Tuesday, January 11, 2011

"ಗೌರಿ" ಹೂವು

ಪೂಜೆ ಪುನಸ್ಕಾರ ಎಂದರೆ ಹೂವುಗಳಿಲ್ಲದೇ ಸಾಗದು. ಹಬ್ಬಹರಿದಿನಗಳಲ್ಲಿ ಹೂವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಗಣಪತಿ ಹಬ್ಬ, ದೀಪಾವಳಿ ಹಬ್ಬ ಹೀಗೆ ಹಬ್ಬಗಳ ಸಾಲೇ ಇರುವಾಗ ಹೂವುಗಳ ಸರಗಳೇ ಬಿಕರಿಯಾಗಿಬಿಡುತ್ತವೆ. ಅಂಗಡಿಗೆ ಹೋಗಿ ಅವರವರ ಜೇಬಿನ ಗಾತ್ರಕ್ಕನುಗುಣವಾಗಿ ಹೂವುಗಳ ಖರೀದಿ ನಡೆಯುತ್ತದೆ. ಸರಿಬಿಡಿ ಅದು ಪಟ್ಟಣಿಗರ ಕತೆಯಾಯಿತು. ಹಳ್ಳಿಗಳಲ್ಲಿ ಹೂವು ಖರೀದಿಸುವ ಜನರ ಸಂಖ್ಯೆ ಕಡಿಮೆ. ಮನೆಯ ಹಿತ್ತಲಿನಲ್ಲಿ ಭಗವಂತನ ಪ್ರೀತ್ಯರ್ಥಕ್ಕಾಗಿಯೇ ಹೂವಿನಗಿಡಗಳ ದಂಡೇ ಇರುತ್ತದೆ. ಸರಿ ಅದೂ ಕೂಡ ನೆಟ್ಟಗಿಡದ ಬಿಟ್ಟ ಹೂವಿನ ಕತೆಯಾಯಿತು. ಆದರೆ ಇಲ್ಲೊಂದು ಹಬ್ಬಗಳಿಗಾಗಿಯೇ ಪ್ರಕೃತಿ ಹೂವೊಂದನ್ನು ಅರಳಿಸಿ ನಿಂತಿದೆ. ಅದೇ ಗೌರೀ ಹೂವು.ಕೃಷ್ಣ ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿಯವರೆಗೆ ಹದಿನೈದು ದಿನಗಳ ಕಾಲ ಮಲೆನಾಡಿನ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಅರಳುತ್ತದೆ ಈ ಗೌರಿ. ಹೆಸರು ಗೌರಿಯಾದರೂ ಗಣಪತಿಗೆ ಶ್ರೇಷ್ಠ ಎಂಬ ನಂಬಿಕೆ ಹಿಂದಿನಕಾಲದಿಂದಲೂ ನಡೆದುಬಂದ ಪರಿಣಾಮ ಗಣೇಶ ಹಬ್ಬದ ಸಂದರ್ಭದಲ್ಲಿ ಗುಡ್ಡಗಾಡು ಅಲೆದು ಹುಡುಕಿ ತಂದು ಗಣಪತಿಯ ಮುಡಿಗೇರಿಸಿ ಸಂಭ್ರಮಿಸುತ್ತಾರೆ ದೈವಭಕ್ತರು. ಹದಿನೈದು ದಿನದಿನಗಳಿಂದ ಇಪ್ಪತ್ತು ದಿವಸಗಳವರೆಗೆ ದಿನಕ್ಕೊಂದರಂತೆ ಹೂವುಬಿಡುವ ಗೌರಿಯ ಬಣ್ಣ ಬಹು ಆಕರ್ಷಣೀಯ. ಒಂದೆರಡು ತಿಂಗಳು ಗಿಡ ಹಾಗೆಯೇ ಇದ್ದು, ನಂತರ ಸಾವನ್ನಪ್ಪುತ್ತದೆ ಮತ್ತೆ ಮುಂದಿನ ವರ್ಷ ತನ್ನಷ್ಟಕ್ಕೆ ಗಣಪತಿ ಹಬ್ಬಕ್ಕೆ ಹೂ ನೀಡಲು ಸರಿಯಾಗಿ ಚಿಗುರಿನಿಲ್ಲುತ್ತದೆ.
ಆಂಗ್ಲಭಾಷೆಯಲ್ಲಿ ಗ್ಲೋರಿಸಾ (Gloriosa) ಎಂದು ಕರೆಯಿಸಿಕೊಳ್ಳುವ ಇದು ಆರ್ಕಿಡ್ ವಂಶ. ವರ್ಷಕ್ಕೊಮ್ಮೆ ಮಾತ್ರಾ ಹೂವಾಗುವ ಗೌರಿಯ ಗಡ್ಡೆ ಹಾಗೂ ಬೀಜ ವಿಷಯುಕ್ತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗೌರಿ ಗಿಡವನ್ನು ಕೃತಕವಾಗಿ ಬೆಳೆದು ಅದರ ಬೀಜವನ್ನು ಸಂಗ್ರಹಿಸಿ ಔಷಧಿಗಳಿಗೆ ಉಪಯೋಗಿಸುತ್ತಾರೆ. ಗೌರಿ ಹೂವಿನ ಬಗ್ಗೆ ಸವಿವರವಾದ ಹೆಚ್ಚಿನ ಮಾಹಿತಿಗೆ http://en.wikipedia.org/wiki/Gloriosa_(genus) ಗೆ ಭೇಟಿ ನೀಡಬಹುದು.

Saturday, January 8, 2011

ಜೋಗದ ಬುಡಕ್ಕೆ ಸುಂದರ ಮೆಟ್ಟಿಲು

ನೀವು ಏನಾದರೂ ಅಂದುಕೊಳ್ಳಿ ನನಗಂತೂ ನಮ್ಮ ಆಡಳಿತದ ಬಗ್ಗೆ ಹೆಮ್ಮೆಯಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎಂಬಂತೆ ಹೊಸ ಹೊಸತು ಮಾಡುತ್ತಲೇ ಇರುತ್ತಾರೆ. ಅಲ್ಲಿ ಇಲ್ಲಿ ಸ್ವಲ್ಪ ನ್ಯೂನತೆ ಇರಬಹುದು. ಸಾವಿರಾರು ಜಾತಿ ನೂರಾರು ಭಾಷೆ ಪ್ರತೀ ನೂರು ಕಿಲೋಮೀಟರ್ ಗೆ ಬದಲಾವಣೆಗೊಳ್ಳುವ ಸಂಸ್ಕೃತಿಯ ನಡುವೆ ಭಾರತ ವಿಚಿತ್ರವಾಗಿ ಬೆಳಗುತ್ತಿದೆ. ಬೆಳವಣಿಗೆಯ ವೇಗ ನಿಧಾನ ಇರಬಹುದು ಅದುವೇ ಪ್ರಧಾನ ಬಿಡಿ.
ಜೋಗದ ಬುಡಕ್ಕೆ ಇಳಿಯಲು ಸುಂದರ ಮೆಟ್ಟಿಲು ಮದ್ಯೆ ಸುಂದರ ವಿಶ್ರಾಂತಿ ಗೃಹ ಮರದ ಕೆತ್ತನೆಯ ಕಂಬ ವಾವ್ ಎನ್ನದೆ ಇರಲಾಗದು ಬಿಡಿ. ದಬದಬ ಬೀಳುವ ನೀರಿನ ಮೋಜು ಇಲ್ಲದಿದ್ದರೂ ಗುಡುಗುಡು ಅಂತ ಮೆಟ್ಟಿಲು ಇಳಿದು ಕೆಳಗಡೆ ಹೋಗಿ ಮೇಲೆ ನೋಡಿ ಕುಬ್ಜವಾಗಿ ಅಬ್ಬಾ ಎಂದು ಉದ್ಘಾರ ಹೊರಡಿಸಬಹುದು.
ಇಷ್ಟು ಮಾಡಿದ್ದಾರಲ್ಲ ಸಾಕು ಬಿಡಿ

