Sunday, September 25, 2011

ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ.....!



ಅಡಿಕೆ ತೆಂಗಿನ ಮದ್ಯೆ ಅದೊಂದು ಅತ್ತಿ ಮರ. ನಮ್ಮ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇಯ ಎದುರು ಚಂದವಾಗಿ ನಿಂತಿದೆ. ಮಳೆಗಾಲದ ಎಲೆ ಉದುರಿಸಿ ಹೊಸ ಚಿಗುರುಗಳನ್ನು ಇನ್ನೇನು ಹೊರ ಹೊಮ್ಮಿಸುವ ಹಂತದಲ್ಲಿದೆ. ಇರಲಿ ಅದು ಇರುವ ಮರದ ಕತೆಯಾಯಿತು, ಅಲ್ಲಿ ಇಲ್ಲದ ಮರಗಳ ವಿಚಾರದತ್ತ ಹೊರಳೋಣ.

ಸಂತೃಪ್ತ ಜೀವನಕ್ಕೆ ಗಂಡ-ಹೆಂಡತಿ-ಚಂದದ ಮಕ್ಕಳು-ಒಂದಿಷ್ಟು ಹಣ-ಮಾಡಲು ಕೆಲಸ ಮುಂತ್ ಮುಂತಾದ ಹಲವು ಇರಬೇಕು. ಬೇಕುಗಳ ಪಟ್ಟಿಯನ್ನು ಬೆಳೆಯಲು ಬಿಟ್ಟರೆ ಅಂತ್ಯವೇ ಇಲ್ಲ ಬಿಡಿ. ಬೆಳೆಯಲು ಬಿಟ್ಟ ಜನಕ್ಕೇ ನೆಮ್ಮದಿ ಅಂಬೋದು ದೂರದ ಮಾತೇ ಸರಿ. ಆದರೆ ನೆಮ್ಮದಿಯೊಂದು ಇದೆ ಅಂತಾದರೆ ಮಿಕ್ಕೆಲ್ಲ ಗೌಣ ಅಂತ ಅಂದುಕೊಳ್ಳಬಹುದು. ಈ ಮನಸ್ಸಿನ ನೆಮ್ಮದಿಗೆ ಉಸಿರಾಟ ಕ್ರಿಯೆ ಬಹಳ ಮುಖ್ಯವಂತೆ. ನಿಧಾನ ಉಸಿರಾಟ, ಗಮನಿಸಿ ಉಸಿರಾಟ, ತ್ವರಿತ ಉಸಿರಾಟ ಹೀಗೆ ಏನೇನೋ ಪದ್ದತಿ ಇದೆ. ಅದರ ವಿವರ ಯೋಗ ಧ್ಯಾನ ಅಭ್ಯಾಸ ಮಾಡುವವರನ್ನು ಕೇಳಬೇಕು ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವುದು ಎಂದರೆ ಆ ಉಸಿರಾಟಕ್ಕೆ ಶುದ್ಧವಾದ ಗಾಳಿಯ ವಿಷಯ.

