Tuesday, January 31, 2012

ಮುಂದೆ ಹೀಗೆ ಕುಟ್ಟಬಹುದು..



ವಿದ್ಯಾರ್ಥಿ ಜೀವನ ಬಂಗಾರದ್ದಂತೆ, ಆದರೆ ಅದು ಬಂಗಾರದ್ದು ಅಂತ ತಿಳಿಯುವುದು ಆ ಜೀವನ ಮುಗಿದಮೇಲೆಯೇ ಅಂತೆ. ಹೌದೇ ಹೌದು. ಈ ಪಟದಲ್ಲಿನ ಮುದ್ದು ಮುದ್ದು ಮಕ್ಕಳು ಹಣೆಯಮೇಲೆ ಕೈಯಿಟ್ಟು ನಿಂತದ್ದು ನೋಡಿದಾಗ ನಮಗೆ ನಿಮಗೆ ಹಾಗನ್ನಿಸುವುದು ನಿಜ. ಆದರೆ ನಾವು ನೀವೂ ಕೂಡ ಹೀಗೆ ಒಂದು ದಿನ ಹಣೆಯಮೇಲೆ ಕೈಯಿಟ್ಟು ಜೈ ಎಂದಿದ್ದಿದೆ. ಒಮ್ಮೆ ಕಷ್ಟಪಟ್ಟು ಆ ದಿನಗಳನ್ನು ನೆನಪಿಸಿಕೊಳ್ಳಿ. ಎಂತಾ ಮಜ ಈಗ ಅಲ್ಲವೇ?. ಹಾಗಾದರೆ ಅಂದು...?

ಥೂ ತಲೆಕೆಟ್ಟು ಹೋಗುತ್ತಿತ್ತು. ಸಾಲಾಗಿ ಒಬ್ಬರ ಹಿಂದೆ ಒಬ್ಬರು ಹೋಗಬೇಕಿತ್ತು. ಮಾಸ್ತರುಗಳೋ ನಮ್ಮನ್ನು ಗದರಿಸಲು ಭಗವಂತ ತಯಾರಿಸಿದ ಯಂತ್ರಗಳಂತೆ ಭಾಸವಾಗುತ್ತಿತ್ತು. ಗಣರಾಜ್ಯೋತ್ಸವವಾದರೆ ಕೊಂಚ ಅಡ್ಡಿಲ್ಲ ಚಳಿ ಚಳಿ ಅಷ್ಟೆ. ಆ ಆಗಸ್ಟ್ ಹದಿನೈದೋ ಭಗವಂತನಿಗೇ ಪ್ರೀತಿ. ನೀವು ಪಟ್ಟಣದಲ್ಲಿ ಓದಿದ ಜನ ಆಗಿದ್ದರೆ ನಿಮಗೆ ಕಪ್ಪುಸುಂದರಿ ಟಾರ್ ರಸ್ತೆಯಮೇಲೆ ನಡಿಗೆ, ನಮಗೆ ಅಮ್ಮಾ... ಕೆಸರು ಕಿಚಕಿಚ ಅದರ ನಡುವೆ ನಮ್ಮ ಪ್ರಭಾತ್ ಪೇರಿ. "ಸಾಗಿ ಮುಂದೆ ಭಾರತೀಯರ ಹಿಂದೆ" ಹಾಡು ಯಾರಿಗೆ ಬೇಕಿತ್ತು..?. ಎರಡು ಕಿಲೋಮೀಟರ್ ಕೆಸರಿನಲ್ಲಿ ಸಾಲಾಗಿ ಸುತ್ತಿ ವಾಪಾಸು ಚಡ್ಡಿಯನ್ನೆಲ್ಲಾ ಒದ್ದೆ ಮುದ್ದೆ ಮಾಡಿಕೊಂಡು ರೂಂ ನಲ್ಲಿ ಕಿಚಿಪಿಚಿಯಲ್ಲಿ ಕುಳಿತು ಕುಟ್ಟುವ ಭಾಷಣ ಕೇಳಬೇಕಿತ್ತು. ಅದನೂ ಅರ್ಥವೇ ಆಗುತ್ತಿರಲಿಲ್ಲ. ಪ್ರತೀ ಬಾರಿಯೂ ಅದೇ ರಾಗ ಅದೇ ಹಾಡು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶಕ್ಕಾಗಿ ನಾವು ತ್ಯಾಗ ಮಾಡಬೇಕು... ಹೀಗೆ ದೊಡ್ಡವರೆನಿಸಿಕೊಂಡ ದೊಡ್ಡ ಜನ ತಮ್ಮ ಮನಸ್ಸೋ ಇಚ್ಛೆ ಕೊರೆಯುತ್ತಿದ್ದುದನ್ನು ಗಲಾಟೆ ಮಾಡದೇ ಆಲಿಸಬೇಕಿತ್ತು. ಅಪ್ಪಿ ತಪ್ಪಿ ಪಿಟಕ್ ಎಂದರೆ ಮನೆಯಲ್ಲಿ ಹೆಂಡತಿ ಕೈಯಲ್ಲಿ ಉಗಿಸಿಕೊಂಡು ಸಿಟ್ಟು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಮಾಸ್ತರರ ಕೋಲಿಗೆ ಆಹುತಿ. ಆದರೂ ಇದರ ನಡುವೆ ಎನೋ ಒಂದು ಸಂಭ್ರಮ ಇತ್ತು ಅಂತ ಈಗ ಅನ್ನಿಸುತ್ತಿದೆ.

ಮೊನ್ನೆ ೨೬ ನೇ ತಾರೀಕು ಅದೇ ಹಳೆಯ ವಾಕ್ಯಗಳು ಅಂದಿನ ಮಕ್ಕಳಿಂದ ಇಂದಿನ ಮಕ್ಕಳಿಗೆ ಕೊರೆಯಲ್ಪಟ್ಟಾಗ ಛೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಆ ಇಂದಿನ ಮಕ್ಕಳಲ್ಲಿ ಒಬ್ಬಿಬ್ಬರಾದರೂ ಮುಂದೆ ಹೀಗೆ ಕುಟ್ಟಬಹುದು.. ಬಂಗಾರದ......

Thursday, January 19, 2012

ಹಂಸ ಕ್ಷೀರ ನ್ಯಾಯ

ಹಂಸ ಕ್ಷೀರ ನ್ಯಾಯ ಎಂಬುದೊಂದು ಇದೆಯಂತೆ. ಅದರ ವಿವರ ಅಂದರೆ, ಹಾಲು ಹಾಗೂ ನೀರನ್ನು ಸೇರಿಸಿ ಒಂದು ತಟ್ಟೆಯಲ್ಲಿ ಹಾಕಿಟ್ಟರೆ ಹಂಸ ಹಾಲನ್ನು ಮಾತ್ರಾ ಹೀರಿಕೊಂಡು ನೀರನ್ನು ಬಿಟ್ಟುಬಿಡುತ್ತದೆಯಂತೆ. ಅದರ ತಾತ್ಪರ್ಯ ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳಲ್ಲಿ ಒಳ್ಳೆಯದನ್ನು ನಾವು ಹೀರಿಕೊಂಡು ಅಥವಾ ಅವಶ್ಯಕತೆಯಿದ್ದುದನ್ನು ಹೀರಿಕೊಂಡು ಕೆಟ್ಟದ್ದನ್ನು ಅಥವಾ ಬೇಡದ್ದನ್ನು ಬಿಡುವ ತಾಕತ್ತು ಇದ್ದರೆ ಚೆನ್ನ ಎಂಬುದು. ಇನ್ನು ಒಳ್ಳೆಯದು ಕೆಟ್ಟದ್ದು ಮುಂತಾದ ವಿಂಗಡಣೆಗಳೆಲ್ಲಾ ದೊಡ್ಡಮಟ್ಟದ ಜನರ ತರ್ಕಕ್ಕೆ ಸಂಬಂಧಪಟ್ಟದ್ದು ಹಾಗಾಗಿ ಅವನ್ನು ಅಲ್ಲಿಯೇ ಬಿಡೋಣ.
ಹಂಸಗಳ ಜೋಡಿಯನ್ನು ತಂದು ಅದಕ್ಕೆ ಶ್ವೇತ-ಸುಂದರ ಎಂಬ ನಾಮಕರಣ ಮಾಡಿ ಕೆರೆಗೆ ತಂದು ಬಿಟ್ಟಮೇಲೆ ಹಂಸಕ್ಷೀರ ನ್ಯಾಯದ ಕತೆ ನೆನಪಾಯಿತು. ಹಾಲು ನೀರು ಸೇರಿಸಿ ಕೊಟ್ಟರೆ ಅವು ಕೊಟ ಕೊಟ ಅಂತ ಸದ್ದು ಮಾಡುತ್ತವಷ್ಟೆ. ಆದರೆ ನೀರಿನ ಜತೆ ಅಕ್ಕಿ ಹಾಕಿದರೆ ಕೇವಲ ಅಕ್ಕಿಯನ್ನು ಮಾತ್ರಾ ಆಯ್ದು ತಿನ್ನುತ್ತವೆ. ಎಂಬಲ್ಲಿಗೆ ಅಂದಿನ ಕಾಲದ ಹಂಸಪಕ್ಷಿ ಹಾಗೆ ಮಾಡುತ್ತಿತ್ತೇನೋ ಎಂದು ಸಮಜಾಯಿಷಿ ನೀಡಬೇಕಷ್ಟೆ.




Thursday, January 12, 2012

ಅದನ್ನ. ಮತ್ತೆ ಇದನ್ನ.

ಹೊರ ನೋಟಕ್ಕೆ ಇಷ್ಟರಮಟ್ಟಿಗೆ ತಯಾರಾಗಿ ನಿಂತಿದೆ ಮನೆ. ಇನ್ನು ಇಂಟೀರಿಯರ್ ನಡೆಯಬೇಕಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಆಗಿರುವ ಅನುಭವ "ಮನೆ ಕಟ್ಟಿ ನೋಡು" ಎಂಬ ಪುಸ್ತಕ ಹೊರ ತರಬಹುದಾದಷ್ಟಿದೆ. ಮನೆ ಕಟ್ಟುವುದು ಒಂದು ಮಹಾ ಅಪರಾಧ ಎಂಬಂತೆ ಬಿಂಬಿಸಿದ ಅನಂತ ಪಟಾಲಂ ನಿಂದ ಹಿಡಿದು ನಿನ್ನೆ ನಮ್ಮ ಮನೆ ಕೊನೆಕೊಯ್ಯುವ ಜನ ಕಂಠಮಟ್ಟ ಕುಡಿದು ಅನಾಹುತಮಾಡಿಕೊಂಡಲ್ಲಿಯವರೆಗೆ, ನಾನು ಮಾಡಿದ ಕೆಲಸಕ್ಕೆ ಸರ್ಕಾರ ಸಂಬಳ ಕೊಡುತ್ತೆ ಎಂದ ಮಂಜುಳಾ ಶಾನುಭೋಗರಿಂದ ಹಿಡಿದು ತಳ್ಳಿ ತಳ್ಳಿ ಇನ್ನಷ್ಟು ತಳ್ಳಿ ಎಂದ ಜನರವರೆಗೂ, ನಾನು ಇಲ್ಲಿ ಕೆಲಸ ಮಾಡಿ ಹೊಸ ಮನುಷ್ಯನಾದೆ ಎಂದ ತಿಲಕ್ ರಾಯ್ಕರ್ ನಿಂದ ಹಿಡಿದು ಕೆಲಸವನ್ನೇ ಮಾಡದೇ ಹಣ ಪೀಕಿದ ಜನರವರೆಗೂ, ಗೊಣಗದೆ ಸೂಪರ್ ಸೂಪರ್ ಎನ್ನುತ್ತಾ ಹಣ ನೀಡಿದ ಗೌರೀಶನಿಂದ ಹಿಡಿದು, ಜವಾಬ್ದಾರಿಯೇ ಇಲ್ಲ ಎಂದ ಅಪ್ಪಯ್ಯನವರೆಗೂ, ಇಲ್ಲಿ ಬೋರ್ ತೆಗೆದರೆ ನೀರು ಚಿಮ್ಮುತ್ತೆ ಎಂದ ಕೃಷ್ಣಮೂರ್ತಿಯಣ್ಣನಿಂದ ಹಿಡಿದು ಮಳೆಗಾಲದಲ್ಲಿ ಸ್ಲ್ಯಾಬ್ ಹಾಕಿದರೆ ಆರು ತಿಂಗಳೂ ನಿಲ್ಲದು ಎಂದು ಹೆದರಿಸಿದ ಜನರವರೆಗೂ, ನೀನು ಮನೆ ಕಟ್ಟು ಯಾರೂ ಏನೂ ಮಾಡಲಾಗದು ಕಾರಣ ನೀನು ಕಾನೂನಿನ ಪ್ರಕಾರ ಸರಿಯಾಗಿದ್ದೀಯ ಎಂದ ಕಾನುತೋಟದ ಶೇಷಗಿರಿಯಣ್ಣ ಹಾಗೂ ಬಾಬುವಿನಿಂದ ಹಿಡಿದು ನಾನು ಹೇಳಿದರೆ ಡಿಸಿ ಬಂದು ಮನೆ ಕೆಲಸ ನಿಲ್ಲಿಸುತ್ತಾರೆ ಎಂದ ಶ್ಯಾಂ ಭಟ್ಟನವರೆಗೂ, ಸಮಸ್ಯೆ ಬಂದಾಗ ಕಣ್ಮುಚ್ಚು ನಿನ್ನ ಕೆಲಸ ಮಾಡುತ್ತಾ ಹೋಗು ಎಂದು ಧೈರ್ಯ ತುಂಬಿದ ಜನಾರ್ಧಣ್ಣನಿಂದ ಹಿಡಿದು ಅವನು ಕಟ್ಟಿದ ಮನೆ ಸರ್ಕಾರಿ ಜಾಗದಲ್ಲಿದೆ ಅದು ಉಳಿಸಿಕೊಳ್ಳುವುದು ಕಷ್ಟ ಎಂದ ಜನರವರೆಗೂ, ಎಲ್ಲವೂ ಪಾತ್ರಗಳೆ ಪರಿಚಯಸ್ಥರೆ, ಅವನ್ನೆಲ್ಲಾ ಒಂದೆಡೆ ಯಾರಿಗೂ ಅವಮಾನವಾಗದಂತೆ ಅಕ್ಷರದಲ್ಲಿ ಬಂಧಿಸಿ, ಅನುಮಾನಕ್ಕೆ ಎಡೆಯಿಲ್ಲದಂತೆ ಬರೆದು ಮುದ್ರಿಸಿ ಮತ್ತೆ ಯಥಾಪ್ರಕಾರ ಹಂಚಬೇಕಿದೆ. ಆವಾಗ ನನಗೆ ನೆನಪು ಬರುವುದು ನಿಮ್ಮನ್ನ. ಎಲ್ಲಿಯೋ ಕುಳಿತು ಭೇಟಿಯಾಗದೆ ಪರಿಚಯವಿಲ್ಲದೆ ಇದ್ದರೂ ಗಾಡ್ ಬ್ಲೆಸ್ ಯೂ ಅನ್ನುತ್ತೀರಲ್ಲ ಅದನ್ನ. ಮತ್ತೆ ಇದನ್ನ.


Monday, December 26, 2011

ಆದರೆ ನಾವು ನೀವು ಜಂಜಡದಲ್ಲಿ ಮುಳುಗಿದ್ದೇವೆ ನೋಡುವುದೆಲ್ಲಿ?

"ಹಂಸ ಪಕ್ಷಿ" ಹೆಸರೇ ಎಂತ ಚಂದ ಅಲ್ವಾ?, ಇನ್ನು ಅದರ ನೋಡಲು ಅದರ ಒನಪು ವಯ್ಯಾರ ವೀಕ್ಷಿಸಲು, ಅದರ ದನಿ ಕೇಳಲು ಸಿಕ್ಕರೆ ಅದರ ಮಜವೇ ಬೇರೆಯದು ಬಿಡಿ. ಅಂತಹ ಹಂಸದ ಜೋಡಿಯೊಂದನ್ನು ಖರೀದಿಸಿ ನಮ್ಮ ಹೊಸಮನೆಯ ಬಳಿಯ ಕೆರೆಯಲ್ಲಿ ತಂದು ಬಿಟ್ಟಿದ್ದೇನೆ. ವಾರದಿಂದ ಅದರ ಅಂದ ಚಂದ ಆಹಾರ ವಿಹಾರ ನೋಡುವ ಮಜ ನಡೆಯುತ್ತಿದೆ.
ಬೂರ್ಲುಕೆರೆ ಪ್ರಕಾಶರ ಮನೆಯಿಂದ ಒಂದು ಗಂಡು ಹಾಗು ಒಂದು ಹೆಣ್ಣು ಹಂಸವನ್ನು ಸಂಜೆ ತಂದು ರಾಮಕೃಷ್ಣನ ಮನೆಯ ಜಗುಲಿಯಲ್ಲಿ ಬಿಟ್ಟಾಯಿತು. ಬೆಳಿಗ್ಗೆ ಮುಂಚೆ ಹಂಸಗಳ ನಡೆ ಯ ಬಗ್ಗೆ ಕುತೂಹಲದಿಂದ ಓಡಿದೆ. ಜಗುಲಿಯಲ್ಲಿ ಅಕ್ಕಿಯ ತಿನ್ನುತಿದ್ದವು. ಅಕ್ಕಿ ತಿಂದ ಮೇಲೆ ಅಲ್ಲಿಯೇ ಹತ್ತಿರವಿರುವ ಹೊಂಡಕ್ಕೆ ಹಂಸಗಳನ್ನು ಇಳಿಸಲಾಯಿತು. ಅದೇಕೋ ಅಲ್ಲಿ ಅವು ಸರಿಯಾಗಿ ನಿಲ್ಲಲಿಲ್ಲ. ಸರಿ ಏನು ಮಾಡುತ್ತವೆ ಎಂದು ನೋಡೋಣ ಎಂದು ಸುಮ್ಮನುಳಿದೆವು. ನಿಧಾನ ಹೊಂಡದಿಂದ ಮೇಲೆಬಂದ ಜೋಡಿ ಕೆರೆಯತ್ತ ಹೊರಟವು. ನನಗೆ ಪರಮಾಶ್ಚರ್ಯ. ಆ ಜಾಗದಿಂದ ಮನುಷ್ಯ ನಿಂತರೆ ಮೇಲೆ ಒಂದು ಕೆರೆ ಇದೆ ಎಂದು ಊಹಿಸಲು ಆಗುವುದಿಲ್ಲ. ಆದರೆ ಹಂಸಗಳಿಗೆ ಅಲ್ಲೊಂದು ಬರೊಬ್ಬರಿ ಕೆರೆ ಇದೆ ಅಂತ ಅರ್ಥವಾಗಿತ್ತು. ಪ್ರಕೃತಿಯ ತಾಕತ್ತಿಗೆ ನಾನು ಒಮ್ಮೆ ಬೆರಗಾದೆ. ಅತ್ತ ಕಡೆನೋಡುತ್ತಾ ಟ್ರೊಂಯ್ ಟ್ರೊಂಯ್ ಎಂದು ಕೂಗುತ್ತಾ ಹೆಜ್ಜೆಯ ಮೇಲೆ ಹೆಜ್ಜೆಯ ನೀಡುತ್ತಾ ಎರಡೂ ಹಂಸಗಳು ಕೆರೆಯತ್ತ ಮೊದಲೇ ನೋಡಿ ಬಂದಿರುವಂತೆ ದಾರಿಯಲ್ಲಿ ಹೊರಟವು. ದೊಡ್ಡ ಹಂಸ ರಸ್ತೆಯಲ್ಲಿ ಸಾಗಿ ಕೆರೆ ಏರಿ ಮೇಲೆ ನಿಂತು "ಟ್ರೊಂಯ್" ಎಂದು ಒಮ್ಮೆ ಕೂಗಿ ಮತ್ತೊಂದು ಹಂಸದತ್ತ ತಿರುಗಿ ಹೇಳಿದ ಪರಿ ಇದೆಯಲ್ಲಾ ಅದರ ಕ್ಷಣ ವರ್ಣಿಸಲಾಗದು ಬಿಡಿ. ಅಂತೂ ಮಜ ಇದೆ ಗಮನಿಸುವುದರಲ್ಲಿ ಪ್ರಕೃತಿಯನ್ನ, ಆದರೆ ನಾವು ನೀವು ಜಂಜಡದಲ್ಲಿ ಮುಳುಗಿದ್ದೇವೆ ನೋಡುವುದೆಲ್ಲಿ?

Thursday, December 8, 2011

ಕೆಂಪು ಟವೆಲ್ಲು ಮತ್ತು......

ನಗುವುದು ಆರೋಗ್ಯ, ನಗಿಸುವುದು ಕಲೆ. ಅದಕ್ಕೆ ಜೋಕ್ ಗಳು ಸಾವಿರಾಋ ಸೃಷ್ಟಿಯಾಗಿವೆ. ಹಾಗಂತ ಗೊತ್ತಿದ್ದ ನಗೆಹನಿಗಳನ್ನು ಸಮಯ ಸಂದರ್ಭಕ್ಕನುಸಾರವಾಗಿ ಹೇಳುವುದು ಮತ್ತೊಂದು ಕಲೆ. ಅಂತಹ ಕಲೆಗಾರರ ಸಂಖ್ಯೆ ವಿರಳ. ನಮ್ಮ ನಿಮ್ಮ ಜತೆಯ ಜನ ಅಂತಹವರು ಸಿಕ್ಕಿದರೆ ಧಾವಂತದ ಬದುಕಿನಲ್ಲಿಯೂ ಸಣ್ಣ ಮಜ ಸಿಗುತ್ತದೆ.
ನಮ್ಮ ತಲವಾಟದ ಹರಿಭಟ್ರ ಗಣಪತಿ ಅಂತಹ ಅಪರೂಪದ ಜನ. ಎಲ್ಲೋ ಅಪರೂಪಕ್ಕೆ ಮಾತನಾಡುವ ಆತ ಗುಂಪಿನಲ್ಲಿ ಒಂದು ಮಜ ಕೊಡುತ್ತಾನೆ. ನಿನ್ನೆ ಒಂದು ಪ್ರಸಂಗದ ಜಲಕ್ ಇಲ್ಲಿದೆ.
ಡೈರಿ ಕಟ್ಟೆಯಲ್ಲಿ ಹತ್ತೆಂಟು ಜನ ಸೇರಿದಾಗ ತಾಸರ್ದ ತಾಸು ಹರಟುವುದು ದಿನಚರಿ. ಹಾಗೆ ಹರಟುತ್ತಾ ಕುಳಿತಾಗ ಯಾರೋ ಒಬ್ಬರು ಹೇಳಿದರು. "ನನ್ನ ಮಗಂಗೆ ನಿನ್ನೆಯಿಂದ ಬೇಧಿ ಮಾರಾಯ, ಎಂಥ ಔಷಧಿ ಮಾಡಿದರು ನಿಲ್ತಾನೆ ಇಲ್ಲ" ಎಂದ.
ಅದಕ್ಕೆ ಗಣಪತಿ "ಕೆಂಪು ಟವೆಲ್ ತೋರ್ಸಾ, ನಿಂತು ಹೋಗುತ್ತೆ ಬೇಧಿ" ಎಂದ.
ಎಲ್ಲರಿಗೂ ಆಶ್ಚರ್ಯ, ಅದೆಂತಾ ಮದ್ದು, ಕೆಂಪು ಟವೆಲ್ ತೋರಿಸುವುದಕ್ಕೂ ಭೇಧಿ ನಿಲ್ಲುವುದಕ್ಕೂ ಎತ್ತಣದೆತ್ತಣ ಸಂಬಂಧ ಅಂತ ಎಲ್ಲರೂ ಗಣಪತಿಯತ್ತ ಮಿಕಿಮಿಕಿ ನೋಡತೊಡಗಿದರು. ಆತ ಮೌನಿ. ಅಂತೂ ಕುತೂಹಲ ತಡೆಯಲಾರದೆ "ಅದೇಗೆ?" ಎಂದು ಗಂಟು ಬಿದ್ದಾಗ ಆತ ಘನಗಂಭೀರ ಮುಖಾರವಿಂದದೊಡನೆ " ಅಲ್ಲಾ,, ಕೆಂಪು ಬಟ್ಟೆ ತೋರಿಸಿದರೆ ಅಷ್ಟುದ್ದಾ ರೈಲೇ ನಿಲ್ಲುತ್ತದೆಯಂತೆ... ಇನ್ನು ಅಪ್ಪಿಯ ಭೇಧಿ ನಿಲ್ಲದೇ ಇರುತ್ತಾ...." ಎಂದು ಹೇಳಿದಾಗ.... ನಂತರ ಎಲ್ಲರೂ ಘೊಳ್ಳಂತ ನಕ್ಕಿದ್ದು ಎಷ್ಟು ಅಂತ ವಿವರಿಸುವ ಅಗತ್ಯ ಇಲ್ಲ ತಾನೆ...?

Tuesday, November 29, 2011

ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.

ನಾನು ಹಾಗೂ ನನ್ನ ಸ್ವಭಾವ ಸಿಕ್ಕಾಪಟ್ಟೆ ಬದಲಾಗಿದೆಯಾ? ಎಂಬ ಪ್ರಶ್ನೆ ನನ್ನನ್ನೇ ನಾನು ಕೇಳಿಕೊಂಡೆ. "ಹೌದು" ಎಂಬ ಉತ್ತರ ಆಳದಿಂದ ಬಂತು. ಒಂಥರಾ ಹಿಂಡಿತು ಮನಸ್ಸು. ಆ ಪ್ರಶ್ನೆ ನನ್ನನ್ನು ನಾನು ಕೇಳಿಕೊಳ್ಳುವುದಕ್ಕೆ ಕಾರಣವಿದೆ.
ಇತ್ತೀಚಿಗೆ ನನಗೆ ಬರೆಯಲಾಗುತ್ತಿಲ್ಲ. ಬ್ಲಾಗ್ ಬರಹ ಪುಸ್ತಕ ಬಿಡುಗಡೇಯಾದಬಳಿಕ ನಾನೆಲ್ಲೋ ಬ್ಲಾಗೆಲ್ಲೋ. ನಿತ್ಯ ಬೆಳಿಗ್ಗೆ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ, ತೋಟ ತಿರುಗಿ, ಜೇನು ಪೆಟ್ಟಿಗೆಯ ಮುಚ್ಚಳ ತೆಗೆದು ನೋಡುತ್ತಾ ಕೆಲಸ ಮಾಡುತ್ತಾ ಕುಳಿತರೆ ಮತ್ತೆ ತಿಂಡಿ ಸಮಯಕ್ಕೆ ನನ್ನನ್ನು ಕರೆಯಬೇಕು. ತಿಂಡಿ ತಿಂದು ಒಂದಿಷ್ಟು ಬರೆದರೆ ಅದೇನೋ ನಿರುಮ್ಮಳ ಭಾವ. ಬರಹದಲ್ಲಿ ಸತ್ವ ಇದೆಯೋ..? ಅದರಿಂದ ಯಾರಿಗಾದರೂ ಪ್ರಯೋಜನವೋ..? ಅವರು ಹೇಗೆ ಅರ್ಥಮಾಡಿಕೊಂಡರು, ಅದರ ಭಾವಾರ್ಥವೇನು, ಧನ್ಯಾರ್ಥವೇನೂ..? ಆಳದ ಮಾತೇನು..? ಎಂಬಂತಹ ವಿಷಯದ ಗೊಂದಲ ನನ್ನಲ್ಲಿ ಇರಲಿಲ್ಲ. ಬರೆಯಬೇಕು ಬರೆದಿದ್ದೇನೆ ಅಷ್ಟೆ, ಅದು ನನ್ನ ಮಟ್ಟ ಇಷ್ಟೆ.
ಆದರೆ ಮನೆಯೆಂಬ ಮನೆ ಕಟ್ಟಿಸತೊಡಗಿದೆ ನೋಡಿ, ಹೊಸ ಪ್ರಪಂಚ ಅನಾವರಣಗೊಳ್ಳತೊಡಗಿತು. ನನ್ನ ದಿನಚರಿ, ಸ್ವಭಾವ ಗುಣ ಎಲ್ಲಾ ಅಯೋಮಯ. ಈಗ ನಿತ್ಯ ತರ್ಲೆ ಅರ್ಜಿಗಳಿಗೆ ಉತ್ತರ ಕೊಡುವುದು, ಅನಂತನ ತರ್ಲೆ ಪಟಾಲಂ ನ ಕಿರುಕುಳಕ್ಕೆ ಪ್ರತಿಕ್ರಿಯಿಸುವುದು, ಯಾರು ಯಾವಾಗ ಯಾವ ಅರ್ಜಿ ಹಾಕುತ್ತಾರೆ?, ಅದಕ್ಕೆ ಯಾರ್ ಹಿಡಿದು ಸರಿಮಾಡಿಸಬೇಕು ಅಂತ ಪ್ಲಾನ್ ಹೆಣೆಯುವುದು, ಮುಂತಾದ ಬೇಡದ ಕೆಲಸಗಳು ತಲೆತುಂಬಿಕೊಂಡು ಕಾಡಿ ಕರಡಿ ಬೆಂಡಾಗಿ, ನನ್ನಲ್ಲಿನ ಕಥೆಗಾರ ಮರೆಯಾಗತೊಡಗಿದ್ದಾನೆ. ಜೇನುಗಳೆಲ್ಲಾ ಪೆಟ್ಟಿಗೆ ಬಿಟ್ಟು ಹೊರಟುಹೋಗಿದೆ. ನಿಮ್ಮ ಹಾಗೂ ನಿಮ್ಮ ಕಾಮೆಂಟ್ ನೆನಪು ಎಲ್ಲೋ ಆಳದಲ್ಲಿ ಕುಟುಕಿದಂತಾಗುತ್ತಿದೆ ಅಷ್ಟ್ಯೆ
ತಾಳಗುಪ್ಪದಲ್ಲಿ ಲಿಂಗರಾಜು ಎಂಬೊಬರಿದ್ದಾರೆ. ಅವರು ಮಾತೆತ್ತಿದರೆ "ಚಪ್ಪಲಿಲಿ ಹೊಡಿ ಸೂಳೆಮಂಗಂಗೆ" ಅಂತಾರೆ. ರಾಜಣ್ಣ ನೀವು ಹೀಗೆಕೆ? ಎಂದೆ. ನಾನು ಒಳ್ಳೆಯವನಾಗಿದ್ದೆ, ಆದರೆ ಸಮಾಜ ನನ್ನನ್ನು ಒಳ್ಳೆಯವನ್ನಾಗಿಸಲಿಲ್ಲ, ಹಾಗೆಯೇ ಎಲ್ಲರೂ..." ಎಂದರು. ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.

