Monday, August 13, 2012

ಇಲ್ಲಿ ಚೊರೆದೆ ಅಷ್ಟೆ.

"ನಾನು ಸತ್ಯವನ್ನೇ ಹೇಳುತ್ತೇನೆ," ಅದೇನೋ ಸರಿ ಮರುಕ್ಷಣ "ನಾನು ಹೇಳುವುದೆಲ್ಲಾ ಸತ್ಯ" ಅಂದರೆ ಮೊದಲನೇ ಸಾಲಿಗೆ ಏನಂತ ಅರ್ಥ ಕಲ್ಪಿಸುವುದು..?.  ಅಷ್ಟಕ್ಕೂ ನಾವುಗಳು ನಮ್ಮ ಬದುಕಿನುದ್ದಕ್ಕೂ ಕೇವಲ ಸತ್ಯವನ್ನೇ ಹೇಳಿಕೊಂಡು ಬರಲು ಸಾದ್ಯವೇ..? ಸುಳ್ಳು ಹೇಳುತ್ತಾ ಬದುಕಿದ್ದಕ್ಕೆ ನಮ್ಮ ಅಂತರಂಗದಲ್ಲಿಯೇ ಸಾಕಷ್ಟು ಉದಾಹರಣೇ ಇಲ್ಲವೇ..? ಹೀಗೆ ಪ್ರಶ್ನೆಗಳು ಹುಟ್ಟತೊಡಗಿದರೆ ಪಟಕ್ಕನೆ ಬೇರೆ ಕೆಲಸದತ್ತ  ಹೊರಳುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ತಲೆಯೆಂಬ ತಲೆ ಮೊಸರು ಗಡಿಗೆ ಯಾಗಿಬಿಡುತ್ತದೆ. ಅಥವಾ ಒಂದು ಪರಿಪಕ್ವ ತೀರ್ಮಾನಕ್ಕೆ ಬರುವ ಮನಸ್ಥಿತಿ ಇದ್ದರೆ ಅದೂ ಒಳ್ಳೆಯದು.
       ಈ ಮನುಷ್ಯ ಪ್ರಪಂಚದಲ್ಲಿ ಸುಳ್ಳು-ಸತ್ಯ ಎರಡೂ ಒಟ್ಟಿಗೆ ಸಾಗುತ್ತಲಿದೆ ಅನಾದಿಯಿಂದಲೂ. ನಾವು ಸುಳ್ಳನ್ನು ಹೇಳುತ್ತಾ ಅದೇ ಸತ್ಯ ಎಂದು ಬಿಂಬಿಸುತ್ತಾ ಸಾಗುತ್ತಿರುತ್ತೇವೆ. ಸತ್ಯ ಹೇಳುತ್ತಲಿದ್ದರೂ ಇಲ್ಲ ಅದು ಸುಳ್ಳು ಎಂದು ಜನ ಬಿಂಬಿಸುತ್ತಾ ಸಾಗುತ್ತಲಿರುತ್ತಾರೆ. ಆದರೆ ನಿಜವಾದ ಪರಮ ಸತ್ಯ ಅಂತ ಒಂದು ಇದೆಯಲ್ಲ ಅದಕ್ಕೆ ಕಾಲ ಉತ್ತರಿಸುತ್ತದೆ. ಆದರೆ ಅಷ್ಟರೊಳಗೆ ಸತ್ಯವನ್ನು ಸುಳ್ಳೆಂದವರೂ ಸುಳ್ಳನ್ನು ಸತ್ಯವೆಂದವರು ಕಾಲವಾಗಿಬಿಟ್ಟಿರಬಹುದು. ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಮುಂತಾಗಿ ಎಂದೂ ಇಲ್ಲ ಇಂದೂ ಇಲ್ಲ ಮುಂದೂ ಇಲ್ಲ. ನಾವು ಎಲ್ಲಿ ನಿಂತುಕೊಂಡಿದ್ದೇವೆ ಎಂಬುದರ ಮೇಲೆ ಎಷ್ಟು ಕಾಲ ಅದರ ಮೇಲೆ ಇರುತ್ತೇವೆ ಎಂಬುದರ ಮೇಲೆ ಸೋಲು ಗೆಲುವುಗಳು. ಅದಕ್ಕೂ ತುಸು ಮೇಲೆ ನಿಂತು ಆಲೋಚಿಸಿದರೆ ಈ ಪ್ರಪಂಚದಲ್ಲಿ ಸೋಲೂ ಇಲ್ಲ ಗೆಲುವೂ ಇಲ್ಲ ಅವೆಲ್ಲಾ ಅವರವರಿಗೆ ಬೇಕಾದಂತೆ ಅರ್ಥೈಸುವ ರೀತಿಯಲ್ಲಿದೆ ಅಷ್ಟೆ. ಹಾಗಾಗಿ ಬದುಕನ್ನ ತೀರಾ ತಲೆಗೆ ಹಚ್ಚಿಕೊಳ್ಳಬೇಡಿ. ಸುಮ್ಮನೆ ಸಾಗಿರಿ, ನೇವು ಬೇರೆಯವರ ಹಿಂದೆ ನಿಮ್ಮಹಿಂದೆ ಬೇರೆಯವರು. ಸಿಕ್ಕಿದ್ದ್ದೆಲ್ಲಾ ದಕ್ಕಿದ್ದೆಲ್ಲಾ ಮಜ ಅಂದರೂ ಸುಳ್ಳು ಅಂತ ಜನಅ ನ್ನಬಹುದು, ಅಯ್ಯೋ  ಅಂದರೂ ಜನ ಸತ್ಯ ಅನ್ನದಿರಬಹುದು.
         ಅಯ್ಯ ಬೆಳಗಾ ಮುಂಚೆ ಇದೆಂತಾ ಬ್ಲಾಗಿದೆ ಮಾರಾಯ ಅಂದಿರಾ..? ಇಲ್ಲಪ್ಪ ಇದು ನಂದಲ್ಲ ನಿನ್ನೆ ಯಾರೋ ಸಿಕ್ಕಿದ್ದರು ಅರ್ದ ಗಂಟೆ ಪಟ್ಟಂಗಕ್ಕೆ, ಅವರು ಹೇಳಿದರಪ್ಪಾ.. ಇಲ್ಲಿ ಚೊರೆದೆ ಅಷ್ಟೆ. ಇಷ್ಟನ್ನೂ ಒಂದೇ ವಾಕ್ಯದಲ್ಲಿ ಹೇಳಬುದಿತ್ತು ಅದು ನನಗೆ ಬರಲಿಲ್ಲ ಅಷ್ಟೆ.

Thursday, August 9, 2012

ಒಮ್ಮೆ ನೋಡು ಜೋಗಾದ್ ಗುಂಡಿ

ಆಶ್ಲೇಷ ಮಳೆ ಅಬ್ಬರಿಸಿದ ಕಾರಣ ಜೋಗ ಜಲಪಾತ ತುಂಬಿ ತುಳುಕಾಡುತ್ತಿದೆ. ನಿತ್ಯ ಪ್ರವಾಸಿಗರ ಧಾಳಿಯಿಂದ ಗಿಜಿಗಿಜಿ ಎನ್ನುತ್ತಿದೆ ಜೋಗ. ನಿಮಗೂ ಹೇಗೂ ಪುರ್ಸೊತ್ತಿದ್ದರೆ ಬಂದು ಹೋಗಬಹುದು. ಇಲ್ಲ ಆಗಲ್ಲ ಅಂತಾದ್ರೆ ಒಮ್ಮೆ  ಈ ಫೋಟೋ ನೋಡಿ ಕಣ್ತುಂಬಿಕೊಂಡು ಬಿಡಿ. ಯಾಕಂದ್ರೆ "ಸಾಯೊದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ" ಅಂಬೋ ಕವಿ ವಾಣಿಯನ್ನು   ಬೆಂಬಲಿಸಬೇಕಲ್ಲ ಹಾಗಾಗಿ. ಶುಭದಿನ

Tuesday, August 7, 2012

ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

                "ನೋಡಿ ನಾನು ಹೀಗೆ ಹೇಳುತ್ತಿದ್ದೀನಿ ಅಂತ ನೀನು ತಪ್ಪು ತಿಳಿದುಕೊಳ್ಳಬೇಡ. ಇತ್ತೀಚೆಗೆ ನೀನು ತೀರಾ ಒಂಥರಾ ಆಗುತ್ತಿದ್ದಿ, ಯಾವಾಗಲೂ ಬೇಡದ ಚಿಂತೆ, ಅದೇ ಮಾತು, ಎಲ್ಲಿ ಕಳೆದುಹೋಗಿದ್ದೀ ನೀನು" ಆತ ಹಾಗಂದ ಕ್ಷಣ ನಾನು ಒಮ್ಮೆ ತಬ್ಬಿಬ್ಬಾದೆ. ಹೌದಾ....? ಅಂತ ನನ್ನನ್ನು ನಾನು ಕೇಳಿಕೊಂಡೆ ರಾತ್ರಿ ಮಲಗಿದಾಗ. ಹೌದೇ ಹೌದು ಈ ಒಂದು ವರ್ಷದಲ್ಲಿ ಮನೆ ಕಟ್ಟುವಾಗಿನ ಸಮಯದಲ್ಲಿ ಬಂದ ತರ್ಲೆಗಳ ಬಗ್ಗೆ ಯೋಚಿಸುತ್ತಾ ನಾನು ಅವರಂತೆ ಆಡಲು ಶುರುವಿಟ್ಟುಕೊಂಡಿದ್ದೆ. ನಿಂತಲ್ಲಿ ಕುಂತಲ್ಲಿ ನಾನೂ ತರ್ಲೆ ಅರ್ಜಿ ಹಾಕಬೇಕು ಅವರಿಗೂ ಹೀಗೆ ಆಟ ಆಡಿಸಬೇಕು, ನಾನು ಕಟ್ಟಿಸುತ್ತಿದ್ದ ಸ್ವಂತ ಜಾಗದ ಮನೆಗೆ ಇಷ್ಟೆಲ್ಲಾ ತೊಂದರೆ ಕೊಟ್ಟರು ಅಂತಾದರೆ ಅವರೆಲ್ಲಾ ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡ ಮನೆಗಳಿಗೆ ನಾನೂ ಹೈಕೋರ್ಟ್ ಗೆ ಹೋಗಿ ಸ್ಟೆ ತರಬೇಕು, ಛೆ ಛೇ ಛೇ ಅಂತದ್ದೇ ಆಲೋಚನೆಯಿಂದ ನಿಧಾನ ಇಳಿಯತೊಡಗಿದ್ದೆ. ಆವಾಗಲೇ ಅವನು ಎಚ್ಚರಿಸಿದ, ಅವನೆಂದರೆ ಬೇರೆ ಯಾರೂ ಅಲ್ಲ ನನ್ನೊಳಗಿನ ಅವನು.

                ನೋಡಿ ನಾವೂ ನೀವು ಯಾರು ಎಷ್ಟೇ ಹಾರಾಡಲಿ ಕೂಗಾಡಲಿ ಚೀರಾಡಲಿ ಇಲ್ಲಿ ಒಂದು ಶಿಸ್ತುಬದ್ಧ ನಿಯಮವಿದೆ ನೀತಿಇದೆ. ನಮ್ಮ ಮನಸ್ಸಿಗೆ ಸ್ವಭಾವಕ್ಕೆ ಸುಖದ ನಿದ್ರೆಗೆ ಯಾವುದು ಆರಾಮದಾಯಕವೋ ಆ ಬಿಳಲನ್ನು ಹಿಡಿದುಕೊಂಡು ಜೀವನ ಯಾತ್ರೆ ಮುಗಿಸಬೇಕು. ಗುರಿಯೊಂದು ಗುರುವೊಂದು ಸಮರ್ಪಕವಾಗಿ ಸಿಕ್ಕಲ್ಲಿ ನಿಮ್ಮ ಅದೃಷ್ಟ, ಅಕಸ್ಮಾತ್ ಸಿಗದಿದ್ದಲ್ಲಿ ಗುರಿ ಹುಡುಕಿಕೊಂಡು ಗುರು ಪಡೆದುಕೊಂಡಲ್ಲಿ ಅದು ನಿಮ್ಮ ತಾಕತ್ತು. ಈ ತಾಕತ್ತು ಅದೃಷ್ಟದ ಆಟ ಹೇಗೂ ಸಾಗಬಹುದು. ಕಳೆದ ದಿನಗಳನ್ನು ಪದೇ ಪದೇ ಹಿಂತಿರುಗಿ ನೋಡಿದಲ್ಲಿ ಅಲ್ಲಿ ಸ್ಪಷ್ಟವಾಗಿ ನಮ್ಮ ತಪ್ಪುಗಳು ಗೋಚರಿಸತೊಡಗಿದರೆ ಮುಂದಿನ ದಾರಿ ಸುಗಮ. ಮೊನ್ನೆ ಯೆಲ್ಲೋ ಓದಿದೆ, ಕಳೆದ ಕಾಲ ರದ್ದಿ ಪೇಪರ್-ವರ್ತಮಾನ ನ್ಯೂಸ್ ಪೇಪರ್-ಭವಿಷ್ಯ ಖಾಲಿ ಪೇಪರ್. ವಾವ್ ಚನ್ನಾಗಿದೆ ಅಲ್ಲವೇ?. ಖಾಲಿ ಪೇಪರ್ ನಲ್ಲಿ ನಮ್ಮ ಭವಿಷ್ಯವನ್ನು ಬರೆಯುವ ಯತ್ನದಲ್ಲಿ ಹಿಂದಿನದು ಸಹಾಯಕ್ಕೆ ಬರಬೇಕು ಆವಾಗ ಸ್ವಲ್ಪ ಮಜ ಅನುಭವಿಸಿಕೊಳ್ಳಬಹುದು.
                "ಅಲ್ಲಾ ಗುರು... ಏನಂತ ಬರೆಯುತ್ತಿದ್ದೀಯಾ..? ನನಗಂತೂ ತಲೆ ಬುಡ ಅರ್ಥವಾಗುತ್ತಿಲ್ಲ" ಅಂತ ಪಾಪ ನೀವು ಲೊಚಗುಟ್ಟುತ್ತಿದ್ದೀರಿ ಅಂತ ಗೊತ್ತು. ಈಗ ನಿಮಗೆ ನನ್ನ ಬರಹ ಅರ್ಥವಾಗುತ್ತಿಲ್ಲ. ಮುಂದೊಂದು ದಿವಸ ಅರ್ಥವಾಗಬಹುದು, ಓದಿದಿರಿ ತಾನೆ?. ನಿಮ್ಮ ಸುಪ್ತಮನಸ್ಸಿನಲ್ಲಿ ಸ್ಟಾಕ್ ಆಗಿದೆ, ಇನ್ನು ನಿಶ್ಚಿಂತೆಯಿಂದ ನಿಮ್ಮಕೆಲಸದಲ್ಲಿ ತೊಡಗಿ. ನಾನು ಇನ್ನೊಂದೆರಡು ಸಾಲು ಕುಟ್ಟಿ ಮುಗಿಸುತ್ತೇನೆ.
               ಈ ಪಟದಲ್ಲಿ ಹೂವಿನ ಚಿತ್ರವೊಂದಿದೆ. ಆ ಹೂವಿಗೆ ಚಂದದ ಪರಿಮಳವೊಂದಿದೆ. ಆ ಪರಿಮಳ ಆಸ್ವಾದಿಸಲು ನಮಗೆ ನಿಮಗೆ ಮೂಗಿದೆ. ಪಟಪಟ ಮಿಟುಕಿಸುತ್ತಾ ಹೂವ ನೋಡಲು ಸುಂದರ ಎರಡು ಕಣ್ಣಿದೆ, ಹೂವ ಕೊಯ್ದು ಮೂಗಿನ ಬಳಿ ಒಡ್ಡಲು ಕೈಯಿದೆ, ಗಿಡದ ಬಳಿ ಸಾಗಲು ಕಾಲಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲಾ ಹತ್ತಿಪ್ಪತ್ತು ನಿಮಿಷ ಬೇಕಾಬಿಟ್ಟಿ ಸಮಯ ಬಿದ್ದಿದೆ. ಆದರೆ ನಾವು ಆಘ್ರಾಣಿಸುವ ಕೆಲಸ ಮರೆತಿದ್ದೇವೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಅದಾಗಿಯೇ ಮೂಗಿಗೆ ಬಂದು ಬಡಿಯುವ ಗಬ್ಬು ನಾತವನ್ನು ಸೇದುವ ಮಟ್ಟಿಗೆ ಮೂಗನ್ನು ಬಳಸಿಕೊಳ್ಳುತ್ತಿದ್ದೇವೆ. ಇಲ್ಲ ನನ್ನನ್ನೂ ಸೇರಿದಂತೆ ನೀವೂ ಬದಲಾಗಬೇಕಿದೆ. ಭಗವಂತ ಕೊಟ್ಟ ಎಲ್ಲಾ ಅವಯವಗಳನ್ನು ನಾವು ಉಪಯೋಗಿಸಬೇಕಿದೆ. ಅದು ಕೂಡ ಸದುಪಯೋಗಕ್ಕೆ ಮಾತ್ರಾ . ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

