Wednesday, May 12, 2010

ಗಗನದಲ್ಲಿ ಹಕ್ಕಿಯಂತೆ ಹಾರಾಟ

ಗಗನದಲ್ಲಿ ಹಾರಾಡುವ ಮನುಷ್ಯನ ಕನಸು ಬಹಳ ಹಿಂದಿನದು. ರೈಟ್ಸ್ ಸಹೋದರರ ಪರಿಶ್ರಮದಿಂದ ಅದು ವಿಮಾನದಮೂಲಕ ಸಾದ್ಯವಾಯಿತು ಅಂತ ಇತಿಹಾಸದ ಪುಸ್ತಕಗಳು ಹೇಳುತ್ತವೆ.ಆನಂತರ ಹೆಲಿಕ್ಯಾಪ್ಟರ್ ಹೀಗೆ ಮುಂದುವರೆಯುತ್ತಲೇ ಸಾಗುತ್ತದೆ ನಾನಾರೀತಿಯ ಮನುಷ್ಯನ ಹಾರಾಟ. ಆದರೆ ಮನುಷ್ಯ ಇನ್ನೂ ಪಕ್ಕಾ ಹಕ್ಕಿಯಂತೆ ರಕ್ಕೆ ಕಟ್ಟಿಕೊಂಡು ಏಕಾಂಗಿಯಾಗಿ ಹಾರಾಡುವ ಕನಸನ್ನು ಕಾಣುತ್ತಲೇ ಇದ್ದ. ಯೇವ್ಸ್ ರೊಸ್ಸಿ ಎಂಬ ಸ್ವಿಸ್ ದೇಶದ ಪೈಲಟ್ ಒಬ್ಬಾತ ಈ ಕನಸನ್ನೂ ಕೂಡ ನನಸು ಮಾಡಿದ್ದಾನೆ. ರಕ್ಕೆಗಳಿಗೆ ಸಣ್ಣದಾದ್ ನಾಲ್ಕು ಜೆತ್ ಇಂಜನ್‌ಗಳನ್ನು ಜೋಡಿಸಿಕೊಂಡು ಸ್ವಿಡ್ಜರ್ ಲ್ಯಾಂಡ್ ನ ಆಕಾಶದಲ್ಲಿ ಈತ ಮೋಡಗಳ ನಡುವೆ ಪಕ್ಕಾ ಹಕ್ಕಿಯಂತೆ ಯಶಸ್ವೀ ಹಾರಾಟ ನಡೆಯಿಸಿ ಅಚ್ಚರಿ ಮೂಡಿಸಿದ್ದಾನೆ. ನಂತರ ಪ್ಯಾರಾಚೂಟ್ ಬಳಸಿಕೊಂಡು ನೆಲದಮೇಲೆ ಇಳಿದು ಮುಗುಳ್ನಗೆ ಬೀರಿದ್ದಾನೆ. ನೀವೂ ಬೇಕಾದರೆ ಹೀಗೆ ಯತ್ನಿಸಬಹುದು. ಕೊನೆಯದಾಗಿ ಆಕಾಶದಲ್ಲಿ ಹಾರಾಡಲು ಆಗ್ದಿದ್ದರೆ ನೆಲದ ಮೇಲಾದರೂ ಹಾರಾಡಬಹುದು...!.

Friday, May 7, 2010

ಮ್ಯಾಗ್ನೆಟಿಕ್ ಮನುಷ್ಯ



"ನನ್ನ ದೇಹ ಕಬ್ಬಿಣ ಇದ್ದಂಗೆ" ಅಂತ ನಿಮ್ಮ ಹತ್ತಿರ ಯಾರಾದರೂ ಹೇಳಿಯಾರು. ಆದರೆ "ನನ್ನ ದೇಹ ಆಯಸ್ಕಾಂತ ಇದ್ದಂಗೆ ಇದೆ" ಅಂತ ಹೇಳಿದವರನ್ನು ನೀವು ಕಂಡಿರಲಿಕ್ಕಿಲ್ಲ. ಅಂತಹ ಅಪರೂಪದ ವ್ಯಕ್ತಿಯೊಬ್ಬ ಮಲೇಶಿಯಾ ದೇಶದಲ್ಲಿದ್ದಾನೆ. ಆತನ ಹೆಸರು "ಲಿವ್ ತೊವ್ ಲಿನ್". ಆತ ಕೇವಲ ಹೇಳಿಕೊಳ್ಳುವುದಷ್ಟೇ ಅಲ್ಲ ನಿಜವಾಗಿಯೂ ಆತನ ದೇಹ ಆಯಸ್ಕಾಂತ ಮಾಡುವ ಕೆಲಸವನ್ನೇ ಮಾಡುತ್ತದೆ. ಈ ಚಿತ್ರದಲ್ಲಿ ಕಬ್ಬಿಣದ ವಸ್ತುಗಳು ಆತನ ದೇಹವನ್ನು ಹಿಡಿದುಕೊಂಡಿರುವ ಪರಿ ನೋಡಿದರೆ ನಿಮಗೇ ತಿಳಿಯುತ್ತದೆ. ವಿಜ್ಞಾನಕ್ಕೆ ಸವಾಲೆಸೆಯುವ ಈ ದೇಹದ ಆಯಸ್ಕಾಂತೀಯ ಗುಣ ಒಮ್ಮೆ ವಿಜ್ಞಾನಿಗಳನ್ನೂ ತಬ್ಬಿಬ್ಬು ಮಾಡಿದ್ದು ನಿಜವಾದರೂ ಯೂನಿವರ್ಸಿಟಿ ಟೆಕ್ನಾಲಜಿ ಆಫ಼್ ಮಲೇಶಿಯಾದ ಪ್ರೋ ನಸ್ರುಲ್ ಮೊಹಮದ್ ಸುದೀರ್ಘ ಪರೀಕ್ಷೆ ನಡೆಸಿ "ಲಿವ್" ನ ಚರ್ಮಕ್ಕೆ ಒಂಥರಾ ಸೆಳೆಯುವ ಶಕ್ತಿ ಇರುವುದು ನಿಜ ಆದರೆ ಅದು ಆಯಸ್ಕಾಂತದಂತಲ್ಲ, ಯಾವುದೇ ವಸ್ತುಗಳನ್ನೂ ಅದು ಹಾಗೆ ಸೆಳೆಯುತ್ತದೆ ಎಂಬ ಸರ್ಟಿಪಿಕೇಟ್ ನೀಡಿದರು. ಅಚ್ಚರಿಯೆಂದರೆ ಇದು ಲಿವ್ ದೊಂದೆ ಕತೆಯಲ್ಲ ಆತನ ಮಕ್ಕಳು ಹಾಗೂ ಮೊಮ್ಮಕ್ಕಳದ್ದೂ ಇದೇ ಕತೆ. ನಮ್ಮ ದೇಶದಲ್ಲಿ ಆಗಿದ್ದರೆ ಇದು ದೈವಿಕ ಶಕ್ತಿ ಎಂದು ನಂಬಿಸಿ ಹೇರಳ ಆಸ್ತಿ ಗಳಿಸಬಹುದಿತ್ತು. ಇರಲಿ ಈಗಲೂ ಕಾಲ ಮಿಂಚಿಲ್ಲ ಆತನನ್ನು ಪುಸಲಾಯಿಸಿ ಇಲ್ಲಿಗೆ ಕರೆತಂದು ಸಂಪಾದಿಸಬಹುದು....! ಎನಂತೀರೀ?

