Saturday, January 5, 2013

ನಮ್ಮೂರ ಲಗಾನ್

             
    ನನಗೆ ಕ್ರಿಕೆಟ್ ಎಂದರೆ ಅಷ್ಟಕ್ಕಷ್ಟೆ. ಹಾಗಾಗಲು ಸ್ಪಷ್ಟ ಕಾರಣ ಅಂತ ಏನೂ ಇಲ್ಲ. ಒಂದಿಷ್ಟು ಸಣ್ಣ ಪುಟ್ಟ ಕಾರಣ ಹುಡುಕಿ ಹೇಳಬೇಕು ಅಂತಾದರೆ ಮೊದಲನೆಯದು ನನಗೆ ಅಲ್ಲಿ ಒಂದೇ ತರಹ ಬಟ್ಟೆ ಧರಿಸಿ ಆಡುವ ಹನ್ನೊಂದು ಜನರ ಮುಖ ಪರಿಚಯ ನೆನಪಿರುವುದಿಲ್ಲ, ಎರಡನೆಯದಾಗಿ ಸ್ಪಿನ್, ಗೂಗ್ಲಿ, ಬೌನ್ಸರ್ ಇಂತಿಪ್ಪ ಹತ್ತು ಹಲವು ನನಗೆ ಗೊಂದಲ, ಮೂರನೆಯದಾಗಿ ಅವನು ಹೀಗೆ ಆಡಿದ್ದರೆ ಇನ್ನಷ್ಟು ಹೊತ್ತು ನಿಲ್ಲಬಹುದಿತ್ತು ಎಂಬ ವಿಮರ್ಶೆ ಖಂಡಿತಾ ಒಗ್ಗದು, ನಾಲ್ಕನೆಯದಾಗಿ ಅದೊಂತರಹ ಏಕತಾನತೆ ಕಾಡತೊಡಗಿ ಆಟದ ಕೊನೆಯ ರೋಮಾಂಚಕ ಐದು ನಿಮಿಷ ಮಾತ್ರಾ ನೋಡಿದರೆ ಸಾಕು ಎಂಬ ಭಾವನೆ ಮೂಡಿ ಮೊದಲು ಆಟ ನೋಡದೆ ಅಂತಿಮ ಕ್ಷಣಕ್ಕೆ ಟಿವಿ ಹಾಕಿದರೆ ಆಟ ಮುಗಿದು ನಂತರ ಅದ್ಯಾರೋ ಕೊರೆಯುವುದಷ್ಟೇ ನನ್ನ ಪಾಲಿಗೆ ಉಳಿಯುವಂತಾಗಿ ಬಿಡುತ್ತದೆ. ಒಟ್ಟಿನಲ್ಲಿ ನನಗೆ ಒಗ್ಗಲಿಲ್ಲ ಬಿಟ್ಟಾಕಿ. ಈಗ ವಿಷಯಕ್ಕೆ ಬರುತ್ತೇನೆ
          ಲಗಾನ್ ಚೆನ್ನಾಗಿದೆ ಅಂತ ಬಹಳ ಜನ ಹೇಳಿದ್ದರು. ನಾನು ನೋಡಲಿಲ್ಲ, ಹಳ್ಳಿಯ ಹುಡುಗರ ಕ್ರಿಕೆಟ್ ಕಹಾನಿ ಎಂಬ ವಿಷಯ ನಿಮ್ಮಂತಹ ಜನರ ಮೂಲಕ ತಿಳಿದಿದೆ ಅಷ್ಟೆ. ನಮ್ಮೂರಿನ ಹಳ್ಳಿ ಹುಡುಗರು ಕೂಲಿ ಕೆಲಸ ಮುಗಿಸಿದ ನಂತರ ಪ್ರತಿ ನಿತ್ಯ ಸಂಜೆ ಅವರದ್ದೇ ಆದ ಟೀಂ ಕಟ್ಟಿಕೊಂಡು ಆಡುತ್ತಿರುತ್ತಾರೆ. ನಾನು ನಿತ್ಯ ಅವರ ಮಜವನ್ನು ನೋಡಿ ಅನುಭವಿಸುತ್ತೇನೆ.ವಾರದ ಹಿಂದೆ ಸಂಜೆ ಹುಡುಗರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅದೇನೋ ಚರ್ಚೆ ನಡೆಯುತ್ತಿತ್ತು. ಕಾರು ನಿಲ್ಲಿಸಿದೆ. ತಾಳಗುಪ್ಪದಲ್ಲಿ ಟೂರ್ನ್ ಮೆಂಟ್ ಇದೆ ಆದರೆ ಪ್ರವೇಶ ಶುಲ್ಕ ಸಾವಿರ ರೂಪಾಯಿ, ಆಡಬೇಕು ದುಡ್ಡಿಲ್ಲ ಎನ್ನುವುದು ಅವರ ಚರ್ಚೆಯ ವಿಷಯ. ಅಲ್ಲೊಂದು ಸಣ್ಣ ಬೆಸರದ ಸಂಗತಿ ಎಂದರೆ ಅವರಿಗೆ ಟೂರ್ನ್ ಮೆಂಟ್ ಗೆ ಹೋಗುವ ಆಸೆ ಆದರೆ ಪ್ರವೇಶ ಶುಲ್ಕ ದ ಸಮಸ್ಯೆ. ನಾನು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಂಡೆ. ಹುಡುಗರು ಖುಷ್ ಆಗಿ ಹುರ್ರೇ ಎಂದರು. ನಾನು ಬುರ್ ಎಂದು ಕಾರು ಓಡಿಸಿ ಕೊಂಡು ಮನೆಗೆ ಹೋದೆ.
           ಒಂದೆರಡು ದಿವಸ ಕಳೆದಿತ್ತು ಹನ್ನೆರಡು ಟೀಂ ಗಳಲ್ಲಿ ಹತ್ತನ್ನು ಸೋಲಿಸಿ ನಮ್ಮ ಹುಡುಗರು ಸೆಮಿ ಫೈನಲ್ ಗೆ ಬಂದು ಬಿಟ್ಟಿದ್ದರು. ಅವರಿಗೆ ಅದೆಷ್ಟು ಆನಂದ ಅಂದರೆ ಇಲ್ಲಿ ಅಕ್ಷರದಲ್ಲಿ ಮೂಡಿಸಲಾಗದು ಬಿಡಿ. ಪೈನಲ್ ದಿವಸವೂ ಬಂತು. ನಾನು ಮರತೆ ಬಿಟ್ಟಿದ್ದೆ. ಸಂಜೆ ಒಂದು ದಂಡು ಜನರೊಂದಿಗೆ ಕಪ್ ಹಿಡಿದು ನಮ್ಮ ಮನೆಗೆ ಬಂದರು ಲಗಾನ್ ಹುಡುಗರು. ನಾನು ಅರೆಕ್ಷಣ ರೋಮಾಂಚಿತನಾದೆ. ಒಂದು ಕೆಜಿ ಸಿಹಿ, ಪಟಾಕಿ ಅಯ್ಯೋ ಅವರ ಸಂಭ್ರಮ ಹೇಳತೀರದು. ಅವರ ಸಂಭ್ರಮ ನೋಡಿ ನನ್ನ ಸಂಬ್ರಮಮದ ಕತೆಯೂ ಅಷ್ಟೆ. ಹುಡುಗರು ಗೆದ್ದ ಮೊತ್ತ ಹನ್ನೊಂದು ಸಾವಿರ ನಗದು. ಅಂತೂ ಒಳ್ಳೆ ಮಜ ಕೊಟ್ಟರು ನಮ್ಮೂರ ಹುಡುಗರು.