ಹೌದೇ ಹೌದು ನಾವು ಎಲ್ಲಿ ಎಂಥಹಾ ಜಾಗದಲ್ಲಿ ಯಾವುದನ್ನ ಉಸಿರಾಡುತ್ತಿದ್ದೇವೆ ಎಂಬ ವಿಷಯದ ಮೇಲೆ ನಮ್ಮ ನರನಾಡಿಗಳ ನೆಮ್ಮದಿ ಅವಲಂಬಿಸಿದೆ ಎಂಬುದು ನಮ್ಮ ನಿಮ್ಮಂಥಹ ಸರಳ ಸಹಜ ಮಿದುಳಿಗೆ ಹೊಳೆಯುವ ವಿಷಯ. ಆದರೆ ಹಿಂದಿನ ಜನರು(ಯಾರು ಅಂತ ನನಗೂ ಗೊತ್ತಿಲ್ಲ....!) ಅಕಾರಾದಿ ಪಂಚ ವೃಕ್ಷಗಳ ಸಾಪಿಪ್ಯದಲ್ಲಿ ಉಸಿರಾಟ ನಡೆಯಿಸಿದರೆ ಲೈಫೆಂಬ ಲೈಫು ನೆಮ್ಮದಿಯ ಆಕಾಶದಲ್ಲಿ ಬೆಳ್ಳಿ ಮೋಡದಂತೆ ತೇಲಾಡುತ್ತದೆಯಂತೆ. ಆ ಅಕಾರಾದಿ ಪಂಚವೃಕ್ಷಗಳನ್ನು ದೇವಸ್ಥಾನದ ಸುತ್ತ ಬೆಳೆಸುತ್ತಿದ್ದರಂತೆ. ಕಾರಣ ಎಲ್ಲರ ಮನೆಯ ಸುತ್ತ ಹಾಗೆ ಬೆಳೆಸಲು ಅಸಾದ್ಯದ ಕಾರಣ ಹೀಗೆ ದೇವಸ್ಥಾನದ ಸುತ್ತ ಬೆಳೆಯಿಸದರೆ ದಿನಕ್ಕೊಮ್ಮೆ ಭಕ್ತರು ಅದರಿಂದ ಹೊರ ಹೊಮ್ಮುವ ಔಷಧೀಯ ಗುಣದ ಆಮ್ಲಜನಕ ಸೇವಿಸಿದರೆ ಮನಸ್ಸು ಪ್ರಫುಲ್ಲಗೊಂಡು ನೆಮ್ಮದಿಯ ಕೇಂದ್ರವಾಗುತ್ತದೆ ಅಂತ ಹಾಗೆಲ್ಲ ಮಾಡಿದ್ದಾರಂತೆ.

ಜತೆ ಜತೆಗೆ ಮಕ್ಕಳಾಗಲು, ದಮ್ಮು ಕೆಮ್ಮು ಮಾಯವಾಗಿ ಆರೋಗ್ಯ ನಳನಳಿಸಲು, ಕೂಡ ಅದರಿಂದ ಹೊರ ಹೊಮ್ಮುವ ಗಾಳಿ ಹೈ ಲೆವಲ್ ಅಂತೆ. ಈ ಅಂತೆಕಂತೆಗಳ ಕತೆಯನ್ನು ಮುಂದಿಟ್ಟುಕೊಂಡು ನಾನು ಕೆಲಕಾಲ ಅತ್ತಿಮರದ ಕೆಳಗೆ ಬರಬರನೆ ಉಸಿರಾಟ ಮಾಡಿದ್ದಿದೆ. ಹಾಗೂ ಜತೆಜತೆಯಲ್ಲಿಯೇ ಆಹಾ ಎಂಥ ಬರಪ್ಪೂರ್ ನೆಮ್ಮದಿ ಅಂತ ನಂಬಿಕೊಂಡದ್ದೂ ಇದೆ. ಇರಲಿ ಅದರ ತರ್ಕ ಕುತರ್ಕ ಬದಿಗಿಟ್ಟು ಅಕಾರಾದಿ ಪಂಚವೃಕ್ಷದತ್ತ ಹೊರಳೋಣ

