(ಚೈತ್ರರಶ್ಮಿ ಯಲ್ಲಿ ಬಹುಮಾನ ಪಡೆದ ಕತೆ)
ಬೆಳಿಗ್ಗೆ ಮನೆಬಿಟ್ಟ ಕರಿಯಜ್ಜ ವಾಪಾಸು ಮನೆಗೆ ಬಂದಾಗ ಮಟಮಟ ಮಧ್ಯಾಹ್ನ. ಮುಚ್ಚಿದ್ದ ಬಾಗಿಲೆದುರು ನಿಂತು ಮೂರ್ನಾಲ್ಕು ಬಾರಿ ಹೆಂಡತಿಯನ್ನು ಕೂಗಿ ಕರೆದ. ಒಳಗಿನಿಂದ ಉತ್ತರ ಬಾರದ್ದರಿಂದ ಲಚ್ಚಿಯ ಸಿಟ್ಟು ಇನ್ನೂ ತಣಿದಿಲ್ಲ ಅಂತ ಅಂದುಕೊಂಡು "ಬಡವಾ ನೀ.... ಮಡಗಿದಂಗೆ ಇರು ಅಂತ ಹೇಳಿದ್ರೆ ಕೇಳಿದ್ಯಾ..." ಎಂದು ತನ್ನನ್ನೇ ತಾನು ಬೈದುಕೊಂಡ, ಅಷ್ಟಕ್ಕೂ ತಣಿಯದ ಸಿಟ್ಟಿಗೆ ಬಲಗಾಲಿನಿಂದ ದಡಾರನೆ ಬಾಗಿಲನ್ನು ಒದ್ದ. ಆ ಒದೆತದ ರಭಸಕ್ಕೆ ಅಷ್ಟೇನೂ ಗಟ್ಟಿಮುಟ್ಟಾಗಿರದ ಜಾಯಿಕಾಯಿ ಹಲಗೆಯ ಬಾಗಿಲು ಮಗಚಿಕೊಂಡು ಬಿತ್ತು. ಮುರಿದು ಬಿದ್ದ ಬಾಗಿಲ ಶಬ್ದಕ್ಕೆ ಗೂಡೊಳಗಿದ್ದ ಕೋಳಿಗಳು ಬದುಕಿದರೆ ಕುಕ್ಕಿ ತಿಂದೇವು ಎಂದು ಪಟಪಟನೆ ರಕ್ಕೆ ಬಡಿದುಕೊಂಡು ಕೊ ಕ್ಕೊ ಕ್ಕೊ ಎನ್ನುತ್ತಾ ಹಾರಿಹೋದವು. ಕೋಳಿ ಹಾರಿದ ಸದ್ದಿಗೆ ಕರಿಯಜ್ಜನ ಬಡಕಲು ನಾಯಿ ಮೈತುಂಬಿ ಕೂಗುವಷ್ಟು ಶಕ್ತಿ ಇಲ್ಲದಿದ್ದರೂ ತನ್ನ ವಂಶಪಾರಂಪರ್ಯ ಕರ್ತವ್ಯಕ್ಕೆ ಚ್ಯುತಿ ತರಬಾರದೆಂಬ ಒಂದೇ ಕಾರಣದಿಂದ ಅಳಿದುಳಿದ ಶಕ್ತಿಯನ್ನು ಬಳಸಿ ಊಳಿತೊಡಗಿತು. ಅಷ್ಟರತನಕ ಕೋಗಿಲೆಯ ಶಾಂತ ಸ್ವರದಿಂದ, ಅರಸನ ಹಕ್ಕಿಯ ಗುಟುರುವಿಕೆಯಿಂದ ತಂಪಾಗಿದ್ದ ಸುತ್ತಲ ಪರಿಸರ ಅರೆಕ್ಷಣದಲ್ಲಿ ಕದಡಿ ಗಲಿಗಿಬಿಲಿಗೊಳಗಾಯಿತು. ಇಷ್ಟಕ್ಕೆಲ್ಲಾ ಕಾರಣನಾದ ಕರಿಯಜ್ಜನ ರಭಸ, ಬಾಗಿಲು ಮುರಿದು ಬಿದ್ದ ಮರುಕ್ಷಣ ಆಘಾತಕ್ಕೆ ಒಳಗಾಗಿ ಹತಾಶ ಸ್ಥಿತಿಗಿಳಿಯಿತು. ಬೋರಲು ಬಿದ್ದ ಬಾಗಿಲ ಬಳಿ ಗೊಡೆಗೊರಗಿ ತನ್ನ ಹಣೇಬರಹವನ್ನು ಶಪಿಸತೊಡಗಿದ ಕರಿಯಜ್ಜ. ತನ್ನ ಈ ದೈನೀಸಿ ಸ್ಥಿತಿಗೆ ಕಾರಣವಾದ ಘಟನೆಗಳು ನೆನಪಾಗತೊಡಗಿದವು.
*********
ಕರಿಯಜ್ಜನ ಈ ಹತಾಶ ವರ್ತನೆ ಶುರುವಾಗಿದ್ದು ಹದಿನೈದು ದಿವಸಗಳ ಹಿಂದಿನದಾಗಿದ್ದರೂ ಸ್ವಲ್ಪ ವಿಕಾರ ರೂಪ ತಾಳಿದ್ದು ಬೆಳಗ್ಗೆ ಲಚ್ಚಿಯ ಚುಚ್ಚು ಮಾತುಗಳಿಂದ ಎಂಬುದು ಸತ್ಯ. ಬಟ್ಟಲಿಗೆ ಗಂಜಿ ಬಡಿಸಿದ ಲಚ್ಚಿ, ಪಾತ್ರೆಯನ್ನು ಅಲ್ಲಿಯೇ ಇಟ್ಟು ಹಾಗೆಯೇ ಕುಕ್ಕುರುಗಾಲಿನಲ್ಲಿ ಕುಳಿತ ತಕ್ಷಣ ಕರಿಯಜ್ಜನಿಗೆ ಅನುಮಾನದ ವಾಸನೆ ಬಡಿದಿತ್ತು. ಗಂಜಿ ಕರಿಯಜ್ಜನ ಗಂಟಲು ಸೇರುವದೊರಳಗೆ ಮೂರು ತಿಂಗಳ ಹಿಂದೆ ಅಡವಿಟ್ಟ ಬಂಗಾರದ ಬೆಂಡೋಲೆಯ ಪ್ರಸ್ತಾಪವನ್ನು ಲಚ್ಚಿ ಶುರುವಿಟ್ಟುಕೊಂಡಾಗ ಅನುಮಾನ ನಿಜವಾಗಿತ್ತು. ಲಚ್ಚಿ ಕರಿಯಜ್ಜನನ್ನು ಹೀಗೆ ಹಣಿಯುವುದು ಊಟಕ್ಕೆ ಕುಳಿತಾಗಲೇ, ಊಟ ಬಿಟ್ಟು ಏಳಲೂ ಆಗದು ನೆಮ್ಮದಿಯಿಂದ ಊಟ ಮಾಡಲೂ ಆಗದು ಎನ್ನುವಂತಹ ದೈನೇಸಿ ಸ್ಥಿತಿಯನ್ನು ತಂದಿಟ್ಟುಬಿಡುತ್ತಿದ್ದಳು ಲಚ್ಚಿ. ಅವಳು ಹಾಗೆ ಮಾಡುವುದಕ್ಕೆ ಅವಳದ್ದೇ ಆದ ಕಾರಣವೆಂದರೆ ಕರಿಯಜ್ಜ ಅಸಾಹಾಯಕನಾಗಿ ಅವಳ ಕೈಗೆ ಸಿಗುವುದು ಅದೊಂದೇ ಸಮಯದಲ್ಲಿ, ಹಾಗಾಗಿ ಊಟಕ್ಕೆ ಬಡಿಸಿ ಕುಕ್ಕುರುಗಾಲಿನಲ್ಲಿ ಬಟ್ಟಲೆದುರು ಕುಳಿತ ಲಚ್ಚಿ ಶುರುವಿಟ್ಟುಕೊಂಡಿದ್ದಳು
"ಅಲ್ಲಾ, ಇವತ್ತು ದೇವಸ್ಥಾನದಾಗೆ ಅಸ್ಟಬಂಧದ ಪೂಜೆ ಐತೆ, ಅದ್ಕೆ ಕಿವಿಗೆ ಕಡ್ಡಿ ಹಾಕ್ಯಂಡು ಹೋಗದು ಹ್ಯಾಂಗೆ, ಸರಿಕರಮುಂದೆ ಮಾನ ಮರ್ವಾದೆ ಇರಾಕಿಲ್ಲ, ಪ್ಯಾಟಿಗೆ ಹೋಗಿ ಅಡ ಇಟ್ಟ ಬೆಂಡೋಲೆ ಬಿಡಿಸಿ ತಗ ಬರಬಹುದಿತ್ತು, ಇವತ್ತು ನಾಳೆ ಇವತ್ತು ನಾಳೆ ಅಂತ ಮೂರ್ ತಿಂಗ್ಳು ಕಳದೋತು"
"....."
"ಮಾಡದೆಲ್ಲಾ ಮಾಡಿ ಹಿಂಗೆ ಗುಮ್ಮನ ಹಂಗೆ ಕುತ್ಕಂಡ್ರೆ ಬೆಂಡೋಲೆ ಅದ್ರಷ್ಟಕ್ಕೆ ಮನೆ ಬಾಗ್ಲಿಗೆ ಬರ್ತೈತಾ?, ದೇವ್ರು ಕೊಟ್ಟಷ್ಟು ಉಂಡು ತೆಪ್ಪಗಿರನಾ ಅಂತ ಹೇಳಿದ್ರೆ ಕೇಳ್ದೆ, ಅಷ್ಟು ದುಡೀತೀನಿ ಇಷ್ಟು ಕಿಸಿತೀನಿ ಅಂತ ಗೇಣಿ ಗದ್ದೆ ಮಾಡೋಕೋದ್ರಿ ಈಗ ಬಂಗಾರ ಅನ್ನೋ ಹೆಸ್ರಿಗೆ ಅಂತ ಇರಾ ಒಂದು ಒಡ್ವೆನೂ ಕಳ್ಕಂಡಂಗೆ ಆತು, ಒಟ್ನಲ್ಲಿ ನನ್ನ ಹಣೇಬರಾ ನೆಟ್ಟಗಿಲ್ಲ" ಎನ್ನುತ್ತಾ ಮುಸಿಮುಸಿ ಶುರುಮಾಡಿದ್ದಳು ಲಚ್ಚಿ.
