Saturday, July 9, 2011

ಬುದ್ದಿವಂತರು ಬಿಡಿ ನೀವು...!



ಅಂತಹ ದೃಶ್ಯಗಳಿರುತ್ತವಲ್ಲ ಅದು ನೋಡಲು ಚಂದ. ಯಜಮಾನ ಅದೇನೋ ಕೆಲಸದಲ್ಲಿ ತಲ್ಲೀನ, ಮನೆಯೊಡತಿಯದೂ ಅಷ್ಟೆ ಒಂಥರಾ ಧನ್ಯತಾ ಭಾವದ ಕೆಲಸ. ಮಗು ಸಂಸಾರ ಜಂಜಡದಲ್ಲಿ ಮುಳುಗದೇ ಅದರದ್ದೇ ಆದ ಆಟ. ಅಲ್ಲಿ ಅವರದ್ದು ಖುಷಿಯೂ ಅಲ್ಲದ ಸಿಟ್ಟೂ ಇಲ್ಲದ ಹಾಗಂತ ತೀರಾ ಶಾಂತಿಯೂ ಇರದ ವಾತಾವರಣ. ದೂರ ನಿಂತು ನೋಡಿ ನಮಗೆ ಬೇಕಾದಂತೆ ನಾವು ಸೃಷ್ಟಿಸಿಕೊಳ್ಳಬಹುದು. ನೆಮ್ಮದಿಯಜೀವನ ಅಂತಲೋ, ಸುಖೀ ಸಂಸಾರ ಎಂತಲೋ, ನಾಳಿನ ಚಿಂತೆಯಿಲ್ಲದ ಬದುಕು ಎಂದೋ... ಹೀಗೆ ಏನೇನೋ. ಆದರೆ ವಾಸ್ತವ ಹಾಗಿಲ್ಲ, ಬಡತನದ ಬದುಕು ಬಹಳ ಕಷ್ಟ ಕಣ್ರೀ... ಹೊತ್ತಿನ ತುತ್ತಿನ ಚೀಲ ತುಂಬಿಸುವ ಕಾಯಕದ ಎದುರು ಭವಿಷ್ಯದ ಚಿಂತೆ ಚಿಂತನೆಗೆ ಅವಕಾಶ ಇರುವುದಿಲ್ಲ ಅಷ್ಟೆ. ಅವರಿಗೂ ಆಸೆ ಆಕಾಂಕ್ಷೆ ಎಲ್ಲಾ ನಮ್ಮ ನಿಮ್ಮಂತೆ, ಕನಸುಗಳು ಸಾವಿರ ಸಾವಿರ ಬೆನ್ನತ್ತುತ್ತಲೇ ಇರುತ್ತವೆ. ಆದರೆ ನನಸಾಗದು ಅಷ್ಟೆ. ಪ್ರಕೃತಿ ಹೀಗೆ ಎಲ್ಲರಿಗೂ ಇರುವ ಕನಸನ್ನು ನನಸು ಮಾಡುತ್ತಾ ಹೋಗದು. ಹಾಗೆ ಹೋದರೆ ಕೆಸರಿನಲ್ಲಿ ಮಿಂದು ಭತ್ತ ಬೇಳೆಯೋರ್ಯಾರು?, ಬಟ್ಟೆ ನೆಯ್ಯೋರ್ಯಾರು..? ಇರಲಿ ಈಗ ವಿಷಯಕ್ಕೆ ಬರೋಣ.

ಮದ್ಯಮವರ್ಗದ ಜನರ ಮಾತುಕತೆಗಳ ನಡುವೆ ಹಾಯ್ದುಹೋಗುವ ಒಂದು ವಿಷಯ ಕೆಲಸಗಾರರ ಕುರಿತಾದದ್ದು. "ಅಯ್ಯೋ ಅವ್ರೇ ಸುಖವಾಗಿರುವ ಜನ ಕಣ್ರೀ.... ನಾಳಿನ ಚಿಂತೆಯಿಲ್ಲ, ಇವತ್ತಿಂದು ಉಂಡ್ರು ನಿದ್ರೆ ಮಾಡಿದ್ರು... ನಮ್ದು ಹಾಗಾ? " ಅಂತ ಕರಕರ ಕೊರಗುತ್ತಾ ಇರುತ್ತಾರೆ. ನಮ್ಮ ಹಳ್ಳಿ ಕಡೆ " ಇನ್ನು ಕೆಲಸಕ್ಕೆ ಕೂಲಿಕಾರರು ಸಿಕ್ಕೋದಿಲ್ಲ, ಅವ್ರು ಹೇಳಿದ್ದೇ ಕೂಲಿ ಮಾಡಿದ್ದೇ ಕೆಲಸ, ತೋಟ ಮನೆ ಕೊಟ್ಟು ಎಲ್ಲಾರೂ ಹೋಗೋದಷ್ಟೇ ನಮಗೆ ಉಳಿದದ್ದು" ಎಂದು ನಾನು ಸಣ್ಣವನಿದ್ದಾಗಿನಿಂದ ಅಂದರೆ ಸುಮಾರು ಮೂವತ್ತು ವರ್ಷದಿಂದ ಕೇಳುತ್ತಾ ಬಂದಿರುವ ಮಾತು. ಹಾಗಂತ ಅದೇ ಸತ್ಯ ಎಂದು ನೀವು ತಿಳಿದರೆ ಯಡವಟ್ಟಾದೀರಿ. ಹೀಗೆಲ್ಲಾ ಕರಕರ ಅನ್ನುವ ಜನರ ಆಂತರ್ಯಕ್ಕೆ ಗೊತ್ತಿ ಕೂಲಿ ಕೆಲಸ ಬಡತನ ಇವೆಲ್ಲಾ ಕಷ್ಟಕರ ಅಂತ. ನಿಜವಾಗಿಯೂ ಇವರ ಭಾವನೆ ಕೂಲಿಯ ಜೀವನದಲ್ಲಿ ಸುಖ ಅಂತಾದರೆ ಹೀಗೆ ಅಲವತ್ತುಕೊಳ್ಳುವ ಇವರುಗಳೆಲ್ಲಾ ತಮ್ಮ ಬಳಿ ಇದ್ದ ಆಸ್ತಿಯನ್ನೆಲ್ಲಾ ಅರೆಕ್ಷಣದಲ್ಲಿ ದಾನ ಮಾಡಿ ಊರಂಚಿನಲ್ಲಿ ಒಂದು ಗುಡಿಸಲು ಕಟ್ಟಿಕೂಲಿಕಾರರಾಗಿಬಿಡಬಹುದಲ್ಲ..?. ಇಲ್ಲ ಇವೆಲ್ಲಾ ಮನುಷ್ಯನ ಹುಟ್ಟುಗುಣ. ತನಗಿದ್ದ ಅವಸ್ಥೆಯನ್ನು ಅವನು ಅನುಭವಿಸಲಾರ, ಬೇರೆಯವರದ್ದು ಸುಖ ಎನ್ನುವ ಭ್ರಮೆ. ವಿಚಿತ್ರವೆಂದರೆ ಈ ಕೂಲಿಕಾರರ ಕುರಿತು ಮಾತುಕತೆಯಲ್ಲಿ ಅವರದ್ದು ಸುಖವಲ್ಲ ಎಂಬುದು ಇವರಿಗೂ ಗೊತ್ತು. ಆದರೆ ಅವರು ಮಾಡುವ ಕೆಲಸಕ್ಕೆ ತಾನು ತೆತ್ತಬೇಕಲ್ಲಾ ಎಂಬ ಸಂಕಟ ಹಾಗೆಲ್ಲ ಹೇಳಿಸುತ್ತದೆ. ಅಲ್ಲೆಲ್ಲೋ ದೂರದ ಪಟ್ಟಣದಲ್ಲಿ ಕೆಲಸಕ್ಕಿರುವ ತಮ್ಮ ಕರುಳಬಳ್ಳಿ "ನನಗೆ ಸಂಬಳ ಇನ್ನೂ ಹೈಕ್ ಆಗ್ಲೇ ಇಲ್ಲ, ನಲವತ್ತರ ಅಂಚಿನಲ್ಲಿಯೇ ಇದೆ" ಎಂದಾಗ ಕಂಪನಿಯ ವಿರುದ್ಧ ಲೊಚಗುಟ್ಟುವ ಮಂದಿ ದಿನವಿಡೀ ದುಡಿವ ಕೂಲಿಕೆಲಸಕ್ಕೆ ನೂರು ರೂಪಾಯಿ ಕೊಟ್ಟು ಅದೇನೋ ನೋಟಿನ ಕಂತೆಯನ್ನೇ ಕೊಟ್ಟೇವೇನೋ ಎಂಬ ಮಾತುಗಳನ್ನಾಡುವ ಪರಿಪಾಟ ಬಂದಿದೆ. ಬಂದಿದೆ ಏನಲ್ಲ ಲಾಗಾಯ್ತಿನಿಂದ ಚಾಲ್ತಿಯಲ್ಲಿದೆ.

ಅದೇಕೆ ಹೀಗೆ?, ಅದೆಲ್ಲಾ ಎಂತು?, ಅಂತ ಪ್ರಶ್ನಿಸುವ ಗೋಜಿಗೆ ಹೋಗದೆ ಹಾಗೆ ಹೇಳುವವರ ನಡುವೆ ನಿಂತಾಗ ಯೆಸ್ ಯಸ್ ಎಂದು ಲೊಚಗುಟ್ಟಿ ಬಚಾವಾಗುವುದೇ ಲೇಸು ಅಂತ ಅಂದಿರಾ..? . ಬುದ್ದಿವಂತರು ಬಿಡಿ ನೀವು...!

.

No comments: