Thursday, November 13, 2008

ಹಾಗೆಲ್ಲಾ..ಎಲ್ಲರಿಗೂ ಅನ್ನಿಸುತ್ತೆ ..



ಪ್ರಾಂಕ್ಫರ್ಟ್ ನಗರದ ಅಗಲದ ರಸ್ತೆಯಲ್ಲಿ ಜೊಂಯ್ ಅಂತ ಕಾರಲ್ಲಿ ಹೋಗುತ್ತಿರುವಾಗ ನಮ್ಮ ದೇಶ ನೆನಪಾಗಿ ಅಲ್ಲಿನ ರಸ್ತೆಯನ್ನೂ ಹೀಗೆ ಮಾಡಬೇಕು ಅನ್ನಿಸುತ್ತೆ. ಆದರೆ ಇಲ್ಲಿ ಬಂದು ಕಿಷ್ಕಿಂದೆಯ ರಸ್ತೆಗೆ ಅಂಗಡಿ ಇಟ್ಟುಕೊಂಡವರನ್ನು ಅಲುಗಾಡಿಸಲಾಗದೆ ಸುಮ್ಮನಿರಬೇಕಾಗುತ್ತೆ. ನಮ್ಮ ರಾಜಕಾರಣಿಗಳು ಸರಿ ಇಲ್ಲ ಅವರು ಸರಿ ಇದ್ದಿದ್ದರೆ ಇವೆಲ್ಲಾ ಸರಿ ಇರುತ್ತಿತ್ತು ಅಂತ ಅನ್ನಿಸುತ್ತೆ ಆದರೆ ಎಂ.ಎಲ್.ಎ ಎಲೆಕ್ಷನ್ ನಲ್ಲಿ ಆತ ಒಂದು ಕೋಟಿ ರೂಪಾಯಿ ಹಂಚಿ ಗೆಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಅರಿವಾದಾಗ ಮನ ಮುದುಡುತ್ತೆ . ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ತಿಂಗಳು ತಿಂಗಳೂ ಸಂಬಳ ಎಣಿಸುತ್ತಾ ಡ್ಯೂಟಿ ಮಾಡುತ್ತಿರಬೇಕಾದರೆ ತತ್ ಇದು ಕತ್ತೆ ಚಾಕರಿ ಜೀತ ಬೆಳೆಗ್ಗೆದ್ದು ಆಫೀಸು ಟೆನ್ಷನ್ ಅದೇ ಊರಲ್ಲಿರುವ ಅಣ್ಣ ಜುಂ ಅಂತ ಇದ್ದಾನೆ ನಾವೂ ಅಲ್ಲಿ ಹೋಗಿಬಿಡೋಣ ಅಂತ ಅನ್ನಿಸುತ್ತೆ. ಆದರೆ ಹಳ್ಳಿಗೆ ಬಂದಾಗ ಕೈಯಲ್ಲಿ ಕಾಸಿಲ್ಲದೆ ಸಮಯಕ್ಕೆ ಸರಿಯಾದ ಕೆಲಸ ಇಲ್ಲದೆ ಹೊತ್ತೇ ಹೋಗದೆ ತತ್ ದರಿದ್ರ ಅಂತ ಅನ್ನಿಸುತ್ತೆ. ಊರಿಂದ ಅಮ್ಮ ಫೋನ್ ಮಾಡಿಕೊಂಡು ನಿನ್ನ ಅಣ್ಣ ಅತ್ತಿಗೆ ನಮ್ಮನ್ನು ಮುದುಕರು ಎಂದು ತಾತ್ಸಾರ ಮಾಡುತ್ತಿದ್ದಾರೆ ಎಂದಾಗ ಅಣ್ಣ ಅತ್ತಿಗೆಗೆ ಏನಾಗಿದೆ ದಾಡಿ? ವಯಸ್ಸಿನಲ್ಲಿ ಅಪ್ಪ ಅಮ್ಮ ಸಾಕಿಲ್ಲವೇ ಅವರನ್ನು ಇನ್ನು ಎಷ್ಟು ವರ್ಷ ಬದುಕುತ್ತಾರೆ ಅವರು ಚೆನ್ನಾಗಿ ನೋಡಿಕೊಳ್ಳಬೇಕಪ್ಪ, ಮಾತೃ ದೇವೋ ಭವ ಅಲ್ಲವೆ ಅಂತ ಅನ್ನಿಸುತ್ತೆ. ಅಪ್ಪ ಅಮ್ಮ ನನ್ನು ಸಿಟಿ ಯ ಮನೆಗೆ ಕರೆದುಕೊಂಡು ಬಂದು ಸುಖವಾಗಿ ಇಡೋಣ ಎಂದಾಗ ಹೆಂಡತಿ ಅದು ಸಾಧ್ಯವಿಲ್ಲದ ಮಾತು ಎಂದು ಸಿಡಿಮಿಡಿ ಗುಟ್ಟಿದಾಗ ಅಣ್ಣನ ಪರಿಸ್ಥಿತಿ ಅರಿವಾಗುತ್ತೆ. ಅದ್ಯಾರಿಗೋ ಬಿಪಿಯಂತೆ ಷುಗರ್ ಅಂತೆ ಯಾವಾಗಲೂ ತನ್ನ ಖಾಯಿಲೆಯದೇ ವರಾತವಂತೆ ,ಎಂದಾಗ ಸಿಕ್ಕಾಪಟ್ಟೆ ತಿಂತಾನೆ, ವಾಕಿಂಗ್ ಮಾಡಲ್ಲ ಕಾಯಿಲೆ ಬರದೆ ಇನ್ನೇನಾಗುತ್ತೆ?ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅಂತ ಅನ್ನಿಸುತ್ತೆ. ನಳನಳಿಸುವ ಆರೋಗ್ಯದಿಂದಿದ್ದ ನಾವು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದಾಗ ಡಾಕ್ಟರ್ ನಿಮಗೆ ಬಿಪಿ ಇದೆ ಎಂದಾಗ "ಈ ದರಿದ್ರ ಕಾಯಿಲೆ ಅದು ಹೇಗೆ ಬರುತ್ತೋ.? ಈಗಿನ ಆಹಾರವೇ ವಿಷಯುಕ್ತ " ಅಂತ ಅನ್ನಿಸುತ್ತೆ. ಊರಿಂದ ದೂರದ ಪ್ರಯಾಣಕ್ಕೆ ಬಸ್ ಏರಿ ಕುಳಿತಾಗ ಹೆಂಗಸೊಬ್ಬಳು ವಯಕ್ ಅಂತ ವಾಂತಿಮಾಡಿದಾಗ ಏನು ದರಿದ್ರ ಜನರಪ್ಪಾ ಕಾಮನ್ ಸೆನ್ಸ್ ಇಲ್ಲ ಸಿಕ್ಕಿದ್ದೆಲ್ಲಾ ತಿಂತಾರೆ ಇಲ್ಲಿ ಬಂದು ಕಕ್ತಾರೆ ಅಂತ ಅನ್ಸುತ್ತೆ . ಆದರೆ ಮನದೆನ್ನೆ ಅದೇ ವಯಕ್ ಅಂತ ಶಬ್ದ ಮಾಡಿದರೆ "ಅಯ್ಯೋ ಏನ್ಮಾಡಕಾಗುತ್ತೆ ದರಿದ್ರ ಬಸ್ ನಲ್ಲಿ ಕೆಟ್ಟ ಬೆವರು ವಾಸನೆ ವಾಂತಿ ಬರ್ದೆ ಇನ್ನೇನಾಗುತ್ತೆ ಅನ್ನೋ ಡೈಲಾಗ್ ತನ್ನಿಂದ ತಾನೆ ಬರುತ್ತೆ. ಗೋಮಾತೆ ಮಾತೆ ಎನ್ನಿರೋ ಎಂದು ವೇದಿಕೆಯಲ್ಲಿ ಭಾಷಣ ಕೇಳುವಾಗ ಗೋವಿನ ಮಹತ್ವ ಕೇಳಿದಾಗ ನಾವೂ ಒಂದು ಒಳ್ಳೆಯ ಆಕಳು ಸಾಕೋಣ ಅಂತ ಅನ್ನಿಸುತ್ತೆ. ಮನೆಗೆ ತಂದ ಆಕಳು ಹಾಲು ಕರೆಯಲು ಹೋದಾಗ ದುಬುಲ್ ಅಂತ ಒದ್ದು ಮುಂಗೈ ಬುರುಬುರು ಅಂತ ಬೂರೆ ಗಡುಬಿನ ತರಹ ಉಬ್ಬಿದಾಗ ಭಾಷಣಕಾರ ಆಕಳು ಸಾಕಿಲ್ಲ ಕೇವಲ ಬೊಗಳೆ ಬಿಟ್ಟಿದ್ದಾನೆ ಅಂತ ಅರಿವಾಗುತ್ತೆ. ಜತೆಗೆ ಕೆಲಸ ಮಾಡುವ ಕಲೀಗ್ ಳ ಬಳುಕಾಟ ಕುಲುಕುಲು , ಗುಳಿಬೀಳುವ ಕೆನ್ನೆ ಕಂಡಾಗ ಮನೆಯಲ್ಲಿರುವ ಹೆಂಡತಿ ನೆನಪಾಗಿ ನಾನು ಅವಳ ಕಟ್ಟಿಕೊಳ್ಳುವುದರ ಬದಲು ಇವಳನ್ನೇ ಮದುವೆ ಮಾಡಿಕೊಂಡಿದ್ದರೆ ಸ್ವರ್ಗ ಕಾಣಬಹುದಿತ್ತು ಅಂತ ಅನ್ನಿಸುತ್ತೆ. ಅದೇ ಗೊಣಗಾಟವನ್ನು ಇದೇ ಕಲೀಗ್ ಳ ಗಂಡನೂ ಗುಣುಗುಣಿಸುತ್ತಿದ್ದಾನೆ ಎಂದು ಅರಿವಾದರೆ ಮದುವೆಯ ಮರ್ಮ ತಿಳಿಯುತ್ತೆ. ಧ್ಯಾನದಿಂದ ಬಿಪಿ ಷುಗರ್ ವಾಷ್ ಔಟ್ ಆಗಿಬಿಡುತ್ತೆ ಎಂದು ಧ್ಯಾನದ ಮಾಸ್ಟರ್ ಭಾಷಣ ಮಾಡುವಾಗ ನಾವೂ ಸಾವಿರ ರೂಪಾಯಿ ಕೊಟ್ಟು ಧ್ಯಾನ ಕಲಿತುಬಿಡಬೇಕು ಅಂತ ಅನ್ನಿಸುತ್ತೆ. ಅದೇ ಧ್ಯಾನದ ಟೀಚರ್ ಭಾಷಣ ಮುಗಿಸಿ ಮನೆಗೆ ಹೋಗಿ ಬಿಪಿ ಮಾತ್ರೆ ನುಂಗುವುದನ್ನು ಕಂಡರೆ ಒಹೋ ಅಂತ ಅನ್ನಿಸುತ್ತೆ. ನಾವು ಕಳೆದುಕೊಂಡಿದ್ದು ಮುಂದೆ ಗಳಿಸಬಹುದಾದದ್ದು ಮಕ್ಕಾಮಕ್ಕಿ ಹೇಳುವ ಜ್ಯೋತಿಷಿಯ ಕಂಡು ಮನ ಅಚ್ಚರಿಗೊಳಗಾಗುತ್ತೆ ಅದೇ ಜ್ಯೋತಿಷಿ ತಾನು ಕಳೆದುಕೊಂಡ ಪವಿತ್ರದುಂಗುರದ ಹುಡುಕಾಟಕ್ಕೆ ಹೆಂಡತಿಯ ಸಹಾಯ ಕೇಳುವುದು ಕಂಡರೆ ಇದು ಹೀಗಾ ಅಂತ ಅನ್ನಿಸುತ್ತೆ. ಆಫೀಸಿನಲ್ಲಿ ಬಾಸ್ ಕೆಲಸಕ್ಕಾಗಿ ಒತ್ತಡ ಹೇರಿದಾಗ ಶೊಷಣೆ ಅನ್ನಿಸಿ ಅವನ ಮುಖಕ್ಕೆ ಗುದ್ದಿಬಿಡೋಣ ಅಂತ ಅ ನ್ನಿಸುತ್ತೆ, ಕಾಲಾನಂತರ ನಾವೇ ಬಾಸ್ ಆದಾಗ ದರಿದ್ರ ಪೆಡ್ಡೆಗಳು ಜವಾಬ್ದಾರಿ ಇಲ್ಲ ಕೆಲಸ ಮಾಡೋಲ್ಲ ಕೇವಲ ಸಂಬಳ ತಿಂತಾರೆ ಅಂತ ಅನ್ನಿಸುತ್ತೆ. ಯಾರೋ ಬರೆದ ಲೇಖನ ಓದುವಾಗ ಇದು ಏನಂತ ಬರೆದಿದ್ದಾರೆ ಅಂತ ಅನ್ನಿಸುತ್ತೆ, ನಾವು ಬರೆಯಲು ಕೂತಾಗ ನಾಲ್ಕು ಪದಗಳ ಮುಂದೆ ಹೋಗದೆ ಇದೆಲ್ಲ ಕೆಲಸವಿಲ್ಲದವರು ಮಾಡುವ ಉದ್ಯೋಗ ಅಂತ ಅ ನ್ನಿಸುತ್ತೆ. ಬಗೆಹರಿಯದ ಸಮಸ್ಯ್ರೆ ಬಂದಾಗ ದೇವರೇ ನೀನೆ ಕಾಪಾಡು ಎಂದು ಪ್ರಾರ್ಥಿಸೋಣ ಅಂತ ಅನ್ನಿಸುತ್ತೆ ಸಮಸ್ಯೆ ಬಗೆಹರಿದಾಗ ನನ್ನ ತಾಕತ್ತಿನಿಂದ ಬಗೆಹರಿಸಿಕೊಂಡೆ ಅಂತ ಅನ್ನಿಸುತ್ತೆ. ಎಸಿ ರೂಮಿನಲ್ಲಿ ಕುಳಿತು ವರ್ಷಕ್ಕೆ ನಾಲ್ಕು ಲಕ್ಷದ ಸಂಬಳ ಪ್ಯಾಕೇಜ್ ಅನುಭವಿಸುತ್ತಿರುವಾಗ ನಿರುದ್ಯೋಗದವರನ್ನು ಕಂಡು ಅವರು ಅವಕಾಶ ಹುಡುಕಿಕೊಳ್ಳಲಿಲ್ಲ ಶ್ರಮ ಪಡಲಿಲ್ಲ ಸೋಮಾರಿಗಳು ಹಾಗಾಗಿ ಅವರ ಗತಿ ಅದು ಅಂತ ಅನ್ನಿಸುತ್ತೆ ಇದ್ದಕ್ಕಿದ್ದಂತೆ ಮಾರ್ಕೆಟ್ ಗೋತಾ ಆಗಿ ಇದ್ದ ಕೆಲಸ ಹೋಗಿ ಬೇರೆ ನಾಲ್ಕು ಲಕ್ಷದ ಪ್ಯಾಕೇಜ್ ಸಿಗದಾಗ ಎಲ್ಲಾ ಗ್ರಹಚಾರ ಅಂತ ಅನ್ನಿಸುತ್ತೆ. ರಾಮನ ವೇಷಧಾರಿ ಏಕಪತ್ನಿ ವೃತದ ಬಗ್ಗೆ ಅರ್ಥ ಹೇಳುವಾಗ ಆಟ ರಂಗೇರುತ್ತದೆ, ಆದರೆ ಆತನಿಗೆ ನಿಜಜೀವನದಲ್ಲಿ ಮೂರು ಹೆಂಡಿರು ಎಂದಾಗ ಪಿಚ್ ಎನ್ನಿಸುತ್ತೆ. ವಾರಗಿತ್ತಿ ಖರೀದಿಸಿದ ಸೀರೆ ತುಂಬಾ ಚೆನ್ನಾಗಿದೆ , ಗೆಳತಿಯ ಬೆಂಡೋಲೆ ಸೂಪರ್ ಅಂತ ಎಲ್ಲ ಹೆಂಗಸರಿಗೂ ಅನ್ನಿಸುತ್ತಿರುತ್ತೆ ಆದರೆ ಮನಬಿಚ್ಚಿ ಹೇಳಬಾರದು ಅಂತ ಒಳಗಿನಿಂದ ಏನೋ ಚುಚ್ಚುತ್ತೆ.

ಈ ಬ್ಲಾಗ್ ಓದುವಾಗ ಒಮ್ಮೊಮ್ಮೆ ಹೌದು ಮತ್ತೊಮ್ಮೆ ಹೌದೇ ಹೌದು ಹಾಗೂ ಮಗದೊಮ್ಮೆ ಅಲ್ಲವೇಅ ಲ್ಲ ಎಂಬ ಭಾವನೆ ಮೂಡಿ ಮುಗುಳ್ನಗೆ ಮೂಡುತ್ತೆ. ಆದರೆ ಮರುಕ್ಷಣ ಅಯ್ಯೋ ಇಂತಹ ಬರಹ ಸಾವಿರಾರು, ಮತ್ತೆ ಇವೆಲ್ಲಾ ನನಗೆ ಮೊದಲೇ ಗೊತ್ತಿತ್ತು ಎಂಬ ಭಾವನೆ ಮೂಡಿ ಇದರಲ್ಲಿ ಹೊಸತೇನಿದೆ ಅಂತ ಅನ್ನಿಸುತ್ತೆ.

ಒಮ್ಮೆ ಹಾಗೆ ಮತ್ತೊಮ್ಮೆ ಹೀಗೆ ಮಗದೊಮ್ಮೆ ಹೇಗೇ ? ಎಂಬ ಸುತ್ತಾಟದಲ್ಲೇ ಜೀವನ ಎಂಬುದು ಕಳೆದೇ ಹೋಯಿತಲ್ಲ ಅಂತ ಅನ್ನಿಸುತ್ತೆ. ಮತ್ತು ಹೀಗೆ ನೂರಾರು ಅನ್ನಿಸಿಕೆ ಗಳು ದಿನನಿತ್ಯ ಅನ್ನಿಸುತ್ತಲೇ ಇರುತ್ತೆ.

ಕೊನೆಯದಾಗಿ: ಇದೇಕೆ ಹೀಗೆ ಈ ಅನ್ನಿಸಿಕೆಗಳು? ಎಂದು ವಿಕ್ರಮಾದಿತ್ಯನ ಬೇತಾಳದ ತರಹ ಪ್ರಶ್ನೆಯನ್ನು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ. "ಮನಸ್ಸು ಎರಡು, ಹೊರಮನಸ್ಸು ಹಾಗೂ ಒಳಮನಸ್ಸು ಅವುಗಳಲ್ಲಿ ಪ್ರಶ್ನೆಗೊಂದು ಉತ್ತರಕ್ಕೊಂದು ಎಂಬ ವಿಭಾಗ, ಪ್ರಶ್ನೆ ಒಳಗಿನದಾದರೆ ಉತ್ತರ ಸುಲಭ ಪ್ರಶ್ನೆ ಹೊರಗಿನದಾದರೆ ಹೀಗೆ ಯಡವಟ್ಟು. ಈ ಒಳಹೊರ ಮನಸ್ಸಿನ ಒಗ್ಗೂಡಿಸಿದರೆ ಸುಂದರ ಜೀವನ ಅದು ಸಾಧ್ಯವಾಗದಿದ್ದರೆ ಹೀಗೆ ಅನರ್ಥ, ಆಕಾಶಕ್ಕೆ ಏಣಿ ಸಾಚಿ ಚಂದ್ರನ ಹಿಡಿದಂತೆ, ದೂರದಿಂದ ಚಂದ್ರ ಆತನಿಗೆ ಸಿಕ್ಕಿದಂತೆ ಕಾಣಿಸುತ್ತದೆ , ಹತ್ತಿರ ಹೋದಾಗ ನಿಜವಾದ ದೂರ ತಿಳಿಯುತ್ತದೆ" ಎಂದು ಉತ್ತರಿಸಿದರು . ಉತ್ತರ ಚಾಟಿಯಿಂದ ನನಗೇ ಭಾರಿಸಿದಂತೆ ಇತ್ತು. ಬೆಪ್ಫಾಗಿ ಮುಗುಮ್ಮಾದೆ.
ಟಿಪ್ಸ್: ಏಕಾಗ್ರತೆ ಬರುತ್ತಿಲ್ಲ , ಯಾವ್ಯಾವುದೋ ಅನಾವಾಶ್ಯಕ ಯೋಚನೆಗಳು ವೃಥಾ ಕಾಡುತ್ತಿದೆ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದ್ದರೆ, ದಿನಕ್ಕೊಮ್ಮೆ ಹತ್ತು ನಿಮಿಷ ನಾಭಿಯ ವರೆಗಿನ ನಿಮ್ಮ ಉಸಿರಾಟವನ್ನೆ ಗಮನಿಸಿ. ಅದರ ಮಜ ನೋಡಿ .

Wednesday, November 12, 2008

ದೋಣಿ ಸಾಗಲಿ ಮುಂದೆ ಹೋಗಲಿ




ಸಾಲು ಸಾಲು ಬಿದಿರಿನ ಪೊದೆಗಳು, ಆಕಾಶದೆತ್ತರಕ್ಕೆ ಕೈಚಾಚಿ ನಿಂತಂತೆ ತೋರುತ್ತವೆ.. ನೂರಾರು ಜಾತಿಯ ಪಕ್ಷಿಗಳ ಕಲರವ. ಕಣ್ಣಿಗೆಟುಕುವಷ್ಟು ದೂರ ಶರಾವತಿ ನದಿಯ ಹಿನ್ನೀರು. ನೀರಿನ ಮಧ್ಯೆ ನಡುಗುಡ್ಡೆಗಳು. ನೀರಿನ ಬುಡದಲ್ಲಿ ಕಣ್ಮುಚ್ಚಿ ಕುಳಿತರೆ ಆ ನೀರವ ಮೌನ ಹಾಗೂ ತೆಕ್ಕಲಿನ ಪಟ ಪಟ ಶಬ್ಧ ಅದ್ಯಾವುದೋ ಲೋಕಕ್ಕೆ ಒಯ್ದುಬಿಡುತ್ತದೆ. ದಡದಲ್ಲಿ ಒಂದಿಷ್ಟು ದೋಣಿಗಳು ಹಾಗೆ ಸುಮ್ಮನೆ ಮಲಗಿರುತ್ತವೆ. ಒಂದು ದೋಣಿಯಲ್ಲಿ ನಾವು, ಹಾಗೂ ನೀವು ಹುಟ್ಟುಹಾಕುತ್ತಾ ಹೊರಟರೆ ಅದೇಕೋ ತನ್ನಿಂದ ತಾನೆ "ದೋಣಿ ಸಾಗಲಿ ಮುಂದೆ ಹೋಗಲಿ...." ಹಾಡು ಗುನುಗುಣಿಸಲು ಪ್ರಾರಂಭವಾಗುತ್ತದೆ. ಇದು ನಮ್ಮ ಮನೆಯಿಂದ ಎಂಟು ಕಿಲೋಮೀಟರ್ ದೂರದ ಹೊನ್ನೇಮರಡು ಎಂಬ ಪ್ರವಾಸಿ ತಾಣದ ಮಜ.

