Friday, December 19, 2008

ಮಾವಿನ ಚಿಗುರನು ಮೆಲ್ಲುತ ಕೋಗಿಲೆ.........


"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಎಂದು ನಮ್ಮ ಗಿಂಡಿಮನೆ ಮೃತ್ಯುಂಜಯ ಅವರು ತಮ್ಮದೊಂದು ಕವಿತೆಯಲ್ಲಿ ಹೇಳಿದ್ದಾರೆ. ಆ ಕವಿತೆಯಲ್ಲಿ ಪ್ರಕೃತಿಯ ಶಬ್ದ ವನ್ನು ನಮಗೆ ತಿಳಿಸುವುದರ ಜತೆ ಮಾವಿನ ಚಿಗುರು ಕೋಗಿಲೆಯ ಸಂಬಂಧದ ಎಳೆಯನ್ನು ನವಿರಾಗಿ ಬಿಚ್ಚಿಡುತ್ತದೆ. ಇರಲಿ ಈಗ ಆ ಸುಮಧುರ ಕವಿತೆಯಲ್ಲಿನ ಮಾವಿನ ಬಗ್ಗೆ ಹೇಳೋಣ.
ಮಾವಿನ ಹಣ್ಣು ಮಾವಿನ ಮಿಡಿ ಉಪ್ಪಿನಕಾಯಿ, ಮಾವಿನ ಕಾಯಿ ತಂಬುಳಿ ಯಾರಿಗೆ ಗೊತ್ತಿಲ್ಲ? ಆಹಾ ಎಂಥ ಮಧುರಾ ವಾಸನೆ ಎನ್ನುವವರೆ ಎಲ್ಲ. ಪರಿಮಳ ಅಪ್ಪೆ ಮಾವಿನ ಕಾಯಿ ಹುಳಿ ಹುಳಿ ತಂಬುಳಿಯನ್ನು ನೆನೆಸಿಕೊಂಡಾಗಲೆಲ್ಲ ಚೊಳ್ ಅಂತ ಬಾಯಲ್ಲಿ ನೀರುಬರುತ್ತದೆ. ಮೊಸರು ಅನ್ನದ ಜತೆ ಕಚಕ್ ಅಂತ ಮಿಡಿಯನ್ನು ಕಚಿಕೊಂಡಾಗ ಆಗುವ ಆನಂದ ವರ್ಣಿಸಲಸದಳ. ಕಂಚಪ್ಪೆ. ಅನಂತ ಭಟ್ಟನ ಅಪ್ಪೆ ದ್ಯಾವ್ರಪ್ಪೆ ಹೀಗೆ ಸ್ಥಳೀಯವಾಗಿ ನೂರಾರು ಹೆಸರಿನಿಂದ ಕರೆಯಿಸಿಕೊಳ್ಳುವ ಮಾವಿನ ರುಚಿಗೆ ಸರಿಸಾಟಿಯಿಲ್ಲ. ಹೀಗೆ ಮನುಷ್ಯನ ಊಟದ ಜತೆಗೆ ಗುಡ್ ಕಾಂಬಿನೇಷನ್ ಆಗಿರುವ ಮಾವು ಪಕ್ಷಿ ಸಂಕುಲಕ್ಕೂ ಅಪಾರ ಉಪಕಾರಿ. ವಾಸಕ್ಕೆ ಆಹಾರಕ್ಕೆ ಸಂತತಿ ಬೆಳಸುವುದಕ್ಕೆ ಹೀಗೆ ಹತ್ತಾರು ಕಾರಣಗಳು ಅದರ ಜತೆ ತಳಕು ಹಾಕಿಕೊಂಡಿವೆ. ಆಯಿತು ಕೊರೆತ ಸಾಕು ಏನು ಹೇಳ ಹೊರಟಿವೆಯೋ ಅದನ್ನು ಹೇಳು ಮಾರಾಯ ಅಂದಿರಾ..! ಆಯಿತು ವಿಷಯಕ್ಕೆ ಬರೋಣ.
