Monday, December 20, 2010

ನವಿಲು ಮೊಟ್ಟೆ ಕೋಳಿ ಕಾವು


ಗುಡುಗುಡು ಸದ್ದಿಗೆ ನಾಟ್ಯವಾಡುವ ಮಯೂರವನ್ನು ನೋಡಲು ಅದೆಷ್ಟು ಸೊಬಗು, ಗರಿಬಿಚ್ಚಿ ಕುಣಿಯುವ ನವಿಲಿನ ನಾಟ್ಯಕ್ಕೆ ಮನ ಪುಳಕಗೊಳ್ಳದಿರಲು ಸಾದ್ಯವೇ ಇಲ್ಲ. ಅಂಥಹ ನವಿಲಿನ ನೃತ್ಯ ಹತ್ತಿರದಿಂದ ನೋಡಿ ಸವಿಯುವ ಭಾಗ್ಯ ನಮ್ಮ ನಿಮ್ಮದಾದರೆ ವಾವ್ ಎನ್ನಬಹುದು. ಆದರೆ ಮನುಷ್ಯರನ್ನು ದೂರದಿಂದ ಕಂಡರೆ ಕಂಬಿಕೀಳುವ ನವಿಲು ಅದಕ್ಕೆ ಅವಕಾಶ ನೀಡದು. ಕಾಡಿನಲ್ಲಿ ಸ್ವೇಚ್ಛೆಯಾಗಿ ಓಡಾಡಿಕೊಂಡಿರುವ ನಮ್ಮ ರಾಷ್ಟ್ರಪಕ್ಷಿ ನವಿಲು ಸಾಕುಪ್ರಾಣಿಯಲ್ಲ, ನವಿಲನ್ನು ಸಾಕಿದವರು ಅಂಥಹ ಅವಕಾಶ ಸಿಕ್ಕಿದವರು ಅತ್ಯಂತ ವಿರಳ. ಆದರೆ ನನಗೆ ಈ ವರ್ಷ ಅಂಥಹ ಅಪರೂಪದ ಅವಕಾಶ ಒದಗಿಬಂದಿದೆ.
ಕಳೆದ ತಿಂಗಳು ಮಳೆಗಾಲ ಮುಗಿದು ಇನ್ನೇನು ಚಳಿ ಶುರುವಾಯಿತು ಎನ್ನುವ ದಿವಸಗಳಲ್ಲಿ ತೋಟದ ಬದು ಚೊಕ್ಕಮಾಡುತ್ತಿದ್ದ ಹೆಣ್ಣಾಳುಗಳು "ಪಟಪಟ" ಎಂದು ಸದು ಮಾಡುತ್ತಾ ಏನೋ ಹಾರಿಹೋದ ಸದ್ದನ್ನು ಕೇಳಿ ಗಾಬರಿಯಾಗಿ ಕೂಗಿಕೊಂಡರು. ನಾನು ಹಾಗೂ ನಮ್ಮ ತೋಟದ ಮೇಸ್ತ್ರಿ ರಾಮಕೃಷ್ಣ ಹೆಣ್ಣಾಳುಗಳ ಚೀರಾಟ ಕೇಳಿ ಹತ್ತಿರ ಹೋಗಿ ನೋಡಿದಾಗ ಹಾಗೆ ಓಡಿಹೋಗಿದ್ದು ನವಿಲೆಂದು ತಿಳಿಯಿತು. ರಾಮಕೃಷ್ಣನ ಲೆಕ್ಕಾಚಾರದ ಪ್ರಕಾರ ನವಿಲು ಹಾಗೆ ಪೊದೆಯಲ್ಲಿ ಇತ್ತೆಂದರೆ ಅಲ್ಲಿ ಮೊಟ್ಟೆ ಇಟ್ಟಿದೆ ಎಂದರ್ಥ. ಸ್ವಲ್ಪ ಹೊತ್ತು ಪೊದೆಯ ಸಂದಿನಲ್ಲಿ ಹುಡುಕಿದಾಗ ರಾಮಕೃಷ್ಣನ ಲೆಕ್ಕಾಚಾರ ಸರಿಯಾಗಿತ್ತು. ಕೋಳಿ ಮೊಟ್ಟೆಗಿಂತ ಮೂರುಪಟ್ಟು ದೊಡ್ಡದಾಗಿರುವ ಐದು ನವಿಲುಮೊಟ್ಟೆಗಳು ಅಲ್ಲಿದ್ದವು. ಚೊಕ್ಕಟಮಾಡಲು ಬಂದ ಹೆಣ್ಣಾಳುಗಳಿಗೆ ಸಂಭ್ರಮ ಹೇಳತೀರದು, ಆದರೆ ಆ ಸಂಭ್ರಮಕ್ಕೆ ನನ್ನ ಇರುವಿಕೆ ಅವರಿಗೆ ತುಸು ಇರಿಸುಮುರಿಸನ್ನು ಉಂಟುಮಾಡಿತ್ತು. ಅಕಸ್ಮಾತ್ ಸಿಕ್ಕ ಭೂರಿ ಬೋಜನವನ್ನು ಮನೆಗೆ ಒಯ್ಯುವಂತಿರಲಿಲ್ಲ. ನಾನು ಅವೆಲ್ಲಾ ಅರ್ಥವಾಗದವನಂತೆ ಅವರಿಗೆ " ಅಲ್ಲಿ ಚೊಕ್ಕಮಾಡುವುದುಬೇಡ, ನವಿಲಿಗೆ ತೊಂದರೆಯಾಗುತ್ತದೆಯೆಂದು" ಅಣತಿಯಿಟ್ಟು ಮನೆ ಸೇರಿದೆ. ಅವರುಗಳು ಮೊಟ್ಟೆಯನ್ನು ಮನೆಗೆ ಒಯ್ಯಲಾರದೆ ಅರೆಮನಸ್ಸಿನಿಂದ ಮನೆ ಸೇರಿದರು. ಮಾರನೇ ದಿನ ರಾಮಕೃಷ್ಣ ಅಲ್ಲಿ ಹೋಗಿ ನೋಡಿ ಬಂದವನು ಆಘಾತಕಾರಿ ಸುದ್ದಿಯೊಂದನ್ನು ತಂದ. ಜನಸಂಚಾರ ಆಗಿರುವ ಆ ಜಾಗಕ್ಕೆ ತಾಯಿನವಿಲು ಹೆದರಿ ಮತ್ತೆ ಬರುವುದನ್ನು ಕೈಬಿಟ್ಟಿತ್ತು. ಈಗ ಮೊಟ್ಟೆ ತಾಯಿಯ ಕಾವಿಲ್ಲದೆ ಮರಿಯಾಗದು, ತಾಯಿ ಮನುಷ್ಯರ ಹೆದರಿಕೆಯಿಂದ ಅಲ್ಲಿಗೆ ಬಾರದು. ಸಮಸ್ಯೆ ವಿಚಿತ್ರರೂಪಕ್ಕೆ ತಿರುಗಿತು. ಪರಿಹಾರದ ಬಗ್ಗೆ ರಾಮಕೃಷ್ಣನಲ್ಲಿ ವಿಚಾರಿಸಿದಾಗ ಆತ " ಮೊಟ್ಟೆಯಿಟ್ಟ ಕೋಳಿ ಸಿಕ್ಕಿದರೆ ಬುಟ್ಟಿಯಲ್ಲಿಟ್ಟು ಕಾವು ಕೊಡಿಸಿ ಮರಿ ತೆಗೆಸಬಹುದು" ಎಂಬ ಸಲಹೆ ನೀಡಿದ
ಈಗ ಮೊಟ್ಟೆ ಇಟ್ಟ ಕೋಳಿಯ ಹುಡುಕಾಟ ಆರಂಭವಾಯಿತು. ಸಂಜೆಯೊಳಗೆ ಕೋಳಿಸಿಗದಿದ್ದರೆ ಮೊಟ್ಟೆಗಳು ಒಂದೊಂದಾಗಿ ಕೆಡಲು ಆರಂಬಿಸುತ್ತವೆ ಎಂಬ ಭಯದ ನಡುವೆ ಮೂರ್ನಾಲ್ಕು ಜನರ ಬೈಕ್ ಸುತ್ತಮುತ್ತಲಿನ ಹಳ್ಳಿಯತ್ತ ಓಡಿಸಿಯಾಯಿತು. ನವಿಲುಮರಿಯ ಅದೃಷ್ಟವೋ ನಮ್ಮಗಳ ಶ್ರಮವೋ ಅಂತೂ ಸಂಜೆ ಆರುಗಂಟೆಗೆ ನಮ್ಮ ಮನೆಯಿಂದ ೧೫ ಕಿಲೋಮೀಟರ್ ದೂರದ ಪಡಗೋಡಿನಲ್ಲಿ ಕೋಳಿ ಇರುವುದಾಗಿಯೂ ಹಾಗೂ ಅದರ ಮೊಟ್ಟೆಗಳೆಲ್ಲ ಗುಡುಗಿನ ಕಾರಣಕ್ಕೆ ಕೆಟ್ಟುಹೋಗಿರುವುದಾಗಿಯೂ ಸುದ್ದಿ ಬಂತು. ಲಗುಬಗೆಯಿಂದ ರಾಮಕೃಷ್ಣ ಅಲ್ಲಿಗೆ ಹೋಗಿ ಕೋಳಿಯನ್ನು ತಂದ.
ದೊಡ್ಡಗಾತ್ರದ ಮೊಟ್ಟೆಯನ್ನು ನೋಡಿದ ಕೋಳಿ ಆರಂಭದಲ್ಲಿ ಕಾವುಕೊಡಲು ಕೂರಲಿಲ್ಲ. ಆದರೆ ಅದೇನು ಮನಸುಬಂತೋ ಮಾರನೇ ದಿವಸ ಬೆಳಿಗ್ಗೆಯಿಂದ ಐದುಮೊಟ್ಟೆಗಳಮೇಲೆ ಏರಿ ಕಾವು ನೀಡತೊಡಗಿತು ಕೋಳಿ. ಕಾವುಕೊಡಲು ಆರಂಭಿಸಿ ಹದಿನೈದು ದಿನಕ್ಕೆ "ಕುಂಯ್ ಕುಂಯ್" ಎನ್ನುತ್ತಾ ಮೊದಲ ಮರಿ ಹೊರಬಂತು. ಮತ್ತೆ ಕೆಲ ಕ್ಷಣಗಳಲ್ಲಿ ಇನ್ನೆರಡು ಹೊರಬಂದು ಕೋಳಿಯ ಸುತ್ತ ಸುತ್ತತೊಡಗಿತು. ಮತ್ತೆರಡು ಮೊಟ್ಟೆ ಅನಿರೀಕ್ಷಿತ ಮಳೆಗುಡುಗಿನ ಕಾರಣ ಫಲಿತಗೊಳ್ಳಲಿಲ್ಲ. ಕೋಳಿಯ ಭಾಷೆ ಅರ್ಥ ಮಾಡಿಕೊಳ್ಳುವಲ್ಲಿ ಆರಂಭದ ಒಂದೆರಡು ದಿವಸ ಎಡವಿದ ನವಿಲುಮರಿಗಳು ನಂತರ ಅದರ ಹಿಂದೆ ಸುತ್ತತೊಡಗಿವೆ ಹಾಗೂ "ಕಚಕಚ" ಎಂದು ಕೋಳಿ ಕೆದರಿಕೊಟ್ಟ ಆಹಾರ ತಿನ್ನುತ್ತಿವೆ. ಹೀಗೆ ಒಂದು ತಿಂಗಳು ಸಾಕಿ ಆನಂತರ ಕಾಡಿಗೆ ಬಿಡಬೇಕಿದೆ. ಅಂತೂ ಇಂತೂ ಹರಸಾಹಸಪಟ್ಟು ಮೂರು ನವಿಲು ಮರಿಯನ್ನು ಕೋಳಿಯ ಸಹಾಯದಿಂದ ರಕ್ಷಿಸಿದ ಸಮಾಧಾನ ಸಿಕ್ಕಿದೆ.

Friday, December 17, 2010

ಆಮೆಯ ಬೇಟೆ



ಜೊರ್ರಂತ ಸುರಿವ ಮಲೆನಾಡಿನ ಮಳೆಗಾಲದಲ್ಲಿ ಈ ಚಿತ್ರದಲ್ಲಿನ ವೇಷಧಾರಿ ಹೊರಟರೆಂದರೆ ಅವತ್ತು ಒಂದಿಷ್ಟು ಆಮೆಯ ಆಯುಷ್ಯ ಮುಗಿಯಿತೆಂದು ಅರ್ಥ. ನೀರಿನಲ್ಲೂ , ನೆಲದ ಮೇಲೂ ಬದುಕಬಲ್ಲ ಆಮೆ ಅತ್ಯಂತ ನಿರುಪದ್ರವಿ. ಆದರೆ ಅದರ ಮಾಂಸ ರುಚಿಯಾಗಿರುವುದು ಅದರ ದುರ್ದೈವ. ಮಳೆಗಾಲ್ದ ದಿವಸಗಲಲ್ಲಿ ತುಂಬುತ್ತಿರುವ ಕೆರೆಗಳಿಂದ ಆಮೆಗಳು ನೆಲಕ್ಕೆ ಹೊರಟಿರುತ್ತವೆ. ನಿಧಾನಗತಿಗೆ ಹೆಸರಾಗಿದ್ದರೂ ಆಮೆ ಮಾತ್ರಾ ಸುಲಭವಾಗಿ ಬೇಟೆಗಾರರಿಗೆ ಸಿಗುವುದಿಲ್ಲ. ನೀರೊಂದಿದ್ದರೆ ಅದು ಪುಳುಕ್ ಅಂತ ದಡದಿಂದ ಹಾರಿ ಜಾರಿಕೊಂಡುಬಿಡುತ್ತದೆ. ಅದಕ್ಕಾಗಿ ಬೇಟೆಗಾರರು ಉಪಾಯ ಮಾಡುತ್ತಾರೆ. ತಲೆಗೆ ಸೊಪ್ಪು ಕಟ್ಟಿಕೊಂಡು ಕೆರೆಯ ಕಡೆಯಿಂದ ದಡದತ್ತ ನಿಧಾನ ನಡೆದುಬರುತ್ತಾರೆ. ಆಮೆಯು ಯಾವುದೋ ಗಿಡ ಎಂದು ಬಾವಿಸಿ ಅರಾಮವಾಗಿರುತ್ತದೆ. ಹಾಗೆ ಆರಾಮವಾಗಿರುವ ಮರುಕ್ಷಣ ಆಮೆ ಬೇಟೆಗಾರನ ಚೀಲ ಸೇರುತ್ತದೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ಬೇಟೆಗಾರರು ಚೀಲ ಭರ್ತಿಯಾದೊಡನೆ ನಗುನಗುತ್ತಾ ಮನೆ ಸೇರುತ್ತಾರೆ. ಇದು ಪ್ರಕೃತಿಯ ಆಹಾರ ಚಕ್ರ. ಒಂದು ಜೀವಿಯ ಸಾವು ಮತ್ತೊಂದು ಜೀವಿಯಲ್ಲಿ ಬದುಕು ಕಾಣಿಸುತ್ತದೆ ಎಂದು ನೋಡುಗರು ಸುಮ್ಮನಾಗಬೇಕಷ್ಟೆ.

Tuesday, December 14, 2010

ಭೀಮೇಶ್ವರದಲ್ಲಿ ಮಾರ್ಚ್ ೨ ರಿಂದ "ಅತಿರುದ್ರ ಮಹಾಯಾಗ"




ಭೀಮೇಶ್ವರ ಸಾಗರ ತಾಲ್ಲೂಕಿನ ತುಟ್ಟ ತುದಿಯ ಯಾತ್ರಾಸ್ಥಳ. ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಕೋಗಾರಿನ ಬಳಿ ಇರುವ ಈ ಕ್ಷೇತ್ರ ಆಸ್ತಿಕರ ಜತೆ ಪ್ರಕೃತಿಪ್ರಿಯರ ಮನದಾಸೆಯನ್ನು ತಣಿಸುತ್ತದೆ. ಪ್ರತೀ ವರ್ಷ ಶಿವರಾತ್ರಿಯ ಸಮಯದಲ್ಲಿ ಜಾತ್ರೆಯನ್ನು ಇಲ್ಲಿ ನಡೆಸುತ್ತಾರೆ. ಈ ಬಾರಿ ೨ ಮಾರ್ಚ್ ೨೦೧೧ ರಿಂದ ಮಾರ್ಚ್ ೮ ನೇ ತಾರೀಕಿನವರೆಗೆ ಇಲ್ಲಿ "ಸಾಂಗ ಅತಿರುದ್ರ ಮಹಾ ಯಾಗ"ವನ್ನು ಭೀಮಲಿಂಗೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದು ಯಾಗ ಶಾಂತಿ ಹವನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ., ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹ ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಸಮಿತಿಯವರು ಬಯಸಿದ್ದಾರೆ.
ಸ್ಥಳ ಪುರಾಣ: ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗ್ದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದನಂತೆ, ಆಗ ಅದು ಎರಡು ಹೋಳಾಗಿ ಒಂದು ಹೋಳು ಬಳಕೆಗೆಬಂದಿತಂತೆ, ಇನ್ನೊಂದು ಭೀಮನ ಕಾಲಿನ ಹೆಜ್ಜೆಯ ಗುರುತಿನೊಂದಿಗೆ ಅಲ್ಲಿಯೇ ಉಳಿದಿದೆ. ಇಷ್ಟಾದನಂತರ ದೇವರ ಅಭಿಷೇಕಕ್ಕೆ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೋಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ ನೂರು ಅಡಿ ಮೇಲ್ಬಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಇಂದಿಗೂ ಈ ಸರಳ ಹೊಳೆಯ ಮತ್ತೊಂದು ವಿಶೇಷವೆಂದರೆ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. ಭೀಮಲಿಂಗೇಶ್ವರ ದೇವಸ್ಥಾನ ಹಿಂಬಾಗ "ಹಿಡಿಂಬಾ" ವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿತುಳುಕಾಡುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರ್ಚಕರು ಭೀಮೇಶ್ವರ : ೦೮೧೮೬-೨೧೦೯೬೬ - ೯೪೪೯೭೭೬೭೨೯

Sunday, December 12, 2010

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

ನಿಮ್ಮ ಗಮನಕ್ಕೆ - 2) : ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರ (ಮತ್ತು ನಮಗೆಲ್ಲ ತೀವ್ರ ಅಸಮಾಧಾನಕರ) ಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತಿದ್ದಾರೆ, ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’, ರವಿ ಬೆಳಗೆರೆಯವರ ಸಾಪ್ತಾಹಿಕ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಅಂಕಣಗಳೂ ನಿಂತು ಹೋಗಿವೆ. ’ಪರಾಗ ಸ್ಪರ್ಶ’ ಅಂಕಣ?- stay tuned for further announcement...

ಹೀಗೆ ಈ ವಾರದ ಪರಾಗ ಸ್ಪರ್ಷದ ಜತೆ ಶ್ರೀವತ್ಸ ಜೋಷಿಯವರು ಒಂದು ಪರ್ಸನಲ್ ಮೈಲ್ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ವಿಜಯಕರ್ನಾಟಕದಲ್ಲಿ ಅವರ ಅಂಕಣವೂ ಡೋಲಾಯಮಾನ ಅಂತಲೂ ಲೆಕ್ಕಾಚಾರಕ್ಕೆ ಇಳಿಯಬಹುದು. ಒಟ್ಟಿನಲ್ಲಿ ಕನ್ನಡದ ನಂ ೧ ಪ್ರಸಾರದ ವಿಜಯಕರ್ನಾಟಕದ ಒಳಗಡೆ ಏನೇನೋ ನಡೆದಿದೆ ಅಂತ ಪತ್ರಿಕೋದ್ಯಮದ ಆಸಕ್ತಿ ಇರುವವರಿಗೆ ಗೊತ್ತಾಗಿದೆ. ಕುಟ್ಟಿ ಕಟ್ಟಿ ಮೆಟ್ಟಿ ವಿಕ ಬೆಳಸಿದ "ವಿ ಭಟ್ರು ವಿಕ ಬಿಟ್ರು" ಎಂಬ ವಿಷಯದೊಂದಿಗೆ ಬಜ್, ಎಸ್ ಎಂ ಎಸ್ ಹರಿದಾಡಿದಾಗ ನಾನೂ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದೆ. ಆದರೆ ಬಟ್ಟೆ ಗಲೀಜಾದರೆ ಒಗೆಯಲೇ..! ಬೇಕಲ್ಲ ಅಂತ ಬೆಂಗಳೂರಿನಿಂದ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದಾಗ ಒಳಾರ್ಥ ಅರ್ಥವಾಗದೆ ಗಲಿಬಿಲಿಗೊಳಗಾದೆ. ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯನ್ನಾಧರಿಸಿ ಬಂದ ಫೋನ್ ಗಳು ಎನೇನನ್ನೋ ಹೇಳತೊಡಗಿದಾಗ "ಛೆ" ಅಂತ ನಿರ್ಲಕ್ಷ್ಯ ಮಾಡಿಬಿಟ್ಟೆ. ಕಾರಣ ಅವೆಲ್ಲಾ ದೊಡ್ಡವರ ಕತೆಗಳು ಎತ್ತರಕ್ಕೆ ಏರಿದ ಮನುಷ್ಯನ ಸುತ್ತ ಬೇಕಾದ್ದು ಬೇಡಾದ್ದು ಹುಟ್ಟಿಕೊಳ್ಳುವುದೂ ಸಹಜ. ಹಾಗೆಲ್ಲಾ ಬರೆಯುವ ಬೆಳೆಗೆರೆಯ ಬಗ್ಗೆಯೂ ನೂರಾರು ಕತೆಗಳಿವೆ, ನಾವು ಹಾಗೆ ಹುಟ್ಟುವ ಕತೆಗಳನ್ನು ತಲೆಯೊಳಗೆ ಇಟ್ಟು ಸಾಕತೊಡಗಿದರೆ ಅವರ ಬರಹಗಳನ್ನ ಸವಿಯಲು ಆಗುವುದೇ ಇಲ್ಲ ಎಂಬ ನನ್ನ ಓದುಗ ಮಿತ್ರರೊಬ್ಬರ ಮಾತು ನೆನಪು ಮಾಡಿಕೊಂಡು ಸುಮ್ಮನುಳಿದೆ.

ಏನೆಲ್ಲಾ ನಡೆಯುತ್ತದೇ ಈ ಪ್ರಪಂಚದಲ್ಲಿ ನಿತ್ಯ. ಕಾಲ ಅವನ್ನೆಲ್ಲಾ ತನಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಮುಗಳ್ನಗುತ್ತಾ ನುಂಗಿ ಮುನ್ನಡೆಯುತ್ತದೆ. ವಿಜಯ ಕರ್ನಾಟಕ ವಿ ಭಟ್ಟರೊಡನೆ ಒಂದು ದೊಡ್ಡ ಟೀಂ ಕಳೆದುಕೊಂಡಿದೆ. ಒಂದೆರಡು ದಿನ ಛೆ ಅಂತ ಅನ್ನಿಸಿ ಮತ್ತೆ ಮುನ್ನುಗ್ಗುತ್ತಿದೆ. ಹೊರ ಹೊರಟವರು ಮತ್ತೊಂದು ಪತ್ರಿಕೆ ಕಟ್ಟುತ್ತಾರಂತೆ ಎಂಬ ಸುದ್ದಿ ಸುದ್ದಿಮನೆಯ ಕತೆಯಂತೆ ಜನರ ಬಾಯಲ್ಲಿ ಹೊರಟು ನೂರೆಂಟು ಮಾತಾಗುತ್ತಿದೆ.
ನಮ್ಮೂರಿನ ಗಣಪತಿ ಭತ್ತವ ಕೊಯ್ದು ಹಸನು ಮಾಡುತ್ತಿದ್ದ. ಅವನಿಗೆ ವಿ.ಕ ಡಲ್ ಆಗಿದ್ದು ಸುದ್ದಿಯಲ್ಲ ಅದಕ್ಕೆ ಹಿಂದೆ ಚಾರ್ಮ್ ಬಂದಿದ್ದೂ ಸುದ್ದಿಯಲ್ಲ. ಲಾಭವೋ ನಷ್ಟವೋ ಅವನು ಪ್ರತೀ ವರ್ಷ ಭತ್ತ ಬಿತ್ತುತ್ತಾನೆ ಅಕ್ಕಿ ಬೆಳೆಯುತ್ತಾನೆ. ಅವನಿಗೆ ಸಿಟ್ಟು ಬಂದು ಭತ್ತ ಬೆಳೆಯುವುದ ನಿಲ್ಲಿಸುವವರಿಗೂ ನಮ್ಮ ತಾಕತ್ತು ಹೀಗೆ ಮುಂದುವರೆಯುತ್ತದೆ.

Thursday, December 2, 2010

ಜೋಗಕ್ಕೆ ಈಗ "ಹೋಂ ಸ್ಟೇ"ಗಳ ಮೆರುಗು



ಪ್ರವಾಸ ಎಂದರೆ ಮೋಜು ಮಜ ಮಸ್ತಿ. ನಿತ್ಯ ಜಂಜಡದಿಂದ ದೂರವಾಗಿ ಮನಸ್ಸಿಗೆ ಮುದಕೊಡಲು ಮನುಷ್ಯ ಆರಿಸಿಕೊಂಡ ಮಾರ್ಗ. ಪ್ರವಾಸಿಗರು ಅವರವರ ಅಭಿರುಚಿಗನುಗುಣವಾಗಿ ಪ್ರವಾಸಿ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ದೇವಸ್ಥಾನಗಳು, ಪ್ರಕೃತಿ ನಿರ್ಮಿತ ಗುಡ್ಡಬೆಟ್ಟಗಳು, ನದಿತೊರೆಗಳು ಜಲಪಾತಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆ ಕಾರಣಕ್ಕಾಗಿ ಪ್ರವಾಸಿಗರ ದಾಹ ಇಂಗಿಸಲು ನೂರಾರು ಪ್ರೇಕ್ಷಣೀಯ ತಾಣಗಳು ಇವೆ. ಅವುಗಳಲ್ಲಿ ಮನುಷ್ಯ ನಿರ್ಮಿತ ಪ್ರಕೃತಿನಿರ್ಮಿತ ಎಂಬ ವಿಂಗಡನೆಯೊಂದಿಗೆ ವೀಕ್ಷಕರ ಮನ ತಣಿಸುತ್ತದೆ. ಆದರೆ ಅಲ್ಲಿ ಮೂಲ ಸೌಲಭ್ಯ ಇದೆಯೇ ಇದ್ದರೆ ಹೇಗಿದೆ ಎಂಬಂತಹ ಪ್ರಶ್ನೆ ಅಲ್ಲಿಗೆ ಹೋಗುವ ಮೊದಲು ಕಾಡುವ ಸಮಸ್ಯೆ. ಅಂತಹ ನೋಡಬೇಕಾದ ಜಾಗಗಳು ಮಾತ್ರಾ ಸುಂದರವಿದ್ದರೆ ಸಾಲದು ಅಲ್ಲಿನ ಸೌಲಭ್ಯವೂ ಸುಂದರ ಎನ್ನುವ ಪ್ರವಾಸಿಗರ ಮನದಾಸೆಗೆ ಹುಟ್ಟಿಕೊಂಡ ವ್ಯವಸ್ಥೆಯೆ ಹೋಂ ಸ್ಟೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ "ಬ್ರೆಡ್ ಎಂಡ್ ಬ್ರೇಕ್ ಫಾಸ್ಟ್" ಎಂಬ ಹೆಸರಿನೊಂದಿಗೆ ಚಾಲ್ತಿಗೆ ಬಂದ ವಸತಿ ವ್ಯವಸ್ಥೆ ಇದು. ಪ್ರವಾಸಿ ತಾಣಗಳಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಅತಿಥಿಗಳಿಗೆ ಉಳಿಯಲು ಅವಕಾಶ ಮಾಡಿಕೊಟ್ಟು ಅದಕ್ಕೆ ತಕ್ಕುದಾದ ಹಣವನ್ನು ಪಡೆಯುವ ವ್ಯವಸ್ಥೆಗೆ ನಮ್ಮ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಂಕಿತ ನೀಡಿ ಪ್ರೋತ್ಸಾಹಿಸಿತು. ಅದರ ಪರಿಣಾಮ ಕೊಡಗು ಮಡಕೇರಿಗಳಲ್ಲಿ ದಶಕಗಳ ಹಿಂದೆಯೇ ನೂರಾರು ಹೋಂ ಸ್ಟೇ ಗಳು ಕಾರ್ಯಾರಂಬಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಮಲೆನಾಡಿನ ಜೋಗ ಜಲಪಾತದ ಸುತ್ತ ಆರಂಭವಾಗಿದ್ದು ಎರಡು ವರ್ಷಗಳ ಈಚೆಗೆ.
ಜೋಗ ಜಲಪಾತದ ಬಗ್ಗೆ "ಕಣ್ಣಿಗೆ ತಂಪು ಹೊಟ್ಟೆಗೆ ಕಿಚ್ಚು" ಎಂಬ ವಾಕ್ಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಅದಕ್ಕೆ ಕಾರಣ ಎಲ್ಲಾ ಸರ್ಕಾರಿ ಕೃಪಾಪೋಷಿತ ವಸತಿ ಊಟ ವ್ಯವಸ್ಥೆ. ಯೂತ್ ಹಾಸ್ಟೆಲ್ ಯುವಕರಿಗೆ ಇನ್ನುಳಿದ ಪ್ರವಾಸಿ ಬಂಗಲೆಗಳು ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮೀಸಲಾಗಿದ್ದರಿಂದ ಸಾರ್ವಜನಿಕರು ವಸತಿ ಹಾಗೂ ಉತ್ತಮ ಊಟಕ್ಕೆ ಪರದಾಡಬೇಕಾಗಿತ್ತು. ಹಾಗಾಗಿ ಜನಸಾಮಾನ್ಯರಿಗೆ ಸೂಕ್ತ ವಸತಿ ಊಟ ಜೋಗದಲ್ಲಿ ಇತ್ತೀಚಿನವರೆಗೂ ಇರಲಿಲ್ಲ. ಆದರೆ ಹೋಂ ಸ್ಟೇಗಳು ಕಾರ್ಯಾರಂಭ ಮಾಡಿದ ನಂತರ ಈಗ ಆ ವಾಕ್ಯ ಬದಲಾಗುತ್ತಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಮರ್ಪಕವಾಗಿ ಸ್ಪಂದಿಸಿದ ಪರಿಣಾಮವಾಗಿ ಈ ಎರಡು ವರ್ಷಗಳ ಈಚೆಗೆ ಜೋಗದ ಸುತ್ತ ಪ್ರಾರಂಭವಾದ ಹೋಂ ಸ್ಟೇ ಗಳು ಜೋಗ ಜಲಪಾತಕ್ಕೆ ಮೆರುಗು ನೀಡುತ್ತಿವೆ. ಅವುಗಳ ಚಿಕ್ಕ ಮಾಹಿತಿ ಇಲ್ಲಿದೆ.
ಮತ್ತುಗ
ಜೋಗದಿಂದ ಎಂಟು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ ೨೦೬ ರ ಪಕ್ಕದಲ್ಲಿ ಮನಮನೆ ಎಂಬ ಊರಿನ ಬಳಿ ಸಿಗುವ ಸುಸಜ್ಜಿತ ಹೋಂ ಸ್ಟೇ ಇದು. ಶ್ರೀ ನರಹರಿ ಹಾಗೂ ಕಾಮಾಕ್ಷಿ ದಂಪತಿಗಳು ಈ ಹೋಂ ಸ್ಟೆಯ ಯಜಮಾನರು. ಹತ್ತು ಎಕರೆ ವಿಶಾಲವಾದ ಅಡಿಕೆ ಏಲಕ್ಕಿ ಕಾಫಿ ತೋಟಗಳ ನಡುವೆ ಇರುವ "ಮತ್ತುಗ" ಕಳೆದೆರಡು ವರ್ಷದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಂದುಬಾರಿಗೆ ೨೨ ಜನರ ಆತಿಥ್ಯಕ್ಕೆ ಇಲ್ಲಿ ವ್ಯವಸ್ಥೆಯಿದೆ. ಒಮ್ಮೆಲೆ ಮೂರ್ನಾಲ್ಕು ಕುಟುಂಬಗಳೂ ಇಲ್ಲಿ ತಂಗಬಹುದು. ಶಾಖಾಹಾರಿ ಊಟ ಹಾಗೂ ಸುಸಜ್ಜಿತ ಕೊಠಡಿಗಳು ಎಲ್ಲವೂ ಪ್ರಥಮ ದರ್ಜೆಯದು. ಸಂಪರ್ಕ: Tel: 08183-207581 / 94480 68870 email: stay@matthuga.in Web: http://matthuga.in
ನಮ್ಮನೆ
ಜೋಗದಿಂದ ಏಳು ಕಿಲೋಮೀಟರ್ ಹಿಂದೆ ರಾಷ್ಟೀಯ ಹೆದ್ದಾರಿ ೨೦೬ ರ ಪಕ್ಕದಲ್ಲಿ ತಲವಾಟ ಎಂಬ ಊರಿನಲ್ಲಿರುವ ಉಳಿಮನೆ ಇದು. ಶ್ರೀ ಜಯಕೃಷ್ಣ ಹಾಗೂ ಸ್ನೇಹಿತರು ಈ ಹೋಂ ಸ್ಟೇ ಯ ನಿರ್ವಾಹಕರು. ಸಂಪೂರ್ಣ ಮಲೆನಾಡು ಶೈಲಿಯ ಮನೆಯ ಈ ಹೋಂ ಸ್ಟೇಯಲ್ಲಿ ಮೂರು ರೂಂಗಳಿದ್ದು ಒಮ್ಮೆ ೧೨ ಜನರ ವರೆಗೂ ಉಳಿಯಲು ಅವಕಾಶವಿದೆ. ಎಲ್ಲಾ ಹೋಂ ಸ್ಟೆಗಳಿಗಿಂತ ತುಸು ಭಿನ್ನವಾಗಿರುವ ಇದು ಅತಿಥಿಗಳಿಗೆ ಅವರದೇ ಮನೆಯಲ್ಲಿ ವಾಸವಾದ ಅನುಭವಕ್ಕಾಗಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.ಕಾಡಿನ ನಡುವೆ ಒಂಟಿಮನೆಯ ಅನುಭವ ನೀಡುವ ಇದು ಪ್ರಶಾಂತ ವಾತಾವರಣ ಹೊಂದಿದೆ. ಒಂದು ಬಾರಿ ಒಂದು ಕುಟುಂಬ ಎಂಬ ನಿಯಮ ಇಲ್ಲಿಯದು. ಮಲೆನಾಡು ಶೈಲಿಯ ಸಸ್ಯಹಾರಿ ಭೋಜನ ಇಲ್ಲಿನ ಹೆಗ್ಗಳಿಕೆ. ¥sÉÆÃ: 08183207361-9342253240 Email: ulimane@gmail.com
ಗುಂಡಿಮನೆ
ಜೋಗದಿಂದ ಭಟ್ಕಳ ಮಾರ್ಗದಲ್ಲಿರುವ ಈ ಹೋಂ ಸ್ಟೇ ಜೋಗದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ಶ್ರೀ ಗಣಪತಿ ರಾವ್ ದಂಪತಿಗಳು ಇದರ ನಿರ್ವಾಹಕರು. ಶರಾವತಿ ನದಿಯ ಹಿನ್ನೀರಿನ ಸಮೀಪವಿರುವ ಈ ಹೋಂ ಸ್ಟೆ ಕಾಡುಗಳ ನಡುವೆ ಇದ್ದು ಪ್ರಕೃತಿಪ್ರಿಯರ ಏಕಾಂತ ಧ್ಯಾನಕ್ಕೆ ಹೇಳಿಮಾಡಿಸಿದ ಸ್ಥಳ. ಸುಂದರ ಬೆಟ್ಟಗುಡ್ಡಗಳ ನಡುವೆ ವಿಹಂಗಮ ದೃಶ್ಯ ಇಲ್ಲಿನ ಹಿರಿಮೆ. ಮಲೆನಾಡು ಸಸ್ಯಾಹಾರಿ ಊಟೋಪಚಾರ ಇಲ್ಲಿನ ಆಕರ್ಷಣೆ. ಫೋನ್: 9900956760, - 08186-243131 Email: gundimane@gmail.com . http://ulimane.blogspot.com Web: http://www.gundimane.com

ಶರಾವತಿ ಪ್ರಕೃತಿ ಶಿಬಿರ
ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿರುವ ಈ ವಸತಿ ವ್ಯವಸ್ಥೆ ಸಾರ್ವಜನಿಕರಿಗೂ ಮುಕ್ತ. ನಾಲ್ಕು ಮಧ್ಯಮ ತರಗತಿಯ ಕುಟೀರ ಹಾಗೂ ಎರಡು ಲಕ್ಷುರಿ ಕುಟೀರವನ್ನು ಹೊಂದಿರುವ ಪ್ರಕೃತಿ ಶಿಬಿರ ಜಲಪಾತಕ್ಕೆ ಅತೀ ಸನಿಹದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರಕುವ ವಸತಿ ನಿಲಯ. ಇಲ್ಲಿ ಶಾಖಾಹಾರಿ ಹಾಗೂ ಮಾಂಸಹಾರಿ ಊಟದ ವ್ಯವಸ್ಥೆ ಇದೆ. ಮುಂಗಡ ಕಾಯ್ದಿರಿಸುವ ವ್ಯವಸ್ಥೆಯಿದೆ. ಸಂಪರ್ಕ: ನಾರಾಯಣ್: ೯೪೪೯೬೧೮೦೫೬ ಮಂಜುನಾಥ್: ೯೪೮೧೩೪೯೧೩೩
ಹೊನ್ನೇಮರಡು

ದಿ ಅಡ್ವೆಂಚರರ್ಸ್ ನ ಎಸ್.ಎಲ್.ಎನ್. ಸ್ವಾಮಿ ಹಾಗೂ ನೊಮಿತೋ ದಂಪತಿಗಳ ನೇತೃತ್ವದ ಸಾಹಸ ಶಿಕ್ಷಣ ಸಮನ್ವಯ ಕೇಂದ್ರವಾದ ಹೊನ್ನೇಮರಡು ಜೋಗಕ್ಕೆ ೧೦ ಕಿ.ಮೀ ಹಿಂದೆ ಸಿಗುತ್ತದೆ. ಮುಂಗಡ ಕಾಯ್ದಿರಿಸುವ ಪ್ರವಾಸಿಗರಿಗೆ ಇಲ್ಲಿ ಕಯಾಕಿಂಗ್, ಸ್ವಿಮ್ಮಿಂಗ್ ಜತೆ ಕಾಡಿನಲ್ಲಿ ಟ್ರಕ್ಕಿಂಗ್ ಹಾಗೂ ನಡುಗುಡ್ಡೆಯಲ್ಲಿ ಟೆಂಟ್ ಹಾಕಿ ಕ್ಯಾಂಪ್ ಫೈರ್ ಮುಂತಾದ ವ್ಯವಸ್ಥೆ ಲಭ್ಯ. ಊಟ ವಸತಿ ಜತೆ ಇಲ್ಲಿ ಪರಿಸರ ಶಿಕ್ಷಣವೂ ಲಭ್ಯ. ಫೋ: ೦೮೧೮೩-೨೦೭೭೪೦
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Friday, November 26, 2010

ಬದಲಾಗುತ್ತಿವೆ "ಮಸಣದ ಮಾತುಗಳು"

ನಲವತ್ತು ವರ್ಷದ ದೃಢಕಾಯನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ತಂದೆ ತಾಯಿ ಬಂಧು ಬಳಗದ ಜತೆ ಹೆಂಡತಿ ಹಾಗೂ ಮಗುವನ್ನು ಅಗಲಿಹೋಗಿದ್ದಾನೆ. ಶೋಕ ಮನೆಯಲ್ಲಿ ಮಡುಗಟ್ಟಿದೆ. ರೋಧನ ತಾರಕಕ್ಕೇರಿದೆ. ಸಮಾಧಾನ ಸಂತಾಪ ಎಲ್ಲಾ ಅಸಾಹಾಯಕ ಕೆಲಸಗಳಂತೆ ನಡೆಯುತ್ತಿವೆ. ಜೀವವಿಲ್ಲದ ದೇಹ ಎಷ್ಟು ಹೊತ್ತು ಹಾಗೆಯೇ ಇರಲು ಸಾಧ್ಯ?. ಆ ಕಾರಣಕ್ಕಾಗಿ ಅಳುವವರ ನಡುವೆಯೇ ಚಿತೆಯೂ ಸಿದ್ಧವಾಗಿ ದೇಹಕ್ಕೆ ಅಗ್ನಿ ಇಡಲು ಸಿದ್ದತೆಯಾಗುತ್ತಿದೆ.
ಈ ಘಟನೆ ನಡೆದು ಆರು ತಿಂಗಳ ನಂತರ ಅದೇ ಮನೆಯಲ್ಲಿ ಮತ್ತೆ ಮದುವೆಯೊಂದರ ಸಿದ್ಧತೆ ನಡೆದಿದೆ. ಕಳೆದುಕೊಂಡ ಮಗನ ಸ್ಥಾನಕ್ಕೆ ಬದುಕುಳಿದ ಸೊಸೆಗೆ ಕಂಕಣ ಭಾಗ್ಯ ನೀಡುವುದರ ಜತೆ ಇಲ್ಲದ ಮಗನನ್ನು ಯಾರಲ್ಲೋ ಕಾಣುವ ತೀರ್ಮಾನಕ್ಕೆ ಅಪ್ಪ ಅಮ್ಮ ಬಂದಿದ್ದಾಗಿದೆ. ಮಗನ ಮದುವೆಯಷ್ಟು ಸಡಗರ ಸಂಭ್ರಮ ಇಲ್ಲ ನಿಜ ಆದರೆ ತೀರಾ ನೀರಸವಲ್ಲದ ಕಾರ್ಯಕ್ರಮದ ಮುಖಾಂತರ ಮದುವೆ ನಡೆಯುತ್ತದೆ.
ಇದು ಯಾವುದೇ ಸಿನೆಮಾದ ಕತೆಯಲ್ಲ. ಈ ದಶಕಗಳಲ್ಲಿ ನೈಜ ಘಟನೆಯ ಸಂಕ್ಷಿಪ್ತ ರೂಪ. ಇದೇ ಸಾವು ನೂರು ವರ್ಷದ ಹಿಂದಿನದಾಗಿದ್ದರೆ ಪತಿಯ ಜತೆ ಸತಿ ಸಹಗಮನಕ್ಕೆ ಸಜ್ಜಾಗಬೇಕಾಗಿತ್ತು. ಎಪ್ಪತ್ತೈದು ವರ್ಷಗಳ ಹಿಂದೆ ಆಗಿದ್ದರೆ ಪತ್ನಿ ತಲೆಕೂದಲು ಬೋಳಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆಯನ್ನುಟ್ಟು ಜೀವಮಾನ ಪೂರ್ಣ ವೈಧವ್ಯಕ್ಕೆ ಬಲಿಯಾಗಬೇಕಾಗಿತ್ತು. ಐವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದರೆ ಸಕೇಶಿ ಸರಿ ಆದರೆ ಮತ್ತೊಂದು ಮದುವೆ ಅಸಾದ್ಯದ ಮಾತು. ಹೀಗೆ ಆಯಾ ಕಾಲಘಟ್ಟದಲ್ಲಿ ಮನುಷ್ಯನ ಅರಿವು ಎಂಬುದು ಜಾಸ್ತಿಯಾಗಿ ಭಾರತದಂತಹ ಸಂಪ್ರದಾಯ ಬದ್ಧ ದೇಶದಲ್ಲಿನ ಅನಿಷ್ಠ ಪದ್ಧತಿಯೊಂದು ತನ್ನಷ್ಟಕ್ಕೆ ತಾನೇ ಸತ್ಯವನ್ನು ಕಂಡುಕೊಂಡು ಕುಸಿದುಹೋಗುತ್ತಿದೆ.

ಕಾಲ ದ ಶಕ್ತಿ ಅಗಾಧ. ಎಲ್ಲವನ್ನೂ ನುಂಗುತ್ತಾ ಶರವೇಗದಿಂದ ಮುನ್ನುಗ್ಗುವ ಕಾಲದೆದುರು ಮನುಷ್ಯನ ವೇಗ ಅರ್ಥಕಳೆದುಕೊಂಡುಬಿಡುತ್ತದೆ. ನಂಬಿಕೆಯ ಅಡಿಯಲ್ಲಿ ಬದುಕು ಸಾಗಿಸುವ ಮನುಷ್ಯ ಪ್ರಕೃತಿಯ ಅಡಿಯಲ್ಲಿನ ಜೀವಿಯಾಗಿ ಒಮ್ಮೊಮ್ಮೆ ಅಸಾಹಾಯಕನಂತೆ ಅನ್ನಿಸಿದರೂ ಅವನ ಸಾಹಸ ಮತ್ತದೇ ಪ್ರಕೃತಿಯ ಅಡಿಯಾಳಿನ ನಿರ್ಧಾರವೇ ಆಗಿದೆ ಎಂಬುದು ವಾಸ್ತವ. ಮನುಷ್ಯನ ಜೀವನದ ಮಟ್ಟಕ್ಕೆ ಯೋಚಿಸುವುದಾದರೆ ಅವನ ನಂಬಿಕೆಗೂ ಮೂಢನಂಬಿಕೆಗೂ ಕಾಲಕ್ಕೂ ಬಿಡಿಸಲಾರದ ನಂಟು. ನಂಬಿಕೆಯೇ ಜೀವನ ನಿಜ. ಆದರೆ ತನ್ನ ಜೀವನ ಸುಗಮವಾಗಿಸಲು ನಂಬಿದ ತತ್ವ ಸಿದ್ಧಾಂತಗಳೆಲ್ಲ ಸಮರ್ಪಕವಾದುದಲ್ಲ ಎಂಬ ಅರಿವು ಮೂಡಿ ಬದಲಾಯಿಸಿಕೊಂಡು ಸರಿದಾರಿಗೆ ಬರಲು ಮನುಷ್ಯ ತೆಗೆದುಕೊಂಡ ಕಾಲ ಅತೀ ದುಬಾರಿಯಾಗಿಬಿಡುತ್ತದೆ ಒಮ್ಮೊಮ್ಮೆ. ಅಂತಹ ಒಂದು ವಿಷಯವೇ ವಿಧವೆ ಎಂಬ ಪಟ್ಟ.
ಕಾಲವೊಂದಿತ್ತು,ಅದು ಶತಮಾನಗಳ ಹಿಂದಿನದು. ಬಾಲ್ಯ ವಿವಾಹ ಪದ್ಧತಿಯೇ ಸರಿ ಎಂಬ ತೀರ್ಮಾನದ್ದು. ಆ ಕಾಲದಲ್ಲಿ ಗಂಡ ಸಾವಿಗೀಡಾದರೆ ಜತೆಜತೆ ಯಲ್ಲಿಯೇ ಸತಿ ಸಹಗಮನ ಮಾಡಬೇಕಾಗಿತ್ತು. ಹೆಣ್ಣೆಂಬ ಜೀವಿಗೆ ಯಾವ ಅಧಿಕಾರವೂ ಇರಲಿಲ್ಲ. ಅದು ಗಂಡಿನ ದೌರ್ಜನ್ಯವೆನ್ನಿ, ಮನು ಸ್ಮೃತಿಯ ಅನುಷ್ಠಾನವೆನ್ನಿ ಪರಿಣಾಮ ಮಾತ್ರಾ ಹೆಣ್ಣಿನ ಮೇಲೆಯೇ ಎಂಬುದು ಸರ್ವವಿಧಿತ. ಹತ್ತು ವರ್ಷದ ಹೆಣ್ಣಿಗೆ ನಲವತ್ತು ವರ್ಷದ ಗಂಡು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಬದುಕಿಬಾಳಬೇಕಾಗಿದ್ದ ಆರೋಗ್ಯವಂತ ಹೆಣ್ಣೂ ಕೂಡ ಆಯುಷ್ಯ ಮುಗಿದು ಸತ್ತ ಗಂಡನೊಂದಿಗೆ ಚಿತೆ ಏರಬೇಕಾಗಿತ್ತು. ಮನಸ್ಸಿನಾಳದಲ್ಲಿ ಅದುವೇ ಸ್ವರ್ಗದ ರಹದಾರಿ, ಅದುವೇ ಧರ್ಮ,ನೀತಿ ಎಂದು ಬಿಂಬಿಸಲಾಗಿದ್ದರಿಂದ ಜ್ಞಾನದ ಮಟ್ಟ ಕಡಿಮೆಯಿದ್ದ ಹೆಣ್ಣುಗಳ ಜೀವನ ಆಹುತಿಯಾಗುತಿತ್ತು. ಜೀವವನ್ನು ತ್ಯಜಿಸಲು ಹೆಣ್ಣು ಜೀವ ಅದೆಷ್ಟು ಹೋರಾಡಿತೋ ಬಲ್ಲವರ್ಯಾರು.?
ಕಾಲ ಬದಲಾಯಿತು ಎನ್ನುವ ವಾಕ್ಯ ಸಮರ್ಪಕವಲ್ಲದಿದ್ದರೂ ವಾಡಿಕೆಯಂತೆ ಸರಿ. ಕಾಲದ ಜತೆ ಓಡುತ್ತಿದ್ದ ಜನರ ಭಾವನೆ ಕೊಂಚ ಸುಧಾರಿಸಿತು. ಬಾಲ್ಯವಿವಾಹ ಪದ್ಧತಿ ಹಾಗೆಯೇ ಉಳಿದರೂ ಜ್ಞಾನಿಗಳ ಅಣತಿಯತೆ ಮಾನವೀಯ ಗುಣಗಳ ಜನರ ಭಾವನೆಯಂತೆ ಸತಿಪದ್ಧತಿ ಮಾಯವಾಯಿತು. ಸತಿಸಹಗಮನ ಪದ್ದತಿ ಮಾಯವಾಗಲು ತೆಗೆದುಕೊಂಡ ಕಾಲ ದೀರ್ಘದ್ದು. ಅದೇನೋ ಮಾಯವಾಯಿತು ಸರಿ ಆದರೆ ಅಷ್ಟೇ ಪ್ರಮಾಣದ ಬದುಕಿನುದ್ದಕ್ಕೂ ಹೆಣ್ಣನ್ನು ಹಿಂಸಿಸುವ ವೈಧವ್ಯ ಪದ್ದತಿಯ ಆಚರಣೆ ಇನ್ನಷ್ಟು ಕಟ್ಟುಪಾಡುಗಳನ್ನು ಹೊತ್ತು ಜಾರಿಗೆ ಬಂತು. ಅಲ್ಲಿಯ ತನಕ ಹೆಣ್ಣು ಹೆತ್ತವರು ಅಳಿಯನ ಅಕಾಲಿಕ ಸಾವಿನ ಜತೆ ಮಗಳ ಚಿತೆಯೇರುವ ದು:ಖವನ್ನೂ ಭರಿಸಬೇಕಾಗಿತ್ತು. ಆನಂತರ ಮಗಳ ವೈಧವ್ಯದ ಬಾಳಿನ ಬಗ್ಗೆ ಮರುಕಪಡುವಷ್ಟರ ಮಟ್ಟಿಗೆ ಇಳಿಯಿತು.
ಕಾಲ ಮತ್ತಷ್ಟು ಸರಿಯಿತು. ಸತಿಪದ್ಧತಿ ಅಳಿಯಲು ರಾಜಾರಾಂ ಮೋಹನ್ ರಾಯ್, ಮೀರಾ ಬಾಯಿ ಮುಂತಾದ ಸಮಾಜ ಸೇವಕರು ಕಾರಣ ರಾದರೆ ಅನಂತರದ ವೈಧವ್ಯ ಪದ್ಧತಿ ಅಳಿಯಲು ಸಾಹಿತಿಗಳು ಚಲನಚಿತ್ರಗಳು ಕಾರಣವಾಗಿದ್ದು ವಿಶೇಷ. ಮಾದ್ಯಮಗಳು ಚುರುಕಾಗಿದ್ದು ಸುಮಾರು ಐವತ್ತರ ದಶಕದಲ್ಲಿ. ನೂರಾರು ಮಡಿಸೀರೆ ಮಹಿಳೆಯ ಭಾವಗಳನ್ನು ಪಣಿಯಮ್ಮ ಹೊತ್ತು ಚಲನಚಿತ್ರ ರೂಪದಲ್ಲಿ ಜನರ ಮನಸನ್ನು ತಲುಪುವಂತಾಯಿತು. ವಿಧವೆಯರ ಬದುಕುಬವಣೆಯನ್ನು ಹೊತ್ತ ಕಾದಂಬರಿ ಕತೆಗಳ ಮಹಾಪೂರವೇ ಹರಿದು ಬಂತು. ತತ್ಪರಿಣಾಮವಾಗಿ ಗಂಡ ಸತ್ತ ಮಹಿಳೆಯ ಕೂದಲು ಬೋಳಿಸುವ ಕ್ರಿಯೆ ಅನಿಷ್ಟದ್ದು ಎಂಬ ವಿಷಯ ಜನಜನಿತವಾಗಿ ತನ್ನಷ್ಟಕ್ಕೆ ನಿಂತುಹೋಯಿತು.
ಕೂದಲು ಕಳೆದುಕೊಳ್ಳುವ ಕ್ರಿಯೆಯಷ್ಟೆ ನಿಂತಿತಷ್ಟೆ ಆದರೆ ಸಕೇಶಿವಿಧವೆಯರ ಕಷ್ಟ ಮೊದಲಿನಿಗಿಂತ ಹೆಚ್ಚಿನ ಸುಧಾರಣೆಯಾಗಿರಲಿಲ್ಲ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಕೂದಲು ಕರಿಮಣಿ ಕುಂಕುಮ ಎಂಬ ಮುತ್ತೈದೆ ಭಾಗ್ಯ ಹೊಂದಿದವರಿಂದ ಈ ಮೂರನ್ನು ಇಟ್ಟುಕೊಂಡು ಆದರೆ ಗಂಡನನ್ನು ಕಳೆದುಕೊಂಡ ಮಹಿಳೆ ನಿಕೃಷ್ಟಕ್ಕೆ ಒಳಗಾಗುತ್ತಿದ್ದಳು. ಕುಂಕುಮದ ಬದಲು ಕಾಡಿಗೆ, ಕರಿಮಿಣಿಯ ಬದಲು ಸರ ಮುಂತಾದ ಸಣ್ಣಪುಟ್ಟ ವ್ಯತ್ಯಯಗಳನ್ನು ಸಕೇಶಿ ವಿಧವೆ ಅನುಭವಿಸಬೇಕಾಗಿತ್ತು. ಆದರೆ ಕಾಲನ ಹೊಡತಕ್ಕೆ ನಿಧಾನಗತಿಯಲ್ಲಿ ಬದಲಾವಣೆ ಚಾಲ್ತಿಗೆ ಬಂತು. ಶ್ಲೋಕವೊಂದರ "ನಸ್ತ್ರೀ ಸ್ವಾತಂತ್ರ್ಯ ಮರ್ಹತಿ" ಎಂಬಷ್ಟೇ ಸಾಲುಗಳನ್ನ ಆರಿಸಿಕೊಂಡ ಪುರುಷಪ್ರಧಾನ ಸಮಾಜ ಸ್ತೀ ಗೆ ತನಗೆ ಗೊತ್ತಿಲ್ಲದಂತಯೇ ತಲೆಬಾಗಿತು.
ಸತಿಪದ್ದತಿಯಿಂದ ಸಕೇಶಿ ವಿಧವೆ ಪದ್ದತಿಯ ಆಚರಣೆಗೆ ತೆಗೆದುಕೊಂಡ ಕಾಲ ದೀರ್ಘವಾಗಿದ್ದರೂ ನಂತರ ವಿಧವಾ ವಿವಾಹಕ್ಕೆ ಅತಿ ಶೀಘ್ರ ನಿರ್ಧಾರಕ್ಕೆ ಬಂತು ಸಮಾಜ.
ಮಹಿಳೆಯರ ಪಾಲಿಗೆ ಈಗಿನ ಕಾಲ ಒಂದು ದೃಷ್ಟಿಯಲ್ಲಿ ಸಮೃದ್ಧಿಯದು ಅನ್ನಬೇಕು. ಅನಿಷ್ಠ ಪದ್ದತಿಯನ್ನು ಪ್ರಕೃತಿಯ ಸಹಾಯದಿಂದಲೋ ಅಥವಾ ಮನುಜನ ಅನುಭವದಿಂದಲೋ ಮಹಿಳೆ ಗೆದ್ದಿದ್ದಾಳೆ. ಸಂಗಾತಿಯ ಆಯ್ಕೆಯ ವಿಷಯದಲ್ಲಿಯೂ ಈಗ ಪುರುಷರಿಗಿಂತ ಮಹಿಳೆ ಹೆಚ್ಚು ಸ್ವತಂತ್ರಳು. ಹಾಗೆಯೇ ಸಂಗಾತಿಯ ಮರಣದ ನಂತರ ಮತ್ತೆ ಮರು ಆಯ್ಕೆಯಲ್ಲಿಯೂ ಆಕೆಯದೇ ತೀರ್ಮಾನ. ಇವಕ್ಕೆಲ್ಲಾ ಪ್ರಮುಖ ಕಾರಣ ಮಹಿಳೆ ಅಡಿಗೆ ಮನೆಗೆ ಸೀಮಿತವಾಗಿರದೆ ದುಡಿಯಲು ಹೊರಟಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
ನೂರು ವರ್ಷದ ಹಿನ್ನೋಟ ಇಂದಿನ ಸ್ಥಿತಿ ಅವಲೋಕಿಸಿದಾಗ ಒಟ್ಟಾರೆ ಸಿಗುವ ಫಲಿತಾಂಶ, ಮಹಿಳೆ ಈಗಷ್ಟೆ ಪುರುಷನಷ್ಟೇ ಸಮಾನ ಅಧಿಕಾರ ಪಡೆದಿದ್ದಾಳೆ. ಅದಕ್ಕೆ ಆಕೆ ತೆತ್ತ ಬೆಲೆ ಬಹುದೊಡ್ಡದು. ಹಾಗೆಯೇ ಅದನ್ನು ಉಳಿಸಿಕೊಂಡು ಹೋಗುವ ಕ್ರಿಯೆಯೂ ಅಷ್ಟೇ ಕಠಿಣದ್ದು. ಈಗ ಗಂಡ ಸತ್ತ ಹೆಣ್ಣಿನತ್ತ ಕರುಣೆಯ ದೃಷ್ಟಿ ಬದಲಾಗಿದೆ. ಹೆಂಡತಿ ಸತ್ತ ಗಂಡನತ್ತ ಅದು ವ್ಯಕ್ತವಾಗುವತ್ತ ಹೊರಟಿದೆ. ಮುಂದಿನ ಬದಲಾವಣೆಗಳು ಮತ್ತೆ ಯಥಾಪ್ರಕಾರ ಕಾಲ ನಿಗೆ ಬಿಟ್ಟದ್ದು. ಆದರೆ ಒಂದಂತೂ ಸತ್ಯ ಇಂದು ನಾವು "ಸತಿಪದ್ದತಿಯ" ಅರ್ಥ ಹುಡುಕಲು ನಿಘಂಟು ತಡಕಾಡಿದಂತೆ ಮುಂದಿನ ತಲೆಮಾರಿನ ಜನರು "ವೈಧವ್ಯ" ಎಂಬ ಪದಕ್ಕೆ ನಿಘಂಟು ಹುಡುಕುವಂತಾಯಿತು. ಕಾಲ ಸಂದಂತೆ ಇನ್ನಷ್ಟು ಹೊಸ ಸಮಸ್ಯೆ ಹುಟ್ಟಿಕೊಳ್ಳಬಹುದು ಆದರೆ ಇವತ್ತು ಗಂಡನ ಹೆಣ ಚಿತೆಯೇರುತ್ತಿದ್ದಂತೆ ಮಸಣಕ್ಕೆ ಬಂದಿರುವ ರಕ್ತ ಸಂಬಂಧಿಗಳಲ್ಲದವರು ತಮ್ಮ ಪೈಕಿ ಮದುವೆಯಾಗದೆ ಉಳಿದಿರುವ ಗಂಡಿನ ನೆನಪು ಮಾಡಿಕೊಳ್ಳುವಷ್ಟರ ಮಟ್ಟಿಗಿನ ಸುಧಾರಣೆಗೆ ನಮ್ಮ ಹೆಗಲನ್ನೇ ನಾವು ಧೈರ್ಯವಾಗಿ ತಟ್ಟಿಕೊಳ್ಳಬಹುದು. ಜೈ ಎನ್ನೋಣ ಅನಿಷ್ಟ ಹೋಗಿದ್ದಕ್ಕೆ.

Monday, November 8, 2010

ಕೈಗೆಟುಕದ ಲೇಡಿಸ್ ಫಿಂಗರ್


ತರಕಾರಿಯ ದರ ಆಕಾಶಕ್ಕೆ ಏರಿದೆ ಅಂತ ಗೊಣಗುಟ್ಟುವ ಜನರಿಗೆ ಯಾವತ್ತೂ ಕಡಿಮೆಯಿಲ್ಲ. ಇಲ್ಲೊಂದು ಬೆಂಡೆಗಿಡ ಆ ಮಾತಲ್ಲಿನ ಆಕಾಶಕ್ಕೆ ಎಂಬಷ್ಟೆ ಶಬ್ಧವನ್ನು ಅದೆಲ್ಲಿಯೋ ಕೇಳಿಸಿಕೊಂಡಿರಬೇಕು. ಹಾಗಾಗಿ ಎದೆಮಟ್ಟಕ್ಕೆ ಬೆಳೆದು ಫಸಲು ನೀಡಬೇಕಾಗಿದ್ದ ಬೆಂಡೆ ಗಿಡ ಬೆಳೆಯುತ್ತಲೇ ಸಾಗಿದೆ. ಅದೂ ಅಂತಿತಹ ಎತ್ತರವಲ್ಲ ಅನಾಮತ್ತು ಹದಿನೈದು ಅಡಿ. ಸಾಮಾನ್ಯವಾಗಿ ಬೆಂಡೆಗಿಡ ಎಂದರೆ ಮೂರ್ನಾಲ್ಕು ಅಡಿ ಎತ್ತರಕ್ಕೆ ಏರಿ ಗಣ್ಣು ಗಣ್ಣಿಗೂ ಕಾಯಿಬಿಟ್ಟು ಮನುಷ್ಯರ ಹೊಟ್ಟೆ ತಂಪಾಗಿಸುತ್ತದೆ. ಆದ್ರೆ ಈ ಗಿಡಕ್ಕೆ ಅದೇನನ್ನಿಸಿತೋ ಏನೋ ಬೆಳೆಯುತ್ತಲೇ ಸಾಗಿದೆ.
ಸಾಗರ ತಾಲ್ಲೂಕು ಕಡವಿನಮನೆಯ ಸವಿತ ಎಂಬುವವರು ನೆಟ್ಟ ಈ ಗಿಡ ಈಗ ಅವರ ಕೈಗೂ ಎಟುಕುವುದಿಲ್ಲ. ಹದಿನೈದು ಅಡಿ ಎತ್ತರದ ಮೇಲೆ ಒಂದು ಗೊಂಚಲು ಕಾಯಿಬಿಟ್ಟು ತೊನೆದಾಡುತ್ತಿದೆ. ಪೇಟೆಗೆ ಹೋಗಿ ಬೆಂಡೆ ಕೊಳ್ಳೋಣಾವೆಂದರೆ ದುಬಾರಿ ದರ ಕೈಗೆಟುಕದು ಎಂದು ಮನೆಯಲ್ಲಿ ಬೀಜ ಬಿತ್ತಿ ಗಿಡಬೆಳೆದು ತರಕಾರಿ ಕೊಯ್ದು ಜತೆಯಲ್ಲಿ ಬೆಳೆದ ಪೋಸ್ ಕೋಡೋಣ ಎಂದರೆ ದುರಂತ ನೋಡಿ ಇಲ್ಲೂ ಕೈಗೆಟುಕದೇ ಗಗನಕ್ಕೇರಿ ನಿಂತಿದೆ ಬೆಂಡೆ. ಬೆಂಡೆ ಗಿಡವನ್ನು ಬೆಂಡಾಗಿಸಿ ಕಾಯಿ ಕೊಯ್ಯೋಣವೆಂದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?. ಎಂಬ ಪ್ರಶ್ನೆ ಬೆಳೆದವರಿಗೆ. ತಳಕುತ್ತಾ ಬಳುಕುತ್ತಾ ಫಿಂಗರ್ ಗೆ ಎಟುಕದಂತೆ ಬೆಳೆದು ನಿಂತ ಈ ಲೇಡಿಸ್ ಫಿಂಗರ್ ನೋಡಲಂತೂ ಬಲು ಅಚ್ಚರಿಯೇ ಸರಿ.
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)

Sunday, November 7, 2010

ಆಚೆ ಬಂತು ಕಟ್ಟು ಕತೆಯ ಕಟ್ಟು


ಕಟ್ಟು ಕತೆಯ ಕಟ್ಟು ಬಿಡುಗಡೆಯಾಯಿತು. ನಮ್ಮಂಥಹ ಪುಟ್ಟ ಹಳ್ಳಿಯಲ್ಲಿ ಅನಾಮತ್ತು ನೂರು ಜನ ಪಾಲ್ಗೊಂಡಿದ್ದರು. ಅರ್ಚನಾ ಶಿವಮೊಗ್ಗ ಹಾಡಿ ಅಕ್ಷರ ಹೆಗ್ಗೋಡು ಬಿಡುಗಡೆಯ ಮಾತನ್ನಾಡಿ ಹುರುಪು ತುಂಬಿದರು. ಕಟ್ಟು ಕತೆಯಲ್ಲಿನ ಕಟ್ಟಿಗಿಂತ ಅವರಿಗೆ ಇಷ್ಟವಾಗಿದ್ದು ಒಂದು ಜೇನಿನ ಹಿಂದೆ ಎಂಬ ನನ್ನ ಹಿಂದಿನ ಪುಸ್ತಕ. ನನಗೆ ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವ ಮನಸ್ಸಿಲ್ಲ ಇದ್ದುದ್ದನ್ನು ಇದ್ದಹಾಗೆಯೇ ಹೇಳುತ್ತೇನೆ ಒಂದು ಜೇನಿನ ಹಿಂದೆ ಎಂಬುದು ಬರಿದೇ ಜೀನು ಸಾಕಾಣಿಕೆಯ ಪುಸ್ತಕವಲ್ಲ ಅದರಲ್ಲಿ ನಾವು ಕಳೆದುಕೊಂಡ ಜೀವನವಿದೆ ಅದೇ ಕಟ್ಟು ಕತೆಯ ಕಟ್ಟಿನಲ್ಲಿ ಕೆಲವು ಕಡೆ ಮರುಕಳಿಸಿದೆ ಇಲ್ಲೊಂದು ಅದ್ಬುತ ಬರಹಗಾರ ಇದ್ದಾರೆ ಎಂಬುದೇ ಸಂತೋಷ ಎಂದರು.

ನನಗೆ ಅದೇನೋ ಒಂಥರಾ ಆನಂದ, ಆ ಆನಂದ ಅಕ್ಷರ ನನ್ನ ಹೊಗಳಿದ್ದಕ್ಕಲ್ಲ, ಅವರೂ ಹೊಗಳಲೂ ಇಲ್ಲ, ಒಂದು ಜೇನಿನ ಹಿಂದೆ ಎಂಬ ಪುಸ್ತಕ ಬರೆದ ಮೂರು ವರ್ಷದನಂತರ ಅದನ್ನು ನಾನು ಬರೆದ ಅರ್ಥದಲ್ಲಿ ಓದಿದವರೊಬ್ಬರು ಹಾಗೆಯೇ ಹೇಳಿದರಲ್ಲ, ಅದಕ್ಕೆ ಖುಷಿಯಾಯಿತು.

ಮಿಕ್ಕಂತೆ ನೀವೆಲ್ಲಾ ಹರಸಿದ್ದೀರಿ ಬ್ಲಾಗ್ ಓದುಗರು ಮೂವರು ಬಂದಿದ್ದರು ಇನ್ನು ನಿಮಗೆ ಹೇಗಾದರೂ ಮಾಡಿ ಪುಸ್ತಕ ತಲುಪಿಸಬೇಕಿದೆ. ತಲುಪುವಂತಹ ತಾಕತ್ತು ಅದರಲ್ಲಿ ಇದ್ದರೆ ತಡವಾಗಿಯಾದರೂ ತಲುಪುತ್ತೆ ಬಿಡಿ. ತಲುಪಿ ನಿಮ್ಮ ಮನಸ್ಸಿನೊಳಗೆ ಇಳಿದಮೇಲೆ ಸಿಗುತ್ತೀರಲ್ಲ ಆವಾಗ ಒಂದಿಷ್ಟು ಕತೆ ಹೇಳೋಣ ಅಲ್ಲಿಯವರೆಗೆ ಕಟ್ಟುತ್ತಲೇ ಕುಟ್ಟುತ್ತಲೇ ಇರೋಣ ಮತ್ತೊಮ್ಮೆ ಹ್ಯಾಪೀ ದೀಪಾವಳಿ.

Tuesday, November 2, 2010

"ಕಟ್ಟು ಕತೆಯ ಕಟ್ಟು"ಬಿಡುಗಡೆಯ ಸಮಾರಂಭ

ಆತ್ಮೀಯರೇ,

ನಾಡಿದ್ದು ದೀಪಾವಳಿಯ ದಿನದಂದು ಅಂದರೆ ದಿನಾಂಕ 6-11-2010 ರ ಸಂಜೆ ಆರೂವರೆಗೆ ತಲವಾಟಾ ಶಾಲಾ ಆವರಣದಲ್ಲಿ ನನ್ನ "ಕಟ್ಟು ಕತೆಯ ಕಟ್ಟು" ಎಂಬ ಕಥಾಸಂಕಲನವೆಂಬ ದೀಪವೊಂದನ್ನು ಅಕ್ಷರ ಹೆಗ್ಗೋಡು ಹಚ್ಚಿಡಲಿದ್ದಾರೆ. ಕುಮಾರಿ ಅರ್ಚನಾ ರವರ ಸುಗಮ ಸಂಗೀತವಿದೆ. ದಯಮಾಡಿ ಇದು ಖುದ್ದು ಆಹ್ವಾನಕ್ಕಿಂತ ಒಂದು ಗುಲುಗುಂಜಿ ಹೆಚ್ಚೆಂದು ತಿಳಿದು ಆಗಮಿಸಿ, ಆಶೀರ್ವದಿಸಿ.
ಇತಿ ತಮ್ಮವ
-ಆರ್.ಶರ್ಮಾ.ತಲವಾಟ
"ನಾನು ಬ್ಲಾಗ್ ಓದುಗ ಅಂತ ಅಲ್ಲಿ ಬಂದು ಹೇಳಿದರೆ ಕಥಾಸಂಕಲನ ಕ್ಕೆ ಕೇವಲ ಹತ್ತೇ ರೂಪಾಯಿ."

Saturday, October 30, 2010

ಹೊನ್ನೇಮರಡಿನ ಹೊಂಗನಸು


"ನೋಡಮ್ಮಾ ನೀನು ಇನ್ನೂರು ಮೀಟರ್ ದೂರದಿಂದ ದಡಕ್ಕೆ ಈಜುತ್ತಾ ಬರುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಆದರೆ ನನಗೆ ಅಚ್ಚರಿ ಅನಿಸಿದ್ದು ನಿನಗೆ ದಡದತ್ತಲೇ ಈಜುತ್ತಿದ್ದೇನೆ ಅಂತ ಕಾಣಿಸಿದ್ದು ಹೇಗೆ?". ಅಂಧಮಕ್ಕಳು ಹಾಗೂ ವಿಕಲಾಂಗಚೇತನರಿಗೆ ಮೀಸಲಾಗಿಟ್ಟಿದ್ದ ಪರಿಸರ ಶಿಕ್ಷಣ ಸಮಾರೋಪ ಸಮಾರಂಭದ ಅಧ್ಯಕ್ಷರು ಶಿಭಿರಾರ್ಥಿಗಳಲ್ಲಿ ಶಿಬಿರದ ಕುರಿತು ಅನುಭವ ಹೇಳಿದ ಅಂಧ ಯುವತಿಯ ಬಳಿ ಪ್ರಶ್ನಿಸಿದರು.
ಒಮ್ಮೆ ಮುಖವನ್ನು ಮೇಲಕ್ಕೆ ತಿರುಗಿಸಿ ನಂತರ " ಸಾರ್ ನನಗೆ ಕಣ್ಣಿಲ್ಲದಿದ್ದರೂ ಅದರ ಶಕ್ತಿಯನ್ನು ಕಿವಿಗೆ ಕೊಟ್ಟಿದ್ದಾನೆ, ನೊಮಿತೋ ಮೇಡಂ ನಂತಹ ಜನರ ಮೂಲಕ ಧೈರ್ಯ ತುಂಬಿದ್ದಾನೆ " ಎಂದು ಉತ್ತರಿಸಿದಾಗ ಕಾರ್ಯಕ್ರಮದ ಅಧ್ಯಕ್ಷರೂ ಸೇರಿದಂತೆ ಸೇರಿದ್ದ ಎಲ್ಲಾ ಜನರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಏನಿದು ಕಾರ್ಯಕ್ರಮ. ನಡೆಯುವುದೆಲ್ಲಿ? ಭಾಗವಹಿಸುವುದು ಹೇಗೆ? ಎಂಬಂತಹ ಪ್ರಶ್ನೆಗಳಿಗೆ ಉತ್ತರ ಹೀಗಿದೆ.

ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಹೆಸರು ಕೇಳದವರು ವಿರಳ. ಆ ಜಲಪಾತಕ್ಕೆ ಭೇಟಿನೀಡುವ ಬಹಳ ಮಂದಿ ಅಲ್ಲಿಂದ ಕೇವಲ ೧೪ ಕಿಲೋಮೀಟರ್ ದೂರದಲ್ಲಿ ಶರಾವತಿ ನದಿಯ ಹಿನ್ನೀರಿನ ಪ್ರದೇಶವಾದ ಹೊನ್ನೇಮರಡುವಿಗೆ ಭೇಟಿ ನೀಡಿ ಒಂದು ಸುತ್ತು ಬೋಟಿಂಗ್ ವಿಹಾರ ಮಾಡಿ ಬರುತ್ತಾರೆ. ಹಸಿರು ಪರಿಸರದ ಪ್ರಶಾಂತವಾದ ಹಿನ್ನೀರಿನ ಶರಾವತಿ ನದಿ ಪರಿಸರಪ್ರಿಯರ ಮನತಣಿದುತ್ತದೆ. ಆಹ್ಲಾದಕರ ವಾತಾವರಣ ಮುದ ನೀಡುತ್ತದೆ. ಭಾನುವಾರಗಳನ್ನು ಬಹಳ ಜನರು ಇಲ್ಲಿ ಕಳೆಯಲು ಇಷ್ಟಪಡುತ್ತಾರೆ. ಹೀಗೆ ಪ್ರವಾಸಿಗಳ ಆಕರ್ಷಣೀಯ ಕೇಂದ್ರವಾದ ಹೊನ್ನೆಮರಡುವಿನ ಉಸ್ತುವಾರಿ ಹೊತ್ತ ಎಸ್.ಎಲ್.ಎನ್ ಸ್ವಾಮಿ ಹಾಗೂ ನೊಮೀತೋ ದಂಪತಿಗಳ ಕನಸಿನ ಕೂಸಾದ ಹೊನ್ನೆಮರಡು ಸಾರ್ವಜನಿಕರಿಗೆ ತೆರೆದುಕೊಳ್ಳುತ್ತದೆ. ಆದರೆ ಇದೇ ಹೊನ್ನೇಮರಡುವಿನ ’ದಿ ಅಡ್ವೆಂಚರರ್ಸ್" ಸಂಸ್ಥೆಯ ಶಿಕ್ಷಣದ ಮುಖ ಬಹಳ ಪ್ರವಾಸಿಗರಿಗೆ ತಿಳಿಯುವುದೇ ಇಲ್ಲ. ಅಲ್ಲಿ ನಡೆಯುವ ಪರಿಸರ ಶಿಕ್ಷಣ ತರಬೇತಿಗಳು ಎಲೆಮರೆಯ ಕಾಯಿಯಂತೆ ವರ್ಷಪೂರ್ತಿ ನಡೆಯುತ್ತಲೇ ಇರುತ್ತವೆ. ತಿಂಗಳೊಗೊಮ್ಮೆ ನಡೆಯುವ ತರಬೇತಿ ವರ್ಷಕ್ಕೊಮ್ಮೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕಯಾಕಿಂಗ್, ಸ್ವಿಮ್ಮಿಂಗ್ ಟ್ರೈನಿಂಗ್, ರ್ರಾಫ್ಟಿಂಗ್, ಹಂಪಿ ವಿಶ್ವವಿದ್ಯಾಲ್ಯದ ಕಾರ್ಯಕ್ರಮಗಳು,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಪರಿಸರ ಪ್ರಜ್ನಾ ಶಿಬಿg, ಪೋಲೀಸ್ ತರಬೇತಿ ಶಿಬಿರ ಹೀಗೆ ನಾನಾ ತರಹದ ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಬೆಂಗಳೂರಿನ ಎಸ್. ಎಲ್. ಎನ್ ಸ್ವಾಮಿ ಹಾಗೂ ನೊಮಿತೋ ದಂಪತಿಗಳೂ ಈ ಹೊನ್ನೇ ಮರಡುವಿನಲ್ಲಿ ನಡೆಯುವ ಕಾರ್ಯಕ್ರಮಗಳ ರೂವಾರಿಗಳು. ಇವರ ಹಿಂದೆ ದಿ ಅಡ್ವೇಂಚರರ್ಸ್ ಹಾಗೂ ಬೆಂಗಳೂರಿನ ಹಲವು ಸ್ವಯಂ ಸೇವಾ ಸಂಘಟನೆಗಳು ಹೆಗಲುಕೊಟ್ಟು ನಿಂತಿದೆ. ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿರುವ "ಡ್ರೀಂ ಎ ಡ್ರೀಮ್" ಎಂಬ ಸ್ವಯಂ ಸೇವಾ ಸಂಸ್ಥೆ ತನ್ನ ಆಶ್ರಯಕ್ಕೆ ಬರುವ ಮಕ್ಕಳಿಗೆ ವರ್ಷದಲ್ಲಿ ನಾಲ್ಕೈದು ಬಾರಿ ನಾಲ್ಕು ದಿನಗಳ ಕ್ಯಾಂಪ್ ಹೊನ್ನೇ ಮರಡುವಿನಲ್ಲಿಯೇ ನಡೆಸುತ್ತದೆ. ಪಟ್ಟಣದ ಮಕ್ಕಳಿಗೆ ಹಳ್ಳಿಯ ಬದುಕಿನ ನಿಸರ್ಗದ ಪರಿಚಯ ಈಜು ಮುಂತಾದವುಗಳನ್ನು ವ್ಯವಸ್ಥಿತವಾಗಿ ಪರಿಚಯಿಸುತ್ತಾರೆ ಇಲ್ಲೆ. ಅದೇ ರೀತಿ ಬೆಂಗಳೂರಿನ ಲಿಂಗರಾಜಪುರಂನ "ಅಸೋಷಿಯೇಷನ್ ಫಾರ್ ಫಿಸಿಕಲಿ ಡಿಸೇಬಲ್ಡ್" ಎಂಬ ಸಂಸ್ಥೆಯ ಸಹಯೋಗದೊಂದಿಗೆ ಹೊನ್ನೇ ಮರಡುವಿನ ದಿ ಅಡ್ವೇಂಚರರ್ಸ್ ವಿಕಲಾಂಗ ಚೇತನರಿಗೆ ಚೈತನ್ಯ ತುಂಬುವ ವಾರದ ಶಿಬಿರ ಏರ್ಪಡಿಸುತ್ತಾರೆ. ಕುರುಡು ಮಕ್ಕಳು ನಡೆಯಲಾಗದೆ ತೆವಳುವ ಮಕ್ಕಳಲ್ಲಿ ಹೊನ್ನೆಮರಡುವಿಗೆ ಬರುವಾಗ ಇರುವ ಭಯ ಹೋಗುವಾಗ ಧೈರ್ಯವಾಗಿ ಮಾರ್ಪಾಡಾಗಿರುತ್ತದೆ. ನೀರಿನಲ್ಲಿ ಅವರು ಸಮರ್ಪಕವಾಗಿ ಈಜುವುದನ್ನು ಕಲಿತಮೇಲೆ ಅವರ ಕಣ್ಣಂಚಿನ ಹೊಳಪು ನಮಗೆ ನೀಡುವ ಸಮಾಧಾನ ತರುತ್ತದೆ ಹಾಗೂ ಅದಕ್ಕೆ ಬೆಲೆಕಟ್ಟಲಾಗದು ಎನ್ನುತ್ತಾರೆ ನೊಮಿತೋ. ಕುಕ್ ಟೌನ್ ನ "ಮಾಯಾ ವಿಷನ್" ,ಮಹಾಲಕ್ಷ್ಮಿ ಲೇ ಔಟ್ ನ ಸಮಾ ಫೌಂಡೇಷನ್ ಕೂಡ ದಿ ಅಡ್ವೇಂಚರರ್ಸ್ ನ ಸಹಯೋಗದಲ್ಲಿ ತಮ್ಮ ಸಂಪರ್ಕಕ್ಕೆ ಬರುವ ಜನರಿಗೆ ಕಾರ್ಯಕ್ರಮಗಳನ್ನು ಹೊನ್ನೇಮರಡುವಿನಲ್ಲಿ ನೀಡುತ್ತದೆ.
ಪರಿಸರ ತಿಳುವಳಿಕೆ ಕಾರ್ಯಕ್ರಮಗಳಲ್ಲಿ ಜೇನಿನ ಬಗ್ಗೆ ಮಾಹಿತಿ, ಸ್ಥಳೀಯ ಔಷಧಿ ಸಸ್ಯಗಳ ಮಾಹಿತಿ ಮುಂತಾದವುಗಳಿಗೆ ಸ್ಥಳೀಯರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಸ್ಥಳೀಯರಿಗೆ ಉಪ ಆದಾಯವೂ ಬಂದಂತಾಗಿದೆ. ಮೂಗಿಮನೆ ಲಂಬೋಧರ ಎಂಬ ಸ್ಥಳೀಯ ಯುವಕ ಸ್ವಿಂಗ್ ಕ್ಯಾಂಪ್ ಗಳನ್ನು ನಿರ್ವಹಿಸುತ್ತಾರೆ. "ದಿ ಅಡ್ವೇಂಚರರ್ಸ್" ಸಂಸ್ಥೆಯಿಂದಾಗಿ ಉದ್ಯೋಗವೇ ನಮ್ಮನ್ನು ಅರಸಿಕೊಂಡು ಬಂದಿದೆ ನಾವು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವ ಪ್ರಶ್ನೆ ಉದ್ಬವವಾಗಿಲ್ಲ, ಇದರಿಂದಾಗಿ ಹಳ್ಳಿ ತೊರೆಯುವ ಪ್ರಮೇಯವೇ ತಪ್ಪಿದಂತಾಗಿದೆ ಎಂದು ಸಂತೋಷದಿಂದ ಹೇಳುತ್ತಾರೆ. ಇದೇ ರೀತಿ ಮಂಜ, ಬಾಬು ಮುಂತಾದವರೂ ಕೂಡ ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ತೊಡಗಿಸಿಕೊಳ್ಳುತ್ತಾರೆ. ಹತ್ತು ವರ್ಷಗಳ ಹಿಂದೆ ಕೆಲವು ಭಾಹ್ಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಸ್ಥಳೀಯರು ಸ್ವಲ್ಪ ಪ್ರಮಾಣದ ಪ್ರತಿಭಟನೆ ತೋರಿದ್ದರೂ ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂಸ್ಥೆಗೆ ಸಂಪೂರ್ಣ ಬೆನ್ನೆಲುಬಾಗಿ ಸ್ಥಳೀಯರೇ ನಿಂತಿದ್ದಾರೆ ಎಂಬುದು ಸಂಸ್ಥಾಪಕರಾದ ಎಸ್.ಎಲ್.ಎನ್ ಸ್ವಾಮಿಯವರ ಹೇಳಿಕೆ. ಪ್ರತೀ ವರ್ಷ ೨೦ ರಿಂದ ೨೫ ಮಕ್ಕಳು ನಮ್ಮಲ್ಲಿ ನೀರಿನ ಎಲ್ಲಾ ವಿದ್ಯೆಗಳನ್ನು ಕಲಿತು ಸ್ವಯಂ ಉದ್ಯೋಗ ನಡೆಸುವ ಸಾಮರ್ಥ್ಯವುಳ್ಳವರಾಗಿ ಹೊರಹೋಗುತ್ತಿದ್ದಾರೆ ಎನ್ನುವುದು "ಅಶೋಕಾ ಫೆಲೋಷಿಪ್" ಪಡೆದ ಸ್ವಾಮಿಯವರ ಆತ್ಮಸ್ಥೈರ್ಯದ ಮಾತು. ಇಲ್ಲಿ ನಡೆಯುವ ಎಲ್ಲಾ ತರಹದ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಪಾಲ್ಗೊಳ್ಳಬಹುದು. ಬೆಂಗಳೂರಿನ ಮೇಲ್ಕಂಡ ಸಂಸ್ಥೆಗಳ ಮೂಲಕವಾದರೂ ಸರಿ ಅಥವಾ ದಿ ಅಡ್ವೇಂಚರರ್ಸ್ ಮೂಲಕವಾದರೂ ಸರಿ ಎನ್ನುತ್ತಾರೆ ಸ್ವಾಮಿ.
ಕರ್ನಾಟಕದ ಮೂಲೆಯ ಕುಗ್ರಾಮವನ್ನು ಪರಿಸರ ಶಿಕ್ಷಣಕ್ಕಾಗಿ ಬಳಸಿಕೊಂಡು ತನ್ಮೂಲಕ ತಾವೂ ಬೆಳೆದು ಸಂಸ್ಥೆಯನ್ನು ಬೆಳೆಸಿ ನಿರ್ಗತಿಕರಿಗೆ ಅಂಗವಿಕಲರಿಗೆ ಅಸಾಹಾಯಕರಿಗೆ ಪ್ರತ್ಯಕ್ಷ ಪರೋಕ್ಷ ಚೈತನ್ಯ ತುಂಬುತ್ತಿರುವ ಸ್ವಾಮಿ ದಂಪತಿಗಳ ಹೊನ್ನೇಮರಡುವಿನಲ್ಲಿ ನಡೆಸುವ ಕಾರ್ಯಕ್ರಮಗಳು ಶ್ಲಾಘನೀಯವೇ ಎಂಬುದರಲ್ಲಿ ಎರಡು ಮಾತಿಲ್ಲ.
ಸಂಪರ್ಕ
ದಿ ಅಡ್ವೆಂಚರರ್ಸ್
ಹೊನ್ನೇಮರಡು
ಅಂಚೆ: ಹಿರೇಮನೆ
ಸಾಗರ -ಶಿವಮೊಗ್ಗ ೫೭೭೪೩೦
9448485508-08183-207740

(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

Monday, October 25, 2010

ತ್ಯಾರಣ ಮನೆ ಬಾಗಿಲ ತೋರಣ


ಮನೆಯೆಂದಮೇಲೆ ಹೂದೋಟವೊಂದು ಇಲ್ಲದಿದ್ದರೆ ಅದು ಅಪೂರ್ಣ. ಚಿಕ್ಕದಾದರೂ ಚೊಕ್ಕವಾಗಿರುವ ಬಣ್ಣ ಬಣ್ಣದ ಹೂವರಳಿಸುವ ಗಿಡಗಳ ಸಾಲು ಮನೆಗೆ ಬರುವ ಅತಿಥಿಗಳ ಸ್ವಾಗತಿಸುವಂತಿದ್ದರೆ ಅದರ ಅಂದ ವರ್ಣಿಸಲಸದಳ. ಅಂತಹ ಹೂದೋಟಕ್ಕೆ ಅಂದ ನೀಡಲು ಗುಲಾಬಿ ದಾಸವಾಳ ಮಲ್ಲಿಗೆ ಜಾಜಿ ಮುಂತಾದ ಬಹುವಾರ್ಷಿಕ ಹೂವಿನಗಿಡಗಳು ಇವೆ. ಆದರೆ ಅವು ಸರ್ವಋತುವಿನಲ್ಲಿಯೂ ಹೂವು ಅರಳಿಸುವುದಿಲ್ಲ. ಹಾಗಾಗಿ ನಿರಂತರವಾಗಿ ಹೂದೋಟ ಚೈತನ್ಯ ತುಂಬಿರಬೇಕೆಂದರೆ ವಿವಿಧಬಗೆಯ ಹೂವಿನಗಿಡಗಳ ಅವಶ್ಯಕತೆಯಿದೆ. ಬಗೆ ಬೇರೆಯದಾದ್ರೂ ಮಳೆಗಾಲದ ಅಂತ್ಯದಲ್ಲಿ ಹೂವು ಬಿಡುವ ಗಿಡಗಳ ಸಂಖ್ಯೆ ಅಪರೂಪ. ಆ ಅಪರೂಪವನ್ನು ಹುಡುಕಿ ತೋಟವನ್ನು ಚಂದಗೊಳಿಸುವುದು ಹೂದೋಟಾಸಕ್ತರ ಮುಖ್ಯ ಕಸುಬು. ಅಂತಹ ಮಳೆಗಾಲದಲ್ಲಿ ಹೂ ಅರಳಿಸುವ ಬಗೆಗಳಲ್ಲಿ ಈ ತ್ಯಾರಣವೂ ಒಂದು.
ಮಲೆನಾಡಿನ ಕೃಷಿಕರಮನೆಯ ಎದುರು ವಿಶಾಲ ಅಂಗಳ ಸಾಮಾನ್ಯ. ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ಅದು ಬಳಕೆಯಾದರೆ ಮಳೆಗಾಲದಲ್ಲಿ ಹೂದೋಟವಾಗಿ ಮಾರ್ಪಾಡಾಗಿಬಿಡುತ್ತದೆ. ಆ ಮಾರ್ಪಾಡಿಗೆ ಈ ತ್ಯಾರಣದ ಗಿಡಗಳು ಮುಖ್ಯ ಕಾರಣ. ಸಾಸಿವೆ ಕಾಳಿನಂತಹ ತ್ಯಾರಣದ ಬೀಜವನ್ನು ಮಹಿಳೆಯರು ಜತನವಾಗಿ ಕಾಪಿಟ್ಟು ಮಳೆಗಾಲದಲ್ಲಿ ಬೇಕಾದ ರೀತಿಯ ಆಕಾರದಲ್ಲಿ ಬಿತ್ತುತ್ತಾರೆ. ಬೀಜ ಬಿತ್ತಿ ತಿಂಗಳೊಳಗೆ ಹಸಿರುಬಣ್ಣದ ಮೃದೂ ದಂಟಿನ ಗಿಡಗಳು ಪುತುಪುತು ಎಳುತ್ತವೆ. ಸಪ್ಟೆಂಬರ್ ನಲ್ಲಿ ಇನ್ನೇನು ಮಳೆಗಾಲ ಮುಗಿಯಿತು ಎಂದಾಗ ಕೆಂಪು,ನೀಲಿ, ಕೇಸರಿ ಬಣ್ಣದ ಎರಡು ಪೊಕಳೆ, ಒಂಟಿ ಪೊಕಳೆ ಯ ಹೆಸರನ್ನಿಟ್ಟುಕೊಂಡು ಹೂವು ಅರಳಲಾರಂಬಿಸುತ್ತವೆ. ಒಟ್ಟಿಗೆ ಹೂವು ಬಿಟ್ಟು ಸರಿಸುಮಾರು ಒಂದು ತಿಂಗಳುಗಳಕಾಲ ನಿರಂತ ಕಣ್ಣಿಗೆ ಹಬ್ಬ ನೀಡುವ ತ್ಯಾರಣ ಮತ್ತೆ ಬೀಜವಾಗಿ ಮಹಿಳೆಯರ ಮಜ್ಜಿಗೆಗೂಡಿನಲ್ಲಿ ಕಾಪಾಡಲ್ಪಡುತ್ತದೆ ಮತ್ತೆ ಮುಂದಿನವರ್ಷ ಅಂಗಳಕ್ಕೆ ರಂಗೇರಿಸಲು. ಹೀಗೆ ಅಂಗಳವನ್ನೇ ಹೂದೋಟಗಿಸುವ ತ್ಯಾರಣ ಮಲೆನಾಡಿನ ಮಳೆಗಾಲದ ಹೂವು ಪೂರೈಕೆ ಗಣಿ. ಸರಿ ಸುಮಾರು ಎಲ್ಲಾ ಮನೆಗಳಲ್ಲಿಯೂ ಕಾಣುವ ಇದು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಆಕಾರ ಆಕೃತಿಗಳಲ್ಲಿ ಮನತಣಿಸುತ್ತಿದೆ.
(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

Saturday, October 23, 2010

ಬಾಲ್ಯಕ್ಕೆ ಬೇಕು ಅಜ್ಜನ ಮನೆ



ಬಾಲ್ಯ ಎಂಬ ಎರಡಕ್ಷರದ ಶಬ್ದ ಬಹು ಸುಂದರ. ಬಡತನವಿರಲಿ ಶ್ರೀಮಂತಿಕೆಯಿರಲಿ ಆವಾಗ ಅದು ಬಾಧಿಸದ ವಯಸ್ಸು. ಆಟ ಊಟ ಓಟ ಎಲ್ಲವೂ ಅವರವರ ಮಟ್ಟಕ್ಕೆ ಚೆನ್ನ. ಎಲ್ಲರ ಜೀವನದಲ್ಲಿಯೂ ಬಾಲ್ಯದ ಜೀವನ ಬಹುಮುಖ್ಯವಾದ ಘಟ್ಟ. ವಿಪರ್ಯಾಸವೆಂದರೆ ಬಹು ಜನರಿಗೆ ಅದು ತಿಳಿಯುವುದು ಅವರು ಬೆಳೆದು ದೊಡ್ಡವರಾದಮೇಲೆಯೇ. ಅದೃಷ್ಟವಂತ ಮಕ್ಕಳಿಗೆ ಬಾಲ್ಯವನ್ನು ಸುಂದರವನ್ನಾಗಿಸುವ ಪಾಲಕರು ಸಿಕ್ಕುತ್ತಾರೆ. ಆವಾಗ ಅದು ಅವರ ನಡೆ ನುಡಿ ಸ್ವಭಾವದಮೇಲೆ ಜೀವನಪೂರ್ತಿ ಉತ್ತಮ ಪರಿಣಾಮಬೀರುತ್ತದೆ. ಬಾಲ್ಯ ಅಸಹನೆಯಿಂದ, ಸಮಾಜದ ತಿರಸ್ಕಾರದ ನೋಟದಿಂದ ಕೂಡಿದ್ದರೆ ಅದು ವ್ಯಕ್ತಿಯ ಜೀವನದಮೇಲೆ ಹೇರಳ ದುಶ್ಪರಿಣಾಮವನ್ನೂ ಬೀರುತ್ತದೆ. ಹಾಗಾಗಿ ಬಾಲ್ಯವನ್ನು ವಿಕಸಿಸಲು ಬಿಡಬೇಕು. ಭಯದಿಂದ, ಗದರುವಿಕೆಯಿಂದ ಮಕ್ಕಳ ವಿಕಸನಕ್ಕೆ ಬಹಳ ಧಕ್ಕೆಯಾಗುತ್ತದೆ ಎಂಬುದು ಹಿರಿಯರು ತಿಳುವಳಿಕೆಹೊಂದಿದಷ್ಟೂ ಸಮಾಜಕ್ಕೆ ಉತ್ತಮ ಪ್ರಜೆಗಳ ಕೊಡುಗೆ ಸಾದ್ಯವಾಗಬಲ್ಲದು.
ಸುತ್ತಲೂ ಹಸಿರು ಮರಗಿಡಗಳು, ನಡುವೆ ಜುಳುಜುಳು ಹರಿವ ನದಿ, ತಂಪಾಗಿ ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳು, ನದಿಯ ಪಕ್ಕದಲ್ಲೊಂದು ಅಜ್ಜನ ಮನೆ,ಕಂಡ ಕುತೂಹಲಕ್ಕೆ ತಾಳ್ಮೆಯಿಂದ ಉತ್ತರ ನೀಡಿ ತಣಿಸುವ ಮಾವಂದಿರು, ರಾಕ್ಷಸನ ಸೋಲಿನ, ಭೀಮನ ಶಕ್ತಿಯ, ಅರ್ಜುನನ ಗುರಿಯ, ಜಟಾಯುವಿನ ಹೋರಾಟದ ಕತೆ ಹೇಳುವ ಅಜ್ಜ, ರುಚಿ ರುಚಿ ಕುರುಕಲು ಕೊಡುವ ಅಜ್ಜಿ, ಗರಿ ಗರಿ ಬಟ್ಟೆ ತೊಳೆದು ನೀಡುವ ಅತ್ತೆ, ಇವಿಷ್ಟೂ ಅಥವಾ ಇನ್ನಷ್ಟು ನಿಮ್ಮ ಬಾಲ್ಯದಲ್ಲಿ ಸಿಕ್ಕರೆ ಅದರ ಸವಿ ನೆನಪು ಬೇಕಾದಾಗ ನಿಮ್ಮನ್ನು ಆಕಾಶದಲ್ಲಿ ತೇಲಾಡುತ್ತದೆ. ಆದರೆ ಅದು ಎಲ್ಲರಿಗೂ ಇದೇ ರೀತಿಯಲ್ಲಿ ಸಿಗುವುದಿಲ್ಲ. ಹಾಗಂತ ಎಲ್ಲವೂ ಹೀಗೆಯೇ ಇರಬೇಕೆಂಬ ಕಾನೂನು ಅಲ್ಲಿಲ್ಲ. ಹಿರಿಯರು ಮನಸ್ಸು ಮಾಡಿ ಇದ್ದುದ್ದರಲ್ಲಿಯೇ ಗದರದೇ ಸಾವಧಾನದಿಂದ, ತಾಳ್ಮೆಯಿಂದ ವ್ಯವಹರಿಸಿ ಸುಖವನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಅವರ ಚೇತನಕ್ಕೆ ಚೈತನ್ಯ ತುಂಬಬಹುದು. ಮನೆಯ ಅಡಿಪಾಯ ಗಟ್ಟಿಯಿದ್ದರೆ ಮೇಲ್ಮನೆಯ ಭದ್ರತೆ ಹೆಚ್ಚುವಂತೆ, ಬಾಲ್ಯದ ಅಡಿಪಾಯವನ್ನು ಭದ್ರಗೊಳಿಸಿ ಜೀವನವನ್ನು ಸುಭದ್ರಗೊಳಿಸಬಹುದು ಎಂಬುದು ಸಂಶೋಧಕರ ಅಭಿಮತ. "ನನ್ನ ಮಾವ ಚಾರಣಕ್ಕೆ ಕರೆದೊಯ್ಯುತ್ತಿದ್ದರು, ಅಲ್ಲಿನ ನಿಗೂಢತೆಯ ಪರಿಚಯ ಮಾಡಿಒಸುತ್ತಿದ್ದರು, ಅದರ ಹಸಿ ಹಸಿ ನೆನಪು ಯಾವಾಗ್ಲೂ ನನ್ನನ್ನು ಉತ್ಸಾಹಕ್ಕೆ ಕರೆದಿಯ್ಯುತ್ತದೆ" ಹೀಗಂತ ಬೆಂಗಳೂರಿನ ಹನಿವೆಲ್ ಕಂಪನಿಯ ಉದ್ಯೋಗಿ ರಮ್ಯಾ ತಮ್ಮ ಬ್ಲಾಗಿನಲ್ಲಿ ಅಜ್ಜನ ಮನೆಯ ಸವಿನೆನಪಿನ ಕತೆ ವಿವರಿಸುತ್ತಾರೆ. ಇಂದಿನ ಒತ್ತಡದ ಜೀವನದಲ್ಲಿ ಬಾಲ್ಯದ ನೆನಪುಗಳು ಆಡಿದ ಆಟಗಳು, ಮರಳುಗುಡ್ಡೆ ಹಾಕಿ ಕಟ್ಟಿದ ಮನೆಗಳು, ಕೆರೆಯನೀರಿನಲ್ಲಿ ಕುಣಿದಾಡಿದ ದಿವಸಗಳು, ಅಜ್ಜನ ಕತೆಗಳು, ಹೀಗೆ ಎಲ್ಲವೂ ಹುರುಪು ನೀಡಲು ಕಾರಣವಾಗುತ್ತದೆಯಂತೆ. ಇದು ಒಬ್ಬ ರಮ್ಯಾಳ ಕತೆಯಲ್ಲ, ಪಟ್ಟಣದಲ್ಲಿ ಓದಿ ರಜೆಯಲ್ಲಿ ಹಳ್ಳಿ ಸುಖ ಪಡೆದ ಎಲ್ಲಾ ಮೊಮ್ಮಕ್ಕಳ ಕತೆ ಇಂತಹ ಸವಿಸವಿ ನೆನಪುಗಳಿಂದಲೇ ಆರಂಭವಾಗುತ್ತದೆ.
ಬಾಲ್ಯ ಎಂದರೆ ಆಡಿನಲಿಯುತ್ತಾ ನೋಡಿ ಕಲಿಯುತ್ತಾ ಬೆಳೆಯುವ ಹಂತ. ಅಂತಹ ಅಭೂತಪೂರ್ವ ಸಮಯವನ್ನು ಕೇವಲ ಪುಸ್ತಕದ ಕಲಿಕೆಗೆ ಸೀಮಿತ ಗೊಳಿಸುವ ಆಸಕ್ತಿ ಪಾಲಕರಿಗಿದ್ದರೆ ಮಕ್ಕಳ ಮನಸ್ಸು ಕುಬ್ಜಗೊಳ್ಳುತ್ತದೆ. ಗಿಳಿಪಾಠ ಬೇಸರ ತರಿಸುತ್ತದೆ. ಹಾಗಂತ ಕುತೂಹಲಕ್ಕೆ ಅವಕಾಶವಿರದ ಪ್ರಶ್ನೆಗೆ ಉತ್ತರವಿರದ ವಿಶಾಲಬಯಲಿನ ಮನುಷ್ಯ ಸೃಷ್ಟಿಯ ಆಟಗಳು ಮಾತ್ರಾ ವ್ಯಾಯಾಮ, ಹಾಗೂ ಸಂತೋಷ ಎಂಬುದು ಹಲವರ ದೃಷ್ಟಿ.ಆದರೆ ವಾಸ್ತವ ತೀರಾ ಭಿನ್ನ, ಪಟ್ಟಣದ ಮೈದಾನದಲ್ಲಿ ಆಡುವ ಆಟ ಏಕತಾನತೆಯಿಂದ ಕೂಡಿರುವುದರಿಂದ ಅದು ಜೀವನಪೂರ್ತಿ ಸವಿನೆನಪಿಗೆ ಅವಕಾಶವಿರುವುದಿಲ್ಲ, ಅದೇ ವರ್ಷಕ್ಕೊಮ್ಮೆ ಹಳ್ಳಿಯತ್ತ ಹೊರಳಿ ಅಲ್ಲಿ ನೋಡುವ ನೋಟವೇ ಮನಸ್ಸಿನಲ್ಲಿ ಅಚ್ಚಾಗಿಬಿಡುತ್ತದೆ. ಅದು ಸುಮಧುರ ಸುಂದರ.
ಯಾವಾಗ ನಾನು ದೊಡ್ದವನಾದೇನೋ? ಇವರನ್ನೂ ತಿರುಗಿ ಬೈದೇನೋ? ಎಂಬಂತಹ ಆಲೋಚನೆ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತಿದೆಯೆಂದರೆ ಅಲ್ಲಿ ಮಕ್ಕಳ ಮನಸ್ಸು ಕುಬ್ಜವಾಗುತ್ತಿದೆಯೆಂದು ಅರ್ಥ. ಮಕ್ಕಳು ಬಾಯಿಬಿಟ್ಟು ತಮ್ಮ ಅವ್ಯಕ್ತ ಭಯವನ್ನು ಹೇಳಲಾರವು, ಆದರೆ ಅವರ ವರ್ತನೆ ಹೇಳುತ್ತದೆ. ನಿತ್ಯ ಜಗಳ ಮಾಡುವ ಅಪ್ಪ ಅಮ್ಮಂದಿರನ್ನು ನೋಡುತ್ತಾ ಬೆಳೆದ ಮಗು ತನಗೆ ಗೊತ್ತಿಲ್ಲದಂತೆ ತನ್ನ ಜೀವನದಲ್ಲಿಯೂ ಅದನ್ನೇ ಮುಂದುವರೆಸುತ್ತದೆ. ಹಾಗಾಗಿ ಹಿರಿಯರ ಜಗಳ ಕಾದಾಟ ಎಲ್ಲಾ ಮಕ್ಕಳೆದುರಿಗೆ ಸಲ್ಲ. ಅಥವಾ ಅಂತಹ ಸಮಸ್ಯೆಗಳಿದ್ದರೆ ಅಂತಹ ಬೇಡದ ನೆನಪುಗಳನ್ನೆಲ್ಲಾ ಅಡಿಗೆ ಒತ್ತಿ ಅದರ ಮೇಲೆ ಸುಂದರ ಭಾವನೆಗಳನ್ನು ಅರಳಿಸುವ ಕೆಲಸ ವರ್ಷಕ್ಕೊಮ್ಮೆಯಾದ್ರೂ ಸಿಗುವಂತಿರಬೇಕು. ಅದು ಅಜ್ಜನ ಮನೆಯಲ್ಲಿ ಮಾತ್ರಾ ಸಾದ್ಯ ಎಂಬುದು ಅನುಭವ ವೇದ್ಯ.
"ನನ್ನ ಅಮ್ಮ ಹಸಿಹಾಲು ಕುಡಿಯುತ್ತಿದ್ದಳಂತೆ ನನಗೂ ಕುಡಿಸು ಮಾಮಾ" ಎಂಬುದು ಭಾರತದಲ್ಲಿ ಹುಟ್ಟಿ ದುಬೈ ನಲ್ಲಿ ಬೆಳೆಯುತ್ತಿರುವ ಕಾವ್ಯಳ ಆಸೆ. ದುಬೈ ಸೇರಿ ಇಪ್ಪತ್ತು ವರ್ಷಗಳು ಸಂದರೂ ಆಕೆಯ ಅಮ್ಮಳಿಗೆ ಎಂದೋ ಕುಡಿದ ಹಸಿಹಾಲಿನ ಬಿಸಿ ಮರೆತಿಲ್ಲ. ಮನದ ಮೂಲೆಯಲ್ಲಿ ಮಗಳಿಗೂ ಸಿಗಲಿ ಎಂಬ ಆಸೆಯಿಂದ ರಜೆಯಲ್ಲಿ ಪ್ರತೀ ವರ್ಷ ಹದಿನೈದು ದಿನಗಳ ಮಟ್ಟಿಗೆ ಹುಟ್ಟಿದ ಹಳ್ಳಿಗೆ ಮಗಳನ್ನು ಕಳುಹಿಸುವ ಅಮ್ಮ ತನ್ನ ಮಗಳ ಬಾಳಿನುದ್ದಕ್ಕೂ ಸವಿನೆನಪನ್ನು ದಾಖಲಿಸಲು ನೆರವಾಗುತ್ತಾಳೆ. ಆಕಳಿನ ಮೊಲೆಯಿಂದ ಸೀದಾ ಕಾವ್ಯಳ ಬಾಯಿಗೆ ಹಾರಿದ ಹಾಲು ಕೇವಲ ಕ್ಷಣಿಕ ಹಸಿಬಿಸಿ ಹಾಲಿನ ಸುಖವೊಂದನ್ನೇ ಅಲ್ಲ ಅವಳ ನೆನಪಿನ ಕೋಶದಲ್ಲಿ ಶಾಶ್ವತವಾಗಿ ದಾಖಲಾಗಿ ನೆನಪುಗಳನ್ನು ಶ್ರೀಮಂತಗೊಳಿಸುತ್ತವೆ. ಆದರೆ ಅಂತಹ ವ್ಯವಸ್ಥೆಗೆ ಹಳ್ಳಿಗಳು ಜೀವಂತವಾಗಿರಬೇಕು. ಅಲ್ಲಿರುವ ಜೀವಗಳಿಗೆ ಚೈತನ್ಯ ಇರಬೇಕು. ಅಂತಹ ಚೈತನ್ಯವಿರುವ ಜೀವಗಳ ಜೊತೆ ಪಟ್ಟಣಿಗರಿಗೆ ಸಂಬಂಧವಿರಬೇಕು, ಹೀಗೆ ಬೇಕುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಮನಸ್ಸಿದ್ದರೆ ಮಾರ್ಗ ಎಂಬಂತೆ ಹಳ್ಳಿಯಲ್ಲಿರುವ ಮಕ್ಕಳಿಗೆ ಪಟ್ಟಣ ತೊರಿಸಿ ಅವುಗಳ ಮುಖ ಅರಳುವುದನ್ನೂ, ಪಟ್ಟಣದ ಮಕ್ಕಳಿಗೆ ಹಳ್ಳಿಯ ಸೊಗಡು ಪರಿಚಯಿಸಿ ಅವುಗಳ ಕಣ್ಣುಗಳು ಅಗಲವಾಗುವುದನ್ನೂ ನೋಡುವ ಆಸೆ ಪಾಲಕರಿಗೆ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ಅದೂ ಅವರುಗಳ ಜೀವನಪೂರ್ತಿ ನೆನಪುಗಳ ಮೂಲಕ. ಅದಕ್ಕೊಂದು ಅಜ್ಜನ ಮನೆ ಅವಶ್ಯಕತೆ ಇದೆ. ಇಲ್ಲದಿದ್ದರೆ ಸೃಷ್ಟಿಸಿಕೊಳ್ಳುವಷ್ಟು ಜಗತ್ತು ಇಂದು ಮುಂದುವರೆದಿದೆ. ಆದರೆ ಮನಸ್ಸು ಅರಳಬೇಕಷ್ಟೆ, ಮತ್ತು ಅಜ್ಜನ ಮನೆಯತ್ತ ಹೊರಳಬೇಕಷ್ಟೆ.

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

Wednesday, October 20, 2010

ಅಂತೂ ಇಂತೂ ಬಂತು "ಕಟ್ಟು ಕತೆಯ ಕಟ್ಟು

ಕತೆಗಳು ಏಕೆ ಹುಟ್ಟಿಕೊಂಡವು? ಹೇಗೆ ಸೃಷ್ಟಿಯಾಯಿತು? ಯಾಕಾಗಿ ಬರೆಯಬೇಕು? ಯಾಕಾಗಿ ಓದಬೇಕು? ಎಂಬಂತಹ ಪ್ರಶ್ನೆಗಳ ಉತ್ತರ ನನ್ನ ಬಳಿಯಲ್ಲಿ ಇಲ್ಲ. ಮನುಷ್ಯ ಸಮಾಜೀವಿಯಾದ್ದರಿಂದ ಅವನು ವರ್ತಮಾನದ ವಾಸ್ತವಕ್ಕಿಂತ ಕಲ್ಪನೆಗಳಿಗೆ ಹೆಚ್ಚು ಮಾನ್ಯತೆ ನೀಡುವುದರಿಂದ, ತನ್ನ ನೋವನ್ನು ಹೇಳಿ ಮರೆಯಬಹುದು ಅಂದುಕೊಂಡಿರುವುದರಿಂದ, ತಾನು ಪಟ್ಟ ಸಂತೋಷ ಹಂಚಿ ಸುಖಿಸುವುದರಿಂದ, ಕಂಡ ಘಟನೆ, ಅನುಭವಿಸಿದ ನೋವು ನಲಿವು, ಹೀಗೆ ಏನೇನೆಲ್ಲಾವುಗಳನ್ನು ಹಂಚಿಕೊಂಡಾಗ ಅದೇನೋ ಒಂಥರಾ ಆನಂದದ ಭಾವನೆ ಆಳದಲ್ಲಿ ಮೂಡುವುದರಿಂದ ಆತ ಕತೆ ಹೇಳುವುದನ್ನು ರೂಢಿಸಿಕೊಂಡ, ಹೇಳುವ ಕತೆಯ ವಿಸ್ತಾರ ಪ್ರಸಾರದ ವೇಗ ದೂರ ಕಡಿಮೆ ಅನ್ನಿಸಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡ . ಹೀಗೆ ಏನೇನೆಲ್ಲಾ ವ್ಯಾಖ್ಯಾನ ನೀಡಬಹುದು ಕತೆಗಳ ಬಗ್ಗೆ. ಅದು ಅವರವರ ಬುದ್ದಿಮತ್ತೆಗನುಗುಣವಾಗಿರುತ್ತದೆ. ನನಗೆ ಅವೆಲ್ಲಾ ತಿಳಿಯದು.
ಕತೆಗಳಿಗೆ ಆಳ ಇದೆ ಉದ್ದ ಇದೆ ಅಗಲ ಇದೆ. ಕತೆಯನ್ನು ಬರೆದವನ ದೃಷ್ಟಿಯಿಂದ ಓದಬಹುದು, ಓದುಗನ ದೃಷ್ಟಿಯಿಂದ ನೋಡಬಹುದು, ಬರೆಯುವವನ ಓದುವವನ ವಯಸ್ಸು ಕಾಲಗಳಿಂದಲೂ ಅಳೆಯಬಹುದು. ಬರಹಗಾರ ಪಕ್ವವಾಗಿದ್ದರೆ ಎರಡು ಶಬ್ಧಗಳ ನಡುವೆ ಸದ್ದನ್ನು ಮೂಡಿಸಬಲ್ಲ. ಓದುಗ ಪರಿಪಕ್ವನಾಗಿದ್ದರೆ ಅದನ್ನು ಅರ್ಥೈಸಿಕೊಳ್ಳಬಲ್ಲ. ಕತೆಗಾರನ ವೈಯಕ್ತಿಕ ಜೀವನದಿಂದಲೂ ಕತೆಗಳನ್ನು ಪರಿಚಯಮಾಡಿಕೊಳ್ಳಬಹುದು. ಎಂತೆಲ್ಲಾ ವಿಮರ್ಶಕರು ಹೇಳುತ್ತಾರೆ. ನನಗೆ ಅವೆಲ್ಲಾ ಅರ್ಥವಾಗದು.
ಕತೆಯ ಅಂತ್ಯವನ್ನು ಓದುಗನೇ ಊಹಿಸಿಕೊಳ್ಳಲಿ ಅಂತ ಬಿಡಬಹುದು. ಅಥವಾ ಬರಹಗಾರನೇ ಅಂತ್ಯ ನೀಡಬಹುದು. ನೀಡಿದ ಅಂತ್ಯ ಅಂತ್ಯವಾಗದೆಯೂ ಇರಬಹುದು, ಮತ್ತೆ ಅಲ್ಲಿಂದ ಆರಂಭ ಅಂತಲೂ ಅನ್ನಿಸಬಹುದು. ಹಾಗಾಗಿ ಕತೆಗಳ ವಿಷಯದಲ್ಲಿ ಆರಂಭ ಗೊತ್ತಿಲ್ಲ ಅಂತ್ಯ ಎಂಬುದು ಇಲ್ಲ. ಅಷ್ಟಾದಮೇಲೆ ನನಗೆ ಅದರ ಗೊಡವೆ ಬೇಡ.
ನಾನೂ ಒಂದಿಷ್ಟು ಬರೆದೆ, ಕಂಡಿದ್ದು, ಕೇಳಿದ್ದು, ನೋಡಿದ್ದೂ ಹಾಗೂ ನನ್ನದೇ ಆದ ಕೈಕರ್ಚಿನದು. ಬರೆದದ್ದು ಹಾಗೆ ಇಡುವುದು ಬೇಡ ಅಂತ ಅನ್ನಿಸಿ ಪತ್ರಿಕೆಗೆ ಕಳುಹಿಸಿದೆ. ಪ್ರಕಟವಾದಾಗ ಮಾತ್ರ ಮತ್ತೆ ಮತ್ತೆ ಓದಿ ಸಂಭ್ರಮಿಸಿದೆ. ನಂತರ ಮತ್ತೆ ಮತ್ತೆ ಬರೆದೆ. ಮತ್ತೆ ಮತ್ತೆ ಓದಿದೆ. ಹೀಗೆ ನಾನು ಬರೆಯಲು ಪ್ರಕಟವಾಗಲು ಸಹಕರಿಸಿದ ಜನರ ಸಂಖ್ಯೆ ಅಪಾರ. ಹೊತ್ತು ಹೆತ್ತವರು, ಒಡಹುಟ್ಟಿದವರು, ಜತೆಗೆ ಬೆಳೆದವರು, ನನ್ನನ್ನು ಸಹಿಸಿಕೊಂಡವರು,ಜೀವನ ಹಂಚಿಕೊಂಡವರು, ಅನ್ನ ಔಷಧಿ ಬಟ್ಟೆ ಬೆಳೆದು ನೆಯ್ದು ನೀಡಿದವರು, ಕಾರಣರು ಕಾರಣೀಕರ್ತರು ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಒಟ್ಟಿನಲ್ಲಿ ಸಮಷ್ಠಿಯ ಸಮಾಜದ ಋಣ ತೀರಿಸಲಾಗದ್ದು, ಅವೆಲ್ಲಾ ಸಹಕಾರದಿಂದ ನಾನು ಒಂದಿಷ್ಟು ದಾಖಲಿಸಿ ಅವುಗಳನ್ನ ಕತೆಯಾಗಿಸಿ ಸಂಕಲನವನ್ನಾಗಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಕತೆಗಳು ಚೆನ್ನಾಗಿದೆ ಎಂದರೂ, ಚೆನ್ನಾಗಿಲ್ಲ ಎಂದರೂ ನನಗೆ ಸಂತೋಷವೇ, ಕಾರಣ ಓದಿದ ನಂತರ ಹೇಳುವ ಅಭಿಪ್ರಾಯಗಳು ಅವು. ನನ್ನ ಕತೆಗಳನ್ನು ಓದಿದ ನಂತರ ಹೇಳುವ ಅಭಿಪ್ರಾಯಗಳು ಓದುಗನ ಮನಸ್ಥಿತಿಯನ್ನೂ ಅವಲಂಬಿಸಿರುತ್ತದೆಯಾದರಿಂದ ನೀವು ಓದುವುದಷ್ಟೆ ನನಗೆ ಮುಖ್ಯ. ಅಭಿಪ್ರಾಯ ಹೇಗಿದ್ದರೂ ನನಗದು ಆನಂದವೇ.
ನೆಟ್ ಮುಂದೆ ಕುಳಿತ ಒಂದು ದಿನ ಚಾಟ್ ನಲ್ಲಿ "ನೀನೇಕೆ ಒಂದು ಕಾದಂಬರಿ ಬರೆಯಬಾರದು? ಎಂಬ ಪ್ರಶ್ನೆ ಟೈಪಿಸಿ ಅದಕ್ಕೆ " ಅಯ್ಯೋ ಬರೆಯುವುದು ದೊಡ್ಡದಲ್ಲ ಆದರೆ ಮುದ್ರಿಸುವುದು ಕಷ್ಟ, ಈಗ ನೋಡು ಕಥಾಸಂಕಲನ ಮುದ್ರಿಸಲಾಗದೇ ಒದ್ದಾಡುತ್ತಿದ್ದೇನೆ" ಎಂದಾಗ ಸುಮ್ಮನೇ ಕೇಳಿದ ಮಾತಾಗದೆ "ನಾನಷ್ಟು ಕೊಡುತ್ತೇನೆ" ಎಂದ ನನ್ನ ಅಕ್ಕನ ಮಗಳು ನವ್ಯಾಳಿಗೆ ಹಾಗೂ ಕಳೆದ ಹತ್ತು ವರ್ಷದಿಂದ ನಾ ಬರೆದ ಎಲ್ಲಾ ಕತೆಗಳನ್ನು ಜತನವಾಗಿ ಕಾಪಿಟ್ಟು, ವ್ಯವಹಾರದ ವಿಷಯ ಬದಿಗಿಟ್ಟು, ತನ್ನದೇ ಕತೆಯ ಕಟ್ಟು ಎಂಬಂತೆ ಮುದ್ರಿಸಿಕೊಟ್ಟ ವೇಣುಮಾಧವನಿಗೆ, "ಬೇಲಿ" ಎಂಬ ಕತೆ ಕನ್ನಡ ಪ್ರಭದಲ್ಲಿ ಪ್ರಕಟವಾದ ಮಾರನೇ ದಿವಸ ಕಾಡಿನ ಒಳಗೆ ಇರುವ ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದು ನೀವು ನಿಮ್ಮ ಕತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ ಎಂದು ಹುರಿದುಂಬಿಸಿ ನನಗಿಂತ ಚೆನ್ನಾಗಿ ನಾ ಬರೆದ ಕತೆಗಳನ್ನು ನೆನಪಿಟ್ಟುಕೊಂಡು ಅರ್ಥೈಸಿದ ಜೋಗದ ಸರ್ಕಾರಿ ಕಾಲೇಜಿನ ಗ್ರಂಥಪಾಲಕರಾದ ದೂರಪ್ಪನವರಿಗೆ, ನಾನು ಆಭಾರಿ ಎಂದಷ್ಟೇ ಹೇಳಿದರೆ ಕಡಿಮೆ. ಆಂತರ್ಯದ ಧನ್ಯವಾದ ಅವರುಗಳಿಗೆ. ಚಿತ್ರ ಬಿಡಿಸಿಕೊಟ್ಟ ಮಾಹಬಲೇಶ್ವರ ಸಾಲೇಕೊಪ್ಪ ಹಾಗೂ ಜಿ ಎಂ ಹೆಗಡೆ ಬೊಮ್ನಳ್ಳಿ ಅವರಿಗೆ ವಂದನೆಗಳು. ನಿತ್ಯದ ದಿವಸಗಳಲ್ಲಿ ಅವರಿಗೆ ತಿಳಿಯದಂತೆ ನನ್ನನ್ನು ಕತೆ ಬರೆಯಲು ಪ್ರೇರೇಪಿಸಿದ ಡೈರಿಕಟ್ಟೆಯ ಸಹವರ್ತಿಗಳಿಗೆ ನಮಸ್ಕಾರಗಳು. "ಕಟ್ಟು ಕತೆಯ ಕಟ್ಟು ಎಂಬ ಕಥಾಸಂಕಲನ ಬಗ್ಗೆ ಬ್ಲಾಗ್ ನಲ್ಲಿ ಹಾಗೂ ಸಂಪದದಲ್ಲಿ ಬರೆದಾಗ "ಯಾವಾಗ ಬಿಡುಗಡೆ ? ನನಗೊಂದು ಪ್ರತಿ ಇರಲಿ" ಎಂದ ಎಲ್ಲ ಆತ್ಮೀಯರಿಗೆ ಧನ್ಯವಾದಗಳು, ಮುನ್ನುಡಿ ಬರೆದುಕೊಡುತ್ತೀರಾ? ಎಂದಾಕ್ಷಣ ತಮ್ಮ ಎಲ್ಲಾ ಖಾಯಿಲೆ ನೋವುಗಳನ್ನು ಬದಿಗಿಟ್ಟು ಒಂದೇ ಗುಟುಕಿನಲ್ಲಿ ಎಲ್ಲಾ ಕತೆಗಳನ್ನು ಓದಿ ಮುನ್ನುಡಿ ಬರೆದುಕೊಟ್ಟ ಸುಳಿಮನೆಯ ಕೇಸರಿ ಪೆಜತ್ತಾಯರಿಗೂ ಹಾಗೂ ಬೆನ್ನುಡಿ ಬರೆದ ರಾಧಾಕೃಷ್ಣ ಭಡ್ತಿಯವರಿಗೂ ಹಾಗೂ ನನ್ನ ಭಾವಚಿತ್ರ ತೆಗೆದುಕೊಟ್ಟ ಪಾಲಚಂದ್ರರವರಿಗೂ ಪ್ರಣಾಮಗಳು. ಗಣಪತಿ ಪ್ರಿಂಟಿಗ್ ಪ್ರೆಸ್ ನ ಮಾಲಿಕರಾದ ಎಚ್ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಗಳಿಗೆ ತ್ಯಾಂಕ್ಸ್. ಪ್ರತ್ಯಕ್ಷ ಪರೋಕ್ಷ ಸಹಕರಿಸಿದ ಎಲ್ಲರಿಗೂ ಅನಂತಾನಂತವಂದನೆ.
ದೀಪಾವಳಿಯ ದಿನ ಸಂಜೆ ಆರೂವರೆಗೆ ತಲವಾಟಾ ಶಾಲಾ ಆವರಣದಲ್ಲಿ "ಕಟ್ಟು ಕತೆಯ ಕಟ್ಟು" ಕಥಾಸಂಕಲನದ ಬಿಡುಗಡೆಯ ಸಮಾರಂಭ. ಬನ್ನಿ ಒಂದಿಷ್ಟು ಖುಷಿ ಹಂಚಿಕೊಳ್ಳೋಣ.

Tuesday, October 19, 2010

ರಾಣಿ ಈಗ ಗೂಡಿಗೆ


" ರಾಣಿ ಈಗ ಗೂಡಿಗೆ
ಗಂಡು ಯಮನ ಬೀಡಿಗೆ"
ಮುನ್ನಾದಿನ ಮುತ್ತಣ್ಣ ಹೇಳಿದ ಕವನದ ಕೊನೆಯ ಸಾಲುಗಳನ್ನು ಗುಣುಗುಣಿಸುತ್ತಾ ಚೆನ್ನ ನಸುಕಿನಲ್ಲಿ ಗುಡ್ಡ ಏರುತ್ತಿದ್ದ. ಕವನದ ವಿಸ್ತಾರದ ಕತೆ ಕೇಳಿದ ಚೆನ್ನನಿಗೆ ಆ ಕೊನೆಯ ಸಾಲಿನ ಹೊರತಾಗಿ ಮತ್ಯಾವುದೂ ನೆನಪಿಗೆ ಬರಲಿಲ್ಲ. ಇಡೀ ಕತೆಯ ಸಾರಾಂಶವನ್ನು ಅವೆರಡು ಸಾಲಿಗೆ ತುಂಬಿಕೊಂಡು ಆಸ್ವಾದಿಸುತ್ತಾ ಪದೇ ಪದೇ ಅವಷ್ಟೇ ಸಾಲುಗಳನ್ನು ಹಿಂದುಮುಂದಾಗಿ ತನ್ನದೇ ಆದ ದಾಟಿಯಲ್ಲಿ ಹಾಡುತ್ತಾ ನಡು ನಡುವೆ ಹಣೆಯಮೇಲೆ ಕೈಯನ್ನಿಟ್ಟು ಸೂರ್ಯನ ಕಿರಣದಿಂದ ಕಣ್ತಪ್ಪಿಸಿ ಮುನ್ನಡೆಯುತಿದ್ದ. ಚೆನ್ನನ ಉತ್ಸಾಹಕ್ಕೆ ಜೇನು ಹುಡುಕುವ ಭರಾಟೆಯೋ ಅಥವಾ ಉಲ್ಲಾಸದಾಯಕ ವಾತಾವರಣವೋ ಎನ್ನುವುದನ್ನ ತರ್ಕಿಸಿ ತೀರ್ಮಾನ ತೆಗೆದುಕೊಳ್ಳುವ ಗೋಜಿನ ಮನಸ್ಥಿತಿ ಅವನದಾಗಿರಲಿಲ್ಲವಾದ್ದರಿಂದ ಉತ್ಸಾಹವನ್ನು ಮಾತ್ರಾ ಅನುಭವಿಸುತ್ತಿದ್ದ. ಅವನಿಗೆ ಬುದ್ದಿಬಂದಾಗಿನಿಂದ ಇಬ್ಬನಿ ಬೀಳುವ ಕಾಲದಲ್ಲಿ ಹೀಗೆ ಜೇನು ಹುಡುಕುತ್ತಾ ಹೊರಡುವುದು ಇಷ್ಟವಾದ ಕೆಲಸ. ಕಳೆದ ವರ್ಷದವರೆಗೂ ಜೇನಿಗೂ ಚೆನ್ನನಿಗೂ ಕೇವಲ ಹಣದ ಸಂಬಂಧ ಮಾತ್ರಾ ಇತ್ತು. ಕಾಡಿಗೆ ಹೋಗುವುದು ಮರದ ಪೊಟರೆಯಲ್ಲಿಯೋ, ಹುತ್ತದ ಆಳದಲ್ಲಿಯೂ ಹುದುಗಿದ್ದ ಜೇನನ್ನು ಪತ್ತೆ ಮಾಡುವುದು, ಹಾಗೂ ಬೀಡಿ ಹೊಗೆ ಹಾಕಿ ಜೇನಿನ ಕುಟುಂಬ ಹಾರಿಸುವುದು ಮತ್ತು ತುಪ್ಪ ತೆಗೆದು ಪೇಟೆಗೋ ಅಥವಾ ಗಿರಾಕಿಗೋ ಮಾರಿ ಹಣ ಎಣಿಸುವುದು. ಒಂದು ಕುಡಗೋಲು, ತುಪ್ಪ ಹಾಕಲು ಒಂದು ಪಾತೆ, ಬೀಡಿಕಟ್ಟು ಬೆಂಕಿಪೊಟ್ಟಣ ಇಷ್ಟಿದ್ದರೆ ಚೆನ್ನನಿಗೆ ಒಂದುದಿನದ ಸಂಬಳ ಬಂದಂತೆ. ಆದರೆ ಪಟ್ಟಣದಲ್ಲಿ ಇಂಜನಿಯರ್ ಆಗಿದ್ದ ಮುತ್ತಣ್ಣ ನಿವೃತ್ತ ಜೀವನಕ್ಕೆ ಹಳ್ಳಿಯನ್ನು ಆರಿಸಿಕೊಂಡು ಊರಿಗೆ ಬಂದಮೇಲೆ ಚೆನ್ನನ ಜೇನಿನ ಪಾಲನೆಯ ರೀತಿರಿವಾಜುಗಳು ಬದಲಾಗತೊಡಗಿದವು. ಕಾಡಿಗೆ ಹೋಗಿ ಜೇನು ಗೂಡು ಪತ್ತೆಮಾಡಿ ಅವನ್ನು ಪೆಟ್ಟಿಗೆಗೆ ತುಂಬಿ ಮನೆಯಂಗಳಕ್ಕೆ ತಂದು ಸಾಕಾಣಿಕೆ ಆರಂಭಿಸಲು ಪ್ರೋತ್ಸಾಹಿಸಿದ್ದೇ ಮುತ್ತಣ್ಣ. ಹಾಗಾಗಿ ಕಾಡಿಗೆ ಹೊರಡುವ ಚೆನ್ನನ ಕೈಯಲ್ಲಿ ಈಗ ಒಂದು ಕೂಡುಪೆಟ್ಟಿಗೆ, ಹಗ್ಗ, ಕೈಹುಟ್ಟು, ಮುಂತಾದ ಹೊಸ ಪರಿಕರಗಳು ಕೂಡಿಕೊಂಡಿದ್ದವು. ಜೇನು ತತ್ತಿ ಹಿಂಡಿ ಹಿಪ್ಪೆಮಾಡಿ ತುಪ್ಪ ತೆಗೆದು, ಹುಳುಗಳನ್ನು ಹೊಗೆ ಹಾಕಿಸಿ ಹಿಂಸೆ ಮಾಡುವ ಚೆನ್ನನ ಮಾಮೂಲಿ ವಿಧಾನಗಳಿಗೆ ವಿದಾಯ ಹೇಳಿದ್ದ. ಚೆನ್ನ ಮುತ್ತಣ್ಣನಿಂದ ಶಿಸ್ತಿನ ಜೇನುಸಾಕಾಣಿಕೆದಾರನಾಗಿದ್ದ. ಮನೆಯ ಸುತ್ತಮುತ್ತ ನಾಲ್ಕೈದು ಜೇನುಪೆಟ್ಟಿಗೆಗಳನ್ನಿಟ್ಟು ಆದಾಯದ ಜತೆ ಜೀವನಾನುಭೂತಿಯನ್ನು ಪಡೆದುಕೊಳ್ಳುವಂತಾಗಿದ್ದ. ದಿನನಿತ್ಯ ಜೇನು ಸಾಮ್ರ್ಯಾಜ್ಯದ ಹೊಸ ಹೊಸ ವಿಷಯಗಳನ್ನು ಕಥಾ ರೂಪದಲ್ಲಿ ಕೇಳುತ್ತಾ ಬೆರಗಾಗುತ್ತಿದ್ದ. ಮನುಷ್ಯರಂತೆ ಹಿಸ್ಸೆಯಾಗುವುದು, ಯುದ್ಧ ಮಾಡುವುದು, ಆಹಾರ ಕಾಪಿಡುವುದು ಮುಂತಾದ ಹತ್ತಾರು ವಿಷಯಗಳನ್ನು ಮುತ್ತಣ್ಣ ಹೇಳಿದ್ದರೂ ಹಾಡಿನ ರೂಪದಲ್ಲಿ ನಿನ್ನೆ ಹೇಳಿದ ವಿಷಯ ಮಾತ್ರಾ ಚೆನ್ನನನ್ನು ಮಹದಾಶ್ಚರ್ಯಕ್ಕೆ ತಳ್ಳಿತ್ತು. ಹತ್ತಿಪ್ಪತ್ತು ವರ್ಷಗಳಿಂದ ಜೇನುಹುಟ್ಟಿನಲ್ಲಿ ಕೈ ಇಟುಕೊಂಡು ಕುಳಿತಿದ್ದ ಚೆನ್ನನಿಗೆ ಅಲ್ಲೊಂದು ಜೀವಂತ ಪ್ರಪಂಚ ಇದೆ ಎಂದು ಅರಿವು ಮೂಡತೊಡಗಿದ್ದು ಇತ್ತೀಚಿಗಷ್ಟೆ.
"ಹಳೆಯ ರಾಣಿ ಚಳಿಗಾಲದ ಒಂದು ದಿನ ಗೂಡಿನಲ್ಲಿದ್ದ ಅರ್ದದಷ್ಟು ಹುಳುಗಳನ್ನು ಕರೆದುಕೊಂಡು ಬೇರೆಯ ಗೂಡನ್ನು ಅರಸುತ್ತಾ ಹೊರಟುಬಿಡುತ್ತದೆಯೆಂದರೆ ಅದು ಹಿಸ್ಸೆಯ ಸಂಭ್ರಮ ಎಂದರ್ಥ. ಮೂರ್ನಾಲ್ಕು ದಿವಸಗಳಲ್ಲಿ ಗೂಡಿನಲ್ಲಿ ಹೊಸ ರಾಣಿ ಮೊಟ್ಟೆಯಿಂದ ಈಚೆ ಬಂದು ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ನವಯೌವನದ ರಾಣಿಗೆ ಹುಟ್ಟಿದ ಮಾರನೆಯ ದಿನವೇ ಗಂಡಿನೊಡನೆ ಸೇರುವ ಯೋಗ. ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡಿನೊಡನೆ ಸೇರುತ್ತದೆ, ಆನಂತರ ನಿರಂತರ ಮೊಟ್ಟೆಯನ್ನಿಡುತ್ತಾ ಜೇನು ಸಾಮ್ರಾಜ್ಯವನ್ನು ವಿಸ್ತರಿಸುತ್ತದೆ. ಜೇನು ರಾಣಿ ಹುಟ್ಟಿದ ಮಾರನೇ ದಿನ ಗಂಡು ನೊಣದೊಂದಿಗೆ ಹೊರ ಹೊರಟು ಸೇರುವ ಕ್ರಿಯೆ ಪ್ರಕೃತಿಯ ಅದ್ಬುತ ಸಂಯೋಜನೆ. ರಾಣಿಗೆ ದಾರಿ ತೋರಿಸಲು ನಾಲ್ಕಾರು ಕೆಲಸಗಾರ ನೊಣಗಳು , ಹತ್ತಾರು ಗಂಡುನೊಣಗಳು ರಾಣಿಯ ಸೇರಲು ಜತೆಯಾಗಿ ಗೂಡಿನಿಂದ ಹೊರಹೊರಡುತ್ತವೆ. ರಾಣಿಯ ಮಿಲನ ಬಾನಂಗಳದಲ್ಲಿ ಪ್ರಕೃತಿ ನಿಗದಿಪಡಿಸಿದೆ. ಹೊರ ಹಾರಾಟದಲ್ಲಿ ರಾಣಿಯ ಜತೆ ಗಂಡು ಸ್ಪರ್ಧೆಗೆ ಇಳಿಯಬೇಕು, ರಾಣಿ ತನ್ನ ಉದ್ದನೆಯ ನುಣುಪಾದ ದೇಹ, ಅಗಲವಾದ ರಕ್ಕೆಯನ್ನು ಬಳಸಿಕೊಂಡು ಮೇಲೇರಲು ಆರಂಭಿಸುತ್ತದೆ. ಈಗ ಗಂಡು ನೊಣಗಳು ರಾಣಿಯ ಜತೆ ಹಾರಾಟದ ಸ್ಪರ್ಧೆಗೆ ಇಳಿಯುತ್ತವೆ. "ಏರಿ ಏರಿ ಮೇಲಕೇರಿ" ಎಂಬಂತೆ ರಾಣಿ ನೊಣ ಏರುತ್ತಲೇ ಸಾಗುತ್ತದೆ. ಹತ್ತಾರು ಗಂಡು ನೊಣಗಳ ಪೈಕಿ ಅಶಕ್ತ ನೊಣಗಳು ರಾಣಿಯ ಜತೆ ಏರಲಾಗದೆ ಹಾರಲಾಗದೆ ಹಿಂದುಳಿಯುತ್ತವೆ. ಅಂತಿಮವಾಗಿ ಸಶಕ್ತ ಗಂಡುನೊಣವೊಂದು ಬಾನಂಗಳದಲ್ಲಿ ರಾಣಿಯನ್ನು ಕೂಡುತ್ತವೆ. ಪಾಪ ಆ ಗಂಡುನೊಣದ ಮಿಲನ ಎಂದರೆ ತನ್ನದೇ ಚರಮಗೀತೆ ಎಂದು ತಿಳಿಯದೆ ರಾಣಿನೊಣವನ್ನು ಸಂಭ್ರಮದ ಸಂಗೀತದ ನಿನಾದದೊಂದಿಗೆ ಸೇರುತ್ತದೆ. ಆರೋಗ್ಯವಂತ ಸಶಕ್ತ ಜೇನುಪೀಳಿಗೆಗೆ ನಾಣ್ಣುಡಿ ಬರೆದು ರಾಣಿಯ ಸೇರಿದ ಕೆಲಕ್ಷಣಗಳ ನಂತರ ಅದು ಸಾವನ್ನಪ್ಪುತ್ತದೆ. ರಾಣಿನೊಣ ಗರ್ಭವತಿಯಾಗಿ ಮಿಕ್ಕ ಕೆಲಸಗಾರನೊಣಗಳ ಅಣತಿಯಂತೆ ಗೂಡಿನ ದಾರಿ ಹಿಡಿಯುತ್ತದೆ. ಅಲ್ಲಿಗೆ ಮತ್ತೊಂದು ಹೊಸ ಜೇನು ಸಂಸಾರ ಆರಂಭವಾದಂತೆ. ಈಗ ನಿನಗೆ ಅರ್ಥವಾಗಿರಬೇಕು ಜೇನು ಪ್ರಪಂಚದಲ್ಲಿ ಅಂಗವೈಕಲ್ಯತೆ ಯಾಕಿಲ್ಲ?, ಸಶಕ್ತ ಹುಳುಗಳ ಸೃಷ್ಟಿ ಮಾತ್ರಾ ಅಲ್ಲಿದೆ" ಅಂತ ಹಾಡಿನ ಸಹಿತ ಹೇಳಿದ ಮುತ್ತಣ್ಣನ ಮಾತುಗಳು ಬೆರಗು ಮೂಡಿಸಿದ್ದವು.
ಮುತ್ತಣ್ಣ ಹೇಳಿದ ಕತೆಯನ್ನು ಮೆಲುಕು ಹಾಕುತ್ತಾ ಜೇನು ಪ್ರಪಂಚದೊಳಗಿದ್ದ ಚೆನ್ನ ಮಾವಿನ ಹಕ್ಕಿಯ ಕೂಗಿಗೆ ವಾಸ್ತವಕ್ಕೆ ಬಂದ. ಮಾವಿನ ಹಕ್ಕಿ ಕೂಗಿತೆಂದರೆ ಅಲ್ಲೆಲ್ಲಿಯೋ ಜೇನು ಇದೆ ಅಂತ ನೆನಪಾಗುತ್ತಲೆ ಸೂರ್ಯನ ಎಳೆ ಕಿರಣಕ್ಕೆ ಕೈ ಅಡ್ಡ ಇಟ್ಟು ಹುಡುಕತೊಡಗಿದ. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಜೇನು ಹುಳುಗಳು ಹತ್ತಿರದ ಹುತ್ತದಿಂದ ಪುರುಪುರನೆ ಹೊರಡುತ್ತಿದ್ದವು. ಒಮ್ಮೊಮ್ಮೆ ದಿನಗಟ್ಟಲೆ ಅಲೆದರೂ ಸಿಗದ ಜೇನು ಮಗದೊಮ್ಮೆ ಹೀಗೆ ಅಚ್ಚರಿ ಮೂಡಿಸುವಷ್ಟು ಬೇಗನೆ ಸಿಗುವುದು ಚೆನ್ನನಿಗೆ ಹೊಸತೇನಲ್ಲ. ಕೂಡು ಪೆಟ್ಟಿಗೆ ತಲೆಯಿಂದ ಇಳಿಸಿ ಕೈ ಹಾರೆಯಿಂದ ಹುತ್ತದ ಬಾಯಿ ಬಿಡಿಸಿ ಬಗ್ಗಿ ಹುತ್ತದೊಳಗೆ ಕಣ್ಣಾಡಿಸಿದ. ಬಿಳಿಯದಾದ ಬರೊಬ್ಬರಿ ಐದು ತತ್ತಿಗಳು ಗೋಚರಿಸಿತು. "ಅಬ್ಬಾ ಸಣ್ಣಾಟದ ಜೇನಲ್ಲ ಇದು" ಎಂದು ತನ್ನಷ್ಟಕ್ಕೆ ಹೇಳಿಕೊಂಡ. ಚೆನ್ನನ ಕೈಹಾರೆಯಿಂದಾದ ಶಬ್ಧಕ್ಕೆ ಗಾಬರಿ ಬಿದ್ದ ಜೇನು ಕುಟುಂಬ ತತ್ತಿ ಬಿಟ್ಟು ಮೇಲೇರತೊಡಗಿತ್ತು. ಸ್ಪಷ್ಟವಾಗಿ ಕಾಣಿಸುತಿದ್ದ ಜೇನು ತತ್ತಿಗಳನ್ನು ಗಮನಿಸಿದ ಚೆನ್ನ ಒಮ್ಮೆ ಹತಾಶನಾದ. ಕಾರಣ ತತ್ತಿಯ ಬುಡದಲ್ಲಿ ನಾಲ್ಕಾರು ರಾಣಿ ಮೊಟ್ಟೆ ಜೋತಾಡುತಿತ್ತು. ಗಂಡು ನೊಣಗಳ ಸಂಖ್ಯೆ ವಿಪುಲವಾಗಿತ್ತು. ಅದರ ಅರ್ಥ ರಾಣಿ ಹೆಸ್ಸೆಯಾಗಿ ಹಾರಿ ಹೋಗಿದೆ. ಇನ್ನಷ್ಟೇ ಹೊಸ ರಾಣಿ ಬರಬೇಕಿದೆ. ಎಂದು ಆಲೋಚಿಸುತ್ತಾ ಹುತ್ತದೊಳಗೆ ಕೈ ಹಾಕಿದಾಗ ಹತ್ತಾರು ಗಂಡುನೊಣಗಳು ಪುರುಪುರು ಶಬ್ಧ ಮಾಡುತ್ತಾ ಹೊರಬಂದವು . ಗಂಡು ನೊಣಗಳ ಸಂಭ್ರಮದ ಹಾರಾಟ ನೋಡಿದ ಚೆನ್ನ, ಮುತ್ತಣ್ಣ ಹೇಳಿದ ಸಾವಿನ ಕತೆ ನೆನಪಾಗಿ ಮನಸ್ಸಿನಲ್ಲಿಯೇ ನಕ್ಕ. ಒಂದೊಂದೇ ತತ್ತಿಗಳನ್ನು ಬಿಡಿಸಿ ಬಾಳೆಪಟ್ಟೆ ಹಗ್ಗದಲ್ಲಿ ತತ್ತಿಗಳನ್ನು ನಿಧಾನವಾಗಿ ಮರದ ಚೌಕಟ್ಟಿಗೆ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಕೈಹುಟ್ಟಿನಲ್ಲಿ ಜೇನು ನೊಣಗಳನ್ನು ಪೆಟ್ಟಿಗೆಗೆ ತುಂಬತೊಡಗಿದ. ಮುಕ್ಕಾಲು ಪಾಲು ನೊಣಗಳು ಪೆಟ್ಟಿಗೆ ಸೇರಿದ ನಂತರ ಮುಚ್ಚಲು ಹಾಕಿ ಮಿಕ್ಕ ಹುಳುಗಳ ಪೆಟ್ಟಿಗೆ ಪ್ರವೇಶವನ್ನು ನೋಡುತ್ತಾ ಬೀಡಿ ಹಚ್ಚಿದ.
ಪೆಟ್ಟಿಗೆಯ ಹೊರಗಡೆ ದಪ್ಪನೆಯ ಕಪ್ಪನೆಯ ಗಂಡುಹುಳುಗಳ ಹಾರಾಟ ಹೆಚ್ಚತೊಡಗಿತು. ಈ ಗಂಡು ಹುಳಗಳನ್ನು ನೋಡಿದಾಗಲೆಲ್ಲ ಚೆನ್ನನಿಗೆ ನೆನಪಿಗೆ ಬರುವುದು ನಾಣ ಭಟ್ಟರ ಪ್ರಣಯ ಪ್ರಕರಣ. ಕಪ್ಪಗೆ ಪುಷ್ಟಿಯಾಗಿ ಗಂಡುನೊಣದಂತೆ ಇರುವ ಯಕ್ಷಗಾನದ ಹವ್ಯಾಸಿಯಾದ ನಾಣಭಟ್ಟರು ಮೂರು ಮದುವೆ ಮಾಡಿಕೊಂಡು ಮತ್ತೂ ಪ್ರಕರಣಗಳನ್ನು ಸೃಷ್ಟಿಸಿಕೊಂಡು ಊರಿನ ಜನರ ಬಾಯಿಗೆ ಗ್ರಾಸವಾಗಿದ್ದರು. ಭಗವಂತ ಜೇನು ರಾಣಿ ಕೂಡಿದ ಗಂಡುನೊಣಕ್ಕೆ ಸಾವಿನ ನಿಯಮ ಇಟ್ಟಂತೆ ಮನುಷ್ಯರಿಗೂ ಇದ್ದಿದ್ದರೆ ..ನಾಣಭಟ್ಟರ ಕತೆ ಎಂದೋ ಇಲ್ಲವಾಗಿತ್ತು ಅಂತ ಚೆನ್ನನಿಗೆ ಅನ್ನಿಸಿದರೂ ಮರುಕ್ಷಣ ತಾನೂ ಇರುತ್ತಿರಲಿಲ್ಲ ಎಂದು ಅರಿವಾಗಿ ತನ್ನಷ್ಟಕ್ಕೆ ಮುಗುಳ್ನಕ್ಕ. ಆದರೆ ಭಗವಂತ ಮನುಷ್ಯರ ಮಟ್ಟಿಗೆ ತಿದ್ದುಪಡಿಮಾಡಿ ಎರಡನೆ ಹೆಣ್ಣಿನ ತಂಟೆಗೆ ಹೋದರೆ ಸಾವು ಅಂತ ಇಡಬೇಕಾಗಿತ್ತು ಎಂದು ಆಲೋಚಿಸಿದ. ಜೇನು ಹುಳುಗಳು ಸಂಪೂರ್ಣ ಪೆಟ್ಟಿಗೆಯೊಳಗೆ ತೂರಿಕೊಂಡಿದ್ದರಿಂದ ಯೋಚನಾಸರಣಿಯಿಂದ ಹೊರಬಂದ ಚೆನ್ನ ಪೆಟಿಗೆ ಮನೆಗೆ ತೆಗೆದುಕೊಂಡುಹೋಗಲು ಸಂಜೆ ಬರಬೇಕೆಂದು ಇಲ್ಲದಿದ್ದಲ್ಲಿ ಹೂವುತರಲು ಹೋದ ಜೇನುಗಳು ಅನಾಥವಾಗುತ್ತವೆ ಎಂದು ಎಣಿಸಿ, ಪೆಟ್ಟಿಗೆಗೆ ಇರುವೆ ಮುತ್ತದಿರಲು ನುಮ್ಮಣ್ಣು ಸುತ್ತರಿಸಿ ಮನೆಯತ್ತ ಹೊರಟ.
ಕುಂಬ್ರಿಗುಡ್ಡ ಇಳಿದು ಅಡಿಕೆ ತೋಟದ ಸೊಪ್ಪಿನ ಬೆಟ್ಟದ ಒಳದಾರಿ ಹಿಡಿದ ಚೆನ್ನನಿಗೆ ಯಾರೋ ದೊಡ್ಡದಾಗಿ ಮಾತನಾಡುತ್ತಾ ಮರ ಕಡಿಯುತ್ತಿರುವ ಸದ್ದು ಕೇಳಿಸಿ ಅಲ್ಲಿಯೇ ನಿಂತ. ತೋಟಕ್ಕೆ ಸೊಪ್ಪು ಹಾಕುವ ಕಾಲ ಇದಲ್ಲ ಹಾಗಾದರೆ ಈಗ ಯಾರು ಯಾಕೆ ಮರ ಕಡಿಯುತ್ತಿರಬಹುದು, ಕಳ್ಳ ನಾಟದವರಾ? ಎಂಬಂತಹ ಹತ್ತಾರು ಪ್ರಶ್ನೆ ಒಟ್ಟಿಗೆ ಮೂಡಿತು. ಅಂತಿಮವಾಗಿ ನಿಷಣಿ ಸೊಪ್ಪಿನ ನೆನಪಾಗಿ "ಓಹೋ ಯಾರೋ ನಿಷಣಿ ಸೊಪ್ಪು ಕಡಿತಾ ಇದಾರೆ, ದುಡ್ಡಿನಾಸೆಗೆ ಮರ ಕಡ್ದು ಕಾಡು ಲೂಟಿ ಮಾಡ್ಬಿಟ್ರು ಕಳ್ರು" ಎಂದು ತನ್ನಷ್ಟಕ್ಕೆ ಹೇಳಿಕೊಂಡು ಯಾರಿರಬಹುದು ಎಂದು ತಿಳಿಯಲು ಇನ್ನಷ್ಟು ಹತ್ತಿರಕ್ಕೆ ಹೋದ. ನಿಷಣಿ ಮರದ ಹತ್ತಿರ ಹೋದಂತೆಲ್ಲಾ ನಿಷಣಿ ಸೊಪ್ಪು ಕಡಿಯವರು ತನ್ನ ಹೆಸರಲ್ಲೇ ಸುದ್ದಿ ಹೇಳುತ್ತಿರುವುದು ಕೇಳಿದಂತಾಗಿ ಅವರಿಗೆ ಕಾಣದಂತೆ ನಿಂತ.
" ಅಲ್ಲ ಮಾರಾಯ ಆ ನಾಣ ಭಟ್ರಿಗೆ ದೇವ್ರು ಕಬ್ಣದ್ದು ಹಾಕಿ ಕಳ್ಸಿದಾನ ಅಂತ ನಂಗೆ ಅನುಮಾನ" ಮರದ ಮೇಲಿದ್ದವ ಹೇಳಿದ
"ಎಂತಕಾ..?" ಸೊಪ್ಪು ಬಿಡಿಸುತ್ತಾ ಕೆಳಗಡೆ ಇದ್ದವ ಕೇಳಿದ.
"ಮತ್ತೆಂತ ಅವ್ರಿಗೆ ಅರವತ್ತು ವರ್ಷ ಆತು, ಈಗ ಚೆನ್ನನ ಹೆಂಡ್ತಿ ಸಹವಾಸ ಶುರು ಮಾಡಿದ್ರಲೋ.. ಪಾಪ ಚೆನ್ನಂಗೆ ಇದೆಲ್ಲ ಗೊತಿಲ್ಲ, ಅಂವ ಮಳ್ಳು ಜೇನು ಹಿಡೀತಾ ಕಾಡಲ್ಲಿ ಅಲಿತಾ..ರಾಣುಹುಳು ಹಿಂದೆ ಬಿದ್ದಿದ್ದಾ.... ಇಲ್ಲಿ ಅವನ ರಾಣಿ ತಲೆ ಈ ಭಟ್ರು ಕೆಡ್ಸೀರು, ಅವ್ಳು ಪಾಪದವ್ಳೂ,,, ಇವ್ರು ತಮ್ಮ ಸಂಸಾರ್ ಹಾಳು ಮಾಡೋದಲ್ದೇ ಊರಿನವ್ರನೆಲ್ಲಾ ಹಾಳು ಮಾಡ್ತ್ರು..ಮತೆ ಕೇಳಿರೇ ನಾನೇ ದೊಡ್ಡ ಜನ, ಯಕ್ಷಗಾನದಾಗೆ ಅಂತ ಹೇಳ್ತ್ರು..........ಈಗ ನಾನು ಬರ್ತಾ ಇರೋವಾಗ ಭಟ್ರು ಅವ್ರ ಮನೆಗೆ ಹೋದ್ರಪಾ... ಆ ಯಡವಟ್ಟು ಚೆನ್ನ ಎಲ್ಲಿ ಕಾಡಿಗೆ ಹೋದ್ನ ಮಳ್ಳು...................."

