Sunday, September 28, 2008

ಜಸ್ಟ್ ನೆಮ್ಮದಿಗಾಗಿ

ಮನುಷ್ಯ ಸಂಘಜೀವಿಯಾಗಿ ಬಾಳಿದರೆ ಉತ್ತಮ ಎಂದು ಪೂರ್ವಜರು ತಿಳಿದಿದ್ದರು. ತಾನು ಹೆಂಡತಿ ಮಕ್ಕಳು ಇಷ್ಟೇ ಎಂದರೆ ಒಂದಲ್ಲಾ ಒಂದು ದಿನ ನಿರಾಶರಾಗಬಹುದು ಹಾಗಾಗಿ ಒಂದಿಷ್ಟು ಹಬ್ಬ ಮತ್ತೊಂದಿಷ್ಟು ಹರಿದಿನ, ಜನ ಸಮೂಹ ಒಂದೆಡೆ ಸೇರಲು ದೇವಸ್ಥಾನ, ದೇವರು, ಹೀಗೆಲ್ಲಾ ಕಲ್ಪಿಸಿ ಅನುಷ್ಠಾನಕ್ಕೆ ತಂದರು.ಅಲ್ಲಿ ತರ್ಕ ಕುತರ್ಕ ಮುಂತಾದವುಗಳಿಗೆ ಅವಕಾಶ ಇಲ್ಲದೆ ಭಕ್ತಿ ಪ್ರಧಾನ ಕೇಂದ್ರ ವನ್ನಾಗಿಸಿದರು. ಅಂತಹ ಜೀವನ ಹಳ್ಳಿಗಳಿಗೆ ಅನಿವಾರ್ಯ ಕೂಡ ಆಗಿತ್ತು.ಅಂದಿನ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಅವಕಾಶ ಇಲ್ಲದ್ದರಿಂದ ಜನ ಒಂದೆಡೆ ಸೇರಿ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಬಡ ಮಧ್ಯಮ ವರ್ಗದ ಜನತೆಗೆ ಸಾಮೂಹಿಕ ಮನರಂಜನೆ ಭಕ್ತಿಯ ಮುಖಾಂತರ ಸಿಗುತ್ತಿತ್ತು. ಕಾರ್ತಿಕ ದೀಪೋತ್ಸವ, ದೀಪಾವಳಿ ಸಂಭ್ರಮ, ಗಣೇಶನ ಹಬ್ಬ, ವಾರ್ಷಿಕ ಸಂತರ್ಪಣೆ ಹೀಗೆ ನೂರಾರು. ದೇವಸ್ಥಾನದ ಕೆಲಸಗಳು ಸಾಂಗೋಪಸಾಂಗವಾಗಿ ನೆರವೇರಲು ಅದಕ್ಕೆ ಸಾರ್ವಜನಿಕರಿಂದ ವರಾಡ ಎಂಬ ರೂಪದಲ್ಲಿ ಹಣ ಸಂಗ್ರಹಣೆ ಅದನ್ನು ದೇವಸ್ಥಾನದ ಅಭಿವೃದ್ದಿಗೆ ಬಳಸುವುದು. ತನ್ಮೂಲಕ ಊರು ಪ್ರಗತಿ ಹೊಂದುವುದು ಪೂರ್ವಜರ ಕಲ್ಪನೆ. ಅದು ಸರಿಯೋ ತಪ್ಪೋ ಆದರೆ ಅದರಿಂದ ಊರಿನ ಜನರು ಒಂದೆಡೆ ಸೇರುತ್ತಿದ್ದರು. ಕುಶಲೋಪರಿ ನಡೆಯುತ್ತಿತ್ತು. ಈಗ..? ಕಾಲ ಬದಲಾಗಿದೆ. ಟಿ.ವಿ ಇಂಟರ್ನೆಟ್ ಮುಂತಾದ ಆಧುನಿಕತೆಯ ಸೊಗಡಿನ ಮನರಂಜನಾ ಮಾಧ್ಯಮಗಳು ಮನೆಯಲ್ಲಿಯೇ ಬಂದಿದೆ. ಇದರ ಪರಿಣಾಮ ಹಳ್ಳಿಗಳ ಮೇಲೆ ತೀವ್ರತರದಲ್ಲಿ ಆಗಿದೆ. ಸಾಂಘಿಕ ಜೀವನ ಅರ್ಥ ಕಳೆದುಕೊಂಡು ತಾರ್ಕಿಕ ಜೀವನ ಶುರುವಾಗಿದೆ. ಭಕ್ತಿಯ ಕೇಂದ್ರ ನಿದ್ರೆಯತ್ತ ಜಾರಿ ತರ್ಕದ ಕೇಂದ್ರ ಎದ್ದು ಕುಳಿತಿದೆ.
ನಮ್ಮೂರಿನ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನ ಜ್ವಲಂತ ಉದಾಹರಣೆ. ಕಷ್ಟ ಬಂದಾಗ ಗಣಪತಿಗೆ ಒಂದು ಹಣ್ಣು ಕಾಯಿ ಹೇಳಿಕೊಂಡರೂ ಸಾಕು ಎನ್ನುವ ನಂಬಿಕೆ ಹಿಂದೆ ಇತ್ತು. ಆತ ಶಕ್ತಿ ಗಣಪತಿ ಎಂಬ ನಂಬಿಕೆ ಊರಲ್ಲಿ ಏನು ಪರ ಊರಲ್ಲಿಯೂ ವ್ಯಾಪಕವಾಗಿತ್ತು. ಅಲ್ಲಿ ಹೋಗಿ ಒಂದು ಹಣ್ಣು ಕಾಯಿ ಮಾಡಿಸಲು ನಿಂತರೆ ಅದ್ಯಾವುದೋ ಒಂದು ಭಕ್ತಿ ಮೂಡುತ್ತಿತ್ತು. ದೀಪಾವಳಿ ಎಂದರೆ ರಂಗೋ ರಂಗು. ಇಂತಹ ದೇವಸ್ಥಾನ ಎಂಟು ವರ್ಷದ ಹಿಂದೆ ನಾಸ್ತಿಕ ಎಂದು ಬೋರ್ಡ್ ತಗುಲಿಸಿಕೊಂಡ ಕುತರ್ಕದಿಂದ ವಾದಿಸುವ ಗಡ್ಡಧಾರಿ ಒಬ್ಬಾತನ ಸರ್ವಾಧಿಕಾರಕ್ಕೆ ಒಳಪಟ್ಟಿತು. ಆತ ತನ್ನಂತೆ ಕುತರ್ಕ ಮಾಡುವ ಒಂದು ಗುಂಪು ನಿರ್ಮಿಸಿಕೊಂಡ. ಅಲ್ಲಿಗೆ ದೇವಸ್ಥಾನ ಸತ್ತು ಹೋಯಿತು. ಕಳೆದ ಎಮ್ಟು ವರ್ಷದಿಂದ ಜನರಲ್ ಬಾಡಿಯೇ ಇಲ್ಲ. ಕಾಣಿಕೆ ಡಬ್ಬಿ ದುಡ್ಡು ಅವರು ಎಣಿಸಿಕೊಂಡಷ್ಟು ಅಲ್ಲಿ ಬಿದ್ದಷ್ಟು. ಯಾರಾದರೂ ಸಂಜೆ ಮುಂದೆ ಕೇಳಿದರೆ ಕಣ್ಣು ಕೆಂಪಗಾಗಿಸಿಕೊಂಡು ಮೈಮೇಲೆ ಬರುವ ಒಂದು ಸಣ್ಣ ಗುಂಪು ಸದಾ ರೆಡಿ. ಇಂತಂಹ ತರ್ಕದ ಜನರ ಆಡಳಿತಕ್ಕೆ ದೇವಸ್ಥಾನ ಒಳಪಟ್ಟಿದ್ದರಿಂದ ಎಂಟು ವರ್ಷದ ಈಚಿನ ತಲೆಮಾರಿಗೆ ದೇವಸ್ಥಾನದ ಪರಿಚಯವೇ ಇಲ್ಲದಂತಾಗಿದೆ. ದೇವಸ್ಥಾನಕ್ಕೆ ಹೋಗದಿದ್ದರೆ ನಾವೂ ಆರಾಮಾಗಿ ಇರಬಹುದು ಎಂದು ಹಲವಾರು ಜನರಿಗೆ ಗೊತ್ತಾಗಿದೆ. ದುಷ್ಪರಿಣಾಮ ದೀರ್ಘಕಾಲದ್ದು, ಊರಿನಿಂದ ಆಚೆ ಕೆಲಸಕ್ಕಾಗಿ ಹೋದವರು ವರ್ಷಕ್ಕೊಮ್ಮೆ ಊರಿಗೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈಗ ಹಾಗೆ ಯಾರೂ ಹೋಗುವುದೇ ಇಲ್ಲ. ಹಾಗಾಗಿ ಸ್ಥಳೀಯರಿಗೆ ಹೊರಗಿನ ಜನರ ಸಂಪರ್ಕ ಕೊಂಡಿ ಕಳಚಿದಂತಾಗಿದೆ. ಎಲ್ಲರೂ ತಮ್ಮ ಪಾಡಿಗೆ ಜೀವನ ನಡೆಸಿಕೊಳ್ಳುವುದನ್ನು ಕಲಿತಿದ್ದಾರೆ. ಅಯ್ಯಾ ದೊರೆ ಹೀಗೆಲ್ಲಾ ಸಾರ್ವಜನಿಕರಿಂದ ದೇವಸ್ಥಾನ ತಪ್ಪಿಸಿ ಅವರೂ ಬದುಕುತ್ತಿದ್ದಾರಲ್ಲ, ನೀನೇನು ಕೊರಗುವುದು. ಅವರಂತೆ ಬದುಕು ಅಂತ ನೀವು ಕೇಳಬಹುದು. ಇಲ್ಲ ನೆಮ್ಮದಿಗಾಗಿ ಅವರೂ ಕೂಡ ಸಂಜೆ ಪರಮಾತ್ಮನ ಮೊರೆ ಹೋಗಿದ್ದಾರೆ. ಈಗ ಕೆಲ ವಿಕೆಟ್ ಗಳು ಬಿದ್ದಾಯಿತು. ಈ ಒಣ ಹಠ ದ್ವೇಷಗಳ ನಡುವೆ ಸಾಮಾಜಿಕ ಕಾಳಜಿಯ ಸಂತತಿ ಹಳ್ಳಿಯಲ್ಲಿ ತೀವ್ರತರದಲ್ಲಿ ಕಡಿಮೆಯಾಗುತ್ತಿದೆ. ಈಗಾಗಲೇ ಹಳ್ಳಿಗಳಲ್ಲಿ ವಯಸ್ಸಾದ ಒಂದಿಷ್ಟು ಜನರನ್ನು ಬಿಟ್ಟರೆ ಯುವಕರು ಕಾಣಿಸುತ್ತಿಲ್ಲ. ಇದ್ದವರ ನಡುವೆ ಇಂತಹ ಅವ್ಯವಸ್ಥೆ. ಇದು ಒಂದೂರಿನ ಕತೆಯಲ್ಲ, ಹವ್ಯಕರ ನೂರಾರು ಹಳ್ಳಿಗಳ ವ್ಯಥೆ. ನಾನು ನನ್ನದು ಎಂದಿಷ್ಟೇ ಬದುಕುವುದಾದರೆ ಮಿಕ್ಕೆಲ್ಲ ಜೀವಿಯಂತೆ ಮನುಷ್ಯನೂ ಬದುಕಬಹುದು. ಆದರೆ ಮನುಷ್ಯ ತುಸು ಬೇರೆ ಎಂದು ಹೇಳಲು ಈ ಸಾಂಘಿಕ ಜೀವನದ ವ್ಯವಸ್ಥೆ. ಅದು ಮಠ ಇರಬಹುದು ಮಂದಿರ ಇರಬಹುದು. ಮನಸ್ಸಿನ ಶಾಂತಿಗೆ ಆಗಾಗ ಮೂಡುವ ಕುತೂಹಲಕ್ಕೆ ಧುತ್ತನೆ ಬಂದೆರೆಗುವ ಆಘಾತಕ್ಕೆ, ಒಂದೇ ಒಂದು ದಿನದ ಸಂತೋಷಕ್ಕೆ, ಈ ದೇವರು ದೇವಸ್ಥಾನ ಸಾಮೂಹಿಕವಾಗಿ ಅತ್ಯವಶ್ಯಕ. ಆದರೆ ಅದೇ ಜೀವನವಲ್ಲ ಎಂಬುದೂ ಆಷ್ಟೇ ಸತ್ಯ. ಜೀವನದಲ್ಲಿ ಮಠ ಮಂದಿರ ಇದ್ದರೆ ಚೆನ್ನ.
ಆಧುನಿಕತೆಯ ಸೋಗಿನಲ್ಲಿ ನಾವು ಹಳೆಯದನ್ನು ಹೀಗೆಳೆಯುತ್ತಾ ಹೊಸತನ್ನು ಹುಡುಕಲಾರದೆ ಒದ್ದಾಡುವುದಕ್ಕಿಂತ ಇದ್ದುದ್ದರಲ್ಲೇ ನೆಮ್ಮದಿ ಹುಡುಕುವುದು ಸೂಕ್ತ. ಆದರೆ ಆ ಅಗಾದ ಪ್ರಕೃತಿಯ ಅಂದಾಜು ನಮಗೆ ತಿಳಿಯುವುದಿಲ್ಲ ಹಾಗಾಗಿ ಹೀಗೆಲ್ಲ...! ಒಂದಂತೂ ಸತ್ಯ ಇವೆಲ್ಲಾ ಜಸ್ಟ್ ನೆಮ್ಮದಿಗಾಗಿ.

No comments: