Wednesday, December 3, 2008

ಹ ಹ ಹ ನಾನು ಯಾರು ಗೊತ್ತಾ... !

ಹ ಹ ಹ ನಾನು ಯಾರು ಗೊತ್ತಾ... ಸನಿ ದೇವ ಕನೋ... ನನ್ನನ್ನು ನಂಬಿ ಬಂದ ಭಕ್ತರನ್ನು ಕಾಪಾಡುವುದು ನನ್ನ ಕರ್ತ್ವವ್ಯ ಕನೋ... ಬಾ ಬಾ... ಮುಂದೆ ಬಾ ತಗ ಈ ತೆಂಗಿನ ಕಾಯಿ , ಮನಿಗೆ ತಗಂಡು ಹೋಗಿ, ಕೊಟ್ಟಿಗೇಲಿ ಇಡು ಎಲ್ಲಾ ನಿವಾರಣೆ ಆಗ್ತೈತಿ...ಹೋಗ್ ಹೋಗ್. ದೂರದ ಊರಿಂದ ಹೆಣ್ಣು ಮಗಳ ಸಮಸ್ಯೆ ಮನ್ಸಲ್ಲಿ ಇಟ್ಕೋಂಡು ಬಂದೋನು ಬಾ.. ನಿಂಗೆ ಉತ್ತರ ಹೇಳ್ತೀನಿ".
ಶೆಟ್ಟಿಸರದಲ್ಲಿ ಶನಿದೇವ ಮೈಮೇಲೆ ಬರ್ತಾನೆ ಮಕ್ಕಾಕ ಮಕ್ಕಿ ಹೇಳ್ತಾನೆ, ತಟಾಕು ಹೆಚ್ಚುಕಮ್ಮಿ ಆದ್ರೂ ಮರದ ಮೇಲಿದ್ದ ಜೇನು ಹುಳ ಹೊಡಿತದೆ ಒಂದ್ಸಾರಿ ಬಾ ನೋಡು ದೇವರ ಮಹಿಮೆ " ಅಂತ ಸುಬ್ಬಣ್ಣ ರಗಳೆಕೊಡುತ್ತಲೇ ಇದ್ದ. ಅಂತೂ ಒಂದು ದಿನ ಬೇರೆ ಕೆಲಸ ಇಲ್ಲದ್ದರಿಂದ ಶೆಟ್ಟಿಸರದತ್ತ ಬೈಕನ್ನೋಡಿಸಿದೆ. ನಾನು ಹೋಗುವಷ್ಟರಲ್ಲಿ ನೂರಾರು ಜನ ತಮ್ಮ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಭಕ್ತರ ಭಕ್ತಿಯ ಸಾಲಿನಲ್ಲಿ ವಿನೀತನಾಗಿ ನಾನೂ ಸೇರಿಕೊಂಡೆ. ಶನಿದೇವ ಇನ್ನೂ ಮೈಮೇಲೆ ಬಂದಿರಲಿಲ್ಲ. ಶನಿದೇವನನ್ನು ಮಾತನಾಡಿಸುವ ಸೇರುಗಾರ ಅತ್ತಿತ್ತ ಸುಳಿಯುತ್ತಿದ್ದ. ಜನಸಾಗರದ ನಡುವೆ ದೇವಸ್ಥಾನದ ಆವರಣದಲ್ಲಿ ನಾನೂ ಒಂದು ಮೂಲೆ ಹಿಡಿದು ಗೋಡೆಗೊರಗಿದೆ. ಹೀಗೆ ಅರ್ದ ಘಂಟೆ ಕಳೆಯುವಷ್ಟರಲ್ಲಿ ಪಾತ್ರಿಯ ಮೈಮೇಲೆ ಶನಿದೇವ ಅವತರಿಸಿದ. ಸರಿ ಭಕ್ತ ಸಮೂಹದ ನಡುವೆ ಸಮಸ್ಯೆ ಇದ್ದವರು ಶುರುಹಚ್ಚಿಕೊಂಡರು. ಮನೆಯಲ್ಲಿ ಎಮ್ಮೆ ಹಾಲು ಕೊಡುತ್ತಿಲ್ಲ, ಗಂಡ ಕುಡಿಯುತ್ತಾನೆ, ಮಗ ಹೇಳಿದ ಮಾತು ಕೇಳೋದಿಲ್ಲ, ದಂಧೆ ಕೈ ಹತ್ತೋದಿಲ್ಲ, ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾ ಭಕ್ತ ಸಮೂಹ ಕಣ್ಣುಮುಚ್ಚಿ ನಿಂತು ಹೂಂಕರಿಸುತ್ತಿದ್ದ ಶನಿದೇವನ ಪಾತ್ರಧಾರಿಯೆದುರು ನಿಲ್ಲತೊಡಗಿತು . "ಓಹೋ ಹೌದಾ? ಹಾಗಾ..? ಎಲ್ಲಾ ಸರಿಯಾಗುತ್ತೆ ಬಿಡು, ಈ ಕಾಯಿ ತಗಂಡು ಹೋಗು, ಆ ಕ್ಷೇತ್ರಕ್ಕೆ ಹೋಗ್ಬಾ? ಮುಂತಾದ ಪಾತ್ರಧಾರಿಯ ಮಾನಸಿಕ ಮಟ್ಟಕ್ಕೆ ತೋಚುತ್ತಿದ್ದ ಉತ್ತರಗಳನ್ನು ನೀಡುತ್ತಿದ್ದ. ನನಗೂ ಒಂದೇ ತರಹದ ಘಟನಾವಳಿಗಳನ್ನು ಕೇಳಿ ಬೇಸರಬರತೊಡಗಿತು. ಮನೆಗೆ ಹೋಗಿ ಅಂಗಾತ ಮಲಗಿ ಒಳ್ಳೆಯ ನಿದ್ರೆ ತೆಗೆದರೆ ಅದರಲ್ಲಿರುವ ಲಾಭ ಇದರಲ್ಲಿ ಇಲ್ಲ ಎಂದೆನಿಸಿತು. ಅಷ್ಟರಲ್ಲಿ ಶನಿ ದೇವ " ದೂರದಿಂದ ಹೆಣ್ಣು ಮಗಳೊಬ್ಬಳ ಸಮಸ್ಯೆ ಹೊತ್ತು ಪರಿಹಾರಕ್ಕೆ ಇಲ್ಲಿಗೆ ಬಂದವರು ಬರಬೇಕು" ಎಂಬ ಆಹ್ವಾನ ನೀಡಿದ. ಕೆಲನಿಮಿಷಗಳಾದರೂ ಸಭೆಯಿಂದ ಯಾರೂ ಎದ್ದೇಳಲಿಲ್ಲ. ಶನಿಪಾತ್ರಧಾರಿ ಪದೇ ಪದೇ ತನ್ನ ಮಾತು ಉಚ್ಚರಿಸುತ್ತಿದ್ದ. ಇಲ್ಲ ಒಬ್ಬೇ ಒಬ್ಬಾತನೂ ಕದಲಲಿಲ್ಲ. ಗುಸುಗುಸು ಪಿಸ ಪಿಸ ಮಾಡುತ್ತಾ ಅಲ್ಲೇ ಕುಳಿತರು. ನನಗೆ ಇವೆಲ್ಲಾ ಒಂಥರಾ ವಿಚಿತ್ರ ರಗಳೆಯೆಂದೆನಿಸಿತು. ಸರಿ ಹಗೂರ ಮನೆಗೆ ಹೋಗೋಣ ಎಂದು ಎದ್ದುನಿಂತೆ. ತತ್ ಕ್ಷಣ ನನಗೆ ಏನು ಎಂದು ಅರ್ಥವಾಗುವುದರೊಳಗೆ ಘಟನೆಯೊಂದು ನಡದೇ ಹೋಯಿತು. ನಾನು ಮನೆಗೆ ಹೊರಡಲು ಎದ್ದು ನಿಂತಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಭಕ್ತರು ಶನಿ ದೇವ ಹೇಳುತ್ತಿದ್ದ ಸಮಸ್ಯೆ ಹೊತ್ತ ಜನ ನಾನೇ ಎಂದು ಭಾವಿಸಿತು. "ಮುಂಚೆ ಎದ್ದು ನಿಲ್ಲಾಕೆ ನಿಮಗೆ ಏನು ದಾಡಿ?. ಶನಿ ದೇವನ ಆಟ ಆಡಿಸ್ತೀರಾ?.ಆವಾಗಿಂದ ಕರಿತಾ ಇದೆ ದೇವ್ರು ಸುಮ್ನೆ ಕುಂತಿದೀರಲ್ಲ. ಮುಂತಾದ ಪ್ರಶ್ನೆಗಳೊಡನೆ ಅಕ್ಷರಶಃ ನನ್ನನ್ನು ಹೊತ್ತೊಯ್ದು ಶನಿ ದೇವನ ಮುಂದೆ ನಿಲ್ಲಿಸಿಬಿಟ್ಟಿತು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಸುಮ್ಮನೆ ನಿಂತೆ. "ಏನಾಗಿದೆ ಹೆಣ್ಣು ಮಗುವಿಗೆ"? ಶನಿ ದೇವ ಹೋಂಕರಿಸುತ್ತಾ ಪ್ರಶ್ನಿಸಿದೆ

