Monday, November 7, 2011

ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು

ಹಂಸಗಾರು ಶ್ರೀಧರಣ್ಣ ಹೇಳಿದ್ದ " ರಾಘು ಕಥೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆ ಬಾಗಿಲು ತಟ್ಟುತ್ತವೆ" ಅಂತ ಕತೆಗಾರರೊಬ್ಬರು ಹೇಳಿದ್ದರು, ಅದರ ಅನುಭವ ನಿನಗಾಗ ಬಹುದು ಎಂದು. ಈ ಮಾತು ಆತ ನನಗೆ ಹೇಳಿದ್ದು "ಕಟ್ಟು ಕತೆಯ ಕಟ್ಟು" ಕಥಾಸಂಕಲನ ಹೊರ ಬಂದ ವರ್ಷ. ನನಗೆ ಅದರ ಅನುಭವ ಆಗಿರಲಿಲ್ಲ. ಕತೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆಬಾಗಿಲ ತಟ್ಟುವುದರ ಅನುಭವ ಈಗ ನನಗೆ. ಅದೊಂದು ವಿಚಿತ್ರ ಮಜ ಕೂಡ.
ನಾನು ಸರಿ ಸುಮಾರು ಮೂವತ್ತು ಕತೆಗಳನ್ನು ಬರೆದಿದ್ದೇನೆ, ಅದು ಕನ್ನಡದ ಪತ್ರಿಗೆಳಲ್ಲಿ ಪ್ರಕಟವಾಗಿವೆ, ಅದರ ಸಂಕಲನ ಹೊರಬಂದಿದೆ. ಕಥೆಗಳೆಂದರೆ ಅಷ್ಟೆ, ನಾವೇಷ್ಟೇ ಬೇಡವೆಂದು ಪ್ರಯತ್ನಿಸಿದರೂ ನಮ್ಮ ಸುತ್ತಮುತ್ತಲ ಘಟನೆಗಳು, ವ್ಯಕ್ತಿಗಳು, ಪಾತ್ರಗಳ ರೂಪದಲ್ಲಿ ಸೇರಿಕೊಂಡುಬಿಡುತ್ತವೆ. ಮೋಸಗಾರರು, ಲಂಪಟರು ಎಂದೆಲ್ಲಾ ಕರೆಯಿಸಿಕೊಳ್ಳುವ ಮಂದಿಗಳೂ ಅದರ ಕಥಾವಸ್ತುವಾಗುತ್ತಾರೆ, ಸಜ್ಜನರ ಅಸಹಾಯಕತೆಯೂ ಕಥೆಗಳಾಗುತ್ತವೆ. ಆದರೆ ಪ್ರಕೃತಿಯ ವೈಚಿತ್ರವೆಂದರೆ ಎಂಥಾ ಘನಾಂಧಾರಿ ಮೋಸಮಾಡುವ ವ್ಯಕ್ತಿಯೂ ಕೂಡ ತನ್ನನ್ನು ತನ್ನ ಬದುಕನ್ನು ಸಮರ್ಥಿಸಿಕೊಳ್ಳುತ್ತಾ ಮುಂದೆಸಾಗಿಸುವ ಬುದ್ಧಿಯನ್ನು ನೀಡಿದೆ ಸೃಷ್ಟಿ.
ಲಂಚ ಹೊಡೆದವನಿಂದ ಹಿಡಿದು, ಕೊಲೆ ಮಾಡಿದವನ ವರೆಗೂ, ಅತ್ಯಾಚಾರ ಮಾಡುವವನಿಂದ ಹಿಡಿದು ಪ್ರೀತಿಸಿ ಕೈಕೊಟ್ಟವನ ವರೆಗೂ, ಅಪ್ಪ ಅಮ್ಮನ ಹೊರಹಾಕಿದವನಿಂದ ಹಿಡಿದು ಹೆಂಡತಿ ಬಿಟ್ಟವನವರೆಗೂ, ಹೆಂಡ ಕುಡಿದವನಿಂದ ಹಿಡಿದು ಚರಸ್ ಮಾರಿದವನವರೆಗೂ, ಸಾರ್ವಜನಿಕ ಜಾಗ ಕಬಳಿಸುವವನಿಂದ ಹಿಡಿದು ಸಾರ್ವಜನಿಕರನ್ನು ತಿಂದು ಮುಗಿಸುವವನವರೆಗೂ, ಅವನದೇ ಆದ ಸಮರ್ಥನೆಯ ಕಾರಣಗಳು ಇರುತ್ತವೆ. ಸಮಾಜ ಒಪ್ಪಲಿ ಬಿಡಲಿ ಆತನ ಸಮರ್ಥನೆ ಸಮಜಾಯಿಶಿ ಜೀವನಾಂತ್ಯದವರೆಗೂ .... ಆದರೆ..
ಕತೆಗಳಲ್ಲಿ ಬರುವ ಪಾತ್ರಗಳನ್ನು ತನಗೆ ಆತ ಹೋಲಿಸಿಕೊಳ್ಳತೊಡಗುತ್ತಾನೆ. ತಾನು ಮಾಡಿದ ತಪ್ಪು ಕುಂತಾಗ ನಿಂತಾಗ ಕಾಡತೊಡಗುತ್ತವೆ. ಒಪ್ಪಿಕೊಳ್ಳಲು ಇಗೋ ಮನಸ್ಸುಕೊಡದು. ಆಗ ಕಾಣಿಸುವವನೇ ಕತೆಗಾರ. ದಡಕ್ಕನೆ ಎದ್ದು ಕತೆಗಾರನ ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು. ಕತೆಗಾರ ನ್ಯಾಯಯುತವಾಗಿ ಇದ್ದರೆ... (ಇದ್ದರೆ ಏನು ?ಇರಬೇಕು, ) ಬಾಗಿಲ ತಟ್ಟಿ ತಟ್ಟಿ ಮಾಯವಾಗುತ್ತವೆ, ಇಲ್ಲದಿದ್ದಲ್ಲಿ ಅನುಭವಿಸಬೇಕು ನ್ಯಾಯವೆಂದರೆ ಹಾಗೇನೆ, ಅದು ಎಲ್ಲರಿಗೂ ಒಂದೆ,
ಬಾಗಿಲು ತಟ್ಟುವವರ ಕೈ ನೋವಾಗುವ ತನಕ ಸುಮ್ಮನಿರಬೇಕಷ್ಟೆ.