Friday, October 23, 2009
ನಾಯಿಯ ದ್ವೇಷ ೧೨ ವರುಷ .....!
Thursday, October 22, 2009
ಹೀಡತ್ತರಿಗಿಣ ತಾಗಿಣ ತಾ....
ಅಂತ ಹೇಳಿದರೆಂದರೆ ಕೋಲಾಟ ಮುಗಿಯಿತು ಅಂತ ಅರ್ಥ. ದೀಪಾವಳಿಯ ನಂತರ ನಾಲ್ಕುದಿನಗಳ ಕಾಲ ನಮ್ಮೂರ ಹುಡುಗರ ತಂಡ ಎಲ್ಲರ ಮನೆಯಂಗಳಕೆ ಹೋಗಿ ಕೋಲಾಟದ ಮನರಂಜನೆಯನ್ನು ನೀಡುತ್ತದೆ. "ನಗರಾ ಪಟ್ಟಣದಲ್ಲಿ ನಖನೆಂಬ ಗೊಲ್ಲ.....ಕುರಿಕಾಯಕೋಗಿ ಕುರಿ ಕದನಲ್ಲ" , " ನಮ್ಮೂರ ಗಣಪತಿ ಮುಂದೇನು ತಿರುಪತಿ" ಎಂಬಂತಹ ಸ್ವರಚಿತ ಹಾಡನ್ನು ಹಾಡುತ್ತಾ ಟಕ ಟಕ ಕೋಲು ಸದ್ದು ಮಾಡುತ್ತಾ ಸುತ್ತ ತಿರುಗುತ್ತಾ ಕೋಲಾಟ ಒಳ್ಳೆಯ ಮನರಂಜನೆ. ರೂಪಾಯಿ ಕಾಯಿನ್ ನೆಲದ ಮೇಲೆ ಹಾಕಿದರೆ ಕೋಲಾಡುತ್ತಲೇ ಬಗ್ಗಿ ಹಣೆಯಿಂದ ಕಾಯಿನ್ ಹೆಕ್ಕುವುದು, ಕಾಲಿನ ಬೆರಳಿನಲ್ಲಿ ಕಾಯಿನ್ ಆರಿಸಿಕೊಳ್ಳವುದು ನೋಡುವುದೇ ಮಜ. ಈ ಕಾಯಿನ್ ಹೆಕ್ಕುವ ಭರಾಟೆಯಲ್ಲಿ ಕೋಲಾಟದ ಕೋಲು ವ್ಯತ್ಯಯ ಆಗುವಂತಿಲ್ಲ. ಹಾಗೇನಾದರೂ ಆದರೆ ಮತ್ತೊಂದು ಕೋಲಾಟ ಉಚಿತ.
ಹೋಳಿಗೆ ಕಾಯಿ ಒಂದಿಷ್ಟು ಹಣ ಸಂಭಾವನೆ ಲೆಕ್ಕದಲ್ಲಿ ಸಂದಾಯ ಮಾಡಿದರೆ ಪುಲ್ ಕುಷ್ ಹುಡುಗರು. ಹೀಗೊಂದು ಹಬ್ಬದ ಇಲಾಡಿಯ ಕೋಲಾಟದ ಪದ್ದತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವಕಾಶ ಸಿಕ್ಕಾಗ ನೀವೂ ನೋಡಿ
ಈಗ ಫೊಟೋ ನೋಡಿ ಬಾಯ್ ಬಾಯ್
Saturday, October 17, 2009
ದೀಪದಿಂದ ದೀಪ ಹಚ್ಚೇ ದೀಪಾವಳಿ ಎಂಬ ದೊಡ್ಡ ಹಬ್ಬ.
