Friday, December 12, 2008
ಹವ್ಯಕರ ಹಳ್ಳಿಗಳು ಖಾಲಿ ಖಾಲಿ
ಹೀಗೆ ಗೊತ್ತಿರುವ ಗೊತ್ತಿಲ್ಲದ ನೂರಾರು ಕಾರಣಗಳು ಹವ್ಯಕರ ಹಳ್ಳಿಯ ಮೇಲೆ ಪರಿಣಾಮ ಆಗುತ್ತಿರುವುದಂತೂ ಸತ್ಯ. ದೂರಗಾಮಿ ಪರಿಣಾಮ ಆ ಪ್ರಕೃತಿಗೇ ಬಿಟ್ಟದ್ದು. ಹೀಗಿದೆ ಅಂತ ಒಂದು ಹುಳ ಬಿಡುವ ಕ್ರಿಯೆಯನ್ನು ನಾವು ಮಾಡಬಹುದು.
Thursday, December 11, 2008
ಜೇನುಗವನಗಳು
ಹುಡುಗ ಹೇಳಿದ:
ಪ್ರಿಯೆ ಹೃದಯ ಶ್ರೀಮಂತಿಕೆಯಲ್ಲಿ ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಸರಿ ಹಾಗಾದರೆ ನಾನು ಟಾಟಾ ಬರ್ಲಾ.
ಇಷ್ಟು ಸಾಲುಗಳಲ್ಲಿ ಎಂಥಹ ಮಜ ಇದೆ ನೋಡಿ. ಕವನ ಕವಿತೆಗಳಾದರೆ ಅರ್ಥಮಾಡಿಕೊಳ್ಳಲು ತಾಕತ್ತಿರಬೇಕು. ಅದನ್ನು ಆಳವಾಗಿ ಅಗಲವಾಗಿ ಪರಾಮರ್ಶಿಸಿ ಅಂತಿಮವಾಗಿ ಇದು ಹೀಗೆ ಅರ್ಥವಿರಬಹುದೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಈ ಹನಿಯಂತಿರುವ ಹನಿಗವನ ಮಾತ್ರಾ ಪಾಮರರಿಗಾಗಿಯೇ ಇರುವುದು. ಓದಿದಕೂಡಲೇ ನಕ್ಕುಬಿಡಬಹುದು. ಡಿವಿಜಿ ಯವರ ಮಂಕುತಿಮ್ಮನ ಕಗ್ಗವೂ ಕೂಡ ನಾಲ್ಕೇ ಸಾಲು ಆದರೆ ಅರ್ಥಸಹಿತ ಕಗ್ಗವನ್ನು ಕೊಳ್ಳದಿದ್ದರೆ ನಮ್ಮನಿಮ್ಮಂತಹ ವರಿಗೆ ಅದು ತಿಳಿಯುವುದೇ ಇಲ್ಲ.
ಎಲ್ಲವೂ ಶೂನ್ಯದಿಂದಲೇ..
ಇದ್ದರೆ ಸಂಸಾರ
ಇಲ್ಲದಿದ್ದರೆ ಸಸಾರ.
ಮೂರೇ ಸಾಲಿನ ಈ ಚುಟುಕ ಪಟಕ್ಕನೆ ಅದೆಂತಹ ಘನಗಂಭೀರವಾದ ಅರ್ಥವನ್ನು ಕೊಡುತ್ತದೆ. ಹನಿಗವನದಲ್ಲಿ ನಗುಮೂಡಿಸುವ ಹನಿಗಳೇ ಹೆಚ್ಚು. ಸಣ್ಣದಾಗಿ ಚಮಕ್ ಕೊಡುವ ಸಾಹಿತ್ಯವೂ ಇದೆಯೆನ್ನಿ
ಹುಡುಗ ಹೇಳಿದ :
ಕನ್ನಡವೆಂದರೆ ಕುಣಿದಾಡುವುದೆನ್ನೆದೆ
ಹುಡುಗಿ ಹೇಳಿದಳು :
ಎನ್ನದಿದ್ದರೂ .............................!?
ಒಂದಿಷ್ಟು ಚುಕ್ಕಿ ನಂತರ ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕದ ಚಿಹ್ನೆ. ಅದರ ಅರ್ಥ ಅಲ್ಲೆನೋ ಸಣ್ಣ ಡಬ್ಬಲ್ ಮೀನಿಂಗ್ ಇದೆ ಅಂತ ನಮಗೆ ಓದಿದ ಕೂಡಲೆ ತಿಳಿದು ಕಿರುನಗೆ ಮೂಡುತ್ತದೆ. ಇವತ್ತಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ದುಡಿಯುವ ಭರಾಟೆಯಲ್ಲಿ ಗಂಟೆಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥ...!ವಿಲ್ಲ ಎಂದು ಈ ಹನಿಗವನ ಹುಟ್ಟಿಕೊಂಡಿತೇನೋ ಅಂತ ಅನ್ನಿಸುತ್ತದೆ. ಹಾಗೆಯೇ ನೂರಾರು ಈ ಹನಿಗವನಗಳ ಸೃಷ್ಟಿಕರ್ತರೂ ಹುಟ್ಟಿಕೊಂಡಿದ್ದಾರೆ. ಜೈ ಹನಿಗವನ.
Wednesday, December 10, 2008
ಹರೆ ಕೃಷ್ಣಾ ಹರೆ ರಾಮ
ಆತನ ಈಗಿನ ಹೆಸರು ಕುಲಶೇಖರ. ವಯಸ್ಸು ಇಪ್ಪತ್ತೈದು ಇಪ್ಪತ್ತಾರು ಇರಬಹುದು. ಇಸ್ಕಾನ್ ನ ಸನ್ಯಾಸಿ ಆತ. ಆತ ಓದಿದ್ದು ಡೆಂಟಲ್ . ಕೋರ್ಸ್ ಮುಗಿಯುತ್ತಿದ್ದಂತೆ ಆಧ್ಯಾತ್ಮದ ಕಡೆ ಎಳೆಯಿತಂತೆ ಹಾಗಾಗಿ ಆತ ಇಸ್ಕಾನ್ ಸೇರಿಕೊಂಡ. ತಂದೆತಾಯಿಗೆ ಒಬ್ಬನೇ ಮಗನಾದ ಆತನಿಗೆ ಮನೆಯಿಂದ ಇಸ್ಕಾನ್ ಸೇರಬೇಡ ಎಂಬ ಒತ್ತಡ ಮನವಿ ಬಹಳ ಇತ್ತಂತೆ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಎಲ್ಲವನ್ನೂ ಬಿಟ್ಟು "ಹರೆ ಕಿಷನಾ.. ಹರೆ ರಾಮ ಕಿಷ್ನ ಕಿಷ್ನ ಹರೆ. ಹರೇ..." ತುಂಬಾ ಇಷ್ಟವಾಯಿತು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುಣಿಯುತ್ತಾ ಭಜನೆ ಮಾಡುತ್ತಾ ಮನಸ್ಸಿನಲ್ಲಿ ಕೃಷ್ಣನನ್ನು ಆಹ್ವಾನಿಸಿಕೊಳ್ಳುವ ಆ ಮಜ ನಮ್ಮ ಕುಲಶೇಖರಿನಿಗೆ ತಾನು ಓದಿದ್ದ ಎಂ.ಬಿ.ಬಿ.ಎಸ್ ನ್ನೂ ಮರೆಸುವ ತಾಕತ್ತು ಇತ್ತು. ಹಾಗಾಗಿ ಆತ ಇಸ್ಕಾನಿ. ನನಗೆ ಆತ ಒಂದು ಟ್ರೈನಿಂಗ್ ಪ್ರೋಗ್ರಾಂ ನಲ್ಲಿ ಸಿಕ್ಕಿದ್ದ. ನೋಡಲು ಮುದ್ದುಮುದ್ದಾಗಿದ್ದ ಆತ ಎಂತಹವರನ್ನೂ ಸೆಳೆಯುವ ಮುಖಾರವಿಂದ ಹೊಂದಿದ್ದ. ಆದರೆ ಸುಮ್ಮಸುಮ್ಮನೆ ಮಾತನಾಡಲಾರ. ಮೂರುದಿನದ ಕೃಷಿ ಟ್ರೈನಿಂಗ್ ನಲ್ಲಿ ಎರಡು ದಿನ ಆತನೊಟ್ಟಿಗೆ ಮುಗುಳ್ನಗೆಯ ವಿನಿಮಯದೊಂದಿಗೆ ಕಳೆದೆ. ನನಗೋ ಆತನೊಡನೆ ಮಾತನಾಡುವ ಹಂಬಲ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇಲ್ಲ ಯಾವಾಗಲೂ ಕೈಯಲ್ಲಿ ಜಪಮಣಿ ಬಾಯಲ್ಲಿ ಕೃಷ್ಣ ಕೃಷ್ಣ ಮಿಣಿಮಿಣಿ. ಅಂತೂ ಇಂತು ಎರಡು ದಿನದ ಮುಗಳ್ನಗು ಮೂರನೆಯ ದಿನ ಪ್ರಯೋಜನಕ್ಕೆ ಬಂದಿತ್ತು. ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಆತ ವರಾಂಡದಲ್ಲಿ ಅಡ್ದಾಡುತ್ತಿದ್ದ. ತಿಂಡಿ ತಿನ್ನುತ್ತಿದ್ದ ನನಗೆ ನೀರಿನ ಅವಶ್ಯಕತೆ ಇತ್ತು. ಆದರೆ ಒಂದು ಕೈಯಲ್ಲಿ ಬಟ್ಟಲು ಇರುವ ಕಾರಣ ನಲ್ಲಿ ತಿರುಪದಾದೆ. ಆಗ ಆತ ಸಹಾಯಕ್ಕೆ ಬಂದ. ನೀರು ಲೋಟ ತುಂಬಿದ ನಂತರ ತ್ಯಾಂಕ್ಸ್ ಎಂದೆ ಆತ ಕೃಷ್ಣಾರ್ಪಣ ಎಂದ. ನನಗೆ ಆತನ ಕೃಷ್ಣ ಭಕ್ತಿಯನ್ನು ಕಂಡು ಅಚ್ಚರಿಯಾಯಿಯಿತು. ಹಗೂರ ಮಾತಿಗೆಳೆದ. ಪೂರ್ವಾಶ್ರಮದ ಬಗ್ಗೆ ಚುಟುಕಾಗಿ ಮುಗಿಸಿ ಅದರ ಬಗ್ಗೆ ಕೇಳಬೇಡಿ ಎಂದ. ನಿಮಗೆ ತಿಂಡಿ ಆಯಿತಾ ಎಂದೆ. ಇಲ್ಲ ಕೃಷ್ಣಾರ್ಪಣವಾದ ಮೇಲೆ ಕೃಷ್ಣನಿಗೆ ನೈವೇದ್ಯವಾದ ಮೇಲೆ ನಮಗೆ ಆಹಾರ ಎಂದ ಆತ. ಹಸಿವೆ ಯಾವ್ಗುವುದಿಲ್ಲವೇ? ಎಂದೆ. ಆ ಪರಮಾತ್ಮ ಕೃಷ್ಣನ ಆಸೆ ಹಾಗಿದ್ದರೆ ಹಾಗೆಯೇ ಆಗಲಿ ಎಂದ. ಮತ್ತೆ ಜಪಮಣಿ ತಿರುವುತ್ತಾ ಮಿಣ ಮಿಣ ಮುಂದುವರೆಸಿದ. ನನಗೆ ಆಯಾಚಿತವಾಗಿ ಪ್ರಶ್ನೆಯೊಂದು ಅಕಸ್ಮಾತ್ ಕೇಳಿ ಹೋಯಿತು. " ಈ ಕಾಲದಲ್ಲಿಯೂ ಕೃಷ್ಣ ಅಂತ ಒಬ್ಬ ಇದ್ದಾನೆ ಆತ ದೇವರು ಅವನು ಇಲ್ಲೆಲ್ಲೋ ನಿಂತು ನಿಮ್ಮನ್ನು ನೋಡುತ್ತಿದ್ದಾನೆ, ನಿಮ್ಮ ಆಶಯ ಈಡೇರಿಸುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿದೆಯಾ?" ಒಮ್ಮೆ ಆತನ ಮುಖ ಗಂಭೀರವಾಯಿತು. ಎರಡೂ ಕಣ್ಣಿನಿಂದ ದಳದಳ ನೀರಿಳಿಯಿತು. ಕಿವಿಯನ್ನು ಮುಚ್ಚಿಕೊಂಡು " ಹೇ ಪರಮಾತ್ಮ ಇಂತಹಾ ವಾಕ್ಯಗಲನ್ನು ನನ್ನ ಈ ಕಿವಿಗಳು ಕೇಳಬೇಕಾಯಿತಲ್ಲ " ಎಂದು ಹೇಳಿ ಮೌನವಾದ. ನಂತರ ನನಗೆ ಆ ಪ್ರಶ್ನೆ ಕೇಳಬಾರದಿತ್ತು ಅಂತ ಅನ್ನಿಸಿತು. ಆದರೆ ಕಾಲ ಮಿಂಚಿಹೋಗಿತ್ತು. ಕ್ಷಮಿಸಿ ನಿಮಗೆ ಈ ಪ್ರಶ್ನೆ ಕೇಳಿದ್ದಕ್ಕೆ ಎಂದೆ. ಮರುಕ್ಷಣ ಆತ" ಛೆ ಪರವಾಗಿಲ್ಲ, ಇದೂ ಕೂಡ ಆ ಪರಮಾತ್ಮನ ಪರೀಕ್ಷೆ, ಇದರ ಅರ್ಥ ನಾನು ಇನ್ನೂ ಆಧ್ಯಾತ್ಮಿಕ ಸಾಧನೆ ಮಾಡಬೇಕಿದೆ ಎಂದು ಮಿಣಮಿಣ ಮುಂದುವರೆಸಿದ,
ಇಂತಹ ಒಂದು ಪರಮ ಭಕ್ತಿಯ ಜನರನ್ನು ಇಲ್ಲಿಯವರೆಗೆ ನಾನು ನೊಡಿರಲೇ ಇಲ್ಲ. ನನಗೂ ಆಸೆಯಾಗುತ್ತದೆ. ಅಂತಹ ನಿರ್ಮಲ ನಿಸ್ವಾರ್ಥ ಭಕ್ತಿಯನ್ನು ಅನುಭವಿಸಬೇಕು. ಅದರಲ್ಲಿ ಅಂತಹ ಮಜ ಇದೆ ಎಂದು ಅನ್ನಿಸುತ್ತದೆ. ಮರುಕ್ಷಣ ನನ್ನಂತಹ ಮನುಷ್ಯನಿಗೆ ಅದು ಆಗದು ಎಂದು ಅನ್ನಿಸಲು ಶುರುವಾಗಿಬಿಡುತ್ತದೆ. ನಂಬಿಕೆಟ್ಟವರಿಲ್ಲವೋ ಅಂಬುದು ನಿಜ ಆದರೆ ನಂಬಲು ಆಗದಲ್ಲ ಅದು ಬಹಳ ಕಷ್ಟ. ನಂಬಲೇಬೇಕು ಎಂದು ಹೊರಟಾಗಲೆಲ್ಲ ಸಾವಿರ ಸಾವಿರ ತರ್ಕ ಕುತರ್ಕದ ಪ್ರಶ್ನೆಗಳು ಮೂಡಿ ಯಡವಟ್ಟಾಗಿಬಿಡುತ್ತದೆ.
Monday, December 8, 2008
ಚಮಕ್
ಆವಾಗ ಆಕೆ ದುತ್ತನೆ "ಹಲೋ" ಎನ್ನುತ್ತಾ ಎದುರಿಗೆ ಬಂದು ನಿಂತಳು. ಒಮ್ಮೆಲೆ ಬೆಚ್ಚಿಬಿದ್ದೆ. " ನೀನು ನೀನು ಇಲ್ಲಿ ಇಲ್ಲಿ" ತೊದಲು ಮಾತನ್ನಾಡಿದೆ. ಕುಡಿದ ಕ್ವಾಟರ್ ವಿಸ್ಕಿ ಜರ್ರನೆ ಇಳಿದುಹೋಯಿತು. ಆಕೆಗೇನಾದರೂ ವಿಸ್ಕಿಯ ಕಮಟು ವಾಸನೆ ಬರಬಹುದಾ ಎಂಬ ಅನುಮಾನ ಕಾಡತೊಡಗಿತು. ಕೈಗಳು ತನ್ನಿಂದ ತಾನೆ ಪ್ಯಾಂಟಿನ ಜೇಬಿನೊಳಗೆ ತೂರಿಕೊಂಡವು. ನಾನು ಸರಿಯಾಗಿದ್ದೇನೆ ಕುಡಿದಿಲ್ಲ ಎಂದು ತೋರಿಸಿಕೊಳ್ಳಲು ದೇಹ ನುಲಿಯತೊಡಗಿತು. "ಅಯ್ಯ ಅದೇಕೆ ಅಷ್ಟು ಆಶ್ಚರ್ಯ, ನಾನು ಈಗ ಬೆಂಗಳೂರಿನಲ್ಲಿಯೇ ಇರುವುದು, ಊರಿಗೆ ಹೊರಟಿದ್ದೇನೆ, ನೀನು ಸಂಗಂ ಟಾಕಿಸಿನ ಬಳಿ ನಡೆದು ಬರುತ್ತಾ ಇರುವುದನ್ನು ಬಿಟಿಎಸ್ ಬಸ್ಸಿನಿಂದ ನೋಡಿದೆ ಊರಿಗೆ ಹೊರಟೇಯಾ? ಲಗ್ಗೇಜ್ ಎಲ್ಲಿ? " ಆಕೆ ಮುಂದುವರೆಸುತ್ತಿದ್ದಳು. ಅಯ್ಯೋ ಬಾರ್ ನಿಂದ ಇಳಿಯುತ್ತಿದ್ದುದನ್ನು ನೋಡಿರಬಹುದೇ? ಸಿಕ್ಕಿಕೊಂಡು ಬಿದ್ದೆಯಾ ಒಳಮನಸ್ಸು ಹೆದರಿಸತೊಡಗಿತು. "ಹೋ ಹೌದಾ, ನಾನು ಊರಿಗೆ ಅಲ್ಲ ಊರಿಂದ ಯಾರೋ ಬರುವವರು ಇದ್ದಾರೆ ಹಾಗೆ ಸುಮ್ಮನೆ ಇಲ್ಲಿ ಬಂದೆ" ಮಾತುಗಳು ತೊದಲುತ್ತಿದ್ದಂತೆ ನನಗನಿಸಿತು "ಬಾಯಿಹುಣ್ಣು ಬೆಂಗಳೂರು ಇತ್ತೀಚೆಗೆ ಹೀಟ್" ತೊದಲಿಕೆಗೆ ಕಾರಣ ಹೇಳಿದೆ. "ಓ ಹೋ ಹೌದಾ ಗ್ಲಿಸರಿನ್ ಹಚ್ಚು ಊರಲ್ಲಾದರೆ ಅಮ್ಮ ಬಸಳೆ ಸೊಪ್ಪು ಕೊಡುತ್ತಿದ್ದಳು ಅಲ್ವಾ..? " ಆಕೆ ನಗುನಗುತ್ತಾ ಕೇಳಿದಳು. ಸ್ವಲ್ಪ ಧೈರ್ಯ ಬಂತು ನನಗೆ , ಆಕೆಗೆ ನನ್ನ ಕುಡಿತ ಗೊತ್ತಾಗಿಲ್ಲ ಸಾವಿರ ಸಾವಿರ ಬೆವರಿನ ವಾಸನೆಯ ನಡುವೆ ಎಲ್ಲಿಯದೂ ಅಂತ ಆಕೆಗೇನು ತಿಳಿಯುತ್ತೇ ಆದರೂ ಒಂದೇ ಒಂದು ಮಿಂಟ್ ತಿನ್ನಬೇಕಾಗಿತ್ತು ಅಂತ ಅನ್ನಿಸಿತು. ಕಾಲೇಜು ಮುಗಿದನಂತರ ಆಕೆಯನ್ನು ನೋಡಿರಲಿಲ್ಲ, ಒಮ್ಮೆ ಅಡಿಯಿಂದ ಮುಡಿಯವರೆಗೂ ಗಮನಿಸಿದೆ ಸಿಕ್ಕಾಪಟ್ಟೆ ಮಾಡ್ರನ್ ಆಗಿದ್ದಂತೆ ಅನ್ನಿಸಿತು. ಊರಿನಲ್ಲಿ ಶಾಸ್ತ್ರ ಸಂಪ್ರದಾಯ ಅಂತ ಬೀಗುತ್ತಿದ್ದ ಅಪ್ಪ ಅಮ್ಮನ ಮಗಳು ಇವಳೇನಾ ಅಂತ ಅನ್ನಿಸುವಷ್ಟು ಬದಲಾಗಿದ್ದಳು. "ಏನೋ ಹೊಸ ಹುಡುಗಿ ನೋಡುವ ಹಾಗೆ ನೋಡುತ್ತೀ" ಕಣ್ಣನ್ನು ಮಿಟುಕಿಸಿ ಚಮಕ್ ಕೊಟ್ಟಳು. ಇಲ್ಲ ಇಲ್ಲ ಹಾಗೇನಿಲ್ಲ, ಸುಮ್ಮನೆ ಸುಮ್ಮನೆ ಮತ್ತೆ ತೊದಲಿದೆ, ಈ ವಿಸ್ಕಿಯ ಹಣೇ ಬರಹವೇ ಹಾಗೆ ಒಂದೆಡೆ ಯೋಚನೆಗಳನ್ನು ಎಳೆದುಕೊಂಡು ಬಿಡುತ್ತದೆ. ಇನ್ನುಮೇಲೆ ಕುಡಿದು ಹೀಗೆ ಬಸ್ ಸ್ಟ್ಯಾಂಡ್ ತಿರುಗುವ ಚಟಕ್ಕೆ ತಿಲಾಂಜಲಿ ಇಡಬೇಕೆಂದೆನಿಸಿತು. ಸರಿ ಅದು ಮುಂದಿನ ಕತೆ ಈಗ ಸದ್ಯ ಇವಳಿಂದ ಬಚಾವಾಗಿ ಹೋದರೆ ಸಾಕು, ಅಕಸ್ಮಾತ್ ಇವಳಿಗೆ ನಾನು ಕುಡಿದದ್ದು ಗೊತ್ತಾಗಿ ಊರಿಗೆ ಹೋಗಿ ಟಾಂ ಟಾಂ ಮಾಡಿದರೆ ಮಾನಮರ್ಯಾದೆ ಹರಾಜಾಗುತ್ತದೆ ಎಂದು ಒಕೆ ಬರ್ಲಾ ಎಂದು ಹೇಳಿದೆ. "ಒಂದು ನಿಮಿಷ ಇರೋ ನಾನು ಒಭ್ಳೆ ಬಸ್ ಎಷ್ಟೊತ್ತಿಗೆ ಅಂತ ಕೇಳಿಬರ್ತೀನಿ" ಎಂದು ಉತ್ತರಕ್ಕೂ ಕಾಯದೆ ಓಡಿದಳು. ಹೀಗೆ ಹೋಗಿ ಹಾಗೆ ಬಂದು 'ಅಯ್ಯೋ ರಾಮ ಇವತ್ತು ಬಸ್ಸು ಇನ್ನೂ ಒಂದೂವರೆ ಗಂಟೆ ತಡವಂತೆ ನನಗೂ ಬೋರ್ ಪ್ಲೀಸ್ ಇರೋ" ರಾಗ ಎಳೆದಳು. ಅನಿವಾರ್ಯ ಇಲ್ಲ ಎನ್ನಲಾಗಲಿಲ್ಲ. ವಿಸ್ಕಿ ಕುಡಿಯದಿದ್ದರೆ ಖುಷಿಯಿಂದ ಇರಬಹುದಿತ್ತು. ಛೆ ಎಂತ ಯಡವಟ್ಟಾಯಿತಲ್ಲ ಎಂದು ಆದಷ್ಟು ಡಿಸ್ಟೆನ್ಸ್ ಕಾಪಾಡಿಕೊಳ್ಳುತ್ತಾ ನಿಂತೆ. "ಇಲ್ಲಿ ಮಾಡುವುದೇನು ಒಂದು ರೌಂಡ್ ಹೋಗಿಬರೋಣವಾ?. ಬೊಗಸೆ ಕಂಗಳನ್ನು ಅಗಲಿಸಿ ಕೇಳಿದಳು. ಇಲ್ಲ ಎನ್ನಲಾಗಲಿಲ್ಲ. ಅವಳ ಬ್ಯಾಗ್ ಗಳನ್ನು ಲಗ್ಗೇಜ್ ರೂಂನಲ್ಲಿ ಇಟ್ಟು ರೌಂಡ್ ಗೆ ಹೊರಟಾಯಿತು.
ಮತ್ತದೆ ಗಿಜಿ ಗಿಜಿ ಜನ , ಸೊಂಯ್ ಸೊಂಯ್ ಹಾಡು ಹೋಗುವ ವಾಹನ ಅವುಗಳನ್ನು ತಪ್ಪಿಸಿಕೊಳ್ಳುವ ಆಟ ಆಡುತ್ತಾ ಮೈನ್ ರೋಡ್ ಗೆ ಬಂದಾಯಿತು. ಏನಾದರೂ ತಿನ್ನೋಣವಾ? ಆಕೆ ಕೇಳಿದಳು. ಇಲ್ಲ ಎನ್ನಲಿಲ್ಲ. " ಅಯ್ಯೋ ಖಂಜೂಸು ಬುದ್ಧಿ ನೀನು ಇನ್ನೂ ಬಿಟ್ಟಿಲ್ಲವಾ? ನಾನೆ ಕೊಡಿಸುತ್ತೇನೆ ಬಾ " ಎಂದು ನನ್ನ ಉತ್ತರಕ್ಕೂ ಕಾಯದೆ ಹತ್ತಿರದ ಹೋಟೆಲ್ಲಿಗೆ ಎಳೆದುಕೊಂಡೇ ಹೋದಳು. ವಿಸ್ಕಿ ಕುಡಿಯದೇ ಇದ್ದಿದ್ದರೆ ಕೈ ಹಿಡಿದಾಗ ಅಪ್ಯಾಯಮಾನವಾಗುತ್ತಿತ್ತು , ಆದರೆ ಈಗ ಹಿಂಸೆಯಾಗುತ್ತಿತ್ತು.