Monday, August 6, 2012

ಗೊತ್ತಾ ನಿಮಗೆ ಅಜ್ಜಿಸಿಂಬಳ........?




ಮಲೆನಾಡಿನಲ್ಲಿ ಬಾಲ್ಯ ಕಳೆದದ್ದೇ ಆದರೆ ".. ಅಜ್ಜಿಮುದುಕಿ ಸುಂಬಳಾನಾ...." ಅಂತ ರಾಗ ಎಳೆಯುತ್ತೀರಿ ನೀವು. ಹೌದು ಅದೇ ಇದು. "ಅಬ್ಬರದ ಮಳೆಗಾಲ ಮುಗಿದು ಕಿಟಿಕಿಟಿ ಮಳೆ ಶುರುವಾದ ತಕ್ಷಣ ಮರದಾಳಿ ಹುಲ್ಲಿನ ಬೇರಿನಲ್ಲಿ ಸಂಗ್ರಹವಾಗುವ ನೀರಿಗೆ ಹೀಗೆಂದು ಕರೆಯುತ್ತಾರೆ, ನಾವು ಸಣ್ಣಕ್ಕಿದ್ದಾಗ ಅದನ್ನು ಬಾಯಲ್ಲಿಟ್ಟು ಸೀಬುತ್ತಿದ್ದೆವು" ಅಂತ ನಿಮ್ಮ ಪುಟ್ಟ(ಟ್ಟಿ)ನ ಬಳಿ ಕತೆ ಹೇಳುತ್ತೀರಿ ಅನ್ನೋದು ನನಗೆ ಗೊತ್ತು. ಆದರೆ ಮಲೆನಾಡೆಂಬ ಮಳೆನಾಡಲ್ಲಿ ಹುಟ್ಟದೇ ಹೋಗಿ ನಂತರ ಒಂದು ದಿನ ಇಲ್ಲಿಗೆ ಬಂದವರಾಗಿದ್ದರೆ ಇದರ ಬಗ್ಗೆ ಮಾಹಿತಿ ನಿಮಗೆ ಬೇಕೇ ಬೇಕು ತಾನೆ..?. ಸರಿ ಹಾಗಾದರೆ ಅದೇ ಮಾಹಿತಿ ಆರಂಭದಲ್ಲಿ ಇತ್ತಲ್ಲ ಅದು. ಪರಿಶುದ್ಧವಾದ ನೀರು ಹುಲ್ಲಿನ ಬೇರಿಗೆ ಅಂಟಿಕೊಂಡಿರುತ್ತದೆ ಅದನ್ನು ನೀವು ಪರಹಿಂಸೆ ಸಹಿಸದ ಜನರಾಗಿದ್ದರೆ ಬೇರನ್ನು ಕತ್ತರಿಸದೇ ಹಾಗೆಯೇ ಬಾಯಲ್ಲಿಟ್ಟು ಸೀಬಿ ಮತ್ತೆ ಕೈಬಿಡಬಹುದು. ಇಲ್ಲ ನನಗೆ ಅವೆಲ್ಲಾ ಇಲ್ಲ ಅಂತಾದರೆ ಕತ್ತರಿಸಿ ಮಜ ತೆಗೆದುಕೊಳ್ಳಬಹುದು. ಒಂಥರಾ ಸ್ವಲ್ಪ ಹುಳಿ ಅಂಶವಿರುವ ಈ ನೀರು ಥಂಡಿ ರೋಗಕ್ಕೆ ಔಷಧಿ ಅಂತ ಬಲ್ಲವರು ಹೇಳಿದ್ದು ನೆನಪು. ಒಮ್ಮೆ ಟ್ರೈ ಮಾಡಿ ನೋಡಿ.

Saturday, August 4, 2012

ಅಕ್ಕಿ ಕಾಳು ಮತ್ತು ಫ್ಯಾನ್ ಬೆಲ್ಟು

ಮೊನ್ನೆ ಗುರುವಾರ ಬ್ರಾಹ್ಮಣರಾದ(ಸರ್ಕಾರವೇ ನಿನ್ನ ಜಾತಿ ಯಾವುದು ಅಂತ ಕೇಳುತ್ತೆ, ಹಾಗಾಗಿ ನಾನು ಇಲ್ಲಿ ಹೇಳಬಹುದು ಬಿಡಿ) ನಮಗೆಲ್ಲ ಫ್ಯಾನ್ ಬೆಲ್ಟ್ ಬದಲಾಯಿಸುವ ದಿನ ಅದಕ್ಕೆ ನೂಲುಹುಣ್ಣಿಮೆ ಅಂತ ಹೆಸರು. ವರ್ಷಪೂರ್ತಿ ಬೆನ್ನು ಉಜ್ಜಿ ಉಜ್ಜಿ ಕಪ್ಪು ಬಣ್ಣಕ್ಕೆ ತಿರುಗಿದ ಜನಿವಾರವನ್ನು ಬದಲಾಯಿಸುವ ದಿನ. ಊರಿನ ದೇವಸ್ಥಾನದಲ್ಲಿ ಬೆಳಗಾಮುಂಚೆ ಸಂಧ್ಯಾವಂದನೆ....? ಸೌಟು ಹಾಗೂ ಬಟ್ಟಲೊಂದಿಗೆ ಹತ್ತಿಪ್ಪತ್ತು ಜನ ಸಾಲಾಗಿ ಕುಳಿತು ಪುರೋಹಿತರ ಅಣತಿಗೆ ತಕ್ಕಂತೆ ಆಚಮನ, ದ್ವಿರಾಚಮನ, ಜನಿವಾರ ಮಾಲಾಕಾರ ಹೀಗೆ ನೂರೆಂಟು ತರಹದ ವಿದಿವಿಧಾನ ಅನುಸರಿಸಿ ಫ್ಯಾನ್ ಬೆಲ್ಟ್ ಬದಲಾಯಿಸಿಕೊಳ್ಳುತ್ತೇವೆ. ಮಾರನೇ ದಿನದಿಂದ ತುಸು ಜೋರಾಗಿ ಗಸಗಸ ಸದ್ದಿನೊಡನೆ ಬೆನ್ನುತಿಕ್ಕಿಕೊಳ್ಳಬಹುದು ಕಾರಣ ಜನಿವಾರ ಹೊಸತಲ್ಲವೇ..? ಇರಲಿ ವ್ಯಂಗ್ಯ ಜಾಸ್ತಿಯಾಗಿ ನಂತರ ಯಾರಿಗಾದರೂ ಬೆಸರವಾದರೆ ಕಷ್ಟ. (ಕಾರಣ ನಾನು ಈಗ ಏನು ಬರೆದರೂ ಅದಕ್ಕೆ ಅಪಾರ್ಥ ಹುಡುಕಿ ಸೀದಾ ತಹಶೀಲ್ದಾರರಿಗೆ ಅರ್ಜಿ ಹಾಕುವ ಪರಿಸ್ಥಿತಿ ಇದೆ-ಇದು ಗುಟ್ಟು ಯಾರಿಗೂ ಹೇಳಬೇಡಿ)


ಇರಲಿ ನಾನು ಹೇಳಹೊರಟಿರುವ ವಿಷಯಕ್ಕೆ ಬರುತ್ತೇನೆ. ಫ್ಯಾನ್ ಬೆಲ್ಟ್ ಚೇಂಜ್ ಕಾರ್ಯಕ್ರಮದಲ್ಲಿ ನನಗೆ ಬೇಸರ ತರಿಸಿದ್ದು ಎಂದರೆ ಪುರೋಹಿತರು "ಈಗ ಅಕ್ಕಿಕಾಳು ತೆಗೆದುಕೊಂಡು ಒಂದು ಸೌಟು ನೀರು ಬಿಟ್ಟು ಚೆಲ್ಲಿ" ಎಂದು ಪದೇ ಪದೇ ಹೇಳುತ್ತಿದ್ದುದು. ಚಂದ ಚಂದದ ಬೆಳ್ಳನೆಯ ಅಕ್ಕಿಕಾಳು ಈಗ ಹೀಗೆ ವ್ಯರ್ಥವಾಗಿ ಚರಂಡಿ ಸೇರುತ್ತದಲ್ಲ ಎಂಬುದು ಸಹಿಸಲಾರದ ಸಂಕಟ. ಒಬ್ಬೊಬ್ಬರು ಒಂದೊಂದು ಮುಷ್ಠಿ ಆದರೆ  ಸಹಸ್ರ ಸಹಸ್ರ ಜನ ಇಂದು ಹೀಗೆ ಅಕ್ಕಿ ಕಾಳು ಎಲ್ಲೆಲ್ಲೋ ಚೆಲ್ಲುತ್ತಿದ್ದಾರಲ್ಲ, ಛೆ ಅನ್ನಿಸಿತು. ಏನಾದರಾಗಲಿ ಎಂದು ನಾನು ಒಂದು ಅಕ್ಕಿ ಕಾಳನ್ನೂ ಚೆಲ್ಲಲಿಲ್ಲ, ಜತನವಾಗಿ ಬಾಳೆ ಎಲೆಯಲ್ಲಿ ಹಾಗೆ ಮಡಚಿಟ್ಟುಕೊಂಡು ತಂದು ನಮ್ಮ ಹಂಸಗಳಿಗೆ ಹಾಕಿದೆ. ಅವು ಕುಷ್ ಕುಷಿಯಾಗಿ ಬಕಬಕನೆ ನನ್ನ ಕಣ್ಮುಂದೆ ತಿನ್ನುವುದನ್ನು ನೋಡಿ ಸಂತಸ ಪಟ್ಟೆ.

ಸರಿ ಸರಿ ಅದು ಸರಿ ಈ ಫೋಟೋಕ್ಕೂ ನಿನ್ನ ವರಾತಕ್ಕೂ ಎತ್ತಣದೆತ್ತಣ ಸಂಬಂಧ ಶರ್ಮಾಜಿ(ನನಗೆ ನಾನು ಗೌರವ ಕೊಟ್ಟುಕೊಳ್ಳುವುದು ಎಂದರೆ ಇದೇ ನೋಡಿ, ನನಗೂ ಗೊತ್ತು ನೀವು ಶರ್ಮಾಜಿ ಅಂತ ಅನ್ನುವುದಿಲ್ಲ ಅಂತ ಇರಲಿ) ಅಂತ ನೀವು ಕೇಳಬಹುದು. ಹೌದು ಕಣ್ರೀ ನಾವು ಅತ್ತ ಅಕ್ಕಿಕಾಳು ನೀರಲ್ಲಿ ತೇಲಿಬಿಡುತ್ತಿದ್ದಾಗ ನಮ್ಮೂರ ಹೆಣ್ಮಕ್ಕಳು ಮಳೆ ಛಳಿಯನ್ನದೇ ಅದೇ ಅಕ್ಕಿಕಾಳಿನ ಸೃಷ್ಟಿಯಲ್ಲಿ ತೊಡಗಿದ್ದರು. ಈ ಕೆಲಸ ತುಂಬಾ ಕಷ್ಟ ಕಣ್ರೀ ಆದರೆ ಜನ ಅಕ್ಕಿಕಾಳು ಸೃಷ್ಟಿಕರ್ತನಿಗಿಂತ ನೀರಲ್ಲಿ ತೇಲಿಬಿಟ್ಟವರತ್ತ ನೊಡುತ್ತಾರೆ. ಛೆ. ಇರಲಿ ಯದ್ಬಾವಂ ತದ್ ಭವತಿ.

