Wednesday, July 18, 2012

ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ

"ಜನರೂ ಹಾಗೆ, ಹಾಗಾಗಿಯೇ ಜನರೂ ಹೀಗೆ...
ಅಬ್ಬರ ಎಬ್ಬಿಸಿದವರಷ್ಟೇ ಕಾಣುವುದು ಇಲ್ಲಿ !"   -ವಿರಾಹೆ

ಹೀಗೊಂದು ಸಿಂಪಲ್ ಕಾಮೆಂಟ್ ಜಡಿದು ವಿರಾಹೆ ಅವನ ಡ್ಯೂಟಿಗೆ ಹೊರಟು ಹೋದ. ನನಗೆ ತಲೆ ಕೆರೆದುಕೊಳ್ಳುವುಂತಾಗುವುದು, ಮೈ ಪರಚಿಕೊಳ್ಳುವಂತಾಗುವುದು ಆವಾಗ. ನಾನು ಪ್ಯಾರಾಗಟ್ಟಲೆ ಕುಟ್ಟುತ್ತೇನೆ ನನ್ನೊಳಗಿನ ತುಮುಲವನ್ನು ನಿಮಗೆ ಅರ್ಥಮಾಡಿಸಲು. ನನಗಿಂತ ಇಪ್ಪತ್ತು ವರ್ಷ ಸಣ್ಣವ ಜಸ್ಟ್ ಒಂದೇ ಒಂದು ಸಾಲಿನಲ್ಲಿ ನಾನು ಹೇಳಬೇಕಾದ್ದನ್ನು ಹೇಳಿ ಹೋಗುತ್ತಾನೆ. ಛೆ ನಾನು ಯಾಕೆ ಹೀಗಲ್ಲ ಅಂತ ಅನ್ನಿಸುತ್ತದೆ. ಒಂದು ಸಾಲಿನಲ್ಲಿ ಹೇಳಬೇಕಾದ್ದಕ್ಕೆ ಪುಟಗಟ್ಟಲೆ.... ಹಾಗೆ ನನಗೆ ಒಂದು ಸಾಲಿನಲ್ಲಿ ಹೇಳಲು ಬಂದಿದ್ದರೆ ನಾನು ಝೆನ್ ಆಗಬಹುದಿತ್ತು. ಅದರ ಅರ್ಥ ಮಾಡಿಕೊಳ್ಳುವ ತಾಕತ್ತಂತು ನಿಮಗೆ ಇದ್ದೇ ಇದೆ. ಇಷ್ಟಾದಮೇಲೆ ನಾನೇಕೆ ಹಲುಬುತ್ತೇನೆ ಅಂತ ಅನ್ನಿಸಿ ಅನ್ನಿಸಿದರೂ ಮತ್ತೆ ಯಥಾಪ್ರಕಾರ ಅದಾಗದೆ ಕುಟ್ಟತೊಡಗುತ್ತೇನೆ ಈಗಿನಂತೆ. ಆಗಲಿ ಅದು ಅವನ ಶಕ್ತಿ ಇದು ನನ್ನ ನಿಶ್ಯಕ್ತಿ ಅಂತಲೂ ಅಂದು ಜೈ  ವಿರಾಹೆ ಅಂದು ಬಿಡೋಣ. ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ




Friday, June 29, 2012

ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ

ಹೊಸ್ಮನೆ ಮುತ್ತು   ಎಲ್ಲರಿಗೂ ಹೆಸರು ಗೊತ್ತಿರುವಷ್ಟು ದೊಡ್ದ ಮಟ್ಟದ ಬರಹಗಾರ ಅಲ್ಲ ನಿಜ, ಆದರೆ ತೀರಾ ಗಮನಿಸಿ ಓದುವ ಕನ್ನಡದ ಓದುಗರಿಗೆ ಪರಿಚಯ ಇರುವ ಲೇಖಕ. ದಿನಪತ್ರಿಕೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಚುಟುಕಾಗಿ ಹೇಳಬೇಕಾದ್ದಷ್ಟನ್ನೇ ಹೇಳುವ ಆತ ನನಗೆ ಪರಿಚಯ ಇಲ್ಲಿಯವರೆಗೆ ಫೋನ್ ಮುಖಾಂತರವಷ್ಟೆ. ಆದರೆ ಸ್ನೇಹ ಒಂಥರಾ ಗಾಢವಾಗಿದೆ. ಬರೆಯುವ ಪ್ರತೀ ಬರಹದಲ್ಲಿಯೂ ಶ್ರದ್ಧೆ ಪ್ರೀತಿ ಎದ್ದು ಕಾಣುವಂತೆ ಬರೆಯಬಲ್ಲ ಮುತ್ತು ಭಾವ ಜೀವಿ. ಒಂದು ಫೋನ್ ಮಾಡಿದರೆ "ಅಣ್ಣಯ್ಯಾ,  ಧನ್ಯೊಸ್ಮಿ" ಅನ್ನುವಷ್ಟು. ಆತ ಒಮ್ಮೊಮ್ಮೆ ಮೈಲ್ ಮಾಡುವುದು ಇದೆ. ಅದು ತುಂಬಾ ಆಳವಾದ ಭಾವನೆಯಲ್ಲಿರುತ್ತದೆ. ತಿರುಗಿ ಮೈಲ್ ಮಾಡಲಿ ಎಂಬುದು ಆತನ ಆಸೆ, ಆದರೆ ನನಗೆ ಆ ಮೈಲ್ ಗೆ ಉತ್ತರಿಸುವಷ್ಟು ಭಾಷೆಯ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಬರೆಯಲಾಗದೆ ಹೇಳಲಾರದ ಸಂಕಟದಲ್ಲಿ ಸುಮ್ಮನಿದ್ದುಬಿಡುತ್ತೇನೆ. ಬಹಳ ಸಾರಿ ಮೌನ ಲೇಸು, ಕಾರಣ ಅದು ನಮ್ಮ ಬುದ್ದಿವಂತಿಕೆಯನ್ನು ಹೊರಹಾಕದಿದ್ದರೂ ದಡ್ದತನವನ್ನು ಪ್ರದರ್ಶಿಸುವುದಿಲ್ಲ.
ರಾಧಾಕೃಷ್ಣ ಭಡ್ತಿ ಹಲವರಿಗೆ ಪರಿಚಿತ ಹೆಸರು. ನೀರಿನ ಕುರಿತು ಇನ್ನು ಯಾರೂ ಬರೆಯಲಾಗದಷ್ಟು ಬರೆದ ಬರಹಗಾರ ಆತ. ಕನ್ನಡದ ದಿನಪತ್ರಿಕೆ ಕನ್ನಡಪ್ರಭದ ಅಂಕಣಕಾರ. ಸ್ವಲ್ಪ ಬಿಡುವಿಲ್ಲದ ಮನುಷ್ಯ. ಆತನಿಗೂ ಒಮ್ಮೊಮ್ಮೆ ಫೋನ್ ಮಾಡುವುದಿದೆ. ಆತ್ಮೀಯವಾಗಿ ಮಾತನಾಡುವ ಭಡ್ತಿ ಊರಲ್ಲಿ ಸಾಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವಿಚಾರಿಸುತ್ತಾನೆ. ಮತ್ತು ಒಂದಿಷ್ಟು ಬರಿಯಬೇಕು ನೀನು ಅನ್ನುತ್ತಾನೆ. ಹಿಂದೆ ವಿಕ ದ ಲವಲವಿಕೆ ಯನ್ನು ಕಟ್ಟಿ ಬೆಳಸಿದ ಮನುಷ್ಯ. ನನಗೆ ಆತನ ಜತೆಯೂ ಒಂದು ಸ್ನೇಹದ ಎಳೆ ಇದೆ.
ಚಂದ್ರಶೇಖರ್ ನೀವು ಹೆಸರನ್ನೇ ಕೇಳಿಲ್ಲ ಬಿಡಿ. ಶಿವಮೊಗ್ಗದ "ಜನ ಹೋರಾಟದ"  ಬೆನ್ನೆಲುಬು. ಶೃಂಗೇಶ್ (ಓಹ್ ಈ ಹೆಸರು ಗೊತ್ತು ಅಂದಿರಾ...) ರ ಸಹೋದರ. ಆದರೆ ಪತ್ರಿಕಾ ಪ್ರಪಂಚದ ಒಳಹೊರ ಹೂರಣ ಗೊತ್ತಿದ್ದು ತಮ್ಮ ಹೆಸರನ್ನು ಎಲ್ಲಿಯೂ ಕಾಣಿಸದೆ ಪತ್ರಿಕೆ ನಡೆಸುವ ಜನ. ಅವರಿಗೂ ನಾನು ಒಮ್ಮೊಮ್ಮೆ ಫೋನಾಯಿಸುವುದು ಇದೆ. ಕಷ್ಟನಷ್ಟಗಳನ್ನು ಹಂಚಿಕೊಳ್ಳುವುದು ಇದೆ. ಪತ್ರಿಕೆಗಲ ಬಗ್ಗೆ ಅಲ್ಲಿರುವ ಎಲ್ಲಾತರಹದ ಜನರ ಬಗ್ಗೆ ಕರಾರುವಕ್ಕಾಗಿ ಗೊತ್ತಿರುವ ಚಂದ್ರಶೇಖರ್ ಬರಹಗಳ ಬಗ್ಗೆ ಚೆನ್ನಾಗಿ ಮಾತನಾಡಬಲ್ಲರು. ಪತ್ರಿಕೋದ್ಯಮದ ಬಗ್ಗೆ ಕಾಳಜಿಯ ಜನ.
ಹೀಗೆ ನೂರಾರು ಜನರ ದಂಡೇ ಇದೆ, ಬರಹಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳವರು, ಅದಕ್ಕಾಗಿ ದುಡಿಯುವವರು, ಅಲ್ಲೇ ಮುಳುಗಿ ಹೋದವರು, ಮತ್ತು ಮೇಲೆ ಬಂದವರು. ಮಜ ಗೊತ್ತಾ...? ಹೀಗೆಲ್ಲಾ ತಮ್ಮಪಾಡಿಗೆ ತಾವು ಅಕ್ಷರ ಸೇವೆ ಮಾಡುವವರ ಹೆಸರು ಅಷ್ಟೊಂದು ಜನಜನಿತವಲ್ಲ. ಜನಜನಿತವಾದರ ಹಿಂದೆ ಇವರ ಸೇವೆ ಇದೆ. ಈಗ ನಿಚ್ಚಳವಾಗುತ್ತದೆ, ಪತ್ರಿಕೋದ್ಯಮಕ್ಕೆ ಬೇಕಾಗಿರುವುದು ಶ್ರದ್ಧೆಯೊ, ಕಾಳಜಿಯೋ, ಅಥವಾ ಮತ್ತಿನ್ನೇನೋ..
ಇವೆಲ್ಲಾ ಯಾಕೆ ಬರೆದೆನೆಂದರೆ, ನಮ್ಮ ಮಾಜಿ ರಾಷ್ಟ್ರಪತಿ ಒಮ್ಮೆ ಇಸ್ರೇಲ್ ಗೆ ಹೋಗಿದ್ದರಂತೆ. ಅಲ್ಲಿಯ ಪತ್ರಿಕೆಗಳನ್ನು ನೋಡಿ ಅವರು ತುಂಬಾ ಖುಷಿ ಪಟ್ಟರಂತೆ. ಕಾರಣ ಅಂದು ಅಲ್ಲಿ ಬ್ಲಾಸ್ಟ್ ಆದ ಬಾಂಬ್ ನ ವರದಿ ೮ ನೇ ಪುಟದ ಮೂಲೆಯಲ್ಲಿತ್ತಂತೆ, ಹಾಗೂ ಮುಖ್ಯ ಪುಟದಲ್ಲಿ ದೇಶದ ಅಂದಿನ ತಾಂತ್ರಿಕತೆಯ ಬೆಳವಣಿಗೆಯ ಕುರಿತು ವರದಿ ಇತ್ತಂತೆ. ಹಾಗಾಗಿ ಪುಟ್ಟ ದೇಶವಾದರೂ ಇಸ್ರೇಲ್ ಇಂದು ಜಗತ್ತಿನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಪ್ರಪಂಚದಲ್ಲಿ. ಮಾದ್ಯಮಗಳು ಇಲ್ಲಿಯೂ ಇದೆ, ಜನ ಮುಖ್ಯಪುಟದಲ್ಲಿ ಬೇಡದ್ದನ್ನು ಓದುತ್ತಾರೆ. ಒಳಪುಟಕ್ಕೆ ಹೋಗುವ ಪುರುಸೊತ್ತು ಇಲ್ಲದೆ ರದ್ದಿ ಅಂಗಡಿಗೆ ಪತ್ರಿಕೆ ಸೇರಿಸುತ್ತಾರೆ. ಆದರೆ ಅಲ್ಲಿರುತ್ತಿತ್ತು ಮಾಹಿತಿ ಬರಪ್ಪೂರ. ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ


Thursday, June 28, 2012

ಕಟ್ಟೆ ಬಂದು ಕುಳಿತಿದೆ ಗಿಡ ನೆಡಬೇಕು

"ತುಳಸಿ ತಾಯೆ ದಳಸಂಪನ್ನೆ ನಂದಸು ನಂದಸು ನಂದರ ಬಾಲೆ ಶಿವನಂದರ ಶಿವ ಪೂಜೆಗಾಗಿ ನಾ ನಿನ್ನ ನಿಯ್ಸ್ತೇನೆ ತಾಯಿ ನೀ ನನ್ನ ನೋಯಿಸಬೇಡ ತಾಯೆ" ಎಂಬ ಮಂತ್ರ....! ಗುಣಗುಣಿಸುತ್ತಾ ಬೆಳಗ್ಗೆ ಹೂವಿನ ಕೊಯ್ಲು ಅಂತ್ಯದಲ್ಲಿ ತುಳಸಿ ಕೊಯ್ಯುತ್ತಿದ್ದ ಕಾಲವೊಂದಿತ್ತು. ಅದು ಸರಿ ಸುಮಾರು ಮೂವತ್ತೈದು ವರ್ಷದ ಹಿಂದಿನ ಕಾಲ. ಮನೆಯ ಹಿತ್ತಲಿನಲ್ಲಿ ಕಿಚಪಿಚ ಕೆಸರಿನ ನಡುವೆ ಕರಕರ ಗುಟ್ಟುತ್ತಾ ಹೂವು ಕೊಯ್ಯುವ ಕಾಯಕದ ಸಮಯದಲ್ಲಿ ಇವೆಲ್ಲಾ ಯಾಕೆ ಅಂತ ಒಮ್ಮೊಮ್ಮೆ ಮೂಡುತ್ತಿತ್ತು. ಮಿಲ್ಟ್ರಿ ದರ್ಬಾರಿನ ಅಪ್ಪಯ್ಯನ ಹೆದರಿಕೆಯಲ್ಲಿ ಅಂತೂ ಇಂತು ಹೂವು ದೇವರ ಮನೆ ಸೇರುತ್ತಿತ್ತು. ನಾವೇನೋ ಹೂ ಕೊಯ್ಯುವ ಕೆಲಸ ಮಾಡಿಯಾಯಿತು. ಇಂದು ನನ್ನ ಮಗ ಅಂತಹ ಕೆಲಸ ತಿಪ್ಪರಲಾಗ ಹಾಕಿದರೂ ಮಾಡಲಾರ. ಇರಲಿ ಕಾಲಾಯ ತಸ್ಮೈ ನಮಃ: ಈಗ ಈ ಕೆಲಸ ಸ್ವಲ್ಪ ಈಸಿ ಮಾಡುವ ಸಮಯ ಬಂದಿದೆ. ಮನೆಯೊಳಗಡೆ ತುಳಸಿ ತಂದಿಟ್ಟರೆ..? ಯೆಸ್ ಹಾಗಾಗಿದೆ ಕಟ್ಟೆ ಬಂದು ಕುಳಿತಿದೆ ಗಿಡ ನೆಡಬೇಕು.

ಸೂರ್ಯನಿಗೆ ಸಿಗ್ನಲ್ಲೋ..ಸೂರ್ಯನೇ ಸಿಗ್ನಲ್ಲೋ

ಜೂನ್ ತಿಂಗಳೆಂದರೆ ಮಲೆನಾಡು ಜಿರ್ರೋ ಎನ್ನಬೇಕಿತ್ತು ಆದರೆ ಎಂದಿನ ಭರಾಟೆಯನ್ನು ವರುಣ ತೋರಿಸುತ್ತಿಲ್ಲ. ಜೂನ್ ತಿಂಗಳಿನಲ್ಲಿ ಸೂರ್ಯ ಉದಯ ಕಾಣಿಸುವ ದಿವಸಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಈ ವರ್ಷ ಮಳೆಯ ಅಬ್ಬರ ಕಡಿಮೆಯ ಕಾರಣ ತಾಳಗುಪ್ಪದ ರೈಲ್ವೇ ಗೇಟಿನ ಬಳಿ ಶನಿವಾರ ಮುಂಜಾನೆ ಸೂರ್ಯ ಕಾಣಿಸಿದ್ದು ಹೀಗೆ. ರೈಲ್ವೇ ಇಲಾಖೆಯ ಕೆಂಪು ಸಿಗ್ನಲ್ ಸೂರ್ಯನಿಗೋ ಅಥವಾ ಮಳೆಗೋ ಅಥವಾ ಸೂರ್ಯನೇ ಈ ವರ್ಷ ಮಳೆ ಇಲ್ಲ ಎನ್ನುವ ಸಿಗ್ನಲ್ಲೋ ಎನ್ನುವಂತೆ.

Wednesday, June 27, 2012

ಬಲೆಗಾರು ಬಯಲಿಗೆ ಕಪ್ಪುಮೂತಿ ಕೊಕ್ಕರೆ ದಂಡು

 ಜೂನ್ ತಿಂಗಳ ಮಳೆಗಾಲ ಎಂದರೆ ರಾಷ್ಟ್ರೀಯ ಹೆದ್ದಾರಿ ೨೦೬ ರ ತಾಳಗುಪ್ಪ ಸಮೀಪದ ಬಲೆಗಾರು ಗದ್ದೆ ಬಯಲು ಹಸಿರಿನಿಂದ ಕಂಗೊಳಿಸುತ್ತದೆ. ಈ ಹಸಿರಿನ ಸಿರಿಗೆ ಕಪ್ಪು ಮೂತಿ ಕೊಕ್ಕರೆಗಳು ಬೆಳ್ಳನೆಯ ಚುಕ್ಕಿಯಾಗಿ ನಯನ ಮನೋಹರ ದೃಶ್ಯವನ್ನು ಸೃಷ್ಟಿಸುತ್ತದೆ. ಈ ಕಪ್ಪು ಮೂತಿ ಕೊಕ್ಕರೆಗಳು ಪ್ರತೀ ವರ್ಷ ಜೂನ್ ತಿಂಗಳಿಗೆ ಇಲ್ಲಿಗೆ ವಲಸೆ ಬಂದು ಅಗಸ್ಟ್ ತಿಂಗಳಿನಲ್ಲಿ ಮತ್ತೆ ವಾಪಾಸಾಗುತ್ತದೆ. ಮೂಲದ ಪ್ರಕಾರ ಈ ಕೊಕ್ಕರೆ ಬಹಳ ವರ್ಷದಿಂದ ಈ ಪದ್ದತಿ ಅನುಸರಿಸುತ್ತಿವೆ. ನೂರಾರು ಸಂಖ್ಯೆಯ ಗುಂಪಿನಲ್ಲಿ ಬಂದು ಬಿತ್ತನೆಗದ್ದೆಯಲ್ಲಿನ ಹುಳುಗಳನ್ನು ಬೇಟೆಯಾಡುವ ಇವು ರೈತಮಿತ್ರ ಕೊಕ್ಕರೆಗಳಾದ್ದರಿಂದ ರೈತರು ಇವಕ್ಕೆ ತೊಂದರೆಮಾಡುವುದಿಲ್ಲ. ಆಹಾರಕ್ಕಾಗಿ ಬರುವ ಇವು ದಾಇಹೋಕರ ಕಣ್ಣಿಗೆ ನಿತ್ಯ ರಸನೋಟವನ್ನು ನೀಡುತ್ತಿವೆ.