ಟೇಬಲ್ ಮುಂದೆ ಕುಳಿತಾಗ ನನಗೆ ಅರಿವಾಗಿದ್ದು ಇದು ಎಲ್ಲರೂ ಹೋಗುವ ಹೋಟೆಲ್ ಅಲ್ಲ " ಏಯ್ ಇದು ನಾನ್ ವೆಜ್ ಹೋಟೆಲ್ ಕಣೇ" ಮೊದಲಬಾರಿಗೆ ಧೈರ್ಯವಾಗಿ ಹೇಳಿದೆ." ಸರಿ ಅದಕ್ಕೇನು ವಿಶೇಷ?" ಹುಬ್ಬು ಹಾರಿಸದಳು. ಅಷ್ಟರಲ್ಲಿ ವೈಟರ್ ಬಂದ.
"ನೀನು ಹಾಟೋ ಕೊಲ್ಡೋ?" ಆಕೆ ಕೇಳಿದಳು.
"..........." ನಾನು ಕೋಲ್ಡಾದೆ.
(ಚುಟುಕೊಂದರಿಂದ ಪ್ರೇರಿತ ಕತೆ)
Friday, December 5, 2008
ಅಪೂರ್ಣ ಕಥೆ ಪೂರ್ಣಗೊಳಿಸಿ
" ವೆಂಕಟರಮಣ ಹೆಗಡೆ, ಎಂಥ ಚೆಂದದ ಹೆಸರು. ಆದರೆ ಎಲ್ಲ ಕರೆಯುವುದು ವೆಂಕಣ್ಣ.ವೆಂಕಿ, ವೆಂಕಾಟಿ. ಬೊಗಸೆ ಕಂಗಳ ಚೆಂದನೆಯ ಹುಡುಗಿ ಪಟಕ್ ಅಂತ ಟೋಪನ್ ತೆಗೆದು ಬೊಕ್ಕ ತಲೆಯಲ್ಲಿ ನಿಂತರೆ ಎಂಥಹಾ ಶಾಕ್ ಆಗುತ್ತೇ ಅಲ್ಲವೆ? ಹಾಗೆ ನನಗೆ ಹೀಗೆಲ್ಲಾ ವಿಚಿತ್ರವಾಗಿ ಕರೆದಕೂಡಲೆ ಅಂತಹದ್ದೇ ಆಘಾತವಾಗುತ್ತದೆ. ಆದರೆ ತಿರುಗಿ ಅನ್ನುವಂತಿಲ್ಲ ಅನ್ನದೇ ಬಿಡುವಂತಿಲ್ಲ." ಎಂದು ವೆಂಕಟರಮಣ ಹೆಗಡೆ ಅಪ್ಪಣ್ಣಯ್ಯನ ಬಳಿ ಅಲವತ್ತುಕೊಳ್ಳುತ್ತಿದ್ದ. ಅಪ್ಪಣ್ಣಯ್ಯ ವೆಂಕನ ಮಾತುಗಳಿಗೆ ಪ್ರತ್ಯುತ್ತರ ನೀಡದೆ ತನ್ನಷ್ಟಕ್ಕೆ " ಸೊಯಕ್ ಸೊಯಕ್" ಅಂತ ಹಂಡೆಯಿಂದ ಅಡಿಕೆ ತೋಡಿ ಬುಟ್ಟಿಗೆ ಸುರುವುದರಲ್ಲಿ ಮಗ್ನನಾಗಿದ್ದ. ಹಾಗಂತ ಅಪ್ಪಣ್ಣಯ್ಯನಿಗೆ ವೆಂಕನ ಮಾತು ಕೇಳಲಿಲ್ಲ ಅಂತೇನೂ ಅಲ್ಲ ಆದರೆ ಉತ್ತರ ಕೊಡುವ ಉತ್ಸಾಹದಲ್ಲಿ ಆತ ಇರಲಿಲ್ಲ. ಮಧ್ಯಾಹ್ನ ಕೊನೆಗೌಡ ಹೇಳಿದ ಸುದ್ದಿಯಿಂದ ಅನ್ಯಮನಸ್ಕನಾಗಿದ್ದ. ಆ ಸುದ್ಧಿಯಾದರೋ ಕೊನೆಗೌಡ ಅಪ್ಪಣ್ಣಯ್ಯನ ಬಳಿ ಹೇಳಿರಲಿಲ್ಲ. ಕೊನೆ ಹಿಡಿಯುವವನ ಬಳಿ ಹೇಳುತ್ತಿದ್ದಾಗ ಅಪ್ಪಣ್ಣಯ್ಯನ ಕಿವಿಗೆ ಆ ಸುದ್ಧಿ ಬಿದ್ದಿತ್ತು. "ಹೋಯ್ ವೆಂಕ ಅಂತ ಕರಿಯೋರಿಗೆ ಎಂತ ಹೇಳಿ ಹಾಗಂತ ಕರೆಯೋದನ್ನ ತಪ್ಪಿಸಲಿ, ಒಂದು ಉಪಾಯ ಹೇಳ ಮಾರಾಯ" ಮತ್ತೆ ವೆಂಕ ಮುಂದುವರೆಸಿದ. ಬಡಪೆಟ್ಟಿಗೆ ಇವನು ಬಿಡಲೊಲ್ಲ ಎಂದೆನಿಸಿ ಸಧ್ಯ ಇವನಿಂದ ತಪ್ಪಿಸಿಕೊಂಡರೆ ಸಾಕು ಎಂಬ ಇರಾದೆಯಿಂದ
" ಅಲ್ಲ ನಿಂಗೆ ವಯಸ್ಸು ನಲವತ್ತೈದು ಆತು ಇನ್ನೂ ಮದುವೆ ಚಿಂತೆ ಮಾಡದು ಬಿಟ್ಟು ಹೆಸರಿನ ಹಿಂದೆ ಬಿದ್ದೆಯಲ್ಲ, ಅದನ್ನ ಯೋಚಿಸು" ಎಂದು ವೆಂಕನ ಬುಡಕ್ಕೆ ಇಟ್ಟ ಅಪ್ಪಣ್ಣಯ್ಯ. ವೆಂಕನ ಕೊರೆತ ತಪ್ಪಿಸಿಕೊಳ್ಳಲು ಊರಲ್ಲಿ ಎಲ್ಲರೂ ಅನುಸರಿಸುತ್ತಿದ್ದ ಸುಲಭೋಪಾಯವನ್ನು ಅಪ್ಪಣ್ಣಯ್ಯ ಅನುಸರಿಸಿದ. ಮದುವೆ ವಿಷಯ ಬಂದ ತಕ್ಷಣ ದುರ್ದಾನ ತೆಗೆದುಕೊಂಡವರಂತೆ ಮಾಯವಾಗುತ್ತಿದ್ದ ವೆಂಕ ಇಂದು ಹಾಗೆ ಹೋಗಲಿಲ್ಲ." ಆಯ್ತು ಮದುವೆ ಆಗ್ತೇನೆ ಹೆಣ್ಣು ಹುಡುಕಿ ಕೊಡು, ಅತವಾ ನಾ ಕಂಡ ಹೆಣ್ಣಿನೊಡನೆ ಮದುವೆಯಾಗಲು ಸಹಾಯಮಾಡು" ಎಂದು ಹೇಳಿದ. ಅಪ್ಪಣ್ಣಯ್ಯನಿಗೆ ವೆಂಕಣ್ಣನ ವರ್ತನೆ ಅನಿರೀಕ್ಷಿತ. ಹಳ್ಳಿಯಲ್ಲಿದ್ದ ವಯಸ್ಸು ಚಿಮ್ಮೋ ಹುಡುಗರಿಗೆ ಮದುವೆ ಇಲ್ಲ ಇನ್ನು ನಲವತ್ತೈದರ ಗಡಿ ದಾಟಿದ ಇವನಿಗೆ ಎಲ್ಲಿಂದ ಹೆಣ್ಣುತರುವುದು ಅಂತ ಅಪ್ಪಣ್ಣಯ್ಯನಿಗೆ ಮನಸ್ಸಿನಲ್ಲಿಯೇ ಅನ್ನಿಸಿದರೂ ತಾನು ಯಾವುದೋ ಒಂದು ಹೆಣ್ಣ ಕಂಡಿದ್ದೇನೆ ಅಂತಾನಲ್ಲ ಅದು ಯಾರಿರಬಹುದು ಎಂಬ ಕುತೂಹಲ ಹುಟ್ಟಿತು. "ನೀ ಕಂಡ ಹೆಣ್ಣು ಯಾರ?" ಎಂಬ ಅಪ್ಪಣ್ನಯ್ಯನ ಪ್ರಶ್ನೆಗೆ "ನಾಳೆ ಹೇಳ್ತೇನೆ" ಎಂದು ಉತ್ತರಿಸಿ ವೆಂಕಟರಮಣ ಹೊರಟು ಹೋದ. ಆತ ಅತ್ತ ಹೋಗುತ್ತಿದ್ದಂತೆ ಅಪ್ಪಣ್ಣಯ್ಯನ ಮನಸ್ಸು ಮತ್ತೆ ಕೊನೆಗೌಡನ ಮಾತುಗಳನ್ನು ಮೆಲಕುಹಾಕತೊಡಗಿತು.