Friday, July 27, 2012

ಅಂತೂ ಇಂತೂ ಜೋಗಕ್ಕೆ ಇಷ್ಟು ನಿರು ಬಂತು

ಈವರ್ಷ ಮಳೆಗಾಲವೇ ಇಲ್ಲ ಬರ ಮುಂತಾಗಿ ಮಾತುಗಳು ಕೇಳಿಬರುತ್ತಿತ್ತು. ಆದರೆ ಹಾಗೇನೂ ಇಲ್ಲ ಅಂತ ಅನ್ನಿಸಲು ಶುರುವಾಗಿದೆ. ಧೋ ಅಂತ ನಮ್ಮಲ್ಲಿ ಮಳೆ ಬೀಳತೊಡಗಿದೆ. ಜಲಪಾತ ಭೋರ್ಗರೆಯತೊಡಗಿದೆ. ಮೊನ್ನೆ ಇಷ್ಟು ಇತ್ತು ಜೋಗ. ಇವತ್ತು ಇನ್ನೂ ಹೆಚ್ಚಿದೆಯಂತೆ, ಹೋದರೆ ಪಟ ಹಾಕುತ್ತೇನೆ ಮಜಾ ಮಾಡಿ. ಹ್ಯಾಪಿ ಡೆ.

Friday, July 20, 2012

ಅದು ಪರಮಸುಖಕ್ಕೆ ಪ್ರವೇಶದ ದಾರಿ.

ವಾವ್ ಅನ್ನಲೇಬೇಕು ಭತ್ತದ ಸಸಿಯ ಮೊಳಕೆಯೊಡೆಯುತ್ತಿರುವ ದೃಶ್ಯವ ಕಂಡು ಅಲ್ಲವೇ?. ಹೌದು ಸುಂದರ ಬೆಳೆಗಿನಲ್ಲಿ ಇಂತಹ ಒಂದು ದೃಶ್ಯ ನಿಮ್ಮ ಕಣ್ಣೆದುರಿಗಿದ್ದರೆ ಆವತ್ತಿನ ಮನಸ್ಥಿತಿಯೇ ಬೇರೆ ಬಿಡಿ. ಹಸಿರು ಉಲ್ಲಾಸ ತರುತ್ತದೆ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಭಾರತೀಯ ರೈತ ತಾನು ತನ್ನ ಹೊಲಕ್ಕೆ ನಾಟಿಮಾಡಿಕೊಳ್ಳಲು ತಯಾರಿಸಿಕೊಂಡ ಸಸಿಮಡಿ ಗಳು. ಚಚ್ಚೌಕಾಕಾರದಲ್ಲಿದೆ. ಆದರೆ ಜಪಾನ್ ರೈತರುಗಳು ಹೀಗೆ ನಾಟಿಗೂ ಮುನ್ನದ ಗಿಡಗಳನ್ನು ಮಾಡುವಾವ ಒಂದು ಚಿತ್ತಾರ ಮಾಡಿಬಿಡುತ್ತಾರೆ. ಮನುಷ್ಯ ಪ್ರಾಣಿಗಳ ಮುಖ ಹೀಗೆ ಏನೇನೋ. ಅದನ್ನ ನೋಡಲು ಪ್ರವಾಸಿಗರ ದಂಡು ಬರುತ್ತದೆಯಂತೆ. ಆಗ ರೈತನಿಗೆ ಬಿತ್ತನೆಯ ಖರ್ಚು ಪ್ರವಾಸಿಗರ ಮೂಲಕ ಹರಿದುಬರುತ್ತದೆಯಂತೆ. ಬೆಳೆಯುವ ಅಕ್ಕಿಗೆ ಬೆಳೆಯುವ ಮುನ್ನವೆ ಹಣ ಜಣಜಣ ಎಣಿಸುತ್ತಾನೆ. ಹೀಗೆ ಲಾಭ ಅಲ್ಲಿ ಕೃಷಿ ಇಂದಿಗೂ. ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿ ಕೃಷಿ ಲಾಭಕರ ಅಲ್ಲ ಅಷ್ಟೊಂದು ಆದರೆ ಮಜ ಗೊತ್ತಾ ಸಿಕ್ಕಾಪಟ್ತೆ ಲಾಭವಾದರೆ ಇಲ್ಲಿಯ ಜನರು ಕೃಷಿಯನ್ನು ಬಿಟ್ಟು ಬಿಡುತ್ತಾರೆ. ಇದು ಇಲ್ಲಿನ ಮನಸ್ಥಿತಿ. ಇರಲಿ ಎಲ್ಲಾ ಒಳ್ಳೆಯದಕ್ಕೆ ಅಂತ ನಾವು ಅಂದುಕೊಳ್ಳುವುದು. ಅದು ಪರಮಸುಖಕ್ಕೆ ಪ್ರವೇಶದ ದಾರಿ.