Friday, May 20, 2011

ಇರಲಿ ಭಗವಂತ ಇದ್ದಾನೆ....!

"ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151§ion=54&menuid=13"

ಹೀಗೆ ಮುಕ್ತಾಯಗೊಳ್ಳುವ ಸಂಪಾದಕೀಯ ಬ್ಲಾಗ್ ನ ಲೇಖನ ಆಶಾ ಬೆನಕಪ್ಪರವರ ಪ್ರಜಾವಾಣಿಗೆ ಬರೆದ ಲೆಖನಕ್ಕೆ ತೆರೆದುಕೊಳ್ಳುತ್ತದೆ. ಮಾನವೀಯತೆ ಇರುವ ಜನಕ್ಕೆ ಡಾ ಆಶಾ ಬೆನಕಪ್ಪರವರ ಮುನಿಯಪ್ಪನ ಕತೆ ಕಾಡದಿರದು. ಅದು ಆತ ತನ್ನ ಮಗನ ಹೆಣವನ್ನು ಟ್ರಂಕ್ ನ ಮೂಲಕ ಸಾಗಿಸುವ ಯತ್ನ ಕರುಳುಕಿವುಚುತ್ತದೆ. ಸರಿ ಅದೆಲ್ಲಾ. ಆದರೆ ನನಗೆ ಕಾಡುವುದು ಇನ್ನೂ ಒಂದು ಮೇಲಿನ ಹಂತ.
ನಾನು "ಗೇಣಿ" ಅಂತ ಒಂದು ಕತೆ ಬರೆದೆ. ಅದೂ ಕೂಡ ಇಂತಾದ್ದೆ . ಬಡವರ ಸಮಸ್ಯೆಯದು. ಆದರೆ ಬರೆದು ಪ್ರಕಟಣೆಗೆ ಕಳುಹಿಸುವ ಹಂತದಲ್ಲಿ ಆನಿಸಿತು. ನಾವು ಹೀಗೆ ಬಡವರ ಕತೆ ಬರೆಯುತ್ತಲೇ ಸಾಗುತ್ತೇವೆ. ಅವರಿಗಂತೂ ಅದರಿಂದ ಕವಡೆಕಾಸಿನ ಪ್ರಯೋಜನ ಇಲ್ಲ. ಹೊಟ್ಟೆ ತುಂಬಿದ ಒಂದಷ್ಟು ಜನ ಓದಿ ಛೆ ಪಾಪ ಅನ್ನುತ್ತಾರೆ. ಕತೆ ಬಹಳ ಚನ್ನಾಗಿ ಬರೆದಿದ್ದೀಯಾ ಅಂತ ಕೆಲವರು ಅನ್ನಬಹುದು. ಇದರಿಂದ ಅವರಿಗೆ ಏನು ಲಾಬ? ಅಂತ ಅನ್ನಿಸಿತು. ಮರುಕ್ಷಣ ಅವರ ಮನೆಗೆ ಹೋಗಿ ಅವನು ಬತ್ತದಲ್ಲಿ ಕಳೆದುಕೊಂಡ ಹಣ ಅಷ್ಟೂ ಅಲ್ಲದಿದ್ದರೂ ಒಂದಿಷ್ಟು (ನನ್ನ ಮಟ್ಟಕ್ಕೆ) ತಲುಪಿಸಿ ಬಂದೆ. ಹೀಗೆ ಆಶಾ ಬೆನಕಪ್ಪ ಅವರೂ ಕೂಡ ಮುನಿಯಪ್ಪನಿಗೆ ಬಹಳ ಸಹಾಯ ಮಾಡಿದ್ದಾರೆ. ಮಾರ್ಮಿಕವಾಗಿ ಟ್ರಂಕ್ ನಲ್ಲಿ ಹೆಣ ಸಾಗಿಸುವ ವ್ಯವಸ್ಥೆಯನ್ನು ಸ್ವಲ್ಪ ತಪ್ಪಿಸಬಹುದಾಗಿತ್ತೇನೋ ಅವರು. ಅದು ಅವರಿಗೆ ಕಷ್ಟಕರವಾಗಿರಲಿಲ್ಲವೇನೋ ಅಂತ ನನಗೆ ಅನಿಸಿತು.
ಇರಲಿ ಭಗವಂತ ಇದ್ದಾನೆ....!