                   ನಾನಂತೂ ಭಗವಂತನನ್ನು ಹೀಗೆ ಪ್ರಾರ್ಥಿಸುತ್ತಿದ್ದೇನೆ. "ಇಲ್ಲಿ ಒಳ್ಳೆಯ ಕೆಲಸ ಬಹಳ ಆಗುವುದಿದೆ, ಅದು ನನ್ನ ಮೂಲಕ ಆಗಲಿ" ಎಂಬ ಸ್ವಾರ್ಥ ಪೂರಿತವಾಗಿ. ಫಲಿಸಿದೆ ಬಹಳಷ್ಟು ಫಲಿಸಿದೆ. ಅದರ ಫಲಾನುಭವಿಗಳಲ್ಲಿ ನಮ್ಮೂರ ಈ ಹುಡುಗರು ಎಷ್ಟನೆಯವರು ಎಂದು ಕರಾರುವಕ್ಕಾಗಿ ಹೇಳಬಾರದು, ಕಾರಣ ನನ್ನಲ್ಲಿ ಅಹಂಕಾರ ಮೂಡಿಬಿಡಬಹುದು.

Friday, January 4, 2013

ಗೊತ್ತಿಲ್ಲ ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ.

                ಅಲ್ಲಿ ನಿಲ್ಲಲ್ಲು ಸಾದ್ಯವಾದರೆ ಅದು ಪರಮ ಸುಖ. ಅಲ್ಲಿ ಎಂಬುದಕ್ಕೆ ಸಮರ್ಪಕವಾದ ಉತ್ತರ ನಿಮಗೆ ನೀವೆ ಕಂಡುಕೊಳ್ಳಬೇಕು. ಅದು ಪಕ್ಕಾ ನಿಮ್ಮ ಮಿದುಳಿನ ಶಕ್ತಿಯನ್ನು ಅವಲಂಬಿಸಿದೆ. ಸುಲಭ ಉದಾಹರಣೆಯ ಮೂಲಕ ಹೇಳಬೇಕೆಂದರೆ ಇತ್ತೀಚೆಗೆ ಸುದ್ದಿಯಾಗುತ್ತಿರುವ  ಅತ್ಯಾಚಾರದ ವಿಷಯ. ಅತ್ಯಾಚಾರ ವಿರೋಧಿಸಿ ಚಿಂತಿಸುವ ಗುಂಪು ದೊಡ್ಡದಿದೆ ನಿಜ ಆದರೆ ವಿಚಿತ್ರ ಗೊತ್ತಾ ...?  ಆ ಅತ್ಯಾಚಾರದ ಪರವೂ ಒಂದು ಗುಂಪು ಇರುತ್ತದೆ. ಅದು ಸಣ್ಣದಿರಬಹುದು. ಆದರೂ ಇರುತ್ತದೆ. ವಿಷಯ ಎಂಬುದು ಗುಂಪಿನ ಬಹುಮತಕ್ಕೆ ಸಂಬಂದಪಟ್ಟಿದ್ದಲ್ಲವಾದ್ದರಿಂದ  ಇರುವಿಕೆಯಂತೂ ಸತ್ಯ. ಈಗ ಯೋಚಿಸಿ ಅಲ್ಲಿನ ಪರವೂ ಕೂಡ ವಿಷಯಕ್ಕೆ ವಿರೋಧವೇ, ವಿರೋಧವೂ ಕೂಡ ವಿಷಯಕ್ಕೆ ಪರವೇ. ತರ್ಕದ ಮೂಲಕ ಹೇಗಾದರೂ ಸಮರ್ಥಿಸಬಹುದು. ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಿನ ಕ್ಷಣಗಳಲ್ಲಿ ಏನು ನಡೆಯಿತು ಎನ್ನುವುದರ ಮೇಲೆ ಘಟನೆ ನಿಂತಿರುತ್ತದೆಯಾದ್ದರಿಂದ ಅದು ಹೇಗೂ ತಿರುವು  ಪಡೆದುಕೊಳ್ಳಬಹುದು. ಅಲ್ಲಿನ ವ್ಯಕ್ತಿಗಳು  ಮತ್ತು ಅವರೊಡನೆ ನಿಮ್ಮ ನಮ್ಮ ವೈಯಕ್ತಿಕ ಸಂಬಂಧ ಯಾವ ಮಟ್ಟದ್ದು ಎನ್ನುವುದರ ಮೇಲೆ ಘಟನೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ.
            ಅತ್ಯಾಚಾರಿಯು ಹತ್ತಿರದ ಕರುಳ ಸಂಬಂಧಿಯಾದರೆ ಅದಕ್ಕೊಂದು ತಿರುವು, ಅತ್ಯಾಚಾರಕ್ಕೆ ಈಡಾದವರು ಕರುಳ ಸಂಬಂದಿಯಾದರೆ ಅದಕ್ಕೊಂದು ತಿರುವು. ಈ ವಿಷಯಗಳ ನಡುವೆ ಸತ್ಯವೊಂದು ಸುಮ್ಮನೆ ನಗುತ್ತಾ ಕುಳಿತಿರುತ್ತದೆ. ಅದು ತಿಳಿಯುವುದು ಬಹು ಅಪರೂಪದ ಜನಕ್ಕೆ. ಆ ಅಪರೂಪದ ಜನ ನೀವಾಗಬೇಕು ಎಂತಾದರೆ ಆ "ಅಲ್ಲಿ" ನಿಲ್ಲುವುದನ್ನು ಕಲಿಯಬೇಕು. ಈಗ ನಿಮಗೆ ಅರ್ಥವಾಗಿರಬೇಕು ಆ ಅಲ್ಲಿ ಎಂದರೆ  "ನಡುವೆ" ಎಂದು. ಹೌದು ಆಕಸ್ಮಿಕದ ಘಟನೆಯನ್ನು ಪೂರ್ವಯೋಜಿತ ಅಂತಲೂ ಪೂರ್ವಯೋಜಿತ ಘಟನೆಯನ್ನು ಆಕಸ್ಮಿಕ ಅಂತಲೂ ಬಲಾಬಲದ ಮೇಲೆ ತಿರುಚಿದ ಉದಾಹರಣೆ ಸಾಕಷ್ಟಿದೆ. ಅದು ತಿಳಿಯುವುದು ನಡುವೆ ನಿಂತಾಗಲೇ. ಇಡೀ ಜೀವನವನ್ನು ನಡುವೆ ನಿಂತು ಅರ್ಥ ಮಾಡಿಕೊಳ್ಳ ತೊಡಗಿದರೆ ಅದರಂತಹ ಸುಖ ಮತ್ತೊಂದಿಲ್ಲ. ನಡುವೆ ನಿಲ್ಲುವ  ಶೈಲಿಯ ಇನ್ನೂ ಸುಲಭದ ವ್ಯಾಖ್ಯೆ ಎಂದರೆ ದೇವರು ಇದ್ದಾನೆ ಎನ್ನುವವರಿಗೂ ಇಲ್ಲ ಎನ್ನುವವರಿಗೂ ಗುಲಗುಂಜಿ ವ್ಯತ್ಯಾಸ ಇಲ್ಲ. ಎಲ್ಲಾ ಗೊತ್ತಿದ್ದೂ...  "ಗೊತ್ತಿಲ್ಲ" ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ. ದಲೈಲಾಮ "ನನಗೆ ಗೊತ್ತಿಲ್ಲ" ಎಂಬ ಮಾತಿನಿಂದಲೇ ಉತ್ತರ ಕೊಡಲು ಆರಂಭಿಸುತ್ತಾರೆ. ಹಾಗಾಗಿ ಅವರ ವ್ಯಕ್ತಿತ್ವ  ಜಗತ್ತಿಗೆ ಮತ್ತು ಸತ್ಯ ದರ್ಶನದ ವಿಷಯದಲ್ಲಿ   "ಶಾಂತಿ, ಶಾಂತಿ, ಶಾಂತಿ"

Thursday, January 3, 2013

ಇವರು ಇಂಜನಿಯರಿಂಗ್ "ರೈತ"

              
           ಬಹುಪಾಲು ಎಲ್ಲ ತಂದೆತಾಯಿಂದರ ಕನಸು ಮಕ್ಕಳು ಇಂಜನಿಯರ್ ಅಥವಾ ಡಾಕ್ಟರ್ ಆಗಬೇಕು, ಪಕ್ಕದ ಮನೆಯ ಹುಡುಗರು ಕೃಷಿಕರಾಗಬೇಕು ಎಂಬ ತತ್ವ. ಆದರೆ ತಾಳಗುಪ್ಪದ ಸಮೀಪದ ಶಿರೂರು ಆಳ್ಳಿಯ ಮೂಗೀಮನೆ ಸುಬ್ರಾಯ ಹಾಗೂ ಕನಕಲತ ದಂಪತಿಗಳು ೧೨ ವರ್ಷದ ಕೆಳಗೆ ಇಂಜನಿಯರ್ ಮಗ ಮನೆಗೆ ಬರುತ್ತಾನೆ ಮರಳಿ ಕೃಷಿಗೆ ತೊಡಗಿಸಿಕೊಳ್ಳುತ್ತಾನೆ ಎಂದರೆ ಸಂಭ್ರಮಿಸಿದರು. ಅದರ ಪ್ರತಿಫಲ ಕೃಷಿಕ ಪ್ರಪಂಚಕ್ಕೆ ಇಂಜನಿಯರ್ ಕೊಡುಗೆಯಾದಂತಾಯಿತು.
         ೧೯೯೧ ನೆ ಇಸವಿಯಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಮುಗಿಸಿದ ಗಣೇಶ್ ಎಂ ಎಸ್ ಆಯ್ದುಕೊಂಡಿದ್ದು ನೌಕರಿಯನ್ನಲ್ಲ ಕೈಗಾರಿಕೆಯನ್ನ. ಮೈಸೂರಿನಲ್ಲಿ ಇಂಜನಿಯರಿಂಗ್ ಇಂಡಸ್ಟ್ರಿ ಆರಂಭಿಸಿದರು. ಉದ್ಯಮ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಯಶಸ್ವಿಯೂ ಆದರು, ಆದರೆ ಮನಸ್ಸಿಗೆ ನೆಮ್ಮದಿ ಮಾತ್ರಾ ಸಿಕ್ಕಿರಲಿಲ್ಲ. ಮಲೆನಾಡಿನ ತುಡಿತ ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ೧೯೯೯ ನೇ ಇಸವಿಯಲ್ಲಿ ಇಂಜನಿಯರಿಂಗ್ ಉದ್ಯಮಕ್ಕೆ ವಿದಾಯ ಹೇಳಿ ಮರಳಿದರು ಮಣ್ಣಿಗೆ.
   ದೇಶ ಸುತ್ತಿ ಕೋಶ ಓದಿ ವಾಪಾಸು ಬಂದ ಇಂಜನಿಯರಿಂಗ್ ಪದವಿಧರ ಗಣೇಶ್ ಆರಂಭದಲ್ಲಿ ಕೃಷಿಗೆ ಒಗ್ಗಿಕೊಳ್ಳುವುದು ತುಸು ಕಷ್ಟ ಎನಿಸಿತು. ಕೃಷಿಯನ್ನು ಉದ್ಯಮದ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದ ಬಳಕೆಯಿಂದ ಮಾತ್ರಾ ಯಶಸ್ಸು ಎನಿಸಿ ಕೃಷಿ ಉದ್ಯಮ ಆರಂಭಿಸಿದರು.
ಬೇವಿನ ಹಿಂಡಿ ಉದ್ಯಮ: ತಮ್ಮ ಸ್ವಂತ ತೋಟದ ಬಳಕೆಗೆ ಗೊಬ್ಬರ ಅವಶ್ಯಕತೆ ಇತ್ತು ಅದರ ಜತೆ ಇತರೇ ಕೃಷಿಕರ ಅವಶ್ಯಕತೆಯನ್ನು ಪೂರೈಸುವ ಸಣ್ಣ ಪ್ರಮಾಣದ ಬೇವಿನ ಹಿಂಡಿ ಗೊಬ್ಬರ ಘಟಕ ಪ್ರಾರಂಭಿಸಿದರು. ಬಯಲು ಸೀಮೆಯಿಂದ ಬೇವಿನ ಬೀಜ ತರಿಸಿ ಅದನ್ನು ಹುಡಿಮಾಡಿ ಇತರೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ವಿತರಿಸಿದರು. ಇದರಿಂದಾಗಿ ಅವರ ತೋಟಕ್ಕೂ ಕಡಿಮೆ ವೆಚ್ಚದಲ್ಲಿ ಗೊಬ್ಬರ ದಕ್ಕಿತು. ಇಂತಹ ಸಣ್ಣ ಪ್ರಯತ್ನಗಳಿಂದಾಗಿ ಕೃಷಿಯನ್ನು ಲಾಭಕರ ಉದ್ಯಮವನ್ನಾಗಿಸಬಹುದೆಂದು ಗಣೇಶ್ ತೋರಿಸಿಕೊಟ್ಟಿದ್ದಾರೆ.


ನಾಟಿ ಯಂತ್ರ: ಒಮ್ಮೆ ಕೃಷಿ ಪ್ರವಾಸಕ್ಕೆಂದು ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಕೃಷಿಕರೊಬ್ಬರು ಭತ್ತದ ಸಸಿ ನಾಟಿಮಾಡಲು ಕೈಯಂತ್ರ ಬಳಸುತ್ತಿರುವುದನ್ನು ಗಣೇಶ್ ಗಮನಿಸಿದರು. ಆದರೆ ಆ ಯಂತ್ರ ಪರಿಪೂರ್ಣವಾಗಿರಲಿಲ್ಲ. ಒಂದು ಎಕರೆ ಭತ್ತದ ಸಸಿ ನಾಟಿ ಮಾಡುವಷ್ಟರಲ್ಲಿ ಯಂತ್ರ ದುರಸ್ತಿಕಾರ್ಯಕ್ಕೆ ಬರುತ್ತಿತ್ತು. ಗಣೇಶ್ ಆ ಯಂತ್ರದ ಮಾದರಿಯನ್ನು ಸುಧಾರಿಸಿ ಭತ್ತ ನಾಟಿ ಮಾಡುವ ಯಂತ್ರ ನಿರ್ಮಿಸಿದ್ದಾರೆ. ಲೀಲಾಜಾಲವಾಗಿ ಹತ್ತು ಎಕರೆ ನಾಟಿ ಮಾಡುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇಂತಹ ಹಲವು ಯಂತ್ರಗಳನ್ನು ತಾವೇ ತಯಾರಿಸಿ ಕೃಷಿಕರಿಗೆ ನೀಡಿದ್ದಾರೆ.