ಕರಿಯಜ್ಜ ಮಾತನಾಡಲಿಲ್ಲ. ಮಾತನಾಡುವ ಆಸೆ ಇತ್ತು ಆದರೆ ಲಚ್ಚಿಗೆ ಸಮಾಧಾನ ನೀಡುವಂತಹ ಉತ್ತರ ಅವನಲ್ಲಿಇಲ್ಲದರಿಂದ ಮುಗುಮ್ಮಾಗಿ ಕುಳಿತು ಗಂಜಿಯನ್ನು ಹೊಟ್ಟೆಗೆ ಸೇರಿಸುವತ್ತ ಗಮನಹರಿಸಿದ್ದ. ಗಂಡನ ಈ ನಿರ್ಲಕ್ಷ್ಯ ವರ್ತನೆಯಿಂದ ಕೆರಳಿದ ಲಚ್ಚಿ ತನ್ನ ಹಣೇಬರಹವನ್ನು ಶಪಿಸತೊಡಗಿದಳು. ಉಕ್ಕಿಬಂದ ಸಿಟ್ಟು ತಡೆಯಲಾರದೆ ಗಂಜಿ ಪಾತ್ರೆಯನ್ನು ನೆಲಕ್ಕೆ ಕುಕ್ಕಿ ಮೂಲೆ ಸೇರಿ ಹರಕು ಕಂಬಳಿಯೊಳಗೆ ತೂರಿಕೊಂಡಳು.
ಕರಿಯಜ್ಜ ಒಮ್ಮೆ ಅಧಿರನಾಗಿ ಅಸಾಹಾಯಕ ಪರಿಸ್ಥಿತಿಗೆ ಉತ್ತರ ಸಿಗದೆ ಮನೆಯಿಂದ ಹೊರನಡೆದ. ತಪ್ಪು ತನ್ನಿಂದ ಆಗಿದ್ದು ನಿಜವಾದರೂ ಅದು ಉದ್ದೇಶಪಟ್ಟು ಮಾಡಿದ ತಪ್ಪಾಗಿರಲಿಲ್ಲ. ಆಸೆಯೆಂಬುದು ಯಾರಿಗಿರುವುದಿಲ್ಲ?, ವರ್ಷವರ್ಷಗಳಿಂದ ಕೂಲಿ ಮಾಡಿದ್ದರೂ ಅರೆಹೊಟ್ಟೆ ಮಾಸಲು ಬಟ್ಟೆ. ಸ್ಥಿತಿಯನ್ನು ಉತ್ತಮ ಮಟ್ಟಕ್ಕೆ ಏರಿಸಿಕೊಳ್ಳಬೇಕು ಎನ್ನುವ ಕನಸಿಗಾಗಿ ಅಲ್ಲದಿದ್ದರೂ ಉಂಡುಟ್ಟು ಸುಖವಾಗಿ ಇರಬೇಕು ಎನ್ನುವ ಆಸೆಗೆ ಬಲಿಯಾಗಿ ಗೇಣಿಗದ್ದೆ ಮಾಡಿ ಕೈಸುಟ್ಟುಕೊಂಡದ್ದು, ಗೊಬ್ಬರ ತರಲು ಬೆಂಡೋಲೆ ಅಡ ಇಟ್ಟಿದ್ದು ಆನಂತರ ಬರುವಷ್ಟು ಬೆಳೆ ಕೈಗೆಬಾರದೆ ಬೆಳೆದ ಬತ್ತವೆಲ್ಲಾ ಗೌಡರ ಮನೆ ಸೇರಿದ್ದು ಬೆಂಡೋಲೆ ಮಾರ್ವಾಡಿಯ ಹತ್ತಿರವೇ ಉಳಿದದ್ದು ಎಲ್ಲವೂ ಸತ್ಯ. ಹೀಗಾಗದೆ ಇಪ್ಪತ್ತುಚೀಲ ಭತ್ತ ಬಂದಿದ್ದರೆ ಒಡೆಯರ ಮನೆಗೆ ಹತ್ತು ಚೀಲ ಕೊಟ್ಟು ಮಿಕ್ಕುಳಿದ ಹತ್ತು ಚೀಲದಲ್ಲಿ ವರ್ಷಪೂರ್ತಿ ನೆಮ್ಮದಿಯ ಕೂಳು ತಿನ್ನಬಹುದಿತ್ತಲ್ಲ. ಆದರೆ ವಿಧಿ ಹಾಗಿಲ್ಲ ಅಂತ ತಿಳಿದದ್ದು ಎಲ್ಲಾ ಮುಗಿದಮೇಲೆಯೇ.
************
ಕರಿಯಜ್ಜ ಹುಟ್ಟಿದ್ದು ಕೂಲಿಕಾರನಾಗಿಯೇ ಆದರೂ ಬೆಳದದ್ದು ಕೃಷಿಕರ ಅಂಗಳದಲ್ಲಿಯೇ. ನಲವತ್ತರ ಹರೆಯದ ಅವನ ಮೂಲ ಹೆಸರು ಬೆರೇಯೇ ಇದ್ದರೂ ಹೋಲಿಕೆಯಲ್ಲಿ ಅವನ ಅಜ್ಜನಂತೆ ಎಂಬ ಕಾರಣದಿಂದ ಹಾಗೂ ಅಜ್ಜನ ಕಾಲುಸುತ್ತುತ್ತಾ ಬೆಳೆದದ್ದರಿಂದ ಅಜ್ಜ ಸತ್ತನಂತರ ಊರತುಂಬೆಲ್ಲಾ ಕರಿಯಜ್ಜ ತನ್ನ ಅಜ್ಜನ ಹೆಸರಿನಿಂದ ನಾಮಾಂಕಿತನಾಗಿದ್ದ. ಅಜ್ಜ ಲಾಗಾಯ್ತಿನಿಂದ ಭೂಮಿಯ ಮಗನಾಗಿಯೇ ಬೆಳೆದ ಪರಿಣಾಮದಿಂದ ಗದ್ದೆಹೂಟಿ ಮಾಡುವುದು, ಅಗೆಹಾಕುವುದು. ನಾಟಿಮಾಡುವುದು ಹೀಗೆ ಎಲ್ಲಾ ಕೃಷಿಕೈಂಕರ್ಯದ ಕಲೆಗಳು ಕರಿಯಜ್ಜನಿಗೂ ಕರಗತವಾಗಿದ್ದವು. ಸ್ವಂತ ಜಮೀನು ಇಲ್ಲದ ಕಾರಣ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತ ಭಗವಂತ ಕೊಟ್ಟದ್ದು ತನ್ನದು ಎಂದು ಆರಾಮವಾಗಿದ್ದ. ಹಾಗಿದ್ದವನ ತಲೆಯೊಳಗೆ ಹುಳ ಬಿಟ್ಟದ್ದು ಊರಿನ ಗ್ರಾಮಪಂಚಾಯ್ತಿಯವರು ಏರ್ಪಡಿಸಿದ್ದ "ಗ್ರಾಮ ಸಭೆ"ಯ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಇಸ್ತ್ರೀ ಪ್ಯಾಂಟು ಹಾಕಿಕೊಂಡಿದ್ದ ಸರ್ಕಾರಿ ಅಧಿಕಾರಿಗಳು " ರೈತನೆಂದರೆ ದೇಶದ ಬೆನ್ನೆಲುಬು, ಅವನೇ ಅನ್ನದಾತ, ಅವನು ಕೆಸರಿನಲ್ಲಿ ಹೊರಳಾಡಿ ಅಕ್ಕಿಯೆಂಬ ಬಂಗಾರ ಬೆಳೆಯದಿದ್ದರೆ ಮಿಕ್ಕವರ ಆಟ ನಡೆಯೋದೆ ಇಲ್ಲ. ಸಿನೆಮಾ ನಟರಿಂದ ಹಿಡಿದು ದೇಶದ ಪ್ರಧಾನಿಯ ವರೆಗೂ ರೈತನ ಸಹಾಯವಿಲ್ಲದೆ ಬದುಕಿಲ್ಲ, ಹಾಗಾಗಿ ಆತ ದೇವರ ಸ್ವರೂಪ" ಎಂದೆಲ್ಲ ಅದ್ಬುತವಾಗಿ ಭಾಷಣ ಮಾಡಿದರು. ಹಿಂದಿನ ಸಾಲಿನಲ್ಲಿ ಭಾಷಣ ಕೇಳುತ್ತಾ ಕುಳಿತ ಕರಿಯಜ್ಜನಿಗೆ ತನಗೆ ಗೊತ್ತಿದ್ದ ವಿದ್ಯೆಗೆ ಇಷ್ಟೆಲ್ಲಾ ಮಾನ್ಯತೆ ಇದೆ ಎಂದಾಗ ಮೈಮೇಲೆ ಮುಳ್ಳುಗಳು ಏಳುವಂತಹಾ ರೋಮಾಂಚನವಾಯಿತು. ಆ ಕ್ಷಣ ತಾನೂ ಭತ್ತ ಬಿತ್ತಬೇಕು ಅಕ್ಕಿಬೆಳೆಯಬೇಕು ದೇವರಂತೆ ಪೂಜನೀಯನಾಗಬೇಕು ಎನ್ನುವಂತಹ ಆಸೆಗಳು ಚಿಗುರೊಡೆಯತೊಡಗಿದವು. ತಕ್ಷಣ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಕರಿಯಜ್ಜನ ಬಳಿ ಜಮೀನು ಇಲ್ಲದ ಕಾರಣ ಜಮೀನು ಇದ್ದು ಭತ್ತ ಬಿತ್ತದವರ ಬಗ್ಗೆ ಆಲೋಚಿಸಿದ. ರಾಮಕೃಷ್ಣ ಗೌಡ್ರು ಹತ್ತು ಎಕರೆ ಅಡಿಕೆ ತೋಟದ ಒಡೆಯರು, ಹಾಗಾಗಿ ಅವರು ಒಂದು ಎಕರೆ ಭತ್ತ ಬೆಳೆಯುವ ಗದ್ದೆಯನ್ನು ಹಾಳುಬಿಟ್ಟಿದ್ದರು, ಅದು ಕರಿಯಜ್ಜನ ಮನಸ್ಸಿಗೆ ಪಳಕ್ಕನೆ ನೆನಪಿಗೆ ಬಂತು. ಭಾಷಣದ ಮಾತುಗಳು ಮನಸ್ಸಿನಿಂದ ಹುರುಪು ತೆಗೆಯುವುದಕ್ಕಿಂತ ಮೊದಲೇ ಗೌಡ್ರಮನೆ ಬಾಗಿಲಿಗೆ ಹೋಗಿ ನಿಂತ ಕರಿಯಜ್ಜ.
ಪಾಳುಬಿದ್ದ ಗದ್ದೆಯಾದರೂ ಗೌಡ್ರು ಬಡಪೆಟ್ಟಿಗೆ ಗದ್ದೆಯನ್ನು ಗೇಣಿಗೆ ಕೊಡಲು ಒಪ್ಪಲಿಲ್ಲ. ಹಿಂದೆಮುಂದೆ ಅಡ್ಡ ಉದ್ದ ಚೌಕಾಶಿ ಮಾಡಿದನಂತರ ಹತ್ತುಚೀಲ ಭತ್ತ ನೂರು ಹೊರೆ ಬೈಹುಲ್ಲು ಕರಿಯಜ್ಜ ಗೌಡ್ರಿಗೆ ಗೇಣಿಕೊಡುವುದು ಹಾಗೂ ಗದ್ದೆಗೆ ಬೇಕಾಗುವಷ್ಟು ಸರ್ಕಾರಿಗೊಬ್ಬರ ಗೌಡ್ರು ಕೊಡುವುದು ಎಂಬ ತೀರ್ಮಾನದೊಂದಿಗೆ ಗೇಣಿ ಚಾಲ್ತಿಗೆ ಬಂತು. ಕರಿಯಜ್ಜನಿಗೆ ಸ್ವರ್ಗ ಮೂರೇಗೇಣು. ಖುಷಿಯಾಗಿ ಮನೆಗೆ ಬಂದು ಪ್ರಪಂಚಗೆದ್ದ ಭಾವನೆಯಿಂದ ಲಚ್ಚಿಗೆ ತಾನು ಗೇಣಿಗದ್ದೆ ಮಾಡುವ ವಿಷಯ ತಿಳಿಸಿದ. ಆದರೆ ಕೈಸುಟ್ಟುಕೊಳ್ಳುವ ವಾಸನೆ ಬಿದ್ದ ಲಚ್ಚಿ "ಅವೆಲ್ಲಾ ನಮಗೆ ಬ್ಯಾಡ, ಸುಮ್ನೆ ಕೂಲಿ ಮಾಡಿ ಬದುಕು ಅಂತ ಭಗವಂತ ಕಳ್ಸಿದಾನೆ, ಅದ್ರನ್ನ ಮಾಡಾದು ಕಲೀರಿ" ಅಂತ ಹೇಳಿದರೂ ಕರಿಯಜ್ಜ ಪಕ್ಕಾಪಕ್ಕಾ ಲಾಭದ ಲೆಕ್ಕಾಚಾರ ಕೊಟ್ಟಮೇಲೆ ಮನಸ್ಸಿನಮೂಲೆಯಲ್ಲಿ ಆಸೆಚಿಗುರಿ ನಂತರದ ನಷ್ಟಕ್ಕೂ ತನ್ನದೊಂದು ಮಾತು ಅಂತ ಇಟ್ಟುಕೊಂಡು "ನಿಮಗೆ ತೋಚಿದಂಗೆ ಮಾಡಿ" ಎಂದು ಹೇಳಿ ಸೈ ಅಂದಿದ್ದಳು.
ಕಿವಿಯಲ್ಲಿ "ರೈತರೆಂದರೆ ದೇವರ ಅವತಾರ" ಎಂಬ ಅಧಿಕಾರಿಗಳ ಭಾಷಣದ ತುಣುಕನ್ನೇ ಇಟ್ಟುಕೊಂಡು ಕರಿಯಜ್ಜ ಜಡಿಮಳೆಯಲ್ಲಿ ಹೂಟಿ ಮಾಡಿ ಬೀಜದ ಭತ್ತ ಕಡ ತಂದು ಬಿತ್ತಿದ. ನೋಡನೋಡುತ್ತಿದ್ದಂತೆ ಹಸಿರುಬಣ್ಣದ ಸಸಿಗಳು ಮಡುಗಟ್ಟಿ ಎದ್ದವು. ಲಚ್ಚಿ ಸೊಂಟಕ್ಕೆ ಸೆರಗುಸುತ್ತಿಕೊಂಡು ಮುರಿಯಾಳು ಕರೆದುಕೊಂಡು ಸಸಿನಾಟಿ ಮಾಡಿದಳು. ಏಳುವ ಸಸಿ, ಹೊರಡುವ ತೆನೆ, ಸಿಗುವ ಭತ್ತ, ಉಳಿಯುವ ಬೈಹುಲ್ಲು, ಎಲ್ಲವನ್ನೂ ಗುಣಿಸಿ ಬಾಗಿಸುತ್ತಿದ್ದಂತೆ ಗದ್ದೆಗೆ ಗೊಬ್ಬರಕೊಡುವ ದಿನಗಳು ಬಂದವು. ಗೌಡ್ರ ಬಳಿ ಗೊಬ್ಬರಕ್ಕೆ ಹಣ ಕೇಳಿದಾಗ ಅವರು "ಅಲ್ಲಾ ಕರಿಯಜ್ಜ ಈಗ ನಾನು ಪ್ಯಾಟಿಗೆ ಹೋಗಿ ಯಾವ್ಯಾವುದೋ ಗೊಬ್ಬರ ತರೋದು ಅದು ಸರಿಯಾಗದೇ ಇರೋದು, ಅವೆಲ್ಲಾ ರಗಳೆಯೇ ಬ್ಯಾಡ, ಅದರ ಬಾಬ್ತು ಅಂತ ಎರಡು ಚೀಲ ಭತ್ತ ಕಡಿಮೆಕೊಡು, ನೀನೆ ಗೊಬ್ಬರಾನ ತಂದು ಹಾಕು" ಎಂದು ಹೇಳಿದ ಮಾತಿಗೆ ಕರಿಯಜ್ಜ ಲೆಕ್ಕಾಚಾರಕ್ಕೆ ಇಳಿದು ನೂರಿನ್ನೂರು ಮಿಗುವ ಕಾರಣದಿಂದ ಲಚ್ಚಿಯ ಬಂಗಾರದ ಬೆಂಡೋಲೆ ಮಾರ್ವಾಡಿ ಅಂಗಡಿಗೆ ಸೇರಿಸಿ ಗೊಬ್ಬರ ಅಂಗಡಿಯಿಂದ ತಂದು ಗದ್ದೆಗೆ ಸುರುವಿದ.
ಪಾಳುಬಿದ್ದ ಗದ್ದೆಗೆ ಒಮ್ಮೆಲೆ ಗೊಬ್ಬರ ಬಿದ್ದದ್ದರಿಂದ ಭತ್ತ ಹುಲುಸಾಗಿ ಎದ್ದು ಅಕ್ಕಪಕ್ಕದವರ ಕಣ್ಣುಕುಕ್ಕುವಷ್ಟು ತೆನೆ ಒಡೆದು ತೊನೆದಾಡತೊಡಗಿತು. ಮಾಡಿದ ಕೆಲಸ ಕೈಗೆ ಹತ್ತಿದ್ದ ಖುಷಿಯಲ್ಲಿ ಲಚ್ಚಿಯೂ ಸಂಭ್ರಮಪಟ್ಟು ಹೊಟ್ಟೆಕಿಚ್ಚುಪಡುವ ಮಂದಿಯ ಕಾಕದೃಷ್ಟಿಗೆ ಗದ್ದೆ ಹಾಳಾಗಬಾರದು ಎಂದು ಹಳೆ ಬಟ್ಟೆ ಸುತ್ತಿ ಬೆರ್ಚಪ್ಪನನ್ನು ಮಾಡಿ ಗದ್ದೆಯ ಮದ್ಯೆ ನಿಲ್ಲಿಸಿದಳು. ದಿನಗಳು ಸಂದಂತೆ ಹಸಿರುಬಣ್ಣದ ಗದ್ದೆ ಕೆಂಬಣ್ಣಕ್ಕೆ ತಿರುಗಿ ಕೊಯ್ಲಿನ ದಿನ ಬಂದೇಬಿಟ್ಟಿತು. ಕರಿಯಜ್ಜ ಲಚ್ಚಿ ಒಂದೆರಡು ಮುರಿಯಾಳಿನೊಡನೆ ಗದ್ದೆ ಕೊಯ್ಲು ಮುಗಿಸಿ ಒಕ್ಕಲು ಕಣಕ್ಕೆ ತಂದು ಹಾಕಿದರು. ಹುರುಪಿನಿಂದ ಹುಲ್ಲುಬಡಿದು ಭತ್ತ ಬೇರ್ಪಡಿಸಿ ಗುಡ್ಡೆಹಾಕಿ ಗೇಣಿ ಭತ್ತ ಒಯ್ಯಲು ಗೌಡ್ರಿಗೆ ಸುದ್ದಿ ಕಳುಹಿಸಿದರು. ಗೌಡ್ರು ಬರುವುದಕ್ಕೆ ಮೊದಲು ಒಮ್ಮೆ ಕರಿಯಜ್ಜ ಅರಿಶಿನ ಬಣ್ಣದ ಗೋಪುರದಂತಹ ಭತ್ತದ ರಾಶಿಯ ಕಣ್ತುಂಬಿಕೊಂಡ, ಜೀವನದಲ್ಲಿ ಪ್ರಥಮಬಾರಿಗೆ ತಾನೇ ಉತ್ತಿ ತಾನೇ ಬಿತ್ತಿ ತಾನೇ ಬೆಳೆದ ಭತ್ತದ ರಾಶಿ ಕರಿಯಜ್ಜನಿಗೆ, ಮಕ್ಕಳೇ ಆಗದೆಂದುಕೊಂಡ ತಾಯಿ ಮಗು ಹೆತ್ತಾಗಿನ ಸಂತೋಷದಂತೆ ಅನುಭವಿಸಿದ. ಗೌಡ್ರಿಗೆ ಹತ್ತುಚೀಲ ಕೊಟ್ಟು ಉಳಿಯುವ ಭತ್ತ ಹಾಗೂ ಬೈಹುಲ್ಲು ಬೆಂಡೋಲೆ ಬಿಡಿಸಿ ನಂತರ ವರ್ಷಪೂರ್ತಿ ಅನುಭವಿಸಬಹುದಲ್ಲ ಎಂಬ ಸಂತೋಷ ಕರಿಯಜ್ಜನಿಗೆ ಉನ್ಮಾದ ತಂದಿತ್ತು. ಆದರೆ ಅದು ಹೆಚ್ಚುಹೊತ್ತು ಇರಲಿಲ್ಲ.
ಗೇಣಿ ಕೊಂಡೊಯ್ಯಲು ಗೌಡರು ಮಗನೊಟ್ಟಿಗೆ ವ್ಯಾನಿನಲ್ಲಿ ಚೀಲದ ಸಮೇತ ಬಂದರು. ಲಚ್ಚಿ ಕರಿಯಜ್ಜ ಚೀಲ ಪಡೆದು ಭತ್ತವನ್ನು ಬೆತ್ತದ ಮೊರದಲ್ಲಿ ಮೊಗೆದು ತುಂಬತೊಡಗಿದರು. ಅರ್ದ ಗಂಟೆಯಲ್ಲಿ ಚೀಲತುಂಬುವ ಕೆಲಸ ಮುಗಿಸಿ ಚೀಲ ಎಣಿಸುವಾಗ ಕರಿಯಜ್ಜ ಅಧಿರನಾಗತೊಡಗಿದ. ಕನಿಷ್ಠ ಇಪ್ಪತೈದು ಚೀಲ ಭತ್ತ ಇರಬಹುದೆಂದು ಲೆಕ್ಕ ಹಾಕಿದ್ದ ಕರಿಯಜ್ಜನಿಗೆ ಬಾರಿ ಬಾರಿ ಎಣಿಸಿದಾಗಲೂ ಲೆಕ್ಕಕ್ಕೆ ಸಿಗುತ್ತಿರುವುದು ಹತ್ತೇ ಚೀಲ ಭತ್ತ. ತಾನು ತಪ್ಪಿದ್ದು ಎಲ್ಲಿ ಅಂತ ಕರಿಯಜ್ಜನಿಗೆ ತಿಳಿಯಲಿಲ್ಲ. ಬೈಹುಲ್ಲು ಹೊರೆಯತ್ತ ಕೈಕಟ್ಟಿ ನಿಂತಿದ್ದ ಗೌಡರು ಗತ್ತಿನಿಂದ "ಏನಾ ಕರಿಯಾ ಹುಲ್ಲಿನ ಹೊರೆ ನನಗೆ ಕೊಡುವುದು ಅಂತ ಸಣ್ಣ ಕಟ್ಟು ಕಟ್ಟಿದ್ದೀಯನಾ?" ಎಂದು ಪ್ರಶ್ನಿಸುತ್ತಿದ್ದರು. ಹುಲ್ಲಾದರೂ ಜಾಸ್ತಿ ಇರಬಹುದೆಂದು ಕರಿಯಜ್ಜ ಅದರ ಲೆಕ್ಕಾಚಾರಕ್ಕೆ ಇಳಿದ, ಅದೂ ಕೂಡ ಅಷ್ಟೆ ನೂರಾಹತ್ತು ಹೊರೆ ಇತ್ತು. ನೂರುಹೊರೆ ಗೌಡರಿಗೆ ಕೊಟ್ಟರೆ ತನಗುಳಿಯುವುದು ಹತ್ತು ಹೊರೆ ಹುಲ್ಲು ಅಂದರೆ ನೂರಾ ಐವತ್ತು ರೂಪಾಯಿ ಎನ್ನುವುದು ಕರಿಯಜ್ಜನಿಗೆ ಅರ್ಥವಾಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳ ಭಾಷಣದಿಂದ ಇಲ್ಲಿಯತನಕ ಅನುಭವಿಸಿದ್ದ ಸಂತೋಷ, ಪಟ್ಟ ಸಂಭ್ರಮ, ಹಾಕಿದ ಲೆಕ್ಕಾಚಾರ ಎಲ್ಲಾ ಆಯೋಮಯವಾಗಿತ್ತು . ಆರು ತಿಂಗಳ ಕಾಲ ಮೈ ಬಗ್ಗಿಸಿ ದುಡಿದ ಲಚ್ಚಿ ಕಣದ ಮೂಲೆಯಲ್ಲಿ ಭತ್ತ ಮೊಗೆದ ಮೊರವನ್ನು ಕೈಯಲ್ಲಿ ಹಿಡಿದುಕೊಂಡು ಕಕ್ಕಾಬಿಕ್ಕಿಯಾಗಿ ನಿಂತಿದ್ದಳು.
ಕರಿಯಜ್ಜನ ಹತಾಶ ಸ್ಥಿತಿಕಂಡು ಅಲ್ಲಿಯೇ ನಿಂತಿದ್ದವರೊಬ್ಬರು ಗೌಡರ ಬಳಿ "ಗೌಡ್ರೇ, ಕರಿಯಜ್ಜ ಲೆಕ್ಕ ಗೊತ್ತಿಲ್ಲದೆ ಗೇಣಿಗೆ ಒಪ್ಕೊಂಡಿದ್ದಾನೆ, ಒಂದೆಕರೆಗೆ ಯಾರೂ ನಾಲ್ಕು ಚೀಲದ ಮೇಲೆ ಭತ್ತ ಕೊಡಲ್ಲ, ಏನೋ ಪಾಪ ಆರು ತಿಂಗಳು ಶ್ರಮ ಇದೆ, ಒಂದೈದು ಚೀಲ ಭತ್ತ ಕೊಡಿ ಪಾಪ" ಎಂದರು.
"ನೋಡಪ್ಪ ಈ ರಾಮಕೃಷ್ಣೇ ಗೌಡ ಎಂದೂ ಮಾತಿಗೆ ತಪ್ಪೋನಲ್ಲ, ಗೊಬ್ರದ ಬಾಬ್ತು ಅಂತ ಒಂದು ಚೀಲ ಕೊಡ್ತೀನಿ ಅಂತ ಹೇಳಿದ್ದೆ ಅದಕ್ಕೆ ಕಡಕ್ ಕೊಡ್ತೀನಿ, ಹತ್ತು ಹೊರೆ ಹುಲ್ಲು ಅವನಿಗೆ ಉಳಿತಲ್ಲ," ಎಂದು ಹೇಳಿ ಮಿಕ್ಕ ಹುಲ್ಲು ಭತ್ತ ವ್ಯಾನಿನಲ್ಲಿ ಹೇರಿಕೊಂಡು ಮಗನೊಟ್ಟಿಗೆ ಬರ್ರ್ ಅಂತ ಹೋದರು. ಗೊಬ್ಬರದ ಬಾಬ್ತು ಎರಡು ಚೀಲ ಭತ್ತ ಎಂದು ಹೇಳುವಷ್ಟೂ ಶಕ್ತಿಯಿಲ್ಲದೆ ಕರಿಯಜ್ಜ, ಲಚ್ಚಿ ಗೇಣಿ ಭತ್ತದ ಚೀಲವನ್ನು ನೋಡುತ್ತಾ ಉಳಿದರು. ಹಾಗಾಗಿ ಲಚ್ಚಿಯ ಬೆಂಡೋಲೆ ಮಾರ್ವಾಡಿಯ ಅಂಗಡಿಯಲ್ಲೇ ಉಳಿಯಿತು.
*************
ಮೆನೆಯೆದುರು ಹೆಜ್ಜೆಸಪ್ಪಳಕ್ಕೆ ಕರಿಯಜ್ಜ ಮನೆಯಾಚೆ ಯಾರೋ ಬರುತ್ತಿರುವ ಸದ್ದಾಗಿ ನೆನಪಿನ ಸರಣಿಗೆ ಮುಕ್ತಾಯ ಹಾಡಿ ಎದ್ದು ನಿಂತು ಮುರಿದುಬಿದ್ದ ಬಾಗಿಲನ್ನು ಎತ್ತಿ ಗೋಡೆಗೊರಗಿಸಿ ಹೊರಗೆ ಬಗ್ಗಿ ನೋಡಿದ. ಲಚ್ಚಿ ಒಡೆದ ತೆಂಗಿನ ಕಾಯಿ ಪ್ರಸಾದ ಹಿಡಿದುಕೊಂಡು ತೆಲೆತುಂಬಾ ಸೆರಗು ಮುಚ್ಚಿಕೊಂಡು ಮನೆಯತ್ತ ಬರುತ್ತಿದ್ದಳು. ಮುಚ್ಚಿಕೊಂಡ ಸೆರಗು ಇಲ್ಲದ ಬೆಂಡೋಲೆಯ ಅಸ್ತಿತ್ವ ಉಳಿಸಿಕೊಳ್ಳಲು ಎಂಬುದು ಕರಿಯಜ್ಜನಿಗೆ ಮಾತ್ರಾ ತಿಳಿದಿತ್ತು. ತನ್ನ ಅಸಾಹಾಯಕ ಸಿಟ್ಟಿನಿಂದ ಮುರಿದ ಬಾಗಿಲಿನ ಸ್ಥಿತಿಯಾದರೂ ಲಚ್ಚಿಗೆ ತಿಳಿಯದಿರಲಿ ಎಂದು ಕರಿಯಜ್ಜ ಬಾಗಿಲು ಬೀಳದಂತೆ ಗೊಡೆಗೆ ಆನಿಸಿ ನಿಂತುಕೊಂಡ.
ಅನತಿ ದೂರದಲ್ಲಿ ದೇವಸ್ಥಾನದ ಅಷ್ಟಬಂಧ ಕಮಿಟಿಯ ನೇತಾರ ಜಯರಾಮ ಶೆಟ್ರು ಮೈಕಿನಲ್ಲಿ " ಮಹಾದಾನಿ ರಾಮಕೃಷ್ಣೇ ಗೌಡ್ರು ಈ ದಿನದ ಅನ್ನ ಸಂತರ್ಪಣೆಗಾಗಿ ಹತ್ತುಚೀಲ ಅಕ್ಕಿಯನ್ನು ದಾನ ಮಾಡಿದ್ದಾರೆ, ಅವರಿಗೆ ಅವರ ಕುಟುಂಬಕ್ಕೆ ಶ್ರೀ ಮಹಾಗಣಪತಿಯು ಆಯುರಾರೋಗ್ಯ ಐಶ್ವರ್ಯ ದಯಪಾಲಿಸಲಿ" ಎಂದು ಕೂಗುತ್ತಿದ್ದರು. ಕರಿಯಜ್ಜ ಹಾಗೂ ಲಚ್ಚಿ ಆ ಮಾತನ್ನು ಕೇಳಿ ಒಮ್ಮೆ ದೇವಸ್ಥಾನದತ್ತ ನೋಡಿ ನಕ್ಕರು. ಆ ನಗುವಿನಲ್ಲಿ ವ್ಯಂಗ್ಯ, ವಿಷಾದ ಹಾಗೂ ಆಳವಾದ ನೋವೂ ಅಡಗಿತ್ತು. ಆದರೆ ಅದಕ್ಕೆ ಬೆಲೆಕೊಡುವ ಜನ ಮಾತ್ರಾ ಯಾರೂ ಅಲ್ಲಿ ಇರಲಿಲ್ಲ.
-ಆರ್.ಶರ್ಮಾ.ತಲವಾಟ
Tuesday, May 10, 2011
Tuesday, May 3, 2011
ನನಗೆ ಗೊತ್ತಿಲ್ಲ...ನಿಮಗೆ?
ದೇವರು ಎಂಬ ಶಕ್ತಿಗೆ ಹಲವು ರೂಪ ಹಲವು ವೇಷ. ನಮ್ಮ ಸಮಯಕ್ಕೆ ನಮ್ಮ ಸಮಸ್ಯೆಗೆ ನಮ್ಮ ಸಂಕಟಕ್ಕೆ ಒದಗುವ ಜನರನ್ನೂ ನಾವು ದೇವರು ಅಂತ ಅಂದುಬಿಡುತ್ತೇವೆ. ಆದರೂ ಅಲ್ಲಿಯೂ ಕೂಡ "ದೇವರು ಬಂದ ಹಾಗೆ ಬಂದೆ ಮಾರಾಯಾ" ಎಂದು ಆ ಕಾಣದ ಎಂದೂ ಬಾರದ ದೇವರಿಗೆ ಗುಲುಗುಂಜಿ ಮಹತ್ವ ನೀಡಿ ಹೇಳುವ ಮಾತದು.ಇರಲಿ ದೇವರೆಂಬ ಶಕ್ತಿ ಉತ್ತರ ಸಿಗದ ಅಥವಾ ನಿಲುಕದ ಪ್ರಶ್ನೆ, ನಾನು ಈಗ ಹೇಳಹೊರಟಿದ್ದು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ.
ಒಂದು ಸಣ್ಣ ಜ್ವರ ಬಂದರೆ ಜೀವನವೇ ಮುಗಿದು ಹೋಯಿತು ಎಂದು ಹಲುಬುವವರ ಸಂಖ್ಯೆ ಅದೇಕೋ ಬಹಳ ಹೆಚ್ಚು. ಷುಗರ್ ಬಿಪಿ ಇದ್ದರಂತೂ ಮುಗಿದೇ ಹೋಯಿತು ಹೆಜ್ಜೆ ಹೆಜ್ಜೆಗೂ ಅದರದ್ದೇ ಸುದ್ದಿ ಅದರದ್ದೇ ಜಪ. ಆದರೆ ಈಗ ನಾನು ಹೇಳಹೊರಟವನ ಕತೆ ಕೇಳಿ ಇನ್ನು ನಾವೆಲ್ಲ ಗೊಣಗುವುದರಲ್ಲಿ ಅರ್ಥವಿದೆಯಾ ಎಂಬ ಪ್ರಶ್ನೆ ಬೇಕಾದರೆ ಕೇಳಿಕೊಳ್ಳಬಹುದು.
ನನಗೆ ಜೆಸಿಬಿ ಕೆಲಸದ ಅವಶ್ಯಕತೆ ಇದ್ದಾಗ ಕಾನ್ಲೆಯ ವೆಂಕಟಾಚಲ ಎಂಬ ಜನವನ್ನು ಸಂಪರ್ಕಿಸಿದೆ.ಆತನೋ ಪಾದರಸದಂತಹ ವ್ಯಕ್ತಿತ್ವ ಉಳ್ಳವ. ಆತನ ವೇಗಕ್ಕೆ ಸ್ಪಂದಿಸುವುದು ಅಷ್ಟು ಸುಲಭದ ಮಾತಲ್ಲ. ಅರ್ಥ್ ಮೂವಿಂಗ್ ವಿಷಯದಲ್ಲಿ ಸೂಪರ್ ಪರಿಣಿತ. ನಾನು ಹೇಳಿದ ಕೆಲಸವನ್ನು ಮೂರು ನಾಲ್ಕು ದಿವಸಗಳ ಒಳಗೆ ಚಕಚಕ ಅಂತ ಮುಗಿಸಿಕೊಟ್ಟು ಹೊರಟುನಿಂತ. ಬೆಳಿಗ್ಗೆ ಆರುಗಂಟೆಯಿಂದ ಸರಪರ ಸರಪರ ಅಂತ ಸೈಟಿನಲ್ಲಿ ಓಡಾಡಿ ಹುರುಪು ತಂದಿಟ್ಟವರ ಪೈಕಿಯಲ್ಲಿ ವೆಂಕಟಾಚಲ ಮೊದಲಿಗೆ.
ಅಂತಹ ವೆಂಕಟಾಚಲ ನನಗೆ ಹಳೇ ಪರಿಚಯದ ಜನ, ಆತನ ಆರೋಗ್ಯ ಕೆಲ ವರ್ಷದ ಹಿಂದೆ ತುಸು ಏರುಪೇರಾಗಿತ್ತು ಅಂತ ಯಾರೋ ಹೇಳಿದ್ದು ನೆನಪಾಗಿ ಕೇಳಿದೆ" ಆವಾಗ ನಿನ್ನ ಆರೋಗ್ಯ ಸರಿ ಇರಲಿಲ್ಲವಲ್ಲ, ಏನಾಗಿತ್ತು?. ಆತ "ಹೌದು ಸಣ್ಣದೊಂದು ಸಮಸ್ಯೆಯಾಗಿತ್ತು" ಎಂದು ಹೇಳಿ ಸುಮ್ಮನುಳಿದ. ಏನಾಗಿತ್ತು ಅಂತ ಮತೆ ಕುತೂಹಲದಿಂದ ಪ್ರಶ್ನಿಸಿದೆ. ನಿರುಂಬಳವಾಗಿ ಆತ್ ನೀಡಿದ ಉತ್ತರ ಕೇಳಿ ದಂಗಾಗಿ ಹೋದೆ.
"ಅದೇಕೋ ಸಣ್ಣ ಹೊಟ್ಟೆ ನೋವು ಬರುತ್ತಿತ್ತು, ಸಿಕ್ಕಾಪಟ್ಟೆ ಸುಸ್ತು, ಅಂತ ಮಣಿಪಾಲಕ್ಕೆ ಹೋದೆ, ಅವರು ಪರೀಕ್ಷೆ ಮಾಡಿ, ನಿಮಗೆ ಒಂದು ಕಿಡ್ನಿ ಹುಟ್ಟುವಾಗಲೇ ಇಲ್ಲ ಇನ್ನೊಂದು ಸ್ವಲ್ಪ ತೊಂದರೆಯಲ್ಲಿದೆ ಎಂದರು. ನಂಬಿಕೆಯಾಗಲಿಲ್ಲ, ಸೀದಾ ಅಲ್ಲಿಂದ ಹೊರಟು ಬೇರೆಡೆ ಹೋಗುವ ತೀರ್ಮಾನ ಕೈಗೊಂಡೆ. ಅಲ್ಲಿನ ವೈದ್ಯರು "ಇಲ್ಲ ಈಗಲೇ ಆಪರೇಷನ್ ಮಾಡಿದರೆ ಮಾತ್ರಾ ಬದುಕುಳಿಯುತ್ತೀರಿ, ಇಲ್ಲದಿದ್ದಲ್ಲಿ ಇನ್ನೈದು ದಿವಸದೊಳಗೆ ನಿಮ್ಮ ಆರೋಗ್ಯ ಮಿತಿಮೀರಿ ಹಾಳಾಗುತ್ತದೆ ಎಂದರು. ನನಗೆ ಅದು ಸತ್ಯ ಅಂತ ಅನ್ನಿಸಲಿಲ್ಲ, ಆದರೂ ಎದೆಗುಂದದೆ ಮನೆಗೆ ಬಂದು ಬರಬೇಕಾದ ಬಾಕಿ ಹಣಕ್ಕೆ ಎಲ್ಲರಿಗೂ ಪೋನಾಯಿಸಿದೆ. ಅರ್ದದಷ್ಟು ಹಣ ಮನೆಬಾಗಿಲಿಗೆ ಬಂತು, ನಾನು ಕೊಡಬೇಕಾದವರಿಗೆಲ್ಲ ಚುಕ್ತಾ ಮಾಡಿದೆ. ಮಾರನೇ ದಿವಸ ಬೆಂಗಳೂರು ಸೇರಿದೆ. ಪರಿಚಯದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ ಮಣಿಪಾಲದ ವರದಿ ನಿಜ ಅಂತ ತಿಳಿಯಿತು. ಒಮ್ಮೆ ಹತಾಶ ಭಾವೆ ಮೂಡಿತಾದರೂ ಹೆಂಡತಿ ಹಾಗೂ ಮಗಳ ಮುಖ ನೆನಪಾಗಿ ಧೈರ್ಯ ತಂದುಕೊಂಡೆ.ವಾರದೊಳಗೆ ಆಪರೇಷನ್ ಮಾಡಿ ಇರುವ ಒಂದು ಕಿಡ್ನಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಿದರು. ಮತ್ತು "ನೀವು ಜತನದಿಂದ ಕಾಪಾಡಿಕೊಂಡಲ್ಲಿ ಕಟ್ಟುನಿಟ್ಟು ಕಾಯ್ದುಕೊಂಡಲ್ಲಿ ಇನ್ನು ಹತ್ತು ವರ್ಷ ಬದುಕಬಹುದು" ಎಂದು ಹೇಳಿದರು.
ಅಲ್ಲಿಂದ ಜೀವನೋತ್ಸಾಹ ಪುಟಿಯುತ್ತಿದೆ.ಹೀಗೆ ಮೂರು ವರ್ಷ ಕಳೆದಿದ್ದೇನೆ. ಇನ್ನು ಭಗವಂತನೇ ಬಲ್ಲ, ಇರುವಷ್ಟು ದಿವಸ ಒಂದಿಷ್ಟು ಜನರಿಗೆ ಉಪಕಾರ ಮಾಡಿ ಹೋಗುವ ತೀರ್ಮಾನ ನನ್ನದು" ಅಂತ ಹೇಳಿದ ವೆಂಕಟಾಚಲ.
ಅಷ್ಟಕ್ಕೂ ಎಂಟನೇ ತರಗತಿಯಲ್ಲಿ ಓದುತ್ತಿರುವ ಮಗಳು ಹಾಗೂ ಮೂವತ್ತೊಂಬತ್ತು ವರ್ಷದ ಪತ್ನಿಯಿರುವ ಮತ್ತು ನನ್ನ ಕಟ್ಟಡದ ಪಾಯದೊಳಗೆ ಮಣ್ಣುತುಂಬುವ ಬೃಹತ್ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಪರಿಹರಿಸಿದ ವೆಂಕಟಾಚಲನಿಗೆ ಈಗಿನ್ನೂ ಕೇವಲ ನಲವತ್ತೊಂಬತ್ತು ವರ್ಷ. ಪುಟಿದೇಳುವ ಉತ್ಸಾಹದ ವೆಂಕಟಾಚಲನನ್ನು ನೋಡಿ ನಾನು ದೇವರನ್ನು ನೆನೆಯಿಸಿಕೊಂಡೆ. ದೇವರೂ ಹೀಗೆ ಇರಬಹುದಾ ತನ್ನೊಡಲೊಳಗೆ ಸಾವಿರ ಸಮಸ್ಯೆಯಿದ್ದರೂ ಬೇರೆಯವರಿಗೆ ಅಭಯ ಹಸ್ತ ನೀಡುವಂತೆ....!
ನನಗೆ ಗೊತ್ತಿಲ್ಲ...ನಿಮಗೆ?
Monday, May 2, 2011
ನೈತಿಕತೆ ಸೃಷ್ಟ್ತಿಸಿಕೊಂಡಲ್ಲಿ ......!
ಕಟ್ಟುವುದು ಎಂದರೆ ತೀರಾ ಕಷ್ಟದ ಕೆಲಸ ಅಂತ ನನಗೇನೂ ಅನ್ನಿಸುವುದಿಲ್ಲ. ಅದು ತೀರಾ ಕಷ್ಟದ ಕೆಲಸವಾಗಿದ್ದ ಪಕ್ಷದಲ್ಲಿ ಈ ತರಹ ಪುತು ಪುತು ಮನೆಗಳು ಏಳುತ್ತಿರಲಿಲ್ಲ. ಆದರೆ ಈ ಮನೆಯೆಂಬ ಮನೆ ಕಟ್ಟುವಾಗ ಆ ಮನೆಯ ನೈತಿಕ ಗುಣಮಟ್ಟ ಇದೆಯಲ್ಲ ಅದನ್ನು ಸೃಷ್ಟಿಸುವುದು ಆರಂಭದಲ್ಲಿ ತುಸು ಕಷ್ಟ. ಒಮ್ಮೆ ಮನೆಯ ನೈತಿಕತೆ ಸೃಷ್ಟ್ತಿಸಿಕೊಂಡಲ್ಲಿ ತದನಂತರ ಜನರೇ ನಮ್ಮ ಹಾಗೂ ನಮ್ಮ ಮನೆಯ ನೀತಿ ನಿಯಮ ಸೃಷ್ಟಿಸಿಬಿಡುತ್ತಾರೆ. ನಾನು ಕಟ್ಟುತ್ತಿರುವ ಮನೆ ಸರ್ಕಾರದ ಲೆಕ್ಕದಲ್ಲಿ ನನ್ನದೇ ಆದರೆ ಅಂತರಂಗದಲ್ಲಿ ಅಲ್ಲ. ಹಾಗಂತ ಬೇರೆಯವರ ಮನೆಯೂ ಅಲ್ಲ. ಅದೊಂದು ವಿಶಿಷ್ಠ ಒಪ್ಪಂದವಲ್ಲದ ಒಪ್ಪಿಗೆಯಲ್ಲಿ ತನ್ನಷ್ಟಕ್ಕೆ ನಿರ್ಮಾಣವಾಗುತ್ತಿದೆ. ಅದರ ವಿಚಾರ ಮುಂದೆ ಎಂದಾದರೂ ಬ್ಲಾಗಿಸೋಣ, ಈಗ ಕಟ್ಟುವ ವಿಚಾರಕ್ಕೆ ಬರೋಣ.