ಹೀಗೆ ಮಾವಿನ ಉತ್ಪನ್ನಗಳನ್ನು ಬಳಸುವ ಮಾನವ ಪರೋಕ್ಷವಾಗಿ ಮಾವಿನಮರಗಳ ಮಾರಣ ಹೋಮಕ್ಕೆ ಕಾರಣವಾಗುತ್ತಿದ್ದಾನೆ. ಅದು ಈಗ ನಾನು ಮೇಲೆ ಹೇಳಿದ ರುಚಿರುಚಿಯಾದ ಉತ್ಪನ್ನಗಳನ್ನು ಬಳಸುವ ಕಾರಣಕ್ಕಿಂತ ಹೆಚ್ಚು ಮಾವಿನ ಎಲೆಯನ್ನು ತೋರಣಕ್ಕಾಗಿ ಬಳಸುವ ಕಾರಣದಿಂದ ಎಂದು ಹೇಳಲು ಬಹು ಬೇಸರವೆನಿಸುತ್ತದೆ. ಹೌದು ಅದು ದೊಡ್ಡ ದುರಂತ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮಾವಿನ ಸೊಪ್ಪನ್ನು ತೋರಣದ ಕಾರಣಕ್ಕಾಗಿ ಯಥೇಚ್ಚವಾಗಿ ಬಳಸಲಾಗುತ್ತಿದೆ. ಮದುವೆಮನೆ ಉಪನಯನ ಹೀಗೆ ಧಾರ್ಮಿಕ ಸಮಾರಂಭಗಳಲ್ಲಂತೂ ಈ ಮಾವಿನ ಸೊಪ್ಪಿನ ಮಾರಣ ಹೋಮ ನೋಡಲಾಗದು. ಸಮಾರಂಭ ನಡೆಯುವ ಜಾಗಕ್ಕೆ ನೀವು ಹೋದಾಗ ಗಮನಿಸಿ ಅಲ್ಲಿ ಕಮಾನಿನಾಕರಾದಲ್ಲಿ ದಪ್ಪನೆಯ ಮಾವಿನ ಸೊಪ್ಪಿನ ಹೊದಿಕೆಯನ್ನೇ ನಿರ್ಮಿಸಿಬಿಟ್ಟಿರುತ್ತಾರೆ. ನನಗಂತೂ ಅವುಗಳನ್ನು ನೋಡಿದಾಗ ಸಮಾರಂಭದ ಉತ್ಸಾಹವೇ ಉಡುಗಿಹೋಗುತ್ತದೆ. ಮಾವಿನ ಎಲೆಗಳು ನನ್ನನ್ನು ಉಳಿಸಿ ಹೀಗೆ ಹಿಂಸಿಸಬೇಡಿ ಎಂದು ಚಿತ್ಕಾರ ಹೊರಡಿಸಿದಂತೆ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ರಾಜಕೀಯ ಸಮಾರಂಭಕ್ಕೂ ಮಾವಿನ ಎಲೆಗಳ ತೋರಣದ ಬಳಕೆಯಾಗುತ್ತಿದೆ. ಒಂದೆರಡು ದಿವಸದಲ್ಲಿ ಬಾಡಿಹೋಗುವ ಈ ಕಾರ್ಯಕ್ರಮಕ್ಕೆ ವರ್ಷಗಟ್ಟಲೆ ಮರದಲ್ಲಿ ಹಸಿರಾಗಿರುವ ಸೊಪ್ಪನ್ನು ಬಳಸುವುದು ಯಾವ ನ್ಯಾಯ ಅಂತ ಮಾವಿನ ಮರ ಮಾತನಾಡಲು ಬರುತ್ತಿದ್ದರೆ ಕೇಳುತ್ತಿತ್ತೇನೋ ಅಂತ ನನಗೆ ಅನ್ನಿಸುತ್ತದೆ.
