Monday, February 15, 2010

"ಅಬ್ಬಿ ನೀರು"


"ಅಬ್ಬಿ ನೀರು" ಪದ ನೀವು ಮಲೆನಾಡಿಗರಾಗಿದ್ದರೆ ಕೇಳಿರುತ್ತೀರಿ. ಮನೆಯ ಹಿಂದೆ ದಬ ದಬ ಎಂಬ ಸದ್ದು ಮಾಡುತ್ತಾ ಹರಿಯುತ್ತಲಿರುತ್ತದೆ. ಶೇಕಡಾ ೧ ರಷ್ಟು ಬಳಕೆಗೆ ಮಿಕ್ಕಿದ್ದು ತೋಟಕ್ಕೆ. ಇದು ಅಬ್ಬಿ ನೀರು ಸೌಕರ್ಯ ಹೊಂದಿರುವ ಮನೆಗಳ ನೀರಿನ ಸಮೃದ್ಧಿ. ಪುಗಸಟ್ಟೆ ಪ್ರಕೃತಿ ನಿಡುವ ಈ ನೀರಿಗೆ ಒಂದು ವಿಶಿಷ್ಠ ರುಚಿ. ಜುಳು ಜುಳು ಎಂದು ಬೆಟ್ಟದ ತಲೆಯಿಂದ ಹರಿದು ಮನೆಯ ಹಿತ್ತಿಲು ಸೇರು ಅಬ್ಬಿ ನೀರು ಅಚ್ಚರಿಯ ಮೂಟೆ.
ನೆಲದಾಳದಲ್ಲಿ ಮುನ್ನೂರು ಮೀಟರ್ ಕೊರೆದು ನೀರು ಸಿಗದೆ ಹತಾಶರಾಗುವುದು ಮನುಷ್ಯ ಪ್ರಯತ್ನ. ನೆಲದಿಂದ ಸಾವಿರ ಅಡಿ ಮೇಲೆ ನೀರು ಚಿಮ್ಮಿಸುವುದು ಪ್ರಕೃತಿಯ ತಾಕತ್ತು.
ಕೊಡಚಾದ್ರಿಯ ತುಟ್ಟ ತುದಿಗೆ ನಿಂತರೆ ಕಣ್ಣು ಹಾಯಿಸುವಷ್ಟು ದೂರದವರೆಗೂ ತಗ್ಗು ಪ್ರದೇಶವಾದ ಕೊಲ್ಲೂರು ಹೊಸನಗರ ಮುಂತಾದವುಗಳು ಕಾಣಿಸುತ್ತವೆ. ಅಷ್ಟೆತ್ತರದ ಗುಡ್ಡದ ಮೇಲೆ ಜುಳು ಜುಳು ನೀರು ಚಿಮ್ಮುತ್ತದೆ. ಯಾರಿಟ್ಟರು ಅಲ್ಲಿ ನೀರಿನ ಸೆಲೆ? ಎಂಬ ಆಶ್ಚರ್ಯ ಮೂಡದಿರದು ಪ್ರಕೃತಿಯನ್ನು ಅಚ್ಚರಿಯಿಂದ ನೋಡುವ ಮನಸ್ಸಿದ್ದವರಿಗೆ. ಕೊಡಚಾದ್ರಿಯಿಂದ ಕೆಳಗಿಳಿದು ಬಂದು ಬಾವಿ ಬಗ್ಗಿದರೆ ಅಲ್ಲಿ ಕಾಣುವ ತಳದ ನೀರಿಗೂ ಅಚ್ಚರಿ ಮೂಡದಿರದು.
ಕಾಡು ಹೋಯ್ತು ಅಂತ ಕೇವಲ ಬೊಬ್ಭಿಡುವ ಮಂದಿಗೂ ನಿಲುಕದ ಈ ನೀರಿನ ಸೆಲೆಯನ್ನು ಗುಡ್ಡದ ನೆತ್ತಿಯವರೆಗೂ ಪಂಪ್ ಮಾಡುತ್ತಿರುವ ಪ್ರಕೃತಿ ಮಲೆನಾಡಿನ ಹಲವಾರು ಊರಿನ ಮನೆಗಳ ನೀರಿನ ದಾಹವನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತ ಉಣಬಡಿಸುತ್ತಿದೆ ನೂರಾರು ವರ್ಷಗಳಿಂದ. ತೆಗೆದ ಬಾವಿಯಲ್ಲಿ ಕೊರೆದ ಬೋರ್ ನಲ್ಲಿ ನೀರು ಬತ್ತಿರಬಹುದು "ಅಬ್ಬಿನೀರಿನ" ಸೆಲೆ ಇವತ್ತಿನವರೆಗೂ ಬತ್ತಿದ ಉದಾಹರಣೆ ಇಲ್ಲ. ಹಾಗೊಮ್ಮೆ ಮಲೆನಾಡಿನಲ್ಲಿ ಅಬ್ಬಿನೀರಿನ ಸೆಲೆ ನಿಂತಿತು ಅಂದಿಟ್ಟುಕೊಳ್ಳಿ ಅಲ್ಲಿಗೆ ಪರಿಸರ ಪ್ರಕೃತಿಯ ಕತೆ ಮುಗಿದಂತಯೆ. ಅದು ಆಗಲಿಲ್ಲ ಆಗಬಾರದು ಅಂತಾದರೆ ಹುಲು ಮಾನವನ ಪ್ರಯತ್ನ ಕಾಡು ಕಡಿದರೂ ಅಡ್ಡಿಯಿಲ್ಲ ಹೊಸ ಕಾಡು ಬೆಳೆಸುವುದು. ಕಾಡು ಬೆಳೆಸುವುದು ಅಂದರೆ ಪ್ರಶಸ್ತಿ ಸಿಗುವಷ್ಟರಮಟ್ಟಿಗಲ್ಲದಿದ್ದರೂ ತಿಂದ ಹಲಸಿನ ಬೀಜ ಎಲ್ಲೆಂದರಲ್ಲಿ ಬಿಸಾಕದೆ ಸೂಕ್ತ ಜಾಗದಲ್ಲಿ ಗಿಡ ಮರವಾಗುವಂತಹ ಜಾಗದಲ್ಲಿ ಇಡುವುದು. ಎಂಬಂತಹ ಸಣ್ಣ ಪುಟ್ಟ ಅಳಿಲುಸೇವೆಯಿಂದ ಪ್ರಕೃತಿಯ ರಕ್ಷಣೆಯಂತ ದೊಡ್ಡ ಮಾತಲ್ಲದಿದ್ದರೂ ನಾವು ನೆಟ್ಟಗಿಡ ವೆಂಬ ಗಿಡ ಮರವಾಗಿ ಹಣ್ಣು ಬಿಟ್ಟ ಆನಂದ ಹೊಂದಬಹುದು.
ಇರಲಿ ಅವೆಲ್ಲಾ ಒಂದೆಡೆ ನಿಮಗೆ ಇನ್ನೊಂದು ಸತ್ಯ ಹೇಳಿಬಿಡುತ್ತೇನೆ. ೨೦೧೨ ರ ಪ್ರಳಯ ಅಂತ ಗುಲ್ಲೆದ್ದಿದೆಯಲ್ಲ ಅದು ಸತ್ಯವೇ ಆದ್ರೆ ೨೦೧೧ ರಲ್ಲಿ "ಅಬ್ಬಿ ನೀರು" ನಿಲ್ಲುತ್ತದೆ. ಹಾಗಾದಕೂಡಲೇ ನಾನು ನಿಮಗೆಲ್ಲಾ ತಿಳಿಸುತ್ತೇನೆ, ನೀವು ಬೇರೆಯ ಗ್ರಹಕ್ಕೆ ಹೊರಡುವ ತಯಾರಿ ನಡೆಸಬಹುದು...!

Tuesday, February 9, 2010

ಪ್ರಜಾಪ್ರಭುತ್ವದ ನಾಲ್ಕನೇ ............!