ಅತಿ-ಆಲ-ಅಶ್ವಥ್ಥ-ಅಶೋಕ-ಅರಳಿ ಎಂಬುದು ಅಕಾರಾದಿ ಪಂಚವೃಕ್ಷ ಅಂತ ಯಾರೋ ಹೇಳಿದರು. ಅವು ಮನೆಯ ಸುತ್ತ ಇರಬೇಕಂತೆ. ಇದರಲ್ಲಿ ನನಗೆ ಒಂದು ಸಣ್ಣ ಡೌಟು ಹೊರಟಿತು. ಅರಳಿ ಹಾಗೂ ಅಶ್ವಥ್ಥ ಒಂದೇ ಅಂತ. ಆದರೆ ಅಲ್ಲ ಅಂತ ಮತ್ಯಾರೋ ಹೇಳಿದರು. ಅಶೋಕ ವೃಕ್ಷದ ಬಗ್ಗೆಯೂ ಮತ್ತೊಂದು ಡೌಟು. ಈಗ ನೇರವಾಗಿ ಮೇಲಕ್ಕೆ ಹೋಗುವ ಅಶೋಕದ ಮರ ಇದೆಯಲ್ಲ ಅದು ಇದಲ್ಲ. ಅಶೋಕವೃಕ್ಷ ಅಂತಲೇ ಬೇರೆ ಇದೆಯಂತೆ. ಒಟ್ಟಿನಲ್ಲಿ ಅದರ ಬಗೆಗಿನ ಕೆಲ ಗೊಂದಲಗಳ ನಡುವೆ ಏನೋ ಒಂದು ಇದೆ. ಇದೆಲ್ಲದರ ಮಾಹಿತಿ ಪುರೋಹಿತರ ಬಳಿ ಸಿಗಬಹುದೆಂದು ಅವರೊಬ್ಬರನ್ನು ಕೇಳಿದೆ. "ಯಾರಿಗೂ ಬ್ಯಾಡ ಅಂದಿದ್ದು ನಿನಗೆ ಬೇಕು ಮಾರಾಯ, ಸುಮ್ನಿರ ಸಾಕು" ಎಂದು ತಮಗೆ ಗೊತ್ತಿಲ್ಲ ಎಂಬುದನ್ನು ನೇರವಾಗಿ ಹೇಳದೇ ನನ್ನ ಮೇಲೆ ತಿರುಗಿಸಿದರು.

ಅಂತೂ ಎನೋ ಎಂತೋ ಇದೆ ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ ಅಲ್ಲಲ್ಲ ಬರೆಯುತ್ತೇನೆ. ಅಲ್ಲಿಯವರೆಗೆ ಸಿಕ್ಕ ಗಾಳಿಯನ್ನೇ ಮೆಲ್ಲಗೆ ಉಸಿರಾಡುತ್ತಿರಿ. ಓಕೆನಾ..?

ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?,




ಅಬ್ಬಾ ಬೆಳಿಗ್ಗೆ ಅಪರೂಪಕ್ಕೆ ಭಾವನಾ ಲೋಕಕ್ಕೆ ಜಾರಿದೆ. ಮನೆ ಕಟ್ಟುವುದು ತರ್ಲೆ ಅರ್ಜಿಗೆ ಉತ್ತರ ಕೊಡುವುದು, ತಕರಾರುಗಳಿಗೆ ಒದ್ದಾಡುವುದು ಮುಂತಾದ ಕೆಲಸಗಳಿಂದ ಮಂಡೆ ಕೊಚ್ಚೆಯಾಗಿತ್ತು. ಬಣ್ಣ ಬಣ್ಣದ ಕಾಮನ ಬಿಲ್ಲು ಕಂಡು ಒಮ್ಮೆ ಪುಳಕಿತನಾದೆ.

ಅದೆಷ್ಟೋ ವರ್ಷಗಳು ಸಂದುಹೋಗಿತ್ತು ಕಾಮನಬಿಲ್ಲನ್ನು ಆಸ್ವಾದಿಸದೆ. ಆಕಾಶದಲ್ಲಿ ಬಣ್ಣದ ಗೆರೆಗಳನ್ನು ಕಂಡಾಗ ಒಮ್ಮೆಲೆ ಅದ್ಯಾವುದೋ ಲೋಕಕ್ಕೆ ಜಾರಿದಂತಾಯಿತು.