ನಾನು ತಿಂಗಳಿಗೊಮ್ಮೆಯಾದರೂ ಹೊನ್ನೆಮರಡುವಿಗೆ ಹೋಗುತ್ತೇನೆ. ಮನೆಗೆ ಬಂದ ನೆಂಟರಿಗೆ ಆ ನೀರವ ಮೌನ ಹಕ್ಕಿಗಳ ಕಲರವ ತೋರಿಸಬೇಕೆಂಬುದು ಒಳಗಿನ ಹಂಬಲ. ಅದರ ಬಗ್ಗೆ ಅಲ್ಲಿ ಬಂದು ಸೇರುವ ಜೇನುಗಳ ಬಗ್ಗೆ, ಜೇನಿನ ಜೀವನದ ಬಗ್ಗೆ, ಬಿದಿರಿನ ಮೊಳೆಗಳಿಗೆ ಅಲ್ಲಷ್ಟೇ ಜಾಗದಲ್ಲಿ ಕಟ್ಟೆರೋಗ ಬಾರದಿರುವುದಕ್ಕೆ ಕಾರಣ ಹೇಳಿ ಕೊರೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ಅವರ್ಯಾರಿಗೂ ಅದು ಬೇಡ ಬೋಟ್ ರೈಡಿಂಗ್ ಅವರುಗಳು ಇಷ್ಟಪಡುತ್ತಾರೆ ಇನ್ನು ಕೆಲವರು ಜಾಕೆಟ್ ಹಾಕಿಕೊಂಡು ಸ್ವಿಮ್ಮಿಂಗ್ ಇಷ್ಟಪಡುತ್ತಾರೆ. ಸರಿ ಅವರಿಗಿಷ್ಟವಾದದ್ದು ಅವರಿಗೆ ಎಂದುಕೊಳ್ಳುತ್ತಾ ಸ್ವಾಮಿಯ ಬಳಿ ಜಾಕೆಟ್ ಗಾಗಿ ಅಥವಾ ಬೋಟಿಂಗ್ ಗಾಗಿ ಹಲ್ಲುಗಿಂಜುತ್ತೇನೆ. ಸ್ವಾಮಿಯೆಂಬ ಸ್ವಾಮಿ ಅಸಾದ್ಯ ವ್ಯಕ್ತಿತ್ವದ ಮನುಷ್ಯ. ಬೆಂಗಳೂರಿನ ಧಾವಂತದ ಬದುಕು ಬಿಟ್ಟು ಇಲ್ಲಿ ಅದೇನನ್ನೋ ಸಾಧಿಸಿದ್ದಾರೆ. ಪ್ರಪಂಚಕ್ಕೆ ಹೊನ್ನೇಮರಡುವನ್ನು ಪರಿಚಯಿಸಿದ್ದಾರೆ. ಪರಿಸರ ಪ್ರವಾಸೋದ್ಯಮವನ್ನು ಬೆಳಸಿದ್ದಾರೆ ಒಂದಿಷ್ಟು ಜಾಗದಲ್ಲಿ ಅದ್ಬುತ ಕಾಡನ್ನು ಬೆಳಸಿದ್ದಾರೆ, ಅದು ಅತ್ಯಂತ ಸಹಜವಾಗಿದೆ ಅದರ ಜತೆ ಜತೆ ಯಲ್ಲಿ ನೇರ ನಿಷ್ಟುರ ವರ್ತನೆಯಿಂದ ಸ್ಥಳೀಯ ಜನರನ್ನು ನಿಷ್ಠೂರ ಮಾಡಿಕೊಂಡಿದ್ದಾರೆ. ಸಾಧಾರಣ ಲುಂಗಿ ಪಂಚೆಯಲ್ಲಿ ಓಡಾಡುವ ಸ್ವಾಮಿ ಮತ್ತು ಅಷ್ಟೇ ಸಹಜವಾದ ಧಿರಿಸಿನ ಅವರ ಪತ್ನಿ ನೊಮಿಟೋ( ಈಕೆ ಗುಜಾರಾತಿ ಮಹಿಳೆ) ರನ್ನು ನೋಡಿದರೆ ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೂ ಬಾರದು ಅಬ್ಬೆಪಾರಿಗಳು ಅಂತ ಅನ್ನಿಸುವುದು ಸಹಜ. ಆದರೆ ವಾಸ್ತವ ಹಾಗಲ್ಲ ಅವರಿಗೆ ಬಾರದ ಭಾಷೆಗಳಿಲ್ಲ ಆದರೆ ವೃಥಾ ಮಾತನಾಡರು ಅಷ್ಟೆ. ಈ ದಂಪತಿಗಳಿಬ್ಬರು ಪ್ರಥಮ ಪರಿಚಯದಲ್ಲಿ ಒರಟರಂತೆ ಅನ್ನಿಸಿದರೂ ನಂತರದ ದಿನಗಳಲ್ಲಿ ಆತ್ಮೀಯರಾಗಿಬಿಡುತ್ತಾರೆ. ಪಟ್ಟಣದಲ್ಲಿ ಸಾಫ್ಟಾಗಿ ಸೂಪರ್ರಾಗಿ ಕಳೆಯಬಹುದಾಗಿದ್ದ ಜೀವನವನ್ನು ಚಾಲೆಂಜ್ ಎಂದು ಈ ಕಾಡನ್ನು ಆಯ್ಕೆಮಾಡಿಕೊಂಡಿರುವ ಈ ವಿದ್ಯಾವಂತ ದಂಪತಿಗಳು ನನಗೆ ಅಚ್ಚರಿಯ ಮೂಟೆ.

ಇರಲಿ ಇದು ಅವರ ಕಥೆಯಾಯಿತು ಈಗ ನಮ್ಮ ಕಥೆಗೆ ಬರೋಣ. ನಾನು ಸ್ವಾಮಿಯಬಳಿ ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಅವರಿಗೆ ಹೊನ್ನೆಮರಡುವಿನಲ್ಲಿ ಈಜಲು ಜಾಕೆಟ್ ಬೇಕಿತ್ತು ಎಂದು ಕೇಳಿದಾಗೆಲ್ಲಾ ಅಯ್ಯೋ ಬನ್ನಿ ಸ್ವಾಮಿ ಎಂದು ಒಕೆ ಕೊಡುತ್ತಾರೆ. ಆವಾಗ ನಾನೂ ನಮ್ಮ ಅತಿಥಿಗಳ ಜತೆ ಸೇರಿಕೊಂಡು ಮೀನಾಗುತ್ತೇನೆ. ನೀರಿಗೆ ಬೋಟಿನಿಂದ ದುಡುಂ ದುಡುಂ ಎಂದು ಹಾರಿ ಮಜ ಉಢಾಯಿಸುತ್ತೇನೆ. ನೀರಿನಿಂದೆದ್ದು ಗಡಗಡ ನಡುಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಧುಮುಕುತ್ತೇನೆ. ಅಲ್ಲಿ ಹೀಗೆ ಇದ್ದಷ್ಟು ಹೊತ್ತು ಪ್ರಪಂಚ ಮರೆಯುತ್ತೇನೆ. ಜತೆಗೆ ಬಂದವರು ನೂರಾರು ಫೋಟೋ ಕ್ಲಿಕ್ಕಿಸುತ್ತಾರೆ ಎಲ್ಲರಿಗೂ ಮಜವೋ ಮಜ. ಈಜಾಡಿ ಸ್ವಾಮಿ ಉಳಿದುಕೊಳ್ಳಲು ಮಾಡಿಕೊಂಡ ಮನೆಯ ಬಳಿಯಿರುವ ರೌಂಡ್ ಗೆ ಬಂದು ಕುಳಿತುಕೊಂಡರೆ ಮಂಜುಳ ಘಮ ಘಮ ಪರಿಮಳದ ಚಾ ಕೊಡುತ್ತಾಳೆ. ಸಾರ್ ಸಾರ್ ಟಿ ಚೆನ್ನಾಗಿದೆಯಾ ಎಂದು ಹತ್ತು ಸಾರಿ ಕೇಳುವ ಮಂಜುಳಳ ಆತ್ಮೀಯತೆ ಚಾ ಕ್ಕಿಂತಲೂ ಉತ್ತಮ. ನನ್ನ ಮಗನ ಖುಷಿಯಂತೂ ಕೇಳುವುದೇ ಬೇಡ. ಅಲ್ಲಿಯ ತರಬೇತುದಾರರೆಲ್ಲ ಅವನ ದೋಸ್ತಿಗಳು. ಹೀಗೆ ತಿಂಗಳಿಗೊಮ್ಮೆಯಾದರೂ ನನ್ನ ಹೊನ್ನೆಮರಡುವಿನ ಯಾತ್ರೆ ನಡೆಯುತ್ತಿರುತ್ತದೆ. ಆ ಪೃಕೃತಿಯ ನಡುವೆ ಒಂದಿಷ್ಟು ಸಮಯ ಕಳೆದು ಬರುವುದಿದೆಯಲ್ಲ ಅದು ಅದ್ಬುತ. ಅಲ್ಲಿದ್ದಷ್ಟು ಹೊತ್ತು ಪ್ರಪಂಚ ಮರೆಯಬಹುದು.

ಇದಿಷ್ಟು ನನ್ನ ಕಥೆಯಾಯಿತು. ಈಗ ನಿಮ್ಮ ಸರದಿ ಒಮ್ಮೆ ಇತ್ತ ಕಡೆ ಬಂದಾಗ ಬನ್ನಿ ಹೊನ್ನೆಮರಡುವಿಗೆ ಹೋಗಿ ಬರೋಣ. ನೀವೂ ದುಡಿದು ದುಡಿದು ಹೈರಾಣಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ದುಡಿಮೆ ಎನ್ನುವುದು ಎಷ್ಟಾದರೂ ಮುಗಿಯದು. ಎಂಟು ಲಕ್ಷ ಡೆಪಾಸಿಟ್ ಮಾಡುವಷ್ಟರಲ್ಲಿ ಹತ್ತು ಲಕ್ಶಕ್ಕೆ ಮನಸ್ಸು ಹಾತೊರೆಯುತ್ತದೆ. ಹತ್ತು ಲಕ್ಷ ಸೇರುವಷ್ಟರಲ್ಲಿ ಇಪ್ಪತ್ತು ಲಕ್ಷದ ಯೋಚನೆ ಮನಸ್ಸಿನಲ್ಲಿ ಜತೆಗೆ ಅವನನ್ನು ನೋಡು ಅಷ್ಟು ಹಣ ಮಾಡಿದ ಎನ್ನುವ ಯೋಚನೆ ಹೀಗೆ ಮುಗಿಯದ ಕಥೆ ಅದು. ದುಡಿಮೆ ಧಾವಂತ ವನ್ನೆಲ್ಲಾ ಬದಿಗಿಟ್ಟು ಹೊನ್ನೆಮರಡುವಿನ ನೀರವ ಮೌನದಲ್ಲಿ ಮಿಂದೆದ್ದು ಹೋಗಿ. ನಾನೂ ಇರಬೇಕೆಂದಿಲ್ಲ ನೀವೆ ಬಂದು ಹೋಗಬಹುದು. ಕಾರಣ ನನ್ನ ಒಂದಿಷ್ಟು ಕೊರೆತವನ್ನು ತಪ್ಪಿಸಿಕೊಳ್ಳಬಹುದು . ಏನಂತೀರಿ?

ಕೊನೆಯದಾಗಿ: ಜನರೆಲ್ಲ ಜೀವನಕ್ಕಾಗಿ ದುಡಿಯುತ್ತಿದ್ದಾರೋ? ಹಣಕ್ಕಾಗಿ ದುಡಿಯುತ್ತಿದ್ದಾರೋ? ದುಡಿಮೆಗಾಗಿ ದುಡಿಯುತ್ತಿದ್ದಾರೋ? ಎಂದು ಆನಂದರಾಮಶಾಸ್ತ್ರಿಗಳಲ್ಲಿ ಕೇಳಿದೆ. ಶೂನ್ಯದಿಂದ ಆರಂಭ, ಆರೋಗ್ಯವನ್ನೂ ಲೆಕ್ಕಿಸದೆ ಸಂಪಾದನೆ. ನಂತರ ಸಂಪಾದಿಸಿದ್ದೆಲ್ಲ ಕಳೆದುಕೊಂಡಿದ್ದಕ್ಕೆ ವ್ಯಯ. ಮತ್ತೆ ಶೂನ್ಯದಲ್ಲಿ ಅಂತ್ಯ. ಎನ್ನುವ ವಿಚಿತ್ರ ಉತ್ತರ ಕೊಟ್ಟರು. ನನಗೆ ಅರ್ಥವಾಗಲಿಲ್ಲ. ನಿಮಗೆ ಅರ್ಥವಾದರೆ ಯೆಸ್ ಅನ್ನಿ ಇಲ್ಲದಿದ್ದರೆ ನನ್ನನ್ನು ಅನ್ನಬೇಡಿ.

ಟಿಪ್ಸ್: ದೀರ್ಘ ಪ್ರಯಾಣಕ್ಕೆ ಹೊರಡುವ ಮುನ್ನ ಎಳೆ ಸೌತೆ ಕಾಯಿ ತಿಂದು ಹೊರಟರೆ ಪ್ರಯಾಣದುದ್ದಕ್ಕೂ ಅಜೀರ್ಣ, ಫುಡ್ ಪಾಯಿಸನ್, ಡಿ ಹೈಡ್ರೇಷನ್ ಮುಂತಾದ ಕಿರಿ ಕಿರಿ ಇರುವುದಿಲ್ಲ.




Friday, November 7, 2008

ತುಂಬೆ ಇಳಕಲ ಬಿಳಿ ದೆವ್ವ.


ಅಮಾವಾಸೆಯಾದ್ದರಿಂದ ಎಲ್ಲೆಲ್ಲೂ ಗಾಢಾಂಧಕಾರ. ಬೆಳಕಿನ ಹುಡುಕಾಟಕ್ಕೆ ನಕ್ಷತ್ರಗಳನ್ನಾದರೂ ಅವಲಂಬಿಸೋಣ ಎಂದರೆ ಮೋಡಗಳು ಅವನ್ನು ಮರೆಮಾಚಿದ್ದವು. ಸಾಗರದಿಂದ ಕನಿಷ್ಟ ೧೨ ಕಿಲೋಮೀಟರ್ ದೂರದ ಮನೆಗೆ ಹೋಗಲು ಬಸ್ಸೂ ಇರಲಿಲ್ಲ. ಇನ್ನೇನು ಮಾಡುವುದು ಲಟಾರಿ ಸೈಕಲ್ಲೇ ಗತಿ ಎಂದು ಅನಿವಾರ್ಯವಾಗಿ ಮನೆಯತ್ತ ಪೆಡಲ್ ತುಳಿಯತೊಡಗಿದೆ. ವರದಳ್ಳಿ ಕ್ರಾಸ್ ವರೆಗೆ ಜೋಗಕ್ಕೆ ಹೋಗುವ ವಾಹನಗಳ ಬೆಳಕು ಸಿಕ್ಕಿತು. ನಂತರ ಕರ್ಕಿಕೊಪ್ಪದ ಕಡೆ ತಿರುಗಿದಾಗ ಬೆಳಕಿಲ್ಲದೆ ಕಂಗಾಲಾದೆ. ಡೈನಮೋ ದುರಸ್ತಿ ಮಾಡಲು ಹೆಣಗಿದೆ. ಬಡಪೆಟ್ಟಿಗೆ ಅದು ಬಗ್ಗಲಿಲ್ಲ ಗರಗರ ಸದ್ದು ಬಂತೇ ಹೊರತು ಬೆಳಕು ಬರಲಿಲ್ಲ. ಬೆಳಕು ಇಲ್ಲದ ಸೈಕಲ್ ತುಳಿಯುವುದೊಂದೇ ಅನಿವಾರ್ಯ.ಕಣ್ಣು ನಿಧಾನ ಕತ್ತಲೆಗೆ ಹೊಂದಿಕೊಂಡಿತು. ತುಳಿಯುತ್ತಾ ಸಾಗಿದೆ. ಕರ್ಕಿಕೊಪ್ಪ ದಾಟಿದ ಮೇಲೆ ಬೆಂಕಟವಳ್ಳಿತನಕ ಘಟ್ಟದ ರಸ್ತೆ ನಂತರ ಭರ್ಜರಿ ಇಳಿಜಾರು. ಘಟ್ಟದಲ್ಲಿ ಸೈಕಲ್ ತುಳಿಯಲಾರದೆ ದಬ್ಬಿಕೊಂಡು ಹೊರಟೆ. ಸೈಕಲ್ ಘಟ್ಟದಲ್ಲಿ ದಬ್ಬಿ ದಬ್ಬಿ ಬೆವರು ಗುದುಕುತ್ತಿತ್ತು . ಅಂತೂ ಇಂತೂ ಸುರಿವ ಬೆವರಿನೊಡನೆ ಘಟ್ಟದ ರಸ್ತೆ ಮುಗಿಯಿತು. ಇಳಿಜಾರು ಪ್ರಾರಂಭವಾದ್ದರಿಂದ ಸ್ವಲ್ಪ ಹಿತ . ಪೆಡಲ್ ಮಾಡದೆ ೨ ಕಿಲೋಮೀಟರ್ ಸಾಗಬಹುದು ಎಂದು ಆಲೋಚಿಸುತ್ತಾ ಸೈಕಲ್ ಹತ್ತಿ ಕುಳಿತು ಒಂದೆರಡು ಮಾರು ದೂರ ಸಾಗಿದ್ದೆ. ಇದ್ದಕ್ಕಿದ್ದಂತೆ ಪಳಕ್ಕನೆ ಸೈಕಲ್ ಡೈನಮೋ ಹತ್ತಿಕೊಂಡಿತು. ಅನಿರೀಕ್ಷಿತವಾದ ಆಘಾತಕ್ಕೆ ಬೆಚ್ಚಿದೆ. ನಂತರ ತುಸು ಸಾವಾರಿಸಿಕೊಂಡು ತನ್ನಿಂದತಾನೆ ಹತ್ತಿರಬೇಕೆಂದು ಆಲೋಚಿಸುತ್ತಾ ಮುಂದೆ ಸಾಗಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತುಕೊಂಡ ಅನುಭವಾಯಿತು. ನನ್ನ ಸೊಂಟದ ಬಳಿ ಬಿಳಿಯದಾದ ಎರಡು ಉದ್ದನೆಯ ಕೈಗಳು ನೇತಾಡುತ್ತಿದ್ದವು. ಒಮ್ಮೆಲೆ ಮೈ ಮರಗಟ್ಟಿದ ಅನುಭವವಾಯಿತು. ಈಗ ನನಗೆ ಸೈಕಲ್ ಡೈನಾಮೋ ತನ್ನಿಂದ ತಾನೆ ಹತ್ತಿಕೊಂಡದ್ದರ ರಹಸ್ಯ ತಿಳಿಯಿತು. ಘಟ್ಟದ ರಸ್ತೆಯಲ್ಲಿ ಸೈಕಲ್ ದಬ್ಬುವಾಗಲೂ ಅಷ್ಟೊಂದು ಬೆವರು ಗುದುಕಿರಲಿಲ್ಲ. ಅಂಗಿ ಚೊಣ್ಣ ಎಲ್ಲೂ ಎಲ್ಲೆಲ್ಲೂ ನೀರು ದುಮ್ಮಿಕ್ಕುತ್ತಿದೆ. ಯಾವ ರಗಳೆಯೂ ಬೇಡ ಸೈಕಲ್ ನಿಲ್ಲಿಸಿ ಬಿದ್ದು ಓಡಿಬಿಡೋಣ ಎಂದು ಬ್ರೆಕ್ ಹಾಕಿದೆ. ಇಲ್ಲ ಬ್ರೇಕ್ ಎಷ್ಟು ಗಟ್ಟಿಯಾಗಿ ಅಮುಕಿದರೂ ಅದು ಕೆಲಸ ಮಾಡುತ್ತಿಲ್ಲ. ಕಾಲನ್ನಾದರೂ ನೆಲಕ್ಕೆ ಊರೊಣ ಎಂದರೆ ಕಾಲು ಸೈಕಲ್ ಪೆಡಲ್ಲಿಗೆ ಅಂಟಿಕೊಂಡಿದೆ. ಇಷ್ಟಾದ ಮೇಲೆ ನನಗೆ ಮನವರಿಕೆಯಾಯಿತು ಇಷ್ಟು ದಿವಸ ನಾನು ಚೌಡಿ ಭೂತ ದೆವ್ವ ಎನ್ನುವುದೆಲ್ಲಾ ಬೋಗಸ್ ಎನ್ನುತ್ತಿದ್ದೆ. ಆದರೆ ಇಂದು ಸ್ವಯಂ ನನಗೆ ಅನುಭೂತಿಯಾಗುತ್ತಿದೆ. ಮಾಡುವುದೇನು? ಎಂದು ತೋಚುತ್ತಿಲ್ಲ. ಒಂದೇಸವನೆ ಗಾಯಿತ್ರಿ ಮಂತ್ರ ಹೇಳಲೆತ್ನಿಸಿದೆ. ಆದರೆ ಅರ್ದದ ವರೆಗೆ ಗಾಯಿತ್ರಿ ಮಂತ್ರ ಬಂತು ಮುಂದೆ ನೆನಪಾಗುತ್ತಿಲ್ಲ. ಇಲ್ಲ ಇವೆಲ್ಲ ಸತ್ಯ ಅಲ್ಲ ನಾನು ಭ್ರಮೆಗೊಳಗಾಗಿದ್ದೇನೆ ಎಂದು ಹೊರಮನಸ್ಸಿಗೆ ಧೈರ್ಯ ತುಂಬಿಸಲೆತ್ನಿಸಿದೆ. ಅಷ್ಟರಲ್ಲಿ ನನ್ನ ಕಿರುಗಣ್ಣಿಗೆ ಕಾಣುತ್ತಿದ್ದ ಬಿಳಿಯ ಕೈಗಳದ್ದೇ ಇರಬೇಕು ಧ್ವನಿ ಹೊರಟಿತು. "ಹ ಹ ಹ ಮೂರ್ಖ ನಿನ್ನ ಪ್ರಯತ್ನ ಬಿಡು, ". ಈಗ ಮಾತ್ರ ಇವ್ಯಾವುದೂ ನನ್ನ ಭ್ರಮೆಯಲ್ಲ ಎಂಬುದು ಅರಿವಿಗೆ ಬಂತು. ತಿರುಗಿ ನನ್ನ ಹಿಂದೆ ಕುಳಿತಿರುವುದು ಏನು ಎಂದು ನೋಡಿಬಿಡೋಣ, ಎಂಬ ಭಯಮಿಶ್ರಿತ ಕುತೂಹಲದಿಂದ ತಿರುಗಲೆತ್ನಿಸಿದೆ ಆದರೆ ಕುತ್ತಿಗೆ ತಿರುಗುತ್ತಿಲ್ಲ. ಯಾರೋ ಹಿಂದಿನಿಂದ ಕುತ್ತಿಗೆ ಒತ್ತಿ ಹಿಡಿದಂತೆ ಆಯಿತು. ಜತೆಗೆ ಹಿಂದಿನ ದನಿ ಹೇಳಿತು " ಮೂರ್ಖ ತಿರುಗಿ ನನ್ನನ್ನೇನು ನೋಡುತ್ತೀ... ಮುಂದೆ ನೋಡು ಅಲ್ಲೇನಿದೆ ಅಂತ" ಎಂದಿತು. ನನ್ನ ಸೈಕಲ್ಲಿನ ಅನತಿ ದೂರದಲ್ಲಿ ಕಾಲೇ ಇಲ್ಲದ ವಿಕಾರ ಮುಖದ ಆಕೃತಿ ಸೈಕಲ್ ಜತೆಜತೆಗೆ ತೇಲುತ್ತಾ ಬರತೊಡಗಿತು. ಅಮ್ಮಾ ಇದ್ಯಾವ ಮಾಯೆ. ದೆವ್ವ ಅಂಬೋದು ಮನುಷ್ಯ ಸೃಷ್ಟಿ ಎಂದು ನಾಸ್ತಿಕ ವಾದ ಮಾಡಿ ಎಲ್ಲರನ್ನೂ ಸೋಲಿಸುತ್ತಿದ್ದ ನನಗೆ ಇಂಥಹಾ ಅನುಭವ ವಾಯಿತಲ್ಲ. ಏನು ಮಾಡಲಿ ಈಗ ಒಟ್ಟಿನಲ್ಲಿ ಇನ್ನು ನಾನು ಬದುಕಲಾರೆ ಎನ್ನುವ ಹಂತ ತಲುಪಿದೆ. ಅಂತಿಮವಾಗಿ ಶ್ರೀಧರ ಸ್ವಾಮಿಗಳು ನೆನಪಾದರು. "ಶ್ರೀಧರ ಸ್ವಾಮಿ ಕಾಪಾಡು ತಂದೆ" ಎಂದು ಕಿರುಚಿಕೊಂಡೆ. ಮರುಕ್ಷಣ ಎಲ್ಲಾ ಮಾಯವಾಯಿತು. ನಾನು ನನ್ನ ಬಡಕಲು ಸೈಕಲ್ ನಲ್ಲಿ ಘಟ್ಟದ ರಸ್ತೆಯ ಆರಂಭದಲ್ಲಿ ಇದ್ದೆ. ಇಷ್ಟೊತ್ತು ಕಂಡಿದ್ದು ಭ್ರಮೆ ಎನ್ನುವಷ್ಟರಮಟ್ಟಿಗೆ ಎಲ್ಲ ತಿಳಿಯಾಗಿತ್ತು. ಶ್ರೀಧರ ಸ್ವಾಮಿಗಳ ಮಹಿಮೆ ನೆನೆದು ಪುಳಕಿತನಾದೆ. ಎಲ್ಲರೀಗೂ ಈ ಸತ್ಯದ ಘಟನೆ ಹೇಳಬೇಕೆಂದುಕೊಂಡು ಸುಲಲಿತವಾಗಿ ಮನೆ ಸೇರಿದೆ.
ಇದೊಂದು ಘಟನೆ ನಡೆದು ಸುಮಾರು ನಲವತ್ತು ವರ್ಷಗಳು ಸಂದಿವೆ. ಈಗ ವಾಸ್ತವದ ಕತೆ ಹೇಳುತ್ತೇನೆ. ಮೇಲೆ ನಿಮಗೆ ವಿವರಿಸಿದ ಅನುಭವ ನನ್ನದಲ್ಲ. ನನ್ನ ಬಾಲ್ಯದಲ್ಲಿ ಸುಬ್ಬಣ್ಣ ಎಂಬ ನನಗೆ ವಾರಿಗೆಯಲ್ಲಿ ಅಣ್ಣನಾದವನ ಕಥೆ ಇದು. ನಮ್ಮನ್ನೆಲ್ಲಾ ಸುತ್ತು ಕೂರಿಸಿಕೊಂಡು ಇಂತಹ ಹಸಿ ಹಸಿ ಸುಳ್ಳಿನ ಕತೆಗಳನ್ನು ತೇಲಿಬಿಡುತ್ತಿದ್ದ. ನಮಗೆಲ್ಲಾ ಅವನು ಕಥೆ ವಿವರಿಸುವ ಪರಿಯಿಂದ ಮೈಮೇಲೆ ಮುಳ್ಳುಗಳು ಏಳುತ್ತಿದ್ದವು. ಅವನು ಇವನ್ನೆಲ್ಲಾ ಗೆದ್ದ ವೀರನಂತೆ ತೋರುತ್ತಿದ್ದ. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಈ ದೆವ್ವ ಭೂತಗಳು ಅಚ್ಚೊತ್ತಿ ಕುಳಿತು ಬಿಟ್ಟಿದೆ. ಅವೆಲ್ಲಾ ಪರಮ ಸುಳ್ಳು ಎಂದು ತಿಳಿದ್ದಿದ್ದರೂ ಹುಲ್ಕೋಡಿಗೆ ಹೋಗುವಾಗ ಕರ್ಕಿಕೊಪ್ಪ ದಾಟಿದಮೇಲೆ ತುಂಬೆ ಇಳಕಲು ಇಳಿಯುವಾಗ ಸುಬಣ್ಣನ ಕಥೆಗಳು ನೆನಪಾಗುತ್ತವೆ. ಅಕಸ್ಮಾತ್ ರಾತ್ರಿಯಾಗಿದ್ದರೆ ಒಂದು ಕ್ಷಣ ಮೈಮೇಲೆ ಮುಳ್ಳುಗಳೆದ್ದು ಮಾಯವಾಗುತ್ತದೆ. ಸುಬ್ಬಣ್ಣ ಹೀರೋ ಆಗಲು ಹೋಗಿ ಇಂತಹ ಓಳಿನ ಕಥೆಗಳು ಬಾಲ್ಯದಲ್ಲಿ ಸ್ವಲ್ಪ ಯಡವಟ್ಟು ನಂಬಿಕೆಗಳು ಉಳಿದಿವೆ. ಆದರೆ ನಾನಂತೂ ಸಣ್ಣ ಹುಡುಗರಿಗೆ ಇಂತಹ ಕಥೆಗಳನ್ನು ಹೇಳುವುದಿಲ್ಲ. ನೀವೂ ಹಾಗೆಯೇ ಅಂತ ಅಂದುಕೊಂಡಿದ್ದೇನೆ. ಅವು ತುಂಬಾ ತುಂಬಾ ದುಷ್ಪರಿಣಾಮ ಮಾಡಿಬಿಡುತ್ತವೆ. ಏನಂತೀರಿ.?
ಕೊನೆಯದಾಗಿ: ಭೂತ ದೆವ್ವ ವೆಂಬುದು ಭ್ರಮೆಯೋ ..ವಾಸ್ತವವೋ ..? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ಭೂತವೆಂಬುದು ವಾಸ್ತವ ದೆವ್ವವೆಂಬುದು ಭ್ರಮೆ ಎಂದುತ್ತರಿಸದರು, ನಾನು ಬೂತವನ್ನು ಹೊಡೆದು ಪ್ರಶ್ನೆ ಕೇಳಿದ್ದರಿಂದ ಅಂತಹ ಉತ್ತರ ಬಂತು. ಮತ್ತೆ ಮರುಪ್ರಶ್ನಿಸಲಿಲ್ಲ.
ಟಿಪ್ಸ್: ಹುಳುಕು ಹಲ್ಲಿನ ಕಾಟ ತಪ್ಪಿಸಿಕೊಳ್ಳಲು ಎಲೆ ಅಡಿಕೆ ಜತೆ ತಂಬಾಕನ್ನು ಅಗಿಯಿರಿ. ಇದರಿಂದಾಗಿ ತಂಬಾಕು ಹಾಕುವುದಕ್ಕೆ ಕಾರಣ ಸಿಗುವುದು ಸುಲಭವಾಗುತ್ತದೆ
ಅಂತಿಮವಾಗಿ : ಸುಶ್ರುತ ದೊಡ್ಡೇರಿಯವರು ಬರೆದ ಸಂಪಿಗೆ ಮರದ ಬರಹವನ್ನು ಇದು ಹೋಲುತ್ತದೆ ಎಂಬ ಕಾಮೆಂಟ್ ಮಾಡಿದ್ದಾರೆ. ಹೋಲುವುದು ನಿಜ. ಅದನ್ನು ಅಂದು ಓದಿದ ನಾನು ಇದನ್ನು ಬರೆಯಬೇಕೆಂದು ಅಂದೇ ತೀರ್ಮಾನಿಸಿದ್ದೆ. ಆದರೆ ಇಂದು ತದ್ಗತ್ ಆಯಿತು.

Friday, October 31, 2008

ಜೇನಿನಂತ ಜೇನು ಕೊನೆಯಲ್ಲಿ ಕನ್ನಡ




ನವೆಂಬರ್ ತಿಂಗಳು ಬಂತೆಂದರೆ ನನಗೆ ದಿನಾಲೂ ಜೇನು ಪೆಟ್ಟಿಗೆಯನ್ನು ನೋಡುವ ಕೆಲಸ ಆರಂಭವಾಗುತ್ತದೆ. ಮಳೆಗಾಲದ ಅಬ್ಬರ ಕಳೆದು ತಣ್ಣನೆಯ ಚಳಿ ಕೊರೆಯಲು ಆರಂಭವಾಗುವ ಈ ದಿನಗಳಲ್ಲಿ ವಾತಾವರಣ ಆಹ್ಲಾದಕರ. ಮಲಗಿದ್ದವನ ಹಿಡಕೊಂಡೆ ಎದ್ದವನಿಂದ ಒದೆಸಿಕೊಂಡೆ ಎನ್ನುವುದು ಚಳಿಯ ಧ್ಯೇಯ ವಾಕ್ಯ. ಹಪ್ಪರೆ ಮೈನವರಿಗೆ ಮೈಯೆಲ್ಲಾ ಉರಿಉರಿ. ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಸಾಫ್ ಮಾಡಬೇಕು. ಅಂತಹ ಚಳಿಗಾಲದಲ್ಲಿ ಜೇನುಪೆಟ್ಟಿಗೆಯಲ್ಲಿ ಅದೊಂದು ನಿರ್ಧಾರ ಮೊಳಕೆಯೊಡೆಯುತ್ತದೆ. ರಾಣಿ ಎಂಬ ಹೆಣ್ಣು ನೊಣ ತನ್ನ ಆ ನಿರ್ಧಾರವನ್ನು ಕೆಲಸಗಾರ ನೊಣಕ್ಕೆ ರವಾನಿಸುತ್ತದೆ. ಆ ನಿರ್ಧಾರ ಯಾವುದೆಂದು ಕೇಳಿದಿರಾ..? ಅದೇ ನಮ್ಮ ವಂಶದ ರಥ ಮುಂದುವರೆಯಲು ಗಂಡಿನ ಅವಶ್ಯಕತೆಯಿದೆ ಗಂಡು ಮೊಟ್ಟೆಯನ್ನಿಡಿ. ನಾನಿಡುವ ಲಾರ್ವಾ ಗಂಡು ನೊಣವಾಗಬೇಕು ಹಾಗಾಗಿ ಅದಕ್ಕೆ ಗಂಡುನೊಣವಾಗುವ ಆಹಾರ ನೀಡಿ. ಎಂದು ಫರ್ಮಾನು ಹೊರಡಿಸುತ್ತದೆ. ಜೂನ್ ತಿಂಗಳಿನಿಂದ ಗೂಡಿನಿಂದ ಅಕ್ಷರಶಃ ಮಾಯವಾಗಿದ್ದ ಗಂಡು ನೊಣಗಳು ನವೆಂಬರ್ ಹದಿನೈದು ಇಪ್ಪತ್ತರ ಹೊತ್ತಿಗೆ ಒಂದೊಂದೆ ಜೇನಿನ ಪ್ರಪಂಚದಲ್ಲಿ ಕಣ್ಣುಬಿಡಲಾರಂಭಿಸುತ್ತವೆ. ಜೇನಿನ ಪ್ರಪಂಚದಲ್ಲಿ ಗಂಡು ಎಂಬುದು ಕೇವಲ ಸಂತಾನೋತ್ಪತ್ತಿಯ ಕೆಲಸಕ್ಕೆ ಸೀಮಿತ. ಒಂದು ಗೂಡಿನ ಒಂದು ನೊಣಕ್ಕೆ ಆ ಭಾಗ್ಯ. ಅದು ಭಾಗ್ಯವೆನ್ನುತ್ತೀರೋ ಅಥವಾ ಅಬ್ಬಾ ಅನ್ನುತ್ತೀರೋ ಅದು ನಿಮಗೆ ಬಿಟ್ಟ ವಿಚಾರ. ಈಗ ಕತೆಗೆ ಬರೊಣ. ಹೀಗೆ ನವೆಂಬರ್ ತಿಂಗಳು ಮುಗಿಯುವ ಹೊತ್ತಿಗೆ ನೂರಾರು ಗಂಡು ನೊಣಗಳು ಪ್ರಾಯಕ್ಕೆ ಬಂದುಬಿಡುತ್ತವೆ. ಆವಾಗ ರಾಣಿ ನೊಣ ತನ್ನ ಕೆಲಸಗಾರ ನೊಣಗಳಿಗೆ ಮತ್ತೊಂದು ಫರ್ಮಾನು ಹೊರಡಿಸುತ್ತದೆ. ನಾವು ಈಗ ಹಿಸ್ಸೆ ಮಾಡಿಕೊಳ್ಳಬೇಕು, ಆ ಕಾರಣದಿಂದ ಹಿಸ್ಸೆಯಾಗಬೇಕು ಎಂದಾದಾಗ ಯಜಮಾನಿಕೆಗೆ ರಾಣಿ ನೊಣದ ಅವಶ್ಯಕತೆಯಿದೆ ಹಾಗಾಗಿ ನಾನು ಇಡುವ ಮೊಟ್ಟೆ ರಾಣಿಯಾಗುವಂತೆ ರಾಜಾಷಾಹಿ ಆಹಾರ ಕೊಡಿ ಎನ್ನುತ್ತದೆ. ಕೆಲಸಗಾರ ನೊಣಗಳು ತಮ್ಮ ಕುಟುಂಬದ ಎಲ್ಲಾ ನೊಣಗಳನ್ನು ಲೆಕ್ಕ ಮಾಡಿ ಎಷ್ಟು ರಾಣಿ ಮೊಟ್ಟೆಗಳನ್ನು ಇಡಬಹುದೆಂದು ಎಣಿಸಿ ಒಂದೈದು ಹೊಸ ರಾಣಿಮೊಟ್ಟೆ ಸಿದ್ಧಪಡಿಸುತ್ತವೆ. ರಾಣಿ ಮೊಟ್ಟೆ ೧೩ ರಿಂದ ೧೫ ದಿವಸಗಳೊಳಗೆ ರಾಣಿಯಾಗುತ್ತವೆ. ಅಲ್ಲಿಂದ ಹಿಸ್ಸೆ ಪ್ರಕ್ರಿಯೆ ಷುರು. ಹೊಸ ರಾಣಿ ಒಂದೊಂದಾಗಿ ಹೊರಬಂದಂತೆ ಗಂಡು ನೋಣಗಳು ಮೀಸೆಯಮೇಲೆ ಕೈ ಅಲ್ಲಲ್ಲ ಕಾಲನ್ನಿಟ್ಟು ತಿರುವಿಕೊಳ್ಳಲು ಪ್ರಾರಂಭಿಸುತ್ತವೆ. ಹೊಸರಾಣಿ ಹೊರ ಬಂದು ನಾಲ್ಕೈದು ತಾಸಿನೊಳಗೆ ಒಂದಿಷ್ಟು ಗಂಡು ನೊಣ ಹಾಗೂ ಮತ್ತೊಂದಿಷ್ಟು ಕೆಲಸಗಾರ ನೊಣವನ್ನು ಕಟ್ಟಿಕೊಂಡು ಬೇರೆ ಗೂಡಿಗೆ ರೈಟ್. ಗೂಡು ಸೇರಿ ಕೆಲಸಗಾರ ನೊಣ ತತ್ತಿಕಟ್ಟುವ ಕೆಲ್ಸ ಆರಂಬಿಸುತ್ತಿದ್ದಂತೆ ರಾಣಿ ನೊಣ ಮಿಲನ ಮಹೋತ್ಸವದ ಹಾರಾಟ ಆರಂಬಿಸುತ್ತದೆ. ಒಂದಿಷ್ಟು ಗಂಡು ನೊಣದೊಂದಿಗೆ ಎತ್ತರಕ್ಕೆ ಎತ್ತರದೆತ್ತರಕ್ಕೆ ಏರುವ ರಾಣಿ ತನ್ನಷ್ಟು ಎತ್ತರಕ್ಕೇರುವ ಒಂದೇ ಒಂದು ಗಂಡಿನೊಂದಿಗೆ ಬಾನಲ್ಲಿ ಮಧುಚಂದ್ರವನ್ನು ಆಚರಿಸುತ್ತದೆ. ರಾಣಿಯೊಡನೆ ಮಿಲನ ಹೊಂದಿದ ಮರುಕ್ಷಣ ಆ ಗಂಡುನೊಣ ಸಾವನ್ನಪ್ಪುತ್ತದೆ. ಮಿಕ್ಕ ಗಂಡು ನೊಣಕ್ಕೆ ರಾಣಿಯೊಡನೆ ಸೇರುವ ಅವಕಾಶದೊರೆಯದಿದ್ದರೂ ಜೀವದಾನವಾಗಿರುತ್ತದೆ. ಮತ್ತೆ ಜೂನ್ ತಿಂಗಳು ತನಕ ಪುಕ್ಕಟ್ಟೇ ಕೆಲಸಮಾಡದೇ ತುಪ್ಪ ತಿನ್ನುತ್ತಾ ಆರಾಮಾವಾಗಿರುವ ಯೋಗ.ಒಮ್ಮೆ ಗಂಡನ್ನು ಸೇರಿದ ರಾಣಿ ನೊಣ ಅದರ ಜೀವಿತಾವಧಿಯಾದ ಮೂರು ವರ್‍ಷಗಳ ತನಕ ನಿರಂತರ ಅವಶ್ಯಕತೆ ಇದ್ದರೆ ದಿನವೊಂದಕ್ಕೆ ಒಂದೂವರೆ ಸಾವಿರ ಮೊಟ್ಟೆಗಳವರೆಗೂ ಇಡುತ್ತಾ ಸಂಸಾರ ನಡೆಸುತ್ತದೆ. ಮತ್ತೆ ಜೂನ್ ತಿಂಗಳು ಆರಂಭವಾಗುತ್ತಿದಂತೆ ಪ್ರಕೃತಿಯಲ್ಲಿ ಜೇನಿಗೆ ಬೇಕಾದ ಆಹಾರ ಸಿಗದ ಕಾರಣ ಅನಾವಶ್ಯಕ ಗಂಡು ನೊಣಗಳ ಜೀವಕ್ಕೆ ಮೊದಲ ಕುತ್ತು. ಎಲ್ಲಾ ಗಂಡುನೊಣಗಳನ್ನು ಆಹಾರ ಕೊಡದೆ ಫಿನಿಶ್ ಮಾಡಿಬಿಡುತ್ತದೆ.ಮತ್ತೆ ನವೆಂಬರ್ ಗೆ ಹೊಸ ಸೃಷ್ಟಿ. ಇದು ಪ್ರಕೃತಿಯ ವಿಚಿತ್ರದಾಟ.

