Friday, October 17, 2008

ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...



ಸಾಪಟ ಆಯಿಚ್ಚಾ..? ಎನ್ನ ಪಂಡ್ರೆ..? ನಲ್ಲ ಇರ್ಕಂಗಳಾ..? ಎನ್ನ ಸಮಾಚಾರಮು? ಹೀಗೆ ಒಂದಿಷ್ಟು ಕನ್ನಡದಂತಿರುವ ತಮಿಳು ಶಬ್ದ ಬಿಟ್ಟರೆ ನನಗೆ ತಮಿಳು ಸುಟ್ಟುಕೊಂಡು ತಿನ್ನಲಿಕ್ಕೂ ಬಾರದು. ಆದರೂ ನಾನು ತಮಿಳು ಮಾತನಾಡಿದೆ. ಕಲ್ಯಾಣತ್ತಿಗೆ ಎನ್ನುವ ಮಡ್ರಾಸ್ ನ ಪೂನಂವೇಲಿಯ ಅರವತ್ತು ವರ್ಷದ ಗೃಹಿಣಿಯ ಕೈಯಲ್ಲಿ ಶಬ್ಬಾಷ್ ಎನ್ನಿಸಿಕೊಂಡೆ. ಅಥವಾ ಅವರು ಹೇಳಿದ್ದು ಶಬ್ಬಾಷ್ ಎಂದು ನಾನು ಅರ್ಥೈಸಿಕೊಂಡೆ. ಹೀಗೆಲ್ಲಾ ನಾನೂ... ತಮಿಳು ಮಾತನಾಡುವುದಕ್ಕೆ ಕಾರಣ ನನ್ನ ಅಕ್ಕನ ಮಗಳು ರಮ್ಯಾ ಮಡ್ರಾಸ್ ನ ಅಯ್ಯರ್ ಹುಡುಗ ರಾಜೇಶನನ್ನು ವರಿಸುತ್ತೇನೆ ಎಂದು ಘೋಷಿಸಿದ್ದು.ಹಾಗಾಗಿ ವರ ಮಹಾಶಯನ ಮನೆಗೆ ಹೆಣ್ಣಿನ ಕಡೆಯವರಾಗಿ ಭೇಟಿ ಕೊಡಬೇಕಲ್ಲ ಆ ಪ್ರಯುಕ್ತ ನಾವು ನಾಲ್ಕು ಜನ ರಮ್ಯಾಳ ವ್ಯಾಗನ್ ಆರ್ ಕಾರಿನಲ್ಲಿ ಮಡ್ರಾಸ್ ಗೆ ಹೊರಟಾಯಿತು. ಬೆಂಗಳೂರಿನಿಂದ ಹೊರಟು ಮೂವತ್ತೋ ನಲವತ್ತೋ ಕಿಲೋಮೀಟರ್ ದೂರದ ಹೊಸೂರು ತಲುಪಿದಾಕ್ಷಣ ನಾವು ಅಬ್ಬೇಪಾರಿಗಳಾಗಿಬಿಡುತ್ತೇವೆ, ಕನ್ನಡ ಎಂಬುದು ಎನ್ನಡ ಆಗಿ ಪರಿವರ್ತಿತವಾಗಿಬಿಡುತ್ತದೆ. ಎಲ್ಲಿ ಹುಡುಕಿದರೂ ಒಂದೇ ಒಂದು ಕನ್ನಡ ಅಕ್ಷರ ಸಿಗದು ಕನ್ನಡ ಪತ್ರಿಕೆಗಳು ಕೇಳಕೂಡದು. ಜಸ್ಟ್ ಮೂವತ್ತು ಕಿಲೋಮೀಟರ್ ಹಿಂದೆ ನಾವೇ ಕೋಲು ಎಂದು ಹಾರಾಡುವ ಹಾಯ್ ಅಗ್ನಿ ಲಂಕೇಶ್ ಮುಂತಾದ ಪತ್ರಿಕೆಗಳು ಹಾಗೂ ಅವರ ಥೀಂ ಗಳು ಇಲ್ಲಿ ಪೇಲವವಾಗಿಬಿಡುತ್ತವೆ. ಕನ್ನಡ ದಿನಪತ್ರಿಕೆ ಸಿಗುವುದಿರಲಿ ಬೀಡಾ ಅಂಗಡಿಯವ ಬೀಡಾ ಕಟ್ಟಿಕೊಡಲೂ ಕನ್ನಡ ಪತ್ರಿಕೆ ಬಳಸುವುದಿಲ್ಲ. ಇರಲಿ ಊರಲ್ಲಿ ಎಲ್ಲರೂ ರಂಗ ತಾನೆ ನಾವು ಪರ ಊರಿಗೆ ಬಂದಿದ್ದಾಗಿದೆ ಇಲ್ಲಿ ನಮ್ಮ ಜತೆ ನಮ್ಮವರೂ ಎಲ್ಲ ಮಂಗಗಳೇ. ಆದರೆ ತಮಿಳು ಮಾತ್ರಾ ಹಾಗಲ್ಲ ಮಡ್ರಾಸ್ ನಿಂದ ಸರಿ ಸುಮಾರು ಆರುನೂರು ಕಿಲೋಮೀಟರ್ ದೂರವಿರುವ ಕಾರ್ಗಲ್ ಜೋಗ್ ಮುಂತಾದ ಬೆಂಕಿಪೊಟ್ಟಣದಂತಿರುವ ಪಟ್ಟಣಗಳಲ್ಲಿಯೂ ನಿಮಗೆ ಸುಲಲಿತವಾಗಿ ನಡೆಯುತ್ತದೆ. ನಮ್ಮ ಕಾರ್ಗಲ್..! ನಲ್ಲಿ ತಮಿಳು ಪತ್ರಿಕೆ ಸಿಗುತ್ತದೆ "ಅಯ್ಯಾ ದೊರೆ ಇವೆಲ್ಲಾ ನಿನಗಿಂತ ಮೊದಲೇ ನಮಗೆ ಗೊತ್ತು ಕುಯ್ಯಬೇಡಾ .." ಎಂದಿರಾ..! ಬೇಡ ಬಿಡಿ ವಿಷಯಕ್ಕೆ ಬರೋಣ ತಮಿಳೆಂದರೆ ಒಂಥರಾ ಕನ್ನಡದಂತೆ.ಎಳನೀರಿಗೆ ,ತೆಂಗಿನ ಕಾಯಿಗೆ ಹೀಗೆ ಸುಮಾರು ಶಬ್ದಕ್ಕೆ ಕನ್ನಡಕ್ಕೆ ಅದಕ್ಕೆ ವ್ಯತ್ಯಾಸ ಇಲ್ಲ. "ಅಯ್ಯೋ ಇದೂ ಕೂಡ ನಮಗೆ ಗೊತ್ತು ಮುಂದುವರೆಸು" ಎಂದಿರಾ ಇರಲಿ ನಾನು ಕೇಳಿ ಹೇಳ ಹೊರಟಿರುವ ವಿಷಯಕ್ಕೆ ಬರೋಣ.
ಮನುಷ್ಯ ಭಾಷೆ ಎನ್ನುವುದನ್ನು ಪರಸ್ಪರ ಸಂವಹನಕ್ಕೆ ಮಾಡಿಕೊಂಡ. ನೂರಾರು ಭಾಷೆ ನೂರಾರು ದೇಶ ಇವೆಲ್ಲಾ ಸರಿ ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಮನುಷ್ಯ ನೆಂದರೆ ಯಾವ ದೇಶಕ್ಕೂ ಭಾಷೆಗೂ ವ್ಯತ್ಯಾಸ ಇಲ್ಲ.ಎಲ್ಲರೂ ಒಂದೇ ಹಾಗಾಗಿ ಎಲ್ಲ ಮನುಷ್ಯರ ಜತೆ ಸಂಪರ್ಕಿಸಲು ಒಂದೇ ತರಹನಾದ ಭಾಷೆ ಇದೆ. ಅದು ಸುಪ್ತವಾಗಿ ಅಡಗಿದೆ. ಅದು ಮೌನದ ಭಾಷೆ. ಧ್ಯಾನದ ಭಾಷೆ. ಈ ಭಾಷೆಯಿಂದ ಮನುಷ್ಯ ಮನುಷ್ಯರೊಡನೆ ಬಾಂಧವ್ಯ ಸಾಧಿಸುವಂತೆ ಇತರೆ ಜೀವಿಗಳೊಡನೆಯೂ ಕೂಡ ಸುಮಧುರ ಬಾಂಧವ್ಯ ಸಾಧಿಸಭಹುದು. ಇಲ್ಲಿ ಮಾತನಾಡುವ ಅವಶ್ಯಕತೆಯೇ ಇಲ್ಲ. ನೀವು ನಿಮ್ಮ ಮಾತೃ ಭಾಷೆಯಲ್ಲಿ ಆಲೋಚಿಸಿದರೆ ಆಯಿತು ಅದು ಮುಖದಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ತನ್ನಷ್ಟಕ್ಕೆ ಅದೇನೋ ಹೇಳಲಾರದ ಬಾಂಧವ್ಯ ಏರ್ಪಡುತ್ತದೆ. ಉದಾಹರಣೆಗೆ ಅಪರಿಚಿತರೊಬ್ಬರು ನಿಮಗೆ ಭೇಟಿಯಾದಾಗ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಅದೇನೋ ಅವರ ನಡವಳಿಕೆ ನಿಮಗೆ ಇಷ್ಟವಾಗುತ್ತದೆ. ಕಾರಣ ಗೊತ್ತಿರುವುದಿಲ್ಲ. ಇನ್ನು ಕೆಲವರನ್ನು ಕಂಡಾಗ ಕಾರಣವಿಲ್ಲದೆ ಅಸಹನೆ ಉಂಟಾಗುತ್ತದೆ. ಹಾಗಂತ ಅವರು ನಿಮಗೆ ಏನೂ ಅಪಾಯ ಮಾಡಿರುವುದಿಲ್ಲ. ಆದರೂ ಅದೇನೋ ಒಂಥರಾ ಹಿಂಸೆ. ಅದರ ಅಂತರಾರ್ಥ ತಿಳಿಯುತ್ತಾ ಹೋದಂತೆ ಅರಿವು ಉಂಟಾಗುತ್ತದೆ. ಅದಕ್ಕೆ ಆಳದ ಧ್ಯಾನ ಅಗತ್ಯ. ಅದು ನೀವು ಸಾಧಿಸಿದಿರಿ ಅಂತಾದರೆ ನೀವು ಕೇಳುವುದಕ್ಕಿಂತ ಮೊದಲೇ ನಿಮಗೆ ಅಪೇಕ್ಷೆ ಪಟ್ಟಿದ್ದು ದೊರಕುತ್ತದೆ. ಅನಪೇಕ್ಷಿತವಾದದ್ದನ್ನು ನೀವು ಕೇಳುವುದೂ ಇಲ್ಲ. ಹೀಗೆ ಹೇಳಲಾರದ ಅನುಭವಕ್ಕೆ ಮಾತ್ರಾ ಸಿಗುವ ಬಾಂಧವ್ಯ ಉಂಟಾದಾಗ ಬಾಷೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಮೂಕವಾದ ಮೌನ ಪ್ರಪಂಚ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಾವು ಈ ಹೊರಮನಸ್ಸಿನ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಇಲ್ಲ. ಹೊರ ಪ್ರಪಂಚದ ನೂರಾರು ಬಾಷೆಗಳ ಜ್ಞಾನ ಸುಲಭವಾಗಬೇಕು ಎಂದರೆ ಒಳಪ್ರಪಂಚದ ಮೌನದ ಭಾಷೆಯನ್ನು ಮೊದಲು ಚೆನ್ನಾಗಿ ಅರ್ಥಮಾಡಿಕೊಂಡರೆ ಪ್ರಪಂಚದ ಎಲ್ಲಾ ಭಾಷೆಗಲೂ ಲೀಲಾಜಾಲ.
ಇದೇನಪ್ಪಾ ಅರ್ಥವಾಗದ ಬರಹ ಅಂತ ನೀವು ಬಯ್ದುಕೊಂಡಿರಬಹುದು, ನನಗೂ ಸಂಪೂರ್ಣ ಅರ್ಥವಾಗಿಲ್ಲ ಕಣ್ರಿ ಇದು ನಮ್ಮ ಆನಂದರಾಮ ಶಾಸ್ತ್ರಿಗಳ ಬರಹ. ಮಾರ್ಚ್ ತಿಂಗಳಲ್ಲಿ ರಮ್ಯಾಳ ಮದುವೆ ಇದೆ ಅಷ್ಟರೊಳಗೆ ನಾನು ಇನ್ನೊಂದಿಷ್ಟು ತಮಿಳು ಕಲಿಯಬೇಕಿದೆ. ಹಾ ಹೇಳಲು ಮರೆತೆ ಕನ್ನಡ ಬಲ್ಲ ಹವ್ಯಕ ಹುಡುಗಿ ರಮ್ಯಾ ಹಾಗೂ ತಮಿಳಿನ ಅಯ್ಯರ್ ಹುಡುಗ ರಾಜೇಶ ನನ್ನು ಸೇರಿಸಿದ ಭಾಷೆ ಸಾವಿರಾರು ಕಿಲೋಮೀಟರ್ ದೂರ ಇರುವ ಆಂಗ್ಲ ಭಾಷೆ. ಜೈ ಆಂಗ್ಲೇಶ್ ಪೀಪಲ್ ಅನ್ನೋಣವೇ. ನಾವು ನೀವು ಅನ್ನದಿದ್ದರೂ ಅವರಿಬ್ಬರಂತೂ ಅನ್ನಲೇ ಬೇಕು. ಕಾರಣ ಅವನು ಕನ್ನಡ ಮಾತನಾಡಲು ಹೋಗಿ ಊಟ ಆಯಿರ್ಕದಾ..? ಅನ್ನುತ್ತಾನೆ ಇವಳು ತಮಿಳು ಮಾತನಾಡಲು ಹೋಗಿ ಸಾಪಟು ಆಯಿತಾ? ಅಂತಾಳೆ , ಇಂಗ್ಲೀಷ್ ಆದರೆ ಇಬ್ಬರಿಗೂ ಓ ಕೆ. ಹಾಗಿದ್ದಮೇಲೆ ತಲೆಬಿಸಿ ಯಾಕೆ?
ಕೊನೆಯದಾಗಿ:ನಿನಗೆ ಎಷ್ಟು ಭಾಷೆ ಬರುತ್ತದೆ ? ಎಂದು ಈ ಬಾರಿ ಆನಂದರಾಮ ಶಾಸ್ತ್ರಿಗಳೇ ನನ್ನನ್ನು ಪ್ರಶ್ನಿಸಿದರು. ಕನ್ನಡ ಒಂದು, ಹಿಂದಿ ಎರಡು, ಇಂಗ್ಲೀಷ್ ಅರ್ಥವಾಗುತ್ತೆ ಆದರೆ ಮಾತನಾಡಲು...ಬರೊಲ್ಲ .. ಹಾಗಾಗಿ ಅರ್ದ, ಈಗ ತಮಿಳು ಕಾಲು ಒಟ್ಟೂ. ಎರಡು ಮುಕ್ಕಾಲು ... " ಎಂದು ಎಣಿಸುತ್ತಿದ್ದೆ ಅಷ್ಟರಲ್ಲಿ "ಮೂರ್ಖ ನಿನಗೆ ಈ ಜನ್ಮದಲ್ಲಿ ಅರ್ಥವಾಗದು ಬಿಡು " ಎಂದು ಮೌನವಾದರು. ನಾನು ಕಣ್ಣು ಪಿಳುಕಿಸಿದೆ
ಟಿಪ್ಸ್: ಮನುಷ್ಯನ ಹೊರತಾಗಿ ಪ್ರಪಂಚದ ಯಾವ ಜೀವಿಯೂ ಹುಟ್ಟಿದ ಒಂದು ವರ್ಷದ ಮೇಲೆ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಹಾಲಿನಲ್ಲಿ ಒಂದು ವರ್ಷದ ನಂತರದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇರುವುದಿಲ್ಲ. ಹಾಲು ಚಟಕ್ಕಾಗಿ ಮನುಷ್ಯ ಕುಡಿಯುತ್ತಿದ್ದಾನಷ್ಟೆ. ಸಾಯುವ ಅಂಚಿನಲ್ಲಿದ್ದರೂ ಒಂದು ಗುಟುಕು ಹಾಲು ಗುಟುಕರಿಸುತ್ತಾನೆ. ಹಾಗಾಗಿ ಹಾಲನ್ನು ತ್ಯಜಿಸಿ ಏನೂ ತೊಂದರೆ ಇಲ್ಲ ಬೇಕಾದರೆ ಅದರ ಹಾಲಿಗೆ ಪರ್ಯಾಯವಾಗಿ ಆಲ್ಕೋ ಹಿಂದೆ ಸೇರಿಸಿಕೊಳ್ಳಿ ಮಜವಂತೂ ಇದೆಯಂತೆ.

Tuesday, October 14, 2008

ಭೂಮಿ ಹುಣ್ಣಿಮೆ ಕಡುಬು ಮತ್ತು ಗೊಡ್ಡಲ್ಲದ ಶಾಸ್ತ್ರ






ಮಳೆಗಾಲ ಮುಗಿದು ಅತ್ತ ಚಳಿಗಾಲವೂ ಅಲ್ಲದ ಇತ್ತ ಬೇಸಿಗೆಯೂ ಅಲ್ಲದ ಕಾಲದಲ್ಲಿ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಅಂತಹ ಒಂದು ಹಬ್ಬ ಈ ಭೂಮಿಹುಣ್ಣಿಮೆ. ಹೆಸರೇ ಸೂಚಿಸುವಂತೆ ಭೂಮಿಯನ್ನು ನಂಬಿ ಬದುಕುತ್ತಿರುವವರ ಹಬ್ಬ . ಅಡಿಕೆ, ಭತ್ತ ಕಬ್ಬು ಹೀಗೆ ರೈತಾಪಿ ವರ್ಗ ತಾವು ಬೆಳೆಯುತ್ತಿರುವ ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿಯೇ ಕಲ್ಲಿನ ರೂಪ ತಳೆದು ಬಿದ್ದಿದ್ದಕ್ಕೆ ತಾತ್ಕಾಲಿಕ ದೇವರ ಪಟ್ಟ ಕೊಟ್ಟು ಪ್ರತಿಷ್ಟಾಪನೆ ಮಾಡಿ ಅದಕ್ಕೊಂದು ಪೂಜೆ ಸಲ್ಲಿಸಿ ಅಲ್ಲಿಯೇ ಒಂದಿಷ್ಟು ಕಡುಬು ತಿಂದು ನಂತರ ಮನೆಗೆ ಬಂದು ದೇವರಿಗೆ ನೈವೇದ್ಯ ಮಾಡಿ ಊಟ ಮಾಡಿದರೆ ಭೂಮಿ ಹುಣ್ಣಿಮೆ ಹಬ್ಬ ಮುಗಿದಂತೆ.
ಹೀಗೆ ನೂರಾರು ಸಂಪ್ರದಾಯದ ಹಬ್ಬಗಳು ಪ್ರತೀ ವರ್ಷ ಬಂದುಹೋಗುತ್ತವೆ. ಒಮ್ಮೊಮ್ಮೆ ನಾವು ಆಚರಿಸುವ ಈ ಹಬ್ಬಗಳನ್ನು ನೋಡಿ ನಮ್ಮಷ್ಟಕ್ಕೆ ನಗು ಬರುತ್ತದೆ. ದೂರದಿಂದ ನಿಂತು ನಮ್ಮ ಆಚರಣೆಗಳನ್ನು ನಾವೇ ನೋಡಿಕೊಂಡರೆ ಸಣ್ಣ ಮಕ್ಕಳಾಟದಂತೆ ಭಾಸವಾಗುತ್ತದೆ. ತೋಟದಲ್ಲಿ ಬಿದ್ದು ಹೊರಳಾಡುತ್ತಿದ್ದ ಕಲ್ಲು ದೇವರಂತೆ. ಅದಕ್ಕೆ ಕುಂಕುಮ ಅರಿಶಿನ ಹೂವು ಹಾಗೂ ಮನೆಯಿಂದ ಒಯ್ದಿದ್ದ ಲಕ್ಷ್ಮೀಕಾಸಿನ ಸರ ಮತ್ತು ನೈವೇದ್ಯ. ಅಲ್ಲೊಂದಿಷ್ಟು ಮಂತ್ರ ಹಾಗೂ "ಪೂಜೆಯ ಮಾಡುವೆ ಮಾಲಕ್ಷ್ಮೀ ನಾನಿನ್ನ... ತೇಜವಾ ಬೀರುತ್ತ ಬಾರಮ್ಮ....ಬಾರಮ್ಮ ನೀ ಮನೆಗೆ ... ಸಕಲ ಸೌಬಾಗ್ಯವಾ ತಾರಮ್ಮ.." ಎಂಬ ಹಾಡು. ಪೂಜೆ ಮುಗಿದ ಮರುಕ್ಷಣ "ಅಪಿ ಲಕ್ಷ್ಮೀ ಕಾಸಿನ ಸರ ತಗಂಡ್ಯಾ..? ದೀಪದ ಗುಡ್ಡು ಕಳದು ಹೋಕು... ಬಾಳೆ ಹಣ್ಣು ಸಿಪ್ಪೆ ತಗ ದನಕ್ಕೆ ಹಾಕಲಾಕ್ತು " ಎನ್ನುತ್ತಾ ಒಂಚೂರು ಅಲ್ಲಿ ಬಿಡದೆ ಕಲ್ಲನ್ನು ಮತ್ತೆ ಯಥಾ ಸ್ಥಾನಕ್ಕೆ ಇಟ್ಟು ಬರುವ ಪರಿ, ನಗೆ ತರಿಸುತ್ತದೆ. ಇರಲಿ ಅದು ನಂಬಿಕೆ ಅನ್ನೋಣ ಈ ಎಲ್ಲಾ ಸಂಪ್ರದಾಯಗಳನ್ನು ಪ್ರಶ್ನಿಸದೆ ಪಾಲಿಸಿಕೊಂಡವರ ಬಳಿ ಇದರ ಅರ್ಥ ಕೇಳಿದರೆ ಗುರಾಯಿಸುತ್ತಾರೆ. ಪುರೋಹಿತರ ಬಳಿ ಕೇಳಿದರೆ ನಮ್ಮನ್ನು ಉದ್ದಟತನದ ಪ್ರಶ್ನೆ ಎಂದು ಅವರೇ ತೀರ್ಮಾನಿಸಿ ಒರಟ ಎಂಬ ಪಟ್ಟ ಕಟ್ಟಿಬಿಡುತ್ತಾರೆ. ಹಾಗಾದರೆ ಭೂಮಿ ಹುಣ್ಣಿಮೆಯಂತಹ ಕೃಷಿಕರ ಹಬ್ಬಕ್ಕೆ ಏನಾದರೂ ಅರ್ಥವಿದೆಯಾ..? ಎಂದು ಕೆದಕಿದರೆ ಎಲ್ಲವುದಕ್ಕೂ ಅರ್ಥವಿಲ್ಲದಿದ್ದರೂ ಕೆಲವಕ್ಕೆ ಅರ್ಥವಿದೆ ಎಂಬ ಉತ್ತರ ನನಗೆ ಮೈಸೂರಿನ ಇಸ್ಕಾನ್ ನ ಹರೇಕೃಷ್ಣ ನೇಚರ್ ಪಾರ್ಮ ನ ಸಸ್ಟೈನ ಬಲ್ ಅಗ್ರಿಕಲ್ಚರ್ ಸಿಸ್ಟಮ್ ಆದ ಜೀವಚೈತನ್ಯ ಕೃಷಿ ಪದ್ದತಿ ಕಲಿಯುವಾಗ ಸಿಕ್ಕಿತು. ಭೂಮಿ ಹುಣ್ಣಿಮೆ ದಿನ ಕೆಮ್ಮಣ್ಣು ಹಾಗೂ ಜೇಡಿ ಮಣ್ಣನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಅಡಿಕೆ ಹಾಗೂ ತೆಂಗಿನ ಮರಕ್ಕೆ ಹಚ್ಚುವ ಪದ್ದತಿ ಇದೆ. ಇದು ಜೀವ ಚೈತನ್ಯ ಪದ್ದತಿಯಲ್ಲಿಯೂ ಟ್ರೀ ಪೇಸ್ಟ್ ಎಂಬ ಹೆಸರಿನಲ್ಲಿ ಇದೆ. ಇದರಿಂದಾಗಿ ಮರದ ಆಯುಷ್ಯ ವೃದ್ಧಿಯಾಗುತ್ತದೆ. ಭೂಮಿ ಹುಣ್ಣಿಮೆ ದಿನ ಅನ್ನ ಹಾಗೂ ಹಲವಾರು ಸೊಪ್ಪುಗಳ ಪಲ್ಯವನ್ನು ಭೂಮಿಗೆ ಅಚ್ಚುವ ಪದ್ದತಿ ಇದೆ. ಇದರಿಂದ ಕೃಷಿ ಭೂಮಿಯಲ್ಲಿ ಅನುಕೂಲಕರ ಸೂಕ್ಷ್ಮಾಣು ಜೀವಿಗಳ ಬೆಳೆವಣಿಗೆಯಾಗುತ್ತದೆ. ಹೀಗೆ ಕೆಲವು ಪದ್ದತಿಗಳಿಗೆ ಪರಿಪೂರ್ಣ ಅರ್ಥವಿದೆ. ಆದರೆ ಅದನ್ನು ಹೀಗೆ ಹೀಗೆಂದು ಅರ್ಥೈಸಿ ಹೇಳುವವರಿಲ್ಲ. ಹಾಗಾಗಿ ಇಂದಿನ ತಲೆಮಾರಿನವರಿಗೆ ನಮ್ಮ ಸಂಪ್ರದಾಯಗಳು ಗೊಡ್ಡು ಎಂಬ ಅಪಹಾಸ್ಯಕ್ಕೆ ಕಾರಣವಾಗಿಬಿಡುತ್ತದೆ. ನಮ್ಮ ಸಂಧ್ಯಾವಂದನೆಯನ್ನು ತೆಗೆದುಕೊಳ್ಳಿ . ಬಹಳಷ್ಟು ಜನರಲ್ಲಿ ಸಂಧ್ಯಾವಂದನೆ ಎಂಬ ಉಪನಯನದ ನಂತರ ಕ್ರಿಯೆ ಒಂಥರಾ ಯಡವಟ್ಟು ಅನ್ನಿಸಿಕೊಂಡಿದೆ. ಆದರೆ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾದ ಜನರು ರವಿಶಂಕರ್ ಗುರೂಜಿ ಬಳಿ ಹೋಗಿ ತಕತಕ ಕುಣಿದು ಅದೇನೋ ಧ್ಯಾನ ಕಲಿತೆ ಎಂದು ಹತ್ತು ಸಾವಿರ ಪೀಕಿ ಮನೆಗೆ ಬಂದಾಗ ಒಂದು ಕ್ಷಣ ಯೋಚನೆ ಮಾಡಿದರೆ ತಿಳಿಯುತ್ತದೆ, ಅಪ್ಪ ಮಾಡಿದ ಉಪನಯನ ಹಾಗೂ ಸಂಧ್ಯಾವಂದನೆಯ ನಿಜವಾದ ಅರ್ಥ. ಆದರೆ ಅದು ನಮಗೆ ಅರ್ಥವಾಗಲು ನಾವು ದುಡಿದ ಹತ್ತು ಸಾವಿರ ಖಾಲಿಯಾದಾಗಲೇ ತಿಳಿಯುವುದು ಎಂಬುದು ವಿಪರ್ಯಾಸವಾದರೂ ಸತ್ಯ. ಹಾಗೂ ನಮಗೆ ಉಪನಯನ ಮಾಡಿಸಿದ ಪುರೋಹಿತರಿಗೂ ಸಂಧ್ಯಾವಂದನೆಯ ಮಹತ್ವ ತಿಳಿಯದಿರುವುದು ಕಹಿ ಸತ್ಯ. ಪಾಪ ಅವರ ಮನಸ್ಸು ಅಂದಿನ ಹಸಿರು ನೋಟು ಹಾಗೂ ಕೆಂಪು ನೋಟಿನ ಲೆಕ್ಕಾಚಾರದಲ್ಲಿ ಮಗ್ನವಾಗಿರುತ್ತದೆ. ರವಿಶಂಕರ್ ಗುರೂಜಿಯೋ ಬಾಬಾ ರಾಮನೋ ಪೀಟರ್ರೋ ತಮ್ಮ ಹೊಸಬಾಟಲಿಯಲ್ಲಿ ಈ ಹಳೆಯದನ್ನೇ ಕೊಟ್ಟಾಗ ನಾವು ವಾವ್ ಅಂದು ಅವರದೊಂದು ಫೋಟೋ ನಮ್ಮ ಕೋಣೆಯಲ್ಲಿ ತಗುಲಿಹಾಕಿಕೊಂಡುಬಿಡುತ್ತೇವೆ. ಇರಲಿ ಈಗ ಮತ್ತೆ ಭೂಮಿ ಹುಣ್ಣಿಮೆ ಹಬ್ಬಕ್ಕೆ ಬರೋಣ. ಟಿ.ವಿಯಲ್ಲಿ ಜಾಹಿರಾತೊಂದು ಬರುತ್ತದೆ. ಅದು ಹೀಗಿದೆ, ಮರುಭೂಮಿಯಲ್ಲಿ ನೀರಡಿಕೆಯಿಂದ ಒಬ್ಬಾತ ತಲೆತಿರುಗಿ ಬೀಳುತ್ತಾನೆ. ವೃದ್ಧ ದಂಪತಿಗಳು ಆತನಿಗೆ ನೀರು ಕೊಡಲು ಹೋಗುತ್ತಾರೆ ಆವಾಗ ಆತ ಅಂತಹಾ ಪರಿಸ್ಥಿತಿಯಲ್ಲಿಯೂ ಇದು ಪ್ಯೂರಿಫೈಡ್ ನೀರು ತಾನೆ ? ಇಲ್ಲದಿದ್ದರೆ ನನಗೆ ಬೇಡ ಅನ್ನುತ್ತಾನೆ. ಆಮೇಲೆ ಕಂಪನಿಯ ಹೆಸರು ಹೇಳಿ ಅದೇ ನೀರು ಅನ್ನುತ್ತಾನೆ ಆತ ಕುಡಿಯುತ್ತಾನೆ. ಮೊನ್ನೆ ನನ್ನ ಮಗ ಮತ್ತು ಅವನ ಟೀಂ ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಬಾಳೆ ಎಲೆ ಹಾಕಿಕೊಂಡು ಕಡುಬು ಬಾರಿಸಿದರು. ತೋಟದಲ್ಲಿ ಜಾಗ ಹೇಗಿರುತ್ತದೆ ಎಂದು ನಿಮಗೆ ಮತ್ತೆ ಹೇಳಬೇಕಾಗಿಲ್ಲ. ಅಲ್ಲೇ ಹರಿಯುತ್ತಿದ್ದ ನೀರಿನಲ್ಲಿ ಕೈತೊಳೆದರು ಮತ್ತು ಕೊನೆಯಲ್ಲಿ ಬೊಗಸೆ ನೀರು ಕುಡಿದರು. ಮತ್ತು ಸಂತೋಷವಾಗಿ ಮತ್ತೊಂದು ತೋಟಕ್ಕೆ ಕಡುಬು ಬಾರಿಸಲು ಹೋದರು. ಆ ಹುಡುಗರು ಇವತ್ತೂ ಆರಾಮವಾಗಿದ್ದಾರೆ. ಅದೇ ಜಾಹಿರಾತಿನ ಅಮ್ಮನಾಗಿದ್ದರೆ ಅಯ್ಯೋ ... ಎಂದು ರಾಗ ಎಳೆಯಬೇಕಾಗಿತ್ತು. ಶುದ್ದ ನೀರನ್ನು ಅಭ್ಯಾಸ ಮಾಡಿ ನಮ್ಮ ದೇಹವನ್ನು ಸೂಕ್ಷ್ಮ ಮಾಡಿಸುವುದಕ್ಕಿಂತಲೂ ಅಶುದ್ದ (!) ನೀರನ್ನು ದಕ್ಕಿಸಿಕೊಳ್ಳುವುದನ್ನು ನಮ್ಮ ದೇಹಕ್ಕೆ ಕಲಿಸಬೇಕು. ತೋಟದಂತಹ ಜಾಗದಲ್ಲಿ ಊಟ ಮಾಡುವುದರಿಂದ ನಮ್ಮ ದೇಹ ಏನನ್ನಾದರೂ ಜೀರ್ಣಿಸಿಕೊಳ್ಳುವುದನ್ನು ಕಲಿಯುತ್ತದೆ. ಹೀಗಿದೆ ನೋಡಿ ವಿಚಾರಗಳು ಹೌದಾದರೆ ಹೌದೆನ್ನಿ ದಯಮಾಡಿ ಅಲ್ಲವಾದರೂ ಹೌದೆನ್ನಿ.
ಕೊನೆಯದಾಗಿ: ನಾವು ಆಚರಿಸುವ ಪ್ರತೀ ಹಬ್ಬಕ್ಕೂ ಹಾಗೂ ಎಲ್ಲ ಶಾಸ್ತ್ರ ಸಂಪ್ರದಾಯಗಳಿಗೂ ವೈಜ್ಞಾನಿಕ ಅರ್ಥವಿದೆಯಾ ? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ." ಒಂದಿಷ್ಟಕ್ಕೆ ಅರ್ಥವಿದೆ ಮಿಕ್ಕವುಗಳಿಗೆ ಇಂದು ಅರ್ಥೈಸಲಾಗುತ್ತಿದೆ." ಎಂಬ ಉತ್ತರ ನೀಡಿದರು. ತಲೆಯಮೇಲೆ ಹೊಡೆದಂತಹ ಸತ್ಯದ ಮಾತಿಗೆ ಖುಷಿಯಾದೆ
ಟಿಪ್ಸ್: ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಂತಿಯಾಗುತ್ತದೆಯೇ? ಹಾಗಾದರೆ ಇನ್ನು ಚಿಂತೆ ಬಿಡಿ ನೆಲ್ಲಿಕಾಯಿಯ ಸೆಟ್ ಜತೆಯಲ್ಲಿ ಇಟ್ಟುಕೊಂಡು ಪ್ರಯಾಣಿಸಿ. ಅದು ಜತೆಯಲ್ಲಿ ಇಲ್ಲವೇ ಹಾಗಾದರೆ ಓದಲು ಕೊಂಡಿದ್ದ ದಿನ ಪತ್ರಿಕೆಯನ್ನು ಆಘ್ರಾಣಿಸಿ . ವಾಂತಿ ಆಗುವುದೇ ಇಲ್ಲ. ಅಂತ ವಾಂತೇಶ್ವರಿಯೊಬ್ಬರು ಹೇಳಿದ್ದರು, ಪ್ರಯೋಗಿಸಿ ಉತ್ತರ ತಿಳಿಸಿ. ನನಗೆ ಅನುಭವ ಇಲ್ಲ.
ಟಿಪ್ಸ್ ಓದಲು ಕಾಣಿಸದು ಎಂದರೆ ಸೆಲೆಕ್ಟ್ ಮಾಡಿ ಆವಾಗ ಕಾಣಿಸುತ್ತದೆ.

ಹೊಸ ಬ್ಲಾಗ್ ಮಾಹಿತಿ.

http://kannadabala.blogspot.com/ ಎಂಬ ಬ್ಲಾಗ್ ಇದೆ. ಅದು ಕನ್ನಡ ಬ್ಲಾಗಿಗಳ ವಿಳಾಸವನ್ನು ತಿಳಿಸುತ್ತದೆ. ಅದೇ ರೀತಿಯ ಹೊಸದಾದ ಇನ್ನೊಂದು ಬ್ಲಾಗ್ ತೆರೆಯಲಾಗಿದೆ. http://blogannada.blogspot.com/ ಇದರ ವಿಶೇಷವೆಂದರ ಬ್ಲಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಅಲ್ಲಿಯೇ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಿ ನಿಮಗಿಷ್ಟವಾದ ಬ್ಲಾಗ್ ಅಲ್ಲಿ ನಮೂದಿಸಬಹುದು. ಇದೊಂತರ ಉತ್ತರ ಭಾರತದ ದೇವಸ್ಥಾನವಿದ್ದಂತೆ. ಅಲ್ಲಿಯೂ ಹಾಗೆ ನೀವೇ ಸ್ವತಹ ಪೂಜಾರಿಗಳ ಸಹಾಯವಿಲ್ಲದೆ ದೇವರ ಪೂಜೆ ಮಾಡಬಹುದು. ಹೂವು ಏರಿಸಬಹುದು.( ಆದರೆ ನೀವು ವಾಪಾಸಾದ ಮರುಕ್ಷಣ ಆ ಹೂವನ್ನು ಮತ್ತೊಬ್ಬ ತೆಗೆದುಬಿಡುತ್ತಾನೆ . ಇಲ್ಲಿ ಹಾಗೆ ಮಾಡಬೇಡಿ ) ಅದೇ ತರಹ ಇದು ನಿಮಗಿಷ್ಟವಾದ ಮಾರ್ಪಾಡು ಮಾಡಿ. ಹೊಸ ಹೊಸ ನಿಮಗೆ ಗೊತ್ತಿರುವ ತಾಣ ಸೇರಿಸಿ . ಇದೊಂತರ ಸಮೂಹ ಬ್ಲಾಗ್.

ಸರಿ ಇನ್ನೇನು ಲಾಗ್ ಇನ್ ಆಗಿ. ಧನ್ಯವಾದಗಳು