ಆಟ ಆಟ


ಯಕ್ಷಗಾನ ಮನರಂಜನೆಗೆ ವಸಂತಗಾನ....ನೋಡಲು ಮರೆಯದಿರಿ ಮರೆತು ನಿರಾಶರಾಗ

ದಿರಿ, ಆಟ ಆಟ ಒಂದೇ ಒಂದು ಆಟ , ಗಂಡು ಹೆಣ್ಣಾಗಿ ಹೆಣ್ಣನ್ನೇ ನಾಚಿಸು ಮಂಟಪರವರ........." ಹೀಗೆಲ್ಲಾ ಕೂಗುತ್ತಾ ಮೇಳದ ಕಾರು ಓಡುತ್ತಿದ್ದರೆ ಅದರ ಹಿಂದೆ ಬಣ್ಣ ಬಣ್ಣದ ಹ್ಯಾಂಡ್ ಬಿಲ್ ಹೆಕ್ಕಲು ಹುಡುಗರ ದಂಡು ಓಡುತ್ತಿತ್ತು. ಇದು ಮೂರು ದಶಕಗಳ ಹಿಂದಿನ ಚಿತ್ರಣ. ಈಗ ನಮ್ಮ ಕಡೆ ಯಕ್ಷಗಾನದ ಭರಾಟೆ ಅಷ್ಟೊಂದು ಜೋರಿಲ್ಲ. ಹಾಗಂತ ಮುಗಿದೇ ಹೋಗಿದೆ ಅನ್ನುವಂತೆಯೂ ಇಲ್ಲ. ಮೊನ್ನೆ ಹಿರೇಮನೆಯಲ್ಲಿ ನಡೆದ ದಕ್ಷಯಜ್ಞದ ಒಂದು ಚಿತ್ರ ನಿಮಗಾಗಿ, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ.......

Sunday, May 2, 2010

ಬೇಲಿ ಎಂಬ ಕಥೆ

ನಾನು ಬರೆದ ಕಥೆಗಳು ಒಟ್ಟೂ ೪೨. ಪ್ರಕಟವಾಗಿದ್ದು ೩೬, ಕಥೆಗಳಲ್ಲಿನ ಪಾತ್ರಧಾರಿಗಳು ಎದ್ದು ಬಂದು ನನ್ನ ಮನೆಯ ಬಾಗಿಲು ತಟ್ಟಿದ ಉದಾಹರಣೆ ಹಲವಿದೆ. "ನೀನು ಊರಿನ ಜನರ ಕತೆಯನ್ನೆಲ್ಲಾ ಬರೆದು ಬಿಡುತ್ತೀ" ಎಂಬ ಆಪಾದನೆಯೂ ಇದೆ, ಕಥೆ ಚೆನ್ನಾಗಿತ್ತು ಅನ್ನುವವರೂ ಇದ್ದಾರೆ ನಮ್ಮೂರಿನ ಕತೆ ಬರೆದ ನಿನ್ನ ಕಾಲು ಮುರಿಯುತ್ತೀನಿ ಅಂತ ಅನ್ನಿಸಿಕೊಂಡಿದ್ದೂ ಇದೆ. ಇರಲಿ ಅವೆಲ್ಲಾ ಒಂಥರಾ ಮಜ ಇರುತ್ತದೆ. ಅವೆಲ್ಲಾ ಒತ್ತಟ್ಟಿಗಿರಲಿ .ಈ ನಡುವೆ ಕಳೆದ ವರ್ಷ "ಕಟ್ಟು ಕತೆಯ ಕಟ್ಟು" ಎಂಬ ಕಥಾ ಸಂಕಲನ ತಂದು ಬಿಡೋಣ ಅಂತ ಹೊರಟಿದ್ದೆ. ಆದರೆ ಮೂವತ್ತು ಸಾವಿರ ಹೊಂದಿಸಲಾರದೆ ಕೈಬಿಡಬೇಕಾಯಿತು. ಕಥಾ ಸಂಕಲನ ದ ಬಗ್ಗೆ ಬರೆದ ಬ್ಲಾಗ್ ಬೊಂಗಾಯಿತು. ಒಂದಲ್ಲಾ ಒಂದು ದಿನ ತರಬೇಕು ಕಥಾ ಸಂಕಲನ ಎಂಬ ಆಸೆ ಸುಪ್ತವಾಗಿದೆ. ಇರಲಿ,
ಇವತ್ತು ಅಂದರೆ ಮೆ ೨ ನೇ ತಾರೀಖಿನ ಭಾನುವಾರ "ಕನ್ನಡ ಪ್ರಭ" ದಲ್ಲಿ ಬೇಲಿ ಎಂಬ ಕಥೆ ಪ್ರಕಟವಾಗಿದೆ ಬಿಡುವು ಸಿಕ್ಕಾಗ ನೋಡಿ. ಯಾರೋ ಒಬ್ಬರು ಹೀಗೆ ಹೇಳಿದ್ದರು " ಕಥೆಗಳು ಕಾವ್ಯಗಳು ಹಾಗೂ ಲೇಖನಗಳಲ್ಲಿ ಸತ್ವ ತಾಕತ್ತು ಇದ್ದರೆ ಲೇಖಕ ನನ್ನದೊಂದು ಲೇಖನ ಪ್ರಕಟವಾಗಿದೆ ನೋಡಿ ಎಂದು ಹೇಳುವ ಅಗತ್ಯ ಇರುವುದಿಲ್ಲ" ಹಾಗೆ ಅಗತ್ಯ ಇದೆ ಎಂದಾದಲ್ಲಿ......!. ಇರಲಿ ಬಿಡಿ ಇದು ನಮ್ಮ ನಿಮ್ಮೊಳಗೆ....!
http://www.kannadaprabha.com/NewsItems.asp?ID=KP420100501180342&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=5/2/2010&Dist=0