ಹಾ ಈ ಸೃಷ್ಟಿ ರಹಸ್ಯವನ್ನು ಹೆಂಗಸರಿಗೆ ಹೇಳಬೇಡಿ .....ಮತ್ತೆ ಅನುಕರಿಸಿದರೆ ನಮ್ಮ ಗತಿ... !

ನಾನು ಗಂಡು ನೊಣ ಪೆಟ್ಟಿಗೆಯಲ್ಲಿ ಕಂಡೊಡನೆ ಅವುಗಳನ್ನು ಕೃತಕವಾಗಿ ಹಿಸ್ಸೆಮಾಡಿಸಬೇಕು. ಇಲ್ಲದಿದ್ದರೆ ನೀವು ನಮ್ಮಲ್ಲಿಗೆ ಬಂದಾಗ ಕೊಡಲು ಒಂದು ತೊಟ್ಟೂ ತುಪ್ಪ ಇರುವುದಿಲ್ಲ. ಹಾಗಾಗಿ ನಿತ್ಯ ಪೆಟ್ಟಿಗೆಯ ಮುಚ್ಚಳ ತೆಗೆದು ಬಂದೆಯಾ.. ಹೀರೋ..! ಎಂದು ನೋಡುತ್ತಲಿದ್ದೇನೆ. ಜೇನಿನ ಜೀವನದಲ್ಲಿ ಇಂತಹ ಹತ್ತಾರು ಅಚ್ಚರಿಯ ವಿಷಯಗಳಿವೆ ನಮ್ಮ ನಿಮ್ಮ ಜೀವನದಲ್ಲಿ ಇರುವಂತೆ. ಆದರೂ ಅದೇನೆ ಇರಲಿ ಜೇನು ನಮ್ಮ ಕನ್ನಡಕ್ಕೂ ತುಂಬಾ ನಂಟು ಎಂಬ ಹೊಸ ವಿಚಾರವನ್ನು ಸೇರಿಸಬಹುದು. ಕಾರಣ ಕನ್ನಡ ವರ್ಷಕ್ಕೊಮ್ಮೆ ಶುರುವಾಗುವುದು ನವಂಬರ್ ಒಂದರಿಂದ ಮತ್ತು ಜೇನಿನ ಹೊಸ ಜೀವನ ಚಕ್ರದ ಚ ಟುವಟಿಕೆ ಯ ಆರಂಭವೂ ನವೆಂಬರ್ರೇ.... ಹ್ಯಾಪಿ ಕನ್ನ್ಡಡ ರಾಜ್ಯೋತ್ಸವ, ವಣಕ್ಕಂ, ನಮಸ್ಕಾರಮು.

ಕೊನೆಯದಾಗಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇಂದು ಸಿಕ್ಕಿದೆ!ಸಿರಿಗನ್ನಡಂ ಗೆಲ್ಗೆ!ನಮ್ಮದು ಪರಿಪೂರ್ಣ ಭಾಷೆ!ಇಷ್ಟು ಪರಿಪೂರ್ಣವಾಗಿ ಬರೆಯಲು ಮತ್ತು ಉಚ್ಛರಿಸಲುಬೇರಾವ ಭಾಷೆಯಲ್ಲಿ ಸಾಧ್ಯ?
ಶಾಂತಿ ಸೌಹಾರ್ಧ ಕನ್ನಡ ನಾಡಿನಲ್ಲಿ ಮತ್ತು ನಮ್ಮ ದೇಶದಲ್ಲಿ ನೆಲೆಸಲಿ!ಇಂದು ಎಲ್ಲರಿಗೂಸಂತೋಷದ ರಾಜ್ಯೋತ್ಸವ! ಎಂದು ಪೆಜತ್ತಾಯ ಮೈಲ್ ಮಾಡಿದ್ದಾರೆ ಅವರಿಗೆ ಏನೆಂದು ಉತ್ತರಿಸಲಿ ಎಂದು ಆನಂದ ರಾಮಾ ಶಾಸ್ತ್ರಿಗಳನ್ನು ಕೇಳಿದೆ ಅದಕ್ಕವರು ಓಕೆ, ಥ್ಯಾಂಕ್ಯೂ ಸೇಮ್ ಟು ಯೂ ಅಂತ ಉತ್ತರಿಸು ಅದೇ ಸರಿಯಾದ ಕನ್ನಡ ಎಂದು ಬಿಡೋದೆ


Tuesday, October 28, 2008

ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ

ಆತ್ಮೀಯರೆ
ನಾಳೆ ಅಂದರೆ ೨೯-೧೦-೨೦೦೮ ರ ಸಂಜೆ ನಮ್ಮ ತಲವಾಟ ಶಾಲಾ ಆವರಣದಲ್ಲಿ ಕಟ್ಟೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಚಿಂತನ ವಿಕಾಸ ವಾಹಿನಿ ತಲವಾಟ ರವರು ಹಮ್ಮಿಕೊಂಡಿದ್ದಾರೆ. ಹಬ್ಬವನ್ನು ಇನ್ನಷ್ಟು ರಂಗಾಗಿಸೋಣ ಬನ್ನಿ. ಬರಲಾಗದಿದ್ದರೆ ನವೆಂಬರ್ ೧ ನೆ ತಾರೀಖು ನಿಮಗೆ ವಿಶೇಷಾಂಕದ ಪಿಡಿಎಫ್ ಪ್ರತಿ ಆನ್ ಲೈನ್ ಮುಖಾಂತರ ತಲುಪುತ್ತದೆ
ಧನ್ಯವಾದಗಳು
ಚಿಂತನ ವಿಕಾಸ ವಾಹಿನಿ
ಕಟ್ಟೆ ಪತ್ರಿಕೆ ತಲವಾಟ

Saturday, October 25, 2008

ದೀಪಾವಳಿಯಾದ ದೊಡ್ದಹಬ್ಬ



ದೀಪಾವಳಿ ಹಬ್ಬ ಎಂದರೆ ಬೆಳಕಿನ ಹಬ್ಬ ಅಂತ ಇತ್ತೀಚೆಗೆ ನಮಗೆ ಗೊತ್ತಾದದ್ದು. ಪಟ್ಟಣದ ಸಂಪರ್ಕ ಬಂದಮೇಲೆ ದೀಪಾವಳಿ ಅಂದರೆ ಪಟಾಕಿ ಹಬ್ಬ, ಸಾಲು ಸಾಲು ಹಣತೆಯ ಹಚ್ಚಿಡುವ ಬೆಳಕಿನ ಹಬ್ಬ ಮುಂತಾಗಿ ಅರಿವಾಗಿದ್ದು.ಅಲ್ಲಿಯವರೆಗೆ ಗೋವುಗಳ ಹಬ್ಬ ಎಂದು ನಮ್ಮಲ್ಲಿ ಚಿರಪರಿಚಿತ. ನಮ್ಮಲ್ಲಿ ಪಟಾಕಿ ಯ ಸದ್ದು ಕೇಳಬೇಕೆಂದರೆ ಅದು ಗಣೇಶ ಚೌತಿ. ಹಣತೆಯಲ್ಲಿ ದೀಪ ಹಚ್ಚಿಡಬೇಕೆಂದರೆ ಅದು ಕಾರ್ತಿಕ ಹಬ್ಬ. ಈಗ ಪಟ್ಟಣದಲ್ಲಿ ಟಿವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಂದಮೇಲೆ ದೀಪಾವಳಿಯಂದು ಪಟಾಕಿ ಹಚ್ಚಿ ನಂತರ ಸಂಜೆ ಹಣತೆಯಲ್ಲಿ ದೀಪ ಹಚ್ಚುವ ಪರಿಪಾಟ ಆರಂಭವಾಗಿದೆ. ಆ ಕಾರಣದಿಂದ ದೀಪಾವಳಿಯಲ್ಲಿ ಚೌತಿಯ ಪಟಾಕಿ ಕಾರ್ತಿಕದ ಹಣತೆ ಸೇರಿಕೊಂಡು ಮನೆಯ ಯಜಮಾನನೆಂಬ ಯಜಮಾನನಿಗೆ ಆರ್ಥಿಕ ಹೊರೆ ತುಸು ಹೆಚ್ಚಾಗಿದೆ. ಇರಲಿ ದೀಪಾವಳಿ ಎನ್ನುವ ಹಬ್ಬದ ಆಚರಣೆಯ ಜತೆ ಈ ಹೆಸರೂ ಕೂಡ ನಮಗೆ ಇತ್ತೀಚಿನದ್ದು. ಅದಕ್ಕೂ ಮುಂಚೆ ಇದು ದೊಡ್ಡಬ್ಬ ಎಂಬ ನಾಮಧೇಯದೊಂದಿಗೆ ಇತ್ತು. ದೊಡ್ಡಬ್ಬ ಎಂದು ಕರೆಯಿಸಿಕೊಳ್ಳುತ್ತಿದ್ದ ದೀಪಾವಳಿಗೆ ರಂಗು ಎರಡು ದಿವಸದ ಮೊದಲು ಬೂರೆ ಎಂಬ ಬಲೀಂದ್ರ ಎಂಬ ದೇವರನ್ನು ಸಾಯಂಕಲ ಮನೆ ತುಂಬಿಸಿಕೊಳ್ಳುವುದರಿಂದ ಆರಂಭದ ರಂಗು. ಬೆಳ್ಳಿ ಚೊಂಬಿಗೆ ತೆಂಗಿನಕಾಯಿ ತಲೆಯ ಮೇಲೆ ಇಟ್ಟು ಕಲಶ ಎಂದು ಕರೆಯಿಸಿಕೊಂಡ ಅದು ಬಲಿಯೇಂದ್ರನ ನಾಮಾಂಕಿತಗೊಳ್ಳುತ್ತದೆ. ಅಂದೇ ರಾತ್ರಿ ಊರಿನ ತರುಣರ ಬೂರುಗಳುವಿನ ಮಜ. ವರ್ಷದ ಆ ಒಂದು ರಾತ್ರಿ ಕಳ್ಳತನಕ್ಕೆ ಮುಕ್ತ ಮುಕ್ತ ಮುಕ್ತ.ಸೌತೇ ಕಾಯಿ ಚೆಂಡು ಹೂವು ಮುಂತಾದ ಹಬ್ಬಕ್ಕೆ ಬೇಕಾದ ಅತ್ಯಾವಶ್ಯಕ ವಸ್ತುಗಳನ್ನು ಬೂರೆಗಳುವು ಎಂಬ ಹೆಸರಿನಲ್ಲಿ ಕದಿಯಬಹುದು. ಕದಿಯುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮನೆಯ ಯಜಮಾನ ಬೂರೆಗುದ್ದು ಗುದ್ದಬಹುದು. ಇದು ಬೂರೆ ಹಬ್ಬ ದ ಮಜ. ಊರಿನ ಕಡೆ ಈ ಬೂರೆಗಳುವಿನ ಅವಾಂತರಗಳನ್ನು ಒಂದು ಕಾದಂಬರಿಯನ್ನಾಗಿಸಬಹುದು. ಈ ಬೂರೆಗಳುವಿನ ಮುಖ್ಯ ಉದ್ದೇಶ ಮನುಷ್ಯನಲ್ಲಿ ಸುಪ್ತವಾಗಿ ಅಡಗಿರುವ ಕಳ್ಳತನದ ಮನೋರೋಗವನ್ನು ಹೊರಹಾಕುವುದು ಒಂದೆಡೆಯಾದರೆ ಹಬ್ಬಗಳಲ್ಲಿ ಉಳ್ಳವರು ಮಾತ್ರಾ ಮಜ ಉಡಾಯಿಸುವುದಲ್ಲ ಇಲ್ಲದಿದ್ದವರೂ ಆಚರಿಸಿಕೊಳ್ಳಲಿ ಎಂಬ ಸುಪ್ತ ಭಾವನೆ ಅಡಗಿದೆ. ಹೀಗೆ ಬೂರೆ ಮುಗಿದ ಮಾರನೇ ದಿವಸ ರೆಸ್ಟ್ ಆನಂತರದ ದಿವಸ ದೊಡ್ಡಬ್ಬ. ಚುಮು ಚುಮು ಬೆಳಗಿನಲ್ಲಿ ಎದ್ದು, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೆ ಬಿಸಿನೀರ ಸ್ನಾನ ಮಾಡಿಸಿ ಪೂಜೆ ಮಾಡಿ ಚೆಂಡು ಹೂವು ಗೋಟಡಿಕೆಯಿಂದ ಅಲಂಕರಿಸಿ ಸಾಮೂಹಿಕವಾಗಿ ದೇವಸ್ಥಾನಕ್ಕೆ ಎಲ್ಲರ ಮನೆಯ ಜಾನುವಾರುಗಳನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಹೋಳಿಗೆ ಉಟ ಭಾರಿಸಿದರೆ ದೊಡ್ಡ ಬ್ಬ ಶೇಕಡಾ ತೊಂಬತ್ತು ಮುಗಿದಂತೆ. ನಂತರ ರಾತ್ರಿ ಕಕ್ಕಡಕ್ಕೆ ಬೆಂಕಿ ಹಚ್ಚಿಕೊಂಡು "ದಿಪ್ಪಡ ದಿಪ್ಪಡ ದಿವಾಳ್ಗೆಯೋ.. ಹಬ್ಬಕ್ಕೆ ಮೂರು ಹೋಳ್ಗೆಯೋ.." ಎಂದು ಕೂಗುತ್ತಾ ಕಕ್ಕಡವನ್ನು ಮನೆಯ ಸುತ್ತ ಎದುರು ಊರಿದರೆ ದೊಡ್ಡಹಬ್ಬ ಹಬ್ಬ ಪಿನಿಶ್.