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಂತೆ ಪತ್ರಿಕೆಗಳು. ಬಹಳಾ ಬಹಳಾ ಜವಾಬ್ದಾರಿಯುತವಾಗಿ ವರ್ತಿಸುತ್ತವಂತೆ. ಅವುಗಳು ಇಲ್ಲದಿದ್ದರೆ ಸಿಕ್ಕಾಪಟ್ಟೆ ಅನಾಹುತಗಳು ಆಗಿಬಿಡುತ್ತವಂತೆ. ಹೀಗೆ ಅಂತೆಕಂತೆಗಳ ಬೊಂತೆಯನ್ನು ಸೃಷ್ಟಿಸಿದವರೇ ಪತ್ರಿಕೋದ್ಯಮಿಗಳು ಎನ್ನುವುದು ಬೇರೆಯದೇ ವಿಷಯವಾದರೂ ಅದರಲ್ಲಿ ಸತ್ಯಾಂಶವಿದೆ. ಎಂತೆಂತಹಾ ಹಗರಣಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಸರ್ಕಾರಗಳನ್ನೇ ಕೆಡವಿದ ಉದಾಹರಣೆ ಸಿಗುತ್ತದೆ.

ಆದರೆ ದಶಕಗಳಿಂದೀಚೆಗೆ ಪತ್ರಿಕೆಗಳು ಅಥವಾ ಮಾಧ್ಯಮಗಳು ಅನಾಹುತವನ್ನೇ ಸೃಷ್ಟಿಮಾಡುತ್ತಿವೆಯಾ ಅಂತ ಪ್ರಶ್ನೆ ಸಾಮಾನ್ಯ ನಾಗರೀಕರನ್ನೂ ಕಾಡದಿರದು. ಹಣ ಮಾಡುವುದೇ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಂತೆ ವರ್ತಿಸುತ್ತಿರುವ ಹಲವು ಮಾಧ್ಯಗಳನ್ನು ಅವುಗಳ ಬೆಳವಣಿಗೆಗಳನ್ನು ಗಮನಿಸಿದರೆ "ಅಟ್ರಾಸಿಟಿ" ಕೇಸಿನ ದುರುಪಯೋಗವಾದಂತೆ ಪತ್ರಿಕೋದ್ಯಮದಲ್ಲಿರುವವರು ನಿಯತ್ತಿನ ಜನ ಪತ್ರಕರ್ತರು ಪ್ರಾಮಾಣಿಕರು ಎಂದು ನಂಬಿಕೊಂಡು ಬಂದ ಜನಸಾಮಾನ್ಯರ ನಂಬಿಕೆಯ ದುರುಪಯೋಗವಾದಂತೆ ಭಾಸವಾಗುತ್ತಿದೆ.

ಸಮಾರಂಭಗಳಲ್ಲಿ ಸ್ವಾಗತ ಪತ್ರಕರ್ತರಿಗೆ ಸರಿಯಾಗಿ ಕೋರಿಲ್ಲ ಎಂಬ ವಿಷಯಕ್ಕೆ ಪ್ರತಿಭಟನೆ ಮಾಡುವುದರಿಂದ ಹಿಡಿದು ಕಪೋಲಕಲ್ಪಿತ ವರದಿಗಳಿಗೆ ಪ್ರಾಮುಖ್ಯತೆ ನೀಡಿ ಹಣ ಮಾಡುತ್ತಿರುವ ಪತ್ರಿಕೆಗಳ ವಿರುದ್ಧ ದನಿ ಎತ್ತಿದರೂ ಅದರ ಕುರಿತಾಗಿ ಪ್ರತಿಭಟನೆ ಮಾಡುವ ಮಟ್ಟಕ್ಕೆ ಪತ್ರಿಕೆಗಳ ಹೊತ್ತಿರುವವರು ಬಂದು ತಲುಪಿದ್ದಾರೆ. ವಾಸ್ತವ ಸತ್ಯವೆಂದರೆ ರಾಜಕೀಯ ಮತ್ತು ರಾಜಕಾರಣಿಗಳಿಗಿಂತ ಕೆಳಮಟ್ಟದಲ್ಲಿ ಇಂದು ಪತ್ರಿಕೆಗಳಿವೆ. ರಾಜಕಾರಣಿಯ ಸ್ವಾರ್ಥದಾಸೆಗಾದರೂ ಒಂದಿಷ್ಟು ಸಾರ್ವಜನಿಕ ಕೆಲಸಗಳಾಗುತ್ತವೆ. ಆದ್ರೆ ಇಲ್ಲಿ ಹಾಗಲ್ಲ.

ಸರ್ಕಾರದಲ್ಲಿ ಜನಸಾಮಾನ್ಯರ ಹಣವನ್ನು ಲೂಟಿ ಮಾಡಲು ಈಗ ಪತ್ರಿಕೆ ನಡೆಸುವುದೂ ಒಂದು ದಂಧೆಯಾಗಿ ಪರಿಣಮಿಸಿದೆ. ನಾನು ಕಂಡಂತೆ ನಮ್ಮ ತಾಲ್ಲೂಕಿನಲ್ಲಿನಲ್ಲಿ ಹತ್ತು ಹಲವಾರು ಪತ್ರಿಕೆಗಳ ನಡೆಸುವ ಜನರಲ್ಲಿ ಕೆಲವರು ಪೋಲೀಸ್ ಕೇಸ್ ಡೀಲಿಂಗ್ ಕೂಡ ನಡೆಸುತ್ತಿದ್ದಾರೆ. ಸಂಘ ಮಾಡಿಕೊಂಡು ವಿಶೇಷ (ಸೈಟು ಮನೆ) ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನೆಪಕ್ಕೆ ಒಂದು ಪುಟದ ಪತ್ರಿಕೆ ಇಟ್ಟುಕೊಂಡು ವ್ಯವಸ್ಥಿತವಾಗಿ ಜನರಿಗೆ ಲಕ್ಷಗಟ್ಟಲೆ ಹಣ ಪಂಗನಾಮ ಹಾಕಿದರೂ ಇದ್ದಾರೆ. ಬ್ಲಾಕ್ಮೇಲ್ ತಂತ್ರ ಬಳಸಿ ಹಣ ಬಾಚುವವರು ಇದ್ದಾರೆ. ಪ್ರೆಸ್ ಕ್ಲಬ್ ಎಂಬ ಸರ್ಕಾರಿ ಕಾನೂನನ್ನು ಸ್ವಂತಕ್ಕೆ ಬಳಸಿಕೊಂಡು ಅದನ್ನು ಜೂಜಿನ ಅಡ್ಡೆ ನಡೆಸುವವರಿಗೆ ಬಾಡಿಗೆಗೆ ಕೊಟ್ಟು ತಿಂಗಳು ತಿಂಗಳೂ ಹಣ ಎಣಿಸಿಕೊಂಡ ಉದಾಹರಣೆ ಇದೆ. ಇವುಕ್ಕೆಲ್ಲಾ ಶ್ರೀರಕ್ಷೆ ಸರ್ಕಾರ "ಪತ್ರಕರ್ತರು" ಎಂದು ಕೊಟ್ಟ ಮಾನ್ಯತೆ. ಜನಸಾಮಾನ್ಯರು ಅವರು ಪ್ರಾಮಾಣಿಕರು ಎಂದು ತಿಳಿದುಕೊಂಡ ಕಾರಣ.
ಕರ್ನಾಟಕ ರಾಜ್ಯವೊಂದರಲ್ಲೇ ಸಹಸ್ರಾರು ಪತ್ರಿಕೆಗಳಿವೆ. ತಾಲ್ಲೂಕಾ ಸೆಂಟರ್ ಜಿಲ್ಲಾಕೇಂದ್ರ ದಿಂದ ಹೊರಡುವ ಸಹಸ್ರಾರು ಪತ್ರಿಕೆಗಳಲ್ಲಿ ಹಲವು ಪತ್ರಿಕಾಧರ್ಮವನ್ನು ಗಾಳಿಗೆ ತೂರಿ ತಲೆಹಿಡಿಯುವ ಕೆಲಸದಲ್ಲಿನ ನಿರತವಾಗಿವೆ. ತಾವು ಮುದ್ರಿಸುವ ಪ್ರತೀ ಕಾಗದದ ಹಿಂದೆ ವೃಕ್ಷವೊಂದರ ಸಾವು ಇದೆ ಎಂಬ ಪ್ರಾಥಮಿಕ ಅರಿವೂ ಇರದ ಈ ಪತ್ರಿಕೆಗಳು ಹಾಗೂ ಪತ್ರಕರ್ತರಿಂದ ಸಾಮಾಜಿಕ ಪಿಡುಗೇ ವಿನಹ ಮತ್ತಿನ್ಯಾವ ಕವಡೆಕಾಸಿನ ಪ್ರಯೋಜನವೂ ಇಲ್ಲ. ಪತ್ರಿಕಾ ಕಾನೂನುಗಳು ಬರಪ್ಪೂರ್ ಬದಲಾವಣೆಯಾಗಬೇಕಿದೆ. ಕನಿಷ್ಠ ಪ್ರಸಾರ, ಸುದ್ಧಿ ಬದ್ಧತೆ, ವಾರ್ಷಿಕ ಲೆಕ್ಕ, ಮುಂತಾದವುಗಳನ್ನು ಸಮರ್ಪಕವಾಗಿ ಪರಿಗಣಿಸಿ ನಾಯಿಕೊಡೆಯಂತಿರುವ ಪತ್ರಿಕೆಗಳಿಗೆ ಕಡಿವಾಣ ಹಾಕದಿದ್ದರೆ ಕಾಡನ್ನು ಉಳಿಸುವ ಕತೆ ಆಮೇಲಾಯಿತು ನಾಡನ್ನು ಉಳಿಸುವುದೂ ಕಷ್ಟವೇ.
ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೊರ್ಯಾರು? ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

ಅಪ್ಪಿಯೂ ಕೆರೆ ಕುಂಟೆಯೂ


ನೀರೆಂದರೆ ಭಯವೇನೆ... ಆದರೂ ಸ್ವಲ್ಪವೇ ಸ್ವಲ್ಪ ನೀರಿನ ಚಟ ಹತ್ತಿತೆಂದರೆ ಅದರ ಮಜ ಅನುಭವಿಸದವರಿಗೆ ಗೊತ್ತು. ಇಳಿಯುವ ಮುಂಚೆ ಛಳಿ ಛಳಿ ಛಳಿ ಅಯ್ ಅಮ್ಮಾ ಇಲ್ಲಪ್ಪ ನನ್ನ ಬಳಿ ಸಾದ್ಯವಾಗದು ಅಂತೆಲ್ಲ ಅನ್ನಿಸುವುದು ಇದೆ. ಆದರೆ ಒಮ್ಮೆ ಧುಮಿಕಿದರೆ ಆಮೇಲೆ ನೀರಿಗಿಳಿದಮೇಲೆ ಛಳಿಯ...... .
ನಾವೂ ಸಣ್ಣಕ್ಕಿದ್ದಾಗ ನೀರಿನಲ್ಲಿ ಆಟವಾಡಿದ್ದುಂಟು. ತೋಟದ ಮೈನ್ ಕಾದಿಗೆಯ ಹೆಗ್ಗಟ್ಟಿನಲ್ಲಿ ನಮ್ಮದು ಹಾರಾಟಾ ನೀರಾಟ ಎಲ್ಲ. ಹೆಚ್ಚೆಂದರೆ ನಾಲ್ಕು ಅಡಿ ಆಳದ ನೀರಿರುವ ಹೆಗ್ಗಟ್ಟು ಅಂದು ನಮಗೆ ದೊಡ್ಡ ಸಮುದ್ರವಿದ್ದಂತೆ. ದಡಾಲ್ ಎಂದು ಧುಮುಕಿದ ಮರುಕ್ಷಣ ಕೆಂಪುಬಣ್ಣಕ್ಕೆ ತಿರುಗುವ ನಾಲ್ಕಡಿ ನೀರಿನಲ್ಲಿ ಪಚ ಪಚ ಅಂತ ಕೈಕಾಲು ಬಡಿದು ಮನೆ ಸೇರಿದರೆ ಅಂದೆಲ್ಲಾ ಮೈ ತುರಿಕೆ. ಆನಂತರ ಸ್ವಲ್ಪ ಪ್ರಮೋಷನ್. ಬಾಳೆ ದಿಂಡನ್ನು ಕಡಿದು ಅದಕೆ ಹಗರು ಹೊಡೆದು ಅದನ್ನು ಹಿಡಿದುಕೊಂಡು ಹತ್ತಡಿ ಆಳದ ಯಕ್ಷಮ್ಮನ ಕೆರೆ ನಮ್ಮ ಸ್ವಿಮಿಂಗ್ ಪೂಲ್. ಅಲ್ಲಿ ನೀರು ಸ್ವಚ್ಛ. ಹೀಗೆಲ್ಲಾ ಮಾಡಿ ಈಜು ಕಲಿತಿದ್ದಾಗಿದೆ.
ಈಗ ಮಗ ಈಸಬೇಕು ಅಂದಾಗ ಅಪ್ಪಯ್ಯನೆಂಬ ಅಪ್ಪಯ್ಯನಾದ ನಾನು ಸಕಲ ವ್ಯವಸ್ಥೆ ಮಾಡಿಕೊಡಬೇಕು. ಜಾಕೆಟ್ ಸ್ವಚ್ಛನೀರಿನ ಕೆರೆ ಆನಂತರ ಅಪ್ಪಿಯ ಅಮ್ಮನ ಅಣತಿಯಂತೆ ಅಪ್ಪಿ ಅತ್ತಿತ್ತ ಆಗದಂತೆ ಅಪ್ಪಿಯ ಅಪ್ಪನಾದ ನನ್ನಿಂದ ಸರ್ಪಗಾವಲು( ಅದು ಕೆರೆಯಾದ್ದರಿಂದ ನೀರುಳ್ಳೆಗಾವಲು ಅಂತ ಬದಲಾಯಿಸಿಕೊಳ್ಳಿ)
ಇರಲಿ ಕಾಲಕ್ಕೆ ತಕ್ಕಂತೆ ಅವೆಲ್ಲಾ . ವಿಷಯ ಅದೆಲ್ಲ ಈ ನೀರಿನಲ್ಲಿ ಈಸು ಇದೆಯಲ್ಲಾ ಪ್ರಕೃತಿ ಸಕಲ ಪ್ರಾಣಿಗಳಿಗೆ ಸಹಜವಾಗಿಟ್ಟಿದೆ. ಹುಟ್ಟಾ ಸಣ್ಣ ನೀರನ್ನೇ ನೋಡಿರದ ನಾಯಿಯನ್ನು ನೀರಿಗೆಸೆದರೆ ಪಟಪಟ ಈಸುತ್ತಾ ಕ್ಷಣಮಾತ್ರದಲ್ಲಿ ದಡ ಸೇರಿಬಿಡುತ್ತದೆ. ದನ ಎಮ್ಮೆ ಕುದುರೆ ಯಾವುದೇ ಇರಲಿ ಅದು ಹೀಗೆಯೇ. ಆದರೆ ಅದೇ ವರ್ಗಕ್ಕೆ ಸೇರಿದ ಪ್ರಾಣಿಯಾದ ಮನುಷ್ಯನಾದ ನಮಗೆ ಮಾತ್ರಾ ಹಾಗಲ್ಲ. ಅದೊಂದು ವಿದ್ಯೆ ಅದನ್ನು ಕಲಿಯಬೇಕು ಅಂಬ ಭಯಬಿತ್ತಲಾಗಿದೆ ಬಿಂಬಿಸಲಾಗಿದೆ.
ವಾಸ್ತವ ಹಾಗಲ್ಲ. ನೀರೆಂಬ ನೀರಿನಲ್ಲಿ ನಮ್ಮ ಭಯ ನಮ್ಮನ್ನು ಮುಳುಗಿಸುತ್ತದೆ ಧೈರ್ಯ ನಮ್ಮನ್ನು ತೇಲಿಸುತ್ತದೆ. ಧೈರ್ಯ ಎಂಬುದು ಮಟಾಮಾಯವಾದ್ದರಿಂದ ಈಸನ್ನು ನಾವು ಕಲಿಯಬೇಕಿದೆ. ಕಲಿತು ತೇಲಬೇಕಿದೆ. ತೇಲಿ ಸ್ವರ್ಗ ಸುಖವನ್ನು ಅನುಭವಿಸಬೇಕಿದೆ.
ತಲೆತಲಾಂತರದಿಂದ ಭಯದ ಬೀಜ ಮನುಷ್ಯನ ಜೀನ್ ಗಳಲ್ಲಿ ಹೊಕ್ಕು ಪ್ರಕೃತಿ ಪುಕ್ಕಟ್ಟೆ ನೀಡಿದ್ದ ಶಕ್ತಿಯನ್ನು ನಾವು ಹುಲುಮಾನವರಿಗೆ ಹಣ ಕೊಟ್ಟು ಕಲಿಯಬೇಕಾದ್ ಪರಿಸ್ಥಿತಿ ಬಂದಿದೆ. ಹಾಗಂತ ಇದನ್ನು ಓದಿದ ನೀವು ನನಗೆ ಭಯ ಇಲ್ಲಪ್ಪ ಎಂದು ದುಡುಂ ಎಂದು ನೀರಿನಲ್ಲಿ ಹಾರಿಬಿಟ್ಟೀರಿ. ಹಾರಿದಮೇಲೆ ಅವರು ಇವರು ಹೇಳಿದ ಕತೆ ನೇನಪಾಗಿ ಗಟಗಟ ನೀರು ಕುಡಿದು ಹೊಗೆಹಾಕಿಸಿಕೊಳ್ಳಬೇಕಾಗುತ್ತದೆ. ಹೀಗೆ ನಾವು ನೀವು ಮತು ನಮ್ಮ ಮರಿ ಮಕ್ಕಳವರೆಗೂ ನೀರೆಂದರೆ ಭಯ ಅಲ್ಲ ಸಹಜ ಎಂದು ಹೇಳುತ್ತಾ ಸಾಗಿದರೆ ಮುಂದೆ ಯಾವುದೋ ಪೀಳಿಗೆಯಲ್ಲಿ ಧೈರ್ಯ ಬರಬಹುದು. ಅಲ್ಲಿಯವರೆಗೆ ಕಾಯುವುದು ನಮ್ಮ ನಿಮ್ಮ ಕೈಯಲಿ ಆಗದ ಕೆಲಸ. ಹಾಗಾಗಿ ಈಗ ಕಲಿಯುವುದೇ ಲೇಸು. ಕಲಿತು ಮಜ ಅನುಭವಿಸುವುದೇ ಮಜ. ಆಗ ಧೈರ್ಯ ಹುಟ್ಟುತ್ತದೆ ಮನಸ್ಸಿನಾಳದಲ್ಲಿ ಅದು ಮೆದುಳಮೂಲಕ ರಕ್ತಕ್ಕೆ ಇಳಿದು ನಿಮ್ಮ ಪೀಳಿಗೆಯಲ್ಲಿ ಮುಂದುವರೆದರೆ ಆಗ " ನೀರೆಂದರೆ ಖುಷಿಯೇನೆ ತಕದಿಮಿ ತಕದಿಮಿ ಮಜವೇನೆ..." ಅಂತ ಹಾಡಬಹುದು.

Saturday, February 6, 2010

ಮಿಟುಕಲಿಲ್ಲ ಮಿಸುಕಾಡಲಿಲ್ಲ


ಬದುಕಿನ ಘಟ್ಟಗಳಲ್ಲಿ ಒಬ್ಬೊಬ್ಬರದು ಒಂದೊಂದು ಸೇವೆ. ಸೃಷ್ಟಿ-ಸ್ಥಿತಿ-ಲಯ ಅಂತ ವಿಭಾಗ . ಒಂದಿಷ್ಟು ಜನ ಬೆಳೆಯುತ್ತಾರೆ, ಮತ್ತೊಂದಿಷ್ಟು ಜನ ಬೆಳೆಸುತ್ತಾರೆ ಮಗದೊಂದಿಷ್ಟು ಜನ ಮುಗಿಸುತ್ತಾರೆ. ಹಾಗಾಗಿ ಇದು ಹೆಚ್ಚು ಇದು ಕಡಿಮೆ ಎಂಬುದಿಲ್ಲ. ಎಲ್ಲವೂ ಎಲ್ಲರೂ ಸಮಾನರು. ಹುಟ್ಟಿಗೆ ಕಾರಣಕರರ್ತನೂ ಸಾವಿನ ಪೋಷಕನೂ ಎಲ್ಲರೂ ಬೇಕು. ಆದರೆ ಯಾವುದು ಎಲ್ಲಿ? ಯಾರು? ಮುಂತಾದ ಬಗೆಹರಿಸಲಾರದ ಗೊಂದಲ ಬಂದಾಗ " ತೇನವಿನಾ ತೃಣಮಪಿ ನಚಲತಿ" ಅಂತ ನಂಬಬೇಕು. ಒಮ್ಮೆ ಹಾಗೆ ನಂಬಿದಿರೋ ಅಲ್ಲಿಂದ ಪ್ರತೀ ಹಂತಕ್ಕೂ ಹಾಗೆಯೇ ಮುಂದುವರೆಯಬೇಕು. ನಂಬಿದ ನಂಬಿಕೆಯಲ್ಲಿ ಅನುಮಾನಗಳಿದ್ದರೆ ಎಲ್ಲವೋ ಆಯೋಮಯ. ಪರಿಪೂರ್ಣವಾದ ನಂಬಿಕೆಗೆ ಪಾತ್ರರಾದಿರೋ ಅಲ್ಲಿಗೆ ಜಗತ್ತು ಗೆದ್ದ ಭಾವನೆ ಬೆಳೆಯುತ್ತದೆ. ಯಾರೋ ಬುದ್ಧಿವಂತರು ಹೊಸೆದ ಕತೆಯೊಂದು ಅದ್ಬುತ ಸಾರಾಂಶವನ್ನು ಹೀಗೆ ಹೇಳುತ್ತದೆ.
ಯಥಾಪ್ರಕಾರ ಒಂದೂರು. ಆದರೆ ಮುಂದೆ ಇಲ್ಲಿ ರಾಜನ ಬದಲು ಸನ್ಯಾಸಿ. ಆತ ತನ್ನಪಾಡಿಗೆ ತಾನು ಜಪತಪ ಮಾಡುತ್ತಾ ಒಂಟಿ(!) ಜೀವನ ನಡೆಸುತ್ತಿದ್ದ. ಹೀಗೆ ಕಾಲ ಕಳೆಯುತ್ತಿರಬೇಕಾದರೆ ಆ ಊರಿನ ಸ್ಪುರದ್ರೂಪಿ ಯುವತಿಯಿಂದ ಸಮಸ್ಯೆಯೊಂದು ಬಂತು. ವಿವಾಹಪೂರ್ವದಲ್ಲಿ ಆಕೆ ಗರ್ಭವತಿಯಾಗಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.( ಮಾಲಾ ಡಿ ಇಲ್ಲದ ಕಾಲದ ಕತೆ ಇದು...!) . ಹಳ್ಳಿ ಹೈಕಳಿಂದ ಹಿಡಿದು ಬೊಚ್ಚು ಬಾಯಿಯವರೆಗೆ ಸುದ್ದಿಯೋ ಸುದ್ದಿ. ಸರಿ ಅಷ್ಟೆಲ್ಲಾ ಸುದ್ದಿಯಾದ ಮೇಲೆ ಪಂಚಾಯಿತಿ ಸೇರಲೇಬೇಕಲ್ಲ.! ಅದೂ ಸೇರಿತು. ಆಕೆಗೆ ಕೇಳಿದ "ಯಾರಮ್ಮ ನಿನ್ನ ಈ ಅವಸ್ಥೆಗೆ ಕಾರಣ?" ಅಂತ ಗಡಸು ದನಿಯಲ್ಲಿ ಕೇಳಿದರು ಪಂಚಾಯ್ತಿದಾರರು. ಆಕೆಯೋ ಮುಸಿಮುಸಿ ಅಳುತ್ತಾ ಸನ್ಯಾಸಿಯತ್ತ ಕೈತೋರಿಸಿಬಿಟ್ಟಳು. ಒಮ್ಮೆಲೆ ಇಡೀ ಊರೇ ಸ್ಥಬ್ಧ. ಮರುಕ್ಷಣ ಮುಸಿಮುಸಿ ಪಿಸುಪಿಸು ಡೈಲಾಗ್ ಉದರತೊಡಗಿತು. ಕಳ್ಳ ಸನ್ಯಾಸಿ- ಹಲ್ಕಟ್ ಸನ್ಯಾಸಿ- ಮೋಸಗಾರ- ವೃಥಾ ನಾವು ಇವನ್ನ ನಂಬಿದೆವಲ್ಲ, ಮುಂತಾಗಿ. ಸನ್ಯಾಸಿಗೆ ಇವೆಲ್ಲ ಮಾತುಗಳು ಕೇಳಿಸಿದವು. ಆದರೆ ಆತ ಒಂದಿನಿತೂ ಮಿಟುಕಲಿಲ್ಲ ಮಿಸುಕಾಡಲಿಲ್ಲ. ( ಗೌರಿ ಲಂಕೇಶ್,ರವಿ ಬೆಳಗೆರೆ, ಟಿ ವಿ ನೈನ್ , ಮುಂತಾದಂತಹ ಇಂಥಹ ಬೇಡದ ವಿಷಯಗಳಿಗೆ ಬಣ್ಣ ಹಚ್ಚಿ ರಾಯಲ್ ಬದುಕು ಸಾಗಿಸಬಹುದು ಎಂಬ ತಿಳುವಳಿಕೆ ಜನ ಇರದಿದ್ದ ಕಾಲ ಅದು) ಪಂಚಾಯ್ತಿಯ ಮುಖಂಡರೂ ಗುಸುಗುಸು ಪಿಸಪಿಸ ಮಾಡಿ ನಂತರ ಒಂದು ತೀರ್ಮಾನ ನೀಡಿದರು. ಕೆಟ್ಟ (ನಿಜವಾಗಲೂ ಸೃಷ್ಟಿ ಒಳ್ಳೆಯ ಕೆಲಸ ಅಂತ ಎಲ್ಲರೂ ಅಂದುಕೊಂಡಿದ್ದಾರೆ) ಕೆಲಸ ಮಾಡಿದ ಸನ್ಯಾಸಿಗೆ ಇನ್ನು ಮುಂದೆ ಊರಿನಲ್ಲಿ ಯಾರೂ ಅನ್ನ ಆಹಾರ ನೀಡಬಾರದು, ಮತ್ತು ಈ ಮಗುವಿನ ಜನ್ಮಕ್ಕೆ ಕಾರಣನಾದ ಆತನೆ ಇದರ ಪಾಲನೆ ಪೋಷಣೆ ಮಾಡಬೇಕು( ಯಾರೋ ಸಿಕ್ಕಾಪಟ್ಟೆ ಬುದ್ದಿ ಓಡಿಸುವ ಪಂಚಾಯ್ತಿದಾರರು ನೋಡಿ, ಸ್ಪುರದ್ರೂಪಿ ಯುವತಿ ಸನ್ಯಾಸಿಯೊಡನೆ ಬಾಳಬೇಕು ಅನ್ನಲಿಲ್ಲ.! ಆಕೆ ಖಾಲಿ ಇರಬೇಕು...!) ಎಂಬ ತೀರ್ಪನ್ನಿತ್ತರು. ಸನ್ಯಾಸಿ ಆಗಲೂ ವಿಚಲಿತನಾಗದೆ ಮುಗಳ್ನಗುತ್ತಾ ಇದ್ದ. ಮುಖದಲ್ಲಿ ಮಂದಹಾಸವಿತ್ತು. ಯುವತಿ ಮಗುವನ್ನು ಸನ್ಯಾಸಿಯ ಬಳಿ ಬಿಟ್ಟು ಹೊರಟಳು. ಪಂಚಾಯ್ತಿ ಬರ್ಕಾಸ್ತಾಯಿತು. ಜನ ಸನ್ಯಾಸಿಗೆ ತಲೆಗೊಂದರಂತೆ ಮಾತನಾಡಿದರು. ಆದರೆ ಸನ್ಯಾಸಿ ಏನೂ ನಡದೇ ಇಲ್ಲವೆಂಬಂತೆ ಗೊಂಬೆಯಂತಿದ್ದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು "ಛಿ ಕಳ್ಳ" ಎಂದು ಮುದ್ದಿಸತೊಡಗಿದ. ಜನರು ಇನ್ನಷ್ಟು ಅನ್ನಲು ಶುರುಮಾಡಿದರು. "ನೋಡಾ ಮಗು ಅವನಲ್ಲದಿದ್ದರೆ ಹೀಗೆ ಮುದ್ದಾಡುತಿದ್ದನಾ...? ಕಳ್ಳ ಕೊರಮ ಪಟಿಂಗ ಹೋಗಿ ಹೋಗಿ ನಾವು ಇವನಿಗೆ ಪೂಜೆ ಮಾಡಿದೆವಲ್ಲ." ಮುಂತಾಗಿ. ಸನ್ಯಾಸಿ ಯಥಾಪ್ರಕಾರ ನಿರುಮ್ಮಳನಾಗಿದ್ದ. ಸಮಯದ ನಂತರ ಮಗು ಹಸಿವೆಯಾಗಿ ಅಳಲು ಶುರುಮಾಡಿತು. ಸನ್ಯಾಸಿಗೆ ಈಗ ಸಮಸ್ಯೆ. ಆಹಾರ ಅವನ ಬಳಿ ಇಲ್ಲ ಊರವರು ನೀಡರು. ಆಗ ಸನ್ಯಾಸಿ ಮಗುವನ್ನೆತ್ತಿಕೊಂಡು ಊರ ಮೇಲೆ ಆಹಾರ ನೋಡೋಣ ಎಂದು ಹೊರಟ." ಮಗು ಹಸಿವೆಯಿಂದ ಅಳುತ್ತಿದೆ ಏನಾದರೂ ಕೊಡಿ ಅದಕ್ಕೆ " ಎಂದು ಕೇಳಿದ. ಊರಿನವರು ದಢಾರನೆ ಬಾಗಿಲು ಹಾಕಿಕೊಂಡರು. ಅಂತಿಮವಾಗಿ ಸನ್ಯಾಸಿ ಸ್ಪುರದ್ರೂಪಿ ಯುವತಿಯ ಮನೆಬಾಗಿಲಿಗೆ ಬಂದ ಮತ್ತು "ನನಗಲ್ಲ ಹಸುಗೂಸಿಗೆ ಬಿಕ್ಷೆ ನೀಡಿ" ಎಂದ. ಯಾರಿಗೂ ಏನನ್ನಿಸದಿದರೂ ಎದೆಯಲ್ಲಿ ಹಾಲೆಂಬ ಸತ್ಯವನ್ನು ಬಚ್ಚಿಟ್ಟುಕೊಂಡ ಯುವತಿಗೆ ತಡೆದುಕೊಳ್ಳಲಾಗಲಿಲ್ಲ. ಆಕೆಯ ತಾಯ್ತನ ಬಡಿದೆಬ್ಬಿಸಿತು. ಆಕೆ ಓಡೋಡಿ ಬಂದು " ಸ್ವಾಮಿ ನಾನು ಮಹಾಪರಾಧ ಮಾಡಿದ್ದೇನೆ, ಈ ಮಗುವಿನ ಕಾರಣಕರ್ತರು ನೀವಲ್ಲ, ಅದೇ ...... ಆ ಯುವಕ, ಆದರೆ ಅವನ ಹೆಸರನ್ನು ಹೇಳಿದರೆ ಅವನನ್ನು ಕೊಂದೇಬಿಡುತ್ತಾರೆ ಹಾಗಾಗಿ ನಾನು ಸುಳ್ಳು ಹೇಳಿದೆ, ನೀವು ನನ್ನ ಕಣ್ಣು ತೆರೆಸಿದಿರಿ " ಎಂದು ಹೇಳಿ ಮಗುವನ್ನು ಕಸಿದುಕೊಂಡು ಹಾಲುಣಿಸಿದಳು. ಆಗಲೂ ಸನ್ಯಾಸಿ ಮುಗುಳ್ನಕ್ಕ. ಸುದ್ದಿ ತಿಳಿದ ಊರಿಗೆ ಊರೇ ಅಲ್ಲಿ ಸೇರಿತು. ಸನ್ಯಾಸಿಯ ಮೇಲೆ ವೃಥಾ ಅಪರಾಧ ಹೊರೆಸಿದ್ದಕ್ಕೆ ನೊಂದಿತು ಮತ್ತು ಕ್ಷಮೆ ಕೇಳಿತು. ಸನ್ಯಾಸಿಗೆ "ದೇವರಂತವರು ನೀವು, ಪೂಜನೀಯರು ನೀವು, ಅಂತ ಉಘೇ ಉಘೇ ಅನ್ನತೊಡಗಿತು.
ಆದರೆ ಸನ್ಯಾಸಿ ಈಗಲೂ ಮಿಟುಕಲಿಲ್ಲ ಮಿಸುಕಾಡಲಿಲ್ಲ.
ಊರಿನ ಮುಖಂಡನೊಬ್ಬ ಸನ್ಯಾಸಿಯ ಬಳಿ ಬಂದು ಪಾದಕ್ಕೆರಗಿ " ಅಯ್ಯಾ ಮಹಾತ್ಮ ಆಕೆ ನಿಮ್ಮ ಮೇಲೆ ಅಪವಾದ ಹೊರೆಸಿದಾಗ ನೀವು ಅಲ್ಲಗಳೆಯಬಹುದಿತ್ತು, ಜನರೆಲ್ಲಾ ನಿಮ್ಮನ್ನು ಏನೇನೋ ಅನ್ನುವಂತಾಯಿತು ಕ್ಷಮಿಸಿ" ಎಂದರು.
ಆಗ ಸನ್ಯಾಸಿ " ಆಗಲೂ ನೀವು ಏನೇನೋ ಅಂದಾಗ ನಾನು ಅದಲ್ಲ ಈಗಲೂ ನೀವು ಏನೇನೋ ಅಂದಾಗ ನಾನು ಇದಲ್ಲ, ತೇನವಿನಾ ತೃಣಮಪಿ ನಚಲತಿ ಎಂದು ಭಗವಂತನನ್ನು ನಂಬಿದವನು ನಾನು, ಹೀಗೆಲ್ಲಾ ಆಗಿದ್ದು ಅವನಿಂದಲೇ ತಾನೆ? ಹಾಗಾಗಿ ಬೇಸರವೂ ಇಲ್ಲ ಸಂತೋಷವೂ ಸಲ್ಲ " ಎಂದು ಆಶ್ರಮದತ್ತ ನಡೆದ.
ಸರಿ ಈಗ ಕತೆ ಕೇಳಿಯಾಯಿತಲ್ಲ ವಿಷಯಕ್ಕೆ ಬರೋಣ. ಆ ಸನ್ಯಾಸಿಯ ಮಟ್ಟ ಪಾಮರರಿಗೆ ತಲುಪುವುದು ಕಷ್ಟ. ಆದರೆ ಈ ತರಹದ ಕಥೆ ಕೇಳಿದರೆ ಸ್ವಲ್ಪಮಟ್ಟಿಗೆ ನಾವು ಗುಡ್ಡವಾಗಬಹುದು. ಅದೋ ಮೇಲಿನ ಚಿತ್ರದಲ್ಲಿ ಒಂದು ಬರೊಬ್ಬರಿ ಚಂದದ ಬೆಟ್ಟವಿದೆ ಅದೆರೆದುರು ನಿಂತು " ಆಹಾ ನೀನೆಷ್ಟು ಸುಂದರ " ಅಂತ ಕೂಗಿ ಸುಮ್ಮನಾಗಿ. ಮತ್ತದೇ ಕೇಳುತ್ತದೆ. "ನೀನು ಕಚಡಾ.." ಎಂದು ಕೂಗಿ ಮತ್ತದೇ........... ಎಂಬಲ್ಲಿಗೆ ಬೆಟ್ಟವಾಗಿ ನೀವು ಇಡೀ ಜೀವನವೇ ಜಿಂಗಲಾಲ...
ತ್ಯಾಂಕ್ ಯು ಓದಿದ್ದಕ್ಕೆ.

Thursday, February 4, 2010

"ಆಲ್ ಈಸ್ ವೆಲ್"


ಶೀಟಿ ಬಜಾಕೆ ಬೋಲ್ "ಆಲ್ ಈಸ್ ವೆಲ್" , ವಾವ್ ಸೂಪರ್ ಸಿನೆಮಾ ೩ ಈಡಿಯಟ್ಸ್. ನಮಗೆ ಸಿನೆಮಾ ಇರಲಿ ಗುರುಗಳ ಹಿತೋಪದೇಶ ಇರಲಿ, ಸುಮಧುರ ಸಂಗೀತ ಇರಲಿ, ಯಕ್ಷಗಾನದ ಅರ್ಥ ಪದ್ಯ ಇರಲಿ ಅಥವಾ ಬರಹಗಳಿರಲಿ ತುಂಬಾ ಇಷ್ಟವಾಗಿ "ವಾವ್" ಎಂಬ್ ಉದ್ಘಾರ ಹೊರಡುವುದು ಅಂತಹದ್ದೊಂದು ವಿಚಾರ ನಮ್ಮ ಮೆದುಳೊಳಗೆ ಇದ್ದಾಗಲೆ. ನಮ್ಮ ಮಿದುಳೊಳಗೆ ಅದೇ ತರಹದ ಆಲೋಚನೆ ಇದ್ದಾಗ ಹೊರಗೆ ಅದಕ್ಕೆ ಇಂಥಹ ಆಹಾರ ಸಿಕ್ಕಾಗ ಸ್ಪಂದಿಸಿ ಸಂತೋಷ ಉಂಟಾಗುತ್ತದೆ.

ಹಿಗ್ಗಾಮುಗ್ಗ ಖಂಜೂಸ್ ಸ್ವಭಾವದ ಜನರಿಗೆ ಅಂತಹ ಪಾತ್ರವುಳ್ಳ ಸಿನೆಮಾಕ್ಕೆ ಯಾರಾದರೂ ಪುಕ್ಕಟೆ ಕರೆದುಕೊಂಡು ಹೋಗಿ ತೋರಿಸಿದರೆ ಚಕ್ಕನೆ ಇಷ್ಟವಾಗುತ್ತದೆ. ದೇವರು ಮಠ ಮಾನ್ಯ ಅಂತ ಇಷ್ಟವಿಲ್ಲದವರಿಗೆ ಕನ್ನಡದ ಮಠ ಸಿಕ್ಕಾಪಟ್ಟೆ ಖುಷ್. ಸ್ವಾಮಿಯೇ ಶರಣಂ ಅಯ್ಯಪ್ಪ ಭಕ್ತರಿಗೆ ಅದೇ ಸಿನೆಮಾ ಹಾರ್ಟ್ ಟಚ್. ಎಣ್ಣೆ ಹೊಡೆಯೋ ಅಭ್ಯಾಸವಿದ್ದವರಿಗೆ ಮತ್ತೊಬ್ಬರೂ ಅದೇ ಕೆಲ್ಸ ಮಾಡ್ತಾ ಇದಾರೆ ಅಂದಕೂಡಲೆ ಫುಲ್ ಖುಷ್. ಹುಡುಗಿ ಹಿಂದೆ ಬೀಳುವ ಮನಸ್ಸಿದ್ದವರಿಗೆ "ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು..." ಮುದ ನೀಡುತ್ತದೆ.

ಹೀಗೆಲ್ಲಾ ಇದೆ ಆದರೆ ನನಗೆ ೩ ಈಡೀಯಟ್ ಕುಷ್ ಕೊಟ್ಟಿಕಾರಣ. ಸಿಕ್ಕಾಪಟ್ಟೇ ಓದಿ ಕೆಲಸ ಮಾಡಿ ಹಣ ಸಂಪಾದಿಸುವುದರಲ್ಲಿ ಅರ್ಥವಿಲ್ಲ, ಜಾಲಿಯಾಗಿ ಇದ್ದರೆ ಓಕೆ , ಅಷ್ಟು ತಲೆಕೆಡಿಸಿಕೊಂಡು ಓದಿದ ಸೈಲೆನ್ಸರ್ ಜಾಲಿಯಾಗಿರುವ ಅಮೀರ್ ಕೆಳಗೆ ಬಂದುಬಿಡುತ್ತಾನೆ. ವಾವ್ ಸೂಪರ್ ಕಣ್ರಿ ಸೂಪರ್.

ನಾನೂ ಓದಲಿಲ್ಲ ಜಾಲಿಯಾಗಿದ್ದೆ ಆದರೆ ಓದದೆಯೋ ಅಮೀರ್ ಖಾನ್ ತರಹ ಬುದ್ದಿವಂತನಾಗಿರಲಿಲ್ಲ ಎಂಬುದು ಅರ್ಥವಾಗಿದ್ದರೆ
........!

Tuesday, February 2, 2010

" ಮಾತೃ ದೇವೋ ಭವ, ಪಿತೃ ದೇವೋ ಭವ"

ಬಾಸ್ ಕಮ್ ಅಪ್ಪಯ್ಯ ಮೊನ್ನೆ ತಾಳಗುಪ್ಪಕ್ಕೆ ಸ್ಕೂಟಿ ತೆಗೆದುಕೊಂಡು ಹೋದ ಅರ್ದ ಗಂಟೆಗೆ ರಾಘವೇಂದ್ರ ಕೆಫೆ ಮಂಜಣ್ಣನಿಂದ ಫೋನ್ ಬಂತು. "ಅಪ್ಪಯ್ಯ ನ ಸ್ಕೂಟಿಗೆ ಯಾರ‍ೋ ಕಾರು ತಗುಲಿಸಿ ಹೋಗಿದ್ದಾರ‍ೆ, ಆಸ್ಪತ್ರೆಯಲ್ಲಿ ಸೇರಿಸಿದ್ದೀನಿ ಬಾ" ತಡಬಡಾಯಿಸಿಕೊಂಡು ಮಾರುತಿ ಕಿರ್ ಗುಡಿಸಿ ಹೋದೆ. ಅಪ್ಪಯ್ಯ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದರು. ಎಂಬತ್ತು ವರ್ಷದ ಗಟ್ಟಿ ಜೀವ. "ನಿನ್ನತ್ರ ಬಯ್ಸಿಕೊಳ್ಳುವ ಕೆಲಸ ಮಾಡೀಬಿಟ್ಟೆ" ಎಂದರು. ಪಿಚ್ಚೆನಿಸಿತು. ನಾನು ಯಾವತ್ತೂ ಯಾರಿಗೂ ಬೈಯ್ಯುವವನಲ್ಲ, ಆದರೂ ಅಪ್ಪಯ್ಯನಿಗೆ ತಾನು ಎಂಬತ್ತು ವರ್ಷದ ಇಳಿ ವಯಸ್ಸಿನಲ್ಲಿ ಬೈಕಿನಿಂದ ಬಿದ್ದೆನಲ್ಲ ಎಂಬ ಗಿಲ್ಟ್ ಇರಬೇಕು, ಹಾಗಾಗಿ ಹಾಗೆ ಹೇಳಿರಬೇಕು. ಇರಲಿ ನಾನು ಮಾಮೂಲಿ ಯಾಗಿ ಭೇಟಿಯಾಗಿ ಮುಂದಿನ ಕ್ರಮದ ಬಗ್ಗೆ ಕೇಳಿದೆ. ಅವರು ಸಾಗರಕ್ಕೆ ಕರೆದುಕೊಂಡು ಹೋಗಿ ಎಂದರು. ಸಾಗರದ ಡಾಕ್ಟರ್ ಪ್ರಸನ್ನರ ಬಳಿ ಅಡ್ಡ ಮಲಗಿಸಿ ಉದ್ದ ಮಲಗಿಸಿ ಎಕ್ಸ್ ರೇ ತೆಗೆಸಿದ್ದಾಯಿತು. ಆನಂತರ ತೊಡೆ ಸೊಂಟಕ್ಕೆ ಸೇರುವ ಜಾಗದಲ್ಲಿ ಸಣ್ಣ ಬಿರುಕುಬಿಟ್ಟಿದೆ, ಅಲ್ಲಿ ಆಪರೇಟ್ ಮಾಡಲಾಗುವುದಿಲ್ಲ ಬೆಡ್ ರೆಸ್ಟ್ ಒಂದೇ ಪರಿಹಾರ ಎಂಬ ಸಲಹೆಯೊಂದಿಗೆ ಒಂದಿಷ್ಟು ಮಾತ್ರೆ ಪಡೆದು ಮನೆಗೆ ಬಂದಾಯಿತು. ಇನ್ನು ನಲವತ್ತೈದು ದಿವಸಗಳ ಕಾಲ ಅಪ್ಪಯ್ಯ ಮಂಚದಿಂದ ಇಳಿಯುವಂತಿಲ್ಲ. ನಾನೂ ಕೂಡ ರೀಚಬಲ್ ಏರಿಯಾದಲ್ಲಿಯೇ ಇರಬೇಕು ಎಂಬ ತೀರ್ಮಾನ ಅನಿವಾರ್ಯ. "ಭಟ್ರು ಮತ್ತೆ ಬೈಕಿನಿಂದ ಬಿದ್ದಿದ್ವಡ" ಎಂಬ ಸುದ್ದಿ ಕಿವಿಯಿಂದ ಕಿವಿಗೆ ದಾಟುತ್ತಿದ್ದಂತೆ ಹಲವರು ನಮ್ಮ ಮನೆಗೆ ಬರತೊಡಗಿದರು.
ಬಂದವರು ದುಗುಡದ ಮುಖದಲ್ಲಿ " ಅಯ್ಯೋ ಗ್ರಾಚಾರವೇ.." "ಹಿಂಗಾದ್ರೆ ಹ್ಯಾಂಗಾ ಮಾರಾಯಾ" ಮುಂತಾದ ಮಾಮೂಲಿ ಡೈಲಾಗ್ ಹೊಡೆದರೆ ಇನ್ನು ಕೆಲವರು "ಈ ವಯಸ್ಸಿನಲ್ಲಿ ಬೈಕ್ ಹೊಡಿತಾ ಹೇಳಿರೆ ಕೇಳ್ತ್ವಲ್ಲೆ ಅಲ್ದಾ" ಎಂದು ನಾನು ಕರಗುಟ್ಟುತ್ತೇನೆ ಎಂದು ಮುಂದುವರೆಸಲು ನನಗೆ ಬಿಡುತಿದ್ದರು. ನಾನು ಹೌದಾ ಮಾರಾಯ ಎಂದರೆ ಅವರಿಗೆ ಅದೇನೋ ಒಂಥರಾ ಆನಂದ. ಆದರೆ ನಾನು ಬಿಲ್ ಕುಲ್ ಹಾಗೆ ಹೇಳುವ ಗಿರಾಕಿ ಅಲ್ಲ. "ಅಯ್ಯ ಮುರಿಯದೇ ಆದ್ರೆ ಬೈಕ್ ಅಲ್ದಿದ್ರೂ ಆಕ್ತಿತು ತಗ" ಆದರೆ ಅವರಿಗೆ ನನ್ನ ಈ ಡೈಲಾಗ್ ಖುಷಿ ಇಲ್ಲ, " ಆದ್ರೂ...." ಅಂಬ ರಾಗ ಅತ್ತ ಕಡೆಯಿಂದ. ಇರಲಿ ಅದು ಸಹಜ ನನಗೆ ತಲೆ ರಿಂ ಎನ್ನುವುದು ಅದಕ್ಕಲ್ಲ. ಪುರೋಹಿತರೊಬ್ಬರು ಬಂದಿದ್ದರು " ರಾಗು ನೀನು ಈಗಿಂದೀಗ್ಲೆ ಸೊರಬಕ್ಕೆ ಹೋಗು ಔಷಧಿ ತಗಬಾ..." ಅಂದರು. ನಾನು ತಡಮಾಡಲಿಲ್ಲ "ನೀವು ನಿಮ್ಮ ಅಪ್ಪಂಗೆ ಅದೆಲ್ಲೋ ಬೇರೆ ಕಡೆಯಿಂದ ಔಷಧಿ ತಂದಿದೀರಲ್ಲ ಆ ಊರು ಯಾವುದು?"ಅಂದೆ. ಪುರೋಹಿತರು ಮುಂದೆ ಮಾತಾಡಲಿಲ್ಲ. ಕಾರಣ ಸ್ಪಷ್ಟ ಅವರು ಅವರ ಅಪ್ಪ ಅಮ್ಮನ್ನ ಹೊರಹಾಕಿ ಹೆಂಡತಿಯೊಂದಿಗೆ ಸುಖ...? ಸಂಸಾರ ಸಾಗಿಸುತ್ತಿದ್ದರು. ಅಪ್ಪ ವರ್ಷ ಪೂರ್ತಿ ಮಲಗಿದರೂ ಇವರು ಅತ್ತ ತಲೆ ಹಾಕಿ ಮಲಗಲಿಲ್ಲ ಮತ್ತು ವರ್ಶಾಂತದ ಮನೆಗಳಲ್ಲಿ " ಮಾತೃ ದೇವೋ ಭವ, ಪಿತೃ ದೇವೋ ಭವ" ಅನ್ನುವುದನ್ನೂ ಬಿಡಲಿಲ್ಲ.
ಹೀಗಿರುತ್ತೇ ಪ್ರಪಂಚ. ಆದರೂ ನಾವು ಬೇರೆಯವರನ್ನ ಅನ್ನಬಾರದು ಕಾರಣ ಅವರೂ ನಮ್ಮಂತೆ ದೇವರ ಸೃಷ್ಟಿ. ಅವರನ್ನು ಅಂದರೆ ಪರೋಕ್ಷವಾಗಿ ದೇವರನ್ನು ಅಂದಂತೆ ಅಲ್ಲವೇ?. ಹಾಗಾಗಿ ಬೇರೆಯವರ ಸುದ್ದಿ ನಮಗ್ಯಾಕೆ....! ಅಲ್ಲವೆ ?

Wednesday, January 27, 2010

" ದಬ್ಬೆತಲೆ " http://prajavani.net/Content/Jan312010/weekly20100130167907.asp)


ಬೆಳ್ಳನೆಯ ನೊರೆಯಾಗಿ ದಬ ದಬ ಎಂದು ಸದ್ದು ಮಾಡುತ್ತಾ ವರ್ಷಪೂರ್ತಿ ಕಣ್ಮನ ತಣಿಸುವ ಜಲಧಾರೆಗೆ ಪಶ್ಚಿಮ ಘಟ್ಟಗಳ ಸರಣಿ ತವರುಮನೆ ಇದ್ದಂತೆ. ನೂರಾರು ಜಲಧಾರೆಗಳ ತವರೂರಾದ ಪಶ್ಚಿಮಘಟ್ಟ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಕೆಲ ಜಲಪಾತಗಳನ್ನು ತೋರಿಸಲು ಹರಸಾಹಸವನ್ನು ಬೇಡುತ್ತದೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತದಂತವುಗಳನ್ನು ನೋಡಲು ವಾಹನದಲ್ಲಿ ಹೋಗಿ ಜಲಧಾರೆಯ ಮುಂದೆ ನಿಂತರಾಯಿತು. ಆದರೆ ಇನ್ನೂ ಹತ್ತು ಹಲವು ಜಲಧಾರೆ ನೋಡಬೇಕು ಎಂದೆನಿಸಿದರೆ ಚಾರಣ , ಸಾಹಸ ಮಾಡಬೇಕಾಗುತ್ತದೆ. ಅಂತಹ ಸಾಹಸದ ಚಾರಣವನ್ನು ಬೇಡುವ ಜಲಪಾತ ಶಿವಮೊಗ್ಗ ಜಿಲ್ಲೆಯ ಕಾರ್ಗಲ್-ಭಟ್ಕಳ ರಸ್ತೆಯ ಕೊಂಜವಳ್ಳಿ ಎಂಬ ಊರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ "ದಬ್ಬೆ" ಎಂಬ ಜಲಧಾರೆ. ಕೊಂಜವಳ್ಳಿಯಿಂದ ೮ ಕಿಲೋಮೀಟರ್ ಕಚ್ಚಾರಸ್ತೆಯಲ್ಲಿ ಸಾಗಿ ಮಂಜೇ ಗೌಡರ ಮನೆಯ ಬದಿಯಲ್ಲಿ ಪ್ರಪಾತದ ದಾರಿ ಇಳಿದರೆ ದಬ್ಬೆ ಜಲಪಾತದ ಸೊಬಗು ಸಿಗುತ್ತದೆ. ಆದರೆ ಹಾಗೆ ಇಳಿದು ಸಾಗುವುದು ಸುಲಭಸಾದ್ಯವಲ್ಲದ ಕೆಲಸ. ಜಲಪಾತದ ಸೊಬಗನ್ನೂ ಅನುಭವಿಸಬೇಕು ಸುಲಭದಲ್ಲಿಯೂ ಇರಬೇಕು ಎನ್ನುವವರಿಗೆ ಇದು ಕಷ್ಟಕರ, ಹಾಗೆ ಸುಲಭದಲ್ಲಿ ಜಲಪಾತದ ಸೊಬಗು ಅನುಭವಿಸಿ ಜಲಪಾತಕ್ಕೆ ತಲೆಕೊಟ್ಟು ಸ್ನಾನ ಮಾಡಬೇಕೆಂಬ ಆಸೆಯಿದ್ದವರಿಗೆ "ದಬ್ಬೆತಲೆ" ಸುಮಧುರ ಅನುಭವವನ್ನು ನೀಡುತ್ತದೆ. ದಬ್ಬೆಗೆ ಸಾಗುವ ದಾರಿಯಲ್ಲಿ ದಬ್ಬೆ ಜಲಪಾತಕ್ಕಿಂತ ಒಂದು ಕಿಲೋಮೀಟರ್ ಹಿಂದೆ ಕಿರಿದಾದ ಸೇತುವೆಯ ಹತ್ತು ಅಡಿ ಪಕ್ಕದಲ್ಲಿಯೇ ಅಡಗಿರುವ ಈ "ದಬ್ಬೆತಲೆ" ಹುಡುಕುವುದು ಸ್ವಲ್ಪ ಕಷ್ಟವಾದರೂ ಸಿಕ್ಕಮೇಲೆ "ವಾವ್" ಎನ್ನುವ ಉದ್ಘಾರವನ್ನು ತನ್ನಷ್ಟಕ್ಕೆ ಹೊರಡಿಸುತ್ತದೆ. ದಬ್ಬೆತಲೆಯ ನದಿಗುಂಟ ಒಂದರ್ದ ಕಿಲೋಮೀಟರ್ ಕೆಳಗೆ ಸಾಗಿದರೆ ದಬ್ಬೆ ಜಲಪಾತ ಬೀಳುವ ಜಾಗಕ್ಕೂ ಹೋಗಬಹುದು. ಮೇಲ್ಗಡೆ ಸಾಗಿದರೆ ದಬ್ಬೆ ಜಲಪಾತವಾಗುವ ನದಿಯ ಪಾತ್ರವನ್ನು ಅನುಭವಿಸಬಹುದು. ಫೆಬ್ರವರಿ ತಿಂಗಳ ನಂತರ ನೀರಿನ ರಭಸ ಕಡಿಮೆಯಾಗುವುದರಿಂದ ಅಷ್ಟರೊಳಗೆ ಪ್ರವಾಸಕ್ಕೆ ಸೂಕ್ತ ಸಮಯ.
http://prajavani.net/Content/Jan312010/weekly20100130167907.asp)



------------------------------------
೯೩೪೨೨೫೩೨೪೦