Tuesday, August 19, 2008

ಕೃಷಿ ಋಷಿಗೆ ಅಂತಿಮ ನಮನ


ಈ ಜಪಾನಿ ಅಜ್ಜನಿಗೆ ತೊಂಬತ್ತೈದು ವರ್ಷ. ಈತನ ಹೆಸರು ಪ್ರಪಂಚದಲ್ಲಿನ ಕೃಷಿಕರಿಗೆ ಚಿರಪರಿಚಿತ. ಈತನಿಗೆ ಭಾರತ ಸರ್ಕಾರವೂ ಕೂಡ ಬಿರುದುಗಳನ್ನು ಕೊಟ್ಟು ಸನ್ಮಾನಿಸಿದೆ. ಅಯ್ಯೋ ಇವರು ನಮಗೆ ಗೊತ್ತಿಲ್ಲದೇ ಏನು ಎಂದಿರಾ? ಹೌದು ನಿಮಗೆ ತಿಳಿದಿರುವಂತೆ ಈತನ ಹೆಸರು ಮುಸನುಬು ಪಕವೂಕ. ಸಹಜ ಕೃಷಿಯ ನೇತಾರ. ಕೃಷಿಯೆಂದರೆ ಕಡಿಮೆ ಕೆಲಸ ಮತ್ತು ಸಂತೃಪ್ತಿ ಜೀವನ ಎಂಬುದನ್ನು ಪ್ರಪಂಚಕ್ಕೆ ಪರಿಚಯಿಸಿಕೊಟ್ಟ ಮಹಾನುಭಾವನೀತ. ದಕ್ಷಿಣ ಜಪಾನ್ ನ ಶಿಕೋಕು ಎಂಬ ಹಳ್ಳಿಯ ಪಕವೂಕ ಒಭ್ಬ ವಿಜ್ಞಾನಿಯಾಗಿ ಜೀವನವನ್ನು ಆರಂಭಿಸಿ ನಂತರ ಅದು ತನ್ನ ಮನಸ್ಥಿತಿಗೆ ಒಗ್ಗದೆ ಇದ್ದುದರಿಂದ ವಾಪಾಸು ಹಳ್ಳಿಗೆ ಮರಳಿದ. ಹಳ್ಳಿಗೆ ಮರಳಿದಾಗ ಅವನ ಹಳ್ಳಿಯಲ್ಲಿ ರಾಸಾಯನಿಕ ಕೃಷಿಯ ಭರಾಟೆ. ಆದರೆ ಪಕವೂಕನಿಗೆ ಇದು ಒಗ್ಗದು. ಆಗಲೆ ಆತನ ಹುಡುಕಾಟ ಆರಂಭ. ಹಲವು ಪ್ರಯತ್ನಗಳ ವಿಪಲದನಂತರ ಆತ ಜಗತ್ತಿಗೆ ಸಹಜ ಕೃಷಿಯ ಪಾಠ ಹೇಳುವಂತಹ ವ್ಯಕ್ತಿಯಾದ. ಆತನ ಒಂದು ಹುಲ್ಲಿನ ಕ್ರಾಂತಿ ಜಗತ್ತಿಗೆ ಪರಿಚಯವಾಯಿತು. ಆತನ ಬಗ್ಗೆ ಹೆಚ್ಚು ನಾನಿಲ್ಲೆ ಬರೆಯುವುದಕಿಂತಲೂ ಆತನ ಪುಸ್ತಕ ಓದಿದರೇ ಅರ್ಥವಾದೀತು. ನೆಟ್ ನಲ್ಲಿಯೂ ಪುಟಗಟ್ಟಲೆ ಆತನ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಪುಕವೂಕರ ಸ್ಲೋಗನ್ ಸ್ಯಾಂಪಲ್ ಓದಿದರೂ ಕೃಷಿಕರಿಗೆ ಮನಸ್ಸು ಪ್ರಫುಲ್ಲವಾಗುತ್ತದೆ. ಕೇವಲ ಕೃಷಿಕನಾಗಿ ಅಲ್ಲದೆ ಫಿಲಾಸಫಿಯನ್ನು ಕೃಷಿಯಲ್ಲಿ ತೊಡಗಿಸಿದ ಮುಸನುಬುವ ವಾಕ್ಯಗಳೆ ಮನಮೋಹಕ.
"If we throw mother nature out the window, she comes back in the door with a pitchfork."
"When a decision is made to cope with the symptoms of a problem, it is generally assumed that the corrective measures will solve the problem itself. They seldom do. Engineers cannot seem to get this through their heads. These countermeasures are all based on too narrow a definition of what is wrong. Human measures and countermeasures proceed from limited scientific truth and judgment. A true solution can never come about in this way."
"Natural farming is not just for growing crops, it is for the cultivation and perfection of human beings.
"Giving up your ego is the shortest way to unification with nature."(http://www.permaculture.com/drupal/node/140) . ಇದು ಮುಸನುಬು ಪಕವೂಕನ ಅತ್ಯಂತ ಕಿರುಪರಿಚಯ.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ನರಹರಿಬಾವ ಫೋನ್ ಮಾಡಿ ಒಂದು ಸುದ್ದಿ ಹೇಳಿದ . ಅದನ್ನು ಕೇಳಿ ನನಗೆ ಸಖೇದಾಶ್ಚ್ರಯವಾಯಿತು. ಖೇದಕ್ಕೆ ಕಾರಣ ನಮ್ಮ ಮುಸನೂಬು ಪಕವೂಕ ಎಂಬ ಈ ಅಜ್ಜ ಮೊನ್ನೆ ಇಹಲೋಕ ತ್ಯಜಿಸಿದ್ದಕ್ಕೆ. ಆಶ್ಚರ್ಯಕ್ಕೆ ಕಾರಣ ಕೃಷಿಪ್ರಧಾನ ದೇಶ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದ ಮಾಧ್ಯಮಗಳಲ್ಲಿ ಇದೊಂದು ಸುದ್ದಿಯೇ ಇಲ್ಲದಿರುವುದಕ್ಕೆ. ಒಂದು ದೊಡ್ಡ ಲಕ್ಷ್ಮೀ ದಡಾಕಿ ಹೊಡೆದರೂ ವಾರಗಟ್ಟಲೆ ತಗಡು ಫೋಟೋ ಹಾಕಿ ತೌಡುಕುಟ್ಟುವ ನಮ್ಮ ವೃತ್ತ ಪತ್ರಿಕೆಗಳು , ಸಣ್ಣ ಪುಟ್ಟ ಘಟನೆಗಳಾದರೂ ಅಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿ "ಅಲ್ಲಿ ಇನ್ನೂ ದೊಡ್ಡ ಗಲಾಟೆ ಆಗಬಹುದಾ..?" ಎಂದು ಕಡ್ಡಿಗೀರುವ ಟಿ.ವಿ ಚಾನೆಲ್ ಗಳೂ ಇದೊಂದು ಸುದ್ಧಿಯನ್ನು ಪ್ರಕಟಿಸಲೇ ಇಲ್ಲ. ಗಲಾಟೆ ಇಲ್ಲದ ಗೋಕರ್ಣದಲ್ಲಿ "ಉದ್ವಿಗ್ನ" ಎಂದು ಅರ್ದ ಪುಟದ ಅಕ್ಷರಗಳಲ್ಲಿ ಮುದ್ರಿಸುವ ಪತ್ರಿಕೆಗೂ ಇದೊಂದು ಸುದ್ದಿ ಅಂತ ಆನ್ನಿಸಲೇ ಇಲ್ಲ. ಇರಲಿ ಇದನ್ನೆಲ್ಲಾ ತಿದ್ದಲು ನಾವ್ಯಾರು? ಅಬ್ದುಲ್ ಕಲಾಂ ಅದಕ್ಕೆ ಹೇಳಿದ್ದು: ಇಸ್ರೇಲ್ ದೇಶ ಕೃಷಿ ಹಾಗೂ ತಂತ್ರಜ್ಞಾನದಲ್ಲಿ ಮುಂದುವರೆಯುವುದಕ್ಕೂ ಮತ್ತು ಭಾರತ ಹೀಗಿರುವುದಕ್ಕೂ ಮಾಧ್ಯಗಳೇ ಕಾರಣ.
ತೊಂಬತ್ತೈದು ವರ್ಷ ಆರೋಗ್ಯಪೂರ್ಣವಾಗಿ ಯಾವ ಖಾಯಿಲೆಗೂ ತುತ್ತಾಗದೇ ಇಹ ತ್ಯಜಿಸಿದ ಕೃಷಿ ಋಷಿಗೆ ಇದು ಅಂತಿಮ ನಮನ. ದೂರದ ಜಪಾನ್ ನಲ್ಲಿ ಹುಟ್ಟಿ ಭಾರತದ ಇಂತಹ ಹಳ್ಳಿಯ ಮೂಲೆಗೆ ಆತನ ವಿಚಾರಧಾರೆ ತಲುಪಿಸಿದ ಎಂದರೆ ಆತ ಮಹಾತ್ಮನೇ.
ಕೊನೆಯಾದಾಗಿ: ಸುದೀರ್ಘಕಾಲ ಆರೋಗ್ಯವಾಗಿ ಬದುಕಿ ಯಾವಕಾಯಿಲೆಯೂ ಇಲ್ಲದೆ ಸಹಜವಾಗಿ ಇಹ ತ್ಯಜಿಸುವವರು ನಿಜವಾದ ಅಧ್ಯಾತ್ಮಿಕ ವ್ಯಕ್ತಿಗಳು. ಅವರ ಕ್ಷೇತ್ರ ಯಾವುದಾದರೂ ಅಲ್ಲಿ ಅವರ ಪ್ರಭೆ ಪ್ರಖರವಾಗಿರುತ್ತದೆ
ಅಂದು ಆನಂದರಾಮ ಶಾಶ್ತ್ರಿಗಳು ಹೇಳುತ್ತಿರುತ್ತಾರೆ. ಅಂತಹ ವ್ಯಕ್ತಿ ಈ ಮುಸನೂಬು ಪಕವೂಕ ಎನ್ನುವುದರಲ್ಲಿ ಎರಡು ಮಾತಿಲ್ಲ.

