Wednesday, November 19, 2008

ಹೆಸರು ಹೆಸರೆಂದು

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? /
ಕಸದೊಳಗೆ ಕಸವಾಗಿ ಹೋಹನಲೆ ನೀನು ? /
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು/
ಮಿಸುಕದಿರು ಮಣ್ಣಿನಲಿ -ಮಂಕುತಿಮ್ಮ//

ಹೀಗೆ ಮಂಕುತಿಮ್ಮನ ಕಗ್ಗದಲ್ಲಿನ ಚತುಷ್ಪದಿ ಹೇಳುತ್ತದೆ. ಹೆಸರಿಗಾಗಿ ಹಂಬಲಿಸದಿರು, ಈ ದೇಹ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ, ಕೀರ್ತಿಯ ಹಿಂದೆ ಬೀಳಬೇಡ. ಎಂಬುದು ಕಗ್ಗ ರಚಿಸಿದ ಡಿ.ವಿ.ಜಿ ಯವರ ಆಶಯ. ಇಂತಹ ಒಂದು ಕಗ್ಗ ರಚಿಸಲು ಅಪಾರ ತಾಕತ್ತಿರಬೇಕು. ಮಂಕುತಿಮ್ಮನ ಕಗ್ಗ ಓದಿದರೆ ಅದರಲ್ಲಿನ ಜೀವನಾನುಭವದ ಸಾರ ತಿಳಿಯುತ್ತದೆ. ಎಲ್ಲೋ ಲಕ್ಷಕ್ಕೊಬ್ಬರು ಇಂತಹ ಸಾರ್ವಕಾಲಿಕ ಅರ್ಥ ಕೊಡುವ ಕಗ್ಗಗಳನ್ನು ರಚಿಸಬಲ್ಲರು. ಸರ್ವಜ್ಞನಂತೆ. ಆತ ಯಾರು ಏನು ಎಂಬುದು ಯಾರಿಗೂ ಗೊತ್ತಿಲ್ಲ. ಆತ ಮಾತ್ರ ಅದ್ಬುತ ಜೀವನಾಮೃತಗಳನ್ನು ಹೇಳಿ ಹೋಗಿದ್ದಾನೆ. ಆತನಿಗೆ ಈ ಮೇಲಿನ ಚತುಷ್ಪದಿ ಅನ್ವರ್ಥ. ನನಗೆ ಸಣ್ಣದೊಂದು ಅನುಮಾನ ವೇಳುತ್ತದೆ ಹಾಗಂತ ಅದೇನು ಗಟ್ಟಿ ಎಂದಲ್ಲ. ಹೆಸರಿನ ವ್ಯಾಮೋಹ ತೊರೆ ಎಂಬ ಉತ್ತಮ ಕಗ್ಗ ರಚಿಸಿದ ಡಿವಿಜಿ ಅದೇಕೋ ಕಗ್ಗದ ಪುಸ್ತಕದಲ್ಲಿ ತಮ್ಮ ಹೆಸರನ್ನು ಕಾಣಿಸಿಬಿಟ್ಟಿದ್ದಾರೆ. ಇದರ ಅರ್ಥ ಇದೊಂದು ಕಗ್ಗದ ರಚನಾಕಾರ ಅವರಲ್ಲ ಅಥವಾ ಕಗ್ಗದ ಪುಸ್ತಕದಲ್ಲಿ ಅವರ ಹೆಸರು ಹಾಕುವುದು ಅವರಿಗೆ ಗೊತ್ತಿಲ್ಲ. ಯಾಕೆಂದರೆ ಹೆಸರಿನ ವ್ಯಾಮೋಹ ತೊರೆ ಎಂಬ ಸಂದೇಶ ನೀಡುವ ಕತೃ ತನ್ನ ಹೆಸರನ್ನು ಹಾಕಗೊಡುವುದಿಲ್ಲ. ಅಲ್ಲಿಗೆ ಅವರಿಗೂ ತಮ್ಮ ಹೆಸರಿನ ಬಗ್ಗೆ ಒಂದು ಸಣ್ಣ ವ್ಯಾಮೋಹ ಇದೆಯಾ ಎಂಬ ಅನುಮಾನ ನಮ್ಮಂತಹ ಪಾಮರರಿಗೆ ಏಳುತ್ತದೆ. ಇರಲಿ ನಾವೆಲ್ಲ ಡಿವಿಜಿಯಂತಹ ಮಹಾತ್ಮರ ಬಗ್ಗೆ ಹಾಗೆಲ್ಲ ಅಂದುಕೊಳ್ಳಬಾರದು ಅದೇಕೋ ಹಾಗಾಗಿದೆ ಅಂತ ನನಗಂತೂ ಗೊತ್ತಿಲ್ಲ. ಈಗ ನಾನು ಹೇಳಹೊರಟಿರುವುದು ಈ ಹೆಸರಿನ ವ್ಯಾಮೋಹದ ಬಗ್ಗೆ ಹಾಗಾಗಿ ಅಪ್ರಸ್ತುತವನ್ನು ಕೈಬಿಟ್ಟು ಮುಂದುವರೆಸೋಣ.
ಈ ಆರಡಿ ಬೆಳೆಯುವ ದೇಹ ಒಂದಡಿ ಇದ್ದಾಗ ಒಂದಿಂಚು ಉದ್ದದ ಹೆಸರೊಂದನ್ನು ನಮಗೆ ತಿಳಿಯದಂತೆ ಇಡುತ್ತಾರೆ. ಅಪ್ಪ ಕರೆದ ಅಮ್ಮ ಕರೆದಳು ಹಾಗೂ ನೆಂಟರು ಕೂಗಿದರು ಮತ್ತು ಅಕ್ಕಪಕ್ಕದವರು ಕೊಬ್ಬರಿದರು ಅಂತ ನಾವು ಓ ಅನ್ನಲು ಪ್ರಾರಂಬಿಸುತ್ತೇವೆ. ನಮಗೆ ಆ ಹೆಸರು ಇಷ್ಟವಿರಲಿ ಇಲ್ಲದಿರಲಿ ಚೋಟುದ್ದದ ನಾಮಾಂಕಿತಕ್ಕೆ ನಾವು ಎಷ್ಟು ಪ್ರತಿಕ್ರಿಯೇ ನೀಡುತ್ತೇವೆ ಎಂದರೆ ಗಾಢವಾದ ನಿದ್ರೆಯಲ್ಲಿದ್ದಾಗಲೂ ಯಾರಾದರೂ ಕೂಗಿದರೂ ನಾವು ಆ ಆ ಎಂದು ದಡಕ್ಕನೆ ಏಳುತ್ತೇವೆ. ಇಷ್ಟು ವ್ಯಾಮೋಹ ಹೊಂದಿರುವ ಒಂದಿಂಚು ಉದ್ದದ ಹೆಸರು ಬಾಲ್ಯ ಕಳೆದು ಯೌವನ ಮುಗಿದು ಅರೆಮುಪ್ಪು ಶುರುವಾದಾಗ ದುರಾಸೆಯನ್ನು ಎಬ್ಬಿಸಲು ಕಾರಣವಾಗುತ್ತದೆ. ನನ್ನದೊಂದು ಹೆಸರು ಅಲ್ಲಿ ಇರಬೇಕು, ತನ್ಮೂಲಕ ಜಗತ್ತಿಗೆ ತನ್ನೀ ದೇಹದ ಪರಿಚಯವಾಗಬೇಕು ನಂತರ ತನ್ನ ಆಲೋಚನೆಗಳು ಪ್ರಸರಿಸಬೇಕು ಅದಕ್ಕೆಲ್ಲ ಜನ ಯೆಸ್ ಯೆಸ್ ಅನ್ನಬೇಕು ಜೈಕಾರ ಹಾಕಬೇಕು ಹೀಗೆ ಮುಂದುವರೆಯುತ್ತದೆ. ಅವರು ರಾಜಕಾರಣಿಗಳಿರಲಿ ಬರಹಗಾರರಿರಲಿ, ವರದಿಗಾರರಿರಲಿ, ಮಂತ್ರ ಹೇಳುವ ಪುರೋಹಿತರಿರಲಿ ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಚಿಂತೆ. ಈ ಹೆಸರಿನ ಚಿಂತೆ ಇಲ್ಲದಿದ್ದರೆ ಏನೇನು ಆಗುತ್ತಿತ್ತು ಗೊತ್ತಿತ್ತಾ?. ಈಗ ಡಜನ್ ಗಟ್ಟಲೆ ಪತ್ರಿಕೆಗಳು , ಬ್ಲಾಗ್ ಗಳು ಇವೆಯೆಲ್ಲಾ ಅವುಗಳಲ್ಲಿ ಒಂದಿಂಚು ಉದ್ದದ ಹೆಸರು ಹೊತ್ತ ಲೇಖನಗಳು ಬರುತ್ತಿವೆಯೆಲ್ಲಾ ಅವೆಲ್ಲಾ ಇರುತ್ತಲೇ ಇರಲಿಲ್ಲ. ಪತ್ರಿಕೆಯ ಸಂಪಾದಕರುಗಳು ಬರಹಗಾರರಿಗೆ " ನೀವು ಕಥೆ ಕಳುಹಿಸಿ ಪ್ರಕಟಿಸುತ್ತೇವೆ ಆದರೆ ನಿಮ್ಮ ಹೆಸರು ಹಾಕುವುದಿಲ್ಲ" ಎಂಬ ಒಂದೇ ಠರಾವು ಹೊರಡಿಸಿದರೆ ಸಾಕು, ಶೇಕಡಾ ತೊಂಬತ್ತೊಂಬತ್ತು ಬರಹಗಾರರು ಬರೆಯುವುದನ್ನೇ ಕೈಬಿಡುತ್ತಾರೆ. ಮತಾಂತರದ ಕುರಿತು ಪುಟಗಟ್ಟಲೆ ಲೇಖನ ಬರುತ್ತಿದೆಯಲ್ಲಾ ಲೇಖಕರ ಹೆಸರೆಂಬ ಹೆಸರನ್ನು ಹಾಕದಿದ್ದರೆ ಅದು ಚರ್ಚೆಯೇ ಆಗುತ್ತಿರಲಿಲ್ಲ. ಹೆಸರನ್ನು ಹಾಕಬಾರದು ಎಂದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಪ್ರತಿಕ್ರಿಯೆಗಳು ಮಾತ್ರಾ ಇರುತ್ತಿತ್ತು. ಇರಲಿ ರೆ ಪ್ರಪಂಚದ ಈಚೆ ಬಂದು ನೋಡಿದರೆ ಈ ಹೆಸರಿನ ಹಿಂದೆ ಬೀಳುವವರ ಕಥೆ ಸಾವಿರ ಇದೆ. ಗ್ರಾಮ ಪಂಚಾಯತಿ ಸದಸ್ಸನಿಂದ ಪ್ರಾರಂಭವಾಗಿ ಪ್ರಧಾನಿ ಪಟ್ಟದವರೆಗಿನ ಜನರ ತನಕವೂ ಈ ವ್ಯಾಮೋಹ ತಪ್ಪಿದ್ದಲ್ಲ. , ಹಳ್ಳಿಗಳಲ್ಲಿ ಈ ಹೆಸರಿನ ಮಹಿಮೆ ಅಪಾರ. ಪತ್ರಿಕಾ ಸಂಪಾದಕರೊಬ್ಬರು ಹೇಳುತ್ತಿದ್ದರು. ಉತ್ತರ ಕರ್ನಾಟಕದ ವರದಿಗಾರರ ಬಳಿ ಜನ ದುಂಬಾಲು ಬಿದ್ದು ತಮ್ಮ ಹೆಸರನ್ನು ಪತ್ರಿಕೆಯಲ್ಲಿ ಹಾಕಿಸಿಕೊಳ್ಳುತ್ತಾರಂತೆ. ಅದೂ ಎಲ್ಲಿ ಅಂತ ಅಂದುಕೊಂಡಿರಿ? ಕಾರ್ಯಕ್ರಮದ ಕೊನೆಯಲ್ಲಿ ಹಾಜರಿದ್ದರು ಎಂಬ ಹೆಸರು ಬರುತ್ತದಲ್ಲ ಅಲ್ಲಿ. ಅದಕ್ಕಿಂತ ಮಜ ಎಂದರೆ ನಮ್ಮ ಊರಿಗೆ ಬರುವ ನಾಟಕ ಕಂಪನಿಗಳದ್ದು. ಅವರೋ ತುಂಬಾ ಶಾಣ್ಯಾಗಳು. ನಾಟಕ ಪ್ರಾರಂಭವಾಗಿ ಅರ್ದದಲ್ಲಿ "ನಾಟಕದ ಸ್ತ್ರೀ ಪಾತ್ರಧಾರಿ ರುದ್ರೇಶನಿಗೆ ಭದ್ರಪ್ಪ ನವರಿಂದ ಇಪ್ಪತ್ತು ರೂಪಾಯಿ ಕಾಣಿಕೆ ಎಂದು ಮೈಕ್ ನಲ್ಲಿ ಘೋಷಣೆ ಮಾಡುತ್ತಾರೆ. ನಂತರ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು ಜನರ ನೂಕು ನುಗ್ಗಲು ಆರಂಭವಾಗುತ್ತದೆ. ಅಂತಿಮವಾಗಿ ನಾಟಕದವರ ಜೇಬು ಭರ್ತಿ. ಪ್ರೇಕ್ಷಕರ ಜೇಬು ಖಾಲಿ ಅದೂ ಯಾತಕ್ಕಪಾ ಅಂದ್ರೆ ಅರೆಕ್ಷಣ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು. ಇರಲಿ ಬೀಡಿ ಇದು ಪಾಮರರ ಕಥೆ.
ಇದು ಸಾಧು ಸಂತರನ್ನು ಕೈಬಿಟ್ಟಿಲ್ಲ. ಸರ್ವ ಬಿಟ್ಟ ಸಾಧು ಸಂತರಿಗೆ ನಮಗಿಂತ ಒಂದು ತೂಕ ಈ ಹೆಸರಿನ ವ್ಯಾಮೋಹ ಹೆಚ್ಚು. ನಮ್ಮ ಹೆಸರುಗಳು ಒಂದಿಂಚು ಉದ್ದ ಇದ್ದರೆ ಅವರ ನಾಮಾಂಕಿತಗಳು ಶ್ರೀ ಶ್ರೀ ಶ್ರೀ ಎಂದು ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ಬರೊಬ್ಬರಿ ಆರಿಂಚು ತಲುಪಿರುತ್ತದೆ. ಈ ಆರಿಂಚು ಉದ್ದದ ನಾಮಾಂಕಿತವನ್ನು ಶಾಶ್ವತಗೊಳಿಸುವ ಮಹದಾಸೆ ಅವರಿಗೆ ಪಾಮರರು ಅವರ ಕಾಲದಲ್ಲಿ ಅವರ ಹೆಸರು ವಿರಾಜಮಾನವಾಗಿರಲಿ ಎಂದಷ್ಟೇ ಆಲೋಚಿಸಿದರೆ ಶ್ರೀ ಶ್ರೀ ಶ್ರೀ ಗಳು ಮುಂದಿನ ತಲೆತಲಾಂತರದವೆರೆಗೂ ತಮ್ಮ ಹೆಸರು ಇರಬೇಕೆಂದು ಹವಣಿಸುತ್ತಾರೆ. ಇನ್ನು ಹೆಸರಿನ ಮೂಲಕ ಗುರುತಿಸಿಕೊಳ್ಳಹೊರಟವರಲ್ಲಿ ಎರಡು ವಿಧಾನವಿದೆ. ಮೊದಲನೆಯದು ಉತ್ತಮ ಕೆಲಸವನ್ನು ಮಾಡುವುದು. ಅದು ತುಂಬಾ ಕಷ್ಟಕರ ವರ್ಷಗಟ್ಟಲೆ ಕಾಲವನ್ನು ನುಂಗುತ್ತದೆ. ಎರಡನೆಯದು ವಿವಾದವನ್ನು ಎಬ್ಬಿಸಿ ತನ್ಮೂಲಕ ತಮ್ಮ ಹೆಸರನ್ನು ಜಗಜ್ಜಾಹೀರು ಗೊಳಿಸುವುದು. ಇದು ಅತ್ಯಂತ ಸುಲಭ ಮಾರ್ಗ ತಂಟೆ ತಕರಾರು ಎತ್ತಿದರೆ ಮುಗಿಯಿತು. ಹೆಸರು ಪ್ರಸಿದ್ಧಿಗೆ ಬರುತ್ತದೆ. ಹೀಗೆ ಹೆಸರಿನ ಕುರಿತು ಹೇಳುತ್ತಾ ಸಾಗಿದರೆ ನಿಮ್ಮ ಮನಸ್ಸಿನಲ್ಲಿ ನನ್ನ ಹೆಸರೇ ಇಲ್ಲದಷ್ಟು ಆಗುವಷ್ಟು ವಿಷಯ ಇದೆ. ಹಾಗೂ ಅಲ್ಲೂ ಮತ್ತೆ ಹೆಸರಿನದ್ಡೇ ವಿಚಾರವಿದೆ.ವಾರಗಟ್ಟಲೆ ಆಲೋಚಿಸಿ ಒಂದು ಕಥೆ ಬರೆದು ನಂತರ ಅದನ್ನು ಪತ್ರಿಕೆಗೆ ಕಳುಹಿಸಿ ಅದು ಪ್ರಕಟವಾದ ನಂತರ ಗುರುತು ಪರಿಚಯ ಇರುವವರ ಬಳಿ ಸುತ್ತಿ ಬಳಸಿ ಮಾತನಾಡಿ " ನನ್ನ ದೊಂದು ಕಥೆ ಬಂದಿದೆ ನೋಡಿದೆಯಾ?" ಎಂದು ಅಲವತ್ತು ಕೊಳ್ಳುವುದಿದೆಯಲ್ಲಾ ಅದೂ ಚೋಟುದ್ದದ ಹೆಸರಿಗಾಗಿಯೇ. ನಿಜವಾಗಿಯೂ ಕಥೆಗಳಲ್ಲಿ ತಾಕತ್ತು ಇದ್ದರೆ ಬರಹಗಳಲ್ಲಿ ಸತ್ವ ಇದ್ದರೆ ಬರೆದವನು (ನಮ್ಮಂತೆ) ಪ್ರಕಟವಾದ ಪತ್ರಿಕೆಯ ಲೀಂಕನ್ನು ಮೈಲ್ ಮಾಡುವ ಅಗತ್ಯ ಇರುವುದಿಲ್ಲ. ಅದು ತನ್ನಿಂದ ತಾನೆ ಮನಸ್ಸಿನಿಂದ ಮನಸ್ಸಿಗೆ ದಾಟುತ್ತದೆ. ಬರಹಗಳಲ್ಲಿ ಸತ್ವ ತುಂಬಲಾಗದವರು, ಪಾಮರರು ಅವರಿಗೆ ಹೀಗೆ ಹೆಸರನ್ನು ದಾಖಲಿಸುವ ಆಸೆ ,ಆವಾಗ ಇಂತಹ ಕೆಲಸ. ಟೀಕೆ ಹಾಗೂ ಟಿಪ್ಪಣಿ.
ಅಂತಿಮವಾಗಿ:
ಹಾರ ತುರಾಯಿ ಬೇಕು ಪಂಡಿತಂಗೆ
ಹೆಸರಿಸಿರೆ ಸಾಕು ಪಾಮರಂಗೆ
ಕೊಪ್ಪರಿಗೆ ಹಣ ಬೇಕು ಕೃಪಣಂಗೆ
ಮೌನವೊಂದೇ ಸಾಕು ಸುಖಿಪಂಗೆ

5 comments:

Sushrutha Dodderi said...

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವಂ ಎಲ್ಲದಕೂ ತೀಕ್ಷ್ಣತಮ
ತಿನ್ನುವುದದಾತ್ಮವನೆ -ಮಂಕುತಿಮ್ಮ||

ವಿನಾಯಕ ಕೆ.ಎಸ್ said...

eega olle look bantu nodi! anadahaage naa haage hellidakke besaravilla taane?!

Shankar Prasad ಶಂಕರ ಪ್ರಸಾದ said...

"ಬಹಳಾ ಅಛ್ಚಾ ಇದೆ" ಅನ್ನಬಲ್ಲೆ.. ಅಷ್ಟೆ.
ಕಟ್ಟೆ ಶಂಕ್ರ

Unknown said...

su
nodi kaggada mahime. nanu putagattale baredaddu 4 salinalli

vi.
adakkenta besara? .dilkhush


KS
OK kananno

ಎಚ್. ಆನಂದರಾಮ ಶಾಸ್ತ್ರೀ said...

ಹೆಸರು ಹೆಸರೆನ್ನುತ್ತ ದಾರ್ಶನಿಕರಾಗಿಬಿಟ್ಟಿರಿ!