ಅದ್ಯಾರೋ ಶಾಸ್ತ್ರಕಾರ ಮಾವಿನ ಸೊಪ್ಪು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು ಆಂದ, ಅದಕ್ಕೆ ನವ್ಯ ಶಾಸ್ತ್ರಕಾರ ಮಾವಿನ ಸೊಪ್ಪಿನಲ್ಲಿ ವೈರಸ್ ನಿರೋಧಕ ಶಕ್ತಿಯಿದೆ ಹಾಗಾಗಿ ಅದನ್ನು ಹತ್ತಾರು ಜನ ಓಡಾಡುವ ಜಾಗದ ಸಮಾರಂಭ ಸ್ಥಳದಲ್ಲಿ ಕಟ್ಟಿ ಸಮೂಹ ಕಾಯಿಲೆ ಹರಡದಂತೆ ತಡೆಯಬೇಕೆಂದು ನಮ್ಮ ಹಿಂದಿನವರು ಆ ಶಾಸ್ತ್ರ ಮಾಡಿದ್ದಾರೆ ಎಂದು ತನ್ನದೇ ತರ್ಕದ ...! ಮೂಲಕ ಸೇರಿಸಿದ, ಈಗಿನವರು ಕುಂಡೆ ಮೇಲೆ ಮಾಡಿಕೊಂಡು ಮನೆಯಲ್ಲಿ ಕಾರ್ಯಕ್ರಮ ಎಂದಕೂಡಲೆ ಮಾವಿನ ಸೊಪ್ಪು ಕಡಿದು ಕಡಿದು ತಂದು ಕಟ್ಟುತ್ತಿದ್ದಾರೆ. ಹಾಗಂತ ಅದೇ ಶಾಸ್ತ್ರಕಾರ ದೇವರು ನಿಮಗೆ ಸುಗಿ ಸುಗಿದು ಧನಕನನ ಕೊಡುತ್ತಾನೆ ವರ್ಷಕ್ಕೊಂದು ಮಾವಿನ ಸಸಿ ನಾಟಿ ಮಾಡಿ ಎಂದು ಸೇರಿಸಬಹುದಿತ್ತು. ಆದರೆ ಆತ ಹಾಗೆ ಮಾಡಿಲ್ಲ ಕಾರಣ ಆತನ ಕಾಲದಲ್ಲಿ ಕಾಡು ಹೇರಳವಾಗಿತ್ತು ಅವನ್ನು ನಾಶಮಾಡುವುದಕ್ಕೆ ಮಾರ್ಗ ಬೇಕಿತ್ತು ಹೀಗಾಗಿ ಹೀಗೊಂದು ಸಿಂಪಲ್ ಉಪಾಯ ಮಾಡಿದ. ಆದರೆ ಅದು ಈ ಕಾಲಕ್ಕೆ ದುಭಾರಿಯಾಗಿ ಪರಿಣಮಿಸಿದೆ. ಇದೊಂದು ತೋರಣದ ಬಳೆಕೆಯ ಕಾರಣದಿಂದಾಗಿ ಮಾವಿನಮರ ವರ್ಷದಿದ ವರ್ಷಕ್ಕೆ ಬೋಳುಬೋಳಾಗಿ ಮಾಯವಾಗುವತ್ತ ಸಾಗುತ್ತಿದೆ. ಇದು ತೋರಣಕ್ಕಾಗಿ ಮಾವುನಾಶದ ಕಥೆಯಾದರೆ ನಂತರದ್ದು ಮಾವಿನ ಮಿಡಿ ಕೊಯ್ಯುವವರ ದುರಾಸೆಯಿಂದ ಇಡೀ ಟೊಂಗೆಯೇ ಮಾಯವಾಗುವತ್ತ ಹೊರಟದ್ದೂ ಕಾಡು ಮಾವಿನ ಮರಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.
ಹೀಗೆ ಮನುಷ್ಯನ ದುರ್ಬಳಕೆಯಿಂದ ಅಪರೂಪದ ಕಾಡುಮಾವಿನಮರದ ಸಂತತಿ ಬರ್ಬಾದೆದ್ದು ಹೋಗುತ್ತಿದೆ. ರಕ್ಷಿಸುವ ದೃಷ್ಟಿಯಿಂದ ಕೇವಲ ಲೇಖನ ಬರೆಯುತ್ತಾ ಕುಳಿತುಕೊಂಡರೆ ಆಗದು. ನಾನಂತೂ ವರ್ಷಕ್ಕೆ ನನ್ನ ಹತ್ತಿರ ಸಾದ್ಯವಾದಷ್ಟು ಕಾಡುಮಾವಿನ ಮರಗಳನ್ನು ನೆಡುತ್ತಿದ್ದೇನೆ. ಹಿಂದೆ ಅಶೋಕ ಮಹಾರಾಜನ ಕಾಲದಲ್ಲಿ ಸಾಲುಮರಗಳಾಗಿ ಕಂಡುಬರುತ್ತಿದ್ದ ಮಾವು ಇಂದಿನ ಪ್ರಜಾಪ್ರಭುತ್ವ ಎಂಬ ನಮ್ಮದೇ ಆಳ್ವಿಕೆಯಲ್ಲಿ ಕಾಣಬರುತ್ತಿಲ್ಲ.
ಕಳೆದ ವರ್ಷ ಹೊನ್ನೆಮರಡುವಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಗೋಷ್ಠಿ ನಡೆದಾಗ ಮಾವಿನ ತೋರಣ ಕಟ್ಟಲು ಹೊರಟಿದ್ದರು. ನಂತರ ಅವರಿಗೆ ಗಂಟೆಗಟ್ಟಲೆ ಕೊರೆದು ಅಕೇಶಿಯಾ ತೋರಣ ಕಟ್ಟಿಸಲಾಯಿತು. ಬಂದವರೆಲ್ಲರೂ ಅದು ಮಾವಿನ ತೋರಣ ಎಂದೇ ಭಾವಿಸಿದ್ದರು. ಹಾಗಾಗಿ ನಾವು ನೀವು ಹೀಗೆ ಒಂದಿಷ್ಟು ನಮ್ಮ ಮಟ್ಟದ ತೀರ್ಮಾನ ಕೈಗೊಳ್ಳುವುದರಲ್ಲಿ ಅರ್ಥವಿದೆ. ನಿಮಗೆ ಸಂದರ್ಭ ಸಿಕ್ಕಾಗ ತೋರಣಕ್ಕಾಗಿ ಯಡ್ಡಾದಿಡ್ಡಿ ಮಾವಿನ ಸೊಪ್ಪನ್ನು ಬಳಸುವವರಿಗೆ ತಿಳಿ ಹೇಳಿ. ಸ್ವಲ್ಪ ಶಾಸ್ತ್ರಕ್ಕೆ ಬಳಸಲಿ. ಆ ವರ್ಷ ಒಂದೇ ಒಂದು ಗಿಡ ನೆಡಲು ಹೇಳಿ. ಇದು ಮಾವಿನ ಮರಗಳು ನನ್ನ ಮೂಲಕ ಮಾಡಿಕೊಂಡ ಮನವಿ ಅಂತ ಬೇಕಾದರೂ ಅಂದುಕೊಳ್ಳಿ. ಕಾಡುಮಾವಿನ ಮರಗಳು ಹೀಗೆಯೇ ದುರ್ಬಳಕೆಯಾದಲ್ಲಿ ಮತ್ತೆ ಕವಿಗಳ ಕವಿತೆಯಲ್ಲಿ ಮಾತ್ರಾ ಇದನ್ನು ಕಲ್ಪಿಸಿಕೊಳ್ಳಬೇಕಾದೀತು. ಅದು ನಮ್ಮ ಮುಂದಿನ ತಲೆಮಾರಿನವರಿಗೆ ಆಸಕ್ತಿ ಇದ್ದರೆ..! .
ಇನ್ನೂ ಮುಂದೆ ಯೋಚಿಸಿದಲ್ಲಿ ಮಾವು ಮಾಯವಾಗಿ ಅದು ಹೇಗಿತ್ತು ಅಂತ ತಿಳಿಯದ ಕವಿಗಳು " ಅಕೆಶಿಯಾ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅನ್ನಬೇಕಾಗುತ್ತದೆ. ಹಾಗಾಗಲು ಬಿಡುವುದು ಬೇಡ. ಈ ಬಾರಿ ಮದುವೆ ಮುಂಜಿಗೆಂದು ನೀವು ಎರಡು ದಿವಸ ಮೊದಲು ಊರಿಗೆ ಬಂದಾಗ ನಾನು ಹೇಳಿದ್ದು ನೆನಪಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬ ಆಶಯ ನನ್ನದು. ಅದು ಸಕ್ಸಸ್ಸು ಹೌದು ಕಾರಣ ಊರಿನಲ್ಲಿ ನಿಮ್ಮ ಮಾತು ಕೇಳುತ್ತಾರೆ, ನಾವೆಲ್ಲ ಹೇಳಿದರೆ ಇವಕ್ಕೆಲ್ಲಾ ಎಂತ ಗೊತ್ತು ಅಂತ ಬಾಯಿಮುಚ್ಚಿಸುತ್ತಾರೆ. ಹಾಗಾಗಿ ನೀವು ಶಂಖವಾಗಿ ಮಾವು ತೀರ್ಥವಾಗಲಿ.

Thursday, December 18, 2008

ಇಶ್ಯಿಶ್ಶೀ......

