Tuesday, October 28, 2008

ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ

ಆತ್ಮೀಯರೆ
ನಾಳೆ ಅಂದರೆ ೨೯-೧೦-೨೦೦೮ ರ ಸಂಜೆ ನಮ್ಮ ತಲವಾಟ ಶಾಲಾ ಆವರಣದಲ್ಲಿ ಕಟ್ಟೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಚಿಂತನ ವಿಕಾಸ ವಾಹಿನಿ ತಲವಾಟ ರವರು ಹಮ್ಮಿಕೊಂಡಿದ್ದಾರೆ. ಹಬ್ಬವನ್ನು ಇನ್ನಷ್ಟು ರಂಗಾಗಿಸೋಣ ಬನ್ನಿ. ಬರಲಾಗದಿದ್ದರೆ ನವೆಂಬರ್ ೧ ನೆ ತಾರೀಖು ನಿಮಗೆ ವಿಶೇಷಾಂಕದ ಪಿಡಿಎಫ್ ಪ್ರತಿ ಆನ್ ಲೈನ್ ಮುಖಾಂತರ ತಲುಪುತ್ತದೆ
ಧನ್ಯವಾದಗಳು
ಚಿಂತನ ವಿಕಾಸ ವಾಹಿನಿ
ಕಟ್ಟೆ ಪತ್ರಿಕೆ ತಲವಾಟ

Saturday, October 25, 2008

ದೀಪಾವಳಿಯಾದ ದೊಡ್ದಹಬ್ಬ



ದೀಪಾವಳಿ ಹಬ್ಬ ಎಂದರೆ ಬೆಳಕಿನ ಹಬ್ಬ ಅಂತ ಇತ್ತೀಚೆಗೆ ನಮಗೆ ಗೊತ್ತಾದದ್ದು. ಪಟ್ಟಣದ ಸಂಪರ್ಕ ಬಂದಮೇಲೆ ದೀಪಾವಳಿ ಅಂದರೆ ಪಟಾಕಿ ಹಬ್ಬ, ಸಾಲು ಸಾಲು ಹಣತೆಯ ಹಚ್ಚಿಡುವ ಬೆಳಕಿನ ಹಬ್ಬ ಮುಂತಾಗಿ ಅರಿವಾಗಿದ್ದು.ಅಲ್ಲಿಯವರೆಗೆ ಗೋವುಗಳ ಹಬ್ಬ ಎಂದು ನಮ್ಮಲ್ಲಿ ಚಿರಪರಿಚಿತ. ನಮ್ಮಲ್ಲಿ ಪಟಾಕಿ ಯ ಸದ್ದು ಕೇಳಬೇಕೆಂದರೆ ಅದು ಗಣೇಶ ಚೌತಿ. ಹಣತೆಯಲ್ಲಿ ದೀಪ ಹಚ್ಚಿಡಬೇಕೆಂದರೆ ಅದು ಕಾರ್ತಿಕ ಹಬ್ಬ. ಈಗ ಪಟ್ಟಣದಲ್ಲಿ ಟಿವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಂದಮೇಲೆ ದೀಪಾವಳಿಯಂದು ಪಟಾಕಿ ಹಚ್ಚಿ ನಂತರ ಸಂಜೆ ಹಣತೆಯಲ್ಲಿ ದೀಪ ಹಚ್ಚುವ ಪರಿಪಾಟ ಆರಂಭವಾಗಿದೆ. ಆ ಕಾರಣದಿಂದ ದೀಪಾವಳಿಯಲ್ಲಿ ಚೌತಿಯ ಪಟಾಕಿ ಕಾರ್ತಿಕದ ಹಣತೆ ಸೇರಿಕೊಂಡು ಮನೆಯ ಯಜಮಾನನೆಂಬ ಯಜಮಾನನಿಗೆ ಆರ್ಥಿಕ ಹೊರೆ ತುಸು ಹೆಚ್ಚಾಗಿದೆ. ಇರಲಿ ದೀಪಾವಳಿ ಎನ್ನುವ ಹಬ್ಬದ ಆಚರಣೆಯ ಜತೆ ಈ ಹೆಸರೂ ಕೂಡ ನಮಗೆ ಇತ್ತೀಚಿನದ್ದು. ಅದಕ್ಕೂ ಮುಂಚೆ ಇದು ದೊಡ್ಡಬ್ಬ ಎಂಬ ನಾಮಧೇಯದೊಂದಿಗೆ ಇತ್ತು. ದೊಡ್ಡಬ್ಬ ಎಂದು ಕರೆಯಿಸಿಕೊಳ್ಳುತ್ತಿದ್ದ ದೀಪಾವಳಿಗೆ ರಂಗು ಎರಡು ದಿವಸದ ಮೊದಲು ಬೂರೆ ಎಂಬ ಬಲೀಂದ್ರ ಎಂಬ ದೇವರನ್ನು ಸಾಯಂಕಲ ಮನೆ ತುಂಬಿಸಿಕೊಳ್ಳುವುದರಿಂದ ಆರಂಭದ ರಂಗು. ಬೆಳ್ಳಿ ಚೊಂಬಿಗೆ ತೆಂಗಿನಕಾಯಿ ತಲೆಯ ಮೇಲೆ ಇಟ್ಟು ಕಲಶ ಎಂದು ಕರೆಯಿಸಿಕೊಂಡ ಅದು ಬಲಿಯೇಂದ್ರನ ನಾಮಾಂಕಿತಗೊಳ್ಳುತ್ತದೆ. ಅಂದೇ ರಾತ್ರಿ ಊರಿನ ತರುಣರ ಬೂರುಗಳುವಿನ ಮಜ. ವರ್ಷದ ಆ ಒಂದು ರಾತ್ರಿ ಕಳ್ಳತನಕ್ಕೆ ಮುಕ್ತ ಮುಕ್ತ ಮುಕ್ತ.ಸೌತೇ ಕಾಯಿ ಚೆಂಡು ಹೂವು ಮುಂತಾದ ಹಬ್ಬಕ್ಕೆ ಬೇಕಾದ ಅತ್ಯಾವಶ್ಯಕ ವಸ್ತುಗಳನ್ನು ಬೂರೆಗಳುವು ಎಂಬ ಹೆಸರಿನಲ್ಲಿ ಕದಿಯಬಹುದು. ಕದಿಯುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮನೆಯ ಯಜಮಾನ ಬೂರೆಗುದ್ದು ಗುದ್ದಬಹುದು. ಇದು ಬೂರೆ ಹಬ್ಬ ದ ಮಜ. ಊರಿನ ಕಡೆ ಈ ಬೂರೆಗಳುವಿನ ಅವಾಂತರಗಳನ್ನು ಒಂದು ಕಾದಂಬರಿಯನ್ನಾಗಿಸಬಹುದು. ಈ ಬೂರೆಗಳುವಿನ ಮುಖ್ಯ ಉದ್ದೇಶ ಮನುಷ್ಯನಲ್ಲಿ ಸುಪ್ತವಾಗಿ ಅಡಗಿರುವ ಕಳ್ಳತನದ ಮನೋರೋಗವನ್ನು ಹೊರಹಾಕುವುದು ಒಂದೆಡೆಯಾದರೆ ಹಬ್ಬಗಳಲ್ಲಿ ಉಳ್ಳವರು ಮಾತ್ರಾ ಮಜ ಉಡಾಯಿಸುವುದಲ್ಲ ಇಲ್ಲದಿದ್ದವರೂ ಆಚರಿಸಿಕೊಳ್ಳಲಿ ಎಂಬ ಸುಪ್ತ ಭಾವನೆ ಅಡಗಿದೆ. ಹೀಗೆ ಬೂರೆ ಮುಗಿದ ಮಾರನೇ ದಿವಸ ರೆಸ್ಟ್ ಆನಂತರದ ದಿವಸ ದೊಡ್ಡಬ್ಬ. ಚುಮು ಚುಮು ಬೆಳಗಿನಲ್ಲಿ ಎದ್ದು, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೆ ಬಿಸಿನೀರ ಸ್ನಾನ ಮಾಡಿಸಿ ಪೂಜೆ ಮಾಡಿ ಚೆಂಡು ಹೂವು ಗೋಟಡಿಕೆಯಿಂದ ಅಲಂಕರಿಸಿ ಸಾಮೂಹಿಕವಾಗಿ ದೇವಸ್ಥಾನಕ್ಕೆ ಎಲ್ಲರ ಮನೆಯ ಜಾನುವಾರುಗಳನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಹೋಳಿಗೆ ಉಟ ಭಾರಿಸಿದರೆ ದೊಡ್ಡ ಬ್ಬ ಶೇಕಡಾ ತೊಂಬತ್ತು ಮುಗಿದಂತೆ. ನಂತರ ರಾತ್ರಿ ಕಕ್ಕಡಕ್ಕೆ ಬೆಂಕಿ ಹಚ್ಚಿಕೊಂಡು "ದಿಪ್ಪಡ ದಿಪ್ಪಡ ದಿವಾಳ್ಗೆಯೋ.. ಹಬ್ಬಕ್ಕೆ ಮೂರು ಹೋಳ್ಗೆಯೋ.." ಎಂದು ಕೂಗುತ್ತಾ ಕಕ್ಕಡವನ್ನು ಮನೆಯ ಸುತ್ತ ಎದುರು ಊರಿದರೆ ದೊಡ್ಡಹಬ್ಬ ಹಬ್ಬ ಪಿನಿಶ್.

ವರ್ಷದ ಏಕತಾನತೆಯಿಂದ ಹೊರಬರಲು. ನೆಂಟರಿಷ್ಟರೊಡನೆ ಬಾಂಧವ್ಯದ ಬೆಸುಗೆ ಏರ್ಪಡುವ ಹಬ್ಬಗಳು ಇಂದಿನ ಒಂಟಿ ಜೀವನ ಬಯಸುವ ಜಾಯಮಾನದಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ. ಅರ್ಥಪ್ರಧಾನ ವ್ಯವಸ್ಥೆಯಲ್ಲಿ ಭಾವನಾತ್ಮಕ ವಿಷಯ ವಿಚಾರ ಪೇಲವವಾಗಿವೆ. ಹಳ್ಳಿಯಲ್ಲಿನ ಹವ್ಯಕರ ಮನೆಗಳಲ್ಲಿ ಕೊಟ್ಟಿಗೆಗಳು ಖಾಲಿ ಖಾಲಿ. ಜಾನುವಾರು ಕಟ್ಟುವುದು ಸಾಕುವುದು ಗಲೀಜು, ಲಾಭದಾಯಕವಲ್ಲ ಎಂಬ ಮಿದುಳಿನ ತರ್ಕಕ್ಕೆ ಇಳಿದ ಪರಿಣಾಮ ಬಹಳಷ್ಟು ಮನೆಗಳಲ್ಲಿ ಆ ಕಾರಣದಿಂದ ದೊಡ್ದಬ್ಬ ಎನ್ನುವುದು ದೀಪಾವಳಿ ಆಗಿದೆ. ದೀಪಾವಳಿ ಯ ಹಣತೆ ಬೆಳಕು ಕರೆಂಟ್ ಬೆಳಕಿನಡಿಯಲ್ಲಿ ಎಷ್ಟೋ ಮನೆಯನ್ನು ಬೆಳಗಿಸುವ ತಾಕತ್ತು ಕಳೆದುಕೊಂಡಿದೆ. ಹಣತೆ ಮಸುಕು ಮಸುಕಾಗಿ ಕಾಣಿಸುತ್ತಿದೆ. ಮನೆಯ ಹಿರಿಯರ ಯಾಜಮಾನಿಕೆಯಲ್ಲಿ ನಡೆಯುವ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ಬುದ್ಧಿವಂತರು ಎಂದು ಕರೆಯಿಸಿಕೊಂಡ ಈಗಿನ ತಲೆಮಾರಿನವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರಸವಾಗುತ್ತಿದೆ. ಕಾಲಚಕ್ರ ಉರುಳುತ್ತಾ ಉರುಳುತ್ತಾ ಮತ್ತೆ ಅವೆಲ್ಲಾ ಮರುಕಳಚಿದರೂ ಆಶ್ಚರ್ಯವಿಲ್ಲ. ಕಾರಣ ಮನುಷ್ಯನಿಗೆ ಆರಂಭದಿಂದಲೂ ಹುಡುಕುವ ಹುಚ್ಚು , ಕಳೆದ ನೆಮ್ಮದಿ, ಇರದ ಬಾಂಧವ್ಯ,ವನ್ನು ಅರಸುತ್ತಾ ಹೊರಟರೆ ಮತ್ತೆ ಈ ದೊಡ್ಡಹಬ್ಬ ತನ್ನ ಹಳೆಯ ಮೆರುಗನ್ನು ಹಳೆಯ ವೈಭವಕ್ಕೆ ಕರೆದೊಯ್ದರೂ ಒಯ್ಯಬಹುದು.

ಕೊನೆಯದಾಗಿ: ಈ ಸಾಲು ಸಾಲು ಹಬ್ಬಗಳನ್ನು ಆಚರಿಸಬೇಕೇಕೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ." ಈ ವರ್ಷ ಹಬ್ಬ ಆಚರಿಸದಿದ್ದರೆ ಮುಂದಿನ ವರ್ಷ 'ಹೋದ್ವರ್ಷ ಹಬ್ಬ ಎಷ್ಟು ಚೆನ್ನಾಗಿತ್ತು' ಎಂದು ಅಲವತ್ತುಕೊಳ್ಳಲು ಆಗುವುದಿಲ್ಲವಲ್ಲ , ಆ ಕಾರಣಕ್ಕಾದರೂ ಈ ವರ್ಷ ಹಬ್ಬ ಆಚರಿಸಬೇಕು." ಎಂದರು. ನಾನು ಮಗುಮ್ಮಾದೆ.

ನಿಮ್ಮ ಬಾಳಿನ ದೀಪಕ್ಕೆ ಶುದ್ಧ ಎಣ್ಣೆ ದೊರೆತು ಜಗತ್ತಿಗೆ ಬೆಳಗಲಿ ಎನ್ನುತ್ತಾ ದೊಡ್ಡಹಬ್ಬದ ಶುಭಾಶಯಗಳು ನನ್ನಿಂದ ಹಾಗೂ ನಮ್ಮ ಆನಂದರಾಮ ಶಾಸ್ತ್ರಿಗಳಿಂದ.

Friday, October 17, 2008

ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...



ಸಾಪಟ ಆಯಿಚ್ಚಾ..? ಎನ್ನ ಪಂಡ್ರೆ..? ನಲ್ಲ ಇರ್ಕಂಗಳಾ..? ಎನ್ನ ಸಮಾಚಾರಮು? ಹೀಗೆ ಒಂದಿಷ್ಟು ಕನ್ನಡದಂತಿರುವ ತಮಿಳು ಶಬ್ದ ಬಿಟ್ಟರೆ ನನಗೆ ತಮಿಳು ಸುಟ್ಟುಕೊಂಡು ತಿನ್ನಲಿಕ್ಕೂ ಬಾರದು. ಆದರೂ ನಾನು ತಮಿಳು ಮಾತನಾಡಿದೆ. ಕಲ್ಯಾಣತ್ತಿಗೆ ಎನ್ನುವ ಮಡ್ರಾಸ್ ನ ಪೂನಂವೇಲಿಯ ಅರವತ್ತು ವರ್ಷದ ಗೃಹಿಣಿಯ ಕೈಯಲ್ಲಿ ಶಬ್ಬಾಷ್ ಎನ್ನಿಸಿಕೊಂಡೆ. ಅಥವಾ ಅವರು ಹೇಳಿದ್ದು ಶಬ್ಬಾಷ್ ಎಂದು ನಾನು ಅರ್ಥೈಸಿಕೊಂಡೆ. ಹೀಗೆಲ್ಲಾ ನಾನೂ... ತಮಿಳು ಮಾತನಾಡುವುದಕ್ಕೆ ಕಾರಣ ನನ್ನ ಅಕ್ಕನ ಮಗಳು ರಮ್ಯಾ ಮಡ್ರಾಸ್ ನ ಅಯ್ಯರ್ ಹುಡುಗ ರಾಜೇಶನನ್ನು ವರಿಸುತ್ತೇನೆ ಎಂದು ಘೋಷಿಸಿದ್ದು.ಹಾಗಾಗಿ ವರ ಮಹಾಶಯನ ಮನೆಗೆ ಹೆಣ್ಣಿನ ಕಡೆಯವರಾಗಿ ಭೇಟಿ ಕೊಡಬೇಕಲ್ಲ ಆ ಪ್ರಯುಕ್ತ ನಾವು ನಾಲ್ಕು ಜನ ರಮ್ಯಾಳ ವ್ಯಾಗನ್ ಆರ್ ಕಾರಿನಲ್ಲಿ ಮಡ್ರಾಸ್ ಗೆ ಹೊರಟಾಯಿತು. ಬೆಂಗಳೂರಿನಿಂದ ಹೊರಟು ಮೂವತ್ತೋ ನಲವತ್ತೋ ಕಿಲೋಮೀಟರ್ ದೂರದ ಹೊಸೂರು ತಲುಪಿದಾಕ್ಷಣ ನಾವು ಅಬ್ಬೇಪಾರಿಗಳಾಗಿಬಿಡುತ್ತೇವೆ, ಕನ್ನಡ ಎಂಬುದು ಎನ್ನಡ ಆಗಿ ಪರಿವರ್ತಿತವಾಗಿಬಿಡುತ್ತದೆ. ಎಲ್ಲಿ ಹುಡುಕಿದರೂ ಒಂದೇ ಒಂದು ಕನ್ನಡ ಅಕ್ಷರ ಸಿಗದು ಕನ್ನಡ ಪತ್ರಿಕೆಗಳು ಕೇಳಕೂಡದು. ಜಸ್ಟ್ ಮೂವತ್ತು ಕಿಲೋಮೀಟರ್ ಹಿಂದೆ ನಾವೇ ಕೋಲು ಎಂದು ಹಾರಾಡುವ ಹಾಯ್ ಅಗ್ನಿ ಲಂಕೇಶ್ ಮುಂತಾದ ಪತ್ರಿಕೆಗಳು ಹಾಗೂ ಅವರ ಥೀಂ ಗಳು ಇಲ್ಲಿ ಪೇಲವವಾಗಿಬಿಡುತ್ತವೆ. ಕನ್ನಡ ದಿನಪತ್ರಿಕೆ ಸಿಗುವುದಿರಲಿ ಬೀಡಾ ಅಂಗಡಿಯವ ಬೀಡಾ ಕಟ್ಟಿಕೊಡಲೂ ಕನ್ನಡ ಪತ್ರಿಕೆ ಬಳಸುವುದಿಲ್ಲ. ಇರಲಿ ಊರಲ್ಲಿ ಎಲ್ಲರೂ ರಂಗ ತಾನೆ ನಾವು ಪರ ಊರಿಗೆ ಬಂದಿದ್ದಾಗಿದೆ ಇಲ್ಲಿ ನಮ್ಮ ಜತೆ ನಮ್ಮವರೂ ಎಲ್ಲ ಮಂಗಗಳೇ. ಆದರೆ ತಮಿಳು ಮಾತ್ರಾ ಹಾಗಲ್ಲ ಮಡ್ರಾಸ್ ನಿಂದ ಸರಿ ಸುಮಾರು ಆರುನೂರು ಕಿಲೋಮೀಟರ್ ದೂರವಿರುವ ಕಾರ್ಗಲ್ ಜೋಗ್ ಮುಂತಾದ ಬೆಂಕಿಪೊಟ್ಟಣದಂತಿರುವ ಪಟ್ಟಣಗಳಲ್ಲಿಯೂ ನಿಮಗೆ ಸುಲಲಿತವಾಗಿ ನಡೆಯುತ್ತದೆ. ನಮ್ಮ ಕಾರ್ಗಲ್..! ನಲ್ಲಿ ತಮಿಳು ಪತ್ರಿಕೆ ಸಿಗುತ್ತದೆ "ಅಯ್ಯಾ ದೊರೆ ಇವೆಲ್ಲಾ ನಿನಗಿಂತ ಮೊದಲೇ ನಮಗೆ ಗೊತ್ತು ಕುಯ್ಯಬೇಡಾ .." ಎಂದಿರಾ..! ಬೇಡ ಬಿಡಿ ವಿಷಯಕ್ಕೆ ಬರೋಣ ತಮಿಳೆಂದರೆ ಒಂಥರಾ ಕನ್ನಡದಂತೆ.ಎಳನೀರಿಗೆ ,ತೆಂಗಿನ ಕಾಯಿಗೆ ಹೀಗೆ ಸುಮಾರು ಶಬ್ದಕ್ಕೆ ಕನ್ನಡಕ್ಕೆ ಅದಕ್ಕೆ ವ್ಯತ್ಯಾಸ ಇಲ್ಲ. "ಅಯ್ಯೋ ಇದೂ ಕೂಡ ನಮಗೆ ಗೊತ್ತು ಮುಂದುವರೆಸು" ಎಂದಿರಾ ಇರಲಿ ನಾನು ಕೇಳಿ ಹೇಳ ಹೊರಟಿರುವ ವಿಷಯಕ್ಕೆ ಬರೋಣ.
ಮನುಷ್ಯ ಭಾಷೆ ಎನ್ನುವುದನ್ನು ಪರಸ್ಪರ ಸಂವಹನಕ್ಕೆ ಮಾಡಿಕೊಂಡ. ನೂರಾರು ಭಾಷೆ ನೂರಾರು ದೇಶ ಇವೆಲ್ಲಾ ಸರಿ ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಮನುಷ್ಯ ನೆಂದರೆ ಯಾವ ದೇಶಕ್ಕೂ ಭಾಷೆಗೂ ವ್ಯತ್ಯಾಸ ಇಲ್ಲ.ಎಲ್ಲರೂ ಒಂದೇ ಹಾಗಾಗಿ ಎಲ್ಲ ಮನುಷ್ಯರ ಜತೆ ಸಂಪರ್ಕಿಸಲು ಒಂದೇ ತರಹನಾದ ಭಾಷೆ ಇದೆ. ಅದು ಸುಪ್ತವಾಗಿ ಅಡಗಿದೆ. ಅದು ಮೌನದ ಭಾಷೆ. ಧ್ಯಾನದ ಭಾಷೆ. ಈ ಭಾಷೆಯಿಂದ ಮನುಷ್ಯ ಮನುಷ್ಯರೊಡನೆ ಬಾಂಧವ್ಯ ಸಾಧಿಸುವಂತೆ ಇತರೆ ಜೀವಿಗಳೊಡನೆಯೂ ಕೂಡ ಸುಮಧುರ ಬಾಂಧವ್ಯ ಸಾಧಿಸಭಹುದು. ಇಲ್ಲಿ ಮಾತನಾಡುವ ಅವಶ್ಯಕತೆಯೇ ಇಲ್ಲ. ನೀವು ನಿಮ್ಮ ಮಾತೃ ಭಾಷೆಯಲ್ಲಿ ಆಲೋಚಿಸಿದರೆ ಆಯಿತು ಅದು ಮುಖದಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ತನ್ನಷ್ಟಕ್ಕೆ ಅದೇನೋ ಹೇಳಲಾರದ ಬಾಂಧವ್ಯ ಏರ್ಪಡುತ್ತದೆ. ಉದಾಹರಣೆಗೆ ಅಪರಿಚಿತರೊಬ್ಬರು ನಿಮಗೆ ಭೇಟಿಯಾದಾಗ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಅದೇನೋ ಅವರ ನಡವಳಿಕೆ ನಿಮಗೆ ಇಷ್ಟವಾಗುತ್ತದೆ. ಕಾರಣ ಗೊತ್ತಿರುವುದಿಲ್ಲ. ಇನ್ನು ಕೆಲವರನ್ನು ಕಂಡಾಗ ಕಾರಣವಿಲ್ಲದೆ ಅಸಹನೆ ಉಂಟಾಗುತ್ತದೆ. ಹಾಗಂತ ಅವರು ನಿಮಗೆ ಏನೂ ಅಪಾಯ ಮಾಡಿರುವುದಿಲ್ಲ. ಆದರೂ ಅದೇನೋ ಒಂಥರಾ ಹಿಂಸೆ. ಅದರ ಅಂತರಾರ್ಥ ತಿಳಿಯುತ್ತಾ ಹೋದಂತೆ ಅರಿವು ಉಂಟಾಗುತ್ತದೆ. ಅದಕ್ಕೆ ಆಳದ ಧ್ಯಾನ ಅಗತ್ಯ. ಅದು ನೀವು ಸಾಧಿಸಿದಿರಿ ಅಂತಾದರೆ ನೀವು ಕೇಳುವುದಕ್ಕಿಂತ ಮೊದಲೇ ನಿಮಗೆ ಅಪೇಕ್ಷೆ ಪಟ್ಟಿದ್ದು ದೊರಕುತ್ತದೆ. ಅನಪೇಕ್ಷಿತವಾದದ್ದನ್ನು ನೀವು ಕೇಳುವುದೂ ಇಲ್ಲ. ಹೀಗೆ ಹೇಳಲಾರದ ಅನುಭವಕ್ಕೆ ಮಾತ್ರಾ ಸಿಗುವ ಬಾಂಧವ್ಯ ಉಂಟಾದಾಗ ಬಾಷೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಮೂಕವಾದ ಮೌನ ಪ್ರಪಂಚ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಾವು ಈ ಹೊರಮನಸ್ಸಿನ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಇಲ್ಲ. ಹೊರ ಪ್ರಪಂಚದ ನೂರಾರು ಬಾಷೆಗಳ ಜ್ಞಾನ ಸುಲಭವಾಗಬೇಕು ಎಂದರೆ ಒಳಪ್ರಪಂಚದ ಮೌನದ ಭಾಷೆಯನ್ನು ಮೊದಲು ಚೆನ್ನಾಗಿ ಅರ್ಥಮಾಡಿಕೊಂಡರೆ ಪ್ರಪಂಚದ ಎಲ್ಲಾ ಭಾಷೆಗಲೂ ಲೀಲಾಜಾಲ.
ಇದೇನಪ್ಪಾ ಅರ್ಥವಾಗದ ಬರಹ ಅಂತ ನೀವು ಬಯ್ದುಕೊಂಡಿರಬಹುದು, ನನಗೂ ಸಂಪೂರ್ಣ ಅರ್ಥವಾಗಿಲ್ಲ ಕಣ್ರಿ ಇದು ನಮ್ಮ ಆನಂದರಾಮ ಶಾಸ್ತ್ರಿಗಳ ಬರಹ. ಮಾರ್ಚ್ ತಿಂಗಳಲ್ಲಿ ರಮ್ಯಾಳ ಮದುವೆ ಇದೆ ಅಷ್ಟರೊಳಗೆ ನಾನು ಇನ್ನೊಂದಿಷ್ಟು ತಮಿಳು ಕಲಿಯಬೇಕಿದೆ. ಹಾ ಹೇಳಲು ಮರೆತೆ ಕನ್ನಡ ಬಲ್ಲ ಹವ್ಯಕ ಹುಡುಗಿ ರಮ್ಯಾ ಹಾಗೂ ತಮಿಳಿನ ಅಯ್ಯರ್ ಹುಡುಗ ರಾಜೇಶ ನನ್ನು ಸೇರಿಸಿದ ಭಾಷೆ ಸಾವಿರಾರು ಕಿಲೋಮೀಟರ್ ದೂರ ಇರುವ ಆಂಗ್ಲ ಭಾಷೆ. ಜೈ ಆಂಗ್ಲೇಶ್ ಪೀಪಲ್ ಅನ್ನೋಣವೇ. ನಾವು ನೀವು ಅನ್ನದಿದ್ದರೂ ಅವರಿಬ್ಬರಂತೂ ಅನ್ನಲೇ ಬೇಕು. ಕಾರಣ ಅವನು ಕನ್ನಡ ಮಾತನಾಡಲು ಹೋಗಿ ಊಟ ಆಯಿರ್ಕದಾ..? ಅನ್ನುತ್ತಾನೆ ಇವಳು ತಮಿಳು ಮಾತನಾಡಲು ಹೋಗಿ ಸಾಪಟು ಆಯಿತಾ? ಅಂತಾಳೆ , ಇಂಗ್ಲೀಷ್ ಆದರೆ ಇಬ್ಬರಿಗೂ ಓ ಕೆ. ಹಾಗಿದ್ದಮೇಲೆ ತಲೆಬಿಸಿ ಯಾಕೆ?
ಕೊನೆಯದಾಗಿ:ನಿನಗೆ ಎಷ್ಟು ಭಾಷೆ ಬರುತ್ತದೆ ? ಎಂದು ಈ ಬಾರಿ ಆನಂದರಾಮ ಶಾಸ್ತ್ರಿಗಳೇ ನನ್ನನ್ನು ಪ್ರಶ್ನಿಸಿದರು. ಕನ್ನಡ ಒಂದು, ಹಿಂದಿ ಎರಡು, ಇಂಗ್ಲೀಷ್ ಅರ್ಥವಾಗುತ್ತೆ ಆದರೆ ಮಾತನಾಡಲು...ಬರೊಲ್ಲ .. ಹಾಗಾಗಿ ಅರ್ದ, ಈಗ ತಮಿಳು ಕಾಲು ಒಟ್ಟೂ. ಎರಡು ಮುಕ್ಕಾಲು ... " ಎಂದು ಎಣಿಸುತ್ತಿದ್ದೆ ಅಷ್ಟರಲ್ಲಿ "ಮೂರ್ಖ ನಿನಗೆ ಈ ಜನ್ಮದಲ್ಲಿ ಅರ್ಥವಾಗದು ಬಿಡು " ಎಂದು ಮೌನವಾದರು. ನಾನು ಕಣ್ಣು ಪಿಳುಕಿಸಿದೆ
ಟಿಪ್ಸ್: ಮನುಷ್ಯನ ಹೊರತಾಗಿ ಪ್ರಪಂಚದ ಯಾವ ಜೀವಿಯೂ ಹುಟ್ಟಿದ ಒಂದು ವರ್ಷದ ಮೇಲೆ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಹಾಲಿನಲ್ಲಿ ಒಂದು ವರ್ಷದ ನಂತರದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇರುವುದಿಲ್ಲ. ಹಾಲು ಚಟಕ್ಕಾಗಿ ಮನುಷ್ಯ ಕುಡಿಯುತ್ತಿದ್ದಾನಷ್ಟೆ. ಸಾಯುವ ಅಂಚಿನಲ್ಲಿದ್ದರೂ ಒಂದು ಗುಟುಕು ಹಾಲು ಗುಟುಕರಿಸುತ್ತಾನೆ. ಹಾಗಾಗಿ ಹಾಲನ್ನು ತ್ಯಜಿಸಿ ಏನೂ ತೊಂದರೆ ಇಲ್ಲ ಬೇಕಾದರೆ ಅದರ ಹಾಲಿಗೆ ಪರ್ಯಾಯವಾಗಿ ಆಲ್ಕೋ ಹಿಂದೆ ಸೇರಿಸಿಕೊಳ್ಳಿ ಮಜವಂತೂ ಇದೆಯಂತೆ.

Tuesday, October 14, 2008

ಭೂಮಿ ಹುಣ್ಣಿಮೆ ಕಡುಬು ಮತ್ತು ಗೊಡ್ಡಲ್ಲದ ಶಾಸ್ತ್ರ






ಮಳೆಗಾಲ ಮುಗಿದು ಅತ್ತ ಚಳಿಗಾಲವೂ ಅಲ್ಲದ ಇತ್ತ ಬೇಸಿಗೆಯೂ ಅಲ್ಲದ ಕಾಲದಲ್ಲಿ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಅಂತಹ ಒಂದು ಹಬ್ಬ ಈ ಭೂಮಿಹುಣ್ಣಿಮೆ. ಹೆಸರೇ ಸೂಚಿಸುವಂತೆ ಭೂಮಿಯನ್ನು ನಂಬಿ ಬದುಕುತ್ತಿರುವವರ ಹಬ್ಬ . ಅಡಿಕೆ, ಭತ್ತ ಕಬ್ಬು ಹೀಗೆ ರೈತಾಪಿ ವರ್ಗ ತಾವು ಬೆಳೆಯುತ್ತಿರುವ ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿಯೇ ಕಲ್ಲಿನ ರೂಪ ತಳೆದು ಬಿದ್ದಿದ್ದಕ್ಕೆ ತಾತ್ಕಾಲಿಕ ದೇವರ ಪಟ್ಟ ಕೊಟ್ಟು ಪ್ರತಿಷ್ಟಾಪನೆ ಮಾಡಿ ಅದಕ್ಕೊಂದು ಪೂಜೆ ಸಲ್ಲಿಸಿ ಅಲ್ಲಿಯೇ ಒಂದಿಷ್ಟು ಕಡುಬು ತಿಂದು ನಂತರ ಮನೆಗೆ ಬಂದು ದೇವರಿಗೆ ನೈವೇದ್ಯ ಮಾಡಿ ಊಟ ಮಾಡಿದರೆ ಭೂಮಿ ಹುಣ್ಣಿಮೆ ಹಬ್ಬ ಮುಗಿದಂತೆ.
ಹೀಗೆ ನೂರಾರು ಸಂಪ್ರದಾಯದ ಹಬ್ಬಗಳು ಪ್ರತೀ ವರ್ಷ ಬಂದುಹೋಗುತ್ತವೆ. ಒಮ್ಮೊಮ್ಮೆ ನಾವು ಆಚರಿಸುವ ಈ ಹಬ್ಬಗಳನ್ನು ನೋಡಿ ನಮ್ಮಷ್ಟಕ್ಕೆ ನಗು ಬರುತ್ತದೆ. ದೂರದಿಂದ ನಿಂತು ನಮ್ಮ ಆಚರಣೆಗಳನ್ನು ನಾವೇ ನೋಡಿಕೊಂಡರೆ ಸಣ್ಣ ಮಕ್ಕಳಾಟದಂತೆ ಭಾಸವಾಗುತ್ತದೆ. ತೋಟದಲ್ಲಿ ಬಿದ್ದು ಹೊರಳಾಡುತ್ತಿದ್ದ ಕಲ್ಲು ದೇವರಂತೆ. ಅದಕ್ಕೆ ಕುಂಕುಮ ಅರಿಶಿನ ಹೂವು ಹಾಗೂ ಮನೆಯಿಂದ ಒಯ್ದಿದ್ದ ಲಕ್ಷ್ಮೀಕಾಸಿನ ಸರ ಮತ್ತು ನೈವೇದ್ಯ. ಅಲ್ಲೊಂದಿಷ್ಟು ಮಂತ್ರ ಹಾಗೂ "ಪೂಜೆಯ ಮಾಡುವೆ ಮಾಲಕ್ಷ್ಮೀ ನಾನಿನ್ನ... ತೇಜವಾ ಬೀರುತ್ತ ಬಾರಮ್ಮ....ಬಾರಮ್ಮ ನೀ ಮನೆಗೆ ... ಸಕಲ ಸೌಬಾಗ್ಯವಾ ತಾರಮ್ಮ.." ಎಂಬ ಹಾಡು. ಪೂಜೆ ಮುಗಿದ ಮರುಕ್ಷಣ "ಅಪಿ ಲಕ್ಷ್ಮೀ ಕಾಸಿನ ಸರ ತಗಂಡ್ಯಾ..? ದೀಪದ ಗುಡ್ಡು ಕಳದು ಹೋಕು... ಬಾಳೆ ಹಣ್ಣು ಸಿಪ್ಪೆ ತಗ ದನಕ್ಕೆ ಹಾಕಲಾಕ್ತು " ಎನ್ನುತ್ತಾ ಒಂಚೂರು ಅಲ್ಲಿ ಬಿಡದೆ ಕಲ್ಲನ್ನು ಮತ್ತೆ ಯಥಾ ಸ್ಥಾನಕ್ಕೆ ಇಟ್ಟು ಬರುವ ಪರಿ, ನಗೆ ತರಿಸುತ್ತದೆ. ಇರಲಿ ಅದು ನಂಬಿಕೆ ಅನ್ನೋಣ ಈ ಎಲ್ಲಾ ಸಂಪ್ರದಾಯಗಳನ್ನು ಪ್ರಶ್ನಿಸದೆ ಪಾಲಿಸಿಕೊಂಡವರ ಬಳಿ ಇದರ ಅರ್ಥ ಕೇಳಿದರೆ ಗುರಾಯಿಸುತ್ತಾರೆ. ಪುರೋಹಿತರ ಬಳಿ ಕೇಳಿದರೆ ನಮ್ಮನ್ನು ಉದ್ದಟತನದ ಪ್ರಶ್ನೆ ಎಂದು ಅವರೇ ತೀರ್ಮಾನಿಸಿ ಒರಟ ಎಂಬ ಪಟ್ಟ ಕಟ್ಟಿಬಿಡುತ್ತಾರೆ. ಹಾಗಾದರೆ ಭೂಮಿ ಹುಣ್ಣಿಮೆಯಂತಹ ಕೃಷಿಕರ ಹಬ್ಬಕ್ಕೆ ಏನಾದರೂ ಅರ್ಥವಿದೆಯಾ..? ಎಂದು ಕೆದಕಿದರೆ ಎಲ್ಲವುದಕ್ಕೂ ಅರ್ಥವಿಲ್ಲದಿದ್ದರೂ ಕೆಲವಕ್ಕೆ ಅರ್ಥವಿದೆ ಎಂಬ ಉತ್ತರ ನನಗೆ ಮೈಸೂರಿನ ಇಸ್ಕಾನ್ ನ ಹರೇಕೃಷ್ಣ ನೇಚರ್ ಪಾರ್ಮ ನ ಸಸ್ಟೈನ ಬಲ್ ಅಗ್ರಿಕಲ್ಚರ್ ಸಿಸ್ಟಮ್ ಆದ ಜೀವಚೈತನ್ಯ ಕೃಷಿ ಪದ್ದತಿ ಕಲಿಯುವಾಗ ಸಿಕ್ಕಿತು. ಭೂಮಿ ಹುಣ್ಣಿಮೆ ದಿನ ಕೆಮ್ಮಣ್ಣು ಹಾಗೂ ಜೇಡಿ ಮಣ್ಣನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಅಡಿಕೆ ಹಾಗೂ ತೆಂಗಿನ ಮರಕ್ಕೆ ಹಚ್ಚುವ ಪದ್ದತಿ ಇದೆ. ಇದು ಜೀವ ಚೈತನ್ಯ ಪದ್ದತಿಯಲ್ಲಿಯೂ ಟ್ರೀ ಪೇಸ್ಟ್ ಎಂಬ ಹೆಸರಿನಲ್ಲಿ ಇದೆ. ಇದರಿಂದಾಗಿ ಮರದ ಆಯುಷ್ಯ ವೃದ್ಧಿಯಾಗುತ್ತದೆ. ಭೂಮಿ ಹುಣ್ಣಿಮೆ ದಿನ ಅನ್ನ ಹಾಗೂ ಹಲವಾರು ಸೊಪ್ಪುಗಳ ಪಲ್ಯವನ್ನು ಭೂಮಿಗೆ ಅಚ್ಚುವ ಪದ್ದತಿ ಇದೆ. ಇದರಿಂದ ಕೃಷಿ ಭೂಮಿಯಲ್ಲಿ ಅನುಕೂಲಕರ ಸೂಕ್ಷ್ಮಾಣು ಜೀವಿಗಳ ಬೆಳೆವಣಿಗೆಯಾಗುತ್ತದೆ. ಹೀಗೆ ಕೆಲವು ಪದ್ದತಿಗಳಿಗೆ ಪರಿಪೂರ್ಣ ಅರ್ಥವಿದೆ. ಆದರೆ ಅದನ್ನು ಹೀಗೆ ಹೀಗೆಂದು ಅರ್ಥೈಸಿ ಹೇಳುವವರಿಲ್ಲ. ಹಾಗಾಗಿ ಇಂದಿನ ತಲೆಮಾರಿನವರಿಗೆ ನಮ್ಮ ಸಂಪ್ರದಾಯಗಳು ಗೊಡ್ಡು ಎಂಬ ಅಪಹಾಸ್ಯಕ್ಕೆ ಕಾರಣವಾಗಿಬಿಡುತ್ತದೆ. ನಮ್ಮ ಸಂಧ್ಯಾವಂದನೆಯನ್ನು ತೆಗೆದುಕೊಳ್ಳಿ . ಬಹಳಷ್ಟು ಜನರಲ್ಲಿ ಸಂಧ್ಯಾವಂದನೆ ಎಂಬ ಉಪನಯನದ ನಂತರ ಕ್ರಿಯೆ ಒಂಥರಾ ಯಡವಟ್ಟು ಅನ್ನಿಸಿಕೊಂಡಿದೆ. ಆದರೆ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾದ ಜನರು ರವಿಶಂಕರ್ ಗುರೂಜಿ ಬಳಿ ಹೋಗಿ ತಕತಕ ಕುಣಿದು ಅದೇನೋ ಧ್ಯಾನ ಕಲಿತೆ ಎಂದು ಹತ್ತು ಸಾವಿರ ಪೀಕಿ ಮನೆಗೆ ಬಂದಾಗ ಒಂದು ಕ್ಷಣ ಯೋಚನೆ ಮಾಡಿದರೆ ತಿಳಿಯುತ್ತದೆ, ಅಪ್ಪ ಮಾಡಿದ ಉಪನಯನ ಹಾಗೂ ಸಂಧ್ಯಾವಂದನೆಯ ನಿಜವಾದ ಅರ್ಥ. ಆದರೆ ಅದು ನಮಗೆ ಅರ್ಥವಾಗಲು ನಾವು ದುಡಿದ ಹತ್ತು ಸಾವಿರ ಖಾಲಿಯಾದಾಗಲೇ ತಿಳಿಯುವುದು ಎಂಬುದು ವಿಪರ್ಯಾಸವಾದರೂ ಸತ್ಯ. ಹಾಗೂ ನಮಗೆ ಉಪನಯನ ಮಾಡಿಸಿದ ಪುರೋಹಿತರಿಗೂ ಸಂಧ್ಯಾವಂದನೆಯ ಮಹತ್ವ ತಿಳಿಯದಿರುವುದು ಕಹಿ ಸತ್ಯ. ಪಾಪ ಅವರ ಮನಸ್ಸು ಅಂದಿನ ಹಸಿರು ನೋಟು ಹಾಗೂ ಕೆಂಪು ನೋಟಿನ ಲೆಕ್ಕಾಚಾರದಲ್ಲಿ ಮಗ್ನವಾಗಿರುತ್ತದೆ. ರವಿಶಂಕರ್ ಗುರೂಜಿಯೋ ಬಾಬಾ ರಾಮನೋ ಪೀಟರ್ರೋ ತಮ್ಮ ಹೊಸಬಾಟಲಿಯಲ್ಲಿ ಈ ಹಳೆಯದನ್ನೇ ಕೊಟ್ಟಾಗ ನಾವು ವಾವ್ ಅಂದು ಅವರದೊಂದು ಫೋಟೋ ನಮ್ಮ ಕೋಣೆಯಲ್ಲಿ ತಗುಲಿಹಾಕಿಕೊಂಡುಬಿಡುತ್ತೇವೆ. ಇರಲಿ ಈಗ ಮತ್ತೆ ಭೂಮಿ ಹುಣ್ಣಿಮೆ ಹಬ್ಬಕ್ಕೆ ಬರೋಣ. ಟಿ.ವಿಯಲ್ಲಿ ಜಾಹಿರಾತೊಂದು ಬರುತ್ತದೆ. ಅದು ಹೀಗಿದೆ, ಮರುಭೂಮಿಯಲ್ಲಿ ನೀರಡಿಕೆಯಿಂದ ಒಬ್ಬಾತ ತಲೆತಿರುಗಿ ಬೀಳುತ್ತಾನೆ. ವೃದ್ಧ ದಂಪತಿಗಳು ಆತನಿಗೆ ನೀರು ಕೊಡಲು ಹೋಗುತ್ತಾರೆ ಆವಾಗ ಆತ ಅಂತಹಾ ಪರಿಸ್ಥಿತಿಯಲ್ಲಿಯೂ ಇದು ಪ್ಯೂರಿಫೈಡ್ ನೀರು ತಾನೆ ? ಇಲ್ಲದಿದ್ದರೆ ನನಗೆ ಬೇಡ ಅನ್ನುತ್ತಾನೆ. ಆಮೇಲೆ ಕಂಪನಿಯ ಹೆಸರು ಹೇಳಿ ಅದೇ ನೀರು ಅನ್ನುತ್ತಾನೆ ಆತ ಕುಡಿಯುತ್ತಾನೆ. ಮೊನ್ನೆ ನನ್ನ ಮಗ ಮತ್ತು ಅವನ ಟೀಂ ಭೂಮಿ ಹುಣ್ಣಿಮೆ ದಿನ ತೋಟದಲ್ಲಿ ಬಾಳೆ ಎಲೆ ಹಾಕಿಕೊಂಡು ಕಡುಬು ಬಾರಿಸಿದರು. ತೋಟದಲ್ಲಿ ಜಾಗ ಹೇಗಿರುತ್ತದೆ ಎಂದು ನಿಮಗೆ ಮತ್ತೆ ಹೇಳಬೇಕಾಗಿಲ್ಲ. ಅಲ್ಲೇ ಹರಿಯುತ್ತಿದ್ದ ನೀರಿನಲ್ಲಿ ಕೈತೊಳೆದರು ಮತ್ತು ಕೊನೆಯಲ್ಲಿ ಬೊಗಸೆ ನೀರು ಕುಡಿದರು. ಮತ್ತು ಸಂತೋಷವಾಗಿ ಮತ್ತೊಂದು ತೋಟಕ್ಕೆ ಕಡುಬು ಬಾರಿಸಲು ಹೋದರು. ಆ ಹುಡುಗರು ಇವತ್ತೂ ಆರಾಮವಾಗಿದ್ದಾರೆ. ಅದೇ ಜಾಹಿರಾತಿನ ಅಮ್ಮನಾಗಿದ್ದರೆ ಅಯ್ಯೋ ... ಎಂದು ರಾಗ ಎಳೆಯಬೇಕಾಗಿತ್ತು. ಶುದ್ದ ನೀರನ್ನು ಅಭ್ಯಾಸ ಮಾಡಿ ನಮ್ಮ ದೇಹವನ್ನು ಸೂಕ್ಷ್ಮ ಮಾಡಿಸುವುದಕ್ಕಿಂತಲೂ ಅಶುದ್ದ (!) ನೀರನ್ನು ದಕ್ಕಿಸಿಕೊಳ್ಳುವುದನ್ನು ನಮ್ಮ ದೇಹಕ್ಕೆ ಕಲಿಸಬೇಕು. ತೋಟದಂತಹ ಜಾಗದಲ್ಲಿ ಊಟ ಮಾಡುವುದರಿಂದ ನಮ್ಮ ದೇಹ ಏನನ್ನಾದರೂ ಜೀರ್ಣಿಸಿಕೊಳ್ಳುವುದನ್ನು ಕಲಿಯುತ್ತದೆ. ಹೀಗಿದೆ ನೋಡಿ ವಿಚಾರಗಳು ಹೌದಾದರೆ ಹೌದೆನ್ನಿ ದಯಮಾಡಿ ಅಲ್ಲವಾದರೂ ಹೌದೆನ್ನಿ.
ಕೊನೆಯದಾಗಿ: ನಾವು ಆಚರಿಸುವ ಪ್ರತೀ ಹಬ್ಬಕ್ಕೂ ಹಾಗೂ ಎಲ್ಲ ಶಾಸ್ತ್ರ ಸಂಪ್ರದಾಯಗಳಿಗೂ ವೈಜ್ಞಾನಿಕ ಅರ್ಥವಿದೆಯಾ ? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ." ಒಂದಿಷ್ಟಕ್ಕೆ ಅರ್ಥವಿದೆ ಮಿಕ್ಕವುಗಳಿಗೆ ಇಂದು ಅರ್ಥೈಸಲಾಗುತ್ತಿದೆ." ಎಂಬ ಉತ್ತರ ನೀಡಿದರು. ತಲೆಯಮೇಲೆ ಹೊಡೆದಂತಹ ಸತ್ಯದ ಮಾತಿಗೆ ಖುಷಿಯಾದೆ
ಟಿಪ್ಸ್: ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಂತಿಯಾಗುತ್ತದೆಯೇ? ಹಾಗಾದರೆ ಇನ್ನು ಚಿಂತೆ ಬಿಡಿ ನೆಲ್ಲಿಕಾಯಿಯ ಸೆಟ್ ಜತೆಯಲ್ಲಿ ಇಟ್ಟುಕೊಂಡು ಪ್ರಯಾಣಿಸಿ. ಅದು ಜತೆಯಲ್ಲಿ ಇಲ್ಲವೇ ಹಾಗಾದರೆ ಓದಲು ಕೊಂಡಿದ್ದ ದಿನ ಪತ್ರಿಕೆಯನ್ನು ಆಘ್ರಾಣಿಸಿ . ವಾಂತಿ ಆಗುವುದೇ ಇಲ್ಲ. ಅಂತ ವಾಂತೇಶ್ವರಿಯೊಬ್ಬರು ಹೇಳಿದ್ದರು, ಪ್ರಯೋಗಿಸಿ ಉತ್ತರ ತಿಳಿಸಿ. ನನಗೆ ಅನುಭವ ಇಲ್ಲ.
ಟಿಪ್ಸ್ ಓದಲು ಕಾಣಿಸದು ಎಂದರೆ ಸೆಲೆಕ್ಟ್ ಮಾಡಿ ಆವಾಗ ಕಾಣಿಸುತ್ತದೆ.

ಹೊಸ ಬ್ಲಾಗ್ ಮಾಹಿತಿ.

http://kannadabala.blogspot.com/ ಎಂಬ ಬ್ಲಾಗ್ ಇದೆ. ಅದು ಕನ್ನಡ ಬ್ಲಾಗಿಗಳ ವಿಳಾಸವನ್ನು ತಿಳಿಸುತ್ತದೆ. ಅದೇ ರೀತಿಯ ಹೊಸದಾದ ಇನ್ನೊಂದು ಬ್ಲಾಗ್ ತೆರೆಯಲಾಗಿದೆ. http://blogannada.blogspot.com/ ಇದರ ವಿಶೇಷವೆಂದರ ಬ್ಲಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಅಲ್ಲಿಯೇ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಿ ನಿಮಗಿಷ್ಟವಾದ ಬ್ಲಾಗ್ ಅಲ್ಲಿ ನಮೂದಿಸಬಹುದು. ಇದೊಂತರ ಉತ್ತರ ಭಾರತದ ದೇವಸ್ಥಾನವಿದ್ದಂತೆ. ಅಲ್ಲಿಯೂ ಹಾಗೆ ನೀವೇ ಸ್ವತಹ ಪೂಜಾರಿಗಳ ಸಹಾಯವಿಲ್ಲದೆ ದೇವರ ಪೂಜೆ ಮಾಡಬಹುದು. ಹೂವು ಏರಿಸಬಹುದು.( ಆದರೆ ನೀವು ವಾಪಾಸಾದ ಮರುಕ್ಷಣ ಆ ಹೂವನ್ನು ಮತ್ತೊಬ್ಬ ತೆಗೆದುಬಿಡುತ್ತಾನೆ . ಇಲ್ಲಿ ಹಾಗೆ ಮಾಡಬೇಡಿ ) ಅದೇ ತರಹ ಇದು ನಿಮಗಿಷ್ಟವಾದ ಮಾರ್ಪಾಡು ಮಾಡಿ. ಹೊಸ ಹೊಸ ನಿಮಗೆ ಗೊತ್ತಿರುವ ತಾಣ ಸೇರಿಸಿ . ಇದೊಂತರ ಸಮೂಹ ಬ್ಲಾಗ್.

ಸರಿ ಇನ್ನೇನು ಲಾಗ್ ಇನ್ ಆಗಿ. ಧನ್ಯವಾದಗಳು

Saturday, October 11, 2008

ಸಂಸಾರಿಯ ಸಾರ


ಅಡಿಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವ ಬಿಟ್ಟವರೊಯ್ಯುವರು
ಸಂಸಾರಿಯಿಂದ
ಹೀಗಿದೆ ನೋಡಿ ಸಂಸಾರಿಯ ಗತಿ. ಮದುವೆ ಎಂಬ ಮೂರಕ್ಷರದ ನಂತರ ಸಂಸಾರಿ ಎಂಬ ಹಂತಕ್ಕೆ ಏರುತ್ತಾರಲ್ಲ ಆವಾಗ ಶುರು. ಮಿಕ್ಕವರೆಲ್ಲರೂ ಈ ಸಂಸಾರಿಯ ಹಿಂದೆ ಬೀಳುತ್ತಾರೆ. ಅಲ್ಲಿಯತನಕದ ಜೀವನ ಅವನಿಗೆ ನಂತರದ್ದು ಬೇರೆಯವರಿಗೆ. ಮನುಷ್ಯನಿಗೆ ಮದುವೆ ಎಂಬುದು ಬಂಧನವೂ ಹೌದು ಹಾಗೆಯೇ ಜೀವನವೂ ಹೌದು. ನಮ್ಮ ಹಿಂದೂ ಧರ್ಮ ಶಾಸ್ತ್ರಗಳು ಅಪುತ್ರಸ್ಯ ಗತಿರ್ನಾಸ್ತಿ ಎಂದು ಒಂಥರಾ ಹೆದರಿಸಿ ಮದುವೆಗೆ ಪ್ರಚೋದಿಸುತ್ತವೆ. ಮದುವೆಯಾದ ಮೇಲೆ ಮತ್ತೆ ಮಕ್ಕಳಾಗದಿದ್ದರೆ ನಾಗ ಶಾಂತಿ ಸುಬ್ರಹ್ಮಣ್ಯ ಜಪ ಹೀಗೆಲ್ಲಾ ಮುಂದುವರೆಯುತ್ತದೆ. ಇರಲಿ ಅವೆಲ್ಲಾ ಶಾಸ್ತ್ರ ಸಂಪ್ರದಾಯಗಳ ಕತೆಯಾಯಿತು ಈಗ ಸಂಸಾರದ ವಿಚಾರಕ್ಕೆ ಬರೋಣ. ನಮ್ಮ ಹಳ್ಳಿಗಳಲ್ಲಿ ಒಂದುಕಾಲದಲ್ಲಿ ಸಂಸಾರ ಎಂಬುದನ್ನು ಸಾಗರಕ್ಕೆ ಹೋಲಿಸಲಾಗುತ್ತಿತ್ತು. ಆದರೆ ನಿಜವಾಗಿಯೂ ಸಂಸಾರವೆಂದರೆ ಹಡಗಿನ ನೆನಪಾಗುತ್ತಿತ್ತು. ಅಣ್ಣತಮ್ಮಂದಿರು ಐದು ಜನ ಅವರಿಗೆ ತಲಾ ನಾಲ್ಕೈದು ಮಕ್ಕಳು ಆ ಮಕ್ಕಳಿಗೆ ಹೆಂಡಂದಿರು ಹೀಗೆ ಮೂವತ್ತು ನಲವತ್ತು ಜನರಿರುವ ಒಂದೊಂದು ಅವಿಭಕ್ತ ಕುಟುಂಬ . ಅಮ್ಮಾ .............ನಿಜವಾಗಿಯೂ ಅದನ್ನು ನಿಭಾಯಿಸಲು ಎಂಟೆದೆಯ ಭಂಟನಾಗಿರಲೇ ಬೇಕು. ಅತ್ತೆ ಸೊಸೆ ಜಗಳ ವಾರಗಿತ್ತಿಯರ ಮುನಿಸು ಗಂಡ ಹೆಂಡಿರ ಗುದ್ದಾಟ ಮಕ್ಕಳ ಚೆಲ್ಲಾಟ ಹೊಡೆದಾಟ ಒಂದೊಂದು ನೆನೆಸಿಕೊಂಡರೆ ಹಾಗೆ ಇದ್ದ ಅವಿಭಕ್ತ ಕುಟುಂಬಗಳು ಕನಸಾ ಎಂದೆನಿಸುತ್ತದೆ. ದಿನನಿತ್ಯ ಒಬ್ಬರಲ್ಲಾ ಒಬ್ಬರು ಅತಿಥಿಗಳು ಅವರಿಗೆ ಊಟ ಹಾಸಿಗೆ ಕಾಫಿ ತಿಂಡಿ. ಮಕ್ಕಳ ವಿದ್ಯಾಭ್ಯಾಸ ಅವುಗಳಿಗೆ ಬಟ್ಟೆಬರೆ . ಅದನ್ನೆಲ್ಲಾ ಹ್ಯಾಗೆ ನಿಭಾಯಿಸಿದರು? ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡದಿರದು. ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬ ಎಂಬ ಶಬ್ಧ ಬಹುಪಾಲು ತನ್ನ ಅರ್ಥ ಕಳೆದುಕೊಂಡಿದೆ. ಗಂಡ ಹೆಂಡತಿ ಒಂದು ಮಗು ಇಷ್ಟಕ್ಕೆ ಸಂಸಾರ ಮುಗಿಯುತ್ತದೆ. ಆದರೂ ಟೆನ್ಷನ್ ಜೀವನ ಹಾಗಾದರೆ ಆವಾಗ..ಇವುಗಳನ್ನೆಲ್ಲಾ ಹೇಗೆ ನಿಭಾಯಿಸಿದರು ?. ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಊರಿನಲ್ಲಿ ಒಬ್ಬ ಮಹಾತಾಯಿ ಹಾಗೂ ಆಕೆಯ ಗಂಡ ಮಹಾಪುರುಷ. ಅವರಿಗೆ ಒಟ್ಟು ಹದಿನೆಂಟು ಮಕ್ಕಳು. ಆದರೆ ಆ ಕರುಣಾಮಯಿ ದೇವರ ದಯೆಯಿಂದ ಉಳಿದದ್ದು ಐದು ಗಂಡು ಒಂದು ಹೆಣ್ಣು. ಉಳಿದ ಇಷ್ಟರಿಂದಲೇ ಇಡೀ ಮನೆಯಲ್ಲಿ ಮೂವತ್ತು ಜನ. ಎರಡೂವರೆ ಎಕರೆ ಅಡಿಕೆ ಭಾಗಾಯ್ತು. ಹಿರಿಯಣ್ಣ ಮನೆಯ ಯಜಮಾನ. ಅದೇನು ಮಾಡಿದನೋ ಸಂಸಾರ. ಮಕ್ಕಳೆಲ್ಲಾ ಯಾರ ಹಿಡಿದು ಎಲ್ಲಿ ಓದಿದರೋ..? ಅಂತೂ ಇವತ್ತಿನ ಈ ಕಾಲದಲ್ಲಿ ಎಲ್ಲಾ ಮಕ್ಕಳು ದೇಶದಾದ್ಯಂತ ಒಂದೊಂದು ಕಡೆ ಅಂಗಡಿ ಕೆಲಸ ಮುಂತಾದವುಗಳನ್ನು ಅವಲಂಬಿಸಿ ಯಶಸ್ಸು ಹೊಂದಿದ್ದಾರೆ. ಆ ಮನೆಯ ಯಜಮಾನ ಎಂಬತ್ತುವರ್ಷವಾದರೂ ಇನ್ನೂ ಗಟ್ಟಿಯಾಗಿದ್ದಾನೆ.
ಮತ್ತೊಂದು ಅವಿಭಕ್ತ ಕುಟುಂಬ ನನ್ನ ಅತ್ತೆಯಮನೆ, ಲಿಂಗನಮಕ್ಕಿ ಆಣೆಕಟ್ಟಿನ ಭರಾಟೆಯಲ್ಲಿ ಅಮೀನುಕಳೆದುಕೊಂಡು ಸಿರಸಿಯ ಸಮೀಪ ಕಂಚಿಕೊಪ್ಪ ಎಂಬ ಊರಿನಲ್ಲಿ ನೆಲಸಿದ ಕುಟುಂಬ. ಅತ್ತೆಗೆ ಆರು ಗಂಡು ಮೂರು ಹೆಣ್ಣು ಮಕ್ಕಳು. ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಗೆ ಅಲ್ಲಿಗೆ ದೌಡಾಯಿಸುತ್ತಿದ್ದೆ. ಅಲ್ಲಿ ಮಕ್ಕಳ ಸಂಖ್ಯೆ ಎಷ್ಟಿತ್ತೆಂದರೆ ರಾತ್ರಿ ಊಟಕ್ಕೆ ಕೆಲವರು ತಪ್ಪಿಸಿಕೊಂಡರೂ ಗೊತ್ತಾಗುತ್ತಲೇ ಇರಲಿಲ್ಲ. ಕರೆಂಟ್ ಕೂಡ ಅಲ್ಲಿಗೆ ಬಂದಿರಲಿಲ್ಲವಾದ್ದರಿಂದ ಚಿಮುಣಿ ಬುಡ್ಡಿ ಅಥವಾ ಗ್ಯಾಸ್ ಲೈಟ್ ಬೆಳಕಿನಲ್ಲಿ ಯಾರು ಉಂಡರೋ ಯಾರು ಬಿಟ್ಟರೋ ಭಗವಂತನೇ ಬಲ್ಲ ಎಂಬಂತಿತ್ತು. ಬೆಳಿಗ್ಗೆ ದೋಸೆ ಕನಿಷ್ಟವೆಂದರೂ ನೂರು ಬೇಕಾಗುತ್ತಿತ್ತು. ಈ ಜನಜಂಗುಳಿಯ ನಡುವೆಯೇ ಅತ್ತೆಯ ಮನೆಯ ಮಕ್ಕಳು ಮೊಮ್ಮಕ್ಕಳು ಓದಿ ವಿದ್ಯಾವಂತಾರಾಗಿ ಪ್ರಪಂಚಾದ್ಯಂತ ನೆಲಸಿದ್ದಾರೆ.
ಆದರೆ ಈಗ ಮೂರೇ ಮೂರು ಅಥವಾ ಹೆಚ್ಚೆಂದರೆ ನಾಲ್ಕು ಜನರಿರುವ ಕುಟುಂಬ ವ್ಯವಸ್ಥೆಗೆ ನಾವು ತಲುಪಿದ್ದಾಗಿದೆ. ಇರುವ ಒಂದೋ ಎರಡೋ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಪ್ಪ ಅಮ್ಮ ಅಂಡುಮೇಲೆ ಮಾಡಿಕೊಂಡು ಒದ್ದಾಡುವುದನ್ನು ನೋಡಿದರೆ ಅಂದಿನ ಅಮ್ಮಂದಿರಿಗೆ ಗಿಟಿಗಿಟಿ ನಗು ಬರಬಹುದೇನೋ. ಇಂದಿನ ಸಂಸಾರದ ಅಪ್ಪ ಅಮ್ಮರ ಮುನಿಸು, ಅಸಮಾಧಾನ, ಕೋಳಿ ಜಗಳ, ಪ್ರತಿ ನಿತ್ಯ ಚರ್ಚೆಯಾಗುವ ಭವಿಷ್ಯದ ಜೀವನದ ಕುರಿತು ಹೆದರಿಕೆಗಳು ಮುಂತಾದವುಗಳೆಲ್ಲಾ ಅಂದಿನ ಸಂಸಾರಕ್ಕೆ ಹೋಲಿಸಿದರೆ ನಿಜಕ್ಕೂ ನಾಚಿಕೆಯಾಗುತ್ತದೆ. ಅಂದು ಈತರಹ ಬೇಡದ ವಿಷಯಗಳನ್ನು ಆಲೋಚಿಸಲು ಮತ್ತೊಂದು ಪ್ರಪಂಚವನ್ನು ನೋಡಲು ಅವಕಾಶವೂ ಇರಲಿಲ್ಲ ಸಮಯವೂ ಇರಲಿಲ್ಲ ಇಂದು ಹಾಗಲ್ಲ. ಸಂಸಾರ ಸಣ್ಣದಾದರೂ ಭಾರವಾಗಿದೆ. ಜವಾಬ್ದಾರಿ ಪಾಸ್ ಮಾಡಲು ಗಂಡ ಹೆಂಡತಿ ಇಬ್ಬರೂ ಪರಸ್ಪರ ತಯಾರಾಗಿ ನಿಂತಿರುತ್ತಾರೆ. ಇರಲಿ ಅಂದು ಅಂದಿಗೆ ಕಷ್ಟವಾದರೂ ಇಂದು ಮಜ. ಇಂದು ಇಂದಿಗೆ ಹಿಡಿಸದಿದ್ದರೂ ಮುಂದೆ ಮಜ. ಕಾರಣ ಮುಂದೊಂದು ದಿವಸ ಯಾರೋ ಒಬ್ಬಾತ ತನ್ನ ಬ್ಲಾಗ್ ನಲ್ಲಿ "ಒಂದುಕಾಲದಲ್ಲಿ ಅಪ್ಪ ಅಮ್ಮ ಒಟ್ಟಿಗೆ ಇರುತ್ತಿದ್ದರಂತೆ.....ಅದಕ್ಕೆ ಸಂಸಾರ ಎನ್ನುತ್ತಿದ್ದರಂತೆ, ಅದು ಹೇಗೆ ಇರುತ್ತಿದ್ದರೋ ..." ಎಂಬುದಾಗಿ ಬರೆಯಬಹುದು.
ಮೊನ್ನೆ ಅದ್ಯಾವುದೋ ಸಮಾರಂಭಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋದಾಗ ಊಟಕ್ಕೆ ಎರಡು ಜಾಗ ಹಿಡಿಯುವುದಕ್ಕೆ ಹರಸಾಹಸ ಪಡಬೇಕಾಯಿತು. ಸೀಟು ಹಿಡಿದು ಅಬ್ಬಾ ಇನ್ನು ಊಟಕ್ಕೆ ರೆಡಿ ಎಂಬಂತಿರುವ ಫೋಟೋ ನೋಡಿದಾಗ ಇವೆಲ್ಲಾ ನೆನಪಾಯಿತು. ಇದೇ ಅಂದಾಗಿದ್ದರೆ ಕನಿಷ್ಟ ಹತ್ತು ಊಟದ ಜಾಗವನ್ನು ನಾನು ಹಿಡಿಯಬೇಕಾಗಿತ್ತು ಎಂಬ ಪರಿಸ್ಥಿತಿ ನೆನೆದು ಹೀಗೆಲ್ಲಾ ಏನೇನೋ ಒಂದೊಕ್ಕೊಂದು ಸಂಬಂಧವಿಲ್ಲದೇ ಬರೆಯುವಂತಾಯಿತು.
ಕೊನೆಯಾದಾಗಿ: ಆನಂದರಾಮ ಶಾಸ್ತ್ರಿಗಳೇ ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರಲ್ಲ ಹಾಗಂದಮೇಲೆ ಮತ್ತೆ ಹೀಗೆ ನೂರಾರು ಜನರ ಅವಿಭಕ್ತ ಕುಟುಂಬ ವ್ಯವಸ್ಥೆ ಮುಂದೊಂದು ದಿನ ಬರಲೇ ಬೇಕಲ್ಲವೇ?. ಎಂದು ಕೇಳಿದೆ ಅದಕ್ಕವರು " ಇಡೀ ಸಮಾಜ ಈ ಸಂಸಾರ ವೆಂಬ ವ್ಯವಸ್ಥೆಯ ಮೇಲೆ ನಿಂತಿದೆ. ಅದು ಡಂ ಎಂದರೆ ಪ್ರಪಂಚ ಡಂ ಎಂದಂತೆ. ಸಂಸಾರಿಯಾದವನು ಹೆದರಿಕೆಯಿಂದಲಾದರೂ ಜವಾಬ್ದಾರಿಯಾಗಿ ವರ್ತಿಸುತ್ತಾನೆ. ವಿಭಕ್ತ ಅವಿಭಕ್ತ ಎಂಬುದೆಲ್ಲಾ ನಾವು ಮಾಡಿಕೊಂಡ ವ್ಯವಸ್ಥೆ. ಇಡೀ ಪ್ರಪಂಚವೇ ಒಂದು ಕುಟುಂಬ, ವಸುದೈವ ಕುಟುಂಬಕಂ....." ಎಂದು ಉತ್ತರಿಸಿದರು. ಈ ಉತ್ತರ ಹೇಗಿತ್ತೆಂದರೆ ಈ ನನ್ನ ಬ್ಲಾಗ್ ಟೈಟಲ್ ಗೂ ಹಾಗೂ ನಾ ಬರೆದ ವಿಷಯಕ್ಕೂ ಮತ್ತು ಆರಂಭದಲ್ಲಿ ನಾನು ಬರೆದ ಚತುಷ್ಪದಿಗೂ ಇದ್ದಂತೆ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆದರೂ ಎನೋ ಇತ್ತು ಅಲ್ಲಿ ನನಗೆ ಅರ್ಥವಾಗಲಿಲ್ಲವಷ್ಟೆ.
ಟಿಪ್ಸ್: ತಲೆಯಲ್ಲಿ ಎಂಟಾಣೆಯ ಬಿಲ್ಲೆಯಾಕರದಲ್ಲಿ ಕೂದಲು ಉದುರಿಹೋಗುತ್ತದೆ. ಅದೊಂದು ಮಹಾನ್ ಖಾಯಿಲೆ ಎಂದು ಚರ್ಮ ತಜ್ಞರು ಬಿಂಬಿಸಿ ಸಾವಿರಾರು ರೂಪಾಯಿ ಕೆತ್ತಿಬಿಡುತ್ತಾರೆ. ಅದಕ್ಕೆ ನಾಲ್ಕಾಣೆಯೂ ಖರ್ಚಿಲ್ಲದ ಔಷಧಿಯೆಂದರೆ ತಾಮ್ರದ ಪಾತ್ರೆಯಲ್ಲಿ ಗೋಮೂತ್ರವನ್ನು ಹಿಡಿದು ಮೂರುದಿನ ಬಿಸಿಲಿನಲ್ಲಿ ಇಟ್ಟು ಆ ಜಾಗಕ್ಕೆ ಹಚ್ಚಿದರೆ ಕೂದಲು ಬುರುಬುರುನೆ ಬರಲು ಶುರುವಾಗುತ್ತದೆ. ಪುಕ್ಕಟೆ ಔಷಧಿಗೆ ಸಾವಿರಾರು ಕಳೆಯಬೇಡಿ, ಗೋಮಾತೆ ಮಾತೆ ಎನ್ನಿರೋ....