ಬೆಳಕಿನ ಹಬ್ಬ ದೀಪಾವಳಿ ನಮ್ಮ ಮನೆಯಲ್ಲಿ ಬೂರೆ ನೀರು ತುಂಬುವುದರೊಂದಿಗೆ ಆರಂಭವಾಗುತ್ತದೆ. ಬಾವಿಯಿಂದ ಒಂದು ಬಿಂದಿಗೆ ನೀರನ್ನು ಎತ್ತುವ ಅಮ್ಮ ಘನಗಂಭೀರ ಮುಖಾರವಿಂದ ದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಪೂಜೆ ಮಾಡುತ್ತಾಳೆ. ಆರತಿ ಪ್ರಸಾದದ ನಂತರ ಬಿಂದಿಗೆ ನೀರು ಹೊತ್ತು ಮನೆಯನ್ನು ಒಂದು ಸುತ್ತು ಹಾಕಿ ಜಗುಲಿಯ ಬಾಗಿಲ ಮೂಲಕ ದೇವರ ಮನೆಗೆ ಬರುತ್ತದೆ. ಅಲ್ಲಿ ಅಪ್ಪಯ್ಯನ "ರುದ್ರ"....!( ಹೇಳುತ್ತಾ) ಪೂಜೆ ನಡೆಯುತ್ತಿರುತ್ತದೆ. ಅಲ್ಲಿಗೆ ಅಮ್ಮನ ಮೂಲಕ ಬಂದ ಗಂಗೆ ದೇವರ ಪೀಠವನ್ನಲಂಕರಿಸುತ್ತದೆ. ಸಂಜೆ ಬೆಳ್ಳಿ ಚೊಂಬಿನ ಬಲಿಯೇಂದ್ರನಿಗೆ ಅದೇ ನೀರು. ನಾಳೆ ರಾತ್ರಿ ಹಬ್ಬಕ್ಕೆ ಕಕ್ಕಡದೊಂದಿಗೆ ವಿದಾಯ.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
Tuesday, October 13, 2009
ನಮ್ಮ ಪೆಜತ್ತಾಯರ ಕಾಗದದ ದೋಣಿ ಮತ್ತು ಬೇಳೂರು ಸುದರ್ಶನರ ಮಾತು
ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!
ಮೂರು ವಾರಗಳ ಹಿಂದೆ ಮಿಂಚಂಚೆ ಮೂಲಕ, ಆಮೇಲೆ ದೂರವಾಣಿ ಮೂಲಕ ಪರಿಚಯವಾದ ಎಸ್ ಎಂ ಪೆಜತ್ತಾಯ ಇಂಥ ಮಾತುಗಳನ್ನು ಚಾಚೂ ತಪ್ಪದೆ ತಮ್ಮ ಜೀವನದ ಉದ್ದಕ್ಕೂ ಆಚರಿಸುತ್ತಿರುವ ಕೆಲವೇ ಚೇತನಗಳಲ್ಲಿ ಒಬ್ಬರು ಎಂದು ನನಗೆ ಅನ್ನಿಸಿದ್ದು ಅವರು ಪ್ರೀತಿಯಿಂದ ಕಳಿಸಿದ `ಕಾಗದದ ದೋಣಿ’ ಪುಸ್ತಕವನ್ನು ಓದಿದಾಗ.
ಅನನ್ಯ ಜೀವನಾನುಭವದ ನೆನಪಿನ ಬುತ್ತಿ ಎಂಬ ವಿಶೇಷಣಗಳನ್ನು ಹೊತ್ತು ತಂದ ಮುಖಪುಟವನ್ನು ಬದಿಗೆ ಸರಿಸಿಂ ಓದಿದರೂನೂ ಅವರ ಜೀವನಪ್ರೀತಿಯನ್ನು ಎಲ್ಲ ಪುಟಗಳಲ್ಲಿ ಕಾಣಬಹುದು. ನಿಜಕ್ಕೂ ಅನನ್ಯ ಜೀವನ ಎಂದು ಒಪ್ಪಿಕೊಳ್ಳಬಹುದು!
