Sunday, October 10, 2010

ಮೀನು ಕುಣಿ


ಮೀನು ಎಂಬ ಎರಡಕ್ಷರ ಹಲವರಿಗೆ ಬಾಯಲ್ಲಿ ನೀರು ತರಿಸುತ್ತದೆ. ಅದೂ ಪುಕ್ಕಟ್ಟೆ ಮೀನು ಅಂದರೆ ಇನ್ನಷ್ಟು ಖುಷಿ ನೀಡುವುದು ಖಂಡಿತ. ಹಾಗೆ ರುಚಿರುಚಿಯಾದ ಪುಕ್ಕಟ್ಟೆ ಮೀನು ತಿನ್ನಲು ಮಲೆನಾಡಿನ ಹೊಳೆಯಂಚಿನ ಊರುಗಳಲ್ಲಿ ನೀವು ವಾಸವಾಗಿರಬೇಕಷ್ಟೆ, ಆಗ ಮಳೆಗಾಲದ ನಂತರ ಮೀನೂಟ ದಿನಾಲೂ ಉಚಿತ.
ಜಡಿಮಳೆ ಮುಗಿದ ಮಾರನೇ ದಿನ ಮಲೆನಾಡಿನ ಹೊಳೆಬದಿಯಲ್ಲಿ ಮೂರ್ನಾಲ್ಕು ಜನ ನಿಂತಿದ್ದಾರೆಂದರೆ ಅವರು ಅಲ್ಲಿ ಕುಣಿ ಹಾಕಿದ್ದಾರೆ ಎಂದರ್ಥ. ಹರಿವ ನೀರಿಗೆ ಅಡಿಕೆ ಮರದಿಂದ ದೋಣಿಯನ್ನು ಮಾಡಿ ಹೊಳೆಯ ಬದಿಯಲ್ಲಿ ಬೀಳುವಂತೆ ಮಾಡುತ್ತಾರೆ. ಹಾಗೆಯೇ ಆ ನೀರು ಹರಿವ ಬುಡದಲ್ಲಿ ಒಂದು ಡಬ್ಬವನ್ನಿಟ್ಟು ಮನೆ ಸೇರುತ್ತಾರೆ. ಆ ಮೀನುಗಳೋ ಮಳೆಗಾಲ ಮುಗಿಯೆತೆಂದಾಗ ನೀರಿನ ಮೂಲ ಸೇರಿಕೊಳ್ಳುವ ತವಕದಲ್ಲಿ ಹರಿವ ಹೊಳೆಯ ವಿರುದ್ಧವಾಗಿ ಹೋಗುತ್ತಿರುತ್ತವೆ. ಹಾಗೆ ಹೊರಟ ಮೀನುಗಳಿಗೆ ಈ ಸಣ್ಣ ಸಣ್ಣ ತೊರೆಗಳು ಅಪ್ಯಾಯಮಾನವೆನಿಸಿ ಅಲ್ಲಿ ಹೋಗಿ ನಂತರ ದಿಡೀರನೆ ಸಿಗುವ ಇಳಿಜಾರಿನಲ್ಲಿ ಜಾರುತ್ತಾ ಡಬ್ಬಿಯಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ಸಾವಿಗೆ ತಾವೇ ಚರಮಗೀತೆ ಹಾಡುತ್ತಾ ಕುಣಿ ಹಾಕಿದವರು ಬರುವವರೆಗೂ ಅಲ್ಲಿಯೇ ಪಳಕ್ಕನೆ ಎಗರುತ್ತಾ ಕುಣಿಯುತ್ತಾ ಇರುತ್ತವೆ. ಸಂಜೆಮುಂದೆ ಇಟ್ಟುಹೋಗಿದ್ದ ಡಬ್ಬ ಬೆಳಿಗ್ಗೆ ಬರುವ ಹೊತ್ತಿಗೆ ಮೀನುಗಳಿಂದ ತುಂಬಿತುಳುಕುತ್ತಿರುತ್ತದೆ. ಒಂದು ಕೂಣಿಯನ್ನು ಮೂರ್ನಾಲ್ಕು ಜನ ಸೇರಿ ಹಾಕುವುದರಿಂದ ಅಲ್ಲಿ ಸಮಪಾಲು. ಪಾಲು ಹಂಚಿಕೊಂಡು ಮತ್ತೆ ಡಬ್ಬ ಅಲ್ಲಿಯೇ ಇಟ್ಟು ಹೊರಟರೆ ಮತೆ ಆಯುಷ್ಯ ಕಡಿಮೆಯಾದ ಮೀನುಗಳ ದಾರಿ ಅದರತ್ತ. ಮನುಷ್ಯರ ಚಿತ್ತ ಡಬ್ಬದತ್ತ.
ಹೀಗೆ ಸುಲಭವಾಗಿ ಮೂರ್ನಾಲ್ಕು ತಿಂಗಳು ಮೀನಿನೂಟ ಪುಕ್ಸಟ್ಟೆ ಮಾಡುವ ಮಲೆನಾಡು ಮಂದಿಯ ಅದೃಷ್ಟ ಯಾರಿಗುಂಟು ಯಾರಿಗಿಲ್ಲ. ಆದರೆ ಹೀಗೆ ಮೂರ್ನಾಲ್ಕು ತಿಂಗಳು ಪುಕ್ಕಟ್ಟೆ ರುಚಿ ಹಚ್ಚಿಸಿದ ಮೀನು ನಂತರದ ಒಂಬತ್ತು ತಿಂಗಳು ಹತ್ತಿದ ರುಚಿ ತಣಿಸಲು ಜೇಬು ಖಾಲಿಮಾಡಿಸಿಬಿಡುತ್ತದೆ.

(ವಿಕೆ ಲವಲವಿಕೆಯಲ್ಲಿ ಶನಿವಾರ ಪ್ರಕಟಿತ ಬರಹ)

1 comment:

ಸೀತಾರಾಮ. ಕೆ. / SITARAM.K said...

ಗ್ರಾಮ್ಯ ಬದುಕಿನ ವೈವಿಧ್ಯ ಸೊಗಡುಗಳನ್ನು ಲವಲವಿಕೆಯಲ್ಲಿ ಉಣಬಡಿಸುವ ತಮಗೆ ವಂದನೆಗಳು.