Wednesday, January 5, 2011

ಹತ್ತಿಯಂತೆ ಉರಿಯುವ ರಾಂಬತ್ತಿ


ಬೆಳಕಿನ ಹಬ್ಬ ದೀಪಾವಳಿಯಿಂದ ಕಾರ್ತಿಕ ಮಾಸದ ಅಂತ್ಯದವರೆಗೂ ದೀಪಗಳದ್ದೇ ಕಾರುಬಾರು. ನಾನಾ ವಿಧದ ದೀಪಗಳು ಮನೆಯನ್ನು ಬೆಳಗಿಸುತ್ತವೆ. ಬೆಳಗುವ ದೀಪಕ್ಕೆ ಎಣ್ಣೆ ಆಹಾರವಾದರೆ ಬೆಂಕಿಯುರಿಯಲು ಮಾಧ್ಯಮ ಹತ್ತಿಯ ಬತ್ತಿ. ಎಣ್ಣೆಗೂ ಬೆಂಕಿಗೂ ನಡುವೆ ಈ ಬತ್ತಿಯೆಂಬುದು ಇಲ್ಲದಿದ್ದರೆ ದೀಪವೇ ಇಲ್ಲ. ಸಾಮಾನ್ಯವಾಗಿ ಹಣತೆಯ ಬತ್ತಿಗಾಗಿ ಹತ್ತಿ, ಬಟ್ಟೆ ಮುಂತಾದವುಗಳನ್ನು ಉಪಯೋಗಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಬಹುವಾಗಿ ಬೇಕಾಗುವ ಬತ್ತಿಗಾಗಿ ಮಹಿಳೆಯರು ಮಳೆಗಾಲದಲ್ಲಿ ಹತ್ತಿಯನ್ನು ಕೈಯಿಂದ ಹೊಸೆದು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇವೆಲ್ಲಾ ಮಾಮೂಲಿನ ಕತೆಯಾಯಿತು ಆದರೆ ಮಲೆನಾಡಿನಲ್ಲಿ ದೀಪಾವಳಿಯಿ ನಂತರ ಬತ್ತಿಗಾಗಿ ಕಾಡಿನ ಚಿಗುರೊಂದನ್ನು ಉಪಯೋಗಿಸುತ್ತಾರೆ ಅದರ ಹೆಸರು ರಾಂಬತ್ತಿ.
ಹೆಸರಿನಲ್ಲಿ ರಾಮನಿದ್ದಮೇಲೆ ಅದಕ್ಕೊಂದು ಕತೆಯಿರಲೇ ಬೇಕಲ್ಲವೇ?.ಕತೆಯೇನೋ ಇದೆ ಆದರೆ ಸತ್ಯಾಸತ್ಯತೆ ನಂಬಿಕೆಗೆ ಬಿಟ್ಟ ವಿಚಾರ. ಶ್ರೀರಾಮಚಂದ್ರ ಸೀತೆಯ ಸಮೇತ ವನವಾಸಕ್ಕೆ ತೆರಳಿದಾಗ ಅಲ್ಲಿ ಸೀತಾಮಾತೆ ದೀಪವನ್ನುರಿಸಲು ಬತ್ತಿ ಬೇಕೆಂದು ರಾಮನ ಬಳಿ ಕೇಳಿದಳಂತೆ, ಆ ಗೊಂಡಾರಣ್ಯದಲ್ಲಿ ರಾಮ ಹತ್ತಿಯ ಬತ್ತಿಯನ್ನು ಎಲ್ಲಿಂದ ತಂದಾನು?. ಆಗ ಶ್ರೀರಾಮ ವೃಕ್ಷರಾಜನ ಸಹಾಯ ಕೇಳಿದನಂತೆ. ರಾಮನ ಬೇಡಿಕೆಗೆ ಸ್ಪಂದಿಸಿದ ವೃಕ್ಷರಾಜ ಗಿಡವೊಂದಕ್ಕೆ ತನ್ನ ಚಿಗುರನ್ನು ಉರಿಯಲು ಸಹಕಾರಿಯಾಗುವಂತೆ ಬೆಳೆಸಲು ಅಣತಿ ಮಾಡಿದನಂತೆ, ಅದಕ್ಕೆ ರಾಂಬತ್ತಿ ಎಂಬ ಹೆಸರು ಈ ಗಿಡದ ಚಿಗುರಿಗೆ. ಆ ಕಾರಣಕ್ಕಾಗಿ ವರ್ಷಕ್ಕೊಮ್ಮೆಯಾದರೂ ರಾಂಬತ್ತಿಯ ದೀಪ ಹಚ್ಚುವುದು ವಾಡಿಕೆಯಾಗಿ ಬಂದಿದೆ.
ಪೊದೆಗಳ ನಡುವೆ ಮರವಾಗಿ ಬೆಳೆಯುವ ಈ ಗಿಡಕ್ಕೆ ರಾಂಬತ್ತಿ ಮರ ಎಂದು ಸ್ಥಳೀಯ ಭಾಷೆಯಲ್ಲಿ ಕರೆಯುತ್ತಾರೆ. ಮಳೆಗಾಲ ಮುಗಿದು ದೀಪಾವಳಿ ಆರಂಭವಾಗುತ್ತಿದ್ದಂತೆ ಇದು ದೀಪದ ಬತ್ತಿಗಾಗಿಯೇ ಚಿಗುರುತ್ತದೆಯೇನೋ ಎಂಬಂತೆ ನೂರಾರು ಚಿಗುರೊಡೆದು ನಿಲ್ಲುತ್ತದೆ. ಮಲೆನಾಡಿನ ಸಂಪ್ರದಾಯಸ್ಥರು ಈ ಚಿಗುರನ್ನು ಕಾರ್ತಿಕ ಮಾಸದ ಹಣತೆ ದೀಪಕ್ಕೆ ಬಳಸುತ್ತಾರೆ. ಹತ್ತಿಯ ಬತ್ತಿಯಂತೆ ಎಣ್ಣೆಯನ್ನು ಹೀರಿ ಸಂಪೂರ್ಣ ಉತ್ತಮ ಹಣತೆದೀಪವಾಗಿ ಉರಿಯುವ ರಾಂಬತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಹಚ್ಚಿದಲ್ಲಿ ಸುತ್ತಲಿನ ವಾತಾವರಣ ಕೊಂಚಮಟ್ಟಿಗಿನ ಸುವಾಸನಾಪೂರಿತವಾಗಿಯೂ ಇರುತ್ತದೆ. ಅರಣ್ಯ ನಾಶದ ಪರಿಸ್ಥಿತಿಯಿಂದ ಈ ರಾಂಬತ್ತಿಯ ಗಿಡದ ಸಂತತಿ ನಶಿಸುತ್ತಾ ಬಂದಿದೆಯಾದರೂ ಹಲವರು ದೇವರಬನದ ಮೂಲೆಯಲ್ಲಿ ಇದನ್ನು ನೆಟ್ಟು ಕಾಪಿಟ್ಟಿದ್ದಾರೆ. ದೀಪ ಬೆಳಗಲು ಮೇಣದ ಬತ್ತಿ, ವಿದ್ಯುತ್ ಬಲ್ಪುಗಳು ಮುಂತಾದ ಸುಲಭ ವಿಧಾನಗಳ ನಡುವೆಯೂ ರಾಂಬತ್ತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ, ಹಾಗೂ ತಾನು ಉರಿದು ಸುಂದರ ದೀಪವಾಗಿ ಬೆಳಗುತ್ತಿದೆ.