ಈ ಪುಸ್ತಕದಲ್ಲಿ ಇರುವುದೆಲ್ಲ ಅವರ ಜೀವನದಲ್ಲಿ ನಡೆದ ಹಲವು ಘಟನೆಗಳು; ಅವರು ಕಂಡ ಹಲವು ವ್ಯಕ್ತಿತ್ವಗಳು. ೨೮೩ ಪುಟಗಳಲ್ಲಿ ಹರಡಿರುವ ಈ ೫೫ ಕಥೆಗಳು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಕಥೆಗಳು. ಕೆಲವು ವೈಯಕ್ತಿಕ ಘಟನೆಗಳ ನಿರೂಪಣೆಯಾಗಿದ್ದರೆ, ಕೆಲವು ಅವರು ಕಂಡ ವ್ಯಕ್ತಿತ್ವಗಳ ಪರಿಚಯ, ಯಾವುದಕ್ಕೂ ಅಂಥ ವಿಶೇಷಣಗಳೇನೂ ಇಲ್ಲ. ಮೊದಲು ಆತ್ಮಕಥೆಯಂತೆ ಆರಂಭವಾಗುವ ಈ ಪುಸ್ತಕ ಕೊನೆಗೆ ಬದುಕಿನ ಹಲವು ಅನುಭವಗಳನ್ನು ಕಟ್ಟಿಕೊಡುವ ಸಾಮಾಜಿಕ ದಾಖಲೆಯಾಗಿ ಪರಿವರ್ತಿತವಾಗುತ್ತವೆ. ಪೆಜತ್ತಾಯರು ಬಾಲ್ಯದಲ್ಲಿ ಅನುಭವಿಸುತ್ತಿದ್ದ ಬೇಸಗೆ ರಜಾಕಾಲದ ಅನುಭವದಿಂದ ಆರಂಭವಾಗುವ ಈ ಪುಸ್ತಕ `ನನಗೂ ಹೃದಯದ ಶಸ್ತ್ರಚಿಕಿತ್ಸೆ ಆಯಿತು’ ಎಂಬ ಖಾಸಗಿ ಬ್ಲಾಗ್ನೊಂದಿಗೆ ಮುಗಿಯುತ್ತದೆ. ತಮ್ಮ ಮಒದಲ ಲೇಖನದಲ್ಲಿ `ಯಾವ ಊರಿಗೂ ಹೋಗದೆ, ಯಾವ ಸಮ್ಮರ್ ಕ್ಯಾಂಪಿಗೂ ಹೋಗದೆ ಬೇಸಗೆ ರಜಾ ಕಳೆಯುತ್ತಿದ್ದ’ ಪೆಜತ್ತಾಯರು ಬದುಕಿನ ಹಲವು ಮಜಲುಗಳನ್ನು ದಾಟಿದ ಮೇಲೆ `ಪಥ್ಯದ ಆಹಾರ ಸೇವನೆ ಮತ್ತು ಡಾಕ್ಟರುಗಳು ಹೇಳಿದಷ್ಟು ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾ, ನಾನು ನನ್ನ ಮುಂದಿನ ಜೀವಿತವನ್ನು ಕಳೆಯುವ ನಿರ್ಧಾರ ಮಾಡಿದ್ದೇನೆ’ ಎಂಬ ಹೇಳಿಕೆಯೊಂದಿಗೆ ಪುಸ್ತಕವನ್ನು ಮುಗಿಸಿದ್ದಾರೆ. ಬದುಕು ಎಷ್ಟೆಲ್ಲ ಕಲಿಸುತ್ತದೆ ಅಲ್ಲವೆ?
ದಕ್ಷಿಣ ಕನ್ನಡದಲ್ಲಿ ಹುಟ್ಟಿ ಚಿಕ್ಕಮಗಳೂರಿನಲ್ಲಿ ಕೃಷಿ ಮಾಡಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀನಿವಾಸ ಮಧುಸೂಧನ ಪೆಜತ್ತಾಯರದು ಸ್ನೇಹಪ್ರಿಯ ವ್ಯಕ್ತಿತ್ವ. ಆದ್ದರಿಂದಲೇ ಅವರಿಗೆ ಬಾಲ್ಯದಿಂದಲೂ ಹಲವು ಹಿರಿಯ ಗೆಳೆಯರು ಸಿಕ್ಕಿದ್ದಾರೆ; ಅವರಿಗೆ ಬದುಕಿನ ಪಾಠ ಕಲಿಸಿದ್ದಾರೆ. ಸಾಮಾನ್ಯವಾಗಿ ಈ ಎಲ್ಲ ಪ್ರಬಂಧಗಳಲ್ಲೂ ಅವರು ಅತ್ಯಂತ ಮುಕ್ತ ಮನಸ್ಸಿನಿಂದ ತಾವು ಕಲಿತ ಸಂಗತಿಗಳನ್ನು ಪಟ್ಟಿ ಮಾಡಿ, ಕಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಎಲ್ಲೂ ಆಧುನಿಕ ಸಾಹಿತ್ಯದ ಕ್ಲೀಷೆಗಳನ್ನು ಬಳಸದೆ, ತಮಗೆ ಬಂದ ಭಾಷೆಯಲ್ಲಿ ಸರಳವಾಗಿ ಕಥೆ ಹೇಳಿದ್ದರಿಂದಲೇ ಪೆಜತ್ತಾಯ ಅದ್ಭುತ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ಅನುಭವ ಅವರನ್ನು ಮಾಗಿಸಿದೆ. ಉತ್ಪ್ರೇಕ್ಷೆ ಇಲ್ಲದ, ವಿಶೇಷಣಗಳಿಲ್ಲದ, ಈ ಕಥೆಗಳಲ್ಲಿ ಪೆಜತ್ತಾಯರು ಕಂಡ ದೃಶ್ಯಗಳಿವೆ. ಅನುಭವಗಳನ್ನು ಇಷ್ಟು ಸರಳವಾಗಿ ಬರೆಯಬಹುದೇ ಎಂಬುದಕ್ಕೆ ಈ ಪುಸ್ತಕ ಒಂದು ಮಾದರಿಯಾಗಿದೆ.
ಈ ಪುಸ್ತಕವನ್ನು ಓದುವಾಗ ನನಗೆ ಫಕ್ಕನೆ ನೆನಪಾಗಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಯವರ `ಮರೆಯಲಾದೀತೇ?’ ಪುಸ್ತಕ. ಅಲ್ಲೂ ವ್ಯಕ್ತಿಚಿತ್ರಣಗಳಿವೆ. ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಅನುಭಾವಿಗಳನ್ನು ಕುರಿತ ಅನುಭವದ ಲೇಖನಗಳಿವೆ. ಇಲ್ಲಿ ಪೆಜತ್ತಾಯರು ಅಲೌಕಿಕವಾದದ್ದೇನನ್ನೂ ಹೇಳುವುದಿಲ್ಲ. ಅವರು ಎಲ್ಲವನ್ನೂ ಹೇಳಿದ ಮೇಲೆ ಈ ಬದುಕು ಎಷ್ಟೆಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ ಎಂಬ ಭಾವ ಆವರಿಸುತ್ತದೆ.
ಸಾಹಿತ್ಯ ರಚನೆ ಮಾಡಿ ಬದುಕನ್ನು ಕಾಲ್ಪನಿಕ ಘಟನೆಗಳಲ್ಲಿ ವಿವರಿಸುವುದಕ್ಕಿಂತ ಬದುಕನ್ನು ಅನುಭವಿಸಿ ಸತ್ಯ ಘಟನೆಗಳನ್ನೇ ಸರಳ ಭಾಷೆಯಲ್ಲಿ ಬರೆದರೆ ಅದೇ ಬಹುದೊಡ್ಡ ಸಾಹಿತ್ಯಕೃತಿಯಾಗಬಹುದು ಎನ್ನುವುದಕ್ಕೆ ಪೆಜತ್ತಾಯರದು ಹೊಸ ಉದಾಹರಣೆ ಅಷ್ಟೆ.
ಈ ಪುಸ್ತಕ ಬಹುಶಃ ಇತ್ತೀಚೆಗೆ ಬಂದ ಆತ್ಮಕಥನಗಳಲ್ಲೇ ಅತ್ಯಂತ ಸರಳ ನಿರೂಪಣೆಯದು. ನನ್ನ ಅತಿಪ್ರಿಯ ಕನ್ನಡ ಪುಸ್ತಕಗಳಲ್ಲಿ ಇದೂ ಒಂದಾಗಿದೆ. ನೀವೂ ಓದಿ ಎಂದು ಮನಸಾರೆಯಾಗಿ ಶಿಫಾರಸು ಮಾಡುತ್ತಿರುವೆ!
-ಮಿತ್ರಮಾಧ್ಯಮದ ಬೇಳೂರು ಸುದರ್ಶನರಿಂದMonday, October 12, 2009
ತಲೆ ಅಂದ್ರೆ ತಲೆ ಕಣ್ರೀ......