ವರ್ಷದ ಏಕತಾನತೆಯಿಂದ ಹೊರಬರಲು. ನೆಂಟರಿಷ್ಟರೊಡನೆ ಬಾಂಧವ್ಯದ ಬೆಸುಗೆ ಏರ್ಪಡುವ ಹಬ್ಬಗಳು ಇಂದಿನ ಒಂಟಿ ಜೀವನ ಬಯಸುವ ಜಾಯಮಾನದಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ. ಅರ್ಥಪ್ರಧಾನ ವ್ಯವಸ್ಥೆಯಲ್ಲಿ ಭಾವನಾತ್ಮಕ ವಿಷಯ ವಿಚಾರ ಪೇಲವವಾಗಿವೆ. ಹಳ್ಳಿಯಲ್ಲಿನ ಹವ್ಯಕರ ಮನೆಗಳಲ್ಲಿ ಕೊಟ್ಟಿಗೆಗಳು ಖಾಲಿ ಖಾಲಿ. ಜಾನುವಾರು ಕಟ್ಟುವುದು ಸಾಕುವುದು ಗಲೀಜು, ಲಾಭದಾಯಕವಲ್ಲ ಎಂಬ ಮಿದುಳಿನ ತರ್ಕಕ್ಕೆ ಇಳಿದ ಪರಿಣಾಮ ಬಹಳಷ್ಟು ಮನೆಗಳಲ್ಲಿ ಆ ಕಾರಣದಿಂದ ದೊಡ್ದಬ್ಬ ಎನ್ನುವುದು ದೀಪಾವಳಿ ಆಗಿದೆ. ದೀಪಾವಳಿ ಯ ಹಣತೆ ಬೆಳಕು ಕರೆಂಟ್ ಬೆಳಕಿನಡಿಯಲ್ಲಿ ಎಷ್ಟೋ ಮನೆಯನ್ನು ಬೆಳಗಿಸುವ ತಾಕತ್ತು ಕಳೆದುಕೊಂಡಿದೆ. ಹಣತೆ ಮಸುಕು ಮಸುಕಾಗಿ ಕಾಣಿಸುತ್ತಿದೆ. ಮನೆಯ ಹಿರಿಯರ ಯಾಜಮಾನಿಕೆಯಲ್ಲಿ ನಡೆಯುವ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ಬುದ್ಧಿವಂತರು ಎಂದು ಕರೆಯಿಸಿಕೊಂಡ ಈಗಿನ ತಲೆಮಾರಿನವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರಸವಾಗುತ್ತಿದೆ. ಕಾಲಚಕ್ರ ಉರುಳುತ್ತಾ ಉರುಳುತ್ತಾ ಮತ್ತೆ ಅವೆಲ್ಲಾ ಮರುಕಳಚಿದರೂ ಆಶ್ಚರ್ಯವಿಲ್ಲ. ಕಾರಣ ಮನುಷ್ಯನಿಗೆ ಆರಂಭದಿಂದಲೂ ಹುಡುಕುವ ಹುಚ್ಚು , ಕಳೆದ ನೆಮ್ಮದಿ, ಇರದ ಬಾಂಧವ್ಯ,ವನ್ನು ಅರಸುತ್ತಾ ಹೊರಟರೆ ಮತ್ತೆ ಈ ದೊಡ್ಡಹಬ್ಬ ತನ್ನ ಹಳೆಯ ಮೆರುಗನ್ನು ಹಳೆಯ ವೈಭವಕ್ಕೆ ಕರೆದೊಯ್ದರೂ ಒಯ್ಯಬಹುದು.

ಕೊನೆಯದಾಗಿ: ಈ ಸಾಲು ಸಾಲು ಹಬ್ಬಗಳನ್ನು ಆಚರಿಸಬೇಕೇಕೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ." ಈ ವರ್ಷ ಹಬ್ಬ ಆಚರಿಸದಿದ್ದರೆ ಮುಂದಿನ ವರ್ಷ 'ಹೋದ್ವರ್ಷ ಹಬ್ಬ ಎಷ್ಟು ಚೆನ್ನಾಗಿತ್ತು' ಎಂದು ಅಲವತ್ತುಕೊಳ್ಳಲು ಆಗುವುದಿಲ್ಲವಲ್ಲ , ಆ ಕಾರಣಕ್ಕಾದರೂ ಈ ವರ್ಷ ಹಬ್ಬ ಆಚರಿಸಬೇಕು." ಎಂದರು. ನಾನು ಮಗುಮ್ಮಾದೆ.

ನಿಮ್ಮ ಬಾಳಿನ ದೀಪಕ್ಕೆ ಶುದ್ಧ ಎಣ್ಣೆ ದೊರೆತು ಜಗತ್ತಿಗೆ ಬೆಳಗಲಿ ಎನ್ನುತ್ತಾ ದೊಡ್ಡಹಬ್ಬದ ಶುಭಾಶಯಗಳು ನನ್ನಿಂದ ಹಾಗೂ ನಮ್ಮ ಆನಂದರಾಮ ಶಾಸ್ತ್ರಿಗಳಿಂದ.

Friday, October 17, 2008

ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...