Friday, June 22, 2012

ಕಾಲ ಪಕ್ವವಾಗಬೇಕಿದೆ.....

ಬ್ಲಾಗ್ ಬರೆಯುವುದು ನಿಂತೇ ಹೋಯಿತೇನೋ ಅಂತ ನನಗೆ ಕಾಡುವಷ್ಟು ದಿನಗಳಾಯಿತು ಅಕ್ಷರ ಕುಟ್ಟದೆ. ಇಂದು ಏನಾದರಾಗಲಿ ಅದು ನಾಲ್ಕೇ ಸಾಲಾದರೂ ಸರಿ ಅಂತ ಕುಟ್ಟಲು ಕುಳಿತೆ. ಬ್ಲಾಗ್ ಇದೆಯಲ್ಲ ಅದು ನನ್ನನ್ನು ಬಹು ಪ್ರೀತಿಯಿಂದ ಅಕ್ಕರೆಯಿಂದ ಬೆಳಸಿದೆ. ಅದರಿಂದ ಅದೆಷ್ಟೋ ಹೊಸ ಪ್ರಪಂಚದ ಅನಾವರಣವಾಗಿದೆ. ನನ್ನ ತುಮುಲ ತಣಿದಿದೆ, ಧಾವಂತದ ಬದುಕಿನ ಜನರ ಮುಖದಲ್ಲಿ ಮುಗುಳ್ನಗೆ ಮೂಡಿಸಿದೆ. ಅವರ ಸಂಪರ್ಕ ಸಾದ್ಯವಾಗಿದೆ. ಸುಮುಧುರ ನೆನಪು ಅಕ್ಷರ ರೂಪದಲ್ಲಿ ಉಳಿದಿದೆ, ನನಗೆ ಕುಟ್ಟುವಾಗ ಸಮಾಧಾನ ತಂದಿದ್ದು ಯಾವತ್ತೋ ಯಾರ ಕಣ್ಣಿಗೋ ಬಿದ್ದು ಸಮಾಧಾನ ತಂದಿದ್ದಿದೆ. ಇಷ್ಟೆಲ್ಲಾ ಮಜದ ಬ್ಲಾಗು ಬರೆಯಲು ಮತ್ತೆ ಶುರು ಮಾಡಬೇಕಿದೆ.
ಈಗ ಮಳೆ ಜೊರ್ರಂತ ಸುರಿಯುತ್ತಿದ್ದರೆ ಮನೆಯೊಳಗಿನಿಂದಲೇ ಅನುಭವಿಸುವಂತಹ "ತೊಟ್ಟಿ ಮನೆ" ತಯಾರಾಗಿ ನಿಂತಿದೆ. ಅಲ್ಲಿ ಕಾನೂನಿನ ಪ್ರಕಾರ ಕೊಂಚವೇ ಕೊಂಚ ಕೆಲಸ ಮುಗಿದರೆ ನೀವೂ ಅದನ್ನ ಬಿಸಿಬಿಸಿ ಪಕೋಡ ತಿನ್ನುತ್ತಾ ಅನುಭವಿಸಬಹುದು. ಕತೆ ಹೇಳಬಹುದು ಕೇಳಬಹುದು, ಮಲೆನಾಡಿನ ಪದಾರ್ಥಗಳ ಸವಿ ಅನುಭವಿಸಬಹುದು. ಆದರೆ ಅದಕ್ಕೆಲ್ಲಾ ಇನ್ನೂ ಕೊಂಚ ಸಮಯ ಕಾಯಬೇಕಿದೆ, ನಾನು ತಯಾರಾಗಬೇಕಿದೆ, ಕಾಲ ಪಕ್ವವಾಗಬೇಕಿದೆ......

