Thursday, April 2, 2009

ಹೇಳಬಲ್ಲಿರ ನೀವು...?

ಏಕೆ ಎಲ್ಲ ಮುಗಿದು ಹೋಗಿದೆ.?
ಏಕೀಗ ಹಾಲ್ಗಡಲ ಕಡೆಯುವುದಿಲ್ಲ
ಐರಾವತ, ಉಚ್ಛೈಶ್ವಗಳು ಹುಟ್ಟುವುದಿಲ್ಲ
ಅಮೃತ ಕುಂಭ ಮೇಲೆದ್ದು ಬರುತ್ತಿಲ್ಲ.
ಏಕೆ ಎಲ್ಲ ಮುಗಿದು ಹೋಗಿದೆ.
ಸ್ವರ್ಗದಲ್ಲೇಕೆ ಕುಮಾರ ಸಂಭವವಾಗುತ್ತಿಲ್ಲ
ದೇವಸುತ, ಪ್ರವಾದಿಗಳೇಕೆ ಬರುತ್ತಿಲ್ಲ
ಶಿವೆ ಪತಿ ಮಾತು ಧಿಕ್ಕರಿಸಿ ಅಗ್ನಿಗಾಹುತಿಯಾಗುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಋಷಿಗಳ ತಪವೇಕೆ ಭಂಗವಾಗುತ್ತಿಲ್ಲ
ಶಕುಂತಲೆ ಭರತರೇಕೆ ಹುಟ್ಟುತ್ತಿಲ್ಲ
ಗಂಗೆಯಂತೆ ಇನ್ನೊಬ್ಬಳು ಬರುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಸೂರ್ಯ ಚಂದ್ರ ವಂಶಗಳು
ಪುತ್ರಕಾಮೇಷ್ಟಿ ಯಾಗಗಳು
ಭೂ ಬಾರವಿಳಿಸಲು ದಶಾವತಾರಗಳು
ಏಕೆ ಎಲ್ಲ ಮುಗಿದು ಹೋಗಿದೆ.?
ಹರನಂ ನರನೊತ್ತಿದ -
ಗೊಡೆಯನೊಡೆದು ಭಕ್ತನ ಕಂಡ
ದೇವ ಕಂಬನಿ ಮಿಡಿದು ಸತಿಯ ಹುಡುಕಿದ
ಪಾರಿಜಾತವ ತಂದು ಸತಿಯ ಕೆಣಕಿದ
ಒಲಿಸಿದ ದೇವಕತೆಗಳು.
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
ಏಕೆಲ್ಲ ಮುಗಿದು ಹೋಗಿದೆ
ಬೆಂಗಳೂಲ್ಲಿ ಸಾವಿರಕ್ಕೆ ಸಿಗುತ್ತಿದ್ದ ಸೈಟುಗಳು
ಐದು ಹತ್ತು ಸಾವಿರಕೆ ಮನೆಗಳು
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
-ಗಾಯತ್ರಿ ರಘುಪತಿ ಬೆಂಗಳೂರು . ಬರೆದದ್ದು . ನಿಮಗಾಗಿ ಕಾಪಿ ಮಾಡಿ ಪೇಸ್ಟ್ ಮಾಡಿದ್ದು ನಾನು.

Wednesday, April 1, 2009

ಜೇಬು ಕತ್ತರಿಸಿದರೂ ಕತ್ತರಿಸೀತೆ. ಎಚ್ಚರ.


ನಿಮ್ಮ ಈ ಮೈಲ್ ವಿಳಾಸ ನಮ್ಮ ಲಾಟರಿ ಯೋಜನೆಯಡಿಯಲ್ಲಿ ಬಹುಮಾನ ಗೆದ್ದಿದೆ ಎಂಬ ಮೈಲ್ ಸಾಮಾನ್ಯ ಎಲ್ಲರಿಗೂ ಬಂದಿರುತ್ತದೆ. ಅದು ಚೀನಾ ಮೂಲ ವಿಳಾಸದ ಬ್ಯಾಂಕ್. ಬಹುಮಾನದಮೊತ್ತವೋ ಮಿಲಿಯನ್ ಗಟ್ಟಲೆ. ಬರುವ ಮೈಲ್ ಗೆ ಏನಾದರೂ ರಿಪ್ಲೆ ಮಾಡಿದೊರೋ ನಂತರದ್ದು ನಿಮಗೆ ಸರ್ಟಿಫಿಕೇಟ್ . ಆನಂತರದ್ದು ಬ್ಯಾಂಕಿನ ನಿಮ್ಮ ಅಕೌಂಟ್ ಡಿಟೈಲ್ ಕೇಳುತ್ತಾರೆ. ಅದನ್ನೂ ಕೊಟ್ಟಿರೋ ಕಥೆ ಫಿನಿಶ್.
ನೂರಕ್ಕೆ ತೊಂಬತ್ತು ಜನ ಇಂತಹದಕ್ಕೆ ಮರುಳಾಗರು. ಆದರೆ ಇನ್ನುಳಿದ ಹತ್ತರಲ್ಲಿ ಒಬ್ಬರದಾದರೂ ಕಳೆದುಕೊಳ್ಳುತ್ತಾರೆ. ಎಪ್ರಿಲ್ ಒಂದರಂದು ಬರಬೇಕಾದ ಮೈಲ್ ಇದು. ಆದರೆ ವರ್ಷಪೂರ್ತಿ ಬಂದು ಜೇಬು ಕತ್ತರಿಸಿದರೂ ಕತ್ತರಿಸೀತೆ. ಎಚ್ಚರ.

ಉತ್ತರ ಕಾಮೆಂಟ್ ಮಾಡಿ ಹತ್ತು ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ಮನುಷ್ಯನ ಆರ್ಥಿಕ ಯಶಸ್ಸು ಅವನ
೧) ಕೆಲಸವನ್ನು ಅವಲಂಬಿಸಿದೆ
೨) ಅದೃಷ್ಟವನ್ನು ಅವಲಂಇಸಿದೆ
೩)ಮನೆಯವರ ಹಣೆಬರಹವನ್ನು ಅವಲಂಬಿಸಿದೆ
೪)ಪ್ರಾಮಾಣಿಕತೆಯನ್ನು ಅವಲಂಬಿಸಿದೆ
೫)ಕಂತ್ರಿ ಬುದ್ಧಿಯನ್ನು ಅವಲಂಬಿಸಿದೆ
೬) ಪಕ್ಕದ ಮನೆಯವನ ದೌರ್ಬಲ್ಯವನ್ನು ಅವಲಂಬಿಸಿದೆ
೭)ಯಾವುದೂ ಇಲ್ಲ
೮)ಗೊತ್ತಿಲ್ಲ
೯) ಇವೆಲ್ಲ ಸುಳ್ಳು
೧೦) ಹಣವನ್ನು ಅವಲಂಬಿಸಿದೆ
ಓದುಗರೆ ಮೇಲಿನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕಾಮೆಂಟ್ ಮಾಡಿ ಹತ್ತು ಸಾವಿರ ರೂಪಾಯಿ ಬಹುಮಾನ ಗೆಲ್ಲಿ. ಇಂದೇ ಕೊನೇ ದಿನ

Tuesday, March 31, 2009

ಕೆಂಪು ಟೋಪಿ

ಬೆನ್ನಟ್ಟೆ ಊರಿಗೆ ನಕ್ಸಲರು ಬಂದಿದ್ದಾರಂತೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆ ಸುದ್ದಿಯ ಮೂಲ ಮೇಲಿನಗದ್ದೆ ರಾಮಣ್ಣ, ಆತ ಆದ್ರಮಳೆ ಹಬ್ಬದಲ್ಲಿ ತಿಂದಿದ್ದ ಕೋಳಿ ಅರಗದಿದ್ದ ಪರಿಣಾಮವಾಗಿ, ರಾತ್ರಿ ಹೊಳೆಕಡೆಗೆ ಹೋಗಿ ವಾಪಾಸು ಬರುವಾಗ ಗೊರಬಳೆ ಗೂಟಕ್ಕೆ ಕೆಂಪು ಬಣ್ಣದ ಟೋಪಿ ನೇತುಹಾಕಿಕೊಂಡಿದ್ದನ್ನು, ಹಾಗು ಅನತಿ ದೂರದಲ್ಲಿ ಮೂರ್ನಾಲ್ಕು ಜನ ಹಿಂದಿ ಸಿನಿಮಾದಲ್ಲಿರುವಂತೆ ಮಧ್ಯೆ ಬೆಂಕಿಹಾಕಿ,ತಲೆಯ ತುಂಬಾ ಶಾಲು ಹೊದೆದು,ವೃತ್ತಾಕಾರವಾಗಿ ಕುಳಿತುಕೊಂಡಿದ್ದನ್ನು ಕಂಡು ಬಂದಿದ್ದನಂತೆ. ಮೊದಮೊದಲು ಇದು ಸುಳ್ಳು ಸುದ್ದಿ ಎಂದು ಜನರು ನಂಬದಿದ್ದರೂ ನಂತರ ಊರಿನ ಕೆಲ ಉತ್ಸಾಹಿ ಯುವಕರ ಗುಂಪು ರಾಮಣ್ಣ ಹೇಳಿದ ಸ್ಥಳಕ್ಕೆ ಭೇಟಿ ನೀಡಿ ಇನ್ನೂ ಆರದ ಬೆಂಕಿ ಹಾಗು ಅಲ್ಲಿಯೇ ಹುಗಿದಿದ್ದ ಗೊರಬಳೆ ಗೂಟವನ್ನು ನೋಡಿಕೊಂಡು ಪರಿಶೀಲನೆ ನಡೆಸಿ, ಯಾರೋ ರಾತ್ರಿ ಅಲ್ಲಿ ಬಂದು ಹೋಗಿದ್ದಾರೆ ಎಂಬ ವರದಿ ನೀಡಿದ ಮೇಲೆ ರಾಮಣ್ಣನ ಕುಲ್ಡು ಬ್ಯಾಟರಿಗೆ ಟೋಪಿಯ ಬಣ್ಣ ಕಂಡಿದ್ದು ಸುಳ್ಳಾದರು ಮಿಕ್ಕಿದ್ದೆಲ್ಲಾ ಸತ್ಯ ಎಂಬ ತೀರ್ಮಾನಕ್ಕೆ ಬಂದಿದ್ದರು.
ನಕ್ಸಲೀಯರು ಬಂದಿದ್ದಾರೆ ಎಂಬ ಅಂತೆ ಕಂತೆಗಳ ಸಂತೆಯಲ್ಲಿ ಊರಿಗೆ ಊರೇ ಮುಳುಗೇಳತೊಡಗಿತು.. ಅವರು ಬಡವರಿಗೆ ನ್ಯಾಯ ಒದಗಿಸುತ್ತಾರಂತೆ ಎನ್ನುವ ವಿಷಯದಿಂದ ಶುರುವಾದ ಕಥೆ ಶತ ಸೋಂಬೇರಿ ಶ್ಯಾಂಭಟ್ಟನ ಬಾಯಲ್ಲಿ ಮುಂದುವರೆದು ಬಣ್ಣ ಬಳಿದುಕೊಂಡು, ಇನ್ನು ಮೇಲೆ ಯಾರೂ ಕೂಲಿ ಕೆಲಸ ಮಾಡುವುದು ಬೇಡವಂತೆ ನಕ್ಸಲೀಯರು ಊರಿನ ಶ್ರೀಮಂತರನ್ನು ಬಡಿದು ಅವರ ದುಡ್ಡನ್ನು ಸಮನಾಗಿ ಎಲ್ಲಾ ಜನರಿಗೆ ಹಂಚಿಬಿಡುತ್ತಾರಂತೆ ಎಂಬಲ್ಲಿವರಗೆ ಮುಂದುವರೆದಿತ್ತು. ಆದರೆ ಅದು ಯಾವಾಗ ಎಲ್ಲಿ ಎನ್ನುವುದರ ಕುರಿತು ಸರಿಯಾದ ಮಾಹಿತಿ ಯಾರಬಳಿಯೂ ಸಿಗುತ್ತಿರಲಿಲ್ಲ.
*************************
ಬೆನ್ನಟ್ಟೆ ಆರು ತಿಂಗಳು ಕಾಲ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುವ ಮಲೆನಾಡಿನ ಕುಗ್ರಾಮ. ಮೂರು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದರಂತೆ ಇಪ್ಪತ್ನಾಲ್ಕು ಮನೆಗಳನ್ನು ಹಾಗು ಊರಿನ ತುದಿಯಲ್ಲಿ ಒಂದುಗುಪ್ಪೆಯಾಗಿ ಮೂವತ್ತು ಕೂಲಿಕಾರರ ಮನೆಗಳನ್ನು ಹೊಂದಿದ ಊರು . ಊರಿನ ಮುಖ್ಯ ಹಣಕಾಸು ವಹಿವಾಟು ಅಡಿಕೆ ದರದ ಏರುಪೇರುಗಳನ್ನು ಅವಲಂಬಿಸಿತ್ತು. ಊರಿನಿಂದ ೬೦ ಕಿಲೋಮೀಟರ್ ದೂರದ ತಾಲ್ಲೂಕು ಕೇಂದ್ರ ತಲುಪಲು ಬೆಳಿಗ್ಗೆ ಒಂದು ಬಸ್ಸು ಬಿಟ್ಟರೆ ಮತ್ತೇನೂ ಇರಲಿಲ್ಲ. ಬೆಳಿಗ್ಗೆ ಹೋದ ಬಸ್ಸು ರಾತ್ರಿ ವಾಪಾಸು ಬಂದರೆ ಮತ್ತೆ ಮಾರನೆ ದಿನಬೆಳಿಗ್ಗೆ ಪಟ್ಟಣದ ಮುಖ ನೋಡಬಹುದಷ್ಟೆ. ಇದು ಬೆನ್ನಟ್ಟೆ ಊರಿನ ಕಥೆಯಾದರೆ ಅಲ್ಲಿನ ಜನರ ಕಥೆ ಮತ್ತೊಂದು ಬಗೆಯದು.
ಅಡಿಕೆ ಭಾಗಾಯ್ತು ಇರುವ ಇಪ್ಪತ್ನಾಲ್ಕು ಮನೆಗಳಲ್ಲಿ ಖಡಾಖಂಡಿತವಾಗಿ ಎರಡು ಪಾರ್ಟಿ. ದೇವಸ್ಥಾನದ ಆಡಳಿತ ಹೊಂದಿರುವ ಆದರೆ ಗುರುಮಠವನ್ನು ವಿರೋಧಿಸಿ ನಾವು ನಾಸ್ತಿಕರು ಎನ್ನುವ ವಿಚಿತ್ರ ಸಿದ್ದಾಂತದ ಐದು ಮನೆಗಳ ಗುಂಪು. ಇನ್ನೊಂದು ಗುರುಮಠದ ಸಂಪರ್ಕ ಹೊಂದಿರುವ ದೇವಸ್ಥಾನಕ್ಕೆ ದೇಣಿಗೆ ಕೊಡದಿರುವ ಹಾಗು ನಾವು ಆಸ್ತಿಕರು ಎನ್ನುವ ಹತ್ತು ಮನೆಗಳ ಗುಂಪು. ಇವೆರಡರ ಮಧ್ಯೆ ಸಂದರ್ಭಾನುಸಾರವಾಗಿ ಆಚೆಗೂ ಈಚೆಗೂ ಓಲಾಡುತ್ತಿರುವ ಒಂಬತ್ತು ಮನೆಗಳ ಗುಂಪು. ಹೀಗೆ ಸ್ಪರ್ಧೆಗೆ ಬಿದ್ದವರಂತೆ ಚರ್ಚೆ,ಮೀಟಿಂಗು ಮುಂತಾದ ಕವಡೆ ಕಾಸೂ ಪ್ರಯೋಜನಕ್ಕೆ ಬಾರದ ಕೆಲಸಗಳಿಂದ ದಿನದ ಬಹುಪಾಲು ಸಮಯ ಕಳೆಯುತ್ತಿರುವವರ ಸಂಖ್ಯೆಯ ಜನರು. ಊರಿನ ಆಗುಹೋಗುಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಮನಸ್ಸು ಇದ್ದವರಲ್ಲ. ಚರಂಡಿಯೇ ಇಲ್ಲದ ರಸ್ತೆ, ವಾರಕ್ಕೊಮ್ಮೆ ಮುಖತೋರಿಸಿವ ಕರೆಂಟು,ಸರಿಯಾಗಿ ನಡೆಯದ ಶಾಲೆ, ಹೀಗೆ ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಅವುಗಳನ್ನು ಮೈಯುಂಡು ಇಸ್ಪೀಟಾಟದಲ್ಲಿ ಕಾಲ ಕಳೆಯುತ್ತಾ ನಾವು ಮುಂದುವರೆದವರು ಎಂಬ ಸೋಗಿನ ಸ್ವಭಾವದ ಜನರು ತುಂಬಿರುವ ಊರು.
************************
ಈಗ ನಕ್ಸಲರು ಊರಿಗೆ ಬಂದಿದ್ದಾರೆ ಎಂದಾಗ ಎಲ್ಲಾ ಜನರೂ ಸ್ವಲ್ಪ ಗಾಬರಿಯಾಗಿದ್ದರು. ಅವರು ಕೂಲಿಕಾರರ ಪರ ಎಂದು ಪೇಪರ್ ಓದಿ ಅರ್ದಂಬರ್ದ ತಿಳಿದುಕೊಂಡಿದ್ದ ದುಡ್ಡಿರುವ ಜನರಿಗೆ ಒಳಗೊಳಗೆ ನಡುಕ ಶುರುವಾಗಿಬಿಟ್ಟಿತ್ತು. ಕೆಲವು ಹೆದರು ಪುಕ್ಕಲರಂತೂ ಮನೆ ಕೆಲಸದ ಆಳಿನಲೆಕ್ಕ ಬರೆದ ಪುಸ್ತಕಗಳನ್ನು ನೀರೊಲೆಗೆ ಹಾಕುವ ತಯಾರಿ ಆರಂಬಿಸಿಬಿಟ್ಟಿದ್ದರು. ಕೆಂಪು ಬಣ್ಣದ ವಸ್ತ್ರ ಧರಿಸಿ ಬರುತ್ತಾರಂತೆ. ಮನೆಯ ಯಜಮಾನನ ಕುತ್ತಿಗೆಗೆ ಬಂದೂಕಿನ ಚೂರಿ ಆನಿಸಿ ಹಿಡಿದು ಬೆದರಿಸುತ್ತಾರಂತೆ. ದೇವರ ಪೂಜೆ ಮಠ ಮುಂತಾದವುಗಳ ಆಚರಣೆ ಇಟ್ಟುಕೊಂಡವರನ್ನು ಮೊದಲು ಬಲಿಹಾಕುತ್ತಾರಂತೆ, ಮುಂತಾದ ವದಂತಿಗಳಿಗೆ ಇತಿಮಿತಿಯಿರಲಿಲ್ಲ. ಆದರೆ ನಕ್ಸಲರು ಬಂದಿದ್ದಾರೆ ಎಂಬ ಸುದ್ದಿಯ ಜತೆಗೆ ಬಹಳ ವರ್ಷದ ನಂತರ ಅಡಿಕೆ ಭಾಗಾಯ್ತು ಹೊಂದಿರುವ ಇಪ್ಪತ್ನಾಲ್ಕು ಮನೆಗಳೂ ಒಂದಾಗುವುದು ಅನಿವಾರ್ಯ ಎಂಬ ಮಾತುಗಳೂ ಕೇಳಿಬರುತ್ತಿತ್ತು.
ಬೆನ್ನಟ್ಟೆ ಊರಿನಲ್ಲಿ ಶ್ಯಾಂಭಟ್ಟ ಹಾಗು ಪ್ರಭಾಕರರ ಜೋಡಿ ಜನಜನಿತ.ಇಂಥ ಕಾಲುಬಾಲವಿಲ್ಲದ ಸುದ್ದಿಗಳ ನೇತಾರರು ಅವರಿಬ್ಬರೆ. ಒಂದು ಕಾಲದಲ್ಲಿ ಅವರಿಬ್ಬರೂ ಜಮೀನ್ದಾರರೇ ಆಗಿದ್ದವರು. ಪ್ರಭಾಕರ ತನ್ನ ಷೋಕಿಯ ಜೀವನಕ್ಕೆ ಜಮೀನು ಮಾರಾಟ ಮಾಡಿದರೆ ಶ್ಯಾಂಭಟ್ಟ ಸೊಮಾರಿತನದಿಂದ ಅಡಿಕೆ ಭಾಗಾಯ್ತು ಹಾಳುಮಾಡಿಕೊಂಡಿದ್ದ. ಇಬ್ಬರೂ ಪ್ರಚಂಡ ಬುದ್ದಿವಂತರು.ಹಾಗಾಗಿ ಮೂಕರ್ಜಿ ಬರೆಯುವುದು,ಸುಳ್ಳು ಕಂಪ್ಲೇಂಟ್ ಕೊಡುವುದು ಮುಂತಾದ ಕೆಲಸಗಳನ್ನು ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದರು. ಊರಿನಲ್ಲಿ ಎರಡು ಪಂಗಡ ಸಕ್ರಿಯವಾಗಿದ್ದರೆ ಇವರ ಜೀವನ ಸುಗಮ ಎಂಬ ಸರಳ ತತ್ವವನ್ನು ನಂಬಿದ್ದರು. ಹಾಗಾಗಿ ಹಲವಾರು ವರ್ಷಗಳಿಂದ ಎರಡು ಪಾರ್ಟಿಗಳಲ್ಲಿ ಸರಿಯಾದ ಅಂತರವನ್ನು ಇಟ್ಟುಕೊಂಡು ಬಂದಿದ್ದರು. ನಕ್ಸಲರ ಆಗಮನದಿಂದ ಅಕಸ್ಮಾತ್ ಊರು ಒಗ್ಗಟ್ಟಾದರೆ ಅವರ ಜೀವನಕ್ಕೆ ಸಂಚಕಾರ ತಂದುಕೊಡುವ ಸಾಧ್ಯತೆ ಹೆಚ್ಚಾಗಿತ್ತು ಎನ್ನುವುದನ್ನು ಇಬ್ಬರು ಎಲ್ಲರಿಗಿಂತ ಮೊದಲೇ ಅರಿತಿದ್ದರು. ನಕ್ಸಲರು ಬಂದಿದ್ದಾರೆ ಎನ್ನುವ ಹೊಸ ವಿಚಾರ ಈ ಜೋಡಿಗೆ ಉತ್ತಮ ಅವಕಾಶವನ್ನು ತಂದು ಕೊಟ್ಟಿತು.
*****************************
ಮೊದಲು ಸುದ್ದಿ ತಿಳಿದ ಶ್ಯಾಂಭಟ್ಟ ಆಗಲೆ ಕಾರ್ಯಾಚರಣೆ ಶುರುವಿಟ್ಟುಕೊಂಡುಬಿಟ್ಟಿದ್ದ. ಸ್ವಲ್ಪ ದುಡ್ಡಿರುವ ಹಾಗು ಬೇಗನೆ ಹೆದರುವ ಗಪ್ಪಯ್ಯ ಹೆಗಡೆ ಅವನ ಮೊದಲ ಮಿಕವಾಗಿದ್ದರು.
"ಅಯ್ಯೋ ನಾನು ಅವತ್ತು ತಿರ್ಥಹಳ್ಳಿಯಲ್ಲಿ ನಕ್ಸಲರು ನನ್ನ ದೋಸ್ತ್ ಲಿಂಗೆಗೌಡನ ತಲೆ ಒಡೆದಿದ್ದು ನೋಡಿದ್ದೆ, ಅಬ್ಬಾ ಈ ಶ್ರೀಮಂತಿಕೆ ಜೀವನ ಯಾರಿಗೂ ಬೇಡ ಅಂತ ಅನ್ಸಿ ಹೋಯ್ತಪ್ಪ." ಗಪ್ಪಯ್ಯ ಹೆಗಡೆಯ ಹತ್ತಿರ ಶ್ಯಾಂಭಟ್ಟ ಹೇಳಿದ.
"ಹೌದಾ......, ನಕ್ಸಲರು ಅವರ ತಲೆ ಒಡೆದದ್ದು ಯಾಕೆ ?" ಗಪ್ಪಯ್ಯ ಹೆಗಡೆ ಸಣ್ಣ ದನಿಯಲ್ಲಿ ಕೇಳಿದರು.
"ಅದೊಂದು ದೊಡ್ಡ ಕಥೆ. ಆ ಗೌಡ್ರ ಮನೆ ಗದ್ದೆ ತಲೇಲಿ ಕೂಲಿಕಾರರ ಮನೆಗೆ ಹರಿದು ಹೋಗುವ ಅಬ್ಬಿ ನೀರಿತ್ತಂತೆ. ಗೌಡ್ರು ಆ ನೀರು ತಮಗೂ ಬೇಕು ಅಂತ ಕೋರ್ಟಿಗೆ ಹೋಗಿದ್ರಂತೆ. ಅಷ್ಟಕ್ಕೆ ನಕ್ಸಲರು ಅವರ ತಲೆ......ಅಯ್ಯೋ....ಅಬ್ಬಾ,"
"ನೀರು ಕೇಳಿ ಕೋರ್ಟಿಗೆ ಹೋಗಿದ್ದಕ್ಕೆ ತಲೆ ಒಡೆದ್ರಾ..ಅಲ್ಲ ಕೂಲಿಕಾರರ ವಿರುದ್ದ ಹೊದರೆ ಮಾತ್ರ ಅವರು ಹೆದರಿಸ್ತಾರ...ಅಥವಾ..?" ಗಪ್ಪಯ್ಯ ಹೆಗಡೆ ಹೆದರುತ್ತಾ ಕೇಳಿದರು. ಕಾರಣ ಇವರದ್ದೂ ಅದೇ ಸಮಸ್ಯೆ. ಪ್ರಭಾಕರ ಇವರ ಮನೆಗೆ ಬರುವ ಅಬ್ಬಿ ನೀರಿಗೆ ತಡೆ ಹಾಕಿದ್ದ,ಇವರು ಅದಕ್ಕೆ ಕೋರ್ಟಿಗೆ ಹೋಗಿದ್ದರು.
"ಇಲ್ಲಪ್ಪ ಒಟ್ಟಿನಲ್ಲಿ ಅವರು ಯಾರಿಗೆ ಜಮೀನು ಇಲ್ಲವೋ ಅವರ ಪರ,ಜಾತಿ ಗೀತಿ ಅವರ ತಲೇಲಿಲ್ಲ.ಒಟ್ಟಿನಲ್ಲಿ ಜಮೀನು ಇದ್ದವರನ್ನು ಕಂಡ್ರೆ ಅವ್ರಿಗೆ ಆಗಲ್ಲ, ನನಗೆ ನಕ್ಸಲರ ಕಡೆ ಕಾಮ್ರೆಡ್‌ಗಳು ಬಹಳ ಜನ ಪರಿಚಯದೋರು ಇದ್ದಾರೆ ಆ ಅನುಭವದಮೇಲೆ ಹೇಳ್ತಿರೋದು." ಶ್ಯಾಂಭಟ್ಟನಿಗೆ ಹೆಗಡೆಯವರು ಹೆದರುತ್ತಿರುವುದು ಮನವರಿಕೆಯಾಯಿತು.ಮತ್ತಷ್ಟು ಮುಂದುವರೆಸಿದ. "ಆದರೆ ಅವರು ಸೆಟ್ಲಮೆಂಟ್‌ಗೆ ಒಪ್ತಾರೆ ಹತ್ತೊ ಇಪ್ಪತ್ತೋ ಸಾವಿರ ಕೊಟ್ರೆ ಹಾಗೆ ಹೋಗ್ತಾರೆ , ಆವತ್ತು ತೀರ್ಥಹಳ್ಳಿ ಲಿಂಗೇಗೌಡಂಗೆ ನಾನು ಸೆಟ್ಲಮಾಡಿಕೊಡ್ತೇನೆ ಅಂತ ಹೇಳಿದ್ದೆ ಆದರೆ ನನ್ನ ಮಾತು ಕೇಳ್ದೆ ಸುಮ್ನೆ ಜೀಂವ ಬಲಿ ಕೊಟ್ಟ",
ಗಪ್ಪಯ್ಯ ಹೆಗಡೆಗೆ ನಡುಕ ಹೆಚ್ಚಾಯಿತು.ಶ್ಯಾಂಭಟ್ಟ ಸುಳ್ಳು ಹೇಳುತ್ತಿದ್ದಾನೇನೋ ಎಂಬ ಅನುಮಾನ ಕಾಡಿದರೂ ಅವರಿಗೂ ತೀರ್ಥಹಳ್ಳಿ ಘಟನೆ ಎಲ್ಲೋ ಓದಿದ ನೆನಪಿತ್ತು. ಕುಡಿಯಲು ಟಿ ತಂದ ಹೆಂಡತಿಗೆ ಕಾರಣವಿಲ್ಲದೆ ರೇಗಿದರು. ಆಕೆ "ಅಯ್ಯ.. ಅದಕ್ಯಾಕೆ ನನ್ಮೇಲೆ ರೇಗ್ತೀರಿ ಹೇಗೂ ಶ್ಯಾಮಣ್ಣಂಗೆ ಗುರ್ತು ಪರಿಚಯ ಇದೆ ಅಂತಾಯ್ತಲ್ಲ, ಸಾಯೋವಾಗ ನಾವೇನು ದುಡ್ಡು ತಗಂಡು ಹೋಗ್ತೀವಾ ಅಷ್ಟೊ ಇಷ್ಟೊ ಬಿಸಾಕಿದರಾಯಿತು" ಎಂದಳು.
ಶ್ಯಾಂಭಟ್ಟ ಕವಳದ ಹರಿವಾಣ ಹತ್ತಿರ ಎಳೆದುಕೊಂಡು " ಗಪ್ಪಯ್ಯಾ... ನಾವೆಲ್ಲಾ ನಿಮ್ಮವರು ಅಂತ ಇರೋದ್ಯಾಕೆ, ಚಿಟಿಕಿ ಹೊಡೆಯೊದ್ರೊಳಗೆ ಸೆಟ್ಲ ಮಾಡ್ತೀನಿ ನೋಡ್ತಾ ಇರಿ. ಯಾವುದಕ್ಕೂ ದುಡ್ದು ಮನೇಲಿ ಇಟ್ಕೊಂಡು ತಯಾರಾಗಿರಿ. ಅವರು ಎಷ್ಟು ಹೊತ್ತಿಗೆ ಮಾತುಕಥೆಗೆ ಬರ್ತಾರೆ ಅಂತ ಹೇಳೊಕಾಗಲ್ಲ. ಸದ್ಯ ಒಂದು ಐನೂರು ಇದ್ದರೆ ಕೊಡಿ ಅಡ್‌ವಾನ್ಸ್ ಅಂತ ಅವ್ರಿಗೆ ಕೊಟ್ಟಿರ್ತೀನಿ...ಹ್ಞಾ ಮತ್ತೆ ಊರಿನ ಆ ಪಾರ್ಟಿಯವ್ರಿಗೆ ಅಪ್ಪಿತಪ್ಪಿಯೂ ನಂಗೆ ನಕ್ಸಲರು ಪರಿಚಯ ಅಂತ ಬಾಯಿಬಿಡಬೇಡಿ ನಮಗೆ ಅವರ ಉಸಾಬರಿಯೆಲ್ಲಾ ಯಾಕೆ ಏನಾದ್ರೂ ಮಾಡ್ಕಂಡು ಸಾಯ್ಲಿ" ಎಂದು ಗರಿಗರಿನೋಟು ಜೇಬಿಗಿಳಿಸಿ ಹೊರಟ.
**************************
ನಕ್ಸಲರು ಮಾಡಬಹುದಾದ ಧಾಳಿಯನ್ನು ಎದುರಿಸಲು ಹೆಚ್ಚುಕಮ್ಮಿ ಇಪ್ಪತ್ನಾಲ್ಕು ಮನೆಯ ಜನರೂ ಸಜ್ಜಾಗತೊಡಗಿದರು. ದೇವಸ್ಥಾನದಲ್ಲಿ ತುರ್ತು ಸಭೆ ಕರೆಯಲಾಯಿತು. ಆಶ್ಚರ್ಯವೆಂದರೆ ಭಾಗಾಯ್ತು ಹೊಂದಿರುವ ಇಪ್ಪತ್ನಾಲ್ಕು ಮನೆಯ ಎರಡೂ ಪಾರ್ಟಿಯ ಜನರು ಸೇರಿದ್ದರು. ಗೊಂದಲ ಬೇಡವೆಂದು ಎರಡೂ ಪಾರ್ಟಿಗೂ ಹಿತವಾಗಿರುವ ಇಲ್ಲಿಯ ವಿಚಾರ ಅಲ್ಲಿಗೆ, ಅಲ್ಲಿಯ ವಿಚಾರ ಇಲ್ಲಿಗೆ ಹೇಳುತ್ತಾ ನಾನು ಎಲ್ಲರಿಗೂ ಒಳ್ಳೆಯವನು ಎಂದು ತೋರಿಸಿಕೊಳ್ಳುತಿದ್ದ ಒಬ್ಬನಿಗೆ ಸಭೆಯ ಅಧ್ಯಕ್ಷತೆ ನೀಡಿ, ನಕ್ಸಲೀಯರ ಧಾಳಿ ಎದುರಿಸುವ ಬಗೆ ಹೇಗೆ ಎಂಬ ಚರ್ಚೆ ಶುರುವಾಯಿತು.
"ಎಲ್ಲರೂ ಒಂದು ಬಂದೂಕು ತೆಗೆದುಕೊಳ್ಳುವುದು" ಉತ್ಸಾಹಿ ತರುಣನೊಬ್ಬ ಹೇಳಿದ
"ನಿನ್ತಲೆ ಅದಕ್ಕೆಲ್ಲಾ ಕನಿಷ್ಟ ಆರು ತಿಂಗಳಾದರೂ ಬೇಕು, ಈಗ ಏನು ಮಾಡಬೇಕು ಅದನ್ನ ಯೋಚಿಸಿ" ಹಿರಿಯರೊಬ್ಬರು ಹೇಳಿದರು.
"ನಾವು ಎಲ್ಲರೂ ಒಟ್ಟು ನಲ್ವತ್ತು ಜನ ಇದ್ದೇವೆ,ಹತ್ತು ಜನರ ಒಂದೊಂದು ಗುಂಪು ಮಾಡಿಕೊಂಡು ಸರದಿಯಂತೆ ರಸ್ತೆಯಲ್ಲಿ ಕತ್ತಿ ಕೋಲು ಹಿಡಿದು ಗಸ್ತು ತಿರುಗುತ್ತಾ ಇರುವುದು, ನಕ್ಸಲರು ಬಂದ ತಕ್ಷಣ ಶೀಟಿ ಹೊಡೆಯುವುದು" ಮತ್ತೊಂದು ಸಲಹೆ ಬಂತು.
" ಅವರ ಹತ್ತಿರ ಬಂದೂಕು ನಮ್ಮ ಬಳಿ ಕೋಲು ಕವಣೆ, ಅವರ ಕೋವಿ ಒಂದು ಬಾರಿ ಡಂ ಎಂದರೆ ನಿನ್ನ ಚಡ್ಡಿ ಒದ್ದೆಯಾಗಿ ನೀನೆ ಶೀಟಿ ಹೊಡೆಯುತ್ತೀಯಾ, ಅವೆಲ್ಲಾ ಓಬಿರಾಯನ ಕಥೆ ಬೇರೆ ಸಲಹೆ ಇದ್ದರೆ ಹೇಳಿ" ಮಗದೊಬ್ಬರು ಅಪಹಾಸ್ಯಮಾಡಿದರು
ಇವನ್ನೆಲ್ಲಾ ಕೇಳುತ್ತಲಿದ್ದ ಗಪ್ಪಯ ಹೆಗಡೆಗೆ ಶ್ಯಾಂಭಟ್ಟನಿಗೆ ನಕ್ಸಲರು ಪರಿಚಯ ಇದ್ದುದ್ದೂ, ಅವನು ನಕ್ಸಲರು ಯಾರಿಗೂ ಏನೂ ಮಾಡದಂತೆ ಮಾತುಕತೆಯ ಮೂಲಕ ವ್ಯವಸ್ಥೆ ಮಾಡುವುದಾಗಿ ಹೇಳಿದ್ದನ್ನು ಸಭೆಯಲ್ಲಿ ಹೇಳೋಣ ಎಂದು ಒಮ್ಮೆ ಅನಿಸಿತಾದರೂ ಶ್ಯಾಂಭಟ್ಟ ಯಾರಿಗೂ ಹೇಳಬೇಡಿ ಎಂದದ್ದು ನೆನಪಾಗಿ,ಊರವರು ಏನಾದರೂ ಮಾಡಿಕೊಳ್ಳಲಿ ನನ್ನ ತಂಟೆಗೆ ನಕ್ಸಲರು ಬಾರದಂತಾಯಿತಲ್ಲ ಎಂದು ಸುಮ್ಮನುಳಿದ.
" ಇವೆಲ್ಲಾ ನಮ್ಮ ಕೈಯಲ್ಲಿ ಬಗೆ ಹರಿಯುವ ವಿಚಾರ ಅಲ್ಲ, ಪೋಲೀಸರಿಗೆ ಕಂಪ್ಲೇಂಟ್ ನೀಡೋಣ, ಆವಾಗ ಅವರೊಟ್ಟಿಗೆ ನಾವು ಸೇರಿಕೊಳ್ಳೋಣ" ಎಂದು ಅನುಭವಸ್ಥರೊಬ್ಬರು ಸಲಹೆ ಇತ್ತರು. ಹಾಗೆ ಹೇಳಿದ ಹಿರಿಯರು ಮಠಕ್ಕೆ ನಡೆದುಕೊಳ್ಳುವ ಗುಂಪಿನವರಾದ್ದರಿಂದ ಅವರು ಹೇಳಿದ್ದಕ್ಕೆ ಊರಿನವರು ಒಪ್ಪಿಕೊಂಡರೆ ತಮ್ಮದೇನು ಉಳಿದಂತಾಗುತ್ತದೆ ಎಂದು ಮಠದ ವಿರೋಧಿ ಗುಂಪಿನಲ್ಲೊಬ್ಬ " ಪೋಲಿಸರಿಗಿಂತ ನಮ್ಮ ಶಾಸಕರಿಗೆ ತಿಳಿಸಬೇಕು,ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ಜನಪ್ರತಿನಿಧಿಗಳ ಜವಾಬ್ಧಾರಿಯಾದ್ದರಿಂದ ಅದೇ ಸರಿಯಾದ ಕ್ರಮ" ಎಂದ
ಇದಕ್ಕಿಂತ ಉತ್ತಮ ಸಲಹೆ ಮತ್ಯಾವುದು ಬಾರದಿದ್ದುದರಿಂದ ಎರಡೂ ಸಲಹೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು. ಪ್ರಾಯಶಃ ಬೆನ್ನಟ್ಟೆ ಊರಿನಲ್ಲಿ ಸರ್ವಾನುಮತದಿಂದ ಒಪ್ಪಿಗೆಯಾದ ಇತಿಹಾಸದಲ್ಲಿ ಇದೊಂದೆ ಎಂದರು ಅಲ್ಲಿದ್ದವರೊಬ್ಬರು. ಪೋಲಿಸರಿಗೆ ಸುದ್ದಿ ತಿಳಿಸಲು ಒಬ್ಬಾತ ಹೊರಟ. ಶಾಸಕರಿಗೆ ವಿಷಯ ಮನದಟ್ಟು ಮಾಡಲು ಮತ್ತೊಬ್ಬಾತ ಹೊರಟ.
************************
ಆದ್ರಮಳೆ ಹಬ್ಬದ ಮಾರನೆ ದಿನವಾದ್ದರಿಂದ ಕೂಲಿಕಾರರ ಕೇರಿಯಲ್ಲಿ ಗಂಟೆ ಒಂಬತ್ತಾದರೂ ಇನ್ನೂ ಎಲ್ಲರಿಗೂ ಬೆಳಗಾಗಿರಲಿಲ್ಲ. ಆದ್ರೆ ಅಷ್ಟರಲ್ಲಿ ಪ್ರಭಾಕರ ಎಲ್ಲರ ಮನೆಯ ಬಾಗಿಲೂ ತಟ್ಟುತ್ತಿದ್ದ, ನಕ್ಸಲೀಯರ ಸುದ್ದಿ ತಂದ ಮೇಲಿನಗದ್ದೆ ರಾಮಣ್ಣನ ಭೇಟಿ ಮಾಡಲು ಹೋದನಾದರೂ ಅವನಿಗೆ ಬೇಧಿ ಜಾಸ್ತಿಯಾಗಿ ಪಟ್ಟಣಕ್ಕೆ ಹೋದನೆಂದು ತಿಳಿಯಿತು. ಹಾಗಾಗಿ ನಕ್ಸಲರ ಬಗ್ಗೆ ಮಾಹಿತಿ ಹೇಳುವವರಿಲ್ಲದ ಕಾರಣ ಹೆಚ್ಚಿನ ಸುದ್ದಿ ಬಿತ್ತರಿಸುವ ಜವಾಬ್ದಾರಿ ಪ್ರಭಾಕರನೇ ವಹಿಸಿಕೊಂಡ. ಹಾಗು ಶ್ಯಾಂಭಟ್ಟ ಅವನ ಜತೆಗೂಡಿದ.
ಜ್ಞಾನ ಮಂದಿರದಲ್ಲಿ ಕೂಲಿಕಾರರ ಸಭೆ ಸೇರಿತು.
"ನೀವು ಶೋಷಿತ ವರ್ಗ, ದುಡಿಯುವ ಜನರು ನೀವು, ಕುಳಿತು ಉಣ್ಣುವವರು ಅವರು. ನಿಮ್ಮ ಬೆವರಿನ ಹನಿ ಭಾಗಾಯ್ತುದಾರರ ಹೆಂಡಿರ ಕೊರಳಲ್ಲಿ ಬಂಗಾರದ ಸರವಾಗಿದೆ. ನಿಮ್ಮ ರಕ್ತ ಅವರು ಕುಡಿದು ಕೇಕೆ ಹಾಕುತ್ತಿದ್ದಾರೆ. ನೀವು ಮೂಕ ಪಶುಗಳಂತೆ ದುಡಿಯುತ್ತಿದ್ದೀರಿ. ಇದನ್ನು ನಿಮಗೆ ಅರಿವು ಮೂಡಿಸಿ ನ್ಯಾಯ ಒದಗಿಸಲು ನಮ್ಮ ಊರಿಗೆ ನಕ್ಸಲೀಯರು ಬಂದಿದ್ದಾರೆ. ಅವರಿಗೆ ನಾವೆಲ್ಲಾ ಪೂರ್ಣ ಬೆಂಬಲ ಕೊಟ್ಟು ಶ್ರೀಮಂತರ ಸೊಕ್ಕು ಅಡಗಿಸಬೇಕು" ಪ್ರಭಾಕರನ ಭಾಷಣ ಅವ್ಯಾಹತವಾಗಿ ಸಾಗಿತ್ತು. ಶ್ಯಾಂಭಟ್ಟ ಮಧ್ಯೆ ಮಧ್ಯೆ ತಲೆ ಆಡಿಸಿ ಸಾತ್ ನೀಡುತ್ತಿದ್ದ.
ಒಟ್ಟಾರೆ ಇಪ್ಪತ್ತರಿಂದ ಇಪ್ಪತ್ತೈದು ಜನರಿದ್ದ ಕೂಲಿಕಾರರಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಅವರಲ್ಲೊಬ್ಬ
"ಅಯ್ಯಾ ಬಿಡಿ ಸೋಮಿ ಅವರವರ ಹಣೆಮೇಲೆ ಬರೆದಿದ್ದು ಹಂಗೆ ಅದಕ್ಕೆ ಯಾರೇನ್ಮಾಡಕಾಯ್ತದೆ" ಎಂದ
"ಇದೆ ನಾನು ಬೇಡ ಅನ್ನೋದು.. ನೀವು ಹಿಂಗೆ ಅಂದ್ಕೋಂಡೆ ಅವರು ಕೊಬ್ಬಿರೋದು,ನಿಮ್ಮ ದುಡ್ಡಲ್ಲಿ ಅವರು ಮಜಾ ಉಡಾಯಿಸ್ತಿರೋದು,ನೀವು ಕಷ್ಟದಲ್ಲಿ ಬದುಕ್ತಿರೋದು" ಪ್ರಭಾಕರ ಸಿಟ್ಟಿನಿಂದ ಹೇಳಿದ. ಶ್ಯಾಂಭಟ್ಟ ದನಿಗೂಡಿಸಿದ.
"ನಾವು ಕಷ್ಟದಲ್ಲಿದೀವಿ ಅಂತ ನಿಮ್ಗೆ ಯಾರು ಹೇಳಿದ್ರು ಸ್ವಾಮೀ, ಆ ದೇವ್ರು ರಟ್ಟೆ ತುಂಬಾ ಕಸು ಕೊಟ್ಟಿದಾನೆ,ದುಡಿತೀವಿ, ತಿಂತೀವಿ,ಮಲಗ್ತೀವಿ, ನಮ್ಮುಡುಗ್ರು ಕೆಲವ್ರು ಒದಿ ಸರ್ಕಾರಿ ಕೆಲ್ಸ ಹಿಡಿದವ್ರೆ,ಅವರು ಓದಿ ಕಸ್ಟಾ ಪಟ್ರು ಕೆಲಸ ಸಿಕ್ತು, ನಾವು ಓದ್ಲಿಲ್ಲ ಕೂಲಿ ಮಾಡ್ತೀವಿ ಅದ್ರಲ್ಲೆನು ತಪ್ಪು ಬಿಡಿ ಸೋಮಿ, " ಮಗದೊಬ್ಬ ಹಿರಿಯ ಹೇಳಿದ.
"ನೀವು ಹೀಗೆ ಮುಗ್ದರಾಗಿರೋದ್ರಿಂದ ನಿಮ್ಮ ಸುಲಿಗೆ ನಡಿತಿರೋದು, ಭಾಗಾಯ್ತುದಾರರು ಒಗ್ಗಟ್ಟಾಗಿ ನಿಮ್ಮನ್ನ ಮಟ್ಟಹಾಕಲು ದೇವಸ್ಥಾನದಲ್ಲಿ ಸಭೆ ಸೇರಿದ್ದಾರೆ" ಶ್ಯಾಂಭಟ್ಟ ದನಿಗೂಡಿಸಿದ. ಈಗ ಕೆಲವರ ಮುಖದಲ್ಲಿ ಬದಲಾವಣೆ ಕಂಡಿತು.
" ಈಗ ಅವೆಲ್ಲಾ ಇರ್ಲಿ,ನಮ್ಮ ಊರಿಗೆ ನಕ್ಸಲೀಯರು ಬಂದಿದ್ದಾರೆ, ಅವರು ಸಾಮಾಜಿಕ ನ್ಯಾಯ ಕೊಡಿಸ್ತಾರೆ, ಊರಿನಲ್ಲಿ ಎಲ್ಲರ ದುಡ್ಡನ್ನೂ ಸಮಾನಾಗಿ ಹಂಚ್ತಾರೆ,ನೀವು ಮನೇಲಿ ಇದ್ದಂಗೆ ದಿನಕ್ಕೆ ೧೦೦ ರುಪಾಯಿ ಸಂಪಾದನೆ" ಮತ್ತೆ ಕೆಲ ಯುವಕರ ಕಿವಿ ನೆಟ್ಟಗಾಯಿತು.ಹಿರಿಯರನ್ನೆಲ್ಲಾ ಹಿಂದೆ ತಳ್ಳಿ ಹೊಸಬರು ತಲೆ ಆಡಿಸಲಾರಂಬಿಸಿದರು.
"ಅದಕ್ಕೆ ನಾವು ಏನ್ ಮಾಡ್ಬೇಕು"?ಒಬ್ಬಾತ ಉತ್ಸಾಹದಿಂದ ಕೇಳಿದ.
"ಹಾಗ್ಬನ್ನಿ ದಾರಿಗೆ..... ಇವತ್ತೋ ನಾಳೇನೋ ಕಾಡಿಗೆ ಬಂದೋರು ಊರಿಗೆ ಬರ್ತಾರೆ, ಅಷ್ಟರೊಳಗೆ ನಾವೆಲ್ಲಾ ಒಂದು ಸಂಘಟನೆಯ ಅಡಿಯಲ್ಲಿ ಇರಬೇಕು. ಸಂಘಟನೆ, ಹೋರಾಟ, ಅಂತಂದ್ರೆ ಸುಲಭದ ಮಾತಲ್ಲ. ಬ್ಯಾನರ್,ಬಂಟಿಂಗ್ಸ್ ಅಂತ ಬಹಳ ಖರ್ಚಿದೆ, ಎಲ್ರೂ ಐವತ್ತೋ ನೂರೋ ದೇಣೀಗೆ ಹಾಕ್ಕೊಂಡು ತಯಾರಾಗಿರ್ಬೇಕು. ಅವರು ಬಂದ ತಕ್ಷಣ ನಿಮ್ಮ ಜಿವನದ ಗತಿ ಬದಲಾಯಿತು ಎಂದಿಟ್ಟುಕೊಳ್ಳಿ.ಈ ನೂತನ ಸಂಘಟನೆಗೆ ನನ್ನೀಂದಲೆ ದೇಣಿಗೆ ಆರಂಭವಾಗಲಿ." ಎಂದು ಜೇಬಿನಿಂದ ನೂರರ ನೋಟು ತೆಗೆದು ಮೇಜಿನ ಮೇಲಿಟ್ಟು ಉದ್ದ ಭಾಷಣ ಮಾಡಿದ ಪ್ರಭಾಕರ.
ಸಾಮಾಜಿಕ ನ್ಯಾಯ ಹೋರಾಟಗಳೆಲ್ಲಾ ಯಾರಿಗೂ ಅರ್ಥವಾಗದಿದ್ರೂ ಎಲ್ರೂ ಸಂಘಕ್ಕೆ ಹಣ ಕೊಡ್ಬೇಕು ಅನ್ನೋದು ಅರ್ಥವಾಯ್ತು.ಯುವಕನೊಬ್ಬ ಹಣ ಸಂಗ್ರಹಿಸತೊಡಗಿದ. ಆದ್ರಮಳೆ ಹಬ್ಬದ ಸಮಯವಾದ್ದರಿಂದ ಬೇಗನೆ ದುಡ್ಡು ಸಂಗ್ರಹವಾಯಿತು.
ಅಷ್ಟರಲ್ಲಿ ಶ್ಯಾಂಭಟ್ಟ ಕಿಟಕಿಯಾಚೆ ನೋಡಿದ ದೂರದಲ್ಲಿ ನಾಲ್ವರು ಯುವಕರು ಇತ್ತಕಡೇ ಬರುತ್ತಿದ್ದರು ಅವರಲ್ಲಿ ಒಬ್ಬಾತ ಕೆಂಪು ಟೊಪಿ ಧರಿಸಿದ್ದ. ಅವರನ್ನು ನೋಡಿದವನೆ ಕೆಲಸಕೆಟ್ಟಿತು ಎನ್ನುತ್ತಾ ಶ್ಯಾಂಭಟ್ಟ ಅಲ್ಲಿಂದ ಜಾಗ ಖಾಲಿ ಮಾಡಿದ.
*********************************
ಶ್ಯಾಂಭಟ್ಟ ಆತುರ ಆತುರವಾಗಿ ದೇವಸ್ಥಾನ ತಲುಪುವಷ್ಟರಲ್ಲಿ ಇಪ್ಪತ್ನಾಲ್ಕು ಮನೆಯವರು ಸಭೆ ಮುಗಿಸಿ ಹೊರಡುವ ತಯಾರಿಯಲ್ಲಿದ್ದರು.
" ಅಲ್ಲಿ ಜ್ಞಾನ ಮಂದಿರದಲ್ಲಿ ನಕ್ಸಲೀಯರು ಕೂಲಿಕಾರರೊಡನೆ ಸಭೆ ನಡೆಸುತ್ತಿದ್ದಾರೆ" ತಾನು ಅಲ್ಲಿಂದ ಹೊರಡುತ್ತಿರುವಾಗ ಬರುತ್ತಿದ್ದರು ಎಂದರೆ ಇಷ್ಟೊತ್ತಿಗೆ ಸಭೆಯಲ್ಲಿ ಇರಬಹುದು ಎಂದು ಅಂದಾಜು ಮಾಡಿ ಹೇಳಿದ ಶ್ಯಾಂಭಟ್ಟ.
ಇಪ್ಪತ್ನಾಲ್ಕು ಮನೆಯ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗತೊಡಗಿತು. ಈಗ ಮಾಡುವುದೇನು?, ಈಗ ಮಾಡುವುದೇನು"? ಎಂಬ ಪ್ರಶ್ನೆಯೊಂದಿಗೆ ಮತ್ತೆ ಸಭೆ ಸೇರಿತು.
"ಹತ್ಯಾರಗಳೊಂದಿಗೆ ನಾವು ಅವರನ್ನು ಸುತ್ತುವರೆದು ಬಿಡೋಣ" ಯುವವಕನೊಬ್ಬನ ಸಲಹೆ ಬಂತು.
"ತೋಟಕ್ಕೆ ಬಂದ ಮಂಗಗಳನ್ನ ಓಡ್ಸಕ್ಕಾಗಲ್ಲ, ಸುತ್ತುವರಿಯುತ್ತಾನಂತೆ" ಮತ್ಯಾರೋ ಲೇವಡಿ ಮಾಡಿದರು. ಬಿಗಿಯಾದ ವಾತಾವರಣದಲ್ಲೂ ಅಲ್ಲೊಂದು ಇಲ್ಲೊಂದು ನಗು ಉಕ್ಕಿತು.
"ಮೊದಲು ನಕ್ಸಲೀಯರು ಬಂದ ಕಾರಣ ಕೇಳೋಣ,ನಮ್ಮ ಊರಿನಲ್ಲಿ ಜಮೀನ್ದಾರರ ದಬ್ಬಾಳಿಕೆಯಂತೂ ಇಲ್ಲ. ಇರುವ ಇಪ್ಪತ್ನಾಲ್ಕು ಮನೆಯಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಮತ್ತೆಲ್ಲ ಜನರೂ ಮಧ್ಯಮವರ್ಗದವರೆ. ಹಾಗಾಗಿ ಅವರೊಡನೆ ಮಾತುಕಥೆಯಾಡೊಣ ಅದರಲ್ಲೇನಿದೆ" ಸಮಾಧಾನಿಯೊಬ್ಬ ಹೇಳಿದ.
ಅದು ಸರಿಯಾದ ತೀರ್ಮಾನ ಎಂದು ಎಲ್ಲರಿಗೂ ಅನಿಸತೊಡಗಿತು. ಆದರೆ ಸಂಧಾನದ ಮಾತುಕತೆಗೆ ಹೋಗುಚ ಛಾತಿ ಯಾರಿಗಿದೆ ಎಂಬ ಪ್ರಶ್ನೆ ಎದುರಾಯಿತು.
"ಶ್ಯಾಂಭಟ್ಟನಿಗೆ ಅಲ್ಲಿನ ಕಾಮ್ರೆಡ್‌ಗಳ ಪರಿಚಯ ಇದೆಯಂತೆ, ಅವನನ್ನು ಮುಂದು ಮಾಡಿಕೊಂಡು ನಾಲ್ಕೈದು ಜನರು ಹೋಗಿ" ಗಪ್ಪಯ್ಯ ಹೆಗಡೆ ಹೇಳಿದ. ಶ್ಯಾಂಭಟ್ಟನಿಗೆ ಈಗ ಪರಿಸ್ಥಿತಿ ಪಿಕಲಾಟಕ್ಕಿಟ್ಟುಕೊಡಿತು. ಗಪ್ಪಯ್ಯ ಹೆಗಡೆಯಿಂದ ಐದುನೂರು ರೂಪಾಯಿ ಪೀಕಿಸಲು ಮಾಡಿದ ಉಪಾಯ ಹೀಗೆ ಕೊರಳು ಸುತ್ತಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಆದರೆ ಅನಿವಾರ್ಯ.
"ನಾನೇನೋ ಊರಿಗಾಗಿ ನನ್ನ ಜೀವವನ್ನು ಪಣವಿಟ್ಟು ಹೋಗುತ್ತೇನೆ. ಬಂದೂಕಿನ ನಳಿಕೆಯೊಂದಿಗೆ ಮಾತುಕತೆ ಎಂದರೆ ಅಷ್ಟೊಂದು ಸುಲಭವಲ್ಲ ಆದರೆ ಅವರು ಯಾವಕ್ಷಣದಲ್ಲಾದರೂ ದುಡ್ಡು ಕೇಳಬಹುದು ಹಾಗಾಗಿ ಹತ್ತುಸಾವಿರ ರೂಪಾಯಿ ಇಟ್ಟುಕೊಂಡೆ ಹೋಗಬೇಕು". ಸಾಯುವವನಿಗೆ ಹುಲ್ಲು ಕಡ್ಡಿಯೇ ಆಧಾರ ಎಂದು ಶ್ಯಾಂಭಟ್ಟ ಹೇಳಿದ.
ಕೆಲವರಿಗೆ ಅನುಮಾನ ಆದರೆ ಹಲವರು ತಲೆಯಾಡಿಸಿದರು.ಗುಸುಗುಸು ಪಿಸಪಿಸ ಚರ್ಚೆಯ ನಡುವೆ ಸಭೆ ಒಪ್ಪಿಗೆ ನೀಡಿ ಹತ್ತು ಸಾವಿರ ರುಪಾಯಿಯ ಗಂಟಿನೊಂದಿಗೆ ಸಂಧಾನಕಾರರನ್ನು ಜ್ಞಾನಮಂದಿರಕ್ಕೆ ಕಳುಹಿಸಲಾಯಿತು.
****************************
ಹಣ ಸಂಗ್ರಹದಲ್ಲಿ ನಿರತನಾಗಿದ್ದ ಪ್ರಭಾಕರ ತಲೆ ಎತ್ತಿ ನೋಡಿದ ಜ್ಞಾನಮಂದಿರದ ಬಾಗಿಲಲ್ಲಿ ನಾಲ್ವರು ನಿಂತಿದ್ದರು ಅವರಲ್ಲೊಬ್ಬ ಕೆಂಪು ಟೋಪಿ ಧರಿಸಿದ್ದ. ಒಮ್ಮೆ ಪ್ರಭಾಕರನಿಗೆ ಎದೆ ಧಸಕ್ಕೆಂದಿತು ತಕ್ಷಣ ಸಾವಾರಿಸಿಕೊಂಡು
" ಬನ್ನಿ ಬನ್ನಿ ಎಲ್ಲಾ ನಿಮ್ಮ ಕುರಿತೇ ಚರ್ಚೆ ತಯಾರಿ ಎಲ್ಲಾ" ಗಡಿಬಿಡಿಯಲ್ಲಿಯೂ ಸಂಗ್ರಹವಾದ ಹಣ ಜೇಬಿಗಿಳಿಸುತ್ತಾ ಹೇಳಿದ .
ಆ ನಾಲ್ವರು ಮಿಕ ಮಿಕ ನೋಡತೊಡಗಿದರು. ಅವರಿಗೆ ಯಾವುದೂ ಅರ್ಥವಾಗಲಿಲ್ಲ.
"ಬರ್ರಾ... ಅದ್ಯಾರೋ ಬರ್ತಾರಂತೆ ನಮಗೆ ದಿನಾ ಮನೆ ಬಾಗ್ಲಿಗೆ ದುಡ್ಡು ತಂದು ಕೊಡ್ತಾರಂತೆ ನಿಮ್ಮೂರಾಗು ಹಂಗೆ ಮಾಡ್ರಿ.." ಹಿರಿಯ ಆ ನಾಲ್ವರ ಕುರಿತು ಹೇಳಿದ.
ಪ್ರಭಾಕರನಿಗೆ ಇದೇನೋ ದಾರಿ ತಪ್ಪುತ್ತಿರುವ ಅರಿವಾಯಿತು. "ಇವರೆಲ್ಲಾ ಯಾರು" ಕೇಳಿದ
" ಇವರು ಕಲ್ಲೂರಿನ ನಮ್ಮ ನೆಂಟ್ರು, ಆದ್ರಮಳೆ ಹಬ್ಬಕ್ಕೆ ಬಂದಿದ್ರು" ಒಬ್ಬಾತ ಹೇಳಿದ
"ನಿನ್ನೆ ರಾತ್ರಿ ಗುಡ್ಡದಲ್ಲಿ....... ಬೆಂಕಿ..........ಗೂಟಕ್ಕೆ ಟೋಪಿ" ಪ್ರಭಾಕರ ಕೇಳಿದ
"ಹೌದ್ರಾ ಹುಚ್ಚುಮುಂಡೇವು ಅಲ್ಲಿ ಬೆಂಕಿ ಹಾಕ್ಕೊಂಡು ರಾತ್ರಿ ಪೂರ್ತಿ ಇಸ್ಪೀಟಾಟ ಆಡಿದಾರೆ ಅದೇನೋ ಗುಡ್ದಾಗೆ ಆಡೋದ್ರಲ್ಲಿ ಮಜ ಅಂತೆ" ಮುಂದಾಳುವೊಬ್ಬ ಹೇಳಿದ
ಪ್ರಭಾಕರನಿಗೆ ನಕ್ಸಲರ ರಹಸ್ಯ ತಿಳಿಯಿತು. ಇನ್ನು ಸಂಘಟನೆಗೆ ಅರ್ಥವಿಲ್ಲ ಎಂಬುದು ಮನವರಿಕೆಯಾಯಿತು. ಆದರೆ ಬಾಯಿಬಿಟ್ಟರೆ ಬಣ್ಣಗೆಟ್ಟು ಹಣ ವಾಪಾಸು ಕೊಡಬೇಕಾದೀತು ಎಂದು ಲಗುಬಗೆಯಿಂದ ಸಂಘಟನೆ ನಕ್ಸಲಿಯರು ಮುಂತಾದವುಗಳಿಗೆಲ್ಲಾ ತಿಪ್ಪೆ ಸಾರಿಸಿ
ಅಲ್ಲಿಂದ ಹೊರಟ.
**********************
ಸಂಧಾನಕ್ಕೆ ಹೊರಟ ಶ್ಯಾಂಭಟ್ಟನಿಗೆ ದಾರಿಯಲ್ಲಿ ಸಿಕ್ಕ ಪ್ರಭಾಕರ ಎಲ್ಲವನ್ನೂ ಸಾದ್ಯಂತವಾಗಿ ಗುಸುಗುಸು ಪಿಸಪಿಸ ಎಂದು ವಿವರಿಸಿದ. ತಕ್ಷಣ ಶ್ಯಾಂಭಟ್ಟ ಉಳಿದ ಸಂಧಾನಕಾರರನ್ನು ಅಲ್ಲಿಯೇ ಇರಲು ಹೇಳಿ ಕೇರಿಗೆ ಹೋಗಿ ಆ ನಾಲ್ವರನ್ನು ಕರೆದು ಅವರಿಗೆ ತಲಾ ನೂರು ರೂಪಾಯಿಕೊಟ್ಟು ತಕ್ಷಣ ಊರು ಬಿಡುವಂತೆ ತಾಕೀತು ಮಾಡಿ ಉಳಿದದ್ದನ್ನು ಹಂಚಿಕೊಂಡ.
*********************
ಬೆನ್ನಟ್ಟೆ ಸ್ವಲ್ಪ ದಿನದ ನಂತರ ನಕ್ಸಲಿಯರ ಭಯವನ್ನು ಹೊಟ್ಟೆಯಲ್ಲಿ ಅರಗಿಸಿಕೊಂಡಿತು. ಇಪ್ಪತ್ನಾಲ್ಕು ಮನೆಯವರು ಮಠ ದೇವಸ್ಥಾನದಲ್ಲಿ ಮುಳುಗಿದರು. ಕೂಲಿಕಾರರು ಸಂಘಟನೆಯ ದಾರಿ ಕಾಯುತ್ತಾ ಉಳಿದರು.

(ಪ್ರಜಾವಾಣಿಯಲ್ಲಿ ಪ್ರಕಟವಾದ ಕಥೆ)

Monday, March 30, 2009

ಗುಲ್ಲು

ಬುಡಾನ್‌ಸಾಬಿ ದುಗುಡ ತುಂಬಿದ ಮುಖದಿಂದ ತಾಮ್ರದ ಹಂಡೆಯನ್ನು ಡಣ ಡಣ ಬಡಿಯುತ್ತಿದ್ದ. ಕೆಲಸ ಮುಗಿಸುವ ಭರಾಟೆಯಲ್ಲಿ ಎಂದಿಗಿಂತ ತುಸು ಹೆಚ್ಚಿನ ಶಬ್ದ ಕುಲುಮೆಯ ಸುತ್ತಲಿನ ಪರಿಸರಕ್ಕೆ ರವಾನೆಯಾಗುತ್ತಿತ್ತು. ನಿತ್ಯ ಬುಡಾನ್ ಹಂಡೆಗೆ ಹೊಡೆಯುವ ಸದ್ದಿಗೆ ರಾಮ್‌ಗಿಳಿ, ಪಾರಿವಾಳ,ಕೋಗಿಲೆ ಮುಂತಾದ ಸಾತ್ವಿಕ ಪಕ್ಷಿಗಳು ಕುಲುಮೆಯ ಆಜುಬಾಜು ಸುಳಿಯುತ್ತಿರಲಿಲ್ಲ ಆದರೆ ಇಂದಿನ ಸದ್ದಿಗೆ ಕಾಗೆ, ಅರಸನ ಹಕ್ಕಿ, ಕುಂಡೆ ಕುಣುಕನ ಹಕ್ಕಿಗಳೂ ಕೂಡ ದೂರವೇ ಉಳಿದಿದ್ದವು. ಅಷ್ಟರಮಟ್ಟಿಗಿನ ಏರುಶೃತಿ ಕುಲುಮೆಯಿಂದ ಹೊರಹೊಮ್ಮುತ್ತಿತ್ತು. ಈ ಏರು ಶೃತಿಗೆ ಮುಖ್ಯ ಕಾರಣ ಬುಡಾನ್ ಸಾಬಿಗೆ ಮಧ್ಯಾಹ್ನದ ನಮಾಜಿಗೆ ತಡವಾಗುತ್ತಿದ್ದುದಾಗಿತ್ತು.
ಬುಡಾನ್, ಪ್ರತೀ ವರ್ಷ ಮಳೆಗಾಲ ಮುಗಿದ ತಕ್ಷಣ ಘಟ್ಟದ ಕೆಳಗಿನ ತನ್ನ ಹುಟ್ಟಿದ ಊರಾದ ಕುಂದಾಪುರದ ಪೇಟೆಯಿಂದ ಪಾತ್ರೆಗೆ ಕಲಾಯಿ ಹಾಕುವ ಸಾಮಾನು ಹೊತ್ತುಕೊಂಡು ಕಾಲುಮನೆ ಎಂಬ ಘಟ್ಟದ ಮೇಲಿನ ಸಣ್ಣ ಹಳ್ಳಿಗೆ ಬರುವುದು ಅಪ್ಪನ ಕಾಲದಿಂದಲೂ ನಡೆದುಕೊಂಡು ಬಂದ ರಿವಾಜು. ಹಾಗೆ ಘಟ್ಟದ ಮೇಲೆ ಬಂದ ಬುಡಾನ್‌ಗೆ ತಾಮ್ರ ಹಾಗೂ ಹಿತ್ತಾಳೆ ಪಾತ್ರೆಗಗೆ ಕಲಾಯಿ ಹಾಕುವುದು ಕೆಲಸ. ಕಾಲ ಕಳೆದಂತೆ ಸ್ಟೀಲ್ ಪಾತ್ರೆಗಳ ದಾಂಗುಡಿಯಿಂದ ಬುಡಾನ್‌ಗೆ ಕೆಲಸ ಕಡಿಮೆಯಾಗಿತ್ತು. ಆದರೆ ಕಾಲುಮನೆ ಹಳ್ಳಿಯ ಜನರು ಸ್ನಾನದ ಹಂಡೆ ಹಾಗೂ ಅಡಿಕೆ ಬೇಯಿಸುವ ಹಂಡೆಗೆ ಇನ್ನೂ ತಾಮ್ರವನ್ನೇ ಉಪಯೋಗಿಸುತ್ತಿದ್ದುದರಿಂದ ಮೊದಲಿನಂತೆ ಆರು ತಿಂಗಳು ಕೆಲಸ ಸಿಗದಿದ್ದರೂ ಮೂರು ತಿಂಗಳ ಕೆಲಸಕ್ಕೆ ತೊಂದರೆ ಇರಲಿಲ್ಲ. ಈ ಮೂರು ತಿಂಗಳ ಸಂಪಾದನೆಯಿಂದ ಊರಲ್ಲಿರುವ ಅವನ ಹೆಂಡತಿ ಮಕ್ಕಳ ಒಂಬತ್ತು ತಿಂಗಳ ಜೀವನಕ್ಕೆ ತೊಂದರೆ ಇರಲಿಲ್ಲ. ಇನ್ನುಳಿದ ಮೂರು ತಿಂಗಳು ಊರಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸ ಸಿಗುತ್ತಿತ್ತು. ಹಾಗಾಗಿ ಬುಡಾನ್ ಹಾಗೆ ಘಟ್ಟದ ಮೇಲೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಘಟ್ಟದ ಮೇಲಿನ ಕಾಲುಮನೆ ಗೆ ಬಂದಾಗ ಅವನಿಗೆ ಒಂದೇ ಒಂದು ಸಮಸ್ಯೆ ಎಂದರೆ ನಮಾಜಿನದು. ಬುಡಾನ್ ಶುಕ್ರವಾರದ ನಮಾಜಿಗೋಸ್ಕರ ತಾಳಗುಪ್ಪದ ಮಸೀದಿ ಗೆ ಐದು ಕಿಲೋಮೀಟರ್ ನಡೆದುಕೊಂಡು ಹೋಗಿ ನಮಾಜು ಮುಗಿಸಿ ವಾಪಾಸು ಬರಬೇಕಿತ್ತು. ವಾರಕ್ಕೊಂದು ದಿವಸವಾದರೂ ಮಸೀದಿಗೆ ತೆರಳಿ ನಮಾಜ್ ಮಾಡದಿದ್ದರೆ ಸೈತಾನ ಆವರಿಸಿಕೊಳ್ಳುತ್ತಾನೆ ಹಾಗಾಗಿ ಸೈತಾನನಿದ್ದ ಜಾಗದಲ್ಲಿ ಸುಖ ಇರುವುದಿಲ್ಲಎಂದು ಅವನ ಅಪ್ಪ ಬಾಲ್ಯದಿಂದಲೇ ಬುಡಾನ್ ಗೆ ಕಲಿಸಿದ್ದರಿಂದ ಅದೊಂದು ಕಟ್ಟಳೆಯನ್ನು ತಪ್ಪದೇ ಪಾಲಿಸುತ್ತಿದ್ದ. ವಾರದ ಮಿಕ್ಕೆಲ್ಲ ದಿವಸ ಮನೆಯಲ್ಲಿಯೇ ಮೆಕ್ಕಾದ ದಿಕ್ಕಿನಲ್ಲಿ ನಮಾಜ್ ಮಾಡಿ ಶುಕ್ರವಾರ ಮಾತ್ರಾ ಮಸೀದಿಗೆ ಹೋಗುತ್ತಿದ್ದ. ಆ ಕಾರಣಕ್ಕಾಗಿ ಬುಡಾನ್ ಶುಕ್ರವಾರ ಕುಲುಮೆಗೆ ರಜಾ ಘೋಷಿಸಿಬಿಡುತ್ತಿದ್ದ. ಆದರೆ ಇವತ್ತು ಪುಟ್ಟೆ ಗೌಡರ ಮನೆಯ ಬಚ್ಚಲು ಹಂಡೆ ಅನಿರೀಕ್ಷಿತವಾಗಿ ಸೋರಲು ಶುರುವಾಗಿದ್ದರಿಂದ ಮತ್ತು ಅದನ್ನು ಗೌಡ್ತಿಯ ಮಧ್ಯಾಹ್ನದ ಸ್ನಾನದೊಳಗೆ ದುರಸ್ತಿ ಮಾಡಿಕೊಡಬೇಕು ಎಂದು ತಾಮ್ರದ ಹಂಡೆ ಹೊತ್ತು ತಂದ ಆಳಿನ ಮೂಲಕ ಗೌಡರು ಕಟ್ಟಪ್ಪಣೆ ಮಾಡಿದ್ದರಿಂದ ಅನಿವಾರ್ಯವಾಗಿ ಕೆಲಸಮಾಡುವಂತಾಗಿತ್ತು. ಬುಡಾನ್ ಸಾಬಿ ಗೌಡರ ಅಣತಿಯನ್ನು ಮೀರುವಂತಿರಲಿಲ್ಲ ಕಾರಣ ಅಪ್ಪನ ಕಾಲದಿಂದ ಪ್ರತೀ ವರ್ಷ ಘಟ್ಟದ ಮೇಲಿನ ಮಳೆಗಾಲ ಮುಗಿದ ತಕ್ಷಣ ಕಾಲುಮನೆಗೆ ಬರುವ ಬುಡಾನ್ ಗೆ ಕುಲುಮೆ ಹಾಕಲು ಪುಟ್ಟೇ ಗೌಡರು ರಸ್ತೆ ಪಕ್ಕದಲ್ಲಿದ್ದ ತಮ್ಮ ಬಿಡಾರದ ಒಂದು ಅಂಕಣದಲ್ಲಿ ಕಿಣಿಯ ಕಿರಾಣಿ ಅಂಗಡಿಗೂ ಹಾಗೂ ಇನ್ನೊಂದನ್ನು ವಾರಕ್ಕೊಮ್ಮೆ ಬರುವ ಕ್ಷೌರದ ಗೋಪಿಗೂ ಮತ್ತು ಅದರ ಪಕ್ಕದಲ್ಲಿ ಬಿಡಾರವನ್ನು ಬುಡಾನ್ ನ ಕುಲುಮೆಗೂ ಕೊಟ್ಟಿದ್ದರು. ಎರಡು ಬಿಡಾರಕ್ಕೂ ಗೌಡರು ಬಾಡಿಗೆ ಅಂತ ನಗದು ರೂಪದಲ್ಲಿ ಅಷ್ಟಿಷ್ಟು ತೆಗೆದುಕೊಳ್ಳುತ್ತಿದರು. ಆದರೆ ಬುಡಾನ್ ಗೆ ಮಾತ್ರಾ ಕುಲೆಯ ಜಾಗ ಸಂಪೂರ್ಣ ಪುಕ್ಕಟೆ, ಆ ಮುಲಾಜಿಗೆ ಬುಡಾನ್ ಗೌಡರ ಮನೆಯ ಪಾತ್ರೆಪಗಡವನ್ನು ದುರಸ್ತಿ ಮಾಡಿಕೊಡಬೇಕಾಗುತ್ತಿತ್ತು. ಅದಕ್ಕೆ ಗೌಡರು ಇಷ್ಟೇ ಅಂತ ಅಲ್ಲದಿದ್ದರೂ ಅಲ್ಪಸ್ವಲ್ಪ ಹಣ ಕೊಡುತ್ತಿದ್ದರು. ಹಾಗಾಗಿ ಅವರ ತುರ್ತು ಕೆಲಸವನ್ನು ನಿರ್ಲಕ್ಷಿಸಿ ನಮಾಜಿಗೆ ಹೋಗುವಂತಿರಲಿಲ್ಲ. ಹಾಗಂತ ನಮಾಜನ್ನೂ ಬಿಟ್ಟುಬಿಡುವಷ್ಟು ಧೈರ್ಯ ಬುಡಾನ್ ಸಾಬಿಗೂ ಇರಲಿಲ್ಲ. ಆ ಕಾರಣದಿಂದ ಕೊಟ ಕೊಟ ಸದ್ದಿನೊಂದಿಗೆ ಹೊಸದಾದ ತಾಮ್ರದ ಪಟ್ಟಿ ಯನ್ನು ತವರದ ಮುಖಾಂತರ ಬೆಸುಗೆ ಹಾಕುವ ಕೆಲಸವನ್ನು ಧಾವಂತದಲ್ಲಿ ಮುಗಿಸಲು ಹವಣಿಸುತ್ತಿದ್ದ. ಬುಡಾನ್ ಗೆ ಒಂದೆಡೆ ನಮಾಜಿನ ಚಿಂತೆ ಮತ್ತೊಂದೆಡೆ ನಮಾಜು ಮಾಡಲು ಮಸೀದಿಗೆ ಮೂರು ಕಿಲೋಮೀಟರ್ ನಡೆದುಹೋಗುವ ಚಿಂತೆ ಎಲ್ಲಾ ಒಟ್ಟಿಗೆ ಆವರಿಸಿಕೊಂಡು ಮುಖದಲ್ಲಿ ದುಗುಡ ತುಂಬಿತ್ತು.
ಕೆಲಸದ ಒತ್ತಡದಿಂದ ಕಪ್ಪನೆಯ ಮಸಿ ಹಿಡಿದ ತಾಮ್ರದ ಹಂಡೆಯನ್ನು ಡಣ ಡಣ ಎಂದು ಹೊಡೆಯುತ್ತಿದ್ದ ಬುಡಾನ್ ಗೆ ಕುಲುಮೆಯೆದುರು ಹೊಚ್ಚ ಹೊಸ ಕಾರೊಂದು ಬಂದು ನಿಂತಿದ್ದು ಹಾಗೂ ಅದರಿಂದ ನಾಲ್ಕಾರು ಜನ ಇಳಿದು ಒಳಗೆ ಬಂದಿದ್ದು ಅರಿವಿಗೆ ಬರಲಿಲ್ಲ. ಕಾರಿನಿಂದ ಇಳಿದು ಬಂದ ಯುವಕರಲ್ಲೊಬ್ಬಾತ ಸಲಾಂ ಅಲೇಕುಂ ಬುಡಾನ್ ಚಾಚಾ ಎಂದು ಎರಡನೇ ಸಾರಿ ಹೇಳಿದಾಗ ಬುಡಾನ್ ಗೆ ಕುಲುಮೆಯ ಬಾಗಿಲಿನಲ್ಲಿ ಶ್ರೀಮಂತರ ಮಕ್ಕಳು ಎಂದು ನೋಡಿದಕೂಡಲೇ ಹೇಳಬಹುದಾದ ಈ ನಾಲ್ಕು ಯುವಕರು ಕಂಡಿದ್ದು. ಬುಡಾನ್ ಸಾಬಿಯ ಕುಲುಮೆಯ ಎದುರು ನಿತ್ಯ ಹತ್ತಾರು ದೊಡ್ಡ ಕಿಮ್ಮತ್ತಿನ ಕಾರುಗಳು ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ಹೋಗುತ್ತಿದ್ದವು . ಅಲ್ಲಿಗೆ ಹೋಗುವವರು ಕಿಣಿಯ ಅಂಗಡಿಯಲ್ಲಿ ರಸ್ತೆ ವಿಚಾರಿಸಲು ನಿಲ್ಲಿಸುತ್ತಿದ್ದರು. ಕಿಣಿ ಅಂಗಡಿ ಬಾಗಿಲು ಹಾಕಿದ ಸಂದರ್ಭದಲ್ಲಿ ಒಮ್ಮೊಮ್ಮೆ ಕುಲುಮೆಯ ಮುಂದೆ ಕಾರು ನಿಲ್ಲಿಸಿ ಹೊನ್ನೆಮರಡು ಗೆ ದಾರಿ ಕೇಳುತ್ತಿದ್ದರೇ ಹೊರತು ಇಳಿದು ಕುಲುಮೆಯ ಒಳಗೆ ಯಾರೂ ಬರುತ್ತಿರಲಿಲ್ಲ. ಆದರೆ ಇವತ್ತು ಈ ಹುಡುಗರು ಒಳಗೆ ಬಂದಿದ್ದಾರೆ ಎಂದರೆ ಯಾರೋ ಪರಿಚಿತರೇ ಇರಬೇಕು, ಆದರೆ ಗುರುತು ಸಿಕ್ಕುತ್ತಿಲ್ಲ, ಏನಾದರಾಗಲೀ ವಿಚಾರಿಸಿದರೆ ಹೇಳುತ್ತಾರಲ್ಲ ಎಂದು ಬುಡಾನ್ ಅರೆ. ಮೆರೋಕೊ ಜಾನ್ಪೆಚಾನ್ ನಹಿ ಹುವಾ... ಕೌನ್ ಹೊ ತುಮ್ ಲೋಗ್ ಎಂದು ಅಚ್ಚರಿಯ ನೋಟದ ಜತೆಗೆ ಮರುಪಶ್ನಿಸಿದ. ಕುಂದಾಪುರದ ರಫೀಕ್ ರ ಅಣ್ಣನ ಮಗ ನಾನು, ಜಾವೇದ್ ಅಂತ ನನ್ನ ಹೆಸರು. ನಾವು ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಕೆಲ್ಸ ಮಾಡೊದು. ಹೊನ್ನೆಮರಡು ವಾಟರ್ ಫಾಲ್ಸ್ ದೇಕ್ನೇಕೋ ಇದರ್ ಆಯಾತ, ಎಂದು ಅರ್ದ ಕನ್ನಡ ಬೆರಸಿ ಯುವಕನೊಬ್ಬ ಹೇಳಿ ನಂತರ ತಾನು ಕಂಪನಿ೦iiಲ್ಲಿ ಕೆಲಸ ಮಾಡುತ್ತಿದ್ದ ಜತೆಗಾರರೊಡನೆ ಜಲಾಶಯದ ಹಿನ್ನೀರಿನಲ್ಲಿ ವೀಕೆಂಡ್ ಕಳೆಯಲು ಬಂದಿದ್ದು ಹಾಗೂ ಇನ್ನೂ ಒಂದು ದಿವಸ ಇಲ್ಲೇ ಟೆಂಟ್ ಹಾಕಿ ಉಳಿದು ನೇಚರ್ ಬಗ್ಗೆ ಸ್ಟಡಿ ಮಾಡುವುದು, ನೀರಿನಲ್ಲಿ ಕಯಾಕಿಂಗ್ ಮಾಡುವುದು ಮುಂತಾವುದರ ಬಗ್ಗೆ ಹಾಗೂ ತಾನು ಎರಡು ದಿನ ಇಲ್ಲಿಯೇ ಉಳಿಯುವುದರ ಬಗ್ಗೆ ವಿವರಿಸಿದ.
ಬುಡಾನ್ ಗೆ ಕಯಾಕಿಂಗ್. ನೇಚರ್ ಮುಂತಾದವುಗಳು ಅರ್ಥವಾಗದಿದ್ದರೂ ನೆಂಟರ ಹುಡುಗ ಎರಡು ದಿನ ಇಲ್ಲಿಯೇ ಉಳಿಯುತ್ತಿದ್ದಾನೆ ಎಂಬುದು ಮನವರಿಕೆಯಾಯಿತು. ಅರೆ ಬೇಟಾ ಇದು ಗರೀಬ್ ಕಾ ಮಖಾನ್, ಇಲ್ಲಿ ನಿಮ್ಮಂತೋರು ಉಳಿಯೋದು ಹೆಂಗೆ? ಎಂದು ಮಿಕ್ಕ ಹುಡುಗರತ್ತ ನೋಡಿ ಬುಡಾನ್ ಹೇಳಿದ.
ಇಲ್ಲ ನಾವು ಕಾಡಲ್ಲಿ ಟೆಂಟ್‌ನಲ್ಲಿ ಉಳಿತೀವಿ, ನೇಚರ್ ಸಂಸ್ಥೇಲಿ ಬುಕ್ ಮಾಡಿದೀವಿ ಹಾಗಾಗಿ ಊಟ ಎಲ್ಲಾ ಅವ್ರೇ ನೋಡ್ಕೋತಾರೆ, ಈ ಕಾರು ವಾಪಾಸ್ ಹೋಗಿಬಿಡುತ್ತೆ ಈಗ, ನಮ್ಮ ಲಗೇಜ್ ಇಟ್ಕೋಳ್ಳಾಕೆ ಕಾಡಲ್ಲಿ ಕಷ್ಟ ಹಾಗಾಗಿ ನಮ್ದೊಂದಿಷ್ಟು ಲಗ್ಗೇಜ್ ಇಲ್ಲಿ ಇಡಬೇಕಿತ್ತು. ಎಂದ
ಓ ಅದಕ್ಕೇನು ತೊಂದ್ರೆ ಬೇಟೆ ಅಲ್ಲಿ ಇಡಿ ಎಂದು ಹೇಳಿ ಕುಲುಮೆಯ ಮೂಲೆಯಲ್ಲಿ ಜಾಗ ತೋರಿಸಿ ಬುಡಾನ್ ತನ್ನ ಕೆಲಸದಲ್ಲಿ ಮಗ್ನನಾದ.
ಹುಡುಗರು ಒಂದು ಸೂಟ್‌ಕೇಸ್ ಕಾರಿನಿಂದ ಇಳಿಸಿ ತಂದು ಒಳಗಿಟ್ಟು ನಾಡಿದ್ದು ವಾಪಾಸು ಬರುವುದಾಗಿ ಹೇ ಹೋದರು. ಬುಡಾನ್ ಲಗುಬಗೆಯಿಂದ ಹಂಡೆಗೆ ಕೊನೆಯ ಬೆಸಿಗೆ ಹಾಕಿ, ನಮಾಜಿಗೆ ಮೈಶುದ್ಧ ಮಾಡಿಕೊಂಡು ಹೊಸ ಬಟ್ಟೆ ಟವೆಲ್ ಧರಿಸಿ ಪುಟ್ಟೆಗೌಡರ ಹಂಡೆಯನ್ನು ಒಯ್ಯಲು ಬಂದಿದ್ದ ಅವರ ಮನೆಯಾಳು ಶೀನನಿಗೆ ಕೊಟ್ಟು ಬಿಡಾರಕ್ಕೆ ಬೀಗ ಹಾಕಿಕೊಂಡು ತಾಳಗುಪ್ಪದತ್ತ ಹೆಜ್ಜೆ ಹಾಕಿದ.
*******
ತಲೆಯ ಮೇಲೆ ದುರಸ್ತಿಯಾದ ಹಂಡೆ ಹೊತ್ತು ಹೊರಟ ಶೀನನಿಗೆ ಆ ನಾಲ್ಕು ಯುವಕರ ಐಷಾರಾಮಿನ ವರ್ತನೆ ಕಾಡತೊಡಗಿತು. ತಾನೂ ಓದಿದ್ದರೆ ಅವರಂತೆ ಜುಂ ಅಂತ ಕಾರಲ್ಲಿ ಹೋಗಬಹುದಿತ್ತು, ಇಪ್ಪತ್ತೈದು ವರ್ಷದಿಂದ ಗೌಡರ ಮನೆಗೆ ಮಣ್ಣು ಹೊತ್ತರೂ ಇನ್ನು ಒಂದೇ ಒಂದು ಸಾರಿ ಅಂತಹ ಕಾರಿನ ಒಳಗೆ ಕೂರಲಾಗಲಿಲ್ಲ. ತಥ್ ಈ ಜನ್ಮಕ್ಕಿಷ್ಟು ಬೆಂಕಿ ಹಾಕ ಎಂದು ತನ್ನ ಜೀವನವನ್ನು ತನ್ನಷ್ಟಕ್ಕೆ ತಾನು ಶಪಿಸಿಕೊಂಡು ಸಿಟ್ಟಿನಿಂದ ಕೆಂಬಣ್ಣದ ಎಲೆ ಅಡಿಕೆಯನ್ನು ಪಿಚಕ್ಕನೆ ರಸ್ತೆಗೆ ಉಗಿದ. ಅಷ್ಟರಲ್ಲಿ ಎದುರಿನಿಂದ ಸೇರುಗಾರ ಕೊಗ್ಗ ಶೆಟ್ಟಿ ತೋಟದ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ಹೊರಟವನು ಎದುರಾಗಿ ಅದ್ಯಾರಿಗೋ ಬೈತಾ ಹೊಂಟಿದ್ಯಲೋ ಶೀನಾ,, ಯಾರಿಗಾ? ಎಂದು ಪ್ರಶ್ನಿಸಿದ.
ಅಲ್ಲ ಬುಡಾನ್ ಸಾಬ್ರ ಕುಲಿಮಿಗೆ ಬೆಂಗ್ಳೂರಿಂದ ನಾಲ್ಕು ಹುಡುಗ್ರು ಬಂದಿದ್ರು, ಅವ್ರ ಹಂಗೆ ದೊಡ್ಡ ಕಿಮ್ಮತ್ತಿನ ಕಾರ್ನಲ್ಲಿ ಬುಲೆಟ್ ಹೋದಂಗೆ ..ನಾವೆಲ್ಲಾ ಹೋಪುದ್ಯಾವಾಗ? ಎಂದೆ ಎಂದು ಹೇಳಿ ತಲೆಯ ಮೇಲೆ ಹಂಡೆಯ ಭಾರ ಇರುವುದರಿಂದ ನಿಲ್ಲದೆ ಬಿರಬಿರನೆ ಮುನ್ನೆಡದ.
ಕೊಗ್ಗ ಶೆಟ್ಟಿಗೆ ಶೀನ ಹೇಳಿದ್ದು ಸಂಪೂರ್ಣ ಅರ್ಥವಾಗಲಿಲ್ಲ, ಮತ್ತೆ ಬಿಡಿಸಿ ಕೇಳಲು ಶೀನ ನಿಲ್ಲಲಿಲ್ಲ. ಹಾಗಾಗಿ ಕಿಣಿ ಅಂಗಡಿಯಲ್ಲಿ ಮಿಕ್ಕ ವಿಷಯ ಸಿಗಬಹುದೆಂದು ಅಲ್ಲಿಗೆ ಹೋಗಿ ಹೋಯ್ ಬುಡಾನ್ ಸಾಬ್ರ ಕುಲುಮೆಯಿಂದ ಯಾರೋ ಕಾರಲ್ಲಿ ಬುಲೆಟ್ ತಕಂಡು ಹೋದ್ರು ಅಂತ ಶೀನ ಹೇಳ್ದ ಎಂತ ಅದು? ಎಂದು ಕೇಳಿದ.
ಅಂಗಡಿಯಲ್ಲಿ ಮಧ್ಯಾಹ್ನ ದ ಸಮಯ ಕಳೆಯಲು ಬಂದಿದ್ದ ನಾಲ್ಕಾರು ಜನಕ್ಕೆ ಕಿವಿ ನೆಟ್ಟಗಾಯಿತು. ಚರ್ಚೆ ಕುಚರ್ಚೆಗಳು ನಡೆಯಿತು. ಒಬ್ಬಾತ ಓ ಹೌದು ನಾನು ಕಾರಿಂದ ಎಂತದೋ ಭಾರವಾದ ಸೂಟ್ ಕೇಸ್ ಇಳಿಸ್ತಾ ಇದ್ದಿದ್ದ ಕಂಡೆ, ನಾಲ್ಕು ಜನ ಇದ್ರು, ಒಬ್ಬ ಗಡ್ಡ ಬಿಟ್ಟಿದ್ದ ಎಂದು ವಿವರಿಸಿದ. ಮತ್ತೊಬ್ಬಾತ ಓ ಅದಾ ನಾನು ಎಂತಪಾ ಅನ್ಕಂಡೆ, ಕಾರು ಆಚೆ ಹೋದ ತಕ್ಷಣ ಬುಡಾನ್ ಸಾಬ್ರು ಗಡಿಬಿಡಿಲಿ ಬಾಗ್ಲು ಹಾಕ್ಕಂಡು ಪೇಟೆ ಕಡೆ ಹೋದ್ರಪಾ ಎಂದ.
ನಾನು ಅಂಗಡಿಯೊಳಗೆ ಅದೇನೋ ಸಾಮಾನು ಕಟ್ತಾ ಇದ್ದಿದ್ದೆ, ಹೊನ್ನೇಮರಡುವಿಗೆ ಹೋಗೋರಾಗಿದ್ರೆ ನನ್ನತ್ರ ದಾರಿ ಕೇಳ್ತಿದ್ರು, ಕುಲುಮೆ ಒಳಗೆ ಹೋಗಿ ಸೂಟ್‌ಕೇಸ್ ಇಟ್ರೂ ಅಂದ್ರೆ ನಂಗ್ಯಾಕೋ ಉಗ್ರಗಾಮಿಗಳಾ ಅಂತ ಅನುಮಾನ, .॒.ಬುಡಾನ್ ಸಾಬಿ ಕುಲುಮೆಯಲ್ಲಿ ಬಾಂಬ್ ಗೀಂಬ್ ಇಟ್ಟು ಹೋಗಿದಾರಾ..ಅಂತ, ನಾವು ಸ್ವಲ್ಪ ಹುಷಾರಾಗಿರ್ಬೇಕು, ಅವರೆಲ್ಲಾ ಒಂದೆ ಹೋಯ್.. ಎಂದು ಕಿಣಿ ಅತ್ತ ನಿರ್ಧಾರವನ್ನೂ ಹೇಳದೆ ಇತ್ತ ಅಲ್ಲಗಳೆಯದೇ ಅನುಮಾನದ ಮಾತುಗಳನ್ನಾಡಿದ. ಹೊನ್ನೇಮರಡುವಿಗೆ ಟೂರಿಸ್ಟ್‌ಗಳಿಗೆ ಅಲೋ ಮಾಡ್ಬೇಡಿ ಅಂತ ನಾನು ಬಡ್ಕಂಡೆ, ಈಗ ನೋಡಿ ಬಾಂಬ್ ನಮ್ಮೂರಿಗೆ ಬಂದಂಗಾತು ಮಗದೊಬ್ಬ ತನ್ನದೇ ಆದ ತರ್ಕದ ಮೂಲಕ ಹೊಸ ವಿಷಯ ಸೇರಿಸಿದ. ನಾಲ್ಕು ಜನರ ಚರ್ಚೆಗೆ ಅಲ್ಲಿಯೇ ಇದ್ದ ಹತ್ತಾರು ಕಿವಿಯ ಮುಖಾಂತರ ಒಳ ಸೇರಿ ಸ್ವಲ್ಪ ಮಾರ್ಪಾಡಿನೊಂದಿಗೆ ಬಿತ್ತರವಾಗತೊಡಗಿತು. .
ಅಷ್ಟರಲ್ಲಿ ಮಧ್ಯಾಹ್ನದ ಅಡುಗೆಗೆ ಅಕ್ಕಿಯನ್ನು ಒಲೆಯಮೇಲಿಟ್ಟು ಹುಣಿಸೆ ಹಣ್ಣು ಮೆಣಸಿನಕಾಯಿ ಒಯ್ಯಲು ಬಂದಿದ್ದ ಈರಕ್ಕಳಿಗೆ, ಬಾಂಬು, ಉಗ್ರಗಾಮಿಗಳು ಮತ್ತು ಬುಡಾನ್ ಸಾಬಿಯ ಕುಲುಮೆ ಎಂಬ ಮೂರು ಶಬ್ದಗಳು ಆಳವಾಗಿ ತಲೆಯೊಳಗೆ ಇಳಿಯಿತು. ಪ್ರತಿನಿತ್ಯ ಸಣ್ಣಯ್ಯ ಹೆಗಡೆಯವರ ಮನೆಯ ಟಿವಿಯಲ್ಲಿ ಇದೇ ತರಹದ ಸುದ್ದಿ ನೋಡಿ ಅಭ್ಯಾಸವಾಗಿದ್ದ ಆಕೆ ತನ್ನ ಮನೆಗೆ ಬಾಂಬುಬಿದ್ದವರಂತೆ ಭ್ರಮಿಸಿ ಮನೆ ಸೇರಿ ಲಗುಬಗೆಯಿಂದ ಅಡಿಗೆ ಮಾಡಿ ಊಟ ಮಾಡಿ ಸಣ್ಣಯ್ಯ ಹೆಗಡೆಯವರ ಮನೆ ಜಗುಲಿ ಸೇರಿ
ಒಡೆಯಾ ಬುಡಾನ್ ಸಾಬಿ ಕುಲುಮೆಗೆ ಯಾರೋ ಬಾಂಬ್ ಹಾಕೋರು ಬಂದಿದಾರಂತೆ, ಬುಡಾನ್ ಅವರ ಜತೆ ಸೇರಿದಾನಂತೆ ಎಂಬ ಬಿಸಿಬಿಸಿ ಸುದ್ದಿ ಹೇಳಿದಳು. ಎಸ್.ಎಸ್.ಎಲ್ ಸಿ ಗೋತಾ ಹೊಡೆದು ಊರಲ್ಲಿ ಠಳಾಯಿಸಿಕೊಂಡಿದ್ದ ಸಣ್ಣಯ್ಯ ಹೆಗಡೆಯವರ ಏಕಮಾತ್ರ ಪುತ್ರ ರತ್ನ ಮಹೇಶನಿಗೆ ಈ ವಿಷಯ ಕೇಳಿದತಕ್ಷಣ ದೇಶಪ್ರೇಮ ಉಕ್ಕಿಹರಿದಂತಾಗಿ ಮರುಕ್ಷಣ ತನ್ನನ್ನು ಒಂದು ಲೆವಲ್ಲಿಗೇರಿಸಲು ಭಗವಂತನೇ ಈ ಸುದ್ದಿಯನ್ನು ತನ್ನ ಕಿವಿಗೆ ಮೊದಲು ತಲುಪಿಸಿದ್ದಾನೆಂದು ಭಾವಿಸಿ ತನ್ನಂತಯೇ ಇದ್ದ ಸ್ನೇಹಿತರಿಗೆ ಲಗುಬಗೆಯಿಂದ ಬಾಂಬಿನ ಸುದ್ದಿ ಬಿತ್ತರಿಸಿದ.
ಊರಿನ, ಕೇರಿಯ, ಪಕ್ಕದೂರಿನ, ಆಜುಬಾಜು ಹಳ್ಳಿಯ ಎಲ್ಲಾ ಫೋನುಗಳು ಅರ್ದ ಘಂಟೆಗಳಲ್ಲಿ ಬಾಂಬಿನ ಸುದ್ದಿಯನ್ನು ಆಚೆ ಈಚೆ ಹರಿದಾಡಿಸಿದವು. ಅವುಗಳಲ್ಲಿ ಯಾವುದೋ ಒಂದು ಫೋನಿನ ಧ್ವನಿ ಪೋಲೀಸ್ ಸ್ಟೇಷನ್ನಿಗೂ ಸುದ್ದಿ ತಲುಪಿಸಿತು.
ಅಷ್ಟೇ ಹುಟ್ಟಿರುವ ಹಾಗೂ ನಾಳೆ ನಾಡಿದ್ದರಲ್ಲಿ ಇಲ್ಲವಾಗುವ ಎಲ್ಲರನ್ನೂ ಸೇರಿಸಿದರೂ ನೂರರ ಗಡಿದಾಟದ ಜನಸಂಖ್ಯೆಯ ಕಾಲುಮನೆಯಲ್ಲಿ ತಾಸಿನೊಳಗೆ ಐದಾರು ನೂರು ಜನರು ಆತಂಕದ ಮುಖ ಹೊತ್ತು ಓಡಾಡತೊಡಗಿದರು. ರೊಂಯ್ಯ ರೊಂಯ್ಯ ಸದ್ದು ಮಾಡುತ್ತಾ ಪೋಲೀಸ್ ಜೀಪು ಬಂತು. ಜೀಪಿನಿಂದ ಇಳಿದ ಪೋಲೀಸರು ಅಪಾಯದ ಪರಿಸ್ಥಿತಿಯಿರುವುದರಿಂದ ಮೊದಲು ಕುಲುಮೆಯ ಸಮೀಪದಿಂದ ಜನರನ್ನು ದೂರ ಸರಿಸಿ ನಂತರ ಕುಲುಮೆಯ ಬಾಗಿಲೊಡೆದು ಒಳಪ್ರವೇಶಿಸಿದರು. ಎದುರೇ ಸಿಕ್ಕಿದ ಸೂಟ್ಕೇಸ್ ಬಾಗಿಲನ್ನು ಹಾರೆ ಹಾಕಿ ಒಡೆದು ತೆಗೆದರು. ಅದರಲ್ಲಿ ಒಂದಿಷ್ಟು ಬಟ್ಟೆ ಹಾಗೂ ಬಿಸ್ಕೀಟ್‌ಪ್ಯಾಕೇಟ್ ಮುಂತಾದವುಗಳು ಮಾತ್ರಾ ಕಂಡಿತಾದರೂ ಮುಂದಿನ ತನಿಖೆಗಾU ಅವುಗಳನ್ನು ಕೆಂಪುಬಟ್ಟೆ ಸುತ್ತಿ ಸೀಝ್ ಮಾಡಿ ಒಂದಿಬ್ಬರು ಆ ನಾಲ್ಕು ಹುಡುಗರನ್ನು ಪತ್ತೆ ಮಾಡಲು ತೆರಳಿದರು ಮಿಕ್ಕವರು ಬುಡಾನ್ ಸಾಬಿಯ ಆಗಮನಕ್ಕೆ ಕಾದು ಕುಳಿತರು.
****************
ನಮಾಜ್ ಮುಗಿಸಿ ಆಚೆ ಬರುತ್ತಿದ್ದ ಬುಡಾನ್ ಸಾಬಿಗೆ, ಹಳ್ಳಿ ಹಳ್ಳಿ ಓಡಾಟ ಮಾಡಿ ಕೊಳೆಚಿಕಣಿ ಅಡಿಕೆ ವ್ಯಾಪಾರ ಮಾಡುವ ಅನ್ವರ್ ಎದುರು ಸಿಕ್ಕಿದ. ಅನ್ವರ್ ಬಳಿ ಬುಡಾನ್ ಅರೆ ಕ್ಯೂ ಬಯ್ಯಾ, ಆಜ್ ಲೇಟ್ ಹೋಗಯಾ.... ಎಂದು ಕೇಳಿದ. ಬುಡಾನ್ ಸಾಬಿಯನ್ನು ಕಂಡು ಗಾಬರಿಯ ಮುಖ ಹೊತ್ತ ಅನ್ವರ್
ಚಾಚಾ ನಿಮ್ದು ಮನೇಲಿ ಬೆಂಕಿ ಹತ್ತಿ ಉರಿತಾ ಇದ್ರೆ ನೀವಿಲ್ಲಿದೀರಿ ಎಂದ. ಅನ್ವರ್ ನ ಮಾತು ಅರ್ಥವಾಗದ ಬುಡಾನ್ ಏನು? ಎಂದು ಕೇಳಿದಾಗ ಅನ್ವರ್, ಪೋಲೀಸರು, ಸೂಟ್ಕೇಸ್‌ಬಾಂಬ್, ಹಾಗೂ ಕುಲೆಮೆಯೆದುರು ನೂರಾರು ಜನ ಸೇರಿದ್ದು, ಮತ್ತು ಪೋಲೀಸರ ಸಮೇತ ಅವರೆಲ್ಲಾ ಬುಡಾನ್ ಗೆ ಹುಡುಕುತ್ತಾ ಇರುವುದು ಹಾಗೂ ಆ ಗಲಾಟೆಯಲ್ಲಿ ತಾನು ನಮಾಜ್ ಗೆ ಬರುವುದು ತಡವಾಗಿದ್ದು ಎಲ್ಲವನ್ನೂ ವಿವರಿಸಿದ. ಬುಡಾನ್ ಸಾಬಿಗೆ ಒಮ್ಮೆ ನಖಶಿಕಾಂತ ಬೆವರಿತು. ಇನ್ನು ತಾನಲ್ಲಿ ಕಾಲಿಟ್ಟರೆ ಏಟು ತಿನ್ನಬೇಕಾದಿತೆಂದು ತನ್ನ ಅನ್ನಕ್ಕೆ ಕಲ್ಲಿಟ್ಟ ನೆಂಟರ ಹುಡುಗರನ್ನು ಶಪಿಸುತ್ತಾ ಲಗುಬಗೆಯಿಂದ ಉಟ್ಟಬಟ್ಟೆಯಲ್ಲಿಯೇ ಕಾಲುಮನೆಯ ಬಿಡಾರ ಹಾಗೂ ತನ್ನ ಎಲ್ಲಾ ಸಾಮಾನುಗಳ ಆಸೆ ತೊರೆದು ಬದುಕಿದ್ದರೆ ಬೇಡಿ ತಿಂದೇನು ಎನ್ನುತ್ತಾ ಕುಂದಾಪುರದ ಬಸ್ಸನ್ನೇರಿದ.
*****************
ಮುಂದಿನ ಮೂರ್ನಾಲ್ಕು ದಿವಸಗಳ ಕಾಲ ಸುದ್ದಿಗೆ ರಕ್ಕೆಪುಕ್ಕ ಬಂದು ಕುಣಿದಾಡಿತಾದರೂ ನಂತರ ಸುದ್ದಿ ಜೊಳ್ಳು ಎಂದು ತಿಳಿದು ಕಾಲುಮನೆ ತಣ್ಣಗಾಯಿತು. ನಂತರದ ದಿನಗಳಲ್ಲಿ ಡಣ ಡಣ ಶಬ್ದ ಇಲ್ಲದ ಕಾರಣ ಮುರಿದ ಬಾಗಿಲ ಕುಲುಮೆಯ ಮಾಡಿನಲ್ಲಿ ಪಾರಿವಾಳಗಳು ಗೂಡುಕಟ್ಟಿಕೊಳ್ಳತೊಡಗಿದವು. ರಾಮಗಿಣಿ, ಕೋಗಿಲೆ ಮುಂತಾದವುಗಳು ದಿನಕ್ಕೊಮ್ಮೆ ಬಂದು ಅವುಕ್ಕೆ ಸಾಥ್ ನೀಡತೊಡಗಿದವು. ಕಾಲುಮನೆಯ ಕೆಲ ಜನರು ಕುಲುಮೆ ಕೆಲಸಕ್ಕೆ ಐದು ಕಿಲೋಮೀಟರ್ ನಡೆ೦iiತೊಡಗಿದರು. ಹಲವರು ತಾಮ್ರದ ಹಂಡೆಯ ಹಂಗನ್ನೇ ತೊರೆದರು.
--------------------------------------------------

Thursday, March 26, 2009

ಉಗಾದಿ ಶುಭಾಶಯ


ಎಲ್ಲಾ ಓದುಗರಿಗೂ ಉಗಾದಿಯ ಹಾರ್ದಿಕ ಶುಭಾಶಯಗಳು.

Wednesday, March 25, 2009

ವಾಸ್ತವ

ಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೊಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು ನಿಲ್ಲಿಸುವ ಪರಿ ತಿಳಿಯದೆ ಪರದಾಡತೊಡಗಿದ. ಎದುರು ಕುಳಿತ ಸ್ವಾಮೀಜಿಯ ಕಣ್ಣುಗಳನ್ನು ದುರುಗುಟ್ಟಿ ನೋಡಿದ. ಐದು ನಿಮಿಷಕ್ಕೆ ಮೊದಲು ಫಲತಾಂಬೂಲ ಅರ್ಪಿಸಿ ಪಾದಕ್ಕೆ ಎರಗುವಾಗಿನ ಮುಖಭಾವ ಈಗಿರಲಿಲ್ಲ. ಕಣ್ಣುಗಳು ಕೆಂಪೇರತೊಡಗಿತು. ಹೊಕ್ಕುಳಬಳ್ಳಿ ಛಳಕ್ಕೆಂದಿತು.ಗಂಟಲಿನಾಳಾದಿಂದ ಧ್ವನಿ ಹೊಮ್ಮತೊಡಗಿತು.
"ನಮ್ಮಂತೆ ಮನುಷ್ಯರು ನೀವು, ಕಾವಿ ಬಟ್ಟೆ ಉಟ್ಟಾಕ್ಷಣ ಬೇರೆಯಾಗುವ ಬಗೆ ಹೇಗೆ. ನಮ್ಮಷ್ಟೆ ದುಡ್ಡಿನ ವ್ಯಾಮೋಹ ನಿಮಗೆ. ದುಡ್ಡಿಲ್ಲದ ಕ್ಷಣವನ್ನು ನೀವೂ ನಮ್ಮಂತೆ ಊಹಿಸಿಕೊಳ್ಳಲಾರಿರಿ. ಜೀವನದ ಅಭದ್ರತೆ ನಮ್ಮಂತೆ ನಿಮಗೂ ಕಾಡುತ್ತದೆ. ಯಾಕೆ? ಅಷ್ಟೇ ಯಾಕೆ? ಸ್ವಪ್ನ ಸ್ಖಲನ ನಿಮಗೂ ಆಗಿಲ್ಲವೇನು?. ಆವಾಗ ಸುಂದರ ಸ್ತ್ರೀ ನಿಮ್ಮ ಕನಸಿನಲ್ಲಿಯೂ ಬರಲಿಲ್ಲವೇನು?. ಸ್ಖಲನವಾಗಲಿಲ್ಲ ಎಂದು ನನ್ನ ಬಳಿ ಸುಳ್ಳು ಹೇಳಬೇಡಿ, ಆಗದಿದ್ದರೆ ಅದು ಪ್ರಕೃತಿಗೆ ವಿರುದ್ಧವಾದ ಕ್ರಿಯೆ. ಆವಾಗ ನೀವು ಮುವತ್ತೈದನೇ ವಯಸ್ಸಿನೊಳಗೆ ಇಹಲೋಕ ತ್ಯಜಿಸಲೇಬೇಕಿತ್ತು." ಹೀಗೆ ಮುಂದುವರೆಯುತ್ತಲೇ ಇತ್ತು.
ಸ್ವಾಮೀಜಿಗಳ ಶಿಷ್ಯ ಕೋಠಿ ಒಮ್ಮೆ ಭ್ರಮಿಸಿತಾದರೂ ನಂತರ ಎಚ್ಚೆತ್ತುಕೊಂಡು ಅವನನ್ನು ಹೆಚ್ಚುಕಮ್ಮಿ ಹೊತ್ತುಕೊಂಡು ಆಚೆ ಬಿಟ್ಟಿತು. ಗಣ್ಯ ವ್ಯಕ್ತಿಯಾದ್ದರಿಂದ ಧರ್ಮದೇಟು ಬೀಳಲಿಲ್ಲ, ಸಾರ್ವಜನಿಕರ ದೃಷ್ಟಿಯಲ್ಲಿ ಅವನಿಗೆ ಮಾನಸಿಕ ರೋಗಿಯ ಪಟ್ಟ ದೊರಕುವ ಲಕ್ಷಣ ನಿಚ್ಚಳವಾಗತೊಡಗಿತು.
ಹಾಗಂತ ಅವನೇನು ಹುಚ್ಚನಲ್ಲ, ಮಾನಸಿಕ ರೋಗಿಯೂ ಅಲ್ಲ. ಎಲ್ಲರಂತೆ ಸಾಮಾನ್ಯನೂ ಅಲ್ಲ. ಇಡೀ ತಾಲ್ಲೂಕಿನಲ್ಲಿ ಅವನದ್ದೆ ಆದ ಹೆಸರು ಗಳಿಸಿದ್ದ. ಇಪ್ಪತ್ತು ವರ್ಷಗಳಿಂದ ಹಲವಾರು ಸಂಘಸಂಸ್ಥೆಗಳಲ್ಲಿ, ಮಠ ಮಾನ್ಯಗಳಲ್ಲಿ ದುಡಿದು ಜನನಾಯಕ ಎನಿಸಿಕೊಂಡಿದ್ದ.ಇದೇ ವೇಗದಲ್ಲಿ ಮುನ್ನುಗ್ಗಿದರೆ ಆತ ಶಾಸಕನೂ ಆಗಬಹುದೆಂಬ ಮಾತು ತಾಲ್ಲೂಕಿನಾದ್ಯಂತ ಪ್ರಚಾರದಲ್ಲಿತ್ತು.ನಲವತ್ತರ ಸಣ್ಣ ವಯಸ್ಸಿನಲ್ಲಿ ಅವನಿಗೆ ಸಿಕ್ಕ ಜನಮನ್ನಣೆಗೆ ಹಲವಾರು ಜನರು ಕರುಬುತ್ತಿದ್ದರು. ಆದರೆ ಅಷ್ಟರಲ್ಲಿ ಈ ತರಹದ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕು ಪರಿಹಾರ ಕಾಣದೆ ಮಿಸುಕಾಡುತ್ತಿದ್ದ.
ಮೊದಲ ಬಾರಿ ಈ ರೀತಿ ಅನುಭವವಾದಾಗ ಆತ ಬಹಳ ಜನರ ಪ್ರತಿಭಟನೆ ಎದುರಿಸಬೇಕಾಯಿತು.ಅಡಿಕೆದರದ ಕುಸಿತಕ್ಕೆ ಬೆಂಬಲ ಬೆಲೆ ನೀಡುವುದರ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಭಾಷಣ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಒಂದರ ಹಿಂದೆ ಒಂದರಂತೆ ಆಲೋಚನೆಗಳು ನಿರಂತರವಾಗಿ ಮೂಡಿ ಬರತೊಡಗಿದವು. ಎಲ್ಲವನ್ನೂ ದೊಡ್ಡದಾಗಿ ಕೂಗಿ ಹೇಳಬೇಕೆನಿಸಿತು. ತಲೆ ಸಿಡಿದು ಹೋಗುತ್ತಿರುವ ಅನುಭವ ತಡೆಯಲಾರದೆ
" ಮಹನೀಯರೆ ಅಡಿಕೆಗೆ ಈಗಾಗಲೆ ಇರುವ ದರ ಸಾಕಷ್ಟಿದೆ, ಬೆಲೆ ಹೆಚ್ಚಾದಾಗ ನಾವು ಸರ್ಕಾರಕ್ಕೆ ಕೊಡುವುದಿಲ್ಲ.ಕಡಿಮೆಯಾದಾಗ ಕೇಳಬಾರದು. ಇಷ್ಟಕ್ಕೂ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಡಿಕೆಯಿಂದ ಹಾನಿಯೇ ಹೊರತು ಪ್ರಯೋಜನವಿಲ್ಲ. ಅಡಿಕೆ ತಂಬಾಕಿನೊಂದಿಗೆ ಸೇರಿದ ಕಾರಣಕ್ಕೆ ಅದಕ್ಕೊಂದು ಬೆಲೆ. ಗುಟ್ಕಾದ ಸೇವನೆಯಿಂದ ನಮ್ಮ ಯುವಜನತೆಯ ದೇಹ ರೋಗಗಳ ಗೂಡಾಗುತ್ತಿದೆ. ನಮ್ಮ ಮಕ್ಕಳು ಅಡಿಕೆ ತಿಂದರೆ ಅಡಿಕೆ ಬೆಳೆಗಾರರಾದ ನಾವು ಹೊಡೆಯುತ್ತೇವೆ. ಹಾಗಿದ್ದ ಮೇಲೆ ಬೇರೆಯವರು ತಿಂದು ಹಾಳಾಗಲಿ ಎಂದು ಬಯಸುವುದು ಶುದ್ಧ ತಪ್ಪು.ಇಲ್ಲಿ ಸೇರಿರುವ ಅಡಿಕೆ ಬೆಳೆಗಾರರಲ್ಲಿ ಅವರು ಸ್ವತಃ ಉಪಯೋಗಿಸುವ ಅಡಿಕೆ ಎಷ್ಟು?.ಅವರೇಕೆ ಉಪಯೋಗಿಸುವುದಿಲ್ಲ. ಯೋಚಿಸಿ ಅಡಿಕೆ ತಂಬಾಕುಗಳಂತಹ ಸಮಾಜದ ಆರೋಗ್ಯ ಹಾಳುಮಾಡುವ ಬೆಳೆಗಳನ್ನು ನಿಷೇಧಿಸಬೇಕು. ಆಹಾರ ಪದಾರ್ಥಗಳನ್ನು ಬೆಳೆಯುವ ಭತ್ತದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ಸಹಾಯಧನ ನಿಡಬೇಕು.ಅಡಿಕೆಗೆ ತೆರಿಗೆ ಹಾಕಿ ಆ ಹಣವನ್ನು ಆಹಾರ ಪದಾರ್ಥ ಬೆಳೆಯುವ ರೈತರಿಗೆ ನೀಡಬೇಕು"
ಅವನಿಂದ ಓತಪ್ರೋತವಾಗಿ ಹರಿದುಬರುತ್ತಿತ್ತು. ಅಡಿಕೆಗೆ ಬೆಂಬಲ ನೀಡುವುದಕ್ಕಾಗಿ ಸೇರಿದ್ದ ಸಭೆಯಲ್ಲಿ ಅಡಿಕೆಬೆಳೆಗಾರರೇ ಜಾಸ್ತಿ ಇದ್ದುದರಿಂದ ಅವನನ್ನು ಅಲ್ಲಿಂದ ಆಚೆ ಕರೆದುಕೊಂಡುಹೋಗುವುದಕ್ಕೆ ಪರದಾಟ ಪಡುವಂತಾಯಿತು. ಸಭಿಕರು ಕೈಗೆ ಸಿಕ್ಕ ವಸ್ತುಗಳನ್ನು ಅವನತ್ತ ಎಸೆದರು.ಅದೃಷ್ಟವಶಾತ್ ಅವನಿಗೆ ಅದು ತಗುಲಲಿಲ್ಲ.
ಸಭೆಯಲ್ಲಿ ಅಷ್ಟು ಹೇಳಿದ ನಂತರ ಅವನ ಮನಸ್ಸಿನ ಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ನಂತರ ತನ್ನಿಂದಾದ ಪ್ರಮಾದದ ಅರಿವಾಯಿತು. ತಾನು ಸಭೆಯಲ್ಲಿ ಹೇಳಿದ ಮಾತುಗಳನ್ನು ಒಮ್ಮೆ ಜ್ಞಾಪಿಸಿಕೊಂಡ "ಅರೆ ನಿಜ ತಾನು ಸಭೆಯಲ್ಲಿ ಹೇಳಿದ್ದು ಸತ್ಯ. ಹೇಳಬಾರದ ಸತ್ಯವಲ್ಲ ಆದರೆ ಅಲ್ಲಿ ಅದು ಕಹಿ ಸತ್ಯ. ಇದೊಂದೇ ಕಾರಣದಿಂದ ಅಡಿಕೆ ಬೆಳೆಗಾರರ ವಕ್ರದೃಷ್ಟಿಗೆ ಗುರಿಯಾದೆನಲ್ಲ ಇಪ್ಪತ್ತು ವರ್ಷಗಳ ಶ್ರಮ ಮಣ್ಣುಪಾಲಾಯಿತಲ್ಲ " ಎಂದು ವ್ಯಥೆಪಟ್ಟ.
ನಂತರ ಒಬ್ಬನೆ ಕುಳಿತು ಆ ಕ್ಷಣದ ಯೋಚನೆ ಮಾಡಿದಾಗೆಲ್ಲಾ ಅವನಿಗೆ ಭಯವಾಗುತ್ತಿತ್ತು. ತನ್ನ ನಿಯಂತ್ರಣದಲ್ಲಿಲ್ಲದ ಇದು ಖಾಯಿಲೆಯಾ ಎಂಬ ಚಿಂತೆ ಅವನನ್ನು ಕಾಡಿತು. ಛೆ ತನ್ನಂತ ದೃಢಮನಸ್ಸಿನವನಿಗೆ ಇಪ್ಪತ್ತು ವರ್ಷಗಳಿಂದ ನೂರಾರು ಸ್ವಭಾವದ ಸಾವಿರಾರು ಜನರೊಂದಿಗೆ ವ್ಯವಹರಿಸಿದವನಿಗೆ ಖಾಯಿಲೆ ಅದೂ ಮಾನಸಿಕೆ ಖಾಯಿಲೆ ಸಾಧ್ಯವೆ ಇಲ್ಲ ಎಂದು ಸಮಾಧಾನ ಮಾಡಿಕೊಂಡರೂ ಮರುಕ್ಷಣ ನೆನಪುಗಳು ಕಾಡುತ್ತಿತ್ತು. ಆ ತರಹದ ಯೋಚನೆಗಳು ಸ್ವಲ್ಪ ದಿನ ಕಾಡಿ ನಂತರ ಮಾಯವಾಯಿತು. ಅಷ್ಟರಲ್ಲಿ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರಿಂದ ಜನರೂ ಅದನ್ನು ಮರೆತರು.
ಎರಡನೆ ಸಲ ಹೊಕ್ಕುಳ ಬಳ್ಳಿ ಛಳಕ್ಕೆಂದಾಗ ಆತ ಸ್ವಾಮೀಜಿಗಳೊಂದಿಗೆ ಪ್ರಮುಖವಾದ ವಿಷಯದ ಸಂವಾದದಲ್ಲಿದ್ದ. ಜನರು ಈ ಬಾರಿ ಮಾತ್ರ ಕ್ಷಮಿಸಲಿಲ್ಲ. ಗುರುದ್ರೋಹಿ ಎಂದರು,ಬಹಿಷ್ಕಾರ ಹಾಕುವ ಪ್ರಸ್ತಾಪವೂ ಬಂತು, ಸ್ವಾಮೀಜಿಗಳ ಬಳಿ ನಿಯೋಗವೊಂದು ಹೋಯಿತು. ಅದರ ನೇತ್ರತ್ವವನ್ನು ಅವನ ಏಳ್ಗೆಯನ್ನು ಸಹಿಸಲಾರದವನೊಬ್ಬ ವಹಿಸಿದ್ದ. ಗುರುಗಳಿಗೆ ಹೇಳಬಾರದ್ದನ್ನೆಲ್ಲಾ ಹೇಳಿದ ಆತನ ವರ್ತನೆಯನ್ನು ಖಂಡಿಸಿದರು, ಅವನಿಗೆ ಮಠದಲ್ಲಿ ನೀಡಲಾದ ಹುದ್ದೆಯನ್ನು ವಾಪಾಸುಪಡೆದು ಸಮಾಜದಿಂದ ಆತನನ್ನು ಹೊರಗಟ್ಟುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು. ಆದರೆ ಸ್ವಾಮೀಜಿಗಳು ಮಾತ್ರಾ ಮುಗುಳ್ನಕ್ಕು ನಿಯೋಗದ ಕ್ರಮವನ್ನು ಅನುಷ್ಠಾನಗೊಳಿಸದೆ ಅವರಿಗೆ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು. ಸ್ವಾಮೀಜಿಯ ವರ್ತನೆ ನಿಯೋಗದವರಿಗೆ ಅರ್ಥವಾಗದಿದ್ದರೂ ಸ್ವಾಮಿಜಿಗೆ ಅವನಾಡಿದ ನಗ್ನ ಸತ್ಯದ ಮಹತ್ವ ತಿಳಿದಿತ್ತು.
ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ ಸರಿಯಾದ ಕ್ರಮ ಎಂದು ಪರಿಚಯದವರೊಬ್ಬರು ಸಲಹೆ ಇತ್ತರು. ತಾನು ಮನೋರೋಗಿ ಅಂತ ಸಮಾಜ ಪರಿಗಣಿಸಿಬಿಡಬಹುದೆಂಬ ಭಯ ಇದ್ದರೂ ಸಲಹೆ ತಿರಸ್ಕರಿಸಲು ಆಗದೆ ಒಪ್ಪಿಕೊಂಡ.
ಮರುಕ್ಷಣ ಆತನಿಗೆ ಅನಿಸಿತು. ನನ್ನ ವರ್ತನೆಯಲ್ಲಿ ತಪ್ಪೇನಿದೆ?. ನಾನಾಡಿದ ಮಾತುಗಳು ಪಥ್ಯವಾಗದಿರಬಹುದು ಆದರೆ ಸತ್ಯವಂತೂ ಹೌದು.ಎಷ್ಟೊಂದು ದಿವಸಗಳಿಂದ ನಿಜವಾದ ಪ್ರಪಂಚದ ಕುರಿತು ಮನದೊಳಗೆ ಹೀಗೆಯೇ ಯೋಚಿಸುತ್ತಿರಲಿಲ್ಲವೇ? ಡಂಬಾಚಾರದ ಬಗ್ಗೆ ಚಿಂತಿಸಿರಲಿಲ್ಲವೆ? ಈಗ ಅದನ್ನು ಹೇಳಿಯಾಗಿದೆ ಅಷ್ಟೆ....... ಹೌದು ತಪ್ಪಿದ್ದೇ ಅಲ್ಲಿ "ನ ಬ್ರೂಯಾತ್ ಸತ್ಯಮಪ್ರಿಯಂ" ಹೈ ಸ್ಕೂಲಿನಲ್ಲಿ ಸಂಸ್ಕೃತ ಮೇಷ್ಟು ಹೇಳಿಕೊಟ್ಟ ಶ್ಲೋಕದ ಸಾಲುಗಳು ನೆನಪಾದವು. ಹಾಗಂದಮೇಲೆ ನನ್ನಲ್ಲೇನೋ ದೋಷವಿದೆ ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಮನೋವೈದ್ಯರಬಳಿ ತೆರಳಿದ.
ಈಗ ಬೆಳಿಗ್ಗೆ ಮೂರು ಮಾತ್ರೆಗಳೊಂದಿಗೆ ಅವನ ದಿನಚರಿ ಆರಂಭವಾಗುತ್ತಿತ್ತು ರಾತ್ರಿ ಮೂರು ಮಾತ್ರೆಗಳೊಂದಿಗೆ ಮುಗಿಯುತ್ತಿತ್ತು.ದಿನದ ಹೆಚ್ಚಿನ ಭಾಗ ನಿದ್ರೆಯಲ್ಲಿ ಕಳೆಯುತ್ತಿತ್ತು. ಯೋಚನೆಗಳೆ ಬರುತ್ತಿರಲಿಲ್ಲ ಇನ್ನು ಹೇಳುವುದೆಲ್ಲಿ.ಆದರೆ ಅದೂ ಕೂಡ ಹೆಚ್ಚು ದಿನಗಳ ಕಾಲ ತಡೆಯಲಿಲ್ಲ.
ಮೂರು ತಿಂಗಳ ನಂತರ ಅವನ ತಂದೆಯ ಶ್ರಾಧ್ದದ ದಿನ ಮತ್ತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಈಗ ಮಾತಿನಲ್ಲಿ ಮೊದಲಿನಷ್ಟು ಗಡಸುತನವಿರಲಿಲ್ಲ. ನಿಧಾನವಾದರೂ ಓತಪ್ರೋತವಾಗಿ ಮಾತುಗಳು ಹೊರಬರುತ್ತಿತ್ತು.ಈ ಬಾರಿ ಶ್ರಾದ್ಧ ಮಾಡಿಸಲು ಬಂದ ಪುರೋಹಿತರು ಅವನ ಧಾಳಿಗೆ ತುತ್ತಾಗಿದ್ದರು.