"ಹೋಯ್ ತಿಮ್ಮ ಒಂದು ವಿಷ್ಯ ಗೊತ್ತೈತನಾ ನಿಂಗೆ?"
"ಎಂತ್ರಾ ನೀವು ಕೊನೆ ಕೊಯ್ತಾ ಊರು ತಿರುಗೋರು ವಿಷಯ ನನಗೆಂತ ತಿಳಿತದೆ?"
"ಅದೇ ಬಾಗೀರಥಮ್ಮನ ಕಥೆಯಾ"
"ಯಂತು ಅಂತ ಬಿಡಿಸಿ"
"ಅವ್ರ ಗಂಡ ಹೋದ್ವರ್ಷೋದ್ರಲಾ. ಅದು ಸಹಜವಾಗಿ ಹೋಗಿದ್ದಲ್ಲಂತೆ ಬಾಗಿರಥಮ್ಮ ಮತ್ತೊಬ್ಬರ ಜತೆ ಸೇರಿಕೊಂಡು ಅವ್ರನ್ನ ಕೊಲೆ ಮಾಡಿದ್ದಂತೆ ಮಾರಾಯ"
" ಅದು ಹ್ಯಾಂಗೆ ನಿಮಗೆ ಗೊತ್ತಾತು?" ಮತ್ತೊಬ್ಬರು ಯಾರು?
"ಅದೆಲ್ಲಾ ನಿಂಗೆ ಬ್ಯಾಡ, ಸುದ್ಧಿಯಂತೂ ಸುಳ್ಳಲ್ಲ ನೋಡು ಸಧ್ಯ ವಿಷ್ಯ ಹೊರಗೆ ಬರ್ತದೆ. ಯಾರು ಅಂತ ಪೋಲೀಸರು ಬಂದು ಪಪ್ಪ ಹಾಕಿಕೊಂಡು ಹೋದ್ಮೇಲೆ ಗೊತ್ತಾಕ್ತದೆ"
ಅಪ್ಪಣ್ಣಯ್ಯನಿಗೆ ಮುಂದಿನ ವಿಚಾರ ಕೇಳಲು ಅಲ್ಲಿ ನಿಲ್ಲಲಾಗಲಿಲ್ಲ. ಕೊನೆಗೌಡ ಬೇಕಂತಲೇ ಆ ಸುದ್ಧಿ ಹೇಳಿದ್ದನಾ ಎಂಬ ಅನುಮಾನ ಕಾಡತೊಡಗಿತು. ಹೊಟ್ಟೆಯೊಳಗಿನಿಂದ ತರತರ ನಡುಗಿದಂತಾಗಿ ಮನೆಸೇರಿದ ಅಪ್ಪಣ್ಣಯ್ಯ. ಆ ಸುದ್ಧಿ ಕೇಳಿದಲ್ಲಿಂದ ಅಪ್ಪಣ್ಣಯ್ಯ ಮನುಷ್ಯನಾಗಿರಲಿಲ್ಲ. ಮಾಡುವ ಕೆಲಸಗಳೆಲ್ಲ ತನ್ನಷ್ಟಕ್ಕೆ ನಡೆಯುತ್ತಿತ್ತೇನೋ ಎಂಬಂತಿತ್ತು. ಈಗ ವೆಂಕಣ್ಣ ಬಂದು ಮದುವೆಯ ವಿಷಯ ಮುಗುಮ್ಮಾಗಿ ಹೇಳಿದಾಗ ವೆಂಕಣ್ಣ ಕಂಡ ಹುಡುಗಿ ಇವಳೇ ಇರಬಹುದಾ? ಎಂಬ ಅನುಮಾನ ಕಾಡತೊಡಗಿ ಇನ್ನಷ್ಟು ಅಧೀರನಾದ.
***
ಭಾಗೀರಥಿ ಮೂವತ್ತರ ಹರೆಯದ ಚೆಲುವೆ. ಅವಳನ್ನು ಈ ಹಳ್ಳಿಗಮಾರನಿಗೆ ಮದುವೆ ಮಾಡಿಕೊಟ್ಟದ್ದು ಆಕೆಯ ಗ್ರಹಚಾರ ಅಂತ ಊರಿನ ಹಲವಾರು ಗಂಡಸರ ಅಭಿಪ್ರಾಯ. ಅರ್ದ ಎಕರೆ ಅಡಿಕೆ ತೊಟ ಮಣ್ಣಿನಮನೆ ಬಾಯಿತುಂಬಾ ಕವಳ ಗುಜ್ಜುತ್ತಿದ್ದ ಸಾಂಬು ಅವಳ ಗಂಡನಾಗಲು ಅನರ್ಹ ಎಂದು ಊರವರು ತೀರ್ಮಾನಿಸಿದ್ದರು. ಆದರೆ ಭಾಗೀರಥಿ ಪಾಲಿಗೆ ಬಂದದ್ದು ಪಂಚಾಮೃತ ಎಂಬ ತತ್ವಕ್ಕೆ ಇಳಿದು ಚೆಂದವಾಗಿ ಪುಟ್ಟ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು. ಪ್ರೀತಿ ಪ್ರೇಮ ಅಮಾಯಕತೆ ಬಡತನವನ್ನೂ ನುಂಗಿ ಹಾಕಬಲ್ಲದು ಎಂಬ ತತ್ವ ಅವಳದ್ದು. ಆದರೆ ವಿಧಿಗೆ ಅದು ಇಷ್ಟವಿರಲಿಲ್ಲ. ಮದುವೆಯಾಗಿ ಗಂಡನಮನೆ ಸೇರಿದ ಒಂದು ವರ್ಷದಲ್ಲಿ ಸಾಂಬು ಇಹಲೋಕ ತ್ಯಜಿಸಿದ್ದ. ರಾತ್ರಿ ಮಲಗಿದ್ದವನು ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತ ಎಂದರು, ರಾತ್ರಿ ಮಣ್ಣಿನಗೋಡೆಯಿಂದ ಒಳಗೆ ಬಂದು ಸರ್ಪ ಕಚ್ಚಿದೆ ಎಂದರು ಕೆಲವರು ಅವನು ಮೊದಲಿನಿಂದಲೂ ಅನಾರೋಗ್ಯವಂತ ಎಂದರು ಹಲವರು. ಒಟ್ಟಾರೆ ಫಲಿತಾಂಶ ಭಾಗೀರಥಿಯ ಸುತ್ತ ಸುತ್ತುತ್ತಿತ್ತು. ಅಪ್ಪಣ್ಣಯ್ಯ ಭಾಗೀರಥಿಯ ದೂರದನೆಂಟನಾದ್ದರಿಂದ ಸಾಂಬುವಿಗೆ ಕೊಟ್ಟು ಮದುವೆಯಾದನಂತರ ಅಲ್ಲಿನ ಬಳಕೆ ಅಪ್ಪಣ್ಣಯ್ಯನಿಗೆ ಹೆಚ್ಚಿತ್ತು. ತೋಟಕ್ಕೆ ಹೋದಾಗಲೆಲ್ಲ ದಿನಕ್ಕೊಮ್ಮೆ ಸಾಂಬುವಿನ ಮನೆಗೆ ಹೋಗಿ ಕುಶಲ ವಿಚಾರಿಸಿ ಬರುವುದು ಅಪ್ಪಣ್ಣಯ್ಯನಿಗೆ ವಾಡಿಕೆಯಾಗಿತ್ತು ತಾಯಿಯ ವ ರೆಸೆ ಎಂದು ಭಾಗೀರಥಿ ಅಪ್ಪಣ್ನಯ್ಯನಿಗೆ ತುಸು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಳು. ಅಪ್ಪಣ್ಣಯ್ಯನಿಗೂ ಅದೇನೋ ಒಂಥರಾ ಕಾಳಜಿ. ಏನಾದರೂ ಒಂದು ನೆಪಮಾಡಿಕೊಂಡು ಸಾಂಬುವಿನ ಮನೆಗೆ ಹೋಗಿ ಬರುತ್ತಿದ್ದ. ಅಂತಹ ಒಂದು ದಿನದಲ್ಲಿ ಸಾಂಬು ಇಹಲೋಕ ತ್ಯಜಿಸಿದ. ಆನಂತರವೂ ಅಪ್ಪಣ್ಣಯ್ಯ ಭಾಗೀರಥಿ ಮನೆಯ ಆಸ್ಥೆಯನ್ನು ಮುಂದುವರೆಸಿದ್ದ. ಭಾಗೀರಥಿಯ ವೈಧವ್ಯಕ್ಕೆ ಮರುಗುತ್ತಿದ್ದ. ಆದರೆ ಈಗ ಕೊನೆಗೌಡನ ಬಾಯಲ್ಲಿ ಇಂತಹ ವಿಷಯಗಳು ಕೇಳಿಬಂದಮೇಲೆ ತಾನು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೆಯೇ ಇದಕ್ಕೊಂದು ಮಂಗಳ ಹಾಡಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿರಬೇಕೆಂಬ ತೀರ್ಮಾನಕ್ಕೆ ಬಂದ.
***
ಪ್ರಿಯ ಓದುಗರೆ ಕಥೆಯಂತಿರುವ ಈ ಕಥೆ ಇನ್ನೂ ಮುಕ್ತಾಯವಾಗಿಲ್ಲ. ಇದರ ಮುಕ್ತಾಯ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾಮೆಂಟ್ ನ ಜಾಗದಲ್ಲಿ ಕಥೆಗೊಂದು ಮುಕ್ತಾಯ ಕೊಡಿ ಉತ್ತಮ ಮುಕ್ತಾಯಕ್ಕೆ ಪುಸ್ತಕರೂಪದ ಬಹುಮಾನ ಗೆಲ್ಲಿ. ಹಾ ಮರೆಯಬೇಡಿ ಮುಕ್ತಾಯದ ಕೊನೆಯಲ್ಲಿ ನಿಮ್ಮ ಈ ಮೈಲ್ ವಿಳಾಸ ದಾಖಲಿಸಿ.
ಕತೆ ಮುಕ್ತಾಯಗೊಳಿಸಿದ ಪ್ರಜಾವಾಣಿ, ಮೂರ್ತಿ ಹಾಗೂ ಹರೀಶ್ ಗೆ ಧನ್ಯವಾದಗಳು. ಹರೀಶ ಮುಕ್ತಾಯವನ್ನು ಆಯ್ದುಕೊಳ್ಳಲಾಗಿದೆ.(ತೀರ್ಪುಗಾರರು: ವೇಣುಮಾಧವ)
ಬೆಳಿಗ್ಗೆಯಿಂದ ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತ ಮಲಗಿದ ಅಪ್ಪಣ್ಣಯ್ಯನಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಕೊನೆ ಗೌಡ ಹೇಳಿದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.***ಮರುದಿನ ಬೆಳಿಗ್ಗೆ ದೇವರ ಪೂಜೆ ಮುಗಿಸಿ ತೋಟಕ್ಕೆ ಹೊರಡುವ ಹೊತ್ತಿಗೆ ಸರಿಯಾಗಿ ವೆಂಕಣ್ಣ ಬಂದ. ಏನೂ ತಿಳಿಯದಂತೆ ನಟಿಸುತ್ತ ಅಪ್ಪಣ್ಣಯ್ಯ ವೆಂಕಣ್ಣನನ್ನು ಮಾತನಾಡಿಸಿದ: "ಈ ವರ್ಷ ಫಸಲು ಕಮ್ಮಿ ವೆಂಕಣ್ಣ". ವೆಂಕಣ್ಣ ಮತ್ತೆ ಹಳೇ ರಾಗ ತೆಗೆದ: "ನನ್ನ ಪೂರ್ತಿ ಹೆಸರು ವೆಂಕಟರಮಣ". ತಟಕ್ಕನೆ ಸರಿಯಾದ ಸಂದರ್ಭ ಎಂದು ಅಪ್ಪಣ್ಣಯ್ಯ ಅರಿತ."ಆಯ್ತು, ವೆಂಕಟರಮಣ. ಅಲ್ದೋ ವೆಂಕಟರಮಣ, ನಿನ್ನೆ ಯಾವ್ದೋ ಹೆಣ್ಣು ನೋಡಿದ್ದೀನಿ ಅಂದಿದ್ಯಲ್ಲ ಯಾರೋ ಅವಳು" ಎಂದು ಕೇಳಿದ. "ಓಹ್ ಅದಾ.. ನೀವು ಸಹಾಯ ಮಾಡ್ತೀರಿ ಅನ್ನೋದಾದ್ರೆ ಹೇಳ್ತೀನಿ""ಯಾರು ಅಂತಾನೇ ತಿಳೀದೇ ಹೇಗ್ ಹೇಳ್ಲಿ.. ಆದ್ರೂ ನನ್ ಕೈಲಿ ಆದ್ ಸಹಾಯ ಮಾಡ್ತೀನಿ, ಅದ್ಯಾರು ಹೇಳು""ಯಾರೂ ಅಲ್ಲ ನಿಮಗ್ಗೊತ್ತಿರೋಳೆಯ""ಯಾರೋ ಅದು? ಭಾಗೀರಥಿಯ?" ಬಾಯ್ತಪ್ಪಿ ಭಾಗೀರಥಿಯ ಹೆಸರು ಅಪ್ಪಣ್ಣಯ್ಯನ ಬಾಯಿಂದ ಹೊರಬಿದ್ದಿತ್ತು. ತನ್ನ ಅಜ್ಞಾನಕ್ಕೆ ತನ್ನನ್ನೇ ಹಳಿದುಕೊಂಡ ಅಪ್ಪಣ್ಣಯ್ಯ. ಆದರೆ ಅಪ್ಪಣ್ಣಯ್ಯನನ್ನು ಗಮನಿಸದ ವೆಂಕಣ್ಣ "ಅಯ್ಯೊ ಅವ್ಳಲ್ರಾ.. ತುದೀ ಮನೆ ವಿಶಾಲೂ..." ಎಂದ ತುಸು ನಾಚುತ್ತ. "ಅವಳಿಗೆ ವಯಸ್ಸು ಮೂವತ್ತೈದು ದಾಟ್ತಾ ಬಂತು... ನೀವೇನಾದ್ರೂ ಹೇಳಿರೆ ಆಗ್ಬಹುದೇನೋ".ವಿಶಾಲಾಕ್ಷಿಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ದಿನ ಮದುವೆ ಗಂಡಿಗೆ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದ. ಅದಾದ ಮೇಲೆ ಅಪಶಕುನ ಎಂದು ಯಾರೂ ಮದುವೆಯಾಗಲು ಮುಂದೆ ಬಂದಿರಲಿಲ್ಲ. ಗಂಡು ಹುಡುಕಿ ಹುಡುಕಿ ಸಾಕಾದ ಮೇಲೆ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಅಪ್ಪಣ್ಣಯ್ಯ ಈಗ ಇಬ್ಬಂದಿಯಲ್ಲಿ ಸಿಲುಕಿದ್ದ. "ಸರಿ ವೆಂಕಟರಮಣ, ಹಾಗಾದ್ರೆ ಯೋಚನೆ ಮಾಡ್ತೇನೆ" ಎಂದು ಅಪ್ಪಣ್ಣಯ್ಯ ತೋಟಕ್ಕೆ ಹೋದ.***ಮಧ್ಯಾಹ್ನದ ಹೊತ್ತಿಗೆ ಕೊನೆಗೌಡ ಹೇಳಿದಂತೆ ಭಾಗೀರಥಿಯ ಮನೆಗೆ ಪೊಲೀಸರಿಬ್ಬರು ಬಂದಿದ್ದರು. ಆಕೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಲು ಬಂದಿದ್ದರು. ಎರಡು ದಿನ ವಿಚಾರಣೆಯ ನಂತರ ನಿಜಾಂಶ ಹೊರಬಿತ್ತು. ಅಪ್ಪಣ್ಣಯ್ಯ ತಲ್ಲಣಿಸಿದ್ದ.***ಒಂದು ವರ್ಷ ಚೆನ್ನಾಗಿದ್ದ ಭಾಗೀರಥಿಯ ಸಂಸಾರದಲ್ಲಿ ವೆಂಕಣ್ಣ ಬಂದಿದ್ದ. ತನ್ನ ಗಂಡ ಸಾಂಬುವಿಗಿಂತ ನೋಡಲು ಸುಂದರನಾಗಿದ್ದ, ಬುದ್ಧಿವಂತನಾಗಿದ್ದ ವೆಂಕಣ್ಣನ ಕಡೆಗೆ ಭಾಗೀರಥಿ ಸಹಜವಾಗಿಯೇ ಆಕರ್ಷಿತಳಾಗಿದ್ದಳು. ವೆಂಕಣ್ಣನ ಮನಸ್ಸಿನಲ್ಲೂ ಆಕೆಯ ಬಗ್ಗೆ ಆಕರ್ಷಣೆ ಇತ್ತು. ಆದರೆ ಸಾಂಬು ಇದನ್ನೂ ಗಮನಿಸದಷ್ಟು ಮುಗ್ಧನಾಗಿದ್ದ. ಒಂದು ದಿನ ಭಾಗೀರಥಿ-ವೆಂಕಣ್ಣ ಸೇರಿ ಸಾಂಬುವನ್ನು ಹೇಗಾದರೂ ತಮ್ಮಿಬ್ಬರ ಮಧ್ಯದಿಂದ ಸರಿಸಬೇಕೆಂದು ನಿರ್ಧರಿಸಿದರು. ಆ ದುರ್ದಿನದಂದು ರಾತ್ರಿ ಮಲಗುವಾಗ ಭಾಗೀರಥಿ ಸಾಂಬುವಿಗೆ ಸ್ವಲ್ಪ ನಿದ್ದೆ ಗುಳಿಗೆ ಬೆರೆಸಿದ ಹಾಲು ಕೊಟ್ಟು ಮಲಗಿಸಿದಳು. ಆದರೆ ನಿದ್ದೆ ಗುಳಿಗೆಯಿಂದ ಕೊಂದರೆ ಅನುಮಾನ ಬರಬಹುದೆಂದು ಹಾವು ಕಚ್ಚಿ ಸತ್ತನೆಂಬಂತೆ ಮಾಡಿದ್ದರು. ಅದರಂತೆ ಹಾವು ಹಿಡಿಯುವುದು ಗೊತ್ತಿದ್ದ ವೆಂಕಣ್ಣ ಒಂದು ವಿಷದ ಹಾವನ್ನು ಹಿಡಿದು ರಾತ್ರಿ ಸಾಂಬುವಿನ ಮೈ ಮೇಲೆ ಬಿಟ್ಟಿದ್ದ. ಗಾಢ ನಿದ್ದೆಯಲ್ಲಿದ್ದ ಸಾಂಬುವಿಗೆ ಹಾವು ಬಿಟ್ಟಿದ್ದೂ ಗೊತ್ತಾಗಲಿಲ್ಲ, ಕಚ್ಚಿದ್ದೂ ಗೊತ್ತಾಗಲಿಲ್ಲ. ಬೆಳಗಾಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ. ಅದಾಗಿ ಸ್ವಲ್ಪ ದಿನದ ನಂತರ ಏನೋ ಜಗಳವಾಗಿ ವೆಂಕಣ್ಣ-ಭಾಗೀರಥಿ ದೂರವಾಗಿದ್ದರು.***ತನ್ನೊಂದಿಗೆ ಅಷ್ಟೊಂದು ಸಲಿಗೆಯಿಂದಿರುತ್ತಿದ್ದ ಭಾಗೀರಥಿ ಬಾಯ್ಬಿಟ್ಟ ವಿಷಯ ಮಾತ್ರ ಅಪ್ಪಣ್ಣಯ್ಯನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಜೊತೆ ಅಷ್ಟು ಸಲೀಸಾಗಿ ಹರಟುತ್ತಿದ್ದ ವೆಂಕಣ್ಣನೂ ಇದರಲ್ಲಿ ಶಾಮೀಲಾಗಿದ್ದನ್ನು ನಂಬಲಾಗಲಿಲ್ಲ.