ಅನತಿ ದೂರದಲ್ಲಿ ನಿಂತು ತನ್ನದೇ ಸಂಸಾರದ ಕತೆ ಊರವರ ಬಾಯಲ್ಲಿರುವುದನ್ನು ಕೇಳಿದ ಚೆನ್ನನಿಗೆ ಒಮ್ಮೆ ಏನು ಮಾಡಬೇಕೆಂದು ತೋಚಲಿಲ್ಲ. ನಾಣಭಟ್ಟರ ಅಲ್ಲಿ ಇಲ್ಲಿನ ಕತೆ ತನ್ನ ಮನೆಯ ಚಾವಡಿಯಲ್ಲಿಯೇ ನಡೆಯುತ್ತಿದೆ ಎಂಬ ಲವಲೇಶದ ಅನುಮಾನವೂ ಇಷ್ಟು ದಿನ ಚೆನ್ನನಿಗೆ ಇರಲಿಲ್ಲ. ಅಕಸ್ಮಾತ್ ಕಿವಿಯಮೇಲೆ ಬಿದ್ದ ಈ ಸುದ್ದಿಯಿಂದ ಒಮ್ಮೆ ಅಧಿರನಾದ ಚೆನ್ನ ಮರುಕ್ಷಣ ಮೈಮೇಲೆ ದೇವರು ಬಂದವನಂತೆ ಕೊಂಡಿಯಲ್ಲಿದ್ದ ಕತ್ತಿಯನ್ನು ಎತ್ತಿ ಹಿಡಿದು ಮನೆಯತ್ತ ಓಡಿದ.
"ಏಯ್ ಹಲ್ಕಟ್ ರಂಡೇ ತೆಗಿ ಬಾಗಿಲ, ನಿಮ್ಮಿಬ್ಬರ ರುಂಡ ಚೆಂಡಾಡ್ತೀನಿ ಇವತ್ತು" ಎಂದು ದಬ ದಬ ಬಾಗಿಲ ಒದೆದ ಚೆನ್ನ. ಬಾಗಿಲು ತೆರೆಯಲಿಲ್ಲ. ಇನ್ನಷ್ಟು ಸಿಟ್ಟಿನಿಂದ ಬಾಗಿಲು ಒದ್ದ. ಚೆನ್ನನ ಹೊಡೆತಕ್ಕೆ ದಡಾರನೆ ಬಾಗಿಲು ಮುರಿದು ಬಿತ್ತು. ಮುರಿದ ಬಾಗಿಲ ಬದಿಯಿಂದ ನಾಣ ಭಟ್ಟರು ಓಡಲೆತ್ನಿಸಿದರು. ಉಗ್ರ ನರಸಿಂಹನ ಅವತಾರ ಎತ್ತಿ ನಿಂತಿದ್ದ ಚೆನ್ನ ಎಡ ಕೈಯಲ್ಲಿ ಭಟ್ಟರನ್ನು ಹಿಡಿದುಕೊಂಡು ಒಮ್ಮೆ ಹೆಂಡತಿಯತ್ತ ನೋಡಿ "ಈಗ ರಾಣಿ ಗೂಡಿಗೆ....."ಎಂದು ಅಬ್ಬರಿಸಿ ಕೂಗಿ ಮರುಕ್ಷಣ "ಗಂಡು....ಗಂಡು.... ಯಮನ ಬೀಡಿಗೆ" ಎಂದು ಕತ್ತಿ ಎತ್ತಿದ.
ಚೆನ್ನನ ಅಬ್ಬರಾಟಕ್ಕೆ ಮಾಡೊಳಗಿದ್ದ ಪಾರಿವಾಳ, ಗೂಡಿನಲ್ಲಿದ್ದ ಕೋಳಿ, ದಣಪೆ ಬಳಿಯಿದ್ದ ನಾಯಿ ತಮಗೆ ತಿಳಿಯದಂತೆ ಚಿತ್ರ ವಿಚಿತ್ರ ಸದ್ದು ಮಾಡುತ್ತಾ ಕಂಬಿ ಕಿತ್ತವು.
ಮನೆಯ ಅಂಗಳದಲ್ಲಿದ್ದ ಪೆಟ್ಟಿಗೆಯಲ್ಲಿ ಜೇನು ರಾಣಿಯೊಂದು ಆಗಷ್ಟೇ ತನ್ನ ಮಿಲನ ಮಹೋತ್ಸವ ಮುಗಿಸಿ ತತ್ತಿ ಸೇರಲು ಹವಣಿಸುತ್ತಿತ್ತು. ಮಿಲನಕ್ಕೆ ಕಾರಣವಾದ ಗಂಡು ಅಲ್ಲೆಲ್ಲೋ ದೂರದಲ್ಲಿ ತಿರುಗಿ ತಿರುಗಿ ಬೀಳುತ್ತಾ ಪ್ರಪಂಚಕ್ಕೆ ವಿದಾಯ ಹೇಳುತ್ತಿತ್ತು.

(ಕಳೆದ ವಾರ ಕರ್ಮವೀರದಲ್ಲಿ ಪ್ರಕಟಿತ ಕತೆ)

Saturday, October 16, 2010

ಸೊಬಗಿನ ಹಿಡ್ಲುಮನೆ


ಜಲಪಾತವೆಂದರೆ ಬೆಳ್ಳನೆಯ ನೊರೆಯ ರಾಶಿ, ಅದರ ಸೊಬಗು ಮಳೆಗಾಲದಲ್ಲಿ ಮೈದುಂಬಿ ನಿಲ್ಲುತ್ತದೆ. ಆ ಕಾರಣದಿಂದ ಜಲಪಾತ ನೋಡಲು ನಾವುನೀವೆಲ್ಲಾ ಮುಗಿಬೀಳುವುದು ಮಳೆಗಾಲದಲ್ಲಿಯೇ. ಆದರೆ ಮಳೆಗಾಲದಲ್ಲಿ ನೋಡಲಾಗದ ಜಲಪಾತಗಳೂ ಇವೆ ಎಂದರೆ ಅಚ್ವರಿಯೇ ಸರಿ. ಅಂತಹ ಅಪರೂಪದ ಜಲಪಾತ ಹಿಡ್ಲುಮನೆ ಫಾಲ್ಸ್. ಏಳು ಸುತ್ತಿನ ಕೋಟೆ ಅಲ್ಲೊಬ್ಬ ರಾಜಕುಮಾರಿ ಎಂಬ ಕತೆ ಎಲ್ಲರಿಗೂ ತಿಳಿದದ್ದೆ. ಅದೇ ರೀತಿ ಈ ಏಳು ಹಂತದಲ್ಲಿ ಬೀಳುವ ಹಿಡ್ಲುಮನೆ ಜಲಪಾತ ರಾಜಕುಮಾರಿಯ ಕತೆಯಷ್ಟೇ ಮುದನೀಡುತ್ತದೆ. ಸರಿ ಸುಮಾರು ಒಂದು ಕಿಲೋಮೀಟರ್ ದೂರದಿಂದ ಕಪ್ಪು ಶಿಲೆಯಮೂಲಕ ನಾಟ್ಯವಾಡುತ್ತಾ ಹರಿದುಬರುವ ಹಿಡ್ಲುಮನೆ ಜಲಪಾತ ಮನಸ್ಸಿಗೆ ಆಹ್ಲಾದಕರ ಎನಿಸುವುದು ನಿಶ್ಚಯ. ಆದರೆ ಜಲಪಾತ್ ವೀಕ್ಷಣೆಗೆ ನೀರುಬೀಳುವ ಜಾಗದಲ್ಲಿಯೇ ಶಿಲೆಗಳ ಮೂಲಕ ಸಾಗಬೇಕಾದ್ದರಿಂದ ಮಳೆಗಾಲದ ನಂತರದ ಜಲಪಾತವಿದು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಪರ್ವತದಿಂದ ಹೊರಡುವ ನೀರು ಎರಡು ಕವಲಾಗಿ ಒಂದೆಡೆ "ಅರಿಶನಗುಂಡಿ" ಎಂಬ ಜಲಪಾತವನ್ನು ನಿರ್ಮಿಸಿದರೆ ಇನ್ನೊಂದೆಡೆ "ಹಿಡ್ಲುಮನೆ" ಎಂಬ ಜಲಪಾತವನ್ನು ನಿರ್ಮಿಸಿದೆ. ಅರಿಶಿನಗುಂಡಿ ತಾಕತ್ತಿನ ಜನರಿಗೆ ಮಾತ್ರಾ ಸೀಮಿತ. ಆದ್ರೆ ಹಿಡ್ಲುಮನೆ ಮಾತ್ರಾ ಹಾಗಲ್ಲ ಸಾಮಾನ್ಯ ಜನರೆಲ್ಲ ಅನುಭವಿಸಬಹುದು. ಹೊಸನಗರ-ಕೊಲ್ಲೂರು ದಾರಿಯಲ್ಲಿ ಸಿಗುವ ನಿಟ್ಟೂರಿಗೆ ಬಂದು ಅಲ್ಲಿಂದ ವಾಹನ(ಒಂದು ಜೀಪಿಗೆ ೫೦೦ ರೂ ಬಾಡಿಗೆ) ಮುಖಾಂತರ ಎಂಟು ಕಿಲೋಮೀಟರ್ ದೂರ ಕ್ರಮಿಸಿದರೆ ಹಿಡ್ಲುಮನೆ ಜಲಪಾತ ಬುಡದ ವರೆಗೂ ತಲುಪಬಹುದು. ಆನಂತರ ಬತ್ತ-ಕಬ್ಬಿನ ಗದ್ದೆಯ ದಾರಿಯಲ್ಲಿ ಅರ್ದ ಕಿಲೋಮೀಟರ್ ಸಾಗಿದರೆ "ಹಿಡ್ಲುಮನೆ" ಜಲಪಾತದ ಬುಡ ಸಿಗುತ್ತದೆ. ವಸತಿ ವ್ಯವಸ್ಥೆ ಬಯಸುವವರಿಗೆ ನಿಟ್ಟೂರಿನ ಸಮೀಪದ ಕಲ್ಯಾಣಿ ನಿಸರ್ಗಧಾಮದ ಮಂಜಣ್ಣ ಸದಾ ಸಿದ್ದ.
ಸಾಮಾನ್ಯವಾಗಿ ಜಲಪಾತಗಳೆಂದರೆ ಕಡಿದಾದ ಜಾಗದಿಂದ ನೇರವಾಗಿ ಬೀಳುತ್ತದೆ. ಆದರೆ ಓರೆಯಾಗಿ ಬೀಳುವುದು ಹಿಡ್ಲುಮನೆ ಜಲಪಾತದ ವೈಶಿಷ್ಟ್ಯ. ಜಲಪಾತ ನೋಡುವವರು ನೀರುಬೀಳುವ ಜಾಗದಲ್ಲಿಯೇ ಏರುತ್ತಾ ಸಾಗಬೇಕು. ಹಾಗಾಗಿ ಭರ್ಜರಿ ಮಳೆಗಾಳದ ದಿನಗಳಾದ ಜೂನ್ ನಿಂದ ಸಪ್ಟೆಂಬರ್ ತಿಂಗಳುಗಳಲ್ಲಿ ಈ ಜಲಪಾತ ನೋಡಲು ಕಷ್ಟಕರ. ಆನಂತರದ ದಿನಗಳಲ್ಲಿ ಜಲಪಾತದ ದಾರಿಯಲ್ಲಿ ಸಾಗುತ್ತಾ ಹಂತಹಂತವಾಗಿ ಏಳು ಮಜಲುಗಳಲ್ಲಿ ಹರಿಯುವ ಜಲಪಾತದ ಸೊಬಗನ್ನು ಅನುಭವಿಸಬಹುದು.
ನಡುಬೇಸಿಗೆಯ ದಿನಗಳಲ್ಲೂ ಸೂರ್ಯನ ಕಿರಣವನ್ನು ನೆಲಕ್ಕೆ ಬಿಟ್ಟುಕೊಡದ ಬೃಹತ್ ಮರಗಳ ಸಾಲುಗಳನ್ನು ಹಾಗೂ ಪಶ್ಚಿಮಘಟ್ಟಗಳ ಸೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು.
ಒಂದು ಕಿಲೋಮೀಟರ್ ದೂರದವರೆಗೂ ಕಪ್ಪುಶಿಲೆಗಳ ಪದರುಗಳ ನಡುವೆ ನಾಟ್ಯವಾಡುತ್ತಾ ಬೆಳ್ಳಿನೊರೆಯಂತೆ ಹರಿಯುವ ನೀರು ಎಂತಹವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಪ್ರಕೃತಿಪ್ರಿಯರಿಗೆ ಇಷ್ಟವಾಗುತ್ತದೆ ಈ ಶಿಲಾಪಾತದಲ್ಲಿನ ಜಲಪಾತ. ಮಾರ್ಚಿನ ನಂತರ ನೀರಿನ ಓಘ ಕಡಿಮೆಯಾದರೂ ಕಪ್ಪುಕಲ್ಲುಗಳ,ಹಸಿರು ಕಾಡುಗಳ ಸೊಬಗನ್ನು ಸವಿಯಬಹುದು.
(ಇಂದಿನ ವಿಕೆ ಲವಲವಿಕೆಯಲ್ಲಿ ಪ್ರಕಟಿತ)

Monday, October 11, 2010

ಸೇವಂತಿಯೇ ಸೇವಂತಿಯೇ




"ಈ ವರ್ಷ ಎಷ್ಟು ಪಿಂಟಾಲ್ ಸೇವಂತೀ ಬೇಳ್ದೀಯಪ್ಪಾ..? ಎಲ್ಡು ಎಕ್ರೆಗೆ ಹಾಕಿದೀನಿ ಎಷ್ಟು ಬರ್ತಾವ್ ನೋಡ್ಬೇಕು" ಎಂದು ಸೇವಂತಿಯೆಂಬ ಸುಂದರ ಹೂವಿನ ಮಾತುಗಳು ಕೇಳಿಬಂದರೆ ಅದು ಬಯಲುಸೀಮೆಯ ರೈತರ ಬೆಳೆ ಹಾಗೂ ಬದುಕಿನ ಕತೆ. "ನಿಮ್ಮ ಮನೇಲಿ ಕಾರದ ಕಡ್ಡಿ, ಅರಿಶಿನ ಮುಡಿ ಶ್ಯಾವಂತಿಗೆ ಹಿಳ್ಳು ಇದ್ರೆ ನಂಗೊಂದು ಬೇಕು" ಎಂದು ಶ್ಯಾವಂತಿಗೆ ಎಂಬ ನಯನಮನೋಹರ ಹೂವಿನ ಹೆಸರು ಕೇಳಿತೆಂದರೆ ಅದು ಮಲೆನಾಡಿನ ಹೆಂಗಳೆಯರ ಚಿಟ್ಟೆ ಶ್ಯಾವಂತಿಗೆ ಹೂವಿನ" ಹವ್ಯಾಸದ ಕತೆ.
ಸೇವಂತಿ, ಶ್ಯಾವಂತಿ ಎಂಬ ಪುಷ್ಪ ಹೀಗೆ ಒಂದೆಡೆ ವ್ಯವಹಾರವಾಗಿ ಇನ್ನೊಂದೆಡೆ ಹವ್ಯಾಸವಾಗಿ ಹಾಸುಹೊಕ್ಕಾಗಿದೆ. ಬಯಲುಸೀಮೆಯಲ್ಲಿ ಎಕರೆಗಟ್ಟಲೆ ಹೊಲದಲ್ಲಿ ಒಂದೆರಡು ಬಣ್ಣದಲ್ಲಿ ಅಂದವಾಗಿ ನಿಲ್ಲುವ ಸೇವಂತಿ ಮಲೆನಾಡಿನ ಅಂಗಳದ ತುದಿಯ ಚಿಟ್ಟೆ ಎಂದು ಕರೆಯಿಸಿಕೊಳ್ಳುವ ಮೂರಡಿ ಅಗಲದ ಜಾಗದಲ್ಲಿ ಶ್ಯಾವಂತಿಗೆಯಾಗಿ ಹತ್ತು ಹಲವಾರು ಬಣ್ಣಗಳಲ್ಲಿ ವಿಧವಿಧ ಆಕಾರದಲ್ಲಿ ಅರಳಿ ನಿಲ್ಲುತ್ತಾಳೆ.
ಜಡಿ ಮಳೆಹೊಡೆದರೆ ಶ್ಯಾವಂತಿಗೆ ಗಿಡ ಬದುಕುವುದಿಲ್ಲ ಹಾಗಾಗಿ ಮಳೆ ತಗುಲದ ಸೂರಂಚಿನ ಚಿಟ್ಟೆ ಮಲೆನಾಡಿನ ಮಹಿಳೆಯರ ಹೂದೋಟವಾಗುತ್ತದೆ. ಜೂನ್ ತಿಂಗಳಿನಿಂದ ಬಂಧುಬಳಗ ನೆಂಟರಿಷ್ಟರ ಮನೆಯಿಂದ ಹಾಗೂ ಸ್ವಂತ ಖಜಾನೆಯಲ್ಲಿ ಕಾಪಿಟ್ಟ ಹಿಳ್ಳುಗಳು ಚಿಟ್ಟೆಯಲ್ಲಿ ಆರೈಕೆ ಪಡೆಯಲಾರಂಬಿಸುತ್ತವೆ. ಅಕ್ಟೋಬರ್ ಹೊತ್ತಿಗೆ ಮೋಡಮಾಯವಾಗಿ ಬಿಸಿಲ ರೇಷ್ಮೆ ಗಿಡದ ನೆತ್ತಿಗೆ ಬೀಳಲಾರಂಬಿಸಿದಕೂಡಲೇ ನಾನಾ ತರಹದ, ವಿವಿಧ ಬಣ್ಣದ ಹೂವುಗಳು ಅರಳಲಾರಂಬಿಸುತ್ತವೆ. ಆವಾಗ ಹೂದೋಟದ ಒಡತಿಯ ಗತ್ತು ಬದಲಾಗುತ್ತದೆ. ಹೆಚ್ಚು ಹೆಚ್ಚು ಹೂವುಗಳು ಅರಳಿ ನಿಂತರೆ ಆ ವರ್ಷ ಅವರ ಸುದ್ದಿ ಹತ್ತಿರದ ಊರುಗಳಿಗೆಲ್ಲಾ ಹಬ್ಬಿ ವೀಕ್ಷಕರ ದಂಡು ಹರಿದುಬರುತ್ತದೆ. ನಿತ್ಯ ಕಂಬಳಿ ಹುಳುವಿನಿಂದ ರಕ್ಷಣೆ ನೀಡಲು ಬೂದಿ ಸೋಕುವುದು, ಒಣಗಿದ ಎಲೆ ಕೀಳುವುದು ಒಡತಿಯ ಎರಡು ತಾಸು ಸಮಯ ಕಳೆಯುವ ಕೆಲಸವಾಗುತ್ತದೆ. ಅಪ್ಪಿತಪ್ಪಿಯೂ ಹೂವನ್ನು ಗಿಡದಿಂದ ಕೀಳದೆ ಅಲ್ಲಿಯೇ ಅಂದವನ್ನು ಸವಿಯುವುದು ಮಲೆನಾಡ ಮಹಿಳೆಯರ ಈ ಹವ್ಯಾಸದ ಪ್ರಮುಖ ಅಂಶಗಳಲ್ಲೊಂದು. ಹಾಗಂತ ನೋಡಲು ಬರುವ ವಿಶ್ವಾಸಕರಿಗೆ ಖಾಲಿ ಜಡೆಯಿಂದ ಕಳುಹಿಸುವ ಹಾಗಿಲ್ಲ, ಅದಕ್ಕಾಗಿ ಮೂಲೆಯಲ್ಲಿ ಒಂದೆರಡು ಬಿಳಿ ಬಣ್ಣದ ಆದರೆ ಹೆಚ್ಚು ಹೂವು ಬಿಡುವ ಶ್ಯಾವಂತಿಗೆ ಮುಡಿಗೇರಲು ಸಿದ್ಧವಾಗಿರುತ್ತದೆ.ಹೀಗೆ ಒಂದೆಡೆ ವಹಿವಾಟು ನಡೆಸಿ ಇನ್ನೊಂದೆಡೇ ಹವ್ಯಾಸಕ್ಕೆ ಬಳಕೆಯಾಗುತ್ತಿರುವ ಸೇವಂತಿ ತನ್ನ ಸುವಾಸನೆ ಹಾಗೂ ಅಂದದಿಂದ ಗಾರ್ಡನ್ ಪ್ರಿಯರ ಮನಸೂರೆಗುಳ್ಳುತ್ತಿದೆ
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ

Sunday, October 10, 2010

ಮೀನು ಕುಣಿ


ಮೀನು ಎಂಬ ಎರಡಕ್ಷರ ಹಲವರಿಗೆ ಬಾಯಲ್ಲಿ ನೀರು ತರಿಸುತ್ತದೆ. ಅದೂ ಪುಕ್ಕಟ್ಟೆ ಮೀನು ಅಂದರೆ ಇನ್ನಷ್ಟು ಖುಷಿ ನೀಡುವುದು ಖಂಡಿತ. ಹಾಗೆ ರುಚಿರುಚಿಯಾದ ಪುಕ್ಕಟ್ಟೆ ಮೀನು ತಿನ್ನಲು ಮಲೆನಾಡಿನ ಹೊಳೆಯಂಚಿನ ಊರುಗಳಲ್ಲಿ ನೀವು ವಾಸವಾಗಿರಬೇಕಷ್ಟೆ, ಆಗ ಮಳೆಗಾಲದ ನಂತರ ಮೀನೂಟ ದಿನಾಲೂ ಉಚಿತ.
ಜಡಿಮಳೆ ಮುಗಿದ ಮಾರನೇ ದಿನ ಮಲೆನಾಡಿನ ಹೊಳೆಬದಿಯಲ್ಲಿ ಮೂರ್ನಾಲ್ಕು ಜನ ನಿಂತಿದ್ದಾರೆಂದರೆ ಅವರು ಅಲ್ಲಿ ಕುಣಿ ಹಾಕಿದ್ದಾರೆ ಎಂದರ್ಥ. ಹರಿವ ನೀರಿಗೆ ಅಡಿಕೆ ಮರದಿಂದ ದೋಣಿಯನ್ನು ಮಾಡಿ ಹೊಳೆಯ ಬದಿಯಲ್ಲಿ ಬೀಳುವಂತೆ ಮಾಡುತ್ತಾರೆ. ಹಾಗೆಯೇ ಆ ನೀರು ಹರಿವ ಬುಡದಲ್ಲಿ ಒಂದು ಡಬ್ಬವನ್ನಿಟ್ಟು ಮನೆ ಸೇರುತ್ತಾರೆ. ಆ ಮೀನುಗಳೋ ಮಳೆಗಾಲ ಮುಗಿಯೆತೆಂದಾಗ ನೀರಿನ ಮೂಲ ಸೇರಿಕೊಳ್ಳುವ ತವಕದಲ್ಲಿ ಹರಿವ ಹೊಳೆಯ ವಿರುದ್ಧವಾಗಿ ಹೋಗುತ್ತಿರುತ್ತವೆ. ಹಾಗೆ ಹೊರಟ ಮೀನುಗಳಿಗೆ ಈ ಸಣ್ಣ ಸಣ್ಣ ತೊರೆಗಳು ಅಪ್ಯಾಯಮಾನವೆನಿಸಿ ಅಲ್ಲಿ ಹೋಗಿ ನಂತರ ದಿಡೀರನೆ ಸಿಗುವ ಇಳಿಜಾರಿನಲ್ಲಿ ಜಾರುತ್ತಾ ಡಬ್ಬಿಯಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ಸಾವಿಗೆ ತಾವೇ ಚರಮಗೀತೆ ಹಾಡುತ್ತಾ ಕುಣಿ ಹಾಕಿದವರು ಬರುವವರೆಗೂ ಅಲ್ಲಿಯೇ ಪಳಕ್ಕನೆ ಎಗರುತ್ತಾ ಕುಣಿಯುತ್ತಾ ಇರುತ್ತವೆ. ಸಂಜೆಮುಂದೆ ಇಟ್ಟುಹೋಗಿದ್ದ ಡಬ್ಬ ಬೆಳಿಗ್ಗೆ ಬರುವ ಹೊತ್ತಿಗೆ ಮೀನುಗಳಿಂದ ತುಂಬಿತುಳುಕುತ್ತಿರುತ್ತದೆ. ಒಂದು ಕೂಣಿಯನ್ನು ಮೂರ್ನಾಲ್ಕು ಜನ ಸೇರಿ ಹಾಕುವುದರಿಂದ ಅಲ್ಲಿ ಸಮಪಾಲು. ಪಾಲು ಹಂಚಿಕೊಂಡು ಮತ್ತೆ ಡಬ್ಬ ಅಲ್ಲಿಯೇ ಇಟ್ಟು ಹೊರಟರೆ ಮತೆ ಆಯುಷ್ಯ ಕಡಿಮೆಯಾದ ಮೀನುಗಳ ದಾರಿ ಅದರತ್ತ. ಮನುಷ್ಯರ ಚಿತ್ತ ಡಬ್ಬದತ್ತ.
ಹೀಗೆ ಸುಲಭವಾಗಿ ಮೂರ್ನಾಲ್ಕು ತಿಂಗಳು ಮೀನಿನೂಟ ಪುಕ್ಸಟ್ಟೆ ಮಾಡುವ ಮಲೆನಾಡು ಮಂದಿಯ ಅದೃಷ್ಟ ಯಾರಿಗುಂಟು ಯಾರಿಗಿಲ್ಲ. ಆದರೆ ಹೀಗೆ ಮೂರ್ನಾಲ್ಕು ತಿಂಗಳು ಪುಕ್ಕಟ್ಟೆ ರುಚಿ ಹಚ್ಚಿಸಿದ ಮೀನು ನಂತರದ ಒಂಬತ್ತು ತಿಂಗಳು ಹತ್ತಿದ ರುಚಿ ತಣಿಸಲು ಜೇಬು ಖಾಲಿಮಾಡಿಸಿಬಿಡುತ್ತದೆ.

(ವಿಕೆ ಲವಲವಿಕೆಯಲ್ಲಿ ಶನಿವಾರ ಪ್ರಕಟಿತ ಬರಹ)

Thursday, September 30, 2010

ರಾಮನಗಿಂಡಿ ಕಡಲ ಕಿನಾರೆ


ಸಮುದ್ರದ ಅಲೆಗಳ ನೋಟಕ್ಕೆ ಅದರಿಂದ ಉಂಟಾಗುವ ಶಬ್ಧಕ್ಕೆ ಅಲ್ಲಿ ಆಡಬಹುದಾದ ಆಟಕ್ಕೆ ಮನುಷ್ಯ ಮನಸೋತು ಶತಮಾನಗಳೇ ಕಳೆಯಿತು. ಕಡಲಿನ ಭೋರ್ಗರತ ಪ್ರಪಂಚವನ್ನು ಮರೆಯಿಸಿಬಿಡುತ್ತದೆ. ಪಂಚೇಂದ್ರಿಯಗಳನ್ನೂ ಅನುಭವಕ್ಕೆ ತೊಡಗಿಸಬಹುದಾದ ವಿಷಯಗಳಲ್ಲಿ ಕಡಲೂ ಒಂದು ಎನ್ನುವುದರಲ್ಲಿ ಲವಲೇಶದ ಸಂಶಯವೂ ಇಲ್ಲ. ಹಾಗಾಗಿ ಮನುಷ್ಯ ಸಮತಟ್ಟು ಸಮುದ್ರ ಸಿಕ್ಕ ಕಡೆಯಲ್ಲೆಲ್ಲಾ ಅದಕ್ಕೊಂದು ಹೆಸರನ್ನಿಟ್ಟು ಅಲ್ಲಿ ತಾನು ವಿರಮಿಸಲು ಜಾಗ ಕಂಡುಕೊಂಡಿದ್ದಾನೆ.
ಪ್ರಪಂಚದ ಸಮುದ್ರ ತೀರದ ದೇಶಗಳು ಸಾಮಾನ್ಯವಾಗಿ ಕಡಲನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡಿವೆ. ದೃಢ ಸರ್ಕಾರಗಳು ಮುನ್ನೋಟವಿರುವ ಆಡಳಿತಗಾರರು ಇರುವ ದೇಶಗಳು ವ್ಯವಸ್ಥಿತವಾಗಿ ಸಮುದ್ರವನ್ನು ಬಳಸಿಕೊಂಡರೆ ಹಿಂದುಳಿದ ದೇಶಗಳು, ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ಕೊಡದ ದೇಶಗಳು ಸಮುದ್ರದ ಕಿನಾರೆಯನ್ನು ಹಾಗೆ ಬಿಟ್ಟಿವೆ. ಆದರೂ ಕೂಡ ಅಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ ಅದರಿಂದಾಗಿ ಪ್ರವಾಸೋದ್ಯಮ ಬೆಳದಿದೆ. ಭಾರತದಂತಹ ದೇಶ ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಸಂಪೂರ್ಣ ಬಳಸಿಕೊಳ್ಳದಿದ್ದರೂ ವಿದೇಶಿಗರ ಬಳಕೆಯಿಂದಾಗಿ ಹಲವಾರು ಕಿನಾರೆಗಳು ಬೀಚ್ ಆಗಿ ಪರಿವರ್ತಿತಕೊಂಡು ಪ್ರಖ್ಯಾತವಾಗಿವೆ. ಗೋವಾ ಕೇರಳ ಸರ್ಕಾರಗಳು ಪ್ರವಾಸೋದ್ಯಮಕ್ಕೆ ತುಸು ಹೆಚ್ಚು ಪ್ರಾಶಸ್ತ್ಯ ಕೊಟ್ಟದ್ದರಿಂದ ಅಲ್ಲಿ ಸಮುದ್ರತಟಗಳು ಹೆಸರುವಾಸಿ. ಕರ್ನಾಟಕದ ಸಮುದ್ರ ತಟಗಳಾದ ಕಾರವಾರ ಗೋಕರ್ಣ, ಮಲ್ಪೆ, ಮಂಗಳೂರು ಮುಂತಾದಲ್ಲಿ ಬೀಚ್ ಗಳನ್ನು ಸರ್ಕಾರಕ್ಕಿಂತ ಪ್ರವಾಸಿಗರೇ ಭೇಟಿ ನೀಡಿ ವಿಶ್ವವಿಖ್ಯಾತಗೊಳಿಸಿದ್ದಾರೆ ಎನ್ನಬಹುದು. ಆದರೆ ಇನ್ನೂ ಅಜ್ಞಾತವಾಗಿಯೇ ಉಳಿದಿರುವ ಅತ್ಯಂತ ಮನಮೋಹಕವಾಗಿರುವ ಸಮುದ್ರತೀರಗಳು ಹಲವಾರು ಇವೆ ಅಂತಹ ಒಂದು ಸುಂದರ ಸಮುದ್ರ ಕಿನಾರೆಯ ಹೆಸರು ರಾಮನಗಿಂಡಿ ಕಡಲ ಕಿನಾರೆ.
ಸಾಮಾನ್ಯವಾಗಿ ನಾವು ಬೀಚ್ ಗಳಿಗೆ ನೆಲಮಟ್ಟದಲ್ಲಿ ಪ್ರವೇಶಿಸುತ್ತೇವೆ. ಹಾಗಾಗಿ ಸಮುದ್ರ ರಾಜನ ಆರ್ಭಟ ವಿಸ್ತಾರವಾಗಿ ನಮಗೆ ಕಾಣಿಸುವುದಿಲ್ಲ. ಗೋಕರ್ಣದ ಓಂ ಬೀಚ್ ನಂತಹ ಎತ್ತರದ ಪ್ರದೇಶದಿಂದ ಪ್ರವೇಶಿಸಲು ಅವಕಾಶವಿರುವ ಸಮುದ್ರ ಕಿನಾರೆ ಅಪರೂಪ. ಅಂತಹ ಅಪರೂಪದ ಕಿನಾರೆ ಈ ರಾಮನಗಿಂಡಿ ಎಂಬ ಊರಿನದು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ ರಲ್ಲಿ ಮಂಗಳೂರಿನಿಂದ ಕಾರವಾರಕ್ಕೆ ಹೋಗುವಾಗ ಹೊನ್ನಾವರದಿಂದ ೧೩ ಕಿಲೋಮೀಟರ್ ದೂರದಲ್ಲಿ ಬತ್ತಗೇರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಹೋದರೆ ಸಿಗುವ ಊರೇ ರಾಮನಗಿಂಡಿ. ಈ ಊರು ಕೇವಲ ೮ ಮನೆಗಳಿರುವ ಸುಂದರ ಹಳ್ಳಿ. ಸ್ಥಳೀಯವಾಗಿ ದೊರಕುವ ಕಲ್ಲಿನಿಂದ ಮೂರ್ತಿಗಳನ್ನು ಕೆತ್ತುವ ಭಂಡಾರಿ ಕುಂಟುಂಬದವರು ಮಾತ್ರ ಇರುವ ಊರು ಇದು. ರಾಮನಗಿಂಡಿಗೆ ಪ್ರವೇಶ ಪಡೆಯುವ ಜಾಗದಲ್ಲಿ ನಿಂತು ಸಮುದ್ರ ನೋಡಿದಾಗ ಸಮುದ್ರದ ಅಗಾಧ ಪರಿಚಯವಾಗುತ್ತದೆ. ನಂತರ ಅಲ್ಲಿಂದ ಅರ್ದ ಕಿಲೋಮೀಟರ್ ದೂರ ಇಳಿಜಾರು ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಪ್ರಶಾಂತ, ಸ್ವಚ್ಚ ಸಮುದ್ರ ನಿಮ್ಮನ್ನು ಸ್ವಾಗತಿಸುತ್ತದೆ.
ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದ್ದರಿಂದ ಹಾಗೂ ಬಂಡಾರಿ ಕುಟುಂಬದ ಜನರು ಸ್ವಲ್ಪಮಟ್ಟಿಗಿನ ಕಾಳಜಿ ತೆಗೆದುಕೊಳ್ಳುವುದರಿಂದ ಸಮುದ್ರ ತೀರ ಅತ್ಯಂತ ಸ್ವಚ್ಚವಾಗಿದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ರಾಮ ಲಕ್ಷ್ಮಣರು ಯಾಗವನ್ನು ನಡೆಯಿಸಿದರಂತೆ, ಹಾಗಾಗಿ ಇದಕ್ಕೆ ರಾಮನಗಿಂಡಿ ಎಂಬ ಹೆಸರು ಬಂದಿದೆಯಂತೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ಗುಡ್ಡದ ಅಂಚಿನಲ್ಲಿ ಹೊಂಡ ತೆಗೆದರೆ ಕೆಂಪುಮಣ್ಣಿನಡಿಯಲ್ಲಿ ಬಿಳಿಯದಾದ ಭಸ್ಮ ಸಿಗುತ್ತದೆ. ಹಣೆಗೆ ಹಚ್ಚುವ ವಿಭೂತಿಯಂತಿರುವ ಭಸ್ಮ ಸಂಗ್ರಹಿಸಿ ತೆಗೆದುಕೊಂಡು ಹೋಗಲಿಕ್ಕಾಗಿಯೇ ಸಿರಸಿ, ಸಾಗರ ದಂತಹ ದೂರದೂರಿನಿಂದ ಇಲ್ಲಿಗೆ ಜನರು ಬರುತ್ತಾರೆ ಎನ್ನುತ್ತಾರೆ ಸ್ಥಳೀಯ ಆನಂದ ಭಂಡಾರಿ. ಹಾಗೆಯೇ ಸಮುದ್ರದಂಚಿನ ಗುಡ್ಡದಲ್ಲಿ ಹೇರಳ ಸಿಗುವ ಮೂರ್ತಿ ತಯಾರಿಸುವ ಕಲ್ಲು ಇಲ್ಲಿನ ಭಂಡಾರಿ ಕುಟುಂಬದ ಸದಸ್ಯರ ಹಸ್ತದಿಂದ ವಿವಿಧ ದೇವರುಗಳ ಆಕಾರ ಪಡೆದು ದೂರದೂರಿಗೆ ಹೋಗುತ್ತವೆ.
ಈ ಕಡಲ ಕಿನಾರೆಯ ಜವಾಬ್ದಾರಿಯನ್ನು ಸ್ವತ: ಊರಿನವರೇ ಸ್ವಘೋಷಿತವಾಗಿ ತೆಗೆದುಕೊಂಡಿರುವುದರಿಂದ ಪ್ರವಾಸಿಗರ ದೌರ್ಜನ್ಯಕ್ಕೆ ಒಳಗಾಗಿಲ್ಲ. ಸೂರ್ಯಾಸ್ತ ಹಾಗೂ ಸೂರ್ಯೋದಯ ಮತ್ತು ಸುಂದರ ಸಮುದ್ರವನ್ನೂ ಎತ್ತರದ ಸ್ಥಳದಲ್ಲಿ ನಿಂತು ಒಂದೇ ಜಾಗದಲ್ಲಿ ಸವಿಯಬಹುದಾದ ಅಪರೂಪದ ಜಾಗ ಈ ರಾಮನಗಿಂಡಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)

Monday, September 27, 2010

ಪವರ್ ಕಟ್ ಇಲ್ಲದ ಕಾನುತೋಟ




ಉತ್ತಮ ಗುಣಮಟ್ಟದ ವಿದ್ಯುತ್, ಪವರ್ ಕಟ್ ಪ್ರಶ್ನೆಯೇ ಇಲ್ಲ, ಸಿಂಗಲ್ ಫೇಸ್ ಕಾಟ ಗೊತ್ತಿಲ್ಲ, ದಿನಪೂರ್ತಿ ಸಮರ್ಪಕ ವಿದ್ಯುತ್ ಪೂರೈಕೆ, ಓಹ್ ಇಷ್ಟು ಓದಿದ ಮೇಲೆ ನೀವು ಇದು ನಮ್ಮ ದೇಶದ ಸುದ್ದಿಯೇ ಅಲ್ಲ ಎಂಬ ವಿಚಾರಕ್ಕೆ ಬಂದಿರುತ್ತೀರಿ, ಆದರೆ ಇದು ನಮ್ಮದೇ ರಾಜ್ಯದ ಪುಟ್ಟ ಹಳ್ಳಿಯ ಸುದ್ಧಿ. ವಿಷಯ ಅಷ್ಟೇ ಅಲ್ಲ ಎಷ್ಟೇ ವಿದ್ಯುತ್ ಉಪಯೋಗಿಸಿದರೂ ಬಿಲ್ ಕಟ್ಟಬೇಕಾಗಿಲ್ಲ, ಬಿಲ್ ಕಟ್ಟುವ ಕಿರಿಕಿರಿ ಅಥವಾ ಹಣ ಕಟ್ಟದಿದ್ದರೆ ಡಿಸ್‌ಕನೆಕ್ಟ್ ಮಾಡುವ ಭಯವೂ ಇಲ್ಲ. ಮೊದಲನೆಯದಲ್ಲ ಇದ್ದರೂ ಇರಬಹುದು ಇದು ಮಾತ್ರಾ ಬೊಗಳೆ ಎಂಬ ತೀರ್ಮಾನಕ್ಕೆ ಬಂದಿರಾದರೆ ಅದು ಸುಳ್ಳು.
ಶಿವಮೊಗ್ಗ ಸಾಗರ ತಾಲ್ಲೂಕು ಕಾನುತೋಟ ಎಂಬುದು ಸಾಗರದಿಂದ ಜೋಗಕ್ಕೆ ಸಾಗುವ ಮಾರ್ಗದಲ್ಲಿರುವ ಒಂಟಿಮನೆಯ ಪುಟ್ಟ ಹಳ್ಳಿ. ಅಲ್ಲಿಗೆ ಮೆಸ್ಕಾಂ ವಿದ್ಯುತ್ ಪೂರೈಕೆ ಮಾಡಿದೆಯಾದರೂ ಕಾಡಿನ ನಡುವೆ ಹಾದುಹೋಗಿರುವ ಲೈನ್ ನಿಂದಾಗಿ ವಾರಕ್ಕೊಮ್ಮೆ ವಿದ್ಯುತ್ ಮುಖ ನೋಡುವುದು ಕಷ್ಟವಾಗಿತ್ತು. ಆಗ ಕಾನುತೋಟದ ಗುರು ಮನಸ್ಸು ಮಾಡಿದ್ದು ಸ್ವಯಂ ವಿದ್ಯುತ್ ತಯಾರಿಕೆಗೆ. ಗುಡ್ಡದ ಬುಡದಲ್ಲಿರುವ ಗುರುರವರ ಮನೆಗೆ ಗುಡ್ಡದ ನೆತ್ತಿಯಿಂದ ಪ್ರಕೃತಿದತ್ತವಾದ ಅಬ್ಬಿನೀರು ಹರಿದು ಬಂದು ವ್ಯರ್ಥವಾಗಿ ಹೊಳೆಗೆ ಸೇರಿ ಹೋಗುತ್ತಿತು. ಅದಕ್ಕೆ ಪೈಪ್ ಲೈನ್ ಹಾಕಿ ಅಲ್ಲೊಂದು ಜನರೇಟರ್ ಕೂರಿಸಿದರು ಗುರು. ಅಲ್ಲಿಂದೀಚೆಗೆ ಕಾನುತೋಟದ ಗುರು ಅವರಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ ಅದೂ ಪೈಸಾ ಖರ್ಚಿಲ್ಲದೆ. ವಿದ್ಯುತ್ ಟರ್ಬೈನ್ ತಿರುಗಿಸಿದನಂತರದ ನೀರು ತೋಟಕ್ಕೆ ಬಳಕೆಯಾಗುತ್ತದೆ. ಈಗಾಗಲೆ ಯಶಸ್ವೀ ಆರು ವರ್ಷಗಳನ್ನು ಸ್ವಯಂ ವಿದ್ಯುತ್ ತಯಾರಿಕೆ ಮಾಡಿಕೊಂಡು ಪೂರೈಸಿಕೊಳ್ಳುತ್ತಿರುವ ಗುರು ಪವರ್ ಕಟ್ ಮುಂತಾದ ಕಿರಿಕಿರಿಯಿಂದ ಮುಕ್ತರಾಗಿದ್ದಾರೆ. ಹೀಗೆ ಅವಕಾಶವಿರುವ ಜನರು ಮನಸ್ಸುಮಾಡಿದರೆ ಮೆಸ್ಕಾಂ ನ ಹೊರೆಯೂ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಗಳಾಗಬಹುದು ಎನ್ನುವುದು ಕಾನುತೋಟದ ಗುರುರವರ ಮಾತು.
ಸಂಪರ್ಕ: ೦೮೧೮೩-೨೦೭೨೫೩
(ವಿಕ ಲವಲವಿಕೆಯಲ್ಲಿ ಇಂದು ಪ್ರಕಟಿತ)

Saturday, September 25, 2010

ಕೋಣೆಯ ಸೊಗಸಿಗೆ ಕಾಷ್ಠ ಕಲೆ


ಕಲಾವಿದನ ಕೈಗೆ ಕಸ ಸಿಕ್ಕರೂ ರಸವೆ. ಅವನಲ್ಲಿರುವ ಕಲೆಗಾರ ಕಸದಲ್ಲಿ ಅಡಗಿಕುಳಿತಿರುವ ರಸವನ್ನು ಹುಡುಕಿ ಮೇಲೆತ್ತುತ್ತಾನೆ. ಮಣ್ಣನ್ನು ಮೂರ್ತಿಗಳನ್ನಾಗಿಸಿ, ಶಿಲೆಯನ್ನು ಶಿಲ್ಪವನ್ನಾಗಿಸಿ, ಬಣ್ಣವನ್ನು ಚಿತ್ರವನ್ನಾಗಿಸಿ ಹೀಗೆ ನಾನಾ ವಿಧದಲ್ಲಿ ಜಡಕ್ಕೆ ಚೇತನ ತುಂಬುವ ಕೆಲಸ ಕಲಾವಿದನಿಂದಲ್ಲದೆ ಮತ್ಯಾರಿಂದನೂ ಸಾದ್ಯವಿಲ್ಲ. ಅಥವಾ ಅಂತಹ ಜನರಿಗೆ ಕಲಾವಿದರು ಎನ್ನಬಹುದು. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಗೋಟಗಾರು ಗಣಪತಣ್ಣ ಸೇರುತ್ತಾರೆ.
ಸಾಗರ ತಾಲ್ಲೂಕಿನ ಜೋಗ ಮಾರ್ಗದಲ್ಲಿ ಸಾಗರದಿಂದ ೧೨ ಕಿಲೋಮೀಟರ್ ದೂರದಲ್ಲಿ ಸಿಗುವ ಗೋಟಗಾರು ಎಂಬುದು ಕೇವಲ ಐದುಮನೆಗಳ ಪುಟ್ಟ ಹಳ್ಳಿ. ಅಲ್ಲಿನ ಕೃಷಿಕ ಗಣಪತಿಯವರಿಗೆ ತಮ್ಮ ತೋಟದ ಸುತ್ತಮುತ್ತ ಹಾಗೂ ಕಾಡಿನಲ್ಲಿ ಸಿಗುವ ಒಣಗಿದ ಮರಗಳಲ್ಲಿ ಅಡಗಿಕುಳಿತಿರುವ ಆಕಾರಗಳನ್ನು ಹೊರತೆಗೆಯುವುದು ಹವ್ಯಾಸ. ಜನಸಾಮಾನ್ಯರಿಗೆ ಮರದಬೊಡ್ಡೆಯಾಗಿ ಕಾಣಿಸುವ ಒಣಗಿದ ಮರಗಳು ಅವರಿಗೆ ವಿಶಿಷ್ಠ ವಿಶೇಷ ಆಕಾರಗಳಾಗಿ ಕಾಣಿಸುತ್ತವೆ. ಹಾಗಾಗಿ ಅವರ ಮನೆಯ ಪ್ರವೇಶದ್ವಾರದಲ್ಲಿಯೇ ನಂದಿಮರದಲ್ಲಿ ಅಡಗಿಕುಳಿತಿದ್ದ ಈಶ್ವರನ ವಾಹನ ನಂದಿಯಾಗಿ ಮನೆಗೆ ಬರುವ ಜನರನ್ನು ಸ್ವಾಗತಿಸುತ್ತಾ ಕುಳಿತಿದ್ದಾನೆ. ಕಾಡಿನಲ್ಲಿ ಸತ್ತು ಮಣ್ಣಾಗಿಹೋಗುತ್ತಿದ್ದ ಗಿಡದ ಬೇರುಗಳು, ಮತ್ತಿ, ಬೀಟೆ ಮುಂತಾದ ಹತ್ತು ಹಲವಾರು ಜಾತಿಗಳ ಮರದ ಬೊಡ್ಡೆಗಳು ವಿವಿಧ ಆಲಂಕಾರ ಪಡೆದು ಮನೆಯನ್ನು ಕಾಷ್ಠ ಶಿಲ್ಪಗಳ ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಕಾಡಿನಲ್ಲಿ ಸತ್ತುಹೋಗಿರುವ ಮರದ ಬೊಡ್ಡೆ ಆಕಾರಪಡೆದು ಕಾಸು ಖರ್ಚಿಲ್ಲದ ಮನೆಯಲ್ಲಿರುವ ಟಿಪಾಯಿಯ ರೂಪ ಪಡೆದು ಕುಳಿತಿದೆ. ಚಿಕ್ಕ ಚಿಕ್ಕ ಮಾನವನ ಆಕಾರಗಳಿಂದ ಹಿಡಿದು ನವಿಲು, ಹಾವು, ಗಿಳಿ, ಜಿಂಕೆ ಗಣಪತಿ ಮೂರ್ತಿ ಹೀಗೆ ಎಲ್ಲವೂ ಮರದ ಬೇರುನಾರಿನಿಂದಲೇ ರೂಪತಳೆದು ಇಲ್ಲಿ ಜೀವಕಳೆಪಡೆದುಕೊಂಡು ನಿಂತಿದೆ. ಎಂದೋ ಸತ್ತುಹೋಗಿ ಕಾಡಿನಲ್ಲಿ ಮಣ್ಣು ಸೇರುತ್ತಿದ್ದ ಮರದ ಬೊಡ್ಡೆಗಳ ಆಕಾರ ಗಣಪತಿಯವರ ಕೈಯಿಂದ ಜೀವ ತಳೆದು ಅವರಿಂದ ಅದು ಸಿಕ್ಕ ಕತೆಯನ್ನು ಸ್ವಾರಸ್ಯವಾಗಿ ಹೇಳಿಸಿಕೊಂಡು ಮುದನೀಡುತ್ತವೆ.
ಮಗ ಅರುಣ ಕೂಡ ಇಂತಹ ಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಹಾಗೂ ಸೊಸೆ ಸೌಮ್ಯ ಯಕ್ಷಗಾನ ಕಲಾವಿದೆಯಾಗಿರುವುದರಿಂದ ಅವರುಗಳ ಉತ್ತಮ ಸಹಕಾರ ಗೋಟಗಾರು ಗಣಪತಿಯವರಿಗೆ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಷ್ಠಶಿಲ್ಪ ಅತ್ಯುತ್ಸಾಹದಿಂದ ಮುಂದುವರೆದಿದೆ. ಜೋಗ ನೋಡಲು ಹೋದಾಗ ಒಮ್ಮೆ ನೀವೂ ಭೇಟಿ ನೀಡಿ ಆಸ್ವಾದಿಸಬಹುದು. ಗಣಪತಿಯವರ ಫೋನ್ ನಂ: ೦೮೧೮೩-೨೩೧೯೬೯
(ಲವಲವಿಕೆಯಲ್ಲಿ ಇಂದು ಪ್ರಕಟಿತ)

Wednesday, September 22, 2010

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ ಮೊದಲಿನ ಹಾಗಿಲ್ಲ. ಇದಕ್ಕೆ ಒಣಗಿದರೆ ಕೆಜಿಯೊಂದಕ್ಕೆ ನಾಲ್ಕುನೂರು ರೂಪಾಯಿ ದರ. ಹಾಗಾಗಿ ಹೆಂಗಸರು ಇದನ್ನು ಉಪಯೋಗಿಸಲು ಸ್ವಲ್ಪ ಕಂಜೂಸ್ ಆರಂಭಿಸಿದ್ದಾರೆ. ಹಿತ್ತಲಿನಿಂದ ಕೊಯ್ದು ಒಣಗಿಸಿ ಮೂರು ತಿಂಗಳಿಗೊಮ್ಮೆ ಲಟಾರಿ ಎಂ ಎಯ್ಟಿ ಗಾಡಿಯಲ್ಲಿ ಬರುವ ಚುಪುರು ಗಡ್ಡದ ಸಾಬುವಿಗೆ ಮಾರಿಬಿಡುತ್ತಾರೆ. ಕಾ ಕಾ ಎನ್ನುವ ಕಾಗೆಗೆ ಇದು ಬಹಳ ಪ್ರೀತಿಯ ಹಣ್ಣು, ಅದರಿಂದ ರಕ್ಷಿಸಿಕೊಂಡು ಕ್ವಿಂಟಾಲ್ ಗಟ್ಟಲೆ ಬೆಳೆದರೆ ವರ್ಷಕ್ಕೆ ಲಕ್ಷಾಂತರ ಹಾಗೂ ಹತ್ತು ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಸಂಪಾದಿಸಬಹುದು, ಆದರೆ ತಿಪ್ಪರಲಾಗ ಹಾಕಿದರೂ ಒಂದು ಕೆಜಿಗಿಂತ ಜಾಸ್ತಿ ಬೆಳೆಯಲಾಗುವುದಿಲ್ಲ ಎನ್ನುವುದು ಗುಟ್ಟಿನ ಮಾತು. ಒಮ್ಮೆ ಸಿಕ್ಕಾಗ ಒಂದೇ ಒಂದು ತಿಂದು ನೋಡಿ, ಆನಂತರ ಅವಾಂತರ ನನಗೆ ಹೇಳಿ.

Monday, September 20, 2010

ಅಡಿಕೆ ಕೃಷಿಗೆ ’ಅಮೇರಿಕನ್’ ಯುವಕ


ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ, ಯುವಕ ಯುವತಿಯರು ಷಹರದ ಬಣ್ಣದ ಬದುಕಿಗೆ ಮನಸೋತು ಹಳ್ಳಿ ತೊರೆದು ಪಟ್ಟಣ ಸೇರುತ್ತಿದ್ದಾರೆ, ತೋಟದ ಕೆಲಸಕ್ಕೆ ಕೂಲಿಕಾರ್ಮಿಕರು ಸಿಗುತ್ತಿಲ್ಲ, ಎಂಬಂತಹ ಕೊರಗಿನ ಮಾತುಗಳ ನಡುವೆ ಪಟ್ಟಣದ ಬದುಕನ್ನು ತೊರೆದು ಕೃಷಿಯನ್ನು ಆಯ್ದುಕೊಂಡು ಹಳ್ಳಿಗೆ ಬಂದಿರುವ ದಂಪತಿಗಳ ಕತೆ ಇಲ್ಲಿದೆ.
ಸಾಗರದ ಸಮೀಪದ ಮಂಕಾಳೆ ಊರಿನವರಾಗಿದ್ದ ಕೃತಿ. ಆರ್. ತಾವು ದೆಹಲಿಯಲ್ಲಿ ಎಂ.ಫಿಲ್ ಓದುತ್ತಿದ್ದಾಗ ಮೆಚ್ಚಿದ್ದು ಅಮೇರಿಕಾದ ಟಾಡ್ ಅವರನ್ನು. ಮಗಳು ಮೆಚ್ಚಿದ ಅಮೆರಿಕಾದ ಅಳಿಯನನ್ನು ಮನೆಯವರೂ ಕೂಡ ತಂಟೆ ತಕರಾರಿಲ್ಲದೆ ಸ್ವಾಗತಿಸಿದರು. ಮದುವೆಯ ನಂತರ ಆರು ವರ್ಷಗಳ ಕಾಲ ದೆಹಲಿ ಅಮೆರಿಕಾ ಮುಂತಾದ ಕಡೆಗಳಲ್ಲಿ ಕೃತಿ ಹಾಗೂ ಟಾಡ್ ದುಡಿದರು. ದಂಪತಿಗಳಿಬ್ಬರೂ ಸಂಗೀತ ಪ್ರಿಯರಾದ್ದರಿಂದ ಸಂಜೆ ಸಮಯವನ್ನು ಸಂಗೀತಕ್ಕಾಗಿ ಮೀಸಲಿಡುವ ಆಸೆಯಿತ್ತು. ದುಡಿಮೆಗೆ ಪ್ರಾಧಾನ್ಯತೆಯಿತೆಯಿರುವ ಪಟ್ಟಣದಲ್ಲಿ ಸಂಜೆ ತಮ್ಮ ಹವ್ಯಾಸಕ್ಕೆ ಮೀಸಲಿಡಲು ಆಗುತ್ತಿರಲಿಲ್ಲ. ಆವಾಗ ಅವರಿಗೆ ಮನಸ್ಸಿನ ಮೂಲೆಯಲ್ಲಿ ಚಿಗುರೊಡೆದ ಆಸೆ ಕೃಷಿಕರಾಗಬೇಕು ಎಂದು. ಆ ಆಸೆಯ ಫಲ ಇಂದು ಅಮೆರಿಕನ್ ಯುವಕ ಟಾಡ್ ಲಿರಿಚ್ ಹಾಗೂ ಕೃತಿಯವರನ್ನು ಅಡಿಕೆ ತೋಟದ ಮಾಲಿಕರನ್ನಾಗಿಸಿದೆ.
ಸಾಗರದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಪುರಪ್ಪೆಮನೆ ಎಂಬ ಊರು ಸಿಗುತ್ತದೆ. ಅಲ್ಲಿ ಅಪ್ಪೆಮನೆಯತ್ತ ಒಂದುಕಿಲೋಮೀಟರ್ ಸಾಗಿದರೆ ಈ ಅಮೇರಿಕನ್ ಅಳಿಯ ಊರಿನ ಮಗಳು ಅವರ ಸಣ್ಣ ಫಾರಂ ಹೌಸ್ ನೋಡಬಹುದು. ಪಕ್ಕಾ ಪಕ್ಕಾ ವಿದೇಶಿ ಶೈಲಿಯಮನೆ ನೋಡಿದ ತಕ್ಷಣ ಇದು ಪರಂಪರಾಗತ ಮಲೆನಾಡು ಮನೆ ಅಲ್ಲ ಎಂಬುದು ನಿಮಗೆ ತೋಚುತ್ತದೆ. ನಿಮ್ಮ ಅದೃಷ್ಟ ಖುಲಾಯಿಸದ್ದರೆ ಮನೆಯ ಬಳಿ ಹೋಗುತ್ತಿದ್ದಂತೆ ಸೀತಾರ್ ಧ್ವನಿ ಕೇಳಬಹುದು. ಸಿತಾರ್ ನಾದ ಹಾಗೂ ಅದಕ್ಕೊಂದು ಸಣ್ಣ ಮಟ್ಟದ ಹಾಡು ಕೇಳುತ್ತಿದೆಯಂದರೆ ಲಾಡ್ ದಂಪತಿಗಳು ಮನೆಯಲ್ಲಿದಾರೆಂದು ಅರ್ಥ. ಅವರು ಇದ್ದಾರೆಂದರೆ ನಿಮಗೆ ಉತ್ತಮ ಆತಿಥ್ಯ ಸಿಕ್ಕಿತು ಅಂತ.
ಸ್ವಭಾವತಹ ಏಕಾಂಗಿಪ್ರಿಯರಾದ ಟಾಡ್ ಲಿರಿಚ್ ಹರಟೆಮಲ್ಲರಲ್ಲ. ಭಾಷೆಯ ತೊಡಕೂ ಸ್ವಲ್ಪ ಮಟ್ಟದಲ್ಲಿರುವುದರಿಂದ ಹಾಗಿರಬಹುದು. ಕನ್ನಡ ಅರ್ಥ ಮಾಡಿಕೊಳ್ಳುವ ಹಂತದಲ್ಲಿರುವ ಅವರು ಅಲ್ಪಸ್ವಲ್ಪ ಮಾತನಾಡಲೂ ಬಲ್ಲರು ಈಗಷ್ಟೆ. "ನಿಮಗೆ ಈ ನೀರವ ವಾತಾವರಣ ಅಮೆರಿಕಾದ ಬ್ಯುಸೀ ಜೀವನಕ್ಕೆ ಹೋಲಿಸಿದಲ್ಲಿ ಬೇಸರ ತರಿಸದೇ? ಎಂಬ ಪ್ರಶ್ನೆಗೆ ಲಾಡ್ "ಬೇಸರ ತರಿಸಲು ಸಮಯವೇ ಇಲ್ಲ ಹಗಲೆಲ್ಲಾ ಕೆಲಸ, ರಾತ್ರಿ ಸಿತಾರ್ ಹಾಗೂ ಓದು" ಎಂದು ನಗುತ್ತಾರೆ. ಆದರೆ ಕೃತಿ ನಿಮ್ಮೆದುರು ಇತಿಹಾಸವನ್ನೇ ಬಿಚ್ಚಿಡುತ್ತಾರೆ . ಇಂಡೋ ಅಮೇರಿಕನ್ ಹಮೀರ್ ಮುಗಿಲು ನಿಮ್ಮನ್ನು ಮಂತ್ರಮುಗ್ದನನ್ನಾಗಿಸುವಲ್ಲಿ ಸೈ ಅನ್ನಿಸಿಕೊಳ್ಳುತ್ತಾನೆ. ಅಮೇರಿಕಾದ ಧೈರ್ಯ ಭಾರತದ ಒಳ್ಳೆಯತನ ಮಿಳಿತಗೊಂಡ ಅದ್ಭುತ ವ್ಯಕ್ತಿತ್ವ ಮಗ ಹಮೀರ್ ನದು. ಅಮ್ಮನ ಬಳಿ ಹವ್ಯಕ ಕನ್ನಡ ಮತ್ತಷ್ಟೆ ವೇಗವಾಗಿ ಅಪ್ಪನ ಬಳಿ ಅಮೇರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲೀಷ್ ಮಾತನಾಡುವ ಮುದ್ದು ಮುಖದ ಹಮೀರ್ ಮುಗಿಲು ಪುಟ್ಟ ಕೃಷಿಕನಾಗಿ ಬೆಳೆಯುತ್ತಿದ್ದಾನೆ.
ಪಾಳೇಕರ್ ಕೃಷಿಯ ಬಗ್ಗೆ ಅತ್ಯಾಸಕ್ತಿ ಹೊಂದಿರುವ ದಂಪತಿಗಳು ಸಾವಯವ ಕೃಷಿಯನ್ನು ಪಾಲಿಸುತ್ತಿದ್ದಾರೆ. ಒಂದು ಎಕರೆಯಷ್ಟು ಅಡಿಕೆ ತೊಟ, ಸೊಪ್ಪಿನ ಬೆಟ್ಟದಲ್ಲಿ ಸುಂದರ ಮನೆ, ನೆಮ್ಮದಿ ಜೀವನ ಇವರ ಆಸೆಯನ್ನು ಸಾಕಾರಗೊಳಿಸಿದೆ. ಹೆಗ್ಗೋಡಿನ ನೀನಾಸಂ ರಂಗಮಂದಿರ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ಇವರ ಹವ್ಯಾಸಕ್ಕೆ ಇಂಬು ನೀಡಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ನಾಟಕಗಳಿಗೂ ಈ ದಂಪತಿಗಳ ಭೇಟಿ ಖಂಡಿತ.
ಟಾಡ್ ರ ತಂದೆ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನುವ ಕೃತಿ ಅಮೇರಿಕಾದ ಪೋಷಕರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೇಳುತ್ತಾರೆ. ಹದಿನೆಂಟು ತುಂಬಿದ ಮಕ್ಕಳನ್ನು ಪಕ್ಕಾ ಸ್ನೇಹಿತರಂತೆ ನಡೆಯಿಸಿಕೊಳ್ಳುವ ಅಲ್ಲಿನ ಜನ ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದ ನಿರ್ಧಾರಕ್ಕೆ ಅಡ್ಡಿಯಾಗುವುದಿಲ್ಲ .ಅದು ಅವರ ವೈಯಕ್ತಿಕ ಬದುಕು ಎಂದು ಬೆಂಬಲಿಸುತ್ತಾರೆ ಎನ್ನುತ್ತಾರೆ. ಅಮೆರಿಕಾದ ಕೃಷಿಯ ಬಗ್ಗೆ ಸಾವಿರ ಹೆಕ್ಟೇರ್ ಕೃಷಿಕರ ಬಗ್ಗೆ ವಿಸ್ತಾರ ಕತೆ ಬಿಚ್ಚಿಡುತ್ತಾರೆ. ಅಲ್ಲಿ ಈ ರೀತಿಯ ಒಂದೆರಡು ಎಕರೆ ಭೂಮಿಯಿಂದ ಕೃಷಿ ಕೈಂಕರ್ಯ ಸಾಗದು ಎನ್ನುವ ಮಾತನ್ನು ನೆನಪಿಸುತ್ತಾರೆ.
ಟಾಡ್ ಬೆಳಿಗ್ಗೆ ಏಳಕ್ಕೆ ಅಡಿಕೆ ತೋಟಕ್ಕೆ ಹೋದರೆ ಸೋಗೆ ಕೊಚ್ಚುವುದು, ಕಾದಿಗೆ ಹೆರೆಯುವುದು ಮುಂತಾದ ಕೆಲಸವನ್ನು ಪಕ್ಕಾ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಕರಂತೆ ಸ್ವತಹ ಮಾಡುತ್ತಾರೆ. ನಾವು ಕೂಲಿಕಾರ್ಮಿಕರ ಮೇಲೆ ಸಂಪೂರ್ಣ ಅವಲಂಬಿತರಾಗಿಲ್ಲ ಎಂದು ಕೃತಿ ಆತ್ಮಸ್ಥೈರ್ಯದಿಂದ ಹೇಳುತ್ತಾರೆ. ಕೊನೆಕೊಯ್ಲು, ಗೊಬ್ಬರ ಹಾಕುವುದಕ್ಕೆ ಮುಂತಾದ ದೊಡ್ಡ ಕೆಲಸ ಹೊರತುಪಡಿಸಿದರೆ ನಿತ್ಯದ ಕೆಲಸಕ್ಕೆ ನಾವು ಕೃಷಿಕಾರ್ಮಿಕರ ಬಯಸುವುದಿಲ್ಲ. ಟಾಡ್ ರ ಪ್ರಕಾರ ಕೂಲಿಕಾರ್ಮಿಕರ ಸಮಸ್ಯೆ ಅಮೆರಿಕಾಪ್ರಜೆಗಳಿಗೆ ಮಹತ್ತದ್ದಲ್ಲ. ಕಾರಣ ಅಲ್ಲಿ ತಮ್ಮ ಬಹುತೇಕ ಎಲ್ಲಾ ಕೆಲಸಕ್ಕೆ ಬೇರೆಯವರ ಅವಲಂಬನೆ ಇಲ್ಲ, ಮತ್ತೂ ಕೃಷಿ ಕಾರ್ಮಿಕರ ಸಮಸ್ಯೆಯ ಕುರಿತು ದಿವಸದಲ್ಲಿ ಆರು ತಾಸು ಮಾತನಾಡುವುದರ ಬದಲು ಎರಡು ತಾಸು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿದಂತೆ ಎಂಬುದು ಖಚಿತ ಮಾತು. ಮನೆಗೆ ಬೇಕಾದಷ್ಟು ತರಕಾರಿ ಸೊಪ್ಪು ಬೆಳೆಯಲು ಹಿತ್ತಲು ಸಜ್ಜಾಗಿದೆ. ಮನೆಯಲ್ಲಿ ಅಡಿಗೆ ಕೆಲಸ ಹೆಂಗಸರದ್ದು ವ್ಯವಹಾರ ಗಂಡಸರದ್ದು ಎಂಬ ಬೇಧಭಾವ ಇವರಲ್ಲಿಲ್ಲ. ಸೋಮವಾರ ಕೃತಿ ಅಡಿಗೆ ಮಾಡಿದರೆ ಮಂಗಳವಾರ ಶುದ್ಧ ಅಮೇರಿಕನ್ ಶೈಲಿಯ ಅಡಿಗೆಯ ಉಸ್ತುವಾರಿ ಟಾಡ್ ರದ್ದು ಬುಧವಾರ ಮತ್ತೆ ಕೃತಿಯ ಅಡಿಗೆ .
ಪಕ್ಕಾ ಕೃಷಿಕರು ಹೇಗಿದ್ದರೆ ಚೆನ್ನ ಎಂಬುದಕ್ಕೆ ಈ ಇಂಡಿಯಾ-ಅಮೇರಿಕನ್ ದಂಪತಿಗಳು ಒಳ್ಳೆಯ ಉದಾಹರಣೆ. "ಕೃಷಿಯಲ್ಲಿ ಹಣದ ಓಘ ಕಡಿಮೆ ನಿಜ ಆದರೆ ಶಾಂತಿ ನೆಮ್ಮದಿ ಇಲ್ಲಿ ಇದೆ, ನಮ್ಮ ವಿದ್ಯಾರ್ಹತೆಗೆ ನಾವು ಪಟ್ಟಣದಲ್ಲಿದ್ದರೆ ಹಣ ಗುಡ್ಡೆ ಹಾಕಬಹುದು, ನಮ್ಮ ವೃದ್ದಾಪ್ಯದ ಹೊತ್ತಿಗೆ ದೊಡ್ಡ ಹಣದ ರಾಶಿ ಆಗಿರುತ್ತದೆ, ಆದರೆ ಅನುಭವಿಸಲು ವಯಸ್ಸು ಇರುವುದಿಲ್ಲ" ಎಂದು ತತ್ವಭರಿತವಾಗಿ ಹೇಳುವ ಕೃತಿ ದಂಪತಿಗಳು ಕೊರಗುತ್ತಾ ಬದುಕುವ ಅಡಿಕೆ ಕೃಷಿಕರಿಗೆ ಮಾದರಿ ಖಂಡಿತ.
ನಾವು ಕಾರಣರಾಗಿ ಸುದ್ಧಿಯಾಗುದಕ್ಕಿಂತ ನಾವು ಹಳ್ಳಿಯ ಜೀವವನ್ನಾಗಿಸಿಕೊಂಡ ಕಾರಣಗಳು ಸುದ್ಧಿಯಾಗುವುದು ಒಳಿತು ಎಂಬುದು ದಂಪತಿಗಳ ಕಿವಿಮಾತು.

(ಸಪ್ಟೆಂಬರ್ ಅಡಿಕೆಪತ್ರಿಕೆಯಲ್ಲಿ ಪ್ರಕಟಿತ)

Monday, September 13, 2010

ಹಿಪ್ಪಲಿ ಬುಡ ಕಾಳುಮೆಣಸಿನ ತಲೆ


ಕಾಳುಮೆಣಸಿಗೆ ಈಗ ಬಂಗಾರದ ಬೆಲೆ. ಬೆಲೆ ಬಂಗಾರದ್ದು ನಿಜ ಆದರೆ ಬೆಳೆ ಇಲ್ಲದೆ ಕೃಷಿಕರು ಕೈ ಹೊಸಕಿಕೊಳ್ಳುವಂತಾಗಿದೆ. ಕಾಳು ಮೆಣಸಿನ ಬೆಳೆ ಇರದಿರಲು ಪ್ರಮುಖ ಕಾರಣ ಮೆಣಸಿನ ಬಳ್ಳಿ ಹುಲುಸಾಗಿ ಬೆಳೆದು ಇನ್ನೇನು ಫಸಲು ನೀಡಿತು ಎನ್ನುವಾಗ ಸೊರಗುರೋಗ ಇಡೀ ಬಳ್ಳಿಯನ್ನು ಕಾಯಿಸಮೇತ ಒಣಗಿಸಿ ಸಾಯಿಸಿಬಿಡುತ್ತದೆ. ಹಾಗಾಗಿ ಎಂಟು ಹತ್ತು ಕ್ವಿಂಟಾಲ್ ಬೆಳೆ ತೆಗೆಯುತ್ತಿದ್ದ ಕೃಷಿಕರು ಕೆಜಿ ಲೆಕ್ಕದ ಫಸಲು ಕೊಯ್ಯುತ್ತಿದ್ದಾರೆ. ಕಾಳುಮೆಣಸಿನಲ್ಲಿ ನಾನಾ ತರಹದ ಜಾತಿಯ ಬಳ್ಳಿಗಳ ಸಂಶೋಧನೆಯಾಗಿದರೂ ಸೊರಗು ರೋಗ(ವಿಲ್ಟ್)ದ ಬಾಧೆಯಿಂದ ಮುಕ್ತವಾಗಿಲ್ಲ. ಈಗ ಕೃಷಿಕರು ತಮ್ಮದೇ ಆದ ದಾರಿಯೊಂದನ್ನು ಇದಕ್ಕೆ ಪರ್ಯಾಯವಾಗಿ ಹುಡುಕಿಕೊಳ್ಳುತ್ತಿದ್ದಾರೆ.
ಕಾಳುಮೆಣಸಿನ ಬಳ್ಳಿಯ ಪ್ರಬೇಧದ ಹಿಪ್ಪಲಿ(ಪೈಪರ್ ಲಾಂಗಂ) ಪೊದೆಯಾಗಿ ಬೆಳೆಯುವ ಸಸ್ಯ. ಇದಕ್ಕೆ ಸೊರಗುರೋಗದ ಬಾಧೆಯಿಲ್ಲ. ಇದರ ಸಶಕ್ತ ಬುಡವನ್ನು ಆಯ್ದುಕೊಂಡು ಸ್ಥಳೀಯ ಮೆಣಸಿನ ಬಳ್ಳಿಯ ತಲೆಯನ್ನು ಅದಕ್ಕೆ "ವಿ" ಕಸಿಯ ಮುಖಾಂತರ ಕಸಿಕಟ್ಟಿ ಯಶಸ್ವಿಯಾಗುತ್ತಿದ್ದಾರೆ. ಇದರ ಆರಂಭದಕ್ಷಿಣ ಕನ್ನಡದಲ್ಲಾದರೂ ಈಗ ಕಸಿ ಬಲ್ಲ ಕೃಷಿಕರೆಲ್ಲರೂ ಇದೇ ಹಾದಿ ತುಳಿಯುತ್ತಿದ್ದಾರೆ. ಒಮ್ಮೆ ಕಸಿ ಮೆಣಸು ಚಿಗುರಿದ ನಂತರ ಬುಡದಲ್ಲಿ ಹೊರಡುವ ಹಿಪ್ಪಲಿ ಗೆಲ್ಲುಗಳನ್ನು ಒಂದೆರಡು ತಿಂಗಳ ಕಾಲ ಚಿವುಟಿದರೆ ನಂತರ ತೋಟದಲ್ಲಿ ಬಳ್ಳಿ ಹಬ್ಬಲು ಸಿದ್ಧ. ಸೊರಗು ರೋಗ ಭಾಧೆಯಿಂದ ಆಚೆ ಬಂದರೆ ಅಡಿಕೆ ಬೆಳೆಗಾರರಿಗೆ ಕಾಳು ಮೆಣಸಿನ ಮೂಲಕ ಹೆಚ್ಚುವರಿ ಆದಾಯ ದೊರತಂತಾಗುತ್ತದೆ ಎಂಬುದು ಕೃಷಿಕರ ಮಾತು. ಈಗಷ್ಟೆ ಮರಕ್ಕೆ ಕಸಿ ಬಳ್ಳಿಗಳು ಹಬ್ಬಲು ಶುರುವಾಗಿರುವುದರಿಂದ ಸಾಧಕಬಾಧಕಗಳು ಇನ್ನು ನೋಡಬೇಕಿದೆ ಎನ್ನುತ್ತಾರೆ ಕೃಷಿಕ ಸಾಗರದ ಸಮೀಪದ ಕಡವಿನಮನೆ ಟಿ.ಎಲ್ ತಿರುಮಲ. ಕಸಿಯಲ್ಲಿ ಬದುಕುವ ಪ್ರಮಾಣ ಸ್ವಲ್ಪ ಕಡಿಮೆ ಇರುವುದರಿಂದ ನುರಿತ ಕಸಿಗಾರರು ಇದಕ್ಕೆ ಬೇಕು ಎನ್ನುವುದು ಅವರ ಅನುಭವದ ಮಾತು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೦೮೧೮೩-೨೦೭೬೫೮ (ಬೆಳಿಗ್ಗೆ ೭-೮)
(ಇಂದಿನ ಲವಲವಿಕೆ ಯಲ್ಲಿ ಪ್ರಕಟಿತ)

Thursday, September 9, 2010

ಗೌರಿ-ಗಣೇಶ ಹಬ್ಬದ ಶುಭಾಶಯಗಳು

ಪ್ರಿಯ ಓದುಗನ್,
ಆ ಪರಮಾತ್ಮನೆಂದು ಬಹು ಜನರಿಂದ ಕರೆಯಲ್ಪಡುವ ಗಣೇಶನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂಬುದು ನನ್ನ ಹರಕೆ ಹಾರೈಕೆ. ಓದಿದ-ಕಾಮೆಂಟಿಸಿದ-ನೋಡಿದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ಈ ಗೌರಿ ಹೂವು ಅರಳಿ ನಿಂತಂತೆ ನಿಮ್ಮ ಬಾಳಿನ ಸಂತೋಷದ ಕ್ಷಣಗಳು ಅರಳಲಿ. ನಾನಂತೂ ವರ್ಷದಿಂದ ವರ್ಷಕ್ಕೆ ಗಣೇಶನಿಗೆ ಹತ್ತಿರವಾಗುತ್ತಿದ್ದೇನೆ. ಹೋದ್ವರ್ಷ ಚಿತ್ರವಿಚಿತ್ರವಾಗಿರುವ ಗಣನಾಯಕನ ಹೆಸರು ಪಠಿಸಿ ಸಹಸ್ರನಾಮಾವಳಿ ಮಾಡುವುದು ಕಷ್ಟ ಎನ್ನಿಸಿದ್ದರಿಂದ ಸಾವಿರ ಬಾರಿ ಗಣೇಶ ಗಣೇಶ ಗಣೇಶ ಅಂತ ಹೇಳಿ ಸಹಸ್ರನಾಮ ಪುಸ್ತಕ ಮುಚ್ಚಿಟ್ಟಿದ್ದೆ. ಈ ವರ್ಷ ಹೊಸ ಐಡಿಯಾ ಹೊಳೆದಿದೆ " ೧೦೦ಗಣೇಶ X ೧೦ ಗಣೇಶ" ಎಂದು ಒಂದು ಬಾರಿ ಹೇಳಿಬಿಡುತ್ತೇನೆ. ಅಲ್ಲಿಗೆ ಗಣಪತಿ ಸಹಸ್ರನಾಮ ಮುಗಿದಂತೆ. ಅವನು ಖಂಡಿತಾ ಖುಷ್ ಆಗುತ್ತಾನೆ ಅಂತ ಗೊತ್ತು ಕಾರಣ ತೇನವಿನಾ ತೃಣಮಪಿ ನಚಲತಿ, ಹಾಗಾದಮೇಲೆ ಇಂತಹ ಘನಂದಾರಿ ಐಡಿಯಾ ಅವನಿಂದಲೇ ವರಪ್ರಸಾದ ಅಲ್ಲವೇ. ಅದಾದಮೇಲೆ ಭಾನುವಾರ ಪಂಚಮಿ,ಚಕ್ಲಿ-ಕಡುಬು- ಕಜ್ಜಾಯದ ಊಟ ನಮ್ಮಮನೆಯಲ್ಲಿ ಇರುತ್ತದೆ, ಸಂಜೆ ಗಣಪತಿಯನ್ನು ಕೆರೆಗೆ ದುಡೂಂ ಮಾಡುವ ಪ್ರೋಗ್ರಾಂ ಇದೆ. ಸಂಜೆ ಡಂ ಡಂ ಕೂಡ ಇದೆ. ಎಲ್ಲರೂ ಬನ್ನಿ ಎನ್ನುತ್ತಾ...... ಮತೊಮ್ಮೆ ಗಣಪತಿ ಬಪ್ಪಾ ಮೋರಯಾ......

ವಿಸೂ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಬ್ಲಾಗಿಂಗ್ ಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ

Wednesday, September 8, 2010

ಜಾಯಿಕಾಯಿ ಜಾಪತ್ರೆ




ವಾಮಾಚಾರಿ ಸದಾಚಾರಿಯಾದ ಬಗೆ...!

ಅದೊಂದು ಮೂವತ್ತು ಮನೆಗಳ ಸಣ್ಣ ಊರು. ಎಲ್ಲರ ಮನೆಗಳೂ ಬಹುಪಾಲು ಖಾಲಿ ಖಾಲಿ. ಹುಡುಗರು ಪಟ್ಟಣ ಸೇರಿದ್ದು-ಪಾಲಕರು ಕುಟುಂಬ ಯೋಜನೆ ಪಾಲಿಸಿದ್ದು ಹೀಗೆ ಹತ್ತಾರು ಕಾರಣಗಳು ಊರು ಭಣ ಭಣ ಎನ್ನಲು. ಇಡೀ ಊರು ಜಾಲಾಡಿದರು
ಆಗರ್ಭ ಶ್ರೀಮಂತರು ಇಲ್ಲ. ಬಹುಪಾಲು ಜನ ಅವರಮಟ್ಟಿಗಿನ ಜೀವನಕ್ಕೆ ಸಾಕಾಗುವಷ್ಟು.
ಆತನಿಗೂ ಅಷ್ಟೆ ಎರಡೆ ಎಕರೆ ತೋಟ ಹತ್ತು ವರ್ಷದ ಹಿಂದೆ. ಇದ್ದಕ್ಕಿದ್ದಂತೆ ಒಂದು ದಿವಸ ಮನೆಯಮೇಲೆ ಕಲ್ಲುಗಳು ಬೀಳತೊಡಗಿದವು. ಅಲ್ಲಿಗೆ ಜ್ಯೋತಿಷ್ಯ ಪ್ರಾರಂಭವಾಯಿತು. ಮಾಟಮಂತ್ರ ಜಪತಪ ನಿತ್ಯ. ಜನರ ಕಷ್ಟಗಳ ಪ್ರಮಾಣ ಪ್ರಪಂಚದಲ್ಲಿ ಎಷ್ಟಿದೆ ನೋಡಿ? ಹತ್ತೇ ವರ್ಷದಲ್ಲಿ ಆತ ೧೩ ಎಕರೆ ಭಾಗಾಯ್ತು ಒಡೆಯನಾದ. ಮನೆಯೆದುರು ಮೂರು ಕಾರುಗಳು ಸ್ವಂತದ್ದು. ಶ್ರಾವಣ ಮಾಸದಲ್ಲಿ ಕನಿಷ್ಟವೆಂದರೂ ನಾಲ್ಕದು ಲಕ್ಷದ ಸಂಪಾದನೆ. ಆತ ಎಸ್ ಎಸ್ ಎಲ್ ಸಿ ಫೇಲ್. ಆದರೆ ಬರುವ ಜನರು ಇಂಜನಿಯರಿಂಗ್ ಮೆಡಿಕಲ್ ಪಾಸ್. ಇಷ್ಟಿದರೂ ಆತ ಊರಿನ ದೇವಸ್ಥಾನಕ್ಕೆ ವರಾಡ ಕೊಡುತ್ತಿರಲಿಲ್ಲ. ಸೀಮೆಯ ದೇವಸ್ಥಾನಕ್ಕೂ ನಾಸ್ತಿ. ಆದರೂ ದೇವರ ನಂಬಿ ಜೀವನ....!
ಊರಿನ ತಲೆಯಲ್ಲೊಂದು ಎರಡೆಕರೆ ವಿಶಾಲ ಜಾಗ. ಅಲ್ಲಿ ಲಕ ಲಕ ಎನ್ನುವ ಅರಳಿ ಮರ. ಊರವರು ನೂರಾರು ವರ್ಷದಿಂದ ಪೂಜಿಸುತ್ತಿದ್ದ ಜಟಕ ಚೌಡಿಗಳ ನಂಬಿಕೆಯ ಸ್ಥಳ. ಅದು ಆತನಿಗೆ ಕಣ್ಣಿಗೆ ಬಿತ್ತು. ಬೇಲಿ ಹಾಕಿದ. ಮಲಗಿದ್ದ ಊರು ಪುಟಿದೆದ್ದಿತು. ಪ್ರತಿಭಟಿಸಿತು. ಹಣವಿಲ್ಲದವರ ಕೂಗು ಎಷ್ಟರವರೆಗೆ ನಡೇದೀತು ಎಂಬ ಹಮ್ಮು ಆತನದ್ದು. ಆದರೆ ತಾತ್ಕಾಲಿಕ ವಿಜಯ ಊರವರಿಗೆ. ಬೇಲಿ ಕಿತ್ತೆಸೆಯಲ್ಪಟ್ಟಿತು.
ಬಂತು ಶ್ರಾವಣ ಮಾಸ. ಆತ ತನ್ನ ದಾರಿ ಬದಲಿಸಿದ. ಬಾಗಿನದ ಹೆಸರಿನಲ್ಲಿ ಸುತ್ತಮುತ್ತಲಿನ ನೂರಾರು ದಂಪತಿಗಳನ್ನು ಮನೆಗೆ ಕರೆಯಿಸಿದ. ಜನ ಬೆಂಬಲ ತನಗಿದೆ ಎಂದು ಸಹಿ ಹಾಕಿಸಿಕೊಂಡ. ಅಲ್ಲಿಯವರೆಗೆ ದೇವರ ಪೂಜೆ ಮಾಡದಿದ್ದವರು ಬಂದು ಎರಡು ಸೀರೆ ಪಡೆದು ಉಂಡೆದ್ದು ಹೋದರು. ಟ್ರಸ್ಟ್ ಶ್ರಾವಣ ಮಾಸದಲ್ಲಿ ರಚಿಸಿದ. ಶಾಲೆಗೆ ಬೀರು ಕೊಟ್ಟ, ಮೂರೂವರೆ ಸಾವಿರ ರೂಪಾಯಿಯ ಬೆಲೆಯ ಬೀರು ಕೊಡಲು ಒಂದು ನೂರಾಐವತ್ತು ಜನರ ಬರೊಬ್ಬರಿ ಮೆರವಣಿಗೆ. ನಂತರ ಒಂದು ಕಾರ್ಯಕ್ರಮ ಅಲ್ಲಿ "ಜಾಗ ಬಿಡೆವು" ಎಂಬ ಪರೋಕ್ಷ ಘೋಷಣ ದೂರದೂರದಿಂದ ನೂರೈವತ್ತು ಜನರು ಇಲ್ಲಿಗೆ ಬರಲು ಖರ್ಚಾದ ಹಣ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು. ಪಕ್ಕದೂರಿನ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟ. ಈಗ ಆ ಜಾಗ ಟ್ರಸ್ಟ್ ಗೆ ಬೇಕು ಕೊಡಿ ಎಂದು ಸರ್ಕಾರಕ್ಕೆ ಅರ್ಜಿ. ಅಲ್ಲೊಂದು ಔಷಧಿವನ ದ ತಯಾರಿ ನಡೆದಿದೆ. ನೋಡಿ ಉದ್ದೇಶ ಒಂದೆ ಜಾಗ ಕಬಳಿಸುವುದು ಆದರೆ ಮಾರ್ಗ ಬೇರೆ. ಆದರೆ ಏನೇನೋ ಮಾಡುತ್ತಿದ್ದವನನ್ನು ಸದಾಚಾರಿಯನ್ನಾಗಿಸಿ ಟರ್ನ್ ಮಾಡಿದ ಹೆಮ್ಮೆಯಿಂದ ಬಡಗ್ರಾಮಸ್ಥರು ಒಳಗೊಳಗೆ ನಗುತ್ತಿದ್ದಾರೆ.
ಇರಲಿ ಹಣಬಲವೋ ಸತ್ಯಬಲವೋ ಎಂಬುದು ಕಾಲ ನಿರ್ಧರಿಸುತ್ತದೆ. ಆದರೆ ಪ್ರಪಂಚ ಎಷ್ಟೇ ಮುಂದುವರೆದರೂ ಮಂದಿಯ ಮಟ್ಟ ಮಾತ್ರಾ ವಿಚಿತ್ರ ವಿಶೇಷ ವಿಪರ್ಯಾಸ. ಪ್ರಕೃತಿಯ ಶಕ್ತಿ ಅಗಾಧ. ಯಾರ ಜೀವನವೂ ಯಾರ ಕೈಯಲ್ಲಿಯೂ ಇಲ್ಲ ಎಂಬುದು ಮೇಲ್ಮಟ್ಟದ ಆಲೋಚನೆಗೆ ಸಿಗುತ್ತದೆ. ಆದರೆ ಬಳಸಿಕೊಳ್ಳುವವರು ಬುದ್ಧಿವಂತರು ಕಾಲನ ಚಕ್ರಕ್ಕೆ ಸಿಕ್ಕಿ ಕಾಲವಾಗುತ್ತಾರೆ ಎಂಬ ಸರಳ ತತ್ವ ಮರೆತಿರುತ್ತಾರೆ. ಅದಕ್ಕೆ ಎನ್ನುವುದು "ಕರ ಎಷ್ಟು ಹಾರಿದರೂ ಗೂಟದ ಕೆಳಗೆ". ಪ್ರಕೃತಿಯೆಂಬ ಗೂಟ ನಿಗೂಢ ಹುಲು ಮನುಷ್ಯ ಅದ ತಿಳಿಯದೇ ಹಾರುತ್ತಲೇ ಇದ್ದಾನೆ ಲಾಗಾಯ್ತಿನಿಂದ ಸತ್ಯ ತಿಳಿಯದೆ. ಪಿಚ್ಚೆನಿಸುತ್ತದೆ.






Tuesday, September 7, 2010

ನನ್ನದು ಧ್ಯಾನಮುದ್ರೆ...!

ಫೋನ್ ಇಟ್ಟವನು ಕಣ್ಮುಚ್ಚಿ ಕುಳಿತಿದ್ದೆ. ನೋಡುಗರಿಗೆ ಅದು ಧ್ಯಾನ ಮುದ್ರೆ. ನನ್ನೊಳಗೆ ಅವೆಲ್ಲಾ ಯಾವುದೂ ಇರಲಿಲ್ಲ. ಮನಸ್ಸು ಬಹಳ ಗಲಿಬಿಲಿಗೊಂಡಿತ್ತು. ಅದನ್ನು ಸಮಾಧಾನ ಸ್ಥಿತಿಗೆ ತಂದು ನಿಲ್ಲಿಸುವುದು ಅದೇಕೋ ನನ್ನ ಬಳಿ ಆಗುತ್ತಿರಲಿಲ್ಲ. ಗಲಿಬಿಲಿಗೆ ಮುಖ್ಯ ಕಾರಣ ಮಂಜ. ಆಮೇಲೆ ಮಿಕ್ಕಿದ್ದು
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಂಜನಿಗೆ ಅದ್ಯಾರೋ ಗೇಣಿ ಗದ್ದೆ ಮಾಡು ಅಂತ ತಲೆ ತುಂಬಿದರೋ ಗೊತ್ತಿಲ್ಲ. ಮಲೆನಾಡಿನಲ್ಲಿ ಭತ್ತದ ಗದ್ದೆ ಅಷ್ಟೊಂದು ಲಾಭದಾಯಕ ಅಲ್ಲ. ಜಮೀನು ಸ್ವಂತದ್ದಾದರೆ ಅಷ್ಟಿಷ್ಟು ಉಳಿಯುತ್ತದೆ, ಗೇಣಿಗೆ ಮಾಡಿ ಲಾಭ ಮಾಡುವುದು ಕಷ್ಟಕರ. ಆದರೆ ಮಂಜನಿಗೆ ಲಾಭ ನಷ್ಟದ ಅಂದಾಜು ಇರಲಿಲ್ಲ, ಎಕರೆ ಗದ್ದೆಗೆ ಹತ್ತು ಚೀಲ ಬತ್ತ ಗೇಣಿ ಕೊಡುವುದಾಗಿ ಮಾತನಾಡಿ ಗದ್ದೆ ಮಾಡಿದ. ಗದ್ದೆ ಯಜಮಾನರು ಸರ್ಕಾರಿ ಗೊಬ್ಬರ ಕೊಡುವುದು ಎಂಬುದು ತೀರ್ಮಾನವಾಗಿತ್ತು. ಅವರು ಅದ್ಯಾವುದೋ ಸಾದಾರಣ ಗೊಬ್ಬರ ಕೊಟ್ಟರು. ಆರು ತಿಂಗಳುಗಳ ಕಾಲ ಗಂಡಹೆಂಡತಿ ಇಬ್ಬರೂ ಖುಷಿಯಾಗಿ ದುಡಿದರು. ಫಸಲು ಕಣ ಸೇರಿದಾಗ ಗೇಣಿಗೆ ಗದ್ದೆ ಕೊಟ್ಟವರು ಭತ್ತ ಒಯ್ಯಲು ಬಂದರು. ಅವರಿಗೆ ಕೊಡಬೇಕಾದ ಹತ್ತು ಚೀಲ ಕೊಟ್ಟ ನಂತರ ಇವನಿಗೆ ಉಳಿದದ್ದು ಕೇವಲ ಅರ್ದ ಚೀಲ ಭತ್ತ. ಮಂಜನ ತಲೆ ಮೇಲೆ ಒಂದಿಷ್ಟು ಸಾಲ. ಗಂಡ ಹೆಂಡತಿ ಇಬ್ಬರೂ ಹತಾಶರಾದರು. ಗೇಣಿಗೆ ಕೊಟ್ಟವರು ಸ್ವಲ್ಪ ಕರುಣೆ ತೋರಬಹುದಿತ್ತು. ಇಲ್ಲ ಅವರು ಖಡಕ್ಕಾಗಿ ವರ್ತಿಸಿದರು. ನೋವನ್ನು ನುಂಗಿದ ಹತಾಶ ಜೀವಗಳು ಮನೆಗೆ ಹೋಗಿ ಕದ ಹಾಕಿಕೊಂಡರು. ಆ ಕದವಾದರೋ ತಳ್ಳಿದರೆ ಬೀಳುವಂತಹದು.
ಮಂಜನ ಕತೆ ಕೇಳಿದ ವ್ಯಥೆಗೆ ನಾನೊಂದಿಷ್ಟು ಹಣ ಕೊಟ್ಟೆ. ಅದು ತೀರಾ ದೊಡ್ಡ ಮೊತ್ತವಲ್ಲ. ಇರಲಿ ಅವರವರ ಪಾಡು ಅವರವರಿಗೆ, ಆದರೂ ಅನ್ನದಾತ ಬೆವರು ಸುರಿಸಿದರೂ ಹೀಗೇಕೆ ಎಂಬ ಪ್ರಶ್ನೆ ಹಲವುಬಾರಿ ನನಗೆ ಕಾಡುತ್ತದೆ ಉತ್ತರ ಸಿಗದೆ.
ಈಗ ಮೊದಲು ಬಂದ ಫೋನಿನ ವಿಚಾರಕ್ಕೆ ಬರೋಣ. ಅವರು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ತಿಂಗಳ ಸಂಬಳ ಬರೋಬ್ಬರಿ ಆರಂಕಿಯದು. "ಇವತ್ತು ನಮ್ಮದು ಸ್ಟ್ರೈಕ್ ಇತ್ತು, ದರಿದ್ರ ರಾಜಕೀಯದೋರು ತಮ್ಮ ಸಂಬಳ ಏರ್ಸೋದಕ್ಕೆ ತಂಟೇನೂ ಇಲ್ಲ ತಕರಾರು ಇಲ್ಲ, ನಮ್ದು ಎಲ್ಲಾ ರೆಕಮಂಡೇಷನ್ ಆಗಿದೆ ಮಾರಾಯ, ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ಸಕ್ರೇಟರಿಯೇಟ್ ನಲ್ಲಿ ಹಿಡಿದುಕೊಂಡಿದ್ದಾರೆ ----ನನ್ ಮಕ್ಳು...."
ಕಟ್ ಮಾಡಿ ಕಣ್ಮುಚಿದೆ, ಅದೇ ಅದೇ ಕಾಣಿಸುತ್ತೆ, ಮತ್ತೆ--- ಹೊರಗಡೆ ಪ್ರಪಂಚಕ್ಕೆ ನನ್ನದು ಧ್ಯಾನಮುದ್ರೆ...!

Monday, September 6, 2010

ಸೃಷ್ಟಿ ಕ್ರಿಯೆಯ ಸೋಜಿಗ


ಮನುಷ್ಯ ತನಗೆ ಬೇಕಾದ ಸಸ್ಯಗಳ ಬೀಜವನ್ನು ಸಂಗ್ರಹಿಸುತ್ತಾನೆ.ಬೇಕಾದೆಡೆ ಬಿತ್ತುತ್ತಾನೆ ಬೇಕಾದ್ದದ್ದನ್ನೇ ಬೆಳೆಯುತ್ತಾನೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಹಾಗಾಗಿ ಮನುಷ್ಯನಿಗೆ ಬೇಕಾದ ಅವನ ಜೀವನಕ್ಕೆ ಅವಶ್ಯಕತೆಇರುವ ಸಸ್ಯಗಳ ಬೀಜಗಳು ಕಣಜದಲ್ಲಿ ಭದ್ರವಾಗಿ ಶೇಕರಿಸಲ್ಪಡುತ್ತವೆ ತನ್ಮೂಲಕ ಸಂತಾನಭಿವೃದ್ಧಿಯ ಆನಂದವನ್ನು ಹೊಂದುತ್ತವೆ.ಕಾಡಿನ ಸಹಜ ಸಸ್ಯಗಳು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ಸಸ್ಯ ತಾನು ಬೆಳೆಯಬೇಕು ತನ್ನ ಸಂತಾನವನ್ನೂ ಬೆಳೆಸಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ ಅದರ ಜೀವಕ್ಕೆ ಕುತ್ತು ಹಾಗಾಗಿ ಅವುಗಳಲ್ಲಿ ಹಲವಾರು ಸಸ್ಯಗಳು ತನ್ನದೇ ಹಣ್ಣಿನೊಳಗೆ ಬೀಜವನ್ನಿಟ್ಟು ಪಕ್ಷಿಗಳನ್ನು ಆಕರ್ಷಿಸಿ ಅದರಮೂಲಕ ಸಂತಾನವನ್ನು ಪಸರಿಸುತ್ತವೆ.
ಇದೆಲ್ಲದರ ಹೊರತಾಗಿ ಕೆಲವು ಸಸ್ಯಗಳು ತಮ್ಮ ಬೀಜವನ್ನು ಆಕಾಶದಲ್ಲಿ ತೇಲಿಬಿಟ್ಟು ಗಿರಿಗಿಟ್ಟಿಯಂತೆ ಹಾರಾಡುತ್ತಾ ಹೆಲಿಕ್ಯಾಪ್ಟರ್ ತಾಂತ್ರಿಕವಿಧಾನ ಬಳಸಿ ಪಸರಿಸುತ್ತವೆ. ಅವು ನೋಡಲು ಅಂದ, ಅಲ್ಲಿನ ನಿಸರಗದ ಅಚ್ಚರಿಯನ್ನು ಸವಿಯಲು ಆನಂದ. ಅಂತಹ ಒಂದು ಸಸ್ಯ ಇದು.
ದೊಡ್ಡ ಉರಾಳ ಎಂದು ಗ್ರಾಮ್ಯ ಭಾಷೆಯಲ್ಲಿ ಕರಯಿಸಿಕೊಳ್ಳುವ ಈ ಗಿಡ ಕೆಂಪನೆಯ ಹೂವನ್ನುಬಿಡುತ್ತದೆ. ಇದರ ಎಲೆಗಳನ್ನು ಕಿವುಚಿ ರಸ ಹಿಂಡಿ ತತ್ಕಾಲದ ಗಾಯಗಳಿಗೆ ಟಿಂಚರ್ ರೀತಿ ಬಳಸುತ್ತಾರೆ ಮಲೆನಾಡಿಗರು. ಈ ಗಿಡದ ಹೂವು ಬಲಿತು ಬೀಜವಾದಾಗ ಹತ್ತಿಯನ್ನು ಹೋಲುವ ಸಣ್ಣದಾದ ನವಿರಾದ ಎಳೆಯ ದಾರಗಳು ಬೀಜದ ತುದಿಯಲ್ಲಿ ಜೋತಾಡುತ್ತವೆ. ಸಣ್ಣ ಕಪ್ಪು ಬಣ್ಣದ ಬೀಜಕ್ಕೆ ಇಪ್ಪತ್ತು ಇಪ್ಪತ್ತೈದು ದಾರಗಳು ನೇತಾಡುತ್ತಿರುತ್ತವೆ. ಜೂನ್ ತಿಂಗಳಿನಲ್ಲಿ ಗಾಳಿ ಯರ್ರಾಬಿರ್ರಿ ಬೀಸತೊಡಗಿದಾಗ ಬಲಿತ ಬೀಜಗಳು ಸಾರಾಗವಾಗಿ ಗಾಳಿಯಲ್ಲಿ ದಾರದ ಸಹಾಯದಿಂದ ತೆಲತೊಡಗುತ್ತವೆ. ಗಾಳಿಯ ರಭಸಕ್ಕನುಗುಣವಾಗಿ ಬೀಜಗಳು ಎರಡು ಕಿಲೋಮೀಟರ್ ದೂರದವರೆಗೂ ಹಾರಿಹೋಗಿ ಬೀಳುವುದುಂಟು. ಬೀಜ ಇಳಿಯುವಾಗ ಚಿಕ್ಕ ಚಿಕ್ಕ ಹೆಲಿಕ್ಯಾಪ್ಟರ್ ಇಳಿಯುವ ಭಾಸವಾಗುತ್ತದೆ. ಅಲ್ಲಿ ಭೂಮಿಕಂಡ ಬೀಜ ಮೊಳಕೆಯೊಡೆಯುತ್ತವೆ. ಪ್ರಕೃತಿಯ ಚಕ್ರದಲ್ಲಿ ತನ್ನ ಪಾತ್ರವನ್ನು ದೊಡ್ಡ ಉರಾಳ ಹೀಗೆ ಯಶಸ್ವಿಯಾಗಿ ನಿರ್ವಹಿಸುತ್ತದೆ. ಅದರ ಬೀಜಪ್ರಸರಣ ಕ್ರಿಯೆ ನೋಡಲು, ಬೀಜ ಗಾಳಿಗೆ ಗಿಡ ಬಿಟ್ಟು ಹೊರಡುವ ಕ್ರಿಯೆ ವೀಕ್ಷಿಸಲು ಅದ್ಬುತವೆನಿಸುತ್ತದೆ. ಪ್ರಕೃತಿ ಮೌನವಾಗಿದ್ದು ತನ್ನದೇ ರೀತಿಯಲ್ಲಿ ಸೃಷ್ಟಿ ಕ್ರಿಯಯ ಸೌಜಿಗಗಳನ್ನು ಒಂದೊಂದು ಜೀವಿಯಲ್ಲಿಯೂ ಒಂದೊಂದು ಬಗೆಯಾಗಿ ಹುದುಗಿಸಿಟ್ಟಿದೆ. ಸ್ವಚ್ಛ ಹೃದಯದಿಂದ ಗಮನಿಸುವ ಮನಸ್ಸು ನಮಗಿರಬೇಕಷ್ಟೆ.

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ)

Sunday, September 5, 2010

ಜೋಗದ ನೆರೆ ನಿಪ್ಲಿ


ಶಿವಮೊಗ್ಗ ಜಿಲ್ಲೆಯ ಜೋಗಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಜಲಪಾತದಲ್ಲಿ ನೀರಿಲ್ಲದಿದ್ದರೆ ಬೇಸರವಾಗುತ್ತದೆ. ವರುಣನ ಕೃಪೆಯಿಲ್ಲದ ವರ್ಷಗಳಲ್ಲಿ ನೀರಿಲ್ಲದಿದ್ದರೆ ಜೋಗಕ್ಕೆ ರಂಗಿಲ್ಲ. ಇರುವ ಅಲ್ಪಸ್ವಲ್ಪ ನೀರಿಗೆ ತಲೆ ಕೊಡೋಣವೆಂದರೂ ೯೦೦ ಅಡಿ ಪ್ರಪಾತಕ್ಕೆ ಇಳಿಯಬೇಕು. ಅಂತ ಸಮಯದಲ್ಲಿ ಖುಷ್ ಕೊಡುವ ಜಲಪಾತಗಳೆಂದರೆ ಜೋಗದ ಸುತ್ತಮುತ್ತಲು ಇರುವ ನೀರಧಾರೆಗಳು. ಅಂತಹ ಒಂದು ಜಲಧಾರೆ ನಿಪ್ಪಲಿ ಡ್ಯಾಂ.
ಜೋಗದಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದತ್ತ ಸಾಗುವ ಮಾರ್ಗದಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿ ಹಲಗೇರಿ ಎಂಬ ಊರಿನ ಬಳಿ ಇರುವ ನಿಪ್ಲಿ ಎಂಬಲ್ಲಿ ಕೃಷಿನೀರಾವರಿಗಾಗಿ ಒಂದು ಡ್ಯಾಂ ಕಟ್ಟಲಾಗಿದೆ. ಡ್ಯಾಂ ನ ವಿಸ್ತೀರ್ಣ ಮೂವತ್ತು ಎಕರೆಯಷ್ಟು ಇರುವುದರಿಂದ ಮಳೆಗಾಲ ಆರಂಭವಾದ ಕೆಲವೇ ದಿವಸಗಳಲ್ಲಿ ಆಣೆಕಟ್ಟು ಭರ್ತಿಯಾಗುತ್ತದೆ. ಆಣೆಕಟ್ಟು ಭರ್ತಿಯಾಗಿ ನಂತರದ ಹೊರಹರಿವು ಇನ್ನೂರು ಅಡಿ ಮುಂದೆ ಹೋಗಿ ನಯನಮನೋಹರ ಜಲಪಾತವೊಂದರ ಸೃಷ್ಟಿಗೆ ಕಾರಣವಾಗಿದೆ. ಹೊರಹರಿವಿನ ಇನ್ನೂರು ಮೀಟರ್ ಜಾಗ ಲ್ಯಾಟ್ರೇಟ್ ಕಲ್ಲಿನ ಸ್ಥಳವಾದ್ದರಿಂದ ನೀರಾಟಕ್ಕೆ ಪ್ರಶಸ್ಥ ಸ್ಥಳ. ಜಲಪಾತದ ಮೇಲ್ಬಾಗದಲ್ಲಿ ನಡೆದು ಸಾಗಬೇಕಾದ ಸಂದರ್ಭದಲ್ಲಿ ಇಲ್ಲೊಂದು ಅದ್ಬುತ ಜಲಧಾರೆ ಇದೆ ಎಂಬ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ನೀರು ಬೀಳುವ ಅಂತಿಮ ಘಟ್ಟ "ವಾವ್" ಎನ್ನುವಷ್ಟು ಖುಷಿನೀಡುತ್ತದೆ. ಹದಿನೆಂಟು ಅಡಿ ಎತ್ತರದಿಂದ ಬೀಳುವ ಅರವತ್ತು ಅಡಿ ಅಗಲದ ಈ ಜಲಧಾರೆ ಸಂತೋಷ ನೀಡುವುದು ಖಂಡಿತ. ಜಲಪಾತದಲ್ಲಿ ನೀರು ಕಡಿಮೆಯಿದ್ದರೆ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಈಜುಬಲ್ಲವರು ಆಣೆಕಟ್ಟಿನ ಹಿನ್ನೀರಿನಲ್ಲಿ ತೇಲಬಹುದು. ಅಪಾಯಕಾರಿ ಆಳವಿಲ್ಲದ ಕಾರಣ ಇಲ್ಲಿ ಈಜು ನಿರ್ಭಯ. ಅಕ್ಟೋಬರ್ ಅಂತ್ಯದವರೆಗೂ ಈ ಜಲಪಾತದಡಿಯಲ್ಲಿ ತಲೆಕೊಟ್ಟು ಕುಳಿತುಕೊಳ್ಳಬಹುದು. ಆನಂತರದ ಜೂನ್ ತಿಂಗಳವರೆಗೆ ಅಣೆಕಟ್ಟಿನ ನೀರಿನಲ್ಲಿ ಮೋಜಿಗಷ್ಟೆ ಸೀಮಿತ. ಇಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿ "ನಮ್ಮನೆ" ಮತ್ತು "ಮತ್ತುಗ" ಎಂಬ ಎರಡು ಹೋಂ ಸ್ಟೇಗಳು ಇದ್ದು ಅಲ್ಲಿ ವಸತಿಮಾಡಿದವರಿಗೆ ಈ ನೀರಧಾರೆಯ ಪತ್ತೆ ಸುಲಭ. (ನಮ್ಮನೆ: ೦೮೧೮೩೨೦೭೩೬೧- ಮತ್ತುಗ: ೯೪೪೮೦ ೬೮೮೭೦ )
ಇನ್ನೋಮ್ಮೆ ಜೋಗಕ್ಕೆ ಬರುವಾಗ ನಿಪ್ಪಲಿ ಜಲಪಾತಕ್ಕೆ ಭೇಟಿ ಕೊಡುವುದನ್ನ ಮರೆಯಬೇಡಿ. ಆದರೆ ನೆನಪಿರಲಿ ಅದು ಜೂನ್ ನಿಂದ ಅಕ್ಟೋಬರ್ ಅಂತ್ಯದೊಳಗಾಗಿರಬೇಕು. ಸಪ್ಟೆಂಬರ್ ಅಂತ್ಯದೊಳಗಾದರೆ ಅತಿ ಸುಂದರ.

(ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ ಬರಹ)
http://prajavani.net/Content/Sep52010/weekly20100904202796.asp

Thursday, September 2, 2010

ಒಂದು ಜೇನಿನ ಹಿಂದೆ -3


ಪುಸ್ತಕ
ಜೇನುಗೂಡು ಪತ್ತೆಯಾದ ಮೇಲೆ ಜೇನನ್ನು ಹಿಡಿದು ಪೆಟ್ಟಿಗೆಗೆ ಕೂಡುವುದು ಅತ್ಯಂತ ನಾಜೂಕಾದ ಕೆಲಸ. ಮರದ ಪೆಟ್ಟಿಗೆ, (ಕೂಡುಪೆಟ್ಟಿಗೆ) ತಗಡಿನ ಜೇನುಗೇಟು, ಬಾಳೆ ನಾರಿನ ದಾರ, ಅಥವಾ ಅಡಿಕೆಹುಂಬಾಳೆ, ಚಾಕು, ಊದುಬತ್ತಿ, ಬೆಂಕಿಪೊಟ್ಟಣ, ಕತ್ತಿ, ಕೊಡಲಿ, ಸಣ್ಣದಾದ ಮರಕೊಡಲಿ, ನಾಲ್ಕೈದು ಸೆಣಬಿನ ದಾರ, ತುಪ್ಪ ಸಂಗ್ರಹಿಸಲು ಪಾತ್ರೆ, ಒಂದು ಟಾರ್ಚ್, ಇವಿಷ್ಟು ಸಲಕರಣೆಗಳನ್ನು ಇಟ್ಟುಕೊಂಡು ಹೊರಡಬೇಕು.
ಮೊದಲನೆಯದಾಗಿ ಜೇನಿನಗೂಡಿನೆದುರಲ್ಲಿ ಮರದ ಜೇನುಪೆಟ್ಟಿಗೆಯನ್ನು ಇಟ್ಟುಕೊಳ್ಳಲು ಮಟ್ಟವಾದ ಜಾಗವನ್ನು ಮಾಡಿಕೊಳ್ಳಬೇಕು, ಅಕಸ್ಮಾತ್ ಮರದಮೇಲೆ ಗೂಡು ಇದ್ದ ಪಕ್ಷದಲ್ಲಿ ಪೆಟ್ಟಿಗೆ ಭದ್ರವಾಗಿ ಅಲ್ಲಿಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತಹಾ ಸಂದರ್ಭದಲ್ಲಿ ಹಗುರವಾದ ರಟ್ಟಿನಿಂದ ಮಾಡಿರುವ ಕೂಡುಪೆಟ್ಟಿಗೆಯನ್ನು ಬಳಸಬೇಕು. ನೆಲದಲ್ಲಿನ ಹುತ್ತದಲ್ಲಿ ಜೇನು ಇದ್ದಾಗ ಮರದ ಪೆಟ್ಟಿಗೆಯಾದರೂ ತೊಂದರೆಯಿಲ್ಲ. ಆದರೆ ಹುತ್ತದಲ್ಲಿನ ಜೇನುಗೂಡಿನಿಂದ ಪೆಟ್ಟಿಗೆಗೆ ಜೇನು ಕೂಡಿಸಬೇಕಾದ ಸಂದರ್ಭದಲ್ಲಿ ಹುತ್ತವನ್ನು ಸಂಪೂರ್ಣವಾಗಿ ಕೂಲಂಕಶವಾಗಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬಾರದು. ಜೇನು ಹಿಡಿಯಬೇಕಾದ ಸಮಯದಲ್ಲಿ ಹುತ್ತದೊಳಗೆ ಕೈಯನ್ನು ಹಾಕಬೇಕಾಗಿರುವುದರಿಂದ ಅಲ್ಲಿ ಯಾವ ಹಾವು ಅಥವಾ ಚೇಳು ಮತ್ಯಾವ ವಿಷಯುಕ್ತ ಜೀವಿಗಳು ವಾಸವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖವಾದ ಅಂಶವಾಗಿರುತ್ತದೆ. ಇದು ಪ್ರಾಣಕ್ಕೆ ಸಂಚಕಾರ ತರುವ ಸಂಗತಿಯಾದ್ದರಿಂದ ಯಾವಕಾರಣಕ್ಕೂ ಈ ವಿಷಯದಲ್ಲಿ ರಾಜಿಯಾಗುವಂತಿಲ್ಲ.
ಸಾಮಾನ್ಯವಾಗಿ ಎರಡು ಅಥವಾ ಮೂರಿಂಚಿನ ಅಗಲದ ತೂತಿನ ಮಾರ್ಗದ ಮುಖಾಂತರ ಜೇನುಹುಳುಗಳು ಓಡಾಟ ಮಾಡುತ್ತಿರುತ್ತವೆ. ಮೊದಲು ಜೇನುಗೂಡಿನ ತತ್ತಿ ಕಾಣಿಸುವಂತೆ ಗೂಡಿನ ಬಾಯನ್ನು ಬಿಡಿಸಿಕೊಳ್ಳಬೇಕು. ನಂತರ ಅರ್ಧಅಡಿಯಿಂದ ಒಂದು ಅಡಿಯತನಕ ಉದ್ದ ಮತ್ತು ಅಷ್ಟೇ ಅಗಲದ ತತ್ತಿ ಹೊರಬರುವಷ್ಟು ದಾರಿ ಮಾಡಿಕೊಳ್ಳಬೇಕು. ಮೇಣದ ತತ್ತಿಗಳಾದ್ದರಿಂದ ಅವು ಬಹಳ ಮೆದುವಾಗಿರುತ್ತವೆ ಹಾಗಾಗಿ ತತ್ತಿಯನ್ನು ಹೊರ ತೆಗೆಯುವ ಪೊಟರೆಯ ಬಾಯಿಯನ್ನು ಸಮರ್ಪಕ ರೀತಿಯಲ್ಲಿ ಅಗಲ ಮಾಡಿಕೊಳ್ಳುವುದು ಅತ್ಯಗತ್ಯ. ಜೇನಿನಗೂಡಿಗೆ ಬೇರೆ ಮಾರ್ಗಗಳಿದ್ದಲ್ಲಿ ಅದನ್ನು ಮುಚ್ಚಿಕೊಳ್ಳಬೇಕು. ಈ ಕೆಲಸಗಳನ್ನು ಮಾಡುವಾಗ ಹೆಚ್ಚು ಗದ್ದಲವಾಗದಂತೆ ನೋಡಿಕೊಳ್ಳಬೇಕು. ಸದ್ದು ಜಾಸ್ತಿಯಾದರೆ ಹುಳುಗಳು ಗಾಬರಿಯಾಗಿ ಧಾಳಿ ಮಾಡುವುದೂ ಹೆಚ್ಚು ಜೊತೆಗೆ ಅಕಸ್ಮಾತ್ ಪೊಟರೆಗೆ ಆಳವಾದ ಬೇರೆ ಮಾರ್ಗಗಳಿದ್ದರೆ ಅತ್ತಕಡೆ ಹೋಗಿಬಿಡುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಪೊಟರೆಯ ಬಾಯಿಯನ್ನು ಅಗಲಮಾಡಲು ಶುರುಮಾಡುವಷ್ಟರಲ್ಲಿ ಹತ್ತೆಂಟು ಸೈನಿಕಹುಳುಗಳು ಹೊಡೆಯುತ್ತವೆ. ಮೊದಲು ಜೇನು ಹೊಡೆದಕೂಡಲೇ ಒಮ್ಮೆ ತೀವ್ರವಾಗಿ ಉರಿಯುತ್ತದೆ. ಉರಿಯಾಗುತ್ತದೆ ಎಂಬ ಅರಿವು ಮೊದಲೇ ಇದ್ದರೆ ನಮ್ಮ ಮನಸ್ಸು ತಡೆದುಕೊಳ್ಳಲು ಪೂರ್ವಸಿದ್ದತೆಯನ್ನು ಹೊಂದಿರುತ್ತದೆಯಾದ್ದರಿಂದ ಒಮ್ಮೆಲೇ ಗಾಬರಿ ಬೀಳುವುದಿಲ್ಲ. ಜೇನು ಹೊಡೆದಾಗ ಗಾಬರಿಯಿಂದ ಅತ್ತಿತ್ತ ಓಡಾಡಿದಲ್ಲಿ ಮತ್ತಷ್ಟು ಹುಳಗಳು ಹೊಡೆಯುತ್ತವೆ. ಆ ಕಾರಣದಿಂದ ನಿಧಾನವಾಗಿ ಕೆಲಸ ಮಾಡುವುದು ಜೇನು ಹೊಡೆಯುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗ. ಮುಖಕ್ಕೆ ತೆಳ್ಳನೆಯ ಪರದೆ ಮುಚ್ಚಿಕೊಳ್ಳುವುದರಿಂದ ಮುಖವನ್ನು ಜೇನಿನಧಾಳಿಯಿಂದ ತಪ್ಪಿಸಿಕೊಳ್ಳಬಹುದು. ಜೇನು ಹೊಡೆದ ತಕ್ಷಣ ನಿಧಾನವಾಗಿ ಆ ಜಾಗದಲ್ಲಿ ನಾಟಿರುವ ಸೂಜೆಯ ಮೊನೆಯಷ್ಟು ಚಿಕ್ಕದಾದ ಕಪ್ಪುಬಣ್ಣದ ಅಂಬನ್ನು ಕಿತ್ತು ಹಾಕಬೇಕು.

