Sunday, December 21, 2008

ಎರಡು ಬ್ಲಾಗ್ ಗಳು

ಬಾಳೆಹೊಳೆ ಪೆಜತ್ತಾಯರು ನನ್ನ ಬ್ಲಾಗ್ ಬರಹ ಪಬ್ಲಿಶ್ ಆದಾಗಲೆಲ್ಲಾ ಫೋನ್ ಮಾಡಿ ಸರಿತಪ್ಪುಗಳ ಕುರಿತು ವಿಮರ್ಶೆ ಮಾಡುತ್ತಾರೆ. ಅಲ್ಲಿಯೇ ಕಾಮೆಂಟ್ ಮಾಡಲು ನನಗೆ ಆಗದು ಹಾಗಾಗಿ ಪೋನ್ ಮಾಡುವುದು ಎಂಬುದು ಅವರ ಆಂಬೋಣ. ಹೀಗೆ ಅವರು ಪೋನ್ ಮಾಡಿದಾಗಲೆಲ್ಲಾ ನಾನು ಒಳಗೊಳಗೆ ಖುಷಿಯಾಗಿಬಿಡುತ್ತೇನೆ.ಇರಲಿ ಅದು ಹಾಗೆಯೇ ನಮ್ಮದೊಂದು ಬರಹ ಮತ್ತೊಬ್ಬರಿಗೆ ಇಷ್ಟವಾಯಿತು ಅಂದರೆ ಎಲ್ಲ ಬರಹಗಾರರ ಕಥೆಯೂ ಹಾಗೆಯೇ. ಅರವತ್ತೆರಡರ ಹರೆಯದಲ್ಲಿ ಅವರ ಓದುವಾಸಕ್ತಿ ಹಾಗೂ ಜೀವನೋತ್ಸಾಹ ನಾನು ಪ್ರತೀ ಕ್ಷಣಕ್ಕೂ ಬಸಿದುಕೊಳ್ಳಲು ಕಾತರಿಸುತ್ತೇನೆ.
ಇಂದು ಬ್ಲಾಗ್ ಲೋಕ ಬಹು ವಿಸ್ತಾರವಾದ ಒಳಹರಿವನ್ನು ಹೊಂದಿದೆ.ಇಂದು ಶ್ರದ್ಧೆಯಿಂದ ಆರ್ಥಿಕ ಪ್ರತಿಫಲಾಪೇಕ್ಷೆ ಇಲ್ಲದೆ ನಿಗದಿತ ಸಮಯಕ್ಕೆ ಬ್ಲಾಗ್ ಅಪ್ಲೋಡ್ ಮಾಡುವ ನೂರಾರು ಬರಹಗಾರರು ಇದ್ದಾರೆ. ಹಾಗೆಯೇ ಪುರುಸೊತ್ತು ಇದ್ದಾಗ ಬರೆಯೋಣ ಅನ್ನುವವರು ಇದ್ದಾರೆ ಜತೆಯಲಿ ನನ್ನದೂ ಒಂದು ಬ್ಲಾಗ್ ಎಂದು ಓಪನ್ ಮಾಡಿ ಮೊದಲ ಬರಹ ಬರೆದು ಕೈಬಿಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದು ನಾವೇ ಪ್ರಕಟಿಸುವ ನಮ್ಮದೇ ಪತ್ರಿಕೆ ಅಂತ ಅನ್ನಿಸಿದ್ದನ್ನೆಲ್ಲಾ ಬರೆಯುವವರೂ ಇದ್ದಾರೆ ಹೀಗೆ ಹತ್ತು ಹಲವು ತರಹ.
ಇವೆಲ್ಲದರ ನಡುವೆ ಸೂಪರ್ರಾಗಿ ಬರೆಯುವ ಮಂದಿಗೇನೂ ಕೊರತೆಯಿಲ್ಲ. ಸುಶ್ರುತನ "ಮೋಡ ಕವಿದ ವಾತಾವರಣ"(http://hisushrutha.blogspot.com/2008/11/blog-post_27.html ) ದ ಕೊನೆಯ ಸಾಲೊಂದು ಹೀಗಿದೆ ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ. ಮುಂಬೈ ಧಾಳಿಯ ಸಮಯದಲ್ಲಿ ಬರೆದ ಆ ಬರಹ ಅದೆಷ್ಟು ಶ್ರದ್ದೆಯಿಂದ ಬರೆದದ್ದೆಂದರೆ ನಿಜವಾಗಿಯೂ ಅದರ ಭಾವಾರ್ಥ ತುಂಬಾ ಆಳವಾಗಿದೆ. ಇಂತಹ ಕೃತ್ಯ ನಡೆದಾಗ ಜನಸಾಮಾನ್ಯ ಹೇಗೆ ಪಟ್ಟಂಗ ಹೊಡೆದು ಬಾಯಿಮಾತಿನಲ್ಲಿ ಸಿಟ್ಟುತೀರಿಸಿಕೊಳ್ಳುತ್ತಾನೆ ನಂತರ ತಾನು ಏನಾದರೂ ಮಾಡಬೇಕೆಂಬ ಸಮಯದಲ್ಲಿ ಹೇಗೆ ಜಾರಿಕೊಳ್ಳುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ನಿರೂಪಿಸಿಬಿಡುತ್ತಾರೆ ನಮ್ಮ ಸುಶ್ರುತ. ಇಂತಹ ಒಳಾರ್ಥದ ಬರಹಗಳಿಗಾಗಿ ನಾವು ಬ್ಲಾಗ್ ಲೋಕಕ್ಕೆ ಧನ್ಯವಾದ ಹೇಳಲೇ ಬೇಕು. ಕಾರಣ ಇಂತಹ ಬರಹಗಳನ್ನು ಯಾವ ಪತ್ರಿಕೆಗಳೂ ಪ್ರಕಟಿಸುತ್ತಿರಲಿಲ್ಲ. ಆದರೆ ಬ್ಲಾಗ್ ಗಳಲ್ಲಿ ಬರಹದ ಆಸಕ್ತಿ ಇರುವವರಿಗೆ ಮುಕ್ತ ಅವಕಾಶ.
ಹಾಗೆಯೇ ನಮ್ಮ ಹೊಸಮನೆ (http://mruthyu.blogspot.com/2008/12/blog-post_18.html ) ಬ್ಲಾಗ್. ಹದಿನೈದು ದಿನಕ್ಕೊಮ್ಮೆ ಹೊರಹೊಮ್ಮುವ ಮೃತ್ಯುಂಜಯ ಅವರ ಬರಹಗಳು. ಅವು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಇರುವೆಯ ಇರುವಿಕೆಯೆ ಕುರಿತು ಆರಂಬಿಸುತ್ತಾ ಮೆಲ್ಲಗೆ ಬರಹಗಾರರ ಒಣ ಹಮ್ಮನ್ನು ಚುಚ್ಚುತ್ತಾರೆ . ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಎನ್ನುವ ಸಾಲುಗಳಲ್ಲಿನ ಒಳಾರ್ಥ ಹಲವಾರು ಲೇಖಕ ಮಹಾಶಯರುಗಳ ಗುಟ್ಟನ್ನು ಬಿಚ್ಚಿಟ್ಟು ಬಿಡುತ್ತದೆ. ಸುಮ್ಮನೆ ಹೆಸರು ಬರಲಿ ಎಂದು ಬರೆಯುವ ಬರಹಗಳ ಬಗ್ಗೆ ನವಿರಾಗಿ ಟೀಕಿಸುತ್ತದೆ. ನಂತರ ಇರುವೆಯ ಮೂಲಕ ನಮ್ಮ ಇರುವಿಕೆಯನ್ನು ಹುಡುಕಿಕೊಳ್ಳುವ ಆ ಬರಹ ಒಮ್ಮೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಹುಶ: ಬ್ಲಾಗ್ ಎಂಬುದೊಂದು ಇರದಿದ್ದರೆ ಇಂತಹ ಬರಹ ನಮಗೆ ಓದಲು ಸಿಗುತ್ತಿರಲಿಲ್ಲವೇನೋ..?. ಎನಿ ವೆ ಥ್ಯಾಂಕ್ಸ್ ಬ್ಲಾಗ್ಸ್ ಎಂಡ್ ಬ್ಲಾಗರ್ಸ್
ಮುಂದಿನವಾರ ಮತ್ತೆ ಒಂದಿಷ್ಟು ಬ್ಲಾಗ್ ಗಳ ಒಳಗೆ ಇಣುಕಿ ನೋಡೋಣ. ಇಲ್ಲಿಯವರೆಗೆ ಓದುತ್ತಾ ಬಂದಿರುವ ನಿಮಗೂ ಹ್ಯಾಪಿ ವೀಕೆಂಡ್

No comments: