Saturday, February 9, 2013

ಕಲ್ಲುಬರಡು ಭೂಮಿಯಲ್ಲೊಂದು ಸ್ವರ್ಗ

ಸಾವಯವ ಕೃಷಿಯೆಂಬುದು ಲಾಭ ನಷ್ಟ ಲೆಕ್ಕಾಚಾರದ ಹೊರತಾದ ಜೀವನ ಪದ್ದತಿ ಎಂದು ಅರಿವಾದಾಗ ಮಾತ್ರಾ ನೆಮ್ಮದಿ ಕಾಣಬಹುದು ಎನ್ನುತ್ತಲೆ ತೋಟಕ್ಕಿಳಿಯುತ್ತಾರೆ ತಾಳಗುಪ್ಪದ ಸಮೀಪದ ಐಗಳಕೊಪ್ಪದ ಯಶಸ್ವೀ ಸಾವಯವ ಕೃಷಿಕ ಪುರುಷೋತ್ತಮ. ೫೬ ವರ್ಷ ವಯಸ್ಸಿನ ಈ ಕೃಷಿಕನ ಬದುಕು ಎಂಬುದು ಸವಾಲುಗಳ ಸರಮಾಲೆ. ಹಠ ಛಲ ಇವರ ನರನಾಡಿಗಳಲ್ಲಿ ಹರಿಯುವ ರಕ್ತದ ಕಣಕಣ ದಲ್ಲಿಯೂ ಸೇರಿಕೊಂಡಿದೆ ಎನ್ನುವುದಕ್ಕೆ ಅವರು ಕಲ್ಲುಬರಡು ಭೂಮಿಯಲ್ಲೊಂದು ಸ್ವರ್ಗ ನಿರ್ಮಿಸಿದ್ದೇ ಸಾಕ್ಷಿ.


ಸಾಗರ ತಾಲ್ಲೂಕು ತಾಳಗುಪ್ಪದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಐಗಳಕೊಪ್ಪಕ್ಕೆ ಪುರುಷೋತ್ತಮ ಕಾಲಿಟ್ಟಾಗ ನಡುವಯಸ್ಸು. ಗೋಬರ್ ಗ್ಯಾಸ್ ಕಟ್ಟಡವೊಂದರ ನಿರ್ಮಾಣದಲ್ಲಿ ತೊಡಗಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಸೊಂಟದ ತೀವ್ರ ಪೆಟ್ಟಿನಿಂದ ಬಳಲುತ್ತಿದ್ದ ಪುರೋಷೋತ್ತಮ ನೋವನ್ನೂ ಲೆಕ್ಕಿಸದೆ ಕೃಷಿಯಲ್ಲಿ ತೊಡಗಿಸಿಕೊಂಡರು. ೨೦೦೬ ನೇ ಇಸವಿಯಲ್ಲಿ ಖರೀದಿ ಮಾಡಿದ ಐದು ಎಕರೆ ಬರಡು ಭೂಮಿ ಕೃಷಿಗೆ ಇರಲಿ ವಾಸಕ್ಕೂ ಕಷ್ಟಕರ ಎನ್ನುವ ಸ್ಥಿತಿಯಲ್ಲಿತ್ತು. ಪಕ್ಕಾ ಬಯಲು ಸೀಮೆಯ ವಾತಾವರಣದಲ್ಲಿ ಹರ ಸಾಹಸಪಟ್ಟರೆ ಮಳೆ ನಂಬಿ ಒಂದೆರಡೆ ಎಕರೆ ಭತ್ತ ಬೆಳೆಯ ಬಹುದಿತ್ತು. ಆವಾಗ ಪುರುಷೋತ್ತಮರ ಕೈಹಿಡಿದದ್ದು ಗೋಮಾತೆ.
ಗೋ ಶಾಲೆ: ೨೦೦೭ ನೇ ಇಸವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋ ಶಾಲೆಯೊಂದನ್ನು ತೆರೆದರು.ದಾರಿ ಬದಿಯಲ್ಲಿ ಹೊಟ್ಟೆಗಿಲ್ಲದ ವಯಸ್ಸಾಗಿರುವ ಹಲವು ದನಕರುಗಳಿಗೆ ಆಶ್ರಯದಾತರಾದರು. ಪುರುಷೋತ್ತಮ ಜತೆಜತೆಯಲ್ಲಿ ಡೈರಿ ಉದ್ಯಮ್ಮಕ್ಕೆ ಇಳಿದರು. ಮಿಶ್ರ ತಳಿ ಆಕಳನ್ನು ಹಾಲಿಗಾಗಿ ಸಾಕಾಣಿಕೆ ನಡೆಸಿ ಸಮೀಪದ ತಾಳಗುಪ್ಪ ಡೈರಿಗೆ ಹಾಲು ಹಾಕತೊಡಗಿದರು. ಅಂದು ಪ್ರಾರಂಭಿಸಿದ ಗೋಶಾಲೆಯಲ್ಲಿ ಇಂದು ೬೫ ಆಕಳು ಎಮ್ಮೆಗಳು ಇವೆ. ಅವುಗಳಲ್ಲಿ ೧೩ ಹಾಲು ನೀಡುವಂತಹವು ಮಿಕ್ಕಂತೆ ಕಿಲಾರಿ, ಮಲೆನಾಡು ಗಿಡ್ಡ, ಸಾಯಿವಾಲ್ ಹೀಗೆ ಹತ್ತು ಹಲವು ಜಾತಿಯ ಆಕಳುಗಳು ಇಲ್ಲಿ ನೋಡಲು ಲಭ್ಯ. ಗೋಶಾಲೆಯ ನಿರ್ವಹಣಾ ವೆಚ್ಚ ಅಧಿಕವಾದ್ದರಿಂದ ಅದನ್ನು ಸರಿ ತೂಗಿಸಲು ತಮ್ಮ ಇತರೆ ದುಡಿಮೆಯ ಹಣವನ್ನು ಸುರಿದರು, ಆವಾಗ ಮಗ ರವಿಕಿರಣ್ ಪ್ರಾರಂಬಿಸಿದ್ದು ದ್ರವಗೊಬ್ಬರ ಮಾರಾಟ.
ದ್ರವಗೊಬ್ಬರ: ಕೂಲಿ ಕಾರ್ಮಿಕರ ಕೊರತೆಯಿರುವ ತೋಟದ ಮಾಲಿಕರಿಗೆ ಸುಲಭದಲ್ಲಿ ಗೊಬ್ಬರ ಉಣಿಸಲು ಒಂದು ಮಾರ್ಗಬೇಕಿತ್ತು. ಪುರುಷೋತ್ತಮ ರ ಗೋಶಾಲೆಯಲ್ಲಿ ಸಗಣಿ ಗೋಮೂತ್ರ ಕ್ಕೆ ಬರವಿರಲಿಲ್ಲ. ದೊಡ್ಡದಾದ ಬಯೋಡೈಜೆಸ್ಟರ್ ಪ್ಲಾಂಟ್ ಮಾಡಿಸಿ ಅಲ್ಲಿ ಶೇಖರಣೆಯಾದ ದ್ರವ ರೂಪಿ ಗೊಬ್ಬರವನ್ನು ಸುತ್ತಮುತ್ತಲಿನ ಕೃಷಿಕರ ತೋಟಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಆರಂಭಿಸಿದರು. ಒಂದು ಲೀಟರ್ ದ್ರವ ರೂಪಿ ಗೊಬ್ಬರಕ್ಕೆ ೨ ರೂಪಾಯಿಯಿಂದ ದೂರಕ್ಕನುಗುಣವಾಗಿ ೩ ರೂಪಾಯಿವರಗೂ ದರ ನಿಗದಿಪಡಿಸಿದರು. ವರ್ಷವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ದ್ರವರೂಪಿ ಗೊಬ್ಬರ ಮಾರಾಟ ಮಾಡಿ ಗೋಶಾಲೆಯ ಖರ್ಚನ್ನು ಸರಿದೂಗಿಸತೊಡಗಿದರು. ಜತೆಯಲ್ಲಿ ತಮ್ಮ ಕೃಷಿ ಕ್ಷೇತ್ರವನ್ನು ಸಂಪುರ್ಣ ಸಾವಯವ ದ್ರವರೂಪಿ ಗೊಬ್ಬರಕ್ಕೆ ಒಗ್ಗಿಸಿದರು. ಇದರಿಂದಾಗಿ ಐದೆಕರೆ ಕೃಷಿ ಕ್ಷೇತ್ರ ಹಸಿರಿನಿಂದ ನಳನಳಿಸತೊಡಗಿತು.
ತರಕಾರಿಲ್ಲಿಯೂ ಸ್ವಾವಲಂಬಿ: ಹೇರಳವಾಗಿ ಸಿಗುವ ಗೊಬ್ಬರದ ಪ್ರಭಾವದಿಂದ ಪುರುಷೋತ್ತಮರ ಕೃಷಿ ಕ್ಷೇತ್ರದ ತುಂಬೆಲ್ಲಾ ತರಕಾರಿಗಳು ಕಾಣಸಿಗುತ್ತವೆ. ತನ್ನಷ್ಟಕ್ಕೆ ಹುಟ್ಟುವ ತರಕಾರಿಗಳು ಒಂದಿಷ್ಟಾದರೆ, ತೊಂಡೆ ಬಸಳೆ ಮುಂತಾದವುಗಳನ್ನು ಸಾಕಾಷ್ಟು ಬೆಳೆಯುತ್ತಾರೆ
ಎರೆಗೊಬ್ಬರ ಘಟಕ: ಸಾಗಾಟಕ್ಕೆ ಸುಲಭ ಹಾಗೂ ಅತ್ಯಂತ ಪೌಷ್ಟಿಕ ಎಂಬ ಹೆಗ್ಗಳಿಕೆಯ ಎರೆಹುಳು ಗೊಬ್ಬರದ ಘಟಕವೊಂದನ್ನು ಪುರುಷೋತ್ತಮ್ ಹೊಂದಿದ್ದಾರೆ, ವರ್ಷವೊಂದಕ್ಕೆ ಸುಮಾರು ೬೦೦ ಕ್ವಿಂಟಾಲ್ ಎರೆಗೊಬ್ಬರ ಮಾರಾಟ ಮಾಡುತ್ತಾರೆ. ತಮ್ಮ ಕೃಷಿ ಕ್ಷೇತ್ರಕ್ಕೂ ಎರೆ ಗೊಬ್ಬರವೇ ಪ್ರಧಾನ ಬಳಕೆ ಇವರದ್ದು.
ಪಾರಿವಾಳ ಸಾಕಾಣಿಕೆ: : ರವಿಕಿರಣ್ ಕೂಡ ತಂದೆಯಷ್ಟೇ ಶ್ರಮಜೀವಿ, ಹವ್ಯಾಸಕ್ಕಾಗಿ ಪಾರಿವಾಳ ಸಾಕುವ ಈತ ಹೆಚ್ಚಾದ ಜೋಡಿಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತಾನೆ.
ಪುರುಷೋತ್ತಮರ ಪತ್ನಿ ಯಶೋಧ ಕೂಡ ಕೃಷಿಯಲ್ಲಿ ಅಪಾರ ಆಸಕ್ತಿಯುಳ್ಳವರು. ತೋಟದಲ್ಲಿ ಬೆಳೆದ ಬಾಳೇಕಾಯಿ ನೇರಮಾರಾಟದಿಂದ ಲಾಭ ಕಡಿಮೆ ಎಂಬ ಲೆಕ್ಕಾಚಾರಕ್ಕೆ ಇಳಿದ ಕುಟುಂಬ ಮನೆಯಲ್ಲಿಯೇ ಚಿಪ್ಸ್ ತಯಾರಿಸಿ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಇಡೀ ಕುಟುಂಬ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ. ಇಚ್ಚಾಶಕ್ತಿಯಿದ್ದರೆ , ಗೋವಿನ ಅಮೃತವನ್ನುಣಿಸಿದರೆ ಎಂಥಾ ಬರಡು ನೆಲವೂ ಕೂಡ ಹಸಿರಿನಿಂದ ನಳನಳಿಸುವಂತಾಗುತ್ತದೆ ಎನ್ನುವುದಕ್ಕೆ ಐಗಳಕೊಪ್ಪದ ಈ ಕೃಷಿ ಭೂಮಿಯೇ ಸಾಕ್ಷಿ.

Mobile 9448814508-9449171220

1 comment:

Prakash Narasimhaiah said...

Hats off to purushotham for his confidence and effort. His achievements are convincingly introduced and explained to readers. Thanks to Shreeshum.
Many wishes to Purushotham
Prakash