Tuesday, November 6, 2012

ಸಿಕ್ಕಿತೊಂದು ನವಿಲು ಮರಿ

ನವಿಲು ಎಂದಾಕ್ಷಣ ನಾಟ್ಯದ ನೆನಪು ಸಹಜ. ರಾಷ್ಟ್ರಪಕ್ಷಿ ನವಿಲಿನ ಕುರಿತು ವರ್ಣಿಸಿದ ಕವಿಗಳು ಹಲವಾರು. "ಗುಡುಗುಡು ಶಬ್ಧವು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತೆ..? ಎಂದು ಕವಿಯೊಬ್ಬ ಮಯೂರ ನರ್ತಿಸಲು ಪ್ರಕೃತಿಯ ಗುಡುಗು ಸಿಡಿಲುಗಳೇ ಬೇಕು ಎಂಬ ಅರ್ಥದಲ್ಲಿ ವರ್‍ಣಿಸಿ ನವಿಲಿನ ಮಟ್ಟ ಹೆಚ್ಚಿಸಿದ್ದಾನೆ. ಹೀಗೆ ಹತ್ತು ಹಲವು ಹೆಗ್ಗಳಿಕೆಯನ್ನು ಗಮನಿಸಿ ನಾವು ಅದನ್ನು ರಾಷ್ಟ್ರಪಕ್ಷಿಯನ್ನಾಗಿಸಿ ಯಾಗಿದೆ. ಖೇದಕರ ಸಂಗತಿಯೆಂದರೆ ಕದ್ದುಬೇಟೆಯಾಡುವವರ ಈ ಚಂದದ ಪಕ್ಷಿ ನಿರಂತರ ಬಲಿಯಾಗುತ್ತಲೇ ಇವೆ. ಗರಿಯಿರುವ ಗಂಡು ನವಿಲಿಗೆ ಕಳ್ಳರು ಗುಂಡು ಹಾಕುವುದಿಲ್ಲ ಕಾರಣ, ಅದರ ಗರಿಗಳನ್ನು ಮುಚ್ಚಿಹಾಕುವುದು ಸ್ವಲ್ಪ ಕಷ್ಟಕರ ಕೆಲಸ, ಆದರೆ ಕೋಳಿಯಂತಿರುವ ಹೆಣ್ಣು ನವಿಲನ್ನು ರಾತ್ರಿ ಕದ್ದು ಬೇಟೆಯಾಡುತ್ತಾರೆ. ಇದರಿಂದಾಗಿ ಹೆಣ್ಣು ನವಿಲಿನ ಸಂತತಿ ನಿಧಾನಗತಿಯಲ್ಲಿ ಕ್ಷೀಣಿಸುತ್ತಿದೆ. ಆದರೂ ಪ್ರಕೃತಿ ಮಾನವನ ಹಲ್ಲೆಯನ್ನೂ ತಪ್ಪಿಸಿ ನವಿಲಿನ ಸಂತತಿಯನ್ನು ಕಾಪಾಡುತ್ತಿದೆ.


ನವೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ನವಿಲು ಮೊಟ್ಟೆಗಳು ಒಡೆದು ಮರಿ ಆಚೆಬರುತ್ತವೆ. ತಾಯಿ ಮೊಟ್ಟೆಗಳನ್ನು ಜತನವಾಗಿ ಕಾಪಾಡಿಕೊಂಡು ಬರುತ್ತವೆ. ಮರಿಹೊರಬಂದ ನಂತರ ತನ್ನೊಂದಿಗೆ ಕರೆದುಕೊಂಡು ಹೋಗುತ್ತವೆ. ಆದರೆ ಮೊಟ್ಟೆಗಳನ್ನು ಒಂದೆಡೆ ಇಟ್ಟು ಆಹಾರಕ್ಕಾಗಿ ಹೊರಗೆ ಹೋದ ತಾಯಿ ಅಕಸ್ಮಾತ್ ಕಳ್ಳಬೇಟೆಗಾರರ ಗುಂಡಿಗೆ ಬಲಿಯಾದಾಗ ಮೊಟ್ಟೆಯಿಂದ ಹೊರಬಂದ ಮರಿಗಳ ಪಾಡು ತುಸು ಕಷ್ಟಕರ. ಈ ನವಿಲು ಮರಿಯ ಸ್ಥಿತಿಯೂ ಹಾಗೆಯೇ ಆಗಿದೆ. ತಾಳಗುಪ್ಪ ಸಮೀಪ ಹಿರೇಮನೆ ಅಸಳ್ಳೆ ಕೃಷ್ಣಮೂರ್ತಿ ಎಂಬುವವರ ತೋಟದಲ್ಲಿ ಮೊಟ್ಟೆಯಿಟ್ಟು ಆಹಾರವನ್ನರಸಲು ಹೋದ ಹೆಣ್ಣು ನವಿಲು ವಾಪಾಸ್ ಬರಲೇ ಇಲ್ಲ. ತೋಟಕ್ಕೆ ಹೋದ ಕೃಷ್ಣಮೂರ್ತಿಯವರ ಕಣ್ಣಿಗೆ ಬಿದ್ದ ಈ ಅನಾಥಮರಿಗಳನ್ನು ಅಲ್ಲಿಯೇ ಬಿಟ್ಟು ಹಾವುಗಳಿಗೆ ಆಹಾರವಾಗುವುದನ್ನು ತಪ್ಪಿಸುವ ಮನಸ್ಸು ಮಾಡಿದರು. ನವಿಲು ಮರಿಯನ್ನು ಜತನವಾಗಿ ತಂದು ರಶ್ಮಿಯ ಮನೆಗೆ ಕೊಟ್ಟರು. ಅಲ್ಲಿ ಈಗ ನವಿಲು ಸುರಕ್ಷಿತವಾಗಿ ಬೆಳೆಯುತ್ತಿದೆ. ದೊಡ್ಡದಾದಮೇಲೆ, ತನ್ನ ಆಹಾರ ತಾನು ಹುಡುಕಿಕೊಳ್ಳುವಷ್ಟು ಬೆಳೆದಮೇಲೆ ಕಾಡಿಗೆ ಬಿಡಬೇಕು ಎನ್ನುತ್ತಾರೆ ರಶ್ಮಿಯ ತಂದೆ ರಾಮಕೃಷ್ಣ. ಆದರೆ ಸದ್ಯಕ್ಕಂತೂ "ಅನಾಥ ಮಗುವಾದೆ" ಎನ್ನುತ್ತಿದೆ ನಮ್ಮ ರಾಷ್ಟ್ರಪಕ್ಷಿ. ಆದರೂ ಬೆಚ್ಚಗಿದೆ ಎನ್ನುವುದು ಸಮಾಧಾನಕರ.

Friday, November 2, 2012

ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

"ಬಾಲ್ಯ" ವಾವ್ ಅದೆರಡು ಅಕ್ಷರದಲ್ಲಿಯೇ ಮಜ ಇದೆ. ಬಡತನವಿರಲಿ, ಸಿರಿತನವಿರಲಿ ಇರಲಿ ಇಲ್ಲದಿರಲಿ ಬಾಲ್ಯ ಬಾಲ್ಯವೇ. ಅಲ್ಲೊಂದಿಷ್ಟು ಸುಮಧುರ ನೆನಪುಗಳು ನಮ್ಮ ನೆನಪಿನ ಕೋಶದಲ್ಲಿ ದಾಖಲಿಸುತ್ತವೆ. ಅದನ್ನು ಬೇಕೆಂದಾಗ ನೆನಪಿಗೆ ತಂದುಕೊಂಡು ಮಜ ಅನುಭವಿಸಬಹುದು. ಹಿಡಿದ-ಹಿಡಿಯದ ಮೀನು, ಕೆಸರಾಟ, ಮರಳು ಗುಡ್ಡೆಯಲ್ಲಿ ಗುಬ್ಬಿ ಹುಳ ಅರಸಿದ್ದು, ಗುಮ್ಮ ಅಂತ ಹೆದರಿಕೊಂಡಿದ್ದು, ಪಾಪದ ಕೆಂಪು ಪೀಟಿಯ ಅಂಡಿಗೆ ದಾರ ಕಟ್ಟಿ ಹೆಲಿಕ್ಯಾಪ್ಟರ್ ಅಂತ ಆಟ ಆಡಿದ್ದು, ಅದೊಂದು ಜೀವಿ ಎಂಬ ಅರಿವಿಲ್ಲದೇ ಅದಕ್ಕೆ ಹಿಂಸೆ ನೀಡಿ ಮಜ ಅನುಭವಿಸಿದ್ದು, ಹಸಿರುಳ್ಳೆ ಹಾವಿನ ಬಾಲ ಹಿಡಿದು ಗರಗರ ತಿರುಗಿಸಿ ಹಾರಿ ಬಿಟ್ಟಿದ್ದು, ಬಸ್ಸಿಗೆ ಕಲ್ಲು ಹೊಡೆದದ್ದು, ಹೀಗೆ ಒಂದಾ ಎರಡಾ..? ಸಾಲು ಸಾಲು ನೆನಪುಗಳು ಮುಗುಳ್ನಗೆ ಮೂಡಲು ಸಹಕರಿಸುತ್ತವೆ. ಅದು ಸರಿ ಅದೇ ತರಹದ ಹುಡುಗಾಟಿಕೆಯನ್ನು ಈಗ ನಿಮ್ಮ ಮಕ್ಕಳು ಮಾಡಲು ಹೊರಟಿದ್ದಾರೆ, ಮತ್ತೇಕೆ ಅವನ್ನು ಗದರಿಸುತ್ತೀರಿ, ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

Wednesday, September 19, 2012

ಶುಂಠಿ ಬೆಲ್ಲ ಎಂಬ ಮಜಕೂರ್ ಬ್ಲಾಗ್

ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ ಸ್ವರ್ಗ .


ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.

ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
" ಕಾಲ ಎಷ್ಟು ಕೆಟ್ಟಿದೆ ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ, ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.
ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
" ಏನ್ರೀ ನೀವು ಮಾತನಾಡೋದು? ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು ಆ ಎರಡೂ ಮಕ್ಕಳ ತಾಯಿ, ತಿಳೀತೆ?"

ಇವತ್ತಿಗೆ ಇಷ್ಟು. ಇನ್ನುಶುಕ್ರವಾರ. ಈಗ ನನ್ನದೊಂದು ಮುಕ್ತಕ.
ತಲೆಮಾರಿನ ಅಂತರ

"ಕುಂಟುವುದೇಕಜ್ಜ?" ಕೇಳಿದೆ ತಾತನ

"ಹೆಬ್ಬುಲಿ ಕಚ್ಚಿತು" ಎಂದ.

ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು

ಚಪ್ಪಲಿ ಕಚ್ಚಿದ್ದರಿಂದ!     ಇನ್ನಷ್ಟು ಮಜ ಬೇಕಾ..? ಹಾಗಾದರೆ ತಕ್ಷಣ ಈ ಕೊಂಡಿ ಕ್ಲಿಕ್ಕಿಸಿ: http://shuntibella.blogspot.in/  

ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .


ಹಾಗೆಲ್ಲಾ ಯೋಚಿಸಿದಾಗಲೆಲ್ಲಾ ನನಗೆ ಆನಂದ ಬಾಷ್ಪ ಒಸರುತ್ತದೆ. ಈ ಆನಂದ ಬಾಷ್ಪ ಇದೆಯಲ್ಲ ಅದೊಂದು ಅಪರೂಪದ ಕ್ಷಣ. ನೀವು ಆಸ್ವಾದಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ನಾನಂತೂ ಹಲವು ಸಲ ಅನುಭವಿಸಿದ್ದೇನೆ. ನೋಡುಗರ ಕಣ್ಣಿಗೆ ದು:ಖವೆಂತಲೂ ನಮ್ಮ ಅಂತರಾಳಕ್ಕೆ ಸಂತೋಷವಾಗಿಯೂ ಇರುವ ಹಾಗೂ ಒಂದೇ ಘಟನೆಗೆ ಎರಡು ಅರ್ಥ ಕೊಡುವ ಅನುಭವ ಇದು. ಅದು ಯಾವ್ಯಾವಾಗ ಒಸರುತ್ತದೆ ಅಂತ ನಿಖಿರವಾಗಿ ಹೇಳಲಿಕ್ಕೆ ಆಗದಿದ್ದರೂ ಸರಿ ಸುಮಾರಾಗಿ ಹೀಗೆ ವಿಷದಪಡಿಸಬಹುದು.

ಮೊಟ್ಟ ಮೊದಲನೆಯದಾಗಿ ಆನಂದ ಭಾಷ್ಪ ಎನ್ನುವುದು ನಮ್ಮಗಳ ಮನಸ್ಥಿತಿಯ ಮೇಲೆ ಒಸರುತ್ತದೆ. ನೀವು ಯಾರಿಗೋ ಬುದ್ಧಿಪೂರ್ವಕವಾಗಿ ನಿಮ್ಮದನ್ನು ತೊರೆದು ಉಪಕಾರ ಮಾಡಿ ಮರೆತಿರುತ್ತೀರಿ. ಕಾಲ ಉರುಳಿದ ಒಂದು ದಿವಸ ತಣ್ಣನೆಯ ಸಮಯದಲ್ಲಿ ಮೆಲ್ಲಗೆ ಅವರು ನಿಮ್ಮ ಬಳಿ "ಅಂದು ನೀನಂದ ಮಾತು ನನ್ನ ಜೀವನದ ಅಭ್ಯುದಯಕ್ಕೆ ನಾಂದಿಯಾಯಿತು" ಅಂದು ಬಿಟ್ಟರು ಅಂದುಕೊಳ್ಳಿ. ಆಗ ಪಳಕ್ಕನೆ ಕಣ್ಣಂಚಿನಲ್ಲಿ ಮಿಂಚುತ್ತದೆ ಈ ಆನಂದ ಬಾಷ್ಪ. ನೀವು ಅದ್ಯಾವುದೋ ಕೆಲಸ ಯಾ ಯೋಜನೆಯನ್ನು ಆಸ್ಥೆಯಿಂದ ಕೈಗೊಂಡು ಶ್ರಮಪಟ್ಟು ಪೂರೈಸಿರುತ್ತೀರಿ, ಯಾರೂ ಏನೂ ಅಂದಿರುವುದಿಲ್ಲ ಆದರೆ ನೀವೆಣಿಸz ಸಣ್ಣ ವಯಸ್ಸಿನ ಮಗುವೊಂದು "ವಾವ್ ಸೂಪರ್" ಅಂತ ಹೆಬ್ಬೆರಳು ತೋರ್ಬೆರಳು ಸೇರಿಸಿ ಹೇಳಿತು ಅಂದುಕೊಳ್ಳಿ ಆಗಲೂ ಪಳಕ್ಕನೆ....... . ಅದು ಬಿಡಿ ಎಲ್ಲವೂ ನೀವೆಣಿಸಿದಂತೆ ನಡೆಯುತ್ತಿಲ್ಲ, ಅಲ್ಲೆಲ್ಲೋ ವ್ಯತ್ಯಯವಾಗುತ್ತಿರುತ್ತಿದೆ ಜೀವನಬಂಡಿ. ಆಗ ಅದ್ಯಾರೋ ನಿಮ್ಮ ಮನಸ್ಸಿನ ಭಾವನೆಗೆ ಸಮರ್ಪಕವಾಗಿ ಮ್ಯಾಚ್ ಆಗುವಂತಹ ಮಾತು ಆಡಿಬಿಡುತ್ತಾರೆ ಆಗಲೂ ಪಳಕ್ಕನೆ...... . ಇದು ಪಾಸಿಟೀವ್ ಕತೆಯಾಯಿತು ಆನಂದ ಬಾಷ್ಪಕ್ಕೆ ನೆಗಟೀವ್ ಕತೆಯೂ ಇದೆ. ಯಾರ್ಯಾರದೋ ಅಹಂಕಾರ ಮುರಿಯುವ ಕಾರಣ ಒಡ್ಡಿ ಪ್ರಕರಣ ಸೃಷ್ಟಿಸಿರುತ್ತಾರೆ, ಆ ಪ್ರಕರಣ ಕೊಂಚ ಯಶಸ್ಸು ಕಂಡಿತು ಅಂದಾದಾಗ ಪಳಕ್ಕನೆ ಬರುತ್ತದೆ ಬಟ್ ಅದನ್ನು ವಿಕೄತಾನಂದ ಭಾಷ್ಪ ಅಂತ ಕರೆದು ಮರೆತುಬಿಡೋಣ ಬಿಡಿ. ಹೋ ಮರೆತೆ ನನಗೇಕೆ ಇಂದು ಚಿಮ್ಮಿತು ಅಂತ ಹೇಳೋದನ್ನ

ನನ್ನ ಈಸ ರೈಸ್ ಬ್ಲಾಗ್ ಬರಹಕ್ಕೆ ನವ್ಯಾ ಕಾಮೆಂಟಿಸಿದ್ದಳು, ಈಗ ಆಕೆ ಇಂಜನಿಯರಿಂಗ್ ಪಧವೀಧರೆ, ಹೀಗೆ ನಾನು ಬಾಲ್ಯವನ್ನು ನೋಡಿದ ಮಕ್ಕಳು ಬೆಳೆದು ದೊಡ್ದವರಾಗಿದ್ದಾರೆ. ದೇಶವಿದೇಶದಲ್ಲಿ ನೆಲಸಿದ್ದಾರೆ ಗಟ್ಟಿಯಾಗಿ. ಅದೊಂದು ದೊಡ್ಡ ಗುಂಪೇ ಇದೆ. ನನಗೆ ಮಾತ್ರಾ ಅವರ ಹುಡುಗುತನವೇ ಕಾಣಿಸುತ್ತದೆ. ಸಂಸಾರ ಜಂಜಡದಲ್ಲಿ ನನಗೆ ಅವರನ್ನೆಲ್ಲಾ ಆಸ್ವಾದಿಸಲಾಗುತ್ತಿಲ್ಲ. ಹೀಗೆ ಅವರೆಲ್ಲಾ ಪಕ್ಕನೆ ನೆನಪಾದರು ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .

Friday, August 31, 2012

ಈ ಈಸ ರೈಸ್ ನಿಮಗೆ ನೆನಪಿರಲಿ.

ಅದೊಂತರ ವಿಚಿತ್ರ ಸ್ಟೇಟಸ್. ಗುಂಪಿನಲ್ಲಿದ್ದಾಗ ಟೂರ್ ಹೋದಾಗ ಕೆಲವರು ಸ್ವಲ್ಪ ವಿಚಿತ್ರವಾಗಿ ಆಡತೊಡಗುತ್ತಾರೆ. ಅದಕ್ಕೆ ನಾವು ಈಸ ರೈಸ್ ಅನ್ನುತ್ತೇವೆ(ಇದು ನಮ್ಮ ವೈಯಕ್ತಿಕ ಪದ) ಒಟ್ಟಿನಲ್ಲಿ ಗುಂಪಿನಲ್ಲಿರುವವರಿಗಿಂತ ನಾವು ಬೇರೆ ಅಂತ ತೋರಿಸಿಕೊಳ್ಳುವ ಹಂಬಲದ ವರ್ತನೆ ಅದು. ಸಹಜ ಸ್ಥಿತಿಗಿಂತ ಮೇಲಿನ ಅವಸ್ಥೆ ಆಗಿದ್ದಕ್ಕೆ "ರೈಸ್" ಅನ್ನುವ ಪದ ಪ್ರಯೋಗ ಅಲ್ಲಿ ಅಷ್ಟೆ. ಈ ಈಸ ರೈಸ್ ಸ್ಥಿತಿ ಇದೆಯಲ್ಲಾ ಅದು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಹೋದ ಉದಾಹರಣೆ ಇದೆ. ಹೀರೋ ಆಗಲು ಹೋಗಿ ಝೀರೋ ಆಗುವ ಸ್ಥಿತಿ ಅದು. ಜೋಗ ಬ್ರಿಟೀಷ್ ಬಂಗ್ಲೆಯ ನೋಟದಲ್ಲಿ ಒಂದು ನುಣುಪಾದ ಬಂಡೆಯಿದೆ. ಅಲ್ಲಿ ಅಪಾಯ ಅಪಾಯ ಅಪಾಯ ಅಂತ ಎಲ್ಲರೂ ಹಲುಬುತ್ತಿರುತ್ತಾರೆ. ಇಷ್ಟಾದರೂ ಅಲ್ಲಿ ವರ್ಷಕ್ಕೆ ೩-೪ ಶೀಟಿ ಕೇಸ್ ನಡೆಯುತ್ತಲಿರುತ್ತದೆ. ಅದಕ್ಕೆ ಗುಂಪಿನಲ್ಲಿ ಬಂದಾಗ ಈಸ ರೈಸ್ ಆಗುವ ಸ್ಥಿತಿಯೇ ಕಾರಣ. ಈ ಚಿತ್ರದಲ್ಲಿ ನೋಡಿ ಜಿಟಿಜಿಟಿ ಮಳೆಯ ನಡುವೆ ಇವರದೆಂತಾ ಹುಚ್ಚಾಟ ಅಂತ. ಹಾಗಂತ ಹೀಗೆ ನೋಡಿ ಬಚಾವಾಗಿ ಹೋದವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ ಆ ಬಚಾವಾದವರು ಹುಚ್ಚಾಟ ಮಾಡಲು ಹೋಗಿರುವುದಿಲ್ಲ ಅಂತಲಾದರೂ ಅನ್ನಬಹುದು ಅಥವಾ ಮಾರನೇ ದಿವಸದ ಪತ್ರಿಕೆಯವರಿಗೆ ನಸೀಬು ಕೊಟ್ಟಿ  ಇತ್ತು ಅಂತಲಾದರೂ ಅನ್ನಬಹುದು. ಆದರೂ ಹುಷಾರು ತಪ್ಪಬಾರದು. ಬಿದ್ದರೂ ಈಸ ರೈಸ್ ಆಗಿ ಬೀಳಬಾರದು. ಹಾಗಾಗಿ ಟೂರ್ ಹೋದಾಗ ಈ ಈಸ ರೈಸ್ ನಿಮಗೆ ನೆನಪಿರಲಿ.

ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

ಬಹು ಸುಲಭ, ಬಹು ಕಷ್ಟ ಹೀಗೆ ನಾವು ವಿಂಗಡಿಸಬಹುದು ವಿಷಯಗಳನ್ನ ಘಟನೆಗಳನ್ನ ವಿದ್ಯಮಾನಗಳನ್ನ....ಗಳನ್ನ ಗಳನ್ನ ಗಳನ್ನ. ಬಿಡಿ ಅದು ಬಹಳ ಇದೆ ಪ್ರಸ್ತುತ ಅವನ್ನೆಲ್ಲಾ ಬಿಟ್ಟು ಸಮಸ್ಯೆಗಳ ವಿಷಯವನ್ನಷ್ಟೆ ನೋಡೋಣ.
ಹೀಗೊಂದು ಸಮಸ್ಯೆ ಬಂದಾಗ ಪರಿಹಾರ ಹುಡುಕುವ ವಿಷಯ ಇದೆಯಲ್ಲ ಅಥವಾ ಸಮಸ್ಯೆಯಿಂದ ಆಚೆ ಬರುವ ವಿಚಾರ ಇದೆಯಲ್ಲ ಅದು ಬಹು ಸುಲಭ ಹಾಗೂ ಬಹು ಕಷ್ಟ ಅಂತ ವಿಂಗಡಿಸಬಹುದು. ಯಾವುದು ಕಷ್ಟ ಯಾವುದು ಸುಲಭ ಅಂತಾದರೆ, ಬೇರೆಯವರ ಸಮಸ್ಯೆಗೆ ತಟಕ್ಕನೆ ಪರಿಹಾರ ಹುಡುಕುವುದು ಬಹು ಸುಲಭ, ನಮ್ಮ ಸಮಸ್ಯೆಗೆ ಪರಿಹಾರ ಬಲು ಕಷ್ಟ.
ಸನ್ಯಾಸಿಯೊಬ್ಬ ನಿದ್ದ. ಭಕ್ತರ ನಿತ್ಯ ಸಮಸ್ಯೆಗೆ ಪರಿಹಾರ ಅವನ ಕಾಯಕಗಳಲ್ಲೊಂದು. ಬರುವ ಭಕ್ತರದ್ದೋ ಹತ್ತು ಹಲವು ಸಮಸ್ಯೆಗಳು. ಹೆಂಡತಿ ಹೊಂದಿಕೊಳ್ಳುವುದಿಲ್ಲ ಎಂದು ಗಂಡ, ಗಂಡನದು ದುಶ್ಚಟ ಎಂದು ಹೆಂದತಿ, ವ್ಯಾಪಾರದಲ್ಲಿ ನಷ್ಟ ಎಂದ ವ್ಯಾಪಾರಿ, ಉದ್ಯಮ ಏಳದು ಎಂಬ ಉದ್ಯಮಿ ಹೀಗೆ ಬರುವ ಭಕ್ತರ ಸಮಸ್ಯೆಗೆ ಸನ್ಯಾಸಿ ಚಟಕ್ಕನೆ ಉತ್ತರ ನೀಡಿ ಸಮಾಧಾನ ಪಡಿಸುತ್ತಿದ್ದ. ಹೀಗೆ ಸಮಾಧಾನ ಹೊಂದಿದವರು ಒಂದಿಷ್ಟು ಹಣ ನೀಡುತ್ತಿದ್ದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ.
         ಆತ ದುಂಡನೆಯ ಹೊಟ್ಟೆ ಹೊತ್ತು ಬರುವ ಜನಕ್ಕೆ "ನೀವು ಬೇರೆಯವರ ಆಹಾರವನ್ನೂ ತಿನ್ನುವ ಕಾರಣಕ್ಕೆ ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿದೆ, ನಿಮ್ಮ ದುಡಿಮೆಯದು ತಿನ್ನಿ" ಎನ್ನುತ್ತಿದ್ದ. ಕೇಳಿದವರಿಗೆ ಇದು ಅರ್ಥವಾಗಿ ಅವರು ಉದ್ಧಾರವಾಗಿ ಹೋದರು ಹೊಟ್ಟೆಯನ್ನೂ ಇಳಿಸಿಕೊಂಡರು. ಅವರೂ ಸನ್ಯಾಸಿಗೆ ಹಣವನ್ನು ಹಾಕಿದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ ಕೊಂಚ ಕಡಿಮೆ ಯಾಯಿತು.
      "ಪತ್ನಿಯನ್ನು ಪ್ರೀತಿಸಿ, ಪರಪತ್ನಿಯನ್ನಲ್ಲ" ಅಂತ ಮೇಲ್ಮಟ್ಟದ ಮಾತನ್ನಾಡಿ ಕೆಳಮಟ್ಟಕ್ಕಿಳಿದವರನ್ನೂ ಮೇಲೆತ್ತಿದ. ಮೂರು ಪದದ ಮಾತಿನಲ್ಲಿ ಮುನ್ನೂರು ಅರ್ಥ ಪಡೆದುಕೊಂಡು ಭಕ್ತರು ಧನ್ಯರಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಸುಖವನ್ನು ಕಾಣಹತ್ತಿದರು. ಅವರೂ ಸನ್ಯಾಸಿಯ ಪಾದಕ್ಕೆ ಹಣವನ್ನು ಹಾಕಿದರು, ಸನ್ಯಾಸಿ ಚೆಲ್ಲಾಪಿಲ್ಲಿಯಾಗುತ್ತಿದ್ದ ದುಡ್ಡನ್ನು ಒಂದೆಡೆ ಪೇರಿಸಿಟ್ಟ.
      "ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ" ಎಂದ ಸನ್ಯಾಸಿ, ಭಕ್ತರು ತೆರೆದ ಬಾಯಿ ಮುಚ್ಚಲಿಲ್ಲ. ಒಬ್ಬ ಭಕ್ತ ಹೇಳಿದ" ಹೌದು ಎಷ್ಟು ಆಳವಾದ ಮಾತಿದು, ನಾವು ಊಟ ಮಾಡುವುದು ಕೈಯಲ್ಲಿ, ಅಂತಾದ ಮೇಲೆ ಊಟ ಒಳ್ಳೆಯದಾಗಿದ್ದರೆ ಆರೋಗ್ಯ ಅಂತ ಅರ್ಥ ". ಮತ್ತೊಬ್ಬ ಹೇಳಿದ " ಆಕ್ಯೂಪ್ರೆಷರ್ ನ ಸಂಪೂರ್ಣ ಅರ್ಥವನ್ನು ಒಂದೇ ವಾಕ್ಯದಲ್ಲಿ ಸನ್ಯಾಸಿಗಳು ಹೇಳಿದ್ದಾರೆ ಅಬ್ಬ"  ಮಗದೊಬ್ಬ " ಹೌದು ಕೈ ಬಾಯಿ ಶುದ್ಧವಾಗಿದ್ದರೆ" ಆರೋಗ್ಯ ಅಂತ ಅದರ ಅರ್ಥ ಅಂದ. ಎಲ್ಲಾ ಭಕ್ತರೂ ಒಂದೇ ವಾಕ್ಯದಲ್ಲಿ ಪುನೀತರಾಗಿ ಹಣವನ್ನು ಪಾದಕ್ಕೆ ಹಾಕಲೆತ್ನಿಸಿದರು. ಸನ್ಯಾಸಿಗೆ ಪೇರಿಡಿಸುವುದು ಸಮಸ್ಯೆಯಾಗಿ ಒಂದು ಪೆಟ್ಟಿಗೆ ತರಿಸಿ ಅದರಲ್ಲಿ ಹಾಕುವಂತೆ ಅಣತಿ ಮಾಡಿದ
       ದಿನಕಳೆದಂತೆ ಸನ್ಯಾಸಿ ಪ್ರಖ್ಯಾತನಾಗುತ್ತಾ ಸಾಗಿದ. ಆಶ್ರಮ ಸ್ಥಾಪನೆಯಾಯಿತು, ಪೀಠ ಬಂತು, ಸೇವಕಿಯರು ಬಂದರು,ಸಮಸ್ಯೆ ಹೊತ್ತು ಬರುವವರ ಸಂಖ್ಯೆ ವಿಸ್ತಾರ ಪಡೆಯುತ್ತಾ ಸಾಗಿತು.
       ಮತ್ತು ಈಗ ಸನ್ಯಾಸಿ ಸಮಸ್ಯೆಯಲ್ಲಿದ್ದಾರೆ.. ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

Wednesday, August 29, 2012

ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

ಇದೊಂದು ಚಿತ್ರ ನೋಡಿದಾಗ ನಿಮಗಿರಲಿ ನನಗೂ ಕಣ್ಣೀರ ಕೋಡಿ ಹರಿದಿಲ್ಲ ನಿಜ ಆದರೆ ಛೆ ಅನ್ನುವಷ್ಟು ಬೇಸರವಾಗುತ್ತದೆ. ೧೮ ರ ಹರೆಯದ ಈ ಯುವಕ ಅತಿವೇಗದ ಬೈಕ್ ಡ್ರೈವ್ ಮಾಡಿ ಬಸ್ಸಿನಡಿಗೆ ಸಿಕ್ಕು ಕಳೆದ ಕೆಲ ದಿವಸದ ಹಿಂದೆ ದೇಹ ತ್ಯಜಿಸಿದ. ಆತನ ಮನೆಯವರ ರೋಧನ ಮುಗಿಲುಮುಟ್ಟುತ್ತಿತ್ತು. ನಾನು ರಿಪೋರ್ಟ್ ಮಾಡಲು ಹೋಗಿದ್ದೆ. ಆಗಸ್ಟ್ ಹದಿನೈದರ ಬೆಳಿಗ್ಗೆ ಎಂಟೂವರೆ ಗಂಟೆಗೆ ಪೋಲೀಸ್ ಕಾನಸ್ಟೇಬಲ್ ಲೋಕೇಶ್ ಹೀಗೊಂದು ಅಪಘಾತವಾಗಿದೆ ತಲವಾಟದ ಬಳಿ ಎಂದಾಗ "ಮಕ್ಕಳ ಪ್ರಭಾತ್ ಪೇರಿ" ಫೋಟೋ ತೆಗೆಯುತ್ತಿದ್ದವನು ಪಟಕ್ಕನೆ ಓಡಿದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅಂಬುಲೆನ್ಸ್ ಬಂದು ಹಿಂಬದಿ ಕುಳಿತಿದ್ದವನನ್ನು ಹೇರಿಕೊಂಡು ಹೋಗಿತ್ತು. ಈತ ಇಹಲೋಕ ಯಾತ್ರೆ ಮುಗಿಸಿದ್ದ ಕಾರಣ ಅಲ್ಲಿಯೇ ಇದ್ದ. ಅದಾಗಲೇ ಜನಜಂಗುಳಿ ಸೇರಿತ್ತು. ಅಪ್ಪ ದುಬೈ ಲಿ ಇದ್ದವರಂತೆ ಮಗ ಸುಖವಾಗಿರಲಿ ಎಂದು ಹೊಸ ಬೈಕ್ ಕೊಡಿಸಿದ್ದರು ಹೊಚ್ಚ ಹೊಸ ಬೈಕ್ ಮಗನನ್ನೇ ಬಲಿತೆಗೆದುಕೊಂಡಿತ್ತು. ಇರಲಿ ಅವೆಲ್ಲಾ ಆಮೇಲಿನ ತರ್ಕದ ಕತೆಯಾಯಿತು. ವಾಸ್ತವಕ್ಕೆ ಬರೋಣ.

ಮಳೆಗಾಲದ ದಿನಗಳಲ್ಲಿ ವಾರಕ್ಕೆ ಕನಿಷ್ಟವೆಂದರೂ ೩-೪ ಇಂತಹ ಘಟನೆಗಳು ನನ್ನನ್ನು ರಸ್ತೆಗಿಳಿಸುತ್ತವೆ. ಅಲ್ಲಿ ಹೋಗಿ ಫೋಟೋ ತೆಗೆದು ನ್ಯೂಸ್ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅಂಬುಲೆನ್ಸ್ ಗೆ ಫೋನ್ ಮಾಡುವುದು, ಪೋಲೀಸ್ ಗೆ ಹೆಲ್ಪ ಮಾಡುವುದು ಮುಂತಾದ ಕೆಲಸಗಳು ಇರುತ್ತವೆ. ಅವುಗಳಲ್ಲಿ ಮಹಜರ್ ಗೆ ಸೈನ್ ಹಾಕುವುದು ಪ್ರಮುಖ ಅಂಗ. ಮೊನ್ನೆ ಈ ಅಪಘಾತ ನಡೆದಾಗ ಗಂಟೆ ೧೨ ಆದರೂ ಮೃತ ದೇಹವನ್ನು ಮನೆಯವರಿಗೆ ಬಿಟ್ಟುಕೊಡಲು ಪೋಲೀಸರಿಗೆ ಆಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ಮಹಜರ್ ಗೆ ಲೋಕಲ್ ಮೂವರು ಸಹಿ ಹಾಕಬೇಕು. ಆದರೆ ಅಲ್ಲಿ ಯಾರೂ ಸಹಿ ಹಾಕಲು ಒಪ್ಪುವುದಿಲ್ಲ. ಹಾಗೆ ಜನರು ಹೆದರಲು ಪ್ರಮುಖ ಕಾರಣ ಕೋರ್ಟು ಕಛೇರಿ ತಂಟೆ ನಮಗೆ ಯಾಕೆ? ಅಂಬುದಷ್ಟೇ ಕಾಳಜಿ. ಅಯ್ಯೋ ಅಮ್ಮಾ ಎಂಬ ಗೋಳಾಟದ ನಡುವೆ ಈ ಕಾನೂನು ಪ್ರಕ್ರಿಯೆ ನಡೆಯದೆಯೇ ದೇಹ ಅಲ್ಲಿಂದ ಶಿಫ್ಟ್ ಮಾಡುವಂತಿಲ್ಲ. ಅಂತೂ ಇಂತು ಎರಡು ಜನ ಮಹಜರ್ ಗೆ ಸಹಿ ಹಾಕಲು ಒಪ್ಪಿಸುವಲ್ಲಿ ಪೋಲೀಸರು ಹೈರಾಣಾಗಿದ್ದರು, ಮೂರನೆಯವನಾಗಿ ನಾನು ಯಥಾಪ್ರಕಾರ ಸೈನ್ ಜಡಿದೆ. ಪಟಕ್ಕನೆ ಕೆಲಸ ಮುಗಿಯಿತು.
ಆತ್ಮ ತ್ಯಜಿಸಿದ ದೇಹ ಒಂದೆಡೆ, ರೋಧನ ಮತ್ತೊಂದೆಡೆ, ಕಾನೂನು ಪ್ರಕ್ರಿಯೆ ಮಗದೊಂದೆಡೆ. ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?