2 comments:

Govinda Nelyaru said...

ಇಪ್ಪತ್ತೆರಡು ವರ್ಷ ಹಿಂದೆ ನಾನು ಒಂದು ವಾರ ಫುಕೋಕರ ಅತಿಥಿಯಾಗಿದ್ದೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಬೆರಳಿನ ಹೊಲಿಗೆ ತೆಗೆಯುವ ವರೆಗೆ ಅಲ್ಲಿರಬೇಕಾಯಿತು. ನನ್ನ ನೆನಪಿನ ಪ್ರಕಾರ ಅವರ ಊರು ಶಿಕೋಕು ದ್ವೀಪದ ಮಟ್ಸುಯಾಮ ಪಟ್ಟಣದ ಹೊರವಲಯದಲ್ಲಿರುವ ಇಯೋ ಎಂಬ ಪುಟ್ಟ ಊರು. ಟೋಕಿಯೊವಿನಿಂದ ಒಂಬೈನೊರು ಕಿಲೋಮಿಟರ್ ದೂರ. ಸಾದ್ಯವಾದರೆ ಇನ್ನೆರಡು ದಿನದಲ್ಲಿ ಹೆಚ್ಚಿನ ವಿವರ ಬರೆಯುತ್ತೇನೆ.

ಗೋವಿಂದ

Aravind GJ said...

ಪೂರ್ಣಚಂದ್ರ ತೇಜಸ್ವಿಯವರು ತಮ್ಮ "ಸಹಜ ಕೃಷಿ" ಪುಸ್ತಕದಲ್ಲಿ ಫುಕೋಕರ ಬಗ್ಗೆ ತುಂಬ ವಿವರಗಳನ್ನು ಬರೆದಿದ್ದಾರೆ.