Friday, April 8, 2011

ಅರೆರೆರೆರೆ ಗಿಣಿರಾಮ

ಗಿಳಿಯು ಪಂಜರದೊಳಗಿದೆ ಅಂತ ಸದ್ಯ ನಾನು ಹಾಡಬಹುದು. ಅದು ಯಾವತ್ತು ಹಾರಿ ಹೋಗುತ್ತೋ ಅಥವಾ ನನಗೆ ಛೆ ಪಾಪ ಅನ್ನಿಸಿ ಹಾರಿಸುತ್ತೆನೆಯೋ ಗೊತ್ತಿಲ್ಲ. ಹಾಗೆ ಹಾರಿ ಹೋದ ದಿನ "ಗಿಳಿಯು ಪಂಜರದೊಳಿಲ್ಲ" ಅಂತ ಹಾಡಬೇಕಾಗಬಹುದು. ಜಯಕೃಷ್ಣ ಮೊಬೈಲಿಸಿ ನಮ್ಮ ತೋಟದಲ್ಲಿ ಮೂರು ಗಿಳಿಮರಿಗಳು ಇವೆ ಬೇಕಾ? ಅಂತ ಕೇಳಿದಾಗ ಇಲ್ಲ ಅನ್ನಲಾಗಲಿಲ್ಲ. ಹಾಗಂತ ಸರ್ವತಂತ್ರ ಸ್ವಂತಂತ್ರ್ಯವಾಘಿ ಹಾರಾಡುವ ಹಕ್ಕಿ ಪಕ್ಷಿಗಳನ್ನು ಕೂಡಿಹಾಕಿ ಚಂದ ನೋಡಲೂ ಮನಸ್ಸಾಗುತ್ತಿಲ್ಲ. ಹೀಗೆ ಅರೆ ಮನಸ್ಸಿನಿಂದ ಮೂರೂ ಗಿಳಿಮರಿಗಳನ್ನು ಅಂದೇ ಸಾಗರದಿಂದ ಸಾವಿರ ರೂಪಾಯಿ ತೆತ್ತು ಜಾಲರಿ ಬೋನು ತರಿಸಿ ಒಳಗಿಟ್ಟು ಬಾಳೆಹಣ್ಣು ತಿನ್ನಿಸತೊಡಗಿದೆ. ನೂರಾರು ಅವತಾರಗಳಲ್ಲಿ ಇದೂ ಒಂದು ಆಗಿಹೋಗಲಿ ಎಂಬ ಘನ ಉದ್ದೇಶದಿಂದ. ಅವುಕ್ಕೆ ಇನ್ನು ರಾಮರಾಮ-ಬಾ ಬಾ- ಆರಾಮ- ಎಂಬಂತಹ ಎರಡಕ್ಷರಗಳ ಮಾತನ್ನು ಕಲಿಸುವ ಇರಾದೆ ಇದೆ. ಸದ್ಯ ಬಾಳೆಹಣ್ಣು ತಿನ್ನಿಸುವ ಕಾಯಕ ನಡೆದಿದೆ. ಎಂದು ಮುಕ್ತಾಯ ಹೇಗೆ ಮುಕ್ತಾಯ ಗೊತ್ತಿಲ್ಲ ಆರಂಭ ಆಗಿದೆ. ಅಷ್ಟರೊಳಗೆ ಒಮ್ಮೆ ಬನ್ನಿರಲ್ಲ. "ಅರೆರೆರೆರೆ ಗಿಣಿರಾಮ, ಹೊಯ್ ಪಂಚರಂಗೀ ರಾಮ" ಅನ್ನಿರಲ್ಲ.

Thursday, March 31, 2011

ಗೋಪಾಲ ಋಣಭಾಧೆಯೋ....

"ಗೋಪಾಲ" ಎಂಬ ಹೆಸರು ಕೇಳಿದಾಗಲೆಲ್ಲ ನನಗೆ ಯಕ್ಷಗಾನದ ಸಣ್ಣ ಕತೆಯೊಂದು ನೆನಪಾಗುತ್ತದೆ. ಯಕ್ಷಗಾನದ ವೇಷಧಾರಿಯೊಬ್ಬ ರಂಗದಲ್ಲಿ ಮಸ್ತ್ ಕುಣಿಯುತ್ತಿದ್ದ. ಹೀಗೆ ಗಂಟೆ ಕುಣಿಯುತ್ತಿರುವಾಗ ಆತನಿಗೆ ಜಲಭಾಧೆಯಾಯಿತು. ಆದರೆ ವೇಷ ಕಟ್ಟಿ ವೇದಿಕೆಯಮೇಲೆ ಕುಣಿಯುತ್ತಾ ಇದ್ದಾಗಿದೆ, ಈಗ ಜಲಬಾಧೆ ತೀರಿಸಿಕೊಳ್ಳುವ ಬಗೆ ತೋಚದೆ ಒದ್ದಾಡತೊಡಗಿದೆ. ಯಕ್ಷಗಾನದ ವೇಷಧಾರಿಗಳೋ ಒಂದರಮೇಲೆ ಒಂದು ಪಂಚೆ ಸುತ್ತಿ ಬರೋಬ್ಬರಿ ಆಳಾಗಿರುತ್ತಾರೆ, ಹಾಗಾಗಿ ವೇಷ ಕಟ್ಟಿಯಾದಮೇಲೆ ಜಲಬಾಧೆ ತಿರಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಆದರೆ ಸಮಸ್ಯೆ ಹೇಳಿಕೇಳಿ ಬಾರದಲ್ಲ. ಅರ್ಥಹೇಳಲು ಆಗದು ತಕತೈ ಕುಣಿಯಲೂ ಆಗದು ಎಂಬ ಪರಿಸ್ಥಿತಿ ಬಂದಾಗ ಪದ್ಯ ಹೇಳುವ ಭಾಗವತರ ಶೈಲಿಯಲ್ಲಿಯೇ "ಗೋಪಾಲ ಜಲಬಾಧೆಯೋ..." ಎಂದು ಹಾಡಿದ. ಗೋಪಾಲ ಎಂಬ ಹೆಸರಿನ ಮೃದಂಗಕಾರನಿಗೆ ವೇಷಧಾರಿಯ ಸಮಸ್ಯೆಯ ಅರಿವು ಆಯಿತು. ಆದರೆ ನೂರಾರು ಜನರೆದುರು ಪರಿಹಾರ ಹೇಳಲು ಬರುವುದಿಲ್ಲ. ಅದಕ್ಕೆ ಆತ ಮೃದಂಗದಲ್ಲಿಯೇ "ತಟಕು ತಟಕು ಹೊಯ್ಕ" ಎಂದು ಬಾರಿಸಿದ. ವೇಷಧಾರಿಗೆ ಗೋಪಾಲ ಹೇಳಿಕೊಟ್ಟ ಪರಿಹಾರ ಚೆನ್ನಾಗಿ ಕಂಡು ತಕ್ಷಣ ಅನುಷ್ಠಾನಗೊಳಿಸಿ ಸಮಸ್ಯೆ ತೀರಿಸಿಕೊಂಡ. ಎಂಬುದು ಯಕ್ಷಗಾನದ ಪ್ರಿಯರು ಹೇಳುವ ಕತೆ. ಇಲ್ಲಿ ಮೃದಂಗಕಾರ ಅಕ್ಷರಗಳನ್ನು ಕೂಡ ಮೂಡಿಸಬಲ್ಲ ತನ್ನ ಮೃದಂಗದಲ್ಲಿ ಎಂಬುದು ಸೂಚ್ಯ. ಇರಲಿ ಈಗ ನಾನು ಗೋಪಾಲ ಎಂಬ ಹೆಸರು ಯಾಕೆ ಇಂದು ನನಗೆ ನೆನಪಾಯಿತು ಅಂತ ಹೇಳುತ್ತೇನೆ. ನಮ್ಮ ಊರಿನ ಹರಿಜನ ಕೇರಿಯ ಹಳೇ ತಲೆ ಗೋಪಾಲ. ವಯಸ್ಸು ಎಪ್ಪತ್ನ್ಲಾಲ್ಕು. ಈ ವಯಸ್ಸಿನವರೆಗೆ ಡಾಕ್ಟರ್ ಮನೆಗೆ ಹೋದವನಲ್ಲ. ಬೆಳಿಗ್ಗೆ ಎದ್ದು ಚಾಕುಡಿದು ಬೀಡಿ ಎಳೆಯುವುದರಿಂದ ದಿನದ ಶುಭಾರಂಭ. ಮಟ ಮಟ ಬಿಸಿಲಿನ ಮೂರುಗಂಟೆಯವರೆಗೆ ಕೂಲಿ, ಆನಂತರ ಆಯಾದಿನದ ಸಂಪಾದನೆಗೆ ತಕ್ಕಂತೆ ಒಂದೆರಡು ಕ್ವಾಟರ್ ಜಡಿದು ತನ್ನ ಜೀವನದ ಸಾಹಸಗಾಥೆಯ ಸಾರ್ವಜನಿಕ ಪಠಣ. ಇಂತಿಪ್ಪ ಗೋಪಾಲ ಒಮ್ಮೆ ಸರ್ಕಾರದ ಮೀಸಲಾತಿಯ ನಿಯಮದಿಂದ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದ. ಮತ್ತು ಏರಿದಾಗ ಆ ಕತೆ ಓತಪ್ರೋತವಾಗಿ ಹರಿಯುತ್ತಿರುತ್ತದೆ. ಮತ್ತೆ ಬೆಳಿಗ್ಗೆ ಬೆನ್ನಿನ ಮೇಲೆ ಗುದ್ದಿದರೂ ಮಾತೇ ಹೊರಡದೇನೋ ಎಂಬ ಹಾ ಹೂ ಅಷ್ಟೆ. ಚುನಾವಣೆ ಸಂದರ್ಭದ ರಾಜಕಾರಣಿಗಳ ಭಾಷಣ ಸಂಜೆ ನಿಗದಿಯಾಗಿದ್ದರೆ ಅಲ್ಲಿ ಜನರ ನಡುವೆ ಗೋಪಾಲ ವೇದಿಕೆಯಲ್ಲಿರುವ ಜನರಿಗೆ ಹಿಗ್ಗಾಮುಗ್ಗಾ ಅನ್ನುವುದು ಮಿಕ್ಕವರಿಗೆ ಒಳ್ಳೆಯ ಮನರಂಜನೆ. ಸೋಗಿನ ಜನರು ರಾಜಕಾರಣ ಕೆಟ್ಟದ್ದು, ರಾಜಕಾರಣಿಗಳು ಕೆಟ್ಟವರು ಎಂದು ಅವರ ಬೆನ್ನಹಿಂದೆ ಆಡುತ್ತಾ ಅವರು ಮಾತನಾಡುವಾಗ ತಲೆಗುಂಡಾಡಿಸುತ್ತಿದ್ದರೆ ಈತ ಮಾತ್ರಾ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ. ಆಯಿತು ಬಿಡಿ ಅವೆಲ್ಲಾ... ಮೊನ್ನೆಯಲ್ಲ ಆಚೆಮೊನ್ನೆ ಅವನಿಗೆ ಪಾರ್ಶ್ವವಾಯು ಬಡಿಯಿತು. ಇರುವ ಎರಡು ಗಂಡು ಮಕ್ಕಳಲ್ಲಿ ಒಬ್ಬಾತ ಅತ್ತ ಮುಖ ಹಾಕಲಿಲ್ಲ. ಮತ್ತೊಬ್ಬ ಆರೈಕೆಗೆ ನಿಂತ, ಹೇಳಿಕೇಳಿ ಕೂಲಿಮಾಡಿ ಬದುಕು, ಆತನೆಲ್ಲಿ ಹಣ ತಂದಾನು? ಸಾವಿರಗಟ್ಟಲೆ. ಗೋಪಾಲ ಸ್ವಸ್ಥ ಇದ್ದಾಗ ಅದೆಷ್ಟು ಮನೆಯ ಕೆಲಸ ಮಾಡಿದನೋ ಆದರೆ ಅವರೆಲ್ಲಾ "ಅಯ್ಯ ನಾವು ಅದಕ್ಕೆ ಕೂಲಿ ಕೊಟ್ಟಿದ್ದೇವೆ" ಅಂದು ಬಿಟ್ಟರು. ಗೊಜ ಗೊಜ ಎನ್ನುವ ಗೋಪಾಲನ ಬಳಿ ದಮಡಿ ಕಾಸೂ ಇಲ್ಲ. ಎಪ್ಪತ್ನಾಲ್ಕು ವರ್ಷದ ಜೀವ ಹೈರಾಣಾಗಿ ಮಲಗಿದೆ. "ಅಯ್ಯ ಅಷ್ಟೆಲ್ಲಾ ಅಯ್ಯೋ ಪಾಪ ಅನ್ನುವ ತಾವು ಏನಾದರೂ ಮಾಡಬಹುದಿತ್ತಲ್ಲ" ಅಂತ ನೀವು ಕೇಳಬಹುದು. ಕೇವಲ ಬರೆದು ಕೊರೆದು ಹೇಳುವುದಷ್ಟೆ ತಮ್ಮ ಕೆಲಸವಾ ಅಂತಲೂ ಅನ್ನಬಹುದು. ಇಲ್ಲ ಜೋಲು ಮೋರೆ ಹಾಕಿನಿಂತ ಗೋಪಾಲನ ಮಗನನ್ನು "ರಾಜು ಬಾ ಇಲ್ಲಿ" ಅಂತ ಕರೆದೆ, ಐದುನೂರರ ಎರಡು ನೋಟು ಇಟ್ಟೆ, ಅವನ ಮುಖದಲ್ಲಿ ಅದೇನೋ ವೇದನೆ ಇತ್ತು, ಅರ್ಥ ತಿಳೀಯಲಿಲ್ಲ. ಹಾಗಂತ ನೀವು "ಓಕೆ ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ನನಗೆ ಹೇಳಬೇಡಿ ಕಾರಣ ಗೋಪಾಲ ಬಹಳ ಹಿಂದೆ ನಮ್ಮ ಮನೆಯ ತೋಟದಲ್ಲಿಯೂ ಕೆಲಸ ಮಾಡಿದ್ದ ಅದರ ಋಣ ತೀರಿಸುವ ಸಣ್ಣ ಪ್ರಯತ್ನವಷ್ಟೆ. ಹಾಗೂ ನಾನು ಕೊಟ್ಟ ಹಣದ ವಿಷಯ ಅವನು ಕೆಲಸ ಮಾಡಿದ ಮನೆಯವರಿಗೂ ಹೇಳಿದೆ. ಅಲ್ಲಿ ನನ್ನ ಸ್ವಾರ್ಥ ಇಷ್ಟೆ, ಅವರೂ ಸ್ವಲ್ಪ ಹಣ ಗೋಪಾಲನಿಗೆ ಕೊಡಲಿ ಎಂದು. ಈಗ ನಾನು ಅನ್ನುತ್ತೇನೆ ಗೋಪಾಲ ಋಣಭಾಧೆಯೋ.... ಭಗವಂತ ಎಲ್ಲಾದರೂ ಕೇಳಿಸಿಕೊಂಡರೆ ಅನ್ನಬಹುದೇನೋ "ತಟಾಕು ತಟಾಕು ಕಾಯ್ಕ"