Monday, November 7, 2011

ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು

ಹಂಸಗಾರು ಶ್ರೀಧರಣ್ಣ ಹೇಳಿದ್ದ " ರಾಘು ಕಥೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆ ಬಾಗಿಲು ತಟ್ಟುತ್ತವೆ" ಅಂತ ಕತೆಗಾರರೊಬ್ಬರು ಹೇಳಿದ್ದರು, ಅದರ ಅನುಭವ ನಿನಗಾಗ ಬಹುದು ಎಂದು. ಈ ಮಾತು ಆತ ನನಗೆ ಹೇಳಿದ್ದು "ಕಟ್ಟು ಕತೆಯ ಕಟ್ಟು" ಕಥಾಸಂಕಲನ ಹೊರ ಬಂದ ವರ್ಷ. ನನಗೆ ಅದರ ಅನುಭವ ಆಗಿರಲಿಲ್ಲ. ಕತೆಗಳಲ್ಲಿನ ಪಾತ್ರಗಳು ಎದ್ದು ಬಂದು ಮನೆಬಾಗಿಲ ತಟ್ಟುವುದರ ಅನುಭವ ಈಗ ನನಗೆ. ಅದೊಂದು ವಿಚಿತ್ರ ಮಜ ಕೂಡ.
ನಾನು ಸರಿ ಸುಮಾರು ಮೂವತ್ತು ಕತೆಗಳನ್ನು ಬರೆದಿದ್ದೇನೆ, ಅದು ಕನ್ನಡದ ಪತ್ರಿಗೆಳಲ್ಲಿ ಪ್ರಕಟವಾಗಿವೆ, ಅದರ ಸಂಕಲನ ಹೊರಬಂದಿದೆ. ಕಥೆಗಳೆಂದರೆ ಅಷ್ಟೆ, ನಾವೇಷ್ಟೇ ಬೇಡವೆಂದು ಪ್ರಯತ್ನಿಸಿದರೂ ನಮ್ಮ ಸುತ್ತಮುತ್ತಲ ಘಟನೆಗಳು, ವ್ಯಕ್ತಿಗಳು, ಪಾತ್ರಗಳ ರೂಪದಲ್ಲಿ ಸೇರಿಕೊಂಡುಬಿಡುತ್ತವೆ. ಮೋಸಗಾರರು, ಲಂಪಟರು ಎಂದೆಲ್ಲಾ ಕರೆಯಿಸಿಕೊಳ್ಳುವ ಮಂದಿಗಳೂ ಅದರ ಕಥಾವಸ್ತುವಾಗುತ್ತಾರೆ, ಸಜ್ಜನರ ಅಸಹಾಯಕತೆಯೂ ಕಥೆಗಳಾಗುತ್ತವೆ. ಆದರೆ ಪ್ರಕೃತಿಯ ವೈಚಿತ್ರವೆಂದರೆ ಎಂಥಾ ಘನಾಂಧಾರಿ ಮೋಸಮಾಡುವ ವ್ಯಕ್ತಿಯೂ ಕೂಡ ತನ್ನನ್ನು ತನ್ನ ಬದುಕನ್ನು ಸಮರ್ಥಿಸಿಕೊಳ್ಳುತ್ತಾ ಮುಂದೆಸಾಗಿಸುವ ಬುದ್ಧಿಯನ್ನು ನೀಡಿದೆ ಸೃಷ್ಟಿ.
ಲಂಚ ಹೊಡೆದವನಿಂದ ಹಿಡಿದು, ಕೊಲೆ ಮಾಡಿದವನ ವರೆಗೂ, ಅತ್ಯಾಚಾರ ಮಾಡುವವನಿಂದ ಹಿಡಿದು ಪ್ರೀತಿಸಿ ಕೈಕೊಟ್ಟವನ ವರೆಗೂ, ಅಪ್ಪ ಅಮ್ಮನ ಹೊರಹಾಕಿದವನಿಂದ ಹಿಡಿದು ಹೆಂಡತಿ ಬಿಟ್ಟವನವರೆಗೂ, ಹೆಂಡ ಕುಡಿದವನಿಂದ ಹಿಡಿದು ಚರಸ್ ಮಾರಿದವನವರೆಗೂ, ಸಾರ್ವಜನಿಕ ಜಾಗ ಕಬಳಿಸುವವನಿಂದ ಹಿಡಿದು ಸಾರ್ವಜನಿಕರನ್ನು ತಿಂದು ಮುಗಿಸುವವನವರೆಗೂ, ಅವನದೇ ಆದ ಸಮರ್ಥನೆಯ ಕಾರಣಗಳು ಇರುತ್ತವೆ. ಸಮಾಜ ಒಪ್ಪಲಿ ಬಿಡಲಿ ಆತನ ಸಮರ್ಥನೆ ಸಮಜಾಯಿಶಿ ಜೀವನಾಂತ್ಯದವರೆಗೂ .... ಆದರೆ..
ಕತೆಗಳಲ್ಲಿ ಬರುವ ಪಾತ್ರಗಳನ್ನು ತನಗೆ ಆತ ಹೋಲಿಸಿಕೊಳ್ಳತೊಡಗುತ್ತಾನೆ. ತಾನು ಮಾಡಿದ ತಪ್ಪು ಕುಂತಾಗ ನಿಂತಾಗ ಕಾಡತೊಡಗುತ್ತವೆ. ಒಪ್ಪಿಕೊಳ್ಳಲು ಇಗೋ ಮನಸ್ಸುಕೊಡದು. ಆಗ ಕಾಣಿಸುವವನೇ ಕತೆಗಾರ. ದಡಕ್ಕನೆ ಎದ್ದು ಕತೆಗಾರನ ಮನೆಬಾಗಿಲನ್ನು ತಟ್ಟುತ್ತವೆ ಪಾತ್ರಗಳು. ಕತೆಗಾರ ನ್ಯಾಯಯುತವಾಗಿ ಇದ್ದರೆ... (ಇದ್ದರೆ ಏನು ?ಇರಬೇಕು, ) ಬಾಗಿಲ ತಟ್ಟಿ ತಟ್ಟಿ ಮಾಯವಾಗುತ್ತವೆ, ಇಲ್ಲದಿದ್ದಲ್ಲಿ ಅನುಭವಿಸಬೇಕು ನ್ಯಾಯವೆಂದರೆ ಹಾಗೇನೆ, ಅದು ಎಲ್ಲರಿಗೂ ಒಂದೆ,
ಬಾಗಿಲು ತಟ್ಟುವವರ ಕೈ ನೋವಾಗುವ ತನಕ ಸುಮ್ಮನಿರಬೇಕಷ್ಟೆ.