Tuesday, October 28, 2008
ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ
ನಾಳೆ ಅಂದರೆ ೨೯-೧೦-೨೦೦೮ ರ ಸಂಜೆ ನಮ್ಮ ತಲವಾಟ ಶಾಲಾ ಆವರಣದಲ್ಲಿ ಕಟ್ಟೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಚಿಂತನ ವಿಕಾಸ ವಾಹಿನಿ ತಲವಾಟ ರವರು ಹಮ್ಮಿಕೊಂಡಿದ್ದಾರೆ. ಹಬ್ಬವನ್ನು ಇನ್ನಷ್ಟು ರಂಗಾಗಿಸೋಣ ಬನ್ನಿ. ಬರಲಾಗದಿದ್ದರೆ ನವೆಂಬರ್ ೧ ನೆ ತಾರೀಖು ನಿಮಗೆ ವಿಶೇಷಾಂಕದ ಪಿಡಿಎಫ್ ಪ್ರತಿ ಆನ್ ಲೈನ್ ಮುಖಾಂತರ ತಲುಪುತ್ತದೆ
ಧನ್ಯವಾದಗಳು
ಚಿಂತನ ವಿಕಾಸ ವಾಹಿನಿ
ಕಟ್ಟೆ ಪತ್ರಿಕೆ ತಲವಾಟ
Saturday, October 25, 2008
ದೀಪಾವಳಿಯಾದ ದೊಡ್ದಹಬ್ಬ

ದೀಪಾವಳಿ ಹಬ್ಬ ಎಂದರೆ ಬೆಳಕಿನ ಹಬ್ಬ ಅಂತ ಇತ್ತೀಚೆಗೆ ನಮಗೆ ಗೊತ್ತಾದದ್ದು. ಪಟ್ಟಣದ ಸಂಪರ್ಕ ಬಂದಮೇಲೆ ದೀಪಾವಳಿ ಅಂದರೆ ಪಟಾಕಿ ಹಬ್ಬ, ಸಾಲು ಸಾಲು ಹಣತೆಯ ಹಚ್ಚಿಡುವ ಬೆಳಕಿನ ಹಬ್ಬ ಮುಂತಾಗಿ ಅರಿವಾಗಿದ್ದು.ಅಲ್ಲಿಯವರೆಗೆ ಗೋವುಗಳ ಹಬ್ಬ ಎಂದು ನಮ್ಮಲ್ಲಿ ಚಿರಪರಿಚಿತ. ನಮ್ಮಲ್ಲಿ ಪಟಾಕಿ ಯ ಸದ್ದು ಕೇಳಬೇಕೆಂದರೆ ಅದು ಗಣೇಶ ಚೌತಿ. ಹಣತೆಯಲ್ಲಿ ದೀಪ ಹಚ್ಚಿಡಬೇಕೆಂದರೆ ಅದು ಕಾರ್ತಿಕ ಹಬ್ಬ. ಈಗ ಪಟ್ಟಣದಲ್ಲಿ ಟಿವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಂದಮೇಲೆ ದೀಪಾವಳಿಯಂದು ಪಟಾಕಿ ಹಚ್ಚಿ ನಂತರ ಸಂಜೆ ಹಣತೆಯಲ್ಲಿ ದೀಪ ಹಚ್ಚುವ ಪರಿಪಾಟ ಆರಂಭವಾಗಿದೆ. ಆ ಕಾರಣದಿಂದ ದೀಪಾವಳಿಯಲ್ಲಿ ಚೌತಿಯ ಪಟಾಕಿ ಕಾರ್ತಿಕದ ಹಣತೆ ಸೇರಿಕೊಂಡು ಮನೆಯ ಯಜಮಾನನೆಂಬ ಯಜಮಾನನಿಗೆ ಆರ್ಥಿಕ ಹೊರೆ ತುಸು ಹೆಚ್ಚಾಗಿದೆ. ಇರಲಿ ದೀಪಾವಳಿ ಎನ್ನುವ ಹಬ್ಬದ ಆಚರಣೆಯ ಜತೆ ಈ ಹೆಸರೂ ಕೂಡ ನಮಗೆ ಇತ್ತೀಚಿನದ್ದು. ಅದಕ್ಕೂ ಮುಂಚೆ ಇದು ದೊಡ್ಡಬ್ಬ ಎಂಬ ನಾಮಧೇಯದೊಂದಿಗೆ ಇತ್ತು. ದೊಡ್ಡಬ್ಬ ಎಂದು ಕರೆಯಿಸಿಕೊಳ್ಳುತ್ತಿದ್ದ ದೀಪಾವಳಿಗೆ ರಂಗು ಎರಡು ದಿವಸದ ಮೊದಲು ಬೂರೆ ಎಂಬ ಬಲೀಂದ್ರ ಎಂಬ ದೇವರನ್ನು ಸಾಯಂಕಲ ಮನೆ ತುಂಬಿಸಿಕೊಳ್ಳುವುದರಿಂದ ಆರಂಭದ ರಂಗು. ಬೆಳ್ಳಿ ಚೊಂಬಿಗೆ ತೆಂಗಿನಕಾಯಿ ತಲೆಯ ಮೇಲೆ ಇಟ್ಟು ಕಲಶ ಎಂದು ಕರೆಯಿಸಿಕೊಂಡ ಅದು ಬಲಿಯೇಂದ್ರನ ನಾಮಾಂಕಿತಗೊಳ್ಳುತ್ತದೆ. ಅಂದೇ ರಾತ್ರಿ ಊರಿನ ತರುಣರ ಬೂರುಗಳುವಿನ ಮಜ. ವರ್ಷದ ಆ ಒಂದು ರಾತ್ರಿ ಕಳ್ಳತನಕ್ಕೆ ಮುಕ್ತ ಮುಕ್ತ ಮುಕ್ತ.ಸೌತೇ ಕಾಯಿ ಚೆಂಡು ಹೂವು ಮುಂತಾದ ಹಬ್ಬಕ್ಕೆ ಬೇಕಾದ ಅತ್ಯಾವಶ್ಯಕ ವಸ್ತುಗಳನ್ನು ಬೂರೆಗಳುವು ಎಂಬ ಹೆಸರಿನಲ್ಲಿ ಕದಿಯಬಹುದು. ಕದಿಯುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮನೆಯ ಯಜಮಾನ ಬೂರೆಗುದ್ದು ಗುದ್ದಬಹುದು. ಇದು ಬೂರೆ ಹಬ್ಬ ದ ಮಜ. ಊರಿನ ಕಡೆ ಈ ಬೂರೆಗಳುವಿನ ಅವಾಂತರಗಳನ್ನು ಒಂದು ಕಾದಂಬರಿಯನ್ನಾಗಿಸಬಹುದು. ಈ ಬೂರೆಗಳುವಿನ ಮುಖ್ಯ ಉದ್ದೇಶ ಮನುಷ್ಯನಲ್ಲಿ ಸುಪ್ತವಾಗಿ ಅಡಗಿರುವ ಕಳ್ಳತನದ ಮನೋರೋಗವನ್ನು ಹೊರಹಾಕುವುದು ಒಂದೆಡೆಯಾದರೆ ಹಬ್ಬಗಳಲ್ಲಿ ಉಳ್ಳವರು ಮಾತ್ರಾ ಮಜ ಉಡಾಯಿಸುವುದಲ್ಲ ಇಲ್ಲದಿದ್ದವರೂ ಆಚರಿಸಿಕೊಳ್ಳಲಿ ಎಂಬ ಸುಪ್ತ ಭಾವನೆ ಅಡಗಿದೆ. ಹೀಗೆ ಬೂರೆ ಮುಗಿದ ಮಾರನೇ ದಿವಸ ರೆಸ್ಟ್ ಆನಂತರದ ದಿವಸ ದೊಡ್ಡಬ್ಬ. ಚುಮು ಚುಮು ಬೆಳಗಿನಲ್ಲಿ ಎದ್ದು, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೆ ಬಿಸಿನೀರ ಸ್ನಾನ ಮಾಡಿಸಿ ಪೂಜೆ ಮಾಡಿ ಚೆಂಡು ಹೂವು ಗೋಟಡಿಕೆಯಿಂದ ಅಲಂಕರಿಸಿ ಸಾಮೂಹಿಕವಾಗಿ ದೇವಸ್ಥಾನಕ್ಕೆ ಎಲ್ಲರ ಮನೆಯ ಜಾನುವಾರುಗಳನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಹೋಳಿಗೆ ಉಟ ಭಾರಿಸಿದರೆ ದೊಡ್ಡ ಬ್ಬ ಶೇಕಡಾ ತೊಂಬತ್ತು ಮುಗಿದಂತೆ. ನಂತರ ರಾತ್ರಿ ಕಕ್ಕಡಕ್ಕೆ ಬೆಂಕಿ ಹಚ್ಚಿಕೊಂಡು "ದಿಪ್ಪಡ ದಿಪ್ಪಡ ದಿವಾಳ್ಗೆಯೋ.. ಹಬ್ಬಕ್ಕೆ ಮೂರು ಹೋಳ್ಗೆಯೋ.." ಎಂದು ಕೂಗುತ್ತಾ ಕಕ್ಕಡವನ್ನು ಮನೆಯ ಸುತ್ತ ಎದುರು ಊರಿದರೆ ದೊಡ್ಡಹಬ್ಬ ಹಬ್ಬ ಪಿನಿಶ್.
ವರ್ಷದ ಏಕತಾನತೆಯಿಂದ ಹೊರಬರಲು. ನೆಂಟರಿಷ್ಟರೊಡನೆ ಬಾಂಧವ್ಯದ ಬೆಸುಗೆ ಏರ್ಪಡುವ ಹಬ್ಬಗಳು ಇಂದಿನ ಒಂಟಿ ಜೀವನ ಬಯಸುವ ಜಾಯಮಾನದಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ. ಅರ್ಥಪ್ರಧಾನ ವ್ಯವಸ್ಥೆಯಲ್ಲಿ ಭಾವನಾತ್ಮಕ ವಿಷಯ ವಿಚಾರ ಪೇಲವವಾಗಿವೆ. ಹಳ್ಳಿಯಲ್ಲಿನ ಹವ್ಯಕರ ಮನೆಗಳಲ್ಲಿ ಕೊಟ್ಟಿಗೆಗಳು ಖಾಲಿ ಖಾಲಿ. ಜಾನುವಾರು ಕಟ್ಟುವುದು ಸಾಕುವುದು ಗಲೀಜು, ಲಾಭದಾಯಕವಲ್ಲ ಎಂಬ ಮಿದುಳಿನ ತರ್ಕಕ್ಕೆ ಇಳಿದ ಪರಿಣಾಮ ಬಹಳಷ್ಟು ಮನೆಗಳಲ್ಲಿ ಆ ಕಾರಣದಿಂದ ದೊಡ್ದಬ್ಬ ಎನ್ನುವುದು ದೀಪಾವಳಿ ಆಗಿದೆ. ದೀಪಾವಳಿ ಯ ಹಣತೆ ಬೆಳಕು ಕರೆಂಟ್ ಬೆಳಕಿನಡಿಯಲ್ಲಿ ಎಷ್ಟೋ ಮನೆಯನ್ನು ಬೆಳಗಿಸುವ ತಾಕತ್ತು ಕಳೆದುಕೊಂಡಿದೆ. ಹಣತೆ ಮಸುಕು ಮಸುಕಾಗಿ ಕಾಣಿಸುತ್ತಿದೆ. ಮನೆಯ ಹಿರಿಯರ ಯಾಜಮಾನಿಕೆಯಲ್ಲಿ ನಡೆಯುವ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ಬುದ್ಧಿವಂತರು ಎಂದು ಕರೆಯಿಸಿಕೊಂಡ ಈಗಿನ ತಲೆಮಾರಿನವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರಸವಾಗುತ್ತಿದೆ. ಕಾಲಚಕ್ರ ಉರುಳುತ್ತಾ ಉರುಳುತ್ತಾ ಮತ್ತೆ ಅವೆಲ್ಲಾ ಮರುಕಳಚಿದರೂ ಆಶ್ಚರ್ಯವಿಲ್ಲ. ಕಾರಣ ಮನುಷ್ಯನಿಗೆ ಆರಂಭದಿಂದಲೂ ಹುಡುಕುವ ಹುಚ್ಚು , ಕಳೆದ ನೆಮ್ಮದಿ, ಇರದ ಬಾಂಧವ್ಯ,ವನ್ನು ಅರಸುತ್ತಾ ಹೊರಟರೆ ಮತ್ತೆ ಈ ದೊಡ್ಡಹಬ್ಬ ತನ್ನ ಹಳೆಯ ಮೆರುಗನ್ನು ಹಳೆಯ ವೈಭವಕ್ಕೆ ಕರೆದೊಯ್ದರೂ ಒಯ್ಯಬಹುದು.
ಕೊನೆಯದಾಗಿ: ಈ ಸಾಲು ಸಾಲು ಹಬ್ಬಗಳನ್ನು ಆಚರಿಸಬೇಕೇಕೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ." ಈ ವರ್ಷ ಹಬ್ಬ ಆಚರಿಸದಿದ್ದರೆ ಮುಂದಿನ ವರ್ಷ 'ಹೋದ್ವರ್ಷ ಹಬ್ಬ ಎಷ್ಟು ಚೆನ್ನಾಗಿತ್ತು' ಎಂದು ಅಲವತ್ತುಕೊಳ್ಳಲು ಆಗುವುದಿಲ್ಲವಲ್ಲ , ಆ ಕಾರಣಕ್ಕಾದರೂ ಈ ವರ್ಷ ಹಬ್ಬ ಆಚರಿಸಬೇಕು." ಎಂದರು. ನಾನು ಮಗುಮ್ಮಾದೆ.
ನಿಮ್ಮ ಬಾಳಿನ ದೀಪಕ್ಕೆ ಶುದ್ಧ ಎಣ್ಣೆ ದೊರೆತು ಜಗತ್ತಿಗೆ ಬೆಳಗಲಿ ಎನ್ನುತ್ತಾ ದೊಡ್ಡಹಬ್ಬದ ಶುಭಾಶಯಗಳು ನನ್ನಿಂದ ಹಾಗೂ ನಮ್ಮ ಆನಂದರಾಮ ಶಾಸ್ತ್ರಿಗಳಿಂದ.
Friday, October 17, 2008
ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...

Tuesday, October 14, 2008
ಭೂಮಿ ಹುಣ್ಣಿಮೆ ಕಡುಬು ಮತ್ತು ಗೊಡ್ಡಲ್ಲದ ಶಾಸ್ತ್ರ
ಹೊಸ ಬ್ಲಾಗ್ ಮಾಹಿತಿ.
http://kannadabala.blogspot.com/ ಎಂಬ ಬ್ಲಾಗ್ ಇದೆ. ಅದು ಕನ್ನಡ ಬ್ಲಾಗಿಗಳ ವಿಳಾಸವನ್ನು ತಿಳಿಸುತ್ತದೆ. ಅದೇ ರೀತಿಯ ಹೊಸದಾದ ಇನ್ನೊಂದು ಬ್ಲಾಗ್ ತೆರೆಯಲಾಗಿದೆ. http://blogannada.blogspot.com/ ಇದರ ವಿಶೇಷವೆಂದರ ಬ್ಲಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಅಲ್ಲಿಯೇ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಿ ನಿಮಗಿಷ್ಟವಾದ ಬ್ಲಾಗ್ ಅಲ್ಲಿ ನಮೂದಿಸಬಹುದು. ಇದೊಂತರ ಉತ್ತರ ಭಾರತದ ದೇವಸ್ಥಾನವಿದ್ದಂತೆ. ಅಲ್ಲಿಯೂ ಹಾಗೆ ನೀವೇ ಸ್ವತಹ ಪೂಜಾರಿಗಳ ಸಹಾಯವಿಲ್ಲದೆ ದೇವರ ಪೂಜೆ ಮಾಡಬಹುದು. ಹೂವು ಏರಿಸಬಹುದು.( ಆದರೆ ನೀವು ವಾಪಾಸಾದ ಮರುಕ್ಷಣ ಆ ಹೂವನ್ನು ಮತ್ತೊಬ್ಬ ತೆಗೆದುಬಿಡುತ್ತಾನೆ . ಇಲ್ಲಿ ಹಾಗೆ ಮಾಡಬೇಡಿ ) ಅದೇ ತರಹ ಇದು ನಿಮಗಿಷ್ಟವಾದ ಮಾರ್ಪಾಡು ಮಾಡಿ. ಹೊಸ ಹೊಸ ನಿಮಗೆ ಗೊತ್ತಿರುವ ತಾಣ ಸೇರಿಸಿ . ಇದೊಂತರ ಸಮೂಹ ಬ್ಲಾಗ್.
ಸರಿ ಇನ್ನೇನು ಲಾಗ್ ಇನ್ ಆಗಿ. ಧನ್ಯವಾದಗಳು
Saturday, October 11, 2008
ಸಂಸಾರಿಯ ಸಾರ
Wednesday, October 8, 2008
ಬಿದಿರಿನ ಕಟ್ಟೆಯೂ ನೆಗೆಟೀವ್ ಯೋಚನೆಯೂ....?
ಬಿದಿರುಮಳೆಗೆ ಕಟ್ಟೆ ಬಂದರೆ ಬರಗಾಲ ಬರುತ್ತದೆ. ಬಿದಿರು ಅಕ್ಕಿಯನ್ನೇ ಉಣ್ಣುವ ಪರಿಸ್ಥಿತಿ ಖಂಡಿತ ಅಂತ ಹಳ್ಳಿಗಾಡಿನಲ್ಲಿ ನಂಬಿಕೆಯಿದೆ. ಗೋರಾಂಡಲ ರಣಬೇಸಿಗೆಯಲ್ಲಿ ಹಸಿರು ಹಸಿರಾಗಿರುವ ಬಿದಿರು ಒಣಗಿ ನಿಂತುಬಿಡುತ್ತದೆ. ಇದು ಅರವತ್ತು ವರ್ಷಕ್ಕೊಮ್ಮೆ ಸಂಭವಿಸುವ ಘಟನೆ ಎಂದು ಬಾಯಿಂದ ಬಾಯಿಗೆ ಹಬ್ಬಿ ಬಂದಿರುವ ಮಾಹಿತಿ . ಕಳೆದ ಬೇಸಿಗೆಯಲ್ಲಿ ನಮ್ಮೂರಿನ ನೂರಾರು ಬಿದಿರು ಒಣಗಿನಿಂತಿತ್ತು. ಆದರೆ ಬರಗಾಲವೇನೂ ಸಾಮೂಹಿಕವಾಗಿ ಬಂದಿಲ್ಲ. ಎಲ್ಲರೂ ಊಟ ಮಾಡುತ್ತಿದ್ದಾರೆ, ಅಂಡಿಗೆ ಬೈಕ್ ಹಾಕಿಕೊಂಡು ತಿರುಗುತ್ತಿದ್ದಾರೆ, ಕಾರ್ ಇರುವವರು ಅದರಲ್ಲಿ ಸುತ್ತುತ್ತಿದ್ದಾರೆ. ಆದರೆ ಏಪ್ರೀಲ್ ನಲ್ಲಿ ಎಲ್ಲರದ್ದೂ ಒಂದೇ ಗೊಣಗಾಟ ಇತ್ತು, ಈವರ್ಷ ಬಿದಿರಿಗೆ ಕಟ್ಟೆ ಬಂದಿದೆ ಹಾಗಾಗಿ ಬರಗಾಲ ಖಂಡಿತ, ಊಟ ಮಾಡುವುದು ಹೇಗೋ? ಹಾಗೇ ಹೀಗೆ ಮುಂತಾಗಿ. ಮಳೆಗಾಲದಲ್ಲಿ ಅಡಿಕೆಗೆ ಕೊಳೆಬಂದಾಗಲೂ ಪಾಪದ ಬಿದಿರಿಗೆ ಕಟ್ಟೆ ಬಂದಿದ್ದನ್ನೇ ಉದಾಹರಿಸಿ ಈ ವರ್ಷ ಬದುಕುವುದು ಕಷ್ಟ ಇದೆ ಅನ್ನುತ್ತಿದ್ದರು. ಪಾಪ ಈ ಸಾಮೂಹಿಕ ಯೋಚನೆಯ ಮಾತುಗಳನ್ನು ಕೇಳಿದ ಅಮಾಯಕರು ಬದುಕು ಅತ್ಯಂತ ಕಷ್ಟವಾಗುತ್ತದೆ ಎಂದು ನಿತ್ಯ ಅವ್ಯಕ್ತ ಭಯದಿಂದ ನರಳುತ್ತಾರೆ. ಈ ಸಾಮೂಹಿಕ ನೆಗೆಟಿವ್ ಯೋಚನೆ ಪ್ರಪಂಚದ ಎಲ್ಲಾ ಸ್ಥರಗಳಲ್ಲಿಯೂ ಹರಿದಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಶೇರು ಮಾರುಕಟ್ಟೆ ಕುಸಿದಾಗ ಎಲ್ಲರಿದ್ದೂ ಇದೇ ತರಹದ ಭಯದ ಮಾತುಗಳು. ಇನ್ನು ಐಟಿ ಇಂಡಸ್ಟ್ರೀಸ್ ಕಥೆ ಮುಗಿದಂತಯೇ ಇಂಜನಿಯರಿಂಗ ಓದುವುದು ವೇಸ್ಟ್, ಮುಂತಾಗಿ ನೆಗೆಟಿವ್ ಯೋಚನೆಗಳು ಹರಿದಾಡಲಾರಂಬಿಸಿವೆ. ಸಧ್ಯ ಬಿದಿರು ಮಳೆಗೆ ಕಟ್ಟೆ ಬಂದಿದ್ದರಿಂದ ಶೇರು ಮಾರುಕಟ್ಟೆ ಕುಸಿದಿದೆ ಐಟಿ ಬಿದ್ದಿದೆ ಅಮೆರಿಕಾದ ಅರ್ಥ ವ್ಯವಸ್ಥೆ ಜಾರಿದೆ ಎಂಬ ಕತೆ ಶುರುವಾಗಿಲ್ಲ. ಇದಕ್ಕೆ ಪಟ್ಟಣದಲ್ಲಿ ಬಿದಿರುಮಳೆ ಇಲ್ಲದಿದ್ದದ್ದೂ ಕಾರಣವಿರಬಹುದು.