ಮನೆಯ ಫೌಂಡೇಷನ್ ಭದ್ರವಾಗಿದ್ದಲ್ಲಿ ಎಲ್ಲವೂ ಸಸೂತ್ರ. ಅದಕ್ಕೆ ಸೈಜ್ ಕಲ್ಲಿನ ಅವಶ್ಯಕತೆಯಿದೆ. ಕಟ್ಟಡ ಕಟ್ಟುವ ಕೆಲಸಕ್ಕೆ ಸಾಮಗ್ರಿ ಒದಗಿಸುವ ಜವಾಬ್ದಾರಿಯನ್ನು ಹಲವರು ನಿರ್ವಹಿಸುತ್ತಿದ್ದಾರೆ ಈ ಪ್ರಪಂಚದಲ್ಲಿ. ನಾವು ಹಣ ಒಟ್ಟುಗೂಡಿಸಿ ಇಟ್ಟುಕೊಂಡರೆ ಆಯಿತಷ್ಟೆ. ಕಟ್ಟಡ ಸಾಮಗ್ರಿ ಒದಗಿಸುವ ಕೆಲಸದಲ್ಲಿ ಕಳ್ಳರು-ಸುಳ್ಳರು-ಮೋಸಗಾರೌ-ನಯವಂಚಕರು ಹೀಗೆ ವಿದವಿದವಾದ ಜನರ ಜತೆ ಅಪ್ಪಟ ಪ್ರಾಮಾಣಿಕರೂ ಇದ್ದಾರೆ, ಬಣ್ಣ ಬಣ್ಣದ ಮಾತನಾಡುವವರ ಜತೆ ಮಾತನ್ನೇ ಆಡದ ಜನರಿದ್ದಾರೆ. ಆದರೆ ಆಯ್ಕೆ ನಮ್ಮ ಮನಸ್ಥಿತಿಗೆ ಬಿಟ್ಟದ್ದು. ಒಮ್ಮೆ ನಾವು ತುಸು ಗಟ್ಟಿ ಮನಸ್ಸಿನಿಂದ ಕಟ್ಟುತ್ತಿರುವ ಮನೆಯ ಸುತ್ತ ಪ್ರಾಮಾಣಿಕ ಜನರ ಮನಸ್ಥಿತಿಯ ವಾತಾವರಣವನ್ನು ಸೃಷ್ಟಿಸಿಕೊಂಡರೆ ಆನಂತರ ಅವರೇ ನಮ್ಮ ಮನೆಯ ಕಟ್ಟುತ್ತಾರೆ ನಾವು ಕುಟ್ಟುತ್ತಾ ಕುಳಿತರೂ ಓಕೆ.
ನಾವು ಒಬ್ಬ ಮೇಸ್ತ್ರಿಯ ಆಯ್ಕೆ ಮಾಡಿಕೊಂಡೆವು. ಆತನ ಬಳಿ "ನಿಮ್ಮ ಕಟ್ಟುವ ಕೂಲಿಯ ದರಪಟ್ಟಿ ಕೊಡಿ, ನಾವು ಚೌಕಾಶಿ ಮಾಡುವುದಿಲ್ಲ ಎಂದು ಹೇಳಿ ಆಯಿತು. ಆತ ಕೊಟ್ಟ ಪಟ್ಟಿ ನೋಡದೇ ಸರಿ ಕೆಲಸ ಶುರುಮಾಡಿ ದರ ಸರಿಯಾಗಿದೆ ಎಂದಾಯಿತು. ಆತ ತಬ್ಬಿಬು. "ಸಾರ್ ಒಂದು ನಿಮಿಷ ಪಟ್ಟಿ ಕೊಡಿ" ಎಂದು ಇಸಕೊಂಡು ಮತ್ತೆ ತಿದ್ದಿ "ಸಾರ್ ಒಂದೆರಡರ ದರ ನಾನು ಸ್ವಲ್ಪ ಹೆಚ್ಚು ಹಾಕಿದ್ದೆ" ಎನ್ನುತ್ತಾ ವಾಪಾಸ್ ನೀಡಿದ. ಅದಕ್ಕೂ ಮುಗುಳ್ನಗೆಯೇ ಉತ್ತರ.
ಕಲ್ಲು ಕೊಡುವವನು ಬಂದ ಆತನ ಬಳಿ ಹೇಳಿದೆ " ನೋಡಪ್ಪಾ ಸೈಜ್ ಕಲ್ಲು ನನಗೆ ಸಾವಿರಕ್ಕೆ ಸಾವಿರ ಇದ್ದರೆ ಆಯಿತು", ದರ ಹೇಳು ಅಂದೆ. ಆತ ಒಂದು ದರ ಹೇಳಿದ . ಓಕೆ ಅಂದೆ ಅದರಂತೆಯೇ ಕಲ್ಲು ಲಾರಿಯಲ್ಲಿ ಬಂದು ಬಿದ್ದಾಯಿತು ಜಾಗದಲ್ಲಿ. ಹಾಗೆ ಕಲ್ಲುಲೋಡು ದಿನನಿತ್ಯ ಬರುತ್ತಲೇ ಇತ್ತು. ನಾನು ನನ್ನಪಾಡಿಗೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಹೀಗೆ ಮತ್ತೊಂದು ದಿನ ಇದ್ದಕ್ಕಿದಂತೆ ಕಲ್ಲು ಎಣಿಸತೊಡಗಿದೆ. ಸಾವಿರಕಲ್ಲು ಇರುವುದರ ಬದಲು ಐವತ್ತು ಕಡಿಮೆ ಇತ್ತು. ಒಂದೂ ಮಾತನ್ನಾಡಲಿಲ್ಲ ಪೂರ್ತಿ ಸಾವಿರಕ್ಕೆ ಹಣ ನೀಡಿದೆ. ಡ್ರೈವರ್ ಕಕ್ಕಾಬಿಕ್ಕಿಯಾದ. "ಸಾರ್ ನಮ್ಮಿಂದ ತಪ್ಪಾಗಿದೆ, ಇಲ್ಲಿಯವರೆಗೆ ಬಂದ ಎಲ್ಲಾ ಲೋಡ್ ಕಲ್ಲುಗಳು ಸಾವಿರವೇ ಇತ್ತು, ಇದು ಮಾತ್ರಾ ಕಡಿಮೆ ಆಗಿಬಿಟ್ಟಿದೆ. ಅದು ಹೇಗೆ ಅಂತ ಅರ್ಥವಾಗುತ್ತಿಲ್ಲ. ಈಗ ಕಡಿಮೆಯಿದ್ದ ಕಲ್ಲು ನಾಳೆ ತುಂಬಿಕೊಡುತ್ತೇನೆ, ಜತೆಗೆ ಆ ಲೋಡ್ ಮಾಡುವವರಿಗೆ ಒಂದಿನ್ನೂರು ರೂಪಾಯಿ ಕೊಡಿ ಸಾವಿರದ ನೂರು ಲೆಕ್ಕ ಮಾಡಿ ಹಾಕುತ್ತಾರೆ" ಎಂದು ಹೇಳಿದ. ನಾನು " ನೋಡಪ್ಪಾ ನನಗೆ ಈ ಕಟ್ಟಡಕ್ಕೆ ಹಣ ನೀಡುತ್ತಾ ಇರುವವರು ಪ್ರಾಮಾಣಿಕರು ಹಾಗಾಗಿ ನನ್ನದೂ ಕೂಡ ಅದೇ ದಾರಿ, ನೀನು ಕಡಿಮೆ ತಂದಿದ್ದೀಯಾ ಅಂತ ನಾನೇನಾದರೂ ನಿನ್ನ ಹತ್ತಿರ ಹೇಳಿಲ್ಲವಲ್ಲ. ನೀನು ಕಡಿಮೆ ಕೊಟ್ಟರೆ ನನ್ನ ಹೆಸರು ಹಾಳಾಗುತ್ತದೆ ಅದಕ್ಕೆ ನನ್ನ ಒದ್ದಾಟ, ಅದೇ ರೀತಿ ಇನ್ನೂರು ಜಾಸ್ತಿಕೊಟ್ಟು ಕಲ್ಲು ಕೊಂಡರೂ ನನ್ನ ಹೆಸರೇ ಹಾಳಾಗುವುದು" ಎಂದು ಹೇಳಿ ಸುಮ್ಮನುಳಿದೆ.
ಇಂತಹ ಸಣ್ಣಪುಟ್ಟ ಘಟನೆಗಳ ಮೂಲಕ ಕಟ್ಟುತ್ತಿರುವ ಮನೆಯ ಸುತ್ತ ಪ್ರಾಮಾಣಿಕತೆಯ ನೈತಿಕತೆಯ ವಾತಾವರಣ ಸೃಷ್ಟಿಯಾಗಿದೆ. ಅಂತಹ ವಿಚಾರಗಳಲ್ಲಿ ಆಸಕ್ತರು ಸುತ್ತ ತುಂಬಿಕೊಳ್ಳುತ್ತಿದ್ದಾರೆ, ಹಾಗಾಗಿ ಕೆಲಸ ಸುಗಮ ಅಂತ ಅನ್ನಿಸುತ್ತಿದೆ. ಇದೆ ಇದೆ ಖಂಡಿತಾ ಇದೆ, ಪ್ರಾಮಾಣಿಕತೆ-ನೈತಿಕತೆ ಮುಂತಾದ ವಿಷಯಗಳು ಆದರೆ ನಾವೂ ಹಾಗೆಯೇ ಇರಬೇಕಷ್ಟೆ.
Sunday, May 1, 2011
ಮನೆ ಕಟ್ಟಿನೋಡು
ಅಲ್ಲಾ ಹೇಳಿ ಕೇಳಿ ಅದಕ್ಕೆ ಗಾದೆ ಮಾತು ಇದೆ ಅಂದ ಮೇಲೆ ಕಟ್ಟುವ ಕೆಲಸ ಕಷ್ಟ, ಅಷ್ಟಾಗ್ಯೂ ನಿನಗೆ ಈಗಾಗ್ಲೆ ಮನೆ ಇದೆ "ಅಪ್ಪ ಅಮ್ಮನ ಶ್ರಮ ನಾನು ಶರ್ಮಾ" ಅಂತ ಬ್ಲಾಗ್ ಕೆಳಗೆ ಸ್ಲೋಗನ್ ಹಾಕಿ ಮನೆ ಫೋಟೋ ಹಾಕಿದ್ದೀಯ, ಅದೂ ಅಷ್ಟು ಚಂದದ ಮನೆ ,ಮತ್ಯಾಕೆ ಬೇರೆ ಮನೆ ಅಂತ ನಿಮ್ಮ ಪ್ರಶ್ನೆಯಾದರೆ ನನ್ನ ಉತ್ತರ ಇಷ್ಟೆ. ಈಗ ಅದು ಸದ್ಯ ತೋಟದ ಮನೆ ಮುಂದೆ ಸರ್ಕಾರಕ್ಕೆ ಅರ್ಜಿ ಹಾಕಿ ಟೂರಿಸಂ ಇಲಾಖೆ ಪರ್ಮಿಷನ್ ಇತ್ತ ನಂತರ ನೀವೂ ಬಂದು ಉಳಿಯಬಹುದಾದ ನಿಮ್ಮ ಮನೆ. ಎಂಬ ಲ್ಲಿಗೆ ಅರ್ಥವಾಯಿತಲ್ಲ.
ಈ ಮನೆಯೆಂಬ ಮನೆಕೆಲಸ ದ ಒತ್ತಡದಲ್ಲಿ ಅಕ್ಷರಗಳು ಬೆರಳಿನ ತುದಿಯ ಮೂಲಕ ಮೂಡಲಾರೆ ಎನ್ನುತ್ತಿವೆ. ಹಾಗಾಗಿ ಬ್ಲಾಗ್ ಸತ್ತಿದೆ, ಲೇಖನ ಬಂದಿಲ್ಲ, ಕೇವಲ ಅರ್ಜಿ ಅರ್ಜಿ ಅರ್ಜಿ ಎಂದು ಕೀ ಬೋರ್ಡ್ ಮೇಲೆ ಬೆರಳುಗಳು ನರ್ತಿಸುತ್ತಿವೆ. ಅದೆಲ್ಲಾ ಮುಗಿದು ಮತ್ತೆ ಹೋಂ ಸ್ಟೆ ನಡೆಸುವುದಷ್ಟೇ ಕೆಲಸವಾದಮೇಲೆ ಬ್ಲಾಗ್ ನಿರಂತರೆ. ಅಯ್ಯೋ ನೀನು ಬ್ಲಾಗ್ ಬರೆಯದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು ಅಂತ ನೀವು ಅನ್ನುವುದಿಲ್ಲ ಅಂತ ಗೊತ್ತು ಆದರೂ ಬ್ಲಾಗ್ ಅಪರೂಪಕ್ಕೆ ಇದು ನಿಜವಾದ ಕಾರ್ಣ ಅಂತ ಹೇಳಿಬಿಟ್ಟರೆ ನನ್ಗೆ ಸಮಾಧಾನ.
Friday, April 8, 2011
ಅರೆರೆರೆರೆ ಗಿಣಿರಾಮ
Thursday, March 31, 2011
ಗೋಪಾಲ ಋಣಭಾಧೆಯೋ....
"ಗೋಪಾಲ" ಎಂಬ ಹೆಸರು ಕೇಳಿದಾಗಲೆಲ್ಲ ನನಗೆ ಯಕ್ಷಗಾನದ ಸಣ್ಣ ಕತೆಯೊಂದು ನೆನಪಾಗುತ್ತದೆ. ಯಕ್ಷಗಾನದ ವೇಷಧಾರಿಯೊಬ್ಬ ರಂಗದಲ್ಲಿ ಮಸ್ತ್ ಕುಣಿಯುತ್ತಿದ್ದ. ಹೀಗೆ ಗಂಟೆ ಕುಣಿಯುತ್ತಿರುವಾಗ ಆತನಿಗೆ ಜಲಭಾಧೆಯಾಯಿತು. ಆದರೆ ವೇಷ ಕಟ್ಟಿ ವೇದಿಕೆಯಮೇಲೆ ಕುಣಿಯುತ್ತಾ ಇದ್ದಾಗಿದೆ, ಈಗ ಜಲಬಾಧೆ ತೀರಿಸಿಕೊಳ್ಳುವ ಬಗೆ ತೋಚದೆ ಒದ್ದಾಡತೊಡಗಿದೆ. ಯಕ್ಷಗಾನದ ವೇಷಧಾರಿಗಳೋ ಒಂದರಮೇಲೆ ಒಂದು ಪಂಚೆ ಸುತ್ತಿ ಬರೋಬ್ಬರಿ ಆಳಾಗಿರುತ್ತಾರೆ, ಹಾಗಾಗಿ ವೇಷ ಕಟ್ಟಿಯಾದಮೇಲೆ ಜಲಬಾಧೆ ತಿರಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಆದರೆ ಸಮಸ್ಯೆ ಹೇಳಿಕೇಳಿ ಬಾರದಲ್ಲ. ಅರ್ಥಹೇಳಲು ಆಗದು ತಕತೈ ಕುಣಿಯಲೂ ಆಗದು ಎಂಬ ಪರಿಸ್ಥಿತಿ ಬಂದಾಗ ಪದ್ಯ ಹೇಳುವ ಭಾಗವತರ ಶೈಲಿಯಲ್ಲಿಯೇ "ಗೋಪಾಲ ಜಲಬಾಧೆಯೋ..." ಎಂದು ಹಾಡಿದ. ಗೋಪಾಲ ಎಂಬ ಹೆಸರಿನ ಮೃದಂಗಕಾರನಿಗೆ ವೇಷಧಾರಿಯ ಸಮಸ್ಯೆಯ ಅರಿವು ಆಯಿತು. ಆದರೆ ನೂರಾರು ಜನರೆದುರು ಪರಿಹಾರ ಹೇಳಲು ಬರುವುದಿಲ್ಲ. ಅದಕ್ಕೆ ಆತ ಮೃದಂಗದಲ್ಲಿಯೇ "ತಟಕು ತಟಕು ಹೊಯ್ಕ" ಎಂದು ಬಾರಿಸಿದ. ವೇಷಧಾರಿಗೆ ಗೋಪಾಲ ಹೇಳಿಕೊಟ್ಟ ಪರಿಹಾರ ಚೆನ್ನಾಗಿ ಕಂಡು ತಕ್ಷಣ ಅನುಷ್ಠಾನಗೊಳಿಸಿ ಸಮಸ್ಯೆ ತೀರಿಸಿಕೊಂಡ. ಎಂಬುದು ಯಕ್ಷಗಾನದ ಪ್ರಿಯರು ಹೇಳುವ ಕತೆ. ಇಲ್ಲಿ ಮೃದಂಗಕಾರ ಅಕ್ಷರಗಳನ್ನು ಕೂಡ ಮೂಡಿಸಬಲ್ಲ ತನ್ನ ಮೃದಂಗದಲ್ಲಿ ಎಂಬುದು ಸೂಚ್ಯ. ಇರಲಿ ಈಗ ನಾನು ಗೋಪಾಲ ಎಂಬ ಹೆಸರು ಯಾಕೆ ಇಂದು ನನಗೆ ನೆನಪಾಯಿತು ಅಂತ ಹೇಳುತ್ತೇನೆ. ನಮ್ಮ ಊರಿನ ಹರಿಜನ ಕೇರಿಯ ಹಳೇ ತಲೆ ಗೋಪಾಲ. ವಯಸ್ಸು ಎಪ್ಪತ್ನ್ಲಾಲ್ಕು. ಈ ವಯಸ್ಸಿನವರೆಗೆ ಡಾಕ್ಟರ್ ಮನೆಗೆ ಹೋದವನಲ್ಲ. ಬೆಳಿಗ್ಗೆ ಎದ್ದು ಚಾಕುಡಿದು ಬೀಡಿ ಎಳೆಯುವುದರಿಂದ ದಿನದ ಶುಭಾರಂಭ. ಮಟ ಮಟ ಬಿಸಿಲಿನ ಮೂರುಗಂಟೆಯವರೆಗೆ ಕೂಲಿ, ಆನಂತರ ಆಯಾದಿನದ ಸಂಪಾದನೆಗೆ ತಕ್ಕಂತೆ ಒಂದೆರಡು ಕ್ವಾಟರ್ ಜಡಿದು ತನ್ನ ಜೀವನದ ಸಾಹಸಗಾಥೆಯ ಸಾರ್ವಜನಿಕ ಪಠಣ. ಇಂತಿಪ್ಪ ಗೋಪಾಲ ಒಮ್ಮೆ ಸರ್ಕಾರದ ಮೀಸಲಾತಿಯ ನಿಯಮದಿಂದ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದ. ಮತ್ತು ಏರಿದಾಗ ಆ ಕತೆ ಓತಪ್ರೋತವಾಗಿ ಹರಿಯುತ್ತಿರುತ್ತದೆ. ಮತ್ತೆ ಬೆಳಿಗ್ಗೆ ಬೆನ್ನಿನ ಮೇಲೆ ಗುದ್ದಿದರೂ ಮಾತೇ ಹೊರಡದೇನೋ ಎಂಬ ಹಾ ಹೂ ಅಷ್ಟೆ. ಚುನಾವಣೆ ಸಂದರ್ಭದ ರಾಜಕಾರಣಿಗಳ ಭಾಷಣ ಸಂಜೆ ನಿಗದಿಯಾಗಿದ್ದರೆ ಅಲ್ಲಿ ಜನರ ನಡುವೆ ಗೋಪಾಲ ವೇದಿಕೆಯಲ್ಲಿರುವ ಜನರಿಗೆ ಹಿಗ್ಗಾಮುಗ್ಗಾ ಅನ್ನುವುದು ಮಿಕ್ಕವರಿಗೆ ಒಳ್ಳೆಯ ಮನರಂಜನೆ. ಸೋಗಿನ ಜನರು ರಾಜಕಾರಣ ಕೆಟ್ಟದ್ದು, ರಾಜಕಾರಣಿಗಳು ಕೆಟ್ಟವರು ಎಂದು ಅವರ ಬೆನ್ನಹಿಂದೆ ಆಡುತ್ತಾ ಅವರು ಮಾತನಾಡುವಾಗ ತಲೆಗುಂಡಾಡಿಸುತ್ತಿದ್ದರೆ ಈತ ಮಾತ್ರಾ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ. ಆಯಿತು ಬಿಡಿ ಅವೆಲ್ಲಾ... ಮೊನ್ನೆಯಲ್ಲ ಆಚೆಮೊನ್ನೆ ಅವನಿಗೆ ಪಾರ್ಶ್ವವಾಯು ಬಡಿಯಿತು. ಇರುವ ಎರಡು ಗಂಡು ಮಕ್ಕಳಲ್ಲಿ ಒಬ್ಬಾತ ಅತ್ತ ಮುಖ ಹಾಕಲಿಲ್ಲ. ಮತ್ತೊಬ್ಬ ಆರೈಕೆಗೆ ನಿಂತ, ಹೇಳಿಕೇಳಿ ಕೂಲಿಮಾಡಿ ಬದುಕು, ಆತನೆಲ್ಲಿ ಹಣ ತಂದಾನು? ಸಾವಿರಗಟ್ಟಲೆ. ಗೋಪಾಲ ಸ್ವಸ್ಥ ಇದ್ದಾಗ ಅದೆಷ್ಟು ಮನೆಯ ಕೆಲಸ ಮಾಡಿದನೋ ಆದರೆ ಅವರೆಲ್ಲಾ "ಅಯ್ಯ ನಾವು ಅದಕ್ಕೆ ಕೂಲಿ ಕೊಟ್ಟಿದ್ದೇವೆ" ಅಂದು ಬಿಟ್ಟರು. ಗೊಜ ಗೊಜ ಎನ್ನುವ ಗೋಪಾಲನ ಬಳಿ ದಮಡಿ ಕಾಸೂ ಇಲ್ಲ. ಎಪ್ಪತ್ನಾಲ್ಕು ವರ್ಷದ ಜೀವ ಹೈರಾಣಾಗಿ ಮಲಗಿದೆ. "ಅಯ್ಯ ಅಷ್ಟೆಲ್ಲಾ ಅಯ್ಯೋ ಪಾಪ ಅನ್ನುವ ತಾವು ಏನಾದರೂ ಮಾಡಬಹುದಿತ್ತಲ್ಲ" ಅಂತ ನೀವು ಕೇಳಬಹುದು. ಕೇವಲ ಬರೆದು ಕೊರೆದು ಹೇಳುವುದಷ್ಟೆ ತಮ್ಮ ಕೆಲಸವಾ ಅಂತಲೂ ಅನ್ನಬಹುದು. ಇಲ್ಲ ಜೋಲು ಮೋರೆ ಹಾಕಿನಿಂತ ಗೋಪಾಲನ ಮಗನನ್ನು "ರಾಜು ಬಾ ಇಲ್ಲಿ" ಅಂತ ಕರೆದೆ, ಐದುನೂರರ ಎರಡು ನೋಟು ಇಟ್ಟೆ, ಅವನ ಮುಖದಲ್ಲಿ ಅದೇನೋ ವೇದನೆ ಇತ್ತು, ಅರ್ಥ ತಿಳೀಯಲಿಲ್ಲ. ಹಾಗಂತ ನೀವು "ಓಕೆ ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ನನಗೆ ಹೇಳಬೇಡಿ ಕಾರಣ ಗೋಪಾಲ ಬಹಳ ಹಿಂದೆ ನಮ್ಮ ಮನೆಯ ತೋಟದಲ್ಲಿಯೂ ಕೆಲಸ ಮಾಡಿದ್ದ ಅದರ ಋಣ ತೀರಿಸುವ ಸಣ್ಣ ಪ್ರಯತ್ನವಷ್ಟೆ. ಹಾಗೂ ನಾನು ಕೊಟ್ಟ ಹಣದ ವಿಷಯ ಅವನು ಕೆಲಸ ಮಾಡಿದ ಮನೆಯವರಿಗೂ ಹೇಳಿದೆ. ಅಲ್ಲಿ ನನ್ನ ಸ್ವಾರ್ಥ ಇಷ್ಟೆ, ಅವರೂ ಸ್ವಲ್ಪ ಹಣ ಗೋಪಾಲನಿಗೆ ಕೊಡಲಿ ಎಂದು. ಈಗ ನಾನು ಅನ್ನುತ್ತೇನೆ ಗೋಪಾಲ ಋಣಭಾಧೆಯೋ.... ಭಗವಂತ ಎಲ್ಲಾದರೂ ಕೇಳಿಸಿಕೊಂಡರೆ ಅನ್ನಬಹುದೇನೋ "ತಟಾಕು ತಟಾಕು ಕಾಯ್ಕ"
Wednesday, March 2, 2011
ತತ್ ಪ್ರಣಮಾಮಿ ಸದಾಶಿವ ಲಿಂಗಂ
ನನಗೆ ಅತ್ಯಂತ ಇಷ್ಟವಾದದ್ದು ಎಂದರೆ ಲಿಂಗಾಷ್ಟಕ. ಭಕ್ತಿ ತರುತ್ತೆ ಪುಣ್ಯ ಬರುತ್ತೆ ಮುಂದಿನ ಜನ್ಮದಲ್ಲಿ ಅಷ್ಟೈಶ್ವರ್ಯ ಸಿಗುತ್ತೆ, ಲಿಂಗಾಷ್ಟಕ ಹೇಳಿದರೆ ಸುಖ ಮನೆಬಾಗಿಲಿಗೆ ಬಂದು ಕುಳಿತುಕೊಂಡು ಬಾ ಬಾ ಎನ್ನುತ್ತೆ ಎನ್ನುವ ಕಾರಣಕ್ಕಾಗಿ ಅಲ್ಲದಿದ್ದರೂ ಏನೋ ಒಂಥರಾ ಅಮಲು ಇದೆ ಇದೆ ಲಿಂಗಾಷ್ಟಕದಲ್ಲಿ.
ದೈವವನ್ನು ತಲುಪಲು ಈಶ್ವರ ಲಿಂಗದ ಪರಿಕಲ್ಪನೆಯಿದೆಯಲ್ಲ ಅದು ಅತ್ಯಂತ ಅದ್ಬುತವಾದದ್ದು. ಈಶ್ವರನಿಗೆ ಮನುಷ್ಯ ರೂಪ ಕೊಡದೆ ಅವನ ಸುತ್ತ ಯಡವಟ್ಟು ಕತೆಗಳನ್ನು ಹೆಣೆಯದೇ ಕೇವಲ ಲಿಂಗರೂಪವನ್ನಷ್ಟೇ ಇಟ್ಟಿದ್ದರೆ ಇನ್ನೂ ಸೂಪರ್ ಆಗಿ ಇರುತ್ತಿತ್ತು. ಆ ದೇವರೆಂಬ ದೇವರಿಗೆ ಹುಲುಮನುಜರಾದ ನಾವು ನಮ್ಮಗಳ ರೂಪವನ್ನೇ,ನಮ್ಮ ಸಿಟ್ಟನ್ನೇ ನಮ್ಮಗಳ ಅಸಾಹಾಯಕತೆಯನ್ನೇ ತುಂಬುತ್ತಾ ಬಂದು ಅಲ್ಲೂ ಅನುಮಾನಗಳ ಹುತ್ತಗಳು ಏಳಲು ಕಾರಣರಾಗಿಬಿಟ್ಟಿದ್ದೇವೆ. ಮನುಷ್ಯನ ಶಕ್ತಿಯಕ್ಕಿಂತ ಮಿಗಿಲಾದ ಶಕ್ತಿಯೊಂದು ದೈವ. ನೆಮ್ಮದಿಗೆ ಸುಖದ ಕಲ್ಪನೆಗೆ ಭಯ ನಿವಾರಣೆಗೆ, ಧುತ್ತನೆ ಬಂದೆರಗುವ ಆಘಾತಕ್ಕೆ,ಬಗೆಹರಿಸಲಾರದ ಸಮಸ್ಯೆಗೆ ದೇವರು ಎಂಬ ನಂಬಿಕೆ ಅಪಾರ ಸಹಾಯವನ್ನು ಕೊಡುತ್ತದೆ. ಏನೂ ಇಲ್ಲದೆ ಪಕ್ಕನೆ ದೇವರನ್ನು ನಂಬಿ ಎಂದರೆ ಪಾಮರರಾದ ನಮಗೆ ನಿಮಗೆ ಕಷ್ಟ ಸಾದ್ಯ. ಹಾಗಾಗಿ ತನ್ಮೂಲಕ ದೇವರನ್ನು ಕಾಣಲಿ ಎಂಬುದಕ್ಕೆ ಈ ನಾನಾ ರೂಪ. ಅವುಗಳಲ್ಲಿ ಅತ್ಯಂತ ಸುಂದರ ಕಿಂಚಿತ್ ಭಕ್ತಿ ಹುಟ್ಟಿಸುವ ತಾಕತ್ತು ಈಶ್ವರ ಲಿಂಗಕ್ಕೆ ಹಾಗೂ ಸುಂದರ ಲಿಂಗಾಷ್ಟಕಕ್ಕೆ ಇದೆ ಎಂಬುದು ಕೇವಲ ನನ್ನ ನಂಬಿಕೆಯೊಂದೇ ಅಲ್ಲ ಹಲವರದ್ದು. ಹ್ಯಾಪಿ ಶಿವರಾತ್ರಿ.
ದೈವವನ್ನು ತಲುಪಲು ಈಶ್ವರ ಲಿಂಗದ ಪರಿಕಲ್ಪನೆಯಿದೆಯಲ್ಲ ಅದು ಅತ್ಯಂತ ಅದ್ಬುತವಾದದ್ದು. ಈಶ್ವರನಿಗೆ ಮನುಷ್ಯ ರೂಪ ಕೊಡದೆ ಅವನ ಸುತ್ತ ಯಡವಟ್ಟು ಕತೆಗಳನ್ನು ಹೆಣೆಯದೇ ಕೇವಲ ಲಿಂಗರೂಪವನ್ನಷ್ಟೇ ಇಟ್ಟಿದ್ದರೆ ಇನ್ನೂ ಸೂಪರ್ ಆಗಿ ಇರುತ್ತಿತ್ತು. ಆ ದೇವರೆಂಬ ದೇವರಿಗೆ ಹುಲುಮನುಜರಾದ ನಾವು ನಮ್ಮಗಳ ರೂಪವನ್ನೇ,ನಮ್ಮ ಸಿಟ್ಟನ್ನೇ ನಮ್ಮಗಳ ಅಸಾಹಾಯಕತೆಯನ್ನೇ ತುಂಬುತ್ತಾ ಬಂದು ಅಲ್ಲೂ ಅನುಮಾನಗಳ ಹುತ್ತಗಳು ಏಳಲು ಕಾರಣರಾಗಿಬಿಟ್ಟಿದ್ದೇವೆ. ಮನುಷ್ಯನ ಶಕ್ತಿಯಕ್ಕಿಂತ ಮಿಗಿಲಾದ ಶಕ್ತಿಯೊಂದು ದೈವ. ನೆಮ್ಮದಿಗೆ ಸುಖದ ಕಲ್ಪನೆಗೆ ಭಯ ನಿವಾರಣೆಗೆ, ಧುತ್ತನೆ ಬಂದೆರಗುವ ಆಘಾತಕ್ಕೆ,ಬಗೆಹರಿಸಲಾರದ ಸಮಸ್ಯೆಗೆ ದೇವರು ಎಂಬ ನಂಬಿಕೆ ಅಪಾರ ಸಹಾಯವನ್ನು ಕೊಡುತ್ತದೆ. ಏನೂ ಇಲ್ಲದೆ ಪಕ್ಕನೆ ದೇವರನ್ನು ನಂಬಿ ಎಂದರೆ ಪಾಮರರಾದ ನಮಗೆ ನಿಮಗೆ ಕಷ್ಟ ಸಾದ್ಯ. ಹಾಗಾಗಿ ತನ್ಮೂಲಕ ದೇವರನ್ನು ಕಾಣಲಿ ಎಂಬುದಕ್ಕೆ ಈ ನಾನಾ ರೂಪ. ಅವುಗಳಲ್ಲಿ ಅತ್ಯಂತ ಸುಂದರ ಕಿಂಚಿತ್ ಭಕ್ತಿ ಹುಟ್ಟಿಸುವ ತಾಕತ್ತು ಈಶ್ವರ ಲಿಂಗಕ್ಕೆ ಹಾಗೂ ಸುಂದರ ಲಿಂಗಾಷ್ಟಕಕ್ಕೆ ಇದೆ ಎಂಬುದು ಕೇವಲ ನನ್ನ ನಂಬಿಕೆಯೊಂದೇ ಅಲ್ಲ ಹಲವರದ್ದು. ಹ್ಯಾಪಿ ಶಿವರಾತ್ರಿ.
Subscribe to:
Posts (Atom)