ಜೇನಿನ ಅಂಬು ಅಲ್ಲೇ ಉಳಿದಲ್ಲಿ ಕೀವು ಆಗುತ್ತದೆ. ಅಂಬು ಕಿತ್ತ ಜಾಗವನ್ನು ತಕ್ಷಣ ಅಲ್ಲಿ ಹತ್ತಿರದಲ್ಲಿರುವ ಯಾವುದಾದರೂ ಕುರುಚಲು ಗಿಡದ ಸೊಪ್ಪಿನ ಎಲೆಯಿಂದ ಉಜ್ಜಬೇಕು. ಇದು ಎರಡು ಕಾರಣದಿಂದ ಪಾಲಿಸಬೇಕಾದ ನಿಯಮ. ಒಂದನೆಯದಾಗಿ ಸೊಪ್ಪಿನ ರಸಕ್ಕೆ ಔಷಧೀಯ ಗುಣವಿರುವುದರಿಂದ ನಂಜು ಜಾಸ್ತಿ ಆಗುವುದಿಲ್ಲ. ಎರಡನೆಯದು ಹುಳುಹೊಡೆದ ಜಾಗದಲ್ಲಿ ರಾಸಾಯನಿಕವೊಂದನ್ನು ಬಿಟ್ಟಿರುತ್ತದೆ. ಅದರ ವಾಸನೆ ಮತ್ತೊಂದು ಜೇನುಹುಳು ಅದೇ ಜಾಗಕ್ಕೆ ಹೊಡೆಯಲು ಪ್ರೇರೇಪಿಸುವ ಗುಣವನ್ನು ಹೊಂದಿರುತ್ತದೆ. ಸೊಪ್ಪಿನ ಎಲೆಯ ರಸ ಹಚ್ಚುವುದರಿಂದ ವಾಸನೆ ಹೋಗುತ್ತದೆ. ಮತ್ತೊಂದು ಹುಳ ಹೊಡೆಯುವ ಪ್ರಮಾಣವನ್ನು ತಗ್ಗಿಸಬಹುದು. ಒಂದುಸಾರಿ ಅಂಬನ್ನು ನಮಗೆ ಚುಚ್ಚಿದ ಜೇನ್ನೊಣ ಅಲ್ಲಿಯೇ ಸುತ್ತ ಮುತ್ತ ಜೋರಾಗಿ ಹಾರಾಡುತ್ತಾ ಸ್ವಲ್ಪ ಹೊತ್ತಿನಲ್ಲಿ ಅಸುನೀಗುತ್ತದೆ.
ತುಡುವೆಜೇನುಹುಳುಗಳು ಸಾಮಾನ್ಯವಾಗಿ ಮೊದಲು ಒಂದೈದು ನಿಮಿಷ ಧಾಳಿ ಮಾಡಿ ನಂತರ ಸುಮ್ಮನೆ ಹಾರಾಡಲು ತೊಡಗುತ್ತವೆ. ಹೆಜ್ಜೇನಿನ ತರಹ ನೂರಾರು ಹುಳುಗಳು ಒಮ್ಮೆಲೆ ಧಾಳಿ ಮಾಡುವುದಿಲ್ಲ. ಅಕಸ್ಮಾತ್ ಸ್ವಲ್ಪ ಹೆಚ್ಚು ಹುಳುಗಳು ಧಾಳಿಮಾಡಲಾರಂಭಿಸಿದರೆ ಊದುಬತ್ತಿಯ ಹೊಗೆಯನ್ನು ತೋರಿಸಿದಲ್ಲಿ ಸುಮ್ಮನುಳಿಯುತ್ತವೆ. ಪೆಟ್ಟಿಗೆಗೆ ಕೂಡಬೇಕಾದ ಜೇನಿಗೆ ಜಾಸ್ತಿ ಹೊಗೆ ತೋರಿಸಬಾರದು. ಹೊಗೆ ಜಾಸ್ತಿಯಾದಲ್ಲಿ ಬಹಳ ಬೇಗನೆ ಹಾರಿಹೋಗಿಬಿಡುವ ಸಾಧ್ಯತೆ ಹೆಚ್ಚು.
ಇಡೀ ಜೇನಿನ ಕುಟುಂಬ ರಾಣಿಹುಳವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಗೂಡಿನ ಭಾಗದಲ್ಲಿ ಸ್ವಲ್ಪ ಪ್ರಮಾಣದ ಗದ್ದಲವಾದ ತಕ್ಷಣ ರಾಣಿಜೇನು ಗೂಡಿನೊಳಗೆ ಸುರಕ್ಷಿತ ಜಾಗಕ್ಕೆ ಸೇರಿಕೊಂಡುಬಿಡುತ್ತದೆ. ರಾಣಿಜೇನು ಇತರೆ ಜೇನ್ನೊಣಕ್ಕಿಂತ ಮೂರುಪಟ್ಟು ದೊಡ್ಡದಾಗಿರುತ್ತವೆ. ಉದ್ದನೆಯ ಹಿಂಭಾಗ ಹೊಂದಿರುವ ರಾಣಿ, ಅಗಲವಾದ ರೆಕ್ಕೆಯನ್ನು ಹೊಂದಿರುತ್ತವೆ. ಹಾಗಾಗಿ ಗುರುತಿಸುವುದು ಬಹಳ ಸುಲಭ. ನಿಧಾನ ಗೂಡಿನೊಳಗೆ ಕೈಯನ್ನು ಹಾಕಿ ರಾಣಿಜೇನಿನ ರೆಕ್ಕೆಯನ್ನು ಎಚ್ಚರಿಕೆಯಿಂದ ಕೈಯಲ್ಲಿ ಹಿಡಿದು ಪೆಟ್ಟಿಗೆಯೊಳಕ್ಕೆ ಹಾಕಿ ಮುಚ್ಚಳ ಹಾಕಬೇಕು. ರಾಣಿಜೇನುಹುಳು ಪೆಟ್ಟಿಗೆಯಿಂದ ಹೊರಗಡೆ ಬರಲಾಗದಂತಹ ಮತ್ತು ಕೆಲಸಗಾರ ನೊಣ ಓಡಾಡಲು ಅನುಕೂಲವಾಗುವಂತಹ ಅರ್ಧ ಇಂಚು ಅಗಲದ ಮೂರು ಇಂಚು ಉದ್ದದ ಕಬ್ಬಿಣದ ಬಾಗಿಲನ್ನು ಪೆಟ್ಟಿಗೆಗೆ ಹಾಕಿದರೆ ಜೇನುಹಿಡಿಯುವ ಕೆಲಸದ ಪ್ರಮುಖ ಘಟ್ಟ ಯಶಸ್ವಿಯಾಗಿ ಮುಗಿದಂತಾಗುತ್ತದೆ. ರಾಣಿಜೇನ್ನೊಣ ಹೊರಸೂಸುವ ಪ್ಯಾರಾಮೂನ್‌ಗೆ ಒಂದರ ಹಿಂದೆ ಒಂದರಂತೆ ಎಲ್ಲಾ ಜೇನುಹುಳುಗಳು ಸ್ವಲ್ಪಹೊತ್ತಿನಲ್ಲಿ ಪೆಟ್ಟಿಗೆಯೊಳಗೆ ಸೇರಿಕೊಂಡುಬಿಡುತ್ತವೆ. ಹುಳಗಳಿಲ್ಲದ ತತ್ತಿಯನ್ನು ನಿಧಾನ ಚಾಕುವಿನಿಂದ ಬಿಡಿಸಿ ಮರದ ಚೌಕಾಕಾರದ ಕಟ್ಟುಗಳಿಗೆ ಬಾಳೆಪಟ್ಟೆ ದಾರದಿಂದ ಕಟ್ಟಿ, ನಿಧಾನವಾಗಿ ಪೆಟ್ಟಿಗೆಯೊಳಗೆ ಇಡಬೇಕು. ತತ್ತಿಯನ್ನು ಪೆಟ್ಟಿಗೆಯೊಳಗೆ ಇಡಲು ಈಗಾಗಲೇ ರಾಣಿನೊಣ ಮತ್ತು ಹುಳುಗಳು
ಸೇರಿಕೊಂಡಿರುವ ಪೆಟ್ಟಿಗೆಯ ಮೇಲ್ಭಾಗದ ಮುಚ್ಚಳವನ್ನು ಬಹಳ ಎಚ್ಚರಿಕೆಯಿಂದ ತೆಗೆಯಬೇಕು. ಜೋರಾಗಿ ತೆಗೆದರೆ ರಾಣಿಯ ಸಮೇತ ಹುಳುಗಳು ಹಾರಿಹೋಗುವ ಸಂಭವ ಇರುತ್ತದೆ. ಯಾವ ಕಾರಣಕ್ಕೂ ರಾಣಿಯನ್ನು ಹೊರಗಡೆ ಬಿಡಬಾರದು. ಪೆಟ್ಟಿಗೆಗೆ ಕೂಡುವ ಪ್ರಾರಂಭದಲ್ಲಿ ಪೊಟರೆಯೊಳಗಿರುವ ರಾಣಿಹುಳು ಸುಲಭವಾಗಿ ಕೈಗೆ ಸಿಗದಿದ್ದಲ್ಲಿ..............
ಪುಸ್ತಕದ ಎರಡು ಹಾಳೆ ಸರಿಯಾದ ಸಂದರ್ಭದಲ್ಲಿ ಕೈಕೊಟ್ಟಿತ್ತು. ಕನ್ನರ್ಸೆ ನಾರಾಯಣ ಸ್ವಾಮಿಯ ಮನೆಯಿಂದ ಬಂದು ಊಟ ಮುಗಿಸಿ, ಅಕಸ್ಮಾತ್ ಸಿಕ್ಕಿದ ಜೇನನ್ನು ಮತ್ತೆ ಹೋಗಿ ಪೆಟ್ಟಿಗೆ ತುಂಬಬೇಕಾದ್ದರಿಂದ, ಆ ನನ್ನ ಹೊಸ ಅನುಭವಕ್ಕೆ ಸರಿಯಾದ ಮಾಹಿತಿ ಇದ್ದರೆ ಒಳ್ಳೆಯದೆಂದು, ಹಾಗು ಕರೆಂಟು ತೆಗೆಯುವ ತನಕ ಸಮಯವೂ ಇದ್ದುದರಿಂದ ಮತ್ತೊಮ್ಮೆ ಪುಸ್ತಕ ಓದುತ್ತಿದ್ದಾಗ ಪೊಟರೆಯೊಳಗೆ ರಾಣಿಹುಳು ಕೈಗೆ ಸಿಗದಿದ್ದಾಗ ಏನು ಮಾಡಬೇಕು ಹಾಗು ಹೇಗೆ ಪೆಟ್ಟಿಗೆಯೊಳಗೆ ಜೇನು ತುಂಬಬೇಕು ಎಂಬ ಮಾಹಿತಿಯಿದ್ದ ಪುಟ ಕಾಣೆಯಾಗಿತ್ತು. ಮೊದಲ ಬಾರಿ ಪುಸ್ತಕ ಓದುವಾಗ ಅದರಲ್ಲಿ ಕೆಲವು ಪುಟಗಳು ಇಲ್ಲದ್ದು ಗಮನಕ್ಕೆ ಬಂದಿತ್ತಾದರೂ ಹಿಂದಿನ ಹಾಗು ಮುಂದಿನ ಪುಟದ ಆಧಾರದಮೇಲೆ ತೂಗಿಸಿಕೊಂಡು ಓದಿದ್ದೆ. ಆದರೆ ಇಂತಹಾ ಅತ್ಯಮೂಲ್ಯ ಘಟ್ಟದಲ್ಲಿ ಕೈಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ. ಈಗ ಮಾಡುವುದೇನು ಎಂಬ ಪ್ರಶ್ನೆ ಒಂದೆರಡು ಕ್ಷಣ ಕಾಡಿತಾದರೂ, ರಾಣಿ ನೊಣ ಸಿಕ್ಕದಿದ್ದಾಗ ಆ ಪ್ರಶ್ನೆ ಉದ್ಬವಿಸುವುದು ತಾನೆ? ಹಾಗಾಗಿ ರಾಣಿ ಸುಲಭವಾಗಿ ಸಿಗುತ್ತದೆಯೆಂಬ ನಂಬಿಕೆಯಿಂದ, ಅಥವಾ ಚೆನ್ನನನ್ನೋ ಪ್ರಶಾಂತನನ್ನೋ ಕರೆದುಕೊಂಡು ಹೋದರಾಯಿತೆಂಬ ತೀರ್ಮಾನದಿಂದ ಸುಮ್ಮನುಳಿದೆ.
ಸತ್ಯವಾಗಿ ಹೇಳಬೇಕೆಂದರೆ ನನಗೆ ಜೇನನ್ನು ಪೆಟ್ಟಿಗೆಗೆ ಕೂಡಲು ಪ್ರಶಾಂತ ಅಥವಾ ಚೆನ್ನನನ್ನು ಕರೆದುಕೊಂಡು ಹೋಗುವ ಮನಸ್ಸು ಇರಲಿಲ್ಲ. ನಾನೊಬ್ಬನೇ ಯಾರ ಸಹಾಯವೂ ಇಲ್ಲದೇ ಪೆಟ್ಟಿಗೆಗೆ ಜೇನು ಕೂಡಬೇಕೆಂಬ ಮಹದಾಸೆ ಇತ್ತು, ಆದರೆ ಈಗ ಮಾಹಿತಿಯ ಕೊರತೆ ಅವರಲ್ಲೊಬ್ಬರನ್ನು ಅವಲಂಬಿಸುವಂತೆ ಮಾಡಿತ್ತು.
* * * * *
ಕೈಹುಟ್ಟು
ಜೇನು ಪೆಟ್ಟಿಗೆಗೆ ಕೂಡಲು ಬೇಕಾದ ಪರಿಕರಗಳನ್ನು ಚೀಲಕ್ಕೆ ತುಂಬಿಕೊಂಡು ಪ್ರಶಾಂತನ ಮನೆಗೆ ಹೊರಟೆ. ಜೇನು ಹುಳ ಹೊಡೆಯದಂತೆ ಗಾಜಿನ ಮಾಸ್ಕ್ ಹಾಗೂ ಕೋಟ್ ಇದ್ದರೆ ಒಳ್ಳೆಯದಿತ್ತು ಅಂತ ಅನಿಸಿತು. ಆದರೆ ಅದು ದುಬಾರಿ ವೆಚ್ಚದ್ದಾದ್ದರಿಂದ ಸದ್ಯಕ್ಕೆ ಅದನ್ನು ತರಿಸುವುದು ಸಾಧ್ಯವಿರಲಿಲ್ಲ.
ಪ್ರಶಾಂತನ ಮನೆಗೆ ಹೋದಾಗ ಅವನ ತಂದೆ ಮನೆಬಾಗಿಲಿನಲ್ಲಿ ಬೀಡಿ ಸೇದುತ್ತಾ ಕುಳಿತಿದ್ದರು. ನನ್ನನ್ನು ನೋಡಿದಕೂಡಲೆ ಅವರಿಗೆ ನನ್ನ ಉದ್ದೇಶ ಅರ್ಥವಾಗಿ,
ಪ್ರಶಾಂತನಿಗೆ ಸಿಕ್ಕಾಪಟ್ಟೆ ಜ್ವರ, ಮೆತ್ತಿನಮೇಲೆ ರೂಂನಲ್ಲಿ ಮಲಗಿದ್ದಾನೆ, ಅದೇನೋ ಚಿಕನ್‌ಗುನ್ಯಾವಂತೆ, ಹೇಳಿದ್ದು ಕೇಳೋದಿಲ್ಲಾ ಬೈಕು ಮುಕಳಿಗೆ ಹಾಕ್ಕೊಂಡು ತಿರಗ್ತಾನೆ ಕಂಡಿದ್ದೆಲ್ಲಾ ತಿಂತಾನೆ ಎಂದು ಅದ್ಯಾವುದೋ ತಿನ್ನಬಾರದ್ದು ತಿಂದು, ತಿರುಗಬಾರದ ಕಡೆ ಹೋಗಿ ಖಾಯಿಲೆ ಬಂದಿದೆ ಎನ್ನುವಂತೆ ಹೇಳಿದರು.
ಯಾವಾಗಿನಿಂದ ಜ್ವರ ಬಂತು?
ನಿನ್ನೆ ರಾತ್ರಿಯಿಂದ ಜೋರಾಗಿದೆ, ಕಾಲು ಮಂಡಿಯೆಲ್ಲಾ ನೋವಂತೆ, ನಡೆಯಲೂ ಆಗುವುದಿಲ್ಲ ಅಂತ ಅವನ ತಾಯಿ ಹತ್ರ ಹೇಳ್ತಿದ್ದ, ನನ್ನತ್ರ ಎಲ್ಲಾ ಹೇಳ್ತಾನಾ ಎಂತು? ಆ ಖಾಯಿಲೆನಾದ್ರೂ ನಮ್ಮನೇನೆ ಹುಡ್ಕೊಂಡು ಬರ‍್ತದೆ, ಇಲ್ಲೇನೂ ಕೋಳೀನೂ ಇಲ್ಲ ತಿನ್ನೋರು ಇಲ್ಲ ಅದು ಹೆಂಗೆ ಬರುತ್ತೋ
ಚಿಕೂನ್‌ಗುನ್ಯಾ ಎನ್ನುವುದನ್ನು ಚಿಕನ್‌ಗುನ್ಯಾ ಎಂದು ತಪ್ಪಾಗಿ ಅರ್ಥಮಾಡಿಕೊಂಡ ಅವರು ಇದು ಕೋಳಿಯಿಂದ ಬಂದಿದೆ ಎಂದು ತಿಳಿದು, ಅಪ್ಪಟ ಬ್ರಾಹ್ಮಣರ ಮನೆಯ ಮಗನಿಗೆ ಈ ಖಾಯಿಲೆ ಬಂದಿರುವ ಹಿಂದಿನ ಗುಟ್ಟೇನು, ಅದರರ್ಥ ತಮ್ಮ ಮಗನೇನಾದರೂ ಕೋಳಿಗೀಳಿ ಶುರುಮಾಡಿಕೊಂಡುಬಿಟ್ಟಿದ್ದಾನಾ! ಎಂಬ ಸಂಶಯ ಉಂಟಾಗಿ ನನ್ನಲ್ಲಿ ಅದರ ಬಗ್ಗೆ ಮಾಹಿತಿ ಸಿಗಬಹುದೆಂದು ಅಂದಾಜು ಮಾಡಿ ಕೇಳಿದರು.
ಅದು ಚಿಕನ್‌ಗುನ್ಯಾ ಅಲ್ಲ ಚಿಕೂನ್‌ಗುನ್ಯಾ. ಚಿಕೂನ್ ಎಂಬ ಹಳ್ಳಿಯಲ್ಲಿ ಆ ತರಹದ ಜ್ವರ ಮೊದಲು ಕಾಣಿಸಿಕೊಂಡಿರುವುದರಿಂದ ಮತ್ತು ಕೈಕಾಲುಗಳ ಸಂದುಗಳೆಲ್ಲಾ ಬಾತುಕೊಂಡು ವಿಪರೀತ ನೋವು ಆಗುವುದರಿಂದ ಚಿಕೂನ್‌ಗುನ್ಯಾ ಎಂದು ಕರೆಯುತ್ತಾರೆ ಅದು ಏಡಿಸ್ ಈಜಿಪ್ತ್ ಅನ್ನೋ ಸೊಳ್ಳೆಯ ಮುಖಾಂತರ ಹರಡುತ್ತೆ. ಕೋಳಿಗೂ ನಾವು ತಿನ್ನುವ ಆಹಾರಕ್ಕೂ, ನಮ್ಮ ತಿರುಗಾಟಕ್ಕೂ, ಚಿಕೂನ್‌ಗುನ್ಯಾ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಸೊಳ್ಳೆಯ ನಾಶಕ್ಕೆ ಮನೆಯ ಸುತ್ತ ಮೊನ್ನೆ ಆಸ್ಪತ್ರೆಯವರು ಫಾಗಿಂಗ್ ಮಷೀನ್ ತಂದು ಬ್ಲೀಚಿಂಗ್ ಪೌಡರ್ ಹೊಡೆದರಲ್ಲ ಯಾವುದೋ ಪುಸ್ತಕ ಓದಿದ್ದರಲ್ಲಿ ನೆನಪಿದ್ದಷ್ಟನ್ನು ಹೇಳಿದೆ.
ಏಡ್ಸ್ ಅನ್ನೋ ಸೊಳ್ಳೆಯಿಂದ ಬರುತ್ತೋ ಮತ್ಯಾವುದರಿಂದ ಬರುತ್ತೋ ಒಟ್ಟಿನಲ್ಲಿ ನಮ್ಮ ಗ್ರಹಚಾರ, ಒಂದು ಹೊತ್ತಾದರೂ ಸಂಧ್ಯಾವಂದನೆ, ಗಾಯಿತ್ರಿ ಜಪ ಮಾಡಿ ಅಂದರೆ ಕೇಳೋದಿಲ್ಲ, ಖಾಯಿಲೆ ಬರದೆ ಇನ್ನೇನಾಗುತ್ತೆ ಎಂದು ಆರಿ ಹೋದ ಬೀಡಿಯನ್ನು ಮತ್ತೆ ಕಡ್ಡಿಗೀರಿ ಹಚ್ಚಿ ಗಂಟಲಾಳದಿಂದ ಕವಕವನೆ ಕೆಮ್ಮುತ್ತಾ ಹೇಳಿದರು.
ಮೂರು ಹೊತ್ತು ಸಂಧ್ಯಾವಂದನೆ ಜಪ ಮಾಡುವ ನೀವೇಕೆ ಆ ತರಹ ಕರುಳು ಕಿತ್ತುಹೋಗುವಂತ ಕೆಮ್ಮನ್ನು ಅನುಭವಿಸುತ್ತಿದ್ದೀರಿ ಅಂತ ಕೇಳೋಣ ಅಂದುಕೊಂಡೆ. ಆದರೆ ಅದು ವಿತಂಡವಾದ ಎಂದಾಗುತ್ತದೆ ಎಂದು ಸುಮ್ಮನುಳಿದೆ. ಅವರಿಗೆ ಮಗನಿಗೆ ದೇವರ ಬಗ್ಗೆ ಕಾಳಜಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಬೇಕಾಗಿತ್ತು, ಮಾತು ಮುಂದುವರೆಸಿ ಪ್ರಯೋಜನವಿಲ್ಲವೆಂದು ಪ್ರಶಾಂತನನ್ನು ನೋಡಲು ಮಹಡಿಯ ಮೆಟ್ಟಿಲು ಹತ್ತಿದೆ.
ಪ್ರಶಾಂತನ ಪರಿಸ್ಥಿತಿ ತುಂಬಾ ಬಿಗಡಾಯಿಸಿತ್ತು. ಆದರೆ ಹತ್ತೆಂಟು ದಿನ ಜ್ವರ ಹಾಗು ಸಂದುನೋವನ್ನು ಅನುಭವಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ನಾನು ಜೇನನ್ನು ಪೆಟ್ಟಿಗೆಗೆ ಕೂಡುವ ವಿಚಾರವನ್ನು ಈ ಸಮಯದಲ್ಲಿ ಕೇಳಿದರೆ ಅದು ತೀರಾ ಸ್ವಾರ್ಥವಾಗುತ್ತದೆಯೇನೋ ಎಂದೆನಿಸಿ, ಸುಮ್ಮನೆ ಕುಶಲ ವಿಚಾರಿಸಿ, ಅವನನ್ನು ಆರೋಗ್ಯದ ಕಡೆ ಕಾಳಜಿ ಕೊಡುವಂತೆ ಹೇಳಿ ಹೊರಡಲನುವಾದೆ.
ಅಷ್ಟರಲ್ಲಿ ಪ್ರಶಾಂತ ಅವನಾಗಿಯೇ ನಾರಾಯಣ ಸ್ವಾಮಿಯ ಮನೆಯ ಸೊಪ್ಪಿನ ಬೆಟ್ಟದಲ್ಲಿ ಜೇನು ಇದೆಯಂತೆ ಎಂದು ಸುಡುತ್ತಿರುವ ಜ್ವರದ ಮಧ್ಯೆಯೂ ಕುತೂಹಲದಿಂದ ಕೇಳಿದ. ಜೇನಿನ ಹುಚ್ಚೇ ಹಾಗೆ, ಜೇನಿನ ಚಟ ಒಮ್ಮೆ ಅಂಟಿಸಿಕೊಂಡರೆ ಮಿಕ್ಕಿದ್ದನ್ನೆಲ್ಲಾ ಮರೆಸುವ ತಾಕತ್ತು ಅದಕ್ಕೆ ಇದೆ. ಅಂತಹ ಸುಡುವ ಜ್ವರದ ನೋವಿನ ನಡುವೆಯೂ ಅವನ ಕುತೂಹಲವನ್ನು ನೋಡಿದ ನನಗೆ ಅದು ಸತ್ಯ ಅಂತ ತೋರಿತು.
ಹೌದು ಪೆಟ್ಟಿಗೆಗೆ ಕೂಡಲು ನಿನ್ನನ್ನು ಕರೆದುಕೊಂಡು ಹೋಗೋಣ ಅಂತ ಬಂದೆ, ಆದರೆ ನಿನ್ನ ಪರಿಸ್ಥಿತಿ ಹೀಗಾಗಿದೆಯಲ್ಲ
ಸ್ವಲ್ಪ ಓಡಾಡುವಷ್ಟು ತಾಕತ್ತು ಇರುತ್ತಿದ್ದರೆ ಖಂಡಿತಾ ಬರುತ್ತಿದ್ದೆ, ಆದರೆ ಈಗ ಮಾತಾಡುವುದೇ ಕಷ್ಟವಾಗಿದೆ ಹಾಗಾಗಿ ಮತ್ಯಾರನ್ನಾದರೂ ಕರೆದುಕೊಂಡು ಹೋಗಿ ಹುಷಾರಿಯಿಂದ ಪೆಟ್ಟಿಗೆಯೊಳಗೆ ಕೂಡು ಎಂದ ಪ್ರಶಾಂತ.
ಜೇನಿನರಾಣಿ ಸುಲಭದಲ್ಲಿ ಕೈಗೆ ಸಿಗದಿದ್ದರೆ ಜೇನು ಕೂಡುವುದು ಹೇಗೆ?. ತೀವ್ರವಾಗಿ ಕಾಡುತ್ತಿದ್ದ ಪ್ರಶ್ನೆ ಕೇಳಿದೆ.
ಒಂದೆರಡು ತತ್ತಿಯನ್ನು ನಿಧಾನ ಹೊರತೆಗೆದು ಫ್ರೇಮಿಗೆ ಅದನ್ನು ಬಾಳೆಪಟ್ಟೆಯಿಂದ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಮುಚ್ಚಳ ಹಾಕು, ನಂತರ ಜೇನುಗೂಡಿನ ಬಾಗಿಲ ಬಳಿ ಪೆಟ್ಟಿಗೆ ಹಿಡಿದುಕೊಂಡು ಪೊಟರೆಯೊಳಗಿನಿಂದ ತೊಪ್ಪೆ ತೊಪ್ಪೆ ಹುಳುಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಿಗೆ ಬಿಡು. ಅವು ಕತ್ತಲೆಯನ್ನು ಅರಸುತ್ತಿರುತ್ತವೆಯಾದ್ದರಿಂದ ಹಾಗು ಒಳಗಿನಿಂದ ಬರುವ ತತ್ತಿಯ ವಾಸನೆ ಅವುಗಳಿಗೆ ತಿಳಿದು ಸರಸರನೆ ಪೆಟ್ಟಿಗೆಯ ಸಣ್ಣ ಬಾಗಿಲ ಮೂಲಕ ಒಳಸೇರುತ್ತವೆ. ಹಾಗೆ ಹುಳಗಳನ್ನು ಹಿಡಿದು ಬಿಡುವಾಗ ಅಕಸ್ಮಾತ್ ರಾಣಿ ಬಂದರೂ ಬಂದೀತು. ಬರದಿದ್ದರೆ ಜಾಸ್ತಿ ಸಂಖ್ಯೆಯ ಹುಳ ಪೆಟ್ಟಿಗೆಯೊಳಗೆ ಸೇರಿದ ನಂತರ ರಾಣಿನೊಣ ತಾನಾಗಿಯೇ ಬಂದು ಪೆಟ್ಟಿಗೆ ಸೇರಿಕೊಳ್ಳುತ್ತದೆ.
ಹುಳಗಳನ್ನು ಕೈಯಿಂದ ಹಿಡಿದಾಗ ಅವು ಹೊಡೆಯುವುದಿಲ್ಲವಾ?
ಮೊದಲು ಒಂದೆರಡು ಹುಳ ಹೊಡೆಯುತ್ತವೆ, ಒಂದು ಹುಳಕ್ಕೂ ಪೆಟ್ಟಾಗದಂತೆ ಅಂಗೈಯನ್ನು ಪೊಟರೆಯೊಳಗೆ ಹಾಕಿ ಬಹಳ ನಿಧಾನವಾಗಿ ಹೊರಗಡೆ ಬಿಟ್ಟರೆ ಹೊಡೆಯುವುದಿಲ್ಲ. ಅಷ್ಟಕ್ಕೂ ನಿನಗೆ ಹೊಸತಾದ್ದರಿಂದ ಹೆದರಿಕೆಯಿದ್ದರೆ ಸ್ಟೀಲ್ ಕೈಹುಟ್ಟನ್ನು ತೆಗೆದುಕೊಂಡು ಹೋಗು ಅದರ ಮೂಲಕ ಎಚ್ಚರಿಕೆಯಿಂದ ಹುಳಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಲ್ಲಿ ಬಿಡು ಎಂದು ಹೇಳಿದ ಪ್ರಶಾಂತ. ಕಾಡುತ್ತಿದ್ದ ತೀವ್ರಜ್ವರದ ನಡುವೆಯೂ ನನ್ನ ಬೃಹದಾಕಾರದ ಸಮಸ್ಯೆಗೆ ಸುಲಭ ಪರಿಹಾರ ನೀಡಿದ ಪ್ರಶಾಂತನಿಗೆ ಹುಷಾರು ಹೇಳಿ, ಜೇನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಅವನ ಹೊಸ ವಿಧಾನವಾದ ಕೈಹುಟ್ಟು ಬಳಸಲು ಅವರ ಮನೆಯಲ್ಲಿಯೇ ಒಂದು ಸ್ಟೀಲ್ ಸೌಟನ್ನು ಇಸಿದುಕೊಂಡು, ಚೆನ್ನನೇನಾದರೂ ಸಿಕ್ಕಿದಲ್ಲಿ ಕರೆದುಕೊಂಡು ಹೋಗಿಬಿಡಬಹುದೆಂದು ಸಂಪಳ್ಳಿಗೆ ಹೋದೆ.
ಚೆನ್ನನ ಮನೆ ಬೀಗ ಹಾಕಿತ್ತು. ಚೆನ್ನ ಬಹುಶಃ ಕಾಡಿಗೆ ಹೋಗಿದ್ದಿರಬೇಕು, ಅವನ ಹೆಂಡತಿ ಮಗ ಕೂಲಿಯನ್ನು ಮುಗಿಸಿ ಇನ್ನೂ ಬಂದಿರಲಿಲ್ಲ. ಇನ್ನು ಹೆಚ್ಚು ಹೊತ್ತು ಕಾದು ಕುಳಿತರೆ ಅತ್ತ ಜೇನು ಪರಾರಿಯಾದರೆ ಅಪರೂಪದ ಅವಕಾಶವನ್ನು ನಾನಾಗಿಯೇ ಕಳೆದುಕೊಂಡಂತಾಗುತ್ತದೆ ಎಂದು ಚೆನ್ನನ ಪಕ್ಕದ ಮನೆಯ ಹೆಂಗಸಿನ ಬಳಿ ಚೆನ್ನ ಬಂದಕೂಡಲೇ ಕನ್ನರ್ಸೆ ನಾರಾಯಣಸ್ವಾಮಿಯ ಮನೆ ಹತ್ತಿರ ಬರಲು ನಾನು ಹೇಳಿದ್ದೇನೆಂದು ಹೇಳಲು ಹೇಳಿ ಹೊರಟೆ.

(ಮುಂದುವರೆಯುತ್ತದೆ)

Wednesday, September 1, 2010

ಒಂದು ಜೇನಿನ ಹಿಂದೆ -2


ಕರ್ಮಣ್ಯೇ.....
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಅದಕ್ಕಾಗಿ ನಮ್ಮ ಕೆಲಸ ನಾವು ಮಾಡುತ್ತಿರಬೇಕು ಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು ಎಂಬ ಸಣ್ಣ ವೇದಾಂತದ ಭಾಷಣದೊಂದಿಗೆ ಕೆಲಸ ಆರಂಭಿಸುತ್ತೇವೆ. ಆದರೆ ಜೇನುಗಳಿಗೆ ಈ ಶ್ಲೋಕ ಗೊತ್ತಿಲ್ಲದೆಯೇ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ. ಅದರ ಅರ್ಥ ಅವುಗಳು ಪ್ರಕೃತಿ ಸಹಜವಾದ ಜಗತ್ತಿನ ನಿಯಮವನ್ನು ಯಾವ ಪಠ್ಯಪುಸ್ತಕಗಳ ಸಹಾಯವಿಲ್ಲದೆ ಪಾಲಿಸುತ್ತಿವೆ, ಹಾಗಾಗಿ ಮಾನಸಿಕ ಗೊಂದಲದಲ್ಲಿರುವ ವ್ಯಕ್ತಿಗಳಿಗೆ ಸಹಜಜೀವನವನ್ನು ಅನುಸರಿಸಲು ಜೇನುಹುಳುಗಳ ಜೀವನ ಪದ್ಧತಿಯಿಂದ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಜೇನಿನ ಸಂಪೂರ್ಣ ಜೀವನಕ್ರಮ ಅರಿಯಲು ಒಂದು ತುಡುವೆಜೇನಿನ ಸಂಸಾರವನ್ನು ಮನೆಯಬಳಿ ಪೆಟ್ಟಿಗೆಯಲ್ಲಿಟ್ಟು ಸಾಕಿಕೊಳ್ಳಬೇಕು. ದಿನನಿತ್ಯ ಪೆಟ್ಟಿಗೆಯ ಬಳಿಯ ನಮ್ಮ ಓಡಾಟ, ಜೇನಿನ ಸಂಸಾರದ ಒಡನಾಟ ಎಂತಹ ಮನುಷ್ಯರ ಸ್ವಭಾವವನ್ನೂ ಬದಲಾಯಿಸಿಬಿಡುತ್ತವೆ. ಧೈರ್ಯವಿಲ್ಲದವರಿಗೆ ಧೈರ್ಯವನ್ನು, ಶ್ರದ್ಧೆಯಿಲ್ಲದವರಿಗೆ ಶ್ರದ್ಧೆಯನ್ನು, ಜೀವನದ ಏಕತಾನತೆಯಿಂದ ಬೇಸತ್ತು ಜೀವನ ಎಂದರೆ ಇಷ್ಟೇನಾ.. ಎಂದು ಅಲವತ್ತುಕೊಳ್ಳುವವರಿಗೆ ಜೀವನೋತ್ಸಾಹವನ್ನು ತಂದುಕೊಡುವಲ್ಲಿ ಜೇನುಹುಳುಗಳು ಸಹಾಯಕವಾಗಬಲ್ಲದು ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಕಿರುಬೆರಳಿನ ಉಗುರಿನ ಗಾತ್ರದ ಜೇನುಹುಳುಗಳು ನಮಗೇನು ಪಾಠ ಹೇಳಿಕೊಡಬಲ್ಲವು ಎಂಬ ತಾತ್ಸಾರದ ಪ್ರಶ್ನೆ ಹಲವರಿಗೆ ಬಂದೀತಾದರೂ, ಮನುಷ್ಯನ ಮಾನಸಿಕ ನೆಮ್ಮದಿಯ ಪಾಠಕ್ಕೆ ಜೇನು ಅಂತಲ್ಲ, ನಮ್ಮ ಸುತ್ತಮುತ್ತಲಿನ ಜೀವ ಜಗತ್ತನ್ನು ಕೂಲಂಕಷವಾಗಿ ನೋಡಿದರೆ ಈ ಭೂಮಿಯಲ್ಲಿ ಬದುಕಿ ಬಾಳುತ್ತಿರುವ ಪ್ರತಿಯೊಂದು ಜೀವಿಯಿಂದಲೂ ನಾವು ಕಲಿಯಬಹುದು. ಅವುಗಳಲ್ಲಿ ನಾವೇ ಪೆಟ್ಟಿಗೆಯಲ್ಲಿ ಸಾಕಿದ ಜೇನುಹುಳುಗಳಿಗೆ ಒಂದು ತೂಕ ಜಾಸ್ತಿ ಹೆಗ್ಗಳಿಕೆ ನೀಡಬಹುದು ಕಾರಣ, ಅವುಗಳ ಜೀವನಕ್ರಮವು ಮನುಷ್ಯನ ಜೀವನಕ್ರಮವನ್ನು ಹೋಲುತ್ತದೆ. ಹಾಗಾಗಿ ನಾವೇ ಒಂದು ಜೇನು ಸಂಸಾರ ಸಾಕಿಕೊಂಡರೆ ಅವುಗಳನ್ನು ಸುಲಭವಾಗಿ ಅಭ್ಯಸಿಸಬಹುದು, ಜತೆಯಲ್ಲಿ ಅವು ನಮ್ಮ ದೇಹಕ್ಕೆ ಬೇಕಾಗುವ ಔಷಧೀಯ ಗುಣಗಳುಳ್ಳ ಸ್ವಾದಿಷ್ಟ ತುಪ್ಪವನ್ನು ನೀಡುವುದರಿಂದ ಮಾನಸಿಕವಾಗಿ ನೆಮ್ಮದಿಯಾಗಿ ಬಾಳಿ ಬದುಕುವ ಜೀವನದ ಪಾಠ ಹೇಳಿಕೊಡುತ್ತವೆ. ಕಲಿಯುವ ಆಸಕ್ತಿ, ಮನಸ್ಸು ಇರಬೇಕಷ್ಟೆ. ಅವುಗಳು ಕಲಿಸುವ ಜೀವನದ ಪಾಠಗಳನ್ನು ಮನುಷ್ಯರಿಂದ ಕಲಿಯಬೇಕಾದಲ್ಲಿ ಅದಕ್ಕೆ ಪಿಂಡಿಗಟ್ಟಲೆ ಹಣವನ್ನು ಕಕ್ಕಬೇಕಾದೀತು.
ಜೇನಿನ ಕುರಿತಾದ ಹೊಸತಾದ ವಿಚಾರಗಳನ್ನು ಆನಂದರಾಮ ಶಾಸ್ತ್ರಿ ಹೇಳುತ್ತಿದ್ದರೆ ನಾನು ಬಿಟ್ಟ ಬಾಯಿಬಿಟ್ಟುಕೊಂಡು ಅವನನ್ನೇ ನೋಡುತ್ತಿದ್ದೆ. ಇದೆಂತಹ ವಿಚಿತ್ರ ! ಒಂದು ಸಣ್ಣ ಜೇನುಹುಳಕ್ಕೂ ಈ ಗಾತ್ರದ ಮನುಷ್ಯನಿಗೂ ಎತ್ತಣದೆತ್ತಣ ಸಂಬಂಧ, ನಾವು ಅವುಗಳಿಂದ ಕಲಿಯಬೇಕಾದ್ದು ಇದೆ ಎನ್ನುವ ಮಾತುಗಳು ನನಗೆ ಮೊದಲು ಪೇಲವವಾಗಿ ಕಂಡರೂ,
ಆತನ ಸ್ಪಷ್ಟವಾದ ಹಾಗೂ ಖಚಿತವಾದ ನಿಲುವಿನ ಹೋಲಿಕೆಗಳು ನನ್ನನ್ನು ಆಕರ್ಷಿಸತೊಡಗಿತು. ಜೊತೆಯಲ್ಲಿ ನನ್ನ ಆಸಕ್ತಿಯ ವಿಚಾರ ಇವನಿಗೆ ಅದು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಗುತ್ತಿತ್ತು. ಕಾರಣ ನನಗೆ ಆತ ಅಕಸ್ಮಾತ್ತಾಗಿ ಘಂಟೆಯ ಹಿಂದಷ್ಟೇ ಪರಿಚಯವಾಗಿದ್ದ. ತಾಳಗುಪ್ಪದ ಹೆಗಡೆಯವರು ತಾವು ಬೆಳ್ಳೂರು ಆಂಜನೇಯನ ದೇವಸ್ಥಾನಕ್ಕೆ ಹೋಗಬೇಕಿರುವುದರಿಂದ ಬೆಳಿಗಿನ ಜಾವ ನಾಲ್ಕುಗಂಟೆಗೆ ಕಾರು ತೆಗೆದುಕೊಂಡು ಬಾ ಎಂದು ಹೇಳಿದ್ದರು. ಬೆಳಿಗ್ಗೆ ಸರಿಯಾದ ಸಮಯಕ್ಕೆ ಹೊರಟು ಆರುವರೆಗೆಲ್ಲಾ ಬೆಳ್ಳೂರು ತಲುಪಿದ್ದೆವು.
ದೇವಸ್ಥಾನದಲ್ಲಿನ ಭಟ್ಟರ ಮೈಮೇಲೆ ಆಂಜನೇಯ ಅವತರಿಸಿ ಹೇಳಿಕೆ ನೀಡಲು ಮಧ್ಯಾಹ್ನ ಹನ್ನೊಂದು ಗಂಟೆಯವರೆಗೆ ನಾವು ಕಾಯಬೇಕೆಂದು ತಿಳಿಯಿತು. ಅಲ್ಲಿ ನನಗೆ ಮಾಡಲು ಬೇರೆ ಕೆಲಸವಿರಲಿಲ್ಲ. ದೇವರು ಮೈಮೇಲೆ ಬರುವುದನ್ನು ನೋಡಲು ಕುತೂಹಲ ಇತ್ತಾದರೂ ಅದಕ್ಕೆ ಇನ್ನೂ ಎರಡು ತಾಸು ಕಾಯಬೇಕಾಗಿತ್ತು. ಹಾಗಾಗಿ ಬೆಳ್ಳೂರಿನಿಂದ ಗೇರುಸೊಪ್ಪಕ್ಕೆ ಹೋಗಿ ಕೆ.ಪಿ.ಸಿ.ಕ್ಯಾಂಟಿನ್ನಿನಲ್ಲಿ ಇಡ್ಲಿ ತಿಂದು ಬರೋಣ ಎಂದು ಕಾರು ತೆಗೆದುಕೊಂಡು ಹೋದೆ. ಅಲ್ಲಿ ಗಡದ್ದಾಗಿ ಹೊಟ್ಟೆಬಿರಿ ತಿಂಡಿ ತಿಂದು ವಾಪಾಸು ಹೊರಡುವಾಗ ಆತ ನನ್ನ ಬಳಿ ಬಂದು ತಮ್ಮ ಕಾರು ಬೆಳ್ಳೂರಿಗೆ ಹೋಗುತ್ತಾ? ನಾನು ಕಾರಿನಲ್ಲಿ ಬರಬಹುದಾ? ಎಂದು ಕೇಳಿದ. ಸ್ವಚ್ಛವಾದ ಬಿಳಿವಸ್ತ್ರ ಧರಿಸಿದ್ದ ಆತನ ಮುಖದಲ್ಲಿ ವ್ಯಕ್ತಪಡಿಸಲು ಬಾರದ ಒಂದು ಪ್ರಭಾವವಿತ್ತು. ಅವನ ಕಣ್ಣುಗಳಲ್ಲಿ ಅದೇನೋ ಸೆಳೆತವಿತ್ತು. ನನಗೆ ಹೆಚ್ಚು ಹೊತ್ತು ಆತನ ಮುಖ ನೋಡಲಾಗಲಿಲ್ಲ. ಒಮ್ಮೊಮ್ಮೆ ಅವೆಲ್ಲಾ ಒಂದು ಭ್ರಮೆ ಎಂದೆನಿಸಿದರೂ ಆಕ್ಷಣದಲ್ಲಿ ನನಗೆ ಆ ಅನುಭವವಾಗಿತ್ತು. ಆತನ ಕೋರಿಕೆ ನಿರಾಕರಿಸದೆ ಅಥವಾ ಅದ್ಯಾವುದೋ ಒಂದು ನಿರಾಕರಿಸಲಾಗದ ಸೆಳತಕ್ಕೆ ಸಿಕ್ಕಿ ಆಯಿತು ಬನ್ನಿ ಎಂದು ಕಾರಿನ ಮುಂದಿನಬಾಗಿಲು ತೆಗೆದೆ. ಆದರೆ ಆತ ಅಲ್ಲಿ ಕುಳಿತುಕೊಳ್ಳದೆ ಅವನಾಗಿಯೇ ಹಿಂದಿನಬಾಗಿಲು ತೆರೆದುಕೊಂಡು ಕುಳಿತ.
ಆತನನ್ನು ಕಾರಿಗೆ ಹತ್ತಿಸಿಕೊಂಡಮೇಲೆ ನನ್ನ ಬಗ್ಗೆ ನನಗೆ ಆಶ್ಚರ್ಯವಾಯಿತು. ಕಾರಣ ಸಾಮಾನ್ಯವಾಗಿ ಅಪರಿಚಿತರನ್ನು ನನ್ನ ಕಾರಿನೊಳಕ್ಕೆ ಹತ್ತಿಸಿಕೊಳ್ಳುತ್ತಿರಲಿಲ್ಲ, ಒಂದೆರಡು ಬಾರಿ ಹಾಗೆ ಅಪರಿಚಿತರನ್ನು ಹತ್ತಿಸಿಕೊಂಡಿದ್ದರಿಂದ ಅತೀ ಕೆಟ್ಟ ಅನುಭವವಾಗಿತ್ತು. ಹಾಗಿದ್ದರೂ ನಾನು ಆತ ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದೇ ಆಯಿತು ಎಂದಿದ್ದು ಹೇಗೆ? ಆದರೆ ಉತ್ತರ ಸಿಗದಿದ್ದರಿಂದ ಸುಮ್ಮನುಳಿದೆ.
ಸ್ವಲ್ಪ ದೂರ ಕಾರಿನಲ್ಲಿ ಸಾಗುತ್ತಿರುವಷ್ಟರಲ್ಲಿ ನನಗೆ ಆತನ ಹೆಸರು, ಊರು ಕೇಳಬೇಕಿತ್ತು ಅಂತ ಅನಿಸಿತು. ಹಾಗೆ ಅನ್ನಿಸಿದ ಕೂಡಲೆ ಹೆಸರು ಕೇಳಲು ಅವನತ್ತ ತಿರುಗಿದೆ, ಅಷ್ಟರಲ್ಲಿ ಆತ ಗಂಭೀರವಾಗಿ ನನ್ನ ಪ್ರಶ್ನೆ ಮೊದಲೆ ತಿಳಿದವನಂತೆ ನನ್ನ ಹೆಸರು ಆನಂದರಾಮಶಾಸ್ತ್ರಿ, ನನ್ನ ಹುಟ್ಟೂರು ಹಳ್ಳಿಕೇರಿ ಎಂದು ಹೇಳಿ ಮುಗುಳ್ನಕ್ಕ. ನನಗೆ ಆಗ ಮಾತ್ರ ಈತ ಏನೋ ವಿಶೇಷ ಶಕ್ತಿಯಿರುವ ಮನುಷ್ಯ ಎಂದೆನಿಸಿತು. ಮರುಕ್ಷಣ, ಅಲ್ಲ ಇದು ಕಾಕತಾಳೀಯ ಸಾಮಾನ್ಯವಾಗಿ ಪರಸ್ಪರ ಪರಿಚಯಕ್ಕಾಗಿ ಎಲ್ಲರೂ ಅನುಸರಿಸುವ ವಿಧಾನ ಎಂದು
ಸಮಾಧಾನ ಪಟ್ಟುಕೊಂಡೆ. ಅಂತಹಾ ವಿಶೇಷಶಕ್ತಿ ಅವನಲ್ಲಿ ಇದ್ದಿದ್ದೇ ಹೌದಾಗಿದ್ದರೆ ಆತ ಬೆಳ್ಳೂರಿನ ಆಂಜನೇಯ ದೇವಸ್ಥಾನಕ್ಕೆ ಹೇಳಿಕೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಮಸ್ಯೆ ಹೊತ್ತುಕೊಂಡು ಯಾಕೆ ಬರುತ್ತಿದ್ದ ಎಂದೆನಿಸಿತು. ಕಾರಿನಲ್ಲಿ ಕುಳಿತ ಆತ ತನ್ನ ಹೆಸರನ್ನು ಆನಂದರಾಮಶಾಸ್ತ್ರಿ ಎಂದು ಹೇಳಿ ಸುಮ್ಮನುಳಿದ. ಆತ ನನ್ನ ಹೆಸರನ್ನು ಕೇಳಲಿಲ್ಲ ಹಾಗಾಗಿ ನಾನೂ ಹೇಳದೆ ಸುಮ್ಮನುಳಿದೆ.
ಕಾರಿನಿಂದ ಇಳಿದ ಆತ ಒಂದು ಮುಗುಳ್ನಕ್ಕು ದೇವಸ್ಥಾನದೊಳಗೆ ಹೊರಟುಹೋದ. ನಾನು ಕೂಡ ಕಾರನ್ನು ಅರಳಿಮರದ ನೆರಳಿನಲ್ಲಿ ನಿಲ್ಲಿಸಿ ದೇವಸ್ಥಾನ ಪ್ರವೇಶಿಸಿದೆ.
ಆಂಜನೇಯನ ದರ್ಶನಕ್ಕೆ ನೂರಾರು ಜನರು ಸೇರಿದ್ದರು. ಭಟ್ಟರ ಮೈಮೇಲೆ ಅವತರಿಸಿದ ಆಂಜನೇಯ ಭಕ್ತರ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದ. ಗರ್ಭಗುಡಿಯ ಹೊರಗಡೆ ಜಗುಲಿಯಲ್ಲಿ ನೂರಾರು ಜನರು ಭಯಭಕ್ತಿಯಿಂದ ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದರು. ಒಳಗಡೆ ಆಂಜನೇಯ ಮೈಮೇಲೆ ಬಂದ ಭಟ್ಟರನ್ನು ಗಟ್ಟಿಮುಟ್ಟಾದ ಎರಡು ಜನ ಹಿಡಿದುಕೊಂಡಿದ್ದರು. ಅವರನ್ನೂ ಜಗ್ಗಿಕೊಂಡು ಭಟ್ಟರು ಹಾರಿ ಹಾರಿ ಕುಣಿದು ಕುಪ್ಪಳಿಸಿ,ಏನೋ ಇಂಥಾ ಸಮಸ್ಯೆ ಇಟ್ಟುಕೊಂಡು, ಇಷ್ಟು ದಿವಸದ ಮೇಲೆ ಬಂದಿದ್ದೀಯಲ್ಲ, ಆಗ್ಲಿ ನೀನೇನು ಭಯಪಡಬೇಡ ನಿನಗೆ ನನ್ನ ಆಶೀರ್ವಾದ ಇದೆ. ಕೋರ್ಟುಕೇಸು ನಿನ್ನಂತಲೇ ಆಗುತ್ತೆ ಹೋಗು, ತೆಗೆದುಕೋ ಪ್ರಸಾದ ಎಂದು ಪಕ್ಕದಲ್ಲಿದ್ದ ತಾಮ್ರದ ಚೊಂಬಿನಿಂದ ಅವನ ಮೈಮೇಲೆ ನೀರನ್ನು ಚಿಮುಕಿಸಿ, ತೆಂಗಿನ ಕಾಯಿ ಕೊಡುತ್ತಿದ್ದರು. ಬಹುಶಃ ಆ ಭಕ್ತ ತನ್ನ ವಕೀಲರು ಇದೇ ಮಾತನ್ನು ಹೇಳಿದರೂ ನಂಬುತ್ತಿರಲಿಲ್ಲವೇನೋ, ಅಲ್ಲಿಯೇ ಕೇಸು ಗೆದ್ದ ಮುಖಭಾವದೊಂದಿಗೆ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ಹೊರಗಡೆ ಬಂದ. ನಂತರ ಮತ್ತೊಬ್ಬ ಭಕ್ತನ ಹೆಸರನ್ನು ಕೂಗಲಾಯಿತು. ಆತ ಬರುವ ಅಲ್ಪವಿರಾಮದ ವೇಳೆಯಲ್ಲಿ ಆಂಜನೇಯನ ಅವತಾರಿ ಭಟ್ಟರು ಬಾಯಿಯಲ್ಲಿ ಇಡೀ ಬಾಳೆಗೊನೆ ಕಚ್ಚಿ ಎಳೆದಾಡುತ್ತಾ, ಒಮ್ಮೆ ಹಾರಿ ಕುಣಿದು ಕುಪ್ಪಳಿಸಿದರು. ಹೀಗೆ ಒಬ್ಬರ ನಂತರ ಮತ್ತೊಬ್ಬ ಭಕ್ತರ ನಿತ್ಯ ಜೀವನದ ಸಮಸ್ಯೆಗಳಿಗೆ ಹಾಗು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದನ್ನೇ ನೋಡುತ್ತಿದ್ದ ನನಗೆ ಇದು ದೇವರ ಅವತಾರವಲ್ಲ ಮಂಗಚೇಷ್ಟೆ ಎಂದು ಒಮ್ಮೆ ಅನಿಸಿತಾದರೂ ಮರುಕ್ಷಣ ನನಗೆ ಜೀವನದಲ್ಲಿ ಬಗೆಹರಿಸಲಾರದ ಸಮಸ್ಯೆ ಇಲ್ಲದಿರುವುದೂ ಹಾಗೆ ಅನ್ನಿಸಲು ಕಾರಣವಿರಬಹುದು ಎಂದೆನಿಸಿತು. ಪರಿಹರಿಸಲಾಗದ ಸಮಸ್ಯೆಗಳು ಮನುಷ್ಯನಿಗೆ ಬಂದಾಗ ಇಂತಹ ದೇವರುಗಳ ಸಹಾಯ ಬೇಕಾಗಬಹುದೇನೊ? ಯಾವುದನ್ನು ನಂಬದಿದ್ದರೂ ಹತ್ತೆಂಟು ತಾಸು ಕುಣಿದು ಕುಪ್ಪಳಿಸುತ್ತಾ ಹಲ್ಲಿನಿಂದ ಬಾಳೆಗೊನೆ ಜಗ್ಗಾಡುವುದನ್ನು ನೋಡಿದರೆ ನಾಸ್ತಿಕನೂ ದೇವರ ಬಗ್ಗೆ ನಂಬಲು ಆರಂಭಿಸಿಬಿಡಬಹುದಿತ್ತು ಎಂದು ಯೋಚಿಸುತ್ತಾ ಅಲ್ಲಿಂದ ಹೊರಗಡೆ ಬಂದು ಸುತ್ತಾಡುತ್ತಾ ದೇವಸ್ಥಾನದ ಕೆಳಗಡೆ ತೋಟದ ಕಡೆ ಸಾಗಿದ್ದ ದಾರಿಗೆ ಹೊರಳಿದೆ.
ದೇವಸ್ಥಾನದಿಂದ ತೋಟಕ್ಕೆ ಸಾಗುವ ದಾರಿಯಲ್ಲಿ ಬೃಹತ್ತಾದ ನಂದಿಮರದಲ್ಲೊಂದು ಹೆಜ್ಜೇನು ಗೂಡುಕಟ್ಟಿತ್ತು. ಹೆಜ್ಜೇನು ಕಂಡೊಡನೆ ಪಟಾಕಿನಾರಾಯಣ ನೆನಪಿಗೆ ಬಂದ. ಅಂದು ನಾರಾಯಣನೂ ಸೇರಿದಂತೆ ನಮ್ಮೆಲ್ಲರ ಮುಖವನ್ನು ಆಂಜನೇಯನ ದವಡೆ ತರಹ ಮಾಡಿದ್ದ ಹೆಜ್ಜೇನು ಇಂದು ಮನಸ್ಸು ಮಾಡಿದರೆ ದೇವಸ್ಥಾನದಲ್ಲಿ ಇದ್ದ ಎಲ್ಲರ ಮೈಮೇಲೆ ಆಂಜನೇಯನನ್ನು ಅವತರಿಸಬಹುದಿತ್ತು. ಪಟಾಕಿಯನ್ನು ಕರೆತಂದಿದ್ದರೆ ಆತ ಇದ್ಯಾವ ಮಹಾ ಈಗ ಓಡಿಸ್ತೆ ಕಾಣಿ ಎನ್ನುತ್ತಿದ್ದನೇನೋ ಎನಿಸಿ ನಗು ಬಂತು. ಅರ್ಧಗಂಟೆ ಹೆಜ್ಜೇನಿನ ಗೂಡನ್ನೇ ನೋಡುತ್ತಾ ಅಲ್ಲಿಯೇ ಕುಳಿತೆ. ನಂತರ ಅಲ್ಲಿಂದ ವಾಪಾಸು ದೇವಸ್ಥಾನಕ್ಕೆ ಹೊರಟಾಗ ಆತ ಕಾಣಿಸಿದ... ಆನಂದರಾಮ ಶಾಸ್ತ್ರಿ.
ದೇವಸ್ಥಾನದ ಕೆಳಭಾಗದಲ್ಲಿರುವ ಕಟ್ಟಡದಲ್ಲಿ ಬೋನಿನೊಳಗೆ ಕೂಡಿ ಹಾಕಿದ್ದ ಬಿಳಿಮಂಗನನ್ನು ಆಚೆ ಬಿಟ್ಟುಕೊಂಡು ಮೂಸಂಬಿ ಹಣ್ಣು ತಿನ್ನಲು ಕೊಟ್ಟು ಅದನ್ನು ನೋಡುತ್ತಾ ನಿಂತಿದ್ದ. ನನ್ನನ್ನು ನೋಡಿದವನು ಏಕಾಏಕಿ ಕರ್ಮಣ್ಯೇವಾಧಿಕಾರಸ್ತೇ... ಎಂದು ಜೇನಿನ ಜೀವನಕ್ಕೂ ಮನುಷ್ಯರ ಬಾಳಿಗೂ ತಾಳೆಮಾಡಿ ವೇದಾಂತ ಹೇಳತೊಡಗಿದ. ಆತನಿಗೆ ಮಾನವಾತೀತಶಕ್ತಿ ಏನಾದರೂ ಇರಬಹುದಾ ಎಂದು ನನಗನ್ನಿಸಿದ್ದು ಆವಾಗಲೇ. ನಾನು ಅವನಿಗೆ ಒಂದೆರಡು ಘಂಟೆಯ ಹಿಂದಷ್ಟೆ ಪರಿಚಯವಾದವನಾದ್ದರಿಂದ, ನನ್ನ ಹೆಸರು, ಊರು, ದೆಸೆ ಯಾವುದೂ ಆತನಿಗೆ ಯಾವಕಾರಣಕ್ಕೂ ತಿಳಿಯಲು ಸಾಧ್ಯವಿರಲಿಲ್ಲ. ಅವುಗಳೇ ಗೊತ್ತಿರಲು ಸಾಧ್ಯವಿರಲಿಲ್ಲ ಎಂದಾದಮೇಲೆ ಇನ್ನು ನನ್ನ ಆಸಕ್ತಿ ತಿಳಿದಿರಲು ಹೇಗೆ ಸಾಧ್ಯ?, ಆದರೂ ನನ್ನ ಮನದಿಂಗಿತವನ್ನು ತಿಳಿದವನಂತೆ ಜೇನಿನ ಕುರಿತಾಗಿ ನನ್ನ ಬಳಿ ಮಾತನಾಡತೊಡಗಿದ್ದ. ಮತ್ತೊಬ್ಬರ ಮನದೊಳಗಿನ ಯೋಚನೆ ತಿಳಿಯುವ ವಿದ್ಯೆಗಳಿವೆ, ಮತ್ತೊಬ್ಬರಿಗೆ ನಮ್ಮ ಯೋಚನೆಯನ್ನು ತಲುಪಿಸಲು ಟೆಲಿಪತಿಯಿಂದ ಸಾಧ್ಯ ಎಂದು ನನ್ನ ಬಳಿ ಯಾರಾದರೂ ಹೇಳಿದಾಗ ನಾನು ಅವರನ್ನು ಅಪಹಾಸ್ಯ ಮಾಡುತ್ತಿದ್ದೆ. ಆದರೆ ಈಗ ಅವು ನನ್ನ ಅನುಭವಕ್ಕೆ ಬಂದಿದ್ದರಿಂದ ದಿಗ್ಭ್ರಾಂತನಾಗಿದ್ದೆ. ನನ್ನ ಸ್ಥಿತಿಯನ್ನು ಆತ ಗಮನಿಸದೆ ಜೇನು ಮತ್ತು ಜೀವನದ ವಿಚಾರ ಮುಂದುವರೆಸಿದ. ನನಗೆ ಮುಂದಿನ ಎರಡು ತಾಸುಗಳು ಕಳದದ್ದೇ ತಿಳಿಯಲಿಲ್ಲ.
* * * * *
ಜೇನ ಸುದ್ದಿ
ದಿನದಿಂದ ದಿನಕ್ಕೆ ಮಳೆ ಜಾಸ್ತಿಯಾಗುತ್ತಿತ್ತು. ಅದೇಕೊ ಮಳೆಗಾಲ ಈ ವರ್ಷ ಸುದೀರ್ಘ ಎಂದೆನಿಸತೊಡಗಿತ್ತು. ಅದಕ್ಕೆ ಮುಖ್ಯ ಕಾರಣ ನನ್ನ ಜೇನು ಸಾಕುವ ಹುಚ್ಚು. ಮಳೆಗಾಲ ಬೇಗನೆ ಮುಗಿದರೆ ಚೆನ್ನನನ್ನು ಹಿಡಿದು ಜೇನನ್ನು ಪತ್ತೆ ಮಾಡಬಹುದಲ್ಲಾ ಎನ್ನುವ ಆತುರ. ಜೇನು ತುಪ್ಪ ಮಾರಾಟಮಾಡಿ ಬೇಕಾದಷ್ಟು ದುಡ್ಡು ಸಂಪಾದನೆ ಮಾಡಬಹುದು ಎನ್ನುವ ಗುರಿಯಿಂದ ಹೊರಟ ನನ್ನ ಹುಚ್ಚು ಈಗ ಜೇನಿನಲ್ಲಿ ಸಹಜ ನೆಮ್ಮದಿಯ ಜೀವನಕ್ಕೆ ಬೇಕಾಗುವ ಅಧ್ಯಾತ್ಮವನ್ನು ಹುಡುಕುವವರೆಗೂ ಮುಂದುವರೆದ ಕಾರಣ ಚಳಿಗಾಲದ ಆಗಮನವನ್ನು ಕಾತರದಿಂದ ಕಾಯುವಂತಾಗಿತ್ತು. ಆದರೆ ಕಾಲವೆನ್ನುವುದು ನಮ್ಮ ಕೈಯಲ್ಲಿ ಇಲ್ಲವಲ್ಲ, ಕಾಯುವುದು ಅನಿವಾರ್ಯ ಎಂದು ಸುಮ್ಮನುಳಿದಿದ್ದೆ. ಅಷ್ಟರಲ್ಲಿ ನನಗೆ ಪ್ರಿಯವಾದ ಸುದ್ದಿಯೊಂದು ಸಿಕ್ಕಿತು.
ಈ ನಡುವೆ ನಾನು ಜೇನು ಸಾಕುವುದರ ಬಗ್ಗೆ ಹೆಚ್ಚು ಮಾತನಾಡಲು ಆರಂಭಿಸಿದ್ದೆ. ಮೊದಲೆ ಹೇಳಿಕೇಳಿ ವಾಚಾಳಿಯಾಗಿದ್ದ ನನ್ನ ಮೇಲೆ ಹಿಂದಿನಿಂದ ಕೊರೆತೇಶ್ವರ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಓಡಾಡಲು ಕಾರು, ಕೈಯಲ್ಲಿ ಮೊಬೈಲ್, ಮನೆಯಲ್ಲಿ ಕಂಪ್ಯೂಟರ್, ಡಿಜಿಟಲ್‌ಕ್ಯಾಮೆರಾ ಹಾಗು ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಕಟವಾಗುತ್ತಿದ್ದ ಲೇಖನಗಳಿಂದಾಗಿ ಈತ ಬಹಳ ದುಡ್ಡಿದ್ದವ ಅಂದುಕೊಂಡು ಎದುರುಗಡೆಯಿಂದ ಏನೂ ಅನ್ನುತ್ತಿರಲಿಲ್ಲ. ದುಡ್ಡೆಲ್ಲವೂ ಇಂತಹ ಬೇಡದ್ದಕ್ಕೆ ಖಾಲಿಯಾಗಿದೆ ಎಂದು ತಿಳಿದಿದ್ದರೆ ಎದುರೇ ಅನ್ನುತ್ತಿದ್ದರೇನೋ! ಅದೇನೆ ಇರಲಿ ನನ್ನ ಜೇನಿನ ಹುಚ್ಚು ಊರಲ್ಲೆಲ್ಲಾ ಸುದ್ದಿಯಾಗಿದ್ದ ಕಾರಣ ಮತ್ತು ನಾನು ಅದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದುದರಿಂದ ನನ್ನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದುದು ನನಗೆ ತಿಳಿಯುತ್ತಿತ್ತು. ನಾನು ಗೊತ್ತಾಗಿಯೂ ಗೊತ್ತಾಗದವನಂತೆ ಸುಮ್ಮನುಳಿಯುತ್ತಿದ್ದೆ. ನನ್ನ ಜೇನು ಸಾಕುವ ಹುಚ್ಚು ಊರೆಲ್ಲಾ ಸುದ್ದಿಯಾಗಿ ಹಿಂದಿನಿಂದ ಆಡಿಕೊಳ್ಳುವ ವಿಷಯವಾದರೂ ಅದರಿಂದ ಒಂದು ಮಹದುಪಕಾರವಾಗಿತ್ತು. ಯಾರೇ ಜೇನು ಕಂಡರೂ ನನಗೆ ಸುದ್ದಿ ಮುಟ್ಟಿಸುತ್ತಿದ್ದರು.
ಅಂತಹ ಒಂದು ದಿನ, ಈ ಮಳೆಗಾಲದಲ್ಲಿ ಜೇನು ಸಿಕ್ಕುವುದೇ ಇಲ್ಲ ಎಂದುಕೊಂಡಿದ್ದ ನನಗೆ ಕನ್ನರ್ಸೆ ನಾರಾಯಣಸ್ವಾಮಿ ಫೋನ್‌ಮಾಡಿ ನಮ್ಮ ಮನೆಯ ಸೊಪ್ಪಿನ ಬೆಟ್ಟದಲ್ಲಿ ಒಂದು ಸಳ್ಳೆ ಮರ ಪಲ್ಟಿ ಹೊಡೆದಿದೆ ಅದರ ಪೊಟರೆಯಿಂದ ಜೇನು ಹುಳುಗಳು ಹಾರಾಡುತ್ತಿವೆ ಹಿಡಿಯುವುದಾದರೆ ಬೇಗ ಬಾ ಎಂದ. ನನಗೆ ನಿಧಿ ಸಿಕ್ಕಷ್ಟು ಸಂತೊಷವಾಯಿತು. ಲಗುಬಗೆಯಿಂದ ಜೇನನ್ನು ಕೂಡಲು ಒಂದು ಪೆಟ್ಟಿಗೆಯನ್ನು ನನ್ನ ತೊಂಬತ್ತೊಂದನೆ ಮಾಡೆಲ್ ಮಾರುತಿಯಲ್ಲಿ ಹೇರಿಕೊಂಡು ಹೊರಟೆ. ಕನ್ನರ್ಸೆ ಸ್ವಾಮಿಯ ತೋಟದ ಮೇಲ್ಭಾಗದಲ್ಲಿ ಹತ್ತಡಿ ಎತ್ತರದ ಸಳ್ಳೆ ಮರ ಮಗಚಿಕೊಂಡುಬಿದ್ದಿತ್ತು. ಮರದ ಅರ್ಧಭಾಗದಲ್ಲಿದ್ದ ಪೊಟರೆಯಿಂದ ಜೇನುಹುಳುಗಳು ಹಾರಾಟ ನಡೆಸುತ್ತಿದ್ದವು. ನಿಧಾನ ಹತ್ತಿರ ಹೋದೆ. ಪೊಟರೆಯೇನು ತೀರಾ ಆಳವಿರಲಿಲ್ಲ. ಹೊರಗಿನಿಂದಲೇ ಬಿಳಿ ಬಣ್ಣದ ಜೇನುತತ್ತಿ ಕಣ್ಣಿಗೆ ಕಾಣಿಸುತ್ತಿತ್ತು. ಹುಳ ಗಾಬರಿಯಾಗಿ ಹೊರಗಡೆ ಹಾರಾಡುತ್ತಿದ್ದುದರಿಂದ ತೀರಾ ಹತ್ತಿರ ಹೋಗಿ ಗೂಡನ್ನು ನೋಡುವಂತಿರಲಿಲ್ಲ. ಹುಳುಗಳು ಸ್ವಲ್ಪ ಶಾಂತವಾಗುವವರೆಗೆ ಕಾಯಬೇಕಾಗಿತ್ತು. ಅಲ್ಲಿಯವರೆಗೆ ಸುತ್ತಮುತ್ತಲಿನ ಜಾಗ ಚೊಕ್ಕಟ ಮಾಡಿಕೊಳ್ಳಲು, ಸುತ್ತಮುತ್ತಲಿನ ಮರಗಿಡಗಳ ಸೊಪ್ಪನ್ನು ಸವರಲು ಸ್ವಾಮಿಯ ಬಳಿ ಕತ್ತಿ ಇಸಿದುಕೊಂಡು ಎಡಗೈಯಲ್ಲಿ ಸಣ್ಣದಾಗಿದ್ದ ಅಕೇಶಿಯಾ ಗಿಡದ ಕೊಂಬೆ ಹಿಡಿದೆ.......ಒಮ್ಮೆಲೆ ಮೈಯೆಲ್ಲಾ ನಡುಗಿದಂತಾಗಿ ಇಡೀ ದೇಹ ಜುಂ ಎಂದಿತು. ಅಯ್ಯಮ್ಮಾ... ಎಂದು ಕೂಗಿಕೊಂಡೆ ನನಗೆ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಕೈಯಲ್ಲಿದ್ದ ಕತ್ತಿ ಮಾರುದೂರ ಠಣಾರೆಂದು ಸದ್ದು ಮಾಡುತ್ತಾ ಹಾರಿ ಬಿತ್ತು. ದಿಢೀರನೆ ಆದ ಆಘಾತದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನಾನು ಕೂಗಿದ್ದನ್ನು ಕೇಳಿ ನನ್ನಿಂದ ಅನತಿ ದೂರದಲ್ಲಿದ್ದ ಸ್ವಾಮಿ ನನ್ನ ಬಳಿ ಓಡಿ ಬಂದ. ಅಷ್ಟೊತ್ತಿಗೆ ನಾನು ಸ್ವಲ್ಪ ಚೇತರಿಸಿಕೊಂಡಿದ್ದೆ. ಅಷ್ಟರಲ್ಲಿ ಆತನೂ ಅಯ್ಯಯ್ಯೋ ಕರೆಂಟು ಹೊಡಿತ್ರೋ ಎಂದು ಕೂಗುತ್ತಾ ಮಾರು ದೂರ ಹಾರಿದ. ಅವನು ಹಾಗೆ ಕೂಗಿದ್ದರಿಂದ ನನಗೂ ಹೊಡೆದದ್ದು ಕರೆಂಟು ಎಂದು ತಿಳಿಯಿತು. ನಾರಾಯಣಸ್ವಾಮಿ ಹಾರುವ ಗಡಿಬಿಡಿಯಲ್ಲಿ ಮರದ ಬೊಡ್ಡೆ ಕಾಲಿಗೆ ತಾಕಿ ದಢಾರನೆ ಮಗುಚಿ ಬಿದ್ದ. ನಾನು ಅವನು ಬಿದ್ದಲ್ಲಿಗೆ ಓಡಿದೆ. ಸಣ್ಣ ಪುಟ್ಟ ತರಚು ಗಾಯವನ್ನು ಹೊರತು ಪಡಿಸಿದರೆ ಅಂತಹಾ ದೊಡ್ಡ ಏಟು ಆಗಿರಲಿಲ್ಲ. ಜೇನು ಹಿಡಿದು ಪೆಟ್ಟಿಗೆ ಕೂಡಲು ಬಂದ ನಾವು ಇಬ್ಬರೂ ಸೇರಿ ಅಕೇಶಿಯಾ ಗಿಡ ಕರೆಂಟು ಹೊಡೆಯುವ ಕಾರಣ ಕಂಡು ಹಿಡಿಯಬೇಕಾಗಿತ್ತು. ಅದು ತಿಳಿಯದೆ ಜೇನಿನ ಸುದ್ದಿಗೆ ಹೋಗುವಂತಿರಲಿಲ್ಲ.
ನೇರವಾಗಿ ಕೆಳಮುಖ ತೋಟಕ್ಕೆ ಬೀಳಬೇಕಾಗಿದ್ದ ಸಳ್ಳೆ ಮರ ದೊಡ್ಡದಾದ ಕಲ್ಲು ಬಂಡೆ ಅಡ್ದಸಿಕ್ಕಿದ್ದರಿಂದ ತಿರುಗಿ ಸೊಪ್ಪಿನ ಬೆಟ್ಟದಲ್ಲಿಯೇ ಬಿದ್ದಿತ್ತು. ಉದ್ದವಾಗಿ ಬೆಳೆದ ಅಕೇಶಿಯಾ ಗಿಡದಮೇಲೆ ಸಳ್ಳೆ ಮರದ ಬಲವಾದ ಕೊಂಬೆ ಹೋಗಿ ಕುಳಿತಿದ್ದರಿಂದ ಬಳಲೆಯಾಗಿದ್ದ ಅಕೇಶಿಯಾದ ತುದಿ ಅಲ್ಲಿಯೇ ಮೇಲೆ ಹಾದು ಹೋಗಿದ್ದ ಹನ್ನೊಂದು ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿಗೆ ತಾಗಿಕೊಂಡಿತ್ತು. ಮಳೆಗಾಲದಲ್ಲಿ ಪದೆ ಪದೆ ಸುಟ್ಟುಹೋಗುವ ಫ್ಯೂಸ್‌ತಂತಿಯನ್ನು ಬದಲಾಯಿಸಲು ಬರುವುದು ರಗಳೆ ಎಂದು ಲೈನ್‌ಮನ್ ದಪ್ಪನೆಯ ವೈರ್ ಸುತ್ತಿದ್ದ ಪರಿಣಾಮವಾಗಿ ಕರೆಂಟ್ ಅರ್ಥ್ ಆಗುತ್ತಿದ್ದರೂ ಫ್ಯೂಸ್ ಹೋಗಿರಲಿಲ್ಲ. ನಾವು ಜೇನು ಸಿಕ್ಕ ಸಂತೋಷದಲ್ಲಿ ಇದ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಕರೆಂಟ್ ನಮಗೆ ಹೊಡೆದಿತ್ತು. ಅದ್ಯಾವ ಪುಣ್ಯವೋ ನಾವು ಬದುಕುಳಿದದ್ದು. ಇನ್ನು ಜೇನನ್ನು ಪೆಟ್ಟಿಗೆಗೆ ಕೂಡಬೇಕಾದರೆ ಮೆಸ್ಕಾಂಗೆ ಫೋನ್‌ಮಾಡಿ ಕರೆಂಟ್ ತೆಗೆಸಬೇಕು. ಅದಕ್ಕೆ ಕನಿಷ್ಟವೆಂದರೂ ಇನ್ನು ಒಂದು ಘಂಟೆ ಬೇಕು. ಆಗಲೆ ಮಧ್ಯಾಹ್ನ ಹನ್ನೆರಡುವರೆ ಆಗಿತ್ತು. ಏನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಕರೆಂಟ್ ಷಾಕ್‌ನಿಂದ ಕಂಗೆಟ್ಟಿದ್ದ ಸ್ವಾಮಿ,
ಸಾಕು ಮನೆಗೆ ಹೋಗೋಣ ಜೇನೂ ಬೇಡ ಗೀನೂ ಬೇಡ, ಜೀವ ಇದ್ದರೆ ಜೇನುತುಪ್ಪ ಕೊಂಡು ತಿನ್ನಬಹುದು, ಅಷ್ಟಕ್ಕೂ ಮಿಕ್ಕಿ ಜೇನು ಹಿಡಿಯಲೇ ಬೇಕು ಎಂದಾದರೆ ಮಧ್ಯಾಹ್ನದ ಮೇಲೆ ಕರೆಂಟ್ ತೆಗಿಸಿಕೊಂಡು ಬಂದರಾಯಿತು ಈಗ ಹೋಗೋಣ ಬಾ ಎಂದು ಹೊರಟ.
ನನಗೆ ಬರಿಗೈಯಲ್ಲಿ ಮನೆಗೆ ಹೋಗಲು ಸುತಾರಾಂ ಇಷ್ಟವಿರಲಿಲ್ಲ. ಒಮ್ಮೆ ಜೇನು ಹಾರಾಡುತ್ತಿದ್ದ ಸಳ್ಳೆಮರದ ಪೊಟರೆಯತ್ತ ನೋಡಿದೆ. ಅವು ಶಾಂತವಾಗಿದ್ದವು. ಅಲ್ಲೊಂದು ಇಲ್ಲೊಂದು ಹುಳ ಹಾರಾಡುತ್ತಿತ್ತು. ಅಕಸ್ಮಾತ್ ನಾವು ಊಟ ಮಾಡಿ ಬರುವುದರೊಳಗೆ ಅವು ಹಾರಿಹೋದg ಎಂಬ ಸಂಶಯ ಕಾಡಿತು. ಆದರೆ ಅಲ್ಲಿ ಉತ್ತರಿಸಲು ಅನುಭವವಿರುವ ಮತ್ಯಾರೂ ಇಲ್ಲದ್ದರಿಂದ ಮನೆಗೆ ಹೊರಡುವುದು ಅನಿವಾರ್ಯವಾಗಿತ್ತು. ಊಟಮಾಡಿ ಚೆನ್ನನನ್ನೋ ಅಥವಾ ಪ್ರಶಾಂತನನ್ನೊ ಕರೆದುಕೊಂಡು ಬಂದರೆ ಆಯಿತೆಂದು ನಾರಾಯಣಸ್ವಾಮಿಯ ಜೊತೆಗೂಡಿದೆ. ಮನೆಗೆ ಹೊರಟಾಗ ನಾನು ಎಸೆದ ಕತ್ತಿಯ ನೆನಪಾಗಿ ವಾಪಾಸು ಹೋದೆ, ಅದು ಎಷ್ಟು ರಭಸದಿಂದ ಕೈಬಿಟ್ಟಿತ್ತೋ ಏನೋ ಎಷ್ಟು ಹುಡುಕಿದರೂ ಸಿಗಲಿಲ್ಲ. ಕುರುಚಲು ಗಿಡದ ಮರೆಯಲ್ಲಿ ಎಲ್ಲೋ ಕಣ್ಮರೆಯಾಗಿತ್ತು. ನಾರಾಯಣಸ್ವಾಮಿ ಕೈಯಲ್ಲಿ ಸೊಂಟ ನೀವಿಕೊಳ್ಳುತ್ತಾ ತನ್ನಷ್ಟಕ್ಕೆತಾನು ಅದೇನೋ ಗೊಣಗಿದ. ಕಂಡೋರಿಗೆ ಉಪಕಾರ ಅಂತಲೋ ಎನೋ ಅಂದಂತೆ ಕೇಳಿಸಿತು. ಬಹುಶಃ ನನಗೆ ಜೇನು ತೋರಿಸಲು ಹೋಗಿ ತಾನು ಪೆಟ್ಟುತಿನ್ನುವಂತಾಯಿತಲ್ಲ ಎಂದು ಬೇಸರಿಸಿಕೊಂಡನೇನೋ ಎಂದು ನನ್ನ ಜೇನಿನ ಹುಚ್ಚಿನಿಂದ ನೀನು ಪೆಟ್ಟು ತಿನ್ನುವಂತಾಯಿತಲ್ಲ ಛೆ ಎಂದು ಹೇಳಿದೆ. ಅದಕ್ಕೆ ಆತ ಹಾಗೆನಿಲ್ಲ ಬಿಡು ಇವೆಲ್ಲಾ ಮಾಮೂಲಿ, ನೀನು ಬೇಕಂತಲೇ ಮಾಡಿಲ್ಲವಲ್ಲ, ಸದ್ಯ ಇಷ್ಟರಲ್ಲೇ ಗ್ರಹಚಾರ ಹೋಯಿತು, ನನಗೆ ಅದಕ್ಕೇನು ಬೇಸರವಿಲ್ಲ ಬಿಡು, ಕತ್ತಿ ಸಿಗದಿದ್ದರೆ ಹೋಗಲಿ ಎಂದು ಹೇಳಿದ. ಉಪಚಾರಕ್ಕಾಗಿ ಹಾಗೇನೋ ಹೇಳಿದ, ಆದರೆ ಅವನ ಮುಖಚರ್ಯೆ ನನ್ನಮೇಲೆ ಆತ ಬೇಸರ ಮಾಡಿಕೊಂಡಂತೆ ನನಗೆ ಅನಿಸಿತು. ವಿನಾಕಾರಣ ಅವನಿಗೆ ತೊಂದರೆಕೊಟ್ಟೆನಲ್ಲಾ ಎಂದು ನನಗೆ ಬೇಸರವಾಗತೊಡಗಿತು. ಆವಾಗ ನನಗೆ ಆನಂದರಾಮ ಶಾಸ್ತ್ರಿ ನೆನಪಾದ.
* * * * *
ತ್ರಿಯಂಬಕಂ ಯಜಾಮಹೆ ಸುಗಂಧಿಂ ಪುಷ್ಠಿವರ್ಧನಂ ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷಿ ಯಮಾಮೃತಾತ್ ಈ ಶ್ಲೋಕ ಕೇಳಿದ್ದೀರಲ್ಲ?, ಶಾಸ್ತ್ರಿ ನನ್ನನ್ನು ಪ್ರಶ್ನಿಸಿದ್ದ.
ಹೌದು, ಬಹಳ ಹಿಂದೆ ಚಿಕ್ಕವನಿದ್ದಾಗ ಕೇಳಿ ಕಷ್ಟಪಟ್ಟು ಕಲಿತಿದ್ದೇನೆ
ಆದರೆ ನಾನು ಕಲಿತಿಲ್ಲ, ಆದರೂ ಇಂತಹಾ ಹಲವಾರು ಶ್ಲೋಕಗಳನ್ನು ಹೇಳಬಲ್ಲೆ ಎಂದ ಆನಂದರಾಮಶಾಸ್ತ್ರಿ. ನನಗೆ ಆತನ ಮಾತು ಒಗಟಾಗಿ ತೋಚಿತು. ಕಲಿತಿಲ್ಲ ಎನ್ನುತ್ತಾನೆ, ಆದರೆ ಅಸ್ಖಲಿತವಾಗಿ ಓತಪ್ರೋತವಾಗಿ ಶ್ಲೋಕ ಹೇಳುತ್ತಾನೆ, ಅದು ಹೇಗೆ ಸಾಧ್ಯ ಎಂದೆನಿಸಿ ಮುಗುಳ್ನಗುತ್ತಾ ಮತ್ತೆ ಶ್ಲೋಕ ಕಂಠಪಾಠ ಮಾಡದೆ ಅಷ್ಟೊಂದು ಸುಲಲಿತವಾಗಿ ಹೇಳಿದ ಪರಿ ಕುತೂಹಲದಿಂದ ಕೇಳಿದೆ.
ಶ್ಲೋಕ ಹೇಳಲು ಕಂಠಪಾಠವೇ ಆಗಬೇಕಾಗಿಲ್ಲ, ಹೊಸ ಹೊಸ ಸಿನಿಮಾ ಹಾಡುಗಳನ್ನು ಹಾದಿಹೋಕರೆಲ್ಲಾ ಹಾಡಿಕೊಳ್ಳುತ್ತಾ ಹೋಗುತ್ತಾರಲ್ಲ ಅವರೇನು ಅವುಗಳನ್ನು ಕಂಠಪಾಠ ಮಾಡುತ್ತಾರೆ ಎಂದುಕೊಂಡಿರಾ?, ಹಾಗೆನಿಲ್ಲಾ ಆಸಕ್ತಿಯಿಂದ ಒಂದೆರಡು ಬಾರಿಕೇಳಿರುತ್ತಾರೆ.
ಹಾಗಾದರೆ ನೀವೂ ಆ ಶ್ಲೋಕವನ್ನು ಸಿನಿಮಾದ ಹಾಡಿನಂತೆ ಆಸಕ್ತಿಯಿಂದ ಕೇಳಿದ್ದಕ್ಕೆ ಬಂತಾ?
ಇಲ್ಲ.... ಸಿನೆಮಾ ಹಾಡಿನಲ್ಲಿನ ರಾಗಗಳು ನಮ್ಮಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ, ಆದರೆ ಶ್ಲೋಕಗಳ ಮೆಲೆ ಆಸಕ್ತಿ ಮೂಡುವುದು ಅಪರೂಪ
ಮತ್ತೆ?,
ನನ್ನ ಬಾಲ್ಯದಲ್ಲಿ ಅಜ್ಜ ದಿನನಿತ್ಯ ಇಂತಹಾ ಹಲವಾರು ಶ್ಲೋಕಗಳನ್ನು ತಮ್ಮಷ್ಟಕ್ಕೆ ಹೇಳುತ್ತಿದ್ದರು. ಅದು ಹಾಗೆಯೇ ನನ್ನ ಮಿದುಳಿನಲ್ಲಿ ತನ್ನಷ್ಟಕ್ಕೆ ಅಚ್ಚಾಯಿತು. ಅದು ನನಗೆ ಬೇಕಾ, ಶ್ಲೋಕಗಳ ಅವಶ್ಯಕತೆ ನನಗೆ ಇದೆಯಾ ಅಂತಲೂ ನನಗೆ ತಿಳಿಯದ ವಯಸ್ಸು ಅದು. ಆದರೆ ಈಗ ಶ್ಲೋಕಗಳ ಅವಶ್ಯಕತೆ ನನಗಿಲ್ಲ ಎಂದರೂ ನನ್ನಿಂದ ಅದನ್ನು ಮರೆತುಬಿಡಲು ಆಗುವುದಿಲ್ಲ. ಬಾಯಲ್ಲಿ ಹೇಳದೆ ಇರಬಹುದು, ಆದರೆ ಅಜ್ಜನ ನೆನಪಾದಾಗಲ್ಲೆಲ್ಲಾ ಶ್ಲೋಕಗಳನ್ನು ಮನಸ್ಸು ಗುಣುಗುಣಿಸಲು ಪ್ರಾರಂಭಿಸಿಬಿಡುತ್ತೆ. ಮನುಷ್ಯನಲ್ಲಿನ ಬೇಸರವೂ ಹಾಗೇನೆ.
ಪ್ರಪಂಚದ ಯಾವ ಜೀವಿಗಳಲ್ಲಿಯೂ ಇರದ ಮನುಷ್ಯನಲ್ಲಿ ಮಾತ್ರ ನೆಲೆಗೊಂಡಿರುವ ಮತ್ತು ಅವನ ಜೀವನದ ಬಹುಪಾಲು ಆನಂದದ ಕ್ಷಣಗಳನ್ನು ತಿನ್ನುತ್ತಿರುವ ಅವಸ್ಥೆಯೇ ಬೇಸರ. ಕೋಪ ಸರಿ, ದುಃಖ ಸರಿ, ಆನಂದ ಸರಿ. ಅವೆಲ್ಲಾ ಪ್ರಕೃತಿಯೇ ಕಲ್ಪಿಸಿದ ವ್ಯವಸ್ಥೆ ಆದರೆ ಈ ಬೇಸರ ಎನ್ನುವುದು ಪರಿಹರಿಸಲಾಗದ ಅವಸ್ಥೆ. ಕೋಪ ಬಂದಾಗ ಹಾರಾಡಿ ಕೂಗಾಡಿ ವ್ಯಕ್ತಪಡಿಸಿಬಿಡಬಹುದು, ಕಣ್ಣೀರಕೋಡಿ ಹರಿಸಿದರೆ ದು:ಖ ಶಮನವಾಗಬಹುದು. ಕುಣಿದು ಕುಪ್ಪಳಿಸಿ ಆನಂದ ಹೊಂದಬಹುದು. ಆದರೆ ಬೇಸರ ಎನ್ನುವುದು ಮಾತ್ರ ವಿಚಿತ್ರ ಅವಸ್ಥೆ. ಅದಕ್ಕೆ ಬರಲು ಕಾರಣ ಇರುವುದಿಲ್ಲ, ಹೋಗಲೂ ತಿಳಿಯುವುದಿಲ್ಲ. ಹೋದದ್ದೂ ತಿಳಿಯುವುದಿಲ್ಲ. ದುಃಖದಂತಹ ಅನುಭವ ಹಾಗಂತ ದುಃಖವೂ ಅಲ್ಲ, ಮತ್ತು ಅದು ಪ್ರಕೃತಿ ನೀಡಿದ್ದೂ ಅಲ್ಲ ಮನುಷ್ಯ ತಲೆತಲೆಮಾರುಗಳಿಂದ ಸೃಷ್ಟಿಸಿಕೊಂಡ ಅವ್ಯವಸ್ಥೆ.
ಹುಟ್ಟಿದ ಒಂದು ವರ್ಷದವರೆಗೆ ಮಗು ಹಸಿವಾದಾಗ ಅಥವಾ ತನಗೆ ಕಿರಿಕಿರಿಯಾದಾಗ ಅಳುತ್ತದೆ, ಹೆಚ್ಚಿನ ಸಮಯ ನಿದ್ರೆ ಮಾಡುತ್ತದೆ, ಎಲ್ಲವೂ ಸರಿಯಿದ್ದರೆ ಬಾಹ್ಯ ಪ್ರಪಂಚವನ್ನು ನೋಡುತ್ತಾ ಕೈಕಾಲುಗಳನ್ನು ಅತ್ತಿತ್ತ ಆಡಿಸುತ್ತಾ, ಪಿಳಿಪಿಳಿ ಕಣ್ಣುಬಿಟ್ಟು ತನ್ನಷ್ಟಕ್ಕೆ ಮಲಗಿರುತ್ತದೆ. ಬೆಳೆದಂತೆ ತನಗೆ ಬೇಕಾಗಿದ್ದು ಸಿಗದಾಗ ಕೋಪದಿಂದ ರಚ್ಚೆ ಹಿಡಿಯುತ್ತದೆ. ಅಲ್ಲಿಯವರೆಗೆ ಅದು ಸರಿ. ಆದರೆ ತಾಯಿಯಂದಿರು ಬಾಹ್ಯ ಪ್ರಪಂಚದ ಅರ್ಥವಿಲ್ಲದ ನ್ಯೂನತೆಯನ್ನು ಅವರಿಗೂ ಅರಿವಿಲ್ಲದಂತೆ ತುಂಬತೊಡಗುತ್ತಾರೆ. ಗಂಟೆಗಟ್ಟಲೆ ಒಂಟಿಯಾಗಿ ಆಟವಾಡುತ್ತಿದ್ದ ಮಗು ಯಾವುದೋ ಕಾರಣದಿಂದ ಅತ್ತರೆ, ಓಡಿ ಬಂದು ಒಬ್ಬನೆ ಆಡಿ ಬೇಸರ ಆಯಿತಾ ಮಗಾ. ಅಮ್ಮ ನಿನ್ನ ಬಿಟ್ಟು ಹೋಗಿದ್ಲಾ? ಎನ್ನುವ ಸ್ವಗತದ ಮಾತುಗಳನ್ನು ಆಡುತ್ತಾರೆ. ಅಳುವಾಗ ಆಗುವ ಅನುಭವವನ್ನು ಮಗು ಬೇಸರ ಎಂದು ತಪ್ಪಾಗಿ ಗ್ರಹಿಸಿಬಿಡುತ್ತದೆ ಮತ್ತು ಒಂಟಿಯಾಗಿರುವುದು ಎಂದರೆ ಬೇಸರ ಎನ್ನುವ ಭಾವನೆ ಬೆಳೆಯುತ್ತದೆ. ಹಾಗಾಗಿ ಸುಮ್ಮನೆ ಒಂಟಿಯಾಗಿ ಇದ್ದಾಗ ಬೇಸರವಾಗುವುದು ಮತ್ತು ಬೇಸರವಾದಾಗ ಒಂಟಿಯಾಗಿ ಸುಮ್ಮನೆ ಕೂರುವುದು ಎಂಬ ಹೊಸ ವಿಧಾನ ಚಾಲ್ತಿಗೆ ತನ್ನಷ್ಟಕ್ಕೆ ಬಂತು.
ಸಣ್ಣ ವಯಸ್ಸಿನಿಂದಲೇ ದಿನನಿತ್ಯ ಹಲವಾರು ಬಾರಿ ಬೇಸರ ಎಂಬ ಶಬ್ದವನ್ನು ಕೇಳಿ ನಿಧಾನವಾಗಿ ಬೇಸರ ಎಂಬ ಅರ್ಥವಿಲ್ಲದ ಹೊಸ ಅನುಭವ ಮಗುವಿನ ಮನಸ್ಸಿನಲ್ಲಿ ಅಚ್ಚುಬೀಳತೊಡಗುತ್ತದೆ. ಶುದ್ಧಮನಸ್ಸಿಗೆ ಅವಶ್ಯಕತೆ ಇದೆಯೋ ಇಲ್ಲವೋ ಕಿವಿಯ ಮೂಲಕ ಶ್ಲೋಕ ಹೇಗೆ ತಾನಾಗಿಯೇ ಅಚ್ಚೊತ್ತುತ್ತದೆಯೋ ಅದೇರೀತಿ ಬೇಸರವೆಂಬ ಶಬ್ದಕ್ಕೆ ದುಃಖದ ಅನುಭವ ಸೇರಿ ನೆನಪಿನಾಳಕ್ಕೆ ಇಳಿದುಬಿಡುತ್ತವೆ.ಪ್ರಕೃತಿ ಸಹಜವಾಗಿದ್ದದ್ದು ಮೂರೇ ವಿಧಾನ. ಒಂದು ಕೋಪ, ಇನ್ನೊಂದು ದುಃಖ, ಮತ್ತೊಂದು ಸಮಾಧಾನ. ಕೋಪವನ್ನು ಕೂಗಾಡಿಯೂ, ದುಃಖವನ್ನು ಕಣ್ಣೀರಿನ ಮೂಲಕವೂ ಹೊರಹಾಕಿಕೊಳ್ಳಬಹುದು. ಅವುಗಳು ಶಾಶ್ವತ ಅವಸ್ಥೆಗಳಲ್ಲ. ಆದರೆ ಕಾರಣವಿಲ್ಲದ ಬೇಸರವನ್ನು ಅನುಭವಿಸಬಹುದೇ ವಿನಃ ಹೊರಹಾಕಲು ಸಾಧ್ಯವಿಲ್ಲ. ಹಾಗಾಗಿ ಬೇಸರ ಎನ್ನುವುದು ನಮ್ಮ ಕಳ್ಳಮನಸ್ಸಿನ ತಪ್ಪುಕಲ್ಪನೆಯ ಸೃಷ್ಟಿಯೇ ಹೊರತು ಸಹಜ ಅಲ್ಲ. ಮನಸ್ಸಿನಿಂದ ಯಾವುದನ್ನು ಹೊರಹಾಕಲು ಸಾಧ್ಯವಿಲ್ಲವೋ ಅದು ನಂತರ ವಿಕೃತಿಯಾಗಿ ಕಾಡತೊಡಗುತ್ತದೆ. ಪ್ರಕೃತಿ ತಾನಾಗಿ ಆರಂಭಿಸಿದ ಎಲ್ಲಾ ವ್ಯವಸ್ಥೆಗೆ ಅಂತ್ಯವನ್ನೂ ಕಲ್ಪಿಸಿದೆ. ಆದರೆ ಮನುಷ್ಯನ ತಪ್ಪುಗ್ರಹಿಕೆಯಿಂದಾದ ದೋಷಕ್ಕೆ ಅಂತ್ಯವೇ ಇಲ್ಲ. ಇದಕ್ಕೆಲ್ಲಾ ಮನುಷ್ಯ ತಾನು ಬುದ್ದಿಜೀವಿ ಎಂದು ತಿಳಿದುಕೊಂಡಿದ್ದೇ ಕಾರಣ.
ಆ ಕಾರಣಕ್ಕೆ ನನಗೆ ಜೇನಿನ ಜೀವನ ಅತ್ಯಂತ ಇಷ್ಟವಾಗುವುದು. ಪ್ರಕೃತಿ ಕಲ್ಪಿಸಿಕೊಟ್ಟ ಜೀವನದ ವ್ಯವಸ್ಥೆಯನ್ನು ಅವು ಚಾಚೂ ತಪ್ಪದಂತೆ ಅನುಸರಿಸುತ್ತಿವೆ. ಅವು ತಮ್ಮ ಯೋಚನಾ ಸಾಮರ್ಥ್ಯವನ್ನು ಜೀವನದ ನಿಯಮಗಳ ಮೇಲೆ ಹೇರಿಲ್ಲ. ಮನುಷ್ಯನಂತೆ ಕುಟುಂಬವ್ಯವಸ್ಥೆಯಲ್ಲಿ ಬದುಕುತ್ತಿರುವ ಅವುಗಳಿಂದ ನಾವು ಇಂದೂ ಕೂಡ ಆನಂದದಿಂದ ಬದುಕುವುದನ್ನು ಕಲಿಯಬಹುದು. ಅವುಗಳಲ್ಲಿನ ಮೂಲತತ್ವವನ್ನು ನಾವು ಇವತ್ತೂ ಸುಲಭದಲ್ಲಿ ಪಾಲಿಸಬಹುದು. ಆ ಆನಂದದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕಾದ ಆಸೆಯಿದ್ದವರು ಒಮ್ಮೆ ಜೇನಿನೊಳಗೆ ಪರಕಾಯಪ್ರವೇಶ ಮಾಡಿಬರಬೇಕಷ್ಟೆ. ಅದು ಭವಿಷ್ಯದ ದೃಷ್ಟಿಯಿಂದಲಾದರೂ ಉತ್ತಮಮಾರ್ಗ.
ಪರಕಾಯ ಪ್ರವೇಶ... ಭವಿಷ್ಯ.. ಮಾಟಮಂತ್ರ ! ಇಂದಿನ ಕಾಲದಲ್ಲಿಯೂ ನೀವು ಅಂತದ್ದನ್ನೆಲ್ಲಾ ನಂಬುತ್ತೀರಾ... ಕೂಡಲೆ ಕುತೂಹಲದಿಂದ ಕೇಳಿದೆ.
ಇಂದೂ ನಂಬುತ್ತೀರಾ ಎಂದರೆ ನಿಮ್ಮ ಅರ್ಥದಲ್ಲಿ ಅದು ಸುಳ್ಳು, ಆಗದು ಎಂಬ ಅಪನಂಬಿಕೆ ಇರುವಂತಿದೆ
ಮತ್ತಿನ್ನೇನು ಅವೆಲ್ಲಾ ಕಲ್ಪನಾಲೋಕದ ಕಥೆಗಳಲ್ಲಿ ಮಾತ್ರ ಸಾಧ್ಯವಲ್ಲವೇ?
ಹಾಗಂತ ಸುಲಭವಾಗಿ ಅಲ್ಲಗಳೆಯಬೇಡಿ, ನಾನು ನಿಮಗೆ ಭವಿಷ್ಯ ಮತ್ತು ಪರಕಾಯಪ್ರವೇಶದಂತಹ ಹಲವಾರು ವಿಷಯಗಳ ನಿಜವಾದ ಅರ್ಥ ಮತ್ತು ಇಂದಿನ ಅನರ್ಥ ಎರಡನ್ನೂ ವಿಷದಪಡಿಸುತ್ತೇನೆ ಎಂದು ಮುಗುಳ್ನಕ್ಕ.
* * * * *
ಶಾಸ್ತ್ರಿ ಅಂದು ಹೇಳಿದ ವೇದಾಂತಗಳು ನೂರಕ್ಕೆ ನೂರು ಒಪ್ಪಿಕೊಳ್ಳುವಂತಿಲ್ಲದಿದ್ದರೂ ಅವನ ತರ್ಕದ ರೀತಿ ಅಲ್ಲಗಳೆಯುವಂತಿರಲಿಲ್ಲ. ಅಥವಾ ಜೇನಿನ ಪುಸ್ತಕ ನಾನು ಓದಿಲ್ಲದಿದ್ದರೆ, ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೆ, ಅವನ ಹೋಲಿಕೆಗಳು ಅರ್ಥವಾಗದೆ ನನಗೂ ಅದು ಪೇಲವವೆಂದು ಅನ್ನಿಸಿಬಿಡುತ್ತಿತ್ತು. ಕಾರಣವಿಲ್ಲದ ಬೇಸರ ಹಲವು ಬಾರಿ ನನ್ನನ್ನೂ ಕಾಡುತ್ತಿತ್ತು. ಈಗಲಾದರೂ ನನ್ನ ಬೇಸರಕ್ಕೆ ಸಣ್ಣದೊಂದು ಕಾರಣವಿತ್ತು, ಆದರೆ ಬಹಳಷ್ಟು ಸಾರಿ ನನ್ನ ಬೇಸರಕ್ಕೆ ಕಾರಣವೂ ಇರಲಿಲ್ಲ ಮತ್ತು ಪರಿಹಾರಕ್ಕೆ ಉತ್ತರವೂ ಇರಲಿಲ್ಲ. ನಾರಾಯಣ ಸ್ವಾಮಿ ಬೇಸರಮಾಡಿಕೊಂಡನೇನೋ ಎಂದು ಊಹಿಸಿ ಅದಕ್ಕಾಗಿ ನಾನು ಬೇಸರಮಾಡಿಕೊಳ್ಳುವಷ್ಟರ ಮಟ್ಟಿಗೆ ಬೇಸರಕಾಡುವ ಹುಟ್ಟುಸ್ವಭಾವ ನನ್ನದಾದ್ದರಿಂದ, ಆನಂದರಾಮ ಶಾಸ್ತ್ರಿಯ ವೇದಾಂತ ನೆನಪಾಗಿ ಅತ್ಯಂತ ಸುಲಭವಾಗಿ ಬೇಸರವನ್ನು ನೀಗಿಕೊಂಡು ಊಟಮಾಡಿ ಬರಲು ಮನೆಗೆ ಹೋದೆ.
* * * * (ಮುಂದುವರೆಯುತ್ತದೆ)
ಹಿಂದಿನ ಓದಿಗೆ
http://shreeshum.blogspot.com/2010/08/blog-post_31.html