Thursday, April 8, 2010

ಹೃದಯದ ಮಾತು ಮತ್ತು ಓಶೋ ಎಂಬ ಸಂತ ..ಹಾಗೂ ಬಿಟ್ಟಾಕು..... ಬಿಟ್ಟಾಕು ....ಬಿಟ್ಟಾಕು


ಆ ಕಣ್ಣುಗಳಲ್ಲಿ ಅದೆಂತಹಾ ಭಾವ, ಆ ಮುಖದಲ್ಲಿ ಅದೆಂತದೋ ಶಕ್ತಿ ಆ ನೋಟದಲ್ಲಿ ಉನ್ಮಾದ ಎಂಬಂತಹ ಡೈಲಾಗ್ ಗಳನ್ನು ಬದಿಗಿರಿಸಿ ಓಶೋವನ್ನು ನೋಡೋಣ. ಎಲ್ಲ ಸಂತ ಸನ್ಯಾಸಿಗಳೂ ನನ್ನನ್ನು ನಂಬಿ ನಾನು ಹೇಳಿದ್ದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯಿರಿ ಎಂದರೆ ಈ ಮಹಾನುಬಾವ ಉಲ್ಟಾ ಹೇಳಿದ್ದ. "ನಾನು ಹೇಳುತ್ತೇನೆಂದು ನಂಬಬೇಡಿ, ಅದು ನಿಮ್ಮ ಅನುಭವಕ್ಕೆ ಬಂದಾಗ ನಂಬಿ. ನಿಮಗೆ ನೀವೆ ಗುರು ಅಪ್ಪಿತಪ್ಪಿಯೂ ನನ್ನನ್ನು ಗುರು ಎಂದು ನಂಬಬೇಡಿ,ಯಾರು ದೇವರನ್ನು ತೋರಿಸುತ್ತೇನೆ ಎಂದು ಹೇಳುತ್ತಾರೋ ಅವರು ಸುಳ್ಳು ಹೇಳುತ್ತಿದ್ದಾರೆಂದು ಅರ್ಥ, ದೇವರನ್ನು ಅವರವರೇ ಕಾಣಬೇಕು, ಬೇರೆಯವರು ತೋರಿಸಲು ಸಾಧ್ಯವಿಲ್ಲ. ಮಾರ್ಗ ಸಾವಿರಾರುಇದೆ ಆಯ್ಕೆ ಅವರವರದ್ದು. ಸೆಕ್ಸ್ ಎಂಬುದು ಪ್ರಕೃತಿ ಸಹಜ ಅದನ್ನು ತಲೆಯೊಳಗೆ ಇಟ್ಟುಕೊಂಡು ರುಗ್ಣರಾಗಬೇಡಿ ತಲೆಯೊಳಗೆ ಇದ್ದಷ್ಟು ಅದು ವಿಕಾರರೂಪ ತಾಳುತ್ತದೆ," ಎಂಬಂತಹ ವಾಕ್ಯಗಳನ್ನು ಹೇಳಿದ ಗುರುವಲ್ಲದ ಗುರು ಸಂತನಲ್ಲದ ಸಂತ ಒಶೋ ರಜನೀಶ್ ಎಂದು ನಿಮಗೆ ಗೊತ್ತು. ಆತ ಸಾವಿರಾರು ಪುಸ್ತಕಗಳನ್ನು ಓದಿದ ಹಾಗೂ ಬರೆದ ಮತ್ತು ವಿಧವಿಧವಾದ ಜೀವನಾನುಭವವನ್ನು ಪಡೆದ ಮಹಾನುಭಾವಿ. ಹಾಗೆಹೇಳುತ್ತಾ ಹೇಳುತ್ತಾ ಕಾಲವಾದ ಅವರ ತತ್ವ ಸ್ವಲ್ಪ ಅರ್ಥವಾದರೆ ಸುಂದರ ಸುಮಧುರ ಪ್ರಪಂಚದ ಅರಿವಾಗುತ್ತದೆ.
ಎಲ್ಲರಂತೆ ನಾವು ಅಲ್ಲ ಎಂಬ ಭಾವನೆ ಎಲ್ಲರಲ್ಲಿಯೂ ಇರುತ್ತದೆ. ನಾವು ಕೆಲಸ ಮಾಡುತ್ತೇವೆ ಮಾತನಾಡುತ್ತೇವೆ ಬರೆಯುತ್ತೇವೆ, ಓದುತ್ತೇವೆ, ಊಟ ಆಟ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ ಅವೆಲ್ಲಾ ಒಂದೆಡೆ ಇರಲಿ. ಇವುಗಳನ್ನೆಲ್ಲಾ ಮಾಡುವುದಕ್ಕೆ ಕೆಲವರು ಮೆದುಳನ್ನು ಬಳಸುತ್ತಾರೆ ಇನ್ನು ಕೆಲವರು ಹೃದಯವನ್ನು ಬಳಸುತ್ತಾರೆ ಎಂದು ಓಶೋ ಹೇಳುತ್ತಾರೆ . ಇದೇನು ತರ್ಲೆ ಅಂದಿರಾ , ಇರಲಿ ಸ್ವಲ್ಪ ಸಹಿಸಿಕೊಳ್ಳಿ ಮುಂದೆ ನೋಡೋಣ
ಒಂದಾನೊಂದು ಊರಲ್ಲಿ ಒಬ್ಬ ಗ್ರಹಸ್ಥನಿದ್ದ, ಬೆಳ್ಳನೆಯ ಹೆಂಡತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಕೈತುಂಬಾ ಕಾಸು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸುಖೀ ಸಂಸಾರ ಆತನದು. ಆತ ತನ್ನನ್ನು ತನ್ನ ಸಂಸಾರವನ್ನು ಹೊರತುಪಡಿಸಿ ಮಿಕ್ಕ ಯಾರಿಗೂ ಕವಡೆಕಾಸಿನ ಉಪಕಾರವನ್ನು ಮಾಡುತ್ತಿರಲಿಲ್ಲ ಹಾಗಾಗಿ ಆತನನ್ನು ಕೃಪಣ ಜಿಪುಣ ಮುಂತಾಗಿ ಊರವರು ಕರೆಯುತ್ತಿದ್ದರು. ಇದ್ದಕ್ಕಿಂದಂತೆ ಆತನಿಗೆ ಹೃದಯಾಘಾತವಾಯಿತು . ಹಣಕಾಸಿನ ತೊಂದರೆ ಇಲ್ಲದ್ದರಿಂದ ಆತ ವೈದ್ಯರುಗಳ ಶ್ರಮದಿಂದ ಬದುಕುಳಿದ. ಹೃದಯಾಘಾತದ ಆಘಾತ ಮಾಯವಾಗುವ ಮೊದಲೆ ಅದ್ಯಾರೋ ಕೋರ್ಟಿನಲ್ಲಿ ಅವನ ವಿರುದ್ಧ ಕೇಸು ಹಾಕಿದರು. ಹೀಗೆ ಸುಖವಾಗಿದ್ದ ಸಂಸಾರದಲ್ಲಿ ಒಂದರ ಹಿಂದೆ ಒಂದಂತೆ ಆಘಾತಗಳು ಎರಗತೊಡಗಿದವು. ಆವಾಗ ಸಲಹೆಕಾರರು ಆಕಳೊಂದನ್ನು ಸಾಕು ಗೋಪೂಜೆಯಿಂದ ಎಲ್ಲಪರಿಹಾರವಾಗುತ್ತದೆ ಎಂದರು. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಆತನಿಗೆ ಅದು ಸತ್ಯ ಅಂತ ಅನ್ನಿಸತೊಡಗಿತು. ಕಾರಣ ಪಕ್ಕದ ಮನೆಯಲ್ಲಿ ಉತ್ತಮ ಆಕಳು ಕರುಗಳೊಡನೆ ಕೊಟ್ಟಿಗೆ ತುಂಬಿ ತುಳುಕಾಡುತ್ತಿತ್ತು. ಅವರ ಮನೆಯಲ್ಲಿ ಹೃದಯಾಘಾತವೂ ಇರಲಿಲ್ಲ, ಕೋರ್ಟು ಕಛೇರಿಯ ತರ್ಲೆ ತಾಪತ್ರಯವೂ ಇರಲಿಲ್ಲ. ಆದಾಯದ ಐವತ್ತು ಭಾಗವನ್ನು ಅವರು ಗೋಸೇವೆಗೆ ಖರ್ಚು ಮಾಡುತ್ತಿದ್ದರು. ಸರಿ ಮಾರನೇ ದಿನ ಈತನೂ ಒಂದು ಆಕಳನ್ನು ಖರೀದಿಸಿದ. ನಿತ್ಯ ಮೈ ತೊಳೆಯುವುದು, ದಾಣಿ ಇಡುವುದು ಮುಂತಾದ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಅದೇನು ಕಾಕತಾಳೀಯವೋ ಸತ್ಯವೋ ಹೃದಯ ಸರಿಯಾಯಿತು. ಕೋರ್ಟು ಕೇಸು ದಿಡೀರನೆ ಖುಲಾಸ್. ಆಕಳು ತಂದ ಎರಡು ತಿಂಗಳೊಳಗೆ ಎಲ್ಲಾ ಮಾಮೂಲಿಯಂತೆ ನಡೆಯತೊಡಗಿತು( ಇದು ಕತೆ . ಕೋರ್ಟು ಹೃದಯದ ತೊಂದರೆಯಿದ್ದವರೆಲ್ಲಾ ಆಕಳು ಸಾಕಲು ಶುರುಮಾಡಿ ಪರಿಹಾರ ಕಾಣದಿದ್ದರೆ ನಾನು ಜವಾಬ್ದಾರನಲ್ಲ..........!) ಈಗ ಆತನಿಗೆ ಮಿದುಳು ಕೆಲಸಮಾಡಲು ಶುರುಮಾಡಿತು. ಈ ಆಕಳಿಗೆ ಇಷ್ಟೆಲ್ಲಾ ಖರ್ಚು ಮಾಡಿ ಸುಮ್ಮನೆ ಹಣವನ್ನು ವ್ಯರ್ಥ ಮಾಡುತ್ತಿದ್ದೇನಲ್ಲ ಅಂತ ಅನ್ನಿಸತೊಡಗಿತು. ಸರಿ ಆತ ಮಾರನೇದಿನ ಆಕಳುಹಾಗೂ ಕರುವನ್ನು ಮಾರಲು ತೀರ್ಮಾನಿಸಿದ. ಆದರೆ ಕೊಳ್ಳಲು ಸುಲಭವಾಗಿ ಯಾರೂ ಮುಂದೆಬರಲಿಲ್ಲ. ಆವಾಗ ಆತ ತಾನು ಸಮಸ್ಯೆಯಲ್ಲಿ ಸಿಕ್ಕಿದ್ದು ಹಾಗೂ ಆಕಳು ಮನೆಗೆ ಬಂದನಂತರ ಸಮಸ್ಯೆಗಳು ಬಾಳೆಹಣ್ಣು ಸುಲಿದಂತೆ ಮಾಯವಾದದ್ದು ಮುಂತಾದವುಗಳನ್ನು ಎಳೆ ಎಳೆಯಾಗಿ ಜನರ ಬಳಿ ಹೇಳತೊಡಗಿದ. ಕೆಲದಿನದಲ್ಲಿ ಊರಿನ ಮತ್ತೊಬ್ಬರಿಗೆ ಹೃದಯಾಘಾತವಾಯಿತು . ಮಾರನೆ ದಿವಸ ಈತನ ಆಕಳು ದುಪ್ಪಟ್ಟು ದರಕ್ಕೆ ಅವರಿಗೆ ಮಾರಾಟವಾಯಿತು.
ಈಗ ನಿಮಗೆ ಅರ್ಥವಾಗಿರಬೇಕು ಮಿದುಳಿನ ಕೆಲಸವೆಂದರೆ ಯಾವುದು ಅಂತ. ಇದೇ ಕತೆಯಲ್ಲಿ ಹೃದಯ ಕೆಲಸದ ಉದಾಹರಣೆ ಇದೆ, ಆದಾಯದ ಐವತ್ತು ಭಾಗ ಆಕಳು ಕೊಟ್ಟಿಗೆಗೆ ವ್ಯಯಿಸುತ್ತಿದ್ದಾನಲ್ಲ ಆತನದು. ಅವನಿಗೆ ಆಯ ವ್ಯಯ ದ ಬಗ್ಗೆ ಗಮನವಿರುವುದಿಲ್ಲ , ಹೃದಯಪೂರ್ವಕವಾಗಿ ಆಕಳನ್ನು ಸಾಕುತ್ತಿರುತ್ತಾನೆ
ಇಂತಹ ಸಣ್ಣ ಸಣ್ಣ ಕತೆಗಳ ಮೂಲಕ ಓಶೋ ಇಷ್ಟವಾಗುತ್ತಾರೆ .
ಯಾರಾದರೂ ನಿಮ್ಮ ಬಳಿ ನಿಮ್ಮ ಕೆಲಸಕ್ಕೆ "ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ " ಎಂದು ಹೇಳಿದ ನಂತರ ಒಂದು ಕ್ಷಣ ಯೋಚಿಸಿ ಅದು ಖಂಡಿತ ಅವರ ಮಿದುಳಿನ ಕೆಲಸ. ನಿಮ್ಮನ್ನು ಹೀಗೆ ಅಭಿನಂದಿಸುವುದರಿಂದ ತನಗೆ ಲಾಭವಿದೆ ಎಂದು ಅವರ ಮಿದುಳು ಲೆಕ್ಕಾಚಾರ ಹಾಕಿ ಈ ಮಾತನ್ನು ಹೇಳಿಸುತ್ತದೆ. ನಿಜವಾಗಿಯೂ ಅವರ ಹೃದಯ ನಿಮ್ಮ ಕೆಲಸಕ್ಕೆ ತುಂಬಿಬಂದಿದ್ದರೆ ಅವರು ನಿಮ್ಮ ನ್ನು ಭೇಟಿ ಮಾಡಿದ ತಕ್ಷಣ ಅವರ ಮುಖ ಅವರ ಕಣ್ಣುಗಳು ಅಭಿನಂದನೆಗಳನ್ನು ಸಲ್ಲಿಸಿಬಿಟ್ಟಿರುತ್ತದೆ. ಹೃದಯಪೂರ್ವಕ ಅಭಿನಂದನೆಗಳನ್ನು ಬರೆದು ಸಲ್ಲಿಸಬಹುದು , ಭೇಟಿಯಾದಾಗ ಹೇಳುವ ಅವಶ್ಯಕತೆ ಇರುವುದಿಲ್ಲ. ಇದೆ ಅಂತಾದರೆ ಅದು ಪಕ್ಕಾ ಮೆದುಳಿನ ಕೆಲಸ. ಇಂತಹ ನೂರಾರು ಹೊಸ ಹೊಸ ಯೋಚನೆಗಳು ವಿಷಯಗಳು ಒಶೋವಿನ ಬುಟ್ಟಿಯಲ್ಲಿವೆ. ಸ್ವಲ್ಪ ಬಸಿದುಕೊಂಡರೆ ಏಕಾಂಗಿಯಾದಾಗ ಆಸ್ವಾದಿಸಬಹುದು.
ಪ್ರೀತಿ ಪ್ರೇಮ ದೇವರು ಧರ್ಮ ಮುಂತಾದ ಶಭ್ದಗಳು ಹೃದಯಕ್ಕೆ ಸಂಬಂಧಪಟ್ಟಿದ್ದು. ಹಣ, ಲೋಭ ಲಾಭ,ಮೋಹ ಮದ ಮತ್ಸರ ಮುಂತಾದವುಗಳೆಲ್ಲಾ ಮಿದುಳಿಗೆ ಸಂಬಂಧಪಟ್ಟಿದ್ದು. ಹೃದ್ಯಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಸುಖ ಸ್ವಲ್ಪ ಹೆಚ್ಚು ಮೆದುಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸುಖ ಸ್ವಲ್ಪ ಕಷ್ಟ.
ಓಶೋ ಹೇಳಿದ್ದು ಅದನ್ನೆ ಅನುಭವಕ್ಕೆ ಬಂದರೆ ನಂಬು ಇಲ್ಲದಿದ್ದರೆ ಬಿಟ್ಟಾಕು.... ...... ಬಿಟ್ಟಾಕು ....ಬಿಟ್ಟಾಕು

Tuesday, April 6, 2010

ಚಾರ್ಲಿ ಚಾಪ್ಲಿನ್ ಹೇಳಿದ ಮೂರು ಮಾತುಗಳು.


"ಚಾರ್ಲಿಚಾಪ್ಲಿನ್ " ಈ ಹೆಸರು ಕೇಳಿದಕೂಡಲೇ ನಗೆ ಉಕ್ಕದವರಿಲ್ಲ. ಕಪ್ಪುಬಿಳುಪು ಕಾಲದಲ್ಲಿ ತನ್ನ ಚಿತ್ರ ವಿಚಿತ್ರ ಹಾವಭಾವಗಳಿಂದ ಆತ ಪ್ರೇಕ್ಷಕರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದ. ಹಾಗೆಯೇ ಮತ್ತೊಂದು ಮುಖದಲ್ಲಿ ಕಣ್ಣಿರು ಹರಿಸುತ್ತಿದ್ದ. ಆತನ ವೈಯಕ್ತಿಕ ಜೀವನ ದು:ಖದಾಯಕವಾಗಿತ್ತು. ಹಾಗಾಗಿ ಅದರಿಂದ ಆತ ಹೊರಬರಲು ಆತನಿಗೆ ನಗು ಅನಿವಾರ್ಯವಾಗಿತ್ತು. ಆತ ತನ್ನ ಚಲನಚಿತ್ರಗಳಲ್ಲಿ ಜೀವನಾಣುಭವವನ್ನೇ ನೀಡುತ್ತಿದ್ದುದರಿಂದ ಅದು ಜನರ ಅಚ್ಚುಮೆಚ್ಚಾಗುತ್ತಿತು. ಇರಲಿ ಅದು ಆತನ ಕತೆಯಾಯಿತು ಇಲ್ಲಿ ಆತ ಹೇಳಿದ ಸಾರ್ವಕಾಲಿಕ ಸತ್ಯವಾದ ಮೂರು ಮಾತುಗಳು ಯಾವುದು ಅಂತ ನೋಡೋಣ.
"ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ನಮ್ಮನ್ನು ಕಾಡುವ ಸಮಸ್ಯೆಯೂ ಸೇರಿದಂತೆ.""ಅತೀ ವ್ಯರ್ಥವಾದ ದಿನವೆಂದರೆ, ದಿನಪೂರ್ತಿ ಒಂದೇ ಒಂದು ಸಲವೂ ನಗದಿರುವುದು"ಇವೆರಡು ಒಂದು ತೂಕದ ವಾಕ್ಯಗಳಾದರೆ ಚಾರ್ಲಿ ಹೇಳಿದ ಮೂರನೇ ವಾಕ್ಯ ಆತನ ಜೀವನವನ್ನು ನಮ್ಮೆದುರು ತೆರೆದುಕೊಳ್ಳುತ್ತದೆ."ನನಗೆ ಮಳೆಯಲ್ಲಿ ಓಡಾಡುವುದೆಂದರೆ ತುಂಬಾ ಇಷ್ಟ, ಕಾರಣ "ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲ".ಅಂಥಹ ಮೇರು ನಟ ಮತ್ತೆ ಹುಟ್ಟಲಿಲ್ಲ, ಹುಟ್ಟಿ ಬರಲಾರ ಅನ್ನಿಸುತ್ತದೆ. ಹಾಗಾಗಿ ಜಗತ್ತಿಗೊಬ್ಬನೆ ಚಾರ್ಲಿ ಇದ್ದ .

Sunday, March 28, 2010

ಶಿಲೆಗಳ ನಡುವಿನ ಜಲಪಾತ



ಜಲಪಾತಗಳ ಸೊಬಗನ್ನು ಬಲ್ಲವರೇ ಬಲ್ಲರು. ಎತ್ತರದಿಂದ ದುಮ್ಮಿಕ್ಕುವ ಬೆಳ್ಳಿನೊರೆಯ ಆನಂದಿಸದ ಮನುಷ್ಯರಿಲ್ಲ. ಮಲೆನಾಡು ಜಲಪಾತದ ಆಗರ. ಅಂತಹ ಒಂದು ಅದ್ಭುತ ಜಲಪಾತ ಹಿಡ್ಲುಮನೆ ಜಲಪಾತ"
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಪರ್ವತದಿಂದ ಹೊರಡುವ ನೀರು ಎರಡು ಕವಲಾಗಿ ಒಂದೆಡೆ "ಅರಿಶನಗುಂಡಿ" ಎಂಬ ಜಲಪಾತವನ್ನು ನಿರ್ಮಿಸಿದರೆ ಇನ್ನೊಂದೆಡೆ "ಹಿಡ್ಲುಮನೆ" ಎಂಬ ಜಲಪಾತವನ್ನು ನಿರ್ಮಿಸಿದೆ. ಅರಿಶಿನಗುಂಡಿ ತಾಕತ್ತಿನ ಜನರಿಗೆ ಮಾತ್ರಾ ಸೀಮಿತ. ಆದ್ರೆ ಹಿಡ್ಲುಮನೆ ಮಾತ್ರಾ ಹಾಗಲ್ಲ ಸಾಮಾನ್ಯ ಜನರೆಲ್ಲ ಅನುಭವಿಸಬಹುದು. ಹೊಸನಗರ-ಕೊಲ್ಲೂರು ದಾರಿಯಲ್ಲಿ ಸಿಗುವ ನಿಟ್ಟೂರಿಗೆ ಬಂದು ಅಲ್ಲಿಂದ ವಾಹನ(ಒಂದು ಜೀಪಿಗೆ ೫೦೦ ರೂ ಬಾಡಿಗೆ) ಮುಖಾಂತರ ಎಂಟು ಕಿಲೋಮೀಟರ್ ದೂರ ಕ್ರಮಿಸಿದರೆ ಹಿಡ್ಲುಮನೆ ಜಲಪಾತ ಬುಡದ ವರೆಗೂ ತಲುಪಬಹುದು. ಆನಂತರ ಬತ್ತ-ಕಬ್ಬಿನ ಗದ್ದೆಯ ದಾರಿಯಲ್ಲಿ ಅರ್ದ ಕಿಲೋಮೀಟರ್ ಸಾಗಿದರೆ "ಹಿಡ್ಲುಮನೆ" ಜಲಪಾತದ ಬುಡ ಸಿಗುತ್ತದೆ.
ಸಾಮಾನ್ಯವಾಗಿ ಜಲಪಾತಗಳೆಂದರೆ ಕಡಿದಾದ ಜಾಗದಿಂದ ನೇರವಾಗಿ ಬೀಳುತ್ತದೆ. ಆದರೆ ಓರೆಯಾಗಿ ಬೀಳುವುದು ಹಿಡ್ಲುಮನೆ ಜಲಪಾತದ ವೈಶಿಷ್ಟ್ಯ. ಜಲಪಾತ ನೋಡುವವರು ನೀರುಬೀಳುವ ಜಾಗದಲ್ಲಿಯೇ ಏರುತ್ತಾ ಸಾಗಬೇಕು. ಹಾಗಾಗಿ ಭರ್ಜರಿ ಮಳೆಗಾಳದ ದಿನಗಳಾದ ಜೂನ್ ನಿಂದ ಸಪ್ಟೆಂಬರ್ ತಿಂಗಳುಗಳಲ್ಲಿ ಈ ಜಲಪಾತ ನೋಡಲು ಕಷ್ಟಕರ. ಆನಂತರದ ದಿನಗಳಲ್ಲಿ ಜಲಪಾತದ ದಾರಿಯಲ್ಲಿ ಸಾಗುತ್ತಾ ಹಂತಹಂತವಾಗಿ ಏಳು ಮಜಲುಗಳಲ್ಲಿ ಹರಿಯುವ ಜಲಪಾತದ ಸೊಬಗನ್ನು ಅನುಭವಿಸಬಹುದು.
ನಡುಬೇಸಿಗೆಯ ದಿನಗಳಲ್ಲೂ ಸೂರ್ಯನ ಕಿರಣವನ್ನು ನೆಲಕ್ಕೆ ಬಿಟ್ಟುಕೊಡದ ಬೃಹತ್ ಮರಗಳ ಸಾಲುಗಳನ್ನು ಹಾಗೂ ಪಶ್ಚಿಮಘಟ್ಟಗಳ ಸೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು.
ಒಂದು ಕಿಲೋಮೀಟರ್ ದೂರದವರೆಗೂ ಕಪ್ಪುಶಿಲೆಗಳ ಪದರುಗಳ ನಡುವೆ ನಾಟ್ಯವಾಡುತ್ತಾ ಬೆಳ್ಳಿನೊರೆಯಂತೆ ಹರಿಯುವ ನೀರು ಎಂತಹವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಪ್ರಕೃತಿಪ್ರಿಯರಿಗೆ ಇಷ್ಟವಾಗುತ್ತದೆ ಈ ಶಿಲಾಪಾತದಲ್ಲಿನ ಜಲಪಾತ. ಮಾರ್ಚಿನ ನಂತರ ನೀರಿನ ಓಘ ಕಡಿಮೆಯಾದರೂ ಕಪ್ಪುಕಲ್ಲುಗಳ,ಹಸಿರು ಕಾಡುಗಳ ಸೊಬಗನ್ನು ಸವಿಯಬಹುದು.

Friday, March 12, 2010

ಮಾಹಿತಿ ಇದ್ದರೆ ಚೆನ್ನ




ನೀವು ನಮ್ಮ ಮನೆಗೆ ಬಂದಿಲ್ಲದಿದ್ದರೆ ಈ ಗೋಡೆಯ ಪೋಟೋ ನೋಡಿರಲು ಸಾದ್ಯವಿಲ್ಲ. ಅಪ್ಪ-ಅಮ್ಮರ ಐದು ಮಕ್ಕಳ ಮತ್ತು ಮೊಮ್ಮಕ್ಕಳ ಕಾರ್ಯ ಕಟ್ಲೆಯ ವಿವರದ ಬರಹವಿದು. ಬಂದ ಹೊಸಬರೆಲ್ಲರೂ "ವಾವ್’ ಅಂತಾರಪ್ಪ. ಹಾಗಾಗಿ ಬ್ಲಾಗ್ ಗೆ ಹಾಕಿದೆ. ವಯಸ್ಸಾದಂತೆ ಮದುವೆಯ ಆನಿವರ್ಸರಿ ಮರೆತು ಹೆಂಡರ ಕೈಲಿ ಉಗಿಸಿಕೊಳ್ಳುವುದಕ್ಕಿಂತ ಊಟ ಮಾಡುವಾಗ ತಿಂಡಿ ತಿನ್ನುವಾಗ ಹೀಗೊಂಡು ಮಾಹಿತಿ ಇದ್ದರೆ ಚೆನ್ನ ಅಂತ ಬರೆಯಲಾಗಿದೆ. ಈಗ ಮೊಮ್ಮಕ್ಕಳ ಕಾರ್ಯಕ್ಕೆ ಪಕ್ಕದ ಗೊಡೆ ಮೀಸಲಿರಿಸಲಾಗಿದೆ.

Tuesday, March 9, 2010

ಬಿಟ್ಟೆನೆಂದರೂ "ಬಿಡದೀ" ಮಾಯೆ

ಹೂವು ಅರಳುತ್ತದೆ ಪರಾಗ ರೇಣು ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ಅದು ವಂಶಾಭಿವೃದ್ಧಿಗಾಗಿ, ಜೇನು ದುಂಬಿಗಳು ಝೇಂಕಾರದೊಂದಿಗೆ ಹೂವಿನ ಬಳಿ ತಮ್ಮ ಆಹಾರಕ್ಕಾಗಿ ಕುಳಿತು ಪರಾಗಸ್ಪರ್ಶ ಮಾಡುತ್ತವೆ. ಆಗ ಅಲ್ಲೊಂದು ಸಂಭ್ರಮ ಸಂತಸ ಏರ್ಪಡುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸೃಷ್ಟಿ ಕ್ರಿಯೆಯಂತೂ ನಡದೇ ಬಿಡುತ್ತದೆ. ಹೂವು ಕಾಯಾಗುವ ಎಲ್ಲ ಕಾರ್ಯಗಳಿಗೂ ಅಲ್ಲಿಂದಲೇ ಪ್ರಾರಂಭ. ಇಷ್ಟಾದರೂ ಅದು ಕಾಮ ಪ್ರೇಮ ಅಂತ ನಮಗೆ ಅನ್ನಿಸುವುದಿಲ್ಲ. ಡಾಣಾ ಡಂಗುರವಾಗಿ ನಡೆಯುವ ಈ ಕ್ರಿಯೆ ಅತ್ಯಂತ ಸಹಜ. ಅದರ ಮೇಲೆ ಕವನ ಕಟ್ಟಬಹುದು ಕಾವ್ಯ ಹುಟ್ಟ ಬಹುದು.
ಜೇನಿನ ರಾಣಿ ಗಂಡು ನೊಣದೊಂದಿಗೆ ಮಿಲನಕ್ಕಾಗಿ ಮೇಲಕ್ಕೇರುತ್ತದೆ. ಸಂಭ್ರಮಿಸುತ್ತದೆ ಗಂಡು ನೊಣ ಮಿಲನದ ನಂತರ ಸಾಯುತ್ತದೆ. ರಾಣಿ ಗೂಡಿಗೆ ಬಂದು ಕೆಲದಿನಗಳ ನಂತರ ಮೊಟ್ಟೆಯಿಡಲು ಆರಂಭಿಸುತ್ತದೆ. ಆದರೆ ಆರಂಭದ ದಿನಗಳ ಮೇಲೆ ಸಾಕಷ್ಟು ಕಾವ್ಯ ಹುಟ್ಟುತ್ತದೆ. ಅದು ಅಸಹ್ಯವಲ್ಲ. ಅಶ್ಲೀಲವಲ್ಲ, ಕಾಮದ ವಾಸನೆಯ ಲವಲೇಶವೂ ಅಲ್ಲಿಲ್ಲ . ಅದು ಅತೀವ ಸಹಜ.
ಆರಾಮವಾಗಿ ಹಾಲುಕೊಡುತಿದ್ದ ಆಕಳು ಕೊಟ್ಟಿಗೆಯಲ್ಲಿ ಕೂಗತೊಡಗುತ್ತದೆ. "ದನ ಹೀಟಿಗೆ ಬೈಂದು ಕಾಣ್ತು" ಮನೆಯಾತ ಸ್ವಲ್ಪ ಲಘು ದನಿಯಲ್ಲಿ ಹೇಳುತ್ತಾನೆ. ಹೀಟು ಎಂದರೆ ಆಕಳು ಹೋರಿಯನ್ನು ಬಯಸುತ್ತಿದೆ ಎಂಬ ಅರ್ಥವಾದ್ದರಿಂದ ಸಣ್ಣ ಮಕ್ಕಳಿರುವ ಮನೆಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ ಎಂಬರ್ಥದಲ್ಲಿ ಅಲ್ಲೇ ಸಣ್ಣಮಟ್ಟದ ತಗ್ಗಿದ ದನಿ. ಆನಂತರ ಒಂಥರಾ ಮುಗುಳುನಗೆಯ ಕಾರ್ಯದಲ್ಲಿ ಆಕಳಿಗೆ ಹೋರಿಯ ಬಳಿ ಸೇರಿಸುವ ಕೆಲಸ ನಡೆಯುತ್ತದೆ.
ದಾರಿ ಬದಿಯಲ್ಲಿ ಶ್ವಾನ ತಿಂಗಳಲ್ಲಿ ನಾಯಿಗಳು ಮಿಲನಕ್ಕೆ ತೊಡಗಿಕೊಂಡಾಗಲೂ ದಾರಿ ಹೋಕರು ಸ್ವಲ್ಪ ಅದೇಕೋ ನಾಚಿಕೊಳ್ಳುತ್ತಾರೆ. ಆದರೂ ಅದು ಒಂಥರಾ ಪ್ರಕೃತಿ ಸಹಜ ಎಂಬ ಭಾವ ತಳೆದು ದಾಟಿಹೋಗುತ್ತಾರೆ. ಆದರೂ ಇಲ್ಲೂ ಕೂಡ ಕೇವಲ ಕಾಮದ್ದೇ ವಾಸನೆ ಇಲ್ಲ ಗುಸು ಗುಸು ಸುದ್ಧಿಯಿಲ್ಲ. ಸಾರ್ವಜನಿಕವಾಗಿ ಹೀಗೆ ಹೀಗೆ ಅಂತ ಹೇಳಬಹುದು. ಅದೇನು ತೀರಾ ಅಶ್ಲೀಲವಲ್ಲ ಬಿಡಿ.
ಗಿಡ ಮರಗಳ ಕ್ರಿಮಿ ಕೀಟಗಳ ಮಟ್ಟ ಮನುಷ್ಯನಿಗೆ ಕಾವ್ಯವಾದರೆ, ಪ್ರಾಣಿಗಳ ಹಂತದ ಸೃಷ್ಟಿಕ್ರಿಯೆ ಸ್ವಲ್ಪ ಕಸಿವಿಸಿ. ಇನ್ನು ಮನುಷ್ಯನದ್ದೇ ಆದರೆ ಮುಗಿದೇ ಹೋಯಿತು. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಕ್ರಿಯೆ. ಹಾಗೆ ಹೀಗೆ ಅದಕ್ಕೊಂದು ಚೌಕಟ್ಟು ಅದನ್ನ ಮೀರಿದರೆ ಗಾಸಿಪ್ಪು , ಗಲಾಟೆ ಮಾನ,ಮರ್ಯಾದೆ ಅಯ್ಯಯ್ಯೋ... ಹೀಗೆ ಸಾವಿರಾರು. ಇರಲಿ "ಆಲ್ ಇಸ್ ವೆಲ್"., ಮುಂದೆ ನೋಡೋಣ.
ಪ್ರಕೃತಿ ವಂಶಾಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಸಹಜ ಮನುಷ್ಯರೆಲ್ಲರೂ ಪ್ರಕೃತಿಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಎಲ್ಲರಂತೆ ಅಲ್ಲ ಎಂದು ತೊರಿಸಿಕೊಳ್ಳಬೇಕು ಎಂದು ಹೊರಟ ಪ್ರತೀ ಮನುಷ್ಯನ ಮೊದಲ ಆದ್ಯತೆ ಈ ಪ್ರಕೃತಿ ಸಹಜವಾಗಿದ್ದಕ್ಕೆ ವಿರೋಧವಾಗಿ ಹೊರಡುವುದು. ಎಲ್ಲ ಮನುಷ್ಯರಂತೆ ನಾನಲ್ಲ ಎಂದು ತೊರಿಸಿಕೊಳ್ಳಲು ಹೊರನೋಟಕ್ಕೆ ಸುಲಭದಾರಿ ಈ ಕಾಮ. ಕಾಮಮುಕ್ತ ಎಂದು ತೊರಿಸಿಕೊಳ್ಳಲೊಂದು ಕಾವಿ. ದಿನವಿಡಿ ಕಾಮದ ಯೋಚನೆಯಿಂದ ದೂರವಿರಲು ಅನುಸರಿಸುವ ಮಾರ್ಗ ನೂರಾರು. ಬಹುಪಾಲು ದಿನದ ಸಮಯ ಇದಕ್ಕೇ ವ್ಯರ್ಥ. ನಿಯಮಿತ ಆಹಾರ ತುಳಸೀ ಮಣಿ ಉಪ್ಪುಕಾರ ಊಹ್ಞೂ ... ಅಪ್ಪಾ ಪಾಪ ಅನ್ನದೇ ವಿಧಿಯಿಲ್ಲ. ಪ್ರಕೃತಿಯೋ ನಿಮಿಷ ನಿಮಿಷಕ್ಕೂ ತನ್ನ ನಿಯಮದಿಂದ ವಿರುದ್ಧ ಹೊರಟ ಮನುಷ್ಯನನ್ನು ಮಟ್ಟ ಹಾಕಲು ಹೊಸ ಹೊಸ ವಿಧಾನ ಹುಡುಕುತ್ತಿರುತ್ತದೆ. ನಿಜದಲ್ಲಿ ಆಗದ್ದನ್ನು ಸ್ವಪ್ನದಲ್ಲಾದರೂ ಆಗಿಸಿಬಿಡುತ್ತದೆ. ಹೀಗೆ ನಿಜ ಸ್ವಪ್ನ ನಿಜ ಸ್ವಪ್ನ ಎಂದು ಹೊಳ್ಯಾಡಿ ಹೊರಳಾಡಿ ಯಾವುದೋ ದುರ್ಬಲ ಸಂದರ್ಭದಲ್ಲಿ ಕೇಳಿಗೆ ಎಳೆದೇ ಬಿಡುತ್ತದೆ. ಆವಾಗ ಇದಕ್ಕೇ ಕಾಯುತ್ತಿರುವ ಮಿಕ್ಕ ಮನುಷ್ಯರದ್ದು ಹೊಯ್ಲಾಲೆಯೋ ಹೊಯ್ಲಾಲೆ.
ಹಿಂದೆಯೂ ನೂರಾರು ಸನ್ಯಾಸಿಗಳು ಹತ್ತಾರು ವರ್ಷ ಹಠ ಹೊತ್ತು ಕಾಮದಿಂದ ದೂರವಿರಲಾರದೇ ಎನೇನೊ ಮಾಡಿದ್ದಿದೆ. ಆದರೆ ಆವಾಗ ಅವರ ಅದೃಷ್ಟ "ಹಿಡನ್ ಕ್ಯಾಮೆರಾ" ಇರದ್ದರಿಂದ ಹತ್ತಿರದ ಒಂದೆರಡು ಜನರಿಗಷ್ಟೇ ತಿಳಿದು ಮುಚ್ಚಿ ಮಾರನೇ ದಿನದಿಂದ ಮತ್ತೇ ಆಶೀರ್ವಚನದಲ್ಲಿ ಜೀವನ ಪಾವನವಾಗಿದೆ. ಆದರೆ ಕಾಲ ಈಗಿನದು ಹಾಗಲ್ಲ ಏನೇನೋ ಮಾಡಿಬಿಡುತ್ತಾರೆ ತಂತ್ರಜ್ಞಾನ ಬಳಸಿ. ದುರಂತ ಎಂದರೆ ಬಹಳಷ್ಟು ತಂತ್ರಜ್ಞಾನ ಬಳಕೆಯಾಗುವುದು ಇಂತಹ ಬೇಡದ ಕೆಲಸಗಳಿಗೆ. ಇರಲಿ ಅವೆಲ್ಲಾ ಆಗುವುದೇ ಹೀಗೆ ಆದರೆ ನಾವು ಗಮನಿಸಬೇಕಾದ್ದು ಬೇರೆಯೇ ಇದೆ.
ಕಾಮವನ್ನು ಗೆಲ್ಲಲು ಹೊರಟ ಸನ್ಯಾಸಿ ಎಲ್ಲೋ ಒಂಚೂರು ಯಡವಿದ್ದಿರಬಹುದು,ಆದರೆ ತಾನು ಎಲ್ಲರಿಗಿಂತ ಭಿನ್ನ ಎಂದು ತೊರಿಸಿಕೊಡಲು ಹಠಕ್ಕೆ ಇಳಿದು ಜಪ ತಪ ಅಂತ ಮುಳುಗಿ ಧ್ಯಾನ,ಪೀಠ ಎಂದು ಸೃಷ್ಟಿಸಿಕೊಂಡು ನೀತಿ ನಿಯಮ ಅಂತ ಪಾಲಿಸಿಕೊಂಡು ನೂರಾರು ಶ್ರೀಮಂತರಿಗೆ ಸಮಾಧಾನ ಕೊಟ್ಟು ಅವರಿಂದ ಹಣ ಪಡೆದು ಒಂದಿಷ್ಟು ವಿದ್ಯಾದಾನ ಮತ್ತೊಂದಿಷ್ಟು ಆರೋಗ್ಯ ಸೇವೆ ಮಗದೊಂದು ಗೋಪಾಲನೆ ಹೀಗೆ ಎನೇನೋ ಒಬ್ಬ ಸಹಜ ಮನುಷ್ಯ ಮಾಡಲಾಗದ್ದನ್ನು ಸಾಧಿಸಿರುತ್ತಾನಲ್ಲ ಅದರತ್ತ ನಮ್ಮ ನೋಟ ಹರಿಯಬೇಕು. ಅಲ್ಲಿ ಸಾರ್ಥಕತೆ ಕಾಣಬೇಕು. ನಾವು ನೀವೂ ಕೇವಲ ಟೀಕೆ ಮಾಡುತ್ತಾ "ಅಯ್ಯೋ ಈ ಸನ್ಯಾಸಿಗಳ ಕತೆ ಇಷ್ಟೆಯಾ" ಅಂತ ಹೇಳುತ್ತಾ ಕಳೆದುಹೋಗಬಹುದು ಆದರೆ ಈ ಸಮಯದಲ್ಲೂ ಮತೋರ್ವ ವ್ಯಕ್ತಿ ಕಾಮವನ್ನು ಜಯಿಸಲು ಒಳ್ಳೆಯ ಕೆಲಸದ ದಾರಿ ಹಿಡಿದಿರುತ್ತಾನೆ ಎಂಬುದು ಸತ್ಯ.
ಏನಾದರೂ ಒಂದಿಷ್ಟು ಒಳ್ಳೆಯ ಸಾರ್ವಜನಿಕ ಕೆಲಸಗಳು ಇಲ್ಲಿಯವರೆಗೆ ಆಗಿದ್ದಿದ್ದರೆ ತನ್ನಷ್ಟಕೆ ತನ್ನ ಹೆಂಡತಿ ಮಕ್ಕಳೊಡನೆ ಬದುಕಿ ಕೊಂಡ ಬ್ಯಾಂಕ್ ಬ್ಯಾಲೆನ್ಸ ಏರಿಸಿಕೊಂಡ ಮನುಷ್ಯನಿಂದಲ್ಲ. ಏನಾದರೂ ಮಾಡಬೇಕೆಂದು ದಾರಿ ಹಿಡಿದ ಜನರಿಂದಲೇ ಸ್ವಲ್ಪ ಮಟ್ಟಿಗೆ ಆಗಿರುವುದು. ಹಾಗೆಲ್ಲ ಸಾವಿರಾರು ಜನರ ನಾಯಕತ್ವ ವಹಿಸಿಕೊಂಡಾಗ ಎಲ್ಲೋ ಸ್ವಲ್ಪ ಯಡವಟ್ಟು ಆಗುತ್ತದೆ ಎಂದು ಪಾಮರರು ಮಾತನಾಡಿಕೊಳ್ಳುತ್ತಾರೆ. ಅದು ಕಾಮಕ್ಕೆ ಸಂಬಂದಿಸಿದ್ದಾರೆ ಸಿಕ್ಕಾಪಟ್ಟೆ ವಿಷಯ. ಆದರೆ ವಾಸ್ತವ ವೆಂದರೆ ಕಾಮದ್ದು ಪ್ರಕೃತಿ ಸಹಜ ವಿಷಯ ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ. ಅತ್ಯಾಚಾರ ಕೊಲೆ ಮುಂತಾದವು ಮಾನವೀಯತೆ ಅಲ್ಲ. ಸೃಷ್ಟಿ ಕ್ರಿಯೆ ಸೃಷ್ಟಿಯಾಗಲೀ ಬಿಡಲಿ ಸಂಭ್ರಮದ್ದು. ಅದರ ನಂತರ ಮನುಷ್ಯ ನಿರುಂಬಳನಾಗುತ್ತಾನೆ. ತಲೆಯೊಳಗೆ ಕೊರೆಯುತ್ತಿದ ಹುಳ ಆಚೆ ಬಂದಿರುತ್ತದೆ. ಹೊಸ ಹೊಸ ಕೆಲಸ ಗಳು ಹೊಸ ಹೊಸ ಯೋಚನೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಅಲ್ಲಿ ತೊಡಗಿ ಆಚೆ ಬಂದವ ಯಾವ ಕೆಲಸದಲ್ಲಿ ತೊಡಗುತ್ತಾನೆ ಮತ್ತೆಷ್ಟು ಮೇಲಕ್ಕೇರುತ್ತಾನೆ ಎಂಬುದು ಬಹಳ ಮುಖ್ಯ. ಹಾಗೆ ವಿವಾದಕ್ಕೆ ಸಿಕ್ಕಿಕೊಂಡವರು ತಮ್ಮನ್ನು ಸಮರ್ಥಿಸಿಕೊಳ್ಳಲು ಹೆಣಗಾಡತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟರೆ ಆ ಮನುಷ್ಯನಿಂದ ಹೊರಡಬಹುದಾಗಿದ್ದ ಅದ್ಬುತ ವಿಷಯ ವಿಚಾರಗಳು ಕಾಮದ ಗುಂಡಿಯೊಳಗೆ ಹೂತು ಹೋಗಿಬಿಡುತ್ತವೆ. ಪಾಮರ ಕಳೆದುಕೊಳ್ಳುವುದು ಹೀಗೆ ಪಂಡಿತ ಉಳಿಸಿಕೊಳ್ಳಲಾಗದೆ ಹೋಗುವುದೂ ಹಿಗೆಯೇ. ಇದೇ ಪ್ರಕೃ ತಿಯನ್ನು ಗೆಲ್ಲುತ್ತೇನೆ ಎಂದು ಹೊರಟ ಹುಲುಮಾನವನ್ನು ಪ್ರಕೃತಿಯೇ ಬಡಿದು ಹೈರಾಣ ಮಾಡುವ ಪರಿ.

Tuesday, March 2, 2010

ಬಿಟ್ಟು ಬಿಡಿ ಅವರುಗಳನ್ನ ಅವರ ಪಾಡಿಗೆ

ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ ಬೇರೆ ಬೇರೆ ರೂಪಾಂತರವಾಗಿ ಹೀಗೆ ನಡೆಯುತ್ತಲಿದೆ, ನಡೆಯುತ್ತದೆ. ಅವನ್ನೆಲ್ಲಾ ತಲೆಗೇರಿಸಿಕೊಂಡು ಕುಳಿತರೆ ನಮ್ಮ ಬದುಕು ಬೆಳಕಾಗುವುದಿಲ್ಲ.
ಮಾತೆತ್ತಿದರೆ ನಾವು ಇಪ್ಪತ್ತೊಂದನೇ ಶತಮಾನದ ವಿಷಯ ಎತ್ತಿ ಆಡಲು ಶೂರರು. ಇಂತಹ ವಿಷಯ ಬಂದಾಗ ಸಹಸ್ರಮಾನ ಹಿಂದೆ ಹೋಗಿಬಿಡುತ್ತೇವೆ. ಒಂದೆಡೆ ಆರಾಧಿಸುವ ಜನ ಮತ್ತೊಂದೆಡೆ ವಿರೋಧಿಸುವ ಜನ. ಎರಡೂ ಪ್ರಯೋಜನ ಇಲ್ಲ ಕೇವಲ ನಂಬಿಕೆ ಅಂತ ಮೂರನೆಯವರಾಗಿ ನಿಂತು ನೋಡಿದಾಗ ಅರ್ಥವಾಗುತ್ತದೆ. ಆದರೂ ಇವೆಲ್ಲಾ ನಡೆಯುತ್ತಲೇ ಇರುತ್ತದೆ. ಧರ್ಮಾಂಧತೆ ಎಷ್ಟರ ಮಟ್ಟಿಗೆ ಯಡವಟ್ಟೋ ಬುದ್ಧಿಜೀವಿಗಳೆಂದು ಹಣೆ ಪಟ್ಟಿ ಅಂಟಿಸಿಕೊಂಡ ವಿರೋಧಿಗಳೂ ಅಷ್ಟೇ ಯಡವಟ್ಟು.
ನಮ್ಮ ರಕ್ತಗಳಲ್ಲಿ ಒಂದಿಷ್ಟು ನಂಬಿಕೆಗಳನ್ನು ಅಂಟಿಸಿಕೊಂಡೇ ಜೀವನ ನಮ್ಮದು. ಒಬ್ಬರು ಹಿಂದೂ, ಮತ್ತೊಬ್ಬರು ಮುಸಲ್ಮಾನ ಮಗದೊಬ್ಬರು ಕ್ರಿಶ್ಚಿಯನ್ ಆನಂತರ ಜೈನ್ ಪಾರ್ಸಿ ಹೀಗೆ ಸಾಲು ಸಾಲುಗಳು. ಮತ್ತೊಂದೆಡೆ ಜಾತಿಯಿಲ್ಲ ಜನಿವಾರ ವಿಲ್ಲ ಅವೆಲ್ಲಾ ಕಪೋಲಕಲ್ಪಿತ. ಮನುಷ್ಯ ಎಂಬುದೊಂದೆ ಸತ್ಯ ಎಂದು ಸಾರುವ ಯತ್ನದ ಆ ತುದಿಯಲ್ಲಿರುವ ಜನರು. ಇವರುಗಳು ಧರ್ಮಾಂಧರಿಗಿಂತ ಅಪಾಯ. ನಾನು ಕಂಡಂತೆ ಜಾತಿಯಿಲ್ಲ ಜನಿವಾರ ವಿಲ್ಲ ಎಂದು ಮಧ್ಯ ವಯಸ್ಸಿನ ತನಕ ಹಾರಾಡಿ ನಂತರ ತಮ್ಮ ಮಕ್ಕಳ ಮದುವೆ ಸಮಯ ಬಂದಾಗ ಬ್ಯಾಟರಿ ತೆಗೆದುಕೊಂಡು ಹುಡುಕಿ ತಮ್ಮದೇ ಜಾತಿ ಒಳಪಂಗಡಕ್ಕೆ ಮದುವೆ ಮಾಡಿದ್ದು ಕಂಡಿದ್ದೇನೆ. ಇವರುಗಳು ಸುಮ್ಮನಾದರೆ ಕೆಣಕದಿದ್ದರೆ ತಾಕತ್ತಿಲ್ಲದ ಬಹಳಷ್ಟು ವಿಷಯ ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆದರೆ ಅಸ್ತಿತ್ವದ ವಿಷಯದಲ್ಲಿ ತಗಾದೆ ತೆಗೆಯುವ ಇವರುಗಳು ಕಿತಬಿ ಎಬ್ಬಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ.
ದೇವರಿಲ್ಲ ಅಂತ ನಂಬಿದವರಿಗೂ ದೇವರಿದ್ದಾನೆ ಅಂತ ನಂಬಿದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ನಂಬಿಕೆಗಳಷ್ಟೆ. ಅದರಾಚೆ ಮತ್ತೊಂದು ಇರಬಹುದು. ತರ್ಕದ ತಾಕತ್ತಿನಮೇಲೆ ಜೀವನ ಅಷ್ಟೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆಯವರು ಪಬ್ ಗೆ ನುಗ್ಗಿ ಗಲಾಟೆ ಎಬ್ಬಿಸಿದಾಗ ನಮ್ಮೂರಲ್ಲಿ ಎರಡು ಜನರು ವಾಗ್ವಾದಕ್ಕಿಳಿದಿದರು.
ಒಬ್ಬ: ಮುತಾಲಿಕ್ ಮಾಡಿದ್ದು ಸರಿ , ಬಡ್ಡಿ ಮಕ್ಕಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ.

ಮತೊಬ್ಬ:ಅದು ಹ್ಯಾಗೆ ಸರಿ, ಡ್ಯಾನ್ಸ್ ಮಾಡುವುದು ಪಬ್ ಗೆ ಹೋಗುವುದು ಅವರವರ ವೈಯಕ್ತಿಕ ವಿಷಯ, ಇದಕ್ಕೆ ಅಡ್ಡಿಪಡಿಸಲು ಮುತಾಲಿಕ್ ಯಾರು?
ಒಬ್ಬ: ನಿನ್ನ ತಂಗಿಗೋ ಅಕ್ಕನಿಗೋ ಹೀಗೆ ಎಳೆದುಕೊಂಡು ಹೋಗಿ ಹಾಳು ಮಾಡಿದ್ದರೆ ನಿನಗೆ ಅರ್ಥವಾಗುತ್ತಿತ್ತು , ಮುತಾಲಿಕ್ ಯಾರು ಅಂತ.
ಮತ್ತೊಬ್ಬ: ನೋಡು ನಾವು ಬದುಕುತ್ತಿರುವುದು ತಾಲಿಬಾನ್ ನಲ್ಲೋ ಭಾರತದಲ್ಲೋ? ನನ್ನ ತಂಗಿ ಮಾನಸಿಕವಾಗಿ ಪಬ್ ಗೆ ಹೋಗುವುದನ್ನು ಬಯಸಿದರೆ ಅಡ್ಡ ಗಾಲು ಹಾಕಲು ನಾನ್ಯಾರು?
ಒಬ್ಬ: ಇವೆಲ್ಲಾ ಭಾಷಣ ಬಿಗಿಯಲು ಚಂದ, ನಿಮ್ಮಂತಹ ಹೇತ್ಲಾಂಡಿಗಳು ಇರೋದ್ರಿಂದ ಅವರು ಹೆಚ್ಕೊಂಡಿರೋದು, ನಿಮ್ಗೆ ಮೊದಲು ಬಾರಿಸಬೇಕು
ಮೂರನೆಯವ- ಅಯ್ಯಾ ನೀವು ಅಲ್ಲಿಗೆ ಹೋಗೋರಲ್ಲ ಇಲ್ಲಿ ಕಿತ್ತಾಡ್ತೀರಿ. ಅಲ್ಲಿಗೆ ಹೋಗೋರು ಅರಾಮಾಗಿ ಮಜಾ ಮಾಡ್ತಾ ಇದಾರೆ. ಅವರವರದ್ದು ಅವರವರಿಗೆ ಬಿಡಿ, ನಿಮ್ಮ ವಾದದಿಂದ ಯಾವ ನಾಲ್ಕಾಣೆ ಬದಲಾವಣೆಯೂ ಆಗೋದಿಲ್ಲ.
ಹೀಗಾಗಿದೆ ನಮ್ಮ ಪರಿಸ್ಥಿತಿ. ದೇವರ ಧರ್ಮದ ಗಂಟು ಹೊತ್ತವನಿಗೆ ಯಾರು ವಿರೋಧಿಸುತ್ತಾರೆ ಎಂದು ನೋಡುವ ಚಟ. ಅವರನ್ನು ಬೆನ್ನೆತ್ತಿ ಬಡಿಯುವ ಆಸೆ. ದೇವರ ಅಸ್ತಿತ್ವದಲ್ಲಿ ಧರ್ಮದ ಸಮುದ್ರದಲ್ಲಿ ಕಿಂಚಿತ್ತೂ ನಂಬಿಕೆ ಯಿಲ್ಲದವನಿಗೆ ಅವರುಗಳನ್ನು ಕೆಣಕುವ ಚಟ, ನಾನೇ ಸೂಪರ್ ಎಂದು ಬಿಂಬಿಸುವ ಮಹದಾಸೆ. ಪರಸ್ಪರ ಎರಚುವ ಕೆಸರು ಅಮಾಯಯಕರ ಮೈಮೇಲೆ.
ಒಮ್ಮೆ ಇವೆಲ್ಲವನ್ನೂ ಬದಿಗಿರಿಸಿ ಭೂಮಿಯಿಂದ ಒಂದತ್ತು ಕಿಲೋಮೀಟರ್ ಮೇಲೆ ಮನಸ್ಸನ್ನು ಒಯ್ದು ನಿಲ್ಲಿಸಿಕೊಂಡರೆ ಅವಾಗ ಪರಮ ಸತ್ಯ ಗೋಚರಿಸುತ್ತದೆ. ಅಯ್ಯೋ ಇಷ್ಟು ದಿವಸ ನಾನು ಸುಮ್ಮನೆ ಗುದ್ದಾಡಿದೆನಲ್ಲ. ಇಷ್ಟು ಸೂಪರ್ ಸ್ವರ್ಗ ಮತ್ತೆಲ್ಲಿದೆ. ನಮ್ಮ ಪಾಡಿಗೆ ನಾವಿರುವ ವಿಚಾರದಲ್ಲಿ. ಹಾಗಾಗಿ ಬುದ್ದಿಜೀವಿಗಳೆಂದು ಕರೆಯಿಸಿಕೊಂಡು ಮುತಾಲಿಕ್ ಚರ್ಚೆಗೋ, ಬುರ್ಕಾ ವಿವಾದಕ್ಕೋ, ಬುಡನ್ ಗಿರಿ ವಿವಾದಕ್ಕೋ ಹೋಗಿ ವೇದಿಕೆಯೇರಿ ಕುಳಿತುಕೊಂಡು ಗಡ್ಡ ನೀವುವ ನಿಮ್ಮ ಚಟ ಕೈಬಿಡಿ. ನೀವೇ ಹೇಳುವಂತೆ ಧರ್ಮದ ಅಮಲಿನಲ್ಲಿ ತೇಲುತ್ತಿರುವವರಿಗೆ ಮಾನವೀಯತೆ ಕಾಣುವುದಿಲ್ಲ ಅಂದಾದ ಮೇಲೆ ಎಲ್ಲ ಅರ್ಥವಾದಂತಿರುವ ನಿಮಗೆ ಪ್ರಪಂಚ ತಿದ್ದುವ ಚಟ ಯಾಕೆ? ನೂರಾರು ವರ್ಷದಿಂದ ಹೀಗೆ ಎನೆಲ್ಲಾ ನಡೆದಿದೆ. ಸತ್ಯದ ತಾಕತ್ತು ಯಾವುದಕ್ಕೆ ಇಲ್ಲವೋ ಅದು ಅಳಿಸಿ ಹೋಗುತ್ತದೆ. ಅದಕ್ಕೆ ಯಾರ ಪ್ರಯತ್ನದ ಅಗತ್ಯವೂ ಇರುವುದಿಲ್ಲ.
ಅರಿವು ಎಂಬುದು ನಿಜವಾದ ವೈಯಕ್ತಿಕ ವಿಷಯ. ಅದಾದಾಗ ಎಲ್ಲವೂ ಶಾಂತ. ಆದರೆ ಪ್ರಕೃತಿ ಎಲ್ಲಾ ಮನುಷ್ಯರಿಗೂ ಅರಿವು ಮೂಡಿಸುವುದಿಲ್ಲ ಎಂಬುದು ಅಷ್ಟೇ ಸತ್ಯದ ವಿಷಯ.

ನೀವು ಕೇಳಿದಿರಿ...........?

ಯಾರಾದರೂ ತಾಕತ್ತಿರುವವರು ಸುಧಾದಲ್ಲಿ ಮೂಡಿ ಬರುವ ನೀವು ಕೇಳಿದಿರಿ? ತರಹದ ಒಂದು ಬ್ಲಾಗ್ ಮಾಡಬಹುದಿತ್ತು ಅಂತ ನನಗೆ ಅನ್ನಿಸುತ್ತದೆ. ಪ್ರಶ್ನೆಗೆ ಚುಟುಕಾದ ಉತ್ತರ . ಒಂಥರಾ ಮಜ ಇರುತ್ತದೆ. ಆದರೆ ಉತ್ತರಿಸುವವರಿಗೆ ಅಂದರೆ ಉತ್ತರ ದ ಬ್ಲಾಗ್ ಮೈಂಟೇನ್ ಮಾಡುವವರಿಗೆ ಬಹಳ ತಾಳ್ಮೆ ಇರಬೇಕು. ವಾರಕ್ಕೊಮ್ಮೆ ಶ್ರದ್ಧೆಯಿಂದ ಪ್ರಶ್ನೆಗೆ ಉತ್ತರ ನಿರಂತರವಾಗಿ ಕೊಡುವಂತಿರಬೇಕು. ಪ್ರಶ್ನೆ ಯಾರೂ ಕೇಳದಿದ್ದರೆ ಅದನ್ನೂ ಬೇರೆಯವರ ಹೆಸರಿನಲ್ಲಿ ಸೃಷ್ಟಿಸಿಕೊಂಡು ಉತ್ತರಿಸಬೇಕು. ಒಳ್ಳೆ ಹಿಟ್ಸ್ ಸಿಗಬಹುದು ಅಂತ ಅಂದಾಜು ನನ್ನದು. ಯಾರಾದರೂ ಹ್ಯಾಗಾದರೂ ಐಡಿಯಾ ಮಾಡಿ ಪ್ರಯತ್ನಿಸಿರಲ್ಲ ಹೀಗೆ.
ರಾಮಚಂದ್ರ ಕಡೂರು
ಪ್ರಶ್ನೆ: ದೇವರು ಇದ್ದಾನಾ.?
ಉತ್ತರ: "ಅನು ಮಾನ" ಇಲ್ಲದಿದ್ದರೆ.
ಪ್ರಸಾದ ಮಾವಿನಸರ
ಪ್ರಶ್ನೆ: ಪ್ರಳಯ ಆಗೋದು ಯಾವಾಗ?
ಉತ್ತರ: ಪ್ರಾಯ ಸಂದಾಗ-ಕಲ್ಲು ಬೆಂದಾಗ
ಮೃತ್ಯು ಹೊಸಮನೆ
ಪ್ರಶ್ನೆ: ನಿಮಗೆ "ವಿವೇಕ" ಬರೋದು ಯಾವಾಗ?
ಉತ್ತರ: ಅಕಸ್ಮಾತ್ತಾಗಿ ಹಿಂದಿನ "ಅ"ಳಿಸಿ ಹೋದಾಗ.
ಕಾಮೇಶ್ವರ ಬಚ್ಚಗಾರು
ಪ್ರಶ್ನೆ: ನಿಮಗೆ ಮೂರನೇ ಮದುವೆ ಯಾವಾಗ?
ಉತ್ತರ: ಒಂದು, ಎರಡು ಒಟ್ಟಿಗೆ ಆದಾಗ.
ಜಿತೇಂದ್ರ ಹಿಂಡುಮನೆ
ಪ್ರಶ್ನೆ: ಹಳ್ಳಿಗಳನ್ನು ಹೆಣ್ಣು ಮಕ್ಕಳು ಏಕೆ ಇಷ್ಟಪಡುವುದಿಲ್ಲ.
ಉತ್ತರ: ನಿಮ್ಮಂಥಹವರೆಲ್ಲ ನಿತ್ಯ ಪಟ್ಟಣ ಸೇರುವುದರಿಂದ
ವಿನಾಯಕ ಸಾಗರ
ಪ್ರಶ್ನೆ: ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಹುರುಪು ಸಿ.ಎಂ ಆದಾಗ ಏಕಿರುವುದಿಲ್ಲ?
ಉತ್ತರ; ನಾಯಕ ದಲ್ಲಿ ನಾಕ ಇದೆ ಹಾಗಾಗಿ.

ಅಯ್ಯೋ ಸುಸ್ತಾದೆ ಕಣ್ರೀ ಇನ್ನೂ ಸೂಪರ್ ಪ್ರಶ್ನೆ ಉತ್ತರ ನಿಮ್ಮ ಬಳಿ ಇದೆ. ಅದನ್ನೆಲ್ಲಾ ಶುರು ಮಾಡ್ರಲಾ. ಮಜಾ ನೋಡೂಣು.