Saturday, September 25, 2010

ಕೋಣೆಯ ಸೊಗಸಿಗೆ ಕಾಷ್ಠ ಕಲೆ


ಕಲಾವಿದನ ಕೈಗೆ ಕಸ ಸಿಕ್ಕರೂ ರಸವೆ. ಅವನಲ್ಲಿರುವ ಕಲೆಗಾರ ಕಸದಲ್ಲಿ ಅಡಗಿಕುಳಿತಿರುವ ರಸವನ್ನು ಹುಡುಕಿ ಮೇಲೆತ್ತುತ್ತಾನೆ. ಮಣ್ಣನ್ನು ಮೂರ್ತಿಗಳನ್ನಾಗಿಸಿ, ಶಿಲೆಯನ್ನು ಶಿಲ್ಪವನ್ನಾಗಿಸಿ, ಬಣ್ಣವನ್ನು ಚಿತ್ರವನ್ನಾಗಿಸಿ ಹೀಗೆ ನಾನಾ ವಿಧದಲ್ಲಿ ಜಡಕ್ಕೆ ಚೇತನ ತುಂಬುವ ಕೆಲಸ ಕಲಾವಿದನಿಂದಲ್ಲದೆ ಮತ್ಯಾರಿಂದನೂ ಸಾದ್ಯವಿಲ್ಲ. ಅಥವಾ ಅಂತಹ ಜನರಿಗೆ ಕಲಾವಿದರು ಎನ್ನಬಹುದು. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಗೋಟಗಾರು ಗಣಪತಣ್ಣ ಸೇರುತ್ತಾರೆ.
ಸಾಗರ ತಾಲ್ಲೂಕಿನ ಜೋಗ ಮಾರ್ಗದಲ್ಲಿ ಸಾಗರದಿಂದ ೧೨ ಕಿಲೋಮೀಟರ್ ದೂರದಲ್ಲಿ ಸಿಗುವ ಗೋಟಗಾರು ಎಂಬುದು ಕೇವಲ ಐದುಮನೆಗಳ ಪುಟ್ಟ ಹಳ್ಳಿ. ಅಲ್ಲಿನ ಕೃಷಿಕ ಗಣಪತಿಯವರಿಗೆ ತಮ್ಮ ತೋಟದ ಸುತ್ತಮುತ್ತ ಹಾಗೂ ಕಾಡಿನಲ್ಲಿ ಸಿಗುವ ಒಣಗಿದ ಮರಗಳಲ್ಲಿ ಅಡಗಿಕುಳಿತಿರುವ ಆಕಾರಗಳನ್ನು ಹೊರತೆಗೆಯುವುದು ಹವ್ಯಾಸ. ಜನಸಾಮಾನ್ಯರಿಗೆ ಮರದಬೊಡ್ಡೆಯಾಗಿ ಕಾಣಿಸುವ ಒಣಗಿದ ಮರಗಳು ಅವರಿಗೆ ವಿಶಿಷ್ಠ ವಿಶೇಷ ಆಕಾರಗಳಾಗಿ ಕಾಣಿಸುತ್ತವೆ. ಹಾಗಾಗಿ ಅವರ ಮನೆಯ ಪ್ರವೇಶದ್ವಾರದಲ್ಲಿಯೇ ನಂದಿಮರದಲ್ಲಿ ಅಡಗಿಕುಳಿತಿದ್ದ ಈಶ್ವರನ ವಾಹನ ನಂದಿಯಾಗಿ ಮನೆಗೆ ಬರುವ ಜನರನ್ನು ಸ್ವಾಗತಿಸುತ್ತಾ ಕುಳಿತಿದ್ದಾನೆ. ಕಾಡಿನಲ್ಲಿ ಸತ್ತು ಮಣ್ಣಾಗಿಹೋಗುತ್ತಿದ್ದ ಗಿಡದ ಬೇರುಗಳು, ಮತ್ತಿ, ಬೀಟೆ ಮುಂತಾದ ಹತ್ತು ಹಲವಾರು ಜಾತಿಗಳ ಮರದ ಬೊಡ್ಡೆಗಳು ವಿವಿಧ ಆಲಂಕಾರ ಪಡೆದು ಮನೆಯನ್ನು ಕಾಷ್ಠ ಶಿಲ್ಪಗಳ ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಕಾಡಿನಲ್ಲಿ ಸತ್ತುಹೋಗಿರುವ ಮರದ ಬೊಡ್ಡೆ ಆಕಾರಪಡೆದು ಕಾಸು ಖರ್ಚಿಲ್ಲದ ಮನೆಯಲ್ಲಿರುವ ಟಿಪಾಯಿಯ ರೂಪ ಪಡೆದು ಕುಳಿತಿದೆ. ಚಿಕ್ಕ ಚಿಕ್ಕ ಮಾನವನ ಆಕಾರಗಳಿಂದ ಹಿಡಿದು ನವಿಲು, ಹಾವು, ಗಿಳಿ, ಜಿಂಕೆ ಗಣಪತಿ ಮೂರ್ತಿ ಹೀಗೆ ಎಲ್ಲವೂ ಮರದ ಬೇರುನಾರಿನಿಂದಲೇ ರೂಪತಳೆದು ಇಲ್ಲಿ ಜೀವಕಳೆಪಡೆದುಕೊಂಡು ನಿಂತಿದೆ. ಎಂದೋ ಸತ್ತುಹೋಗಿ ಕಾಡಿನಲ್ಲಿ ಮಣ್ಣು ಸೇರುತ್ತಿದ್ದ ಮರದ ಬೊಡ್ಡೆಗಳ ಆಕಾರ ಗಣಪತಿಯವರ ಕೈಯಿಂದ ಜೀವ ತಳೆದು ಅವರಿಂದ ಅದು ಸಿಕ್ಕ ಕತೆಯನ್ನು ಸ್ವಾರಸ್ಯವಾಗಿ ಹೇಳಿಸಿಕೊಂಡು ಮುದನೀಡುತ್ತವೆ.
ಮಗ ಅರುಣ ಕೂಡ ಇಂತಹ ಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಹಾಗೂ ಸೊಸೆ ಸೌಮ್ಯ ಯಕ್ಷಗಾನ ಕಲಾವಿದೆಯಾಗಿರುವುದರಿಂದ ಅವರುಗಳ ಉತ್ತಮ ಸಹಕಾರ ಗೋಟಗಾರು ಗಣಪತಿಯವರಿಗೆ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಷ್ಠಶಿಲ್ಪ ಅತ್ಯುತ್ಸಾಹದಿಂದ ಮುಂದುವರೆದಿದೆ. ಜೋಗ ನೋಡಲು ಹೋದಾಗ ಒಮ್ಮೆ ನೀವೂ ಭೇಟಿ ನೀಡಿ ಆಸ್ವಾದಿಸಬಹುದು. ಗಣಪತಿಯವರ ಫೋನ್ ನಂ: ೦೮೧೮೩-೨೩೧೯೬೯
(ಲವಲವಿಕೆಯಲ್ಲಿ ಇಂದು ಪ್ರಕಟಿತ)