ಪ್ರಕೃತಿಯಲ್ಲಿನ ವ್ಯತ್ಯಯಗಳನ್ನು ನಮ್ಮ ನಮ್ಮ ಜೀವನಕ್ಕೆ ಹೋಲಿಸಿಕೊಂಡು ಋಣಾತ್ಮಕ ಯೋಚನೆಗಳನ್ನು ತಲೆಗೇರಿಸಿಕೊಂಡು ನರಳುವ ಪದ್ದತಿ ಮನುಷ್ಯನ ಆರಂಭಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಆದರೆ ಇದನ್ನೇ ಧನಾತ್ಮಕವಾಗಿ ಬಳಸಿಕೊಂಡು ಸುಖವಾಗಿ ಬದುಕಬಹುದು ಎಂಬ ಆಲೋಚನೆ ನಮಗೆ ಬರುವುದೇ ಇಲ್ಲ. ನೆನಪಿಸಿಕೊಳ್ಳಿ ಈಗ ಹತ್ತು ವರ್ಷದ ಹಿಂದೆ ಐಟಿ ಕ್ಷೇತ್ರದಲ್ಲಿ ಶೇರು ಮಾರುಕಟೆಯಲ್ಲಿ, ಹಳ್ಳಿಗಾಡಿನಲ್ಲಿ ಬದುಕುವುದೇ ಕಷ್ಟ ಎಂಬಂತಹ ಇದೇ ತರಹದ ನೆಗೇಟೀವ್ ಮಾತುಗಳು ಹರಿದಾಡುತ್ತಿತ್ತು. ಹಾಗಂತ ಯಾರೂ ಸತ್ತಿಲ್ಲ. ಕೆಲಸ ಮಾಡುವವರು ತಮ್ಮ ಪಾಡಿಗೆ ತಾವು ಮಾಡುತ್ತಿದ್ದಾರೆ, ಮನೆ ಕಟ್ಟಿಸುವವರು ಕಟ್ಟಿಸಿದ್ದಾರೆ , ಕಾರ್ ಕೊಳ್ಳುವವರು ಕೊಂಡಿದ್ದಾರೆ, ಬಾಯಲ್ಲಿ ಮಾತ್ರಾ ಬದುಕುವುದೇ ಕಷ್ಟ ಎಂಬ ಒಣ ಡೈಲಾಗ್. ಸತ್ಯ ಹೇಳಲಾ ಇದು ಅತಿ ಹೆಚ್ಚು ಕಾಡುವುದು ಇತಿಹಾಸದ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ನಮ್ಮಂತಹ ದೇಶದ ಜನರ ಮನಸ್ಥಿತಿ. ಅಮೆರಿಕಾದಂತಹ ಭವಿಷ್ಯಕ್ಕಾಗಿ ವರ್ತಮಾನವನ್ನು ಸವೆಸುತ್ತಿರುವ ಮನಸ್ಥಿತಿಯಲ್ಲಿ ಈ ತರಹ ವೃಥಾ ನೆಗೇಟೀವ್ ಮಾತುಗಳು ಬಹು ಕಡಿಮೆ. ನೆಗೆಟೀವ್ ಯೋಚನೆಯಿಂದ ವರ್ತಮಾನದ ಜೀವನದ ಮಜ ಕಳೆದುಹೋಗುತ್ತದೆ. ನಾನು ಕೂಡ ವೈಯಕ್ತಿಕವಾಗಿ ಅದರ ಕಷ್ಟ ಅನುಭವಿಸಿದ್ದೇನೆ. ಒಂದೋ ಭೂತಕಾಲವನ್ನು ಸ್ಮರಿಸುತ್ತಾ ಜೀವನ ಸವೆಸಬೇಕು ಅಥವಾ ಭವಿಷ್ಯಕ್ಕೆ ಕನಸು ಕಟ್ಟುತ್ತಾ ಜೀವನ ಸಾಗಿಸಬೇಕು. ಅದು ಸುಖವಾಗಿರಬೇಕು ಎಂದಾದರೆ ಭವಿಷ್ಯದ ಕನಸು ಪಾಸಿಟೀವ್ ಆಗಿರಬೇಕು ಭೂತದ ಆಲೋಚನೆ ಹೇಗಿದ್ದರೂ ಅಂತಹಾ ತೊಂದರೆಯಿಲ್ಲ.
ಹೇಗೆಂದರೆ ಅಬ್ಬಾ ಬಿದಿರಿಗೆ ಕಟ್ಟೆ ಬಂತು ಈ ವರ್ಷ ಒಣಗಿದ ಬೊಂಬು ಬೇಕಷ್ಟು ಸಿಗುತ್ತದೆ. ಬಿದಿರಿನ ಅಕ್ಕಿಯಿಂದ ಸಾವಿರಾರು ಹೊಸ ಮೊಳಕೆ ಹುಟ್ಟುತ್ತದೆ. ಹಸಿರು ಕಾಡು ಸಮೃದ್ಧವಾಗುತ್ತದೆ. ಶೆರು ಮಾರುಕಟ್ಟೆ ಬಿದ್ದದ್ದು ಒಳೆಯದೇ ಆಯಿತು, ಸಸ್ತಾದರದಲ್ಲಿ ಶೇರು ಕೊಳ್ಳಬಹುದು. ಹೀಗೆ ಆಲೋಚಿಸಿದರೆ ಒಂದಿಷ್ಟು ಆರಾಮು ಅಂತ ಅನ್ನಿಸುತ್ತದೆ ನನಗೆ , ನಿಮಗೆ ಹೇಗೋ ನನಗೆ ಗೊತ್ತಿಲ್ಲ. ಇದು ರಗಳೆ ಅಂತ ಅನ್ನಿಸಿದರೆ ನೀವು ಸುಖಿಗಳು. ಹೌದು ಅಂತ ಅನ್ನಿಸಿದರೆ ನೀವು ನನ್ನಂತೆ. ಸುಳ್ಳು ಅಂತ ಅನ್ನಿಸಿದರೆ ನೀವು ಈಗಾಗಲೇ ಗೆದ್ದಿದ್ದೀರಿ ಅಂತ ಅರ್ಥ.
ಕೊನೆಯದಾಗಿ: ನೆಗೆಟೀವ್ ಪಾಸಿಟೀವ್ ಯೋಚನೆ ಅಂತ ಇದೆಯಾ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೆಣಕಿದೆ. ಯೋಚನೆಗಳಲ್ಲಿ ಹಾಗೆ ವಿಭಾಗ ಇಲ್ಲ ಆದರೆ ಯೋಚಿಸುವವನಲ್ಲಿ ಇದೆ. ಯೋಚನೆಯೆಂದರೆ ಅರ್ದ ಬಾಟಲಿ ಮದ್ಯ ಯೋಚಿಸುವವ ಇಷ್ಟು ಇದೆ , ಇಷ್ಟೇ ಇದೆ ಎಂದು ವಿಭಾಗಿಸಿಕೊಂಡು ಒದ್ದಾಡುತ್ತಾನೆ ಸುಖಿಸುತ್ತಾನೆ, ಪರಿಣಾಮ ಅರ್ದ ಬಾಟಲಿ ಮದ್ಯದ ಮೇಲಾಗದು ಎಂಬಂತಹ ಕಬ್ಬಿಣದ ಕಡಲೆಯಂತ ಉತ್ತರ ಕೊಟ್ಟರು. ನಾನು ಸುಮ್ಮನುಳಿದೆ. ಒಮ್ಮೊಮ್ಮೆ ಲೂಸ್ ತರಹ ಆಡುತ್ತಾರವರು
ಟಿಪ್ಸ್: ಹುಡುಗಿಗೆ ಹುಡುಗ ಇಷ್ಟವಾದರೆ ಆಕೆ ತನಗೆ ಅರಿವಿಲ್ಲದಂತೆ ತನ್ನ ಮೂಗಿನಮೇಲೆ ಕೈ ಆಡಿಸುತ್ತಾಳಂತೆ. ಲವ್ ಮಾಡೋ ಹುಡುಗರು ಇದೊಂದು ವರ್ತನೆಯ ಮುಖಾಂತರ ತಮ್ಮ ಪ್ರಪೋಸಲ್ ಹೇಳುವ ಧೈರ್ಯ ಮಾಡಬಹುದು. ಯಡವಟ್ಟಾದ್ರೆ ನಾನು ಜವಾಬ್ದಾರನಲ್ಲ.