ಸಾಪಟ ಆಯಿಚ್ಚಾ..? ಎನ್ನ ಪಂಡ್ರೆ..? ನಲ್ಲ ಇರ್ಕಂಗಳಾ..? ಎನ್ನ ಸಮಾಚಾರಮು? ಹೀಗೆ ಒಂದಿಷ್ಟು ಕನ್ನಡದಂತಿರುವ ತಮಿಳು ಶಬ್ದ ಬಿಟ್ಟರೆ ನನಗೆ ತಮಿಳು ಸುಟ್ಟುಕೊಂಡು ತಿನ್ನಲಿಕ್ಕೂ ಬಾರದು. ಆದರೂ ನಾನು ತಮಿಳು ಮಾತನಾಡಿದೆ. ಕಲ್ಯಾಣತ್ತಿಗೆ ಎನ್ನುವ ಮಡ್ರಾಸ್ ನ ಪೂನಂವೇಲಿಯ ಅರವತ್ತು ವರ್ಷದ ಗೃಹಿಣಿಯ ಕೈಯಲ್ಲಿ ಶಬ್ಬಾಷ್ ಎನ್ನಿಸಿಕೊಂಡೆ. ಅಥವಾ ಅವರು ಹೇಳಿದ್ದು ಶಬ್ಬಾಷ್ ಎಂದು ನಾನು ಅರ್ಥೈಸಿಕೊಂಡೆ. ಹೀಗೆಲ್ಲಾ ನಾನೂ... ತಮಿಳು ಮಾತನಾಡುವುದಕ್ಕೆ ಕಾರಣ ನನ್ನ ಅಕ್ಕನ ಮಗಳು ರಮ್ಯಾ ಮಡ್ರಾಸ್ ನ ಅಯ್ಯರ್ ಹುಡುಗ ರಾಜೇಶನನ್ನು ವರಿಸುತ್ತೇನೆ ಎಂದು ಘೋಷಿಸಿದ್ದು.ಹಾಗಾಗಿ ವರ ಮಹಾಶಯನ ಮನೆಗೆ ಹೆಣ್ಣಿನ ಕಡೆಯವರಾಗಿ ಭೇಟಿ ಕೊಡಬೇಕಲ್ಲ ಆ ಪ್ರಯುಕ್ತ ನಾವು ನಾಲ್ಕು ಜನ ರಮ್ಯಾಳ ವ್ಯಾಗನ್ ಆರ್ ಕಾರಿನಲ್ಲಿ ಮಡ್ರಾಸ್ ಗೆ ಹೊರಟಾಯಿತು. ಬೆಂಗಳೂರಿನಿಂದ ಹೊರಟು ಮೂವತ್ತೋ ನಲವತ್ತೋ ಕಿಲೋಮೀಟರ್ ದೂರದ ಹೊಸೂರು ತಲುಪಿದಾಕ್ಷಣ ನಾವು ಅಬ್ಬೇಪಾರಿಗಳಾಗಿಬಿಡುತ್ತೇವೆ, ಕನ್ನಡ ಎಂಬುದು ಎನ್ನಡ ಆಗಿ ಪರಿವರ್ತಿತವಾಗಿಬಿಡುತ್ತದೆ. ಎಲ್ಲಿ ಹುಡುಕಿದರೂ ಒಂದೇ ಒಂದು ಕನ್ನಡ ಅಕ್ಷರ ಸಿಗದು ಕನ್ನಡ ಪತ್ರಿಕೆಗಳು ಕೇಳಕೂಡದು. ಜಸ್ಟ್ ಮೂವತ್ತು ಕಿಲೋಮೀಟರ್ ಹಿಂದೆ ನಾವೇ ಕೋಲು ಎಂದು ಹಾರಾಡುವ ಹಾಯ್ ಅಗ್ನಿ ಲಂಕೇಶ್ ಮುಂತಾದ ಪತ್ರಿಕೆಗಳು ಹಾಗೂ ಅವರ ಥೀಂ ಗಳು ಇಲ್ಲಿ ಪೇಲವವಾಗಿಬಿಡುತ್ತವೆ. ಕನ್ನಡ ದಿನಪತ್ರಿಕೆ ಸಿಗುವುದಿರಲಿ ಬೀಡಾ ಅಂಗಡಿಯವ ಬೀಡಾ ಕಟ್ಟಿಕೊಡಲೂ ಕನ್ನಡ ಪತ್ರಿಕೆ ಬಳಸುವುದಿಲ್ಲ. ಇರಲಿ ಊರಲ್ಲಿ ಎಲ್ಲರೂ ರಂಗ ತಾನೆ ನಾವು ಪರ ಊರಿಗೆ ಬಂದಿದ್ದಾಗಿದೆ ಇಲ್ಲಿ ನಮ್ಮ ಜತೆ ನಮ್ಮವರೂ ಎಲ್ಲ ಮಂಗಗಳೇ. ಆದರೆ ತಮಿಳು ಮಾತ್ರಾ ಹಾಗಲ್ಲ ಮಡ್ರಾಸ್ ನಿಂದ ಸರಿ ಸುಮಾರು ಆರುನೂರು ಕಿಲೋಮೀಟರ್ ದೂರವಿರುವ ಕಾರ್ಗಲ್ ಜೋಗ್ ಮುಂತಾದ ಬೆಂಕಿಪೊಟ್ಟಣದಂತಿರುವ ಪಟ್ಟಣಗಳಲ್ಲಿಯೂ ನಿಮಗೆ ಸುಲಲಿತವಾಗಿ ನಡೆಯುತ್ತದೆ. ನಮ್ಮ ಕಾರ್ಗಲ್..! ನಲ್ಲಿ ತಮಿಳು ಪತ್ರಿಕೆ ಸಿಗುತ್ತದೆ "ಅಯ್ಯಾ ದೊರೆ ಇವೆಲ್ಲಾ ನಿನಗಿಂತ ಮೊದಲೇ ನಮಗೆ ಗೊತ್ತು ಕುಯ್ಯಬೇಡಾ .." ಎಂದಿರಾ..! ಬೇಡ ಬಿಡಿ ವಿಷಯಕ್ಕೆ ಬರೋಣ ತಮಿಳೆಂದರೆ ಒಂಥರಾ ಕನ್ನಡದಂತೆ.ಎಳನೀರಿಗೆ ,ತೆಂಗಿನ ಕಾಯಿಗೆ ಹೀಗೆ ಸುಮಾರು ಶಬ್ದಕ್ಕೆ ಕನ್ನಡಕ್ಕೆ ಅದಕ್ಕೆ ವ್ಯತ್ಯಾಸ ಇಲ್ಲ. "ಅಯ್ಯೋ ಇದೂ ಕೂಡ ನಮಗೆ ಗೊತ್ತು ಮುಂದುವರೆಸು" ಎಂದಿರಾ ಇರಲಿ ನಾನು ಕೇಳಿ ಹೇಳ ಹೊರಟಿರುವ ವಿಷಯಕ್ಕೆ ಬರೋಣ.
ಮನುಷ್ಯ ಭಾಷೆ ಎನ್ನುವುದನ್ನು ಪರಸ್ಪರ ಸಂವಹನಕ್ಕೆ ಮಾಡಿಕೊಂಡ. ನೂರಾರು ಭಾಷೆ ನೂರಾರು ದೇಶ ಇವೆಲ್ಲಾ ಸರಿ ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಮನುಷ್ಯ ನೆಂದರೆ ಯಾವ ದೇಶಕ್ಕೂ ಭಾಷೆಗೂ ವ್ಯತ್ಯಾಸ ಇಲ್ಲ.ಎಲ್ಲರೂ ಒಂದೇ ಹಾಗಾಗಿ ಎಲ್ಲ ಮನುಷ್ಯರ ಜತೆ ಸಂಪರ್ಕಿಸಲು ಒಂದೇ ತರಹನಾದ ಭಾಷೆ ಇದೆ. ಅದು ಸುಪ್ತವಾಗಿ ಅಡಗಿದೆ. ಅದು ಮೌನದ ಭಾಷೆ. ಧ್ಯಾನದ ಭಾಷೆ. ಈ ಭಾಷೆಯಿಂದ ಮನುಷ್ಯ ಮನುಷ್ಯರೊಡನೆ ಬಾಂಧವ್ಯ ಸಾಧಿಸುವಂತೆ ಇತರೆ ಜೀವಿಗಳೊಡನೆಯೂ ಕೂಡ ಸುಮಧುರ ಬಾಂಧವ್ಯ ಸಾಧಿಸಭಹುದು. ಇಲ್ಲಿ ಮಾತನಾಡುವ ಅವಶ್ಯಕತೆಯೇ ಇಲ್ಲ. ನೀವು ನಿಮ್ಮ ಮಾತೃ ಭಾಷೆಯಲ್ಲಿ ಆಲೋಚಿಸಿದರೆ ಆಯಿತು ಅದು ಮುಖದಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ತನ್ನಷ್ಟಕ್ಕೆ ಅದೇನೋ ಹೇಳಲಾರದ ಬಾಂಧವ್ಯ ಏರ್ಪಡುತ್ತದೆ. ಉದಾಹರಣೆಗೆ ಅಪರಿಚಿತರೊಬ್ಬರು ನಿಮಗೆ ಭೇಟಿಯಾದಾಗ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಅದೇನೋ ಅವರ ನಡವಳಿಕೆ ನಿಮಗೆ ಇಷ್ಟವಾಗುತ್ತದೆ. ಕಾರಣ ಗೊತ್ತಿರುವುದಿಲ್ಲ. ಇನ್ನು ಕೆಲವರನ್ನು ಕಂಡಾಗ ಕಾರಣವಿಲ್ಲದೆ ಅಸಹನೆ ಉಂಟಾಗುತ್ತದೆ. ಹಾಗಂತ ಅವರು ನಿಮಗೆ ಏನೂ ಅಪಾಯ ಮಾಡಿರುವುದಿಲ್ಲ. ಆದರೂ ಅದೇನೋ ಒಂಥರಾ ಹಿಂಸೆ. ಅದರ ಅಂತರಾರ್ಥ ತಿಳಿಯುತ್ತಾ ಹೋದಂತೆ ಅರಿವು ಉಂಟಾಗುತ್ತದೆ. ಅದಕ್ಕೆ ಆಳದ ಧ್ಯಾನ ಅಗತ್ಯ. ಅದು ನೀವು ಸಾಧಿಸಿದಿರಿ ಅಂತಾದರೆ ನೀವು ಕೇಳುವುದಕ್ಕಿಂತ ಮೊದಲೇ ನಿಮಗೆ ಅಪೇಕ್ಷೆ ಪಟ್ಟಿದ್ದು ದೊರಕುತ್ತದೆ. ಅನಪೇಕ್ಷಿತವಾದದ್ದನ್ನು ನೀವು ಕೇಳುವುದೂ ಇಲ್ಲ. ಹೀಗೆ ಹೇಳಲಾರದ ಅನುಭವಕ್ಕೆ ಮಾತ್ರಾ ಸಿಗುವ ಬಾಂಧವ್ಯ ಉಂಟಾದಾಗ ಬಾಷೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಮೂಕವಾದ ಮೌನ ಪ್ರಪಂಚ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಾವು ಈ ಹೊರಮನಸ್ಸಿನ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಇಲ್ಲ. ಹೊರ ಪ್ರಪಂಚದ ನೂರಾರು ಬಾಷೆಗಳ ಜ್ಞಾನ ಸುಲಭವಾಗಬೇಕು ಎಂದರೆ ಒಳಪ್ರಪಂಚದ ಮೌನದ ಭಾಷೆಯನ್ನು ಮೊದಲು ಚೆನ್ನಾಗಿ ಅರ್ಥಮಾಡಿಕೊಂಡರೆ ಪ್ರಪಂಚದ ಎಲ್ಲಾ ಭಾಷೆಗಲೂ ಲೀಲಾಜಾಲ.
ಇದೇನಪ್ಪಾ ಅರ್ಥವಾಗದ ಬರಹ ಅಂತ ನೀವು ಬಯ್ದುಕೊಂಡಿರಬಹುದು, ನನಗೂ ಸಂಪೂರ್ಣ ಅರ್ಥವಾಗಿಲ್ಲ ಕಣ್ರಿ ಇದು ನಮ್ಮ ಆನಂದರಾಮ ಶಾಸ್ತ್ರಿಗಳ ಬರಹ. ಮಾರ್ಚ್ ತಿಂಗಳಲ್ಲಿ ರಮ್ಯಾಳ ಮದುವೆ ಇದೆ ಅಷ್ಟರೊಳಗೆ ನಾನು ಇನ್ನೊಂದಿಷ್ಟು ತಮಿಳು ಕಲಿಯಬೇಕಿದೆ. ಹಾ ಹೇಳಲು ಮರೆತೆ ಕನ್ನಡ ಬಲ್ಲ ಹವ್ಯಕ ಹುಡುಗಿ ರಮ್ಯಾ ಹಾಗೂ ತಮಿಳಿನ ಅಯ್ಯರ್ ಹುಡುಗ ರಾಜೇಶ ನನ್ನು ಸೇರಿಸಿದ ಭಾಷೆ ಸಾವಿರಾರು ಕಿಲೋಮೀಟರ್ ದೂರ ಇರುವ ಆಂಗ್ಲ ಭಾಷೆ. ಜೈ ಆಂಗ್ಲೇಶ್ ಪೀಪಲ್ ಅನ್ನೋಣವೇ. ನಾವು ನೀವು ಅನ್ನದಿದ್ದರೂ ಅವರಿಬ್ಬರಂತೂ ಅನ್ನಲೇ ಬೇಕು. ಕಾರಣ ಅವನು ಕನ್ನಡ ಮಾತನಾಡಲು ಹೋಗಿ ಊಟ ಆಯಿರ್ಕದಾ..? ಅನ್ನುತ್ತಾನೆ ಇವಳು ತಮಿಳು ಮಾತನಾಡಲು ಹೋಗಿ ಸಾಪಟು ಆಯಿತಾ? ಅಂತಾಳೆ , ಇಂಗ್ಲೀಷ್ ಆದರೆ ಇಬ್ಬರಿಗೂ ಓ ಕೆ. ಹಾಗಿದ್ದಮೇಲೆ ತಲೆಬಿಸಿ ಯಾಕೆ?
ಕೊನೆಯದಾಗಿ:ನಿನಗೆ ಎಷ್ಟು ಭಾಷೆ ಬರುತ್ತದೆ ? ಎಂದು ಈ ಬಾರಿ ಆನಂದರಾಮ ಶಾಸ್ತ್ರಿಗಳೇ ನನ್ನನ್ನು ಪ್ರಶ್ನಿಸಿದರು. ಕನ್ನಡ ಒಂದು, ಹಿಂದಿ ಎರಡು, ಇಂಗ್ಲೀಷ್ ಅರ್ಥವಾಗುತ್ತೆ ಆದರೆ ಮಾತನಾಡಲು...ಬರೊಲ್ಲ .. ಹಾಗಾಗಿ ಅರ್ದ, ಈಗ ತಮಿಳು ಕಾಲು ಒಟ್ಟೂ. ಎರಡು ಮುಕ್ಕಾಲು ... " ಎಂದು ಎಣಿಸುತ್ತಿದ್ದೆ ಅಷ್ಟರಲ್ಲಿ "ಮೂರ್ಖ ನಿನಗೆ ಈ ಜನ್ಮದಲ್ಲಿ ಅರ್ಥವಾಗದು ಬಿಡು " ಎಂದು ಮೌನವಾದರು. ನಾನು ಕಣ್ಣು ಪಿಳುಕಿಸಿದೆ
ಟಿಪ್ಸ್: ಮನುಷ್ಯನ ಹೊರತಾಗಿ ಪ್ರಪಂಚದ ಯಾವ ಜೀವಿಯೂ ಹುಟ್ಟಿದ ಒಂದು ವರ್ಷದ ಮೇಲೆ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಹಾಲಿನಲ್ಲಿ ಒಂದು ವರ್ಷದ ನಂತರದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇರುವುದಿಲ್ಲ. ಹಾಲು ಚಟಕ್ಕಾಗಿ ಮನುಷ್ಯ ಕುಡಿಯುತ್ತಿದ್ದಾನಷ್ಟೆ. ಸಾಯುವ ಅಂಚಿನಲ್ಲಿದ್ದರೂ ಒಂದು ಗುಟುಕು ಹಾಲು ಗುಟುಕರಿಸುತ್ತಾನೆ. ಹಾಗಾಗಿ ಹಾಲನ್ನು ತ್ಯಜಿಸಿ ಏನೂ ತೊಂದರೆ ಇಲ್ಲ ಬೇಕಾದರೆ ಅದರ ಹಾಲಿಗೆ ಪರ್ಯಾಯವಾಗಿ ಆಲ್ಕೋ ಹಿಂದೆ ಸೇರಿಸಿಕೊಳ್ಳಿ ಮಜವಂತೂ ಇದೆಯಂತೆ.