Wednesday, September 22, 2010

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ ಮೊದಲಿನ ಹಾಗಿಲ್ಲ. ಇದಕ್ಕೆ ಒಣಗಿದರೆ ಕೆಜಿಯೊಂದಕ್ಕೆ ನಾಲ್ಕುನೂರು ರೂಪಾಯಿ ದರ. ಹಾಗಾಗಿ ಹೆಂಗಸರು ಇದನ್ನು ಉಪಯೋಗಿಸಲು ಸ್ವಲ್ಪ ಕಂಜೂಸ್ ಆರಂಭಿಸಿದ್ದಾರೆ. ಹಿತ್ತಲಿನಿಂದ ಕೊಯ್ದು ಒಣಗಿಸಿ ಮೂರು ತಿಂಗಳಿಗೊಮ್ಮೆ ಲಟಾರಿ ಎಂ ಎಯ್ಟಿ ಗಾಡಿಯಲ್ಲಿ ಬರುವ ಚುಪುರು ಗಡ್ಡದ ಸಾಬುವಿಗೆ ಮಾರಿಬಿಡುತ್ತಾರೆ. ಕಾ ಕಾ ಎನ್ನುವ ಕಾಗೆಗೆ ಇದು ಬಹಳ ಪ್ರೀತಿಯ ಹಣ್ಣು, ಅದರಿಂದ ರಕ್ಷಿಸಿಕೊಂಡು ಕ್ವಿಂಟಾಲ್ ಗಟ್ಟಲೆ ಬೆಳೆದರೆ ವರ್ಷಕ್ಕೆ ಲಕ್ಷಾಂತರ ಹಾಗೂ ಹತ್ತು ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಸಂಪಾದಿಸಬಹುದು, ಆದರೆ ತಿಪ್ಪರಲಾಗ ಹಾಕಿದರೂ ಒಂದು ಕೆಜಿಗಿಂತ ಜಾಸ್ತಿ ಬೆಳೆಯಲಾಗುವುದಿಲ್ಲ ಎನ್ನುವುದು ಗುಟ್ಟಿನ ಮಾತು. ಒಮ್ಮೆ ಸಿಕ್ಕಾಗ ಒಂದೇ ಒಂದು ತಿಂದು ನೋಡಿ, ಆನಂತರ ಅವಾಂತರ ನನಗೆ ಹೇಳಿ.

Monday, September 20, 2010

ಅಡಿಕೆ ಕೃಷಿಗೆ ’ಅಮೇರಿಕನ್’ ಯುವಕ


ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ, ಯುವಕ ಯುವತಿಯರು ಷಹರದ ಬಣ್ಣದ ಬದುಕಿಗೆ ಮನಸೋತು ಹಳ್ಳಿ ತೊರೆದು ಪಟ್ಟಣ ಸೇರುತ್ತಿದ್ದಾರೆ, ತೋಟದ ಕೆಲಸಕ್ಕೆ ಕೂಲಿಕಾರ್ಮಿಕರು ಸಿಗುತ್ತಿಲ್ಲ, ಎಂಬಂತಹ ಕೊರಗಿನ ಮಾತುಗಳ ನಡುವೆ ಪಟ್ಟಣದ ಬದುಕನ್ನು ತೊರೆದು ಕೃಷಿಯನ್ನು ಆಯ್ದುಕೊಂಡು ಹಳ್ಳಿಗೆ ಬಂದಿರುವ ದಂಪತಿಗಳ ಕತೆ ಇಲ್ಲಿದೆ.
ಸಾಗರದ ಸಮೀಪದ ಮಂಕಾಳೆ ಊರಿನವರಾಗಿದ್ದ ಕೃತಿ. ಆರ್. ತಾವು ದೆಹಲಿಯಲ್ಲಿ ಎಂ.ಫಿಲ್ ಓದುತ್ತಿದ್ದಾಗ ಮೆಚ್ಚಿದ್ದು ಅಮೇರಿಕಾದ ಟಾಡ್ ಅವರನ್ನು. ಮಗಳು ಮೆಚ್ಚಿದ ಅಮೆರಿಕಾದ ಅಳಿಯನನ್ನು ಮನೆಯವರೂ ಕೂಡ ತಂಟೆ ತಕರಾರಿಲ್ಲದೆ ಸ್ವಾಗತಿಸಿದರು. ಮದುವೆಯ ನಂತರ ಆರು ವರ್ಷಗಳ ಕಾಲ ದೆಹಲಿ ಅಮೆರಿಕಾ ಮುಂತಾದ ಕಡೆಗಳಲ್ಲಿ ಕೃತಿ ಹಾಗೂ ಟಾಡ್ ದುಡಿದರು. ದಂಪತಿಗಳಿಬ್ಬರೂ ಸಂಗೀತ ಪ್ರಿಯರಾದ್ದರಿಂದ ಸಂಜೆ ಸಮಯವನ್ನು ಸಂಗೀತಕ್ಕಾಗಿ ಮೀಸಲಿಡುವ ಆಸೆಯಿತ್ತು. ದುಡಿಮೆಗೆ ಪ್ರಾಧಾನ್ಯತೆಯಿತೆಯಿರುವ ಪಟ್ಟಣದಲ್ಲಿ ಸಂಜೆ ತಮ್ಮ ಹವ್ಯಾಸಕ್ಕೆ ಮೀಸಲಿಡಲು ಆಗುತ್ತಿರಲಿಲ್ಲ. ಆವಾಗ ಅವರಿಗೆ ಮನಸ್ಸಿನ ಮೂಲೆಯಲ್ಲಿ ಚಿಗುರೊಡೆದ ಆಸೆ ಕೃಷಿಕರಾಗಬೇಕು ಎಂದು. ಆ ಆಸೆಯ ಫಲ ಇಂದು ಅಮೆರಿಕನ್ ಯುವಕ ಟಾಡ್ ಲಿರಿಚ್ ಹಾಗೂ ಕೃತಿಯವರನ್ನು ಅಡಿಕೆ ತೋಟದ ಮಾಲಿಕರನ್ನಾಗಿಸಿದೆ.
ಸಾಗರದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಪುರಪ್ಪೆಮನೆ ಎಂಬ ಊರು ಸಿಗುತ್ತದೆ. ಅಲ್ಲಿ ಅಪ್ಪೆಮನೆಯತ್ತ ಒಂದುಕಿಲೋಮೀಟರ್ ಸಾಗಿದರೆ ಈ ಅಮೇರಿಕನ್ ಅಳಿಯ ಊರಿನ ಮಗಳು ಅವರ ಸಣ್ಣ ಫಾರಂ ಹೌಸ್ ನೋಡಬಹುದು. ಪಕ್ಕಾ ಪಕ್ಕಾ ವಿದೇಶಿ ಶೈಲಿಯಮನೆ ನೋಡಿದ ತಕ್ಷಣ ಇದು ಪರಂಪರಾಗತ ಮಲೆನಾಡು ಮನೆ ಅಲ್ಲ ಎಂಬುದು ನಿಮಗೆ ತೋಚುತ್ತದೆ. ನಿಮ್ಮ ಅದೃಷ್ಟ ಖುಲಾಯಿಸದ್ದರೆ ಮನೆಯ ಬಳಿ ಹೋಗುತ್ತಿದ್ದಂತೆ ಸೀತಾರ್ ಧ್ವನಿ ಕೇಳಬಹುದು. ಸಿತಾರ್ ನಾದ ಹಾಗೂ ಅದಕ್ಕೊಂದು ಸಣ್ಣ ಮಟ್ಟದ ಹಾಡು ಕೇಳುತ್ತಿದೆಯಂದರೆ ಲಾಡ್ ದಂಪತಿಗಳು ಮನೆಯಲ್ಲಿದಾರೆಂದು ಅರ್ಥ. ಅವರು ಇದ್ದಾರೆಂದರೆ ನಿಮಗೆ ಉತ್ತಮ ಆತಿಥ್ಯ ಸಿಕ್ಕಿತು ಅಂತ.
ಸ್ವಭಾವತಹ ಏಕಾಂಗಿಪ್ರಿಯರಾದ ಟಾಡ್ ಲಿರಿಚ್ ಹರಟೆಮಲ್ಲರಲ್ಲ. ಭಾಷೆಯ ತೊಡಕೂ ಸ್ವಲ್ಪ ಮಟ್ಟದಲ್ಲಿರುವುದರಿಂದ ಹಾಗಿರಬಹುದು. ಕನ್ನಡ ಅರ್ಥ ಮಾಡಿಕೊಳ್ಳುವ ಹಂತದಲ್ಲಿರುವ ಅವರು ಅಲ್ಪಸ್ವಲ್ಪ ಮಾತನಾಡಲೂ ಬಲ್ಲರು ಈಗಷ್ಟೆ. "ನಿಮಗೆ ಈ ನೀರವ ವಾತಾವರಣ ಅಮೆರಿಕಾದ ಬ್ಯುಸೀ ಜೀವನಕ್ಕೆ ಹೋಲಿಸಿದಲ್ಲಿ ಬೇಸರ ತರಿಸದೇ? ಎಂಬ ಪ್ರಶ್ನೆಗೆ ಲಾಡ್ "ಬೇಸರ ತರಿಸಲು ಸಮಯವೇ ಇಲ್ಲ ಹಗಲೆಲ್ಲಾ ಕೆಲಸ, ರಾತ್ರಿ ಸಿತಾರ್ ಹಾಗೂ ಓದು" ಎಂದು ನಗುತ್ತಾರೆ. ಆದರೆ ಕೃತಿ ನಿಮ್ಮೆದುರು ಇತಿಹಾಸವನ್ನೇ ಬಿಚ್ಚಿಡುತ್ತಾರೆ . ಇಂಡೋ ಅಮೇರಿಕನ್ ಹಮೀರ್ ಮುಗಿಲು ನಿಮ್ಮನ್ನು ಮಂತ್ರಮುಗ್ದನನ್ನಾಗಿಸುವಲ್ಲಿ ಸೈ ಅನ್ನಿಸಿಕೊಳ್ಳುತ್ತಾನೆ. ಅಮೇರಿಕಾದ ಧೈರ್ಯ ಭಾರತದ ಒಳ್ಳೆಯತನ ಮಿಳಿತಗೊಂಡ ಅದ್ಭುತ ವ್ಯಕ್ತಿತ್ವ ಮಗ ಹಮೀರ್ ನದು. ಅಮ್ಮನ ಬಳಿ ಹವ್ಯಕ ಕನ್ನಡ ಮತ್ತಷ್ಟೆ ವೇಗವಾಗಿ ಅಪ್ಪನ ಬಳಿ ಅಮೇರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲೀಷ್ ಮಾತನಾಡುವ ಮುದ್ದು ಮುಖದ ಹಮೀರ್ ಮುಗಿಲು ಪುಟ್ಟ ಕೃಷಿಕನಾಗಿ ಬೆಳೆಯುತ್ತಿದ್ದಾನೆ.
ಪಾಳೇಕರ್ ಕೃಷಿಯ ಬಗ್ಗೆ ಅತ್ಯಾಸಕ್ತಿ ಹೊಂದಿರುವ ದಂಪತಿಗಳು ಸಾವಯವ ಕೃಷಿಯನ್ನು ಪಾಲಿಸುತ್ತಿದ್ದಾರೆ. ಒಂದು ಎಕರೆಯಷ್ಟು ಅಡಿಕೆ ತೊಟ, ಸೊಪ್ಪಿನ ಬೆಟ್ಟದಲ್ಲಿ ಸುಂದರ ಮನೆ, ನೆಮ್ಮದಿ ಜೀವನ ಇವರ ಆಸೆಯನ್ನು ಸಾಕಾರಗೊಳಿಸಿದೆ. ಹೆಗ್ಗೋಡಿನ ನೀನಾಸಂ ರಂಗಮಂದಿರ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ಇವರ ಹವ್ಯಾಸಕ್ಕೆ ಇಂಬು ನೀಡಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ನಾಟಕಗಳಿಗೂ ಈ ದಂಪತಿಗಳ ಭೇಟಿ ಖಂಡಿತ.
ಟಾಡ್ ರ ತಂದೆ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನುವ ಕೃತಿ ಅಮೇರಿಕಾದ ಪೋಷಕರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೇಳುತ್ತಾರೆ. ಹದಿನೆಂಟು ತುಂಬಿದ ಮಕ್ಕಳನ್ನು ಪಕ್ಕಾ ಸ್ನೇಹಿತರಂತೆ ನಡೆಯಿಸಿಕೊಳ್ಳುವ ಅಲ್ಲಿನ ಜನ ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದ ನಿರ್ಧಾರಕ್ಕೆ ಅಡ್ಡಿಯಾಗುವುದಿಲ್ಲ .ಅದು ಅವರ ವೈಯಕ್ತಿಕ ಬದುಕು ಎಂದು ಬೆಂಬಲಿಸುತ್ತಾರೆ ಎನ್ನುತ್ತಾರೆ. ಅಮೆರಿಕಾದ ಕೃಷಿಯ ಬಗ್ಗೆ ಸಾವಿರ ಹೆಕ್ಟೇರ್ ಕೃಷಿಕರ ಬಗ್ಗೆ ವಿಸ್ತಾರ ಕತೆ ಬಿಚ್ಚಿಡುತ್ತಾರೆ. ಅಲ್ಲಿ ಈ ರೀತಿಯ ಒಂದೆರಡು ಎಕರೆ ಭೂಮಿಯಿಂದ ಕೃಷಿ ಕೈಂಕರ್ಯ ಸಾಗದು ಎನ್ನುವ ಮಾತನ್ನು ನೆನಪಿಸುತ್ತಾರೆ.
ಟಾಡ್ ಬೆಳಿಗ್ಗೆ ಏಳಕ್ಕೆ ಅಡಿಕೆ ತೋಟಕ್ಕೆ ಹೋದರೆ ಸೋಗೆ ಕೊಚ್ಚುವುದು, ಕಾದಿಗೆ ಹೆರೆಯುವುದು ಮುಂತಾದ ಕೆಲಸವನ್ನು ಪಕ್ಕಾ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಕರಂತೆ ಸ್ವತಹ ಮಾಡುತ್ತಾರೆ. ನಾವು ಕೂಲಿಕಾರ್ಮಿಕರ ಮೇಲೆ ಸಂಪೂರ್ಣ ಅವಲಂಬಿತರಾಗಿಲ್ಲ ಎಂದು ಕೃತಿ ಆತ್ಮಸ್ಥೈರ್ಯದಿಂದ ಹೇಳುತ್ತಾರೆ. ಕೊನೆಕೊಯ್ಲು, ಗೊಬ್ಬರ ಹಾಕುವುದಕ್ಕೆ ಮುಂತಾದ ದೊಡ್ಡ ಕೆಲಸ ಹೊರತುಪಡಿಸಿದರೆ ನಿತ್ಯದ ಕೆಲಸಕ್ಕೆ ನಾವು ಕೃಷಿಕಾರ್ಮಿಕರ ಬಯಸುವುದಿಲ್ಲ. ಟಾಡ್ ರ ಪ್ರಕಾರ ಕೂಲಿಕಾರ್ಮಿಕರ ಸಮಸ್ಯೆ ಅಮೆರಿಕಾಪ್ರಜೆಗಳಿಗೆ ಮಹತ್ತದ್ದಲ್ಲ. ಕಾರಣ ಅಲ್ಲಿ ತಮ್ಮ ಬಹುತೇಕ ಎಲ್ಲಾ ಕೆಲಸಕ್ಕೆ ಬೇರೆಯವರ ಅವಲಂಬನೆ ಇಲ್ಲ, ಮತ್ತೂ ಕೃಷಿ ಕಾರ್ಮಿಕರ ಸಮಸ್ಯೆಯ ಕುರಿತು ದಿವಸದಲ್ಲಿ ಆರು ತಾಸು ಮಾತನಾಡುವುದರ ಬದಲು ಎರಡು ತಾಸು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿದಂತೆ ಎಂಬುದು ಖಚಿತ ಮಾತು. ಮನೆಗೆ ಬೇಕಾದಷ್ಟು ತರಕಾರಿ ಸೊಪ್ಪು ಬೆಳೆಯಲು ಹಿತ್ತಲು ಸಜ್ಜಾಗಿದೆ. ಮನೆಯಲ್ಲಿ ಅಡಿಗೆ ಕೆಲಸ ಹೆಂಗಸರದ್ದು ವ್ಯವಹಾರ ಗಂಡಸರದ್ದು ಎಂಬ ಬೇಧಭಾವ ಇವರಲ್ಲಿಲ್ಲ. ಸೋಮವಾರ ಕೃತಿ ಅಡಿಗೆ ಮಾಡಿದರೆ ಮಂಗಳವಾರ ಶುದ್ಧ ಅಮೇರಿಕನ್ ಶೈಲಿಯ ಅಡಿಗೆಯ ಉಸ್ತುವಾರಿ ಟಾಡ್ ರದ್ದು ಬುಧವಾರ ಮತ್ತೆ ಕೃತಿಯ ಅಡಿಗೆ .
ಪಕ್ಕಾ ಕೃಷಿಕರು ಹೇಗಿದ್ದರೆ ಚೆನ್ನ ಎಂಬುದಕ್ಕೆ ಈ ಇಂಡಿಯಾ-ಅಮೇರಿಕನ್ ದಂಪತಿಗಳು ಒಳ್ಳೆಯ ಉದಾಹರಣೆ. "ಕೃಷಿಯಲ್ಲಿ ಹಣದ ಓಘ ಕಡಿಮೆ ನಿಜ ಆದರೆ ಶಾಂತಿ ನೆಮ್ಮದಿ ಇಲ್ಲಿ ಇದೆ, ನಮ್ಮ ವಿದ್ಯಾರ್ಹತೆಗೆ ನಾವು ಪಟ್ಟಣದಲ್ಲಿದ್ದರೆ ಹಣ ಗುಡ್ಡೆ ಹಾಕಬಹುದು, ನಮ್ಮ ವೃದ್ದಾಪ್ಯದ ಹೊತ್ತಿಗೆ ದೊಡ್ಡ ಹಣದ ರಾಶಿ ಆಗಿರುತ್ತದೆ, ಆದರೆ ಅನುಭವಿಸಲು ವಯಸ್ಸು ಇರುವುದಿಲ್ಲ" ಎಂದು ತತ್ವಭರಿತವಾಗಿ ಹೇಳುವ ಕೃತಿ ದಂಪತಿಗಳು ಕೊರಗುತ್ತಾ ಬದುಕುವ ಅಡಿಕೆ ಕೃಷಿಕರಿಗೆ ಮಾದರಿ ಖಂಡಿತ.
ನಾವು ಕಾರಣರಾಗಿ ಸುದ್ಧಿಯಾಗುದಕ್ಕಿಂತ ನಾವು ಹಳ್ಳಿಯ ಜೀವವನ್ನಾಗಿಸಿಕೊಂಡ ಕಾರಣಗಳು ಸುದ್ಧಿಯಾಗುವುದು ಒಳಿತು ಎಂಬುದು ದಂಪತಿಗಳ ಕಿವಿಮಾತು.

(ಸಪ್ಟೆಂಬರ್ ಅಡಿಕೆಪತ್ರಿಕೆಯಲ್ಲಿ ಪ್ರಕಟಿತ)

Monday, September 13, 2010

ಹಿಪ್ಪಲಿ ಬುಡ ಕಾಳುಮೆಣಸಿನ ತಲೆ


ಕಾಳುಮೆಣಸಿಗೆ ಈಗ ಬಂಗಾರದ ಬೆಲೆ. ಬೆಲೆ ಬಂಗಾರದ್ದು ನಿಜ ಆದರೆ ಬೆಳೆ ಇಲ್ಲದೆ ಕೃಷಿಕರು ಕೈ ಹೊಸಕಿಕೊಳ್ಳುವಂತಾಗಿದೆ. ಕಾಳು ಮೆಣಸಿನ ಬೆಳೆ ಇರದಿರಲು ಪ್ರಮುಖ ಕಾರಣ ಮೆಣಸಿನ ಬಳ್ಳಿ ಹುಲುಸಾಗಿ ಬೆಳೆದು ಇನ್ನೇನು ಫಸಲು ನೀಡಿತು ಎನ್ನುವಾಗ ಸೊರಗುರೋಗ ಇಡೀ ಬಳ್ಳಿಯನ್ನು ಕಾಯಿಸಮೇತ ಒಣಗಿಸಿ ಸಾಯಿಸಿಬಿಡುತ್ತದೆ. ಹಾಗಾಗಿ ಎಂಟು ಹತ್ತು ಕ್ವಿಂಟಾಲ್ ಬೆಳೆ ತೆಗೆಯುತ್ತಿದ್ದ ಕೃಷಿಕರು ಕೆಜಿ ಲೆಕ್ಕದ ಫಸಲು ಕೊಯ್ಯುತ್ತಿದ್ದಾರೆ. ಕಾಳುಮೆಣಸಿನಲ್ಲಿ ನಾನಾ ತರಹದ ಜಾತಿಯ ಬಳ್ಳಿಗಳ ಸಂಶೋಧನೆಯಾಗಿದರೂ ಸೊರಗು ರೋಗ(ವಿಲ್ಟ್)ದ ಬಾಧೆಯಿಂದ ಮುಕ್ತವಾಗಿಲ್ಲ. ಈಗ ಕೃಷಿಕರು ತಮ್ಮದೇ ಆದ ದಾರಿಯೊಂದನ್ನು ಇದಕ್ಕೆ ಪರ್ಯಾಯವಾಗಿ ಹುಡುಕಿಕೊಳ್ಳುತ್ತಿದ್ದಾರೆ.
ಕಾಳುಮೆಣಸಿನ ಬಳ್ಳಿಯ ಪ್ರಬೇಧದ ಹಿಪ್ಪಲಿ(ಪೈಪರ್ ಲಾಂಗಂ) ಪೊದೆಯಾಗಿ ಬೆಳೆಯುವ ಸಸ್ಯ. ಇದಕ್ಕೆ ಸೊರಗುರೋಗದ ಬಾಧೆಯಿಲ್ಲ. ಇದರ ಸಶಕ್ತ ಬುಡವನ್ನು ಆಯ್ದುಕೊಂಡು ಸ್ಥಳೀಯ ಮೆಣಸಿನ ಬಳ್ಳಿಯ ತಲೆಯನ್ನು ಅದಕ್ಕೆ "ವಿ" ಕಸಿಯ ಮುಖಾಂತರ ಕಸಿಕಟ್ಟಿ ಯಶಸ್ವಿಯಾಗುತ್ತಿದ್ದಾರೆ. ಇದರ ಆರಂಭದಕ್ಷಿಣ ಕನ್ನಡದಲ್ಲಾದರೂ ಈಗ ಕಸಿ ಬಲ್ಲ ಕೃಷಿಕರೆಲ್ಲರೂ ಇದೇ ಹಾದಿ ತುಳಿಯುತ್ತಿದ್ದಾರೆ. ಒಮ್ಮೆ ಕಸಿ ಮೆಣಸು ಚಿಗುರಿದ ನಂತರ ಬುಡದಲ್ಲಿ ಹೊರಡುವ ಹಿಪ್ಪಲಿ ಗೆಲ್ಲುಗಳನ್ನು ಒಂದೆರಡು ತಿಂಗಳ ಕಾಲ ಚಿವುಟಿದರೆ ನಂತರ ತೋಟದಲ್ಲಿ ಬಳ್ಳಿ ಹಬ್ಬಲು ಸಿದ್ಧ. ಸೊರಗು ರೋಗ ಭಾಧೆಯಿಂದ ಆಚೆ ಬಂದರೆ ಅಡಿಕೆ ಬೆಳೆಗಾರರಿಗೆ ಕಾಳು ಮೆಣಸಿನ ಮೂಲಕ ಹೆಚ್ಚುವರಿ ಆದಾಯ ದೊರತಂತಾಗುತ್ತದೆ ಎಂಬುದು ಕೃಷಿಕರ ಮಾತು. ಈಗಷ್ಟೆ ಮರಕ್ಕೆ ಕಸಿ ಬಳ್ಳಿಗಳು ಹಬ್ಬಲು ಶುರುವಾಗಿರುವುದರಿಂದ ಸಾಧಕಬಾಧಕಗಳು ಇನ್ನು ನೋಡಬೇಕಿದೆ ಎನ್ನುತ್ತಾರೆ ಕೃಷಿಕ ಸಾಗರದ ಸಮೀಪದ ಕಡವಿನಮನೆ ಟಿ.ಎಲ್ ತಿರುಮಲ. ಕಸಿಯಲ್ಲಿ ಬದುಕುವ ಪ್ರಮಾಣ ಸ್ವಲ್ಪ ಕಡಿಮೆ ಇರುವುದರಿಂದ ನುರಿತ ಕಸಿಗಾರರು ಇದಕ್ಕೆ ಬೇಕು ಎನ್ನುವುದು ಅವರ ಅನುಭವದ ಮಾತು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೦೮೧೮೩-೨೦೭೬೫೮ (ಬೆಳಿಗ್ಗೆ ೭-೮)
(ಇಂದಿನ ಲವಲವಿಕೆ ಯಲ್ಲಿ ಪ್ರಕಟಿತ)

Thursday, September 9, 2010

ಗೌರಿ-ಗಣೇಶ ಹಬ್ಬದ ಶುಭಾಶಯಗಳು

ಪ್ರಿಯ ಓದುಗನ್,
ಆ ಪರಮಾತ್ಮನೆಂದು ಬಹು ಜನರಿಂದ ಕರೆಯಲ್ಪಡುವ ಗಣೇಶನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂಬುದು ನನ್ನ ಹರಕೆ ಹಾರೈಕೆ. ಓದಿದ-ಕಾಮೆಂಟಿಸಿದ-ನೋಡಿದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ಈ ಗೌರಿ ಹೂವು ಅರಳಿ ನಿಂತಂತೆ ನಿಮ್ಮ ಬಾಳಿನ ಸಂತೋಷದ ಕ್ಷಣಗಳು ಅರಳಲಿ. ನಾನಂತೂ ವರ್ಷದಿಂದ ವರ್ಷಕ್ಕೆ ಗಣೇಶನಿಗೆ ಹತ್ತಿರವಾಗುತ್ತಿದ್ದೇನೆ. ಹೋದ್ವರ್ಷ ಚಿತ್ರವಿಚಿತ್ರವಾಗಿರುವ ಗಣನಾಯಕನ ಹೆಸರು ಪಠಿಸಿ ಸಹಸ್ರನಾಮಾವಳಿ ಮಾಡುವುದು ಕಷ್ಟ ಎನ್ನಿಸಿದ್ದರಿಂದ ಸಾವಿರ ಬಾರಿ ಗಣೇಶ ಗಣೇಶ ಗಣೇಶ ಅಂತ ಹೇಳಿ ಸಹಸ್ರನಾಮ ಪುಸ್ತಕ ಮುಚ್ಚಿಟ್ಟಿದ್ದೆ. ಈ ವರ್ಷ ಹೊಸ ಐಡಿಯಾ ಹೊಳೆದಿದೆ " ೧೦೦ಗಣೇಶ X ೧೦ ಗಣೇಶ" ಎಂದು ಒಂದು ಬಾರಿ ಹೇಳಿಬಿಡುತ್ತೇನೆ. ಅಲ್ಲಿಗೆ ಗಣಪತಿ ಸಹಸ್ರನಾಮ ಮುಗಿದಂತೆ. ಅವನು ಖಂಡಿತಾ ಖುಷ್ ಆಗುತ್ತಾನೆ ಅಂತ ಗೊತ್ತು ಕಾರಣ ತೇನವಿನಾ ತೃಣಮಪಿ ನಚಲತಿ, ಹಾಗಾದಮೇಲೆ ಇಂತಹ ಘನಂದಾರಿ ಐಡಿಯಾ ಅವನಿಂದಲೇ ವರಪ್ರಸಾದ ಅಲ್ಲವೇ. ಅದಾದಮೇಲೆ ಭಾನುವಾರ ಪಂಚಮಿ,ಚಕ್ಲಿ-ಕಡುಬು- ಕಜ್ಜಾಯದ ಊಟ ನಮ್ಮಮನೆಯಲ್ಲಿ ಇರುತ್ತದೆ, ಸಂಜೆ ಗಣಪತಿಯನ್ನು ಕೆರೆಗೆ ದುಡೂಂ ಮಾಡುವ ಪ್ರೋಗ್ರಾಂ ಇದೆ. ಸಂಜೆ ಡಂ ಡಂ ಕೂಡ ಇದೆ. ಎಲ್ಲರೂ ಬನ್ನಿ ಎನ್ನುತ್ತಾ...... ಮತೊಮ್ಮೆ ಗಣಪತಿ ಬಪ್ಪಾ ಮೋರಯಾ......

ವಿಸೂ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಬ್ಲಾಗಿಂಗ್ ಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ

Wednesday, September 8, 2010

ಜಾಯಿಕಾಯಿ ಜಾಪತ್ರೆ




ವಾಮಾಚಾರಿ ಸದಾಚಾರಿಯಾದ ಬಗೆ...!

ಅದೊಂದು ಮೂವತ್ತು ಮನೆಗಳ ಸಣ್ಣ ಊರು. ಎಲ್ಲರ ಮನೆಗಳೂ ಬಹುಪಾಲು ಖಾಲಿ ಖಾಲಿ. ಹುಡುಗರು ಪಟ್ಟಣ ಸೇರಿದ್ದು-ಪಾಲಕರು ಕುಟುಂಬ ಯೋಜನೆ ಪಾಲಿಸಿದ್ದು ಹೀಗೆ ಹತ್ತಾರು ಕಾರಣಗಳು ಊರು ಭಣ ಭಣ ಎನ್ನಲು. ಇಡೀ ಊರು ಜಾಲಾಡಿದರು
ಆಗರ್ಭ ಶ್ರೀಮಂತರು ಇಲ್ಲ. ಬಹುಪಾಲು ಜನ ಅವರಮಟ್ಟಿಗಿನ ಜೀವನಕ್ಕೆ ಸಾಕಾಗುವಷ್ಟು.
ಆತನಿಗೂ ಅಷ್ಟೆ ಎರಡೆ ಎಕರೆ ತೋಟ ಹತ್ತು ವರ್ಷದ ಹಿಂದೆ. ಇದ್ದಕ್ಕಿದ್ದಂತೆ ಒಂದು ದಿವಸ ಮನೆಯಮೇಲೆ ಕಲ್ಲುಗಳು ಬೀಳತೊಡಗಿದವು. ಅಲ್ಲಿಗೆ ಜ್ಯೋತಿಷ್ಯ ಪ್ರಾರಂಭವಾಯಿತು. ಮಾಟಮಂತ್ರ ಜಪತಪ ನಿತ್ಯ. ಜನರ ಕಷ್ಟಗಳ ಪ್ರಮಾಣ ಪ್ರಪಂಚದಲ್ಲಿ ಎಷ್ಟಿದೆ ನೋಡಿ? ಹತ್ತೇ ವರ್ಷದಲ್ಲಿ ಆತ ೧೩ ಎಕರೆ ಭಾಗಾಯ್ತು ಒಡೆಯನಾದ. ಮನೆಯೆದುರು ಮೂರು ಕಾರುಗಳು ಸ್ವಂತದ್ದು. ಶ್ರಾವಣ ಮಾಸದಲ್ಲಿ ಕನಿಷ್ಟವೆಂದರೂ ನಾಲ್ಕದು ಲಕ್ಷದ ಸಂಪಾದನೆ. ಆತ ಎಸ್ ಎಸ್ ಎಲ್ ಸಿ ಫೇಲ್. ಆದರೆ ಬರುವ ಜನರು ಇಂಜನಿಯರಿಂಗ್ ಮೆಡಿಕಲ್ ಪಾಸ್. ಇಷ್ಟಿದರೂ ಆತ ಊರಿನ ದೇವಸ್ಥಾನಕ್ಕೆ ವರಾಡ ಕೊಡುತ್ತಿರಲಿಲ್ಲ. ಸೀಮೆಯ ದೇವಸ್ಥಾನಕ್ಕೂ ನಾಸ್ತಿ. ಆದರೂ ದೇವರ ನಂಬಿ ಜೀವನ....!
ಊರಿನ ತಲೆಯಲ್ಲೊಂದು ಎರಡೆಕರೆ ವಿಶಾಲ ಜಾಗ. ಅಲ್ಲಿ ಲಕ ಲಕ ಎನ್ನುವ ಅರಳಿ ಮರ. ಊರವರು ನೂರಾರು ವರ್ಷದಿಂದ ಪೂಜಿಸುತ್ತಿದ್ದ ಜಟಕ ಚೌಡಿಗಳ ನಂಬಿಕೆಯ ಸ್ಥಳ. ಅದು ಆತನಿಗೆ ಕಣ್ಣಿಗೆ ಬಿತ್ತು. ಬೇಲಿ ಹಾಕಿದ. ಮಲಗಿದ್ದ ಊರು ಪುಟಿದೆದ್ದಿತು. ಪ್ರತಿಭಟಿಸಿತು. ಹಣವಿಲ್ಲದವರ ಕೂಗು ಎಷ್ಟರವರೆಗೆ ನಡೇದೀತು ಎಂಬ ಹಮ್ಮು ಆತನದ್ದು. ಆದರೆ ತಾತ್ಕಾಲಿಕ ವಿಜಯ ಊರವರಿಗೆ. ಬೇಲಿ ಕಿತ್ತೆಸೆಯಲ್ಪಟ್ಟಿತು.
ಬಂತು ಶ್ರಾವಣ ಮಾಸ. ಆತ ತನ್ನ ದಾರಿ ಬದಲಿಸಿದ. ಬಾಗಿನದ ಹೆಸರಿನಲ್ಲಿ ಸುತ್ತಮುತ್ತಲಿನ ನೂರಾರು ದಂಪತಿಗಳನ್ನು ಮನೆಗೆ ಕರೆಯಿಸಿದ. ಜನ ಬೆಂಬಲ ತನಗಿದೆ ಎಂದು ಸಹಿ ಹಾಕಿಸಿಕೊಂಡ. ಅಲ್ಲಿಯವರೆಗೆ ದೇವರ ಪೂಜೆ ಮಾಡದಿದ್ದವರು ಬಂದು ಎರಡು ಸೀರೆ ಪಡೆದು ಉಂಡೆದ್ದು ಹೋದರು. ಟ್ರಸ್ಟ್ ಶ್ರಾವಣ ಮಾಸದಲ್ಲಿ ರಚಿಸಿದ. ಶಾಲೆಗೆ ಬೀರು ಕೊಟ್ಟ, ಮೂರೂವರೆ ಸಾವಿರ ರೂಪಾಯಿಯ ಬೆಲೆಯ ಬೀರು ಕೊಡಲು ಒಂದು ನೂರಾಐವತ್ತು ಜನರ ಬರೊಬ್ಬರಿ ಮೆರವಣಿಗೆ. ನಂತರ ಒಂದು ಕಾರ್ಯಕ್ರಮ ಅಲ್ಲಿ "ಜಾಗ ಬಿಡೆವು" ಎಂಬ ಪರೋಕ್ಷ ಘೋಷಣ ದೂರದೂರದಿಂದ ನೂರೈವತ್ತು ಜನರು ಇಲ್ಲಿಗೆ ಬರಲು ಖರ್ಚಾದ ಹಣ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು. ಪಕ್ಕದೂರಿನ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟ. ಈಗ ಆ ಜಾಗ ಟ್ರಸ್ಟ್ ಗೆ ಬೇಕು ಕೊಡಿ ಎಂದು ಸರ್ಕಾರಕ್ಕೆ ಅರ್ಜಿ. ಅಲ್ಲೊಂದು ಔಷಧಿವನ ದ ತಯಾರಿ ನಡೆದಿದೆ. ನೋಡಿ ಉದ್ದೇಶ ಒಂದೆ ಜಾಗ ಕಬಳಿಸುವುದು ಆದರೆ ಮಾರ್ಗ ಬೇರೆ. ಆದರೆ ಏನೇನೋ ಮಾಡುತ್ತಿದ್ದವನನ್ನು ಸದಾಚಾರಿಯನ್ನಾಗಿಸಿ ಟರ್ನ್ ಮಾಡಿದ ಹೆಮ್ಮೆಯಿಂದ ಬಡಗ್ರಾಮಸ್ಥರು ಒಳಗೊಳಗೆ ನಗುತ್ತಿದ್ದಾರೆ.
ಇರಲಿ ಹಣಬಲವೋ ಸತ್ಯಬಲವೋ ಎಂಬುದು ಕಾಲ ನಿರ್ಧರಿಸುತ್ತದೆ. ಆದರೆ ಪ್ರಪಂಚ ಎಷ್ಟೇ ಮುಂದುವರೆದರೂ ಮಂದಿಯ ಮಟ್ಟ ಮಾತ್ರಾ ವಿಚಿತ್ರ ವಿಶೇಷ ವಿಪರ್ಯಾಸ. ಪ್ರಕೃತಿಯ ಶಕ್ತಿ ಅಗಾಧ. ಯಾರ ಜೀವನವೂ ಯಾರ ಕೈಯಲ್ಲಿಯೂ ಇಲ್ಲ ಎಂಬುದು ಮೇಲ್ಮಟ್ಟದ ಆಲೋಚನೆಗೆ ಸಿಗುತ್ತದೆ. ಆದರೆ ಬಳಸಿಕೊಳ್ಳುವವರು ಬುದ್ಧಿವಂತರು ಕಾಲನ ಚಕ್ರಕ್ಕೆ ಸಿಕ್ಕಿ ಕಾಲವಾಗುತ್ತಾರೆ ಎಂಬ ಸರಳ ತತ್ವ ಮರೆತಿರುತ್ತಾರೆ. ಅದಕ್ಕೆ ಎನ್ನುವುದು "ಕರ ಎಷ್ಟು ಹಾರಿದರೂ ಗೂಟದ ಕೆಳಗೆ". ಪ್ರಕೃತಿಯೆಂಬ ಗೂಟ ನಿಗೂಢ ಹುಲು ಮನುಷ್ಯ ಅದ ತಿಳಿಯದೇ ಹಾರುತ್ತಲೇ ಇದ್ದಾನೆ ಲಾಗಾಯ್ತಿನಿಂದ ಸತ್ಯ ತಿಳಿಯದೆ. ಪಿಚ್ಚೆನಿಸುತ್ತದೆ.