ನಮ್ಮ ಊರುಗಳಲ್ಲಿ ಬಹುಪಾಲು ಅಡಿಕೆ ಬೆಳೆಗಾರರು. ಆದರೆ ಗುಟ್ಕಾ ತಿನ್ನುವವರನ್ನು ಕಂಡು ಗುರಾಯಿಸುತ್ತಾರೆ. ಎಲೆ ಅಡಿಕೆ ಹಾಕಿಕೊಂಡು ಬಾಯಿ ಕೆಂಪು ಮಾಡಿಕೊಂಡರೆ ಇಶ್ಯಿಶ್ಶೀ ಎನ್ನುತ್ತಾರೆ. ಬಹಳಷ್ಟು ಜನ ಅಡಿಕೆಯನ್ನು ಮೂಸಿಯೂ ನೋಡುವುದಿಲ್ಲ. ಹಾಗಂತ ಅಡಿಕೆಗೆ ದರ ಇಲ್ಲ ಅಂತ ಹಲುಬುತ್ತಾರೆ. ತಾವು ತಿನ್ನುವುದಿಲ್ಲ ತಿನ್ನುವವರನ್ನು ನಿಕೃಷ್ಟವಾಗಿ ಕಾಣುತ್ತಾರೆ ದರ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಇರಲಿ ಅದು ಪ್ರಪಂಚ ಅಂದು ಬಿಡೋಣ.

ಅವನದು ಲಿಕ್ಕರ್ ಫ್ಯಾಕ್ಟರಿಯಲ್ಲಿ ದೊಡ್ಡ ಹುದ್ದೆ. ಆದರೆ ಆತ ಕುಡಿಯುವವರನ್ನು ಕಂಡು ಗುರಾಯಿಸುತ್ತಾನೆ. ಏನೋ ಸ್ವಲ್ಪ ರಂಗಾಗಿ ತೂರಾಡುತ್ತಿದ್ದರೆ ಇಶ್ಯಿಶ್ಶಿ ಎನ್ನುತ್ತಾನೆ. ಆತ ಹೆಂಡವನ್ನೂ ಮೂಸಿಯೂ ನೋಡುವುದಿಲ್ಲ ಹಾಗಂತ ಸಂಬಳ ಕಡಿಮೆಯಾಯಿತೆಂದು ಹಲುಬುತ್ತಾನೆ. ತಾನು ಕುಡಿಯುವುದಿಲ್ಲ ಕುಡಿಯುವವರನ್ನು ಕಂಡರೆ ನಿಕೃಷ್ಟವಾಗಿ ಕಾಣುತ್ತಾನೆ ಸಂಬಳ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಆಗಲಿ ಅದೂ

ಆತ ಮಹಾನ್ ರಾಜಕಾರಣಿ, ಜನರಿಂದ ನಾನು ಮೇಲೆ ಬಂದೆ ಎಂದು ಚುನಾವಣೆಯ ಮೊದಲು ಹಾಡುತ್ತಾನೆ. ಮಣ್ಣಿನ ಮಗ ನಾನು ಅಂತಾನೆ. ಬಡಜನರ ಏಳ್ಗೆಯೇ ನನ್ನ ಗುರಿ ಅಂತಾನೆ. ಆದರೆ ಗೆದ್ದಮೇಲೆ ಜನಸಾಗರವನ್ನು ಕಂಡು ಇಶ್ಯಿಶ್ಶೀ ಅನ್ನುತ್ತಾನೆ. ದುಡಿಯಲಾರದ ಸೋಮಾರಿಗಳು ಅಂತಾನೆ. ದರ್ಪ ದವಲತ್ತುಗಳನ್ನು ಪ್ರದರ್ಶಿಸುತ್ತಾನೆ. ದೇವಸ್ಥಾನ ಸುತ್ತುತ್ತಾನೆ. ಆಯಿತು ಅದುವೇ ಪ್ರಪಂಚ ಅಂದು ಬಿಡೋಣ

ಆತ "ಮಾತೃ ದೇವೋ ಭವ, ಆಚಾರ್ಯ ದೇವೋ ಭವ " ಎನ್ನುವ ವೇದದ ಸಾರವೇ ಜೀವನ ಎನ್ನುವ ಘನಂದಾರಿ ಪುರೋಹಿತ. ಮನೆಯಲ್ಲಿ ವಯಸ್ಸಾದ ಅಮ್ಮನನ್ನು ಕಂಡು ಗುರಾಯಿಸುತ್ತಾನೆ. ಆಕೆ ಹುಷಾರಿಲ್ಲದೆ ಹಲುಬಿದರೆ ಇಶ್ಯಿಶ್ಶೀ ಎನ್ನುತ್ತಾನೆ. ಅಮ್ಮನನ್ನು ಮಾತನಾಡಿಸುವುದೂ ಇಲ್ಲ. ತಾನು ಪಾಲಿಸುವುದೂ ಇಲ್ಲ ಆದರೆ ನಿತ್ಯ ಮಾತೃದೇವೋ ಭವ ಎಂದು ಭಾಷಣ ಮಾಡುವುದನ್ನು ಬಿಡುವುದಿಲ್ಲ ಜತೆಗೆ ಪ್ರಪಂಚ ಆಚಾರ ವಿಚಾರಗಳನ್ನು ಕೈಬಿಟ್ಟು ಕೆಟ್ಟು ಹೋಗಿದೆ ಎಂಬ ವಿಪರ್ಯಾಸದ ಮಾತು.