ಯಾವಾಗ್ಯಾವಗಲೋ ಕಾಮನಬಿಲ್ಲು ನೋಡಿದ್ದೆನಾದರೂ ಇಷ್ಟೊಂದು ದೊಡ್ಡ ಕಾಮನಬಿಲ್ಲು ನೋಡಿರಲಿಲ್ಲ. ಲಗುಬಗೆಯಿಂದ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುವ ಮನಸ್ಸಾಗಿ ಓಡಿದೆ. ದುರಾದೃಷ್ಟ ಕ್ಯಾಮೆರಾ ಆನ್ ಮಾಡುತ್ತಿದಂತೆ ಲೋ ಬ್ಯಾಟರಿ ತೋರಿಸಿತು. ಮತ್ತೆ ಗಡಿಬಿಡಿಯಿಂದ ಚಾರ್ಜ್ ಗೆ ಹಾಕಿದೆ. ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನ ಬಿಲ್ಲು ತನ್ನ ದಟ್ಟ ಬಣ್ಣವನ್ನು ಕಳೆದುಕೊಳ್ಳುತ್ತಾ ಸಾಗುತ್ತಿತ್ತು. ದಟ್ಟ ಬಣ್ಣದ ಸುರಸುಂದರ ಕಾಮನಬಿಲ್ಲು ಮೂಡಿದಾಗ ಬ್ಯಾಟರಿಯಲ್ಲಿ ಚಾರ್ಜ್ ಇರಲಿಲ್ಲ ಬ್ಯಾಟರಿ ಚಾರ್ಜ್ ಆಗುವಷ್ಟರಲ್ಲಿ ಕಾಮನಬಿಲ್ಲು ಕರಗತೊಡಗಿತ್ತು. ಎಷ್ಟೋ ಸಾರಿ ನಮ್ಮ ಲೈಫೂ ಹಾಗೆಯೇ ಅಲ್ಲವೆ?, ಲಕಲಕನೆ ಹೊಳೆಯುವ ದೇಹ ಮನಸ್ಸು ಹುರುಪು ಉಲ್ಲಾಸ ಉತ್ಸಾಹ ಇರುವಾಗ ಅವಕಾಶ ಇರುವುದಿಲ್ಲ, ಆವಕಾಶ ಬಂದಾಗ ಉತ್ಸಾಹ ಉಲ್ಲಾಸ ತನ್ನ ಬಣ್ಣವನ್ನು ಕಳೆದುಕೊಂಡಿರುತ್ತದೆ.

Wednesday, September 21, 2011

ಹಾಗಾಗಿ ಹೀಗೆಲ್ಲ......!

ಅದೇಕೋ ಬ್ಲಾಗ್ ಬರೆಯಲಾಗುತ್ತಿಲ್ಲ. ಕೆಲಸದ ಒತ್ತಡ ಅಂತಲ್ಲ, ಒತ್ತಡದ ಕೆಲಸ ಅಂತ ಅನ್ನಬಹುದು. ನನ್ನ ನಲವತ್ತೈದನೇ ವಯಸ್ಸಿನ ವರೆಗೆ ಕಂಡಿರದ ಕೋರ್ಟು ಪೋಲೀಸ್ ಸ್ಟೇಷನ್ ಮುಂತಾದರ ಮೆಟ್ಟಿಲನ್ನ ಏರುವ ಪ್ರಸಂಗಗಳು ಒಂದರ ಹಿಂದೆ ಒಂದು ಬಂದ ಪರಿಣಾಮ ಅಕ್ಷರಗಳನ್ನು ಕುಟ್ಟುವ ಮನಸ್ಥಿತಿ ಇಲ್ಲವಾಗಿದೆ.
........ಎಂಬ ಜ್ಯೋತಿಷಿ ಬಡತನದಲ್ಲಿ ಬೆಳೆದವ. ಸೇರಿ ಪ್ರಪಂಚ ನೋಡಿ ಊರಿಗೆ ಬಂದು ಕವಡೆ ಹಾಕತೊಡಗಿದ. ಅವನ ಪಾಡಿಗೆ ಅವನು ಊರವರ ಪಾಡಿಗೆ ನಾವು. ಅವನ ಬಳಿ ಹೇರಳ ಹಣ ಸೇರಿತು. ಊರನ್ನಾಳುವ ಮನಸ್ಸು ಗರಿಕೆದರಿತು. ದೇವಸ್ಥಾನಕ್ಕೆ ಜಾಗಕ್ಕೆ ಬೇಲಿ ಹಾಕಿದ. ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಬೇಲಿ ಕಿತ್ತೆಸೆದು ಮುಗಿಯಿತು. ಆದರೆ .......ಜ್ಯೋತಿಷಿಯ ಮನಸ್ಸಿನಿಂದ ಸೋಲನ್ನು ಕಿತ್ತುಹಾಕಲಾಗಲಿಲ್ಲ. ಊರವರ ಮೇಲೆ ಸೇದಿಗೆ ಇಳಿದ. ಕೈಯಲ್ಲಿ ಹಣ ಜತೆಗೊಂದಿಷ್ಟು ಹುಂಬ ಭಕ್ತರು. ರಾಕ್ಷಸ ಮನಸ್ಥ್ತಿಗೆ ಇಳಿಯಲು ಇನ್ನೇನು ಬೇಕು. ನನ್ನನ್ನೂ ಸೇರಿದಂತೆ ಊರಿನ ಹದಿಮೂರು ಜನರ ಮೇಲೆ ಹಲ್ಲೆ ದರೋಡೆ ಮುಂತಾದ ಏನೇನೋ ಕೇಸು ಹಣದ ಮುಖಾಂತರ ದಾಖಲಾಯಿತು. ಈಗ ಕೋರ್ಟ್ ಮುಂದೆ ನಾವುಗಳು ಕೈಕಟ್ಟಿ ನಿಲ್ಲಬೇಕು ಪ್ರತೀ ತಿಂಗಳು. ಸಾರ್ವಜನಿಕ ರಸ್ತೆಗೆ ಅಡ್ಡಲಾದ ಬೇಲಿ ತೆರವು ಮಾಡಿದ್ದಕ್ಕೆ ನಮಗೆ ಈಗ ಈ ಬಳುವಳಿ ಆಶ್ರಮದ ನಿರ್ದೇಶಕನಾಗಿದ್ದ .........ಎಂಬ ಈಪುರುಷನ ...! ಸಾಹಸ......! ಆಶ್ರಮಕ್ಕೆ ತಲುಪಿಸಿಯಾಯಿತು. ಒಂದೇ ಸುತ್ತಿನ ಸರ್ವಾನುಮತದ ತೀರ್ಮಾನದೊಂದಿಗೆ ......ನಿರ್ದೇಶಕ ಸ್ಥಾನದಿಂದ ............ಔಟ್.
ಇಂತಹದ್ದು ಹಳ್ಳಿ ರಾಜಕೀಯ. ಇಲ್ಲಿದ್ದೂ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕೂರಲಾಗುವುದಿಲ್ಲ. ಸುಮ್ಮನೆ ಕೂರಲಿಲ್ಲ ಅಂದಮೇಲೆ ಇತರರು ನಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಕೂರಲೇ ಆಗಲಿಲ್ಲಎಂದಮೇಲೆ ಬರೆಯಲಾಗುತ್ತದಯೇ..? ಹಾಗಾಗಿ ಹೀಗೆಲ್ಲ..

Sunday, September 18, 2011

ಪುರ್ಸೊತ್ತಾದಾಗ ಹೋಗಿ ಬನ್ನಿ,


ವರದಹಳ್ಳಿಯಲ್ಲಿ ಹೊಸತಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಕಟ್ಟಡ ಅದ್ಬುತವಾಗಿ ಮೂಡಿಬಂದಿದೆ. ಮೊನ್ನೆ ಹೀಗೆ ಹೋಗಿಯಾಗಿತ್ತು, ಊಟ ಮಾಡಿ ನಿಮಗಾಗಿ ಅಂತ ಒಂದು ಸ್ನ್ಯಾಪ್ ಹಾಕಿಕೊಂಡು ಬಂದೆ. ಕೆಂಪುಕಲ್ಲಿನ ಕಟ್ಟಡ ಅಪರೂಪವಾಗಿ ಕಟ್ಟಿದ್ದಾರೆ.ಪುರ್ಸೊತ್ತಾದಾಗ ಹೋಗಿ ಬನ್ನಿ,



Wednesday, August 24, 2011

ಯಾವಾಗ ಬರುತ್ತೋ ಗೊತ್ತಿಲ್ಲ.

















ಅದು "ಚಕ್ರತೀರ್ಥ" ಅನ್ನೋ ಹೆಸರಿನ ಧಾರಾವಾಹಿಯಂತೆ. ನಿರ್ದೇಶನ ಪಿ ಶೇಷಾದ್ರಿ. ನಮ್ಮ ಮನೆಯ ಹತ್ತಿರ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ನನ್ನ ಹತ್ತಿರವೂ ಒಂದು ಪಾತ್ರ ಮಾಡಿ ಅಂತ ಕೇಳಿದರು. ಮಾಡೋದನ್ನೇ ನೆಟ್ಟಗೆ ಮಾಡಲಾಗಲಿಲ್ಲ ಇನ್ನು ಇದೊಂದು ಅಂತ ಆಗುವುದಿಲ್ಲ ಅಂತ ಅಂದೆ. ಒಂದು ವಾರ ಕಾಲ ಇಲ್ಲಿ ಸುತ್ತ ಮುತ್ತ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ ಯಾವಾಗ ಬರುತ್ತೋ ಗೊತ್ತಿಲ್ಲ.

Tuesday, August 23, 2011

"ಮಹಾನಂದಿ ಸಂಸ್ಮರಣೆ"

ತಾಳಗುಪ್ಪ ಆ ೨೧: "ಗೋಮೂತ್ರ ಪಾನ ಭಸ್ಮ ಸ್ನಾನ ಮನುಷ್ಯನಿಗೆ ವರದಾನ " ಎಂದು ಕೂಡ್ಲಿ ಮಠದ ಶ್ರೀ ಸಿದ್ಧರೂಢ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀ ಕೃಷ್ಣಜನ್ಮಾಷ್ಠಮಿಯ ದಿನದಂದು ತಾಳಗುಪ್ಪದ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಿದ್ದಾಪುರ ಹವ್ಯಕ ಮಂಡಲದ ತಾಳಗುಪ್ಪ-ಇಡುವಾಣಿ ವಲಯದವರು ಏರ್ಪಡಿಸಿದ್ದ "ಮಹಾನಂದಿ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸಭ್ಯರು, ಸಜ್ಜನರು,ಸುಸಂಸ್ಕೃತರ ಜೀವನಕ್ಕೆ ನಾವು ಗೋಮಾತೆಗೆ ಉದಾಹರಿಸುತ್ತೇವೆ, ಅದೇ ರೀತಿ ನಮ್ಮ ಬದುಕಿನಲ್ಲಿಯೂ ಗೋವಿನ ಉತ್ಪನ್ನಗಳ ಬಳಸುತ್ತೇವೆ, ಹಾಲಷ್ಟೇ ಅಲ್ಲದೇ ಗೋಜನ್ಯಗಳಿಂದ ಅನೇಕ ಔಷಧಿಯನ್ನೂ ಪಡೆಯುತ್ತೇವೆ, ಇಷ್ಟೆಲ್ಲಾ ಅನುಕೂಲಗಳನ್ನು ಪಡೆದ ಗೋವಿಗೆ ನಾವು ಸ್ಮರಣೆಯ ಮುಖಾಂತರವಾದರೂ ನಮನ ಹೇಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲಲಿತಾ ನಾರಾಯಣ್ ಮಾತನಾಡಿ, ಕೃಷಿಕರ ಸಂಸ್ಕೃತಿಯಲ್ಲಿ ಹುದುಗಿಹೋಗಿದ್ದ ಗೋ ಸಾಕಣೆ ಪದ್ದತಿ ಪರಿಸ್ಥಿತಿಯ ದೆಸೆಯಿಂದ ನಿಧಾನ ಕಣ್ಮರೆಯಾಗುತ್ತಿದೆ, ಅದು ಜನಮನದಿಂದ ದೂರವಾಗುವ ಮೊದಲು ನಾವು ಪೋಷಿಸ ಬೇಕಿದೆ, ದೇಹ ತ್ಯಜಿಸಿದ "ಮಹಾನಂದಿ" ಜನರ ಮನಸ್ಸಿನಲ್ಲಿ ನೆಲೆಸಿರುವಂತೆ ಜಾನುವಾರು ಸಾಕಾಣಿಕೆಯ ಪ್ರಕ್ರಿಯೆಗೆ ಮತ್ತೆ ಎಲ್ಲೆಡೆ ಮಾನ್ಯತೆ ಸಿಗಲಿ ಎಂದರು.
ಶ್ರೀಮತಿ ಶಾಂಭವಿ ಪರಮೇಶ್ವರ್, "ಮಾ ಗೋ ಪ್ರಾಡಕ್ಟ್" ನ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಜನರು ಗೋ ಉತ್ಪನ್ನಗಳ ಖರೀದಿ ಮಾಡಿ ಬಳಸಿ ತನ್ಮೂಲಕ ಗೋ ಸೇವೆಯನ್ನು ಮಾಡಬೇಕೆಂದು ವಿನಂತಿಸಿದರು.
ಕಲ್ಪನಾ ಸತೀಶ್ ಸಭೆಗೆ ಗೋ ಪ್ರತಿಜ್ನೆಯನ್ನು ಬೋಧಿಸಿದರು, ಸಿದ್ಧಾಪುರ ವಲಯದ ಉಪಾಧ್ಯಕ್ಷ ಶಾಂತಾರಾಂ ಹಿರೇಮನೆಯವರು ಗೋವಿನ ಕುರಿತು ಲಾವಣಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಕಳೆನೀಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿಯ ದಿನದಂದು ಸಂಪನ್ನಗೊಂಡ ಕಾರ್ಯಕ್ರಮಕ್ಕೆ, ಪ್ರಮೇಶ್ವರ್ ಸ್ವಾಗತಿಸಿ ಮಂಜುನಾಥ್ ಕೌಲುಮನೆ ವಂದಿಸಿದರು. ವೇದಿಕೆಯಲ್ಲಿ, ಶ್ರೀ ಸಿದ್ಧಾರೂಢ ಸ್ವಾಮೀಜಿ, ಸುಬ್ರಾಯರು ಮೂಗಿಮನೆ, ಅಂಕದ ಚನ್ನಬಸಪ್ಪ ಶೆಟ್ಟರು, ತಾಳಗುಪ್ಪ ಗ್ರಾ ಪಂ ಅಧ್ಯಕ್ಷ ಮೋಹನ್ ಶೇಟ್, ತಲವಾಟ ಗ್ರಾಪಂ ಅಧ್ಯಕ್ಷೆ ಶಾಂಭವಿ ಪಿ, ತಾಪಂ ಸದಸ್ಯೆ ಸುಮಿತ್ರ, ಜಿಪಂ ಸದಸ್ಯೆ ಲಲಿತಾ ನಾರಾಯಣ್, ಕನ್ನಪ್ಪ, ರಾಬರ್ಟ್ ಮುಂತಾದವರು ಉಪಸ್ಥಿತರಿದ್ದರು.

Tuesday, August 2, 2011

ಕಟ್ಟೋ ಕೆಲಸದ ಕುರಿತು ಕುಟ್ಟೋಕೆ ಮನಸ್ಸಿಲ್ಲ.

ಕಟ್ಟೋದು ಅಂದರೆ ಕಷ್ಟದಕೆಲಸ ಬಿಡಿ. ಅದರಲ್ಲಿಯೂ ಈ ಪಿಚ್ಚಿಂಗ್ ಅಂತ ಇದೆಯಲ್ಲ ಇದನ್ನ ಕಟ್ಟೋ ಕೆಲಸ ಇನ್ನೂ ಒಂದು ತೂಕ ಹೆಚ್ಚಿನದು. ಕೇವಲ ಮಣ್ಣು ಮತ್ತು ಬ್ಯಾಲೆನ್ಸ್ ಬಳಸಿ ಪಿಚ್ಚಿಂಗ್ ಕಟ್ಟೋ ಕೆಲಸ ನೋಡೋದೂ ಒಂದು ಮಜ. ಮುಂದೊಂದು ದಿನ ಡಿಟೇಲ್ ಬರೆಯುತ್ತೇನೆ. ಅದೇಕೋ ಇವತು ಕಟ್ಟೋ ಕೆಲಸದ ಕುರಿತು ಕುಟ್ಟೋಕೆ ಮನಸ್ಸಿಲ್ಲ. ಆದರೂ ತಡೆಯಲಾರದೆ ಫೋಟೋ ಸಮೇತ ಇಷ್ಟು.