ಕೈಕೊಟ್ಟ ಉದ್ಯೋಗ ಖಾತ್ರಿ: ಕೂಲಿಜನರ ಸಹಾಯಕ್ಕೆಂದು ಬಂದ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎನ್ನಿವುದು ಗಣೇಶ್ ಅಭಿಮತ. ಕೂಲಿಕಾರರನ್ನು ಇನ್ನಷ್ಟು ಸೋಮಾರಿಯನ್ನಾಗಿಸಿ ಅತ್ತ ಖಾತ್ರಿಯೂ ಇಲ್ಲ ಇತ್ತ ಕೃಷಿ ಕಾರ್ಯುಗಳೂ ಇಲ್ಲದಂತಾಗಿದೆ. ಇದರ ದುಶ್ಪರಿಣಾಮ ಕೃಷಿಕರು ಎದುರಿಸುವಂತಾಗಿದೆ. ಆದರೆ ಕೃಷಿಕಾರ್ಮಿಕರ ಕೊರತೆಗೆ ಹೆದರದೆ ಗಣೇಶ್ ಯಂತ್ರಗಳ ಬಳಕೆಯನ್ನು ಅವಲಂಬಿಸಿದರು. ಗದ್ದೆ ಕೊಯ್ಲಿಗೆ ಯಂತ್ರವನ್ನು ಬಳಸಿ ಹಣ ಉಳಿಸಿದರು. ಇದರಿಂದಾಗಿ ಸ್ವಾವಲಂಬಿಯಾದೆ ಎನ್ನುತ್ಟಾರೆ.
ಭತ್ತದ ಆಸಕ್ತಿ: ಆರ್ಥಿಕ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೂ ಗಣೇಶ್ ರವರಿಗೆ ಭತ್ತದ ಮೇಲೆ ಅಪಾರ ಪ್ರೀತಿ. ಕೃಷಿಯಲ್ಲಿ ತೊಡಗಿಸಿಕೊಂಡ ಆರಂಭದಲ್ಲಿಯೇ ಮಲೆನಾಡಿನಲ್ಲಿ ಯಾರೂ ಬೆ:ಳೆಯದಿದ್ದ ಡೈಮಂಡ್ ಸೋನಾ ತಳಿಯ ಭತ್ತ ಬೆಳೆದು ಲಾಭ ಗಳಿಸಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ನುಡಿಯನ್ನು ಸುಳ್ಳು ಮಾಡಿದ್ದಾರೆ ಗಣೇಶ್. ೧೨ ಎಕರೆ ಗದ್ದೆಯಲ್ಲಿ ೧೬೦ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಭತ್ತದ ಬೆಳೆ ಬೈ ಹುಲ್ಲನ್ನೂ ಸೇರಿಸಿದರೆ ಶೇಕಡಾ ಮೂವತ್ತರಷ್ಟು ಲಾಭ ಮಾಡಬಹುದು ಎನ್ನುವುದು ಗಣೇಶ್ ಅಭಿಪ್ರಾಯ.
ಬಯೋ ಡೈಜೆಸ್ಟರ್: ಗೊಬ್ಬರ ಸಾಗಾಟ ತೋಟಕ್ಕೆ ಕಷ್ಟ ಹಾಗೂ ಹೆಚ್ಚಿನ ಕೂಲಿಯನ್ನು ಬೇಡುತ್ತದೆ ಎನ್ನುವುದು ಅರಿವಾದಾಗ ಮೊರೆಹೋಗಿದ್ದು ಬಯೋ ಡೈಜೆಸ್ಟರ್ ಘಟಕ. ತೋಟದ ಎಲ್ಲಾ ಗಿಡಗಳಿಗೆ ನೀರಿನ ಮೂಲಕ ಗೊಬ್ಬರ ಸೇರುವುದರಿಂದ ಅತ್ಯಂತ ಪರಿಣಾಮಕಾರಿ. ತಾನು ಕೃಷಿ ಆರಂಭಿಸಿದ ಸಮಯದಲ್ಲಿ ೨-೩ ಸಾವಿರ ದಷ್ಟು ಸಿಗುತ್ತಿದ್ದ ತೆಂಗಿನಕಾಯಿ ಈಗ ೧೨-೧೩ ಸಾವಿರಕ್ಕೇರಿದೆ ಎನ್ನುತ್ತಾರೆ.