Wednesday, March 2, 2011

ತತ್ ಪ್ರಣಮಾಮಿ ಸದಾಶಿವ ಲಿಂಗಂ

ನನಗೆ ಅತ್ಯಂತ ಇಷ್ಟವಾದದ್ದು ಎಂದರೆ ಲಿಂಗಾಷ್ಟಕ. ಭಕ್ತಿ ತರುತ್ತೆ ಪುಣ್ಯ ಬರುತ್ತೆ ಮುಂದಿನ ಜನ್ಮದಲ್ಲಿ ಅಷ್ಟೈಶ್ವರ್ಯ ಸಿಗುತ್ತೆ, ಲಿಂಗಾಷ್ಟಕ ಹೇಳಿದರೆ ಸುಖ ಮನೆಬಾಗಿಲಿಗೆ ಬಂದು ಕುಳಿತುಕೊಂಡು ಬಾ ಬಾ ಎನ್ನುತ್ತೆ ಎನ್ನುವ ಕಾರಣಕ್ಕಾಗಿ ಅಲ್ಲದಿದ್ದರೂ ಏನೋ ಒಂಥರಾ ಅಮಲು ಇದೆ ಇದೆ ಲಿಂಗಾಷ್ಟಕದಲ್ಲಿ.
ದೈವವನ್ನು ತಲುಪಲು ಈಶ್ವರ ಲಿಂಗದ ಪರಿಕಲ್ಪನೆಯಿದೆಯಲ್ಲ ಅದು ಅತ್ಯಂತ ಅದ್ಬುತವಾದದ್ದು. ಈಶ್ವರನಿಗೆ ಮನುಷ್ಯ ರೂಪ ಕೊಡದೆ ಅವನ ಸುತ್ತ ಯಡವಟ್ಟು ಕತೆಗಳನ್ನು ಹೆಣೆಯದೇ ಕೇವಲ ಲಿಂಗರೂಪವನ್ನಷ್ಟೇ ಇಟ್ಟಿದ್ದರೆ ಇನ್ನೂ ಸೂಪರ್ ಆಗಿ ಇರುತ್ತಿತ್ತು. ಆ ದೇವರೆಂಬ ದೇವರಿಗೆ ಹುಲುಮನುಜರಾದ ನಾವು ನಮ್ಮಗಳ ರೂಪವನ್ನೇ,ನಮ್ಮ ಸಿಟ್ಟನ್ನೇ ನಮ್ಮಗಳ ಅಸಾಹಾಯಕತೆಯನ್ನೇ ತುಂಬುತ್ತಾ ಬಂದು ಅಲ್ಲೂ ಅನುಮಾನಗಳ ಹುತ್ತಗಳು ಏಳಲು ಕಾರಣರಾಗಿಬಿಟ್ಟಿದ್ದೇವೆ. ಮನುಷ್ಯನ ಶಕ್ತಿಯಕ್ಕಿಂತ ಮಿಗಿಲಾದ ಶಕ್ತಿಯೊಂದು ದೈವ. ನೆಮ್ಮದಿಗೆ ಸುಖದ ಕಲ್ಪನೆಗೆ ಭಯ ನಿವಾರಣೆಗೆ, ಧುತ್ತನೆ ಬಂದೆರಗುವ ಆಘಾತಕ್ಕೆ,ಬಗೆಹರಿಸಲಾರದ ಸಮಸ್ಯೆಗೆ ದೇವರು ಎಂಬ ನಂಬಿಕೆ ಅಪಾರ ಸಹಾಯವನ್ನು ಕೊಡುತ್ತದೆ. ಏನೂ ಇಲ್ಲದೆ ಪಕ್ಕನೆ ದೇವರನ್ನು ನಂಬಿ ಎಂದರೆ ಪಾಮರರಾದ ನಮಗೆ ನಿಮಗೆ ಕಷ್ಟ ಸಾದ್ಯ. ಹಾಗಾಗಿ ತನ್ಮೂಲಕ ದೇವರನ್ನು ಕಾಣಲಿ ಎಂಬುದಕ್ಕೆ ಈ ನಾನಾ ರೂಪ. ಅವುಗಳಲ್ಲಿ ಅತ್ಯಂತ ಸುಂದರ ಕಿಂಚಿತ್ ಭಕ್ತಿ ಹುಟ್ಟಿಸುವ ತಾಕತ್ತು ಈಶ್ವರ ಲಿಂಗಕ್ಕೆ ಹಾಗೂ ಸುಂದರ ಲಿಂಗಾಷ್ಟಕಕ್ಕೆ ಇದೆ ಎಂಬುದು ಕೇವಲ ನನ್ನ ನಂಬಿಕೆಯೊಂದೇ ಅಲ್ಲ ಹಲವರದ್ದು. ಹ್ಯಾಪಿ ಶಿವರಾತ್ರಿ.

Wednesday, February 23, 2011

ನಂಬಿ ಕೆಟ್ಟವರಿಲ್ಲವೋ ಎಂಬುದೂ ಇನ್ನೊಂದು ನಂಬಿಕೆಯಷ್ಟೆ.


ಸೂರ್ಯಾಸ್ತ ಯಾ ಸೂರ್ಯೋದಯ ಎರಡೂ ಅದ್ಬುತ ಕ್ಷಣಗಳು ಅಂತ ನಾನು ಹೊಸತಾಗಿ ನಿಮಗೆ ಹೇಳಬೇಕಾಗಿಲ್ಲ.ಹಗಲು ಗಡದ್ದಾಗಿ ನಿದ್ರೆ ಹೊಡೆದು ಸಂಜೆ ದಡಕ್ಕೆನೆ ಎದ್ದು ಸೂರ್ಯನನ್ನು ನೋಡಿದರೆ ಉದಯವೋ ಅಸ್ತವೋ ಅಂತ ಹೇಳುವಲ್ಲಿ ಗೊಂದಲವಾದೀತು. ನಮಗೆ ಬಾಲ್ಯದಲ್ಲಿ ಇಂಥಹಾ ಅನುಭವ ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಆಗುತ್ತಿತ್ತು. ಯಕ್ಷಗಾನ ಹೇಗೂ ನಿಮಗೆ ಗೊತ್ತಿದೆ, ರಾತ್ರಿ ಪೂರ್ತಿ ನಿದ್ದೆಗೆಟ್ಟು ಬೆಳಿಗ್ಗೆ ಮನೆಗೆ ಬಂದು ಮಲಗಿದರೆ ಕಿವಿಯಲ್ಲಿ ಚಂಡೆ ಮದ್ದಲೆಯದೇ ಸದ್ದು ಕಣ್ಮುಂದೆ ಕನಸೇ ಅಲ್ಲ ಎನ್ನುವಷ್ಟು ಪಕ್ಕಾ ವೇಷಧಾರಿಗಳ ಆರ್ಭಟ. ಹೀಗೆ ಸಂಜೆಯವರೆಗೂ ಮಲಗಿ ನಿದ್ರೆ ಪೂರ್ತಿಯಾದ ಮೇಲೆ ದಡಕ್ಕನೆ ಎದ್ದು ಮುಖ ತೊಳೆದು ಒಂದು ಭಸ್ಮ ಜಡಿದು ಹೂವು ಕೊಯಲು ಹೊರಟ ಘಟನೆ ಬೇಕಾದಷ್ಟಿದೆ. ಮನೆಯ ಹಿರಿಯರು "ಅಪೀ ಈ ಮೂರ್ಸಂಜೆ ಹೊತ್ತಲ್ಲಿ ಎತ್ಲಾಗೆ ಹೊಂಟ್ಯ..?" ಎಂದು ಕೇಳಿದಾಗ ಕಕ್ಕಾಬಿಕ್ಕಿಯಾಗಿ ನಂತರ "ಅಯ್ಯೋ" ಅಂದಿದ್ದು ಹಲಬಾರಿ. ಸರಿ ಅವೆಲ್ಲಾ "ಸುನೇರೇ ಫಲ್" ಬಿಡಿ, ಅಂದಿನ ಘಟನೆಯನ್ನು ಒಂಟಿಯಾಗಿ ಕುಂತು ಆಕಾಶ ನೋಡುತ್ತಾ ನೆನಪಿಸಿಕೊಂಡರೆ ತನ್ನಷ್ಟಕ್ಕೆ ಒಂದು ಮುಗುಳ್ನಗೆ ಮುಖದಲ್ಲಿ ಮೂಡುತ್ತದೆ. ಈಗ ನನಗೆ ಅವೆಲ್ಲಾ ನೆನಪಾಗಿದ್ದು ಏಕೆಂದರೆ ಶ್ರೀಕಾಂತ ದತ್ತ ಸೂರ್ಯಾಸ್ತದ ಫೋಟೋ ನೋಡಿ ಎಂದು ಮೈಲ್ ಮಾಡಿದಾಗಲೆ.

ಕ್ಯಾಮೆರಾ ಹುಚ್ಚಿನವರ ಮೊದಲ ಆದ್ಯತೆ ಸೂರ್ಯೋದಯ ಎಂಡ್ ಸೂರ್ಯಾಸ್ತ. ನಡು ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಕುಡಿದ ನೀರನ್ನೂ ಸುಸೂ ಮಾಡಲು ಬಿಡದ ಹಾಗೆ ಬೆವರಿನ ಮೂಲಕ ಕಕ್ಕಿಸುವ ಆ ಬೆಂಕಿಯ ಉಂಡೆ ಸಂಜೆ ಮತ್ತು ಬೆಳಿಗ್ಗೆ ಬೇಡವೆಂದರೂ ನಮ್ಮ ನಿಮ್ಮ ಬಾಯಲ್ಲಿ ವಾವ್ ಎನ್ನಿಸಿಬಿಡುತ್ತಾನೆ. ಅಂತಹ ಅದ್ಬುತದ ಕ್ಷಣಗಳನ್ನು ನೋಡಿದ ಕಣ್ಣುಗಳೂ ಪರಮಪಾವನ. ನಾನು ನನ್ನ ನಲವತ್ನಾಲ್ಕನೇ ವಯಸ್ಸಿನವರೆಗೆ ಸುಮಾರು ನೂರು ಸೂರ್ಯೋದಯ ಸೂರ್ಯಾಸ್ತವನ್ನು ಅನುಭವಿಸಿದ್ದೇನೆ. ಮನೆಯಲ್ಲಿ ಕುಳಿತು ಕಣ್ಮುಚ್ಚಿದರೆ ನೋಡಿದ ಹಲವಾರು ಸೂರ್ಯೋದಯದ ಕ್ಷಣಗಳು ಕಣ್ಮುಂದೆ ಬಂದು ನಿಲ್ಲುವಷ್ಟು ಅನುಭವಿಸಿ ಮಜ ತೆಗೆದುಕೊಂಡಿದ್ದೇನೆ. "ಸಾಕು, ನೀ ಏನೋ ಹೇಳ ಹೊರಟಿದ್ದೀಯಾ ಎಂಬುದು ಪೀಠಿಕೆ ನೋಡಿದ ಕೂಡಲೆ ತಿಳಿಯಿತು ಹೇಳುವುದು ಹೇಳಿ ಮುಗಿಸಿ ಮಾರಾಯ" ಎಂದಿರಾ ಆಯ್ತು ಅದರತ್ತ ಹೊರಳುತ್ತೇನೆ.

ಗಾಯಿತ್ರಿ ಮಂತ್ರ ಎಂಬುದಿದೆಯಲ್ಲ ಅದು ಸೂರ್ಯದೇವನ ಕುರಿತಾದ್ದು ಅಂತ ಸಿಕ್ಕಾಪಟ್ಟೆ ಬಲ್ಲವರು ಯಾರೋ ಹೇಳಿದರು. ಉಷ:ಕಾಲದಲ್ಲಿ ಸೂರ್ಯನತ್ತ ಮುಖಮಾಡಿ ನಿಂತು ಗಾಯತ್ರಿ ಮಂತ್ರ ಪಠಿಸುತ್ತಾ(ಕಣ್ಮುಚ್ಚಿ ಎನ್ನುವುದು ಅಂಡರ್ ಸ್ಟುಡ್) ಅರ್ಘ್ಯ ನೀಡಿದರೆ ಸಿಕ್ಕಾಪಟ್ಟೆ ಶಕ್ತಿ ಎಂದರು ಇನ್ನೂ ತುಸು ಜಾಸ್ತಿ ಬಲ್ಲವರು. ಸರಿ ಬಿಡಿ ಹಾಗಿದ್ದಮೇಲೆ ಅದರಲ್ಲೇನಿದೆ ಎಂದೆ. ಸಿಂಪಲ್ "ಹೇ ಸೂರ್ಯ ದೇವಾ ನನ್ನಲ್ಲಿರುವ ಧೀ ಶಕ್ತಿಯನ್ನು ಪ್ರಚೋದಿಸು" ಎಂಬುದು ಭಾವಾರ್ಥ ಎಂದು ಅಲ್ಲಿಂದ ಜಾರಿಕೊಂಡರು. ಸಾಕು ಬಿಡಿ ಅಷ್ಟು ಹೇಳಿದರೆ. ಆದರೆ ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಯ ಆಗಿದೆ ಅಂತ ನನಗನ್ನಿಸತೊಡಗಿತು. ಉದಯಿಸುತ್ತಿರುವ ಸುಂದರ ಸೂರ್ಯನೆದುರು ಕಣ್ಮುಚ್ಚಿ ಗಾಯತ್ರಿ ಜಪ ಮಾಡಲು ಅಣತಿಯಿತ್ತರೆ ಮನಸ್ಸು ಮಂತ್ರದಲ್ಲಿನ "ಗಾಯಿಸ್ತ್ರೀ"ಯನ್ನಷ್ಟೇ ಹಿಡಕೊಂಡು ಎಲ್ಲೆಲ್ಲೋ ಹಾರಾಡುತ್ತದೆ ಎಂಬ ನಮ್ಮ ಹದಿಹರೆಯದವರ ಮಾತು ನೆನಪಾಗಿ ವ್ಯತ್ಯಾಸವಾದ ಲಿಂಕ್ ಎಲ್ಲಿ ಅಂತ ಪಳಕ್ಕನೆ ತಿಳಿಯಿತು. ಉದಯಿಸುತ್ತಿರುವ ಸೂರ್ಯನೆದುರು ಕಣ್ಬಿಟ್ಟು ಗಾಯತ್ರಿ ಹೇಳಿದರೆ ಎಂಬ ಆಲೋಚನೆ ಬಂದದ್ದೇ ಪ್ರಯತ್ನಿಸಿದೆ. ಸಕ್ಸಸ್ ಸೂಪರ್ ಸಕ್ಸಸ್. ಆನಂತರ ಮನೆಗೆ ಬಂದು ಕಣ್ಮುಚ್ಚಿ ಗಾಯತ್ರಿ ಹೇಳಿದಾಗಲೆಲ್ಲೆ ನನ್ನ ಕಣ್ಮುಂದೆ ಸೂರ್ಯೋದಯವಾಗತೊಡಗಿತು. ವಾವ್ ಸೂಪರ್ ಇದೆ ಕಣ್ರಿ.

ಎಂಬಲ್ಲಿಗೆ ಸೂರ್ಯೋದಯವನ್ನು ಕಣ್ತುಂಬಾ ಅನುಭವಿಸಬೇಕು ಪ್ರಶಾಂತ ಮನಸ್ಥಿತಿಯಿಂದ ಎಂಬುದು ತಿಳಿಯಿತು. ಅದಕ್ಕೇನೂ ಗಾಯತ್ರಿ ಮಂತ್ರವೇ ಆಗಿರಬೇಕೆಂದಿಲ್ಲ ಜಸ್ಟ್ ನಿಮ್ಮ ಉಸಿರಾಟವನ್ನು ಗಮನಿಸುತ್ತಾ ಅನುಭವಿಸಿದರೂ ಆಯಿತು. ಒಟ್ಟಿನಲ್ಲಿ ನಿಮ್ಮ ಮಿದುಳಿನೊಳಗೆ ಸೂರ್ಯೋದಯದ ದೃಶ್ಯಾವಳಿಗಳು ದಟ್ಟವಾದ ಕೋಶವಾಗಿ ಅದು ದಾಖಲಿಸ್ಪಡುವಂತೆ ಆಸ್ವಾದಿಸಬೇಕು,ನಂತರ ಆತ ನಮ್ಮ ಆಸ್ತಿಯಾಗುತ್ತಾನೆ. ಬೇಕಾದಾಗ ಉದ್ಭವಿಸುತ್ತಾನೆ ಮತ್ತೆ ಧೀ ಶಕ್ತಿಯನ್ನು ಕೊಡುತ್ತಾನೆ. (ನೆನಪಿರಲಿ ಧೀ ಶಕ್ತಿಯೆಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಏರಿಸುವುದೋ, ಅಥವಾ ನಿಮಗಾಗದವರನ್ನು ಮುಗಿಸಲೋ, ಯಾ ಚಂದದ ಹುಡುಗಿಯನ್ನೋ ದಕ್ಕಿಸಿಕೊಳ್ಳಲೋ ಇರುವುದಲ್ಲ ,). ಅದೇ ಚುಮುಚುಮು ಬೆಳಿಗ್ಗೆ ಗುಡ್ಡದ ನೆತ್ತಿಯನ್ನೇರಿ ಸೂರ್ಯೋದಯದ ಹೊತ್ತಿಗೆ ಕಣ್ಮುಚ್ಚಿ ಕುಳಿತುಕೊಂಡು ನೂರಾ ಎಂಟೇನು ಸಾವಿರದಾ ಎಂಟು ಗಾಯಿತ್ರಿ ಜಪ ಮಾಡಿದರೂ ಯಾವ ಸೂರ್ಯನೂ ಮನ:ಪಟಲದಲ್ಲಿ ಮೂಡಲು ಸಾದ್ಯವಿಲ್ಲ. ಮುನ್ನಾದಿನ ನೋಡಿದ ಟಿವಿ ಸೀರಿಯಲ್ಲಿನ ರಾಗಿಣಿಯೋ, ಟಿ ಎನ್ ಸೀತಾರಾಮೋ ಮೂಡಿ ತಕತೈ ತಕತೈ ಕುಣಿಯುತ್ತಿರುತ್ತಾರೆ. ಹಾಗಾಗದೇ ಸೂಪರ್ ತೇಜಸ್ಸು ಲವಲವಿಕೆ ನಿಮ್ಮದಾಗಬೇಕಿದ್ದಲ್ಲಿ ಸೂರ್ಯನನ್ನು ತುಂಬಿಸಿಟ್ಟುಕೊಂಡು ಶಕ್ತಿ ಪಡೆಯಬೇಕು. ಹಾ ಹೇಳಲು ಮರೆತೆ ಅದೊಂದು ಶಕ್ತಿ ಅಂತ ನಂಬಿಕೆ ಅಷ್ಟೆ. ಮತ್ತು ನಂಬಿ ಕೆಟ್ಟವರಿಲ್ಲವೋ ಎಂಬುದೂ ಇನ್ನೊಂದು ನಂಬಿಕೆಯಷ್ಟೆ.

ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ...!

ನಮಗೆ ಬರುವ ಆಲೋಚನೆಗಳನ್ನೆಲ್ಲಾ ಅನುಷ್ಠಾನಕ್ಕೆ ತೊಡಗಿಸಿದರೆ ಏನಾಗುತ್ತೆ? ಎಂಬ ಪ್ರಶ್ನೆ ನನಗೆ ಹಲವಾರು ಬಾರಿ ಕಾಡುತ್ತಿರುತ್ತದೆ. ಹಾಗೆ ಮಾಡಿದರೆ ಇಂವ ಯಡವಟ್ಟು ಎನ್ನುವ ಹೆಸರೂ ಬರುತ್ತದೆ ಎಂಬ ಅನುಭವ ಆಗಿದೆ. ಅದು ಹೀಗೆ,
ನನಗೆ ಭತ್ತ ಬೆಳೆಯುವ ರೈತರೆಂದರೆ ಅದೋನೋ ಒಂಥರಾ ಅಕ್ಕರೆ. ಪಾಪ ಅವರುಗಳು ವರ್ಷಪೂರ್ತಿ(ಮಲೆನಾಡಿನಲ್ಲಿ ಅಂತಿಟ್ಟುಕೊಳ್ಳಿ) ಕಷ್ಟಪಟ್ಟರೂ ಪೂರ್ತಿ ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಅಂತಹ ರೈತರು ನನ್ನ ಸಾಮಿಪ್ಯಕ್ಕೆ ಸಿಕ್ಕಾಗ ಖುಶಿಯಾಗಿ ಮಾತನಾಡಿಸುತ್ತಲೇ ಇರುತ್ತೇನೆ. ಆದರೂ ಒಮ್ಮೊಮ್ಮೆ ಈ ಪ್ರೀತಿ ತೀರಾ ಯಡವಟ್ಟಿನ ಪ್ರಸಂಗಗಳಿಗೆ ನಾಂದಿಯಾಗುತ್ತದೆ.
ಒಂದು ದಿನ ಕಳೆದವರ್ಷ ಬಿರುಬೇಸಿಗೆಯಲ್ಲಿ ಸಾಗರಕ್ಕೆ ಹೋಗುತ್ತಿದ್ದೆ, ಅಕ್ಕಪಕ್ಕ ಭತ್ತದ ಗದ್ದೆಗಳು ಬಿಸಿಲಿಗೆ ಬಾಯ್ದೆರೆದು ನಿಂತಿದ್ದವು. ಹಾಗೆ ಹೋಗುತ್ತಿದಾಗ ಗದ್ದೆಬಯಲಿನಲ್ಲಿ ಎತ್ತು ಮೇಯಿಸಿಕೊಂಡು ವಯಸ್ಕನೊಬ್ಬನಿದ್ದ. ನನ್ನ ಮಂಡೆಗೆ ಒಂದು ಆಲೋಚನೆ ಪಳಕ್ಕನೆ ಮಿಂಚಿತು. ಪಾಪ ಈ ಭತ್ತ ಬೆಳೆಯುವವರು ಇಲ್ಲದಿದ್ದರೆ ಪ್ರಪಂಚ ಬಲು ಕಷ್ಟ, ನಮಗಾಗಿ ಅವರುಗಳು ಅವರ ಸ್ವಾರ್ಥದ ನಡುವೆಯೂ ಒಂದಷ್ಟು ಕೆಲಸ ಮಾಡುತ್ತಾರೆ, ಹಾಗಾಗಿ ನಾವೂ ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬಾರದೇಕೆ?, ಆಲೋಚನೆ ಮೂಡಮೂಡುತ್ತಿದ್ದಂತೆ ಕಾರು ರಸ್ತೆಬದಿಗೆ ನಿಲ್ಲಿಸಿ ಆತನತ್ತ ಹೆಜ್ಜೆ ಹಾಕತೊಡಗಿದೆ.
ಆತ ನನಗೆ ಅಪರಿಚಿತ ಹಾಗೆಯೇ ಆತನಿಗೆ ನಾನೂ... ಆದ್ದರಿಂದ ಆತ ನನ್ನನ್ನೇ ಎವೆಯಿಕ್ಕದೇ ನೋಡತೊಡಗಿದ. ನಾನು ಸೀದಾ ಅವನ ಹೋಗಿ " ನಾನು ....... ಊರಿನವನು ನನ್ನ ಹೆಸರು ...... ನೀವು ಭತ್ತ ಬೆಳೆದು ಉಪಕಾರ ಮಾಡುತ್ತೀರಿ, ಅದಕ್ಕಾಗಿ ನನಗೆ ಖುಷಿ, ನಾನು ನಿಮಗೆ ಸ್ವಲ್ಪ ಸಹಾಯ ಮಾಡಬೇಕೆಂದಿದ್ದೇನೆ ಎಂದು ಐದು ನೂರು ರೂಪಾಯಿ ಅವನಿಗೆ ಕೊಡಲು ಹೋದೆ.
ನಾನು ಕೊಟ್ಟ ಐದುನೂರು ರೂಪಾಯಿ ನೋಟು ಇಸಕೊಂಡು ಹಿಂದೆ ಮುಂದೆ ತಿರುಗಿಸಿ ನೋಡಿ ಆನಂತರ ಕೈಯೆತ್ತಿ ದೂರದಲ್ಲಿ ಇದ್ದ ಮತ್ತೊಬ್ಬನನ್ನು ಕೂಗಿ ಕರೆದ. ಸರಿ ನನ್ನ ಕೆಲಸವಾಯಿತಲ್ಲ ಎಂದು ನಾನು "ಆಯ್ತು ಬರ್ತೇನೆ" ಎಂದೆ. "ಸ್ವಲ್ಪ ಅಂವ ಬರಾಗಂಟ ಇರ್ರಿ" ಎಂದ ರೈತ. ಆಯ್ತಪ್ಪ ಎನ್ನುತ್ತಾ ನಿಂತೆ. ಕೆಲ ಸಮಯದ ನಂತರ ಆತ ಬಂದ, ಅವನೂ ಇವನು ಅದೇನೋ ಗುಸುಗುಸು ಪಿಸಪಿಸ ಮಾಡಿಕೊಂಡರು, ನಂತರ ಮತ್ತೊಬ್ಬಾತ ನನ್ನ ಬಳಿ ಬಂದು, ಊರು ಕೇರಿ ಎಲ್ಲಾ ವಿಚಾರಿಸಿದ . ಎಲ್ಲಾ ಹೇಳಿದ ಮೇಲೆ ಮೊದಲನೆಯವನ ಬಳಿ ಇದ್ದ ಐದುನೂರು ರೂಪಾಯಿ ಇಸಿದು ನನ್ನ ಕೈಗೆ ಕೊಡುತ್ತಾ " ಸುಮ್ನೆ ಇದ್ನ ತಗಂಡು ವಾಪಾಸು ಹೋಗಿ, ನಿಮ್ಮ ಆಟ ಎಲ್ಲಾ ನಮ್ತಾವ ನಡಿಯಾದಿಲ್ಲ" ಎಂದ . ನನಗೆ ಕಕ್ಕಾಬಿಕ್ಕಿ, ಯಾವ ಆಟ? ಆತನನ್ನು ಕೇಳಿದೆ. "ಅಯ್ಯಾ ಸುಮ್ನಿರಿ, ಸುಮ್ನೆ ಹಾದಿಮೇಲೆ ಹೋಗೋರಿಗೆಲ್ಲ ಹಿಂಗೆ ದುಡ್ಡು ಕೊಡೋಕೆ ಯಾರಿಗೇನು ಮಳ್ಳ, ಅದರ ಹಿಂದಿನ ಮರ್ಮ ನಂಗೆ ಗೊತ್ತೈತಿ, ಸುಮ್ನೆ ರೈಟ್ ಹೇಳಿ" ಎಂದು ಸ್ವಲ್ಪ ಬಿರುಸಾಗಿ ಹೇಳಿದ. ಬೇರೆ ದಾರಿ ಕಾಣದೆ ನಾನು ತೆಪ್ಪನೆಯ ಮುಖ ಹಾಕಿಕೊಂಡು ವಾಪಾಸು ಹೊರಟೆ.
ನಾನು ಒಂಥರಾ ವಿಚಿತ್ರ ಪರಿಸ್ಥಿತಿಗೆ ಸಿಕ್ಕಿದ್ದೆ. ಹೌದು ನಾನು ಮಾಡಿದ್ದ ಕೆಲಸ ಎಲ್ಲರೂ ಮಾಡದಿರುವದ್ದು, ಮತ್ತೆ ಹಾಗೆಲ್ಲ ಹೀಗೆಲ್ಲಾ ಮಾಡಬಾರದು ಅಂತ ಸಮಾಜ ಅಘೋಷಿತವಾಗಿ ತೀರ್ಮಾನಿಸಿಬಿಟ್ಟಿದೆ. ಹೀಗೆಲ್ಲಾ ಸಹಜವಾಗಿರದ್ದನ್ನು ಮಾಡಹೊರಟರೆ ಹೀಗೆ ಆಗುವುದು ಎನ್ನುತ್ತಾ ನನ್ನ ಮಂಡೆಗೆ ಹೊಳೆದ ಉಪಾಯವನ್ನು ಶಪಿಸುತ್ತಾ ಕಾರಿನತ್ತ ಹೆಜ್ಜೆಹಾಕಿದೆ. ಆನಂತರವೂ ಚೌರ ಮಾಡಿಸದ ದಿನಗಳಲ್ಲಿ ಮಂಡೆಯೊಳಗಿನಿಂದ ಇದೇ ತರಹ ಐಡಿಯಾಗಳು ಬರುತ್ತಲೇ ಇರುತ್ತವೆ ಆದರೆ ಅನುಷ್ಠಾನಕ್ಕೆ ಹೋಗಿರಲಿಲ್ಲ. ಮತ್ತೆ ಬ್ಲಾಗಿನ ಹಿಂದಿನ ಪೋಸ್ಟ್ ನಲ್ಲಿ ಅದೇ ತರಹದ ಅನುಭವ ಆಗಿ ಬೆಚ್ಚಿದೆ. ಥೋ.....ಛೆ ...ಎನ್ನುತ್ತಾ.