ಆದರೆ ಇದನ್ನು ಮಾತ್ರಾ ಪ್ರಪಂಚ ಅಂತ ಸುಮ್ಮನಿರಲಾಗುವುದಿಲ್ಲ. ಯಾಕೆಂದರೆ ಮುಂದೊಂದು ದಿನ ನಾವು ಅಮ್ಮನಂತೆ ವಯಸ್ಸಾದವರಾಗುತ್ತೀವಿ ಅನ್ನುವ ಕಾರಣಕ್ಕಾದರೂ....?

Tuesday, December 16, 2008

ತರಬೇಕು..ತರಬೇಕು... ಒಂದು ಕಥಾ ಸಂಕಲನ

ಕಟ್ಟು ಕಥೆಯ ಕಟ್ಟು ಅಂತ ಅದರ ಹೆಸರು ಇಡಬೇಕು. ಅದರಲ್ಲಿ ನನ್ನ ಇಲ್ಲಿಯವರೆಗೆ ಪ್ರಕಟವಾದ ಕಥೆಗಳನ್ನು ಮುದ್ರಿಸಬೇಕು ಅಂತ ಒಂದು ಆಸೆ ಚಿಗುರಿದೆ. ಪ್ರಜಾವಣಿ-ಕನ್ನಡಪ್ರಭ-ಉದಯವಾಣಿ-ಕರ್ಮವೀರ-ಸುಧಾ ಸೇರಿದಂತೆ ಒಟ್ಟು ಪ್ರಕಟವಾಗಿದ್ದು ಇಪ್ಪತ್ತೈದು ಕಥೆಗಳು. ಅವುಗಳಲ್ಲಿ ಹದಿನೈದು ಆರಿಸಿ ಮುದ್ರಿಸಬೇಕು. ಅದಕ್ಕಾಗಿ ಹದಿನೈದು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕು ಆಮೇಲೆ ಹೇಗೂ ಇದ್ದೇ ಇದೆ. " ಹೋಯ್ ಆರಾಮ, ಮತ್ತೆ ಸಮಾಚಾರ , ನನ್ನದೊಂದು ಕಥಾ ಸಂಕಲನ ಬಂದಿದೆ? " ಅಂತ ಅಪರೂಪದವರು ಕಂಡಕೂಡಲೆ ಕೇಳಬೇಕು. " ಓ ಹೋ ಹೌದಾ ನೀನು ಕಥೆ ಬರಿತೀಯಾ..?" ಎಂಬ ಪ್ರಶ್ನೆ ಬರುತ್ತದೆ . ತಾಳ್ಮೆಗೆಡಬಾರದು " ಹೌದು" ಅನ್ನಬೇಕು. ( ನಮ್ಮಲ್ಲಿ ಜನಜನಿತವಾದ ಮಾತಿದೆ. ಅದ್ಯಾರದ್ದೋ ಹೆಸರು ಹೇಳಿ " ಅವ ಹಡೆದ್ಲಡ ಗಂಡು ಮಗುವಡಾ.." ಅಂದಕೂಡಲೆ ಎದುರಿದ್ದವನಿಂದ " ಅರೆ ಅವ ಯಂಗೆ ಬಸಿರಾಗಿದ್ದೆ ಗೊತ್ತಿಲ್ಯಲ" ಎನ್ನುವ ಜೋಕ್ ರೂಪದ ವ್ಯಂಗ್ಯ. ಇದೂ ಹಾಗೆಯೆ, ಕಥೆ ಬರೆಯದೆ ಕಥಾ ಸಂಕಲನ.. ಬರಲು ಸಾಧ್ಯವೇ? ಇರಲಿ ) ಆನಂತರ ಬಗಲು ಚೀಲದಿಂದ ಒಂದು ಪುಸ್ತಕ ತೆಗೆದುಕೊಡಬೇಕು . ಆಗ ಅವರು " ಚಲೋ ಇದ್ದು " ಎಂದು "ಬರ್ಲಾ ಬಸ್ ಬಂತು" ಎನ್ನುತ್ತಾ ಹೋಗುವುದನ್ನು ನೋಡಬೇಕು. ಮನೆಗೆ ಬಂದು ಹೆಂಡತಿಯ ಬಳಿ ಇವತ್ತು ಹತ್ತು ಪುಸ್ತಕ ಖರ್ಚಾಯಿತು ಎನ್ನುವ ಸತ್ಯ ಹೇಳಬೇಕು. ಅಡಿಕೆ ಮಾರಿದ ದುಡ್ಡನ್ನು ಪುಸ್ತಕದಿಂದ ಬಂದದ್ದು ಎಂಬ ಹಸಿಹಸಿ ಸುಳ್ಳನ್ನು ಪೋಣೀಸಬೇಕು. ಇವಿಷ್ಟು ಸನ್ ಎರಡುಸಾವಿರದ ಒಂಬತ್ತನೆ ಇಸವಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಆಗಬೇಕಾದ ಕೆಲಸಗಳು. ಒಂದು ಜೇನಿನ ಹಿಂದೆ ಎಂಬ ಪುಸ್ತಕ ೨೦೦೭ ರಲ್ಲಿ ಬರೆದಿದ್ದು ನಾಲ್ಕುನೂರು ಖಾಲಿಯಾಗಿದೆ.ಇನ್ನು ನೂರು ಪುಸ್ತಕ ಖಾಲಿಯಾದರೆ ಅಸಲಾದಂತೆ. ...! . ( ಹೆಂಡತಿಯ ಬಳಿ ಅದರ ಲಾಭದ ದುಡ್ಡಿನಿಂದ ಇನ್ನೊಂದು ಕಥಾ ಸಂಕಲನ ತರುತ್ತಿದ್ದೇನೆಂದು ಸುಳ್ಳು ಹೇಳಿಯಾಗಿದೆ. ಸಧ್ಯ ಆಕೆ ಈ ಬ್ಲಾಗ್ ಓದುವುದಿಲ್ಲ ಬಚಾವ್). ಮೊನ್ನೆ ನಮ್ಮ ವಿನಾಯಕ ತನ್ನ ಬ್ಲಾಗಿನಲ್ಲಿ ಅವನದೊಂದು ಬರಹ ಪ್ರಕಟವಾಗದ ಕುರಿತು ನೋವು ತೋಡಿಕೊಂಡಿದ್ದ. ಪ್ರಕಟವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಹೀಗೆ ನನ್ನಂತೆ ಅವರನ್ನ ಇವರನ್ನ ಹಿಡಿದು ನಮ್ಮದೇ ಒಂದು ಪ್ರಕಾಶನ ಸಂಸ್ಥೆ ಅಂತ ಶುರುವಿಟ್ಟುಕೊಂಡು ಪ್ರಕಟಿಸಿಬಿಡಬೇಕು. ಆನಂತರ ಅಷ್ಟು ಲಾಭ ಬಂತು ಇಷ್ಟು ಲಾಭ ಬಂತು ಅಂತ ಓಳು ಬಿಟ್ಟರೆ ಫಿನಿಷ್. ಪಾಪ ನಮ್ಮಂತಹ ಲೇಖಕರು ಸಾವಿರಾರು, ಅವರೆಲ್ಲರ ಕಥೆಗಳನ್ನು ಸಂಕಲನಗಳನ್ನಾಗಿಸಿದರೆ ಪ್ರಕಾಶಕರು ದಿವಾಳಿಯಾಗುತ್ತಾರೆ. ಹಾಗಾಗಿ ನಾವೇ ನಾವು ತಯಾರಾಗಿಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ ಅನ್ನುವುದು ನನ್ನ ಸ್ವಾನುಭವ. ಬೇಕಾದರೆ ನೀವೂ ಹಾಗೆ ಮಾಡಿ ನೋಡಿ, ರಾಯಲ್ಟಿ ನನಗೇನು ಕೊಡಬೇಕಾಗಿಲ್ಲ. ಇರಲಿ ಅವೆಲ್ಲಾ ಎಲ್ಲಾ ಕಡೆ ಇದ್ದದ್ದೆ. ಫೆಬ್ರವರಿ ತಿಂಗಳಿನಲ್ಲಿ ಕಥಾ ಸಂಕಲನ ಪ್ರಕಟವಾಗುವ ನಿರೀಕ್ಷೆ ಇದೆ. ಅದಕ್ಕೊಂದು ಚಿಕ್ಕ ಸಮಾರಂಭವೂ ಇರುತ್ತದೆ. ಅದಕ್ಕೆ ತಪ್ಪದೇ ನೀವು ಬರಬೇಕು. ಇದು ಮಾತ್ರಾ ಬರೀ ಬಾಯಿಮಾತಿನ ಕರೆಯ ಅಲ್ಲ. ಖಂಡಿತಾ ಬರುವಿರಿ ತಾನೆ?.