ಕೈಮಗ್ಗ ಘಟಕ: ಹೆಗ್ಗೋಡಿನ ಚರಕದ ಮಾದರಿಯಲ್ಲಿ ಸಣ್ಣದಾದ ಕೈಮಗ್ಗದ ಘಟಕ ನಡೆಸುತ್ತಿರುವ ಗಣೇಶ್ ಅದು ಖುಷಿಗೆ ಎನ್ನುತ್ತಾರೆ. ಕೃಷಿಯ ಜತೆ ಖುಷಿಯೂ ಬೇಕು ಆರ್ಥಿಕವಾಗಿ ಮಗ್ಗಗಳು ಲಾಭದಾಯಕವಲ್ಲ ಆದರೆ ನಾಲ್ಕಾರು ಜನಕ್ಕೆ ಉದ್ಯೋಗ ನೀಡಿದ ಖುಷಿ ಹಾಗೂ ಅವಶ್ಯಕವಾದ ಬಟ್ಟೆಯನ್ನು ನಾವು ಸಮಾಜಕ್ಕೆ ನೀಡುತ್ತಿರುವ ನೆಮ್ಮದಿಗಾಗಿ ಚರಕದ ಸಹಯೋಗದೊಂದಿಗೆ ಕೈಮಗ್ಗದ ಘಟಕ ಸ್ಥಾಪಿಸಿದ್ದೇನೆ ಎನ್ನುತ್ತಾರೆ.
ಮಂಗಗಳ ಕಾಟಕ್ಕೆ ನಾಯಿಯೇ ಮದ್ದು: ಮಂಗಗಳು ಹೇರಳ ಅಡಿಕೆಚಿಗುರು ಕಾಯಿಗಳನ್ನು ತಿಂದು ಅಪಾರ ಹಾನಿ ಮಾಡುತ್ತಿದ್ದವು. ಕಾವಲಿಗೆ ಜನರನ್ನು ಇಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ, ಆಗ ಸಿಕ್ಕಿದ್ದು ಈ ಉಪಾಯ. ಹಾದಿಬದಿಯಲ್ಲಿರುವ ಹತ್ತೆಂಟು ಬೀದಿನಾಯಿಯನ್ನು ಸಾಕಿದ್ದಾರೆ. ಸಾಕುವ ಖರ್ಚೂ ಕಡಿಮೆ ಮಂಗಗಳ ಕಾಟದಿಂದಲೂ ಮುಕ್ತಿ ಎನ್ನುವುದು ಗಣೇಶರ ಅನುಭವದ ಮಾತುಗಳು.
ಅಮೆರಿಕಾದ ನಗರದಲ್ಲೋ ಜಪಾನ್ ನ ಏರ್ ಕಂಡೀಷನ್ ರೂಂ ನಲ್ಲೋ ಕುಳಿತು ಉದ್ಯೋಗ ಮಾಡಬಹುದಾಗಿದ್ದ ಗಣೇಶ್ ಸ್ವಂತ ಮಣ್ಣಿನ ಆಸಕ್ತಿಯಿಂದ ಉತ್ತಮ ಕೃಷಿಕರೆನಿಸಿಕೊಂಡು ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಮಾತಿಗೆ ಅರ್ಥವಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಕೃಷಿಯನ್ನೂ ಉದ್ಯಮವೆಂದು ಪರಿಗಣಿಸಿದರೆ ಅಷ್ಟೇ ಆಸ್ಥೆಯಿಂದ ಲೆಕ್ಕಾಚಾರಕ್ಕಿಳಿದು ಕೆಲಸ ಮಾಡಿ ತೊಡಗಿಸಿಕೊಂಡಲ್ಲಿ ಮಣ್ಣು ಕೈಬಿಡದು ಎನ್ನುವುದು ಗಣೇಶ್ ರ ಅನುಭವದಿಂದ ಬಂದ ಮಾತುಗಳು.
ಫೋನ್:  08183207625  -೦೮೧೮೩ ೨೦೭೬೨೫
ಮೊಬೈಲ್: 9449328304 -೯೪೪೯೩೨೮೩೦೪
(ವಿಜಯವಾಣಿಯಲ್ಲಿ ಪ್ರಕಟಿತ)