Thursday, December 4, 2008
ಹಹಹ...ಅಂತಿಮ ಭಾಗ
ಇನ್ನು ಹೆಚ್ಚು ಹೊತ್ತು ಅಲ್ಲಿದ್ದರೆ ಬಾಯಿ ತಪ್ಪಿ ಅಕ್ಕಪಕ್ಕದವರ ಬಳಿ ಏನಾದರೂ ಹೇಳಿ ಅದು ಅವರ ಲೆಕ್ಕದಲ್ಲಿ ಉದ್ಧಟತನದ ಮಾತಾಗಿ ಲಾತಾ ತಿನ್ನಬೇಕಾದಿತೆಂದು ಹೊರಹೊರಟೆ. ಹೊರಗೆ ಬಾಗಿಲಬಳಿ ಬರುವಷ್ಟರಲ್ಲಿ ಶನಿದೇವನ ಅವತಾರ ಅಂದಿನ ಮಟ್ಟಿಗೆ ಪೂರೈಸಿತು. ಆದರೆ ದರಿದ್ರ ಕುತೂಹಲ ಹಳೇ ಪಾತ್ರಧಾರಿಯನ್ನು ಮಾತನಾಡಿಸಿದರೆ ಹೇಗೆ ಎಂಬ ಆಲೋಚನೆ ಸುಳಿದಾಡಿತು. ಅದು ಸ್ವಲ್ಪಮಟ್ಟಿಗೆ ಅಪಾಯದ ಕೆಲಸವೂ ಆಗಿತ್ತು. ಕಾರಣ ಅಲ್ಲಿದ್ದವರಿಗೆಲ್ಲ ಹಳೆಯಪಾತ್ರಿಯ ಮೇಲೆ ಎಲ್ಲಿಲ್ಲದ ಕೋಪ, ಆತ ಕುಡಿದಿದ್ದಾನೆ ಅದಕ್ಕಾಗಿ ಏನೆಲ್ಲಾ ಒದರುತ್ತಾನೆ ಅಂದುಕೊಂಡಿದ್ದರು. ಆತ ಕುಡಿದದ್ದು ನಿಜ ಆದರೆ ಸತ್ಯವನ್ನೇ ಹೇಳುತ್ತಿದ್ದ. (ಸತ್ಯ ಎಂಬುದು ಈ ಪ್ರಪಂಚಕ್ಕೆ ಯಾವಾಗಲೂ ಬೇಡ. ಸುಳ್ಳು ಹೆಚ್ಚು ಹೆಚ್ಚು ಹೇಳಿದರೆ ಎತ್ತರ ಎತ್ತರಕ್ಕೆ ಸಾಗಬಹುದು ಇಲ್ಲಿ.) ಪಾಪ ನನಗೂ ಕೂಡ ಆಂತರ್ಯದಲ್ಲಿ ಹಳೇಪಾತ್ರಿಯಬಗ್ಗೆ ಅನುಕಂಪ ಇತ್ತು ಆದರೆ ಬೀಳುವ ಲಾತಾದ ಭಯದಿಂದ ತೋರಿಸಿಕೊಳ್ಳಲಾಗುತ್ತಿರಲಿಲ್ಲ(ನೋಡಿ ನಾವೆಲ್ಲರೂ ಹೇಗೆ ಸುಳ್ಳಿಗೆ ಬೆಂಬಲಿಸುತ್ತೇವೆ..!). ಆದರೂ ಏನಾದರಾಘಲಿ ಎಂದು ಹಳೇ ಪಾತ್ರಿಯ ಬಳೈಗೆ ಹೋದೆ. ಅಷ್ಟರಲ್ಲಿ ಆತನ ಕೂಗಾಟ ಗೊಣಗಾಟವಾಗಿ ಪರಿವರ್ತನೆಗೊಂಡಿತ್ತು. "ಕಳ್ಳ ಬಡ್ಡಿ ಮಕ್ಕಳು ದುಡ್ಡಿಗಾಗಿ ಏನೇನೋ ಮಾಡ್ತವೆ( ಈತ ಹಿಂದೆ ಮಾಡಿದ್ದೂ.. ಅದನ್ನೆ. ಈಗ ತನಗೆ ಅವಕಾಶ ತಪ್ಪಿದ್ದಕ್ಕೆ ಸಿದ್ದಾಂತ) ಒಂದು ನೀತಿ ರಿವಾಜೂ ಎಂತೂ ಇಲ್ಲ, ಬರ್ಲಿ ಬರ್ಲಿ ಧರ್ಮಸ್ಥಳದಲ್ಲಿ ಬುದ್ದೀ ಕಲ್ಸತ್ತೀನಿ ಇವುಕ್ಕೆ ಹ್ಯಾ... ಪುಸ್" ಹೀಗೆ ಮುಂದುವರೆಯುತ್ತಿತ್ತು. "ಹೋಯ್ ಅವನ ಮೈಮೇಲೆ ಶನಿ ಬರುವುದು ಸುಳ್ಳಾ..?" ಮೆಲ್ಲಗೆ ಕೇಳಿದೆ. "ಸುಳ್ಳಲ್ದೆ ಸತ್ಯನಾ...? ನಿಮ್ಗೂ ಅನುಮಾನವಾ?. ಒಂದಿಷ್ಟು ಹೇಳ್ತಾನೆ ಸತ್ಯ ಆದ್ರೆ ಅವಂದು ಸುಳ್ಳಾದ್ರೆ ಅವ್ರಿದ್ದು. ಇವೆಲ್ಲಾ ನಾನು ಮಾಡಿಬಿಟ್ಟಿದ್ದೇಯಾ. ದೊಡ್ಡೋರಿಗೆ ಸೊಪ್ಪು ಹಾಕ್ಲಿಲ್ಲ ಹಂಗಾಗಿ ನನ್ನ ಹೊರಗೆ ಹಾಕಿದ್ರು..." ಮತ್ತೆ ನಿಧಾನ ಸ್ವರ ಏರತೊಡಗಿತು. ಇನ್ನು ನಾನು ಅಲ್ಲಿದ್ದರೆ ಕುಂಟುತ್ತಾ ಮನೆಸೇರಬೇಕಾದೀತೆಂದು ಹೊರಗೆ ಬಂದು ಶನಿದೇವಾಯ ನಮೋ ನಮಃ ಎಂದು ಮನೆಗೆ ಹೋಗಲು ಬೈಕನ್ನೇರಿದೆ.
ಇವೆಲ್ಲಾ ನಡೆದು ಈಗ ಹದಿನೈದು ವರ್ಷಗಳೇ ಸಂದಿವೆ. ಮತ್ತೆ ನಾನು ನನ್ನ ಜಂಜಡಗಳಲ್ಲಿ ಶನಿದೇವನ ಕತೆ ಮರೆತಿದ್ದೆ. ಈಗ ಮೂರು ವರ್ಷದ ಹಿಂದೆ ಅದ್ಯಾವುದೋ ಕೆಲಸದ ಮೇಲೆ ಅಲ್ಲಿ ಹೋಗುತ್ತಿದ್ದಾಗ ಅಚ್ಚರಿ ಮೂಡುವಷ್ಟು ಬದಲಾವಣೆ ಅಲ್ಲಿತ್ತು.ಸಣ್ಣ ಕುಟೀರ ಮಾಯವಾಗಿ ದೊಡ್ದ ದೇವಸ್ಥಾನ ತಲೆ ಎತ್ತಿತ್ತು. ಭಕ್ತರು ಹೊಸ ಹೊಸ ಸಮ್ಸ್ಯೆಯಲ್ಲಿ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಅಬ್ಭಾ ಎಂದುಕೊಂಡೆ.
ಯಾವುದು ಏನೇ ಇರಲಿ ಶನಿದೇವ ಮೈಮೇಲೆ ಬರುತ್ತಾನೋ ಇಲ್ಲವೋ ಎನ್ನುವುದು ಟಿವಿ ೯ ನ "ಹೀಗೂ ಉಂಟೇ" ಟಿವಿ ಪ್ರೋಗ್ರಾಂ ನಡೆಸಿಕೊಡುವವ ಹೇಳುವಂತೆ ತರ್ಕಕ್ಕೆ ನಿಲುಕದ್ದು. ಆದರೆ ಅದೊಂದು ಬಹಳ ಜನರಿಗೆ ನೆಮ್ಮದಿಕೊಡುತ್ತಿದೆ ಅಂತ ಅನ್ನುವುದಂತೂ ಸತ್ಯವಾಯಿತಲ್ಲ. ಜನರಿಗೆ ಏನು ಬೇಕೋ ಅದು ನೀಡುವುದು ಪ್ರಜಾಪ್ರಭುತ್ವ...! ರಾಷ್ಟ್ರದ ಕರ್ತವ್ಯ ಅಲ್ಲವೇ.? ಆ ಕಾರಣಕ್ಕಾಗಿ ಇರಬೇಕು ನಮ್ಮ ಮಲೆನಾಡಿನಲ್ಲಿ ಜ್ಯೋತಿಷ್ಯರೂ, ಮಾತನಾಡುವ ದೇವರುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿವೆ. ಪ್ರಪಂಚ ಕಷ್ಟಕ್ಕೆ ಬಿದ್ದಂತೆಲ್ಲಾ ಇಲ್ಲಿ ಹಣದ ಹೊಳೆ ಹರಿಯುತ್ತದೆ. ಗೇರುಸೊಪ್ಪದ ಮಂಗನಂತೆ ಹಾರಿಹಾರಿ ಬೀಳುವ ಮಾರುತಿ ಭಟ್ಟರನ್ನು ಆಡಿಕೊಳ್ಳುವ ಮುಂದುವರೆದವರು ಇದ್ದಂತೆ ಅವರ ಭಂಡಾರಕ್ಕೆ ಹಣ ಸೇರಿಸುವ ನೂರಾರು ಜನ ಇದ್ದಾರೆ. ಎಸ್.ಎಸ್.ಎಲ್.ಸಿ ಪಾಸ್ ಆಗುವುದೂ ಬೇಡ ಇಂತಹದ್ದೊಂದು ಕೆಲಸಕ್ಕೆ. ಆದಾಯ ಮಾತ್ರಾ ಯಾವ ಸಾಪ್ಟ್ ವೇರ್ ನ ಜನಕ್ಕೂ ಇಲ್ಲ. ಅನಂತಣ್ಣ ಈ ಮಂದಿಯ ಹಣೆಬರಹ ಹೇಳುವ ಕೆಲಸ ಶುರುವಿಟ್ಟುಕೊಂಡಾಗ ಆತನ ಆಸ್ತಿ ಎರಡು ಎಕರೆ ಭಾಗಾಯ್ತು ಇತ್ತು. ಈಗ ಅದು ಹತ್ತು ಎಕರೆಗೆ ಏರಿದೆ ಇವತ್ತು ಆತ ಕೋಟ್ಯಾಧೀಶ ಮನೆ ಅರ್ದ ಕೋಟಿ ಬೆಲೆ ಬಾಳುತ್ತದೆ. ಶಾನುಭೋಗರಿಂದ ಹಿಡಿದು ಡಿಸಿ ವರೆಗಿನ ಸರ್ಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು ಈಗ ಅವನ ಜೇಬಿನಲ್ಲಿ. ಬಂಗಾರುಮಕ್ಕಿಯ ಮಾರುತಿ ಭಟ್ಟರೂ ಇದಕ್ಕೆ ಹೊರತಲ್ಲ. ತುಮ್ರಿಯ ಸಮೀಪ ಸಿಗಂಧೂರು ಮೆರೆಯುತ್ತಿದ್ದಂತೆ ಅಲ್ಲಿಯೇ ಹತ್ತಿರದ ಗುಮಗೊಡು ಗಣಪತಿ ಎಂಬಾತ ಈಗ ಜನರ ಸಮಸ್ಯೆ ಪರಿಹರಿಸಲು ನಿಂತಿದ್ದಾನೆ. ಇನ್ನು ಕೆಲವರ್ಷದಲ್ಲಿ ಆತ ಹತ್ತಿರದ ಜಮೀನುಗಳನ್ನೆಲ್ಲಾ ಖರಿದಿಸುತ್ತಾನೆ. ಇದೊಂದು ವೃತ್ತಿಗೆ ಓದಿನ ಅಗತ್ಯ ಇಲ್ಲ. ಧೈರ್ಯದ ಅಗತ್ಯ ಇದೆ. ಪಾಪ ನಮ್ಮ ಸಾಪ್ಟ್ವೇರ್ ಹುಡುಗರು, ಸಿ.ಎ ಹುಡುಗರು ವರ್ಷಪೂರ್ತಿ ಕಷ್ಟಪಟ್ಟು ದುಡಿಮೆಗಾಗಿ ಒದ್ದಾಡುತ್ತಾರೆ. ಆದರೂ ಹೀಗೆ ಹತ್ತು ವರ್ಷದಲ್ಲಿ ಶ್ರೀಮಂತರಾಗಿಲ್ಲ. ನಾವೆಲ್ಲಾ ಬಿಡಿ ಅಬ್ಬೆಪಾರಿಗಳು..
ಹೀಗಿದೆ ನೋಡಿ ಪ್ರಪಂಚ. ಹಾಗಾಗಿ ನಾನೂ ಬೇರೆಯವರಿಗೆ ಭವಿಷ್ಯ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನಮ್ಮ ಭವಿಷ್ಯವಾದರೂ ಉಜ್ವಲವಾಗುತ್ತದೆ....! ನೀವೂ ಬನ್ನಿ ನಿಮ್ಮವರಿಗೂ ಹೇಳಿ " ಅಂವ ಕರೆಕ್ಟಾಗಿ ಹೇಳ್ತ ಮಾರಾಯ" ಎಂದು. ನಿಮಗೂ ಸ್ವಲ್ಪ ಪಾಲು ಕೊಡೋಣ...? ಉದರನಿಮಿತ್ತಂ ಬಹುಕೃತ ವೇಷಂ.
Wednesday, December 3, 2008
ಹ ಹ ಹ ನಾನು ಯಾರು ಗೊತ್ತಾ... ! (ಮುಂದುವರೆದದ್ದು)
ನನಗೆ ಈ ಮಳ್ಳಾಟಗಳನ್ನು ನೋಡಿ ನಗು ಉಕ್ಕಿಬರುತ್ತಿತ್ತು. ಆದರೆ ನಗುವಂತಿಲ್ಲ ನಕ್ಕರೆ ಕೈಕಾಲು ಮುರಿದು ಹೆಡೆಮುರಿಕಟ್ಟಿ ಆಚೆ ಎಸೆಯುತ್ತಿದ್ದರು. ಎಲ್ಲರೂ ಘನಗಂಭೀರ ಮುಖ ಹೊತ್ತು ವೀಕ್ಷಿಸುತ್ತಿದ್ದರು. ಈ ಎಲ್ಲಾ ಘಟನೆ ತೀರಾ ಹದತಪ್ಪುತ್ತಿರುವುದು ಸೇರುಗಾರನ ಗಮನಕ್ಕೆ ಬಂತು. ಆತ : ಶನಿದೇವಾ... ನೀನು ಬಹಳ ಗೊಂದಲದಲ್ಲಿದ್ದೀಯಾ(ನಿಜವಾಗಿಯೂ ಹೌದು ಅಸ್ತಿತ್ವದ ಪ್ರಶ್ನೆ ) ಹಾಗಾಗಿ ಇಂದು ಬೇಡ ಮುಂದೆ ತೀರ್ಮಾನಿಸೋಣ" ಎಂದು ತಿಪ್ಪೆಸಾರಿಸಿದ. ನಂತರ ನಾನು..