ಮಮತೆಯ ಕರೆಯೋಲೆ

ಕ್ಷೇಮ /ಶ್ರೀ// ಸಾಂಪ್ರತ
ಪ್ರೀತಿಯ ಓದುಗರೆ ನಿಮಗೆ ಸಾಷ್ಟಾಂಗ ನಮಸ್ಕಾರ. ಇತ್ತ ನಾನು ಕ್ಷೇಮ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಈ ಪತ್ರ ಬರೆಯಲು ಮುಖ್ಯ ಕಾರಣ ಇದೇ ತಿಂಗಳು ಇಪ್ಪತ್ತೇಳನೇ ತಾರೀಕಿನ ಶನಿವಾರ ಹೊನ್ನೇಮರಡುವಿನಲ್ಲಿ ಹೊಳೆ ಊಟಕ್ಕೆ ನಾವು ಹೋಗಬೇಕೆಂದು ತೀರ್ಮಾನಿಸಿಯಾಗಿದೆ. ಯಳ್ಳು ಇಲ್ಲದಿದ್ದರೂ ಯಳ್ಳಮವಾಸೆಯ ಆ ದಿನ ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೀಗೆ ಹೊರ ಸಂಚಾರ ಹೊರಟು ಹೊಳೆಯ ಪಕ್ಕದಲ್ಲಿ ಊಟ ಮಾಡಿಕೊಂಡು ಬರುವುದು ಸುಮಾರು ಐವತ್ತು ವರ್ಷಗಳಿಂದ ನಡೆದು ಬಂದ ಪದ್ದತಿ. ಯಾವಾಗಲೂ ಜೋಗ ಜಲಪಾತ ಬೀಳುವ ಜಾಗಕ್ಕೆ ತೆರಳುತ್ತಿದ್ದ ನಾವು ಈ ಬಾರಿ ಹೊನ್ನೇಮರಡುವನ್ನು ಆಯ್ಕೆಮಾಡಿಕೊಂಡಿದ್ದೇವೆ. ಕಾರಣ ಅಲ್ಲಿ ಜಾಕೆಟ್ ಕಟ್ಟಿಕೊಂಡು ಈಜಾಡಬಹುದು ಬೋಟಿಂಗ್ ಮಾಡಬಹುದು.
ಈ ಹೊಳೆ ಊಟದ ಮಜ ನೀವೂ ಅನುಭವಿಸಬಹುದು. ಬನ್ನಿ ಖಂಡಿತಾ ಬರುವಿರಾಗಿ ಆಶಿಸುವ ಮತ್ತು ಬರುಅ ಮುಂಚೆ ನನಗೊಂದು ಮಾಹಿತಿ ತಿಳಿಸುವಿರಾಗಿ ಭಾವಿಸುವ ನಿಮ್ಮವ
ಮನೆಯಲ್ಲಿ ಹಿರಿಯರಿಗೆ ನಮಸ್ಕಾರ ಕಿರಿಯರಿಗೆ ಆಶೀರ್ವಾದಗಳು
ಇಂತಿ ನಿಮ್ಮ ಹಿತೈಷಿ.
ಆರ್.ಶರ್ಮಾ. ತಲವಾಟ
9342253240