Tuesday, February 22, 2011

ತೀರ್ಪುಗಾರ ನಾನಲ್ಲ. ಬಹುಮಾನ ನಿಮಗೆ

ಪ್ರಿಯ ಓದುಗರೇ,

ಹಿಂದೆ ಯಾವುದೋ ಒಂದು ಪೋಸ್ಟ್ ನಲ್ಲಿ ನಾನು ಹಲುಬಿದ್ದೆ, ವಿಜಯಕರ್ನಾಟಕಕ್ಕೆ ನಾನು ಬರೆದ ಲೇಖನಕ್ಕೆ ಸರಿ ಸುಮಾರು ೧೨ ಸಾವಿರ ಸಂಭಾವನೆಯನ್ನೇ ಕಳುಹಿಸಿಲ್ಲ, ಮೈಲ್ ಮಾಡಿದರೂ ಉತ್ತರವಿಲ್ಲ ಹಾಗೆ ಹೀಗೆ ಲೊಂಗೆ ಲೊಟ್ಟೆ ಎಂದೆಲ್ಲಾ. ಮೈಲ್ ಮಾಡಿಲ್ಲವಾದರೂ ೪೩೫೦ ರೂಗಳ ಚೆಕ್ ಕಳುಹಿಸಿದ್ದಾರೆ. ಧನ್ಯವಾದ ಅವರಿಗೆ. ಈಗ ಅನ್ನಿಸುತ್ತೆ ಬ್ಲಾಗ್ ಬರೆಯಬಾರದಿತ್ತು(ನೋಡು ಹಣ ಎಂದ ಕೂಡಲೇ ದನಿಯೇ ಬದಲಾಯಿತು ಎಂದಿರಾ...? ಒಕೆ ಇರ್ಲಿ ಬಿಡಿ) ಆದರೂ ಬರೆದಾಯಿತಲ್ಲ ಹೋಗಲಿ ಬಿಡಿ. ಈಗ ನೇರ ವಿಷಯಕ್ಕೆ ಬರೋಣ. ಈಗ ಐದು ನೂರು ರೂಪಾಯಿಗಳ ಬಹುಮಾನವಿರುವ ಒಂದು ಸಣ್ಣ ಸ್ಪರ್ಧೆ ಈ ನನ್ನ ಬ್ಲಾಗ್ ಓದುಗರಿಗೆ. ನೀವು ಮಾಡಬೇಕಾದ್ದು ಇಷ್ಟೆ. ಕನ್ನಡದ ಯಾವ್ ಬ್ಲಾಗ್ ನಿಮಗೆ ಅತ್ಯಂತ ಇಷ್ಟವಾಯಿತು? ಕಾರಣವೇನು?

ಚಿಕ್ಕದಾದ ಚೊಕ್ಕದಾದ ಇಷ್ಟವಾದ ಬ್ಲಾಗ್ ಹಾಗೂ ಕೊಡುವ ಕಾರಣದ ಮೇಲೆ ತೀರ್ಪು. ತೀರ್ಪುಗಾರ ನಾನಲ್ಲ. ಬಹುಮಾನ ನಿಮ್ಮ ಅಕೌಂಟ್ಗೆ ಬಂದು ಬೀಳುತ್ತದೆ. ಶುರು ಹಚ್ಕೊಳ್ಳಿ..... (ಈ ತಿಂಗಳಾಂತ್ಯ ಗಡವು) ಮೈಲ್ ಮೂಲಕವೂ ತಿಳಿಸಬಹುದು (shreeshum@gmail.com)

ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು

ಏನಾಗುತ್ತೆ ಎಂದರೆ ಲೇಖನಕ್ಕಿಂತ ಕಾಮೆಂಟೇ ಸೂಪರ್ರಾಗಿರುತ್ತೆ , ಸಿನೆಮಾಗಿಂತ ಟೈಟಲ್ಲೇ ಚೆನ್ನಾಗಿರುತ್ತೆ, ಹುಡುಗಿಗಿಂತ ಡ್ರೆಸ್ಸೇ ಮಜವಾಗಿರುತ್ತೆ, ಹೀಗೆ ಇದು ಮುಂದುವರೆಯುತ್ತೇ,

ಹೀಗೆಲ್ಲಾ ಏಕೆ ಎಂದರೆ ನಾವು ಗಂಟೆಗಟ್ಟಲೆ ತಲೆ ಖರ್ಚು ಮಾಡಿ ಒಂದು ಬ್ಲಾಗು ಕುಟ್ಟುತ್ತೇವೆ, ಸಂಡಾಸು ಮನೆಯಲ್ಲಿ ಕುಂತಾಗಲೋ, ಇನ್ನೇನು ನಿದ್ರೆ ಹತ್ತಿತು ಎನ್ನುವಾಗಲೋ, ಹಲ್ಲಲ್ಲಿ ಅಡಗಿ ಕುಳಿತ ಸಾಸಿವೆ ಕಾಳನ್ನು ಕೀಳುವಾಗಲ ಮಂಡೆಯಲ್ಲಿ ಪಳಕ್ಕನೆ ಮಿಂಚುವ ಯೋಚನೆಯನ್ನು ಅಕ್ಷರರೂಪಕ್ಕೆ ಇಳಿಸಿ ಬ್ಲಾಗು ಕುಟ್ಟಿ ಉಸ್ ಎಂದು ನಿಟ್ಟುಸಿರು ಬಿಟ್ಟು ತಾಸಿನೊಳಗೆ ಮೂರ್ನಾಲ್ಕು ಸಾಲಿನ ಕಾಮೆಂಟು ನಮ್ಮ ಇಡೀ ಬ್ಲಾಗಿನ ಗಂಟೆಗಟ್ಟಲೆ ಕೊರೆದ ಸಾಲುಗಳ ಸಾರವನ್ನು ಹೀರಿ ಹೇಳಿಬಿಡುತ್ತೆ, ನನ್ನ ಹಿಂದಿನ ಪೋಸ್ಟ್ "ಹೋಗಲಿ ಬಿಡಿ ಮತ್ತೆ ಸಿಗೋಣ" ಕ್ಕೆ ಮೂರೇ ಮೂರು ಕಾಮೆಂಟು ಬಂದಿದೆ, ೧ ಹೊಸ್ಮನೆ ಮುತ್ತು ೨ ಮೃತ್ಯುಂಜಯ ಹೊಸ್ಮನೆ ೩ ರಮ್ಯಾ. ಅವು ಮೂರು ಓದಿದರೆ ನಾನು ಇಷ್ಟು ಬರೆಯಲು ಅಷ್ಟೆಲ್ಲಾ ಸಾಲುಗಳನ್ನು ಕುಟ್ಟಿದೆನಾ ? ಅನ್ನಿಸಿಬಿಡುವಷ್ಟು. ನಿಜವಾಗಿಯೂ ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು,.

Muthu said...
ರಾಗಣ್ಣಾ....ದುಡ್ಡು ಎಂದರೆ ಶುದ್ಧ ಉಪ್ಪು.
ತುಸುವೇ ನಾಲಿಗೆ ಮೇಲಿಟ್ಟು ಕೊಂಡರೆ
ರುಚಿ. ಹೆಚ್ಚಾಗಿ ತಿಂದರೆ ದಾಹ.ಇದು
ಕಾರಂತಜ್ಜನ ಮಾತೋ
Mruthyunjaya.H said...
ತಮ್ಮಲ್ಲಿ ಜ್ಞಾನವಿಲ್ಲ ಎಂದು ಕೊರಗುವವರು ಕಡಿಮೆ.ತಮ್ಮಲ್ಲಿ ಹೃದಯವಂತಿಕೆಯಿಲ್ಲ ಎಂದು ಕೊರಗುವವರು ಇನ್ನೂ ಕಡಿಮೆ.ಹಣವಿಲ್ಲ ಎಂದು ಕೊರಗುತ್ತಿರುವವರಿಗೆ ಹಣ ಸಿಕ್ಕ ಕೂಡಲೇ ಅದನ್ನು ಜಗಜ್ಜಾಹೀರು ಮಾಡಿಕೊಳ್ಳುವ ತವಕ. ಯಾಕೆಂದರೆ ಅವರ ಬಳಿ ಈಗಲೂ ಈಗಲೂ ಏನೂ ಇಲ್ಲ ಹಣದ ಹೊರತಾಗಿ!
ಮತ್ತೆ ನಾನು ರವಿಬೆಳೆಗೆರೆಯವರನ್ನು ಎಂದೂ ಓದಿಲ್ಲ!
Ramya said...
Hey Raghu mava, good story I had to open my Fully loaded Laptop and connect to home interenet to read ur article, by that time my Microwave oven had cooke food it was beeping, since it was very hot I had to switch on AC still I dint give up I was reading ur article and my Hubs came by then tired by traffice bcoz of his Big CAR :) Henge!!!!