Saturday, May 1, 2010

ಪ್ರಕಟವಾಗಿರದ ಕತೆ

ಈಗ ರಾಣಿ ಗೂಡಿಗೆ...
" ರಾಣಿ ಈಗ ಗೂಡಿಗೆಗಂಡು ಯಮನ ಬೀಡಿಗೆ" ಮುನ್ನಾದಿನ ಮುತ್ತಣ್ಣ ಹೇಳಿದ ಕವನದ ಕೊನೆಯ ಸಾಲುಗಳನ್ನು ಗುಣುಗುಣಿಸುತ್ತಾ ಚೆನ್ನ ನಸುಕಿನಲ್ಲಿ ಗುಡ್ಡ ಏರುತ್ತಿದ್ದ. ಕವನದ ವಿಸ್ತಾರದ ಕತೆ ಕೇಳಿದ ಚೆನ್ನನಿಗೆ ಆ ಕೊನೆಯ ಸಾಲಿನ ಹೊರತಾಗಿ ಮತ್ಯಾವುದೂ ನೆನಪಿಗೆ ಬರಲಿಲ್ಲ. ಇಡೀ ಕತೆಯ ಸಾರಾಂಶವನ್ನು ಅವೆರಡು ಸಾಲಿಗೆ ತುಂಬಿಕೊಂಡು ಆಸ್ವಾದಿಸುತ್ತಾ ಪದೇ ಪದೇ ಅವಷ್ಟೇ ಸಾಲುಗಳನ್ನು ಹಿಂದುಮುಂದಾಗಿ ತನ್ನದೇ ಆದ ದಾಟಿಯಲ್ಲಿ ಹಾಡುತ್ತಾ ನಡು ನಡುವೆ ಹಣೆಯಮೇಲೆ ಕೈಯನ್ನಿಟ್ಟು ಸೂರ್ಯನ ಕಿರಣದಿಂದ ಕಣ್ತಪ್ಪಿಸಿ ಮುನ್ನಡೆಯುತಿದ್ದ. ಚೆನ್ನನ ಉತ್ಸಾಹಕ್ಕೆ ಜೇನು ಹುಡುಕುವ ಭರಾಟೆಯೋ ಅಥವಾ ಉಲ್ಲಾಸದಾಯಕ ವಾತಾವರಣವೋ ಎನ್ನುವುದನ್ನ ತರ್ಕಿಸಿ ತೀರ್ಮಾನ ತೆಗೆದುಕೊಳ್ಳುವ ಗೋಜಿನ ಮನಸ್ಥಿತಿ ಅವನದಾಗಿರಲಿಲ್ಲವಾದ್ದರಿಂದ ಉತ್ಸಾಹವನ್ನು ಮಾತ್ರಾ ಅನುಭವಿಸುತ್ತಿದ್ದ. ಅವನಿಗೆ ಬುದ್ದಿಬಂದಾಗಿನಿಂದ ಇಬ್ಬನಿ ಬೀಳುವ ಕಾಲದಲ್ಲಿ ಹೀಗೆ ಜೇನು ಹುಡುಕುತ್ತಾ ಹೊರಡುವುದು ಇಷ್ಟವಾದ ಕೆಲಸ. ಕಳೆದ ವರ್ಷದವರೆಗೂ ಜೇನಿಗೂ ಚೆನ್ನನಿಗೂ ಕೇವಲ ಹಣದ ಸಂಬಂಧ ಮಾತ್ರಾ ಇತ್ತು. ಕಾಡಿಗೆ ಹೋಗುವುದು ಮರದ ಪೊಟರೆಯಲ್ಲಿಯೋ, ಹುತ್ತದ ಆಳದಲ್ಲಿಯೂ ಹುದುಗಿದ್ದ ಜೇನನ್ನು ಪತ್ತೆ ಮಾಡುವುದು, ಹಾಗೂ ಬೀಡಿ ಹೊಗೆ ಹಾಕಿ ಜೇನಿನ ಕುಟುಂಬ ಹಾರಿಸುವುದು ಮತ್ತು ತುಪ್ಪ ತೆಗೆದು ಪೇಟೆಗೋ ಅಥವಾ ಗಿರಾಕಿಗೋ ಮಾರಿ ಹಣ ಎಣಿಸುವುದು. ಒಂದು ಕುಡಗೋಲು, ತುಪ್ಪ ಹಾಕಲು ಒಂದು ಪಾತೆ, ಬೀಡಿಕಟ್ಟು ಬೆಂಕಿಪೊಟ್ಟಣ ಇಷ್ಟಿದ್ದರೆ ಚೆನ್ನನಿಗೆ ಒಂದುದಿನದ ಸಂಬಳ ಬಂದಂತೆ. ಆದರೆ ಪಟ್ಟಣದಲ್ಲಿ ಇಂಜನಿಯರ್ ಆಗಿದ್ದ ಮುತ್ತಣ್ಣ ನಿವೃತ್ತ ಜೀವನಕ್ಕೆ ಹಳ್ಳಿಯನ್ನು ಆರಿಸಿಕೊಂಡು ಊರಿಗೆ ಬಂದಮೇಲೆ ಚೆನ್ನನ ಜೇನಿನ ಪಾಲನೆಯ ರೀತಿರಿವಾಜುಗಳು ಬದಲಾಗತೊಡಗಿದವು. ಕಾಡಿಗೆ ಹೋಗಿ ಜೇನು ಗೂಡು ಪತ್ತೆಮಾಡಿ ಅವನ್ನು ಪೆಟ್ಟಿಗೆಗೆ ತುಂಬಿ ಮನೆಯಂಗಳಕ್ಕೆ ತಂದು ಸಾಕಾಣಿಕೆ ಆರಂಭಿಸಲು ಪ್ರೋತ್ಸಾಹಿಸಿದ್ದೇ ಮುತ್ತಣ್ಣ. ಹಾಗಾಗಿ ಕಾಡಿಗೆ ಹೊರಡುವ ಚೆನ್ನನ ಕೈಯಲ್ಲಿ ಈಗ ಒಂದು ಕೂಡುಪೆಟ್ಟಿಗೆ, ಹಗ್ಗ, ಕೈಹುಟ್ಟು, ಮುಂತಾದ ಹೊಸ ಪರಿಕರಗಳು ಕೂಡಿಕೊಂಡಿದ್ದವು. ಜೇನು ತತ್ತಿ ಹಿಂಡಿ ಹಿಪ್ಪೆಮಾಡಿ ತುಪ್ಪ ತೆಗೆದು, ಹುಳುಗಳನ್ನು ಹೊಗೆ ಹಾಕಿಸಿ ಹಿಂಸೆ ಮಾಡುವ ಚೆನ್ನನ ಮಾಮೂಲಿ ವಿಧಾನಗಳಿಗೆ ವಿದಾಯ ಹೇಳಿದ್ದ. ಚೆನ್ನ ಮುತ್ತಣ್ಣನಿಂದ ಶಿಸ್ತಿನ ಜೇನುಸಾಕಾಣಿಕೆದಾರನಾಗಿದ್ದ. ಮನೆಯ ಸುತ್ತಮುತ್ತ ನಾಲ್ಕೈದು ಜೇನುಪೆಟ್ಟಿಗೆಗಳನ್ನಿಟ್ಟು ಆದಾಯದ ಜತೆ ಜೀವನಾನುಭೂತಿಯನ್ನು ಪಡೆದುಕೊಳ್ಳುವಂತಾಗಿದ್ದ. ದಿನನಿತ್ಯ ಜೇನು ಸಾಮ್ರ್ಯಾಜ್ಯದ ಹೊಸ ಹೊಸ ವಿಷಯಗಳನ್ನು ಕಥಾ ರೂಪದಲ್ಲಿ ಕೇಳುತ್ತಾ ಬೆರಗಾಗುತ್ತಿದ್ದ. ಮನುಷ್ಯರಂತೆ ಹಿಸ್ಸೆಯಾಗುವುದು, ಯುದ್ಧ ಮಾಡುವುದು, ಆಹಾರ ಕಾಪಿಡುವುದು ಮುಂತಾದ ಹತ್ತಾರು ವಿಷಯಗಳನ್ನು ಮುತ್ತಣ್ಣ ಹೇಳಿದ್ದರೂ ಹಾಡಿನ ರೂಪದಲ್ಲಿ ನಿನ್ನೆ ಹೇಳಿದ ವಿಷಯ ಮಾತ್ರಾ ಚೆನ್ನನನ್ನು ಮಹದಾಶ್ಚರ್ಯಕ್ಕೆ ತಳ್ಳಿತ್ತು. ಹತ್ತಿಪ್ಪತ್ತು ವರ್ಷಗಳಿಂದ ಜೇನುಹುಟ್ಟಿನಲ್ಲಿ ಕೈ ಇಟುಕೊಂಡು ಕುಳಿತಿದ್ದ ಚೆನ್ನನಿಗೆ ಅಲ್ಲೊಂದು ಜೀವಂತ ಪ್ರಪಂಚ ಇದೆ ಎಂದು ಅರಿವು ಮೂಡತೊಡಗಿದ್ದು ಇತ್ತೀಚಿಗಷ್ಟೆ. "ಹಳೆಯ ರಾಣಿ ಚಳಿಗಾಲದ ಒಂದು ದಿನ ಗೂಡಿನಲ್ಲಿದ್ದ ಅರ್ದದಷ್ಟು ಹುಳುಗಳನ್ನು ಕರೆದುಕೊಂಡು ಬೇರೆಯ ಗೂಡನ್ನು ಅರಸುತ್ತಾ ಹೊರಟುಬಿಡುತ್ತದೆಯೆಂದರೆ ಅದು ಹಿಸ್ಸೆಯ ಸಂಭ್ರಮ ಎಂದರ್ಥ. ಮೂರ್ನಾಲ್ಕು ದಿವಸಗಳಲ್ಲಿ ಗೂಡಿನಲ್ಲಿ ಹೊಸ ರಾಣಿ ಮೊಟ್ಟೆಯಿಂದ ಈಚೆ ಬಂದು ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ನವಯೌವನದ ರಾಣಿಗೆ ಹುಟ್ಟಿದ ಮಾರನೆಯ ದಿನವೇ ಗಂಡಿನೊಡನೆ ಸೇರುವ ಯೋಗ. ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡಿನೊಡನೆ ಸೇರುತ್ತದೆ, ಆನಂತರ ನಿರಂತರ ಮೊಟ್ಟೆಯನ್ನಿಡುತ್ತಾ ಜೇನು ಸಾಮ್ರಾಜ್ಯವನ್ನು ವಿಸ್ತರಿಸುತ್ತದೆ. ಜೇನು ರಾಣಿ ಹುಟ್ಟಿದ ಮಾರನೇ ದಿನ ಗಂಡು ನೊಣದೊಂದಿಗೆ ಹೊರ ಹೊರಟು ಸೇರುವ ಕ್ರಿಯೆ ಪ್ರಕೃತಿಯ ಅದ್ಬುತ ಸಂಯೋಜನೆ. ರಾಣಿಗೆ ದಾರಿ ತೋರಿಸಲು ನಾಲ್ಕಾರು ಕೆಲಸಗಾರ ನೊಣಗಳು , ಹತ್ತಾರು ಗಂಡುನೊಣಗಳು ರಾಣಿಯ ಸೇರಲು ಜತೆಯಾಗಿ ಗೂಡಿನಿಂದ ಹೊರಹೊರಡುತ್ತವೆ. ರಾಣಿಯ ಮಿಲನ ಬಾನಂಗಳದಲ್ಲಿ ಪ್ರಕೃತಿ ನಿಗದಿಪಡಿಸಿದೆ. ಹೊರ ಹಾರಾಟದಲ್ಲಿ ರಾಣಿಯ ಜತೆ ಗಂಡು ಸ್ಪರ್ಧೆಗೆ ಇಳಿಯಬೇಕು, ರಾಣಿ ತನ್ನ ಉದ್ದನೆಯ ನುಣುಪಾದ ದೇಹ, ಅಗಲವಾದ ರಕ್ಕೆಯನ್ನು ಬಳಸಿಕೊಂಡು ಮೇಲೇರಲು ಆರಂಭಿಸುತ್ತದೆ. ಈಗ ಗಂಡು ನೊಣಗಳು ರಾಣಿಯ ಜತೆ ಹಾರಾಟದ ಸ್ಪರ್ಧೆಗೆ ಇಳಿಯುತ್ತವೆ. "ಏರಿ ಏರಿ ಮೇಲಕೇರಿ" ಎಂಬಂತೆ ರಾಣಿ ನೊಣ ಏರುತ್ತಲೇ ಸಾಗುತ್ತದೆ. ಹತ್ತಾರು ಗಂಡು ನೊಣಗಳ ಪೈಕಿ ಅಶಕ್ತ ನೊಣಗಳು ರಾಣಿಯ ಜತೆ ಏರಲಾಗದೆ ಹಾರಲಾಗದೆ ಹಿಂದುಳಿಯುತ್ತವೆ. ಅಂತಿಮವಾಗಿ ಸಶಕ್ತ ಗಂಡುನೊಣವೊಂದು ಬಾನಂಗಳದಲ್ಲಿ ರಾಣಿಯನ್ನು ಕೂಡುತ್ತವೆ. ಪಾಪ ಆ ಗಂಡುನೊಣದ ಮಿಲನ ಎಂದರೆ ತನ್ನದೇ ಚರಮಗೀತೆ ಎಂದು ತಿಳಿಯದೆ ರಾಣಿನೊಣವನ್ನು ಸಂಭ್ರಮದ ಸಂಗೀತದ ನಿನಾದದೊಂದಿಗೆ ಸೇರುತ್ತದೆ. ಆರೋಗ್ಯವಂತ ಸಶಕ್ತ ಜೇನುಪೀಳಿಗೆಗೆ ನಾಣ್ಣುಡಿ ಬರೆದು ರಾಣಿಯ ಸೇರಿದ ಕೆಲಕ್ಷಣಗಳ ನಂತರ ಅದು ಸಾವನ್ನಪ್ಪುತ್ತದೆ. ರಾಣಿನೊಣ ಗರ್ಭವತಿಯಾಗಿ ಮಿಕ್ಕ ಕೆಲಸಗಾರನೊಣಗಳ ಅಣತಿಯಂತೆ ಗೂಡಿನ ದಾರಿ ಹಿಡಿಯುತ್ತದೆ. ಅಲ್ಲಿಗೆ ಮತ್ತೊಂದು ಹೊಸ ಜೇನು ಸಂಸಾರ ಆರಂಭವಾದಂತೆ. ಈಗ ನಿನಗೆ ಅರ್ಥವಾಗಿರಬೇಕು ಜೇನು ಪ್ರಪಂಚದಲ್ಲಿ ಅಂಗವೈಕಲ್ಯತೆ ಯಾಕಿಲ್ಲ?, ಸಶಕ್ತ ಹುಳುಗಳ ಸೃಷ್ಟಿ ಮಾತ್ರಾ ಅಲ್ಲಿದೆ" ಅಂತ ಹಾಡಿನ ಸಹಿತ ಹೇಳಿದ ಮುತ್ತಣ್ಣನ ಮಾತುಗಳು ಬೆರಗು ಮೂಡಿಸಿದ್ದವು. ಮುತ್ತಣ್ಣ ಹೇಳಿದ ಕತೆಯನ್ನು ಮೆಲುಕು ಹಾಕುತ್ತಾ ಜೇನು ಪ್ರಪಂಚದೊಳಗಿದ್ದ ಚೆನ್ನ ಮಾವಿನ ಹಕ್ಕಿಯ ಕೂಗಿಗೆ ವಾಸ್ತವಕ್ಕೆ ಬಂದ. ಮಾವಿನ ಹಕ್ಕಿ ಕೂಗಿತೆಂದರೆ ಅಲ್ಲೆಲ್ಲಿಯೋ ಜೇನು ಇದೆ ಅಂತ ನೆನಪಾಗುತ್ತಲೆ ಸೂರ್ಯನ ಎಳೆ ಕಿರಣಕ್ಕೆ ಕೈ ಅಡ್ಡ ಇಟ್ಟು ಹುಡುಕತೊಡಗಿದ. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಜೇನು ಹುಳುಗಳು ಹತ್ತಿರದ ಹುತ್ತದಿಂದ ಪುರುಪುರನೆ ಹೊರಡುತ್ತಿದ್ದವು. ಒಮ್ಮೊಮ್ಮೆ ದಿನಗಟ್ಟಲೆ ಅಲೆದರೂ ಸಿಗದ ಜೇನು ಮಗದೊಮ್ಮೆ ಹೀಗೆ ಅಚ್ಚರಿ ಮೂಡಿಸುವಷ್ಟು ಬೇಗನೆ ಸಿಗುವುದು ಚೆನ್ನನಿಗೆ ಹೊಸತೇನಲ್ಲ. ಕೂಡು ಪೆಟ್ಟಿಗೆ ತಲೆಯಿಂದ ಇಳಿಸಿ ಕೈ ಹಾರೆಯಿಂದ ಹುತ್ತದ ಬಾಯಿ ಬಿಡಿಸಿ ಬಗ್ಗಿ ಹುತ್ತದೊಳಗೆ ಕಣ್ಣಾಡಿಸಿದ. ಬಿಳಿಯದಾದ ಬರೊಬ್ಬರಿ ಐದು ತತ್ತಿಗಳು ಗೋಚರಿಸಿತು. "ಅಬ್ಬಾ ಸಣ್ಣಾಟದ ಜೇನಲ್ಲ ಇದು" ಎಂದು ತನ್ನಷ್ಟಕ್ಕೆ ಹೇಳಿಕೊಂಡ. ಚೆನ್ನನ ಕೈಹಾರೆಯಿಂದಾದ ಶಬ್ಧಕ್ಕೆ ಗಾಬರಿ ಬಿದ್ದ ಜೇನು ಕುಟುಂಬ ತತ್ತಿ ಬಿಟ್ಟು ಮೇಲೇರತೊಡಗಿತ್ತು. ಸ್ಪಷ್ಟವಾಗಿ ಕಾಣಿಸುತಿದ್ದ ಜೇನು ತತ್ತಿಗಳನ್ನು ಗಮನಿಸಿದ ಚೆನ್ನ ಒಮ್ಮೆ ಹತಾಶನಾದ. ಕಾರಣ ತತ್ತಿಯ ಬುಡದಲ್ಲಿ ನಾಲ್ಕಾರು ರಾಣಿ ಮೊಟ್ಟೆ ಜೋತಾಡುತಿತ್ತು. ಗಂಡು ನೊಣಗಳ ಸಂಖ್ಯೆ ವಿಪುಲವಾಗಿತ್ತು. ಅದರ ಅರ್ಥ ರಾಣಿ ಹೆಸ್ಸೆಯಾಗಿ ಹಾರಿ ಹೋಗಿದೆ. ಇನ್ನಷ್ಟೇ ಹೊಸ ರಾಣಿ ಬರಬೇಕಿದೆ. ಎಂದು ಆಲೋಚಿಸುತ್ತಾ ಹುತ್ತದೊಳಗೆ ಕೈ ಹಾಕಿದಾಗ ಹತ್ತಾರು ಗಂಡುನೊಣಗಳು ಪುರುಪುರು ಶಬ್ಧ ಮಾಡುತ್ತಾ ಹೊರಬಂದವು . ಗಂಡು ನೊಣಗಳ ಸಂಭ್ರಮದ ಹಾರಾಟ ನೋಡಿದ ಚೆನ್ನ, ಮುತ್ತಣ್ಣ ಹೇಳಿದ ಸಾವಿನ ಕತೆ ನೆನಪಾಗಿ ಮನಸ್ಸಿನಲ್ಲಿಯೇ ನಕ್ಕ. ಒಂದೊಂದೇ ತತ್ತಿಗಳನ್ನು ಬಿಡಿಸಿ ಬಾಳೆಪಟ್ಟೆ ಹಗ್ಗದಲ್ಲಿ ತತ್ತಿಗಳನ್ನು ನಿಧಾನವಾಗಿ ಮರದ ಚೌಕಟ್ಟಿಗೆ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಕೈಹುಟ್ಟಿನಲ್ಲಿ ಜೇನು ನೊಣಗಳನ್ನು ಪೆಟ್ಟಿಗೆಗೆ ತುಂಬತೊಡಗಿದ. ಮುಕ್ಕಾಲು ಪಾಲು ನೊಣಗಳು ಪೆಟ್ಟಿಗೆ ಸೇರಿದ ನಂತರ ಮುಚ್ಚಲು ಹಾಕಿ ಮಿಕ್ಕ ಹುಳುಗಳ ಪೆಟ್ಟಿಗೆ ಪ್ರವೇಶವನ್ನು ನೋಡುತ್ತಾ ಬೀಡಿ ಹಚ್ಚಿದ. ಪೆಟ್ಟಿಗೆಯ ಹೊರಗಡೆ ದಪ್ಪನೆಯ ಕಪ್ಪನೆಯ ಗಂಡುಹುಳುಗಳ ಹಾರಾಟ ಹೆಚ್ಚತೊಡಗಿತು. ಈ ಗಂಡು ಹುಳಗಳನ್ನು ನೋಡಿದಾಗಲೆಲ್ಲ ಚೆನ್ನನಿಗೆ ನೆನಪಿಗೆ ಬರುವುದು ನಾಣ ಭಟ್ಟರ ಪ್ರಣಯ ಪ್ರಕರಣ. ಕಪ್ಪಗೆ ಪುಷ್ಟಿಯಾಗಿ ಗಂಡುನೊಣದಂತೆ ಇರುವ ಯಕ್ಷಗಾನದ ಹವ್ಯಾಸಿಯಾದ ನಾಣಭಟ್ಟರು ಮೂರು ಮದುವೆ ಮಾಡಿಕೊಂಡು ಮತ್ತೂ ಪ್ರಕರಣಗಳನ್ನು ಸೃಷ್ಟಿಸಿಕೊಂಡು ಊರಿನ ಜನರ ಬಾಯಿಗೆ ಗ್ರಾಸವಾಗಿದ್ದರು. ಭಗವಂತ ಜೇನು ರಾಣಿ ಕೂಡಿದ ಗಂಡುನೊಣಕ್ಕೆ ಸಾವಿನ ನಿಯಮ ಇಟ್ಟಂತೆ ಮನುಷ್ಯರಿಗೂ ಇದ್ದಿದ್ದರೆ ..ನಾಣಭಟ್ಟರ ಕತೆ ಎಂದೋ ಇಲ್ಲವಾಗಿತ್ತು ಅಂತ ಚೆನ್ನನಿಗೆ ಅನ್ನಿಸಿದರೂ ಮರುಕ್ಷಣ ತಾನೂ ಇರುತ್ತಿರಲಿಲ್ಲ ಎಂದು ಅರಿವಾಗಿ ತನ್ನಷ್ಟಕ್ಕೆ ಮುಗುಳ್ನಕ್ಕ. ಆದರೆ ಭಗವಂತ ಮನುಷ್ಯರ ಮಟ್ಟಿಗೆ ತಿದ್ದುಪಡಿಮಾಡಿ ಎರಡನೆ ಹೆಣ್ಣಿನ ತಂಟೆಗೆ ಹೋದರೆ ಸಾವು ಅಂತ ಇಡಬೇಕಾಗಿತ್ತು ಎಂದು ಆಲೋಚಿಸಿದ. ಜೇನು ಹುಳುಗಳು ಸಂಪೂರ್ಣ ಪೆಟ್ಟಿಗೆಯೊಳಗೆ ತೂರಿಕೊಂಡಿದ್ದರಿಂದ ಯೋಚನಾಸರಣಿಯಿಂದ ಹೊರಬಂದ ಚೆನ್ನ ಪೆಟಿಗೆ ಮನೆಗೆ ತೆಗೆದುಕೊಂಡುಹೋಗಲು ಸಂಜೆ ಬರಬೇಕೆಂದು ಇಲ್ಲದಿದ್ದಲ್ಲಿ ಹೂವುತರಲು ಹೋದ ಜೇನುಗಳು ಅನಾಥವಾಗುತ್ತವೆ ಎಂದು ಎಣಿಸಿ, ಪೆಟ್ಟಿಗೆಗೆ ಇರುವೆ ಮುತ್ತದಿರಲು ನುಮ್ಮಣ್ಣು ಸುತ್ತರಿಸಿ ಮನೆಯತ್ತ ಹೊರಟ. ಕುಂಬ್ರಿಗುಡ್ಡ ಇಳಿದು ಅಡಿಕೆ ತೋಟದ ಸೊಪ್ಪಿನ ಬೆಟ್ಟದ ಒಳದಾರಿ ಹಿಡಿದ ಚೆನ್ನನಿಗೆ ಯಾರೋ ದೊಡ್ಡದಾಗಿ ಮಾತನಾಡುತ್ತಾ ಮರ ಕಡಿಯುತ್ತಿರುವ ಸದ್ದು ಕೇಳಿಸಿ ಅಲ್ಲಿಯೇ ನಿಂತ. ತೋಟಕ್ಕೆ ಸೊಪ್ಪು ಹಾಕುವ ಕಾಲ ಇದಲ್ಲ ಹಾಗಾದರೆ ಈಗ ಯಾರು ಯಾಕೆ ಮರ ಕಡಿಯುತ್ತಿರಬಹುದು, ಕಳ್ಳ ನಾಟದವರಾ? ಎಂಬಂತಹ ಹತ್ತಾರು ಪ್ರಶ್ನೆ ಒಟ್ಟಿಗೆ ಮೂಡಿತು. ಅಂತಿಮವಾಗಿ ನಿಷಣಿ ಸೊಪ್ಪಿನ ನೆನಪಾಗಿ "ಓಹೋ ಯಾರೋ ನಿಷಣಿ ಸೊಪ್ಪು ಕಡಿತಾ ಇದಾರೆ, ದುಡ್ಡಿನಾಸೆಗೆ ಮರ ಕಡ್ದು ಕಾಡು ಲೂಟಿ ಮಾಡ್ಬಿಟ್ರು ಕಳ್ರು" ಎಂದು ತನ್ನಷ್ಟಕ್ಕೆ ಹೇಳಿಕೊಂಡು ಯಾರಿರಬಹುದು ಎಂದು ತಿಳಿಯಲು ಇನ್ನಷ್ಟು ಹತ್ತಿರಕ್ಕೆ ಹೋದ. ನಿಷಣಿ ಮರದ ಹತ್ತಿರ ಹೋದಂತೆಲ್ಲಾ ನಿಷಣಿ ಸೊಪ್ಪು ಕಡಿಯವರು ತನ್ನ ಹೆಸರಲ್ಲೇ ಸುದ್ದಿ ಹೇಳುತ್ತಿರುವುದು ಕೇಳಿದಂತಾಗಿ ಅವರಿಗೆ ಕಾಣದಂತೆ ನಿಂತ.
" ಅಲ್ಲ ಮಾರಾಯ ಆ ನಾಣ ಭಟ್ರಿಗೆ ದೇವ್ರು ಕಬ್ಣದ್ದು ಹಾಕಿ ಕಳ್ಸಿದಾನ ಅಂತ ನಂಗೆ ಅನುಮಾನ" ಮರದ ಮೇಲಿದ್ದವ ಹೇಳಿದ
"ಎಂತಕಾ..?" ಸೊಪ್ಪು ಬಿಡಿಸುತ್ತಾ ಕೆಳಗಡೆ ಇದ್ದವ ಕೇಳಿದ.
"ಮತ್ತೆಂತ ಅವ್ರಿಗೆ ಅರವತ್ತು ವರ್ಷ ಆತು, ಈಗ ಚೆನ್ನನ ಹೆಂಡ್ತಿ ಸಹವಾಸ ಶುರು ಮಾಡಿದ್ರಲೋ.. ಪಾಪ ಚೆನ್ನಂಗೆ ಇದೆಲ್ಲ ಗೊತಿಲ್ಲ, ಅಂವ ಮಳ್ಳು ಜೇನು ಹಿಡೀತಾ ಕಾಡಲ್ಲಿ ಅಲಿತಾ..ರಾಣುಹುಳು ಹಿಂದೆ ಬಿದ್ದಿದ್ದಾ.... ಇಲ್ಲಿ ಅವನ ರಾಣಿ ತಲೆ ಈ ಭಟ್ರು ಕೆಡ್ಸೀರು, ಅವ್ಳು ಪಾಪದವ್ಳೂ,,, ಇವ್ರು ತಮ್ಮ ಸಂಸಾರ್ ಹಾಳು ಮಾಡೋದಲ್ದೇ ಊರಿನವ್ರನೆಲ್ಲಾ ಹಾಳು ಮಾಡ್ತ್ರು..ಮತೆ ಕೇಳಿರೇ ನಾನೇ ದೊಡ್ಡ ಜನ, ಯಕ್ಷಗಾನದಾಗೆ ಅಂತ ಹೇಳ್ತ್ರು..........ಈಗ ನಾನು ಬರ್ತಾ ಇರೋವಾಗ ಭಟ್ರು ಅವ್ರ ಮನೆಗೆ ಹೋದ್ರಪಾ... ಆ ಯಡವಟ್ಟು ಚೆನ್ನ ಎಲ್ಲಿ ಕಾಡಿಗೆ ಹೋದ್ನ ಮಳ್ಳು...................."
************
ಅನತಿ ದೂರದಲ್ಲಿ ನಿಂತು ತನ್ನದೇ ಸಂಸಾರದ ಕತೆ ಊರವರ ಬಾಯಲ್ಲಿರುವುದನ್ನು ಕೇಳಿದ ಚೆನ್ನನಿಗೆ ಒಮ್ಮೆ ಏನು ಮಾಡಬೇಕೆಂದು ತೋಚಲಿಲ್ಲ. ನಾಣಭಟ್ಟರ ಅಲ್ಲಿ ಇಲ್ಲಿನ ಕತೆ ತನ್ನ ಮನೆಯ ಚಾವಡಿಯಲ್ಲಿಯೇ ನಡೆಯುತ್ತಿದೆ ಎಂಬ ಲವಲೇಶದ ಅನುಮಾನವೂ ಇಷ್ಟು ದಿನ ಚೆನ್ನನಿಗೆ ಇರಲಿಲ್ಲ. ಅಕಸ್ಮಾತ್ ಕಿವಿಯಮೇಲೆ ಬಿದ್ದ ಈ ಸುದ್ದಿಯಿಂದ ಒಮ್ಮೆ ಅಧಿರನಾದ ಚೆನ್ನ ಮರುಕ್ಷಣ ಮೈಮೇಲೆ ದೇವರು ಬಂದವನಂತೆ ಕೊಂಡಿಯಲ್ಲಿದ್ದ ಕತ್ತಿಯನ್ನು ಎತ್ತಿ ಹಿಡಿದು ಮನೆಯತ್ತ ಓಡಿದ. "ಏಯ್ ಹಲ್ಕಟ್ ರಂಡೇ ತೆಗಿ ಬಾಗಿಲ, ನಿಮ್ಮಿಬ್ಬರ ರುಂಡ ಚೆಂಡಾಡ್ತೀನಿ ಇವತ್ತು" ಎಂದು ದಬ ದಬ ಬಾಗಿಲ ಒದೆದ ಚೆನ್ನ. ಬಾಗಿಲು ತೆರೆಯಲಿಲ್ಲ. ಇನ್ನಷ್ಟು ಸಿಟ್ಟಿನಿಂದ ಬಾಗಿಲು ಒದ್ದ. ಚೆನ್ನನ ಹೊಡೆತಕ್ಕೆ ದಡಾರನೆ ಬಾಗಿಲು ಮುರಿದು ಬಿತ್ತು. ಮುರಿದ ಬಾಗಿಲ ಬದಿಯಿಂದ ನಾಣ ಭಟ್ಟರು ಓಡಲೆತ್ನಿಸಿದರು. ಉಗ್ರ ನರಸಿಂಹನ ಅವತಾರ ಎತ್ತಿ ನಿಂತಿದ್ದ ಚೆನ್ನ ಎಡ ಕೈಯಲ್ಲಿ ಭಟ್ಟರನ್ನು ಹಿಡಿದುಕೊಂಡು ಒಮ್ಮೆ ಹೆಂಡತಿಯತ್ತ ನೋಡಿ "ಈಗ ರಾಣಿ ಗೂಡಿಗೆ....."ಎಂದು ಅಬ್ಬರಿಸಿ ಕೂಗಿ ಮರುಕ್ಷಣ "ಗಂಡು....ಗಂಡು.... ಯಮನ ಬೀಡಿಗೆ" ಎಂದು ಕತ್ತಿ ಎತ್ತಿದ. ಚೆನ್ನನ ಅಬ್ಬರಾಟಕ್ಕೆ ಮಾಡೊಳಗಿದ್ದ ಪಾರಿವಾಳ, ಗೂಡಿನಲ್ಲಿದ್ದ ಕೋಳಿ, ದಣಪೆ ಬಳಿಯಿದ್ದ ನಾಯಿ ತಮಗೆ ತಿಳಿಯದಂತೆ ಚಿತ್ರ ವಿಚಿತ್ರ ಸದ್ದು ಮಾಡುತ್ತಾ ಕಂಬಿ ಕಿತ್ತವು. ಮನೆಯ ಅಂಗಳದಲ್ಲಿದ್ದ ಪೆಟ್ಟಿಗೆಯಲ್ಲಿ ಜೇನು ರಾಣಿಯೊಂದು ಆಗಷ್ಟೇ ತನ್ನ ಮಿಲನ ಮಹೋತ್ಸವ ಮುಗಿಸಿ ತತ್ತಿ ಸೇರಲು ಹವಣಿಸುತ್ತಿತ್ತು. ಮಿಲನಕ್ಕೆ ಕಾರಣವಾದ ಗಂಡು ಅಲ್ಲೆಲ್ಲೋ ದೂರದಲ್ಲಿ ತಿರುಗಿ ತಿರುಗಿ ಬೀಳುತ್ತಾ ಪ್ರಪಂಚಕ್ಕೆ ವಿದಾಯ ಹೇಳುತ್ತಿತ್ತು.
**************************