" ನೀವು ಪುರೋಹಿತರುಗಳೆಂದರೆ ದೇವರ ಏಜೆಂಟರಾ? "ಮಾತೃ ದೇವೋಭವ ಪಿತೃ ದೇವೋ ಭವ" ಎಂದು ಆಶೀರ್ವದಿಸುವ ನೀವು ನಿಮ್ಮ ತಂದೆತಾಯಿಂದರನ್ನು ಕಾಲಿನ ಕಸಕ್ಕಿಂತ ಕಡೆಗಾಣಿಸುವುದೇಕೆ. ನೀವೇನೂ ವೇದ ಓದಿಲ್ಲವಾ ,ಅಥವಾ ವೇದದಲ್ಲಿಯೂ ಹಾಗೆ ಇದೆಯಾ, ನಿಮ್ಮ ಹತ್ತಿರ ಆಚರಣೆ ಮಾಡಲಾಗದ್ದನ್ನು ಅದೇಕೆ ಬೇರೆಯವರಿಗೆ ಹೇಳುತ್ತೀರಿ?. ನಾನು ದುಡ್ದು ಕೊಟ್ಟರೆ ನಿಮ್ಮ ಶಾಸ್ತ್ರ ಬೇಕಾದ ಹಾಗೆ ಬದಲಾಗುತ್ತದೆಯಲ್ಲವೆ. ನಿಮ್ಮ ಶಿಷ್ಯ ಸಮೂಹಕ್ಕೆ ಖಾಯಿಲೆ ಬಂದಾಗ ಮೃತ್ಯುಂಜಯ ಹವನ ಮಾಡಿಸಿ ಎನ್ನುವ ನೀವು ನಿಮಗೆ ಖಾಯಿಲೆ ಬಂದಾಗ ಡಾಕ್ಟರ ಬಳಿ ಓಡುವುದೇಕೆ?.ಇವೆಲ್ಲಾ ಅಮಾಯಕರನ್ನು ನಂಬಿಸಿ ಮಾಡುವ ಸುಲಿಗೆಯಲ್ಲವೆ?. ಅದು ಕಲ್ಲೆಂದು ನಿಮಗೆ ಗೊತ್ತಿದ್ದೂ ಜನರ ಬಳಿ ಸುಳ್ಳು ಹೇಳುವುದೇಕೆ?. ನೀವು ನಂಬದೆ ಪರರನ್ನು ನಂಬಿಸಿ ಹಣ ಕೀಳುವುದಕ್ಕಿಂತ ದರೋಡೆ ಮಾಡಿ"
ಆವತ್ತು ಶ್ರಾದ್ಧ ನಡೆಯಲಿಲ್ಲ. ಪುರೋಹಿತರು ಸಿಟಗೊಂಡು ಹೋದಮೇಲೆ ಶ್ರಾಧ್ದ ಮಾಡಿಸಲು ಮತ್ಯಾರೂ ಸಿಗಲಿಲ್ಲ. ಮನೆಯವರೆಲ್ಲಾ ಖಂಡಿತಾ ಏನೋ ಅನಾಹುತ ಆಗುತ್ತದೆ ಎಂದು ಕಾದರು ಆದರೆ ಏನೂ ಆಗಲಿಲ್ಲ. ಕಡುಬು ಕಜ್ಜಾಯಗಳನ್ನು ಕಾಗೆಗೆ ಹಾಕಿದರು,ಗೋಗ್ರಾಸ ನೀಡಿದರು ಮತ್ತು ಎಲ್ಲರೂ ರಾತ್ರಿ ಊಟ ಮಾಡಿದರು. ಪ್ರತಿನಿತ್ಯದಂತೆ ಸೂರ್ಯಮುಳುಗಿದ ಹಾಗು ಕತ್ತಲಾಯಿತು.
ಆದರೆ ಅವನಿಗೆ ತನ್ನ ಪರಿಸ್ಥಿತಿ ಕಂಡು ಮರುಗುವಂತಾಯಿತು. ತನಗೆ ಶ್ರಾದ್ಧ ಮಾಡು ಅಂತೇನು ಪುರೋಹಿತರು ಹೇಳಿರಲಿಲ್ಲ. ತಾನಾಗಿಯೇ ಅವರನ್ನು ಮನೆಗೆ ಕರೆದು ಅವಮಾನ ಮಾಡಿದೆನಲ್ಲಾ ಎಂಬ ಕೊರಗು ಕಾಡಲು ಶುರುವಾಯಿತು. ಜನರು ಅವರಾಗಿಯೇ ಇಷ್ಟಪಡುವುದರಿಂದ, ಹಾಗು ಅದರಿಂದ ಮಾನಸಿಕ ನೆಮ್ಮದಿ ಹೊಂದುವುದರಿಂದ ತಾನೆ ಪುರೋಹಿತರು ಕಾರ್ಯಕ್ರಮ ಮಾಡಿಸುವುದು. ಜನರು ಕರೆಯದಿದ್ದರೆ ಅವರೇಕೆ ಬರುತ್ತಾರೆ? ಇದರಲ್ಲಿ ಪುರೋಹಿತರ ತಪ್ಪೇನಿದೆ?. ನಿಜ ಅವೆಲ್ಲಾ ತಾನು ಹೇಳಬಾರದಿತ್ತು. ಇಷ್ಟು ವರ್ಷಗಳ ಕಾಲ ಇವೆಲ್ಲಾ ಗೊತ್ತಿದ್ದೂ ಹೇಳಿರಲಿಲ್ಲ. ಈಗ ಇದು ತನ್ನ ಕೈಮೀರಿದ ನಡವಳಿಕೆ ಆದರೆ ತನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲವಲ್ಲ?. ರಾತ್ರಿಯೆಲ್ಲಾ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಆದರೆ ಕಾಲಮಿಂಚಿತ್ತು, ಹೇಳಬಾರದ ಅಂತರಂಗದ ಸಂಗತಿ ಎಲ್ಲಾ ಹೇಳಿಯಾಗಿತ್ತು.
ಅವನು ಈ ಬಾರಿ ಪುರೋಹಿತರನ್ನು ಕರೆದು ಅವಮಾನ ಮಾಡಿದ್ದರಿಂದ ಬಹಳಷ್ಟು ಜನರ ವಿರೋಧ ಎದುರಿಸಬೇಕಾಯಿತು. ಕೆಲವರಂತೂ ಅವನಿಗೆ ಹೊಡೆದರೆ ಸರಿಯಾಗುತ್ತದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಧರ್ಮ ವಿರೋಧಿ, ಊರಿಗೆ ಮಾರಿ ಎಂಬ ತೀರ್ಮಾನದ ಠರಾವು ಹೊರಟಿತು.ಅವನು ಕಟ್ಟಿ ಬೆಳಸಿದ ಸಂಘ ಸಂಸ್ಥೆಗಳು ಯಾವುದೂ ಅವನ ಸಹಾಯಕ್ಕೆ ಬರಲಿಲ್ಲ. ಅವನು ಸಂಘದ ಅಧ್ಯಕ್ಷನಾಗಿದ್ದಾಗ ಕೆಲವರ ಅವ್ಯವಹಾರವನ್ನು ಹೊರಹಾಕಿದ್ದ ಅವರೆಲ್ಲಾ ಈಗ ಒಂದಾದರು. ಹಾಗೆಯೇ ಅವನು ಬಹಳಷ್ಟು ಜನರ ಬಾಳಿಗೆ ಬೆಳಕಾಗಿದ್ದ ಅವರೆಲ್ಲಾ ಸುಮ್ಮನುಳಿದರು.
ಊರಿನಲ್ಲಿ ಒಂದು ಸಭೆ ಕರೆಯಲಾಯಿತು ಅದರ ನೇತೃತ್ವವನ್ನು ಅವನಿಂದ ಸೋಲುಂಡವರು ವಹಿಸಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಚರ್ಚೆಗಳಾಗಿ ಅವನಿಲ್ಲದಾಗ ಅವನ ಮೇಲಿನ ಸೇಡನ್ನು ನಾಲಿಗೆಯ ತೀಟೆಯನ್ನು ಎಲ್ಲರೂ ತೀರಿಸಿಕೊಂಡರು. ಮಠದ ಗುರುಗಳಿಗೆ ಬಿಡುವಿನ ದಿನ ಊರಿಗೆ ಕರೆಯಿಸಿ ಪಾದಪೂಜೆ ಮಾಡಿ ನಂತರ ಧರ್ಮಭೃಷ್ಟನಾದ ಅವನನ್ನು ಜಾತಿಯಿಂದ ಬಹಿಷ್ಕಾರ ಹಾಕಿಸುವುದು ಮತ್ತು ಅವನ ಕುಟುಂಬದ ಜತೆ ಸಮಾಜ ಭಾಂಧವರೆಲ್ಲಾ ಸಂಪರ್ಕ ಕಡಿದುಕೊಳ್ಳುವುದು.ಎಂಬ ಅಂತಿಮ ತೀರ್ಪು ಹೊರಬಿತ್ತು. ಗುರುಪೀಠದ ಆಗಮನಕ್ಕೆ ದಿನಾಂಕ ಗೊತ್ತುಪಡಿಸಲು ನಿಯೋಗವೊಂದನ್ನು ಕಳುಹಿಸುವ ತೀರ್ಮಾನವನ್ನು ತೆಗೆದುಕೊಂಡು ಸಭೆ ವಿಸರ್ಜನೆಯಾಯಿತು.
ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ ಕೊಡದವರೂ ಅಲ್ಲಿದ್ದರು.
ಜನರಲ್ಲಿ ದುಗುಡ ತುಂಬಿತ್ತು. ಒಂದಿಷ್ಟು ಜನರಿಗೆ ಅಂತರಾಳದಲ್ಲಿ ತಡೆಯಲಾರದ ಖುಷಿ ಹೊರಗಡೆ ನಡೆಯಬಾರದ ಅನಾಹುತ ನಡೆಯುತ್ತದೆ ಎಂಬ ಮುಖಭಾವವನ್ನು ತಂದುಕೊಳ್ಳಲು ಹರಸಾಹಸ ಪಡುತ್ತಿದ್ದರು.ಅಷ್ಟರಲ್ಲಿ ಅವನಿಗೆ ಹೊಕ್ಕುಳ ಬಳ್ಳಿ ಛಳಕ್ಕೆಂತು.
"ಇಲ್ಲಿ ಸೇರಿರುವವರೆಲ್ಲಾ ಭಕ್ತರೂ ಅಲ್ಲ, ಇವರಲ್ಲಿ ಭಕ್ತಿಯೂ ಇಲ್ಲ. ಎಲ್ಲರೂ ಪರಮ ಸ್ವಾರ್ಥಿಗಳು ಮತ್ತು ಪರಮ ಲೋಭಿಗಳು. ತಮಗೆ ಒಳ್ಳೆಯದಾಗಲಿ ಎಂದು ಗುರುಗಳ ಮಂತ್ರಾಕ್ಷತೆ ಪಡೆಯಲು ಬಂದವರು. ದಿನನಿತ್ಯ ಧರ್ಮ ವಿರೋಧಿ ಚಟುವಟಿಕೆ ಇವರ ಜೀವನ. ಸ್ವಾಮೀಜಿಗಳೆದುರಿಗೆ ಕೈಮುಗಿದು ನಾಟಕವಾಡುವ ಇವರು ನಂತರ ನಡೆ ನುಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಠವನ್ನು ದೂಷಿಸುತ್ತಾರೆ. ಹಣದ ವಿಚಾರದಲ್ಲಿ ದಾಹಿಗಳು. ಇವತ್ತು ಇವರು ಈ ಪರಿ ಸೇರಿದ್ದು ಭಕ್ತಿಯಿಂದಲ್ಲ ಈ ಪರಿಸ್ಥಿತಿಯ ಲಾಭ ತನಗೆಷ್ಟು ಎಂದು ನೋಡಲು ಬಂದವರು......ಒಳ್ಳೆಯ ಕಾರ್ಯಕ್ಕೆ ಹತ್ತು ಜನ ಸೇರಿಸಲು ನಾನು ಪಾಡು ಪಟ್ಟಿದ್ದೇನೆ ಆದರೆ ಇಂದು..ನೋಡಿ......"
ಸಭೆಯಲ್ಲಿ ಗದ್ದಲ ಶುರುವಾಯಿತು. ಒಬ್ಬರು ಆತನಿಗೆ ಹೊಡೆಯಿರಿ ಎಂದರೆ ಮತ್ತೊಬ್ಬರು ಬಡಿಯಿರಿ ಎನ್ನುತ್ತಿದ್ದರು. ಆತನಿಗೆ ದೇಶದಿಂದಲೇ ಓಡಿಸಬೇಕು ಎನ್ನುತ್ತಿದ್ದರು ಮಗದೊಬ್ಬರು. ಗುರುಗಳು ಇಲ್ಲದಿದ್ದರೆ ಅವನ ಕಥೆ ನೋಡಬೇಕಿತ್ತು ಎನ್ನುತ್ತಿದ್ದ ಇನ್ನೊಬ್ಬ. ಆಶ್ಚರ್ಯವೆಂದರೆ ಹಾಗೆ ಹೇಳುತ್ತಿದ್ದಾತ ಆ
ದಿನದವರೆಗೂ ಪಕ್ಕಾ ನಾಸ್ತಿಕನಾಗಿದ್ದ ಮಠ ಸ್ವಾಮೀಜಿಗಳನ್ನು ಆತ ತಾನು ಮಾನ್ಯಮಾಡುವುದಿಲ್ಲ ಅದು ಸೋಮಾರಿಗಳ ಸಂತೆ ಎನ್ನುತ್ತಿದ್ದ.
ಇಷ್ಟು ಗಲಭೆ ಗಲಾಟೆಗಳಾಗುತ್ತಿದ್ದರೂ ಸ್ವಾಮೀಜಿಗಳು ಮಾತ್ರ ಮುಗುಳ್ನಗುತ್ತಿದ್ದರು. ಅವರ ಈ ವರ್ತನೆ ಅವನ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸ್ವಾಮೀಜಿಗಳ ಸಹಾನುಭೂತಿ ಅವನೆಡೆಗೆ ಬಿದ್ದರೆ ಕಷ್ಟ ಎಂಬ ಚಿಂತೆ ಕಾಡುತ್ತಿತ್ತು. ಸ್ವಾಮಿಜಿಗೆ ಅವನ ಬಗ್ಗೆ ಸರಿಯಾಗಿ ಹೇಳಿದ್ದೀರಾ ಬಹಿಷ್ಕಾರ ಖಂಡಿತಾ ತಾನೆ, ಎಂದು ನಿಯೋಗದವರೊಡನೆ ಗುಸುಗುಸು ಪಿಸ ಪಿಸ ಮಾಡುತ್ತಿದ್ದರು. ಅವರಲ್ಲೊಬ್ಬನಿಗೆ ತಡೆಯದಾಯಿತು. ಪೀಠದ ಬಳಿ ಹೋಗಿ ತಾನು ಹೊದೆದ ಶಲ್ಯವನ್ನು ತನ್ನ ಬಾಯಿಗೆ ಅಡ್ಡ ಹಿಡಿದು " ಅವನಿಗೆ ಬಹಿಷ್ಕಾರ ಹಾಕಲು ಇದು ಸರಿಯಾದ ಸಮಯ ನಿರ್ಣಯ ಕೊಡಿ ಎಂದ". ಸ್ವಾಮೀಜಿಗಳು ನಿಧಾನವಾಗಿ ಪೀಠದಿಂದ ಮೇಲೆದ್ದರು
ಸಭೆ ಒಮ್ಮೆಲೆ ಸ್ತಬ್ದವಾಯಿತು. ಇಷ್ಟು ಹೊತ್ತು ಸಭೆಯ ಗಲಾಟೆಯಿಂದ ಅವನ ಮಾತುಗಳು ಯಾರಿಗೂ ಕೇಳುತ್ತಿರಲಿಲ್ಲ. ಈಗ ಮತ್ತೆ ಆವನ ಮಾತುಗಳು ಎಲ್ಲರಿಗೂ ಕೇಳಲಾರಂಬಿಸಿತು.
"ಓ ಅಲ್ಲಿದಾರರಲ್ಲ ಅವರು ಇಷ್ಟು ದಿವಸ ಮಠವನ್ನು ವಿರೋಧಿಸುತ್ತಿದ್ದವರು, ಒಂದು ರೂಪಾಯಿ ದೇಣಿಗೆ ಕೊಟ್ಟವರಲ್ಲ, ಇವತ್ತು ಬಂದಿದ್ದು ಸ್ವಾರ್ಥಕ್ಕೆ, ಸಮಾಜವನ್ನು ಒಡೆಯಲು ಅವರ ಕಾಣಿಕೆ ಬಹಳ,ಅವರು ಹಿಂಸಾವಿನೋದಿಗಳು, ಮತ್ತೊಬ್ಬರಿಗೆ ತೊಂದರೆಯಾಗುತ್ತದೆಯಾದರೆ ಬೆಳಿಗ್ಗೆವರೆಗೂ ಸಭೆ ನಡೆಸುವ ಕುತ್ಸಿತ ಮನಸ್ಸಿನವರು. ಧರ್ಮ ದೇವರು ಎಲ್ಲಾ ಸುಳ್ಳು, ನೈತಿಕತೆ,ಸತ್ಯ ನ್ಯಾಯ ಎಲ್ಲಾ ಅನುಕೂಲಸಿಂಧು ಕಾರ್ಯಕ್ರಮಗಳು.ದುಡ್ಡು ಸಿಗುತ್ತದೆಯೆಂದರೆ ಧರ್ಮವನ್ನು ದೇವರನ್ನೂ,ನ್ಯಾಯ ನೀತಿಯನ್ನೂ ಧಿಕ್ಕರಿಸುವ ಜನರು...."
ಕೆಲವರು ಧರ್ಮನಿಂದನೆ ಎಂದು ಕಿವಿ ಮುಚ್ಚಿಕೊಂಡರು. ಹಲವರು ಖುಷಿಪಡುತ್ತಿದ್ದರು. ಕಾರಣ ಕುರಿ ಕೊಬ್ಬಿದಷ್ಟು ಕಟುಕನಿಗೆ .....
ಇಷ್ಟೆಲ್ಲಾ ನಡೆದರೂ ಸ್ವಾಮೀಜಿಗಳ ಮುಖದಲ್ಲಿ ಮಂದಹಾಸವಿತ್ತು. ಕರಂಡಿಕೆಗೆ ಕೈಹಾಕಿ ಶ್ರೀಗಂಧವನ್ನು ತೆಗೆದುಕೊಂಡು ನಿಧಾನ ಅವನ ಬಳಿ ಹೋಗಿ ಮೂಗಿನ ಮೇಲೆ ದಪ್ಪನೆಯ ಒಂದು ಶ್ರೀಗಂಧದ ನಾಮ ಹಾಕಿದರು.
ತಕ್ಷಣ ಆತನ ಮಾತುಗಳು ನಿಂತವು. ಅವನ ಕಣ್ಣುಗಳಿಂದ ದಳದಳನೆ ನೀರು ಇಳಿದು ಬರತೊಡಗಿತು. ಅವನು ನಿಧಾನವಾಗಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ವಾಮೀಜಿಗಳತ್ತ ಧನ್ಯತಾಭಾವದ ನೋಟದೊಂದಿಗೆ ಕುಸಿದು ಕುಳಿತ.
ಅದ್ಬುತವನ್ನು ಕಣ್ಣಾರೆ ಕಂಡ ಭಕ್ತಾಧಿಗಳು ಹರ್ಷೋದ್ಗಾರ ಹಾಕಿದರು. ಕಲಿಯುಗದಲ್ಲಿ ಅವತರಿಸಿದ ಪರಮಾತ್ಮ ಎಂದು ಸ್ವಾಮೀಜಿಗಳೆದುರು ಕೈಮುಗಿದು ನಿಂತರು.ಇದೆಲ್ಲಾ ಸಹಜವೆಂಬಂತೆ ಸ್ವಾಮಿಜಿ ಭಕ್ತರಿಗೆ ಮಂತ್ರಾಕ್ಷತೆ ನೀಡತೊಡಗಿದರು
ಅವನ ವಿರೋಧಿಗಳಿಗೆ ಸ್ವಾಮೀಜಿಯ ಈ ವರ್ತನೆ ಅಷ್ಟೊಂದು ಸಹ್ಯವಾಗಲಿಲ್ಲ. ತಾತ್ಕಾಲಿಕವಾಗಿ ಆಸ್ತಿಕರಾಗಿದ್ದವರು ಮತ್ತೆ ತಮ್ಮ ಮೂಲ ತತ್ವವಾದ ಮಠವಿರೋಧಿ ನಿಲುವಿಗೆ ಮರಳಿದರು.
ಸ್ವಾಮೀಜಿಗಳ ಕಾರು ಧೂಳೆಬ್ಬಿಸುತ್ತಾ ಮಾಯವಾಯಿತು.
ಅವನಿಗೆ ಜೀವನದಲ್ಲಿ ಮತ್ತೆಂದೂ ಹೊಕ್ಕಳಬಳ್ಳಿ ಛಳಕ್ಕೆನ್ನಲಿಲ್ಲ ಹಾಗು ಆನಂತರ ಮಠದ ಕೆಲಸಗಳಿಗೆ ತನ್ನನ್ನು ಇನ್ನೂ ಹೆಚ್ಚು ತೊಡಗಿಸಿಕೊಂಡು ಪುನೀತನಾದ.
***************
ಇವೆಲ್ಲ ಘಟನೆಗಳ ನಡುವೆ ಶ್ರೀಗಂಧದೊಂದಿಗೆ ಸೂಜಿಮೆಣಸಿನ ಪುಡಿ ಬೆರಸಿ ಅವನ ಮೂಗಿನ ಮೆಲೆ ಹಚ್ಚಿ ಅವನ ಮನಸ್ಸಿನ ಒತ್ತಡವನ್ನು ದೇಹದ ಉರಿಯತ್ತ ಹೊರಳಿಸಿ ಯಶಸ್ವಿಯಾದ ಸ್ವಾಮೀಜಿಯ ತಂತ್ರ, ಶ್ರೀಗಂಧಕ್ಕೆ ಮೆಣಸಿನಪುಡಿ ಬೆರಸಿದ ಗಿಂಡಿಮಾಣಿಯ ಹೊರತಾಗಿ ಯಾರಿಗೂ ತಿಳಿಯಲಿಲ್ಲ.