"ನನಗೆ ಮದುವೆಯೇ ಆಗಿಲ್ಲ ಇನ್ನೆಲ್ಲಿ ಮಗು"

ಮತ್ತೇಕೆ ಇಲ್ಲಿ ಬಂದು ನಿಂತೆ? ನಿನ್ನ ತೊಂದರೆ ಏನು?

"ನಾನೆಲ್ಲಿ ಬಂದೆ, ಜನ ತಂದು ನಿಲ್ಲಿಸಿದರು. ತೊಂದರೆ ಏನೂ ಇಲ್ಲ ಸಧ್ಯಕ್ಕೆ. ಇದೆಲ್ಲಾ ಹೇಗೆ ಅಂತ ನೊಡಲು ಬಂದಿದ್ದೆ. "

ಏನು? ನನ್ನ ಹತ್ರಾನೆ ಹುಡುಗಾಟಿಕೆನಾ? ಪರಿಣಾಮ ಗೊತ್ತೈತಾ? ಹುಡುಗಾಟಿಕೆ ಮಾಡಕಾರು.

ನಾನು ಒಂಥರಾ ವಿಚಿತ್ರ ರೀತಿಯಲ್ಲಿ ನಕ್ಕೆ. ಶನಿ ದೇವನಿಗೆ ನನ್ನದು ಉದ್ಧಟತನವಿರಬೇಕೆಂದೆನಿಸಿತು." ಹೂ ಇರಲಿ ತಗಾ ಈ ತೆಂಗಿನಕಾಯಿ ಎಲ್ಲಾ ಒಳ್ಳೇದಾಕ್ತೈತಿ, ಹೊಗ್. ಶನಿ ದೇವ ಅಪ್ಪಣೆ ಕೊಟ್ಟ. ಪುಗ್ಸಟ್ಟೆ ಸಿಕ್ಕ ಕಾಯಿ ಹಿಡಿದುಕೊಂಡು ಮನೆಗೆ ಹೊರಡಲು ಬಾಗಿಲ ಬಳಿ ಬಂದೆ ಅಷ್ಟರಲ್ಲಿ......

5 comments:

Harisha - ಹರೀಶ said...

ಅಷ್ಟರಲ್ಲಿ?

ವಿ.ರಾ.ಹೆ. said...

ಅಷ್ಟರಲ್ಲಿ?

ಹ್ಹ ಹ್ಹ ಹ್ಹ್ಹ

ಮೂರ್ತಿ ಹೊಸಬಾಳೆ. said...

ecchara aagoota?

ಅನಿಲ್ ರಮೇಶ್ said...

ಅಷ್ಟರಲ್ಲಿ???
.
.
.
.
.
.
.

ನಿದ್ದೆಯಿಂದ ಎಚ್ಚರವಾಯ್ತಾ?

Anonymous said...

……..ಅಷ್ಟರಲ್ಲಿ ಮೂಲೆಯಲ್ಲಿ ತನ್ನ ಹಣೆಬರಹ ತಿಳಿಯಲು ಬಂದ ಮುದಿಮುದಿ ಮುದುಕನೊಬ್ಬ ಕಂಡ. ನೋಡುತ್ತೇನೆ..ಅಯ್ಯೋ ದೇವರೇ..ದೀನನಾಗಿ ನಿಂತಿದ್ದಾರೆ ಸಾಕ್ಷಾತ್ ಶ್ರೀ.ಶನಿದೇವರು!