Monday, December 20, 2010

ನವಿಲು ಮೊಟ್ಟೆ ಕೋಳಿ ಕಾವು


ಗುಡುಗುಡು ಸದ್ದಿಗೆ ನಾಟ್ಯವಾಡುವ ಮಯೂರವನ್ನು ನೋಡಲು ಅದೆಷ್ಟು ಸೊಬಗು, ಗರಿಬಿಚ್ಚಿ ಕುಣಿಯುವ ನವಿಲಿನ ನಾಟ್ಯಕ್ಕೆ ಮನ ಪುಳಕಗೊಳ್ಳದಿರಲು ಸಾದ್ಯವೇ ಇಲ್ಲ. ಅಂಥಹ ನವಿಲಿನ ನೃತ್ಯ ಹತ್ತಿರದಿಂದ ನೋಡಿ ಸವಿಯುವ ಭಾಗ್ಯ ನಮ್ಮ ನಿಮ್ಮದಾದರೆ ವಾವ್ ಎನ್ನಬಹುದು. ಆದರೆ ಮನುಷ್ಯರನ್ನು ದೂರದಿಂದ ಕಂಡರೆ ಕಂಬಿಕೀಳುವ ನವಿಲು ಅದಕ್ಕೆ ಅವಕಾಶ ನೀಡದು. ಕಾಡಿನಲ್ಲಿ ಸ್ವೇಚ್ಛೆಯಾಗಿ ಓಡಾಡಿಕೊಂಡಿರುವ ನಮ್ಮ ರಾಷ್ಟ್ರಪಕ್ಷಿ ನವಿಲು ಸಾಕುಪ್ರಾಣಿಯಲ್ಲ, ನವಿಲನ್ನು ಸಾಕಿದವರು ಅಂಥಹ ಅವಕಾಶ ಸಿಕ್ಕಿದವರು ಅತ್ಯಂತ ವಿರಳ. ಆದರೆ ನನಗೆ ಈ ವರ್ಷ ಅಂಥಹ ಅಪರೂಪದ ಅವಕಾಶ ಒದಗಿಬಂದಿದೆ.
ಕಳೆದ ತಿಂಗಳು ಮಳೆಗಾಲ ಮುಗಿದು ಇನ್ನೇನು ಚಳಿ ಶುರುವಾಯಿತು ಎನ್ನುವ ದಿವಸಗಳಲ್ಲಿ ತೋಟದ ಬದು ಚೊಕ್ಕಮಾಡುತ್ತಿದ್ದ ಹೆಣ್ಣಾಳುಗಳು "ಪಟಪಟ" ಎಂದು ಸದು ಮಾಡುತ್ತಾ ಏನೋ ಹಾರಿಹೋದ ಸದ್ದನ್ನು ಕೇಳಿ ಗಾಬರಿಯಾಗಿ ಕೂಗಿಕೊಂಡರು. ನಾನು ಹಾಗೂ ನಮ್ಮ ತೋಟದ ಮೇಸ್ತ್ರಿ ರಾಮಕೃಷ್ಣ ಹೆಣ್ಣಾಳುಗಳ ಚೀರಾಟ ಕೇಳಿ ಹತ್ತಿರ ಹೋಗಿ ನೋಡಿದಾಗ ಹಾಗೆ ಓಡಿಹೋಗಿದ್ದು ನವಿಲೆಂದು ತಿಳಿಯಿತು. ರಾಮಕೃಷ್ಣನ ಲೆಕ್ಕಾಚಾರದ ಪ್ರಕಾರ ನವಿಲು ಹಾಗೆ ಪೊದೆಯಲ್ಲಿ ಇತ್ತೆಂದರೆ ಅಲ್ಲಿ ಮೊಟ್ಟೆ ಇಟ್ಟಿದೆ ಎಂದರ್ಥ. ಸ್ವಲ್ಪ ಹೊತ್ತು ಪೊದೆಯ ಸಂದಿನಲ್ಲಿ ಹುಡುಕಿದಾಗ ರಾಮಕೃಷ್ಣನ ಲೆಕ್ಕಾಚಾರ ಸರಿಯಾಗಿತ್ತು. ಕೋಳಿ ಮೊಟ್ಟೆಗಿಂತ ಮೂರುಪಟ್ಟು ದೊಡ್ಡದಾಗಿರುವ ಐದು ನವಿಲುಮೊಟ್ಟೆಗಳು ಅಲ್ಲಿದ್ದವು. ಚೊಕ್ಕಟಮಾಡಲು ಬಂದ ಹೆಣ್ಣಾಳುಗಳಿಗೆ ಸಂಭ್ರಮ ಹೇಳತೀರದು, ಆದರೆ ಆ ಸಂಭ್ರಮಕ್ಕೆ ನನ್ನ ಇರುವಿಕೆ ಅವರಿಗೆ ತುಸು ಇರಿಸುಮುರಿಸನ್ನು ಉಂಟುಮಾಡಿತ್ತು. ಅಕಸ್ಮಾತ್ ಸಿಕ್ಕ ಭೂರಿ ಬೋಜನವನ್ನು ಮನೆಗೆ ಒಯ್ಯುವಂತಿರಲಿಲ್ಲ. ನಾನು ಅವೆಲ್ಲಾ ಅರ್ಥವಾಗದವನಂತೆ ಅವರಿಗೆ " ಅಲ್ಲಿ ಚೊಕ್ಕಮಾಡುವುದುಬೇಡ, ನವಿಲಿಗೆ ತೊಂದರೆಯಾಗುತ್ತದೆಯೆಂದು" ಅಣತಿಯಿಟ್ಟು ಮನೆ ಸೇರಿದೆ. ಅವರುಗಳು ಮೊಟ್ಟೆಯನ್ನು ಮನೆಗೆ ಒಯ್ಯಲಾರದೆ ಅರೆಮನಸ್ಸಿನಿಂದ ಮನೆ ಸೇರಿದರು. ಮಾರನೇ ದಿನ ರಾಮಕೃಷ್ಣ ಅಲ್ಲಿ ಹೋಗಿ ನೋಡಿ ಬಂದವನು ಆಘಾತಕಾರಿ ಸುದ್ದಿಯೊಂದನ್ನು ತಂದ. ಜನಸಂಚಾರ ಆಗಿರುವ ಆ ಜಾಗಕ್ಕೆ ತಾಯಿನವಿಲು ಹೆದರಿ ಮತ್ತೆ ಬರುವುದನ್ನು ಕೈಬಿಟ್ಟಿತ್ತು. ಈಗ ಮೊಟ್ಟೆ ತಾಯಿಯ ಕಾವಿಲ್ಲದೆ ಮರಿಯಾಗದು, ತಾಯಿ ಮನುಷ್ಯರ ಹೆದರಿಕೆಯಿಂದ ಅಲ್ಲಿಗೆ ಬಾರದು. ಸಮಸ್ಯೆ ವಿಚಿತ್ರರೂಪಕ್ಕೆ ತಿರುಗಿತು. ಪರಿಹಾರದ ಬಗ್ಗೆ ರಾಮಕೃಷ್ಣನಲ್ಲಿ ವಿಚಾರಿಸಿದಾಗ ಆತ " ಮೊಟ್ಟೆಯಿಟ್ಟ ಕೋಳಿ ಸಿಕ್ಕಿದರೆ ಬುಟ್ಟಿಯಲ್ಲಿಟ್ಟು ಕಾವು ಕೊಡಿಸಿ ಮರಿ ತೆಗೆಸಬಹುದು" ಎಂಬ ಸಲಹೆ ನೀಡಿದ
ಈಗ ಮೊಟ್ಟೆ ಇಟ್ಟ ಕೋಳಿಯ ಹುಡುಕಾಟ ಆರಂಭವಾಯಿತು. ಸಂಜೆಯೊಳಗೆ ಕೋಳಿಸಿಗದಿದ್ದರೆ ಮೊಟ್ಟೆಗಳು ಒಂದೊಂದಾಗಿ ಕೆಡಲು ಆರಂಬಿಸುತ್ತವೆ ಎಂಬ ಭಯದ ನಡುವೆ ಮೂರ್ನಾಲ್ಕು ಜನರ ಬೈಕ್ ಸುತ್ತಮುತ್ತಲಿನ ಹಳ್ಳಿಯತ್ತ ಓಡಿಸಿಯಾಯಿತು. ನವಿಲುಮರಿಯ ಅದೃಷ್ಟವೋ ನಮ್ಮಗಳ ಶ್ರಮವೋ ಅಂತೂ ಸಂಜೆ ಆರುಗಂಟೆಗೆ ನಮ್ಮ ಮನೆಯಿಂದ ೧೫ ಕಿಲೋಮೀಟರ್ ದೂರದ ಪಡಗೋಡಿನಲ್ಲಿ ಕೋಳಿ ಇರುವುದಾಗಿಯೂ ಹಾಗೂ ಅದರ ಮೊಟ್ಟೆಗಳೆಲ್ಲ ಗುಡುಗಿನ ಕಾರಣಕ್ಕೆ ಕೆಟ್ಟುಹೋಗಿರುವುದಾಗಿಯೂ ಸುದ್ದಿ ಬಂತು. ಲಗುಬಗೆಯಿಂದ ರಾಮಕೃಷ್ಣ ಅಲ್ಲಿಗೆ ಹೋಗಿ ಕೋಳಿಯನ್ನು ತಂದ.
ದೊಡ್ಡಗಾತ್ರದ ಮೊಟ್ಟೆಯನ್ನು ನೋಡಿದ ಕೋಳಿ ಆರಂಭದಲ್ಲಿ ಕಾವುಕೊಡಲು ಕೂರಲಿಲ್ಲ. ಆದರೆ ಅದೇನು ಮನಸುಬಂತೋ ಮಾರನೇ ದಿವಸ ಬೆಳಿಗ್ಗೆಯಿಂದ ಐದುಮೊಟ್ಟೆಗಳಮೇಲೆ ಏರಿ ಕಾವು ನೀಡತೊಡಗಿತು ಕೋಳಿ. ಕಾವುಕೊಡಲು ಆರಂಭಿಸಿ ಹದಿನೈದು ದಿನಕ್ಕೆ "ಕುಂಯ್ ಕುಂಯ್" ಎನ್ನುತ್ತಾ ಮೊದಲ ಮರಿ ಹೊರಬಂತು. ಮತ್ತೆ ಕೆಲ ಕ್ಷಣಗಳಲ್ಲಿ ಇನ್ನೆರಡು ಹೊರಬಂದು ಕೋಳಿಯ ಸುತ್ತ ಸುತ್ತತೊಡಗಿತು. ಮತ್ತೆರಡು ಮೊಟ್ಟೆ ಅನಿರೀಕ್ಷಿತ ಮಳೆಗುಡುಗಿನ ಕಾರಣ ಫಲಿತಗೊಳ್ಳಲಿಲ್ಲ. ಕೋಳಿಯ ಭಾಷೆ ಅರ್ಥ ಮಾಡಿಕೊಳ್ಳುವಲ್ಲಿ ಆರಂಭದ ಒಂದೆರಡು ದಿವಸ ಎಡವಿದ ನವಿಲುಮರಿಗಳು ನಂತರ ಅದರ ಹಿಂದೆ ಸುತ್ತತೊಡಗಿವೆ ಹಾಗೂ "ಕಚಕಚ" ಎಂದು ಕೋಳಿ ಕೆದರಿಕೊಟ್ಟ ಆಹಾರ ತಿನ್ನುತ್ತಿವೆ. ಹೀಗೆ ಒಂದು ತಿಂಗಳು ಸಾಕಿ ಆನಂತರ ಕಾಡಿಗೆ ಬಿಡಬೇಕಿದೆ. ಅಂತೂ ಇಂತೂ ಹರಸಾಹಸಪಟ್ಟು ಮೂರು ನವಿಲು ಮರಿಯನ್ನು ಕೋಳಿಯ ಸಹಾಯದಿಂದ ರಕ್ಷಿಸಿದ ಸಮಾಧಾನ ಸಿಕ್ಕಿದೆ.

Friday, December 17, 2010

ಆಮೆಯ ಬೇಟೆ



ಜೊರ್ರಂತ ಸುರಿವ ಮಲೆನಾಡಿನ ಮಳೆಗಾಲದಲ್ಲಿ ಈ ಚಿತ್ರದಲ್ಲಿನ ವೇಷಧಾರಿ ಹೊರಟರೆಂದರೆ ಅವತ್ತು ಒಂದಿಷ್ಟು ಆಮೆಯ ಆಯುಷ್ಯ ಮುಗಿಯಿತೆಂದು ಅರ್ಥ. ನೀರಿನಲ್ಲೂ , ನೆಲದ ಮೇಲೂ ಬದುಕಬಲ್ಲ ಆಮೆ ಅತ್ಯಂತ ನಿರುಪದ್ರವಿ. ಆದರೆ ಅದರ ಮಾಂಸ ರುಚಿಯಾಗಿರುವುದು ಅದರ ದುರ್ದೈವ. ಮಳೆಗಾಲ್ದ ದಿವಸಗಲಲ್ಲಿ ತುಂಬುತ್ತಿರುವ ಕೆರೆಗಳಿಂದ ಆಮೆಗಳು ನೆಲಕ್ಕೆ ಹೊರಟಿರುತ್ತವೆ. ನಿಧಾನಗತಿಗೆ ಹೆಸರಾಗಿದ್ದರೂ ಆಮೆ ಮಾತ್ರಾ ಸುಲಭವಾಗಿ ಬೇಟೆಗಾರರಿಗೆ ಸಿಗುವುದಿಲ್ಲ. ನೀರೊಂದಿದ್ದರೆ ಅದು ಪುಳುಕ್ ಅಂತ ದಡದಿಂದ ಹಾರಿ ಜಾರಿಕೊಂಡುಬಿಡುತ್ತದೆ. ಅದಕ್ಕಾಗಿ ಬೇಟೆಗಾರರು ಉಪಾಯ ಮಾಡುತ್ತಾರೆ. ತಲೆಗೆ ಸೊಪ್ಪು ಕಟ್ಟಿಕೊಂಡು ಕೆರೆಯ ಕಡೆಯಿಂದ ದಡದತ್ತ ನಿಧಾನ ನಡೆದುಬರುತ್ತಾರೆ. ಆಮೆಯು ಯಾವುದೋ ಗಿಡ ಎಂದು ಬಾವಿಸಿ ಅರಾಮವಾಗಿರುತ್ತದೆ. ಹಾಗೆ ಆರಾಮವಾಗಿರುವ ಮರುಕ್ಷಣ ಆಮೆ ಬೇಟೆಗಾರನ ಚೀಲ ಸೇರುತ್ತದೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ಬೇಟೆಗಾರರು ಚೀಲ ಭರ್ತಿಯಾದೊಡನೆ ನಗುನಗುತ್ತಾ ಮನೆ ಸೇರುತ್ತಾರೆ. ಇದು ಪ್ರಕೃತಿಯ ಆಹಾರ ಚಕ್ರ. ಒಂದು ಜೀವಿಯ ಸಾವು ಮತ್ತೊಂದು ಜೀವಿಯಲ್ಲಿ ಬದುಕು ಕಾಣಿಸುತ್ತದೆ ಎಂದು ನೋಡುಗರು ಸುಮ್ಮನಾಗಬೇಕಷ್ಟೆ.

Tuesday, December 14, 2010

ಭೀಮೇಶ್ವರದಲ್ಲಿ ಮಾರ್ಚ್ ೨ ರಿಂದ "ಅತಿರುದ್ರ ಮಹಾಯಾಗ"




ಭೀಮೇಶ್ವರ ಸಾಗರ ತಾಲ್ಲೂಕಿನ ತುಟ್ಟ ತುದಿಯ ಯಾತ್ರಾಸ್ಥಳ. ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಕೋಗಾರಿನ ಬಳಿ ಇರುವ ಈ ಕ್ಷೇತ್ರ ಆಸ್ತಿಕರ ಜತೆ ಪ್ರಕೃತಿಪ್ರಿಯರ ಮನದಾಸೆಯನ್ನು ತಣಿಸುತ್ತದೆ. ಪ್ರತೀ ವರ್ಷ ಶಿವರಾತ್ರಿಯ ಸಮಯದಲ್ಲಿ ಜಾತ್ರೆಯನ್ನು ಇಲ್ಲಿ ನಡೆಸುತ್ತಾರೆ. ಈ ಬಾರಿ ೨ ಮಾರ್ಚ್ ೨೦೧೧ ರಿಂದ ಮಾರ್ಚ್ ೮ ನೇ ತಾರೀಕಿನವರೆಗೆ ಇಲ್ಲಿ "ಸಾಂಗ ಅತಿರುದ್ರ ಮಹಾ ಯಾಗ"ವನ್ನು ಭೀಮಲಿಂಗೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದು ಯಾಗ ಶಾಂತಿ ಹವನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ., ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹ ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಸಮಿತಿಯವರು ಬಯಸಿದ್ದಾರೆ.
ಸ್ಥಳ ಪುರಾಣ: ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗ್ದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದನಂತೆ, ಆಗ ಅದು ಎರಡು ಹೋಳಾಗಿ ಒಂದು ಹೋಳು ಬಳಕೆಗೆಬಂದಿತಂತೆ, ಇನ್ನೊಂದು ಭೀಮನ ಕಾಲಿನ ಹೆಜ್ಜೆಯ ಗುರುತಿನೊಂದಿಗೆ ಅಲ್ಲಿಯೇ ಉಳಿದಿದೆ. ಇಷ್ಟಾದನಂತರ ದೇವರ ಅಭಿಷೇಕಕ್ಕೆ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೋಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ ನೂರು ಅಡಿ ಮೇಲ್ಬಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಇಂದಿಗೂ ಈ ಸರಳ ಹೊಳೆಯ ಮತ್ತೊಂದು ವಿಶೇಷವೆಂದರೆ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. ಭೀಮಲಿಂಗೇಶ್ವರ ದೇವಸ್ಥಾನ ಹಿಂಬಾಗ "ಹಿಡಿಂಬಾ" ವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿತುಳುಕಾಡುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರ್ಚಕರು ಭೀಮೇಶ್ವರ : ೦೮೧೮೬-೨೧೦೯೬೬ - ೯೪೪೯೭೭೬೭೨೯

Sunday, December 12, 2010

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

ನಿಮ್ಮ ಗಮನಕ್ಕೆ - 2) : ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರ (ಮತ್ತು ನಮಗೆಲ್ಲ ತೀವ್ರ ಅಸಮಾಧಾನಕರ) ಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತಿದ್ದಾರೆ, ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’, ರವಿ ಬೆಳಗೆರೆಯವರ ಸಾಪ್ತಾಹಿಕ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಅಂಕಣಗಳೂ ನಿಂತು ಹೋಗಿವೆ. ’ಪರಾಗ ಸ್ಪರ್ಶ’ ಅಂಕಣ?- stay tuned for further announcement...

ಹೀಗೆ ಈ ವಾರದ ಪರಾಗ ಸ್ಪರ್ಷದ ಜತೆ ಶ್ರೀವತ್ಸ ಜೋಷಿಯವರು ಒಂದು ಪರ್ಸನಲ್ ಮೈಲ್ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ವಿಜಯಕರ್ನಾಟಕದಲ್ಲಿ ಅವರ ಅಂಕಣವೂ ಡೋಲಾಯಮಾನ ಅಂತಲೂ ಲೆಕ್ಕಾಚಾರಕ್ಕೆ ಇಳಿಯಬಹುದು. ಒಟ್ಟಿನಲ್ಲಿ ಕನ್ನಡದ ನಂ ೧ ಪ್ರಸಾರದ ವಿಜಯಕರ್ನಾಟಕದ ಒಳಗಡೆ ಏನೇನೋ ನಡೆದಿದೆ ಅಂತ ಪತ್ರಿಕೋದ್ಯಮದ ಆಸಕ್ತಿ ಇರುವವರಿಗೆ ಗೊತ್ತಾಗಿದೆ. ಕುಟ್ಟಿ ಕಟ್ಟಿ ಮೆಟ್ಟಿ ವಿಕ ಬೆಳಸಿದ "ವಿ ಭಟ್ರು ವಿಕ ಬಿಟ್ರು" ಎಂಬ ವಿಷಯದೊಂದಿಗೆ ಬಜ್, ಎಸ್ ಎಂ ಎಸ್ ಹರಿದಾಡಿದಾಗ ನಾನೂ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದೆ. ಆದರೆ ಬಟ್ಟೆ ಗಲೀಜಾದರೆ ಒಗೆಯಲೇ..! ಬೇಕಲ್ಲ ಅಂತ ಬೆಂಗಳೂರಿನಿಂದ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದಾಗ ಒಳಾರ್ಥ ಅರ್ಥವಾಗದೆ ಗಲಿಬಿಲಿಗೊಳಗಾದೆ. ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯನ್ನಾಧರಿಸಿ ಬಂದ ಫೋನ್ ಗಳು ಎನೇನನ್ನೋ ಹೇಳತೊಡಗಿದಾಗ "ಛೆ" ಅಂತ ನಿರ್ಲಕ್ಷ್ಯ ಮಾಡಿಬಿಟ್ಟೆ. ಕಾರಣ ಅವೆಲ್ಲಾ ದೊಡ್ಡವರ ಕತೆಗಳು ಎತ್ತರಕ್ಕೆ ಏರಿದ ಮನುಷ್ಯನ ಸುತ್ತ ಬೇಕಾದ್ದು ಬೇಡಾದ್ದು ಹುಟ್ಟಿಕೊಳ್ಳುವುದೂ ಸಹಜ. ಹಾಗೆಲ್ಲಾ ಬರೆಯುವ ಬೆಳೆಗೆರೆಯ ಬಗ್ಗೆಯೂ ನೂರಾರು ಕತೆಗಳಿವೆ, ನಾವು ಹಾಗೆ ಹುಟ್ಟುವ ಕತೆಗಳನ್ನು ತಲೆಯೊಳಗೆ ಇಟ್ಟು ಸಾಕತೊಡಗಿದರೆ ಅವರ ಬರಹಗಳನ್ನ ಸವಿಯಲು ಆಗುವುದೇ ಇಲ್ಲ ಎಂಬ ನನ್ನ ಓದುಗ ಮಿತ್ರರೊಬ್ಬರ ಮಾತು ನೆನಪು ಮಾಡಿಕೊಂಡು ಸುಮ್ಮನುಳಿದೆ.

ಏನೆಲ್ಲಾ ನಡೆಯುತ್ತದೇ ಈ ಪ್ರಪಂಚದಲ್ಲಿ ನಿತ್ಯ. ಕಾಲ ಅವನ್ನೆಲ್ಲಾ ತನಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಮುಗಳ್ನಗುತ್ತಾ ನುಂಗಿ ಮುನ್ನಡೆಯುತ್ತದೆ. ವಿಜಯ ಕರ್ನಾಟಕ ವಿ ಭಟ್ಟರೊಡನೆ ಒಂದು ದೊಡ್ಡ ಟೀಂ ಕಳೆದುಕೊಂಡಿದೆ. ಒಂದೆರಡು ದಿನ ಛೆ ಅಂತ ಅನ್ನಿಸಿ ಮತ್ತೆ ಮುನ್ನುಗ್ಗುತ್ತಿದೆ. ಹೊರ ಹೊರಟವರು ಮತ್ತೊಂದು ಪತ್ರಿಕೆ ಕಟ್ಟುತ್ತಾರಂತೆ ಎಂಬ ಸುದ್ದಿ ಸುದ್ದಿಮನೆಯ ಕತೆಯಂತೆ ಜನರ ಬಾಯಲ್ಲಿ ಹೊರಟು ನೂರೆಂಟು ಮಾತಾಗುತ್ತಿದೆ.
ನಮ್ಮೂರಿನ ಗಣಪತಿ ಭತ್ತವ ಕೊಯ್ದು ಹಸನು ಮಾಡುತ್ತಿದ್ದ. ಅವನಿಗೆ ವಿ.ಕ ಡಲ್ ಆಗಿದ್ದು ಸುದ್ದಿಯಲ್ಲ ಅದಕ್ಕೆ ಹಿಂದೆ ಚಾರ್ಮ್ ಬಂದಿದ್ದೂ ಸುದ್ದಿಯಲ್ಲ. ಲಾಭವೋ ನಷ್ಟವೋ ಅವನು ಪ್ರತೀ ವರ್ಷ ಭತ್ತ ಬಿತ್ತುತ್ತಾನೆ ಅಕ್ಕಿ ಬೆಳೆಯುತ್ತಾನೆ. ಅವನಿಗೆ ಸಿಟ್ಟು ಬಂದು ಭತ್ತ ಬೆಳೆಯುವುದ ನಿಲ್ಲಿಸುವವರಿಗೂ ನಮ್ಮ ತಾಕತ್ತು ಹೀಗೆ ಮುಂದುವರೆಯುತ್ತದೆ.