯ ಈ ನಮ್ಮ ಶಿವಣ್ಣ. ಎಂದೂ ಗುರು ಮಠ ಎಂದು ನಡೆದುಕೊಂಡವನಲ್ಲ. ಇರಲಿ ಊರಿನದು ಊರಿಗೆ ಬೆಂಗಳೂರಿನದು ಬೆಂಗಳೂರಿಗೆ. ಮತ್ಯಾರೋ ಹೇಳಿದರು "ಶ್ರೀ ರಾಮನಂತೆ ನಮ್ಮ ಶಿವಣ್ಣ...." . ಅಬ್ಬಾ...! ನಿಜ ನಿಜ .! ಮೊದಲನೆ ಹೆಂಡತಿ ಇದ್ದಂತೆ ಎರಡನೆಯ ಮದುವೆ ಮಾಡಿಕೊಂಡು ಎಪ್ಪತ್ತರ ಇಳಿವಯಸ್ಸಿನಲ್ಲಿ ಈಗ ಮೂರನೆಯ ಹೆಂಡತಿಯ ವಿಚಾರದಲ್ಲಿ ಮೊದಲನೆ ಹೆಂಡತಿಯನ್ನು ಓಡಿಸಿದ ವೀರ ನಮ್ಮ ಶಿವಣ್ಣ, ಆದರೆ ವೇದಿಕೆಯಲ್ಲಿ ಗುಣಗಾನ ಮುಂದುವರೆಯುತ್ತಿತ್ತು. ಇರಲಿಬಿಡಿ ನಾವು ಶ್ರೀ ಕೃಷ್ಣನ ನ್ನು ಪೂಜಿಸುತ್ತೇವೆ ಅವನೂ ರಾಮನ ಅವತಾರವೇ ಅಲ್ಲವೆ?. ನಂತರ "ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸಾಲಸೋಲ ಮಾಡಿಕೊಂಡು ಯಕ್ಷಗಾನ ನಾಟಕಗಳ ಏಳ್ಗೆಗಾಗಿ ತಮ್ಮ ಆಯುಷ್ಯವನ್ನು ಸವೆಸಿದ್ದಾರೆ". ನನ್ನೊಳಗಿನವ ನಕ್ಕ. ಇಸ್ಪೀಟು ಆಟಕ್ಕಾಗಿ ಮತ್ತು ಮನೆಯಲ್ಲಿಯೇ ಇಸ್ಪೀಟಿನ ಕ್ಯಾಂಪ್ ನಡೆಸಿ ಸಾಲಸೋಲ ಮಾಡಿಕೊಂಡ ವಾಸ್ತವ ನೆನಪಾಯಿತು. ಸಂಘಟಕರು "ಸನ್ಮಾನ ಮಾಡುತ್ತೇವೆ ಎಂದಾಗ ಸುತಾರಾಂ ಬರಲೊಪ್ಪಲಿಲ್ಲ.. ಎಳೆದು ತರುವ ಹೊತ್ತಿಗೆ ಸುಸ್ತಾಯಿತು" ಎಂದು ಹೇಳಿದರು. ಹ ಹ ಹ ಇರಲಿ. "ಸಾಲ ಮಾಡಿಕೊಂಡು ಬಿಟ್ಟಿದ್ದೇನೆ ನನಗೊಂದು ಸನ್ಮಾನ ಮಾಡದಿದ್ದರೂ ಪರವಾಗಿಲ್ಲ ಒಂದು ಲಕ್ಷ ರೂಪಾಯಿ ಕೊಡಿ " ಅಂತ ನಿಮ್ಮೂರಿನ ಶಿವಣ್ಣ ಹೇಳುತ್ತಿದ್ದಾರೆ ಮಾರಾಯ, ಇಲ್ಲಿ ಈ ದೊಡ್ಡ ಪಟ್ಟಣದಲ್ಲಿ ನಮ್ಮದೇ ನಮಗೆ ಹರಮಂಗಳ ವಾಗಿದೆ, ಇವರದ್ದೊಂದು ದಿನಾ ರಗಳೆ" ಅಂತ ಪರಿಚಯಸ್ಥರೊಬ್ಬರು ಹೇಳಿದ್ದು ನೆನಪಾಯಿತು. "ಶ್ರವಣ ಕುಮಾರನಂತೆ ನಮ್ಮ ಶಿವಣ್ಣ......" ಮೈಕಿನ ಮುಂದೆ ಮತ್ತೊಬ್ಬಾತ ಮುಂದುವರೆಸುತ್ತಿದ್ದ. ಶಿವಣ್ಣ ತನ್ನ ಅಪ್ಪ ಅಮ್ಮಂದಿರನ್ನು ಇಳಿವಯಸ್ಸಿನಲ್ಲಿ ಕಣ್ಣೆತ್ತಿಯೂ ನೋಡದೆ ಇದ್ದುದು ಕಣ್ಣಿಗೆ ಕಟ್ಟಿತು. ಬರೊಬ್ಬರಿ ತಾಸು ಗುಣಗಾನದ ನಡುವೆ ಕಾರ್ಯಕ್ರಮ ಮುಕ್ತಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ನಾನು ಊರಿನ ಬಸ್ಸು ಹಿಡಿಯಲು ಸಿಟಿ ಬಸ್ ಸ್ಟ್ಯಾಂಡ್ ನತ್ತ ಹೊರಟೆ.

ಬೆಳಿಗ್ಗೆ ಊರು ತಲುಪುವಾಗ ಜಿಟಿಜಿಟಿ ಮಳೆ ಮುಂದುವರೆಯುತ್ತಿತ್ತು. ನಮ್ಮ ಗಂಗಯ್ಯ ಎದುರು ಸಿಕ್ಕ. ಈ ಅಕಾಲದಲ್ಲಿ ಮಳೆ ಶುರುವಾಯ್ತಲ್ಲ ಮಾರಾಯ ಎಂದೆ. " ಹೌದು ಒಡೆಯಾ ನಿನ್ನೆ ಗದ್ದೆ ಕೊಯ್ದು ಹಾಕಿಕೊಂಡಿದ್ದೆ, ಎಲ್ಲಾ ಹೋಯ್ತು. ವರ್ಷದ ಕೂಳು ನಿಮಿಷಕ್ಕೆ ಹೋದಹಾಗೆ ಆಯ್ತು. ಅರ್ದ ಭತ್ತ ಬರಬಹುದು ಹುಲ್ಲಂತೂ ಪೂರಾ ಹೋತು. ಹೆಂಡರ ಮಕ್ಕಳ ಗತಿ ನೆನೆಸಿಕೊಂಡರೆ ದೇವರೇ ಗತಿ....". ಒಮ್ಮೆ ಪಿಚ್ ಎನ್ನಿಸಿತು. "ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವೆ ದುಡಿವನು... ನಾಡ ಜನರು ಬದುಕಲೆಂದು ಧವಸ ಧಾನ್ಯ ಬೆಳೆವನು" ಎಂದು ಮೂರನೇ ಕ್ಲಾಸಿನ ಪುಸ್ತಕದಲ್ಲಿ ಸೇರಿಸಿ ಅಟ್ಟ ಹಚ್ಚಿದ್ದು ಬಿಟ್ಟರೆ ತಾನು ಕಷ್ಟದಲ್ಲಿದ್ದು ನಮಗೆ ಊಟಕೊಡುತ್ತಿರುವ ಗಂಗಯ್ಯನಿಗೆ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ಹತಾಶೆ ಕಾಡತೊಡಗಿತು. ನಮ್ಮ ನಮಸ್ಕಾರ ಸನ್ಮಾನ ಎಲ್ಲವೂ ಗಿಡದಲ್ಲಿರುವ ಹೂವಿಗೆ ಸಲ್ಲುತ್ತಿದೆ , ಬೇರಿಗೆ ನೀರೂ ಹಾಕಲಾರೆವು ಅಂತ ಅನ್ನಿಸಿ ಶಿವಣ್ಣನ ಸನ್ಮಾನಕ್ಕೆ ಕೊಡಲು ತೆಗೆದಿರಿಸಿ ಕೊಂಡಿದ್ದ ಸಾವಿರ ರೂಪಾಯಿಯನ್ನು ಗಂಗಯ್ಯನಿಗೆ ಕೊಟ್ಟು ಮನೆಯತ್ತ ಹೆಜ್ಜೆ ಹಾಕಿದೆ. ಎದುರಿನಿಂದ ಇಬ್ಬರು ಬರುತ್ತಿದ್ದರು ಅವರಲ್ಲಿ ಒಬ್ಬಾತ ಮೊಬೈಲ್ ಮೂಲಕ ಹೇಳುತ್ತಿದ್ದ ." ಶಿವಣ್ಣ ಇವತ್ತು ರಾತ್ರಿ ಊರಿಗೆ ಬರ್ತಾನಂತೆ ನಾನೂರು ರೂಪಾಯಿ ಬುಕ್ ಇಸ್ಪೀಟ್ ಆಡೋಣ ಅಂದಿದ್ದಾನೆ ಬೇಗ ಬಂದುಬಿಡು..." . ಅವರ ಮಾತುಗಳನ್ನು ಕೇಳಿಸಿಕೊಂಡು ಒಮ್ಮೆ ಗಂಗಯ್ಯನತ್ತ ನೋಡಿದೆ ಆತ ಇನ್ನೂ ಸಾವಿರ ರೂಪಾಯಿ ಕೈಯಲ್ಲೇ ಹಿಡಿದುಕೊಂಡು ಗರಬಡಿದವನಂತೆ ನಿಂತಿದ್ದ. ಕಣ್ಣಾಲೆಗಳು ತುಂಬಿಕೊಂಡಿದ್ದವು. ಸನ್ಮಾನಕ್ಕೆ ಬೆಂಗಳೂರಿಗೆ ಹೋಗದಿದ್ದರೆ ಇನ್ನೂ ಆರು ನೂರು ರೂಪಾಯಿ ಗಂಗಯ್ಯನಿಗೆ ಹೆಚ್ಚು ಕೊಡಬಹುದಿತ್ತಲ್ಲ್ಲ ಎಂದೆನಿಸಿತು.
ಮನೆಗೆ ಬಂದು ಟಿವಿ ಆನ್ ಮಾಡಿದಾಗ ಸಂದೀಪ್ ಉನ್ನಿಕೃಷ್ಣನ್ ಅಶೋಕ್ ಕಾಮ್ಟೆ ಕರ್ಕೆರಾ ಹೀಗೆ ಹಲವಾರು ಪೋಲೀಸ್ ಅಧಿಕಾರಿಗಳ ಅಂತಿಮ ಯಾತ್ರೆ ನಡೆಯುತ್ತಿತ್ತು. ಬಾಂಬೆಯಲ್ಲಿನ ನರಮೇಧ ನರ್ತಿಸುತ್ತಿತ್ತು. ಸನ್ಮಾನ, ಹಣ ಹೆಸರು ದ್ವೇಷ ರಾಗ ಎಲ್ಲವೂ ಒಂಥರಾ ಪೇಲವ ಅಂತ ಅನ್ನಿಸಿತು. ಅವರಿಗೆಲ್ಲಾ ಅಂತರಾಳದಿಂದ ಸಲಾಂ ಎಂಬಷ್ಟೇ ಹೇಳಿ ಮಗುಮ್ಮಾದೆ. ಇದು ಪ್ರಪಂಚ ಇಲ್ಲಿ ಯಾರಿಗಾಗಿಯೋ ಯಾರೋ ಸಾಯುತ್ತಾರೆ ಮತ್ಯಾರೋ ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರವರ ಹಣೆಬರಹ ಇವೆಲ್ಲಾ ಎಂಬ ಕರ್ಮ ಸಿದ್ಧಾಂತ ಒಳ್ಳೆಯದು ಸುಖಕ್ಕೆ ನೆಮ್ಮದಿಗೆ ಅಂದುಕೊಂಡೆ.
ಕೊನೆಯದಾಗಿ: ವೃದ್ಧ ತಂದೆಯೆದುರು ಮಗ " ಇದೊಂದು ದರಿದ್ರ ಪೀಡೆ, ಯಾವಾಗ ತೊಲಗುತ್ತೋ ಏನೋ?,ಇದರಿಂದಾಗಿ ನನ್ನ ಬದುಕೆ ಅಸಹನೀಯವಾಗಿದೆ" ಎಂದು ಹೇಳಿದ. ವೃದ್ಧನ ಕಣ್ಣುಗಳಿಂದ ದಳ ದಳ ನೀರು ಇಳಿಯ ತೊಡಗಿತು. ಹತ್ತಿರದಲ್ಲಿದ್ದವರು ಯಾರೋ ಕೇಳಿದರು. " ಕಣ್ಣೀರಿಡುತ್ತಿದ್ದೀರಲ್ಲ ....ಮಗನ ಕಟು ಮಾತುಗಳಿಂದ ಬೇಸರವಾಯಿತಾ?" . ವೃದ್ಧ ಹೇಳಿದ " ಇಲ್ಲ ಅಂದು ನಾನು ನನ್ನ ಅಪ್ಪನಿಗೆ ಹೀಗೆಯೇ ಹೇಳಿದ್ದು ನೆನಪಾಯಿತು".