Wednesday, October 8, 2008

ಬಿದಿರಿನ ಕಟ್ಟೆಯೂ ನೆಗೆಟೀವ್ ಯೋಚನೆಯೂ....?




ಬಿದಿರುಮಳೆಗೆ ಕಟ್ಟೆ ಬಂದರೆ ಬರಗಾಲ ಬರುತ್ತದೆ. ಬಿದಿರು ಅಕ್ಕಿಯನ್ನೇ ಉಣ್ಣುವ ಪರಿಸ್ಥಿತಿ ಖಂಡಿತ ಅಂತ ಹಳ್ಳಿಗಾಡಿನಲ್ಲಿ ನಂಬಿಕೆಯಿದೆ. ಗೋರಾಂಡಲ ರಣಬೇಸಿಗೆಯಲ್ಲಿ ಹಸಿರು ಹಸಿರಾಗಿರುವ ಬಿದಿರು ಒಣಗಿ ನಿಂತುಬಿಡುತ್ತದೆ. ಇದು ಅರವತ್ತು ವರ್ಷಕ್ಕೊಮ್ಮೆ ಸಂಭವಿಸುವ ಘಟನೆ ಎಂದು ಬಾಯಿಂದ ಬಾಯಿಗೆ ಹಬ್ಬಿ ಬಂದಿರುವ ಮಾಹಿತಿ . ಕಳೆದ ಬೇಸಿಗೆಯಲ್ಲಿ ನಮ್ಮೂರಿನ ನೂರಾರು ಬಿದಿರು ಒಣಗಿನಿಂತಿತ್ತು. ಆದರೆ ಬರಗಾಲವೇನೂ ಸಾಮೂಹಿಕವಾಗಿ ಬಂದಿಲ್ಲ. ಎಲ್ಲರೂ ಊಟ ಮಾಡುತ್ತಿದ್ದಾರೆ, ಅಂಡಿಗೆ ಬೈಕ್ ಹಾಕಿಕೊಂಡು ತಿರುಗುತ್ತಿದ್ದಾರೆ, ಕಾರ್ ಇರುವವರು ಅದರಲ್ಲಿ ಸುತ್ತುತ್ತಿದ್ದಾರೆ. ಆದರೆ ಏಪ್ರೀಲ್ ನಲ್ಲಿ ಎಲ್ಲರದ್ದೂ ಒಂದೇ ಗೊಣಗಾಟ ಇತ್ತು, ಈವರ್ಷ ಬಿದಿರಿಗೆ ಕಟ್ಟೆ ಬಂದಿದೆ ಹಾಗಾಗಿ ಬರಗಾಲ ಖಂಡಿತ, ಊಟ ಮಾಡುವುದು ಹೇಗೋ? ಹಾಗೇ ಹೀಗೆ ಮುಂತಾಗಿ. ಮಳೆಗಾಲದಲ್ಲಿ ಅಡಿಕೆಗೆ ಕೊಳೆಬಂದಾಗಲೂ ಪಾಪದ ಬಿದಿರಿಗೆ ಕಟ್ಟೆ ಬಂದಿದ್ದನ್ನೇ ಉದಾಹರಿಸಿ ಈ ವರ್ಷ ಬದುಕುವುದು ಕಷ್ಟ ಇದೆ ಅನ್ನುತ್ತಿದ್ದರು. ಪಾಪ ಈ ಸಾಮೂಹಿಕ ಯೋಚನೆಯ ಮಾತುಗಳನ್ನು ಕೇಳಿದ ಅಮಾಯಕರು ಬದುಕು ಅತ್ಯಂತ ಕಷ್ಟವಾಗುತ್ತದೆ ಎಂದು ನಿತ್ಯ ಅವ್ಯಕ್ತ ಭಯದಿಂದ ನರಳುತ್ತಾರೆ. ಈ ಸಾಮೂಹಿಕ ನೆಗೆಟಿವ್ ಯೋಚನೆ ಪ್ರಪಂಚದ ಎಲ್ಲಾ ಸ್ಥರಗಳಲ್ಲಿಯೂ ಹರಿದಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಶೇರು ಮಾರುಕಟ್ಟೆ ಕುಸಿದಾಗ ಎಲ್ಲರಿದ್ದೂ ಇದೇ ತರಹದ ಭಯದ ಮಾತುಗಳು. ಇನ್ನು ಐಟಿ ಇಂಡಸ್ಟ್ರೀಸ್ ಕಥೆ ಮುಗಿದಂತಯೇ ಇಂಜನಿಯರಿಂಗ ಓದುವುದು ವೇಸ್ಟ್, ಮುಂತಾಗಿ ನೆಗೆಟಿವ್ ಯೋಚನೆಗಳು ಹರಿದಾಡಲಾರಂಬಿಸಿವೆ. ಸಧ್ಯ ಬಿದಿರು ಮಳೆಗೆ ಕಟ್ಟೆ ಬಂದಿದ್ದರಿಂದ ಶೇರು ಮಾರುಕಟ್ಟೆ ಕುಸಿದಿದೆ ಐಟಿ ಬಿದ್ದಿದೆ ಅಮೆರಿಕಾದ ಅರ್ಥ ವ್ಯವಸ್ಥೆ ಜಾರಿದೆ ಎಂಬ ಕತೆ ಶುರುವಾಗಿಲ್ಲ. ಇದಕ್ಕೆ ಪಟ್ಟಣದಲ್ಲಿ ಬಿದಿರುಮಳೆ ಇಲ್ಲದಿದ್ದದ್ದೂ ಕಾರಣವಿರಬಹುದು.
ಪ್ರಕೃತಿಯಲ್ಲಿನ ವ್ಯತ್ಯಯಗಳನ್ನು ನಮ್ಮ ನಮ್ಮ ಜೀವನಕ್ಕೆ ಹೋಲಿಸಿಕೊಂಡು ಋಣಾತ್ಮಕ ಯೋಚನೆಗಳನ್ನು ತಲೆಗೇರಿಸಿಕೊಂಡು ನರಳುವ ಪದ್ದತಿ ಮನುಷ್ಯನ ಆರಂಭಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಆದರೆ ಇದನ್ನೇ ಧನಾತ್ಮಕವಾಗಿ ಬಳಸಿಕೊಂಡು ಸುಖವಾಗಿ ಬದುಕಬಹುದು ಎಂಬ ಆಲೋಚನೆ ನಮಗೆ ಬರುವುದೇ ಇಲ್ಲ. ನೆನಪಿಸಿಕೊಳ್ಳಿ ಈಗ ಹತ್ತು ವರ್ಷದ ಹಿಂದೆ ಐಟಿ ಕ್ಷೇತ್ರದಲ್ಲಿ ಶೇರು ಮಾರುಕಟೆಯಲ್ಲಿ, ಹಳ್ಳಿಗಾಡಿನಲ್ಲಿ ಬದುಕುವುದೇ ಕಷ್ಟ ಎಂಬಂತಹ ಇದೇ ತರಹದ ನೆಗೇಟೀವ್ ಮಾತುಗಳು ಹರಿದಾಡುತ್ತಿತ್ತು. ಹಾಗಂತ ಯಾರೂ ಸತ್ತಿಲ್ಲ. ಕೆಲಸ ಮಾಡುವವರು ತಮ್ಮ ಪಾಡಿಗೆ ತಾವು ಮಾಡುತ್ತಿದ್ದಾರೆ, ಮನೆ ಕಟ್ಟಿಸುವವರು ಕಟ್ಟಿಸಿದ್ದಾರೆ , ಕಾರ್ ಕೊಳ್ಳುವವರು ಕೊಂಡಿದ್ದಾರೆ, ಬಾಯಲ್ಲಿ ಮಾತ್ರಾ ಬದುಕುವುದೇ ಕಷ್ಟ ಎಂಬ ಒಣ ಡೈಲಾಗ್. ಸತ್ಯ ಹೇಳಲಾ ಇದು ಅತಿ ಹೆಚ್ಚು ಕಾಡುವುದು ಇತಿಹಾಸದ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ನಮ್ಮಂತಹ ದೇಶದ ಜನರ ಮನಸ್ಥಿತಿ. ಅಮೆರಿಕಾದಂತಹ ಭವಿಷ್ಯಕ್ಕಾಗಿ ವರ್ತಮಾನವನ್ನು ಸವೆಸುತ್ತಿರುವ ಮನಸ್ಥಿತಿಯಲ್ಲಿ ಈ ತರಹ ವೃಥಾ ನೆಗೇಟೀವ್ ಮಾತುಗಳು ಬಹು ಕಡಿಮೆ. ನೆಗೆಟೀವ್ ಯೋಚನೆಯಿಂದ ವರ್ತಮಾನದ ಜೀವನದ ಮಜ ಕಳೆದುಹೋಗುತ್ತದೆ. ನಾನು ಕೂಡ ವೈಯಕ್ತಿಕವಾಗಿ ಅದರ ಕಷ್ಟ ಅನುಭವಿಸಿದ್ದೇನೆ. ಒಂದೋ ಭೂತಕಾಲವನ್ನು ಸ್ಮರಿಸುತ್ತಾ ಜೀವನ ಸವೆಸಬೇಕು ಅಥವಾ ಭವಿಷ್ಯಕ್ಕೆ ಕನಸು ಕಟ್ಟುತ್ತಾ ಜೀವನ ಸಾಗಿಸಬೇಕು. ಅದು ಸುಖವಾಗಿರಬೇಕು ಎಂದಾದರೆ ಭವಿಷ್ಯದ ಕನಸು ಪಾಸಿಟೀವ್ ಆಗಿರಬೇಕು ಭೂತದ ಆಲೋಚನೆ ಹೇಗಿದ್ದರೂ ಅಂತಹಾ ತೊಂದರೆಯಿಲ್ಲ.
ಹೇಗೆಂದರೆ ಅಬ್ಬಾ ಬಿದಿರಿಗೆ ಕಟ್ಟೆ ಬಂತು ಈ ವರ್ಷ ಒಣಗಿದ ಬೊಂಬು ಬೇಕಷ್ಟು ಸಿಗುತ್ತದೆ. ಬಿದಿರಿನ ಅಕ್ಕಿಯಿಂದ ಸಾವಿರಾರು ಹೊಸ ಮೊಳಕೆ ಹುಟ್ಟುತ್ತದೆ. ಹಸಿರು ಕಾಡು ಸಮೃದ್ಧವಾಗುತ್ತದೆ. ಶೆರು ಮಾರುಕಟ್ಟೆ ಬಿದ್ದದ್ದು ಒಳೆಯದೇ ಆಯಿತು, ಸಸ್ತಾದರದಲ್ಲಿ ಶೇರು ಕೊಳ್ಳಬಹುದು. ಹೀಗೆ ಆಲೋಚಿಸಿದರೆ ಒಂದಿಷ್ಟು ಆರಾಮು ಅಂತ ಅನ್ನಿಸುತ್ತದೆ ನನಗೆ , ನಿಮಗೆ ಹೇಗೋ ನನಗೆ ಗೊತ್ತಿಲ್ಲ. ಇದು ರಗಳೆ ಅಂತ ಅನ್ನಿಸಿದರೆ ನೀವು ಸುಖಿಗಳು. ಹೌದು ಅಂತ ಅನ್ನಿಸಿದರೆ ನೀವು ನನ್ನಂತೆ. ಸುಳ್ಳು ಅಂತ ಅನ್ನಿಸಿದರೆ ನೀವು ಈಗಾಗಲೇ ಗೆದ್ದಿದ್ದೀರಿ ಅಂತ ಅರ್ಥ.
ಕೊನೆಯದಾಗಿ: ನೆಗೆಟೀವ್ ಪಾಸಿಟೀವ್ ಯೋಚನೆ ಅಂತ ಇದೆಯಾ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೆಣಕಿದೆ. ಯೋಚನೆಗಳಲ್ಲಿ ಹಾಗೆ ವಿಭಾಗ ಇಲ್ಲ ಆದರೆ ಯೋಚಿಸುವವನಲ್ಲಿ ಇದೆ. ಯೋಚನೆಯೆಂದರೆ ಅರ್ದ ಬಾಟಲಿ ಮದ್ಯ ಯೋಚಿಸುವವ ಇಷ್ಟು ಇದೆ , ಇಷ್ಟೇ ಇದೆ ಎಂದು ವಿಭಾಗಿಸಿಕೊಂಡು ಒದ್ದಾಡುತ್ತಾನೆ ಸುಖಿಸುತ್ತಾನೆ, ಪರಿಣಾಮ ಅರ್ದ ಬಾಟಲಿ ಮದ್ಯದ ಮೇಲಾಗದು ಎಂಬಂತಹ ಕಬ್ಬಿಣದ ಕಡಲೆಯಂತ ಉತ್ತರ ಕೊಟ್ಟರು. ನಾನು ಸುಮ್ಮನುಳಿದೆ. ಒಮ್ಮೊಮ್ಮೆ ಲೂಸ್ ತರಹ ಆಡುತ್ತಾರವರು
ಟಿಪ್ಸ್: ಹುಡುಗಿಗೆ ಹುಡುಗ ಇಷ್ಟವಾದರೆ ಆಕೆ ತನಗೆ ಅರಿವಿಲ್ಲದಂತೆ ತನ್ನ ಮೂಗಿನಮೇಲೆ ಕೈ ಆಡಿಸುತ್ತಾಳಂತೆ. ಲವ್ ಮಾಡೋ ಹುಡುಗರು ಇದೊಂದು ವರ್ತನೆಯ ಮುಖಾಂತರ ತಮ್ಮ ಪ್ರಪೋಸಲ್ ಹೇಳುವ ಧೈರ್ಯ ಮಾಡಬಹುದು. ಯಡವಟ್ಟಾದ್ರೆ ನಾನು ಜವಾಬ್ದಾರನಲ್ಲ.