ವೈದ್ಯರು "ಎರಡು ರೂಪಾಯಿ" ಎಂದು ಹೇಳಿದರು.
ಈಗ ( ಸಿನೆಮಾದಲ್ಲಿ ಹೇಳುವಂತೆ....!) ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ನನ್ನ ಅಕ್ಕ ಕೊಪ್ಪ ಪೋಸ್ಟ್ ಆಪೀಸ್ ನಲ್ಲಿ ನೌಕರಿಯಲ್ಲಿದ್ದಳು . ನಾನು ಹೈಸ್ಕೂಲ್ ನವರಾತ್ರಿ ರಜಕ್ಕೆ ಅಲ್ಲಿಗೆ ಹೋಗಿ ಹದಿನೈದು ದಿನ ಜಾಂಡಾ ಹೊಡೆಯುತ್ತಿದ್ದೆ. ಅಲ್ಲಿನ ಪೋಸ್ಟ್ ಮಾಸ್ಟರ್ ಮೊಮ್ಮಗನೊಬ್ಬ ನನ್ನ ಹಾಗೆಯೇ ಸ್ಕೂಲ್ ರಜಕ್ಕೆ ಬರುತ್ತಲಿದ್ದ. ನಾನೂ ಅವನು ಸೇರಿ ಅದೂ ಇದೂ ಸಣ್ಣಪುಟ್ಟ ಆಟಗಳನ್ನು ಆಡುತಿದ್ದೆವು. ಹೀಗೆ ಅವನ ಬಳಿ ಸ್ಕೋಪ್ ತೆಗೆದುಕೊಳ್ಳಲು ಹಳ್ಳಿಯ ಹಲವಾರು ವಿಷಯಗಳನ್ನು ನನ್ನದೇ ಆದ ಗತ್ತಿನಲ್ಲಿ ವಿವರಿಸುತ್ತಿದ್ದೆ. ಮಜ ಎಂದರೆ ಅವನಿಗೆ ಕನ್ನಡ ಬಾರದು ಹಿಂದಿ ಹುಡುಗ ಆತ. ನನಗೆ ಹಿಂದಿ ಬಾರದು ಕನ್ನಡದ ಹುಡುಗ ನಾನು. ಆದರೂ ಇಬರ ನಡುವೆ ಅದು ಹೇಗೋ ಸಾಮರಸ್ಯ ಬೆಳೆದಿತ್ತು. ಮತ್ತು ಸಂಭಾಷಣೆ ನಡೆಯುತ್ತಿತ್ತು ಅರ್ಥವೂ ಆಗುತ್ತಿತ್ತು. ಹೀಗೆ ಅದೂ ಇದೂ ಸ್ಕೋಪಿನ ವಿಚಾರಗಳನ್ನು ಅರುಹುತ್ತಿರಬೇಕಾದರೆ ಕಳ್ಳಿಗಿಡ(ಪೋಸ್ಟ್ ಆಪೀಸ್ ಆವರಣದಲ್ಲಿತ್ತು ಅಂತ ಹೊಸತಾಗಿ ಹೇಳಬೇಕಾಗಿಲ್ಲ ತಾನೆ?) ಕಾಣಿಸಿತು. ಹಿಂದಿ ಹುಡುಗನ ಬಳಿ ಸಿಕ್ಕಾಪಟ್ಟೆ ಸ್ಕೋಪ್ ತೆಗೆದುಕೊಳ್ಳಲು ಹೊಸ ವಿಷಯ ನನಗೆ ಪಕಪಕನೆ ತಲೆಯಲ್ಲಿ ಮಿಂಚಿತು. ತಕ್ಷಣ ಕಳ್ಳಿ ಎಲೆಯೊಂದನ್ನು ಮುರಿದು ಉಪ್ ಅಂತ ಊಬಿ ಪುರುಪುರು ಗುಳ್ಳೆಗಳನ್ನು ಮಾಡಿ ಹಿಂದಿಹುಡುಗನಿಗೆ ತೋರಿಸಿದೆ. ಆತನ ಕಣ್ಣುಗಳಲ್ಲಿ ಮಹದಾಶ್ಚರ್ಯ. ಮತ್ತೆ ಮತ್ತೆ ಎಲೆಗಳನ್ನು ಕಿತ್ತು ಊಬಿದೆ, ಗುಳ್ಳೆಗಳ ರಾಶಿಯನ್ನೇ ಸೃಷ್ಟಿಸಿ ಹಿಂದಿಯವನನ್ನು ಆಶ್ಚರ್ಯಗೊಳಿಸಿದೆ. ಅವನು ವಾವ್ ವಾವ್ ಹೇಳುತ್ತಿದ್ದಂತೆ ನನ್ನ ಏರುವಿಕೆ ಹೆಚ್ಚಾಯಿತು. ಆತ ನಾನೂ ಊಬುತ್ತೇನೆ ಎಂದ " ಇಲ್ಲ ಅದರ ಹಯ ಡೇಂಜರ್ ಕಣ್ಣಿಗೆ ಹೋದರೆ ಕಣ್ಣು ಕುರುಡಾಗುತ್ತದೆ" ಎಂದೆ. ಮತ್ತಷ್ಟು ಎಲೆ ಕಿತ್ತು ಗುಡ್ಡೆ ಹಾಕಿ ಊಬತೊಡಗಿದೆ. ಆತ ಮೆಟ್ಟಿಲುಗಳ ಮೇಲೆ ಕುಳಿತು ಬೆರೆಗುಗಣ್ಣಿನಿಂದ ನೋಡುತ್ತಿದ್ದ. ನನಗೋ ನನ್ನ ಲೆವಲ್ ಹೆಚ್ಚಾಯಿತೆಂಬ ಭ್ರಮೆಯಲ್ಲಿ ಊಬಿಯೇ ಊಬಿದೆ. ಆಗಲೆ ಒಂದು ದೊಡ್ಡಗುಳ್ಳೆ ಪಟ್ ಎಂದು ಊಬುತ್ತಿದ್ದಂತೆ ಒಡೆಯಿತು. ಒಂದು ಹನಿ ಕಳ್ಳಿ ಹಂಯ ಬಲಗಣ್ಣಿಗೆ ಸೇರಿತು. ಉರಿ ಪ್ರಾರಂಭವಾಗಿ ಕಣ್ಣು ಕೆಂಪೇರತೊಡಗಿತು. ಹಿಂದಿ ಹುಡುಗ ಪೋಸ್ಟ್ ಆಪೀಸಿನ ಒಳಗೆ ಓಡಿಹೋಗಿ ಇಷ್ಟು ಹೊತಿನ ತನಕ ಮಜ ಅನುಭವಿಸುತ್ತಿದ್ದವನು ಈಗ ಕಣ್ಣಿಗೆ ಹಂಯ ಬಿದ್ದ ಕತೆ ಹೇಳಿ ಸ್ಕೋಪ್ ತೆಗೆದುಕೊಳ್ಳತೊಡಗಿದ. ಮರುಕ್ಷಣ ಅಕ್ಕನ ದುಗುಡದ ಮುಖದೊಂದಿಗೆ ಸೆಂಟ್ರಲ್ ಗವರ್ನ್ಮೆಂಟ್ ಸ್ಟ್ಪಾಪ್ ನನ್ನ ಸುತ್ತ ನೆರೆಯಿತು. ಆಳಿಗೊಂದು ಕಲ್ಲು ಬೀಳತೊಡಗಿತು. ನಾನು ತೆಪ್ಪಜ್ಜಿ ಮುಖಮಾಡಿಕೊಂಡು ಕಣ್ಣಮೇಲೆ ಕೈಯಿಟ್ಟು ನಿಂತೆ. ಒಂದಿಷ್ಟು ಚರ್ಚೆಯ ನಂತರ ಕಣ್ಣಿನ ವಿಷಯವಾದ್ದರಿಂದ ಡಾ . ಬಳಿ ಕರೆದುಕೊಂಡು ಹೋಗುವಿದೆಂದು ತೀರ್ಮಾನಿಸಿ ಹತ್ತಿರದಲ್ಲಿದ್ದ ಡಾ ಬಳಿ ಕರೆದುಕೊಂಡೂ ಹೋದರು.
ಡಾಕ್ಟರ್ ಬರಿಗಣ್ಣಿನಿಂದ ಒಮ್ಮೆ ನೋಡಿ ನಂತರ ಒಳಗೆ ಮಂಚದಮೇಲೆ ಮಲಗಿಸಿದರು. ಅದೆಂತದದೋ ಹತ್ತಾರು ಉಪಕರಣಗಳಿಂದ ಒಂದಾದ ನಂತರ ಒಂದು ಟೆಸ್ಟ್ ಮಾಡತೊಡಗಿದರು. ಪಕ್ಕದಲ್ಲಿಯೇ ಇದ್ದ ಅಕ್ಕನಿಗೆ ತಮ್ಮನ ಕಣ್ಣಿನ ಚಿಂತೆ ಒಂದೆಡೆ ಸಿಕ್ಕಾಪಟ್ಟೆ ಟೆಸ್ಟ್ ಮಾಡುತ್ತಿರುವ ಡಾಕ್ಟರ್ ಬಿಲ್ ಎಷ್ಟಾಗುತ್ತೋ ಎನ್ನುವುದು ಇನ್ನೊಂದೆಡೆ. ಒಟ್ಟಿನಲ್ಲಿ ಆತಂಕವೋ ಆತಂಕ. ಹೀಗೆ ಒಂದು ಘಂಟೆಗಳ ಕಾಲ ಪರೀಕ್ಷೆ ಮಾಡಿ ಅಂತಿಮವಾಗಿ ಒಂದು ಡ್ರಾಪ್ಸ್ ಕಣ್ಣಿಗೆ ಬಿಟ್ಟು ಏನೂ ಆಗಿಲ್ಲ ಎಂದು ವೈದ್ಯರಬಾಯಿಂದ ಬಾಂದಾಗ ಅರ್ದ ಆತಂಕ ಮಾಯ. ಇನ್ನು ಉಳಿದದ್ದು ಬಿಲ್ ಕಥೆ. ಕನಿಷ್ಟವೆಂದರೂ ಮುನ್ನೂರೋ ನಾನೂರೋ (ಆಗ ಅಕ್ಕನ ಸಂಬಳ ೭೦೦ ರೂ) ಖರ್ಚಿಗೆ ಬಂತು ಎಂದು ವೈದ್ಯ ರ ಮುಂದೆ ಸಣ್ಣ ಮುಖ ಮಾಡಿ ಎಷ್ಟು? ಎಂದಳು.
ವೈದ್ಯರು "ಎರಡು ರೂಪಾಯಿ" ಎಂದು ಸಹಜವಾಗಿ ಹೇಳಿದರು.
ನಮಗೆ ನಂಬಲಾಗದ ಸತ್ಯ . ಅಕ್ಕ ಇಷ್ಟೆಲ್ಲಾ ಕೆಲಸಕ್ಕೆ ಅದು ಅತೀ ಕಡಿಮೆಯಾಯಿತೆಂದು ಇಪ್ಪತ್ತು ರೂಪಾಯಿ ಕೊಟ್ಟು ಹೊರಡಲನುವಾದಳು. ಆದರೆ ವೈದ್ಯರು ನನ್ನ ಕೆಲಸಕ್ಕೆ ನಾನು ಬಿಲ್ ಮಾಡುವುದು ನೀವಲ್ಲ ಎಂದು ಹೇಳಿ ಮಿಕ್ಕ ಹದಿನೆಂಟು ವಾಪಾಸು ಕೊಟ್ಟು ನೆಕ್ಸ್ಟ್ ಎಂದರು.
ಅಕಸ್ಮಾತ್ ಈಗಿನ ಕಾಲದಲ್ಲಿ ಹೀಗಾಗಿದ್ದರೆ..ಕನಿಷ್ಟವೆಂದರೂ....? ಎಂಬ ರಾಗದ ಪ್ರಶ್ನೆ ನಿಮಗೆ ಹುಟ್ಟುತ್ತದೆ ಎಂದು ನನಗೆ ಗೊತ್ತು. ಇಲ್ಲ ಈಗಲೂ ಅಂತಹ ಸಿದ್ಧಾಂತಕ್ಕೆ ಜೋತುಬಿದ್ದ ವೈದ್ಯರು ಇದ್ದಾರೆ. ಡಾ ದೀಪಕ್ ಎಂಬ ಹರೆಯದ ವೈದ್ಯ. ಅವರ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ.