Sunday, April 25, 2010

ಬಸ್ಸೊಳಗೆ ಜನರೋ ಜನರೊಳಗೆ ಬಸ್ಸೊ?


ದೀಪಾವಳಿ ಹಬ್ಬದಂದೋ ಅಥವಾ ಗಣೇಶ ಚತುರ್ಥಿಯ ಹಬ್ಬದ ಮಾರನೇ ದಿವಸ ಬಸ್ ನಿಲ್ದಾಣದಲ್ಲಿ ಜನಜಂಗುಳಿಯನ್ನು ನೀವು ನೋಡಿರಬಹುದು. ಸಾವಿರ....? ಅಲ್ಲ ಎರಡು ಸಾವಿರ ಹೀಗೆ ಅಂತೂ ಭರ್ಜರಿ ಜನಸಾಗರ. ಎಲ್ಲರ ಕಣ್ಣೂ ಹೊರಡುವ ಬಸ್ ಗಳತ್ತ. ಹೆಚ್ಚುವರಿ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥೆ ಮಾಡಿಲ್ಲ ಅಂತ ಹಲವರ ಗೊಣಗಾಟದಲ್ಲಿ ನೀವೂ ಸೇರಿರಬಹುದು. ಕೊನೆಗೂ ಪ್ರಯಾಣ ಮಾಡಲಾಗ್ದೇ ಮತ್ತೆ ವಾಪಾಸು ಮನೆಗೂ ಹೋಗಲಾರದೇ ಅಲ್ಲೇ ಬೆಳಗು ಮಾಡಿದ್ದಿರಬಹುದು. ಸರ್ಕಾರಗಳನ್ನು ಆಡಳಿತವನ್ನೂ ಸಿಕ್ಕಾಪಟ್ಟೆ ಅಂದಿದ್ದಿರಬಹುದು. ಇರಲಿ ಅವೆಲ್ಲಾ ವರ್ಷಕ್ಕೊಮ್ಮೆಯೋ ಅಥವಾ ಎರಡು ಸಾರಿಯೋ ಆಗಿದೆ ಬಿಡಿ. ಆದರೆ ಈ ಚಿತ್ರ ನೋಡಿದಿರಲ್ಲ ನೀವು. ಇದು ಚೀನಾದ ಬೀಜಿಂಗ್ ನಗರದ ಸಾರ್ವಜನಿಕ ಬಸ್ ಸ್ಟ್ಯಾಂಡ್ ನ ಚಿತ್ರ. ಇಲ್ಲಿ ಪ್ರತೀ ಶುಕ್ರವಾರ ಅಂದರೆ ವೀಕೆಂಡ್ ನಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ. ಜನರ ನೂಕು ನುಗ್ಗಲು ತಪ್ಪಿಸಲು ಹೆಚ್ಚು ಕಡಿಮೆ ಅಷ್ಟೇ ಮೀಸಲು ಪೋಲಿಸರಿರಬೇಕು....!. ಇದು ಅವಸ್ಥೆಯೋ ದುರವಸ್ಥೆಯೋ ಆ ಭಗವಂತನೇ ಬಲ್ಲ. ಅಲ್ಲಿಯ ಪಾಡು ಏನಾದರಾಗಲಿ ಈ ಚಿತ್ರ ನೋಡಿದ ಮೇಲೆ ಹುಣ್ಣಾದವನು ಹುಳ ಆದವನನ್ನು ನೆನೆಯಬೇಕಂತೆ ಎಂಬಂತೆ ನೀವು ನಾವು ಇಲ್ಲಿಯ ಪರಿಸ್ಥಿತಿಗೆ ಗೊಣಗಾಟ ನಿಲ್ಲಿಸಬಹುದು. ಏನಂತೀರಿ?.