Thursday, April 5, 2012

ನೀರಿಲ್ಲದ ಜೋಗಕ್ಕೆ ಸಂಗೀತ ಕಾರಂಜಿ ಮೆರುಗು.




ಜೋಗ ಜಲಪಾತ ಏಪ್ರಿಲ್ ಮೆ ತಿಂಗಳಿನಲ್ಲಿ ನೀರಿಲ್ಲದ ಕಾರಣ ನೀರಸ. ಜಲಪಾತದ ಮೆರುಗಿಲ್ಲದೆ ಪ್ರವಾಸಿಗರ ಕೊರತೆಯಿಂದ ಜೋಗ ಸೋರಗುತ್ತದೆ. ಈ ನಿಟ್ಟಿನಲ್ಲಿ ಜೋಗವನ್ನು ಸರ್ವ ಋತು ಪ್ರವಾಸೋದ್ಯಮ ತಾಣವನ್ನಾಗಿಸಲು ಜೋಗ ಅಭಿವೃದ್ಧಿ ಪ್ರಾಧಿಕಾರ ಸಂಗೀತ ಕಾರಂಜಿಯನ್ನು ನಿರ್ಮಿಸಿದೆ.
ಮಂಗಳವಾರದಿಂದ ಪ್ರಾಯೋಗಿಕವಾಗಿ ಸಂಗೀತ ಕಾರಂಜಿಯನ್ನು ಆರಂಭಿಸಿದ್ದಾರೆ. ಸಂಜೆ ೭-೧೫ ಪ್ರತಿ ನಿತ್ಯ ಸಂಗೀತ ಕಾರಂಜಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲದ ಪ್ರೀಮಿಯರ್ ವರ್ಲ್ಡ್ ಟೆಕ್ನಾಲಜಿ ಸಂಸ್ಥೆ ೧.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಾರಂಜಿಯನ್ನು ಶೀಘ್ರದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು .
ಸಂಗೀತ ಕಾರಂಜಿಯು ಮೈಸೂರಿನ ಬೃಂದಾವನ ಮಾದರಿಯನ್ನು ಹೊಂದಿದ್ದು ಪ್ರವಾಸಿಗರ ಮನ ತಣಿಸುವಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ. ಕಾರಂಜಿಯಲ್ಲಿ ಮೂಡಿಬರುವ ಚಿತ್ರಗಳು ಹಾಗೂ ಅದಕ್ಕೆ ಹಿನ್ನಲೆ ಸಂಗೀತ ಜೋಗದ ಸಂಜೆಯನ್ನು ಮಧುರವನ್ನಾಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಲೇಸರ್ ತತ್ರಾಂಶ ಬಳಸಿ ಮೂಡಿಬರುವ ಚಿತ್ರಗಳಲ್ಲಿ ಕ್ರಿಕೆಟ್ ಪಟು ಸಚಿನ್ ತಂಡೂಲ್ಕರ್,ಪಿಟಿ ಉಷಾ, ಪಂಕಜ್ ಅಡ್ವಾಣಿ ಹಾಗೂ ರಾಷ್ಟ್ರನಾಯಕ ಚಿತ್ರಗಳು ಬೆರಗು ಮೂಡಿಸುತ್ತಿವೆ. ಮಳೆಗಾಲದಲ್ಲಿ ಜಲಪಾತದಿಂದ ಹಾಗೂ ಜಲಪಾತದಲ್ಲಿ ನೀರಿಲ್ಲದ ಬೇಸಿಗೆಯಲ್ಲಿ ಸಂಗೀತ ಕಾರಂಜಿಯಿಂದ ಪ್ರವಾಸಿಗರಿಗೆ ಕಣ್ಮನ ತಣಿಸುವ ನಿಟ್ಟಿನಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ.